Wednesday, March 11, 2026
Home Blog Page 349

ಪೆರುವಡಿ ನಾರಾಯಣ ಭಟ್ – ಹಾಸ್ಯ ಪಾತ್ರಗಳಿಗೆ ಹೊಳಪನ್ನು ಕೊಟ್ಟ ಹಾಸ್ಯ ಚಕ್ರವರ್ತಿ 

ಯಕ್ಷಗಾನದಲ್ಲಿ ಹಾಸ್ಯ ವಿಭಾಗವನ್ನು ಶ್ರೀಮಂತಗೊಳಿಸಿ ಹಾಸ್ಯಗಾರ ಸ್ಥಾನಕ್ಕೆ ಗೌರವವನ್ನು ತಂದುಕೊಟ್ಟು ಪ್ರೇಕ್ಷಕರನ್ನು ರಂಜಿಸಿದವರು ಅನೇಕ ಕಲಾವಿದರು. ಅಂತಹವರಲ್ಲೊಬ್ಬರು ಪೆರುವಡಿ ನಾರಾಯಣ ಭಟ್ಟರು. ಈಗ ಕಲಾಜೀವನದಿಂದ ನಿವೃತ್ತರಾಗಿ ಪುತ್ತೂರು ಸಮೀಪದ ಬಪ್ಪಳಿಗೆಯಲ್ಲಿ ವಾಸಿಸುತ್ತಿದ್ದಾರೆ. ಶುದ್ಧ ಪರಂಪರೆಯ ಹಾಸ್ಯಗಾರರಾದ ಶ್ರೀಯುತರು ಮೇಳದ ಸಂಚಾಲಕರಾಗಿಯೂ ಕಲಾಸೇವೆಯನ್ನು ಮಾಡಿದವರು. ಯಕ್ಷಗಾನಕ್ಕೆ ಒಬ್ಬ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಯೂ ಹೌದು. ಅನೇಕ ಕಮ್ಮಟಗಳಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಧಾರೆಯೆರೆದಿದ್ದಾರೆ.

ಶ್ರೀಯುತರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಪೆರುವಡಿಯಲ್ಲಿ ಪದ್ಯಾಣ ಭೀಮ ಭಟ್ ಮತ್ತು ಗುಣವತಿ ಅಮ್ಮ ದಂಪತಿಗಳ ಮಗನಾಗಿ ಮೇ 28, 1927ರಂದು ಜನಿಸಿದರು. ಮಿತ್ತನಡ್ಕ (ಕರೋಪಾಡಿ) ಮತ್ತು ಪೆರುವಡಿ ಕುದ್ರಡ್ಕ ಶಾಲೆಗಳಲ್ಲಿ 5ನೇ ತರಗತಿ ವರೆಗೆ ಓದಿದ್ದರು. ಎಳವೆಯಲ್ಲಿ ಅಜ್ಜನ ಮನೆಯ ಆಸರೆಯಲ್ಲಿ ಬೆಳೆದು ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದ ಆಶ್ರಯದಲ್ಲಿ ನಡೆಯುತ್ತಿದ್ದ ಸಂಸ್ಕೃತ ಪಾಠಶಾಲೆಯಲ್ಲಿ ಎರಡು ವರ್ಷ ವಿದ್ಯಾರ್ಥಿಯಾಗಿದ್ದರು. ಪದ್ಯಾಣ ಪುಟ್ಟುನಾರಾಯಣ ಭಾಗವತರು ಮತ್ತು ಮಾಂಬಾಡಿ ನಾರಾಯಣ ಭಾಗವತರು ಇವರ ಬಂಧುಗಳು. ಪೆರುವಡಿ ಮನೆಯರಿಗಂತೂ ಯಕ್ಷಗಾನ ಅಚ್ಚುಮೆಚ್ಚಿನ ಕಲೆ. ಮನೆಯ ಸದಸ್ಯರೆಲ್ಲರೂ ಹಿಮ್ಮೇಳ, ಮುಮ್ಮೇಳ ಕಲಾವಿದ ರಾಗಿದ್ದರು.

ಸಹಜವಾಗಿ ಯಕ್ಷಗಾನ ಆಸಕ್ತಿ ಮೂಡಿತು. ತನ್ನ 14ನೇ ವಯಸ್ಸಿನಲ್ಲಿ ಪೆರುವಡಿ ನಾರಾಯಣ ಭಟ್ಟರು ನಾಟ್ಯಾಭ್ಯಾಸ ಇಲ್ಲದೆ ಶ್ರೀ ಧರ್ಮಸ್ಥಳ ಮೇಳದಲ್ಲಿ ಮೊದಲ ತಿರುಗಾಟ ಮಾಡಿದ್ದರು. (ಶ್ರೀ ಮಂಜಯ್ಯ ಹೆಗ್ಗಡೆಯವರ ಕಾಲ, ಕುರಿಯ ವಿಠಲ ಶಾಸ್ತ್ರಿಗಳು ಮೇಳ ವಹಿಸಿಕೊಂಡ ಸಮಯ) ನಂತರ ಕುರಿಯ ವಿಠಲ ಶಾಸ್ತ್ರಿಗಳು ಇವರನ್ನು ನಾಟ್ಯ ಕಲಿಯಲು ಪ್ರೇರೇಪಿಸಿದರಂತೆ. ವ್ಯವಸ್ಥೆಯೂ ಆಯಿತು. ದೇಲಂತಬೆಟ್ಟು ಶಾಲೆಯಲ್ಲಿ ನಾಟ್ಯ ತರಗತಿ ನಡೆಯುತ್ತಿತ್ತು. ಅಲ್ಲಿಗೆ ಕುರಿಯ ವಿಠಲ ಶಾಸ್ತ್ರಿಗಳು, ಕರ್ಗಲ್ಲು ಸುಬ್ಬಣ್ಣ ಭಟ್, ಕಾವು ಕಣ್ಣ ಮೊದಲಾದವರು ನಾಟ್ಯ ಕಲಿಸಲು ಬರುತ್ತಿದ್ದರು. “ಯಕ್ಷರಂಗದ ರಸಋಷಿಗಳೆನಿಸಿದ ಸಂಕಯ್ಯ ಭಾಗವತರೂ, ಈಶ್ವರ ಹಾಸ್ಯಗಾರರೂ, ಕುರಿಯ ವಿಠಲ ಶಾಸ್ತ್ರಿಗಳೂ ನನ್ನನ್ನು ಯಕ್ಷಗಾನ ರಂಗಕ್ಕೆ ಬರುವಂತೆ ಮಾಡಿದರು. ಕರ್ಗಲ್ಲು, ಹೊಸಹಿತ್ತಿಲು ಗಣಪತಿ ಭಟ್ಟ, ಕಾಸರಗೋಡು ಸುಬ್ಬಯ್ಯ ಶೆಟ್ಟಿ ಮೊದಲಾದವರ ಮಾರ್ಗದರ್ಶನದಿಂದ ನಾನು ಕಲಾವಿದನಾಗಿ ರೂಪುಗೊಂಡೆ. ವಿಟ್ಲ ಅರಸರ ಆಶ್ರಯದಿಂದ ಪ್ರಭಾವಿತರಾಗಿ ಸಂಕಯ್ಯ ಭಾಗವತರೂ ಈಶ್ವರ ಹಾಸ್ಯಗಾರರೂ ಕಲಾವಿದರಾಗಿ ರಂಜಿಸಿದವರು. ಅವರಿಂದ ಮತ್ತು ಮನೆಯವರಿಂದಲೂ ನಾನು ಪ್ರೇರಿತನಾಗಿ ಕಲಾವಿದನಾದೆ” ಎಂಬುದು ಪೆರುವಡಿ ನಾರಾಯಣ ಭಟ್ಟರ ಅಭಿಪ್ರಾಯ.

ಧರ್ಮಸ್ಥಳ, ಸುರತ್ಕಲ್, ಕದ್ರಿ, ನಂದಾವರ, ಅರುವ, ಕುಂಬಳೆ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದರು. 1954ರಲ್ಲಿ ಮುಲ್ಕಿ ಮೇಳದ ಸಂಚಾಲಕರಾಗಿ ಶ್ರೀ ಪೆರುವಡಿ ನಾರಾಯಣ ಭಟ್ಟರು ಸದ್ರಿ ಮೇಳವನ್ನು 11 ವರ್ಷಗಳ ಕಾಲ ಮುನ್ನಡೆಸಿದ್ದರು. ಮೇಳದ ಸಂಚಾಲಕನಾಗಿ ಆರ್ಥಿಕವಾಗಿ ಸೋಲುಂಡರೂ ಕೀರ್ತಿಯನ್ನು ಸಂಪಾದಿಸಿದರು. ಸಮರ್ಥ ಸಂಚಾಲಕ ಎಂದು ಹೆಸರು ಗಳಿಸಿದರು. ತೆಂಕಿನ ಮೇಳಗಳು ಬಡಗಿನ ಕಡೆಗೂ ಬಡಗಿನ ಮೇಳಗಳು ತೆಂಕಿನ ಕಡೆಗೂ ತಿರುಗಾಟಕ್ಕೆ ಬರದೇ ಇರುತ್ತಿದ್ದ ಕಾಲ ಅದು. ಪೆರುವಡಿಯವರು ಮೂಲ್ಕಿ ಮೇಳವನ್ನು ಬಡಗಿನ ಕಡೆಗೂ ನಡೆಸಿ ಸಾಹಸವನ್ನು ತೋರಿದರು. ತೆಂಕಿನ ಆಟಗಳು ಬಡಗಿನ ಕಡೆಯಲ್ಲೂ ಬಡಗಿನ ಪ್ರದರ್ಶನಗಳು ತೆಂಕಿನ ಕಡೆಯಲ್ಲೂ ಆರಂಭಗೊಳ್ಳಲು ಇವರು ಒಂದು ಭದ್ರ ವೇದಿಕೆಯನ್ನೇ ಹಾಕಿಕೊಟ್ಟರು.

ಬಭ್ರುವಾಹನ ಪ್ರಸಂಗದಲ್ಲಿ ಪೆರುವಡಿ ನಾರಾಯಣ ಭಟ್ (ಬಭ್ರುವಾಹನನಾಗಿ ವಸಂತ ಗೌಡ ಕಾಯರ್ತಡ್ಕ)

ಮತ್ತೆ 17 ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದರು. ಪೆರುವಡಿಯವರು ಹಳ್ಳಿಯಿಂದ ದಿಲ್ಲಿಯ ವರೆಗೆ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಿದವರು. ‘ರಾಜಹಾಸ್ಯ’ ಖ್ಯಾತಿಯ ಇವರು ರಾಕ್ಷಸ ದೂತನಾಗಿ ವಿಜೃಂಭಿಸಿದರು. ಮಕರಂದನಾಗಿ ಶ್ರೀಕೃಷ್ಣನಿಗೆ ನೆರವಾಗಿ ಪ್ರೇಕ್ಷಕರನ್ನು ರಂಜಿಸಿದರು. ವಿಜಯನಾಗಿ ವಿಜಯಿಯಾದರು. ನಾರದನಾಗಿ ಕಲಹಬೀಜವನ್ನು ಬಿತ್ತಿ ಪ್ರಸಂಗವನ್ನು ಮೆರೆಸಿದರು. ಬ್ರಹ್ಮನಾಗಿ ಅನುಗ್ರಹಿಸಿದರು. ಬಾಹುಕನಾಗಿ ಮೆರೆದರು. ‘ಪಾಪಣ್ಣ’ನ ಪಾತ್ರವನ್ನು ನೋಡಿ ಪ್ರೇಕ್ಷಕರು “ಅಯ್ಯೋ, ಪಾಪ… ಅಣ್ಣ” ಎಂದು ಹೇಳುವಂತೆ ಅಭಿನಯಿಸಿದರು. ಪಾಪಣ್ಣ ವಿಜಯ – ಗುಣಸುಂದರಿ’ ಪ್ರಸಂಗದ ‘ಪಾಪಣ್ಣ’ ಪಾತ್ರ ಇವರಿಗೆ ಅಪಾರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಪೆರುವಡಿ ನಾರಾಯಣ ಭಟ್ಟರು ‘ಪಾಪಣ್ಣ ಭಟ್ರು’ ಎಂದೇ ಪ್ರಸಿದ್ಧರಾದರು. ವೃತ್ತಿ ಸಂಕಷ್ಟವನ್ನು ಸಾರುವ ಮೂರ್ತೆಯವನಾಗಿ, ತಾಮಸಿ ಪ್ರವೃತ್ತಿಯ ರಾಕ್ಷಸ ದೂತನಾಗಿ, ಸಹಜ ಬದುಕಿಗೆ ಕನ್ನಡಿ ಹಿಡಿಯುವ ವಿಪ್ರನಾಗಿ, ದೇವತ್ವವನ್ನು ಎತ್ತಿ ಹಿಡಿವ ದೇವದೂತನಾಗಿ ಅಭಿನಯಿಸುತ್ತಾ ಇವರು ಎಲ್ಲಾ ಹಾಸ್ಯಗಾರರಿಗೂ ಆದರ್ಶರಾದರು.
                                 

ಹಿರಿಯ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟ ಮತ್ತು ಸಾವಿತ್ರಿ ದಂಪತಿಗಳದ್ದು ಮೂವರು ಪುತ್ರಿಯರು, ಅಳಿಯಂದಿರು ಹಾಗೂ ಮೊಮ್ಮಕ್ಕಳ ಜೊತೆಗಿನ ಸಂತೃಪ್ತ ಜೀವನ. ಪ್ರಥಮ ಪುತ್ರಿ ಕೃಷ್ಣಕುಮಾರಿ ವಿವಾಹಿತೆ. ಅಳಿಯ ಮುಳಿಯ ಈಶ್ವರ ಭಟ್ ಕೃಷಿಕರು. ಇವರ ಮಕ್ಕಳಾದ ಶ್ರೀಕಾಂತ ಮತ್ತು ಶ್ರೀದೇವಿ ಬೆಂಗಳೂರಿನಲ್ಲಿ ಉದ್ಯೋಗಿಗಳು. ದ್ವಿತೀಯ ಪುತ್ರಿ ಸುಗುಣಕುಮಾರಿ ವಿವಾಹಿತೆ. ಇವರು ಉತ್ತಮ ಚಿತ್ರಕಲಾವಿದೆ. ಅಳಿಯ ವೆಂಕಟ್ರಾಮ ಸುಳ್ಯ ಅವರು ಸುಳ್ಯದಲ್ಲಿ ಶ್ರೀ ಪ್ರತಿಭಾ ವಿದ್ಯಾಲಯವನ್ನು ನಡೆಸುತ್ತಿದ್ದಾರೆ. ಲೇಖಕರಾಗಿ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ ಪ್ರಸಿದ್ಧರು. ಶ್ರೀಮುಖ ಮತ್ತು ಕೃತಿಕಾ ಇವರ ಮಕ್ಕಳು. ತೃತೀಯ ಪುತ್ರಿ ಮಹಾಲಕ್ಷ್ಮಿ ವಿವಾಹಿತೆ. ಅಳಿಯ ಶ್ರೀ ಚಂದ್ರಶೇಖರ ಭಟ್ ಉದ್ಯೋಗಿ. ಇವರ ಪುತ್ರ ಸ್ಕಂದ ಎನ್. ಭಟ್ ಪಿ.ಯು.ಸಿ. ವಿದ್ಯಾರ್ಥಿ. ಪೆರುವಡಿ ಹಾಸ್ಯಗಾರರು ಪ್ರಸ್ತುತ ಪುತ್ತೂರಿನ ಬಪ್ಪಳಿಗೆಯ ಸಮೀಪದ ತೆಂಕಿಲ ನೂಜಿ ಶ್ರೀ ದುರ್ಗಾ ನಿಲಯದಲ್ಲಿ ವಾಸವಾಗಿದ್ದಾರೆ.
                 

ಲೇಖಕ: ರವಿಶಂಕರ್ ವಳಕ್ಕುಂಜ 

ಫೋಟೋ ಕೃಪೆ: ಕೋಂಗೋಟ್ ರಾಧಾಕೃಷ್ಣ ಭಟ್, ಸುಬ್ಬರಾಯ ಹೆಬ್ಬಾರ್  

ಬೊಂಡಾಲ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಬಾಯಾರು ರಮೇಶ್ ಭಟ್ ಆಯ್ಕೆ- ಫೆಬ್ರವರಿ 19 ರಂದು ಶಂಭೂರಿನಲ್ಲಿ ಪ್ರಶಸ್ತಿ ಪ್ರದಾನ

ಊರಿನ ಪಟೇಲರಾಗಿ, ಜನಪ್ರಿಯ ಶಿಕ್ಷಕರಾಗಿ ಹಾಗೂ ಹಳೆ ತಲೆಮಾರಿನ ಯಕ್ಷಗಾನ ಅರ್ಥಧಾರಿಯಾಗಿ ಪ್ರಸಿದ್ಧರಾದ ದಿ. ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಅವರ ಪುತ್ರ ಹಿರಿಯ ಅರ್ಥಧಾರಿ, ನಿವೃತ್ತ ಭೂಮಾಪನ ಅಧಿಕಾರಿ ದಿ. ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ‘ಬೊಂಡಾಲ ಪ್ರಶಸ್ತಿ’ ಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಹೆಸರಾಂತ ವೇಷಧಾರಿ ರಮೇಶ ಭಟ್ ಬಾಯಾರು ಆಯ್ಕೆಯಾಗಿದ್ದಾರೆ.

ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರಿಗಾಗಿ ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರು ನೀಡುತ್ತಿರುವ ಈ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆಸಮಿತಿ 2020-21ನೇ ಸಾಲಿನಲ್ಲಿ ರಮೇಶ ಭಟ್ಟರ ಹೆಸರನ್ನು ಸೂಚಿಸಿದೆ. ಪ್ರಶಸ್ತಿಯು ಶಾಲು, ಸ್ಮರಣಿಕೆ ಮತ್ತು ಗೌರವ ನಿಧಿಯನ್ನೊಳಗೊಂಡಿದೆ. 


ರಮೇಶ್ ಭಟ್ ಬಾಯಾರು:   ಕಾಸರಗೋಡು ಬಾಯಾರು ಗ್ರಾಮದ ಸರವು ನಾರಾಯಣ ಭಟ್ಟ ಮತ್ತು ಪಾರ್ವತಿ ಅಮ್ಮ ದಂಪತಿಗೆ 1967 ನವೆಂಬರ್ 17 ರಂದು ಜನಿಸಿದ ರಮೇಶ್ ಭಟ್ ಹತ್ತನೇ ತರಗತಿವರೆಗೆ ಕಲಿತು ಬಳಿಕ ಯಕ್ಷಗಾನ ರಂಗವನ್ನು ಪ್ರವೇಶಿಸಿದರು. ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ಕೇಂದ್ರದಲ್ಲಿ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ನಾಟ್ಯಾಭ್ಯಾಸ ಮಾಡಿ  1984 ರಲ್ಲಿ ಕುಂಬಳೆ ಮೇಳದಲ್ಲಿ ತಿರುಗಾಟ ಆರಂಭಿಸಿದರು. ಭಾಗವತ ಕುರಿಯ ಗಣಪತಿ ಶಾಸ್ತ್ರಿಯವರ ನಿರ್ದೇಶನದಂತೆ 1985 ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಸೇರಿಕೊಂಡ ಅವರು ಕಳೆದ 35 ವರ್ಷಗಳಿಂದ ಅದೇ ಮೇಳದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ‘ದೇವಿಮಹಾತ್ಮೆ’ ಯ ಶ್ರೀದೇವಿ ಪಾತ್ರಕ್ಕೆ ಅವರು ಪ್ರಸಿದ್ಧರು.  ‌‌     

ಬಹುತೇಕ ಪೌರಾಣಿಕ ಪ್ರಸಂಗಗಳಲ್ಲೇ ಪಾತ್ರ ನಿರ್ವಹಿಸುತ್ತಿರುವ ರಮೇಶ್ ಭಟ್ಟರ ಸೀತೆ, ದಮಯಂತಿ, ಕಯಾದು, ಮೋಹಿನಿ, ದ್ರೌಪದಿ, ಮೀನಾಕ್ಷಿ, ಶಶಿಪ್ರಭೆ, ಯಶೋಮತಿ ಮೊದಲಾದ ಸ್ತ್ರೀಭೂಮಿಕೆಗಳು ಜನಪ್ರಿಯ. ರಕ್ತಬೀಜ, ಅರುಣಾಸುರ, ಹಿರಣ್ಯಕಶಿಪು ಮೊದಲಾದ ದೈತ್ಯ ಪಾತ್ರಗಳಲ್ಲೂ ಅವರು ಪರಿಣತರು. ಮೇಳದ ತಿರುಗಾಟವಲ್ಲದೆ ಮುಂಬಯಿ, ಚೆನ್ನೈ, ಹೈದರಾಬಾದ್, ಸಿಂಗಾಪುರಗಳಲ್ಲೂ  ಕಾರ್ಯಕ್ರಮ ನೀಡಿದ ಅನುಭವ ಅವರಿಗಿದೆ. ವೃತ್ತಿಪರ ಯಕ್ಷಗಾನ ಕಲಾವಿದರಾಗಿ ಸರಿಸುಮಾರು ಮೂರೂವರೆ ದಶಕಗಳ ಅನುಭವ ಹೊಂದಿರುವ ಬಾಯಾರು ರಮೇಶ ಭಟ್ಟರು ಪತ್ನಿ ಗೀತಾ ಮತ್ತು ಪುತ್ರ ಶ್ರೀರಾಮರೊಂದಿಗೆ ಬಾಯಾರು ಗ್ರಾಮದ ಸರವು ಎಂಬಲ್ಲಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ.

ಫೋಟೋ ಕೃಪೆ: ಯಕ್ಷ ಮಾಧವ


ಫೆ.19 ಕ್ಕೆ ಪ್ರಶಸ್ತಿ ಪ್ರದಾನ:  ಫೆಬ್ರವರಿ 18 , 2021ರಂದು ರಾತ್ರಿ ಬಂಟ್ವಾಳ ತಾಲ್ಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ ಶ್ರೀ ದುರ್ಗಾಪರಮೇಶ್ವರಿ ಬಯಲಾಟ ಸೇವಾ ಸಮಿತಿ ಮತ್ತು ಸ್ಥಳೀಯ ಹತ್ತು ಸಮಸ್ತರ ವತಿಯಿಂದ ಕಟೀಲು ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ‘ಸಮಗ್ರ ರಾವಣ’ ಹಾಗೂ ಮರುದಿನ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ಶ್ರೀ ದೇವಿ ಮಹಾತ್ಮೆ’ ಸೇವಾ ಬಯಲಾಟಗಳು ಜರಗಲಿವೆ. ಈ ಸಂದರ್ಭ ದಿನಾಂಕ 19 ರಂದು ಶುಕ್ರವಾರ ಏರ್ಪಡಿಸಲಾದ ‘ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸಂಸ್ಮರಣಾ ಸಮಾರಂಭ’ ದಲ್ಲಿ ಕಟೀಲು ಕ್ಷೇತ್ರದ ಅರ್ಚಕರು ಮತ್ತು ವಿವಿಧ ಗಣ್ಯರು ಭಾಗವಹಿಸುವರು. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡುವರು. ಕಟೀಲು ಮೇಳದ ರಂಗಸ್ಥಳದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕಲಾವಿದ ರಮೇಶ್ ಭಟ್ಟರಿಗೆ ‘ಬೊಂಡಾಲ ಪ್ರಶಸ್ತಿ ಪ್ರದಾನ’ ಮಾಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಮತ್ತು ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ತಿಳಿಸಿದ್ದಾರೆ.

ಸೂರಿಕುಮೇರಿ ಗೋವಿಂದ ಭಟ್ಟರು ಮತ್ತು ಎರಡು ಪುಸ್ತಕಗಳು 

ಪಾತ್ರಧಾರಿಯಾಗಿ ಗೋವಿಂದ ಭಟ್ಟರು ಪ್ರೇಕ್ಷಕರ ಮೇಲೆ ಬೀರುವ ಪ್ರಭಾವ ಬಹಳ ಗಾಢವಾದದ್ದು. ಆ ಪ್ರಭಾವ ಎಷ್ಟಿರುತ್ತದೆಂದರೆ ಅವರು ನಿರ್ವಹಿಸುವ ಪಾತ್ರಗಳಿಂದಾಚೆಗೆ ಯಕ್ಷಗಾನವೇ ಇಲ್ಲ ಎನ್ನುವಷ್ಟು.
ಕೆ. ಗೋವಿಂದ ಭಟ್ಟರ ಕುರಿತಾಗಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಇವರು ಪ್ರಕಾಶಿಸಿದ ಎರಡು ಪುಸ್ತಕಗಳು ಬಿಡುಗಡೆಯಾಗಿವೆ. ಮೊದಲನೆಯದು  ಡಾ. ಬಿ. ಪ್ರಭಾಕರ ಶಿಶಿಲ ಅವರು ಬರೆದ ಗೋವಿಂದ ಭಟ್ಟರ ಆತ್ಮಕಥೆ ‘ಯಕ್ಷೋಪಾಸನೆ’ ಹಾಗೂ ಇನ್ನೊಂದು ಹಿರಣ್ಯ ವೆಂಕಟೇಶ್ವರ ಭಟ್ಟ ಸಂಪಾದಕತ್ವದಲ್ಲಿ ಬಿಡುಗಡೆಗೊಂಡ ಸೂರಿಕುಮೇರಿ ಅವರ ಅಭಿನಂದನಾ ಗ್ರಂಥ ‘ಸವ್ಯಸಾಚಿ’.

ಮೊದಲನೆಯ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ 2008ರಲ್ಲಿ ಹೊರತಂದ ಪುಸ್ತಕ ‘ಯಕ್ಷೋಪಾಸನೆ’  ಡಾ. ಬಿ. ಪ್ರಭಾಕರ ಶಿಶಿಲರ ಅದ್ಭುತ ನಿರೂಪಣೆಯಿಂದ ಕೂಡಿದ್ದು ಪ್ರಾರಂಭದಿಂದ ಕೊನೆಯ ವರೆಗೂ ಓದಿಸಿಕೊಂಡು ಹೋಗುತ್ತದೆ. ಗ್ರಂಥದಲ್ಲಿ ಗೋವಿಂದ ಭಟ್ಟರ ಬಾಲ್ಯದಿಂದ ತೊಡಗಿ ಆ ಪುಸ್ತಕ ಪ್ರಕಟವಾಗುವ ವರೆಗಿನ ಅವರ ಜೀವನದ ವಿವಿಧ ಮಜಲುಗಳು, ಏಳುಬೀಳುಗಳನ್ನು ಸಮರ್ಥವಾಗಿ ನಿರೂಪಿಸಲಾಗಿದೆ. ಮೊದಲ ಭಾಗವು ಕರುಣರಸದ ಭಾವಾಭಿವ್ಯಕ್ತಿಯ ಧಾರೆಯಲ್ಲಿ ಮಿಂದು ತೋಯಿಸಿದರೂ ಮುಂದುವರಿದಂತೆ ಅವರ ಸಾಧನೆಗಳ ಅಲೆಯಲ್ಲಿ ನಾವೂ ತೇಲಾಡುವಂತೆ ಅನಿಸುತ್ತದೆ. ಮುಂದಿನ ಭಾಗದಲ್ಲಿ ಅವರ ವಿವಿಧ ಸಂದರ್ಶನಗಳಿಂದ ಆಯ್ದ ಪ್ರಶ್ನೋತ್ತರಗಳಿವೆ. ಈ ಪುಸ್ತಕದ ನಿರೂಪಣೆಯ ಕೊನೆಯಲ್ಲಿ ಗೋವಿಂದ ಭಟ್ಟರ ಈ ಮಾತುಗಳು ಸತ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


‘‘ಪಾತ್ರ ಯಾವುದೇ ಇರಲಿ, ತಕರಾರಿಲ್ಲದೆ ಕಲಾವಿದ ಒಪ್ಪಿಕೊಂಡರೆ ಕಲಾವಿದ ಬೆಳೆಯುತ್ತಾನೆ ಮತ್ತು ಪ್ರಯೋಗ ಯಶಸ್ವಿಯಾಗುತ್ತದೆ. ನಮ್ಮನ್ನು ನಾವು ಒಂದೆರಡು ಪಾತ್ರಗಳಿಗೆ ಮಾತ್ರ ಸೀಮಿತಗೊಳಿಸಿಕೊಂಡರೆ ಕಲಾಮಾಧ್ಯಮ ಸೊರಗುತ್ತದೆ. ಯಕ್ಷಗಾನವು ಒಂದು ಸಾಮುದಾಯಿಕ ಭಾವಾಭಿವ್ಯಕ್ತಿಯೇ ಹೊರತು ಏಕವ್ಯಕ್ತಿ ಪ್ರದರ್ಶನವಲ್ಲ. ಇಡೀ ತಂಡವಾಗಿ ಕಲಾವಿದರು ದುಡಿದರೆ ಎಂತಹ ಪ್ರಸಂಗ ವನ್ನಾದರೂ ಯಶಸ್ವಿಗೊಳಿಸಬಹುದು ಎಂಬುದು ನಾನು ಕಂಡುಕೊಂಡ ಸತ್ಯ.’’ ಗೋವಿಂದ ಭಟ್ಟರು ಈ ಮಾತಿನಂತೆಯೇ ನಡೆದುಕೊಂಡರು. ಅಗತ್ಯ ಬಿದ್ದಾಗ ಯಾವುದೇ ಪಾತ್ರವನ್ನು, ಎಷ್ಟೇ ಸಣ್ಣ ಪಾತ್ರವನ್ನಾದರೂ ನಿರ್ವಹಿಸಿದ ಉದಾಹರಣೆಗಳು ಕಣ್ಣಮುಂದೆ ಹೇರಳವಾಗಿವೆ.

ಇನ್ನೊಂದು ಪುಸ್ತಕ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದವರೇ ಹೊರತಂದ ಹಿರಣ್ಯ ವೆಂಕಟೇಶ್ವರ ಭಟ್ಟ ಸಂಪಾದಿತ ‘ಸವ್ಯಸಾಚಿ’. ಹೆಸರೇ ಹೇಳುವಂತೆ ಯಕ್ಷರಂಗದ ನಿಜ ಸವ್ಯಸಾಚಿಯ ಬಗ್ಗೆ ಕಲಾಪೋಷಕ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್‍ರಿಂದ ಮೊದಲ್ಗೊಂಡು ಅನೇಕ ಗಣ್ಯರು ಬರೆದ ಅನಿಸಿಕೆಗಳಿವೆ. ಟಿ. ಶ್ಯಾಮ್ ಭಟ್ ಅವರು ಈ ಪುಸ್ತಕದಲ್ಲಿ ‘‘ಅವರ ವೇಷಗಳು ರಂಗಸ್ಥಳವನ್ನು ತುಂಬಿಕೊಳ್ಳುವ ಪರಿ ಅನುಪಮವಾದುದು. ಗೋವಿಂದ ಭಟ್ಟರಿಗೆ ಗೋವಿಂದ ಭಟ್ಟರೇ ಸರಿ. ಯಾರ ಅನುಕರಣೆಯೂ ಇಲ್ಲದೆ, ಯಾರನ್ನೂ ಅನುಸರಿಸದೆ ತಮ್ಮದೇ ಆದ ಶೈಲಿಯಿಂದ ಮೆರೆದವರು…. ಸಾಮಾಜಿಕವಾದ ಕೆಲವು ವಿವಾದಗಳನ್ನು ಅವರು ಬಗೆಹರಿಸಿದ್ದಿದೆ. ಹೀಗೆ ಸಾಮಾಜಿಕ ಸೇವೆಗಳನ್ನು ಬಹುಕಾಲ ನಡೆಸಿದ್ದಾರೆ’’ ಎಂದು ಬರೆದಿದ್ದಾರೆ.

ಹೀಗೆ ಸಮಾಜಮುಖಿಯಾದ ಗೋವಿಂದ ಭಟ್ಟರು ಬಾಲ್ಯದಲ್ಲಿ ಬಡತನದ ಬೇಗೆಯಲ್ಲಿ ಬೆಂದು ಬಸವಳಿದಿದ್ದರೂ ಅದನ್ನೆಲ್ಲಾ ಮೆಟ್ಟಿ ನಿಂತು ಛಲದಿಂದ ಬದುಕಿ ಈಗ ಸುದೃಢವಾದ ಆರ್ಥಿಕ ಬದುಕನ್ನು ಕಂಡುಕೊಂಡವರು.
‘ಸವ್ಯಸಾಚಿ’ ಹೊತ್ತಗೆಯ ಒಂದು ಭಾಗದಲ್ಲಿ ಯಕ್ಷಗಾನ ಕಲಾವಿದ ಕೆ. ವಿಶ್ವೇಶ್ವರ ಭಟ್, ಸುಣ್ಣಂಬಳ ಅವರು ತಮ್ಮ ಗುರುಗಳ ಬಗ್ಗೆ ಹೀಗೆ ಹೇಳುತ್ತಾರೆ. ‘‘ಗುರುಗಳ ಗದಾಯುದ್ಧದ ಕೌರವನ ಪಾತ್ರ. ನನ್ನದು ಕರ್ಣಪರ್ವದ ಕರ್ಣ. ವೇಷಭೂಷಣ ಒದಗಿಸುವವರು ಒಂದು ಬಿಳಿ ಬಣ್ಣದ ಸೋಗೆವಲ್ಲಿಯನ್ನು ಮಾತ್ರ ತಂದಿದ್ದರು. ನಾನು ವೇಷಧರಿಸುವಾಗ ಅದನ್ನು ಅವರ ಕೌರವನ ಪಾತ್ರಕ್ಕಾಗಿ ತೆಗೆದಿಟ್ಟು ಬೇರೆ ಬಣ್ಣದ ಸೋಗೆವಲ್ಲಿ ಹಾಕಿದೆ. ಅದನ್ನು ನೋಡಿದ ಅವರು ಬಂದು ನೀನು ಅದನ್ನು ಹಾಕು ಎಂದು ಹೇಳಿ ಮೊದಲು ನಾನು ಹಾಕಿದ ಸೋಗೆವಲ್ಲಿಯನ್ನು ತೆಗೆಸಿದ್ದು ಮಾತ್ರವಲ್ಲ ಅಂದು ಅವರು ಕೌರವನಿಗೆ ಬೇರೆ ಯಾವುದೋ ಒಂದು ಸೋಗೆವಲ್ಲಿ ಹಾಕಿದರು. ಹೀಗೆ ತನ್ನ ವೇಷಭೂಷಣಕ್ಕೆ  ಕೊರತೆ ಮಾಡಿಕೊಂಡು ಇನ್ನೊಬ್ಬರನ್ನು ಮೆರೆಯಿಸುವ ಎಷ್ಟು ಮಂದಿಗಳನ್ನು ನಾವಿಂದು ಕಾಣಬಹುದು?’’ ನಿಜವಾಗಿಯೂ ಅತಿಶಯೋಕ್ತಿಗಳಿಂದ ಕೂಡಿದ ಮಾತಲ್ಲ ಇದು. ಇಂತಹ ಎಷ್ಟೋ ಸಂದರ್ಭಗಳಲ್ಲಿ ಗೋವಿಂದ ಭಟ್ಟರನ್ನು ಹತ್ತಿರದಿಂದ ಬಲ್ಲವರು ಒಪ್ಪುವ ಮಾತೇ.

ಅವರು ರಂಗದಲ್ಲಿ ಪಾತ್ರವೇ ಆಗಿರುತ್ತಿದ್ದರು. ಪಾತ್ರ, ಸ್ವಭಾವಗಳನ್ನು ತನ್ನ ಮೇಲೆ ಆವಾಹಿಸಿಕೊಳ್ಳುತ್ತಿದ್ದ ರೀತಿ ಅನನ್ಯವಾದದ್ದು. ‘ಯಕ್ಷೋಪಾಸನೆ’ಯಲ್ಲಿ ಅವರೇ ಹೇಳುವಂತೆ ‘‘ದ್ರೌಪದಿ ವಸ್ತ್ರಾಪಹರಣದ ಉದ್ದೇಶ ಪ್ರತೀಕಾರ. ಆ ಪಾತ್ರವನ್ನು ನಾನು ನಿರ್ವಹಿಸುವಾಗ ಹಿಂದೆ ನನ್ನ ವೈಯುಕ್ತಿಕ ಜೀವನದಲ್ಲಾದ ಅಪಮಾನ ಗಳನ್ನು ನೆನಪಿಸಿಕೊಂಡು ಈಗ ಅದಕ್ಕೆ ಪರಿಮಾರ್ಜನೆ ಮಾಡುತ್ತಿದ್ದೇನೆ ಎಂದುಕೊಳ್ಳುತ್ತಿದ್ದೆ. ಕೌರವನ ಪಾತ್ರ ಸಹಜವಾಗಿ ಅಭಿವ್ಯಕ್ತಿಗೊಳ್ಳುತ್ತಿದ್ದರೆ, ಅದಕ್ಕೆ ಈ ಭಾವ ಕಾರಣ ವಾಗಿರಬೇಕು.’’ ಎಂತಹಾ ಮಾರ್ಮಿಕವಾದ ಮಾತು. ಅಷ್ಟೇ ಸತ್ಯವೂ ಕೂಡ.

ಮೇಳಗಳ ಇಂದಿನ (04.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (04.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೋಟೆ ಮುಂಡುಗಾರು, ಬೆಳ್ಳಾರೆ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಪಣೋಲಿಬೈಲು, ಸಜಿಪಮೂಡ, ಬಂಟ್ವಾಳ 
ಕಟೀಲು ಎರಡನೇ ಮೇಳ ತಾರೆಮಾರು, ಬೆಳ್ತಂಗಡಿ 
ಕಟೀಲು ಮೂರನೇ ಮೇಳ‘ಮಾತೃಕೃಪಾ’, ಮರೋಳಿಪದವು, ಪಡುಪೆರಾರ 
ಕಟೀಲು ನಾಲ್ಕನೇ ಮೇಳ ಕೆಳಗಿನಮನೆ, ಕಲ್ಲುಮುಂಡ್ಕೂರ್ 
ಕಟೀಲು ಐದನೇ ಮೇಳ ದಂಡೆ ಶ್ರೀ ಮಹಾಗಣಪತಿ ದೇವಸ್ಥಾನ, ಬಂಟ್ವಾಳ 
ಕಟೀಲು ಆರನೇ ಮೇಳಕುತ್ತೆತ್ತೂರು, ಬಾಜಾವು 

ಮಂದಾರ್ತಿ ಒಂದನೇ ಮೇಳ ಸಣ್ಣಬಸವನಕಲ್ಲು, ಗಿಳಿಯಾರು,ಕೋಟ 
ಮಂದಾರ್ತಿ ಎರಡನೇ ಮೇಳ ಮಹಾದೇವಪುರ, ಮಾವಿನಕೊಪ್ಪ 
ಮಂದಾರ್ತಿ ಮೂರನೇ ಮೇಳ ದಫೇದರಮನೆ ಉಳ್ಳೂರು, ಕಂದಾವರ 
ಮಂದಾರ್ತಿ ನಾಲ್ಕನೇ ಮೇಳ ಗಡಿಹೊನ್ನೆ, ಯೋಗಿಮಳಲಿ, ದೇಮ್ಲಾಪುರ 
ಮಂದಾರ್ತಿ ಐದನೇ ಮೇಳ ಕಲ್ಬೆಟ್ಟುಮನೆ, ಪಾರಂಪಳ್ಳಿ, ಸಾಲಿಗ್ರಾಮ 
ಶ್ರೀ ಹನುಮಗಿರಿ ಮೇಳ ಅಜೆಕಾರು ಪೇಟೆ – ಶುಕ್ರ ನಂದನೆ
ಶ್ರೀ ಸಾಲಿಗ್ರಾಮ ಮೇಳಬಂಕಿಕೊಡ್ಲು, ಗೋಕರ್ಣ, ಉ.ಕ ಜಿಲ್ಲೆ – ಬಿಚ್ಚುಗತ್ತಿ ಭರಮಣ್ಣ 
ಶ್ರೀ ಪೆರ್ಡೂರು ಮೇಳಹಡಂಕೋಳಿ, ಆಚೆಮನೆ, ಕಣಂಜಾರು – ನಾಗಶ್ರೀ, ರತ್ನಾವತಿ ಕಲ್ಯಾಣ 
ಶ್ರೀ ಸುಂಕದಕಟ್ಟೆ ಮೇಳ ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ರಥದ ಗದ್ದೆ – ಶ್ರೀ ದೇವಿ ಮಹಾತ್ಮೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಕಾನ್ಕಿ, ಬಂಡಾರಗಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಮುಕ್ಕೋಡು, ಹೊಸಿಮನೆ, ನೆರಳಕಟ್ಟೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ ಹೆರಂಜಾಲು ಗುಡೇ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಶಂಕರನಾರಾಯಣ ದೇವಸ್ಥಾನ, ಕೊಡವೂರು – ಬೇಡರ ಕಣ್ಣಪ್ಪ, ಮೀನಾಕ್ಷಿ ಕಲ್ಯಾಣ (ರಾತ್ರಿ 8.30ಕ್ಕೆ)
ಕಮಲಶಿಲೆ ಮೇಳ ‘ಎ’ಶ್ರೀ ನಾಗದೇವಸ್ಥಾನ ವಠಾರ, ಸಿದ್ಧಾಪುರ
ಕಮಲಶಿಲೆ ಮೇಳ ‘ಬಿ’ಶ್ರೀ ಅಯ್ಯಪ್ಪ ಪಂಜುರ್ಲಿ ಭಕ್ತವೃಂದ, ಕೋಣಿ 

ಶ್ರೀ ಬಪ್ಪನಾಡು ಮೇಳಗುಡ್ಡೆ ಅಂಗಡಿ ಫ್ರೆಂಡ್ಸ್, ಉದ್ಯಾವರ – ಬಂಗಾರ್ ಬಾಲೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ಆನಗೋಡು ಜನತಾ ಕಾಲನಿ ರಂಗಮಂದಿರ, ತ್ರಾಸಿ 
ಶ್ರೀ ಸೌಕೂರು ಮೇಳಬೈಲೂರು ಮಸ್ಯಾಡಿ – ನೂತನ ಪ್ರಸಂಗ
ಶ್ರೀ ಹಾಲಾಡಿ ಮೇಳಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುಂಡಾಡಿ, ಬಡಾಬೆಟ್ಟು, ಕೊಂಬೆ – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ  
ಶ್ರೀ ಬೆಂಕಿನಾಥೇಶ್ವರ ಮೇಳ  ಕೊಟ್ನಕಟ್ಟೆ ಹಿರಿಯಡ್ಕ – ಸತ್ಯೊದ ಸ್ವಾಮಿ ಕೊರಗಜ್ಜ 
ಶ್ರೀ ಮಡಾಮಕ್ಕಿ ಮೇಳತೊಂಬಟ್ಟು ವೀರಭದ್ರ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ   
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಸಾಲಿಗ್ರಾಮ ಪಾರಂಪಳ್ಳಿ ದೇವಾಡಿಗರ ತೋಟ – ಅಬ್ಬರದ ಹ್ಯಾಗುಳಿ 
ಶ್ರೀ ಹಿರಿಯಡಕ ಮೇಳಕೂಡಾಲ್ ಶ್ರೀ ಯಕ್ಷ ದೇವಸ್ಥಾನ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಆಲೂರು ಕ್ರಾಸ್ 
ಶ್ರೀ ಸಿಗಂದೂರು ಮೇಳಕಾನಸೂರು ಹೊಸಗದ್ದೆ 
ಶ್ರೀ ನೀಲಾವರ ಮೇಳ ಕಟ್ಟಿನಮಕ್ಕಿ ಶಾಲೆಯ ಬಳಿ – ದೈವ ಮಂಟಪ 
ಶ್ರೀ ಮಂಗಳಾದೇವಿ ಮೇಳಹೂ ಹಾಕುವ ಕಲ್ಲು, ರಾಟಿಕೇಶ್ವರಿ ಸನ್ನಿಧಿ – ಶ್ರೀ ಕೊರಗಜ್ಜ ಮಹಾತ್ಮೆ 
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ಕನ್ನಂಗಿ  
ಶ್ರೀ ಮೇಗರವಳ್ಳಿ ಮೇಳ ಮುನ್ನೂರು ಗ್ರಾಮಸ್ಥರು – ಮಧುರ ಮನಸ್ವಿ 


ಕಾಟುಕುಕ್ಕೆ ಶ್ರೀ  ಸುಬ್ರಾಯ ದೇವಸ್ಥಾನದಲ್ಲಿ 13ನೇ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವ  ಮತ್ತು ಶ್ರೀ ಮದ್ಭಾಗವತ ಸಪ್ತಾಹ ಜ್ಞಾನಯಜ್ಞ

ಶ್ರೀ  ಸುಬ್ರಾಯ ದೇವಸ್ಥಾನ ಕಾಟುಕುಕ್ಕೆ ಮತ್ತು ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ (ರಿ) ಕಾಟುಕುಕ್ಕೆಯ ಆಶ್ರಯದಲ್ಲಿ ಕಾಟುಕುಕ್ಕೆ ಶ್ರೀ  ಸುಬ್ರಾಯ ದೇವಸ್ಥಾನದಲ್ಲಿ 13ನೇ ವರ್ಷದ ಶ್ರೀ ಪುರಂದರದಾಸ ಆರಾಧನೋತ್ಸವ  ಮತ್ತು ಶ್ರೀ ಮದ್ಭಾಗವತ ಸಪ್ತಾಹ ಜ್ಞಾನಯಜ್ಞವು ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಹಾಗೂ ಟ್ರಸ್ಟ್ ಗೆ  ಒಳಪಟ್ಟ ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ, ಮಂಜೇಶ್ವರ, ಕಾಸರಗೋಡು ತಾಲೂಕುಗಳ ಭಜನಾ ಮಂಡಳಿಗಳ ಸಹಕಾರದೊಂದಿಗೆ ದಿನಾಂಕ 05.02.2021, ಶುಕ್ರವಾರದಿಂದ 11.02.2021 ಗುರುವಾರದ ವರೆಗೆ ನಡೆಯಲಿದೆ.

ಈ ಈ ಕಾರ್ಯಕ್ರಮದ ಅಂಗವಾಗಿ ಪ್ರತಿದಿನವೂ ಭಾಗವತ ಪಾರಾಯಣ, ಪ್ರವಚನ ಮತ್ತು ಭಜನೆ ನಡೆಯಲಿದೆ. ದಿನಾಂಕ  11.02.2021, ಆರಾಧನೋತ್ಸವದ ದಿನ ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯ ನಡೆಯಲಿದೆ. ಆ ದಿನ ದಾಸ ಸಂಕೀರ್ತನೆ, ಸಮೂಹ ಗಾಯನ, ಸಭಾ ಕಾರ್ಯಕ್ರಮ, ಸನ್ಮಾನ ಮತ್ತು ಕುಣಿತ ಭಜನಾ ಪ್ರಾತ್ಯಕ್ಷಿಕೆ ನಡೆಯಲಿದೆ. ಕಾರ್ಯಕ್ರಮದ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ. 

ಮೋಹಕ ಸ್ತ್ರೀ ಪಾತ್ರಧಾರಿಯಾಗಿ ಮೆರೆದ ಶ್ರೀ ಭಾಸ್ಕರ ಜೋಷಿ ಶಿರಳಗಿ

ಯಕ್ಷಗಾನದಲ್ಲಿ ಪುರುಷರೇ ಸ್ತ್ರೀಪಾತ್ರಗಳನ್ನು ನಿರ್ವಹಿಸುವುದು ಮೊದಲಿನಿಂದಲೂ ನಡೆದು ಬಂದ ರೀತಿ. ಅದಕ್ಕೆ ಕಾರಣಗಳು ಹಲವಿರಬಹುದು. ಆದರೆ ಒಂದಂತೂ ಸತ್ಯ. ಗಂಡಾಗಿ ಹುಟ್ಟಿ ಹೆಣ್ಣಾಗಿ ಅಭಿನಯಿಸುವುದು ಅಷ್ಟು ಸುಲಭವಲ್ಲ. ಹೆಣ್ಣಾಗಿ ಹುಟ್ಟಿ ಗಂಡಾಗಿ ಅಭಿನಯಿಸುವುದೂ ಕಷ್ಟದ ಕೆಲಸ. ಸತತ ಸಾಧನೆಯಿಂದ ಮಾತ್ರ ಇದು ಸಾಧ್ಯ. ಹೀಗೆ ಅವಿರತ ಪರಿಶ್ರಮದಿಂದ ಶ್ರೇಷ್ಠ ಸ್ತ್ರೀಪಾತ್ರಧಾರಿಯಾಗಿ ಯಕ್ಷಗಾನ ಕ್ಷೇತ್ರದಲ್ಲಿ ಹೆಸರು ಗಳಿಸಿದವರನೇಕರು. ಅಂತವರಲ್ಲೋರ್ವರು ಶಿರಳಗಿ ಶ್ರೀ ಭಾಸ್ಕರ ಜೋಷಿ. ಬಡುಗುತಿಟ್ಟು ಯಕ್ಷಾಗಸದಲ್ಲಿ ಮನಮೋಹಕ ತಾರೆಯಾಗಿ ಮಿನುಗಿದವರು. ದೈವದತ್ತವಾದ ರೂಪ, ಸತತ ಅಧ್ಯಯನದಿಂದ ಸಿದ್ಧಿಸಿದ ಮಾತುಗಾರಿಕೆ, ಅಭಿನಯ ಚಾತುರ್ಯಗಳಿಂದ ಬಡಗಿನ ಯಕ್ಷಬೆಡಗಿಯಾಗಿ ಕಲಾಭಿಮಾನಿಗಳನ್ನು ರಂಜಿಸಿದ ಕಲಾವಿದರಿವರು.

ಪದ್ಮಶ್ರೀ ಪ್ರಶಸ್ತಿ ವಿಜೇತ ಬಡಗುತಿಟ್ಟಿನ ಮೇರುಕಲಾವಿದ ಚಿಟ್ಟಾಣಿಯವರ ಪುರುಷಪಾತ್ರಗಳಿಗೆ, ಸ್ತ್ರೀಪಾತ್ರಧಾರಿಯಾಗಿ ಸುಮಾರು 15 ವರ್ಷಗಳ ಕಾಲ ಅಭಿನಯಿಸಿದ ಕೀರ್ತಿ ಶಿರಳಗಿ ಭಾಸ್ಕರ ಜೋಷಿಯವರಿಗಿದೆ. ಕಲಾಬದುಕಿನುದ್ದಕ್ಕೂ ಬಡಗುತಿಟ್ಟಿನ ಹೆಚ್ಚಿನ ಎಲ್ಲಾ ಹಿರಿಯ ಕಲಾವಿದರೊಂದಿಗೆ ಪಾತ್ರಗಳನ್ನು ನಿರ್ವಹಿಸುವ ಅವಕಾಶವೂ ಸಿಕ್ಕಿತ್ತು. ಮೋಹಿನಿ, ಮೇನಕೆ, ದಾಕ್ಷಾಯಿಣಿ, ಚಂದ್ರಮತಿ, ದಮಯಂತಿ, ಸುಭದ್ರೆ, ನಾಗಶ್ರೀ, ಚಿತ್ರಾವತಿ, ಸೈರಂಧ್ರಿ, ರುಚಿಮತಿ, ಚಿತ್ರಾಂಗದೆ, ವಿಷಯೆ, ಶಾರದೆ ಮೊದಲಾದ ಪಾತ್ರಗಳನ್ನು ಶಿರಳಗಿ ಭಾಸ್ಕರ ಜೋಷಿಯವರು ಜನಮೆಚ್ಚುವಂತೆ ಚಿತ್ರಿಸಿ ಪ್ರಶಂಸೆಗೆ ಪಾತ್ರರಾಗಿದ್ದರು.

ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಶಿರಳಗಿ, ಭಾಸ್ಕರ ಜೋಷಿಯವರ ಹುಟ್ಟೂರು. 1956ನೇ ಇಸವಿ ಎಪ್ರಿಲ್ 30ರಂದು ಜನನ. ತಂದೆ ಶ್ರೀ ನಾರಾಯಣ ಜೋಷಿ, ತಾಯಿ ಶ್ರೀಮತಿ ಗಂಗಾ ನಾರಾಯಣ ಜೋಷಿ. ನಾರಾಯಣ ಜೋಷಿ, ಗಂಗಾ ದಂಪತಿಗಳ ಆರು ಮಂದಿ ಮಕ್ಕಳಲ್ಲಿ (4 ಹೆಣ್ಣು ಮತ್ತು 2 ಗಂಡು) ಭಾಸ್ಕರ ಜೋಷಿ ಅವರು ಹಿರಿಯರು. ಇವರದ್ದು ಪೌರೋಹಿತ್ಯ ಮನೆತನ. ನಾರಾಯಣ ಜೋಷಿಯವರು ಪುರೋಹಿತರಾಗಿದ್ದು ಕೃಷಿ ಚಟುವಟಿಕೆಗಳಲ್ಲೂ ಆಸಕ್ತರಾಗಿದ್ದರು. ಭಾಸ್ಕರ ಜೋಷಿಯವರು 7ನೇ ತರಗತಿ ವರೇಗೆ ಶಿರಳಗಿ ಶಾಲೆಯಲ್ಲೂ, 10ನೇ ತರಗತಿ ವರೇಗೆ ಸಿದ್ಧಾಪುರ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆಯಲ್ಲೂ ಓದಿದ್ದರು. ಕುಟುಂಬದಲ್ಲಿ ಚಿಕ್ಕಪ್ಪನಾದ ಶಿವಾನಂದ ಹೆಗಡೆಯವರು ಯಕ್ಷಗಾನ ಕಲಾವಿದರಾಗಿದ್ದರು. ಹಳ್ಳಿಪ್ರದೇಶ. ಮನೋರಂಜನೆಗೆ ಯಕ್ಷಗಾನದ ಹೊರತಾಗಿ ಬೇರೆ ಮಾಧ್ಯಮಗಳಿಲ್ಲದ ಕಾಲ ಅದು. ಜೋಷಿಯವರಿಗೆ ಎಳವೆಯಲ್ಲೇ ಯಕ್ಷಗಾನ ಎಂದರೆ ಬಲುಪ್ರೀತಿ.

ಕೊಳಗಿ ಎಂಬುದು ಶಿರಳಗಿಯ ಹತ್ತಿರದ ಊರು. ಖ್ಯಾತ ಕಲಾವಿದರಾದ ಕೊಳಗಿ ಅನಂತ ಹೆಗಡೆಯವರು ಮತ್ತು ಗೋಡೆ ನಾರಾಯಣ ಹೆಗಡೆಯವರ ನೇತೃತ್ವದಲ್ಲಿ ಕೊಳಗಿ ಮೇಳದ ಪ್ರದರ್ಶನಗಳು ನಡೆಯುತ್ತಿತ್ತು. ಕೊಳಗಿ ಲಕ್ಷ್ಮೀನರಸಿಂಗ ದೇವರ ಹೆಸರಿನ ಮೇಳ ಅದು. ಭಾಸ್ಕರ ಜೋಷಿಯವರು ಪರಿಸರದಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗ ನಾಟಕಗಳಲ್ಲಿ ಅಭಿನಯಿಸಿದ್ದರು. 10ನೇ ಕ್ಲಾಸ್ ಕಳೆದ ನಂತರ ಓದಿಗೆ ವಿದಾಯ ಹೇಳಿದ್ದರು. ನೆರೆಮನೆಯ ಹುಡುಗನಾದ ಭಾಸ್ಕರ ಜೋಷಿ ಅವರಲ್ಲಿರುವ ಕಲಾಸಕ್ತಿಯನ್ನು ಹುಲೀಮನೆ ಸೀತಾರಾಮ ಶಾಸ್ತ್ರಿಗಳು ಗಮನಿಸಿದ್ದರು. ಅವರು ನಾಟಕ ಕ್ಷೇತ್ರದ ಅಪ್ರತಿಮ ಸಾಧಕರು. ಪೌರಾಣಿಕ ನಾಟಕ ಕಲಾವಿದರೂ, ನಿರ್ದೇಶಕರೂ, ನಾಟಕ ತಂಡದ ನಾಯಕರೂ ಆಗಿದ್ದರು.

ಭಾಸ್ಕರ ಜೋಷಿ ಅವರ ಮನಮೋಹಕವಾದ ರೂಪವು ಕಲಾವಿದನಾಗಿ ಅವಕಾಶಗಳು ತಾನಾಗಿ ಒಲಿದು ಬರಲು ಕಾರಣವಾಗಿತ್ತು. ಸೀತಾರಾಮ ಶಾಸ್ತ್ರಿಗಳು ತಮ್ಮ ತಂಡದ ಐತಿಹಾಸಿಕ ನಾಟಕ ‘ಪನ್ನಾದಾಸಿ’ಯಲ್ಲಿ ಕಥಾನಾಯಕಿ ‘ಪನ್ನಾ’ ಪಾತ್ರವನ್ನೇ ನೀಡಿದ್ದರು. ರೂಪ ಮತ್ತು ಸ್ವಯಂ ಪ್ರತಿಭೆಯಿಂದಲೇ ಅಭಿನಯಿಸಿ ‘ಪನ್ನಾ’ ಪಾತ್ರವು ಮೆರೆಯುವಂತೆ ಮಾಡಿದ್ದರು ಜೋಷಿಯವರು. ಎಂ.ಜಿ.ಸಿ. ಕಾಲೇಜಿನ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನಕ್ಕೆ ಹೊಸ್ತೋಟ ಮಂಜುನಾಥ ಭಾಗವತರು ಆಗ ತರಬೇತಿಯನ್ನು ನೀಡುತ್ತಿದ್ದರು. ಸ್ತ್ರೀಪಾತ್ರಗಳನ್ನು ನಿರ್ವಹಿಸಲು ಆಗ ಕಲಾವಿದರ ಕೊರತೆ ಇತ್ತು. ಭಾಸ್ಕರ ಜೋಷಿಯವರಿಗೆ ಕರೆಬಂದಿತ್ತು. ಹೀಗೆ ಹೊಸ್ತೋಟ ಮಂಜುನಾಥ ಭಾಗವತರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿಯುವ ಅವಕಾಶವು ಬಂದಿತ್ತು. ಡಿ. ಜಿ. ಹೆಗಡೆ ಮತ್ತಿಗಾರು ಅವರೂ ಹೊಸ್ತೋಟದವರ ಜತೆ ತರಬೇತಿ ನೀಡುತ್ತಿದ್ದರು.

ಸುಧನ್ವಾರ್ಜುನ ಪ್ರಸಂಗದ ಪ್ರಭಾವತಿಯಾಗಿ ಭಾಸ್ಕರ ಜೋಷಿಯವರು ಮೊತ್ತಮೊದಲು ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡರು. ಅದೇ ವರುಷ ಇಡಗುಂಜಿ ಮೇಳದವರು ಸ್ತ್ರೀಪಾತ್ರಧಾರಿಗಳ ಅನ್ವೇಷಣೆಯಲ್ಲಿದ್ದರು. ಪನ್ನಾದಾಸಿ ನಾಟಕದ ಪನ್ನಾ ಪಾತ್ರದಲ್ಲಿ ಭಾಸ್ಕರ ಜೋಷಿ ಅವರ ಅಭಿನಯವನ್ನು ಕೆರೆಮನೆ ಗಜಾನನ ಹೆಗಡೆಯವರು ನೋಡಿ ಮೆಚ್ಚಿಕೊಂಡಿದ್ದರು. ಆ ಕಾರಣದಿಂದಲೇ ಇಡಗುಂಜಿ ಮೇಳಕ್ಕೆ ಕರೆಬಂದಿತ್ತು. ಮನೆಯವರ ಒಪ್ಪಿಗೆ ಇರಲಿಲ್ಲ. ಆದರೂ ಕೊಳಗಿ ಅನಂತ ಹೆಗಡೆ, ಗೋಡೆ ನಾರಾಯಣ ಹೆಗಡೆಯವರ ಕೇಳಿಕೆಯ ಮೇರೆಗೆ ಮನೆಯವರ ಸಮ್ಮತಿ ಸಿಕ್ಕಿತ್ತು. 1973ರಲ್ಲಿ ಕೆರೆಮನೆ ಇಡಗುಂಜಿ ಮೇಳಕ್ಕೆ ಸೇರಿದ್ದರು. ಗಜಾನನ ಹೆಗಡೆಯವರು ಸ್ತ್ರೀವೇಷ ಅಲ್ಲದೆ ಪುರುಷ ಪಾತ್ರಗಳನ್ನೂ ಮಾಡುತ್ತಿದ್ದರು. ಅವರ ಅನುಪಸ್ಥಿತಿಯಲ್ಲಿ ಜೋಷಿಯವರು ಮುಖ್ಯ ಸ್ತ್ರೀವೇಷಗಳನ್ನೂ ಮಾಡಲಾರಂಭಿಸಿದ್ದರು.

ರಂಗದ ಅಳುಕು ಇವರಿಗಿರಲಿಲ್ಲ. ಸಾಹಿತ್ಯ ಆಸಕ್ತಿಯೂ ಇದ್ದಿತ್ತು. ನೆರೆಮನೆಯವರೆಲ್ಲ ಪುಸ್ತಕಗಳನ್ನು ಕೊಂಡು ಪರಸ್ಪರ ವಿನಿಮಯ ಮಾಡಿಕೊಂಡು ಓದುತ್ತಿದ್ದರು. ನಿದ್ದೆ ಮಾಡದೆ ಆಟ ವೀಕ್ಷಣೆ. ಗಜಾನನ ಹೆಗಡೆಯವರ ನಿರ್ದೇಶನ. ನೆಬ್ಬೂರು, ಕಪ್ಪೆಕೆರೆ ಸುಬ್ರಾಯ ಭಾಗವತರ ನಿರ್ದೇಶನ ಸಹಕಾರ. ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭುಹೆಗಡೆ, ಗಜಾನನ ಹೆಗಡೆ, ಹಳದೀಪುರ ಗಜಾನನ ಭಂಡಾರಿ ಮೊದಲಾದವರ ಒಡನಾಟ, ಸಹಕಾರವೂ ಸಿಕ್ಕಿತ್ತು. ಭಾಸ್ಕರ ಜೋಷಿಯವರು ಕಲಾವಿದನಾಗಿ ಕ್ಷಿಪ್ರ ಬೆಳವಣಿಗೆಯನ್ನೇ ಕಂಡಿದ್ದರು. ಕೋಟದಲ್ಲಿ ನಡೆದ ಪ್ರದರ್ಶನವನ್ನು ನೋಡಿ ಕೋಟ ಶಿವರಾಮ ಕಾರಂತರೂ ಜೋಷಿಯವರ ಪಾತ್ರನಿರ್ವಹಣೆಯನ್ನು ಮೆಚ್ಚಿಕೊಂಡಿದ್ದರು. ಶಿವರಾಮ ಕಾರಂತರ ನಿರ್ದೇಶನದಲ್ಲಿ ಉಡುಪಿ ಯಕ್ಷಗಾನ ಕಲಿಕಾ ಕೇಂದ್ರವು ‘ಯಕ್ಷರಂಗ’ದ ಅಡಿ ಯಕ್ಷಗಾನ ಬ್ಯಾಲೆ ಕಾರ್ಯಕ್ರಮಗಳನ್ನು ನೀಡುತ್ತಿತ್ತು.

ಕಾರಂತರಿಂದ ಕರೆಯೂ ಬಂದಿತ್ತು. ಈ ತಂಡದ ಮುಖ್ಯ ಸ್ತ್ರೀವೇಷಧಾರಿಯಾಗಿ ಭಾರತದಾದ್ಯಂತ ನಡೆದ ಯಕ್ಷಗಾನ ಬ್ಯಾಲೆ ಪ್ರದರ್ಶನಗಳಲ್ಲಿ ಜೋಷಿಯವರು ಭಾಗವಹಿಸಿದ್ದರು. ಅಂಬೆ, ಚಿತ್ರಾಂಗದೆ, ಕನಕಾಂಗೀ ಕಲ್ಯಾಣ ಪ್ರಸಂಗದ ಸುಭದ್ರೆ ಮೊದಲಾದ ಪಾತ್ರಗಳನ್ನು ಈ ತಂಡದಲ್ಲಿ ನಿರ್ವಹಿಸಿದ್ದರು. ಅಭಿನಯ ಚಾತುರ್ಯವು ಸಿದ್ಧಿಸಿದ್ದು ಕಾರಂತರ ನಿರ್ದೇಶನದಲ್ಲಿ ಎಂದು ಜೋಷಿಯವರು ಸದಾ ಹೇಳುತ್ತಾರೆ. ಈ ತಂಡದ ಕಲಾವಿದನಾಗಿ ಜಪಾನ್, ರಷ್ಯಾ, ಇಟೆಲಿ, ಬಲ್ಗೇರಿಯಾ, ಹಂಗೇರಿ, ಬ್ಯಾಂಕಾಕ್, ಸಿಂಗಾಪುರ ಮೊದಲಾದ ದೇಶಗಳಲ್ಲೂ ಕಲಾಪ್ರದರ್ಶನವನ್ನು ನೀಡಿದ್ದರು. ಆರು ವರ್ಷಗಳ ಕಾಲ ಈ ತಂಡದ ಸದಸ್ಯನಾಗಿ ದೇಶ ವಿದೇಶಗಳನ್ನು ಸುತ್ತುವ ಸದವಕಾಶಗಳು ಸಿಕ್ಕಿತ್ತು.

ಇಡಗುಂಜಿ ಮೇಳದ ತಿರುಗಾಟದ ಬಳಿಕ ಭಾಸ್ಕರ ಜೋಷಿಯವರು ವ್ಯವಸಾಯ ಮಾಡಿದ್ದು ಸಾಲಿಗ್ರಾಮ ಮೇಳದಲ್ಲಿ. ಅದೇ ವರ್ಷ ಜಿ. ಆರ್. ಕಾಳಿಂಗ ನಾವಡರೂ ಸಾಲಿಗ್ರಾಮ ಮೇಳಕ್ಕೆ ಸೇರಿದ್ದರು. ಅದೇ ವರ್ಷ ಅವರ ಭಾಗವತಿಕೆಯಲ್ಲಿ ನಾಗಶ್ರೀ ಪ್ರಸಂಗವೂ ಜೋಷಿ ಅವರ ನಾಗಶ್ರೀ ಪಾತ್ರವೂ ರಂಜಿಸಿತ್ತು. ಮುಂದಿನ ವರುಷ ಚೆಲುವೆ ಚಿತ್ರಾವತಿ ಪ್ರಸಂಗದ ಚಿತ್ರಾವತಿ ಪಾತ್ರವೂ ಸಾಕಷ್ಟು ಪ್ರಸಿದ್ಧಿಯನ್ನು ನೀಡಿತ್ತು. ಅಲ್ಲದೆ ಪುರಾಣ ಪ್ರಸಂಗಗಳೂ ನಡೆಯುತ್ತಿದ್ದುದು ಅನುಕೂಲವೇ ಆಗಿತ್ತು. “ನಾರ್ಣಪ್ಪ ಉಪ್ಪೂರರಂತೆ ಜಿ. ಆರ್. ಕಾಳಿಂಗ ನಾವಡರೂ ಸಾಹಸಿಯಾಗಿದ್ದರು. ಸೂಕ್ಷ್ಮಭಾವಗಳನ್ನು ಅರ್ಥೈಸಿ ಹಾಡುತ್ತಿದ್ದರು. ಇದು ವೇಷಧಾರಿಯ ಭಾವಪ್ರಕಟಣೆಗೆ ಅನುಕೂಲವಾಗಿರುತ್ತಿತ್ತು. ಅವರ ಭಾಗವತಿಕೆಯಲ್ಲಿ ನಾನು ನಿರ್ವಹಿಸಿದ ಪಾತ್ರಗಳು ರಂಜಿಸಿತು” ಕಾಳಿಂಗ ನಾವಡರ ಬಗೆಗೆ ಜೋಷಿಯವರ ಅಭಿಪ್ರಾಯವಿದು. ಅವರ ಭಾಗವತಿಕೆಯಲ್ಲಿ ಚಂದ್ರಹಾಸ ಪ್ರಸಂಗದ ವಿಷಯೆ ಪಾತ್ರವೂ ಜೋಷಿ ಅವರಿಗೆ ಹೆಸರನ್ನು ಕೊಟ್ಟಿತ್ತು.

4 ವರ್ಷಗಳ ಕಾಲ ಸಾಲಿಗ್ರಾಮ ಮೇಳದಲ್ಲಿ ವ್ಯವಸಾಯ. ಕಟ್ಟಾ ಶ್ರೀನಿವಾಸ ಆಚಾರ್ಯ, ಶಂಕರ ಭಾಗವತ ಯಲ್ಲಾಪುರ, ಜಲವಳ್ಳಿ, ಬಳ್ಕೂರು ಕೃಷ್ಣಯಾಜಿ, ಅರಾಟೆ ಮಂಜುನಾಥ, ರಾಮನಾೈರಿ, ಮುಖ್ಯಪ್ರಾಣ ಕಿನ್ನಿಗೋಳಿ, ತೀರ್ಥಹಳ್ಳಿ ಗೋಪಾಲಾಚಾರಿ ಮೊದಲಾದವರು ಸಾಲಿಗ್ರಾಮ ಮೇಳದ ಒಡನಾಡಿಗಳಾಗಿದ್ದರು. ಬಳಿಕ 4 ವರ್ಷಗಳ ತಿರುಗಾಟ ಅಮೃತೇಶ್ವರೀ ಮೇಳದಲ್ಲಿ. ಉಪ್ಪೂರರ ಭಾಗವತಿಕೆ. ದುರ್ಗಪ್ಪ ಗುಡಿಗಾರ, ಹೊಳೆಗದ್ದೆ ಗಜಾನನ ಭಂಡಾರಿ, ಕೊಳಗಿ ಅನಂತ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಾಲ್ಕೋಡು ಗಣಪತಿ ಹೆಗಡೆ, ನಗರ ಜಗನ್ನಾಥ ಶೆಟ್ಟಿ ಮೊದಲಾದವರು ಸಹಕಲಾವಿದರಾಗಿದ್ದರು. ಮುಖ್ಯ ಸ್ತ್ರೀಪಾತ್ರಧಾರಿಯಾಗಿ ಅಮೃತೇಶ್ವರೀ ಮೇಳದಲ್ಲಿ ಜೋಷಿಯವರದು ಅಮೋಘ ನಿರ್ವಹಣೆ. ಈ ಸಂದರ್ಭದಲ್ಲಿ ಚಿಟ್ಟಾಣಿ ಮತ್ತು ಭಾಸ್ಕರ ಜೋಷಿ ಜೋಡಿಯು ಪ್ರೇಕ್ಷಕರ ಮನಸೂರೆಗೊಂಡಿತ್ತು.

ಮಳೆಗಾಲದ ಪ್ರದರ್ಶನಗಳಲ್ಲಿ ಬಡಗಿನ ಹೆಚ್ಚಿನ ಕಲಾವಿದರ ಜತೆ ವೇಷ ಮಾಡುವ ಸಂದರ್ಭಗಳೂ ಸಿಕ್ಕಿತ್ತು. “ಪ್ರತಿಯೊಂದು ಪಾತ್ರಗಳನ್ನು ಬೇರೆ ಬೇರೆ ಕೋನಗಳಿಂದ ನೋಡಬೇಕು ಮತ್ತು ವಿಮರ್ಶಿಸಬೇಕು. ಆಗ ಹೊಸ ಹೊಳಹುಗಳು ಹುಟ್ಟಿಕೊಳ್ಳುತ್ತದೆ”. ಇದು ಜೋಷಿಯವರಿಗೆ ಕೆರೆಮನೆ ಮಹಾಬಲ ಹೆಗಡೆಯವರಿಂದ ಸಿಕ್ಕಿದ ಪಾಠ. ಪಾತ್ರನಿರ್ವಹಣೆಗೆ ಇದು ಅನುಕೂಲವಾಗಿತ್ತು. ಇವರ ಪಾತ್ರನಿರ್ವಹಣೆಯನ್ನು ತೆಂಕಿನ ಖ್ಯಾತ ಸ್ತ್ರೀಪಾತ್ರಧಾರಿ ಪಾತಾಳ ವೆಂಕಟ್ರಮಣ ಭಟ್ಟರೂ ಮೆಚ್ಚಿ ಪ್ರಶಂಸಿಸಿದ್ದರು. ಸಿಟ್ಟು ಬಂದಾಗ ಗಯ್ಯಾಳಿ ಹೆಂಗುಸು ಇಡೀ ಸೆರಗನ್ನು ಸುತ್ತಿ ಎಳೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾಳೆ. ಗರತಿ ಹೆಣ್ಣು ಸೆರಗಿನ ಒಂದು ತುದಿಯನ್ನು ಮಾತ್ರ ಸೆಳೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾಳೆ ಎಂಬ ಸೂಕ್ಷ್ಮವನ್ನೂ ಪಾತಾಳದವರು ಜೋಷಿಯವರಿಗೆ ತಿಳಿಸಿದ್ದರಂತೆ. ಕೇವಲ ಒಂದು ಕ್ರಿಯೆಯಲ್ಲಿ ಪಾತ್ರದ ಸ್ವಭಾವವನ್ನು ತಿಳಿಸುವ ಕಲೆಯನ್ನು ಕರಗತ ಮಾಡಿದ್ದ ಪಾತಾಳದವರ ಚಾತುರ್ಯಕ್ಕೆ ಜೋಷಿ ಅವರು ಮನಸೋತಿದ್ದರು.

ಅಮೃತೇಶ್ವರೀ ಮೇಳದ ಬಳಿಕ ಮತ್ತೆ ಸಾಲಿಗ್ರಾಮ ಮೇಳದ 2 ವರ್ಷ ತಿರುಗಾಟ. ಕಾಳಿಂಗ ನಾವಡ ಮತ್ತು ನೆಲ್ಲೂರು ಮರಿಯಪ್ಪ ಆಚಾರ್ಯರ ಭಾಗವತಿಕೆ. 2 ವರ್ಷ ಬಚ್ಚಗಾರು ಮೇಳದಲ್ಲಿ. ಪುನಃ ಸಾಲಿಗ್ರಾಮ ಮೇಳದಲ್ಲಿ ಒಂದು ವರ್ಷ. ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ 3 ವರ್ಷ. ಶಿರಸಿ ಮಾರಿಕಾಂಬ ಮೇಳದಲ್ಲಿ 3 ವರ್ಷ. ಕೆರೆಮನೆ ಶಂಭು ಹೆಗಡೆಯವರ ಕಾಲಮಿತಿ ಪ್ರದರ್ಶನ ಗಳಲ್ಲಿ 2 ವರ್ಷ. 3 ವರ್ಷ ಪೆರ್ಡೂರು ಮೇಳದ ತಿರುಗಾಟ. ಸುಬ್ರಹ್ಮಣ್ಯ ಧಾರೇಶ್ವರ ಭಾಗವತಿಕೆ. ಶಿವಾನಿ-ಭವಾನಿ ಪ್ರಸಂಗವು ರಂಜಿಸಿತ್ತು. ಜೋಷಿ ಅವರ ಶಿವಾನಿ ಪಾತ್ರವು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಳಿಕ 2003ರಲ್ಲಿ ಸಿದ್ಧಾಪುರ ಶ್ರೀ ಭುವನಗಿರಿ ಮೇಳವನ್ನು ಹುಟ್ಟುಹಾಕಿ 2 ವರ್ಷ ನಡೆಸಿದ್ದರು. ಇದು ಕಾಲಮಿತಿಯ ಪ್ರದರ್ಶನದ ಮೇಳವಾಗಿತ್ತು. ಈ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಪ್ರದರ್ಶನಗಳಲ್ಲಿ ಅತಿಥಿ ಕಲಾವಿದರಾಗಿಯೂ ಭಾಗವಹಿಸುತ್ತಿದ್ದರು. 2ನೇ ವರ್ಷ ಪ್ರದರ್ಶನಕ್ಕೆ ತೆರಳುವಾಗ ಬೈಕ್ ಅಪಘಾತವಾಗಿ ಮೊಣಕಾಲ ಶಸ್ತ್ರಕ್ರಿಯೆಗೆ ಒಳಗಾಗಿದ್ದರು. ಖ್ಯಾತ ವೈದ್ಯರೂ, ಯಕ್ಷಗಾನ ಕಲಾವಿದರೂ ಆದ ಡಾ. ಭಾಸ್ಕರಾನಂದ ಕುಮಾರ್ ಅವರಿಂದ ಚಿಕಿತ್ಸೆ ಪಡೆದು 3 ತಿಂಗಳಿನಲ್ಲಿ ಚೇತರಿಸಿಕೊಂಡಿದ್ದರು. 2 ವರ್ಷ ರಂಗದಿಂದ ದೂರ ಉಳಿದು ಪೆರ್ಡೂರು ಮೇಳದಲ್ಲಿ ಒಂದು ವರ್ಷ ತಿರುಗಾಟ ನಡೆಸಿದ್ದರು. (2007). 2007ರಲ್ಲಿ ತೀರ್ಥರೂಪರ ನಿಧನದಿಂದಾಗಿ ಮೇಳದ ತಿರುಗಾಟವನ್ನು ನಿಲ್ಲಿಸಬೇಕಾಗಿ ಬಂದಿತ್ತು.

1986ರಲ್ಲಿ ಚಂಪಕಮಾಲಿನಿ ಅವರು ಭಾಸ್ಕರ ಜೋಷಿಯವರ ಬಾಳಸಂಗಾತಿಯಾಗಿ ಮನೆ ತುಂಬಿದ್ದರು. ಕೆರೆಮನೆ ಶಂಭು ಹೆಗಡೆಯವರ ಬಾಹುಕ ಪಾತ್ರಕ್ಕೆ ದಮಯಂತಿಯಾಗಿ, ಹರಿಶ್ಚಂದ್ರ ಪಾತ್ರಕ್ಕೆ ಚಂದ್ರಮತಿಯಾಗಿ, ಕೆರೆಮನೆ ಮಹಾಬಲ ಹೆಗಡೆಯವರ ಜಮದಗ್ನಿಗೆ ರೇಣುಕೆಯಾಗಿ, ಭೀಷ್ಮನಿಗೆ ಅಂಬೆಯಾಗಿ, ಕೃಷ್ಣಾರ್ಜುನ ಕಾಳಗದ ಅರ್ಜುನನಿಗೆ ಸುಭದ್ರೆಯಾಗಿ, ಈಶ್ವರನಿಗೆ ದಾಕ್ಷಾಯಿಣಿಯಾಗಿ, ಗೋಡೆ ನಾರಾಯಣ ಹೆಗಡೆಯವರ ಬ್ರಹ್ಮನಿಗೆ ಶಾರದೆಯಾಗಿ, ಚಿಟ್ಟಾಣಿಯವರ ಭಸ್ಮಾಸುರನಿಗೆ ಮೋಹಿನಿಯಾಗಿ, ಕೀಚಕನಿಗೆ ಸೈರಂಧ್ರಿಯಾಗಿ, ಉಗ್ರಸೇನನಿಗೆ ರುಚಿಮತಿಯಾಗಿ ಅಭಿನಯಿಸಿ ಕಲಾಭಿಮಾನಿಗಳ ಮನಸೂರೆಗೊಂಡಿದ್ದರು. ಸಾಲಿಗ್ರಾಮ ಮೇಳದಲ್ಲಿರುವಾಗ ಚಂದ್ರಹಾಸ ಪ್ರಸಂಗದಲ್ಲಿ ವಿಷಯೆ ಪಾತ್ರವೂ ರಂಜಿಸಿತ್ತು. ಆಗ ಜಲವಳ್ಳಿ ದುಷ್ಠಬುದ್ಧಿಯಾಗಿ, ಶಿರಿಯಾರ ಮಂಜು ನಾಯ್ಕರು ಚಂದ್ರಹಾಸನಾಗಿ, ಬಳ್ಕೂರು ಕೃಷ್ಣಯಾಜಿಯವರು ಮದನನಾಗಿಯೂ ಅಭಿನಯಿಸಿದ್ದರು. ಬಳಿಕ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಚಂದ್ರಹಾಸನ ಪಾತ್ರಕ್ಕೆ ಒದಗಿದ್ದರು.

ಬಳ್ಕೂರು ಕೃಷ್ಣಯಾಜಿಯವರ ಸುಧನ್ವ ಮತ್ತು ಜೋಷಿ ಅವರ ಪ್ರಭಾವತಿ ಪಾತ್ರಗಳು ಪ್ರೇಕ್ಷಕರ ಮನವನ್ನು ಗೆದ್ದಿತ್ತು. ಒಟ್ಟು 40 ವರ್ಷಗಳಿಗಿಂತಲೂ ಹೆಚ್ಚಿನ ಕಲಾಸೇವೆ. 8000ಕ್ಕೂ ಮಿಕ್ಕಿದ ರಂಗಪ್ರದರ್ಶನ. ಸ್ತ್ರೀವೇಷದವರಿಗೆ ಕೊಡಮಾಡುವ ಹೆಚ್ಚಿನ ಎಲ್ಲಾ ಪ್ರಶಸ್ತಿಗಳನ್ನೂ ಇವರು ಪಡೆದುಕೊಂಡಿದ್ದಾರೆ. ಇವರು ಮುನ್ನಡೆಸಿದ್ದ ಶ್ರೀ ಭುವನಗಿರಿ ಮೇಳವು ಯಕ್ಷಗಾನದ ಇತಿಹಾಸದಲ್ಲಿ ಮೊದಲ ಪೂರ್ಣಚಂದ್ರಾಕೃತಿಯ ರಂಗಸ್ಥಳವಾಗಿತ್ತು. ಅನೇಕ ಸಂಘ-ಸಂಸ್ಥೆಗಳು ಜೋಷಿ ಅವರನ್ನು ಸನ್ಮಾನಿಸಿ ಗೌರವಿಸಿವೆ. ಪ್ರಸ್ತುತ ಮನೆವಾರ್ತೆ, ಕೃಷಿಕಾರ್ಯಗಳನ್ನು ನಿಭಾಯಿಸುತ್ತಾ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಇವರು ಪುರುಷ ವೇಷಗಳನ್ನೂ ಮಾಡಬಲ್ಲವರು. ಕಾರ್ತವೀರ್ಯಾರ್ಜುನ ಕಾಳಗದ ರಾವಣ, ಗದಾಯುದ್ಧ ಪ್ರಸಂಗದ ಕೌರವ ಮೊದಲಾದ ಪಾತ್ರಗಳನ್ನು ಮಾಡಿದ್ದಾರೆ. ಪ್ರಸಂಗನಡೆ, ಮಾತುಗಾರಿಕೆಯ ಕಲೆ ತಿಳಿದವರಿಂದ ಮಾತ್ರ ಇದು ಸಾಧ್ಯ. ಶಿರಳಗಿ ಭಾಸ್ಕರ ಜೋಷಿ ಮತ್ತು ಚಂಪಕಮಾಲಿನಿ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಸ್ಫೂರ್ತಿ MBA ಕಲಿತು ಉದ್ಯೋಗಸ್ಥೆಯಾಗಿದ್ದಾರೆ. ವಿವಾಹಿತೆ. ಅಳಿಯ ಶ್ರೀ ಕೃಷ್ಣಮೂರ್ತಿ ಬೆಂಗಳೂರಿನಲ್ಲಿ ಉದ್ಯೋಗಿ. ಮೊಮ್ಮಗ ಧ್ರುವನಿಗೆ 4 ವರ್ಷ ಪ್ರಾಯ. ಪುತ್ರ ಶ್ರೀ ರಘುರಾಮ ಜೋಷಿ ಬೆಂಗಳೂರಿನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್. ವಿವಾಹಿತ. ಸೊಸೆ ಸುಶ್ಮಾ ರಘುರಾಮ ಜೋಷಿ ಗಾಯನಕಲೆಯಲ್ಲಿ ಆಸಕ್ತರು.

ಲೇಖಕ: ರವಿಶಂಕರ್ ವಳಕ್ಕುಂಜ 

ಕಲಾವಿದ, ಪ್ರಸಾಧನ ತಜ್ಞ ವೆಂಕಟೇಶ ಮಯ್ಯರ ‘ಶ್ರೀ ಗುರು ನೃಸಿಂಹ ಕಲಾಮಂಡಳಿ, ಆರ್ಯಾಪು ಪುತ್ತೂರು’

ಯಕ್ಷಗಾನ ಕಲೆಯ ಬಗ್ಗೆ ಜ್ಞಾನವನ್ನು ಹೊಂದಿದವರು ವೇಷಭೂಷಣ, ಮೇಕಪ್ ನೋಡಿದಾಗಲೇ ಇದು ಇಂತಹ ವೇಷ ಎಂದು ತೀರ್ಮಾನಿಸುತ್ತಾರೆ. ಪ್ರತಿಯೊಂದು ವೇಷಕ್ಕೂ ಬಣ್ಣಗಾರಿಕೆ, ವೇಷಭೂಷಣಗಳು, ಕಿರೀಟ ಹೀಗೆಯೇ ಇರಬೇಕು ಎಂಬ ನಿಯಮವಿದೆ. ಪದ್ಯಗಳ ಲಯ, ಕುಣಿತದ ಕ್ರಮವೂ ಹೀಗೆಯೇ ಇರಬೇಕೆಂಬ ನಿಯಮವೂ ಇದೆ. ಹೀಗೆ ಮೊಗೆದಷ್ಟೂ ಯಕ್ಷಗಾನದಲ್ಲಿ ವಿಚಾರಗಳು ಸಿಗುತ್ತವೆ. ಆದರೆ ನಮ್ಮ ಬೊಗಸೆ ಸಣ್ಣದು. ತುಂಬಿಸಲಿರುವ ಪಾತ್ರೆಯೂ ಚಿಕ್ಕದು. ಯಕ್ಷಗಾನವೆಂಬುದು ಅಕ್ಷಯ ಪಾತ್ರೆಯೇ ಹೌದು. ಒಂದು ವೇಷ ರಂಗವನ್ನು ಪ್ರವೇಶಿಸಿದ ಕೂಡಲೇ ಪ್ರೇಕ್ಷಕರು ಅದನ್ನು ಸ್ವೀಕರಿಸುವಂತಿರಬೇಕು. ಮೊದಲ ನೋಟದಲ್ಲೇ ಪ್ರೇಕ್ಷಕನ ಮನಸ್ಸು ಆ ವೇಷವನ್ನು ಒಪ್ಪಿಕೊಳ್ಳಬೇಕು. ಡ್ರೆಸ್ ಅಂದವಾಗಿದ್ದರೆ ಸಾಕೆ? ಅದನ್ನು ಧರಿಸುವ ಕಲೆಯೂ ಕಲಾವಿದನಿಗೆ ಕರಗತವಾಗಿರಬೇಕು. ಈ ಎಲ್ಲಾ ವಿಚಾರಗಳಲ್ಲಿ ಆರ್ಯಾಪು ಖಂಡಿಗೆ ಮನೆಯ ಶ್ರೀ ಕೆ. ವೆಂಕಟೇಶ ಮಯ್ಯರು ನಿಷ್ಣಾತರು. ಕಲಾವಿದನಾಗಿ, ವೇಷಭೂಷಣಗಳ ತಯಾರಿಕೆಯಲ್ಲೂ ಮೇಕಪ್ ಮಾಡುವ ಕಲೆಯಲ್ಲೂ ಪಳಗಿ ಶ್ರೀ ಗುರು ನೃಸಿಂಹ ಕಲಾಮಂಡಳಿ, ಆರ್ಯಾಪು ಪುತ್ತೂರು ಈ ಸಂಸ್ಥೆಯ ಮಾಲೀಕನಾಗಿ ಪ್ರಸಿದ್ಧರು. ಕಲಾವಿದರಿಗೆ, ಮಿತ್ರರಿಗೆಲ್ಲಾ ಇವರು ಪ್ರೀತಿಯ ‘ಮಯ್ಯಣ್ಣ’.

ಶ್ರೀ ವೆಂಕಟೇಶ ಮಯ್ಯರು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಖಂಡಿಗೆ ಎಂಬಲ್ಲಿ 1964ನೇ ಇಸವಿಯಲ್ಲಿ ಶ್ರೀ ಕೆ. ಶ್ರೀನಿವಾಸ ಮಯ್ಯ ಮತ್ತು ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರ ಮೂಲಮನೆ ಮಂಗಳೂರು ತಾಲೂಕಿನ ಕೊಂರ್ಗಿಬೈಲು (ಮಯ್ಯರ ಮನೆ). ಅಜ್ಜನ ಮನೆಯಲ್ಲಿ ವಾಸ್ತವ್ಯವಿದ್ದು 2ನೇ ತರಗತಿಯ ವರೆಗೆ ನೆಟ್ಲ ಶಾಲೆಯಲ್ಲಿ ಓದಿದ್ದರು. ಮತ್ತೆ ಸಂಟ್ಯಾರು ಮತ್ತು ಸಂಪ್ಯ ಶಾಲೆಯಲ್ಲೂ 7ರಿಂದ 10ನೇ ತರಗತಿಯ ವರೆಗೆ ನವೋದಯ ಹೈಸ್ಕೂಲ್‍ನಲ್ಲಿಯೂ ಓದಿದ್ದರು. ನಂತರ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೋಮ ಓದಿದ್ದರು. ಇವರಿಗೆ ಎಳವೆಯಲ್ಲಿಯೇ ಯಕ್ಷಗಾನಾಸಕ್ತಿ. ನೆಟ್ಲ ಶಾಲೆಯಲ್ಲಿ ಓದುತ್ತಿರುವಾಗ ಖ್ಯಾತ ಕಲಾವಿದ ಮೂಡಬಿದ್ರೆ ಮಾಧವ ಶೆಟ್ಟರು ಕಲ್ಲಡ್ಕದಲ್ಲಿ ನಾಟ್ಯ ತರಗತಿ ನಡೆಸುತ್ತಿದ್ದರು. ಅವರು ಮಕ್ಕಳಿಗೆ ತರಬೇತಿ ನೀಡುತ್ತಿದ್ದ ರೀತಿಯನ್ನು ನೋಡಿ ಮಯ್ಯರಿಗೆ ಕಲಿಯಬೇಕೆಂಬ ಆಸೆಯಾಯಿತು.

ರಜಾ ದಿನಗಳಲ್ಲಿ ನಾಟ್ಯ ಕಲಿತರು. ಮಾಧವ ಶೆಟ್ಟರು ತನ್ನ ವಾಸ್ತವ್ಯವನ್ನು ಕಬಕಕ್ಕೆ ಬದಲಾಯಿಸಿದಾಗ ಅವರ ಮನೆಗೆ ಹೋಗಿ ನಾಟ್ಯ ಕಲಿತಿದ್ದರು. ಅಧ್ಯಾಪಕ, ಕಲಾವಿದ ನುಳಿಯಾಲು ಸಂಜೀವ ರೈಗಳೂ ಪ್ರೋತ್ಸಾಹಿಸಿದರು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನಗಳಲ್ಲೂ ಅವಕಾಶ ಸಿಕ್ಕಿತ್ತು. ನೆಟ್ಲ ಶ್ರೀ ಸದಾಶಿವ ದೇವಸ್ಥಾನದಲ್ಲಿ ಶ್ವೇತಕುಮಾರ ಚರಿತ್ರೆ ಪ್ರಸಂಗ. ಸಿತಕೇತನಾಗಿ ವೆಂಕಟೇಶ ಮಯ್ಯರು ರಂಗಪ್ರವೇಶ ಮಾಡಿದರು. ಯಕ್ಷಗಾನ ಕೃಷಿಯ ಜೊತೆ ಮಯ್ಯರು ಸುಮಾರು ಹದಿನೈದು ವರ್ಷಗಳ ಕಾಲ ಪುತ್ತೂರು ದರ್ಬೆಯಲ್ಲಿ ‘ವಿಜಯ ಇಲೆಕ್ಟ್ರಾನಿಕ್ಸ್’ ಎಂಬ ಸಂಸ್ಥೆಯನ್ನು ನಡೆಸಿದ್ದರು. ಈ ಸಂದಭದಲ್ಲಿ ಹವ್ಯಾಸೀ ಕಲಾವಿದನಾಗಿ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಅಪೇಕ್ಷೆಯಂತೆ ಸುಬ್ರಹ್ಮಣ್ಯ ಮೇಳದಲ್ಲೂ ಕಲಾಸೇವೆ ಮಾಡುತ್ತಿದ್ದರು. ಪುತ್ತಿಗೆ, ಪುತ್ತೂರು ಮಹಾಲಕ್ಷ್ಮಿ ಮೇಳಗಳಲ್ಲೂ ವೇಷ ಮಾಡಿದ್ದರು. ಕಲಾವಿದನಾಗಿ ಬೆಳೆಯುವುದಕ್ಕೆ ಅನುಕೂಲವಾಯಿತು.

ಮೊದಲು ಪುಂಡುವೇಷ, ಕಿರೀಟವೇಷಗಳನ್ನೂ ಮಾಡುತ್ತಿದ್ದರು. ಆಗ ಬಣ್ಣದ ವೇಷ ನಿರ್ವಹಿಸುವ ಕಲಾವಿದರ ಅನಿವಾರ್ಯತೆ ಇತ್ತು. ಮಯ್ಯರಿಗೆ ಆಸಕ್ತಿಯೂ ಇತ್ತು. ಅದನ್ನೇ ಆಯ್ಕೆ ಮಾಡಿ ಕೊಂಡರು. 1987-88ರ ಹನ್ನೆರಡು ತಿಂಗಳುಗಳಲ್ಲಿ ದೇವಿ ಮಹಾತ್ಮೆ ಪ್ರಸಂಗದಲ್ಲಿ ನೂರಕ್ಕೂ ಮಿಕ್ಕಿ ಶುಂಭಾಸುರ ಪಾತ್ರವನ್ನು ನಿರ್ವಹಿಸಿದ್ದರು. ಮೇಳಗಳಲ್ಲಿ ಹೆಸರಾಂತ ಬಣ್ಣದ ವೇಷಧಾರಿಗಳು ತಿರುಗಾಟ ಮಾಡುತ್ತಿದ್ದರು. ಹವ್ಯಾಸೀ ತಂಡಗಳಲ್ಲಿ ಆ ವಿಭಾಗ ದುರ್ಬಲವಾಗಿತ್ತು. ಬಣ್ಣದ ವೇಷಗಳನ್ನೇ ಆಯ್ಕೆ ಮಾಡಿ ಮಯ್ಯರು ಪರಿಸ್ಥಿತಿಯ ಲಾಭವನ್ನೆತ್ತಿ ಕಾಣಿಸಿಕೊಂಡು ಆ ವಿಭಾಗವನ್ನು ಪ್ರಬಲಗೊಳಿಸಿದರು. ಮೊತ್ತಮೊದಲು ವೀರಭದ್ರನಾಗಿ ಅಭಿನಯಿಸಿದರು. ಅಲ್ಲದೆ ಶುಂಭ, ನಿಶುಂಭ, ರಾವಣ, ಕುಂಭಕರ್ಣ, ಮೈರಾವಣ, ಮಹಿಷಾಸುರ, ತಾರಕಾಸುರ, ಶೂರಪದ್ಮ, ಭೀಮ, ಶತ್ರುಪ್ರಸೂಧನ, ಶೂರ್ಪನಖಿ, ಪೂತನಿ, ಕರಾಳನೇತ್ರೆ, ಮಹಿಷಿ, ಯಮ, ಮೃತ್ಯು ಮೊದಲಾದ ವೇಷಗಳನ್ನು ನಿರ್ವಹಿಸುತ್ತಿದ್ದರು. ಮಯ್ಯರು ನಾಟಕೀಯ ವೇಷಗಳನ್ನು ಚೆನ್ನಾಗಿ ಮಾಡುತ್ತಾರೆ. ಕಂಸ ಮತ್ತು ಶನಿ ಪಾತ್ರಗಳನ್ನು ಮಾಡಲೆಂದೇ ಅವರನ್ನು ಸಂಘಟಕರು ಕರೆಯುತ್ತಿದ್ದರು.
                               

ಹಿಂದಿನ ಕಾಲದಲ್ಲಿ ವೇಷಭೂಷಣಗಳ ವಿಚಾರದಲ್ಲಿ ಅಸಮತೋಲನವಿತ್ತು. ಕಲಾವಿದರು ಧರಿಸುವ ಎಲ್ಲಾ ಭೂಷಣಗಳೂ ಭಾರವಾಗಿದ್ದುವು. ಕಲಾವಿದರಿಗೆ ವೇಷ ಮಾಡಿ ಕುಣಿಯಲು ತೊಡಕಾಗುತ್ತಿತ್ತು. ಅಲ್ಲದೆ ಭೂಷಣ ಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿರಲಿಲ್ಲ. ಹಿಂದಿನ ಕಾಲದ ಸಂಪನ್ಮೂಲಗಳ ಕೊರತೆಯೂ ಇದಕ್ಕೆ ಕಾರಣವಿರಬಹುದು. ಭಾರವನ್ನು ಕಡಿಮೆಗೊಳಿಸಿ, ವೇಷಭೂಷಣಗಳಲ್ಲಿರುವ ಅಸಮತೋಲನವನ್ನು ಹೋಗಲಾಡಿಸಬೇಕೆಂದು ಮಯ್ಯರು ನಿರ್ಧರಿಸಿದರು. ಮೂಡಬಿದಿರೆ ಮಾಧವ ಶೆಟ್ಟರು ಮೇಕಪ್ ಅಂದವಾಗಿ ಹೇಳಿಕೊಟ್ಟಿದ್ದರು. ಡ್ರೆಸ್‍ನ ಬಗ್ಗೆಯೂ ಮಯ್ಯರಿಗೆ ಮಾಹಿತಿ ನೀಡಿದರು. ಅಲ್ಲದೆ ಮೇಳಗಳಿಗೆ ಭೇಟಿ ನೀಡಿ ಮೇಳದ ಯಜಮಾನರುಗಳಲ್ಲಿ, ಕಲಾವಿದರಲ್ಲಿ ಮಾಹಿತಿ ಸಂಗ್ರಹಿಸಿದರು. ತಾನು ನಿರ್ವಹಿಸುವ ವೇಷಕ್ಕೆ ಬೇಕಾದ ವೇಷಭೂಷಣಗಳನ್ನು ತಯಾರಿಸಿ ಧರಿಸಿ ತೃಪ್ತಿಪಟ್ಟರು. ಪ್ರಯೋಗಕ್ಕೆ ಮೊದಲು ತನ್ನನ್ನು ತಾನು ಬಳಸಿಕೊಂಡು ನಂತರ ತಂಡವೊಂದಕ್ಕೆ ಬೇಕಾಗುವಷ್ಟು ಸಿದ್ಧಪಡಿಸಿದರು.

ವೇಷಧಾರಿಯಾದ ಶ್ರೀ ವೆಂಕಟೇಶ ಮಯ್ಯರು 1996ರಲ್ಲಿ ಡ್ರೆಸ್‍ನ ಮಾಲೀಕರಾದರು. ಶ್ರೀ ಗುರು ನೃಸಿಂಹ ಕಲಾಮಂಡಳಿ, ಖಂಡಿಗೆ, ಆರ್ಯಾಪು ಎಂಬ ಸಂಸ್ಥೆಯನ್ನು ಆರಂಭಿಸಿ ಸಂಘದ ಆಟ, ಶಾಲಾ ಕಾಲೇಜುಗಳ ಕಾರ್ಯಕ್ರಮಕ್ಕೆ ಮೇಕಪ್ ಮತ್ತು ವೇಷಭೂಷಣಗಳ ವ್ಯವಸ್ಥೆಯನ್ನೂ ಮಾಡಿದರು. 2004ರಿಂದ 2006ರ ತನಕ ಡ್ರೆಸ್‍ನ ಪಾಲಿಗೆ ಸುವರ್ಣಯುಗವೆಂದೂ ಆರು ತಿಂಗಳುಗಳಲ್ಲಿ ಸರಿಯಾಗಿ ನಿದ್ದೆ ಮಾಡಿದ್ದು ಕೇವಲ ಬೆರಳೆಣಿಕೆಯ ದಿನಗಳೆಂದೂ ಮಯ್ಯರು ಹೇಳುತ್ತಾರೆ. 1997ರಲ್ಲಿ ಡ್ರೆಸ್ ಬಾಡಿಗೆ ನೀಡಲು, ಪ್ರಥಮ ವರ್ಷವೇ 58 ಕಾರ್ಯಕ್ರಮಗಳು ಸಿಕ್ಕಿತ್ತು. ಮೇಕಪ್ ವಿಚಾರದಲ್ಲಿ ಮಯ್ಯರು ಎತ್ತಿದ ಕೈ. ಸವ್ಯಸಾಚಿ. ಎರಡೂ ಕೈಗಳಲ್ಲಿ ಸರಾಗವಾಗಿ ಒಂದೇ ವೇಗದಲ್ಲಿ ಗೆರೆ ಎಳೆಯಬಲ್ಲರು.

ಆದರೆ ಇತ್ತೀಚಿನ ದಿನಗಳಲ್ಲಿ ಆ ವೇಗ ಇಲ್ಲವೆಂದೂ, ನಿರ್ವಹಣೆಯ ವೆಚ್ಚ ಹೆಚ್ಚುತ್ತಿದ್ದು ನೇಪಥ್ಯ ಕಲಾವಿದರು ಸಿದ್ಧರಾಗುತ್ತಿಲ್ಲ. ಕೃಷಿಯ ಜೊತೆ ಇದನ್ನೂ ನಿರ್ವಹಿಸಲು ಕಷ್ಟವಾಗುತ್ತಿದೆ. ಮೊದಲು ದಿನಕ್ಕೆ ಐದಾರು ಕಾರ್ಯಕ್ರಮಗಳನ್ನು ವಹಿಸಿಕೊಂಡದ್ದಿದೆ. ಆದರೆ ಈಗ ದಿನಕ್ಕೆ ಒಂದೇ ಕಾರ್ಯಕ್ರಮ. ತೀರಾ ಅನಿವಾರ್ಯವಾದರೆ, ಸಂಘಟಕರಿಗೆ ತೊಂದರೆಯಾಗಬಾರದು, ಪ್ರದರ್ಶನ ನಿಲ್ಲಬಾರದು ಎಂಬುದರಿಂದ ಎರಡು ಕಾರ್ಯಕ್ರಮ ಒಪ್ಪಿಕೊಳ್ಳುತ್ತೇನೆ ಎಂದು ಮಯ್ಯರು ಹೇಳುತ್ತಾರೆ. ವೇಷಭೂಷಣಗಳ ನಿರ್ವಹಣೆ, ರಿಪೇರಿ, ವಸ್ತ್ರಗಳನ್ನು ಹೊಲಿಯುವುದು, ಬೇಗಡೆ ಬದಲಿಸಿ ಹೊಳಪು ಮಾಡುವುದು ಈ ಎಲ್ಲಾ ವಿಚಾರಗಳಲ್ಲಿ ಮಯ್ಯರು ನಿಷ್ಣಾತರಾಗಿದ್ದಾರೆ. ವೇಷಭೂಷಣಗಳ ಮಾಲಕರಾದರೂ ಅದರಿಂದ ಇವರು ಶ್ರೀಮಂತರಾಗಿಲ್ಲ. ಹೊಂದಾಣಿಕೆ ಮತ್ತು ಕಷ್ಟಗಳಿಗೆ ಸ್ಪಂದಿಸುವ ಗುಣ ಮಯ್ಯರಿಗಿದೆ. ಕೆಲವು ಪ್ರದರ್ಶನಗಳಿಗೆ ಉಚಿತವಾಗಿ ಡ್ರೆಸ್ ನೀಡಿರುತ್ತಾರೆ.

ಮಕ್ಕಳ ಯಕ್ಷಗಾನ ತಂಡವನ್ನು ಕಟ್ಟಿ ಶ್ರೀ ಉಂಡೆಮನೆ ಶ್ರೀಕೃಷ್ಣ ಭಟ್ಟರಿಂದ ನಾಟ್ಯ ತರಬೇತಿಯನ್ನು ಕೊಡಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಶ್ರೀ ವೆಂಕಟೇಶ ಮಯ್ಯರು ಸಾರಣೆ, ಮರದ ಕೆಲಸ, ಟಿವಿ ಮತ್ತು ರೇಡಿಯೋ ರಿಪೇರಿ, ಕೃಷಿ ವಾಹನ ರಿಪೇರಿ ಹೀಗೆ ಹಲವಾರು ಕೆಲಸಗಳನ್ನು ಮಾಡಬಲ್ಲ ಸಾಹಸಿ. ಕೆಲವು ದೇವಳದ ಗರ್ಭಗುಡಿಯ ಸಾರಣೆಯ ಕೆಲಸವನ್ನೂ ಮಾಡಿರುತ್ತಾರೆ. ಇತ್ತೀಚಿಗೆ ಪಾಣಾಜೆ ರಣಮಂಗಲದ ಶ್ರೀ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯ ಸಾರಣೆ ಕೆಲಸವನ್ನು ಮಾಡಿರುತ್ತಾರೆ. ‘‘ಯಕ್ಷಗಾನದಿಂದ ಆರ್ಥಿಕವಾಗಿ ಶ್ರೀಮಂತನಾಗದಿದ್ದರೂ ಅನೇಕ ಜನರ ಸಂಪರ್ಕವಾಗಿದೆ. ಹಿರಿಯ, ಕಿರಿಯ ಕಲಾವಿದರ, ಸಂಘಟಕ, ವಿದ್ವಾಂಸರ ಒಡನಾಟ ಸಿಕ್ಕಿದೆ. ಆ ವಿಚಾರದಲ್ಲಿ ಸಂತೋಷವಿದೆ’’ ಎನ್ನುವ ಶ್ರೀ ಮಯ್ಯರು ಸಾಂಸಾರಿಕವಾಗಿಯೂ ತೃಪ್ತರು. ಪತಿಯ ಇಚ್ಛೆಯನ್ನರಿತು ನಡೆಯುವ ಪತ್ನಿ ವಿಜಯಲಕ್ಷ್ಮಿ. ಶ್ರೀ ವೆಂಕಟೇಶ ಮಯ್ಯ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀಧರ M.Com ಆಗಿ CA ಮಾಡುತ್ತಿದ್ದಾರೆ. ಮೈಸೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿ. ಕಿರಿಯ ಪುತ್ರ ಸುದರ್ಶನ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ M.Com ಸ್ನಾತಕೋತ್ತರ ಪದವೀಧರ. ಇವರಿಬ್ಬರೂ ಯಕ್ಷಗಾನ ಕಲಾವಿದರು.

ಲೇಖಕ: ರವಿಶಂಕರ್ ವಳಕ್ಕುಂಜ 

ಮೇಳಗಳ ಇಂದಿನ (03.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (03.02.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕೋಡಪದವು ಶಾಲಾ ಮೈದಾನ – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಕೊಂಕಣಕೋಡಿ ಹೌಸ್, ಬಾಳ, ತೋಕೂರು 
ಕಟೀಲು ಎರಡನೇ ಮೇಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶಾರದಾನಗರ , ಮುಂಡಾಜೆ, ಬೆಳ್ತಂಗಡಿ 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರ ರಥಬೀದಿ 
ಕಟೀಲು ನಾಲ್ಕನೇ ಮೇಳ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಠಾರ, ಬ್ರಹ್ಮರಕೂಟ್ಲು 
ಕಟೀಲು ಐದನೇ ಮೇಳ ಉರ್ವಸ್ಟೋರ್-ಕಾಟಿಪಳ್ಳ ೩ನೇ ಬ್ಲಾಕ್ ಫ್ರೆಂಡ್ಸ್ ಸರ್ಕಲ್ ಬಳಿ 
ಕಟೀಲು ಆರನೇ ಮೇಳಗುರುಕೃಪಾ, ಪೆರ್ಮುದೆ, ಮೇಲೆಕ್ಕಾರು ರಸ್ತೆ 

ಮಂದಾರ್ತಿ ಒಂದನೇ ಮೇಳ ಯಕ್ಷಿಮಠ, ಗುಂಡ್ಮಿ, ಸಾಸ್ತಾನ
ಮಂದಾರ್ತಿ ಎರಡನೇ ಮೇಳ ತಳಲೆ, ಹೊಸನಗರ 
ಮಂದಾರ್ತಿ ಮೂರನೇ ಮೇಳ ರತ್ನವನ ನಿಲಯ, ಅಂಕದಕಟ್ಟೆ, ಕೋಟೇಶ್ವರ 
ಮಂದಾರ್ತಿ ನಾಲ್ಕನೇ ಮೇಳ ಅರಳಸುರುಳಿ 
ಮಂದಾರ್ತಿ ಐದನೇ ಮೇಳ ಹಡವು, ಪಡುಕೋಣೆ 
ಶ್ರೀ ಹನುಮಗಿರಿ ಮೇಳ ಶ್ರೀ ಮಲರಾಯಿ ಮಂಟಮೆ, ಬಾರೆಬೆಟ್ಟು – ಕನಕಾಂಗಿ ಕಲ್ಯಾಣ, ಮಾಯಾ ಮಾರುತೇಯ (ರಾತ್ರಿ 11 ರಿಂದ)
ಶ್ರೀ ಸಾಲಿಗ್ರಾಮ ಮೇಳಇಡಗುಂದಿ ಕ್ರೀಡಾಂಗಣ – ಭೀಷ್ಮ ವಿಜಯ, ಮಾಯಾಪುರಿ 
ಶ್ರೀ ಪೆರ್ಡೂರು ಮೇಳಪಂಜುರ್ಲಿ ಮಹಾಂಕಾಳಿ ಗರಡಿ ನಡುಮನೆ, ಹಟ್ಟಿಕುದ್ರು – ಶಪ್ತ ಭಾಮಿನಿ 
ಶ್ರೀ ಸುಂಕದಕಟ್ಟೆ ಮೇಳ ಕುದ್ಕೋಳಿ – ಬ್ರಹ್ಮ ಬಲಾಂಡಿ 
ಶ್ರೀ ಮಾರಣಕಟ್ಟೆ ಮೇಳ ‘ಎ’ಸೆಳಿಕೋಡು ಮೇಲ್ಮನೆ, ಹರ್ಕೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಮೇಲ್ ಬಾನಾಳಿ, ಹೆಮ್ಮಕ್ಕಿ, ಕೊಡ್ಲಾಡಿ ಬಾಂಡ್ಯ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ಮೇಲ್ ಮಠ, ಕಬ್ಬಿನಾಲೆ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಕಾಳಾವರ – ದಿವ್ಯ ಸನ್ನಿಧಿ 
ಕಮಲಶಿಲೆ ಮೇಳ ‘ಎ’ಶ್ರೀ ನಂದಿಕೇಶ್ವರ ದೇವಸ್ಥಾನ, ಬಂಟ್ವಾಡಿ 
ಕಮಲಶಿಲೆ ಮೇಳ ‘ಬಿ’ಶ್ರೀ ಕಲ್ಲುಕುಟ್ಟಿಗ ದೈವಸ್ಥಾನ, ತಟ್ಟೆಗುಳಿ, ಕಮಲಶಿಲೆ 

ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರ ಬಪ್ಪನಾಡು – ಬನತ ಬಂಗಾರ್
ಶ್ರೀ ಅಮೃತೇಶ್ವರೀ ಮೇಳಕಾಜರಗುತ್ತು, ಹಿರಿಯಡ್ಕ   
ಶ್ರೀ ಬೋಳಂಬಳ್ಳಿ ಮೇಳ ಗಂಗೊಳ್ಳಿ 
ಶ್ರೀ ಸೌಕೂರು ಮೇಳಗುಲ್ವಾಡಿ ತಾತಯ್ಯನಮಠ – ಸೌಕೂರು ದುರ್ಗಾಪರಮೇಶ್ವರಿ ಮಹಾತ್ಮೆ 
ಶ್ರೀ ಹಾಲಾಡಿ ಮೇಳಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹರ್ಳಾಡಿಕೆರೆ
ಶ್ರೀ ಬೆಂಕಿನಾಥೇಶ್ವರ ಮೇಳ  ಗೋಳಿಕಟ್ಟೆ ಕಲ್ಕುಡ ವರ್ತೆ ದೈವಸ್ಥಾನದ ಮುಂಭಾಗ – ಶ್ರೀ ನಾಗದೇವತೆ (ಕಾಲಮಿತಿ)
ಶ್ರೀ ಮಡಾಮಕ್ಕಿ ಮೇಳಮುದರಂಗಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಕೋಟ ಹರ್ತಟ್ಟು – ಅಬ್ಬರದ ಬೊಬ್ಬರ್ಯೆ 
ಶ್ರೀ ಹಿರಿಯಡಕ ಮೇಳಹುಣ್ಸೆಮಕ್ಕಿ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಇಡೂರು ಕುಂಜ್ಞಾಡಿ ಮುಖಮಂಟಪದ ಬಳಿ  
ಶ್ರೀ ಸಿಗಂದೂರು ಮೇಳಶಿಂಡ್ಲಿ, ಶಿವಮೊಗ್ಗ ಜಿಲ್ಲೆ 
ಶ್ರೀ ನೀಲಾವರ ಮೇಳ ನಂದಿಕೇಶ್ವರ ದೈವಸ್ಥಾನ ವಠಾರ, ಅರೆಹೊಳೆ ಕ್ರಾಸ್ 
ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ ಸಿರುಪತಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ
ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ರಿಪ್ಪನ್ ಪೇಟೆ 
ಶ್ರೀ ಮೇಗರವಳ್ಳಿ ಮೇಳ ರಾಮಕೃಷ್ಣಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಧುರ ಮನಸ್ವಿ 
ಶ್ರೀ ಕ್ಷೇತ್ರ ಕಾಂತಾವರ ಮೇಳ ಕಾರ್ಕಳ ಸಾಣೂರು ದೇಂದಬೆಟ್ಟು – ನರಕಾಸುರ, ಮೈಂದ ದ್ವಿವಿದ (ಸಂಜೆ 6ರಿಂದ)

‘ಶ್ರೀ ಮಾತಾ ಹವ್ಯಕ ಭಜನಾ ಸಂಘ’ ಬದಿಯಡ್ಕ, ಇದರ ಸದಸ್ಯೆಯರಿಂದ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಭಜನಾ ಸೇವೆ

ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಮತ್ತು ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಇವರ ವತಿಯಿಂದ ದಿನಾಂಕ 28.12.2020 ರಿಂದ 13.02.2021ರ ವರೆಗೆ ‘ನಿತ್ಯ ಭಜನಾ ಸೇವೆ’ಯು ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರತಿ ದಿನ ಬೆಳಗ್ಗೆ ಗಂಟೆ 6ರಿಂದ ಸಂಜೆ ಗಂಟೆ 7 ರ ವರೆಗೆ ನಡೆಯುತ್ತಿದೆ.

ಅದರಂತೆ ಇಂದು  ‘ಶ್ರೀ ಮಾತಾ ಹವ್ಯಕ ಭಜನಾ ಸಂಘ’ ಬದಿಯಡ್ಕ, ಇದರ ಸದಸ್ಯೆಯರಿಂದ ಭಜನಾ ಸೇವೆ ಬೆಳಗ್ಗೆ ಗಂಟೆ 10 ರಿಂದ ಮಧ್ಯಾಹ್ನ12 ಗಂಟೆಯ ವರೆಗೆ ಶ್ರೀ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಅಂಗಣದಲ್ಲಿ ನಡೆಯಿತು.

ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು – ಕಲಾವಿದ, ರಂಗಪ್ರಸಾಧನತಜ್ಞ ಶ್ರೀ ರಾಘವದಾಸರ ಕನಸಿನ ಕೂಸು 

ಮೇಳಗಳು ತಮ್ಮದೇ ಆದ ವೇಷಭೂಷಣಗಳ ವ್ಯವಸ್ಥೆಯನ್ನು ಹೊಂದಿ ತಿರುಗಾಟ ನಡೆಸುತ್ತವೆ. ಆದರೆ ಸಂಘ, ಶಾಲಾ ಕಾಲೇಜುಗಳ ಪ್ರದರ್ಶನ, ಇನ್ನಿತರ ಸಮಾರಂಭಗಳ ಯಕ್ಷಗಾನ ಪ್ರದರ್ಶನಗಳ ಸಂಘಟಕರು ಬಾಡಿಗೆಗೆ ತರಿಸಿಕೊಳ್ಳಲೇಬೇಕಾಗುತ್ತದೆ. ಇಂದು ಹಲವಾರು ಸಂಘ ಸಂಸ್ಥೆಗಳು ವೇಷಭೂಷಣಗಳನ್ನು ಹೊಂದಿ ಅದನ್ನು ಸಂಘಟಕರಿಗೆ ಪೂರೈಸಿ ಪ್ರದರ್ಶನಗಳು ಯಶಸ್ವಿಯಾಗಿ ನಡೆಯುವುದಕ್ಕೆ ಕಾರಣ ಸ್ಥಾನದಲ್ಲಿವೆ. ಅಂತಹ ಸಂಸ್ಥೆಗಳಲ್ಲೊಂದು ಶ್ರೀ ಭಾರತೀ ಕಲಾ ಆರ್ಟ್ಸ್, ಮುಡಿಪು.   

ಈ ಸಂಸ್ಥೆಯು ಹೂ ಹಾಕುವ ಕಲ್ಲು (ಮುಡಿಪು), ಅಲ್ಲದೆ ಬಿ.ಸಿ. ರೋಡ್ ಬಸ್ ನಿಲ್ದಾಣದ ಸಮೀಪದ ಕಟ್ಟಡದಲ್ಲೂ ಕಾರ್ಯಾಚರಿಸುತ್ತಿದೆ. ಶ್ರೀ ರಾಘವದಾಸ್ ಬಜಪೆ ಅವರು ಶ್ರೀ ಭಾರತೀ ಕಲಾ ಆರ್ಟ್ಸ್ ನ ಮಾಲೀಕರು. ಇವರು ಕಲಾವಿದರೂ ಹೌದು. ನಗುಮೊಗದ ಇವರು ಶುಭ್ರ ವಸನಧಾರಿ. ಯಾವಾಗಲೂ ಬಿಳಿ ಅಂಗಿ ಮತ್ತು ಬಿಳಿ ಪಂಚೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಪ್ರಸ್ತುತ ಮುಡಿಪು ಸಮೀಪ ವಾಸವಿದ್ದರೂ ಹುಟ್ಟೂರು ಬಜಪೆ ಸಮೀಪವಾದ ಕಾರಣ ಬಜಪೆ ರಾಘವದಾಸ್ ಎಂದೇ ಪ್ರಸಿದ್ಧರಾಗಿದ್ದಾರೆ.

ಶ್ರೀ ರಾಘವದಾಸ್ ಅವರು ಮಂಗಳೂರು ತಾಲೂಕು ಕೊಳಂಬೆ ಗ್ರಾಮದ ತಲಕಳ ಎಂಬಲ್ಲಿ ಬಜಪೆ ನಾರಾಯಣದಾಸ್ ಮತ್ತು ಸೀತಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಇವರದು ಬಡ ಕೃಷಿ ಕುಟುಂಬ. ಬಜಪೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದರು. ತಲಕಳ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ನಡೆಯುತ್ತಿದ್ದ ಆಟ, ಕೂಟ, ಭಜನಾ ಕಾರ್ಯಕ್ರಮಗಳನ್ನು ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಪ್ರೇಕ್ಷಕನಾಗಿ ಆಸ್ವಾದಿಸುತ್ತಿದ್ದರು. ಇವರ ತಂದೆ ನಾರಾಯಣದಾಸರು ಯಕ್ಷಗಾನ ಕಲಾವಿದರಾಗಿದ್ದರು. ಹವ್ಯಾಸೀ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಪರಿಸರದಲ್ಲಿ ನಡೆಯುತ್ತಿದ್ದ ಕಟೀಲು ಮೇಳದ ಪ್ರದರ್ಶನಗಳನ್ನು ರಾಘವದಾಸರು ನೋಡುತ್ತಿದ್ದರು.

ಸಹಜವಾಗಿ ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆ ಮೂಡಿತು. ತಲಕಳ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿಯ ವತಿಯಿಂದ ತರಗತಿಯೂ ನಡೆಯುತ್ತಿತ್ತು. ಶ್ರೀ ದೇರಣ್ಣ ದೇವಾಡಿಗರಿಂದ ನಾಟ್ಯ ಕಲಿತು ತಲಕಳ ದೇವಸ್ಥಾನದಲ್ಲಿ ನಡೆದ ಪ್ರದರ್ಶನ ಬ್ರಹ್ಮಕಪಾಲ ಪ್ರಸಂಗದಲ್ಲಿ ದಿಕ್ಪತಿಯಾಗಿ ರಂಗಪ್ರವೇಶ. ಕಟೀಲು ದೇವಳದಲ್ಲಿ ನವರಾತ್ರಿಯ ಪ್ರಯುಕ್ತ ನಡೆದ ಪ್ರದರ್ಶನ. ತಲಕಳ ವಿಶ್ವನಾಥೇಶ್ವರ ಯಕ್ಷಗಾನ ಸಂಘದ ಆಟ ಭಸ್ಮಾಸುರ ಮೋಹಿನಿ ಪ್ರಸಂಗದಲ್ಲಿ ಷಣ್ಮುಖನಾಗಿ ಅಭಿನಯಿಸಿದಾಗ ಮೆಚ್ಚಿದ ಬಜಪೆ ರಾಮರಾಯರು ಮತ್ತು ಪಡ್ಡೋಡಿಗುತ್ತು ಸುಂದರ ಶೆಟ್ಟರು ರಾಘವದಾಸರನ್ನು ಸುಂಕದಕಟ್ಟೆ ಮೇಳಕ್ಕೆ  ಸೇರಿಸಿದರು. ಒಂದು ವರ್ಷ ಸುಂಕದಕಟ್ಟೆ ಮೇಳದಲ್ಲಿ ತಿರುಗಾಟ ನಡೆಸಿ ಮುಂದಿನ ವರ್ಷ ಕುಂಡಾವು ಮೇಳದಲ್ಲಿ ವ್ಯವಸಾಯ. ಶ್ರೀ ಕಲ್ಲಾಡಿ ನಾಗರಾಜ ಶೆಟ್ರ ಸಂಚಾಲಕತ್ವ. ಅಗರಿ ಶ್ರೀನಿವಾಸ ರಾಯರು ಭಾಗವತರಾಗಿದ್ದರು. ಹೊಸಹಿತ್ಲು ಮಹಾಲಿಂಗ ಭಟ್, ಗುಂಪೆ ರಾಮಯ್ಯ ರೈ, ಪುತ್ತೂರು ಕೃಷ್ಣ ಭಟ್, ಪೂಕಳ ಲಕ್ಷ್ಮೀನಾರಾಯಣ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಕೇಶವ ಬೈಪಡಿತ್ತಾಯ ಮೊದಲಾದವರ ಒಡನಾಟ ಕಲಿಕೆಗೆ ಅವಕಾಶವಾಯಿತು.

ಅಭ್ಯಾಸೀ ಕಲಾವಿದನಾಗಿರುವಾಗ ಸಮಯಾವಕಾಶ ಕಡಿಮೆಯಿದ್ದರೂ ಪ್ರದರ್ಶನವೊಂದು ನಡಯಲೇಬೇಕಾದ ಅನಿವಾರ್ಯ ಸಂದರ್ಭ ಬಂದಾಗ ಕಲ್ಲಾಡಿ ನಾಗರಾಜ ಶೆಟ್ಟರು ದೂರದೂರಿಂದ ಕಲಾವಿದರನ್ನೆಲ್ಲಾ ವಾಹನದಲ್ಲಿ ಕರೆದುಕೊಂಡು ಹೋಗಿದ್ದರಂತೆ. ಗಿರಿಜಾ ಕಲ್ಯಾಣ ಪ್ರಸಂಗ. ಸಿಕ್ಕ ಅತ್ಯಲ್ಪ ಸಮಯದಲ್ಲಿ ರಾಘವದಾಸರು ತಾರಕಾಸುರನಾಗಿ ರಂಗವೇರಿದ್ದರು. ಇದು ವಿಶೇಷ ಅನುಭವ. ಇಂತಹ ವಿಶೇಷ ಅನುಭವಗಳು ಜೀವನದಲ್ಲಿ ಒತ್ತಡಗಳನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗುತ್ತವೆ ಎಂಬುದು ಅವರ ಅನಿಸಿಕೆ. ಕುಂಡಾವು ಮೇಳದಲ್ಲಿ ಒಂದು ವರ್ಷ ತಿರುಗಾಟ. ನಂತರ ಶ್ರೀ ಕುಬಣೂರು ಶ್ರೀಧರ ರಾಯರ ನೇತೃತ್ವದ ಕೂಡ್ಲು ಮೇಳದಲ್ಲಿ ಒಂದು ವರ್ಷ, ಮತ್ತೆ ಮೂರು ವರ್ಷಗಳ ಕಾಲ ಹವ್ಯಾಸಿಯಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದರು.

ಮುಡಿಪು ವಿಘ್ನೇಶ್ವರ ಭಟ್ಟರ ಸಂಚಾಲಕತ್ವದಲ್ಲಿ ನಂದಾವರ ಮೇಳ ಆರಂಭವಾದಾಗ ಸದ್ರಿ ಮೇಳದಲ್ಲಿ ಎರಡು ವರ್ಷಗಳ ಕಲಾಸೇವೆ ಮಾಡಿ ಬಳಿಕ ಅರುವ ನಾರಾಯಣ ಶೆಟ್ಟರ ನೇತೃತ್ವದ ಅರುವ ಮೇಳಕ್ಕೆ ಮುಖ್ಯ ವೇಷಧಾರಿಯಾಗಿ ಸೇರ್ಪಡೆಕೊಂಡರು. ಅರುವ ಮೇಳದಲ್ಲಿ ಎರಡು ತಿರುಗಾಟ. ತಿಮ್ಮಪ್ಪ ಗುಜರನ್ ಸಂಚಾಲಕತ್ವದ ತಲಕಳ ಮೇಳದಲ್ಲಿ ಎರಡು ವರ್ಷಗಳ ತಿರುಗಾಟ ನಡೆಸಿದರು. ಕಾವೂರು ಕೇಶವನವರು ಕೂಡ್ಲು ಮೇಳವನ್ನು ವಹಿಸಿಕೊಂಡಾಗ ಸದ್ರಿ ಮೇಳದಲ್ಲಿ ತಿರುಗಾಟ. ಕಾವೂರು ಕೇಶವನವರು ಮೇಳವನ್ನು ನಿಲ್ಲಿಸಿ ವೇಷಭೂಷಣಗಳನ್ನು ಖರೀದಿಸುವಂತೆ ರಾಘವದಾಸರಲ್ಲಿ ಕೇಳಿ ಕೊಂಡರಂತೆ. ಹಣ ಇಲ್ಲ ಎಂದಾಗ ಇದ್ದಷ್ಟು ಕೊಡಿ ಎಂದು ವಿಶ್ವಾಸದಿಂದ ಕೊಟ್ಟರಂತೆ. ವೇಷಭೂಷಣಗಳನ್ನು ಹೇಗೆ ನಿರ್ವಹಿಸುವುದು? ಕಾರ್ಯಕ್ರಮಗಳು ಸಿಗದಿದ್ದರೆ ಎಂಬ ಚಿಂತೆಯಲ್ಲಿರುವಾಗ ಪಟ್ಲಗುತ್ತು  ಶ್ರೀ ಮಹಾಬಲ ಶೆಟ್ರ ಸಂಚಾಲಕತ್ವದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯು ಆರಂಭವಾಗಿತ್ತು. ಮಹಾಬಲ ಶೆಟ್ರು ರಾಘವದಾಸರ ಚಿಂತೆ ಯನ್ನು ದೂರ ಮಾಡಿದ್ದರು. ಮಲ್ಲ ಮೇಳಕ್ಕೆ ವೇಷಭೂಷಣಗಳನ್ನು ನೀಡಿದರು. ಅಲ್ಲದೆ ವೇಷಧಾರಿಯಾಗಿಯೂ ಭಾಗವತನಾಗಿಯೂ ಮಲ್ಲ ಮೇಳದಲ್ಲಿ ವ್ಯವಸಾಯ ಮಾಡಿದರು.
                         

ಶ್ರೀ ರಾಘವದಾಸರು ಶ್ರೀ ಕೊಡಕ್ಕಲ್ಲು ಗೋಪಾಲಕೃಷ್ಣ ಹಾಸ್ಯಗಾರರಿಂದ ಭಾಗವತಿಕೆಯ ಬಾಲಪಾಠ, ಮಾಂಬಾಡಿ ಶ್ರೀ ಸುಬ್ರಹ್ಮಣ್ಯ ಭಟ್ಟರಿಂದ ಭಾಗವತಿಕೆಯನ್ನೂ ಅಭ್ಯಾಸ ಮಾಡಿದ್ದರು. ನಂದಾವರ, ಅರುವ ಮೇಳದಲ್ಲಿ ಸಂಗೀತಗಾರನಾಗಿ ಪದ್ಯ ಹೇಳಿದ್ದರು. ಮಲ್ಲ ಮೇಳದಲ್ಲಿ ಶ್ರೀ ರವಿಶಂಕರ್ ಮಧೂರು ಮತ್ತು ಇವರು ಭಾಗವತಿಕೆ ಮಾಡುತ್ತಿದ್ದರು. ಎರಡು ವರ್ಷಗಳ ಕಾಲ ಮಲ್ಲ ಮೇಳದ ತಿರುಗಾಟ, ನಂತರ ಅಡ್ಯಾರು ಶಂಕರ ಆಳ್ವರ ಸಂಚಾಲಕತ್ವದಲ್ಲಿ ಬಪ್ಪನಾಡು ಮೇಳದಲ್ಲಿ ವ್ಯವಸಾಯ. ನಂತರ ರಾಘವದಾಸರು ಕಲಾವಿದನಾಗಿ ವೃತ್ತಿಜೀವನದಿಂದ ನಿವೃತ್ತರಾಗಿ 1989ರಲ್ಲಿ ಶ್ರೀ ಭಾರತಿ ಕಲಾ ಆರ್ಟ್ಸ್ ‘ಹೂ ಹಾಕುವ ಕಲ್ಲು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ವೇಷಭೂಷಣಗಳ ನಿರ್ವಹಣೆಯತ್ತ ಗಮನ ಹರಿಸಿದರು. ಆಗ ಪ್ರಸಾಧನ ಸಂಸ್ಥೆಗಳು ಕಡಿಮೆ ಸಂಖ್ಯೆಯಲ್ಲಿತ್ತು. ಹಾಗಾಗಿ ಬೇಡಿಕೆಯೂ ಇತ್ತು. ರಾಘವದಾಸರು ದಿನವೊಂದಕ್ಕೆ ಮೂರು ಅಥವಾ ನಾಲ್ಕು ಪ್ರದರ್ಶನಗಳನ್ನೂ ಒಪ್ಪಿಕೊಂಡದ್ದೂ ಇದೆ. ಪ್ರತಿದಿನವೂ ಇವರ ತಂಡದಲ್ಲಿ ವೇಷಭೂಷಣಗಳ ತಯಾರಿ ಮತ್ತು ನಿರ್ವಹಣೆಗಾಗಿ ಐದಾರು ಮಂದಿ ದುಡಿಯುತ್ತಾರೆ. ಪ್ರದರ್ಶನಗಳ ಸಂಖ್ಯೆಯನ್ನು ಮತ್ತು ಪ್ರಸಂಗ ಮತ್ತು ಅದರಲ್ಲಿ ಬರುವ ವೇಷಗಳನ್ನು ಹೊಂದಿಕೊಂಡು ತಂಡದಲ್ಲಿ ಎಷ್ಟು ಜನ ಹೋಗಬೇಕು ಎಂದು ನಿರ್ಣಯಿಸುತ್ತಾರೆ. ಹವ್ಯಾಸೀ ತಂಡದವರಾದರೆ ಮೇಕಪ್‍ಗೂ ಕಲಾವಿದರನ್ನು ಕರೆದೊಯ್ಯಬೇಕು. ರಾಘವದಾಸರು ಮೇಕಪ್ ಮಾಡುವ ಕಲೆಯಲ್ಲೂ ನಿಷ್ಣಾತರು. 2004ರಲ್ಲಿ ಶ್ರೀ ಎಸ್. ಎನ್. ಪಂಜಾಜೆ ಅವರು ಜಪಾನ್‍ನಲ್ಲಿ ಏರ್ಪಡಿಸಿದ ಪ್ರದಶನಕ್ಕೆ ಶ್ರೀ ಭಾರತೀ ಕಲಾ ಆರ್ಟ್ಸ್ ನ ವೇಷಭೂಷಣಗಳನ್ನು ಕೊಂಡು ಹೋಗಲಾಗಿತ್ತು. ದೇಶ ವಿದೇಶಗಳ ಪ್ರದರ್ಶನಗಳಿಗೆ ವೇಷಭೂಷಣಗಳನ್ನು ಪೂರೈಸಿದ ಹಿರಿಮೆ ರಾಘವದಾಸರದ್ದು.
                       

ಯಕ್ಷಗಾನ ಅಲ್ಲದೆ ನಾಟಕ, ಭರತನಾಟ್ಯ, ಸಿನಿಮಾ ನೃತ್ಯಗಳು, ಮಕ್ಕಳ ವೇಷಗಳ ಸ್ಪರ್ಧೆ, ಕೋಲಾಟ ಮುಂತಾದ ಕಲೆಗಳಿಗೆ ಸಂಬಂಧಿಸಿದ ವೇಷಭೂಷಣಗಳನ್ನೂ ಶ್ರೀ ಭಾರತೀ ಕಲಾ ಆರ್ಟ್ಸ್ ಸಂಸ್ಥೆಯು ಹೊಂದಿದೆ. ರಾಘವದಾಸರ ಮನೆಯಲ್ಲಿ ಮತ್ತು ಬಿ.ಸಿ. ರೋಡ್ ಬಸ್ ನಿಲ್ದಾಣದ ಸಮೀಪ ಈ ಸಂಸ್ಥೆಯ ವ್ಯವಹಾರ ಕೇಂದ್ರಗಳಿವೆ. ನೇಪಥ್ಯ ಕಲಾವಿದರು ಸಿದ್ಧವಾಗುತ್ತಿಲ್ಲ ಎಂಬ ಬೇಸರವಿದ್ದರೂ ಇದ್ದವರು ಹೊಣೆಗಾರಿಕೆಯಿಂದ ಕೆಲಸ ಮಾಡುವುದರಿಂದ ಡ್ರೆಸ್ ನಿರ್ವಹಣೆ ಸುಲಭವಾಗಿ ಸಾಗುತ್ತಿದೆ ಎನ್ನುವ ರಾಘವದಾಸರು ಜವುಳಿ, ಮಣಿ, ವೆಲ್ವೆಟ್ ಮೊದಲಾದ ಪರಿಕರಗಳನ್ನು ದೂರದ ಮುಂಬಯಿ ನಗರದಿಂದ ತರಿಸುತ್ತಾರೆ. 1989ರಿಂದ ಇಂದಿನ ತನಕ ನಿರಂತರ 30 ವರ್ಷಗಳ ಕಾಲ ಶ್ರೀ ಭಾರತೀ ಕಲಾ ಆರ್ಟ್ಸ್ ನ ಮಾಲೀಕನಾಗಿ ಜನಪ್ರಿಯರಾಗಿದ್ದಾರೆ. ಅಲ್ಲದೆ ಸಂಸ್ಥೆಯು ಆರಂಭವಾಗಿ 15, 20, 25ನೇ ವರ್ಷಗಳಂದು ಧನಸಹಾಯ ಯಾಚಿಸದೇ ಹಿರಿಯ ಕಲಾವಿದರನ್ನು ಸನ್ಮಾನಿಸಿ ಗೌರವಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. 15ನೇ ವರ್ಷದ ಕಾರ್ಯಕ್ರಮವು ಅಡಿಕೆ ಪತ್ರಿಕೆಯ ಸಂಪಾದಕ, ಲೇಖಕ, ಕಲಾವಿದ ಶ್ರೀ ನಾ. ಕಾರಂತರ ನಿರ್ದೇಶನದಲ್ಲಿ ನಡೆದಿತ್ತು. ಅಂದು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರನ್ನೂ, ಕುರ್ನಾಡು ಶಿವಣ್ಣ ಆಚಾರ್ಯರನ್ನೂ ಮತ್ತು ಕಾವೂರು ಕೇಶವರನ್ನು ಗೌರವಿಸಲಾಗಿತ್ತು. 20ನೇ ವರ್ಷ ಕಾಸರಗೋಡು ಸದಾನಂದ ರಾವ್, ಕೂಡ್ಲು (ಹಿಮ್ಮೇಳ ವಾದ್ಯಗಳ ತಯಾರಕರು), ಕಲಾವಿದ ಜೋಡುಕಲ್ಲು ಆನಂದ ಪುರುಷರನ್ನು ಸನ್ಮಾನಿಸಿದ್ದರು. 25ನೇ ವರ್ಷದ ಸಮಾರಂಭದಲ್ಲಿ ಶ್ರೀ ಲಲಿತ ಕಲಾ ಆರ್ಟ್ಸ್ ಸಂಸ್ಥೆಯ ಧನಪಾಲ ಶೆಟ್ಟಿಗಾರ್, ಹೊಳ್ಳ ಆರ್ಟ್ಸ್ ನ ಶಂಕರನಾರಾಯಣ ಹೊಳ್ಳ ಬಿ.ಸಿ ರೋಡ್, ಕಲಾವಿದ ಉಮೇಶ್ ಕೊಳಂಬೆ, ಶ್ರೀ ಭಾರತೀ ಕಲಾ ಆರ್ಟ್ಸ್ ನ ನೇಪಥ್ಯ ಕಲಾವಿದರಾದ ಗಂಗಾಧರ ಟೈಲರ್  ಮತ್ತು ರಾಘವ ಕುಲಾಲ್‍ರನ್ನು ಸನ್ಮಾನಿಸಿದ್ದರು.
                        ರಾಘವದಾಸರ ಪತ್ನಿ ಚಂದ್ರಾವತಿ ಸಂತುಷ್ಟ ಗೃಹಣಿ. ರಾಘವದಾಸ್ ದಂಪತಿಗಳಿಗೆ ಇಬ್ಬರು ಮಕ್ಕಳು. ಆರತಿಗೊಂದು, ಕೀರುತಿಗೊಂದು ಎಂಬಂತೆ. ಪುತ್ರಿ ಭಾರತಿ ಬಿ. ಎಡ್. ಓದಿರುತ್ತಾರೆ. ವಿವಾಹಿತೆ, ಗೃಹಣಿ. ಪುತ್ರ ಬಾಲಸುಬ್ರಹ್ಮಣ್ಯ ಪಿ ಯು ಸಿ ಓದಿ ಯಕ್ಷಗಾನ ವೇಷಭೂಷಣಗಳ ತಯಾರಿಕೆಯಲ್ಲಿ ಪಳಗಿ ಶ್ರೀ ಭಾರತೀ ಕಲಾ ಆರ್ಟ್ಸ್ ಸಂಸ್ಥೆಯ ಅಭಿವೃದ್ಧಿಯಲ್ಲಿ ತಂದೆಗೆ ನೆರವಾಗುತ್ತಿದ್ದಾರೆ. 

ಲೇಖಕ: ರವಿಶಂಕರ್ ವಳಕ್ಕುಂಜ