Monday, August 3, 2026
Home Blog Page 48

ಪಾತಾಳ ಅಂಬಾಪ್ರಸಾದರಿಗೆ 60ರ ಅಭಿನಂದನೆ ಮತ್ತು ತಾಳಮದ್ದಳೆ

ತೆಂಕು ಮತ್ತು ಬಡಗು ತಿಟ್ಟುಗಳ ಮೇಳಗಳಲ್ಲಿ 47 ವರ್ಷಗಳ ತಿರುಗಾಟ ಮಾಡಿದ ಅಪೂರ್ವ ಸ್ತ್ರೀ ವೇಷದಾರಿ ಅಂಬಾಪ್ರಸಾದ್ ಪಾತಾಳ ಇವರಿಗೆ 60ರ ಅಭಿನಂದನ ಕಾರ್ಯಕ್ರಮವು ಪಾತಾಳ ಪೂರ್ಣ ಶ್ರೀ ನಿಲಯದಲ್ಲಿ ಜರಗಿತು.

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ವತಿಯಿಂದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಉಮೇಶ ಶೆಣೈ ಮತ್ತು ಗುರಿಕಾರ ಸತ್ಯನಾರಾಯಣ ಭಟ್ ಆರ್ಲ, ನಿವೃತ್ತ ಮುಖ್ಯ ಗುರುಗಳಾದ ಬಿ. ಸುಬ್ರಹ್ಮಣ್ಯರಾವ್ ಇವರು ಪಾತಾಳ ಅಂಬಾಪ್ರಸಾದ್ ಮತ್ತು ಶ್ರೀಮತಿ ಜಯಂತಿ ಪ್ರಸಾದ್ ಪಾತಾಳ ಇವರನ್ನು ಸನ್ಮಾನಿಸಿದರು.

ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನ ನುಡಿಗಳನ್ನಾಡಿದರು.

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷರಾದ ದಿವಾಕರ ಆಚಾರ್ಯರನ್ನು ಪಾತಾಳ ಅಂಬಾ ಪ್ರಸಾದರು ಗೌರವಿಸಿ ಶ್ರೀಕಾಳಿಕಾಂಬ ಯಕ್ಷಗಾನ ಸಂಘಕ್ಕೆ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.

ಆರಂಭದಲ್ಲಿ ಜರಗಿದ ಶಾಂಭವಿ ವಿಲಾಸ ತಾಳಮದ್ದಳೆಯನ್ನು ನಿವೃತ್ತ ಉಪನ್ಯಾಸಕ ಮಹಾಲಿಂಗೇಶ್ವರ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ ಉಪಸ್ಥಿತರಿದ್ದರು. ಭಾಗವಹಿಸಿದ ಕಲಾವಿದರನ್ನು ಪಾತಾಳ ಅಂಬಾ ಪ್ರಸಾದ್ ಸ್ಮರಣಿಕೆಯೊಂದಿಗೆ ಗೌರವಿಸಿದರು.

ಭಾಗವತರಾಗಿ ವಿಘ್ನೇಶ್ವರ ಭಟ್ ನೂಜಿ , ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳಂತಿಲ ಹಿಮ್ಮೇಳದಲ್ಲಿ ಅಚ್ಯುತ ಪಾಂಗಣ್ಣಾಯ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಶ್ರೀಪತಿ ಭಟ್ ಉಪ್ಪಿನಂಗಡಿ ಚಕ್ರತಾಳದಲ್ಲಿ ರಮೇಶ್ ಭಟ್ ಕಜೆ ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್ (ಕೌಶಿಕೆ) ಸತೀಶ್ ಆಚಾರ್ಯ ಮಾಣಿ(ರಕ್ತ ಬೀಜ)ಮಹಾಲಿಂಗೇಶ್ವರ ಭಟ್ ಪೆರಿಯಡ್ಕ(ಚಂಡ), ಗುಡ್ಡಪ್ಪ ಬಲ್ಯ (ಶುಂಭ) ,ಜಯರಾಮ ನಾಲ್ಗುತ್ತು(ಮುಂಡ),ಸಂಜೀವ ಪಾರೆಂಕಿ(ಸುಗ್ರೀವ ಮತ್ತು ದೇವೇಂದ್ರ )ಶ್ರೀಮತಿ ಶ್ರುತಿ ವಿಸ್ಮಿತ್ (ಧೂಮ್ರಾಕ್ಷ) ಭಾಗವಹಿಸಿದ್ದರು.

ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ಸ್ವಾಗತಿಸಿ ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು. ಮುಖ್ಯೋಪಾಧ್ಯಯರಾದ ಕೆ ಶ್ರೀಧರ್ ಭಟ್ ವಂದಿಸಿದರು.

ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ

ಗುರುರಾಜ ಮಾರ್ಪಳ್ಳಿಯವರಿಗೆ ಯಕ್ಷವಿದ್ವಾಂಸ ಪ್ರಶಸ್ತಿ

ಉಡಪಿಯ ಯಕ್ಷಗಾನ ಕಲಾರಂಗ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣೆಯಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ಹಿರಿಯ ಯಕ್ಷಗಾನ ಕಲಾವಿದ, ವಿದ್ವಾಂಸ ಗುರುರಾಜ ಮಾರ್ಪಳ್ಳಿ ಆಯ್ಕೆಯಾಗಿದ್ದಾರೆ.

ಮಾರ್ಪಳ್ಳಿಯವರು ಯಕ್ಷಗಾನವಲ್ಲದೆ ನಾಟಕ, ಸಿನೇಮಾ, ಸಂಗೀತಾ, ಶಿಲ್ಪ, ಸಾಹಿತ್ಯ ಹೀಗೆ ಕಲೆಯ ಬಹು ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಹುಮುಖೀ ಕಲಾಸಾಧಕರಾಗಿದ್ದಾರೆ.

ಪ್ರಶಸ್ತಿಯು ಪ್ರಶಸ್ತಿ ಪರಿಕರ ಸಹಿತ ರೂ. 40000/- ನಗದು ಪುರಸ್ಕಾರ ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಮೇ 19 ಭಾನುವಾರ ಸಂಜೆ 5 ಗಂಟೆಗೆ ಯಕ್ಷಗಾನ ಕಲಾರಂಗದ ನೂತನ ಕಟ್ಟಡದ ಐವೈಸಿ ಸಭಾಂಗಣದಲ್ಲಿ ಪ್ರಶಸ್ತಿ ಸ್ಥಾಪಕ ತಲ್ಲೂರು ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ಅತಿಥಿ ಗಣ್ಯರ ಸಮಕ್ಷ ಜರಗಲಿದೆಯೆಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

‘ದ್ಯೂತ ಪ್ರಕರಣ’ – ಯಕ್ಷಗಾನ ತಾಳಮದ್ದಳೆ ಪ್ರದರ್ಶನವು

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷಾಚರಣೆಯ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ‘ದ್ಯೂತ ಪ್ರಕರಣ’ ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಬಿ. ಸುರೇಶ್ ರಾವ್ ಹಿಮ್ಮೇಳದಲ್ಲಿ ದಿವಾಕರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ

ಅರ್ಥಧಾರಿಗಳಾಗಿ ಜಯರಾಮ ಬಲ್ಯ ( ಕೌರವ) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ( ಕರ್ಣ )ಸತೀಶ್ ಆಚಾರ್ಯ ಮಾಣಿ (ಶಕುನಿ) ಶ್ರೀಮತಿ ಶ್ರುತಿ ವಿಸ್ಮಿತ(ವಿದುರ )ಶ್ರೀಧರ ಎಸ್.ಪಿ ಮಂಗಳೂರು (ಧರ್ಮರಾಯ)ದಿವಾಕರ ಆಚಾರ್ಯ ಗೇರುಕಟ್ಟೆ (ಧೃತರಾಷ್ಟ್ರ ಮತ್ತು ಭೀಮ) ಭಾಗವಹಿಸಿದ್ದರು.

ಗಣೇಶ್ ಆಚಾರ್ಯ. ಕೆ ಬೆಂಗಳೂರು ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು

ನುಡಿನಮನ: ಇತ್ತೀಚೆಗೆ ನಿಧನರಾದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮತ್ತು ವೇಷಧಾರಿ ಗಂಗಾಧರ ಪುತ್ತೂರು ಇವರಿಗೆ ಸತೀಶ್ ಆಚಾರ್ಯ ಮಾಣಿ ಮತ್ತು ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ನುಡಿ ನಮನ ಸಲ್ಲಿಸಿದರು.

ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯದರ್ಶಿ ಶ್ರೀಪತಿ ಭಟ್ ಉಪ್ಪಿನಂಗಡಿ ,ಜಯರಾಮ ಬಲ್ಯ, ದಿವಾಕರ ಆಚಾರ್ಯ ನೇರೆಂಕಿ ಮತ್ತು ಸಂಘದ ಕಲಾವಿದರು ಉಪಸ್ಥಿತರಿದ್ದರು.

ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಸ್ಥಾನದ ರಥೋತ್ಸವ – “ಸುದರ್ಶನ ಗರ್ವಭಂಗ” ಮತ್ತು ಗದಾಯುದ್ಧ, ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ

ಉಡುಪಿ ತಾಲೂಕು ಕೋಟ ಪ್ರೌಢಶಾಲೆ ಹತ್ತಿರದಲ್ಲಿ ಹಂದಟ್ಟು ಕೋಟತಟ್ಟು ಗ್ರಾಮದಲ್ಲಿ ವಿರಾಜಮಾನವಾಗಿರುವ ಹಂದೆ ಶ್ರೀ ಮಹಾವಿಷ್ಣು ಶ್ರೀ ಮಹಾಗಣಪತಿ ದೇವಸ್ಥಾನವು 600ಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದು. ಇಲ್ಲಿನ ಶಿಲಾ ಶಾಸನ ಹಾಗೂ ಇತರ ಉಲ್ಲೇಖಗಳಿಂದ ಈ ದೇವಸ್ಥಾನಕ್ಕೆ 600ಕ್ಕೂ ಹೆಚ್ಚು ವರ್ಷಗಳಷ್ಟು ಇತಿಹಾಸ ಇರುವುದು ಕಂಡುಬರುತ್ತದೆ. ಕೋಟ ಮಹಾ ಜಗತ್ತಿನ ಪ್ರಮುಖ ಮನೆತನದವರಾದ ಹಂದೆ ಅವರ ಕುಟುಂಬದ ಪಾರಂಪರಿಕ ಪರಮಾರಾಧ್ಯ ದೇವರಾದ್ದರಿಂದಲೂ ಆಡಳಿತವನ್ನು ಅವರೇ ನಿರ್ವಹಿಸುತ್ತಾ ಬಂದ ಕಾರಣದಿಂದ ಹಂದೆ ದೇವಸ್ಥಾನ ಎಂಬ ಹೆಸರು ವಾಡಿಕೆಯಲ್ಲಿದೆ.

ಪ್ರಸ್ತುತ 10-05-2024ರ ಅಕ್ಷಯ ತೃತೀಯಾದಂದು ರಥೋತ್ಸವ ನಡೆಯಲಿದ್ದು, ದಿನಾಂಕ 05-05-2024ರಿಂದ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಹಾಗೂ ಸಭಾಕಾರ್ಯಕ್ರಮ, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಗಳು ದಿನಾಂಕ 09-05-2024ರಂದು ದೇವಸ್ಥಾನದ ಶ್ರೀ ನಾಗಪ್ಪಯ್ಯ ಹಂದೆ ರಂಗಮಂಟಪದಲ್ಲಿ ನಡೆಯಲಿದೆ.

ದಿನಾಂಕ 09-05-2024ರಂದು ಸಂಜೆ 5.00ರಿಂದ ಸಭಾಕಾರ್ಯಕ್ರಮ ಮತ್ತು ಸ್ಥಳೀಯ ವಿಶೇಷ ಸಾಧಕರಿಗೆ ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮ ಹಾಗೂ ಗಂಟೆ 7.30ರಿಂದ ಯಕ್ಷದೇಗುಲ ಬೆಂಗಳೂರು ತಂಡ ಮತ್ತು ಅತಿಥಿಕಲಾವಿದರ ಕೂಡುವಿಕೆಯಲ್ಲಿ “ಸುದರ್ಶನ ಗರ್ವಭಂಗ” ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಈ ಸಂದರ್ಭದಲ್ಲಿ ಯಕ್ಷಗಾನದ ಆರು ಜನ ಹಾಸ್ಯ ಕಲಾವಿದರಿಗೆ ನಿವೃತ್ತ ಶಿಕ್ಷಕರಾದ ಹೆಚ್. ಸೂರ್ಯನಾರಾಯಣ ಹಂದೆ ವಿಶೇಷ ಪುರಸ್ಕಾರ ನೀಡಲಿದ್ದಾರೆ. ದಿನಾಂಕ 10-05-2024ರಂದು ಸಂಜೆ 7.00ರಿಂದ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಅವರಿಂದ ಯಕ್ಷಗಾನ “ಗದಾಯುದ್ಧ ಮತ್ತು ಚಂದ್ರಾವಳಿ ವಿಲಾಸ” ಯಕ್ಷಗಾನ ಪ್ರದರ್ಶನ ನಡೆಯಲಿದೆ.

11-05-2024ರಂದು ಸಂಜೆ 6.00ರಿಂದ ಸ್ಥಳೀಯ ಪ್ರತಿಭೆಗಳಿಂದ ‘ನೃತ್ಯಾಂಜಲಿ’, ನಂತರ 7.00ರಿಂದ ಅರೆಹೊಳೆ ಪತ್ರಿಷ್ಠಾನ ‘ನಂದಗೋಕುಲ’ ಸಾಂಸ್ಕೃತಿಕ ತಂಡದವರಿಂದ ‘ನೃತ್ಯ ವೈಭವ’. ರಾತ್ರಿ 9.30ರಿಂದ ತ್ರೀನೇತ್ರ ಕಲಾತಂಡ ಉಪ್ಲಾಡಿ ಇವರಿಂದ ‘ಗಗ್ಗರ ದೈವದನಿ’ ನಗೆನಾಟಕ ಪ್ರದರ್ಶನ ನಡೆಯಲಿದೆ.

ಇದಲ್ಲದೆ 09-05-2024 ಗುರುವಾರ ಸಂಜೆ 4.00ರಿಂದ ಶ್ರೀ ಮಹಾಗಣಪತಿ ಮಹಿಳಾ ಭಜನಾ ಮಂಡಳಿ ಕಾರ್ಕಡ, 10-05-2024ರ ಶುಕ್ರವಾರ ಬೆಳಿಗ್ಗೆ 10ರಿಂದ ಪಂಚವರ್ಣ ಮಹಿಳಾ ಮಂಡಲ ಕೋಟ ಇದರ ಸದಸ್ಯರಿಂದ, ಸಂಜೆ 4.00ರಿಂದ ಶ್ರೀ ರಾಮ ಮಹಿಳಾ ಭಜನಾ ಮಂಡಳಿ ಮಣೂರು, 11-05-2024 ಶನಿವಾರ ಸಂಜೆ 4.00ರಿಂದ ಶ್ರೀ ರಾಮ ಭಜನಾ ಮಂಡಳಿ, ಸಾಲಿಗ್ರಾಮ ಈ ಎಲ್ಲಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಅಲ್ಲದೇ 10-05-2024 ಭಾನುವಾರ ಬೆಳಿಗ್ಗೆ 10.30ರಿಂದ ಶ್ರೀ ಮಹಾಗಣಪತಿ ಮಹಿಳಾ ವೇದಿಕೆ, ಹಂದೆ ದೇವಸ್ಥಾನ ಕೋಟ ಇವರಿಂದ ಲಲಿತಾ ಸಹಸ್ರನಾಮ ಮತ್ತು ವಿಷ್ಣು ಸಹಸ್ರನಾಮ ಪಠಣ ನಡೆಯಲಿದೆ. ಅಲ್ಲದೇ 11-05-2024ರಂದು ವಿಶೇಷವಾಗಿ ರಾತ್ರಿ ತೆಪ್ಪೋತ್ಸವ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಅಮರ್ ಹಂದೆಯವರು ಸುದ್ಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಟ ಸುದರ್ಶನ ಉರಾಳ
ಮೊ: 9448547237

ಪತಿಯನ್ನು ಕಟ್ಟಿಹಾಕಿ, ಸಿಗರೇಟ್‌ನಿಂದ ಆತನ ಖಾಸಗಿ ಅಂಗಗಳನ್ನು ಸುಟ್ಟು, ಜನನಾಂಗಗಳನ್ನು ಕತ್ತರಿಸಲು ಪ್ರಯತ್ನಿಸಿದ ಹೆಂಡತಿಯ ಬಂಧನ

30 ವರ್ಷದ ಮೆಹರ್ ಜಹಾನ್ ಎಂಬ ಮಹಿಳೆಯನ್ನು ಉತ್ತರ ಪ್ರದೇಶ ಪೊಲೀಸರು ಬಿಜ್ನೋರ್‌ನಲ್ಲಿ ತನ್ನ ಪತಿಯನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಬಂಧಿಸಿದ್ದಾರೆ.

ಪತ್ನಿಯಿಂದ ಚಿತ್ರಹಿಂಸೆಗೊಳಗಾದ ವ್ಯಕ್ತಿ ಪುರಾವೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಿದ ವಿಡಿಯೋ ಆಕೆಯ ಬಂಧನಕ್ಕೆ ಕಾರಣವಾಯಿತು
ಪತಿ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸಿದ್ದು, ಅವರ ಪತ್ನಿ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದು, ಕೈಕಾಲು ಕಟ್ಟಿ, ಸಿಗರೇಟಿನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿರುವುದು ಕಂಡುಬಂದಿದೆ.

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮಹಿಳೆಯೊಬ್ಬರು ತನ್ನ ಪತಿಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ಮತ್ತು ಆತನನ್ನು ಕಟ್ಟಿಹಾಕಿದ ನಂತರ ಆತನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಟ್ಟುಹಾಕಿದ್ದಕ್ಕಾಗಿ ಬಂಧಿಸಲಾಗಿದೆ.

ಮೆಹರ್ ಜಹಾನ್ ಎಂಬ ಮಹಿಳೆಯನ್ನು ಆಕೆಯ ಪತಿ ನೀಡಿದ ದೂರಿನ ಮೇರೆಗೆ ಮೇ 5 ರಂದು ಸಿಯೋಹರಾ ಜಿಲ್ಲಾ ಪೊಲೀಸರು ಬಂಧಿಸಿದ್ದರು.

ಪತಿ ಮನನ್ ಝೈದಿ, ತನ್ನ ಪತ್ನಿ ಮೆಹರ್ ತನಗೆ ಮಾದಕ ದ್ರವ್ಯ ಕುಡಿಸಿದ್ದಾಳೆ ಮತ್ತು ತನ್ನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಡುವ ಮೊದಲು ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿದ್ದಾಳೆ ಎಂದು ಆರೋಪಿಸಿದ್ದಾರೆ.

ಪತಿ ಮನೆಯೊಳಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರಿಗೆ ಒದಗಿಸಿದ್ದು, ಮೆಹರ್ ಜಹಾನ್ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದು, ಅವನ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕುವುದು ಮತ್ತು ಎದೆಯ ಮೇಲೆ ಕುಳಿತು ಕತ್ತು ಹಿಸುಕಲು ಪ್ರಯತ್ನಿಸುವುದನ್ನು ತೋರಿಸುತ್ತದೆ.

ನಂತರ ವೀಡಿಯೊದಲ್ಲಿ, ಅವಳು ತನ್ನ ಗಂಡನ ದೇಹದ ಭಾಗಗಳನ್ನು ಸಿಗರೇಟ್‌ನಿಂದ ಸುಡುವುದನ್ನು ಕಾಣಬಹುದು.

ಮನನ್ ಝೈದಿ ಅವರು ಈ ಹಿಂದೆಯೂ ಪೊಲೀಸರಿಗೆ ದೂರು ನೀಡಿದ್ದರು, ಅವರ ಪತ್ನಿ ಅಮಲು ಪದಾರ್ಥಗಳನ್ನು ನೀಡಿ, ಕೈಕಾಲು ಕಟ್ಟಿ, ನಿಂದನೆಗೆ ಒಳಪಡಿಸುವ ಮೂಲಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪೊಲೀಸರು ಮೆಹರ್ ಜಹಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆ ಯತ್ನ, ಹಲ್ಲೆ ಮತ್ತು ಚಿತ್ರಹಿಂಸೆ ಸೇರಿದಂತೆ ಪ್ರಕರಣ ದಾಖಲಿಸಿ, ಆಕೆಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಮಂಜೇಶ್ವರದ ಕುಂಜತ್ತೂರಿನಲ್ಲಿ ಆಂಬ್ಯುಲೆನ್ಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರ ದುರ್ಮರಣ

ಕಾಸರಗೋಡಿನಲ್ಲಿ ಆಂಬ್ಯುಲೆನ್ಸ್ ಕಾರು ಡಿಕ್ಕಿಯಾಗಿ ವ್ಯಕ್ತಿ ಹಾಗೂ ಆತನ ಇಬ್ಬರು ಪುತ್ರರ ದುರ್ಮರಣ

ಆಂಬ್ಯುಲೆನ್ಸ್ ಮತ್ತು ಕಾರು ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಹಾಗೂ ಆತನ ಇಬ್ಬರು ಪುತ್ರರು ಸಾವನ್ನಪ್ಪಿರುವ ಘಟನೆ ಮಂಜೇಶ್ವರದ ಕುಂಜತ್ತೂರಿನಲ್ಲಿ ನಡೆದಿದೆ.

ಮೃತರನ್ನು ತ್ರಿಶೂರ್‌ನ ಇರಿಂಜಲಕುಡದ ಶಿವಕುಮಾರ್ (54) ಮತ್ತು ಅವರ ಮಕ್ಕಳಾದ ಶರತ್ (23) ಮತ್ತು ಸೌರವ್ (15) ಎಂದು ಗುರುತಿಸಲಾಗಿದೆ.

ಅವರು ಕಾರಿನಲ್ಲಿದ್ದ ಪ್ರಯಾಣಿಕರಾಗಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾಸರಗೋಡಿನಿಂದ ಮಂಗಳೂರಿಗೆ ಹೋಗುತ್ತಿದ್ದ ಆಂಬ್ಯುಲೆನ್ಸ್ ಕಾಸರಗೋಡಿಗೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.

ಕಾರಿನ ಬಾಗಿಲು ಒಡೆದು ಶವಗಳನ್ನು ಹೊರತೆಗೆಯಲಾಯಿತು. ಆಂಬ್ಯುಲೆನ್ಸ್‌ನಲ್ಲಿದ್ದ ರೋಗಿಯಾದ ಉಷಾ, ಆಕೆಯ ಜೊತೆಗಿದ್ದ ಶಿವದಾಸ್ ಮತ್ತು ಆಂಬ್ಯುಲೆನ್ಸ್ ಚಾಲಕನಿಗೆ ಗಾಯಗಳಾಗಿವೆ.

ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ.

ಗಂಡನೊಡನೆ ಜಗಳವಾಡಿದ ನಂತರ ಮೊಸಳೆ ತುಂಬಿದ ಕಾಲುವೆಯಲ್ಲಿ ಮಗುವನ್ನು ಎಸೆದ ತಾಯಿ – ಉತ್ತರ ಕನ್ನಡದ ಮಗು ಸಾವು

ಕರ್ನಾಟಕದ ಉತ್ತರ ಕನ್ನಡದಲ್ಲಿ 32 ವರ್ಷದ ಮಹಿಳೆಯೊಬ್ಬರು ತನ್ನ ಆರು ವರ್ಷದ ಮಗನನ್ನು ಮೊಸಳೆಗಳಿರುವ ಕಾಲುವೆಗೆ ಎಸೆದಿದ್ದಾಳೆ. ನಂತರ ಕೊಲೆ ಆರೋಪದ ಆಕೆಯನ್ನು ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾಲಮಡಿ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಸಾವಿತ್ರಿ ಎಂದು ಗುರುತಿಸಲಾದ ಮಹಿಳೆ ಮತ್ತು ಆಕೆಯ ಪತಿ ರವಿಕುಮಾರ್ (36) ತಮ್ಮ ಮಗ ವಿನೋದ್‌ನ ಶ್ರವಣ ಮತ್ತು ವಾಕ್ ದೋಷದ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದರು.

ತೀವ್ರ ವಾಗ್ವಾದದ ನಂತರ, ರಾತ್ರಿ 9 ಗಂಟೆ ಸುಮಾರಿಗೆ ಸಾವಿತ್ರಿ ವಿನೋದ್‌ನನ್ನು ಕಾಲುವೆಗೆ ಎಸೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಈ ಕಾಲುವೆಯು ಮೊಸಳೆಯಿಂದ ತುಂಬಿರುವ ಕಾಳಿ ನದಿಗೆ ಸಂಪರ್ಕ ಕಲ್ಪಿಸುತ್ತದೆ.

ಭಾನುವಾರ ಬೆಳಿಗ್ಗೆ, ಹುಡುಕಾಟ ತಂಡವು ಮೊಸಳೆಯ ದವಡೆಯಿಂದ ಮಗುವಿನ ದೇಹವನ್ನು ವಶಪಡಿಸಿಕೊಂಡಿತು, ಅದು ಅವನ ಬಲಗೈಯನ್ನು ಭಾಗಶಃ ಕಬಳಿಸಿದೆ. ದೇಹವು ತೀವ್ರ ಗಾಯಗಳು ಮತ್ತು ಕಚ್ಚಿದ ಗುರುತುಗಳನ್ನು ತೋರಿಸಿದೆ ಎಂದು ವರದಿಯಾಗಿದೆ.

ಮನೆಗೆಲಸ ಮತ್ತು ಮೇಸ್ತ್ರಿ ಸಹಾಯಕರಾಗಿ ಕೆಲಸ ಮಾಡುತ್ತಿರುವ. ಸಾವಿತ್ರಿ ಮತ್ತು ರವಿಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಚೌಕಿಯಲ್ಲಿ ವೇಷ ಕಳಚುವಾಗಲೇ ಜೀವನ ನಾಟಕದ ವೇಷವನ್ನೂ ಕಳಚಿದ ಗಂಗಾಧರ ಪುತ್ತೂರು – ಇಲ್ಲಿದೆ ಅವರ ಕುರಿತಾದ ಸಂಪೂರ್ಣ ಮಾಹಿತಿ

ಧರ್ಮಸ್ಥಳ ಮೇಳದ ಕಲಾವಿದ ಪುತ್ತೂರು ಗಂಗಾಧರ (60) ಅವ ದಿನಾಂಕ 01.05.2024)ರಂದು ಆಟ ಮುಗಿಸಿ ಚೌಕಿಯಲ್ಲಿ ಕುಕ್ಕಿತ್ತಾಯ ವೇಷ ಕಳಚುತ್ತಿದ್ದಾಗ ಹೃದಯಾಘಾತದಿಂದ ನಿಧನ ಹೊಂದಿದರು.

ತಮ್ಮ 18ನೇ ವರ್ಷದಲ್ಲಿ ಯಕ್ಷಗಾನ ತಿರುಗಾಟ ಆರಂಭಿಸಿದ ಅವರು ಸುದೀರ್ಘ 42 ವರ್ಷ ಧರ್ಮಸ್ಥಳ ಮೇಳದಲ್ಲೇ ಸೇವೆ ಸಲ್ಲಿಸಿದ್ದರು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ಮಾಡುತ್ತಿದ್ದರು. ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ಯಕ್ಷಗಾನ ಅಭ್ಯಾಸ ಮಾಡಿದ ಗಂಗಾಧರರು ಹಾಸ್ಯದಿಂದ ಹಿಡಿದು ರಾಜನ ವರೆಗೆ ಎಲ್ಲಾ ತರದ ವೇಷವನ್ನು ಮಾಡಬಲ್ಲ ಸಮರ್ಥ ಕಲಾವಿದರಾಗಿದ್ದರು.

ಧರ್ಮಸ್ಥಳ ಮೇಳದಲ್ಲಿ ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದ್ದರು. ಅವರು ಪತ್ನಿ, ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. .

ಆಪದ್ಬಾಂಧವ ಸವ್ಯಸಾಚಿ ಕಲಾವಿದ ಪುತ್ತೂರು ಗಂಗಾಧರ ಜೋಗಿ

ಶ್ರೀ ಗಂಗಾಧರ ಜೋಗಿಯವರು ಶ್ರೀ ಧರ್ಮಸ್ಥಳ ಮೇಳದ ದಣಿವರಿಯದ ಕಲಾವಿದ. ಭಾಗವತರು ತನಗೆ ನೀಡಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಷ್ಠೆಯಿಂದ ಮಾಡುತ್ತಾ ಬಂದ ಕಲಾಮಾತೆಯ ಸುಪುತ್ರ. ಎಷ್ಟು ವೇಷಗಳನ್ನೂ ಮಾಡಬಲ್ಲವರಾಗಿದ್ದರು. ಯಾವ ವೇಷವನ್ನೂ ಮಾಡಬಲ್ಲರು. ಸ್ತ್ರೀವೇಷ, ಪುಂಡುವೇಷ, ಕಿರೀಟ ವೇಷ, ಹಾಸ್ಯ, ಅನಿವಾರ್ಯವಾದರೆ ಕೇಶಾವರೀ ಬಣ್ಣದ ವೇಷಕ್ಕೂ ಸೈ.

ಹೆಣ್ಣು ಬಣ್ಣಗಳನ್ನೂ ಅಂದವಾಗಿ ನಿರ್ವಹಿಸುತ್ತಿದ್ದರು. ಇಂತಹ ಕಲಾವಿದರು ಸಿದ್ಧರಾಗುವುದು ಬಹಳ ಅಪರೂಪ. ಮೇಳಕ್ಕೆ ಇವರಂತಹ ಕಲಾವಿದರು ಅನಿವಾರ್ಯ, ಹಿರಿಯ ಕಲಾವಿದನಾದರೂ ಅನಿವಾರ್ಯ ಸಂದರ್ಭದಲ್ಲಿ ಪ್ರಸಂಗದ ಸಣ್ಣಪುಟ್ಟ ಪಾತ್ರ ಗಳನ್ನು ನಿರ್ವಹಿಸಿ ವ್ಯಕ್ತಿತ್ವದಲ್ಲಿ ದೊಡ್ಡವರಾಗಿ ಮೆರೆದವರು ಗಂಗಾಧರರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ 40ಕ್ಕೂ ಹೆಚ್ಚಿನ ವರ್ಷಗಳಿಂದ ನಿರಂತರ ಕಲಾವಿದನಾಗಿ ವ್ಯವಸಾಯ ಮಾಡಿದ ಹಿರಿಮೆಗೆ ಪಾತ್ರರಾದವರು ಶ್ರೀ ಗಂಗಾಧರರು.

1964ನೇ ಇಸ್ವಿ ಆಗಸ್ಟ್ 12ರಂದು ಪುತ್ತೂರು ತಾಲೂಕು ಕೋಡಿಂಬಾಡಿ ಸಮೀಪ ಸೇಡಿಯಾಪು ಎಂಬಲ್ಲಿ ನಾರಾಯಣಯ್ಯ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದ ಗಂಗಾಧರ ಜೋಗಿಯವರು ಕೋಡಿಂಬಾಡಿ ಶಾಲೆಯಲ್ಲಿ 7ನೇ ತರಗತಿಯ ವರೇಗೆ ಓದಿದರು. ಎಳವೆಯಲ್ಲೇ ಇವರಿಗೆ ಯಕ್ಷಗಾನಾಸಕ್ತಿ ಅತೀವವಾಗಿತ್ತು. ಪುತ್ತೂರು ಪರಿಸರದಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದ ಅಪ್ಪಟ ಯಕ್ಷಗಾನಾಭಿಮಾನಿ.

ಯಕ್ಷಗಾನ ಕಲೆಯ ಬಗೆಗೆ ಇವರಿಗಿರುವ ಆಸಕ್ತಿಯನ್ನು ಗಮನಿಸಿದವರು ಖ್ಯಾತ ಕಲಾವಿದ ಕುಂಬಳೆ ಶ್ರೀಧರ ರಾಯರು. ಬಾಲಕ ಗಂಗಾಧರನನ್ನು ಶ್ರೀ ಧರ್ಮಸ್ಥಳ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ಕರೆದೊಯ್ದರು. ಶ್ರೀ ಕೆ. ಗೋವಿಂದ ಭಟ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಗಂಗಾಧರ ಅವರು ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿತರು.

ಶ್ರೀ ಧರ್ಮಸ್ಥಳ ಮೇಳಕ್ಕೆ ಬಾಲಕಲಾವಿದನಾಗಿ ಸೇರ್ಪಡೆಯಾಗಿ ಪೂರ್ವರಂಗದಲ್ಲಿ ಬಾಲಗೋಪಾಲನಾಗಿ, ಮುಖ್ಯ ಸ್ತ್ರೀವೇಷಧಾರಿಯೂ, ಪ್ರಸಂಗದಲ್ಲಿ ತನ್ನ ಪಾಲಿಗೆ ಬಂದ ಪಾತ್ರಗಳನ್ನು ಶ್ರದ್ಧೆಯಿಂದ ನಿರ್ವಹಿಸುತ್ತಾ ಹಂತ ಹಂತವಾಗಿ ಬೆಳೆದು ಬಂದವರು ಪುತ್ತೂರು ಗಂಗಾಧರ ಜೋಗಿಯವರು.

ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಮಾಲತಿ ಪಾತ್ರ (ಕುಂಬಳೆ ಸುಂದರ ರಾಯರು ಮತ್ತು ಕೆ. ಗೋವಿಂದ ಭಟ್ಟರು ನಿರ್ವಹಿಸಿದ ಗೋವಿಂದ ದೀಕ್ಷಿತನ ಪಾತ್ರದ ಜತೆ) ಅಲ್ಲದೆ ಅನೇಕ ಸ್ತ್ರೀಪಾತ್ರಗಳಲ್ಲಿ ಇವರು ಮಿಂಚಿದರು. ಕಸೆ ಸ್ತ್ರೀವೇಷ, ಗರತಿ ವೇಷಗಳು ಅಲ್ಲದೆ ಶೃಂಗಾರ ವೇಷಗಳಲ್ಲಿ ಮಿಂಚಿದ ಇವರಿಗೆ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸುವ ಕಲೆಯು ಕರಗತ ವಾಗಿತ್ತು. ಆಡು ಮುಟ್ಟದ ಸೊಪ್ಪಿಲ್ಲ ಗಂಗಾಧರ ಅವರು ಮಾಡದ ಪಾತ್ರಗಳಿಲ್ಲ ಎನ್ನುವಷ್ಟರ ಮಟ್ಟಕ್ಕೆ ಪ್ರಖ್ಯಾತಿಯನ್ನು ಗಳಿಸಿಕೊಂಡಿದ್ದರು.

ಕಡತೋಕಾ ಮಂಜುನಾಥ ಭಾಗವತರು, ಪುತ್ತಿಗೆ ರಘುರಾಮ ಹೊಳ್ಳರು, ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಕೆ. ಗೋವಿಂದ ಭಟ್ಟರು, ಕುಂಬಳೆ ಶ್ರೀಧರ ರಾಯರು, ಪುತ್ತೂರು ಶ್ರೀಧರ ಭಂಡಾರಿ, ನಿಡ್ಲೆ ಗೋವಿಂದ ಭಟ್ಟರು, ಉಬರಡ್ಕ ಉಮೇಶ ಶೆಟ್ಟಿ, ತಾರಾನಾಥ ಬಲ್ಯಾಯ, ವಸಂತ ಗೌಡರಂತಹ ಕಲಾವಿದರು ಮಾರ್ಗದರ್ಶನ ನೀಡಿದರು. ಎಂದು ಹೇಳುತ್ತಿದ್ದ ಗಂಗಾಧರ ಜೋಗಿಯವರು ಕಿರಿಯ ಕಲಾವಿದರ ಮತ್ತು ಕಲಾಭಿಮಾನಿಗಳ ಪ್ರೋತ್ಸಾಹವನ್ನೂ ಮರೆಯದೆ ನೆನಪಿಸುತ್ತಿದ್ದವರು.

ದೆಹಲಿ ರಾಷ್ಟ್ರಪತಿ ಭವನ, ದುಬೈ, ಬೆಹರಿನ್, ಅಬುದಾಭಿ ಮೊದಲಾದೆಡೆ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕರ್ಗಲ್ಲು ಯಕ್ಷರೂಪಕ ತಂಡದಲ್ಲಿ ಒಂದು ವರ್ಷ, ಮುಳಿಯಾಲ ಭೀಮ ಭಟ್ಟರ ತಂಡದಲ್ಲಿ 10 ವರ್ಷ, 25 ವರ್ಷಗಳಿಂದ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿಯ ಮಳೆಗಾಲದ ಕಾರ್ಯಕ್ರಮಗಳಲ್ಲಿ ಗಂಗಾಧರ ಅವರು ಭಾಗವಹಿಸಿರುತ್ತಾರೆ.

ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಇವರನ್ನು ಡಾ| ವೀರೇಂದ್ರ ಹೆಗಡೆಯವರು ಸನ್ಮಾನಿಸಿದ್ದಾರೆ. ಅಲ್ಲದೆ ಅನೇಕ ಸಂಘ-ಸಂಸ್ಥೆಗಳಿಂದ ಗಂಗಾಧರ ಅವರು ಗೌರವಿಸಲ್ಪಟ್ಟಿದ್ದಾರೆ.

ಯಕ್ಷಗಾನ ಕಲಾವಿದ ಪುತ್ತೂರು ಗಂಗಾಧರ ಅವರ ಆತ್ಮಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಯಕ್ಷಾಭಿಮಾನಿಗಳೆಲ್ಲರ ಪ್ರಾರ್ಥನೆ.

ಮಾಹಿತಿ; ರವಿಶಂಕರ್ ವಳಕ್ಕುಂಜ

T20 ವಿಶ್ವಕಪ್ 2024 – ಭಾರತ ತಂಡದಲ್ಲಿ ರೋಹಿತ್ ಶರ್ಮ ನಾಯಕ, ಹಾರ್ದಿಕ್ ಪಾಂಡ್ಯ ಉಪನಾಯಕ, ಕೆ.ಎಲ್. ರಾಹುಲ್ ಇಲ್ಲ

ಜೂನ್ 1 ರಿಂದ ಪ್ರಾರಂಭವಾಗುವ. T20 ವಿಶ್ವಕಪ್ 2024: ಟೂರ್ನಮೆಂಟ್‌ಗೆ ರೋಹಿತ್ ಶರ್ಮಾ ಅವರು ನಾಯಕ ಮತ್ತು ಹಾರ್ದಿಕ್ ಪಾಂಡ್ಯ ಉಪನಾಯಕರಾಗಿರುತ್ತಾರೆ.

ರೋಹಿತ್ ಶರ್ಮಾ 15 ಜನರ T20 ವಿಶ್ವಕಪ್ ತಂಡವನ್ನು ಮುನ್ನಡೆಸಲಿದ್ದಾರೆ ಮತ್ತು ಹಾರ್ದಿಕ್ ಪಾಂಡ್ಯ ಅದರ ಉಪನಾಯಕರಾಗಿರುತ್ತಾರೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ (BCCI) ಮಂಗಳವಾರ, ಏಪ್ರಿಲ್ 30 ರಂದು ಹೇಳಿಕೆಯಲ್ಲಿ ತಿಳಿಸಿದೆ.

ಸಂಜು ಸ್ಯಾಮ್ಸನ್ ಮತ್ತು ಯುಜ್ವೇಂದ್ರ ಚಾಹಲ್ ಅವರ ಅದ್ಭುತ IPL ಯಶಸ್ಸಿಗೆ ಆಯ್ಕೆಯ ಬಹುಮಾನ ನೀಡಲಾಗಿದೆ. ಆದರೆ ತಂಡದಲ್ಲಿ ಕೆ.ಎಲ್ ರಾಹುಲ್ ಗೆ ಸ್ಥಾನ ನೀಡಲಾಗಿಲ್ಲ.

ನಿರೀಕ್ಷೆಯಂತೆ ವಿರಾಟ್ ಕೊಹ್ಲಿ, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರೊಂದಿಗೆ 15 ಜನರ ತಂಡವನ್ನು ಆಯ್ಕೆ ಮಾಡಲಾಯಿತು. ಐಪಿಎಲ್‌ನಲ್ಲಿ ಸ್ಪರ್ಧಾತ್ಮಕ ಕ್ರಮಕ್ಕೆ ವೀರೋಚಿತ ಹಿಂದಿರುಗಿದ ನಂತರ ವಿಕೆಟ್‌ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರನ್ನು T20I ತಂಡದಲ್ಲಿ ಸೇರಿಸಲಾಗಿದೆ.

ಟಿ20 ವಿಶ್ವಕಪ್‌ಗೆ ಭಾರತ ತಂಡ

ರೋಹಿತ್ ಶರ್ಮಾ (ಸಿ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್. ರಿಷಬ್ ಪಂತ್ (wk), ಸಂಜು ಸ್ಯಾಮ್ಸನ್ (WK), ಹಾರ್ದಿಕ್ ಪಾಂಡ್ಯ (vc), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್. ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಮೀಸಲು: ಶುಭಮನ್ ಗಿಲ್, ರಿಮ್ಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್

ಭಾರತವು ಜೂನ್ 5 ರಂದು ಐರ್ಲೆಂಡ್ ವಿರುದ್ಧ T20 ವಿಶ್ವಕಪ್ 2024 ಅಭಿಯಾನವನ್ನು ಪ್ರಾರಂಭಿಸುತ್ತದೆ. ನಂತರ ಅವರು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸುತ್ತದೆ.

ಯಕ್ಷಗಾನ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

ಬಡಗು ತಿಟ್ಟಿನ ಪ್ರಸಿದ್ಧ ಭಾಗವತ, ರಾಜ್ಯ ಪ್ರಶಸ್ತಿ ಪುರಸ್ಕೃತ ಸುಬ್ರಹ್ಮಣ್ಯ ಧಾರೇಶ್ವರ (68) ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.

ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಎಂ.ನಾರ್ಣಪ್ಪ ಉಪ್ಪೂರರ ಶಿಷ್ಯರಾದ ಇವರು,ಕಾಳಿಂಗ ನಾವಡರ ಒಡನಾಡಿಯಾಗಿ ರಂಗ ಪ್ರವೇಶಿಸಿ, ವಿವಿಧ ಮೇಳಗಳಲ್ಲಿ ಮುಖ್ಯವಾಗಿ ಪೆರ್ಡೂರು ಮೇಳದ ಪ್ರಧಾನ ಭಾಗವತರಾಗಿ ಒಟ್ಟೂ ಸುಮಾರು ನಾಲ್ಕುವರೆ ದಶಕಗಳ ಕಲಾ ಸೇವೆ ಗೈದಿದ್ದರು.

ತಮ್ಮ ಸುಮಧುರ ಕಂಠ,ಪರಂಪರೆಯ ಶೈಲಿ,ರಂಗ ತಂತ್ರದಿಂದ ಹಲವು ಪೌರಾಣಿಕ ಮತ್ತು ಹೊಸ ಪ್ರಸಂಗಗಳಿಗೆ ಜೀವ ತುಂಬಿದ್ದರು. ಯಕ್ಷಗಾನ ಕಲಾರಂಗ ‌ ಅವರಿಗೆ ನಾರ್ಣಪ್ಪ ಉಪ್ಪೂರರ ಪ್ರಶಸ್ತಿ ನೀಡಿ ಗೌರವಿಸಿತ್ತು.

ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್,ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.ಇಂದು ಸಂಜೆ ಕಿರಿಮಂಜೇಶ್ವರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.