Saturday, August 29, 2026
Home Blog Page 47

ಗ್ಯಾಂಗ್ ಸ್ಟರ್ ನ ಜೊತೆ ಓಡಿಹೋದ ಐಎಎಸ್ ಅಧಿಕಾರಿಯ ಪತ್ನಿ ಮನೆಗೆ ವಾಪಾಸ್ – ಆತ್ಮಹತ್ಯೆಯಿಂದ ಸಾವು – ಶವವನ್ನು ತೆಗೆದುಕೊಳ್ಳಲು ನಿರಾಕರಿಸಿದ ಪತಿ

ಗ್ಯಾಂಗ್ ಸ್ಟರ್ ನ ಜೊತೆ ಓಡಿಹೋಗಿದ್ದ ಮಹಿಳೆಯ ಶವವನ್ನು ತೆಗೆದುಕೊಳ್ಳಲು ಆಕೆಯ ಪತಿ ನಿರಾಕರಿಸಿದ್ದಾರೆ.

ಅವಳು ಒಂಬತ್ತು ತಿಂಗಳ ಹಿಂದೆ ದರೋಡೆಕೋರನ ಜೊತೆ ಓಡಿಹೋದಳು. ಶನಿವಾರ, 45 ವರ್ಷದ ಮಹಿಳೆ ಗುಜರಾತ್‌ನಲ್ಲಿರುವ ತನ್ನ ಐಎಎಸ್ ಗಂಡನ ಮನೆಗೆ ಹಿಂದಿರುಗಿದಳು, ಅಲ್ಲಿ ಅವಳು ಆತ್ಮಹತ್ಯೆಗೆ ಯತ್ನಿಸಿದಳು. ಮಹಿಳೆ ಸೂರ್ಯ ಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಒಂದು ದಿನದ ನಂತರ ಭಾನುವಾರ ಸಾವನ್ನಪ್ಪಿದಳು.

ಗಾಂಧಿನಗರದ ಸೆಕ್ಟರ್ 19 ರಲ್ಲಿ ಈ ಘಟನೆ ವರದಿಯಾಗಿದೆ.

ಗುಜರಾತ್ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಯಾಗಿರುವ ಪತಿ ರಂಜೀತ್ ಕುಮಾರ್, ಮಕ್ಕಳ ಅಪಹರಣ ಪ್ರಕರಣದಲ್ಲಿ ಭಾಗಿಯಾಗಿರುವ ಪತ್ನಿಯನ್ನು ಮನೆಗೆ ಬಿಡಬಾರದು ಎಂದು ಗೃಹ ಸಿಬ್ಬಂದಿಗೆ ಸೂಚನೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಧುರೈನಲ್ಲಿ 14 ವರ್ಷದ ಬಾಲಕನ ಅಪಹರಣ ಪ್ರಕರಣದಲ್ಲಿ ತಮಿಳುನಾಡು ಪೊಲೀಸರಿಂದ ಬಂಧನದಿಂದ ತಪ್ಪಿಸಿಕೊಳ್ಳಲು ಸೂರ್ಯ ತನ್ನ ಗಂಡನ ಮನೆಗೆ ಹೋಗಿರಬಹುದು ಎಂದು ಹೇಳಲಾಗುತ್ತದೆ.

ಶ್ರೀ ಕುಮಾರ್ ಅವರ ವಕೀಲ ಹಿತೇಶ್ ಗುಪ್ತಾ ಪ್ರಕಾರ, ದಂಪತಿಗಳು 2023 ರಲ್ಲಿ ಬೇರ್ಪಟ್ಟರು ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
“ರಂಜಿತ್ ಕುಮಾರ್ ಶನಿವಾರ ಸೂರ್ಯ ಅವರೊಂದಿಗೆ ವಿಚ್ಛೇದನದ ಅರ್ಜಿಯನ್ನು ಅಂತಿಮಗೊಳಿಸಲು ಹೊರಟಿದ್ದರು. ಮನೆಗೆ ಅವಕಾಶ ನೀಡದಿದ್ದಕ್ಕಾಗಿ ಅಸಮಾಧಾನಗೊಂಡ ಆಕೆ ವಿಷ ಸೇವಿಸಿ 108 (ಅಂಬ್ಯುಲೆನ್ಸ್ ಸಹಾಯವಾಣಿ ಸಂಖ್ಯೆ) ಗೆ ಕರೆ ಮಾಡಿದ್ದಾಳೆ” ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ತಮಿಳಿನಲ್ಲಿ ಸೂಸೈಡ್ ನೋಟ್ ಅನ್ನು ಸಹ ಕಂಡುಕೊಂಡರು ಆದರೆ ವಿವರಗಳನ್ನು ನೀಡಲು ನಿರಾಕರಿಸಿದರು
ವದಂತಿಯ ದರೋಡೆಕೋರ ಗೆಳೆಯ, ಮಹಾರಾಜ ಮತ್ತು ಆತನ ಸಹಾಯಕ ಸೆಂಥಿಲ್ ಕುಮಾರ್ ಜೊತೆಗಿನ ಪ್ರಕರಣದಲ್ಲಿ ಮಹಿಳೆಯ ಹೆಸರು ಕಾಣಿಸಿಕೊಂಡಿದೆ. ಜುಲೈ 11 ರಂದು ಮಗುವಿನ ತಾಯಿಯೊಂದಿಗಿನ ಹಣಕಾಸಿನ ವಿವಾದದ ಮೇಲೆ ಹುಡುಗನನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದೆ. ಅವರು ₹ 2 ಕೋಟಿ ವಿಮೋಚನೆಗೆ ಬೇಡಿಕೆ ಇಟ್ಟಿದ್ದರು

ಆದರೆ ಮಧುರೈ ಪೊಲೀಸರು ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೂರ್ಯ ಸೇರಿದಂತೆ ಭಾಗಿಯಾದವರಿಗಾಗಿ ಪೊಲೀಸರು ಶೋಧ ನಡೆಸಿದ್ದರು. ಇದರಿಂದ ಹೆದರಿದ ಆಕೆ ಪತಿಯ ಮನೆಗೆ ಬಂದಿದ್ದಳು. ಆದರೆ ಸಿಬ್ಬಂದಿ ಆಕೆಯನ್ನು ಮನೆಯೊಳಗೆ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ.

ಸಾಂಸ್ಕೃತಿಕ ಉತ್ಸವ ಸಿರಿಬಾಗಿಲು ಯಕ್ಷವೈಭವ ಉದ್ಘಾಟನೆ


ಸಿರಿಬಾಗಿಲು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಸಂಸ್ಥೆಯು ಕರ್ನಾಟಕ ಸಂಭ್ರಮ 50ರ ಸವಿನೆನಪು

2026-24ನೇ ಸಾಲಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಸಹಯೋಗದೊಂದಿಗೆ ಕಲಾಪೋಷಕರ ಸಹಕಾರದೊಂದಿಗೆ ನಿರಂತರ ನಾಲ್ಕು ದಿನಗಳ ಕಾಲ ನಡೆಯಲಿರುವ ಸಾಂಸ್ಕೃತಿಕ ಉತ್ಸವ “ಸಿರಿಬಾಗಿಲು ಯಕ್ಷವೈಭವ”ವನ್ನು ಎಡನೀರು ಸಂಸ್ಥಾನದ ಶೀಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಆಶೀರ್ವದಿಸಿ ಮಾತನಾಡಿದ ಶ್ರೀಗಳು ”ಸಿರಿಬಾಗಿಲು ಪ್ರತಿಷ್ಠಾನವು ಕಾಸರಗೋಡಿನಲ್ಲಿ ಯಕ್ಷಗಾನ , ಕನ್ನಡ ಭಾಷೆ ಹಾಗೂ ಸಂಸ್ಖೃತಿಯ ಉಳಿವಿಗೆ ನೀಡುತ್ತಿರುವ ಕೊಡುಗೆ ಅಪಾರವಾದುದು. ಮೂವತ್ತಕ್ಕೂ ಹೆಚ್ಚು ಹವ್ಯಾಸಿ ತಂಡಗಳಿಗೆ ಯಕ್ಷಗಾನ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುತ್ತಿರುವುದು ಅತ್ಯುತ್ತಮ ಕೆಲಸ” ಎಂದು ಶ್ಲಾಘಿಸಿದರು.

ಸಮಾರಂಭದಲ್ಲಿ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಗಡಿಪ್ರದೇಶ ಆಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ “ ಕನ್ನಡದ ಶುದ್ಧಭಾಷೆಯನ್ನು ಉಳಿಸುವಲ್ಲಿ ಯಕ್ಷಗಾನದ ಪಾತ್ರ ಮಹತ್ತರವಾದದ್ದು, ನಮ್ಮ ಪುರಾಣ ಕತೆಗಳು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ಯಕ್ಷಗಾನ ಮಾಡುತ್ತಿದೆ. ಗಡಿನಾಡು ಕಾಸರಗೋಡಿನಲ್ಲಿ ಮಲಯಾಳಿ ಸೆರಗಲ್ಲಿ ಕನ್ನಡ ಉಳಿಸುವ , ಯಕ್ಷಗಾನ ಬೆಳೆಸುವಲ್ಲಿ ಸಿರಿಬಾಗಿಲು ಪ್ರತಿಷ್ಠಾನ ದೊಡ್ಡ ಸಾಧನೆಮಾಡುತ್ತಿದೆ” ಎಂದು ಅಭಿಪ್ರಾಯಪಟ್ಟರು.

ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕಲಾಪೋಷಕ ಹಾಗೂ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರು ಪ್ರತಿಷ್ಠಾನದ ಗೌರವ ಸದಸ್ಯತ್ತವವನ್ನು ಶ್ರೀಗಳ ಕೈಯಿಂದ ಸ್ವೀಕರಿಸಿ ಮಾತನಾಡುತ್ತಾ ಓರ್ವ ವೃತ್ತಿಕಲಾವಿದನಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಸಾಧನೆ ಸೇವೆ ಉನ್ನತವಾದ್ದದು , ಉತ್ತಮ ಭಾಗವತರಾಗಿ, ಸಂಘಟಕರಾಗಿ, ಕಲಾಪೋಷಕರಾಗಿ ರಾಮಕೃಷ್ಣಮಯ್ಯರ ಕಾರ್ಯಕ್ಕೆ ಸಮಾಜ ತನು ಮನ ಧನಗಳಿಂದ ಪ್ರೋತ್ಸಾಹಿಸಬೇಕಿದೆ” ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಗಡಿಪ್ರದೇಶ ಆಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್‌ ಮತ್ತಿಹಳ್ಳಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು. ಕರ್ನಾಟಕ ಗಡಿಪ್ರದೇಶ ಆಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯ ಕಟ್ಟೆ ಭಾಗವಹಿಸಿದ್ದರು.
ಸಿರಿಬಾಗಿಲು ಪ್ರತಿಷ್ಠಾನವು ಮುಂದಿನ ಬೆಳವಣಿಗೆಗಾಗಿ ಸದಸ್ಯತ್ವ ನೋಂದಾವಣಾ ಅಭಿಯಾನವನ್ನು ಆರಂಭಿಸಿದೆ.

ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಸ್ವಾಗತಿಸಿ ಜಗದೀಶಕೂಡ್ಲು ನಿರ್ವಹಿಸಿ ಪ್ರಸನ್ನ ಕಾರಂತ ದೇಶಮಂಗಲ ವಂದಿಸಿದರು.

ರಾಮಾಯಣದ ಏಳು ಕಾಂಡಗಳು – ಏಳು ದಿನಗಳಲ್ಲಿ ದಿನಕ್ಕೊಂದು ಯಕ್ಷಗಾನ ಪ್ರದರ್ಶನ – ಯಾವ ದಿನ ಯಾವ ಪ್ರಸಂಗ? ಇಲ್ಲಿದೆ ವಿವರ

ಯಕ್ಷಗಾನ ಪ್ರಿಯರಿಗೆ ಒಂದು ಅಪೂರ್ವ ಅವಕಾಶ. ಸತತ ಏಳು ದಿನಗಳ ಕಾಲ ಯಕ್ಷಗಾನ ಪ್ರದರ್ಶನಗಳನ್ನು ಸವಿಯುವ ಭಾಗ್ಯ.

ಹೌದು. ಇದು ನಿಜ. ದಿನಾಂಕ 22.07. 2024 ರಿಂದ 28.07.2024ರ ವರೆಗೆ ಸಂಪೂರ್ಣ ಶ್ರೀ ರಾಮಾಯಣ ದರ್ಶನಂ ಎಂಬ ಪುಣ್ಯ ಕಥಾಭಾಗದ ಯಕ್ಷಗಾನ ಬಯಲಾಟ ಏಳು ದಿನಗಳಲ್ಲಿ ನಡೆಯಲಿದೆ.

ಶ್ರೀ ರಾಮ ಕ್ಷೇತ್ರ ಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯದ ಪ್ರಯುಕ್ತ ರಾಮಾಯಣದ ಏಳು ಕಾಂಡದ ಯಕ್ಷಗಾನ ಪ್ರದರ್ಶನಗಳು ಈ ಏಳು ದಿನಗಳಲ್ಲಿ ನಡೆಯಲಿದೆ.

ಪ್ರಸಿದ್ಧ ಕಲಾವಿದರ ಗಡಣದಿಂದಲೇ ಪ್ರದರ್ಶಿಸಲ್ಪಡುವ ಈ ಏಳು ದಿನಗಳ ಯಕ್ಷಗಾನ ಬಯಲಾಟದಲ್ಲಿ ಪಾತ್ರಧಾರಿಗಳ ವಿವರ ಮತ್ತು ಪ್ರಸಂಗದ ವಿವರಗಳಿಗೆ ಮೇಲಿನ ಚಿತ್ರವನ್ನು ನೋಡಬಹುದು.

ಸಾಂಸ್ಕೃತಿಕ ಉತ್ಸವ – ಸಿರಿಬಾಗಿಲು ಯಕ್ಷ ವೈಭವ – ಪ್ರಶಸ್ತಿ ಪ್ರದಾನ

ತೆಂಕುತಿಟ್ಟು ‘ಯಕ್ಷಗಾನ ಪಿತಾಮಹ’ ಪಾರ್ತಿಸುಬ್ಬನ ಜನ್ಮನಾಡು, ಕುಂಬ್ಳೆ ಸೀಮೆಯ ಸಿರಿಬಾಗಿಲಿನಲ್ಲಿ ಪ್ರಪ್ರಥಮ ಬಾರಿಗೆ ಹವ್ಯಾಸಿ ಕಲಾತಂಡಗಳ ಚಾರಿತ್ರಿಕ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ, ಭರತನಾಟ್ಯ, ಕನ್ನಡ ನಾಡಗೀತೆ ,ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ಇದೇ ತಿಂಗಳ 17,18,19 ,20ರಂದು ಕೇರಳ ರಾಜ್ಯದ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಕನ್ನಡಪರ ಹಾಗೂ ಸಾಂಸ್ಕೃತಿಕ ವಲಯದ ಹಲವು ಅಧ್ಯಯನ ಯೋಗ್ಯ ಚಟುವಟಿಕೆಗಳಿಗೆ ತನ್ನನ್ನು ಅರ್ಪಿಸಿಕೊಂಡಿರುವ ಪ್ರತಿಷ್ಠಾನವು,
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ,ಕರ್ನಾಟಕ ಸರಕಾರ ಇವರ ಸಹಯೋಗದೊಂದಿಗೆ ‘ಕರ್ನಾಟಕ ಸಂಭ್ರಮ – 50 ಸವಿ ನೆನಪು -2023-24’ ಮತ್ತು
ಕಲಾಪೋಷಕರ ಸಹಕಾರದೊಂದಿಗೆ ನಡೆಯಲಿರುವುದು.

ಪರಮಪೂಜ್ಯ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು 17ನೇ ತಾರೀಕು ಬುಧವಾರ ಬೆಳಗ್ಗೆ 10.30 ಕ್ಕೆ ಈ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಸೋಮಣ್ಣ ಬೇವಿನಮರದ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.

ಯಕ್ಷಗಾನ ಕಲಾಪೋಷಕರು, ಸಂಘಟಕರು ಆಗಿರುವ ಹೈದರಾಬಾದಿನ ಹೋಟೆಲ್ ಉದ್ಯಮಿ ಶ್ರೀ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಶ್ರೀ ಪ್ರಕಾಶ್ ಮತ್ತೀಹಳ್ಳಿ, ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ರಾಜೇಶ್, ಗಡಿಪ್ರದೇಶ ಪ್ರಾಧಿಕಾರದ ಸದಸ್ಯ ಎಂ. ಆರ್. ಸುಬ್ಬಯ್ಯಕಟ್ಟೆ, ಯಕ್ಷಗಾನ ಅಕಾಡೆಮಿ ಸದಸ್ಯ ಶ್ರೀ ಸತೀಶ ಅಡಪ ಸಂಕಬೈಲು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಾಲ್ಕು ದಿನಗಳಲ್ಲಿ ಐದು ಜಿಲ್ಲೆಗಳಿಂದ ತೆಂಕುತಿಟ್ಟು ಹಾಗೂ ಬಡಗುತಿಟ್ಟಿನ 26 ಹವ್ಯಾಸಿ ಯಕ್ಷಗಾನ ತಂಡಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಸ್ಥಳೀಯ ಯುವ ಪ್ರತಿಭೆಗಳ ಭರತನಾಟ್ಯ, ಕನ್ನಡ ಭಾವಗೀತೆಗಳ ಗಾಯನ ಈ ಕಾರ್ಯಕ್ರಮದ ಜೊತೆ ನಡೆಯಲಿದೆ.

ಹಾಗೆಯೇ 20 ನೇ ತಾರೀಕು ಶನಿವಾರದಂದು ಮಧ್ಯಾಹ್ನ 2 ಗಂಟೆಯಿಂದ ಸಿರಿಬಾಗಿಲು ಪ್ರತಿಷ್ಠಾನ ಪ್ರಕಾಶಿಸಿದ 7 ಗ್ರಂಥಗಳ ಕುರಿತಾದ ವಿಚಾರ ಸಂಕಿರಣ ನಡೆಯಲಿದೆ. ಇದರಲ್ಲಿ ಶ್ರೀಧರ ಡಿ. ಎಸ್, ರಾಧಾಕೃಷ್ಣ ಉಳಿಯತ್ತಡ್ಕ, ರಾಧಾಕೃಷ್ಣ ಕಲ್ಚರ್, ಲಕ್ಷ್ಮಿ ಮಚ್ಚಿನ, ಡಾ. ನಾಗವೇಣಿ ಮಂಚಿ, ಕುಮಾರ ಸುಬ್ರಮಣ್ಯ ಮುಳಿಯಾಲ ಮತ್ತು ರಾಘವೇಂದ್ರ ಉಡುಪ ನೇರಳೆಕಟ್ಟೆ ಪುಸ್ತಕಗಳ ಬಗ್ಗೆ ವಿಮರ್ಶೆ ನಡೆಸಿಕೊಡಲಿದ್ದಾರೆ.

ಸಮಾರೋಪ ಸಮಾರಂಭ ಸಂಜೆ 4 ಗಂಟೆಗೆ ನಡೆಯಲಿದ್ದು, ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು, ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆಯೂರು ಮಠ ಉಪ್ಪಳ ಆಶೀರ್ವಚನ ನೀಡಲಿದ್ದಾರೆ. ಈ ಸಭೆಯ ಅಧ್ಯಕ್ಷತೆಯನ್ನು ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವರವರು ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಯಕ್ಷಗಾನ ಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಕಾರ್ಯದರ್ಶಿ ಶ್ರೀ ರಾಜಶೇಖರ ಹೆಬ್ಬಾರ್ ಐರೋಡಿ, ಶ್ರೀ ಕೆ. ಆರ್. ಆಳ್ವ ಕಂಬಾರು, ಶ್ರೀ ಟಿ. ಎಮ್. ಸತೀಶ ಬೆಂಗಳೂರು, ಅಗರಿ ಎಂಟರ್ಪ್ರೈಸಸ್ ಮಾಲಕ ಶ್ರೀ ಅಗರಿ ರಾಘವೇಂದ್ರರಾವ್, ಮಾಂಡವಿ ಮೋಟರ್ಸ್ ಮಂಗಳೂರುನ ವ್ಯವಸ್ಥಾಪಕ ಶಶಿಧರ ಕಾರಂತ , ಕನ್ನಡ ಸಾಹಿತ್ಯ ಪರಿಷತ್ತು ಗಡಿನಾಡು ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತೋಡಿ, ಕರ್ನಾಟಕ ಬ್ಯಾಂಕ್ ನ ಶ್ರೀ ಸುಜಿತ್ ಕುಮಾರ, ಪುಳ್ಕೂರು ಮಹಾದೇವ ದೇವಸ್ಥಾನದ ಅಧ್ಯಕ್ಷ ಶ್ರೀ ಶೀನ ಶೆಟ್ಟಿ ಕಜೆ ಮುಂತಾದವರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಸಂಗಕರ್ತ ಶ್ರೀಧರ ಡಿ.ಎಸ್, ಬಹುಭಾಷಾ ವಿದ್ವಾಂಸ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ, ಗಡಿನಾಡ ಸಂಗೀತ ವಿದ್ವಾನ್ ಶ್ರೀಮತಿ ಶಕುಂತಲಾ ಕೆ. ಕುಂಚಿನಡ್ಕ ಇವರಿಗೆ ಸಿರಿ ಬಾಗಿಲು ವೆಂಕಪ್ಪಯ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ. ಇವರ ಅಭಿನಂದನಾ ಭಾಷಣವನ್ನು ಹಿರಿಯ ವಿದ್ವಾಂಸ ಶ್ರೀ ಜಿ. ಕೆ. ಭಟ್ ಸೇರಾಜೆ ಯವರು ನೆರವೇರಿಸಲಿದ್ದಾರೆ. ಪ್ರತಿಷ್ಠಾನದ ಬೆಳವಣಿಗೆಗೆ ಸಹಕರಿಸಿದ ಗಣ್ಯರಿಗೆ ಗೌರವಾರ್ಪಣೆ ನಡೆಯಲಿದೆ.

ಈ ಎಲ್ಲಾ ಕಾರ್ಯಕ್ರಮಗಳಿಗೆ ಹೆಚ್ಚಿನ ರೀತಿಯಲ್ಲಿ ಕಲಾಪೋಷಕರು, ಕನ್ನಡ ಸಾಹಿತ್ಯ ಪ್ರೇಮಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ, ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರು ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

ರಾಮಕೃಷ್ಣ ಮಯ್ಯ ಸಿರಿಬಾಗಿಲು
ಯಕ್ಷಗಾನ ಭಾಗವತ, ಅದ್ಯಕ್ಷರು ಸಿರಿಬಾಗಿಲು ಪ್ರತಿಷ್ಠಾನ, ಡಾ. ಶ್ರತಕೀರ್ತಿ ರಾಜ್ ಉಜಿರೆ. ಉಪನ್ಯಾಸಕರು, ಯಕ್ಷಗಾನ ಕಲಾವಿದರು, ಕಟೀಲು ಮೇಳ, ಶಶಿಧರ ಕಾರಂತ, ಮೆನೇಜರ್, ಮಾಂಡೋವಿ ಮೋಟಾರ್ಸ್, ಹಂಪನಕಟ್ಟೆ. ಮಂಗಳೂರು ಮತ್ತು ಜಗದೀಶ ಕೆ. ಕೂಡ್ಲು. ಸದಸ್ಯರು. ಸಿರಿಬಾಗಿಲು ಪ್ರತಿಷ್ಠಾನ ಇವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

5 ಲಕ್ಷ್ಮಣ ಕುಮಾರ್ ಮರಕಡ

ಇಂದು ದಿನಾಂಕ 15.07.2024 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಹಾಗೂ ಪ.ಪೂ ಕಾಲೇಜುಗಳಿಗೆ ಇಂದು, ದಿನಾಂಕ ಜುಲೈ 15 ಸೋಮವಾರ ದ.ಕ ಜಿಲ್ಲಾಧಿಕಾರಿ ರಜೆ ಘೋಷಿಣೆ ಮಾಡಿ ಆದೇಶ ನೀಡಿದರು.

ಇಂದು ದಿನಾಂಕ 15.07 2024ರ ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.


ಭಾರೀ ಮಳೆಯ ಸಂಭಾವ್ಯತೆ ಇರುವುದರಿಂದ ಹಾಗೂ ಸಂಭಾವ್ಯ ಭೂಕುಸಿತಗಳನ್ನು ಗಮನದಲ್ಲಿಟ್ಟುಕೊಂಡು ಈ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಛೇರಿಯ ಪ್ರಕಟಣೆಯಿಂದ ತಿಳಿದುಬಂದಿದೆ.

ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ ನಿಧನ.

ಬಡಗು ತಿಟ್ಟಿನ ಪ್ರಸಿದ್ಧ ಯಕ್ಷಗಾನ ಕಲಾವಿದ ಕಪ್ಪೆಕೆರೆ ಮಹಾದೇವ ಹೆಗಡೆ (75) ನಿನ್ನೆ(9-7-2024)ರಾತ್ರಿ ಹೊನ್ನಾವರದಲ್ಲಿ ನಿಧನರಾದರು.

ಅವರು ಪತ್ನಿ ನಾಲ್ವರು ಪುತ್ರರನ್ನು ಅಗಲಿದ್ದಾರೆ. ಪ್ರಸಿದ್ಧ ಭಾಗವತರಾದ ಅಣ್ಣ ಕಪ್ಪೆಕೆರೆ ಸುಬ್ರಾಯ ಹೆಗಡೆಯವರಲ್ಲಿ ಯಕ್ಷಗಾನ ಕಲಿತು, ಕೆರೆಮನೆ ಮಹಾಬಲ ಹೆಗಡೆಯವರ ಗರಡಿಯಲ್ಲಿ ಶ್ರೇಷ್ಠ ಕಲಾವಿದರಾಗಿ ರೂಪುಗೊಂಡಿದ್ದರು.

ಗುಂಡುಬಾಳ, ಇಡಗುಂಜಿ, ಬಚ್ಚಗಾರು, ಶಿರಸಿ,ಪಂಚಲಿಂಗ, ಮಂದಾರ್ತಿ ಮೇಳಗಳಲ್ಲಿ ಐದು ದಶಕಗಳ ಕಲಾ ಸೇವೆ ಗೈದಿದ್ದರು. ಶಿರಸಿ ಮೇಳದಲ್ಲಿ ವ್ಯವಸ್ಥಾಪಕರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಖಳ ಮತ್ತು ಸಾತ್ವಿಕ ಎರಡೂ ರೀತಿಯ ಪಾತ್ರಗಳನ್ನೂ ಸಮರ್ಥವಾಗಿ ಪ್ರಸ್ತುತ ಪಡಿಸುತ್ತಾ ಕಲಾಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಸರಳ ಸಜ್ಜನಿಕೆಯ ಕಲಾವಿದರು ಎಂದೇ ಮಾನಿತರಾಗಿದ್ದ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ನಾಳೆ ದಿನಾಂಕ 06.07.2024 ರಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

ನಾಳೆ ದಿನಾಂಕ 06.07 2024ರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಭಾರೀ ಮಳೆಯ ಸಂಭಾವ್ಯತೆ ಇರುವುದರಿಂದ ಹಾಗೂ ಸಂಭಾವ್ಯ ಭೂಕುಸಿತಗಳನ್ನು ಗಮನದಲ್ಲಿಟ್ಟುಕೊಂಡು ಈ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಛೇರಿಯ ಪ್ರಕಟಣೆಯಿಂದ ತಿಳಿದುಬಂದಿದೆ.

ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಖಾಸಗಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ನಾಳೆ ದಿನಾಂಕ 06.07.2024ರಂದು ರಜೆ ಘೋಷಣೆ ಮಾಡಲಾಗಿದೆ

ಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ಇನ್ನಿಲ್ಲ – ಕುಂಬಳೆ ಶ್ರೀಧರ ರಾಯರ ಕಲಾಜೀವನದ ಮೇಲೊಂದು ಇಣುಕು ನೋಟ

ಖ್ಯಾತ ಯಕ್ಷಗಾನ ವೇಷಧಾರಿ ಕುಂಬಳೆ ಶ್ರೀಧರ ರಾವ್ ನಿಧನರಾಗಿದ್ದಾರೆ. ಅವರು ಇಂದು ಹೃದಯಾಘಾತದಿಂದ ನಿಧನರಾದರು. ಅವರು ತನ್ನ ಕಲಾಜೀವನದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ಕಲಾವಿದ ಮಾತ್ರವಲ್ಲದೆ ಅಪರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಪುತ್ತೂರು ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ಶಾಂತಿನಗರದ ಬೇರಿಕೆ ಎಂಬಲ್ಲಿ ವಾಸವಾಗಿದ್ದ ಶ್ರೀಧರ ರಾಯರು ಇಂದು ಬೆಳಿಗ್ಗೆ ತೀವ್ರ ಎದೆನೋವಿನಿಂದ ಬಳಲುತ್ತಿದ್ದರು. ತಕ್ಷಣ ಅವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಕೊನೆಯುಸಿರೆಳೆದರು. ಅವರು ಪತ್ನಿ, ಮೂವರು ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕುಂಬಳೆ ಶ್ರೀಧರ ರಾಯರ ಕಲಾಜೀವನದ ಮೇಲೊಂದು ಇಣುಕು ನೋಟ

ಶ್ರೀ ಧರ್ಮಸ್ಥಳ ಮೇಳದ ರಂಗಸ್ಥಳ. ಕಡತೋಕ ಮಂಜುನಾಥ ಭಾಗವತರ ಹಾಡುಗಾರಿಕೆ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆವಾದನ. ಕುಂಬಳೆ ಸುಂದರ ರಾವ್, ವಿಟ್ಲ ಜೋಷಿ, ಪುತ್ತೂರು ನಾರಾಯಣ ಹೆಗ್ಡೆ, ಪಾತಾಳ ವೆಂಕಟರಮಣ ಭಟ್, ಎಂಪೆಕಟ್ಟೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಚಂದ್ರಗಿರಿ ಅಂಬು, ಪಕಳಕುಂಜ ಕೃಷ್ಣ ನಾಯ್ಕ, ನಯನ ಕುಮಾರ್, ಕಡಬ ಸಾಂತಪ್ಪ, ಬೆಳಾಲು ಧರ್ಣಪ್ಪ ನಾಯ್ಕ, ಬೆಳಾಲು ಶೀನ ಆಚಾರಿ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಲ್ಲಿ ಕುಂಬಳೆ ಶ್ರೀಧರ ರಾಯರು ಸ್ತ್ರೀ ಪಾತ್ರಗಳನ್ನು ಮಾಡುತ್ತಾ ಬೆಳೆದು ಬಂದರು.

ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ, ಮಹಾಕಲಿ ಮಗದೇಂದ್ರ ಪ್ರಸಂಗದ ವಜ್ರಲೇಖೆ ಮೊದಲಾದ ಕಸೆ ಸ್ತ್ರೀವೇಷಗಳನ್ನೂ ಮಾಡಿ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು. ಸ್ತ್ರೀ ಪಾತ್ರಗಳಿಗೆ ಜೀವತುಂಬಿದ ಕುಂಬಳೆ ಶ್ರೀಧರ ರಾಯರು ಅದೇ ರಂಗಸ್ಥಳದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಅಡೂರು ಗಣೇಶ ರಾಯರೇ ಮೊದಲಾದವರ ಹಿಮ್ಮೇಳದಲ್ಲಿ ಪುರುಷ ಪಾತ್ರಗಳಲ್ಲಿಯೂ ಮಿಂಚಿದ್ದಾರೆ.

ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪು ಕುಂಬಳೆ ಶ್ರೀಧರ ರಾಯರ ಹುಟ್ಟೂರು. 1948ನೇ ಇಸವಿ ಜುಲೈ 23ರಂದು ಮಾಲಿಂಗ ಮುಕಾರಿ ಮತ್ತು ಕಾವೇರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಸೂರಂಬೈಲು ಸರಕಾರೀ ಶಾಲೆಯಲ್ಲಿ 4ನೇ ತರಗತಿಯ ವರೇಗೆ ವಿದ್ಯಾಭ್ಯಾಸ. ಎಳವೆಯಲ್ಲಿ ಬಡತನದ ಬೇಗೆ. ಹೊಟ್ಟೆಗೆ ಬಟ್ಟೆಗೆ ಇಲ್ಲದೆ ಕಷ್ಟವನ್ನನುಭವಿಸಿದ ದಿನಗಳು. ಶಾಲೆ ಅನಿವಾರ್ಯವಾಗಿ ಬಿಡಬೇಕಾಯಿತು.

ಪ್ರಸಿದ್ಧ ಕಲಾವಿದರಾದ ಶ್ರೀ ಕುಂಬಳೆ ಸುಂದರ ರಾಯರ ತೀರ್ಥರೂಪರು ಶ್ರೀ ಕುಂಞಕಣ್ಣ ಚೆಟ್ಟಿಯಾರರಿಂದ ಬಟ್ಟೆ ನೇಯುವ ಕೆಲಸವನ್ನು ಶ್ರೀಧರ ರಾಯರು ಕಲಿತರು. ಜತೆಗೆ ಕುಂಬಳೆ ಚಂದ್ರಶೇಖರರಿಂದ (ಕುಂಬಳೆ ಚಂದು) ಮತ್ತು ಕುಂಬಳೆ ಹಾಸ್ಯಗಾರ ಕಮಲಾಕ್ಷ ನಾಯಕ್ (ವಿಟ್ಲ ಜೋಯಿಸರ ಸಮಕಾಲೀನರು) ರಿಂದ ಯಕ್ಷಗಾನ ನಾಟ್ಯವನ್ನು ಅಭ್ಯಸಿಸಿದರು. ಅದೇ ಸಮಯದಲ್ಲಿ (1962) ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳ ಕುಂಬಳೆಗೆ ಬಂದಿದ್ದಾಗ ಕುಂಬಳೆ ಶ್ರೀಧರ ರಾಯರು ಬಾಲಕಲಾವಿದನಾಗಿ ಸೇರ್ಪಡೆಗೊಂಡರು.

ಯಕ್ಷಗಾನದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ಶಿಷ್ಯನಾಗಿ ಬೆಳೆದರು. ಮುಂದಿನ ವರ್ಷಗಳಲ್ಲಿ ನೂಜಿಪ್ಪಾಡಿ ಶಂಕರನಾರಾಯಣಪ್ಪಯ್ಯ ಯಜಮಾನಿಕೆಯ ಕುತ್ಯಾಳ ಗೋಪಾಲಕೃಷ್ಣ ಮೇಳದಲ್ಲಿ ಶೇಣಿಯವರ ಒಡನಾಟದಲ್ಲಿ ಕಲಾವಿದನಾಗಿ ಕಾಣಿಸಿಕೊಂಡರು.

ಎರಡು ವರ್ಷ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯವನ್ನು ಮಾಡಿ ನಂತರ ಪೆರುವೊಡಿ ನಾರಾಯಣ ಭಟ್ಟರ ಸಂಚಾಲಕತ್ವದ ಮುಲ್ಕಿ ಮೇಳ ಮತ್ತೆ ಕೂಡ್ಲು ಮೇಳದಲ್ಲಿ ಎರಡು ವರ್ಷ ತಿರುಗಾಟ ನಡೆಸಿದರು. 1970ರಲ್ಲಿ ಮತ್ತೆ ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳಕ್ಕೆ.

ಮುಂದಿನ ಮೂರು ವರ್ಷಗಳ ಕಾಲ ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸಿ ನಂತರ 42 ವರುಷಗಳಿಗೂ ಹೆಚ್ಚು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ| ವೀರೇಂದ್ರ ಹೆಗಡೆಯವರು ಮತ್ತು ಡಿ. ಹರ್ಷೇಂದ್ರ ಕುಮಾರರ ಆಶೀರ್ವಾದದಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡಿದರು. ಹೀಗೆ ಕಲಾವಿದನಾಗಿ ಕುಂಬಳೆ ಶ್ರೀಧರ ರಾಯರದ್ದು 55 ವರುಷಗಳಿಗೂ ಮಿಕ್ಕಿದ ತಿರುಗಾಟ.


ಶೇಣಿ ಗೋಪಾಲಕೃಷ್ಣರಿಂದಲೇ ನಾನು ಮಾತುಗಾರಿಕೆ ಕಲಿತೆ. ಅವರು ಆಶೀರ್ವದಿಸಿದರು. ಅವರಿಂದಾಗಿಯೇ ನನಗೆ ಎಡನೀರು ಶ್ರೀಮಠ ಹತ್ತಿರವಾಯಿತು. ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ನನ್ನನ್ನು ಆಶೀರ್ವದಿಸಿದರು. ನಾನು ಶ್ರೀಮಠದ, ಶ್ರೀಗಳವರ ಭಕ್ತನೂ ಹೌದು ಶಿಷ್ಯನೂ ಹೌದು ಎಂದು ಹೇಳುತ್ತಿದ್ದ ಕುಂಬಳೆ ಶ್ರೀಧರ ರಾಯರು ಕಲಾವಿದನಾಗಿ ಶ್ರೀಮಠದ ಯಕ್ಷಗಾನ ಕಾರ್ಯ ಕ್ರಮಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದರು.

ಕಡತೋಕಾ, ಅಗರಿ, ಮಂಡೆಚ್ಚರು, ಹೊಳ್ಳರು, ಮಯ್ಯರ ಭಾಗವತಿಕೆಗೆ ವೇಷಗಳನ್ನು ಮಾಡಿ, ಶೇಣಿಯವರೊಂದಿಗೆ ಮಂಡೋದರಿ, ತಾರೆ ಮೊದಲಾದ ಪಾತ್ರಗಳನ್ನು ಮಾಡಿ, ಕುಂಬಳೆ ಸುಂದರ ರಾಯರ ಜತೆ ಲಕ್ಷ್ಮಿ, ಸತ್ಯಭಾಮೆ, ಕೆ. ಗೋವಿಂದ ಭಟ್ಟರ ಜತೆ ಹಲವು ವೇಷಗಳು, ನಯನ ಕುಮಾರರ ಬಾಹುಕ, ಬ್ರಾಹ್ಮಣ ಪಾತ್ರಗಳಿಗೆ ದಮಯಂತಿ, ದಾಕ್ಷಾಯಿಣಿ, ಅರುವ ಕೊರಗಪ್ಪ ಶೆಟ್ಟರ ಪುಷ್ಪಧ್ವಜ ಪಾತ್ರಕ್ಕೆ ಕನಕಮಾಲಿನಿಯಾಗಿ (ಪ್ರಸಂಗವೀರ ಪುಷ್ಪಧ್ವಜ) ಪುತ್ತೂರು ನಾರಾಯಣ ಹೆಗ್ಡೆಯವರ ಅಣ್ಣಪ್ಪ ಪಾತ್ರಕ್ಕೆ ಅಮ್ಮು ಬಲ್ಲಾಳ್ತಿಯಾಗಿ ಅಭಿನಯಿಸಿದ್ದ ಕುಂಬಳೆ ಶ್ರೀಧರ ರಾಯರು ತಮ್ಮ ಕಲಾಜೀವನವನ್ನು ಅವಿಸ್ಮರಣೀಯಗೊಳಿಸಿದ್ದರು.

ಕುಂಬಳೆ ಶ್ರೀಧರ ರಾಯರಿಗೆ ಯಕ್ಷದೀಪದ ಪರವಾಗಿ ಹಾಗೂ ಸಮಸ್ತ ಯಕ್ಷಾಭಿಮಾನಿಗಳ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ.

ಖ್ಯಾತ ಯಕ್ಷಗಾನ ಪ್ರಸಾದನ ತಜ್ಞ, ವೇಷಭೂಷಣಗಳ ನಿರ್ಮಾಪಕ ನಿಧನ

ಶ್ರೀ ಗಜಾನನ ಯಕ್ಷಗಾನ ವೇಷಭೂಷಣ ಸಂಸ್ಥೆಯ ಸಂಸ್ಥಾಪಕ, ಬಡಗುತಿಟ್ಟಿನ ಹಿರಿಯ ಪ್ರಸಾದನ ತಜ್ಞ ಹಂದಾಡಿ ಬಾಲಕೃಷ್ಣ ನಾಯಕ್ (76 ವರ್ಷ) ಇಂದು (04-07-2024) ಮಣ ಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಎಚ್. ಸುಬ್ಬಣ್ಣ ಭಟ್ ಮತ್ತು ಇಂದು ನಾಯಕ್ ಇವರ ಜೊತೆಯಲ್ಲಿ ಬಡಗುತಿಟ್ಟಿನ ವೇಷಭೂಷಣಗಳನ್ನು ವಿವಿಧ ಸಂಘ ಸಂಸ್ಥೆಗಳಿಗೆ ಒದಗಿಸುತ್ತಾ, ಬಳಿಕ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿದರು.

ತಮ್ಮ ಅಪೂರ್ವ ಕಲಾಪ್ರತಿಭೆ ಹಾಗೂ ಸರಳ ಸಜ್ಜನಿಕೆಯಿಂದ ಎಲ್ಲ ಸಂಘ ಸಂಸ್ಥೆಗಳಿಗೂ ಅನಿವಾರ್ಯ ಎಂಬಂತೆ ಬಾಳಿದ ಧೀಮಂತರು. ಬಡಗುತಿಟ್ಟಿನ ಕಿರೀಟ ಹಾಗೂ ವೇಷಭೂಷಣಗಳ ತಯಾರಿಕೆಯಲ್ಲಿ ಸಿದ್ಧಹಸ್ತರಾಗಿದ್ದರು. ದೇಶವಿದೇಶಗಳಲ್ಲಿ ನೂರಾರು ಮಂದಿಗೆ ಬಡಗುತಿಟ್ಟಿನ ಪಾರಂಪರಿಕ ವೇಷಭೂಷಣ ಸಿದ್ಧಪಡಿಸಿಕೊಟ್ಟ ಕೀರ್ತಿ ಬಾಲಕೃಷ್ಣ ನಾಯಕ್‌ರದ್ದು.

ತನ್ನ ಮೂವರು ಪುತ್ರರೂ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಈ ಕುಟುಂಬದ ವಿಶೇಷತೆಯಾಗಿದೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ, ಯಕ್ಷಗಾನ ಕಲಾರಂಗ ಹಾಗೂ ಕಳೆದ ವರ್ಷ ಉಡುಪಿಯಲ್ಲಿ ಜರಗಿದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.

ಉಡುಪಿಯ ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಕೃಷ್ಣ ನಾಯಕ್‌ರ ಕೊಡುಗೆ ಮಹತ್ತರವಾದುದು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ, ಉಡುಪಿಯ ಶಾಸಕರೂ ಆದ ಯಶಪಾಲ್ ಸುವರ್ಣ, ಸ್ಥಾಪಕ ಟ್ರಸ್ಟಿ ಕೆ.ರಘುಪತಿ ಭಟ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಬ್ರಹ್ಮಾವರದ ಅಜಪುರ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪದ್ಮನಾಭ ಗಾಣಿಗ ಹಾಗೂ ಸದಸ್ಯರು ತೀರ್ವ ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ನಾಳೆ (05-07-2024) ಪೂರ್ವಾಹ್ನ 10.00 ಗಂಟೆಗೆ ಬ್ರಹ್ಮಾವರದಲ್ಲಿ ಜರಗಲಿದೆ.

ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಜುಲೈ 7ನೇ ತಾರೀಕು ಆದಿತ್ಯವಾರ ಮಧ್ಯಾಹ್ನ 2:30 ರಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪೆರ್ಲ ಇವರ ಸಹಭಾಗಿತ್ವದಲ್ಲಿ ಉಚಿತ ಆಯುರ್ವೇದ ವೈದ್ಯಕೀಯ ಶಿಬಿರ ನಡೆಯಲಿದೆ.

ಶಿಬಿರವು ಶ್ರೀ ಗೋಪಾಲಕೃಷ್ಣ ಫಾರ್ಮಸಿ ಕುಂಬಳೆ, ಡಾ. ರವಿ ನಾರಾಯಣ ,ಸಂಜೀವಿನಿ ಕ್ಲಿನಿಕ್ ಪುತ್ತೂರು, ಶ್ರೀ ಸದ್ಗುರು ಡಿಸ್ಟ್ರಿಬ್ಯೂಟರ್ಸ್ ಕಬಕ ,ಸಿ ಕೆಮ್ ಫಾರ್ಮ್ ಸಿ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಡೆಯಲಿದೆ.

ಪ್ರಸಿದ್ಧ ವೈದ್ಯರಾದ ಡಾ. ಕೃಷ್ಣ ಮೋಹನ ಬಿ. ಆರ್. ಚಿನ್ಮಯ ಕ್ಲಿನಿಕ್ ಪೆರ್ಲ, ಡಾ. ಸತ್ಯನಾರಾಯಣ ಬಿ. ಪ್ರಶಾಂತಿ ಕ್ಲಿನಿಕ್ ಬಾಯಾರು ಶಿಬಿರವನ್ನು ನಡೆಸಿಕೊಡಲಿರುವರು.

ಅಧ್ಯಯನ ಯೋಗ್ಯ ಸಾಂಸ್ಕೃತಿಕ ಚಟುವಟಿಕೆಗಳ ಜೊತೆ ಪ್ರತಿಷ್ಠಾನ ಉಚಿತ ಆಯುರ್ವೇದ ಶಿಬಿರ ಹಾಗೂ ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉಪಯುಕ್ತವಾಗುವ ಇನ್ನಿತರ ಶಿಬಿರಗಳನ್ನು ನಡೆಸಲಿದೆ ಎಂದು ಪ್ರತಿಷ್ಠಾನ ಪ್ರಕಟಣೆ ತಿಳಿಸಿದೆ.