Friday, August 28, 2026
Home Blog Page 384

ಯಕ್ಷಗಾನ ಶಿಕ್ಷಣ – ಲಕ್ಷಣ (ಶ್ರೀ ಹೊಸ್ತೋಟ ಮಂಜುನಾಥ ಭಾಗವತರು) Hosthota Manjunatha Bhagavatha

ಯಕ್ಷಗಾನ ಕಲೆಗಾಗಿಯೇ  ತಮ್ಮ  ಜೀವನವನ್ನು ಮುಡಿಪಾಗಿಟ್ಟವರು ಶ್ರೀ ಹೊಸ್ತೋಟ ಮಂಜುನಾಥ ಭಾಗವತರು. ಬದುಕಿನುದ್ದಕ್ಕೂ ಪ್ರದರ್ಶನ, ಶಿಕ್ಷಣ, ಸಂಶೋಧನೆ, ಚಿಂತನೆಗಳಲ್ಲೇ ತೊಡಗಿಸಿಕೊಂಡು ಇನ್ನೂರಕ್ಕೂ ಮಿಕ್ಕಿದ ಪ್ರಸಂಗಗಳನ್ನು ರಚಿಸಿದ್ದರು. ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಿಗೆ ಅರ್ಪಿಸಿದವರು. ಶ್ರೀಯುತರಿಂದ ರಚಿಸಲ್ಪಟ್ಟ ಕೃತಿಯಿದು. ‘ಯಕ್ಷಗಾನ ಶಿಕ್ಷಣ-ಲಕ್ಷಣ’ಇದು 2019ರಲ್ಲಿ ಮುದ್ರಣವಾಗಿ ಓದುಗರ ಕೈ ಸೇರಿತ್ತು.

ಪ್ರಕಾಶಕರು ಕೆನೆಡಾದ ಟೊರಾಂಟೊ ಎಂಬಲ್ಲಿರುವ ಯಕ್ಷಮಿತ್ರ ಯಕ್ಷಗಾನ ಮೇಳ ಎಂಬ ಸಂಸ್ಥೆಯು. ಸಂಪಾದಕರು ಶ್ರೀ ರಘು ಕಟ್ಟಿನಕೆರೆ. ಪ್ರಕಾಶಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಬಳಿಕ ‘ಬಿನ್ನಹಕೆ ಬಾಯಿಲ್ಲವಯ್ಯ’ ಎಂಬ ಶೀರ್ಷಿಕೆಯಡಿಯಲ್ಲಿ ಹೊಸ್ತೋಟ ಮಂಜುನಾಥ ಭಾಗವತರ ಮನದ ಮಾತುಗಳನ್ನು ನೀಡಲಾಗಿದೆ. ವಿದ್ವಾಂಸ, ವಿಮರ್ಶಕ, ಹಿರಿಯ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ ಅವರು ‘ಶಿಕ್ಷಣ ಲಕ್ಷಣಕ್ಕೆ ಅಕ್ಕರೆಯ ನಲ್ನುಡಿ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಹೊಸ್ತೋಟದವರು ಬರೆದ ‘ಯಕ್ಷಗಾನ ಶಿಕ್ಷಣ ಲಕ್ಷಣ’ ಎಂಬ ಈ ಹೊತ್ತಗೆಯು ಎಂಟು ವಿಭಾಗಗಳನ್ನು ಹೊಂದಿದೆ.

ಲಯ, ತಾಳಗಳು, ಮದ್ದಳೆ, ಯಕ್ಷಗಾನ ಕುಣಿತ, ಸ್ವರ, ರಾಗಗಳು, ಯಕ್ಷಗಾನ ಸಾಹಿತ್ಯ, ಅರ್ಥಗಾರಿಕೆ, ಅಭಿನಯಾವಲೋಕನ, ಚೆಂಡೆ-ಹಿನ್ನೆಲೆಯ ವಾದ್ಯ ಎಂಬ ಎಂಟು ವಿಭಾಗಗಳು. ಮೊದಲಿಗೆ ‘ಯಕ್ಷಗಾನ ಸಂಕ್ಷಿಪ್ತ ಪರಿಚಯ’ ಎಂಬ ಬರಹವನ್ನೂ ನೀಡಿರುತ್ತಾರೆ. ಯಕ್ಷಗಾನ ಕ್ಷೇತ್ರಕ್ಕೆ ಹೊಸ್ತೋಟದವರ ಅನುಪಮವಾದ ಕೊಡುಗೆ ಇದು. ಹಿಮ್ಮೇಳ ಮುಮ್ಮೇಳ ಕಲಿಕಾಸಕ್ತರಿಗೆ ಅತ್ಯಂತ ಸಹಕಾರಿಯಾಗಿ ಪರಿಣಮಿಸಲಿದೆ. ಇದು ಸುಮಾರು ಇನ್ನೂರ ಎಂಬತ್ತು ಪುಟಗಳುಳ್ಳ ಕೃತಿ. ಪುಸ್ತಕದ ಹೊರ ಆವರಣದಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಪ್ರೊ| ಎಂ.ಎ. ಹೆಗಡೆ, ಡಾ. ಕೆ.ಎಂ. ರಾಘವ ನಂಬಿಯಾರ್ ಇವರುಗಳ ನಲ್ನುಡಿಗಳನ್ನು ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ  

ಹಾಸ್ಯರತ್ನ ನಯನ ಕುಮಾರ್ – ಸಂಕ್ಷಿಪ್ತ ಮಾಹಿತಿ (Hasyaratna Nayanakumar)

ಹಾಸ್ಯರತ್ನ ನಯನ ಕುಮಾರ್ – ಸಂಕ್ಷಿಪ್ತ ಮಾಹಿತಿ  ಹೆಸರು: ನಯನ ಕುಮಾರ್ ( ಬಾಲ್ಯದ ಹೆಸರು ನಾರಾಯಣ ಭಟ್) ಜನನ: 1948ನೇ ಇಸವಿಯಲ್ಲಿ    ಜನನ ಸ್ಥಳ:  ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಡಾಲುಮೇರ್ಕಳ ಗ್ರಾಮದ ಎಡಕ್ಕಾನ ಎಂಬಲ್ಲಿ    ತಂದೆ ತಾಯಿ:  ತಂದೆ ಶ್ರೀ  ವೆಂಕಟ್ರಮಣ ಭಟ್  . ತಾಯಿ ಶ್ರೀಮತಿ  ಪರಮೇಶ್ವರೀ ಅಮ್ಮ   ಪತ್ನಿ: ಶ್ರೀಮತಿ ಸೀತಾ


ಯಕ್ಷಗಾನ ಗುರುಗಳು:   ಪ್ರಸಿದ್ಧ ಮದ್ದಳೆಗಾರರಾಗಿದ್ದ ನೆಡ್ಲೆ ನರಸಿಂಹ ಭಟ್ಟರಿಂದ ಮದ್ದಳೆವಾದನ ಕಲಿಕೆ, ಕಟೀಲು ಮೇಳದ ಒಂದು ವರ್ಷದ ತಿರುಗಾಟದ ನಂತರ ಅಧ್ಯಾಪಕರಾದ ವಿಟ್ಲ ವಿಠಲ ಶೆಟ್ಟರಿಂದ ಶಾಸ್ತ್ರೀಯ ನಾಟ್ಯವನ್ನು ಕಲಿತು ಇದನ್ನೇ ಯಕ್ಷಗಾನಕ್ಕೆ ಅಳವಡಿಸಿಕೊಂಡರು. ನಯನ ಕುಮಾರರ ಅಜ್ಜ ಅಂಗ್ರಿ ನಾರಾಯಣ ಭಾಗವತರು. (ಅಣ್ಣಯ್ಯ ಭಾಗವತರು). ಬಂಧುಗಳೂ, ಮನೆಯವರೂ ಕಲಾವಿದರಾಗಿದ್ದರು. ನಯನ ಕುಮಾರರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿತ್ತು. ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : 1977ರಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರಿ ರಸಿಕರತ್ನ ಜೋಷಿಯವರ ಶಿಷ್ಯನಾಗಿ ಕಲಿಕೆ ಮತ್ತು ಪೆರುವಡಿ ನಾರಾಯಣ ಭಟ್ಟರಿಂದಲೂ ಮಾರ್ಗದರ್ಶನ. ಹಾಗೂ ಇತರ ಹಿರಿಯ ಕಲಾವಿದರಿಂದ ಮಾರ್ಗದರ್ಶನ. 
ಅನುಭವ:   ಕಟೀಲು ಮೇಳದಲ್ಲಿ ಒಂದು ವರ್ಷ ತಿರುಗಾಟ. ಬಳಿಕ ಸುಂಕದಕಟ್ಟೆ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ. ನಿತ್ಯವೇಷದ ತನಕ ಮದ್ದಳೆ ಬಾರಿಸಿ ನಂತರ ಹಾಸ್ಯದ ಎಲ್ಲಾ ಪಾತ್ರ ನಿರ್ವಹಣೆ. 1977ರಿಂದ ಸತತ 27 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ. 
ಇಷ್ಟಪಡುತ್ತಿದ್ದ ಪಾತ್ರಗಳು: ಬಾಹುಕ, ಗುಹ, ಬೇಹಿನಚರ, ನಾರದ, ಸಂಜಯ ಮುಂತಾದ ಹಾಸ್ಯ ಹಾಗೂ ಗಂಭೀರ ಪಾತ್ರಗಳು. 

ಮಕ್ಕಳು:   ಹಿರಿಯ ಪುತ್ರಿ ರೇಖಾ ವಿವಾಹಿತೆ. ಪುತ್ರ ಉದಯ ವೆಂಕಟೇಶ ಪುತ್ತೂರಿನಲ್ಲಿ ವಾಸ (ಹಣಕಾಸು ಸಂಸ್ಥೆ ಉದ್ಯೋಗಿ). ಕಿರಿಯ ಪುತ್ರಿ ಕವಿತಾ ವಿವಾಹಿತೆ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: 2004ರಲ್ಲಿ ರಾಜರ್ಷಿ ಡಾ| ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಮಹೋತ್ಸವದ ಸನ್ಮಾನ, ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ಸನ್ಮಾನ, ಮುಂಬಯಿ ಕನ್ನಡ ಸಂಘದ ಮರಣೋತ್ತರ ಪ್ರಶಸ್ತಿ ಅಲ್ಲದೆ ಅನೇಕ ಸಂಘ ಸಂಸ್ಥೆಗಳ ಸನ್ಮಾನ, ದೆಹಲಿಯ ಕನ್ನಡ ಸಂಘದ ‘ರಸಿಕರತ್ನ’ ಎಂಬ ಬಿರುದು, 1994ರಲ್ಲಿ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಧರ್ಮಸ್ಥಳ ಮೇಳದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ‘ನರಕಾಸುರ ಮೋಕ್ಷ’ ಪ್ರದರ್ಶನದಲ್ಲಿ ರಾಷ್ಟ್ರಪತಿಗಳಿಂದ ಸಹಕಲಾವಿದರೊಂದಿಗೆ ಸನ್ಮಾನ. 

ಹೊರನಾಡಿನಲ್ಲಿ ನಯನ ಕುಮಾರ್: ಅಬುದಾಭಿ, ಸೌದಿ, ಕುವೈಟ್, ದುಬಾಯಿ, ಜರ್ಮನಿ ಅಲ್ಲದೆ ಭಾರತದ ದೆಹಲಿ, ಮುಂಬಯಿ, ಬೆಂಗಳೂರು ಮೊದಲಾದ ನಗರಗಳಲ್ಲಿ ಯಕ್ಷಗಾನ ಪ್ರದಶನಗಳಲ್ಲಿ ಭಾಗವಹಿಸಿದ ಖ್ಯಾತಿ, ಅಲ್ಲಗೆ ಆಕಾಶವಾಣಿ ಮತ್ತು ದೂರದರ್ಶನದ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಯಕ್ಷಗಾನದಲ್ಲಿ ತಿರುಗಾಟ ಮಾಡುವ ಮೊದಲು ಬೆಂಗಳೂರಿನ ಮಾ| ಹಿರಣ್ಣಯ್ಯ ಅವರ ನಾಟಕ ತಂಡದಲ್ಲಿ ನಟನಾಗಿ ಅವರ ಮೆಚ್ಚುಗೆ ಗಳಿಸಿದ್ದರು.  ನಿರ್ವಹಿಸಿದ ಪಾತ್ರಗಳು: ಎಲ್ಲಾ ಹಾಸ್ಯ ಪಾತ್ರಗಳು ಮತ್ತು ಬಾಹುಕ, ನಾರದ, ಸಂಜಯ ಇತ್ಯಾದಿ ಹಾಸ್ಯಗಾರರು ನಿರ್ವಹಿಸುವ ಪಾತ್ರಗಳು. 

ವಿಶೇಷತೆಗಳು: ಇವರ ಪಾತ್ರ ಗಳಿರುವ 200ಕ್ಕೂ ಮಿಕ್ಕಿ ಧ್ವನಿಸುರುಳಿಗಳು ಬಿಡುಗಡೆಗೊಂಡಿವೆ. ಹೆಚ್ಚಿನ ಪ್ರಸಂಗಗಳಲ್ಲಿ ಒಂದು ರಾತ್ರಿಯಲ್ಲಿ ಎಂಟು, ಹತ್ತರಷ್ಟು ಪಾತ್ರಗಳನ್ನು ನಿರ್ವಹಿಸಿದ್ದೂ ಇದೆ. ಅದು ಹಲವಾರು ಬಾರಿ. ಅತಿ ವೇಗವಾಗಿ ಬಣ್ಣಗಾರಿಕೆ ಮಾಡಿ, ವೇಷಭೂಷಣ ಧರಿಸಿ ರಂಗ ಪ್ರವೇಶ ಮಾಡುವುದರಲ್ಲಿ ಎತ್ತಿದ ಕೈ. 

ನಿಧನ: ನವಂಬರ್ 8, 2005ರಂದು ನಿಧನರಾದರು. ತಮ್ಮ ಕಲಾ ಜೀವನದ ಕೊನೆಯ ದಿನಗಳಲ್ಲಿ ಅನಾರೋಗ್ಯ ಪೀಡಿತರಾಗಿದ್ದ ಅವರು ಯಕ್ಷಗಾನದಿಂದ ಅನಿವಾರ್ಯ ನಿವೃತ್ತಿ ಪಡೆದಿದ್ದರು. ಎಲ್ಲರನ್ನೂ ನಗಿಸಿದ ನಯನ ಕುಮಾರ್ ತನ್ನ 58ನೆಯ ವಯಸ್ಸಿನಲ್ಲಿಯೇ ವಿಧಿವಶರಾದದ್ದು ಯಕ್ಷಗಾನ ರಂಗದ ಒಂದು ದೊಡ್ಡ ದುರಂತ. 

ಲೇಖನ: ಮನಮೋಹನ್ ವಿ.ಎಸ್.

ಇರಾ ಗೋಪಾಲಕೃಷ್ಣ ಭಾಗವತರು – ಸಂಕ್ಷಿಪ್ತ ಮಾಹಿತಿ (Ira Gopalakrishna Bhagavatha)

ಇರಾ ಗೋಪಾಲಕೃಷ್ಣ ಭಾಗವತರು – ಸಂಕ್ಷಿಪ್ತ ಮಾಹಿತಿ  ಹೆಸರು: ಇರಾ ಗೋಪಾಲಕೃಷ್ಣ ಭಾಗವತರು    
ಪತ್ನಿ:  ಶ್ರೀಮತಿ ಶಾರದಾ  ವಿವಾಹ:  1950ರಲ್ಲಿ ಬೆಳ್ಳಾರೆ ಶ್ರೀ ವಾಸುದೇವ ರಾಯರ ಪುತ್ರಿ ಶಾರದಾ ಅವರ ಜತೆ ವಿವಾಹ.  ಜನನ:   1922ರಲ್ಲಿ   ಜನನ ಸ್ಥಳ: ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ    ತಂದೆ ತಾಯಿ:   ತಂದೆ: ಶ್ರೀ ಈಶ್ವರಯ್ಯ. ತಾಯಿ: ಕಾವೇರಿ .  ಶ್ರೀ ಈಶ್ವರಯ್ಯ ಅವರು ಆ ಕಾಲದ ಪ್ರಸಿದ್ಧ ಭಾಗವತರಾಗಿದ್ದರು. ಇವರಿಗೆ ಕುಂಡಚ್ಚ ಭಾಗವತರೆಂದು ಹೆಸರಿತ್ತು.   ವಿದ್ಯಾಭ್ಯಾಸ:  ಇರಾ ಗ್ರಾಮದ ಮರಿಗುಳ್ಳ ಶಾಲೆಯಲ್ಲಿ. ಪ್ರಾಥಮಿಕ ಶಿಕ್ಷಣ ಮಾತ್ರ ಅಂದರೆ ಐದನೆಯ ತರಗತಿಯ ವರೆಗೆ. 


ಯಕ್ಷಗಾನ ಗುರುಗಳು:   ತಂದೆ ಈಶ್ವರಯ್ಯನವರಿಂದಲೇ ಮೂಲ ಪಾಠವನ್ನು ಅಭ್ಯಸಿಸಿ ಆಮೇಲೆ ತನ್ನ 14ನೇ ವಯಸ್ಸಿನಲ್ಲಿ ಮಾಂಬಾಡಿ ನಾರಾಯಣ ಭಾಗವತರಿಂದ ಹಾಡುಗಾರಿಕೆಯನ್ನೂ ಮದ್ದಳೆವಾದನವನ್ನೂ ಕಲಿತಿದ್ದರು. ಅನುಭವ:  ಮೊದಲ ತಿರುಗಾಟ ಗೋಕರ್ಣನಾಥೇಶ್ವರ ಮೇಳದಲ್ಲಿ. ನಂತರ ಕದ್ರಿ, ಕೂಡ್ಲು, ಕುಂಡಾವು, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಭಾಗವತನಾಗಿ ಕಲಾಸೇವೆ, 1958 ರಿಂದ ಕಟೀಲು ಮೇಳದಲ್ಲಿ ತಿರುಗಾಟ.  ಒಟ್ಟು 60 ವರ್ಷ ಭಾಗವತರಾಗಿ ಕಲಾಸೇವೆ.  

ಮಕ್ಕಳು:   6 ಮಂದಿ ಮಕ್ಕಳು (3 ಗಂಡು, 3 ಹೆಣ್ಣು) ಶ್ರೀ ಜಯರಾಮ, ಶ್ರೀಪತಿ ಮತ್ತು ಶಿವರಾಮ ಗಂಡು ಮಕ್ಕಳು. ಪರಮೇಶ್ವರೀ, ಸರೋಜಿನಿ, ಯಶೋದಾ ಹೆಣ್ಣು ಮಕ್ಕಳು. ಮಕ್ಕಳು ಕಲಾವಿದರಲ್ಲ. ಆದರೂ ಯಕ್ಷಗಾನದ ಮೇಲೆ ತುಂಬಾ ಆಸಕ್ತಿ ಗೌರವಗಳಿವೆ. ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಶ್ರೀ ಮಂಗಳಾದೇವಿ ಯಕ್ಷನ ಸಂಘ ಮತ್ತು ಕಟೀಲು ಭ್ರಾಮರಿ ಯಕ್ಷಗಾನ ಸಂಘದಿಂದ ಸನ್ಮಾನ. ಅಲ್ಲದೆ ಅನೇಕ ಸಂಸ್ಥೆಗಳ ಗೌರವಕ್ಕೂ ಪಾತ್ರರಾಗಿದ್ದರು. 

ಇರಾ ಗೋಪಾಲಕೃಷ್ಣ ಭಾಗವತರ ವಿಶೇಷತೆ: ಪುರಾಣ ಪ್ರಸಂಗಗಳಲ್ಲಿ ಒಳ್ಳೆಯ ಹಿಡಿತ, ಸಂಪ್ರದಾಯಬದ್ಧವಾದ ಹಾಡುಗಾರಿಕೆ, 40ಕ್ಕಿಂತಲೂ ಹೆಚ್ಚು ಪ್ರಸಂಗಗಳು ಇವರಿಗೆ ಬಾಯಿಪಾಠ, ಧ್ವನಿವರ್ಧಕಗಳಿಲ್ಲದ ಕಾಲದಲ್ಲೂ ಬೆಳಗಿನ ವರೆಗೆ ಒಬ್ಬರೇ  ಹಾಡಿದವರು. ತಂದೆಯಂತೆ ಕುಂಡಚ್ಚ ಭಾಗವತರೆಂದೇ ಪ್ರಸಿದ್ದಿ ಹೊಂದಿದರು. ನಿಧನ: 1999ರಲ್ಲಿ

ಎಸ್.ಪಿ ಮತ್ತು ಎಸ್.ಜಾನಕಿ – ನಿಲುಕೆಗೂ ಮೀರಿದ ಬಂಧ (S.P.B and S. Janaki)

ಇಬ್ಬರೂ ಗಾಯನ ಸಾಮ್ರಾಜ್ಯದ ನೇತಾರರೇ. ಒಬ್ಬರನ್ನು ಮತ್ತೊಬ್ಬರು ಮೀರಿಸುವ ಗಾಯಕರು. ಇಬ್ಬರೂ ಜೊತೆಯಾಗಿ ಅದೆಷ್ಟೋ ಅಕ್ಷರಗಳಿಗೆ ಜೀವತುಂಬಿದ್ದಾರೆ. ಸಹಗಾಯಕರಾಗಿ ಅವರಿಬ್ಬರ ಪಯಣ ಸುಧೀರ್ಘ ಅವಧಿಯದು. ಆದರೆ ನಮಗೆ ಅವರು ಕೇವಲ ಸಹಗಾಯಕರು ಮಾತ್ರ. ಆದರೆ ಅವರಿಬ್ಬರ ನಡುವಿನ ಭಾವನಾತ್ಮಕ ಸಂಬಂಧ ಹೆಚ್ಚಿನವರಿಗೆ ತಿಳಿದಿರಲಾರದು.

ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಕೇವಲ ಸಹಗಾಯಕರಾಗಿರಲಿಲ್ಲ. ಅವರ ನಡುವೆ ಭಾವನಾತ್ಮಕ ಬೆಸುಗೆ, ಸಂಬಂಧಗಳಿತ್ತು. ಸಹೋದರಿ ಸಹೋದರನ ನಡುವಿನ ವಾತ್ಸಲ್ಯವಿತ್ತು.ಅಮ್ಮ ಮಗನ ಪ್ರೀತಿಯ ಮಮತೆಯಿತ್ತು. ಜಗಳ ಮಾಡಿ ಮತ್ತೆ ಒಂದಾಗುವ ಸ್ನೇಹಿತರ ಹುಸಿಕೋಪವಿತ್ತು. ಇಬ್ಬರ ಕುಟುಂಬ ಸದಸ್ಯರೂ ಪರಸ್ಪರರ ಮನೆಗೆ ಆಗಾಗ ಹೋಗಿ ಬರುವ ಆತ್ಮೀಯತೆಯೂ ಇತ್ತು. ಮಾನವೀಯತೆ ಮತ್ತು ವಾತ್ಸಲ್ಯ ಸಂಬಂಧಗಳಲ್ಲಿ ಅವರಿಬ್ಬರೂ ನಮ್ಮೆಲ್ಲರ ಊಹೆಗೂ ನಿಲುಕದಷ್ಟು ಎತ್ತರಕ್ಕೆ ಏರಿದ್ದರು.

ಯಕ್ಷಗಾನ ಮತ್ತು ನಾನು – ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮ ಚರಿತ್ರೆ (Sheni Gopalakrishna Bhat)

ಯಕ್ಷಗಾನದ ಭೀಷ್ಮರೆಂದೇ ಖ್ಯಾತರಾದ ಹರಿದಾಸ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಆತ್ಮ ಚರಿತ್ರೆ ‘ಯಕ್ಷಗಾನ ಮತ್ತು ನಾನು’ ಮೊತ್ತ ಮೊದಲು ಪ್ರಕಟವಾಗಿ ಓದುಗರ ಕೈ ಸೇರಿದ್ದು 1981ರಲ್ಲಿ. ಇದು ದ್ವಿತೀಯ ಮುದ್ರಣ. 2006ರಲ್ಲಿ. ಈ ಆತ್ಮಚರಿತ್ರೆಯ ಪ್ರಕಾಶಕರು ಕಲ್ಕೂರ ಪ್ರಕಾಶನ ಮಂಗಳೂರು. 1981ರಲ್ಲಿ ನಡೆದ ಮೊದಲ ಮುದ್ರಣದ ಪ್ರಕಾಶಕರು ಪುತ್ತೂರಿನ ಕನ್ನಡ ಸಂಘ. ಈ ವಿಚಾರವನ್ನು ಪ್ರಕಾಶಕರಾದ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರ ಅವರು ತಮ್ಮ ‘ಪ್ರಕಾಶಕರ ಮಾತು’ ಎಂಬ ಲೇಖನದಲ್ಲಿ ತಿಳಿಸಿರುತ್ತಾರೆ. ಅಲ್ಲದೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಮಹನೀಯರುಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.

ಈ ಕೃತಿಯು ಒಟ್ಟು ಇನ್ನೂರ ನಲುವತ್ತೆರಡು ಪುಟಗಳಿಂದ ಕೂಡಿದೆ. ಶ್ರೀ ಶೇಣಿಯವರು ಬರೆದ ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿಯ ಲೇಖನದಿಂದ ಆರಂಭಗೊಳ್ಳುವ ಆತ್ಮಚರಿತ್ರೆಯು ಪರಿಸರ, ಹೊಸ ಬಯಕೆಯ ಒಕ್ಕಲು, ಯಕ್ಷಲೋಕದ ಹಾದಿಯಲ್ಲಿ, ಸಂಚಾಲಕ ಮತ್ತು ನಟನಾಗಿ, ವಿವೇಚನೆ-ನಿವೇದನೆ ಎಂಬ ವಿಭಾಗಗಳಿಂದ ಕೂಡಿದೆ. ಬಳಿಕ ಶ್ರೀ ಈಶ್ವರಯ್ಯ, ಶ್ರೀ ಹಾ.ಮಾ. ನಾಯಕ,ಇವರುಗಳ ಪ್ರಕಟಿತ ಲೇಖನಗಳನ್ನು ನೀಡಲಾಗಿದೆ. ಬಳಿಕ ಶ್ರೀ ಶೇಣಿಯವರ ಮೊಮ್ಮಗ ಶೇಣಿ ಬಾಲಮುರಳಿಕೃಷ್ಣ ಅವರ ‘ಬರೆಯುವ ಮುನ್ನ’ ಎಂಬ ಲೇಖನವಿದೆ. ಬಳಿಕ ಸುಮಾರು ನಲುವತ್ತೈದು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ.

ಬಳಿಕ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಬರೆದ ಆತ್ಮಚರಿತ್ರೆ’ ಮತ್ತು ‘ನನ್ನವರೇ’ ಎಂಬ ಲೇಖನಗಳನ್ನು ನೀಡಿರುತ್ತಾರೆ. ಬಳಿಕ ಶ್ರೀ ಎಸ್. ಪ್ರದೀಪ ಕುಮಾರ್ ಕಲ್ಕೂರರು ಬರೆದ ‘ವಿದ್ವಾನ್ ಸರ್ವತ್ರ ಪೂಜ್ಯತೇ.. ಪರ್ಯಾಯ ಪದ ಶೇಣಿ’ ಎಂಬ ಲೇಖನವನ್ನೂ ಶೇಣಿ ಬಾಲಮುರಳಿಕೃಷ್ಣ ಅವರು ಬರೆದ ‘ಬರೆದ ಅನಂತರ’ ಎಂಬ ಬರಹಗಳನ್ನೂ ನೀಡಲಾಗಿದೆ. ಅಲ್ಲದೆ ಶೇಣಿಯವರು ನಿರ್ವಹಿಸಿದ ಹಲವಾರು ಪಾತ್ರಗಳ ಕಪ್ಪು ಬಿಳುಪಿನ ಚಿತ್ರಗಳನ್ನೂ ಹಿರಿಯ ಒಡನಾಡಿ ಕಲಾವಿದರ ಚಿತ್ರಗಳನ್ನೂ ಕೊಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ – ಸಂಕ್ಷಿಪ್ತ ಮಾಹಿತಿ (A Breif Information about Siddakatte Sadashiva Shettigar)

ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ – ಸಂಕ್ಷಿಪ್ತ ಮಾಹಿತಿ  ಹೆಸರು: ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್   
ಪತ್ನಿ: ಶ್ರೀಮತಿ  ಕಲಾವತಿ  ಜನನ:  1965 ಡಿಸೆಂಬರ್ 17ರಂದು  ಜನನ ಸ್ಥಳ: ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ ಸಿದ್ಧಕಟ್ಟೆ.   

ತಂದೆ ತಾಯಿ:  ತಂದೆ ಶ್ರೀ ಬಾಬು ಶೆಟ್ಟಿಗಾರ್. ತಾಯಿ ಶ್ರೀಮತಿ ಗಿರಿಯಮ್ಮ ವಿದ್ಯಾಭ್ಯಾಸ: ಸಿದ್ಧಕಟ್ಟೆ ಸೈಂಟ್ ಮೆಟ್ರಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 6ನೇ ತರಗತಿಯ ವರೆಗೆ.  ಯಕ್ಷಗಾನ ಗುರುಗಳು:  ರೆಂಜಾಳ ರಾಮಕೃಷ್ಣ ರಾವ್ , ಬಣ್ಣದ ಮಹಾಲಿಂಗ  ರಂಗಮಾಹಿತಿ ಮತ್ತು ಹೆಚ್ಚಿನ ಕಲಿಕೆ : ಇರಾ ಗೋಪಾಲಕೃಷ್ಣ ಭಾಗವತ, ಸುಣ್ಣಂಬಳ ವಿಶ್ವೇಶ್ವರ ಭಟ್, ಬೆಳ್ಳಾರೆ ಮಂಜುನಾಥ ಭಟ್ ಮತ್ತು ಹಿರಿಯ ಕಲಾವಿದರಿಂದ. 
ಅನುಭವ:  2 ವರ್ಷ ಕಟೀಲು 2ನೇ ಮೇಳದಲ್ಲಿ ನೇಪಥ್ಯ ಕಲಾವಿದನಾಗಿ ತಿರುಗಾಟ, ಕಟೀಲು 1ನೇ ಮೇಳದಲ್ಲಿ 8 ವರ್ಷಗಳ ಕಾಲ ಬಣ್ಣದ ವೇಷಧಾರಿಯಾಗಿ  ತಿರುಗಾಟ, ಆಮೇಲೆ 13 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಬಣ್ಣದ ವೇಷಧಾರಿಯಾಗಿ ತಿರುಗಾಟ. ನಂತರದ ಈ ಹದಿಮೂರು ವರ್ಷಗಳಲ್ಲಿ ಹೊಸನಗರ, ಎಡನೀರು ಮತ್ತು ಹನುಮಗಿರಿ ಮೇಳಗಳಲ್ಲಿ (೨೦೨೦ರ ವರೆಗೆ)

ಗುರುಗಳಾಗಿ : ತಮ್ಮ ಶಿಷ್ಯಂದಿರಾದ ಸತೀಶ ನೈನಾಡು, ಶಬರೀಶ ಮಾನ್ಯ, ಮನೀಷ್ ಪಾಟಾಳಿ, ಮಧುರಾಜ್ ಪಾಟಾಳಿ, ಸುಬ್ರಹ್ಮಣ್ಯ ಭಟ್ ಬದಿಯಡ್ಕ, ಸಚಿನ್ ಪಾಟಾಳಿ, ಶ್ರೀಶ ಮಣಿಲ, ರಂಜಿತ್ ಗೋಳಿಯಡ್ಕ ಮೊದಲಾದವರಿಗೆ ಸದಾಶಿವ ಶೆಟ್ಟಿಗಾರರು ವಿದ್ಯಾದಾನ ಮಾಡಿದ್ದಾರೆ. 

ಒಟ್ಟು ಕಲಾಸೇವೆ: ಯಕ್ಷಗಾನ ಕ್ಷೇತ್ರದಲ್ಲಿ 36ಕ್ಕೂ ಹೆಚ್ಚಿನ ವರ್ಷಗಳ ಕಾಲ ವ್ಯವಸಾಯ ಮಕ್ಕಳು ಮತ್ತು ಕುಟುಂಬ :  ಸದಾಶಿವ ಶೆಟ್ಟಿಗಾರ್ ದಂಪತಿಗಳಿಗೆ ಮೂವರು ಮಕ್ಕಳು (ಎರಡು ಗಂಡು ಮತ್ತು 1 ಹೆಣ್ಣು). ಹಿರಿಯ ಪುತ್ರ ದಿಲೀಪ್ ಕುಮಾರ್ ಮತ್ತು ಕಿರಿಯ ಪುತ್ರ ಪದ್ಮನಾಭ ಇಬ್ಬರೂ ಉದ್ಯೋಗಿಗಳು. ಪುತ್ರಿ ಕವಿತಾ ವಿವಾಹಿತೆ. ಅಳಿಯ ಶ್ರೀ ಯಶವಂತ ಉದ್ಯೋಗಿ.  ಮೊಮ್ಮಗ ಹರ್ಧಿಕ್‍. 

ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ, ಅರಸಂಕಲ ಪ್ರಶಸ್ತಿಗಳನ್ನು ಪಡೆದುದಲ್ಲದೆ ಹರೇಕಳ ಪಾವೂರು, ಬಿ. ಸಿ. ರೋಡಿನಲ್ಲಿ ಅಲ್ಲದೆ  ಇನ್ನೂ ಅನೇಕ ಸಂಘ-ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.  ಹೊರನಾಡುಗಳಲ್ಲಿ ಕಲಾಸೇವೆ: ಆಂಧ್ರಪ್ರದೇಶ, ತಮಿಳುನಾಡು, ದೆಹಲಿ, ಅಯೋಧ್ಯೆ, ಕಾಶಿ, ಕೋಲ್ಕತ್ತಾ, ಕೇರಳ, ಹರಿದ್ವಾರ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿ ಕಲಾಸೇವೆ ಮಾಡಿದ್ದಾರೆ.  ಪ್ರಸ್ತುತ ವಾಸ: ಪತ್ನಿ ಶ್ರೀಮತಿ ಕಲಾವತಿ ಮತ್ತು ಪುತ್ರರೊಂದಿಗೆ ಪ್ರಸ್ತುತ ಸಿದ್ಧಕಟ್ಟೆಯಲ್ಲಿ ವಾಸವಾಗಿದ್ದಾರೆ. 

ಸವೆಯದ ದಾರಿ – ಆತ್ಮವೃತ್ತಾಂತ (ಡಾ. ರಮಾನಂದ ಬನಾರಿ) (Dr. Ramananda Bnari)

‘ಸವೆಯದ ದಾರಿ’ ಎಂಬ ಈ ಕೃತಿಯು ಜನಪ್ರಿಯ ವೈದ್ಯ, ಸಾಹಿತಿ, ಲೇಖಕ, ತಾಳಮದ್ದಳೆ ಅರ್ಥಧಾರಿ, ಡಾ. ರಮಾನಂದ ಬನಾರಿಯವರ ಆತ್ಮವೃತ್ತಾಂತವು. ಇದು ಪ್ರಕಟವಾಗಿ ಕೈ ಸೇರಿದ್ದು 2017ರಲ್ಲಿ. ಮಂಜೇಶ್ವರದಲ್ಲಿ ಖ್ಯಾತ ವೈದ್ಯರಾಗಿರುವ ಡಾ. ರಮಾನಂದ ಬನಾರಿಯವರು ಯಕ್ಷ ಗುರುಕುಲದ ರೂವಾರಿ, ಪ್ರಸಂಗಕರ್ತ, ಖ್ಯಾತ ಕಲಾವಿದರಾದ ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಸುಪುತ್ರರು. 1940ರಲ್ಲಿ ಕೀರಿಕ್ಕಾಡಿನಲ್ಲಿ ಜನನ. ಕಲ್ಲಿಕೋಟೆ ವಿಶ್ವವಿದ್ಯಾನಿಲಯದಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪೂರೈಸಿ ವೈದ್ಯಕೀಯ ವೃತ್ತಿಯನ್ನು ಆರಂಭಿಸಿದ್ದರು. ಕೀರಿಕ್ಕಾಡು ಮನೆಯವರು ಎಂದ ಬಳಿಕ ಸಾಹಿತ್ಯಾಸಕ್ತರು, ಕಲಾಸಕ್ತರು ಎಂದು ಬೇರೆ ಹೇಳಬೇಕಾದುದಿಲ್ಲ. ಸಮಾಜಸೇವೆಯೊಂದಿಗೆ ಲೇಖಕರಾಗಿ, ಕನ್ನಡ ಸಾಹಿತ್ಯ ಸೇವೆಯನ್ನೂ ತಾಳಮದ್ದಳೆ ಅರ್ಥಧಾರಿಯಾಗಿ ಕಲಾಮಾತೆಯ ಸೇವೆಯನ್ನೂ ಮಾಡುತ್ತಾ ಬರುತ್ತಿದ್ದಾರೆ.

ಬನಾರಿಯಲ್ಲಿ ಕೀರಿಕ್ಕಾಡು ಮಾಸ್ತರರಿಂದ ಸ್ಥಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕಲಾ ಚಟುವಟಿಕೆಗಳಲ್ಲಿ ಶ್ರೀಯುತರು ಸಕ್ರಿಯರು. ಅಣ್ಣ ಶ್ರೀ ವನಮಾಲಾ ಕೇಶವ ಭಟ್ಟರ ಜತೆಗೂಡಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿರುತ್ತಾರೆ. ಡಾ. ರಮಾನಂದ ಬನಾರಿ ಅವರ ಆತ್ಮವೃತ್ತಾಂತ ‘ಸವೆಯದ ದಾರಿ’ ಇದರ ಪ್ರಕಾಶಕರು ತಾರಾ ಪ್ರಿಂಟರ್ಸ್ ಮೈಸೂರು. ತಮ್ಮ ಬದುಕಿಗೆ ಪೋಷಕಾಂಶಗಳನ್ನಿತ್ತು ಪ್ರೋತ್ಸಾಹಿಸಿದ ವ್ಯಕ್ತ ಮತ್ತು ಅವ್ಯಕ್ತ ಹೆಸರುಗಳಿಗೆ ಈ ಪುಸ್ತಕವನ್ನು ಡಾ. ರಮಾನಂದ ಬನಾರಿ ಅವರು ಅರ್ಪಿಸಿರುತ್ತಾರೆ. ಮೊದಲಿಗೆ ಎಡನೀರು ಮಠಾಧೀಶರ ಶುಭ ನುಡಿಗಳನ್ನು ನೀಡಲಾಗಿದೆ. ನಾಡೋಜ ಪ್ರೊ| ಹಂಪ  ನಾಗರಾಜಯ್ಯ ಅವರು ‘ಸುಶೋಭಿತ ಆತ್ಮಕಥನ’ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಡಾ. ರಮಾನಂದ ಬನಾರಿ ಅವರು ‘ನನ್ನ ನುಡಿ’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ತಿಳಿಸಿರುತ್ತಾರೆ.

ಈ ಆತ್ಮವೃತ್ತಾಂತದಲ್ಲಿ ಮೊದಲ ಪರ್ವ, ಕುಟುಂಬ ಪರ್ವ, ಸಾಹಿತ್ಯ ಪರ್ವ, ಕಲಾ ಪರ್ವ, ಸಂಕೀರ್ಣ ಪರ್ವ ಎಂಬ ಐದು ವಿಭಾಗಗಳಿವೆ. ಬಳಿಕ ಅನುಬಂಧ ಎಂಬ ವಿಭಾಗವಿದ್ದು, ಅದರಲ್ಲಿ ಡಾ. ರಮಾನಂದ ಬನಾರಿ ಅವರ ಬದುಕು-ಬರಹದ ಬಗೆಗೆ ತಿಳಿಸಲಾಗಿದೆ. ಅಲ್ಲದೆ ಶ್ರೀ ಟಿ. ಎ. ಎನ್. ಖಂಡಿಗೆ ಅವರು ಬರೆದ ‘ತಿಳಿ ನೀರಿನಲ್ಲಿ ತೇಲಿ ಬಂದ ಬನಾರಿ ನಾವೆ’ ಎಂಬ ಲೇಖನವನ್ನೂ ನೀಡಲಾಗಿದೆ. ಸುಮಾರು ನಲುವತ್ತರಷ್ಟು ಛಾಯಾಚಿತ್ರಗಳನ್ನೂ ಈ ಹೊತ್ತಗೆಯಲ್ಲಿ ನೀಡಲಾಗಿದೆ. ಪುಸ್ತಕದ ಹೊರ ಆವರಣದಲ್ಲಿ ಡಾ. ರಮಾನಂದ ಬನಾರಿಯವರ ಆತ್ಮೀಯರಾದ ವಿದ್ವಾಂಸರೂ ವಿಮರ್ಶಕರೂ ಆದ ಡಾ. ಬಿ. ಎ. ವಿವೇಕ ರೈ ಅವರ ಲೇಖನವನ್ನೂ ನೀಡಲಾಗಿದೆ. ಡಾ. ರಮಾನಂದ ಬನಾರಿ ಅವರಿಗೆ, ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘ ಎಂಬ ಸಂಸ್ಥೆಗೆ ಶುಭಾಶಯಗಳು. ಸಾಹಿತ್ಯ, ಕಲಾ ಸೇವೆಗಳು ನಿರಂತರವಾಗಿ ನಡೆಯುತ್ತಿರಲಿ ಎಂಬ ಹಾರೈಕೆಗಳು. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ

ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಪದ್ಮಶ್ರೀ ಪುರಸ್ಕೃತೆ ಶೋಭಾ ನಾಯ್ಡು ಅಸ್ತಂಗತ (Koochupudi Dancer Shobha Naidu No more)

ಖ್ಯಾತ ಕೂಚುಪುಡಿ ನೃತ್ಯ ಕಲಾವಿದೆ ಶೋಭಾ ನಾಯ್ಡು ಇಂದು ಬೆಳಿಗ್ಗೆ ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸ್ತಂಗತರಾದರು.

ಅದ್ಭುತ ಕೂಚುಪುಡಿ ನೃತ್ಯ ಕಲಾವಿದೆಯಾಗಿದ್ದ ಅವರು ತನ್ನ ಪ್ರತಿಭಾ ಕೌಶಲಕ್ಕಾಗಿ 2001ರಲ್ಲಿ ಕೇಂದ್ರ ಸರಕಾರದಿಂದ ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದರು. 1962ರಲ್ಲಿ ಜನಿಸಿದ್ದ ಶೋಭಾ ನಾಯ್ಡು 1991ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದರು.

ಚೆನ್ನೈಯಲ್ಲಿರುವ ಶ್ರೀ ಕೃಷ್ಣ ಗಾನ ಸಭಾವು ಅವರಿಗೆ “ನೃತ್ಯ ಚೂಡಾಮಣಿ” ಎಂಬ ಬಿರುದನ್ನೂ ನೀಡಿ ಗೌರವಿಸಿತ್ತು. ಸುಮಾರು 40 ವರ್ಷಗಳ ಇತಿಹಾಸ ಹೊಂದಿರುವ ಹೈದರಾಬಾದ್ ನಲ್ಲಿರುವ ಕೂಚುಪುಡಿ ಕಲಾ ಅಕಾಡೆಮಿಯ ಪ್ರಾಂಶುಪಾಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಶೋಭಾ ನಾಯ್ಡು ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೂಚುಪುಡಿ ತರಬೇತಿ ನೀಡಿದ್ದರು.

ಚೆಂಡೆ ಮದ್ದಲೆಗಳ ನಡುವೆ – ಮದ್ದಳೆಗಾರ ಬಿ. ಗೋಪಾಲಕೃಷ್ಣ ಕುರುಪ್ ಅವರ ಆತ್ಮಕಥನ (B. Gopalakrishna Kurup)

‘ಚೆಂಡೆ ಮದ್ದಲೆಗಳ ನಡುವೆ’ ಎಂಬ ಈ ಕೃತಿಯು ಮದ್ದಳೆಗಾರ, ಯಕ್ಷಗಾನ ಹಿಮ್ಮೇಳದ ಗುರು ಶ್ರೀ  ಬಿ. ಗೋಪಾಲಕೃಷ್ಣ ಕುರುಪ್ ಅವರ ಆತ್ಮ ಕಥನವಾಗಿ ಪ್ರಕಟವಾಗಿತ್ತು. ಇದು ಓದುಗರ ಕೈ ಸೇರಿದ್ದು 2004ರಲ್ಲಿ. ಪ್ರಕಾಶಕರು ಕಾಂತಾವರ ಕನ್ನಡ ಸಂಘ. “ತಮ್ಮ ನಿಡುಗಾಲದ ಬನ್ನ ಬವಣೆಯ ಜೀವನದ ಹಿನ್ನೆಲೆಯನ್ನು ಕಲಾವಿದನ ಕಣ್ಣಿನಿಂದ ಅವರು ಚಿತ್ರಿಸಿದ ಅವರ ಆತ್ಮಕತೆ ‘ಚೆಂಡೆ ಮದ್ದಲೆಗಳ ನಡುವೆ’ ಅಪರೂಪದ ಜೀವನ ದೃಷ್ಟಿಯಿಂದ, ಶ್ರದ್ಧೆ ಮತ್ತು ಸಾಹಸಗಳಿಂದ ರೋಪುಗೊಂಡ ಕಲಾವಿದನೊಬ್ಬನ ಬದುಕನ್ನು ಹೃದ್ಯವಾಗಿ ಅನಾವರಣಗೊಳಿಸುವ ಕೃತಿಯಾಗಿದೆ”. ಡಾ. ನಾ. ಮೊಗಸಾಲೆಯವರು ಈ ಆತ್ಮಕಥನದ ಬಗೆಗೆ ವ್ಯಕ್ತಪಡಿಸಿದ ಅನಿಸಿಕೆಯಿದು. ಇದು ಒಟ್ಟು ನೂರಾ ಐವತ್ತೆಂಟು ಪುಟಗಳನ್ನು ಹೊಂದಿದ ಪುಸ್ತಕವು.

ಮೊದಲಾಗಿ ಕನ್ನಡ ಸಂಘ ಕಾಂತಾವರ ಈ ಸಂಸ್ಥೆಯ ಪರಿಚಯ ಲೇಖನವನ್ನು ನೀಡಲಾಗಿದೆ. ಬಳಿಕ ‘ಲೇಖಕನ ಮಾತು’ ಎಂಬ ಶೀರ್ಷಿಕೆಯಡಿ ಶ್ರೀ ಗೋಪಾಲಕೃಷ್ಣ ಕುರುಪ್ ಅವರು ಅನಿಸಿಕೆಗಳನ್ನು ವ್ಯಕ್ತಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಅಲ್ಲದೆ ಈ ಕೃತಿಯನ್ನು ತಮ್ಮ ತಂದೆ ತಾಯಿಯರಿಗೆ ಅರ್ಪಿಸಿರುತ್ತಾರೆ. ಡಾ| ಸತ್ಯನಾರಾಯಣ ಮೈಸೂರು ಮತ್ತು ಹರಿದಾಸ ಮಲ್ಪೆ ರಾಮದಾಸ ಸಾಮಗರ ಸಂದೇಶಗಳನ್ನೂ ನೀಡಿರುತ್ತಾರೆ.

ಮದ್ದಳೆಗಾರ, ಯಕ್ಷಗಾನ ಹಿಮ್ಮೇಳದ ಶ್ರೇಷ್ಠ ಗುರು ಶ್ರೀ ಗೋಪಾಲಕೃಷ್ಣ ಕುರುಪ್ ಅವರ ಆತ್ಮಕಥನ ‘ಚೆಂಡೆ ಮದ್ದಳೆಗಳ ನಡುವೆ’ ಎಂಬ ಈ ಹೊತ್ತಗೆಯನ್ನು ಮುದದಿಂದ ನಿನ್ನ, ನಿರೀಕ್ಷೆಯ ನೆರಳಲ್ಲಿ, ಗುರು ತೋರಿದ ದಾರಿ, ದುಡಿಮೆಯ ಬೆಟ್ಟದಲ್ಲಿ, ಯಕ್ಷಗಾನ ಮೇಳಕ್ಕೆ ಪ್ರವೇಶ, ಸ್ತ್ರೀ ವೇಷದ ಸೆಟ್ಟು, ತಿರುಗಾಟ, ಬೋಧಕನಾಗಿ ನಾನು, ಧರ್ಮಸ್ಥಳ ಮೇಳದಲ್ಲಿ, ಬರ್ಗುಳಕ್ಕೆ ಭೇಟಿ, ಹೊಂಗನಸು ನನಸಾಯಿತು, ಮನೆ ಕಟ್ಟಿ ನೋಡು, ಆಘಾತ-ಪರಿಹಾರ, ಸಂಗಾತಿಯ ಸಂಚಾರ, ಆಟದೊಳಗಿನ ಆಟ, ಮೊದಲ ಸನ್ಮಾನದ ಹಾದಿ, ನಡೆದಿದೆ ಬದುಕು, ಮುಂಬೈ ಹಿಮ್ಮೇಳ, ಮತ್ತೊಂದು ಮನೆ, ಸುತ್ತ ಮುತ್ತ, ಸೋಲು ಗೆಲುವಿನ ಉಯ್ಯಾಲೆ, ಭಾಗವತ ಎಂಬ ವಿಚಾರಗಳಡಿ ಕಟ್ಟಿ ಅನಾವರಣಗೊಳಿಸಲಾಗಿದೆ.

ತಮ್ಮ ಬಾಲ್ಯದ ಬದುಕು, ಯಕ್ಷಗಾನ ಕಲಿಕೆ, ವೃತ್ತಿ ಜೀವನ, ವೈಯುಕ್ತಿಕ ಬದುಕು, ಸಹಕಲಾವಿದರ ಒಡನಾಟ, ಹಿಂದಿನ ಕಾಲದ ಪ್ರದರ್ಶನಗಳು ಮೊದಲಾದ ವಿಚಾರಗಳ ಬಗ್ಗೆ ಶ್ರೀ ಗೋಪಾಲಕೃಷ್ಣ ಕುರುಪ್ ಅವರು ತನ್ನ ಈ ಆತ್ಮಕಥನದಲ್ಲಿ ಸರಳವಾಗಿ ಮನಮುಟ್ಟುವಂತೆ ವಿವರಿಸಿರುತ್ತಾರೆ. ಬಳಿಕ ಸುಮಾರು ಇಪ್ಪತ್ತೆಂಟು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ. ನೂರಾ ಮೂವತ್ತೊಂಬತ್ತು ಪುಟಗಳಿಂದ ಕೂಡಿದ ಈ ಆತ್ಮಕಥನದ ಹೊರ ಆವರಣದಲ್ಲಿ ಡಾ| ನಾ. ಮೊಗಸಾಲೆ ಅವರು ಗೋಪಾಲಕೃಷ್ಣ ಕುರುಪ್ ಅವರ ಬಗೆಗೆ ಬರೆದ ಲೇಖನವನ್ನು ನೀಡಲಾಗಿದೆ. 

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಅತ್ಯಾಕರ್ಷಕ ಭಾಂಗ್ರಾ ನೃತ್ಯ ವೀಡಿಯೊ (Bhangra Dance Video)

ಪಂಜಾಬ್ ಎಂದ ಕೂಡಲೇ ನಮಗೆ ನೆನಪಾಗುವುದು ಅಲ್ಲಿಯ ನೀರಿನ ಸೆಲೆ ಬತ್ತದ ಕೃಷಿಭೂಮಿ ಮತ್ತು ಅಲ್ಲಿಯ ಚಳಿಗಾಲ ಮತ್ತು ಸೆಖೆಗಾಲ.

ಹಾಗೆಯೇ ಪಂಜಾಬ್ ಎಂದ ಕೂಡಲೇ ಎಲ್ಲರಿಗೂ ನೆನಪಾಗುವುದು ಎಲ್ಲಿಯ ವಿಶಿಷ್ಟ ಶೈಲಿಯ ನೃತ್ಯ ಪ್ರಾಕಾರ. ಹೌದು. ಅದುವೇ ಎಲ್ಲರ ಅಚ್ಚುಮೆಚ್ಚಿನ ಭಾಂಗ್ರಾ ನೃತ್ಯ.  ವೀಡಿಯೊ ನೋಡಿ.