Friday, September 18, 2026
Home Blog Page 379

ಎಂ.ಕೆ. ರಮೇಶ ಆಚಾರ್ಯ ಮತ್ತು ಬಂಗಾರ್ ಆಚಾರಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ – 2020

2020ನೇ  ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಒಟ್ಟು 65 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಇಬ್ಬರು ಯಕ್ಷಗಾನ ಕಲಾವಿದರಿಗೆ ಸ್ಥಾನ ದೊರಕಿದೆ.

ಜಾಹೀರಾತು

ಖ್ಯಾತ ಸ್ತ್ರೀ ವೇಷಧಾರಿಗಳಾದ  ಎಂ.ಕೆ. ರಮೇಶ ಆಚಾರ್ಯ ಮತ್ತು ಮೂಡಲಪಾಯ ಯಕ್ಷಗಾನದ ಭಾಗವತರಾದ ಬಂಗಾರ್ ಆಚಾರಿ ಅವರು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದರು.

ಪ್ರಶಸ್ತಿ ಪ್ರಧಾನ ಸಮಾರಂಭ ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು ನಡೆಯಲಿದೆ. 

ಬಾಲಗೋಪಾಲ – ಸಾಲಿಗ್ರಾಮ ಮಕ್ಕಳ ಮೇಳ (ರಿ)

ಶೀರ್ಷಿಕೆಯೇ ಸೂಚಿಸುವಂತೆ ಈ ಹೊತ್ತಗೆಯು ಸಾಲಿಗ್ರಾಮ ಮಕ್ಕಳ ಮೇಳದ ರಜತ ಸಂಚಿಕೆಯಾಗಿ 2002ರಲ್ಲಿ ಪ್ರಕಟವಾಗಿತ್ತು. ‘ಬಾಲಗೋಪಾಲ’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಈ ರಜತ ಸಂಚಿಕೆಯು ನೂರಾ ಅರುವತ್ತನಾಲ್ಕು ಪುಟಗಳಿಂದ ಕೂಡಿದೆ.

ಈ ಕೃತಿಯ ಪ್ರಕಾಶಕರು ಸಾಲಿಗ್ರಾಮ ಮಕ್ಕಳ ಮೇಳ (ರಿ), ಪಟೇಲರ ಮನೆ, ಕೋಟ. ಪ್ರಧಾನ ಸಂಪಾದಕರು ಪ್ರೊ| ಸಿ. ಉಪೇಂದ್ರ ಸೋಮಯಾಜಿ. ಗೌರವ ಸಂಪಾದಕರು ಶ್ರೀ ಕೆ.ಎಂ.ಉಡುಪ,ಮಂದಾರ್ತಿ. ಈ ರಜತ ಸಂಚಿಕೆಯನ್ನು ಮಕ್ಕಳ ಮೇಳದ ಪ್ರಧಾನ ರೂವಾರಿ, ರಾಜ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿದ್ದ ಕಾರ್ಕಡ ಶ್ರೀನಿವಾಸ ಉಡುಪರಿಗೆ ಅರ್ಪಿಸಲಾಗಿದೆ.

ಸಂಪಾದಕ ಪ್ರೊ| ಸಿ. ಉಪೇಂದ್ರ ಸೋಮಯಾಜಿ ಅವರು ‘ಮೊದಲ ಮಾತು’ ಎಂಬ ತಮ್ಮ ಲೇಖನದಲ್ಲಿ ಅನಿಸಿಕೆಗಳನ್ನು ತಿಳಿಸಿ, ಸಹಕರಿಸಿದವರಿಗೆಲ್ಲಾ ಕೃತಜ್ಞತೆಗಳನ್ನು ತಿಳಿಸಿರುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ.ವೀರೇಂದ್ರ ಹೆಗ್ಗಡೆ, ಶ್ರೀ ಕೆ.ಕೆ.ಪೈ, ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕೆ.ಜಯಪ್ರಕಾಶ ಹೆಗ್ಡೆ ಅವರುಗಳ ಶುಭಸಂದೇಶಗಳನ್ನೂ ನೀಡಲಾಗಿದೆ.

ಬಳಿಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಶ್ರೀಧರ ಉಪ್ಪೂರು, ಡಾ. ಸಿ.ಆನಂದರಾಮ ಉಪಾಧ್ಯ, ಕಂದಾವರ ರಘುರಾಮ ಶೆಟ್ಟಿ, ಎಚ್.ಸುಬ್ಬಣ್ಣ ಭಟ್ಟ, ಪ್ರೊ| ಉದ್ಯಾವರ ಮಾಧವ ಆಚಾರ್ಯ, ಕೆ. ಮೋಹನ್, ಎಂ. ಸುಧೀಂದ್ರ ಹೊಳ್ಳ, ಕಾರ್ಕಡ ರಾಮಚಂದ್ರ ಉಡುಪ, ಪಿ.ವಿ.ಐತಾಳ, ಮಣೂರು ನರಸಿಂಹ ಮಧ್ಯಸ್ಥ, ಡಾ.ಎಂ.ಪ್ರಭಾಕರ ಜೋಶಿ, ಎಚ್. ಸುಜಯಿಂದ್ರ ಹಂದೆ, ಅಂಬಾತನಯ ಮುದ್ರಾಡಿ, ಡಾ. ಆರ್. ಗಣೇಶ್ ಶತಾವಧಾನಿ, ಕೆ.ಎಂ.ರಾಘವ ನಂಬಿಯಾರ್, ಪ್ರೊ| ಸಿ. ಉಪೇಂದ್ರ ಸೋಮಯಾಜಿ,

ಸ್ವಾಮಿ ಪುರುಷೋತ್ತಮಾನಂದ, ಗಿರೀಶ ಕಾಸರವಳ್ಳಿ, ಡಾ| ಎಚ್.ಕೆ.ರಂಗನಾಥ್, ಡಾ| ಭಾನುಮತಿ, ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಜಾನ್ ಆರ್. ಮರ್, ಕೂರಾಡಿ ಸದಾಶಿವ ಕಲ್ಕೂರ, ದಯಾನಂದ ಬಳ್ಕೂರು, ಬಿ. ರಮೇಶ್ ಭಟ್, ಕೆ.ಎಂ. ಉಡುಪ, ಎಚ್.ಶ್ರೀಧರ ಹಂದೆ, ಇವರುಗಳ ಲೇಖನಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ 

ಧರ್ಮಾಂಗದ ದಿಗ್ವಿಜಯ, ಮೋಹಿನಿ ಏಕಾದಶಿ – ಮಲ್ಲ ದೇವಸ್ಥಾನದಲ್ಲಿ ತಾಳಮದ್ದಳೆ

(ಸಾಂದರ್ಭಿಕ ಚಿತ್ರ) ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮಲ್ಲ ಇಲ್ಲಿ ದಿನಾಂಕ- 01-11-2020 ನೇ ಆದಿತ್ಯವಾರ ಅಪರಾಹ್ನ ಗಂಟೆ 2-00 ಕ್ಕೆ ಸರಿಯಾಗಿ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಸೇವಾರೂಪದ ತಾಳಮದ್ದಳೆ ನಡೆಯಲಿದೆ. 

   ಪ್ರಸಂಗ : ಧರ್ಮಾಂಗದ ದಿಗ್ವಿಜಯ – ಮೋಹಿನಿ ಏಕಾದಶಿ  (ಕವಿ : ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ) ಹಿಮ್ಮೇಳದಲ್ಲಿ ಭಾಗವತರು: ಬಲಿಪ ಪ್ರಸಾದ್ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಸತೀಶ್ ಭಟ್ ಪಳ್ಳಿ. ಚೆಂಡೆ, ಮದ್ದಳೆ: ಮುರಾರಿ ಕಡಂಬಳಿತ್ತಾಯ, ಪುಂಡಿಕಾಯಿ ರಾಜೇಂದ್ರ ಪ್ರಸಾದ್. ಮುಮ್ಮೇಳ: ರಾಧಾಕೃಷ್ಣ ಕಲ್ಚಾರ್, ರಾಮ ಭಟ್ ಕೋಟೆ, ವಿಷ್ಣು ಶರ್ಮ ಪಣಕಜೆ, ಹರೀಶ್ ಭಟ್ ಬಳಂತಿಮೊಗರು , ರವಿರಾಜ್ ಭಟ್ ಪನೆಯಾಲ.

ಭಕ್ತಾಭಿಮಾನಿಗಳಿಗೆ ಹಾಗೂ ಕಲಾಭಿಮಾನಿಗಳಿಗೆ ಆದರದ ಸ್ವಾಗತ ಬಯಸುವ, ಬಲಿಪ ಪ್ರಸಾದ್ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಪುಂಡಿಕಾಯಿ ರಾಜೇಂದ್ರ ಪ್ರಸಾದ್ ಭಟ್.

ಮೂರೂರು ವಿಷ್ಣು ಭಟ್ಟರಿಗೆ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ, ಅಜಿತ್‍ಕುಮಾರ್ ಅಂಬಲಪಾಡಿ ಅವರಿಗೆ ಟಿ.ವಿ.ರಾವ್ ಪ್ರಶಸ್ತಿ

ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ಕಳೆದ ಏಳು ವರ್ಷಗಳಿಂದ ನೀಡುತ್ತಾ ಬಂದ ಮೇಲಿನ ಎರಡು ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮ ನವಂಬರ್ 7 ರಂದು ಸಂಜೆ 5.15 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂಪನ್ನಗೊಳ್ಳಲಿದೆ.

ಜಾಹೀರಾತು 

ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹ ಸಂದೇಶ ನೀಡಲಿದ್ದಾರೆ.

ಮೂರೂರು ವಿಷ್ಣು ಭಟ್ಟ

ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ಸ್ತ್ರೀವೇಷಧಾರಿ ಮೂರೂರು ವಿಷ್ಣು ಭಟ್ಟರಿಗೂ, ಅಭಿಮಾನಿ ಬಳಗದ ಗೌರವಾಧ್ಯಕ್ಷರಾಗಿದ್ದ ಟಿ. ವಿ.ರಾವ್ ಪ್ರಶಸ್ತಿಯನ್ನು

ಅಜಿತ್‍ಕುಮಾರ್ ಅಂಬಲಪಾಡಿ

ಹವ್ಯಾಸಿ ಹಿಮ್ಮೇಳ ವಾದಕ, ವೇಷಧಾರಿ ಅಜಿತ್‍ಕುಮಾರ್ ಅಂಬಲಪಾಡಿ ಇವರಿಗೂ ಪ್ರದಾನ ಮಾಡಲಾಗುವುದೆಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಮತ್ತು ಕಾರ್ಯದರ್ಶಿ ಶ್ರೀ ಎಂ. ಗೋಪಿಕೃಷ್ಣ ರಾವ್‍ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಲವ್ ಜಿಹಾದ್ – ಹರಿಯಾನಾದಲ್ಲಿ ಮತ್ತೊಂದು ಕೃತ್ಯ

ಯಾಕೋ ಈ ಲವ್ ಜಿಹಾದ್ ಪ್ರಕರಣಗಳು ಕೊನೆಗೊಳ್ಳುತ್ತಿರುವ ಹಾಗೆ ಕಾಣಿಸುತ್ತಿಲ್ಲ ಇದೀಗ ಹರ್ಯಾಣದಿಂದ ಮತ್ತೊಂದು ಪ್ರಕರಣ ವರಿದಿಯಾಗುತ್ತಾ ಇದೆ. ತನ್ನ ಪದವಿ ಪರೀಕ್ಷೆ ಬರೆದು ಮುಗಿಸಿ ಹೊರ ಬರುತ್ತಿದ್ದ 21 ವರ್ಷದ ಯುವತಿಯೊಬ್ಬಳ ಮೇಲೆ ಗುಂಡಿನ ದಾಳಿ ನಡೆಸಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇದೊಂದು ಮತಾಂತರ ಯತ್ನದ ಹತಾಶ ಕೃತ್ಯ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ. 

ಹರಿಯಾಣಾದ ಫರೀದಾಬಾದ್ ನಲ್ಲಿ ಕೊನೆಯ ವರ್ಷದ ಬಿ.ಕಾಮ್ ವಿದ್ಯಾರ್ಥಿನಿ ಪರೀಕ್ಷೆ ಬರೆದು ಕಾಲೇಜಿನಿಂದ ಹೊರಗೆ ಬಂದು ಮನೆಯತ್ತ ತೆರಳುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ದುರುಳರು ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಅಪಹರಿಸಲು ಪ್ರಯತ್ನಿಸುತ್ತಾರೆ. ಅಪಹರಣ ಯತ್ನ ವಿಫಲವಾದಾಗ ಆರೋಪಿಗಳು ಗುಂಡು ಹಾರಿಸಿದ್ದ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಜಾಹೀರಾತು 

ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಾ ಇದೆ. ಈ ಸಂಬಂಧ ತೌಸೀಫ್ ಎನ್ನುವವನನ್ನು ಬಂಧಿಸಲಾಗಿದೆ.  

“ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಮತಾಂತರವಾಗುವಂತೆ ಮೂರು ವರ್ಷದಿಂದ ಯುವತಿಗೆ ಬಲವಂತ ಮಾಡುತ್ತಿದ್ದ.  ಯುವತಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವುದಕ್ಕೆ  ನಿರಾಕರಿಸಿದ್ದಕ್ಕೆ ಆರೋಪಿ ಅಪಹರಿಸಲು ಯತ್ನಿಸಿದಾಗ  ಯುವತಿ ತಪ್ಪಿಸಿಕೊಂಡಾಗ  ಗುಂಡು ಹಾರಿಸಿ ಕೊಲೆ ನಡೆಸಿದ್ದಾರೆ” ಎಂದು ಯುವತಿಯ ತಂದೆ ಹೇಳಿದ್ದಾರೆ. ಹಾಗೂ ತಾನು 2018ರಲ್ಲೇ ಆರೋಪಿಯ ವಿರುದ್ಧ ದೂರು ನೀಡಿದ್ದೆ ಎಂದೂ ಯುವತಿಯ ತಂದೆ ಹೇಳಿದ್ದಾರೆ.

 

ಕಲೆ ಬೆಳಗಿಸುವ ಕಲಾಪೋಷಕರು – ಮುಳಿಯ ಶ್ಯಾಮ ಭಟ್

ಯಾವುದೇ ಒಂದು ಕಲಾಪ್ರಕಾರವಿರಲಿ, ಅದು ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ ಅಥವಾ ಇನ್ನುಳಿದ ಯಾವುದೇ ಪ್ರಸಿದ್ಧ ಕಲಾಪ್ರಾಕಾರಗಳೇ ಆಗಿರಲಿ. ಕಲೆಯನ್ನು ಉಳಿಸಿ ಬೆಳೆಸುವ ಹತ್ತು ಹಲವು ಕೈಗಳು ಇರಲೇ ಬೇಕು. ಕಲಾವಿದನಿಂದ ಮಾತ್ರ ಕಲೆ ಉಳಿಯಲಾರದು. ಪ್ರೇಕ್ಷಕನಿಂದ ಮಾತ್ರವೂ ಕೂಡಾ ಅಲ್ಲ.

ಆ ಕಲೆಗೆ ಪ್ರೋತ್ಸಾಹಿಸುವ ಪ್ರೇಕ್ಷಕ, ಸಂಘಟಕರಲ್ಲದೆ ಕಲಾಪೋಷಕರ ಪಾತ್ರವೂ ಕಲೆಯ ಉಳಿವಿನಲ್ಲಿ, ಬೆಳವಣಿಗೆಯಲ್ಲಿ ಮಹತ್ತರವಾದುದು. ನಮ್ಮ ನಡುವೆ ಅಂತಹ ಕಲಾಪೋಷಕರು ಹಲವಾರು ಮಂದಿ ಇದ್ದಾರೆ. ಅಂತಹಾ ಮಹನೀಯರ ಅಗ್ರಗಣ್ಯರ ಸಾಲಿನಲ್ಲಿ ಶ್ರೀ ಮುಳಿಯ ಶ್ಯಾಮ ಭಟ್ ಅವರೂ ಒಬ್ಬರು. ಸರಾಫ್ ಮುಳಿಯ ಶ್ಯಾಮ ಭಟ್ ಅವರ ಹೆಸರು ಊರ ಪರವೂರ ಕಲಾಭಿಮಾನಿಗಳಿಗೆ ಮತ್ತು ಕಲಾವಿದರಿಗೆ ಚಿರಪರಿಚಿತ. ಮಾತ್ರವಲ್ಲದೆ ಸ್ವರ್ಣೋದ್ಯಮಿಯಾಗಿ ಸಾಕಷ್ಟು ಹೆಸರನ್ನು ಮಾಡಿದವರು. ಅವರು ಉದ್ಯಮಿಯಾಗಿ ಯಶಸ್ಸನ್ನು ಗಳಿಸುವುದರ ಜೊತೆಗೆ ತಾನು ಸಂಪಾದಿಸಿದ ಮೊತ್ತದಲ್ಲಿ ಒಂದಂಶವನ್ನು ದಾನ ಧರ್ಮಾದಿಗಳಿಗೆ ವಿನಿಯೋಗಿಸಿದವರು. ಕಲೆ, ಸಂಸ್ಕೃತಿ, ವಿದ್ಯಾಭ್ಯಾಸ ಮೊದಲಾದ ಕ್ಷೇತ್ರಗಳಿಗೆ ಸಹಾಯಹಸ್ತ ನೀಡಿದವರು.

ಶ್ರೀ ಮುಳಿಯ ಶ್ಯಾಮ ಭಟ್

ಮುಳಿಯ ಶ್ಯಾಮ ಭಟ್ಟರು ಉದ್ಯಮಿಯಾಗಿ ಹೇಗೆ ಅಥವಾ ಅವರ ಉದ್ಯಮ, ವ್ಯವಹಾರಗಳ ಬಗ್ಗೆ ಹೇಳುವುದು ಇಲ್ಲಿ ನನ್ನ ಉದ್ದೇಶವಲ್ಲ. ಆ ಬಗ್ಗೆ ಇನ್ನೊಮ್ಮೆ ಇನ್ನೊಂದು ಮಾಧ್ಯಮದಲ್ಲಿ ಬರೆಯುವೆ.  ಹೌದು. ಮುಳಿಯ ಶ್ಯಾಮ ಭಟ್ಟರು ಸಂಗೀತಾದಿ ರಂಗ ಕಲೆಗಳಲ್ಲಿ ಅತೀವ ಆಸಕ್ತಿ ಉಳ್ಳವರು. ತಾನು ಸ್ವತಃ ಸಾಹಿತಿಯಾಗಿ ಹಲವಾರು ಲೇಖನಗಳನ್ನೂ ಬರೆದವರು. ಹೆಚ್ಚಿನೆಲ್ಲಾ ಕಲಾ ಪ್ರದರ್ಶನಗಳಲ್ಲಿ ಮೊದಲ ಸಾಲಿನ ಪ್ರೇಕ್ಷಕರು. ಪುತ್ತೂರಿನ ಕಲಾ ಸಂಬಂಧಿತ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಅಧ್ಯಕ್ಷರಾಗಿಯೋ ಅಥವಾ ಮುಖ್ಯ ಅತಿಥಿಗಳಾಗಿಯೋ ಇವರಿಗೊಂದು ಸ್ಥಾನ ಇದ್ದೇ ಇರುತ್ತದೆ. ಅದರಲ್ಲಿಯೂ ಯಕ್ಷಗಾನವೆಂದರೆ ಇವರಿಗೆ ಬಲು ಪ್ರೀತಿ. ಎಷ್ಟೋ ಯಕ್ಷಗಾನದ ಪ್ರದರ್ಶನಗಳಿಗೆ ಇವರ ಸಹಾಯಹಸ್ತ ಇರುತ್ತಿತ್ತು. ಎಷ್ಟೋ ಬಾರಿ ಆಟ ಆಡಿಸುವ ಸಂಘಟಕರು ಮತ್ತು ಕಲಾವಿದರು ಇವರಿಂದ ಅಥವಾ ಇವರ ವ್ಯವಹಾರ ಸಂಸ್ಥೆಯಿಂದ ಸಹಾಯವನ್ನು ಪಡೆದ ಪ್ರಸಂಗಗಳಿವೆ.

ಜಾಹೀರಾತು

ಪುತ್ತೂರಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳ ಸಪ್ತಾಹಗಳಲ್ಲಿ ಆಟ ಆಡಿಸುವ ಮಹನೀಯರಲ್ಲಿ ಶ್ಯಾಮ ಭಟ್ ಅವರೂ ಒಬ್ಬರು. ಹೆಚ್ಚಿನ ಸಪ್ತಾಹಗಳಲ್ಲಿ ಒಂದು ದಿನದ ಸೇವಾಕರ್ತರಾಗಿ ಮುಳಿಯ ಶ್ಯಾಮ ಭಟ್ಟರ ಹೆಸರಿರುತ್ತಿತ್ತು.  ಹಲವಾರು ಬಾರಿ ಸಂಘಟಕರು ಯಕ್ಷಗಾನದ ಪ್ರದರ್ಶನ ನಿಗದಿಪಡಿಸಿದ ನಂತರ ಇವರಿಂದ ಅಥವಾ ಇವರ ಉದ್ಯಮ ಸಂಸ್ಥೆಯಿಂದ ಉದಾರವಾದ ಸಹಾಯಧನವನ್ನು ಪಡೆಯಲು ಸಂಪರ್ಕಿಸಿದಾಗ ಶ್ರೀಯುತರು ಸಂತೋಷದಿಂದಲೇ ಪ್ರೋತ್ಸಾಹಿಸಿದ್ದಾರೆ. ಹೀಗೆ ಒಂದು ಕಲೆ ಉಳಿಯಬೇಕಾದರೆ ಅದಕ್ಕೆ ಪ್ರೋತ್ಸಾಹಿಸುವ ಹಲವಾರು ಕೈಗಳು ಬೇಕಾಗುತ್ತದೆ. ಅಂತಹಾ ಕಲಾಪೋಷಕ ಮಹನೀಯರಿಂದ ಇಂದು ಯಕ್ಷಗಾನ ಶ್ರೀಮಂತವಾಗಿದೆ. ಶ್ರೀ ಮುಳಿಯ ಶ್ಯಾಮ ಭಟ್ಟರಂತಹಾ ಹಲವಾರು ಕಲಾಪೋಷಕರು ಕೂಡಾ ಕಲೆಯ ಒಂದು ಅಂಗವಾಗಿ ಈ ಕಲೆಯನ್ನು ಶ್ರೀಮಂತಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 

ಹತ್ರಾಸ್ ರೇಪ್ ಕೇಸ್ : ವಿಚಾರಣೆ ಬೇರೆಡೆ ವರ್ಗಾವಣೆಗೆ ಸುಪ್ರೀಂ ಕೋರ್ಟ್ ನಕಾರ 

ದೇಶದ ಉತ್ತರ ಪ್ರದೇಶದ ಹತ್ರಾಸ್ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯ  ಕುರಿತಾದ ಕೇಸಿನ ವಿಚಾರಣೆಯ ವರ್ಗಾವಣೆಗೆ ಸುಪ್ರೀಂ ಕೋರ್ಟ್ ಇಂದು ಅಸಮ್ಮತಿ ಸೂಚಿಸಿದೆ.

ಈ ಕೇಸಿನ ಕುರಿತಂತೆ ಸಿಬಿಐ ವಿಚಾರಣೆ ಮತ್ತು ಇತರ ಎಲ್ಲಾ ವಿಷಯಗಳ ಬಗ್ಗೆಯೂ ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಲಿದೆ ಎಂದು ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹತ್ರಾಸ್ ಕೇಸಿನ ವಿಚಾರಣೆಯನ್ನು ಉತ್ತರ ಪ್ರದೇಶ ಹೈಕೋರ್ಟ್ ಹೊರತಾಗಿ ಬೇರೆ ಯಾವುದಾದರೂ ಹೈಕೋರ್ಟಿನಲ್ಲಿ ವಿಚಾರಣೆ ನಡೆಸಬೇಕೆಂದು ಕೋರಿ  ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

ಸಿಬಿಐ ಕೂಡ ಅಲಹಾಬಾದ್ ಹೈಕೋರ್ಟಿಗೆ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಹೇಳಿದೆ. ತನಿಖೆಯು ಪ್ರಗತಿಯಲ್ಲಿರುವ ಈ ಹಂತದಲ್ಲಿ ವಿಚಾರಣೆಯನ್ನು ಬೇರೆಡೆಗೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಸಿಬಿಐ ಮೊದಲು ವಿಚಾರಣೆ ಪೂರ್ತಿಗೊಳಿಸಲಿ. ಆಮೇಲೆ ಅಗತ್ಯವಿದ್ದರೆ ಮಾತ್ರ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

‘ತುಳು ಯಕ್ಷಗಾನ ಪುರ್ಸಂಗ ಬ್ರಹ್ಮೆ’ – ಕೆ. ಅನಂತರಾಮ ಬಂಗಾಡಿ

ಶೀಷಿಕೆಯೇ ಸೂಚಿಸುವಂತೆ ಈ ಕೃತಿಯು ವಿದ್ವಾಂಸ, ಲೇಖಕ, ಅನೇಕ ತುಳು ಪ್ರಸಂಗಗಳನ್ನು ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಶ್ರೀ ಕೆ. ಅನಂತರಾಮ ಬಂಗಾಡಿ ಇವರ ಕುರಿತಾಗಿ ಪ್ರಕಟವಾಗಿತ್ತು. ಈ ಪುಸ್ತಕವು ಓದುಗರ ಕೈ ಸೇರಿದ್ದು 2019ರಲ್ಲಿ. ಪ್ರಕಾಶಕರು ಸಂದೇಶ ಪ್ರಕಾಶನ, ಬಂಗಾಡಿ.

ಶ್ರೀ ಕೆ. ಅನಂತರಾಮ ಬಂಗಾಡಿ ಅವರು ಸುಮಾರು 27 ಕನ್ನಡ ಪ್ರಸಂಗಗಳನ್ನೂ ಬರೆದಿರುತ್ತಾರೆ. ಇವರು ಬರೆದ ತುಳು ಪ್ರಸಂಗಗಳು ಸುಮಾರು ಅರುವತ್ತೈದು. ಇವುಗಳಲ್ಲಿ ಒಟ್ಟು ಇಪ್ಪತ್ತೆರಡು ಪ್ರಸಂಗಗಳು ಪ್ರಕಟವಾಗಿವೆ. ಸಂಗ್ರಹ ಲೇಖನ – ಶ್ರೀ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಅವರು ಮಾಹಿತಿಗಳನ್ನು ಸಂಗ್ರಹಿಸಿ ಈ ಕೃತಿಯು ಪ್ರಕಟವಾಗಲು ಶ್ರಮಿಸಿರುತ್ತಾರೆ.

ಖ್ಯಾತ ಸಾಹಿತಿ ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ‘ಸುರುತ ಪೂವೆರಿ ನುಡಿಕಟ್ಟ್’ ಎಂಬ ಶೀರ್ಷಿಕೆಯಡಿ ಮುನ್ನುಡಿ ಲೇಖನವನ್ನು ಬರೆದಿರುತ್ತಾರೆ. ಶ್ರೀ ವಿಜಯ ಕುಮಾರ್ ಭಂಡಾರಿ, ಹೆಬ್ಬಾರಬೈಲು ಅವರು ‘ಬರೆಯಿನಾಯನ ರಡ್ಡ್ ಪಾತೆರ’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವು ‘ಉದಿಪು’ ಮತ್ತು ‘ಮದಿಪು’ ಎಂಬ ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

ಜಾಹೀರಾತು

ಎಲ್ಲಾ ವಿಚಾರಗಳನ್ನು ತುಳು ಭಾಷೆಯಲ್ಲಿ ನೀಡಲಾಗಿದ್ದು ಕೊನೆಯಲ್ಲಿ ಶ್ರೀ ಅನಂತರಾಮ ಬಂಗಾಡಿ ಅವರು ಪಡೆದ ಗೌರವ ಪ್ರಶಸ್ತಿ,ಸನ್ಮಾನಗಳು, ಅವರು ಬರೆದ ಯಕ್ಷಗಾನ ತುಳು ಪ್ರಸಂಗಗಳು, ಕನ್ನಡ ಪ್ರಸಂಗಗಳು, ಪ್ರಕಟಿತ ಪ್ರಸಂಗಗಳು, ಅವರು ಬರೆದ ಪ್ರಸಂಗಗಳನ್ನು ಪ್ರದರ್ಶಿಸಿದ ಮೇಳಗಳು, ಪೌರಾಣಿಕ ಪ್ರಸಂಗದ ಧ್ವನಿಸುರುಳಿಗಳು, ಹಾಸ್ಯ ಧ್ವನಿಸುರುಳಿ, ತುಳು ಸಾಮಾಜಿಕ ಮತ್ತು ಐತಿಹಾಸಿಕ ನಾಟಕಗಳು, ತುಳು ಭಕ್ತಿಗೀತೆಗಳು, ಇವರ ಸಂಪಾದಕತ್ವದ ಸ್ಮರಣ ಸಂಚಿಕೆಗಳು, ಪ್ರಕಟಿತ ಇತಿಹಾಸ ಪುಸ್ತಕಗಳು ಮೊದಲಾದ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ.

ಪುಸ್ತಕ ಪರಿಚಯ: ರವಿಶಂಕರ್ ವಳಕ್ಕುಂಜ  

ಎಂದರೋ ಮಹಾನುಭಾವುಲು – ಪದ್ಮವಿಭೂಷಣ ಡಾ| ಎಂ. ಬಾಲಮುರಳಿಕೃಷ್ಣ (Padmavibhooshan Dr. Mangalampalli Balamuralikrishna)

0

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಎಲ್ಲರೂ ಬಹಳಷ್ಟು ಇಷ್ಟಪಡುವ ಹೆಸರು ಪದ್ಮವಿಭೂಷಣ ಡಾ| ಎಂ. ಬಾಲಮುರಳಿಕೃಷ್ಣ. ಸಾಟಿಯಿಲ್ಲದ ಶಾರೀರ ಮತ್ತು ಕೇಳಿದರೆ ಮತ್ತೆ ಮತ್ತೆ ಅದನ್ನೇ ಕೇಳುತ್ತಾ ದಿನದ ಸಮಯವೆಲ್ಲಾ ಅವರ ಸಂಗೀತ ಕೇಳುತ್ತಾ ಮೈಮರೆಯುತ್ತೇವೆ. ಇದು ಎಲ್ಲಾ ಸಂಗೀತ ಪ್ರೇಮಿಗಳ ಅನುಭವ ಆಗಿರಬಹುದೆಂದುಕೊಳ್ಳುತ್ತೇನೆ.

ಅವರ ಸಂಗೀತ ಕಛೇರಿಯ ಮಾಸ್ಟರ್ ಪೀಸ್ ‘ಎಂದರೋ ಮಹಾನುಭಾವುಲು…’  ಒಂದು ವೀಡಿಯೋ ಇಲ್ಲಿದೆ. ರಚನೆ: ಶ್ರೀ ತ್ಯಾಗರಾಜರ ಪಂಚರತ್ನ ಕೃತಿ. ತಾಳ; ಆದಿ ತಾಳ, ರಾಗ:ಶ್ರೀ ರಾಗಂ 

ಸರ್ಪಂಗಳ ಪ್ರಶಸ್ತಿ ಮತ್ತು ಪುರಸ್ಕಾರ – ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ ಮತ್ತು ಬೆಳಾಲು ಸಂಜೀವ ಪೂಜಾರಿ 

ಉಡುಪಿಯ ಶ್ರೀಕೃಷ್ಣ ಮಠ ಮತ್ತು ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆಯುವ, ಯಕ್ಷಗಾನ ಕಲಾರಂಗದ ಸಂಯೋಜನೆಯ, ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರತಿಷ್ಠಾನ ಆಯೋಜಿಸುತ್ತಿರುವ ಈ ಬಾರಿಯ  ‘ಸರ್ಪಂಗಳ ಯಕ್ಷೋತ್ಸವ’ವು ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ದಿನಾಂಕ 27.10.2020ರ ಮಂಗಳವಾರ ಸಂಜೆ ಘಂಟೆ 7ರಿಂದ ರಾತ್ರಿ ಘಂಟೆ 10ರ ವರೆಗೆ ನಡೆಯಲಿದೆ.

ಈ ಸಂದರ್ಭದಲ್ಲಿ 2020 ನೇ ಸಾಲಿನ ಪ್ರತಿಷ್ಠಿತ ಸರ್ಪಂಗಳ ಪ್ರಶಸ್ತಿ ಮತ್ತು ಸರ್ಪಂಗಳ ಪುರಸ್ಕಾರವನ್ನು ನೀಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.

ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ

ಈ ಬಾರಿಯ ಪ್ರತಿಷ್ಠಿತ ‘ಕಲಾಪೋಷಕ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಸ್ಮಾರಕ ಯಕ್ಷಗಾನ ಸಾಧಕ ಪ್ರಶಸ್ತಿ’ ಪುರಸ್ಕೃತರಾಗುವವರು ಖ್ಯಾತ ಮದ್ದಳೆಗಾರರಾದ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ.

ಬೆಳಾಲು ಸಂಜೀವ ಪೂಜಾರಿ

ಹಾಗೂ ಸರ್ಪಂಗಳ ಪುರಸ್ಕಾರಕ್ಕೆ ಪಾತ್ರರಾಗುವವರು ಧರ್ಮಸ್ಥಳ ಮೇಳದ ನೇಪಥ್ಯ ಕಲಾವಿದರಾದ ಬೆಳಾಲು ಸಂಜೀವ ಪೂಜಾರಿ. ಸರ್ಪಂಗಳ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪುರಸ್ಕಾರ ನಡೆಯಲಿದೆ. ಸಭಾ ಕಾರ್ಯಕ್ರಮದ ಅನಂತರ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ‘ಕಾಯಕಲ್ಪ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

 ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರದ ನಿಯಮಗಳಿಗನುಸಾರವಾಗಿ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ನಿಗದಿತ ಸಂಖ್ಯೆಯ ಪ್ರೇಕ್ಷಕರಿಗೆ ಮಾತ್ರ ಪ್ರವೇಶ. ಆದರೆ ಈ ಎಲ್ಲಾ ಕಾರ್ಯಕ್ರಮಗಳ ನೇರ  ಪ್ರಸಾರ ಯೂಟ್ಯೂಬ್ ಮತ್ತು ಫೇಸ್ ಬುಕ್ ತಾಣದಲ್ಲಿ ಲಭ್ಯ ಇದೆ ಎಂದು ಸಂಘಟಕರು ತಿಳಿಸಿದ್ದಾರೆ.