Monday, February 24, 2025
Home Blog Page 370

ಎಸ್. ಪಿ. ಬಾಲಸುಬ್ರಹ್ಮಣ್ಯಂ ಸರಳತೆ ಮತ್ತು ಆದರ್ಶಕ್ಕೆ ಈ ವೀಡಿಯೊ ಸಾಕ್ಷಿ

ಎಸ್. ಪಿ. ಬಾಲಸುಬ್ರಹ್ಮಣ್ಯಂ ಸರಳತೆಗೆ ಮತ್ತು ಅವರು ಹಿರಿಯರನ್ನು ಗೌರವಿಸುವ ರೀತಿಯನ್ನು ಮಾತಿನಲ್ಲಿ, ಬರಹದಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅವರು ಎಲ್ಲದಕ್ಕೂ ನಮಗೆ ಆದರ್ಶ ಮತ್ತು ಪೂಜನೀಯ ವ್ಯಕ್ತಿ. ಹಿರಿಯ ಗಾಯಕರಾದ ಕೆ.ಜೆ. ಯೇಸುದಾಸ್ ಬಗ್ಗೆ ಅವರ ಭಕ್ತಿ ಭಾವಗಳು ಅನುಕರಣೀಯ. 

ಯಕ್ಷ ರಸ ಚೇತನ – ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ

‘ಯಕ್ಷ ರಸ ಚೇತನ’ ಎಂಬ ಈ ಹೊತ್ತಗೆಯು ಪ್ರಕಟವಾದುದು 1994ರಲ್ಲಿ. ಕಲಾತಪಸ್ವಿ, ಶ್ರೇಷ್ಠ ಕಲಾವಿದ, ಮಹಾನ್ ಸಾಧಕ,  ಪ್ರಸಂಗಕರ್ತರಾದ, ಶ್ರೀ ಕೀರಿಕ್ಕಾಡು ದಿ| ವಿಷ್ಣು ಭಟ್ಟರ ಕುರಿತಾದ ಪುಸ್ತಕವಿದು. ಶ್ರೀಯುತರು ಸ್ಥಾಪಿಸಿ ಬೆಳೆಸಿದ ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ವರ್ಷವೇ ಈ ಪುಸ್ತಕವು ಪ್ರಕಟವಾಗಿತ್ತು. ಪ್ರಕಾಶಕರು ಸುವರ್ಣ ಮಹೋತ್ಸವ ಮತ್ತು  ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ ಸ್ಮಾರಕ ಸಮಿತಿ, ದೇಲಂಪಾಡಿ. ಸಂಪಾದಕರು – ಪ್ರಾಧ್ಯಾಪಕರೂ, ತಾಳಮದ್ದಳೆ ಅರ್ಥಧಾರಿಗಳೂ ಲೇಖಕರೂ ಆಗಿರುವ ಶ್ರೀ ವೆಂಕಟರಾಮ ಭಟ್ಟ  ಸುಳ್ಯ. ಸಲಹೆ ಡಾ. ರಮಾನಂದ ಬನಾರಿ ಮತ್ತು ಚಂದ್ರಶೇಖರ ಏತಡ್ಕ. ‘ನಿಮ್ಮಲ್ಲಿ’ ಎಂಬ ಶೀರ್ಷಿಕೆಯಡಿ ಸಂಪಾದಕರಾದ ಶ್ರೀ ವೆಂಕಟರಾಮ ಭಟ್, ಸುಳ್ಯ. ಅವರು ಈ ಹೊತ್ತಗೆಯ ಬಗೆಗೆ ವಿವರಗಳನ್ನು ನೀಡಿರುತ್ತಾರೆ. ಬಳಿಕ ಸುವರ್ಣ ಮಹೋತ್ಸವ ಮತ್ತು ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ ಸ್ಮಾರಕ ಸಮಿತಿಯ ಪದಾಧಿಕಾರಿಗಳಾಗಿದ್ದವರ ಹೆಸರುಗಳನ್ನು ನೀಡಲಾಗಿದೆ.  ಕೀರಿಕ್ಕಾಡು ಮಾಸ್ತರರ ವಂಶಾವಳೀ ವಿವರವನ್ನು ಕೊಡಲಾಗಿದೆ.

ಈ ಪುಸ್ತಕದಲ್ಲಿ ಒಟ್ಟು ಮೂವತ್ತೊಂದು ಲೇಖನಗಳಿವೆ. ಪೆರ್ಲ ಕೃಷ್ಣ ಭಟ್, ಕಯ್ಯಾರ ಕಿಂಞಣ್ಣ  ರೈ, ಮಂದಾರ ಕೇಶವ ಭಟ್, ರಾಮಚಂದ್ರ ಉಚ್ಚಿಲ, ಅಂಬೆಮೂಲೆ ಗೋವಿಂದ ಭಟ್, ಅಮೃತ ಸೋಮೇಶ್ವರ, ಅರ್ತಿಕಜೆ, ಕೆ.ಎಂ.ರಾಘವ ನಂಬಿಯಾರ್, ಪಟ್ಟಾಜೆ ವೆಂಕಟ್ರಮಣ ಭಟ್, ಎಂ. ಪ್ರಭಾಕರ ಜೋಶಿ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಕೆದಂಬಾಡಿ ಜತ್ತಪ್ಪ ರೈ, ಕುಂಬಳೆ ನಾರಾಯಣ ಗಟ್ಟಿ, ಕೆ. ವಿ. ಗೋವಿಂದ ಭಟ್ಟ, ವಿಚಿತ್ರ ಏತಡ್ಕ, ಹರಿನಾರಾಯಣ ಮಾಡಾವು, ಡಾ. ರಮಾನಂದ ಬನಾರಿ, ಉಡುಪುಮೂಲೆ ಗೋಪಾಲಕೃಷ್ಣ ಭಟ್,  ಎಸ್.ವಿ. ಖಂಡಿಗೆ, ಗಣೇಶ್ ಕುತ್ಯಾಡಿ, ವೆಂಕಟರಾಜ ಪುಣಿಚಿತ್ತಾಯ,ತುದಿಯಡ್ಕ ವಿಷ್ಣ್ವಯ್ಯ, ಪ್ರೊ| ವೇಣುಗೋಪಾಲ ಕಾಸರಗೋಡು, ಕೇದಗಡಿ ಗುಡ್ಡಪ್ಪ ಗೌಡ, ಗಣಪತಿ ದಿವಾಣ, ಸೊಡಂಕೂರು ತಿರುಮಲೇಶ್ವರ ಭಟ್ಟ, ಡಾ. ಸೀ. ಹೊಸಬೆಟ್ಟು, ಅಡ್ಕ ಗೋಪಾಲಕೃಷ್ಣ ಭಟ್, ಡಾ. ಚಂದ್ರಶೇಖರ ದಾಮ್ಲೆ, ಬಿ.ಕೆ.ಭಟ್ ಇವರುಗಳು ಕೀರಿಕ್ಕಾಡು ಮಾಸ್ತರರ ಕುರಿತು ಬರೆದಿರುವ ಲೇಖನಗಳನ್ನು ನಮಗೆ ಇಲ್ಲಿ ಓದಬಹುದು. ಅಲ್ಲದೆ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕಪ್ಪು ಬಿಳುಪಿನ ಛಾಯಾಚಿತ್ರಗಳೂ ಈ ಪುಸ್ತಕದಲ್ಲಿವೆ. 

ಲೇಖನ: ರವಿಶಂಕರ್ ವಳಕ್ಕುಂಜ

“ನೆನಪಿನುಂಗುರ”  ಸತ್ಯಮೂರ್ತಿ ದೇರಾಜೆ – ಹಳ್ಳಿ ಹಾದಿಯಲಿ ನೆನೆವ ಪದಗಳು 

ನೆನಪಿನುಂಗುರ- ಸತ್ಯಮೂರ್ತಿ ದೇರಾಜೆ ಈ ಕೃತಿಯು ಪ್ರಕಟವಾದುದು 2007ರಲ್ಲಿ. ದಿ| ಶ್ರೀ ಸತ್ಯಮೂರ್ತಿ ಅವರ ವ್ಯಕ್ತಿತ್ವವನ್ನು ಸಮರ್ಥವಾಗಿ ನಿರೂಪಿಸಿದ ನೆನಪಿನ ಸಂಚಿಕೆಯಾಗಿ ಈ ಹೊತ್ತಗೆಯು ಓದುಗರ ಕೈ ಸೇರಿತ್ತು. ದೇರಾಜೆ ಸೀತಾರಾಮಯ್ಯ ಸಂಸ್ಕೃತಿರಂಗ ಚೊಕ್ಕಾಡಿ ಎಂಬ ಸಂಸ್ಥೆಯು ಚಿಗುರೊಡೆದುದು 1999ರಲ್ಲಿ. ಸದ್ರಿ ಸಂಸ್ಥೆಯಲ್ಲಿ ಸಕ್ರಿಯರಾಗಿ ಕಲಾ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು ಶ್ರೀ ಸತ್ಯಮೂರ್ತಿ ದೇರಾಜೆ ಅವರು. ಈ ಸಂಸ್ಥೆಯನ್ನು ಸರ್ವರ ಸಹಕಾರದಿಂದ ಶ್ರೀಯುತರು ಹುಟ್ಟುಹಾಕಿದ್ದರು. ಸಂಸ್ಕೃತಿ ರಂಗದ ರೂವಾರಿಯೇ ಆಗಿದ್ದರು. ತಾಳಮದ್ದಳೆ ಅರ್ಥಧಾರಿಯಾಗಿ, ಉತ್ತಮ ಬರಹಗಾರರಾಗಿ, ಕಲಾಸಂಘಟಕರಾಗಿ, ಸಹೃದಯೀ ಬಂಧುವಾಗಿ ಶ್ರೀ ಸತ್ಯಮೂರ್ತಿ ದೇರಾಜೆ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವರು. ವಿವಿಧ ಸಹಕಾರೀ ಸಂಸ್ಥೆಗಳಲ್ಲಿ, ಆಡಳಿತ ಮಂಡಳಿಗಳಲ್ಲಿ ಹೊಣೆಯರಿತು ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಶ್ರೀಯುತರ ಜೀವಿತಾವಧಿ 1952 – 2005. ಶ್ರೀ ಸತ್ಯಮೂರ್ತಿ ದೇರಾಜೆ ಅವರ ನೆನಪಿನ ಸಂಚಿಕೆ ‘ನೆನಪಿನುಂಗುರ’ ಇದರ ಪ್ರಕಾಶಕರು ದೇರಾಜೆ ಸೀತಾರಾಮಯ್ಯ ಸಂಸ್ಕೃತಿರಂಗ,ಚೊಕ್ಕಾಡಿ. ಸಂಪಾದಕರು ಶ್ರೀ ಲಕ್ಷ್ಮೀಶ ತೋಳ್ಪಾಡಿ. ನೂರಾ ಇಪ್ಪತ್ತನಾಲ್ಕು ಪುಟಗಳಿಂದ ಕೂಡಿದ ಪುಸ್ತಕವಿದು. ಮೊದಲಾಗಿ ಸಂಸ್ಕೃತಿ ರಂಗದ ಅಧ್ಯಕ್ಷರು ಮತ್ತು ಸದಸ್ಯರ ಮನದ  ಮಾತುಗಳನ್ನು ರಂಗದ ಅಂತರಂಗ ಎಂಬ ಬರಹದಡಿ ನೀಡಲಾಗಿದೆ. ಸಂಪಾದಕರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು ‘ಮರಳಿ ಪಡೆಯುವ ತನಕ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ಬಳಿಕ ಒಟ್ಟು ಮೂವತ್ತೊಂಬತ್ತು ಬರಹಗಳನ್ನು ನೀಡಲಾಗಿದೆ. ಶ್ರೀ ಸತ್ಯಮೂರ್ತಿ ದೇರಾಜೆಯವರ ಕುರಿತು ಲೇಖನಗಳನ್ನು ಬರೆದವರು ಡಾ. ಎಂ. ಪ್ರಭಾಕರ ಜೋಶಿ, ವಿದ್ವಾನ್ ಉಮಾಕಾಂತ ಭಟ್ಟ, ವಿದ್ವಾನ್ ಗ. ನಾ. ಭಟ್ಟ, ಉಜಿರೆ ಅಶೋಕ ಭಟ್, ಪಾಲೆಪಾಡಿ ಗಣಪಯ್ಯ ಭಟ್, ಆನೆಕಾರ ಗಣಪಯ್ಯರು, ಕೋಟೆ ವಸಂತಕುಮಾರ, ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ, ಲಕ್ಷ್ಮೀನಾರಾಯಣ ಉಬರಡ್ಕ, ಎಂ.ಬಿ. ಸದಾಶಿವ, ಗಂಗಾಧರ ಬೆಳ್ಳಾರೆ, ಎನ್. ಪದ್ಮನಾಭ ಗೌಡ, ಎನ್. ಶೀನಪ್ಪ, ಎಂ.ಟಿ. ಶಾಂತಿಮೂಲೆ, ಪದ್ಯಾಣ ಗಣಪತಿ ಭಟ್, ಸುಬ್ರಾಯ ಚೊಕ್ಕಾಡಿ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಎಸ್. ಆರ್. ವಿಜಯಶಂಕರ, ಹರೀಶ್ ಕೇರ, ಡಾ. ಶ್ರೀಕೃಷ್ಣ ಚೊಕ್ಕಾಡಿ, ಪದ್ಯಾಣ ಪರಮೇಶ್ವರ ಭಟ್, ವೆಂಕಟರಾಮ ಭಟ್ಟ ಸುಳ್ಯ, ನಾರಾಯಣ ಕಂಜರ್ಪಣೆ, ಕೆ. ರಾಮ ಜೋಯಿಸ, ಜಿ. ಎಸ್. ಉಬರಡ್ಕ, ವತ್ಸಲಾ ಎಂ.ಎನ್, ಪ್ರಸಾದ್ ರಕ್ಷಿದಿ, ಡಾ. ಕೃಷ್ಣಮೂರ್ತಿ ಪಾರೆ, ಮೂರ್ತಿ ದೇರಾಜೆ, ಸತ್ಯನ್ ದೇರಾಜೆ, ಸಾವಿತ್ರಿ ಕೃಷ್ಣ ಬೆಂಗಳೂರು, ಸತ್ಯವತಿ ಉಬರಡ್ಕ, ರಾಧೆ ಯು. ಪ್ರಸಾದ್, ಸತ್ಯಪ್ರೇಮ ಪಾರೆ, ಜಯಂತಿ ದೇರಾಜೆ, ಸುಧನ್ವಾ ದೇರಾಜೆ ಇವರುಗಳು. ಬಳಿಕ ‘ಹಲವು ಚಿತ್ರ-ನೂರು ನೆನಪು’ ವಿಚಾರದಡಿ ಮೂವತ್ತೆರಡು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಿರುತ್ತಾರೆ. ಸಂಸ್ಕೃತಿ ರಂಗದ ಉಪಾಧ್ಯಕ್ಷರಾಗಿದ್ದ ಭಾಗವತ ಶ್ರೀ ಬೊಮ್ಮೆಟ್ಟಿ ಮೋಹನ ಭಟ್ ಅವರು 2006ರಲ್ಲಿ ನಿಧನರಾಗಿದ್ದು ಅವರ ವ್ಯಕ್ತಿತ್ವವನ್ನು ನೆನೆವ ಪದಗಳಾಗಿ ಈ ಸಂಪುಟದಲ್ಲಿ ಅಳವಡಿಸಲಾಗಿದೆ. ಅವರ ಬಗೆಗೆ ಕೆ.ವಿಶ್ವವಿನೋದ ಬನಾರಿ ಮತ್ತು ಸುಧನ್ವಾ ದೇರಾಜೆಯವರು ಬರೆದ ‘ನೆನಪ ನೇವರಿಸುವ ಮೋಹನ’ ಮತ್ತು ‘ಮೌನಕ್ಕೊಂದು ಮೋಹನ ರಾಗ’ ಎಂಬ ಲೇಖನಗಳನ್ನು ನೀಡಲಾಗಿದೆ. ಲೇಖನಗಳ ನಡುವೆ, ಶ್ರೀ ಸತ್ಯಮೂರ್ತಿ ದೇರಾಜೆಯವರು ತಾಳಮದ್ದಳೆ ಅರ್ಥಧಾರಿಯಾಗಿ ಸೃಜನಶೀಲತೆಯಿಂದ ಹೇಳುತ್ತಿದ್ದ ಸಂಭಾಷಣೆಗಳನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ

‘ಮನಸಿಜ ಪಿತ ನೀನು’ – ಯಕ್ಷಗಾನ ವೀಡಿಯೊ

ಮಧುಸೂದನ ಅಲೆವೂರಾಯರ ಯು ಟ್ಯೂಬ್ ಚಾನೆಲ್ ನ ಈ ವಿಡಿಯೋ ಬಹಳವಾಗಿ ಇಷ್ಟವಾಗುತ್ತದೆ.  ಯಾಕೆಂದರೆ ಬಲಿಪರ ಸುಂದರ ಪದ್ಯಕ್ಕೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆಯ ಕೈಚಳಕದ ಜೊತೆ ಸೇರಿದಾಗ ಅದೊಂದು ಅಪೂರ್ವ ಅನುಭವ. 

ಪುಳಿಂಚ – ಪುಳಿಂಚ ರಾಮಯ್ಯ ಶೆಟ್ಟಿ ಸ್ಮೃತಿ – ಕೃತಿ 

ಪುಳಿಂಚ ರಾಮಯ್ಯ ಶೆಟ್ಟಿ ಸ್ಮೃತಿ – ಕೃತಿಯು ಪ್ರಕಟವಾಗಿ ಓದುಗರ ಕೈ ಸೇರಿದ್ದು 2016ರಲ್ಲಿ. ಶೀರ್ಷಿಕೆಯೇ ಸೂಚಿಸುವಂತೆ ಈ ಕೃತಿಯು ಖ್ಯಾತ ಯಕ್ಷಗಾನ ಕಲಾವಿದರಾಗಿ ರಂಗದಲ್ಲಿ ಮೆರೆದ ಶ್ರೀ ಪುಳಿಂಚ ರಾಮಯ್ಯ ಶೆಟ್ಟರ ಸಂಸ್ಮರಣ ಗ್ರಂಥವಾಗಿ ಲೋಕಾರ್ಪಣೆಗೊಂಡಿತ್ತು. ಈ ಹೊತ್ತಗೆಯ ಪ್ರಕಾಶಕರು ಪುಳಿಂಚ ಶ್ರೀಧರ ಶೆಟ್ಟಿಯವರು, ಪುಳಿಂಚ ಸೇವಾ ಪ್ರತಿಷ್ಠಾನ, ಮಂಗಳೂರು ಅವರು. ಲೇಖಕರು ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು. ಶ್ರೀ ಪುಳಿಂಚ ರಾಮಯ್ಯ ಶೆಟ್ಟಿಯವರ ಜೀವಿತಾವಧಿ 1939 – 2002. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಯಕ್ಷಪಯಣವನ್ನು ಆರಂಭಿಸಿದ ಶ್ರೀಯುತರು ನಲುವತ್ತೇಳು ವರ್ಷಗಳ ಯಕ್ಷ ಕಲಾಮಾತೆಯ ನಿಷ್ಠಾವಂತ ಸೇವಕನಾಗಿ ಪ್ರಸಿದ್ಧರಾದರು. ತೆಂಕುತಿಟ್ಟು ಯಕ್ಷಗಾನದ ಹಳೆಯ ಪದ್ಧತಿಯಂತೆ ಪೂರ್ವರಂಗದ ವೇಷಗಳಿಂದ ತೊಡಗಿ, ಬಳಿಕ ಸ್ತ್ರೀವೇಷ, ಪುಂಡುವೇಷ, ಪೀಠಿಕೆ ವೇಷ, ಎದುರು ವೇಷ, ಬಣ್ಣದ ವೇಷ ಹೀಗೆ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ದಾಟಿ ಬಂದವನೇ ಹಾಸ್ಯಗಾರನಾಗಬೇಕು. ಹಾಸ್ಯಗಾರ ಎನಿಸಿಕೊಳ್ಳಲು ಬೇಕಾದ ಅರ್ಹತೆಗಳೇನು ಎಂಬುದನ್ನು ಇದರಿಂದ ನಮಗೆ ತಿಳಿದುಕೊಳ್ಳಬಹುದು. ಆತ ಎಲ್ಲವನ್ನೂ ತಿಳಿದಿರಬೇಕು ಎಂಬ ಕಾರಣದಿಂದಲೇ ಈ ವ್ಯವಸ್ಥೆಯನ್ನು ಹೇಳಿರಬಹುದು. ಈ ರೀತಿಯಾಗಿಯೇ ಸಾಗಿ ಬಂದು ಹಾಸ್ಯಗಾರ ಎಂಬ ಘನ ಸ್ಥಾನಕ್ಕೆ ಅರ್ಹರಾದವರು ಶ್ರೀ ಪುಳಿಂಚ ರಾಮಯ್ಯ ಶೆಟ್ಟಿಯವರು. ಶ್ರೀಯುತರ ಕುರಿತಾದ ಪುಸ್ತಕದ ಬಗೆಗೆ ಬರೆಯಲು ಅವಕಾಶ ಸಿಕ್ಕಿದುದಕ್ಕಾಗಿ ಸಂತೋಷಪಡುತ್ತೇನೆ. ಅದು ಭಾಗ್ಯವೆಂದೂ ಭಾವಿಸುತ್ತೇನೆ. ಇದು ಒಟ್ಟು ಇನ್ನೂರ ಮೂವತ್ತೆಂಟು ಪುಟಗಳುಳ್ಳ ಪುಸ್ತಕ. 2016 ಫೆಬ್ರವರಿ 20 ಶನಿವಾರದಂದು ಪುಳಿಂಚ ಸೇವಾ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಪುಳಿಂಚ ಪ್ರಶಸ್ತಿ ಪ್ರಧಾನ, ಪುಳಿಂಚ ಸೇವಾ ರತ್ನ ಪುರಸ್ಕಾರದ ಜತೆಯಲ್ಲಿ ಈ ಕೃತಿಯೂ ಬಿಡುಗಡೆಗೊಂಡಿತ್ತು. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಪ್ರೊ| ಬಿ.ಎ. ವಿವೇಕ ರೈ ಅವರು. ಶ್ರೀಯುತರು ಪುಳಿಂಚ ರಾಮಯ್ಯ ಶೆಟ್ಟಿಯವರನ್ನು ಎಳವೆಯಿಂದಲೇ ಬಲ್ಲವರು. ಪುಳಿಂಚ ರಾಮಯ್ಯ ಶೆಟ್ಟಿಯವರ ವ್ಯಕ್ತಿತ್ವ, ಕಲಾವಿದರಾಗಿ ಅವರ ಸಾಧನೆ, ಈ ಕೃತಿಯ ಸ್ವರೂಪಗಳ ಬಗೆಗೆ ತಮ್ಮ ಮುನ್ನುಡಿ ಬರಹದಲ್ಲಿ ವಿವರಿಸಿದ್ದಾರೆ. ”ಪುಳಿಂಚ ರಾಮಯ್ಯ ಶೆಟ್ಟಿಯವರ ಮಗ ಶ್ರೀಧರ ಶೆಟ್ಟಿಯವರು ಹೊರತಂದಿರುವ ಈ ಸ್ಮರಣ ಗ್ರಂಥ ಪಿತೃಋಣವನ್ನು ಸಲ್ಲಿಸಿದ ಮಹತ್ವದ ನೆನಪಿನ ಸಂಪುಟ. ತಂದೆಯ ನೆನಪನ್ನು ಚಿರಸ್ಥಾಯಿಯಾಗಿ ಉಳಿಸಲು ಶ್ರೀಧರ ಶೆಟ್ಟಿಯವರು  ತಾವು ಜನಿಸದ, ತಾವು ಬದುಕದ ‘ಪುಳಿಂಚ’ ಊರನ್ನು ತನ್ನ ಹೆಸರಿನ ಜೊತೆಗೆ ಪ್ರೀತಿಯಿಂದ ಸೇರಿಸಿಕೊಂಡಿದ್ದಾರೆ. ತಮ್ಮ ತಂದೆಯ ಕಾಲದ ಯಕ್ಷಗಾನ ಕಲಾವಿದರ ಬಡತನವನ್ನು ಮನಗಂಡು ಕಲಾವಿದರಿಗೆ ನೆರವು ನೀಡುವ, ಹಿರಿಯ ಕಲಾವಿದರನ್ನು ಗೌರವಿಸುವ ಕಾಯಕವನ್ನು ಪ್ರಾಂಜಲವಾಗಿ ಮಾಡುತ್ತಿದ್ದಾರೆ. ಅದಕ್ಕೆ ಮುಕುಟಪ್ರಾಯವಾಗಿ ಈ ನೆನಪಿನ ಸಂಪುಟ ಮೂಡಿಬಂದಿದೆ”.  ಪ್ರೊ| ಬಿ.ಎ. ವಿವೇಕ ರೈಗಳು ಪುಳಿಂಚ ಶ್ರೀಧರ ಶೆಟ್ಟಿಯವರ ಸತ್ಕಾರ್ಯವನ್ನು ಮೆಚ್ಚಿ ಆಡಿದ ನುಡಿಗಳಿವು. ಬಳಿಕ ಸಂಪಾದಕರಾದ  ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ‘ಪುಳಿಂಚರ ನೆನಪಿಗೊಂದು ತಳಿರ ಬಿಂದು’ ಎಂಬ ಲೇಖನದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಶ್ರೀ ಪುಳಿಂಚ ರಾಮಯ್ಯ ಶೆಟ್ಟರ ಪುತ್ರರೂ ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶ್ರೀ ಪುಳಿಂಚ ಶ್ರೀಧರ ಶೆಟ್ಟರು ‘ಪ್ರಕಾಶಕರ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಮನದ ಮಾತುಗಳನ್ನು ಅಕ್ಷರ ರೂಪಕ್ಕಿಳಿಸಿ, ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ. ಈ ಕೃತಿಯು ನುಡಿಸೇಸೆ, ಪುಳಿಂಚರೆಂದರೆ,  ಕಲಾವಿದರು ಕಂಡ ಪುಳಿಂಚ, ತನ್ನವರ ಕಣ್ಣಲ್ಲಿ, ಅನುಬಂಧ ಐದು ವಿಭಾಗಗಳಿಂದ ಕೂಡಿದೆ. ಮೊದಲ ವಿಭಾಗ ನುಡಿಸೇಸೆ. ಇಲ್ಲಿ ಇಪ್ಪತ್ತಾರು ಮಂದಿ ಮಹನೀಯರುಗಳ ಲೇಖನಗಳನ್ನು ನೀಡಲಾಗಿದೆ. ಎರಡನೇ ವಿಭಾಗ ‘ಪುಳಿಂಚರೆಂದರೆ’. ಇಲ್ಲಿಯೂ ಇಪ್ಪತ್ತಾರು ಮಂದಿ ಮಹನೀಯರುಗಳು ಪುಳಿಂಚ ರಾಮಯ್ಯ ಶೆಟ್ಟರ ಕುರಿತಾಗಿ ಬರೆದ ಲೇಖನಗಳಿವೆ. ಮೂರನೇ ವಿಭಾಗ ‘ಕಲಾವಿದರು ಕಂಡ ಪುಳಿಂಚ’. ಇಲ್ಲಿ ಮೂವತ್ತೆಂಟು ಮಂದಿ ಕಲಾವಿದರುಗಳ ಬರಹಗಳನ್ನು ನೀಡಿರುತ್ತಾರೆ. ನಾಲ್ಕನೆಯ ವಿಭಾಗ ‘ತನ್ನವರ ಕಣ್ಣಲ್ಲಿ’. ಇಲ್ಲಿ ಪುಳಿಂಚ ರಾಮಯ್ಯ ಶೆಟ್ಟರ ಆತ್ಮೀಯರು ಮತ್ತು ಬಂಧುಗಳ ಇಪ್ಪತ್ತಾರು ಬರಹಗಳಿವೆ. ಕೊನೆಯ ವಿಭಾಗ ‘ಅನುಬಂಧ’. ಇಲ್ಲಿ ಪುಳಿಂಚ ಸ್ಮೃತಿ ಚಿತ್ರ, ಪುಳಿಂಚ ಪ್ರಶಸ್ತಿಗೆ ಅಷ್ಟದಿಗ್ಗಜರು, ಪುಳಿಂಚ ಹಸ್ತಾಕ್ಷರ, ಪುಳಿಂಚ ಯಕ್ಷಗಾನ ಪ್ರಸಂಗ, ಪುಳಿಂಚ ಪ್ರಕಟಿತ ಕೃತಿಗಳು, ಸುದ್ದಿ ಗದ್ದಿಗೆಯಲ್ಲಿ ಪುಳಿಂಚರು, ಮಾನಪತ್ರಗಳು ಎಂಬ ವಿಚಾರಗಳ ಬಗ್ಗೆ ವಿವರಗಳನ್ನು ನೀಡಲಾಗಿದೆ. ಪುಳಿಂಚ ಎಂಬ ಕೃತಿಯನ್ನು ಕರ್ನಾಟಕ ಮತ್ತು ಕಟೀಲು ಮೇಳಗಳನ್ನು ಸಂಚಾಲಕರಾಗಿ ಮುನ್ನಡೆಸಿದ್ದ ಕೀರ್ತಿಶೇಷ ಕಲ್ಲಾಡಿ ಕೊರಗ ಶೆಟ್ಟರಿಗೂ ಕೀರ್ತಿಶೇಷ ದೇವಶ್ಯ ಬೊಳ್ನಾಡುಗುತ್ತು ಮಹಾಲಿಂಗ ಶೆಟ್ಟರಿಗೂ ಅರ್ಪಿಸಲಾಗಿದೆ. ಅನುಬಂಧ ವಿಭಾಗದಲ್ಲಿ ಸುಮಾರು ನೂರಕ್ಕೂ ಮಿಕ್ಕಿದ ಬಣ್ಣದ ಮತ್ತು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ. ಅವ್ಯಕ್ತ ಪ್ರಪಂಚದಲ್ಲಿರುವ ಹಿರಿಯ ಖ್ಯಾತ ಕಲಾವಿದರಾದ ಪುಳಿಂಚ ಶ್ರೀ ರಾಮಯ್ಯ ಶೆಟ್ಟರಿಗೆ ನುಡಿನಮನಗಳು. ಪುಳಿಂಚ ಸೇವಾ ಪ್ರತಿಷ್ಠಾನ (ರಿ) ಮಂಗಳೂರು ಇವರಿಗೆ ಶುಭಾಶಯಗಳು. 

ನಾಸಾಚ್ಛೇದ – ಸುರತ್ಕಲ್ಲಿನಲ್ಲಿ ತಾಳಮದ್ದಳೆ 

ಮಂಗಳೂರಿನ ಸುರತ್ಕಲ್ ಸಮೀಪದ ತಡಂಬೈಲ್ ಎಂಬಲ್ಲಿ ನಾಸಾಚ್ಛೇದ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ತಡಂಬೈಲ್ ಶ್ರೀ ವಾಸುದೇವ ರಾವ್ ಅವರ ಮನೆಯಲ್ಲಿ ದಿನಾಂಕ 28.09.2020 ನೇ ಸೋಮವಾರದಂದು ಅಪರಾಹ್ನ 2.30 ಘಂಟೆಗೆ ಸರಿಯಾಗಿ ತಾಳಮದ್ದಳೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. 

ಪ್ರಖ್ಯಾತ ಭಾಗವತ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಅಸ್ತಂಗತ

ಯಕ್ಷಗಾನ ರಂಗದ ಹಿರಿಯ ಕಲಾವಿದ ಭಾಗವತಿಕೆಯಲ್ಲಿ ತನ್ನದೇ ವಿಶಿಷ್ಟ ಶೈಲಿಯಿಂದ ಜನಮಾನಸದಲ್ಲಿ ಅದ್ವಿತೀಯ ಸ್ಥಾನವನ್ನು ಗಳಿಸಿಕೊಂಡಿದ್ದ ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಾದ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ನಿಧನ ಹೊಂದಿದ್ದಾರೆ. ಯಕ್ಷಗಾನದ ಹೆಚ್ಚಿನೆಲ್ಲಾ ಪದ್ಯಗಳನ್ನು ಕಂಠಪಾಠದಿಂದ ಪುಸ್ತಕ ನೋಡದೆ ಆಟ ಆಡಿಸಬಲ್ಲವರಾಗಿದ್ದ ಶಾಸ್ತ್ರಿಗಳು ಇಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. 

ಅಗರಿ ಶೈಲಿಯಲ್ಲಿ ಸಮರ್ಥವಾಗಿ ಹಾಡಬಲ್ಲವರಲ್ಲಿ ಮೊದಲನೆಯ ಸಾಲಿನಲ್ಲಿದ್ದ ತೆಂಕಬೈಲು ಶಾಸ್ತ್ರಿಗಳು ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಕೆಲವು ಪ್ರಸಂಗಗಳು ವರ್ಷದಲ್ಲಿ ಒಂದು ಬಾರಿಯೂ ಪ್ರದರ್ಶನ ಕಾಣದೆ ಇರಬಹುದು. ಆದುದರಿಂದ ಪದ್ಯಗಳು ಭಾಗವತನೊಬ್ಬನಿಗೆ ಕಂಠಪಾಠವಾಗಿದೆ ಎಂದರೆ ಅದು ಅವರ ಅದ್ಭುತ ಸಾಧನೆಯೇ ಸರಿ. ಕೆಲವು ದಶಕಗಳ ಕಾಲ ಮೇಳದ ತಿರುಗಾಟ ಮಾಡಿದ ಭಾಗವತರಿಗೆ ಪದ್ಯ ಬಾಯಿಪಾಠ ಬರುವುದು ಕಷ್ಟಸಾಧ್ಯವಾದ ಈ ಕಾಲದಲ್ಲಿಯೂ ತನ್ನ ವೃತ್ತಿಜೀವನದ ಆರಂಭದ ದಿನಗಳಲ್ಲಿಯೂ ಪದ್ಯವನ್ನು ಕಂಠಪಾಠ ಮಾಡಿಯೇ ರಂಗವೇರುತ್ತಿದ್ದ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಒಂದು ಅಚ್ಚರಿಯಾಗಿ ಕಾಣುತ್ತಾರೆ. ಹಾಗೆ ನೋಡಿದರೆ ಖ್ಯಾತ ಭಾಗವತ ಶ್ರೀ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಭಾಗವತಿಕೆಯ ಶೈಲಿಯಲ್ಲಿಯೂ ಇತರರಿಗಿಂತ ಭಿನ್ನವೇ. ಯಾರನ್ನೂ ಅನುಕರಿಸದೆ ತನ್ನತನವನ್ನು ರಂಗದಲ್ಲಿ ಮೆರೆದವರು. ಅಪೂರ್ವವಾದ ಶಾರೀರ, ಸ್ವರಗಳ ಏರಿಳಿತಗಳಿಂದ ಪ್ರೇಕ್ಷಕರನ್ನು ಆರಂಭದಲ್ಲಿಯೇ ಹಿಡಿದಿಟ್ಟುಕೊಳ್ಳುತ್ತಾರೆ. ಏನೋ ಒಂದು ವಿಶಿಷ್ಟ ಆಕರ್ಷಣೆಯಿದೆ ಆ ಸ್ವರಭಾರದಲ್ಲಿ.  ಮೊದಲ ಪದ್ಯದಿಂದಲೇ ಪ್ರೇಕ್ಷಕರ ಮನಸ್ಸನ್ನು ಆಕ್ರಮಿಸಿಬಿಡುತ್ತಾರೆ. ಮೊದಲ ಓವರಿನಿಂದಲೇ ಪಂದ್ಯದ ಮೇಲೆ ಹಿಡಿತ ಸಾಧಿಸುವ ಆಟಗಾರನ ಹಾಗೆ ನಮ್ಮ ಭಾಗವತರೂ ಕೂಡಾ. ಶಾಸ್ತ್ರಿಗಳದು ವಿಶಿಷ್ಟ ಶೈಲಿ. ಆದರದು ಜನಪ್ರಿಯ. ಜನಮಾನಸದಲ್ಲಿ ನಿಂದ ಸ್ವರಮಾಧುರ್ಯ. ಘಂಟೆಗೆ ಬಡಿದ ಶಬ್ದದ ಹಾಗೆ ಮನಸಿನ ಅಂಗಳದಲ್ಲಿ ಮಾರ್ದನಿಸುತ್ತದೆ. ಒಮ್ಮೆ ಕೇಳಿದರೆ ಮತ್ತೊಮ್ಮೆ ಕೇಳಬೇಕೆನ್ನುವ ಮತ್ತೊಮ್ಮೆ ಕೇಳಿದರೆ ಮಗದೊಮ್ಮೆ ಆಲಿಸಬೇಕೆನ್ನುವ ಮಧುರ ನಿನಾದ. ಅವರ ಸ್ವರದ ಇಂಪಿಗೆ ಮಾರುಹೋದ ಯಕ್ಷಗಾನದ ಪ್ರಜ್ಞಾವಂತ ಪ್ರೇಕ್ಷಕರು ಹೀಗಂದುಕೊಂಡರೆ ಅದರಲ್ಲಿ ಉತ್ಪ್ರೇಕ್ಷೆಯೇನೂ ಇರಲಾರದು.

   ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ  ತಾಲೂಕಿನ ಕರೋಪಾಡಿಯಲ್ಲಿ, ತೆಂಕಬೈಲು ಕೃಷ್ಣ ಶಾಸ್ತ್ರಿ ಮತ್ತು ಸಾವಿತ್ರಿಯಮ್ಮ ದಂಪತಿಗೆ ಮಗನಾಗಿ  ಜನಿಸಿದ್ದು 1944ರಲ್ಲಿ . ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ್ದರಿಂದ ವೇದಾಧ್ಯಯನವನ್ನೂ ಕೈಗೊಂಡರು. ವಿದ್ಯಾಭ್ಯಾಸ 8ನೇ ತರಗತಿಗೆ ಅನಿವಾರ್ಯವಾಗಿ ಮೊಟಕುಗೊಂಡರೂ ಆಮೇಲೆ ವೇದ ಮತ್ತು ಕಲೆಯ ಕಲಿಕೆಯಲ್ಲಿ ತೊಡಗಿಸಿಕೊಂಡರು. ಕಲಾವಿದರಿದ್ದ ಹಾಗೂ ಕಲೆಯ ಹಿನ್ನೆಲೆ, ವಾಸನೆಗಳಿದ್ದ ಮನೆತನದಲ್ಲಿ ಹುಟ್ಟಿದುದು ಶಾಸ್ತ್ರಿಗಳಿಗೆ ಕಲಾವಿದನಾಗಿ ಬೆಳೆಯಲು ಧನಾತ್ಮಕ ವಾತಾವರಣವನ್ನು ನಿರ್ಮಿಸಿಕೊಟ್ಟಿತ್ತು. ಈ ಅನುಕೂಲತೆಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಅವರು ಯಕ್ಷಗಾನ ಕಲೆಯಲ್ಲಿ ಹಾಗೂ ಅದರ ಕಲಿಕೆಯಲ್ಲಿ  ತನ್ನನ್ನುತಾನು ಆಳವಾಗಿ ತೊಡಗಿಸಿಕೊಂಡರು. ಇವರಿಗೆ ಶಾಸ್ತ್ರೀಯ ಸಂಗೀತದ  ಪಾಠ  ಬಜಕ್ಕಳ ಗಣಪತಿ ಭಟ್ಟರಿಂದ ಆಗಿತ್ತು. ಆಮೇಲೆ ಮಾಂಬಾಡಿ ನಾರಾಯಣ ಭಾಗವತರಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿದ್ದರು. ಜೊತೆ ಜೊತೆಯಲ್ಲಿ ವೇದಾಧ್ಯಯನವನ್ನೂ ಮಾಡಿದ್ದರಿಂದ ಶಾಸ್ತ್ರಿಗಳು ಪೌರೋಹಿತ್ಯ ವೃತ್ತಿಯಲ್ಲಿಯೂ ಅರೆಕಾಲಿಕವಾಗಿ ತೊಡಗಿಸಿಕೊಂಡಿದ್ದರು. ಮೊದಲಿಗೆ ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯಲ್ಲಿ ಭಾಗವತಿಕೆಯ ಸ್ಥಾನಕ್ಕೇರಿದ ಶಾಸ್ತ್ರಿಗಳು ಹಂತ ಹಂತವಾಗಿ ಬೆಳೆದು ಆ ಸ್ಥಾನಕ್ಕೊಬ್ಬ ಸಮರ್ಥ ಸ್ಥಾನಾರ್ಥಿಯಾಗಿ ಬೆಳೆದರು. ವಿವಿಧ ಮೇಳಗಳಲ್ಲಿ ವೃತ್ತಿಪರನಾಗಿ ತಿರುಗಾಟವನ್ನು ಮಾಡುತ್ತಾ ಅದರ ಜೊತೆಯಲ್ಲಿಯೇ ಪೌರೋಹಿತ್ಯವನ್ನು ಮಾಡುತ್ತಿದ್ದವರು ಮೇಳ ಬಿಟ್ಟ ನಂತರದ  ದಿನಗಳಲ್ಲಿ ಹವ್ಯಾಸಿ ಭಾಗವತನಾಗಿದ್ದುದರ ಜೊತೆಗೆ ಪರೋಹಿತ ವೃತ್ತಿಯನ್ನೂ ಮುಂದುವರಿಸಿದ್ದರು. ಶಾಸ್ತ್ರಿಗಳು ತನ್ನ ಸೋದರ ಮಾವ ನಾರಾಯಣ ಭಟ್ಟರಿಂದ ಮೊದಲು ಮದ್ದಳೆಯ ಅಭ್ಯಾಸವನ್ನು ಮಾಡಿದ್ದರೂ ಆಮೇಲೆ ಭಾಗವತಿಕೆ ಕಲಿಯುವುದಕ್ಕೆ ಮನ ಮಾಡಿದರು. ಹಲವಾರು ಮೇಳಗಳ ತಿರುಗಾಟಗಳನ್ನು ಮಾಡಿದ ಶಾಸ್ತ್ರಿಯವರು ಪೌರಾಣಿಕ ಪ್ರಸಂಗಗಳನ್ನು ಆಡಿಸುವುದರಲ್ಲಿ ಸಿದ್ಧಹಸ್ತರಾಗಿದ್ದರು.  ಇರಾ, ಮಲ್ಲ, ಕುಂಟಾರು, ಬಪ್ಪನಾಡು,  ಮಧೂರು,  ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದ ಇವರು  ವೃತ್ತಿಪರ ಭಾಗವತರಾಗಿ ಸುಮಾರು 20 ವರ್ಷ ತಿರುಗಾಟ ನಡೆಸಿದ್ದರು. ಶಾಸ್ತ್ರಿಗಳು ಯಕ್ಷಗಾನ ಹಿಮ್ಮೇಳದ ಸರ್ವ ಅಂಗಗಳನ್ನೂ ಬಲ್ಲವರು. ಉತ್ತಮ ಚೆಂಡೆ ಮತ್ತು ಮದ್ದಳೆವಾದಕರೂ ಹೌದು. ಹಲವಾರು ಕಡೆ ಭಾಗವತಿಕೆಯ ತರಗತಿಗಳನ್ನು ಮಾಡಿ ಹಲವಾರು ಶಿಷ್ಯಂದಿರನ್ನು ಸಂಪಾದಿಸಿದ್ದಾರೆ. ಯಾವುದೇ ಪ್ರಸಂಗವನ್ನು ಆಡಿಸುವುದಾದರೂ ತಿರುಮಲೇಶ್ವರ ಶಾಸ್ತ್ರಿಗಳು ಪದ್ಯವನ್ನು ಕಂಠಪಾಠ ಮಾಡಿಯೇ ಭಾಗವತಿಕೆಗೆ ಸಿದ್ಧರಾಗುತ್ತಿದ್ದರು. ಇದು ಶಾಸ್ತ್ರಿಗಳ ವಿಶೇಷತೆ. ಹಾಗೂ ಎಲ್ಲಾ ಭಾಗವತರಲ್ಲಿಯೂ ಇರಬೇಕಾದ ಲಕ್ಷಣ. 76 ವರ್ಷ ಕಾಲ ಬದುಕಿದ ಶಾಸ್ತ್ರಿಗಳಿಗೆ 54 ವರ್ಷಗಳ ಯಕ್ಷಗಾನ ಕಲಾ ವ್ಯವಸಾಯ ಮಾಡಿದ ಅನುಭವವಿತ್ತು. ಮಾತ್ರವಲ್ಲದೆ ಮೇಳದಲ್ಲಿ ಸುಮಾರು 20ಕ್ಕೂ ಹೆಚ್ಚು ವರ್ಷಗಳ ಕಾಲ ತಿರುಗಾಟ ಮಾಡಿದ್ದರು. ಆಮೇಲೆ ಮೇಳದ ತಿರುಗಾಟದಿಂದ ವಿಮುಖರಾಗಿ ಹವ್ಯಾಸೀ ಕಲಾವಿದರಾಗಿ ತನ್ನ ತಿರುಗಾಟವನ್ನು ಮುಂದುವರಿಸಿದ್ದರು. ಜೊತೆಗೆ ಪೌರೋಹಿತ್ಯ ವೃತ್ತಿಯನ್ನೂ ಕಸುಬಾಗಿಸಿಕೊಂಡಿದ್ದರು. ಯಾವುದೇ ಪೌರಾಣಿಕ ಪ್ರಸಂಗಗಳನ್ನು ಸುಲಭವಾಗಿ ಪ್ರದರ್ಶನಕ್ಕೆ ಒಗ್ಗುವಂತೆ ಮಾಡಬಲ್ಲ ಶಾಸ್ತ್ರಿಗಳು ಯಕ್ಷಗಾನ ರಂಗಕ್ಕೆ ಸಂಪನ್ಮೂಲ ವ್ಯಕ್ತಿಯಾಗಿದ್ದವರು. 

ಯಕ್ಷಗಾನ ಕಲಾರಂಗದ, ಪಡಾರು ನರಸಿಂಗ ಶಾಸ್ತ್ರಿ ಪ್ರಶಸ್ತಿ, ಗಡಿನಾಡ ಉತ್ಸವ ಪ್ರಶಸ್ತಿ, ಪಟ್ಟಾಜೆ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ದಿವಾಣ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ, ಸಂಪಾಜೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಶಸ್ತಿ, ಸೂಡ ಸುಬ್ರಹ್ಮಣ್ಯ ಯಕ್ಷ ಕಲಾಭಾರತಿಯ ತುಳುನಾಡ ಸಿರಿ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನದ ಸನ್ಮಾನ ಹೀಗೆ ಹಲವಾರು ಸನ್ಮಾನ ಪ್ರಶಸ್ತಿಗಳು ಶಾಸ್ತ್ರಿಗಳನ್ನು ಅರಸಿ ಬಂದಿವೆ. ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ತಮ್ಮ ಪತ್ನಿ, ಪುತ್ರ ಯಕ್ಷಗಾನ ಭಾಗವತ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರೀ, ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮಗ ಮುರಳಿಕೃಷ್ಣ ಶಾಸ್ತ್ರಿಯವರು ಉತ್ತಮ ಭಾಗವತರು ಹಾಗೂ ತಂದೆಯಂತೆ ಕಲಾಸಾಮರ್ಥ್ಯವಿರುವ ಭಾಗವತರು. ಅವರ ಕುಟುಂಬಕ್ಕೆ ಹಾಗೂ ಸಮಸ್ತ ಯಕ್ಷಗಾನ ಕಲಾಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಆ ಭಗವಂತನು ದಯಪಾಲಿಸಲಿ. 

ಭಾಗವತ ಹಂಸ – ಶ್ರೀ ಪುತ್ತಿಗೆ ರಘುರಾಮ ಹೊಳ್ಳ


ತೆಂಕುತಿಟ್ಟಿನ ಖ್ಯಾತ, ಅಗ್ರಮಾನ್ಯ ಭಾಗವತರುಗಳಲ್ಲಿ ಪುತ್ತಿಗೆ ಶ್ರೀ ರಘುರಾಮ ಹೊಳ್ಳರೂ ಒಬ್ಬರು. ಪದವೀಧರರಾದ ಇವರು ಯಕ್ಷಗಾನ ಪ್ರಪಂಚದಲ್ಲೂ ಉನ್ನತ ಪದವಿಯನ್ನು ಹೊಂದಿ ಕಲಾಭಿಮಾನಿಗಳನ್ನು ರಂಜಿಸುತ್ತಿರುವುದು ಸಂತೋಷದ ವಿಚಾರ. ಪುತ್ತಿಗೆ ರಘುರಾಮ ಹೊಳ್ಳರ ತೀರ್ಥರೂಪರು ಪುತ್ತಿಗೆ ಶ್ರೀ ರಾಮಕೃಷ್ಣ ಜೋಯಿಸರು ಶ್ರೀ ಧರ್ಮಸ್ಥಳ ಮೇಳವನ್ನು ಶ್ರೀ ಕ್ಷೇತ್ರದ  ಧರ್ಮಾಧಿಕಾರಿಗಳ ನಿರ್ದೇಶನದಲ್ಲಿ ನಾಲ್ಕು ವರ್ಷಗಳ ಕಾಲ ನಡೆಸಿದವರು. ತೀರ್ಥರೂಪರು ಮುನ್ನಡೆಸಿದ ಪ್ರಸಿದ್ಧ ಮೇಳದಲ್ಲಿ ಪ್ರಧಾನ ಭಾಗವತರಾಗಿ ವ್ಯವಸಾಯ ಮಾಡುವ ಅವಕಾಶವು ದೊರೆತ ಪುತ್ತಿಗೆ ರಘುರಾಮ ಹೊಳ್ಳರು ನಿಜಕ್ಕೂ ಭಾಗ್ಯವಂತರು.

ಕದ್ರಿ ಮೇಳದಲ್ಲಿ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಒಡನಾಟ, ಶ್ರೀ ಧರ್ಮಸ್ಥಳ ಮೇಳದಲ್ಲಿ ಕಡತೋಕ ಮಂಜುನಾಥ ಭಾಗವತರ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಹಾಗೂ ಹಿರಿಯ ಕಲಾವಿದರ ಒಡನಾಟವು ನನಗೆ ಬೆಳೆದು ಕಾಣಿಸಿಕೊಳ್ಳಲು ಅವಕಾಶವಾಗಿತ್ತು ಎಂಬ ವಿಚಾರವನ್ನು ಶ್ರೀ ಹೊಳ್ಳರು ಪ್ರಾಮಾಣಿಕರಾಗಿ ಒಪ್ಪಿಕೊಳ್ಳುತ್ತಾರೆ.   ಯಕ್ಷ ಭಾಗವತ ಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳರ ಹುಟ್ಟೂರಿನ ಬಗೆಗೆ ಕಲಾಭಿಮಾನಿಗಳು ಪ್ರಶ್ನಿಸುವುದುಂಟು. ಒಂದೇ ಹೆಸರಿನ ಊರುಗಳು ಹಲವು ಇದ್ದಾಗ ಆಗುವ, ಹುಟ್ಟಿಕೊಳ್ಳುವ ಸಂಶಯ ಇದು. ಕಾಸರಗೋಡು ಪ್ರದೇಶದ ಕುಂಬಳೆ ಸಮೀಪದ ಪುತ್ತಿಗೆಯೇ ಭಾಗವತರ ಹಿರಿಯರೆಲ್ಲಾ ವಾಸಿಸಿದ್ದ ಊರು. ಇವರು ಜ್ಯೋತಿಷ್ಯ ಮನೆತನದವರು. ಶ್ರೀ ರಘುರಾಮ ಹೊಳ್ಳರ ತೀರ್ಥರೂಪರು ತೆಂಕುತಿಟ್ಟಿನ ಖ್ಯಾತ ಭಾಗವತರು. ಪುತ್ತಿಗೆ ಜೋಯಿಸರೆಂದೇ ಅವರನ್ನು ಕಲಾಭಿಮಾನಿಗಳು ಗುರುತಿಸಿದ್ದರು. ಶ್ರೀಯುತರ ಮನೆ ಪುತ್ತಿಗೆಯಲ್ಲಿದ್ದುದು.

ಬಳಿಕ ಅವರು ಬೋವಿಕ್ಕಾನ ಎಂಬಲ್ಲಿ ನೆಲೆಸಿದ್ದರು. ಇದು ಕಾಸರಗೋಡು ಮತ್ತು ಮುಳ್ಳೇರಿಯಗಳ ಮಧ್ಯೆ ಸಿಗುವ ಸ್ಥಳ. ಪುತಿಗೆ ರಾಮಕೃಷ್ಣ ಜೋಯಿಸ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರನಾಗಿ ರಘುರಾಮ ಹೊಳ್ಳರು ಈ ಲೋಕದ ಬೆಳಕನ್ನು ಕಂಡವರು. ಪ್ರಾಥಮಿಕ ವಿದ್ಯಾಭ್ಯಾಸ ಬೋವಿಕ್ಕಾನ ಶಾಲೆಯಲ್ಲಿ. ಹೈಸ್ಕೂಲ್ ವಿದ್ಯಾಭ್ಯಾಸ ಎಡನೀರು ಸ್ವಾಮೀಜಿಸ್ ಹೈಸ್ಕೂಲಿನಲ್ಲಿ. ಎಳವೆಯಲ್ಲಿ ಶ್ರೀ ಹೊಳ್ಳರು ಕರ್ನಾಟಕ ಶಾಸ್ತ್ರೀಯ ಸಂಗೀತಾಸಕ್ತರಾಗಿದ್ದರು. ಶ್ರೀಕೃಷ್ಣ ಶರ್ಮ ಎಂಬವರಿಂದ ಸಂಗೀತ ಕಲಿತಿದ್ದರು. ಮುಂದುವರಿಸಲು ಅನಾನುಕೂಲವಾದರೂ ಯಕ್ಷಗಾನ ಭಾಗವತಿಕೆಗೆ ಇದರಿಂದ ಅನುಕೂಲವಾಗಿತ್ತು. ಬಾಲ್ಯದಲ್ಲಿ ಇವರು ಮೊದಲು ಕಲಿತುದು ಮದ್ದಳೆಗಾರಿಕೆಯನ್ನು.

ಮವ್ವಾರು ಕಿಟ್ಟಣ್ಣ ಭಾಗವತರು ಇವರ ಬೋವಿಕ್ಕಾನ ಮನೆಗೆ ಬಂದು ರಘುರಾಮ ಹೊಳ್ಳರ ಅಣ್ಣಂದಿರಾದ ಶ್ರೀ ಚಂದ್ರಶೇಖರ ಹೊಳ್ಳರಿಗೆ ಭಾಗವತಿಕೆಯನ್ನೂ ಶ್ರೀ ವಾಸುದೇವ ಹೊಳ್ಳರಿಗೆ ಚೆಂಡೆ, ಮದ್ದಳೆ ವಾದನವನ್ನೂ ಕಲಿಸುತ್ತಿದ್ದರು. ಮವ್ವಾರು ಕಿಟ್ಟಣ್ಣ ಭಾಗವತರಿಂದ ರಘುರಾಮ ಹೊಳ್ಳರು ಅಣ್ಣನ ಜತೆಯಲ್ಲಿಯೇ ಚೆಂಡೆ ಮದ್ದಳೆಗಾರಿಕೆಯನ್ನು ಅಭ್ಯಸಿಸಿದ್ದರು.

ಅಣ್ಣ ಚಂದ್ರಶೇಖರ ಹೊಳ್ಳರಿಗೆ ಕಿಟ್ಟಣ್ಣ ಭಾಗವತರು ಪಾಠ ಮಾಡುವುದನ್ನು ನೋಡಿ, ಕೇಳಿಯೇ ಭಾಗವತಿಕೆಯನ್ನು ಮನನ ಮಾಡಿಕೊಂಡಿದ್ದರು. ಭಾಗವತಿಕೆಯನ್ನು ಪ್ರತ್ಯಕ್ಷವಾಗಿ ಯಾರಿಂದಲೂ ಕಲಿತವರಲ್ಲ. ಆದರೂ ಯಕ್ಷಗಾನದ ಹಿಮ್ಮೇಳದ ಸರ್ವಾಂಗಗಳನ್ನೂ ತಿಳಿದು, ತೊಡಗಿಸಿಕೊಂಡು ಶ್ರೇಷ್ಠ ಭಾಗವತರಾಗಿ ಕಾಣಿಸಿಕೊಂಡದ್ದು ಒಂದು ಸಾಧನೆಯೇ ಹೌದು. ಆಸಕ್ತಿ, ಆಳವಾದ ಅಧ್ಯಯನ, ಅರ್ಪಣಾ ಭಾವಗಳೆಂಬ ಕ್ರಿಯೆಗಳು ಈ ಸಾಧನೆಯೊಳಗೆ ಅಡಗಿವೆ ಎಂಬುದಂತೂ ಸತ್ಯ. ಮಗನು ಯಕ್ಷಗಾನದ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದೆ, ಶಿಕ್ಷಣವನ್ನು ಮುಂದುವರಿಸಿ, ಉನ್ನತ ಹುದ್ದೆಗೇರಬೇಕೆಂಬುದು ಪುತ್ತಿಗೆ ಶ್ರೀ ರಾಮಕೃಷ್ಣ ಜೋಯಿಸರ ಬಯಕೆಯಾಗಿತ್ತು. ಮಕ್ಕಳನ್ನು ಆದಷ್ಟು ಯಕ್ಷಗಾನದಿಂದ ದೂರವಿಡಲು ಪ್ರಯತ್ನಿಸುತ್ತಿದ್ದರಂತೆ. ಮಕ್ಕಳು ಕಷ್ಟ ಬರುವುದು ಬೇಡ ಎಂಬ ಸದುದ್ದೇಶವೇ ಇದಕ್ಕೆ ಕಾರಣವು. ಹಾಗಾಗಿಯೇ ಪಿಯುಸಿ ವಿದ್ಯಾರ್ಜನೆಗೆ ರಘುರಾಮ ಹೊಳ್ಳರನ್ನು ಧಾರವಾಡದ ಕಾಲೇಜಿಗೆ ಕಳುಹಿಸಿದ್ದರು.

ಆದರೂ ಪದವಿ ಶಿಕ್ಷಣಕ್ಕೆ ಮಂಗಳೂರಿಗೇ ಬರಬೇಕಾಯಿತು. ಬಹುಶಃ ಕಲಾಮಾತೆಯ ಸಂಕಲ್ಪವೇ ಹಾಗಿರಬೇಕು. ಶ್ರೇಷ್ಠ ಭಾಗವತನಾಗಿ ನನ್ನ ಸೇವೆಯನ್ನು ಮಾಡು ಎಂಬ ಆಕೆಯ ಅವ್ಯಕ್ತ ಆದೇಶವೇ ಇದಕ್ಕೆ ಕಾರಣವಿರಬಹುದು. ಮಂಗಳೂರಿಗೆ ಬಂದ ಮೇಲೆ ಮತ್ತೆ ಯಕ್ಷಗಾನದ ನಂಟು ಬೆಳೆಯಿತು. ಪ್ರದರ್ಶನಗಳನ್ನು ನೋಡುತ್ತಾ ಹಿರಿಯ ಭಾಗವತರುಗಳು ಆಟ ಆಡಿಸುವ ಕ್ರಮಗಳನ್ನು ನೋಡುತ್ತಾ ಅವನ್ನು ಗ್ರಹಿಸಿಕೊಂಡಿದ್ದರು. ಎಳವೆಯಲ್ಲೇ ತೀರ್ಥರೂಪರೊಂದಿಗೆ ಅವರ ಪದ್ಯಕ್ಕೆ ಮದ್ದಳೆಗಾರನಾಗಿ ಸಹಕರಿಸಿದ್ದೂ ಇದೆ.

ಇದರಿಂದ ಅನುಕೂಲವೇ ಆಗಿತ್ತು. ಪದವಿ ಶಿಕ್ಷಣವನ್ನು ಪೂರೈಸಿದರೂ ಆ ಕಾಲದಲ್ಲಿ ಉದ್ಯೋಗ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಆದುದರಿಂದ ಯಕ್ಷಗಾನ ಕ್ಷೇತ್ರದಲ್ಲಿಯೇ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿದ್ದರು. ಜತೆಯಲ್ಲಿ ಕಲಾಸಕ್ತಿಯೂ ತೀವ್ರವಾಗಿ ಇತ್ತು ಅನ್ನಬಹುದು. ಮೇಳಕ್ಕೆ ಸೇರಿದರೂ ಶ್ರೀ ರಘುರಾಮ ಹೊಳ್ಳರು ‘ಯಕ್ಷಗಾನ ಬೇಡ, ಬೇರೇನಾದರೂ ಉದ್ಯೋಗ ಮಾಡೋಣ’ ಎಂಬ ತೀರ್ಮಾನಕ್ಕೂ ಬಂದಿದ್ದರು. ಕೆಲ ವರ್ಷಗಳ ಕಾಲ ಮಂಗಳೂರಿನ ಪ್ರಸಿದ್ಧ ಶ್ರೀ ಗಣೇಶ ಪ್ರಸಾದ್ ಉಪಾಹಾರ ಗೃಹ, ವಸತಿ ಗೃಹದಲ್ಲಿ ಉದ್ಯೋಗ ಮಾಡಿದ್ದರು. ಆದರೆ ಕಲಾಮಾತೆಯ ಸಂಕಲ್ಪವು ಹುಸಿಯಾಗುವುದುಂಟೇ? ಆಗದು.

ಯಕ್ಷಗಾನ ಎಂಬ ಗಂಡು ಕಲೆಯು ಶ್ರೀ ರಘುರಾಮ ಹೊಳ್ಳರನ್ನು ಕೈಬೀಸಿ ಕರೆಯುತ್ತಿತ್ತು. ಕದ್ರಿ ಮೇಳದ ತಿರುಗಾಟದಲ್ಲಿ ಗೆಜ್ಜೆದ ಪೂಜೆ ಪ್ರಸಂಗದ ಹಾಡುಗಳು ಶ್ರೀ ರಘುರಾಮ ಹೊಳ್ಳರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಅಲ್ಲದೆ ಹಲವಾರು ತುಳು, ಪುರಾಣ ಪ್ರಸಂಗಗಳಲ್ಲಿ ಇವರ ಹಾಡುಗಾರಿಕೆಯನ್ನು ಕಲಾಭಿಮಾನಿಗಳು ಮೆಚ್ಚಿಕೊಂಡರು. ಕದ್ರಿ ಮೇಳದ ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ನಿರಂತರವಾಗಿ ಕಳೆದ 29 ವರ್ಷಗಳಿಂದ ವ್ಯವಸಾಯ ಮಾಡಿದ್ದರು. ಮೊದಲು ಕಡತೋಕಾ ಶ್ರೀ ಮಂಜುನಾಥ ಭಾಗವತರ ಜತೆ ತಿರುಗಾಟ.

ಅವರ ನಿವೃತ್ತಿಯ ನಂತರ ಮುಖ್ಯ ಭಾಗವತರಾಗಿ ಅನೇಕ ವರ್ಷಗಳಿಂದ ಕಲಾಸೇವೆಯನ್ನು ಮಾಡಿದ್ದರು. ಪುರಾಣ ಪ್ರಸಂಗಗಳ ಮಾಹಿತಿ, ನಡೆಗಳ ಕುರಿತಾಗಿ ಹೀಗೆಂದೇ ಹೇಳಬಲ್ಲವರು ಶ್ರೀ ರಘುರಾಮ ಹೊಳ್ಳರು. ಪ್ರದರ್ಶನಗಳನ್ನು ಯಶಸ್ವಿಯಾಗಿ ರಂಜಿಸುವಂತೆ ಮಾಡುವ ಕುಶಲಗಾರಿಕೆಯೂ ಸಿದ್ಧಿಸಿದ ಭಾಗವತರಿವರು. ವೇಷಧಾರಿಯ ಸಾಮರ್ಥ್ಯವನ್ನು ಅಳೆದು ತೂಗಿ ಅವನ ಪ್ರತಿಭೆಯನ್ನು ಪರಿಪೂರ್ಣವಾಗಿ ತನ್ನ ಹಾಡುಗಾರಿಕೆಯಿಂದ ಹೊರಗೆಡಹಬಲ್ಲರು.

ಪರಂಪರೆಯ ಜೊತೆಗೆ ಪರಂಪರೆಯ ಮೇರೆಯನ್ನು ಮೀರದ ಹೊಸತನದಿಂದ ತನ್ನ ಹಾಡುಗಾರಿಕೆಯಲ್ಲಿ ಕಲಾಭಿಮಾನಿಗಳ ಮನಸೂರೆಗೊಳ್ಳುತ್ತಿದ್ದಾರೆ. ಶ್ರೀಯುತರ ಭಾಗವತಿಕೆಯ ಬಗೆಗೆ ಎಲ್ಲರಿಗೂ ತಿಳಿದಿದೆ.  ಸಮಷ್ಟಿ ಕಲೆ. ತನ್ನೊಬ್ಬನ ಪ್ರದರ್ಶನ ಚೆನ್ನಾದರೆ ಸಾಲದು. ಒಟ್ಟು ಪ್ರದರ್ಶನವು ಗೆಲ್ಲಬೇಕು. ರಂಜಿಸಬೇಕು. ಗಾಯನ, ವಾದನ, ಅಭಿನಯ ಇವುಗಳೊಳಗೆ ಸಮನ್ವಯತೆ ಇದ್ದರೆ ಮಾತ್ರ ಪ್ರದರ್ಶನವು ರಂಜಿಸುತ್ತದೆ. ಎಲ್ಲರ ಮನೋಧರ್ಮವು ಒಂದೇ ಆಗಿರಬೇಕು. ಪೂರ್ವಸಿದ್ಧತೆ ಸಮಾಲೋಚನೆಗಳಿಂದಲೇ ಇದನ್ನು ಸಾಧಿಸಬೇಕು. ಯಕ್ಷಗಾನಕ್ಕೆ ಭಾಗವತನೇ ನಿರ್ದೇಶಕ ಹೌದು. ಆದರೆ ಪ್ರದರ್ಶನವು ರಂಜಿಸಿದಾಗ ಮಾತ್ರ ಈ ಮಾತಿಗೆ ಮೌಲ್ಯವು ಬರುತ್ತದೆ. ನಿರ್ದೇಶಕನ ಪ್ರಯತ್ನವು ಪ್ರದರ್ಶನದ ಯಶಸ್ವಿಗೆ ಒಂದು ಪ್ರಮುಖ ಕೊಡುಗೆಯಾಗಲೇ ಬೇಕು.

ಎಲ್ಲಾ ಕಲಾವಿದರನ್ನೂ ಒಂದು ತಂಡವಾಗಿ ಮುನ್ನಡೆಸುವ ಗುಣವೂ ಭಾಗವತನಿಗಿರಬೇಕು. ಎಂಬುದು ಶ್ರೀ ರಘುರಾಮ ಹೊಳ್ಳರ ಅಭಿಪ್ರಾಯ. ಭಾಗವತನಾಗಿ ಕಾಣಿಸಿಕೊಳ್ಳಬೇಕಾದರೆ ಕಠಿಣ ಪರಿಶ್ರಮವನ್ನು ಪಡಬೇಕು. ನಿರಂತರ ಅಧ್ಯಯನಾಸಕ್ತನಾಗಿರಬೇಕು. ಗೊತ್ತಿಲ್ಲದ ವಿಚಾರಗಳನ್ನು ತಿಳಿದವರಿಂದ ಕೇಳಿ ತಿಳಿದು ಅದನ್ನು ಅಳವಡಿಸಿಕೊಳ್ಳುವ ಗುಣವನ್ನು ಹೊಂದಿರಬೇಕು. ಉತ್ತಮ ನಿರ್ವಹಣೆಯನ್ನು ನೀಡಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇದು ಕಲಿಕಾಸಕ್ತರಿಗೆ ಶ್ರೀ ರಘುರಾಮ ಹೊಳ್ಳರು ನೀಡುವ ಸಲಹೆಗಳು. ದೇಶ ವಿದೇಶಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಶ್ರೀ ರಘುರಾಮ ಹೊಳ್ಳರು ತಮ್ಮ ಯಕ್ಷಗಾನ ಹಾಡುಗಾರಿಕೆಯಿಂದ ಕಲಾಭಿಮಾನಿಗಳ ಪ್ರೀತಿ, ಗೌರವಗಳನ್ನು ಸಂಪಾದಿಸಿದ್ದಾರೆ. ವೃತ್ತಿಜೀವನದಲ್ಲೂ ಕೌಟುಂಬಿಕವಾಗಿಯೂ ಇವರು ಸಂತೃಪ್ತರು.

ಪತ್ನಿ ಶ್ರೀಮತಿ ವಾಣಿ.  ರಘುರಾಮ ಹೊಳ್ಳ ದಂಪತಿಗಳಿಗೆ ಈರ್ವರು ಪುತ್ರಿಯರು. ವಿದ್ಯಾವಂತೆಯರು. ಹಿರಿಯ ಪುತ್ರಿ ಶ್ರೀಲಕ್ಷ್ಮಿ (ಎಂಸಿ.ಎ) ವಿವಾಹಿತೆ. ಕಿರಿಯ ಪುತ್ರಿ ಶ್ರೀವಿದ್ಯಾ (ಬಿ.ಇ) ಉದ್ಯೋಗಿ. ಪುತ್ತಿಗೆ ಶ್ರೀ ರಘುರಾಮ ಹೊಳ್ಳರ ಅಕ್ಕಂದಿರ ಮಕ್ಕಳಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮತ್ತು ಶ್ರೀ ಗೋಪಾಲಕೃಷ್ಣ ನಾವಡ ಬಾಯಾರು ಇವರುಗಳು ಖ್ಯಾತ ಭಾಗವತರುಗಳಾಗಿ ಕಲಾಭಿಮಾನಿಗಳೆಲ್ಲರಿಗೂ ಪರಿಚಿತರು. ಯಕ್ಷ ಭಾಗವತಹಂಸ ಶ್ರೀ ಪುತ್ತಿಗೆ ರಘುರಾಮ ಹೊಳ್ಳರಿಗೆ ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಹಾರೈಕೆಗಳು. 

ಲೇಖನ: ರವಿಶಂಕರ್ ವಳಕ್ಕುಂಜ

ಯಕ್ಷಗಾನ ಮುಖವರ್ಣಿಕೆ – ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ 

ಯಕ್ಷಗಾನ ಮುಖವರ್ಣಿಕೆ ಎಂಬ ಈ ಹೊತ್ತಗೆಯು 2005ನೇ ಇಸವಿಯಲ್ಲಿ ಮುದ್ರಿಸಲ್ಪಟ್ಟು ಪ್ರಕಟವಾಗಿತ್ತು. ಈ ಪುಸ್ತಕದ ಪ್ರಕಾಶಕರು  ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ. ಸಂಪಾದಕರು ಶ್ರೀ ಎಚ್. ಬಿ. ಎಲ್. ರಾವ್ ಅವರು.

ಡಾ.ಕೆ.ಎಂ.ರಾಘವ ನಂಬಿಯಾರ್, ಕೆ.ಎಲ್. ಕುಂಡಂತಾಯ ಟಿ. ನಾಗರಾಜ್ ಅವರುಗಳು ಸಂಪಾದಕ ಮಂಡಳಿಯಲ್ಲಿದ್ದು ಈ ಕೃತಿಯ ಪ್ರಕಟಣೆಗಾಗಿ ಶ್ರಮಿಸಿದ್ದರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಮಾಹಿತಿಗಳನ್ನು ಲೇಖನ ರೂಪದಲ್ಲಿ ನೀಡಲಾಗಿದ್ದು, ಈ ವಿಚಾರದಲ್ಲಿ ಸಹಕರಿಸಿದವರು ಶ್ರೀ ಪ್ರೊ। ಎಂ.ಎಲ್.ಸಾಮಗರು. ಈ ಪುಸ್ತಕವನ್ನು ತಾಳಿಪಾಡಿ ನಾರಾಯಣ ಶಾಸ್ತ್ರಿಗಳಿಗೆ ಗೌರವಪೂರ್ವಕ ಅರ್ಪಿಸಲಾಗಿದೆ. ಮೊದಲಿಗೆ ಶ್ರೀ  ಶ್ರೀ ಎಚ್. ಬಿ. ಎಲ್. ರಾಯರ  ‘ಮುಖವರ್ಣಿಕೆ ಪ್ರಚೋದನೆ’ ಎಂಬ ಕನ್ನಡ ಲೇಖನವನ್ನೂ ‘Make up in Yakshagana’ ಎಂಬ ಇಂಗ್ಲಿಷ್ ಲೇಖನವನ್ನೂ ನೀಡಲಾಗಿದೆ. ಬಳಿಕ ವಿದ್ವಾಂಸರಾದ  ಡಾ.ಕೆ.ಎಂ.ರಾಘವ ನಂಬಿಯಾರರು ಬರೆದ ‘ಯಕ್ಷಗಾನ ಮುಖವರ್ಣಿಕೆ’ ಎಂಬ ಬರಹವಿದೆ. ಯಕ್ಷಗಾನದ ಉಭಯ ತಿಟ್ಟುಗಳ ಬಣ್ಣಗಾರಿಕೆಯ ಬಗೆಗೆ ಶ್ರೀ ನಂಬಿಯಾರರು ವಿವರವಾಗಿ ತಿಳಿಸಿರುತ್ತಾರೆ. ಪರಿಶಿಷ್ಟ 1ರಡಿಯಲ್ಲಿ   ವಿವಿಧ ಕಿರೀಟಗಳ ಬಗ್ಗೆ ಪರಿಶಿಷ್ಟ 2ರಲ್ಲಿ ಮುಖವರ್ಣಿಕೆಗೆ ಬಳಸುವ ಬಣ್ಣಗಳ ಬಗೆಗೆ, ಅಲ್ಲದೆ ವೇಷಕ್ಕೆ ಬಳಸುವ ಇನ್ನಿತರ ಪರಿಕರಗಳ ಬಗ್ಗೆ ವಿವರವನ್ನು ನೀಡಿರುತ್ತಾರೆ. ಪ್ರೊ|  ಎಂ.ಎಲ್.ಸಾಮಗರು Yakshagana – A Brief Introduction ಎಂಬ ಲೇಖನವನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಿರುತ್ತಾರೆ. ಯಕ್ಷಗಾನದ ಸೂತ್ರಧಾರಿಗಳು ಎಂಬ ವಿಚಾರದಲ್ಲಿ ಬಲಿಪ ನಾರಾಯಣ ಭಾಗವತರ, ನಾರ್ಣಪ್ಪ ಉಪ್ಪೂರರ, ನೆಡ್ಲೆ ನರಸಿಂಹ ಭಟ್ಟರ, ಹಿರಿಯಡಕ ಗೋಪಾಲ ರಾಯರ ಭಾವಚಿತ್ರಗಳನ್ನು ನೀಡಲಾಗಿದೆ. ಬಳಿಕ ಬಣ್ಣದ ವೇಷ, ಕಾಟು ಬಣ್ಣ, ಹೆಣ್ಣು ಬಣ್ಣ, ವಿಶಿಷ್ಟ ಬಣ್ಣಗಳು, ರಾಜವೇಷ, ಪುಂಡುವೇಷ, ಸ್ತ್ರೀ ವೇಷ, ಬಡಗುತಿಟ್ಟು, ಬಡಗುತಿಟ್ಟು ಬಣ್ಣದ ವೇಷ, ಬಡಗುತಿಟ್ಟು ಹೆಣ್ಣು ಬಣ್ಣ, ವಿದೂಷಕ ಪಾತ್ರಗಳ ಮುಖವರ್ಣಿಕೆಗಳನ್ನು ನೀಡಲಾಗಿದೆ. ಪ್ರಸಂಗ, ವೇಷದ ಹೆಸರು ಮತ್ತು ಕಲಾವಿದರ ಹೆಸರುಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಿದ್ದು ಅಧ್ಯಯನಾಸಕ್ತರಿಗೆ, ಕಲಾಭಿಮಾನಿಗಳಿಗೆ ಇದರಿಂದ ಖಂಡಿತಾ ಅನುಕೂಲವಾದೀತು. ಇದು ಒಟ್ಟು ಎಂಬತ್ತನಾಲ್ಕು ಪುಟಗಳಿಂದ ಕೂಡಿದ್ದು, ಪುಸ್ತಕದ ಹೊರ ಆವರಣದಲ್ಲಿ ಶ್ರೀ ಈಶ್ವರಯ್ಯ ಅವರು ಬರೆದ ಇಂಗ್ಲಿಷ್ ಭಾಷೆಯ ಲೇಖನವನ್ನು ಕೊಡಲಾಗಿದೆ. 

ಲೇಖಕ: ರವಿಶಂಕರ್ ವಳಕ್ಕುಂಜ 

ಶ್ರೀಮತಿ ರೋಹಿಣಿ ಉದಯ್ –  ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ, ಪುತ್ತೂರು

ಶ್ರೀಮತಿ ರೋಹಿಣಿ ಉದಯ್ ಭರತನಾಟ್ಯ ಪ್ರಿಯರಿಗೆಲ್ಲಾ ಪರಿಚಿತ ಹೆಸರು. ತನ್ನ 14ನೇ ವಯಸ್ಸಿನಲ್ಲಿ ಭರತನಾಟ್ಯದ ನೃತ್ಯಾಭ್ಯಾಸಕ್ಕೆ ಆರಂಭಿಸಿದ ರೋಹಿಣಿ ಮಂಗಳೂರಿನ ಸನಾತನ ನಾಟ್ಯಾಲಯದ ನೃತ್ಯಗುರುಗಳಾದ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಅವರ ಸಮರ್ಥ ಮಾರ್ಗದರ್ಶನದಿಂದಲೂ ನಂತರ ವಿದುಷಿ ಡಾ. ಶ್ರೀಮತಿ ಶೋಭಿತಾ ಸತೀಶ್ ರಾವ್ ಹಾಗೂ ವಿದ್ವಾನ್ ದೀಪಕ್ ಕುಮಾರ್ ರವರಲ್ಲಿ ಹೆಚ್ಚಿನ ನೃತ್ಯಾಭ್ಯಾಸವನ್ನು ಪಡೆದುಕೊಂಡರು. ಆಮೇಲೆ   ಬೆಂಗಳೂರಿನ ಸುಕೃತಿ ನಾಟ್ಯಾಲಯದ ನಿರ್ದೇಶಕಿ ಶ್ರೀಮತಿ ಹೇಮ ಪಂಚಮುಖಿಯವರಲ್ಲಿ ಇನ್ನೂಹೆಚ್ಚಿನ ವಿಶೇಷ ಅಭ್ಯಾಸಕ್ಕಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ. ಶ್ರೀಮತಿ ರೋಹಿಣಿ ಉದಯ್ ಅವರು ಪುತ್ತೂರಿನಲ್ಲಿ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರ , ಪುತ್ತೂರು ಇದರ ಸ್ಥಾಪಕಿ. ಈ ನೃತ್ಯ ಕೇಂದ್ರದ ಮುಖಾಂತರ ನೂರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಅಭ್ಯಾಸವನ್ನು ಮಾಡಿಸಿರುತ್ತಾರೆ.

ಈ ಕಲಾಕೇಂದ್ರವು ಹಲವಾರು ಭರತನಾಟ್ಯದ ಪ್ರತಿಭೆಗಳನ್ನು ಬೆಳಕಿಗೆ ತಂದಿದೆ. ಈ ದಿಸೆಯಲ್ಲಿ ಕಲಾ ಕೇಂದ್ರದ ನೃತ್ಯ ಗುರು ರೋಹಿಣಿ ಉದಯ್ ಅವರ ಪ್ರಯತ್ನ ಶ್ಲಾಘನೀಯವಾದುದು. ರೋಹಿಣಿ ಉದಯ್ ಭರತನಾಟ್ಯದ ಸಾಧನೆಗಾಗಿ ಎಚ್.ಆರ್.ಸಿ. ಯಿಂದ ಅಭಿನಂದಿತರಾಗಿದ್ದಾರೆ. 2015ನೇ ಸಾಲಿನ ಸುಮ ಸೌರಭ ಪ್ರಶಸ್ತಿಯೂ ಇವರಿಗೆ ದೊರಕಿದೆ. ಇವರೂ ಇವರ ಶಿಷ್ಯರೂ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿರುತ್ತಾರೆ.

ನೃತ್ಯ ಪ್ರದರ್ಶನ ಮತ್ತು ನೃತ್ಯ ಶಿಕ್ಷಣ ನೀಡುತ್ತಿರುವುದರ ಜೊತೆಗೆ ರೋಹಿಣಿ ಉದಯ್ ಅವರ ಶ್ರೀ ದೇವಿ ನೃತ್ಯಾರಾಧನಾ ಕಲಾ ಕೇಂದ್ರವು ಹಲವಾರು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದೆ. ಶ್ರೀಮತಿ ರೋಹಿಣಿ ಉದಯ್ ಅವರು ಪ್ರಖ್ಯಾತ ಯಕ್ಷಗಾನ ಹಾಸ್ಯ ಕಲಾವಿದರಾದ ದಿ| ನಯನಕುಮಾರ್ ಅವರ ಪುತ್ರರಾದ ಶ್ರೀ ಉದಯ್ ಅವರ ಪತ್ನಿ.