ಕಲೆಯ ಅಥವಾ ಸುದ್ದಿಯ ವರದಿ ಮತ್ತು ಪ್ರಸಾರದಲ್ಲಿ ವರದಿಗಾರನಷ್ಟೇ ಪಾಲು ಛಾಯಾಗ್ರಾಹಕನಿಗೂ ಇರುತ್ತದೆ. ಆದುದರಿಂದ ಒಂದು ಕಲೆಯನ್ನು ಪ್ರಸಿದ್ಧಗೊಳಿಸುವಲ್ಲಿ ಒಂದು ಒಳ್ಳೆಯ ಕ್ಯಾಮೆರಾದ ಜೊತೆಗೆ ಒಂದು ಉತ್ತಮ ಕೈಯೂ ಪಾಲು ಪಡೆಯುತ್ತದೆ. ಆದುದರಿಂದ ಕ್ಯಾಮೆರಾ ಹಿಡಿದವನ ಚಾಕಚಕ್ಯತೆಯೂ ಇಲ್ಲಿ ಮುಖ್ಯವಾಗುತ್ತದೆ. ಯಾವ ಕೋನದಲ್ಲಿ ಫೋಟೋ ತೆಗೆದರೆ ಚೆನ್ನ ಎಂಬುದು ಮತ್ತು ಎಷ್ಟು ಅಂತರದಿಂದ ವೀಡಿಯೋ ದೃಶ್ಯಾವಳಿಗಳ ಚಿತ್ರೀಕರಣ ನಡೆಸಿದರೆ ಒಳ್ಳೆಯದು ಎಂದು ಒಬ್ಬ ಪ್ರಜ್ಞಾವಂತ ಛಾಯಾಗ್ರಾಹಕನಿಗೆ ತಿಳಿದಿರಬೇಕು. ಅಂತಹ ಛಾಯಾಗ್ರಾಹಕರಲ್ಲಿ ಶ್ರೀ ರಾಮ್ ನರೇಶ್ ಮಂಚಿ ಕೂಡ ಒಬ್ಬರು. ಅದರಲ್ಲೂ ಯಕ್ಷಗಾನದ ಬಹಳಷ್ಟು ಛಾಯಾಚಿತ್ರಗಳು ಮತ್ತು ದೃಶ್ಯಾವಳಿಗಳನ್ನು ಚಿತ್ರೀಕರಿಸಿ ಕಲಾಭಿಮಾನಿಗಳಿಗೆ ದೊರಕುವಂತೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಓದಿದ್ದು ಕಾನೂನು. ವೃತ್ತಿಯಿಂದ ಕೃಷಿಕ. ಹವ್ಯಾಸ ಛಾಯಾಗ್ರಹಣ. ಆಸಕ್ತಿಯ ಕೈಗಳಲ್ಲಿ ರಾರಾಜಿಸಿದ್ದು ಕ್ಯಾಮೆರಾ. ಇವರದ್ದು ಕೂಡ ಯಕ್ಷರಂಗದಲ್ಲಿ ನಿಸ್ವಾರ್ಥ ಸೇವೆ. ಛಾಯಾಗ್ರಹಣವನ್ನು ಹವ್ಯಾಸವಾಗಿ ಮಾಡಿಕೊಂಡು ಕ್ಯಾಮೆರಾ ಕೈಗೆತ್ತಿಕೊಂಡ ಇವರ ಆಸಕ್ತಿ ಹೆಚ್ಚಾಗಿ ಯಕ್ಷಗಾನ ಎಂದು ಕಂಡರೂ ಇತರ ವಿಭಾಗಗಳಲ್ಲಿಯೂ ಇವರಿಗೆ ಸಮಾನಾಸಕ್ತಿಯಿದೆ. ನೃತ್ಯಕಲೆ, ಪರಿಸರದ ಬಗ್ಗೆ ಮಾಡಿದ ವೀಡಿಯೊ ಚಿತ್ರೀಕರಣ, ಫೋಟೋಗಳು ಇವರಲ್ಲಿ ಹೇರಳ ಸಂಖ್ಯೆಯಲ್ಲಿವೆ. ಇವರ ಹೆಸರಿನಲ್ಲಿ Ram Naresh Manchi ಎಂಬ ಯು ಟ್ಯೂಬ್ ಚಾನೆಲ್ ಇದೆ. ಈ ಚಾನೆಲ್ ನಲ್ಲಿ ಸುಮಾರು 1700 ವೀಡಿಯೋಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನದ ವೀಡಿಯೋಗಳನ್ನು ಕಾಣಬಹುದು. ಇವರ ಎಷ್ಟು ಛಾಯಾಗ್ರಣಗಳನ್ನು ಎಷ್ಟೋ ಮಾಧ್ಯಮಗಳು ಬಳಸಿಕೊಂಡಿವೆ. ಕಲಾರಂಗದಲ್ಲಿ ರಾಮ್ ನರೇಶ್ ಮಂಚಿಯವರದು ನಿಸ್ವಾರ್ಥ ಸೇವೆ. ರಾಮ್ ನರೇಶ್ ಮಂಚಿ ಅವರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಮಂಚಿಯಲ್ಲಿ ತಮ್ಮ ತಂದೆ, ತಾಯಿ, ಪತ್ನಿ, ಮಗ, ಸೊಸೆಯರೊಂದಿಗೆ ವಾಸವಾಗಿದ್ದಾರೆ. ಇವರ ಪತ್ನಿ ಅನಿತಾ ನರೇಶ್ ಮಂಚಿ ಉತ್ತಮ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಕಥೆ, ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಮಗ ಚೇತನ್ ಮತ್ತು ಸೊಸೆ ಸ್ವಾತಿ. ಚೇತನ್ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿ. ರಾಮ್ ನರೇಶ್ ಮಂಚಿಯವರ ಯು ಟ್ಯೂಬ್ ವೀಡಿಯೋ ಲಿಂಕ್ ಒಂದನ್ನು ಕೆಳಗೆ ಕೊಡಲಾಗಿದೆ. ಎಲ್ಲರೂ ನೋಡಲೇಬೇಕಾದ ವೀಡಿಯೋ.
ಬಲಿಪ ನಾರಾಯಣ ಭಾಗವತರ ಮುಕುಟಕ್ಕೆ ‘ಯಕ್ಷ ಜನಾರ್ದನ ಪ್ರಶಸ್ತಿ’ಯ ಗರಿ (‘Yaksha Janardana Award’ to Balipa Narayana Bhagavatha)
ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಮೇರು ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರಿಗೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವರ ಸನ್ನಿಧಿಯಲ್ಲಿ ಉಜಿರೆಯ ಯಕ್ಷಜನ ಸಭಾ ವತಿಯಿಂದ ಮೊದಲ ‘ಯಕ್ಷ ಜನಾರ್ದನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ. ಇಂದಿನಿಂದ ಅಂದರೆ ದಿನಾಂಕ ೦೨. ೧೦. ೨೦೨೦ ರ ಶುಕ್ರವಾರದಿಂದ ನಡೆಯುತ್ತಿರುವ ಮೂರು ದಿನದ ತಾಳಮದ್ದಳೆ ‘ಯಕ್ಷೋತ್ಸವ’ದ ಮೊದಲ ದಿನವಾದ ಇಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಬಲಿಪ ಭಾಗವತರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ತಮ್ಮ ವೃತ್ತಿಬದುಕಿನಲ್ಲಿ ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದ ಬಲಿಪ ನಾರಾಯಣ ಭಾಗವತರು ಈ ಚೊಚ್ಚಲ ‘ಯಕ್ಷ ಜನಾರ್ದನ ಪ್ರಶಸ್ತಿ’ಯನ್ನೂ ತಮ್ಮ ಮುಡಿಗೇರಿಸಿಕೊಂಡರು. ಉಜಿರೆಯ ಯಕ್ಷಜನ ಸಭಾದ ಗೌರವಾಧ್ಯಕ್ಷ ಶ್ರೀ ಶ್ರೀ ಶರತ್ ಪಡುವೆಟ್ನಾಯ, ಅಧ್ಯಕ್ಷ ಡಾ.ದಯಾಕರ್, ಉಪಾಧ್ಯಕ್ಷರಾದ ಭುಜಬಲಿ, ಕಾರ್ಯದರ್ಶಿ ಬಿ.ವಿ.ರಾವ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ತಾಳಮದ್ದಳೆ ಅರ್ಥಧಾರಿ, ಮಾಂತ್ರಿಕ ಶಿರೋಮಣಿ ಶ್ರೀ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಇನ್ನಿಲ್ಲ (Udupumoole Gopalakrishna Bhat)
ಮಾಂತ್ರಿಕ ಶಿರೋಮಣಿ, ತಾಳಮದ್ದಳೆ ಅರ್ಥಧಾರಿ ಶ್ರೀ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಅವರು ನಿಧನರಾಗಿದ್ದಾರೆ. ಅವರು ಇಂದು ಅಪರಾಹ್ನ ನಮ್ಮನ್ನಗಲಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ತಾಳಮದ್ದಳೆ ಕ್ಷೇತ್ರದಲ್ಲಿ ಅವರಿಗೆ ಒಳ್ಳೆಯ ಹೆಸರಿತ್ತು. ದೊಡ್ಡ ದೊಡ್ಡ ಕೂಟಗಳಲ್ಲಿಯೂ ತನ್ನ ವಾಕ್ಚಾತುರ್ಯದ ಸುಧೆಯನ್ನು ಉಣಿಸಿದವರು. ಈ ಕ್ಷೇತ್ರದಲ್ಲಿ ಅವರೊಬ್ಬ ಪ್ರಬುದ್ಧ ಅರ್ಥಧಾರಿ. ವಿದುರ, ಶಲ್ಯ, ಅಕ್ರೂರ, ವಿಭೀಷಣ ಮುಂತಾದ ಪಾತ್ರಗಳ ಒಳನೋಟಗಳನ್ನು ಚಿತ್ರಿಸುವಲ್ಲಿ ಎತ್ತಿದ ಕೈ. ಪ್ರಮುಖ ಕೂಟಗಳಲ್ಲಿ ಪ್ರಧಾನ ಪಾತ್ರಗಳಲ್ಲಿಯೂ ಎಷ್ಟೋ ಬಾರಿ ಕಾಣಿಸಿಕೊಂಡಿದ್ದರು. ಹವ್ಯಕ ಮನೆತನದ ಸಂಪ್ರದಾಯಸ್ಥ ಕುಟುಂಬಲ್ಲಿ ಜನಿಸಿದ್ದ ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರ ವೃತ್ತಿ ಮಂತ್ರವಾದವೇ ಆಗಿದ್ದರೂ ಸಾಹಿತ್ಯ, ಸಂಗೀತ, ನೃತ್ಯ, ಯಕ್ಷಗಾನಗಳು ಅವರ ಸಮಾನಾಸಕ್ತಿಗಳೇ ಆಗಿದ್ದುವು. ಕೊಡೆಂಕಿರಿ ರಾಮ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ ಇವರ ಮೂವರು ಮಕ್ಕಳಲ್ಲಿ ಹಿರಿಯ ಮಗನಾಗಿ 1944 ನವೆಂಬರ್ 26ರಂದು ಜನಿಸಿದ ಉಡುಪುಮೂಲೆ ಅವರು ತಮ್ಮ ಶಾಲಾ ಶಿಕ್ಷಣವನ್ನು ಎಡನೀರಿನ ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಪೂರ್ತಿಗೊಳಿಸಿದರು. ಪದವಿ ಪಡೆದ ನಂತರ ಕೆಲವು ಖಾಸಗಿ ಶಾಲೆಗಳಲ್ಲಿ ತಾತ್ಕಾಲಿಕವಾಗಿ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಕೆಲಸಮಯ ಭರತನಾಟ್ಯ ಮತ್ತು ಶಾಸ್ತ್ರೀಯ ಸಂಗೀತವನ್ನೂಕಲಿತಿದ್ದರೂ ಮತ್ತೆ ಮಂತ್ರವಾದದ ವೃತ್ತಿಯತ್ತ ವಾಲಿದ್ದರು. ಪರಂಪರೆಯಿಂದ ಬಂದ ಮಂತ್ರವಾದದ ವೃತ್ತಿ ಅವರ ಕೈ ಬಿಡಲಿಲ್ಲ. ಅದರಲ್ಲಿ ಅಪೂರ್ವ ಯಶಸ್ಸನ್ನು ಸಾಧಿಸಿದರು. ಹೆಚ್ಚಿನ ಸಾಧನೆಯನ್ನು ಮಾಡಿ ಪ್ರಸಿದ್ಧಿಯನ್ನು ಪಡೆದರು. ಎಷ್ಟೋ ವಾಸಿಯಾಗದ ಖಾಯಿಲೆಗಳನ್ನು ಗುಣಪಡಿಸಿದ ಕೀರ್ತಿಯು ಅವರಿಗೆ ಸಲ್ಲಬೇಕು. ನೆರೆಯ ರಾಜ್ಯಗಳಿಂದಲೂ ಜನರು ಅವರನ್ನು ಹುಡುಕಿಕೊಂಡು ಬಂದು ಅವರಲ್ಲಿ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಿ ಹಿಂತಿರುಗಿದ್ದಾರೆ. ಎಷ್ಟೋ ಮಾನಸಿಕ ಖಾಯಿಲೆಗಳನ್ನೂ ಗುಣಪಡಿಸಿದ್ದಾರೆ. ಅವರ ಪುತ್ರ ಶ್ರೀ ರಾಘವೇಂದ್ರ ಅವರು ತಮ್ಮ ತಂದೆಯ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಉಡುಪುಮೂಲೆ ಗೋಪಾಲಕೃಷ್ಣ ಭಟ್ ತನ್ನ ವೃತ್ತಿಯೊಂದಿಗೆ ಪ್ರವೃತ್ತಿಗಳನ್ನೂ ಬಿಡಲಿಲ್ಲ. ಯಕ್ಷಗಾನದ ತಾಳಮದ್ದಳೆ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡುದು ಮಾತ್ರವಲ್ಲದೆ ತನ್ನ ನಿವಾಸದಲ್ಲಿಯೇ ಯಕ್ಷಗಾನ ಸಂಘದ ಮೂಲಕ ಅನೇಕ ಆಸಕ್ತರನ್ನು ತರಬೇತಿ ನೀಡಿ ತಾಳಮದ್ದಳೆ ಅರ್ಥಧಾರಿಗಳಾಗಿ ತಯಾರು ಮಾಡಿದ್ದಾರೆ. ಎಡನೀರು ಸ್ವಾಮೀಜಿಗಳಿಗೆ ಪ್ರಿಯ ಶಿಷ್ಯರಾಗಿ ಅವರ ಪ್ರೀತಿಗೆ ಪಾತ್ರರಾಗಿದ್ದ ಉಡುಪುಮೂಲೆಯವರು ಎಡನೀರು ಮಠದ ತಾಳಮದ್ದಳೆಗಳಲ್ಲಿ ಹೆಚ್ಚಾಗಿ ತಪ್ಪದೆ ಭಾಗವಹಿಸುತ್ತಿದ್ದರು. ಸಾಹಿತಿಯಾಗಿ ಅನೇಕ ಲೇಖನಗಳನ್ನು ಬರೆದಿದ್ದ ಉಡುಪುಮೂಲೆ ಗೋಪಾಲಕೃಷ್ಣ ಭಟ್ ಯಕ್ಷಗಾನ, ನಾಟಕಗಳ ನಿರ್ದೇಶನವನ್ನೂ ಮಾಡುತ್ತಿದ್ದರು. ಹೀಗೆ ಸಮಾಜಮುಖಿಯಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರ ಅಗಲಿಕೆಯು ಕನ್ನಡ ನಾಡಿನ ಕಲಾ, ಸಾರಸ್ವತ ಲೋಕಕ್ಕೆ ಮಾತ್ರವಲ್ಲ ಭಾಷೆ, ಜಾತಿಗಳ ಭೇದವಿಲ್ಲದೆ ಅವರ ನೂರಾರು ಅಭಿಮಾನಿಗಳಿಗೂ ಅತೀವ ನೋವು ತಂದಿದೆ. ಭಗವಂತನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಮತ್ತು ಎಲ್ಲರಿಗೂ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನುನೀಡಲಿ ಎಂದು ಕಳಕಳಿಯ ಪ್ರಾರ್ಥನೆ.
ಯಕ್ಷಗಾನ ಶಿಕ್ಷಣ ಶಾಲೆಗಳು ಮತ್ತು ಗುರುಗಳು (ಭಾಗ – 3) ಧರ್ಮಸ್ಥಳ ಲಲಿತ ಕಲಾ ಕೇಂದ್ರ Dharmasthala Lalitha kala kendra
ಧರ್ಮಸ್ಥಳ ಲಲಿತ ಕಲಾ ಕೇಂದ್ರ (ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಸಂಘ):
ತೆಂಕುತಿಟ್ಟು ಯಕ್ಷಗಾನ ಕಲಿಕೆಗೂ ಸೂಕ್ತ ವ್ಯವಸ್ಥೆಗಳಿಲ್ಲದುದನ್ನು ಮನಗಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರು ತಮ್ಮ ತೀರ್ಥರೂಪರೂ ಹಿಂದಿನ ಧರ್ಮಾಧಿಕಾರಿಗಳೂ ಆದ ಶ್ರೀ ರತ್ನವರ್ಮ ಹೆಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನಕ್ಕೊಂದು ಶಾಸ್ತ್ರೀಯ ಕಲಿಕಾ ಕೇಂದ್ರವನ್ನು ಒದಗಿಸುವ ಮಹತ್ತರವಾದ ಧೃಷ್ಟಿಯನ್ನಿರಿಸಿಕೊಂಡು 1972ರಲ್ಲಿ ‘ಲಲಿತ ಕಲಾ ಕೇಂದ್ರ’ವನ್ನು ಸ್ಥಾಪಿಸಿದರು. ಮೊದಲು ಮೇಳಕ್ಕೆ ಸೇರಿ ‘ಕೋಡಂಗಿ ವೇಷ’ಗಳನ್ನು ಮಾಡಿ ಹೆಜ್ಜೆ ಹೆಜ್ಜೆಗೂ ನಾಟ್ಯ ಕಲಿಯುತ್ತಾ ಔನ್ನತ್ಯವನ್ನು ಸಾಧಿಸುವುದು ಆಗಿನ ರಂಗ ಪದ್ಧತಿಯಾಗಿತ್ತು. ಈ ಅಲಿಖಿತ ನಿಯಮವನ್ನು ಸರಳೀಕರಿಸಲು ಪೂಜ್ಯ ಹೆಗಡೆಯವರು ತೆಂಕುತಿಟ್ಟಿಗೆ ಒಂದು ತರಬೇತಿ ಕೇಂದ್ರದ ಅವಶ್ಯಕತೆಯನ್ನು ಮನಗಂಡರು. ಮಳೆಗಾಲದ ಆರು ತಿಂಗಳುಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಿಮ್ಮೇಳ ಮತ್ತು ಮುಮ್ಮೇಳಗಳನ್ನು ಕಲಿಸುವ ಯೋಜನೆ ಸಿದ್ಧವಾಯಿತು. ಮೊದಲ ವರ್ಷದ ಮುಮ್ಮೇಳ ಗುರುಗಳಾಗಿ ತೆಂಕುತಿಟ್ಟಿನ ಅದ್ವಿತೀಯ ಕಲಾವಿದರಾಗಿದ್ದ ಕುರಿಯ ವಿಠಲ ಶಾಸ್ತ್ರಿಗಳೂ ಹಿಮ್ಮೇಳಕ್ಕೆ ಮಾಂಬಾಡಿ ನಾರಾಯಣ ಭಾಗವತರೂ ಸಿದ್ಧರಾದರು.
ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಕಲಾ ಸಂಘ ಅಥವಾ ಲಲಿತ ಕಲಾ ಕೇಂದ್ರದಲ್ಲಿ ಯಶಸ್ವಿಯಾಗಿ ತರಬೇತಿ ಮುಗಿಸಿದ ಅನೇಕರು ಇಂದು ತೆಂಕುತಿಟ್ಟಿನಲ್ಲಿ ಅಗ್ರಗಣ್ಯ ಕಲಾವಿದರಾಗಿ ಮೆರೆಯುತ್ತಿದ್ದಾರೆ. ಆ ಕಾಲದಲ್ಲಿ ಒಂದು ಅತ್ಯುತ್ತಮ ತರಬೇತಿ ಕೇಂದ್ರವೆಂದು ಹೆಸರು ಗಳಿಸಿದ್ದ ಈ ಕೇಂದ್ರವು ಶಿಸ್ತಿನ ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿ ಗುರುಗಳಾಗಿದ್ದ ಪ್ರಸಿದ್ಧ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ಮಾಂಬಾಡಿ ನಾರಾಯಣ ಭಾಗವತ, ಮಾಣಂಗಾಯಿ ಕೃಷ್ಣ ಭಟ್, ಕುಂಡಂಕುಳಿ ರಾಮಕೃಷ್ಣ ಮದ್ದಳೆಗಾರ, ಪಡ್ರೆ ಚಂದು, ನೆಡ್ಲೆ ನರಸಿಂಹ ಭಟ್, ಅಳಿಕೆ ರಾಮಯ್ಯ ರೈ, ಕೆ. ಗೋವಿಂದ ಭಟ್, ಕರ್ಗಲ್ಲು ವಿಶ್ವೇಶ್ವರ ಭಟ್, ಗೋಪಾಲಕೃಷ್ಣ ಕುರುಪ್, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ, ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ಪದ್ಮನಾಭ ಉಪಾಧ್ಯಾಯ, ತಾರಾನಾಥ ಬಲ್ಯಾಯ, ದಿವಾಣ ಶಿವಶಂಕರ ಭಟ್ ಮೊದಲಾದವರು ತಮ್ಮ ಶ್ರಮವನ್ನು ಧಾರೆಯೆರೆದು ಅನೇಕ ಕಲಾವಿದರನ್ನು ತಯಾರು ಮಾಡಿದ್ದರು.

ಈ ಎಲ್ಲಾ ಶ್ರಮದ ಹಿಂದೆ ಪೂಜ್ಯ ಶ್ರೀ ವೀರೇಂದ್ರ ಹೆಗಡೆಯವರ ಮತ್ತು ಶ್ರೀ ಹರ್ಷೇಂದ್ರ ಕುಮಾರ್ ಅವರ ನಿರಂತರ ಬೆಂಬಲ ಪ್ರೋತ್ಸಾಹಗಳಿದ್ದುವು. ಪೂಜ್ಯ ಹೆಗಡೆಯವರೂ ಶ್ರೀ ಹರ್ಷೇಂದ್ರ ಕುಮಾರ್ ಅವರೂ ಆಗಾಗ ಈ ಲಲಿತ ಕಲಾ ಕೇಂದ್ರಕ್ಕೆ ಭೇಟಿಕೊಟ್ಟು ವಿದ್ಯಾರ್ಥಿಗಳ ಕಲಿಯುವಿಕೆಯನ್ನು ನಿರಂತರ ಪರಿಶೀಲಿಸುತ್ತಿದ್ದರು. ನೆಡ್ಲೆ ನರಸಿಂಹ ಭಟ್, ಕೆ. ಗೋವಿಂದ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಜೊತೆಯಾಗಿ ವಿದ್ಯಾರ್ಥಿಗಳಿಗೆ ಕಲಿಸಲು ಪಠ್ಯಕ್ರಮವೊಂದನ್ನು ಸಿದ್ಧಪಡಿಸಿದರು. ಈ ಪಠ್ಯಕ್ರಮದ ಆಧಾರದಲ್ಲಿ ಲಲಿತ ಕಲಾ ಕೇಂದ್ರದಲ್ಲಿ ತೆಂಕುತಿಟ್ಟಿನ ಹಿಮ್ಮೇಳ ಮುಮ್ಮೇಳಗಳ ಶಿಕ್ಷಣ ಮುಂದುವರಿಯಿತು. ಹೀಗೆ ಒಂದು ಹಂತದಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಲಲಿತ ಕಲಾ ಕೇಂದ್ರಕ್ಕೆ ಕೆಲವು ವರ್ಷಗಳ ಹಿಂದೆ ಕಲಿಯುವ ಆಸಕ್ತ ವಿದ್ಯಾರ್ಥಿಗಳ ಕೊರತೆಯುಂಟಾಯಿತು. ಆ ಕಾಲದಲ್ಲಿ ಯಕ್ಷಗಾನದಿಂದ ಬರುವ ಆದಾಯ ಮತ್ತು ಜೀವನ ನಿರ್ವಹಣೆಯ ಮಟ್ಟವನ್ನು ಲೆಕ್ಕಹಾಕಿ ಹೆತ್ತವರು ತಮ್ಮ ಮಕ್ಕಳನ್ನು ಯಕ್ಷಗಾನ ಕಲಿಯುವುದಕ್ಕೆ ಪ್ರೇರಿಪಿಸದೆ ಇದ್ದುದೇ ಇದಕ್ಕೆ ಕಾರಣವಿರಬಹುದು. ಇದರ ಜೊತೆಗೆ ಹಲವಾರು ಯಕ್ಷಗಾನ ಕಲಾವಿದರು ಅಲ್ಲಲ್ಲಿ ತಮ್ಮ ತಮ್ಮ ಪ್ರದೇಶಗಳಲ್ಲಿ ಯಕ್ಷಗಾನ ತರಗತಿಗಳನ್ನು ಆರಂಭಿಸಿದ್ದೂ ಇನ್ನೊಂದು ಕಾರಣವಿರಬಹುದು. ಕಲಾಸಕ್ತರ ಕೊರತೆಯಿಂದ ಲಲಿತ ಕಲಾ ಕೇಂದ್ರದಲ್ಲಿ ಯಕ್ಷಗಾನ ಶಿಕ್ಷಣ ಮತ್ತು ತರಬೇತಿ ಮುಂದುವರಿಯದೆ ಇದ್ದುದು ತೆಂಕುತಿಟ್ಟು ಯಕ್ಷಗಾನಕ್ಕೆ ಆದ ಒಂದು ದೊಡ್ಡ ನಷ್ಟವೆಂದೇ ಹೇಳಬಹುದು. (ಮುಂದಿನ ಸಂಚಿಕೆ ಭಾಗ – 4ರಲ್ಲಿ ಮುಂದುವರಿಯುವುದು)
ಲೇಖನ: ಮನಮೋಹನ್ ವಿ.ಎಸ್.
ರಾಜಸ್ತಾನದ ಆಕರ್ಷಕ ಕಲ್ಬೇಲಿಯಾ ನೃತ್ಯ (Kalbelia dance Of Rajastan, Indian Folk)ಭಾರತದ ಕಲಾವೈವಿಧ್ಯತೆ – ಭಾಗ 3
ಕಲ್ಬೇಲಿಯಾ ಎಂದರೆ ರಾಜಸ್ತಾನದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಒಂದು ಜನಾಂಗದ ಹೆಸರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಇವರ ಸಾಂಪ್ರದಾಯಿಕ ಉದ್ಯೋಗವೆಂದರೆ ಹಾವುಗಳನ್ನು ಹಿಡಿಯುವುದು. ಮೊದಲೆಲ್ಲಾ ಹಾವಿನ ವಿಷದ ವ್ಯಾಪಾರವನ್ನೂ ಮಾಡುತ್ತಿದ್ದರು. ಆದರೆ ಹಾವನ್ನು ಕೊಲ್ಲುತ್ತಿರಲಿಲ್ಲ. ಅವರ ಈ ನೃತ್ಯವು ಕಲ್ಬೇಲಿಯಾ ನೃತ್ಯ ಎಂದು ಇಡೀ ಪ್ರಪಂಚದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ಹಾವುಗಳೊಂದಿಗೆ ಜೀವನ ನಿರ್ವಹಣೆಯ ಸಂಬಂಧ ಹೊಂದಿದ ಇವರ ನೃತ್ಯ ಮತ್ತು ಅವರ ಸಮುದಾಯದ ವೇಷಭೂಷಣಗಳಲ್ಲಿ ಸರ್ಪಗಳ ಹೋಲಿಕೆಯಿದೆ. ಪುರುಷರು ಹಾವಿನ ವಿಷಗಳ ವ್ಯವಹಾರವನ್ನು ಮಾಡಿದರೆ ಮಹಿಳೆಯರು ಕಲ್ಬೇಲಿಯಾ ನೃತ್ಯವನ್ನು ಮಾಡಿ ಜೀವನ ಸಾಗಿಸುತ್ತಿದ್ದರು. ಹಳ್ಳಿಗಳ ಮನೆಗಳಲ್ಲಿ ಹಾವುಗಳು ಮನೆಯೊಳಗೆ ಪ್ರವೇಶ ಮಾಡಿದರೆ ಹಾವು ಹಿಡಿಯಲು ಈ ಜನಾಂಗದವರನ್ನು ಕರೆಯುತ್ತಿದ್ದರು. ಇವರು ಗಿಡಮೂಲಿಕೆಗಳ ಚಿಕಿತ್ಸೆಯನ್ನೂ ಬಲ್ಲವರಾದುದರಿಂದ ಆ ರೀತಿಯೂ ಜೀವನ ನಿರ್ವಹಣೆ ಮಾಡುತ್ತಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನುಸಾರ ಹಾವುಗಳ ವ್ಯವಹಾರವನ್ನು ಮಾಡುವುದಕ್ಕೆ ನಿರ್ಬಂಧಗಳಿರುವುದರಿಂದ ಈಗ ಅವರು ಈ ವ್ಯಾಪಾರವನ್ನು ಬಿಟ್ಟು ಇತರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೆಚ್ಚಾಗಿ ಮರುಭೂಮಿಯಲ್ಲಿ ಪ್ರದರ್ಶಿತವಾಗುವ ಕಲ್ಬೇಲಿಯಾ ನೃತ್ಯವು ಕಲ್ಬೇಲಿಯಾ ಜನಾಂಗದ ಸಂಸ್ಕೃತಿಯ ಒಂದು ಭಾಗವಾಗಿದೆ. ಈ ನೃತ್ಯವು ಸರ್ಪಗಳ ಚಲನವಲನವನ್ನು ಹೋಲುತ್ತದೆ.
ಈ ಜನಾಂಗದ ಹುಡುಗಿಯರು ಸರ್ಪಗಳಂತೆ ಬಾಗುತ್ತಾ ಬಳುಕುತ್ತಾ ಈ ನೃತ್ಯವನ್ನು ಮಾಡುತ್ತಾರೆ. ಕಲ್ಬೇಲಿಯಾ ನೃತ್ಯದ ಹಾಡುಗಳು ಪುರಾಣ ಮತ್ತು ಜಾನಪದ ಕಥೆಗಳನ್ನು ಆಧರಿಸಿದೆ. ಅತ್ಯಂತ ಸುಂದರವಾದ ನೃತ್ಯ. ರೋಮಾಂಚನಗೊಳಿಸುವ ಅಂಗಾಂಗ ಚಲನೆ ಇದರ ವೈಶಿಷ್ಟ್ಯ. ಆದರೆ ಖೇದಕರವಾದ ವಿಚಾರವೇನೆಂದರೆ ಈ ನೃತ್ಯಪ್ರಕಾರಕ್ಕೆ ಯಾವುದೇ ಪಠ್ಯಗಳೂ ಕೈಪಿಡಿಗಳೂ ಇಲ್ಲ. ತರಬೇತಿಯನ್ನು ಪಡೆಯಲು ಲಿಖಿತ ಟಿಪ್ಪಣಿಗಳೂ ಇಲ್ಲ. ಆದುದರಿಂದ ಈ ಸುಂದರ ನೃತ್ಯವನ್ನು ಪುನರುಜ್ಜೀವನಗೊಳಿಸಲು ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಭಾರತ ಸರಕಾರವೂ ಬಹಳ ಆಕರ್ಷಕವಾದ ಈ ಜಾನಪದ ನೃತ್ಯವನ್ನು ಉಳಿಸಲು ಕ್ರಮಗಳನ್ನು ಕೈಗೊಂಡಿದೆ. ವಿದೇಶಿಯರು ಈ ನೃತ್ಯಕ್ಕೆ ಮಾರುಹೋಗಿದ್ದಾರೆ. ರಷ್ಯಾ ಸೇರಿದಂತೆ ಅಸಂಖ್ಯಾತ ಮಹಿಳೆಯರು ಈ ನೃತ್ಯವನ್ನು ಕಲಿತು ಅದನ್ನು ಅದ್ಭುತವಾಗಿ ಪ್ರದರ್ಶನ ಮಾಡುತ್ತಾರೆ. ಯುನೆಸ್ಕೊ ಕೂಡ ಈ ನೃತ್ಯವನ್ನು ತನ್ನ ಅಮೂರ್ತ ಹಾಗೂ ಅಸ್ಪಷ್ಟ ಪರಂಪರೆಯ ಪಟ್ಟಿಗೆ ಸೇರಿಸಿದೆ.
ಲೇಖನ: ಮನಮೋಹನ್ ವಿ. ಎಸ್