ಈ ಬಾರಿಯ ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಹಿರಿಯ ಮದ್ದಳೆಗಾರರಾದ ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ನೀಡಿ ಗೌರವಿಸಲಾಗಿದೆ. ಕಡಬ ಸಂಸ್ಮರಣಾ ಸಮಿತಿಯ ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ ನಿನ್ನೆ ದಿನಾಂಕ 06.12.2020ರ ಆದಿತ್ಯವಾರ ನಡೆಯಿತು.
ಕಡಬ ನಾರಾಯಣ ಆಚಾರ್ಯರದು ತೆಂಕುತಿಟ್ಟಿನ ಹಿಮ್ಮೇಳದ ಒಂದು ಪ್ರಖ್ಯಾತ ಹೆಸರು. ಸುಮಾರು 30ಕ್ಕೂ ಹೆಚ್ಚು ವರ್ಷಗಳ ಕಾಲ ಖ್ಯಾತ ಮದ್ದಳೆಗಾರರಾಗಿ ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಸಲ್ಲಿಸಿದವರು. ಅವರು ಅಸ್ತಂಗತರಾದ ನಂತರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿದವರು ಅವರ ಸುಪುತ್ರರಾದ ಕಡಬ ವಿನಯ ಆಚಾರ್ಯ.
ಶ್ರೀ ಕಡಬ ನಾರಾಯಣ ಆಚಾರ್ಯ ಮತ್ತು ಶ್ರೀ ಕಡಬ ವಿನಯ ಆಚಾರ್ಯ
ಆದರೆ ವಿಧಿಲಿಖಿತವನ್ನು ತಪ್ಪಿಸುವವರಾರು? ಕಡಬ ವಿನಯ ಆಚಾರ್ಯರೂ ಯಕ್ಷರಂಗದ ಮದ್ದಳೆಗಾರರಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ ತಮ್ಮ ಪ್ರಸಿದ್ಧಿಯ ಉತ್ತುಂಗದಲ್ಲಿರುವಾಗಲೇ ಸಣ್ಣ ವಯಸ್ಸಿನಲ್ಲಿಯೇ ಈ ಲೋಕದ ಯಾತ್ರೆಯನ್ನು ಮುಗಿಸಿದರು.
ಇವರೀರ್ವರ ಹೆಸರಿನಲ್ಲಿ ನೀಡಲಾಗುವ ಕಡಬ ಸಂಸ್ಮರಣಾ ಪ್ರಶಸ್ತಿಯು ಹಿರಿಯ ಖ್ಯಾತ ಮದ್ದಳೆಗಾರರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಅವರಿಗೆ ಅರ್ಹವಾಗಿಯೇ ಸಂದಿದೆ.
ಯಕ್ಷಗಾನದ, ತಾಳಮದ್ದಳೆಗಳ ಯಶಸ್ಸಿನ ಗಾಥೆಗಳಲ್ಲಿ ಭಾಗವತಿಕೆಯದು ಪ್ರಥಮ ಪಾತ್ರ, ಸುಶ್ರಾವ್ಯ ಭಾವ ಗಾಯನ, ಪಾತ್ರ ಸಂದರ್ಭೋಚಿತ ತಾಳಮೇಳ ಒಡಗೂಡಲು ಭಾಗವತರಿಗೆ ಉತ್ಕೃಷ್ಟವಾದ ಕಥಾಕಾವ್ಯ ಒದಗಿಬರಬೇಕು. ಯಕ್ಷಕಾವ್ಯರಚನೆ ಸರಳವಲ್ಲ.
ಕವಿಗೆ ಸಂಗೀತ, ತಾಳ, ನಾಟ್ಯ ಹಾಗೂ ಅಭಿನಯ ಪೂರಕ ಭಾವಗಳ ಸ್ಪಷ್ಟತೆ, ವೇದಿಕೆಯ ಹಾಗೂ ಕಥೆಯ ಪಾತ್ರವರ್ಗಗಳ ಸಂಪೂರ್ಣ ಪರಿಚಯವಿರಬೇಕು. ಈ ಸಕಲ ಕಲಾಜ್ಞಾನ ಸಮುಚ್ಛಯ ಕವಿಯ ಅಂತರಾಳದಲ್ಲಿ ಸಮಾಹಿತಗೊಂಡಾಗ ಯಕ್ಷಗಾನ ಕಾವ್ಯದ ಅನುರೂಪ ಕೃತಿ ಸಿದ್ಧಗೊಳುವುದು.
ಪದ್ಯಾಣ ಈಶ್ವರ ಭಟ್ಟ ಲಕ್ಷ್ಮೀ ಅಮ್ಮನವರ ಮಗನಾಗಿ ಬಂಟ್ವಾಳದ ಕರೋಪಾಡಿಯಲ್ಲಿ 21-10-1929 ರಂದು ಪದ್ಯಾಣ ವೆಂಕಟೇಶ್ವರ ಭಟ್ಟರ ಜನನ. ಪ್ರಾರಂಭಿಕ ಸಂಸ್ಕೃತ ಪಾಠ ಶ್ರೀ ಮಾಂಬಾಡಿ ಈಶ್ವರ ಜೋಯಿಸರಲ್ಲಿ ಹಾಗೂ ಉಡುಪಿಯ ಸಂಸ್ಕೃತ ಪಾಠಶಾಲೆಯಲ್ಲಿ ಪಡೆದು 1945ರಲ್ಲಿ ರಾಷ್ಟ್ರಭಾಷಾ ವಿಶಾರದಾ 1951ರಲ್ಲಿ ಹಿಂದಿ ಪ್ರಚಾರಕ ಪದವಿಗಳನ್ನು ಗಳಿಸಿ ಮದ್ರಾಸ್ ವಿಶ್ವವಿದ್ಯಾಲಯದ ಸಂಸೃತ ಸಾಹಿತ್ಯ ಶಿರೋಮಣಿಯಾದರು. 1960ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಚಿನ್ನದ ಪದಕದೊಂದಿಗೆ ಕನ್ನಡ ಸಂಸ್ಕೃತ ವಿದ್ವಾನ್ ಪದವಿ ಪಡೆದು 1953ರಲ್ಲಿ ಕಮ್ಮಾಜೆಯ ಸಂಸ್ಕೃತ ಶಾಲೆಯಲ್ಲಿ ಅಧ್ಯಾಪನ ಪ್ರಾರಂಭಿಸಿ 1959ರಲ್ಲಿ ಕುರುಡಪದವು ಪ್ರಾಥಮಿಕ ಶಾಲಾ ಹಿಂದಿ ಅಧ್ಯಾಪಕರಾಗಿ ವೃತ್ತಿಜೀವನಕ್ಕೆ ತೊಡಗಿದರು.
26ವರ್ಷಗಳ ಅನನ್ಯ ಅಧ್ಯಾಪನ ವೃತ್ತಿ ನಡೆಸಿ 1985ರ ವಿಶ್ರಾಂತ ಜೀವನದಲ್ಲಿ ಕೃಷಿ, ತಾಳಮದ್ದಳೆ, ಬರವಣಿಗೆ, ಸಮಾಜಸೇವೆ, ನಾಟಕ, ಯಕ್ಷಗಾನ ಸಾಹಿತ್ಯ ರಚನೆಗಳಲ್ಲಿ ತಮ್ಮನ್ನು ತೊಡಗಿಸಿ ಅಮೋಘ ಸಾಧನೆಗಳಿಂದ ಹೆಸರುವಾಸಿಯಾದರು. ಅಭಿನಯ ಕಲೆಯಲ್ಲಿಯೂ ಇವರು ಸಾಕಷ್ಟು ಹೆಸರು ಮಾಡಿದ್ದರು.
ಕೃತಿಗಳು 1: ಸೌದಾಸ ಚರಿತೆ: ಕುಮಟಾದ ಯಕ್ಷಗಾನಕಾ ರ್ಯಾಲಯದಿಂದ ಪ್ರಕಟಿತ. ಈಗಲೂ ಈ ಪ್ರಸಂಗ ಚಾಲ್ತಿಯಲ್ಲಿದೆ. 2: ಕೋಳ್ಯೂರು ಕ್ಷೇತ್ರ ಮಹಾತ್ಮೆ::ಕೋಳ್ಯೂರು ಶ್ರೀ ಶಂಕರನಾರಾಯಣ ಸೇವಾ ಸಮಿತಿಯಿಂದ ಪ್ರಕಟಿತ ಕೃತಿ 3: ಶ್ರೀ ಧರ್ಮಸ್ಥಳ ಕ್ಷೇತ್ರಮಹಾತ್ಮೆ: ಕುರಿಯ ಶಾಸ್ತ್ರಿಯವರಿಂದ ಮಾಹಿತಿ ಪಡೆದು ಧರ್ಮದರ್ಶಿ ಶ್ರೀ ಮಂಜಯ್ಯ ಹೆಗಡೆಯವರ ಪ್ರೇರೇಪಣೆಯಿಂದ ರಚಿತ ಕೃತಿ ಮೂಂದೆ ರತ್ನವರ್ಮ ಹೆಗಡೆಯವರ ಮಾರ್ಗದರ್ಶನದಲ್ಲಿ ಬಯಲಾಟ ಪ್ರದರ್ಶಿಸ ತೊಡಗಿತು ಎಂದು ಹೇಳಲಾಗುತ್ತಿದೆ. ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಬಯಲಾಟವು ಈ ಪ್ರಸಂಗವನ್ನು ನಿರಂತರವಾಗಿ ಪ್ರದರ್ಶಿಸಿ ಯಶಸ್ವೀಗೊಳಿಸಿದೆ
4: ಅಶ್ವಿನೀ ವಿಜಯ (ವೀರ ವಿಶ್ವಲೆ) (ಅಪ್ರಕಟಿತ) ಆರೂರು ಲಕ್ಷ್ಮೀನಾರಾಯಣ ಸ್ಮಾರಕ ವೈದ್ಯಕೀಯ ಕಾಲೇಜು ಕೊಪ್ಪ ಇವರಿಂದ ಪ್ರೇರಣೆ ಹಾಗೂ ಪ್ರದರ್ಶನ 5: ಸತೀ ಸೀಮಂತಿನಿ (ಅಪ್ರಕಟಿತ) ವಿಧವಾದೋಷ ನಿವಾರಣಾ ವ್ರತನಿಷ್ಠೆ ವಸ್ತುವಿಶೇಷದ ಕೃತಿ. ಇವಲ್ಲದೆ ಸತ್ಯಹರಿಶ್ಚಂದ್ರ, ಮಾಗಧವಧೆ, ಚಂದ್ರಹಾಸ (ಪೌರಾಣಿಕ) ಬಲಿ-ವಾಮನ, ಸತ್ಯವಾನ-ಸಾವಿತ್ರಿ(ಗೀತ) ಭಾಗ್ಯಚಕ್ರ, (ಸಾಮಾಜಿಕ) ಗುರುಭಕ್ತಿ (ಏಕಾಂಕ)ನಾಟಕಗಳು ಹಾಗೂ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸುಪ್ರಭಾತ ಕೀರ್ತನೆಗಳು ಇವರ ಪ್ರಸಿದ್ಧ ರಚನೆಗಳು.
ಕುರಿಯ ವಿಠಲ ಶಾಸ್ತ್ರಿಯವರಿಗೆ ಆತ್ಮೀಯರಾಗಿದ್ದ ಈ ಆಶುಕವಿಯ ಹಾಡುಗಳನ್ನು ವೇಗವಾಗಿ ದಾಖಲಿಸಿ ಬರೆಯಲು ಮೂರು ಜನರನ್ನು ವಿನಂತಿಸಿ ಅವರ ಮೂಲಕ ಬ್ರಹ್ಮಕಪಾಲದಂತಹ ಕೃತಿಗಳ ರಚನೆಯಾಯಿತೆಂದು ಹಳೆತಲೆಮಾರಿನ ಪ್ರಸಿದ್ಧ ಕಲಾವಿದರ ಅಂಬೋಣ. ಸರಳಸಜ್ಜನ ಮೃದುಭಾಷಿಯೂ ಮಿತಭಾಷಿಯೂ ಆಗಿದ್ದ ಈ ಸಾಧಕರಿಗೆ ಹಲವು ಪುರಸ್ಕಾರ ಗೌರವಗಳು ಮುಡಿಗೇರಿದ್ದವು ಯಕ್ಷವಿಜಯ ಕಲಾಸಂಘ ಮಿತ್ತನಡ್ಕ, ಮಂಗಳೂರು ಹವ್ಯಕ ಸಭಾ, ದ ಕ ಸಾಹಿತ್ಯ ಪರಿಷತ್ತು ಮತ್ತು ನೀರ್ಪಾಜೆ ಭೀಮಭಟ್ಟ ಪ್ರತಿಷ್ಠಾನ, ಕನ್ಯಾನ, ಕುರಿಯ ವಿಠಲ ಶಾಸ್ರಿ ಸ್ಮಾರಕ ಪ್ರತಿಷ್ಠಾನಗಳು ಶ್ರೀಯುತರನ್ನು ಪ್ರಶಸ್ತಿಗಳೊಡನೆ ಗೌರವಿಸಿವೆ. ಬಹುಭಾಷಾ ಪಂಡಿತರಾದ ಈ ಶ್ವೇತವಸ್ತ್ರ ದಾರಿ ಕಲಾವಿದರ ಭಾಷಾಪ್ರೌಢಿಮೆ, ಛಂದೋಬದ್ಧತೆ, ತಜ್ಞ ಭಾವಸ್ಫುರತೆ, ವಿದ್ವತ್ಪೂರ್ಣ ರಚನಾ ಕುಶಲತೆಗಳು ರಚನೆಗಳನ್ನು ಅನನ್ಯವಾಗಿಸಿ ಉನ್ನತಿಗೇರಿಸಿವೆ.
ಡಾ ಪಾದೇಕಲ್ಲು ವಿಷ್ಣು ಭಟ್ಟ ಹಾಗೂ ಮುಳಿಯ ಶಂಕರ ಭಟ್ಟರ ಸಂಪಾದನೆಯ ದ ಕ ಜಿಲ್ಲಾ ಪಂಡಿತ ಪರಂಪರೆ ಬಿಂಬಿತ ಪಂಜಜೆ ಶಂಕರ ಭಟ್ಟ ಜನ್ಮಶತಮಾನೋತ್ಸವ ಗೌರವ ಗ್ರಂಥ ಗುರುಗೌರವ ಎಂಬ ಬೃಹತ್ ಗ್ರಂಥದಲ್ಲಿ ಶ್ರೀಮತಿ ವೀಣಾ ಕಜೆಯವರು ಈ ಸಾಹಿತಿಯ ಸಮಗ್ರ ಚಿತ್ರಣ ನೀಡಿ ದಾಖಲಿಸಿದ್ದಾರೆ ಶ್ರೀಪದ್ಯಾಣ ವೆಂಕಟೇಶ್ವರ ಭಟ್ಟರದು ಪತ್ನಿ ಮೂಕಾಂಬಿಕರವರೊಂದಿಗಿನ ಸುಖೀ ಜೀವನವಾಗಿತ್ತು ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿಜೀವನ ನಡೆಸಿ ವಿಶ್ರಾಂತ ಕೃಷಿಬದುಕು ನಡೆಸುತ್ತಿರುವ ಶ್ರೀ ಸತೀಶ್ವರ ಭಟ್ಟರು ಹಾಗೂ ಶ್ರೀಮತಿ ವಿಜಯಲಕ್ಷ್ಮಿಯವರು ಪದ್ಯಾಣ ವೆಂಕಟೇಶ್ವರ ಭಟ್ಟರ ಮಕ್ಕಳು.
ಶ್ರೀ ಸತೀಶ ಭಟ್ಟರ ಪತ್ನಿ ಜಯಲಕ್ಷ್ಮಿ ಎಸ್ ಭಟ್ಟರು ಸಾಹಿತ್ಯ ಬರಹಗಳೊಂದಿಗೆ ಯೋಗ ಶಿಕ್ಷಕಿಯಾಗಿ ವೃತ್ತಿಪರರಾಗಿರುವ ಕವಯಿತ್ರಿ ಡಾ ಶ್ರೀಲತಾ ಪದ್ಯಾಣ (ಸಾಹಿತ್ಯ ವಂಶವಾಹಿಯಾಗಿರುವುದು ಗಮನಾರ್ಹ) ಹಾಗೂ ಶ್ರೀನಿಧಿ ಪದ್ಯಾಣ ಇವರ ಮಕ್ಕಳು ಪದ್ಯಾಣ ವೆಂಕಟೇಶ್ವರ ಭಟ್ಟರ ಪುತ್ರಿ, ಅಮೈ ಸುಬ್ರಹ್ಮಣ್ಯ ಭಟ್ಟರ ಪತ್ನಿಯಾಗಿ ಗೃಹ ನಿರ್ವಹಣೆ ಮಾಡುತ್ತಿರುವರು ಸೌಮ್ಯಶ್ರೀ ಮತ್ತು ಪ್ರಸನ್ನ ನಾರಾಯಣ ಇವರ ಮಕ್ಕಳು. ಶ್ರೀಯುತ ಪದ್ಯಾಣ ವೆಂಕಟೇಶ್ವರ ಭಟ್ಟರ ಕಲಾಸೇವೆ ಕಲಾಕೃತಿಗಳು ಚಿರಂತನವಾಗಿ ಬೆಳಗಿವೆ.
ತಮ್ಮ ಬಣ್ಣದ ವೇಷದ ಖ್ಯಾತಿಯಿಂದ ಬಣ್ಣದ ಕುಷ್ಟ ಎಂದೇ ಪರಿಚಿತರಾಗಿದ್ದ ಕೃಷ್ಣಯ್ಯ ಮಂಜಯ್ಯ ಶೆಟ್ಟಿ ಯಾನೆ ಕುಷ್ಟ ಗಾಣಿಗ ಇಂದು (6-12-2020) ಬೆಳಗಿನಜಾವ ಹೊನ್ನಾವರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.
ಕರ್ಕಿ, ಗುಂಡಬಾಳ, ಇಡಗುಂಜಿ, ಅಮೃತೇಶ್ವರೀ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆಗೈದಿದ್ದರು. ಎಲ್ಲಾ ರೀತಿಯ ವೇಷಗಳನ್ನು ಮಾಡುತ್ತಿದ್ದ ಅವರು ಬಣ್ಣ ಮತ್ತು ಕಿರಾತ ವೇಷಗಳಲ್ಲಿವಿಶೇಷ ಸಿದ್ಧಿ ಪಡೆದಿದ್ದರು.
ಉಡುಪಿಯ ಯಕ್ಷಗಾನ ಕಲಾರಂಗ ಪ್ರಶಸ್ತಿಯೂ ಸೇರಿದಂತೆ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. ಅವರ ಅಗಲಿಕೆಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಯಕ್ಷಗಾನ ತಾಳಮದ್ದಳೆ ಪ್ರಿಯರಿಗೆ ಶ್ರೀ ರಾಮ ಜೋಯಿಸ ಎಂಬ ಹೆಸರು ಚಿರ ಪರಿಚಿತ. ಸ್ವತಃ ಕಲಾವಿದನಾಗಿರುವುದರ ಜೊತೆಗೆ ಯಕ್ಷಗಾನ ಪ್ರದರ್ಶನ ಮತ್ತು ತಾಳಮದ್ದಳೆಗಳನ್ನು ಸಂಘಟಿಸುವುದರಲ್ಲಿ ನಿಪುಣ. ಆಟವಾಗಲೀ ಕೂಟವಾಗಲೀ ಪ್ರಸ್ತುತ ಸನ್ನಿವೇಶದಲ್ಲಿ ಸಂಘಟನೆ ಎನ್ನುವುದು ಬಹಳ ದೊಡ್ಡ ಸವಾಲು.
ಪ್ರಮುಖ ಕಲಾವಿದರ ಪಟ್ಟಿಯನ್ನು ನೋಡಿ ಅವರ ಅರ್ಥಗಾರಿಕೆಯನ್ನೋ ಅಥವಾ ವೇಷವನ್ನೋ ನೋಡಲು ಬರುವ ಜನರಿರುವಾಗ ಕೊನೆಯ ಕ್ಷಣದಲ್ಲಿ ಅನಿವಾರ್ಯವಾಗಿಯೋ ಅಥವಾ ಇನ್ನಿತರ ಕಾರಣಗಳಿಗಾಗಿಯೋ ಪ್ರಸಿದ್ಧ ಕಲಾವಿದರು ಪ್ರದರ್ಶನಗಳಿಗೆ ಕೊನೆಯ ಕ್ಷಣದಲ್ಲಿ ಅಲಭ್ಯರಾದಾಗ ಪ್ರೇಕ್ಷಕರ ಅಸಹನೆ, ಕೋಪ, ತಾಪಗಳಿಗೆ ಮೊದಲು ಬಲಿಯಾಗುವುದು ಸಂಘಟಕನೇ ಆಗಿರುತ್ತಾನೆ. ಆದುದರಿಂದ ಸಂಘಟನೆಯ ಜವಾಬ್ದಾರಿಯನ್ನು ವಹಿಸಿಕೊಂಡರೆ ಸಾಲದು. ಅದನ್ನು ಸಮರ್ಥವಾಗಿ ನಿಭಾಯಿಸುವುದು ಹೇಗೆಂದು ತಿಳಿದಿರಬೇಕು. ಇಂತಹಾ ಸಂದರ್ಭಗಳಲ್ಲಿ ನಾಜೂಕಾಗಿ ಬೆಣ್ಣೆಯಿಂದ ಕೂದಲು ತೆಗೆದಂತೆ ಪರಿಸ್ಥಿತಿಯನ್ನು ನಿರ್ವಹಿಸುವ ಹೊಣೆಗಾರಿಕೆ ಸಂಘಟನೆಯನ್ನು ಹೊತ್ತವನ ಜವಾಬ್ದಾರಿ.
ಈ ರೀತಿಯ ಸಮಸ್ಯೆಗಳು ಹಾಗೂ ಸನ್ನಿವೇಶಗಳು ಉಂಟಾಗದಂತೆ ಎಚ್ಚರ ವಹಿಸುವ ಮತ್ತು ಸುಲಲಿತವಾಗಿ ನಿರ್ವಹಿಸುವ ಜಾಣ್ಮೆ ರಾಮ ಜೋಯಿಸರಲ್ಲಿದೆ. ಆದುದರಿಂದಲೇ ಅವರಿಂದು ತಾಳಮದ್ದಳೆಯ ಪ್ರಮುಖ ಸಂಘಟರಾಗಿ ಗುರುತಿಸಲ್ಪಟ್ಟಿದ್ದಾರೆ. ರಾಮ ಜೋಯಿಸರ ತಂದೆಯ ಹೆಸರು ವೆಂಕಟ್ರಮಣ ಜೋಯಿಸ್ ತಾಯಿ ಲಕ್ಷ್ಮಿ. ನೆಟ್ಟಾರು ಸರಕಾರೀ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಕಾಲೇಜು ವಿದ್ಯಾಭ್ಯಾಸ ಎಸ್. ಡಿ. ಎಂ ಉಜಿರೆ. ಕಾಲೇಜು ವಿದ್ಯಾಭ್ಯಾಸದ ನಂತರ ಉದ್ಯಮ ಕ್ಷೇತ್ರಕ್ಕೆ ಕಾಲಿರಿಸಿದರು. ಅವರು ಈಗ ಕ್ಲಾಸ್ 1 ವಿದ್ಯುತ್ ಗುತ್ತಿಗೆದಾರ , ಎಚ್ ಟಿ ಲೈನ್, ಟ್ರಾನ್ಸ್ ಫಾರ್ಮರ್, ಹೌಸ್ ವೈರಿಂಗ್ , ಕೃಷಿಗೆ ಸಂಬಂಧಿಸಿದ ವಿದ್ಯುತ್ ಸಂಪರ್ಕವೇ ಮೊದಲಾದ ಎಲೆಕ್ಟ್ರಿಕ್ ವಿಭಾಗದಲ್ಲಿ A to Z ಕೆಲಸಗಳನ್ನು ಮಾಡಿಸುವ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್. ಹುಟ್ಟಿದ್ದು ತಮ್ಮ ಬೆಳ್ಳಾರೆಯ ಮನೆಯಲ್ಲಿ.
ಜಾಹೀರಾತು
“ಹವ್ಯಾಸೀ ತಾಳಮದ್ದಳೆಯಲ್ಲಿ ಹವ್ಯಾಸೀ ಅರ್ಥಧಾರಿ ನಾನು” ಬೆಳ್ಳಾರೆ ರಾಮ ಜೋಯಿಸರು ಯಕ್ಷಗಾನ ರಂಗದಲ್ಲಿ ತಮ್ಮ ಸ್ಥಾನದ ಬಗ್ಗೆ ಹೀಗೆ ವ್ಯಾಖ್ಯಾನಿಸುತ್ತಾರೆ. ಮೊದಲು ಆಟಗಳಲ್ಲಿ ವೇಷ ಮಾಡುತಿದ್ದರು. ಆಟದಲ್ಲಿ ಅವರ ಚಂದ್ರಹಾಸ ಪ್ರಸಂಗದ ಮದನನ ಪಾತ್ರವನ್ನು ಸುಣ್ಣಂಬಳ ವಿಶ್ವೇಶ್ವರ ಭಟ್ಟರೇ ಮೆಚ್ಚಿಕೊಂಡಿದ್ದರು. ಆದರೆ ಅವರ ಆಸಕ್ತಿಯ ಕ್ಷೇತ್ರ ಯಕ್ಷಗಾನ ತಾಳಮದ್ದಳೆ. ತಾಳಮದ್ದಳೆಯಲ್ಲಿ ಸತತವಾಗಿ ಭಾಗವಹಿಸುತ್ತಿದ್ದರು. ಅದರಲ್ಲೂ ತಾಳಮದ್ದಲೆಯನ್ನು ಸಂಘಟಿಸುವುದು ಇವರ ಮೆಚ್ಚಿನ ಹವ್ಯಾಸ. ಕ್ರಮೇಣ ವೇಷ ಕಳಚಿದ ಮೇಲೆ ಮುಖದ ಮೇಲೆ ಹಚ್ಚಿದ ಬಣ್ಣವು ಅಲರ್ಜಿಯಾಗುತ್ತಿದ್ದರಿಂದ ಹಾಗೂ ಬಣ್ಣವನ್ನು ತೆಗೆಯುವಲ್ಲಿ ಕಷ್ಟವಾಗುತ್ತಿದ್ದುದರಿಂದ ವೇಷ ಮಾಡುವುದನ್ನು ಬಿಟ್ಟರು.
ತಾಳಮದ್ದಳೆ ಸಂಘಟಿಸುವುದು ಇವರಿಗೆ ಅತ್ಯಂತ ಇಷ್ಟದ ವಿಷಯ. ಹೆಚ್ಚು ಹೆಚ್ಚು ತಾಳಮದ್ದಳೆ ನಡೆಯಬೇಕು. ಒಳ್ಳೆಯ ಕಲಾವಿದರು ಭಾಗವಹಿಸಿ ಒಟ್ಟಿನಲ್ಲಿ ತಾಳಮದ್ದಳೆ ಕಾರ್ಯಕ್ರಮ ಒಳ್ಳೆಯದಾಗಬೇಕು ಎಂದೇ ರಾಮ ಜೋಯಿಸರ ಅಭಿಪ್ರಾಯ ಹಾಗೂ ನಿಲುವು. ಹಾಗೂ ಈ ನಿಲುವಿಗೆ ಬದ್ಧವಾಗಿಯೇ ಅವರು ತಾಳಮದ್ದಳೆ ಕಾರ್ಯಕ್ರಮ ಸಂಘಟಿಸುತ್ತಾರೆ. ಸಂಘಟಕರಿಗೆ ಹಲವಾರು ವಿಚಾರಗಳು ತಿಳಿದಿರಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.
ಫೋಟೋ: ರಾಮ್ ನರೇಶ್ ಮಂಚಿ
“ಯಾವ ಯಾವ ಕಲಾವಿದರಿಗೆ ಯಾವ ಪಾತ್ರವನ್ನು ನೀಡಿದರೆ ತಾಳಮದ್ದಳೆ ಯಶಸ್ವಿಯಾಗಬಹುದು ಎಂಬ ಜ್ಞಾನ ಸಂಘಟಕರಿಗೆ ಗೊತ್ತಿರಬೇಕಾಗುತ್ತದೆ. ಒಟ್ಟು ಪ್ರಸಂಗ ನಿರ್ಧರಿಸಿ ಕಲಾವಿದರನ್ನು ಆಯ್ಕೆ ಮಾಡುವುದಲ್ಲ. ಉದಾಹರಣೆಗೆ ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮ ಪಾತ್ರಧಾರಿಯನ್ನು ಆಯ್ಕೆ ಮಾಡಿದ ಮೇಲೆ, ಭೀಷ್ಮನಿಗೆ ಪ್ರತಿಯಾಗಿ ಇನ್ನೊಬ್ಬರನ್ನು ಅಂಬೆ, ಸಾಳ್ವ, ಪರಶುರಾಮ, ಏಕಲವ್ಯ, ವೃದ್ಧ ಬ್ರಾಹ್ಮಣ ಪಾತ್ರಧಾರಿಗಳಾಗಿ ಆಯ್ಕೆ ಮಾಡುವಾಗ ಹಲವಾರು ಬಾರಿ ಯೋಚಿಸಬೇಕಾಗುತ್ತದೆ. ಈ ತಾಳಮದ್ದಳೆ ಯಶಸ್ವಿಯಾಗಬೇಕಾದರೆ ಭೀಷ್ಮ ಪಾತ್ರಧಾರಿಯ ಮನೋಧರ್ಮಕ್ಕೆ ಅನುಗುಣವಾಗಿ ಅರ್ಥ ಹೇಳುವ ಅಂಬೆ ಪಾತ್ರಧಾರಿ ಯಾರು ಎಂಬುದನ್ನು ನಿರ್ಧರಿಸುವುದು ಮುಖ್ಯವಾಗುತ್ತದೆ. ತಾಳಮದ್ದಳೆ ಸುಸೂತ್ರವಾಗಿ ರಂಜನೆಯನ್ನು ಕೊಡಬೇಕಾದರೆ ಭೀಷ್ಮ ಪಾತ್ರಧಾರಿಯ ಎದುರು ಅಂಬೆ ಯಾರು? ವೃದ್ಧ ಬ್ರಾಹ್ಮಣ ಯಾರು? ಸಾಳ್ವ ಯಾರು? ಪರಶುರಾಮ ಯಾರು? ಏಕಲವ್ಯ ಯಾರು ಎಂಬುದೂ ಮುಖ್ಯವಾಗುತ್ತದೆ. ಆದುದರಿಂದ ಕಲಾವಿದರ ಆಯ್ಕೆಯೂ ತಾಳಮದ್ದಳೆ ಸಂಘಟಕರ ದೊಡ್ಡ ಜವಾಬ್ದಾರಿ” ಎಂದು ರಾಮ ಜೋಯಿಸರು ಹೇಳುತ್ತಾರೆ.
ಈ ಎಲ್ಲಾ ವಿಚಾರಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದುದರಿಂದಲೇ ತಾಳಮದ್ದಳೆ ಕ್ಷೇತ್ರದಲ್ಲಿ ಸಂಘಟಕರಾಗಿಯೂ ಅರ್ಥಧಾರಿಯಾಗಿಯೂ ಶ್ರೀ ರಾಮ ಜೋಯಿಸರ ಹೆಸರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಮುಖ್ಯ ಪಾತ್ರ ಮಾತ್ರವಲ್ಲದೆ ಅದರ ಎದುರು ಪಾತ್ರಗಳ ಆಯ್ಕೆ ಕೂಡ ಒಂದು ತಾಳಮದ್ದಳೆಯ ಯಶಸ್ಸಿನಲ್ಲಿ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ. ಎಷ್ಟೋ ತಾಳಮದ್ದಲೆಗಳನ್ನು ಸಂಘಟಿಸಿದ ಕೀರ್ತಿ ರಾಮಾ ಜೋಯಿಸರಿಗೆ ಸಲ್ಲುತ್ತದೆ. ಯಕ್ಷಗಾನದ ದಂತಕತೆ ಶೇಣಿ ಗೋಪಾಲಕೃಷ್ಣ ಭಟ್ಟರು ಭಾಗವಹಿಸಿದ ತಾಳಮದ್ದಲೆಗಳನ್ನೂ ಸಂಘಟಿಸಿದ್ದರು. ಇವರ ಅರ್ಥಧಾರಿಗಳ ಆಯ್ಕೆಗೆ ಮತ್ತು ಸಂಘಟನಾ ಚತುರತೆಗೆ ಶೇಣಿಯವರೂ ಒಮ್ಮೆ ಮೆಚ್ಚಿಕೊಂಡು ತಲೆದೂಗಿದ್ದರು.
ತಾಳಮದ್ದಳೆ ಕ್ಷೇತ್ರದಲ್ಲಿಯೂ ಅಥವಾ ಯಾವುದೇ ಕ್ಷೇತ್ರದಲ್ಲಿಯೇ ಆಗಲಿ ಸಂಘಟನೆ ಎಂಬುದು ಒಂದು ದೊಡ್ಡ ಜವಾಬ್ದಾರಿಯ ಕೆಲಸ. ಸಮಯಕ್ಕೆ ಸರಿಯಾಗಿ ಅನಿವಾರ್ಯ ಕಾರಣದಿಂದಲೋ ಅಥವಾ ಇನ್ನಿತರ ಸಕಾರಾತ್ಮಕ ಮತ್ತು ನಕಾರಾತ್ಮಕ ಕಾರಣಗಳಿಂದಲೋ ಕಾರ್ಯಕ್ರಮಕ್ಕೆ ಕಲಾವಿದರು ಅಲಭ್ಯರಾದಾಗ ಸಂಘಟಕರಾದವರು ಇದರ ಹೊಣೆಯನ್ನು ಹೊತ್ತುಕೊಳ್ಳಬೇಕಾಗುತ್ತದೆ.
“ಆದರೆ ನಾನು ಸಂಘಟಿಸಿದ ಯಾವುದೇ ತಾಳಮದ್ದಳೆಗಳಲ್ಲಿ ಇಂತಹಾ ಯಾವುದೇ ಪ್ರಸಂಗಗಳು ನಡೆದಿಲ್ಲ. ಎಲ್ಲಾ ಕಲಾವಿದರೂ ಸಕಾರಾತ್ಮಕ ಧೋರಣೆಯಿಂದ ಸ್ಪಂದಿಸಿ ಭಾಗವಹಿಸುವುದರ ಮೂಲಕ ಸಹಕರಿಸಿದ್ದಾರೆ. ಇದು ನನ್ನ ಪೂರ್ವಜನ್ಮದ ಪುಣ್ಯವೆಂದೇ ಹೇಳಬೇಕು”. ಎಂದು ಜೋಯಿಸರು ಪ್ರತಿಕ್ರಯಿಸುತ್ತಾರೆ. ಆದರೆ ರಾಮ ಜೋಯಿಸರು ಹೇಳುವಂತೆ ಬರಿಯ ಪೂರ್ವಜನ್ಮದ ಪುಣ್ಯ ಮಾತ್ರದಿಂದಲೇ ಇದು ಸಾಧ್ಯವಾದುದಲ್ಲ. ಪುಣ್ಯದ ಜೊತೆಗೆ ಅವರ ಸಂಘಟನಾ ಕೌಶಲವೂ ಇಲ್ಲಿ ಕೆಲಸ ಮಾಡಿದೆ ಎಂದು ಅನಿಸುತ್ತದೆ. ಕೆಲವೊಮ್ಮೆ ಒಂದರ್ಧ ಘಂಟೆ ತಡವಾಗಿ ಆಗಮಿಸಬೇಕಾದ ಅನಿವಾರ್ಯತೆಯನ್ನು ಕಲಾವಿದರು ಕರೆ ಮಾಡಿ ತಿಳಿಸಿದಾಗ ಮೊದಲಿನ ಅರ್ಥಧಾರಿಯಲ್ಲಿ ಸ್ವಲ್ಪ ಧೀರ್ಘ ಮಾತಾಡುವಂತೆ ಕೇಳಿಕೊಂಡು ಹೊಂದಾಣಿಕೆಯಲ್ಲಿ ತಾಳಮದ್ದಲೆಯನ್ನು ನಡೆಸಿದ್ದೂ ಇದೆ. ಅದರ ಹೊರತಾಗಿ ಯಾವುದೇ ಕಲಾವಿದರು ಗೈರುಹಾಜರಾಗುವ ಪರಿಸ್ಥಿತಿ ಬಂದಿಲ್ಲ ಎಂದು ಅವರು ಹೇಳುತ್ತಾರೆ.
ರಾಮಾ ಜೋಯಿಸರು ಅರ್ಥಧಾರಿಯಾಗಿಯೂ ಈ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವರು. ತಮ್ಮ ವಿಶಿಷ್ಟ ಶೈಲಿಯ ಅರ್ಥಧಾರಿಕೆಯಿಂದ ಪ್ರೇಕ್ಷಕರ ಮನಸ್ಸನ್ನು ಬಹು ಬೇಗನೆ ತಮ್ಮತ್ತ ಸೆಳೆಯಬಲ್ಲವರು. ಮುಖ್ಯ ಪಾತ್ರಗಳಿಂದ ಹಿಡಿದು ಪೋಷಕ ಪಾತ್ರಗಳು, ಹಾಸ್ಯ ಪಾತ್ರಗಳೇ ಮೊದಲಾದ ಎಲ್ಲ ಪಾತ್ರಗಳ ಅರ್ಥವನ್ನು ಹೇಳಬಲ್ಲಂತಹ ಸಾಮರ್ಥ್ಯ ಅವರಿಗೆ ಇದೆ. ಮುಖ್ಯ ಪಾತ್ರಗಳ ಅರ್ಥವನ್ನು ಹೇಳಬಲ್ಲ ಪ್ರಸಿದ್ಧ ಅರ್ಥಧಾರಿಯೊಬ್ಬ ಒಂದೇ ಪದ್ಯವಿರುವ ಪಾತ್ರದ ಅರ್ಥವನ್ನು ಹೇಳುವುದನ್ನು ಕಾಣುವುದು ಇಂದಿನ ಕಾಲದಲ್ಲಿ ದುರ್ಲಭ. ಆದರೆ ಜೋಯಿಸರು ಯಾವುದೇ ಅರ್ಥವನ್ನು ಹೇಳಬಲ್ಲವರು. ಜಾಂಬವತಿ ಕಲ್ಯಾಣದಲ್ಲಿ ಜಾಂಬವ ಪಾತ್ರದ ಅರ್ಥವನ್ನೂ ಹೇಳುತ್ತಾರೆ. ಇನ್ನೊಮ್ಮೆ ಜಾಂಬವತಿ ಪಾತ್ರದ ಅರ್ಥವನ್ನೂ ಹೇಳುತ್ತಾರೆ. ಸಂಘಟಕನ ನೆಲೆಯಲ್ಲಿ ಅವರ ಈ ನಡೆ ಅವಶ್ಯಕ ಎಂದು ಕಂಡರೂ ತಾನು ಸಂಘಟಕನಾಗಿರದ ಎಷ್ಟೋ ತಾಳಮದ್ದಳೆಗಳಲ್ಲಿ ಮುಖ್ಯ ಪಾತ್ರವನ್ನು ಅವರು ಇತರ ಕಲಾವಿದರಿಗೆ ವಹಿಸುವಂತೆ ಸೂಚಿಸಿದ್ದೂ ಉಂಟು.
ಆದರೂ ಮುಖ್ಯ ಪಾತ್ರಗಳ ಅರ್ಥ ಹೇಳುವಷ್ಟು ತಾಳಮದ್ದಳೆ ಕ್ಷೇತ್ರದಲ್ಲಿ ತಾನಿನ್ನೂ ಬೆಳೆದಿಲ್ಲ ಎಂಬ ವಿನೀತ ಭಾವವನ್ನು ತೋರುವ ರಾಮ ಜೋಯಿಸರು “ಅರ್ಥಗಾರಿಕೆಯ ಅನುಭವದಿಂದಲೇ ಮುಖ್ಯ ಪಾತ್ರಗಳ ನಿರ್ವಹಣೆಯ ಮಟ್ಟಕ್ಕೆ ಕಲಾವಿದನೊಬ್ಬ ಏರಬೇಕು” ಎಂದು ಅಭಿಪ್ರಾಯ ಪಡುತ್ತಾರೆ. ಪೋಷಕ ಪಾತ್ರಗಳ ನಿರ್ವಹಣೆಗಾಗಿ ಎಲ್ಲಾ ಮುಖ್ಯ ಪಾತ್ರಧಾರಿಗಳಿಂದ ಪ್ರಶಂಸೆಯನ್ನು ಪಡೆದವರು. ಪ್ರೇಕ್ಷಕರಿಂದಲೂ ಮೆಚ್ಚುಗೆಯನ್ನು ಗಿಟ್ಟಿಸಿದವರು. ಆದರೂ ಅವರು ಪೋಷಕ ಪಾತ್ರಗಳು ಮಾತ್ರವಲ್ಲದೆ ಮುಖ್ಯ ಪಾತ್ರಗಳ ಅರ್ಥವನ್ನೂ ಹಲವಾರು ಕಡೆಗಳಲ್ಲಿ ಹೇಳಿದ್ದಾರೆ. ಹಾಗೂ ಅದರಲ್ಲಿ ಪರಿಣತಿಯನ್ನೂ ಪಡೆದಿದ್ದಾರೆ. ಸ್ವಭಾವತಃ ಹಾಸ್ಯ ಪ್ರವೃತ್ತಿಯವರಾದ ಇವರು ಹಾಸ್ಯ ಪಾತ್ರಗಳನ್ನು ಸುಲಲಿತವಾಗಿ ನಿರ್ವಹಿಸುತ್ತಾರೆ. ಹಾಸ್ಯ ಪಾತ್ರವನ್ನು ಎಷ್ಟು ವಿನೋದವಾಗಿ ಕಟ್ಟುತ್ತಾರೋ ಮುಖ್ಯಪಾತ್ರದಲ್ಲಿ ತದ್ವಿರುದ್ಧವಾಗಿ ಅಷ್ಟೇ ಗಂಭೀರತೆಯಿಂದ ಪಾತ್ರದರಮನೆಯನ್ನು ಕಟ್ಟಿಕೊಡುತ್ತಾರೆ.
ತಾಳಮದ್ದಳೆಯ ಸಂಘಟನೆಯಲ್ಲಿ ಏನಾದರೂ ಸವಾಲುಗಳಿವೆಯೇ ಎಂಬ ಪ್ರಶ್ನೆಗೆ “ತಾಳಮದ್ದಳೆ ಆಕಾಂಕ್ಷಿಗಳು ತಾಳಮದ್ದಳೆ ಆಗಬೇಕು ಎಂದು ನಮ್ಮನ್ನು ಸಂಪರ್ಕಿಸಿದಲ್ಲಿಂದ, ತೊಡಗಿದಲ್ಲಿಂದ ನಂತರ ಆ ತಾಳಮದ್ದಳೆ ಮುಗಿಯುವ ವರೆಗೂ ಸಂಘಟಕನಿಗೆ ಇದು ಒಂದು ಸವಾಲೇ ಆಗಿರುತ್ತದೆ” ಎಂದು ಅವರು ಉತ್ತರಿಸುತ್ತಾರೆ.
“ತಾಳಮದ್ದಲೆಯಲ್ಲಿಯೂ ಹಲವಾರು ಬದಲಾವಣೆಗಳಾಗಿವೆ. ಮೊದಲಿನ ತಾಳಮದ್ದಳೆ ಕೂಟಗಳಿಗೂ ಈಗಿನ ತಾಳಮದ್ದಳೆ ಕೂಟಗಳಿಗೂ ತುಂಬಾ ವ್ಯತ್ಯಾಸವಾಗಿದೆ ಎಂಬುದು ನಿಜ. ಯಕ್ಷಗಾನ ಕಾಲಮಿತಿಯ ಪ್ರದರ್ಶನದಂತೆ ತಾಳಮದ್ದಲೆಯಲ್ಲೂ ಸಮಯ ಹೃಸ್ವವಾಗಿದೆ. ಪರಸ್ಪರ ಪೂರಕ ಸಂಭಾಷಣೆಗಳು ಕಡಿಮೆಯಾಗಿವೆ. ವಾದ, ವಿವಾದ, ವಿರೋಧ, ಕುಟುಕುವುದು, ಎದುರು ಪಾತ್ರಧಾರಿಯಿಂದ ತಾನೇ ಮೇಲು ಎಂಬ ಭಾವ ಪ್ರೇಕ್ಷಕರಲ್ಲಿ ಉಂಟುಮಾಡುವುದಕ್ಕೆ ಪ್ರಯತ್ನಿಸುವುದು ಮೊದಲಾದುವುಗಳು ಈಗ ಹೆಚ್ಚಾಗಿವೆ. ಆದರೆ ಇದು ತಪ್ಪು ಎಂದೇನಲ್ಲ. ಇದರ ಜೊತೆಗೆ ಪೂರಕವಾದ ಚುಟುಕು ಸಂಭಾಷಣೆಗಳು ಇದ್ದರೆ ಚಂದ. ಟೇಬಲ್ ಟೆನಿಸ್ ಆಟದಂತೆ ವೇಗದ ಚುಟುಕು ಸಂಭಾಷಣೆಗಳು ಈಗ ಕಾಣಸಿಗುವುದು ಬಹಳ ಅಪರೂಪ. ತಾಳಮದ್ದಳೆ ಎಂದರೆ ಬರಿಯ ಚರ್ಚೆಯಲ್ಲ. ಪೂರ್ವ ಸಿದ್ಧತೆಯಿಲ್ಲದೆ ರಂಗದಲ್ಲಿ ಪ್ರತ್ಯಕ್ಷವಾಗುವ ಉತ್ತರ ಪ್ರತ್ಯುತ್ತರಗಳ ಚುಟುಕು ಸಂಭಾಷಣೆಗಳು ಈಗ ಈ ಕ್ಷೇತ್ರದಿಂದ ನಿಧಾನವಾಗಿ ಮಾಯವಾಗುತ್ತಾ ಇದೆ” ಎಂದು ಜೋಯಿಸರು ಬೇಸರ ವ್ಯಕ್ತಪಡಿಸುತ್ತಾರೆ.
ಹೆಚ್ಚಿನ ಪ್ರೇಕ್ಷಕರು ಸ್ಟಾರ್ ವ್ಯಾಲ್ಯೂ ಇರವ ಕಲಾವಿದರನ್ನೇ ಕೂಟಕ್ಕೆ ಅಪೇಕ್ಷೆಪಡುತ್ತಿರುವುದರಿಂದ ಕೆಲವು ಪ್ರತಿಭಾವಂತ ಅರ್ಥಧಾರಿಗಳು ಮುನ್ನೆಲೆಗೆ ಬಾರದೆ ಹಿನ್ನೆಲೆಯಲ್ಲಿಯೇ ಉಳಿದು ಕೊಂಡಿದ್ದಾರೆ ಎಂಬುದು ನೋವಿನ ವಿಚಾರ ಎನ್ನುವುದು ಅವರ ಅಭಿಪ್ರಾಯ. ಪ್ರಸ್ತುತ ತನ್ನ ಒಡನಾಡಿಗಳಲ್ಲಿ ಎಲ್ಲ ಪಾತ್ರಗಳಲ್ಲೂ ಸಮರ್ಥವಾಗಿ ಅರ್ಥ ಹೇಳುವವರಾದ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ವಾಸುದೇವ ರಂಗಾ ಭಟ್ ಅವರನ್ನು ಹೆಚ್ಚಾಗಿ ಮೆಚ್ಚಿಕೊಳ್ಳುವ ರಾಮ ಜೋಯಿಸರು ಇತರ ಪಾತ್ರಧಾರಿಗಳನ್ನು ಅತ್ಯಂತ ಸಮರ್ಥವಾಗಿ ಮಾತನಾಡಿಸುವ ಅರ್ಥಧಾರಿಯೆಂದು ಸರ್ಪಂಗಳ ಈಶ್ವರ ಭಟ್ಟರನ್ನು ಗುರುತಿಸುತ್ತಾರೆ.
ಆದರೆ ಅವರು ಹಿರಿಯರನ್ನು ಗುರುತಿಸುವುದನ್ನು ಮರೆಯುದಿಲ್ಲ. ಹಿರಿಯ ಕಲಾವಿದರಾದ ಶೇಣಿ, ಸಾಮಗ, ಪೆರ್ಲ, ತೆಕ್ಕಟ್ಟೆ, ಜೋಶಿ, ಮೂಡಂಬೈಲು, ಉಡುವೆಕೋಡಿ, ಕುಂಬಳೆ ಮೊದಲಾದವರನ್ನು ಇಷ್ಟಪಡುತ್ತಾರೆ.ರಾಮ ಜೋಯಿಸರು ಹೆಚ್ಚಿನೆಲ್ಲಾ ಕಲಾವಿದರೊಂದಿಗೆ ಅರ್ಥ ಹೇಳಿದ್ದಾರೆ. ಅದರಲ್ಲೂ ಶೇಣಿ, ಪೆರ್ಲ, ತೆಕ್ಕಟ್ಟೆ, ಕುಂಬಳೆ, ಜೋಶಿ, ಮೂಡಂಬೈಲು, ಉಡುವೆಕೋಡಿ, ಮೂಡಂಬೈಲು, ಬರೆ ಕೇಶವ ಭಟ್, ಶಂಭು ಶರ್ಮ, ಜಬ್ಬಾರ್ ಸಮೊ, ಅಶೋಕ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್, ಹರೀಶ್ ಬಳಂತಿಮೊಗರು ಮೊದಲಾದವರೊಂದಿಗೆ ಕೂಟದ ವೇದಿಕೆ ಹಂಚಿಕೊಂಡ ಜೋಯಿಸರು ರಾಮದಾಸ ಸಾಮಗರ ಜೊತೆಗೆ ಹಲವಾರು ಕೂಟಗಳಲ್ಲಿ ಅರ್ಥ ಹೇಳಿದವರು. ರಾಮ ಜೋಯಿಸರ ಅರ್ಥಗಾರಿಕೆಯನ್ನು ರಾಮದಾಸ ಸಾಮಗರು ಮೆಚ್ಚಿ ಪ್ರಶಂಸಿಸಿದ್ದರು.
“ಹಿಂದಿನ ಹಾಸ್ಯಗಾರರಲ್ಲಿ ಜೋಶಿ, ವೇಣೂರು, ನಯನಕುಮಾರ್ ಅವರನ್ನು ಅತಿಯಾಗಿ ಇಷ್ಟಪಡುತ್ತೇನೆ. ಈಗ ಆಟ ಕೂಟಗಳೆರಡರಲ್ಲೂ ಪ್ರಸ್ತುತ ರಂಗದಲ್ಲಿ ನಾನು ಮೆಚ್ಚುವ ಇಬ್ಬರು ಹಾಸ್ಯಗಾರರು ಬಂಟ್ವಾಳ ಜಯರಾಮ ಆಚಾರ್ಯ ಮತ್ತು ರವಿಶಂಕರ ವಳಕ್ಕುಂಜ. ಬಂಟ್ವಾಳ ಜಯರಾಮ ಆಚಾರ್ಯರು ರಂಗದಲ್ಲಿ ಬಂದು ನಿಲ್ಲುವ ಶೈಲಿ, ಹಾಸ್ಯವನ್ನು ಉತ್ಪಾದಿಸುವ ಅವರ ಮುಖ, ಅವರ ಪ್ರತ್ಯುತ್ಪನ್ನಮತಿ ಸಾಮರ್ಥ್ಯಕ್ಕಾಗಿ ಅವರನ್ನು ಮೆಚ್ಚುತ್ತೇನೆ. ಪ್ರದರ್ಶನ ಕೆಡದಂತೆ ಕಾಪಾಡುವುದರಲ್ಲಿ ಹಾಸ್ಯಗಾರನಿಗೆ ವಿಶೇಷ ಜವಾಬ್ದಾರಿಯಿದೆ, ಯಕ್ಷಗಾನದ ಎಲ್ಲಾ ವಿಷಯಗಳೂ ತಿಳಿದಿರಬೇಕು. ಯಾರಾದರೂ ಮುಖ್ಯ ವೇಷಧಾರಿಯ ಅನುಪಸ್ಥಿತಿಯಲ್ಲಿ ಪ್ರದರ್ಶನವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಅಥವಾ ಕೆಡದಂತೆ ನಿರ್ದೇಶಿಸುವ ಸಾಮರ್ಥ್ಯ ಇರುವವರಲ್ಲಿ ರವಿಶಂಕರ್ ವಳಕ್ಕುಂಜ ಒಬ್ಬರು. ಕೇವಲ ಹಾಸ್ಯ ಮಾತ್ರವಲ್ಲದೆ ಪುರಾಣಜ್ಞಾನ, ಪ್ರಸಂಗ ನಡೆ ಮುಂತಾದ ಎಲ್ಲಾ ವಿಷಯಗಳನ್ನು ಕರತಲಾಮಲಕ ಮಾಡಿಕೊಂಡ ರವಿಶಂಕರ ವಳಕ್ಕುಂಜರನ್ನು ಮೆಚ್ಚುತ್ತೇನೆ”. ಇದು ಜೋಯಿಸರ ಮಾತುಗಳು.
ತಮ್ಮನ್ನು ತಾವು ಪೋಷಕ ಪಾತ್ರಧಾರಿ ಎಂದು ಹೇಳಿಕೊಂಡರೂ ರಾಮ ಜೋಯಿಸರು ಹೆಚ್ಚಿನ ಮುಖ್ಯ ಪಾತ್ರಗಳಲ್ಲಿಯೂ ಅರ್ಥ ಹೇಳಿದ್ದಾರೆ. ಹಲವಾರು ತಾಳಮದ್ದಳೆಗಳಲ್ಲಿ ಮುಖ್ಯಪಾತ್ರಗಳನ್ನು ನಿರ್ವಹಿಸಿ ಕೂಟ ಸುಸೂತ್ರವಾಗಿ ನಡೆಯುವಂತೆ ಮಾಡಿದ್ದಾರೆ. ಕರ್ಣ ಪರ್ವದ ಕರ್ಣ, ಕೃಷ್ಣಾರ್ಜುನದ ಅರ್ಜುನ, ದಾರುಕ, ಸುಭದ್ರೆ, ಬಲರಾಮ, ಈಶ್ವರ, ವಿದುರ, ಭೀಷ್ಮ, ಜಾಂಬವತಿ ಕಲ್ಯಾಣದ ಜಾಂಬವ ಹಾಗೂ ಹೆಚ್ಚಿನ ಎಲ್ಲಾ ಪೋಷಕ ಹಾಗೂ ಹಾಸ್ಯ ಪಾತ್ರಗಳ ಅರ್ಥವನ್ನು ಹೇಳಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ರಾಮ ಜೋಯಿಸರನ್ನು ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದ್ದಾರೆ.
ತಾಳಮದ್ದಳೆಯಲ್ಲಿ ಜೋಯಿಸರಿಗೆ ಯಾರೂ ಗುರುಗಳು ಇಲ್ಲದಿದ್ದರೂ ತಾಳಮದ್ದಳೆಯ ದೊಡ್ಡ ಕೂಟಗಳಿಗೆ ತನ್ನನ್ನು ಪರಿಚಯಿಸಿದ್ದು ಭಾಗವತರಾದ ಪದ್ಯಾಣ ಗಣಪತಿ ಭಟ್ಟರೆಂದು ನೆನಪಿಸಿಕೊಳ್ಳುತ್ತಾರೆ. ತನಗೆ ಅಧ್ಯಯನಾಸಕ್ತಿ ಕಡಿಮೆ ಎಂದು ಅವರು ಹೇಳುಕೊಳ್ಳುತ್ತಾರೆ. ಅನುಭವದಿಂದಲೇ ಕಲಿತ ಅರ್ಥಧಾರಿ ಅವರು. ಗ್ರಂಥಗಳನ್ನು ಓದುವುದು ಕಡಿಮೆ. ಆದರೆ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯನ್ನು ನೋಡಿ, ಕೇಳಿ ಅರ್ಥಗಾರಿಕೆಯ ತಾಂತ್ರಿಕ ಕೌಶಲಗಳನ್ನು ಕಲಿತರು. ಅವರ ಮೇಲೆ ಶೇಣಿಯವರು ಅಷ್ಟೊಂದು ಪ್ರಭಾವ ಬೀರಿದ್ದರು. ಶೇಣಿಯವರ ಎಲ್ಲಾ ಅರ್ಥಗಾರಿಕೆಯ ತುಣುಕುಗಳು ರಾಮ ಜೋಯಿಸರಿಗೆ ಚಿಕ್ಕಂದಿನಲ್ಲಿ ಬಾಯಿಪಾಠ ಬರುತ್ತಿತ್ತಂತೆ.
ರಾಮ ಜೋಯಿಸರ ಅತ್ಯಂತ ಇಷ್ಟದ ಭಾಗವತ ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ ಅಮ್ಮಣ್ಣಾಯ, ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಮತ್ತು ಖ್ಯಾತ ಮದ್ದಳೆಗಾರ ಪದ್ಯಾಣ ಶಂಕರನಾರಾಯಣ ಭಟ್. ಇತರ ಭಾಗವತರಾದ ಜಯರಾಮ ಕುದ್ರೆತ್ತಾಯ, ದಾಸರಬೈಲು ಚನಿಯ ನಾಯ್ಕ,ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ, ರಮೇಶ ಭಟ್ ಪುತ್ತೂರು ಅವರನ್ನು ಮೆಚ್ಚುತ್ತಾರೆ. ಅರ್ಥಧಾರಿಗಳಲ್ಲಿ ಶೇಣಿ, ದೇರಾಜೆಯವರನ್ನು ಇಷ್ಟಪಡುತ್ತಾರೆ.
ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರಿಂದ “ರಾಮ ಜೋಯಿಸರು ಒಬ್ಬ ಕೌಶಲದ ಅರ್ಥಧಾರಿ” ಎಂದು ಪ್ರಶಂಸೆಯನ್ನು ಪಡೆದ ಶ್ರೀ ರಾಮ ಜೋಯಿಸ ಬೆಳ್ಳಾರೆ ಇವರು ಯಕ್ಷಗಾನ ಕ್ಷೇತ್ರ ಕಂಡ ಒಬ್ಬ ಅಪರೂಪದ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ.
ನಮ್ಮ ಹೆಮ್ಮೆಯ ಭಾರತ ದೇಶದಲ್ಲಿರುವ ಎಲ್ಲಾ ಕಲೆಗಳ ಮೇಲೂ ನಮಗೆ ಗೌರವವಿದೆ. ಆ ಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಎಲ್ಲಾ ಕಲಾವಿದರನ್ನೂ ನಾವು ಪ್ರೀತಿಸುತ್ತೇವೆ. ಕಲಾವಿದರೆಲ್ಲಾ ಕಲಾಮಾತೆಯ ಸೇವಕರು. ಕಲೆಯು ನಮ್ಮದು, ಕಲಾವಿದರೂ ನಮ್ಮವರೆಂಬ ಸಂತೋಷ ಎಲ್ಲರಲ್ಲೂ ಇರುತ್ತದೆ.
ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಲಾವಿದರನ್ನು ಹೊಂದಿರುವ ಕಲಾಪ್ರಾಕಾರವೇ ಯಕ್ಷಗಾನ. ನಮ್ಮ ಮಣ್ಣಿನ ಕಲೆ, ಗಂಡುಕಲೆ. ಅದು ಹಿಮ್ಮೇಳ ಕಲಾವಿದರಿರಬಹುದು, ವೇಷಧಾರಿಗಳಿರಬಹುದು. ವೃತ್ತಿಕಲಾವಿದರೂ ಇದ್ದಾರೆ. ಯಕ್ಷಗಾನವನ್ನು ಹವ್ಯಾಸಿಯಾಗಿ ಸ್ವೀಕರಿಸಿದವರೂ ಇದ್ದಾರೆ. ಹವ್ಯಾಸಿಯಾಗಿದ್ದು ಮತ್ತೆ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿದವರನ್ನೂ, ವೃತ್ತಿ ಕಲಾವಿದರಾಗಿದ್ದು ಮತ್ತೆ ಅದನ್ನು ಹವ್ಯಾಸವಾಗಿ ಇರಿಸಿಕೊಂಡವರನ್ನೂ ನಾವು ಕಾಣಬಹುದು.
ಆದರೆ ಒಂದಂತೂ ಸತ್ಯ. ಕಾಸರಗೋಡು, ದಕ್ಷಿಣ ಕನ್ನಡ, ಉತ್ತರ ಕನ್ನಡ ಪ್ರದೇಶಗಳ ಜನರಿಗೆ ಯಕ್ಷಗಾನವನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಆ ಬದುಕು ಅಪೂರ್ಣವೆಂದೇ ಭಾವಿಸುತ್ತಾರೆ. ಕಲಾವಿದನಾಗುವ ಭಾಗ್ಯ ದೊರಕದಿದ್ದರೂ ಪ್ರದರ್ಶನಗಳನ್ನು ನೋಡಿ ಆದರೂ ಸಂತೋಷಪಡುತ್ತಾರೆ. ಕಲಾವಿದನಾಗುವ ಅವಕಾಶ ಎಲ್ಲರಿಗೂ ದೊರಕದು. ಕೆಲವರು ಅವಕಾಶ ಸಿಕ್ಕಿದರೂ ಹೊಳೆದು ಕಾಣಿಸಿಕೊಳ್ಳಲಾರರು. ಸಿಕ್ಕಿದರೂ ದಕ್ಕಲಾರದು ಹೋಯಿತು ಎಂಬಂತೆ.
ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಅವರು ವೃತ್ತಿಕಲಾವಿದರಾಗಿದ್ದು ಪ್ರಸ್ತುತ ಯಕ್ಷಗಾನವನ್ನು ಹವ್ಯಾಸವಾಗಿ ಸ್ವೀಕರಿಸಿದ್ದಾರೆ. ಹಾಗೆಂದು ಈಗಲೂ ಮೇಳಗಳ ರಂಗಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅದು ಅನಿವಾರ್ಯಕ್ಕೆ. ಆಪದ್ಬಾಂಧವನಾಗಿ. ಇವರು ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರು. ವಳಕ್ಕುಂಜ ಕುಮಾರಣ್ಣ ಅವರು ಯಕ್ಷಗಾನ ಕಲಾತಪಸ್ವಿ, ಯಕ್ಷಗಾನ ಗುರುಕುಲದ ರೂವಾರಿ ಕೀರಿಕ್ಕಾಡು ಮಾಸ್ತರ್ ಶ್ರೀ ವಿಷ್ಣು ಭಟ್ಟರ ಮೊಮ್ಮಗ (ಮಗಳ ಮಗ) ಶ್ರೀ ಕುಮಾರ ಸುಬ್ರಹ್ಮಣ್ಯ ಭಟ್ ವಳಕ್ಕುಂಜ ಅವರು 1960 ಮೇ 13ರಂದು ಪುತ್ತೂರು ತಾಲೂಕಿನ ಪೆರ್ಲಂಪಾಡಿಯಲ್ಲಿ ಜನಿಸಿದರು.
1943ರಲ್ಲಿ ಕುಮಾರಣ್ಣ ಅವರ ತಂದೆ ಶ್ರೀ ನಾರಾಯಣ ಭಟ್ಟರು ವಳಕ್ಕುಂಜದಿಂದ ಪೆರ್ಲಂಪಾಡಿಗೆ ಬಂದು ನೆಲೆಸಿದ್ದರು. ತಾಯಿ ಶ್ರೀಮತಿ ಭುವನಮಾತಾ (ಕೀರಿಕ್ಕಾಡು ಮಾಸ್ತರರ ಹಿರಿಯ ಪುತ್ರಿ). ಕುಮಾರಣ್ಣನ ದೊಡ್ಡಪ್ಪ ವಳಕ್ಕುಂಜ ವೆಂಕಟ್ರಮಣ ಭಟ್ ಅರ್ಥಧಾರಿಯೂ, ಮದ್ದಳೆವಾದಕರೂ ಆಗಿದ್ದರು. ಅಲ್ಲದೆ ಚೆಂಡೆ ಮದ್ದಳೆ ತಯಾರಿಕೆಯಲ್ಲೂ ಪಳಗಿದ್ದರು. ಇವರು ಕೀರಿಕ್ಕಾಡು ಮಾಸ್ತರರ ಒಡನಾಡಿಯಾಗಿದ್ದರು. ಹಾಗಾಗಿ ಯಕ್ಷಗಾನವು ರಕ್ತವಾಗಿ ತಂದೆಯ ಕಡೆಯಿಂದಲೂ ತಾಯಿಯ ಕಡೆಯಿಂದಲೂ ಬಂದಿತ್ತು. ಪೆರ್ಲಂಪಾಡಿ ಶಾಲೆಯಲ್ಲಿ ಮೂರನೇ ತರಗತಿ ವರೆಗೆ ಓದಿ ಹೈಸ್ಕೂಲ್ ವಿಧ್ಯಾಭ್ಯಾಸವನ್ನು ಪೆರ್ನಾಜೆ ಸೀತಾರಾಘವ ಪ್ರೌಢ ಶಾಲೆಯಲ್ಲಿ ಪೂರೈಸಿದ್ದರು.
ಅಜ್ಜನ ಮನೆಯಲ್ಲಿದ್ದು ಅವರ ಆಶ್ರಯದಲ್ಲೇ ಶಾಲೆಗೆ ಹೋಗಿದ್ದರು. ಶಾಲಾ ವಿದ್ಯಾರ್ಥಿಯಾಗಿರುವಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯಿತ್ತು. ವೇಷ ಮಾಡಬೇಕೆಂಬ ಆಸೆಯೇ ಬಲವಾಗಿತ್ತು. ಆ ಕಾಲದ ಒಳ್ಳೆಯ ಕಲಾವಿದರಾಗಿದ್ದ ಟಪ್ಪಾಲುಕಟ್ಟೆ ಕೃಷ್ಣ ಭಟ್ ಅವರಿಂದ ನಾಟ್ಯ ಕಲಿತು 7ನೇ ತರಗತಿಯಲ್ಲಿರುವಾಗ ಪೆರ್ನಾಜೆ ಶಾಲಾ ವಾರ್ಷಿಕೋತ್ಸವದ ಪ್ರದರ್ಶನ, ಪಂಚವಟಿ ಪ್ರಸಂಗದಲ್ಲಿ ಕೇಶಾವರೀ ಕಿರೀಟ ಧರಿಸಿ ಖರಾಸುರನಾಗಿ ರಂಗವೇರಿದ್ದರು. ಇವರಿಗೆ ಜತೆಯಾಗಿದ್ದವರು ಸಣ್ಣ ಸೋದರ ಮಾವ ಕೃಷ್ಣ ಮುರಾರಿ ಮತ್ತು ದೊಡ್ಡ ಮಾವನ ಮಗ ವಿಷ್ಣು ಕೀರ್ತಿ. ಇವರೆಲ್ಲಾ ಸಮಾನವಯಸ್ಕರಾಗಿದ್ದರು. ಒಡನಾಡಿಗಳಾಗಿದ್ದು ಯಕ್ಷಗಾನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು.
ಶಾಲೆಯಲ್ಲಿ ಮಕ್ಕಳ ತಂಡವೂ ಸಿದ್ಧವಾಗಿತ್ತು. ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಈ ತಂಡವು ಪ್ರದರ್ಶನಗಳನ್ನೂ ನೀಡಿತ್ತು. ಶೂರಪದ್ಮ, ತಾರಕ, ಮಕರಾಕ್ಷ, ಕಾರ್ತವೀರ್ಯ, ಇಂದ್ರಜಿತು ಮೊದಲಾದ ವೇಷಗಳನ್ನು ಮಾಡುವ ಅವಕಾಶ ಸಿಕ್ಕಿತ್ತು. ಹಲವು ಶಾಲೆಗಳಲ್ಲಿ ಈ ತಂಡದ ತಾಳಮದ್ದಲೆಯೂ ನಡೆದಿತ್ತು. ಅಜ್ಜ ಕೀರಿಕ್ಕಾಡು ಮಾಸ್ತರರು ಹರಿಕತೆ ಮಾಡುವ ಕ್ರಮವನ್ನೂ ಇವರಿಗೆ ಕಲಿಸಿದ್ದರು. ಎಳವೆಯಲ್ಲೇ ಇವರಿಗೆ ತಾಂತ್ರಿಕ ವಿಚಾರಗಳಲ್ಲಿ ತುಂಬಾ ಆಸಕ್ತಿ. ರೇಡಿಯೋ, ಪಂಪ್, ಸೈಕಲ್ ಮೊದಲಾದ ತಾಂತ್ರಿಕ ಉಪಕರಣಗಳ ದುರಸ್ತಿ ಕಾರ್ಯವನ್ನು ಚೆನ್ನಾಗಿ ಮಾಡುತ್ತಿದ್ದರು. ಹಾಗಾಗಿ ಹಿರಿಯರು ಇವರನ್ನು ಐಟಿಐ ತರಬೇತಿಗೆ ಕಳುಹಿಸುವ ಯೋಚನೆ ಮಾಡಿದ್ದರು. ಚೆಂಡೆ ಮದ್ದಳೆ ಕಲಿಯಬೇಕೆಂಬ ಆಸೆಯೂ ಇತ್ತು.
ಅದೇ ಕಾಲಕ್ಕೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬನಾರಿಯಲ್ಲಿ ಹಿಮ್ಮೇಳ ತರಗತಿ ಆರಂಭಿಸಿದ್ದರು. ಮಾಂಬಾಡಿಯವರು ಮೊತ್ತ ಮೊದಲು ಕ್ಲಾಸ್ ಆರಂಭಿಸಿದ್ದು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ. ಐಟಿಐ ಗೆ ಸೇರುವ ಯೋಚನೆಯನ್ನು ಬಿಟ್ಟು ಕುಮಾರ ಸುಬ್ರಹ್ಮಣ್ಯ ಕಲಾ ಬದುಕನ್ನೇ ಆಯ್ಕೆ ಮಾಡಿಕೊಂಡಿದ್ದರು. ಇದು ಇವರ ಜೀವನದ ಮುಖ್ಯ ತಿರುವು. ತಂದೆ ವಳಕ್ಕುಂಜ ನಾರಾಯಣ ಭಟ್ಟರು ಮದ್ದಳೆವಾದಕರೂ, ಅರ್ಥಧಾರಿಯೂ ಆಗಿದ್ದು ಬನಾರಿ ತಂಡದ ಮಂಗಳೂರು ಆಕಾಶವಾಣಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಆದರೆ ಯಕ್ಷಗಾನವನ್ನು ಮುಂದುವರಿಸಲಾಗಲಿಲ್ಲ ಎಂಬ ನೋವನ್ನು ಹೊಂದಿದ್ದರು. ಮಗನನ್ನು ಯಕ್ಷಗಾನಕ್ಕೆ ಕಳುಹಿಸಿವ ಮೂಲಕ ಆ ನೋವನ್ನು ಮರೆತಿದ್ದರು.
ಸೋದರ ಮಾವಂದಿರ ಆಶೀರ್ವಾದ, ಪ್ರೋತ್ಸಾಹವೂ ಸಿಕ್ಕಿತ್ತು. ಅಜ್ಜನ ಮನೆಯಿಂದಲೇ ಶಾಲೆಗೆ ಹೋದದ್ದು. ಯಕ್ಷಗಾನ ಕಲಿಕೆಗೂ ಅಜ್ಜನ ಮನೆಯಿಂದಲೇ ಅನುಕೂಲವಾಗಿತ್ತು. ವಿಶ್ವವಿನೋದ ಬನಾರಿಯವರಂತೂ ಅಳಿಯನ ಜತೆಗೇ ಇದ್ದು ಹಿಮ್ಮೇಳ ಕಲಿಕೆಗೆ ಸಹಕರಿಸಿದ್ದರು. ಮುಂದಿನ ವರ್ಷ ಪೆರ್ಲಂಪಾಡಿಯಲ್ಲಿ ಮಾಂಬಾಡಿಯವರು ತರಬೇತಿ ಆರಂಭಿಸಿದ್ದರು. ಅಲ್ಲಿಯೂ ಕಲಿಕೆ. ಪೆರ್ಲಂಪಾಡಿಯಿಂದ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಜತೆ ಮಾತನಾಡುತ್ತಾ, ನಡೆಯುತ್ತಾ ಗುಡ್ಡಡ್ಕ ಮನೆಗೆ (ಮಾಸ್ತರರು ವಾಸವಿದ್ದ ಮನೆ). ಅಲ್ಲಿ ಬಾಯಾರಿಕೆ ಕುಡಿದು ಮತ್ತೆ ತರಬೇತಿ. ಹೀಗೆ ಸಾಗಿತ್ತು ಗುರುಶಿಷ್ಯರ ಒಡನಾಟ.
ನೆಚ್ಚಿನ ಗುರು ಮಾಂಬಾಡಿಯವರೊಂದಿಗೆ
ಮಾವ ಮತ್ತು ಅಳಿಯ ಇಬ್ಬರೂ ಮಾಂಬಾಡಿಯಯವರ ಮೊದಲ ಶಿಷ್ಯಂದಿರು ಎಂದು ಹೇಳಿದರೂ ತಪ್ಪಾಗಲಾರದು (ವಿಶ್ವವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ). ವೇಷ ಮಾಡುವುದನ್ನು ಬಿಟ್ಟು ಹಿಮ್ಮೇಳದತ್ತ ಗಮನ. ಪ್ರದರ್ಶನಗಳಲ್ಲಿ ಚೆಂಡೆ ಮದ್ದಳೆ ನುಡಿಸಲಾರಂಭಿಸಿ ಬೆಳೆಯುತ್ತಾ ಸಾಗಿದ್ದರು. ಮೇಳದ ತಿರುಗಾಟ ಬೇಕೆಂದಿಲ್ಲ. ನೀನು ಕ್ಲಾಸ್ ಮಾಡು ಎಂದು ಗುರುಗಳಾದ ಮಾಂಬಾಡಿಯವರು ಸಲಹೆ ನೀಡಿದ್ದರಂತೆ. ಕುಮಾರಣ್ಣನ ಮೊದಲ ತಿರುಗಾಟ ಕೂಡ್ಲು ಮೇಳದಲ್ಲಿ. ಕುಬಣೂರು ಶ್ರೀಧರ ರಾಯರ ನೇತೃತ್ವ, ಅಗರಿ ಶ್ರೀನಿವಾಸ ಭಾಗವತರು, ಗುರುಗಳಾದ ಮಾಂಬಾಡಿ, ತಲೆಂಗಳ ಗೋಪಾಲಕೃಷ್ಣ ಭಟ್ಟರು ಜತೆಗಿದ್ದರು.
ಮುಂದಿನ ವರ್ಷ ಕಟೀಲು 2ನೇ ಮೇಳ ಆರಂಭವಾದ ವರ್ಷ. ಪೆರುವಾಯಿ ನಾರಾಯಣ ಭಟ್ ಮತ್ತು ವೆಂಕಟರಾಮ ಭಟ್ ಸುಳ್ಯ ಇವರ ಹೇಳಿಕೆಯಂತೆ ಕಟೀಲು ಮೇಳಕ್ಕೆ. ಆಗ ಪೆರುವಾಯಿ ನಾರಾಯಣ ಭಟ್ಟರು ಮತ್ತು ಇವರು ಮಾತ್ರ ಹಿಮ್ಮೇಳಕ್ಕೆ. ಬಲಿಪರ ಜತೆ ತಿರುಗಾಟ. ಬೆಳಗಿನ ವರೆಗೆ ಇವರಿಬ್ಬರೇ ಬಾರಿಸಬೇಕಾಗಿತ್ತು. ಮುಂದಿನ ವರ್ಷ ಶೇಣಿ ಸುಬ್ರಹ್ಮಣ್ಯ ಭಟ್ಟರೂ ಬಂದಿದ್ದರು. ಯಜಮಾನರ ಅಪ್ಪಣೆ ಮೇರೆಗೆ ಅಪರೂಪಕ್ಕೆ ಒಂದನೇ ಮೇಳದಲ್ಲೂ ಕಲಾಸೇವೆ. ಇರಾ ಭಾಗವತರೊಂದಿಗೆ ಕಸುಬಿಗೂ ಅವಕಾಶವಾಗಿತ್ತು.
ಕರ್ನಾಟಕ ಮೇಳವು ಮೇ ತಿಂಗಳ ಆರಂಭಕ್ಕೆ ವರ್ಷದ ತಿರುಗಾಟ ನಿಲ್ಲಿಸಿದ ಮೇಲೆ ಶ್ರೀ ದಾಮೋದರ ಮಂಡೆಚ್ಚರು ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುವುದಕ್ಕೆ ಬರುತ್ತಿದ್ದರು. ನೀನು ಕೀರಿಕ್ಕಾಡು ಅಜ್ಜನ ಪುಳ್ಳಿ (ಮೊಮ್ಮಗ). ಬಾ ಎಂದು ಕರೆದು ಅವರ ಭಾಗವತಿಕೆಗೆ ಮದ್ದಳೆ ಬಾರಿಸಲು ಅವಕಾಶವಿತ್ತಿದ್ದರು. ಬಲಿಪರು, ಪೆರುವಾಯಿ ನಾರಾಯಣ ಭಟ್, ಅಳಿಕೆ ರಾಮಯ್ಯ ರೈ, ಬಣ್ಣದ ಮಾಲಿಂಗ, ಪಡ್ರೆ ಚಂದು, ಅಜೆಕಾರು ರಾಜೇವ ಶೆಟ್ಟಿ, ಕೊಳ್ಯೂರು ನಾರಾಯಣ ಭಟ್ಟ, ನೆಡ್ಲೆ ಗುರಿಕಾರ ನಾರಾಯಣ ಭಟ್ ಮೊದಲಾದವರ ಒಡನಾಟ ಕಟೀಲು ಮೇಳದಲ್ಲಿ ದೊರಕಿತ್ತು. ಮನೆ ಸಮಸ್ಯೆಯಿಂದಾಗಿ 1984ರಲ್ಲಿ ಮೇಳದ ತಿರುಗಾಟವನ್ನು ನಿಲ್ಲಿಸಬೇಕಾಗಿ ಬಂದಿತ್ತು.
ಪತ್ನಿ, ಮಗನೊಂದಿಗೆ ಕುಮಾರ ಸುಬ್ರಹ್ಮಣ್ಯ
ಮೇಳದ ತಿರುಗಾಟ ನಿಲ್ಲಿಸಿ ಮನೆವಾರ್ತೆಯನ್ನು ನೋಡಿಕೊಳ್ಳುತ್ತಿದ್ದಾಗ ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರಿಗೆ ಗುರುಗಳಾದ ಮಾಂಬಾಡಿಯವರ ಸಲಹೆಯು ನೆನಪಾಗಿತ್ತು. ಮೇಳದ ತಿರುಗಾಟವೇ ಆಗಬೇಕೆಂದಿಲ್ಲ. ಕಲಾಸಕ್ತರಿಗೆ ತರಬೇತಿ ನೀಡು. ಕಲಾವಿದರನ್ನು ಸಿದ್ಧಗೊಳಿಸುವುದೂ ಕಲಾಮಾತೆಯ ಸೇವೆ ಎಂಬ ಮಾತನ್ನು ಮಾಂಬಾಡಿಯವರು ಆಗಾಗ ಹೇಳುತ್ತಿದ್ದರಂತೆ. ಕಾಯರತ್ತೋಡಿ ಭುವನೇಶ್ವರೀ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಕೋಡ್ಲ ಗಣಪತಿ ಭಟ್ಟರ ನೇತೃತ್ವದಲ್ಲಿ ತರಬೇತಿ ನಡೆಯುತ್ತಿತ್ತು. ಮೊದಲು ಅಲ್ಲಿ ಮಾಂಬಾಡಿಯವರು ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು ಹಿಮ್ಮೇಳ ತರಗತಿಗಳನ್ನು ನಡೆಸುತ್ತಿದ್ದರು. ಮಾಂಬಾಡಿಯವರ ಸಲಹೆಯಂತೆ ವಳಕ್ಕುಂಜ ಕುಮಾರಣ್ಣ ಅಲ್ಲಿ ಕಲಿಕಾಸಕ್ತರಿಗೆ ಹಿಮ್ಮೇಳ ತರಬೇತಿಯನ್ನು ಮೊತ್ತಮೊದಲು ಆರಂಭಿಸಿದ್ದರು.
ಜಾಹೀರಾತು
ಬಳಿಕ ಸುಳ್ಯ ಮತ್ತು ಪುತ್ತೂರಿನ ಹಲವೆಡೆ ತರಗತಿಗಳನ್ನು ಆರಂಭಿಸಿದ್ದರು. ಈ ಸಂದರ್ಭಗಳಲ್ಲಿ ಯಕ್ಷಗಾನ ಪ್ರದರ್ಶನಗಳಲ್ಲೂ ಭಾಗವಹಿಸುತ್ತಿದ್ದರು. ಈ ಸಮಯದಲ್ಲಿ ತೆಂಕಬೈಲು ಶಾಸ್ತ್ರಿಗಳ ಮತ್ತು ದಾಸರಬೈಲು ಚನಿಯ ನಾಯ್ಕರ ಭಾಗವತಿಕೆಗೆ ಚೆಂಡೆ ಮದ್ದಳೆ ಬಾರಿಸುವ ಅವಕಾಶಗಳು ಸಿಕ್ಕಿತ್ತು. 1985ರಲ್ಲಿ ಪೆರ್ಲಂಪಾಡಿಯ ಸ್ಥಳವನ್ನು ವಿಕ್ರಯಿಸಿ ಮಡಿಕೇರಿಯ ಮದೆನಾಡು ಎಂಬಲ್ಲಿ ವಾಸ್ತವ್ಯ. ಮಡಿಕೇರಿ, ಕಲ್ಲುಗುಂಡಿ ಮೊದಲಾದೆಡೆ ತರಬೇತಿಯನ್ನು ನೀಡಿದರು. ಕಲ್ಲುಗುಂಡಿಯಲ್ಲಿ ಪ್ರತಿವಾರವೂ ತಾಳಮದ್ದಳೆ ನಡೆಯುತ್ತಿತ್ತು. ಸುಬ್ರಾಯ ಸಂಪಾಜೆ, ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೋ, ಪುತ್ತೂರು ರಮೇಶ ಭಟ್, ಗೋಪಾಲಕೃಷ್ಣ ಮಡಿಕೇರಿ, ಹಮೀದ್ ಕೊಯನಾಡು ಮೊದಲಾದವರ ಒಡನಾಟ, ಗೆಳೆತನವೂ ಒದಗಿತ್ತು.
ತಾಳಮದ್ದಳೆ ಮುಗಿದ ಮೇಲೆ ವಿಮರ್ಶೆಯೂ ನಡೆಯುತ್ತಿತ್ತು. ಶ್ರುತಿಬದ್ಧವಾಗಿ ಮಾತನಾಡುವ ಕಲಿಕೆಗೆ ಕುಮಾರಣ್ಣ ಅವರು ಕಲಾವಿದರಿಗೆ ಸಹಕಾರಿಯಾಗಿದ್ದರು. ಶ್ರೀಯುತರು ಸಾಹಸೀ ಮನೋವೃತ್ತಿ ಉಳ್ಳವರು. ಮದೆನಾಡಿನಲ್ಲಿ ಅತಿವೃಷ್ಟಿಯಾಗಿ ಪ್ರವಾಹಕ್ಕೆ ಸಿಲುಕಿದ ಮಗುವನ್ನು ನೀರಿಗೆ ಹಾರಿ ರಕ್ಷಿಸಿದ್ದು ಮಾತ್ರವಲ್ಲ ಪ್ರಥಮ ಚಿಕಿತ್ಸೆಯನ್ನೂ ನೀಡಿ ಬದುಕಿಸಿದ್ದರು. ಅಂದು ಬೆಳಿಗ್ಗೆ ಅವರು ಬನಾರಿಗೆ ಹೋಗುವವರಿದ್ದರೂ ಮಳೆಯ ಕಾರಣದಿಂದ ಪತ್ನಿಯ ಬೇಡಿಕೆಯಂತೆ ಮನೆಯಲ್ಲಿಯೇ ಉಳಿದಿದ್ದರು. ಊಟ ಮಾಡುತ್ತಿದ್ದಾಗ ಎಲ್ಲರೂ ಬೊಬ್ಬಿಡುವುದನ್ನು ಕೇಳಿದ್ದರು. ಪತ್ನಿಯಿಂದ ವಿಚಾರ ತಿಳಿದ ಕುಮಾರಣ್ಣ ನೀರಿಗೆ ಧುಮುಕಿ ಬಾಲೆಯನ್ನು ರಕ್ಷಿಸಿದ್ದರು. ‘ಗಂಡಸು ಸಾಧನೆಯನ್ನು ಮಾಡುವಲ್ಲಿ ಹೆಣ್ಣು ಪ್ರೇರಕ ಶಕ್ತಿಯಾಗಿ ಇರುತ್ತಾಳೆ ಎಂಬಂತೆ ಕುಮಾರಣ್ಣನ ಈ ಸಾಹಸಕ್ಕೆ ಅವರ ಪತ್ನಿಯೂ ಕಾರಣರಾಗಿದ್ದರು.
ಈ ವಿಚಾರವಾಗಿ ತುಂಬಾ ಕಡೆ ಸನ್ಮಾನವೂ ಆಗಿತ್ತು. ಕೊಡಗು ಆಡಳಿತವು ‘ಶೌರ್ಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು. ಈ ಸಾಹಸದ ಬಗ್ಗೆ ಖ್ಯಾತ ತಾಳಮದ್ದಳೆ ಅರ್ಥಧಾರಿ ಜಬ್ಬಾರ್ ಸಮೋ ಅವರು ಪತ್ರಿಕೆಯಲ್ಲಿ ಲೇಖನವೊಂದನ್ನು ಬರೆದಿದ್ದರು. ಕಲ್ಲುಗುಂಡಿ ಕೊಯನಾಡು ಎಂಬಲ್ಲಿ ತರಬೇತಿ ನೀಡುವ ಸಂದರ್ಭ, ವ್ಯಕ್ತಿಯೊಬ್ಬರು ತರಬೇತಿ ಆರಂಭದಿಂದ ತೊಡಗಿ ಕೊನೆಯ ತನಕವೂ ನೋಡಿ ಹೋಗುತ್ತಿದ್ದರು. ಯಾಕೆಂದು ಕುಮಾರಣ್ಣನಿಗೆ ಗೊತ್ತಿರಲಿಲ್ಲ. ಆದರೆ ಅವರಲ್ಲಿದ್ದ ಯಕ್ಷಗಾನಾಸಕ್ತಿಯನ್ನು ಗಮನಿಸಿದ್ದರು. ನಾಲ್ಕು ದಿನ ಕಳೆದು ಕರೆದು ಮಾತನಾಡಿಸಿದ್ದರು. ಆ ವ್ಯಕ್ತಿ ಬೇರಾರೂ ಅಲ್ಲ. ಅವರೇ ಶ್ರೀ ಜಬ್ಬಾರ್ ಸಮೊ.
ಮಗಳೊಂದಿಗೆ
ಮಾತನಾಡುತ್ತಾ ಇದ್ದಂತೆ ರಾಮಾಯಣ, ಮಹಾಭಾರತ, ಶಿವಪುರಾಣದ ವಿಚಾರಧಾರೆಗಳನ್ನು ಜಬ್ಬಾರ್ ಅವರು ಅರಗಿಸಿಕೊಂಡಿದ್ದರೆಂಬುದನ್ನು ತಿಳಿದಿದ್ದರು. ಹಿಮ್ಮೇಳ ಕಲಿಯುತ್ತೀರಾ ಎಂದು ಕೇಳಿದಾಗ ‘ನನಗೆ ಅರ್ಥಗಾರಿಕೆಯಲ್ಲಿ ಒಲವು’ ಎಂದಿದ್ದರಂತೆ. ಪ್ರೋತ್ಸಾಹಿಸಿ ಸಣ್ಣ ಮಟ್ಟಿಗೆ ನಾಟ್ಯವನ್ನೂ ಹೇಳಿಕೊಟ್ಟರಂತೆ. ಜಬ್ಬಾರ್ ಸಮೊ ಅವರು ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಕುಮಾರಣ್ಣ ಕಾರಣರಾದರು. ‘ನಾನು ನಿಮಿತ್ತ ಮಾತ್ರ, ಜಬ್ಬಾರ್ ಅವರು ಸ್ವಯಂ ಪ್ರತಿಭಾವಂತರು’ ಇದು ಕುಮಾರಣ್ಣನ ಅಭಿಪ್ರಾಯ.
1995ರಲ್ಲಿ ಮದೆನಾಡಿನಿಂದ ಬಂದು ಪಂಜ ಸಮೀಪ ವಾಸ್ತವ್ಯ. ಸುಳ್ಯ, ಸುಬ್ರಹ್ಮಣ್ಯ, ಬೆಳ್ಳಾರೆ, ಬನಾರಿ ಮೊದಲಾದ ಕಡೆಗಳಲ್ಲಿ ತರಬೇತಿ ನೋಡುವುದರ ಜತೆ ಕೃಷಿ ನಿರ್ವಹಣೆ ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬಂದರು. ಅನಿವಾರ್ಯ ಸಂದರ್ಭಗಳಲ್ಲಿ ಕಟೀಲು ಮೇಳದ ಪ್ರದರ್ಶನಗಳಲ್ಲಿ ಈಗಲೂ ಭಾಗವಹಿಸುತ್ತಾರೆ. ಅವರ ಅನೇಕ ಶಿಷ್ಯರು ಇಂದು ಹಿಮ್ಮೇಳ ಕಲಾವಿದರಾಗಿ ಬೆಳೆಯುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಭಾಗವತ ಶ್ರೀ ಕಡಬ ರಾಮಚಂದ್ರ ರೈಗಳ ಜತೆ ಬಾಚಕೆರೆ ಮೇಳದ ಖಾಯಂ ಕಲಾವಿದರಾಗಿದ್ದಾರೆ. ಕೊಲ್ಲಂಗಾನ ಕ್ಷೇತ್ರದ ಪ್ರದರ್ಶನಗಳಿಗೂ ಖಾಯಂ ಕಲಾವಿದ. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಗಣಧಿರಾಜ ಉಪಾಧ್ಯಾಯರಿಗೆ ಇವರಲ್ಲಿ ವಿಶೇಷ ಪ್ರೀತಿ.
ಕಡತೋಕ ಮಂಜುನಾಥ ಭಾಗವತರನ್ನುಳಿದು ಎಲ್ಲಾ ಹಿರಿಯ ಕಿರಿಯ ಭಾಗವತರುಗಳೊಂದಿಗೆ ಕಲಾ ಸೇವೆ. ಕಡತೋಕರ ಹಾಡಿಗೆ ಚೆಂಡೆ ಮದ್ದಳೆ ನುಡಿಸಲು ಅವಕಾಶ ಸಿಕ್ಕಿರಲಿಲ್ಲ ಎಂಬ ಒಂದು ನೋವಿದೆ ಕುಮಾರಣ್ಣನಿಗೆ. ಪುರಾಣ ಮತ್ತು ತುಳು ಪ್ರಸಂಗಗಳ ಹಾಡಿಗೆ ನುಡಿಸಾಣಿಕೆಯ ವೈವಿಧ್ಯವನ್ನು ಕಂಡುಕೊಂಡು ಮೆರೆದವರು ಕುಮಾರಣ್ಣ. ಕಟೀಲು ಮೇಳದ ತಿರುಗಾಟವನ್ನು ಬಿಟ್ಟ ಮೇಲೆ (1984ರಲ್ಲಿ) ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಆದಿ ಸುಬ್ರಹ್ಮಣ್ಯ ಮೇಳದಲ್ಲೂ ವ್ಯವಸಾಯ ಮಾಡಿದ್ದರು. ದೆಹಲಿಯ ಮಕ್ಕಳ ತಂಡದ ಸದಸ್ಯರು ಹಿಂದಿ ಭಾಷೆಯಲ್ಲಿ ‘ಚಿತ್ರ ಪಟಲ ರಾಮಾಯಣ’ ಎಂಬ ಪ್ರದರ್ಶನಗಳನ್ನು ಅನೇಕ ಕಡೆ ಸಂಯೋಜಿಸಿದ್ದರು.(ದೆಹಲಿ, ಮುಂಬೈ) ಇದು ತೆಂಕು ಬಡಗಿನ ಕೂಡಾಟವಾಗಿತ್ತು. ಈ ತಂಡದ ಸದಸ್ಯರಾಗಿಯೂ ಪಾಲುಗೊಂಡಿದ್ದರು.
ನೆಹರೂ ಯುವ ಕೇಂದ್ರ ಮಂಗಳೂರು ತಂಡದ ಮದ್ದಳೆಗಾರರಾಗಿ ಮಿಜೋರಾಂ, ಗೌಹಾಟಿ, ಬೆಂಗಳೂರು, ಕೇರಳದ ವಿವಿದೆಡೆಗಳಲ್ಲಿ ನಡೆದ ಪ್ರದರ್ಶನಗಳಲ್ಲೂ ಸಕ್ರಿಯರಾಗಿದ್ದರು. 1991 ಜೂ 2ರಂದು ಸುಲೋಚನಾ ಅವರ ಜತೆ ವಿವಾಹ.(ಅಡೂರು ಮಣಿಯೂರು ಶ್ರೀ ಗಣಪತಿ ಭಟ್ ಮತ್ತು ದೇವಕೀ ದಂಪತಿಗಳ ಪುತ್ರಿ) ಕಲಾ ಬದುಕಿಗೆ ಸಹೋದರರಾದ ಶ್ರೀ ಗೋಪಾಲಕೃಷ್ಣ, ಶ್ರೀ ಶ್ರೀಪತಿ, ಶ್ರೀ ವಿಘ್ನೇಶ್, ಸಹೋದರಿಯರಾದ ಸುಮಂಗಲಾ ಮತ್ತು ಯಶೋದಾ ಇವರ ಸಹಕಾರವೂ ಸಿಕ್ಕಿತ್ತು. ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರಿಗೆ ಅಜ್ಜ ಕೀರಿಕ್ಕಾಡು ಮಾಸ್ತರರ ಮತ್ತು ಸೋದರ ಮಾವಂದಿರ ಪ್ರೋತ್ಸಾಹ ಸದಾ ಸಿಕ್ಕಿತ್ತು. ‘ಅಜ್ಜನ ಮನೆಯಲ್ಲಿ ಅನ್ನವುಂಡು ಬೆಳೆದೆ. ಯಕ್ಷಗಾನ ಕಲಾವಿದನಾಗಲು ಅನುಕೂಲಗಳನ್ನು ನೀಡಿ ಹುರಿದುಂಬಿಸಿದ್ದರು’. ಎಂದು ಕುಮಾರಣ್ಣ ಸದಾ ಹೇಳುತ್ತಾರೆ.
ಮಕ್ಕಳ ತಂಡದ ಮೇಲೆ ಇವರಿಗೆ ವಿಶೇಷ ಪ್ರೀತಿ. ಭವಿಷ್ಯದ ಕಲಾವಿದರೆಂಬ ಕಾಳಜಿಯಿಂದ ಮಕ್ಕಳ ತಂಡವನ್ನು ಪ್ರೋತ್ಸಾಹಿಸುತ್ತಾರೆ. ಕಟೀಲು ಮೇಳದ ತಿರುಗಾಟ ನಿಲ್ಲಿಸಿದ ನಂತರ ಕಾಂಚನ ರಾಮ ಭಟ್ಟರಿಂದ ಶಾಸ್ತ್ರೀಯ ಸಂಗೀತದ ಮೃದಂಗವನ್ನೂ ಅಭ್ಯಸಿಸಿದ್ದರು. ಮದೆನಾಡಿನಲ್ಲಿರುವಾಗ ಶಶಿಧರ ಕೋಟೆ ಅವರ ಹಾಡು ಮತ್ತು ಸೀತಾ ಹೆಬ್ಬಾರ್ ಅವರ ಭರತನಾಟ್ಯಕ್ಕೆ ಮೃದಂಗವಾದಕರಾಗಿಯೂ ಒದಗಿದ್ದರು. ಹಿರಿಯ ಮದ್ದಳೆಗಾರ ಶ್ರೀ ಪದ್ಯಾಣ ಪರಮೇಶ್ವರ ಭಟ್ಟರ ಒಡನಾಟವೂ ಸಿಕ್ಕಿತ್ತು. ಪದ್ಯಾಣ ಗಣಪತಿ ಭಟ್ಟರು ಮಳೆಗಾಲದ ಕಾರ್ಯಕ್ರಮಗಳಲ್ಲಿ ಅವಕಾಶವಿತ್ತು ಪ್ರೋತ್ಸಾಹಿಸಿದ್ದರು.
ಉಡುಪುಮೂಲೆ ಮೊದಲಾದೆಡೆ ನಡೆದ ಪ್ರದರ್ಶನಗಳಲ್ಲಿ ಪುತ್ತಿಗೆ ರಘುರಾಮ ಹೊಳ್ಳರೂ ಶ್ರೀ ದಿನೇಶ ಅಮ್ಮಣ್ಣಾಯರೂ ಅವಕಾಶವಿತ್ತು ಸಹಕರಿಸಿದ್ದರು. ಸತ್ಯಮೂರ್ತಿ ದೇರಾಜೆ ಮತ್ತು ಮನೆಯವರ ನೇತೃತ್ವದ ಕಾರ್ಯಕ್ರಮಗಳಲ್ಲೂ ಇವರು ಸಕ್ರಿಯರು. ಹಳೇ ಕ್ರಮದ ವಾದನವೇ ಇವರಿಗೆ ಇಷ್ಟ. “ಈಗ ವೇಗದ ಲಯದಲ್ಲೇ ಪ್ರಸಂಗ ಆರಂಭವಾಗುವುದನ್ನು ನಾವು ಕಾಣಬಹುದು. ಹಾಗಾದಾಗ ಪ್ರಸಂಗವು ಗೆಲ್ಲದೇ ಸೋಲುತ್ತದೆ. ಕಾಲನಿರ್ಣಯದಂತೆ, ಅದಕ್ಕೊಪ್ಪುವ ಲಯದಲ್ಲಿ ಸಾಗಿದರೆ ಮಾತ್ರ ಪ್ರದರ್ಶನವು ರಂಜಿಸುತ್ತದೆ. ಆ ವಿಚಾರದಲ್ಲಿ ಯಾರೂ ರಾಜಿ ಮಾಡಿಕೊಳ್ಳಬಾರದು. ವೇಷಧಾರಿಗೆ ಬೇಕಾದಂತೆ ಇಲ್ಲದಿದ್ದರೆ, ಹೊಸತನಕ್ಕೆ ಹೊಂದಿಕೊಳ್ಳದಿದ್ದರೆ ಕಾರ್ಯಕ್ರಮಕ್ಕೆ ಹೇಳಿಕೆ ಇಲ್ಲ ಅನ್ನೋದು ಅಷ್ಟೇ ಸತ್ಯ” ಕುಮಾರಣ್ಣನವರ ಈ ಮಾತುಗಳಲ್ಲಿ ನೋವಿದೆ, ಅಸಮಾಧಾನವಿದೆ.
ಕುಮಾರ ಸುಬ್ರಹ್ಮಣ್ಯ ಅವರ ಸಹೋದರಿ ಶ್ರೀಮತಿ ಸುಮಂಗಲಾ ಅವರ ಪುತ್ರ ಗಿರೀಶ್ವರನೂ ವೇಷಧಾರಿ. ಸಹೋದರಿ ಶ್ರೀಮತಿ ಯಶೋದಾ ಅವರ ಪುತ್ರ ಚೈತನ್ಯ ಇವರಿಂದಲೇ ಯಕ್ಷಗಾನ ಹಿಮ್ಮೇಳ ಕಲಿತಿದ್ದಾನೆ. ಉಳಿದ ಕಲಾ ಪ್ರಕಾರಗಳ ವಾದನ ಕ್ರಮವನ್ನು ಅಭ್ಯಸಿಸಿ, ಅದನ್ನು ವೃತ್ತಿಯಾಗಿ ಸ್ವೀಕರಿಸಿ ತೊಡಗಿಸಿಕೊಂಡಿದ್ದಾರೆ. ಸುಮಾರು 25ಕ್ಕೂ ಮಿಕ್ಕಿ ಸನ್ಮಾನಗಳನ್ನೂ ಸ್ವೀಕರಿಸಿರುವ ಕುಮಾರಣ್ಣ ವೃತ್ತಿಯಲ್ಲಿಯೂ ಸಾಂಸಾರಿಕವಾಗಿಯೂ ತೃಪ್ತರು. ಕುಮಾರಣ್ಣ, ಸುಲೋಚನಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಭುವನಜ್ಯೋತಿ ಸ್ನಾತಕೋತ್ತರ ಪದವೀಧರೆ. (ಎಂ.ಕಾಮ್) ವಿವಾಹಿತೆ. ಅಳಿಯ ಶ್ರೀ ಕೀರ್ತಿಶಂಕರ್ ಉದ್ಯೋಗಿ. ಪುತ್ರ ಶ್ರೀಶ ಮಂಗಳೂರು ಅಡ್ಯಾರಿನ ಶ್ರೀನಿವಾಸ ಕಾಲೇಜಿನಲ್ಲಿ ಎಂ.ಬಿ.ಎ ಓದುತ್ತಿದ್ದಾರೆ. ಇವರು ಹಿಮ್ಮೇಳ ಕಲಿತು ಆಟಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ.
ನಗುಮೊಗದ ಹಿರಿಯ ಮದ್ದಳೆಗಾರ ಶ್ರೀ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಸರಳ, ಸಜ್ಜನ, ವಿನಯವಂತರು. ಇವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ನಿರಂತರ ಹಿಮ್ಮೇಳ ತರಬೇತಿಯನ್ನು ನೀಡುತ್ತಾ ಅನೇಕ ಕಲಾವಿದರನ್ನು ಕಲಾಮಾತೆಯ ಮಡಿಲಿಗಿಕ್ಕುವ ಭಾಗ್ಯವು ಒದಗಲಿ, ಶ್ರೀ ದೇವರು ಸಕಲ ಭಾಗ್ಯಗಳನ್ನೂ ಕರುಣಿಸಲಿ ಎಂಬ ಹಾರೈಕೆಗಳು.
ಯಕ್ಷ ಶಾಲ್ಮಲಾ (ರಿ) ಆಯೋಜಿಸುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಪ್ರಾಯೋಜಕತ್ವದ ಏಳು ದಿನಗಳ ತಾಳಮದ್ದಳೆ ಕಾರ್ಯಕ್ರಮವಾದ “ಶ್ರೀ ರಾಮಾನುಭವ” ಎಂಬ ಸರಣಿ ತಾಳಮದ್ದಳೆ ಸಪ್ತಾಹ ಮುಂಡಿಗೇಸರ ಎಂಬಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ.
ಈ ತಾಳಮದ್ದಳೆ ಸಪ್ತಾಹದಲ್ಲಿ ಪ್ರದರ್ಶನ ಮತ್ತು ದಾಖಲೀಕರಣ ಎರಡನ್ನೂ ಮಾಡಲಾಗುತ್ತಿದೆ. ದಿನಾಂಕ ಡಿಸೆಂಬರ್ 6ರಿಂದ ಡಿಸೆಂಬರ್ 12ರ ವರೆಗೆ ಈ ಕಾರ್ಯಕ್ರಮವು ಪ್ರತಿದಿನ ಸಂಜೆ 4-30ರಿಂದ ನಡೆಯಲಿದೆ. ಕಾರ್ಯಕ್ರಮವು ಸರಕಾರದ ಕೋವಿಡ್19ರ ನೀತಿ ನಿಯಮಾವಳಿಗಳನ್ನನುಸರಿಸಿ ನಡೆಯುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಏಳೂ ದಿನಗಳ ತಾಳಮದ್ದಳೆ ಪ್ರಸಂಗಗಳಲ್ಲಿ ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈಯವರು ಪ್ರತಿದಿನವೂ ಶ್ರೀರಾಮನ ಪಾತ್ರವನ್ನು ವಹಿಸುತ್ತಿರುವುದು ಈ ಸಪ್ತಾಹದ ವಿಶೇಷತೆಯಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಈ ವರ್ಷದ ಅಂದರೆ 2020-21ನೇ ಸಾಲಿನ ತಿರುಗಾಟವು ದಿನಾಂಕ 09-12-2020, ಬುಧವಾರ ಶ್ರೀ ಕ್ಷೇತ್ರ ಕಟೀಲಿನಲ್ಲಿ ಆರಂಭವಾಗಲಿದೆ.
ಆ ದಿನ ಕಟೀಲಿನ ಆರೂ ಮೇಳಗಳು ಸೇವೆಯಾಟದ ಪ್ರದರ್ಶನ ನೀಡುವ ಮೂಲಕ ಈ ವರ್ಷದ ತಿರುಗಾಟಕ್ಕೆ ಚಾಲನೆ ನೀಡಲಿವೆ. ಈ ವಿಷಯವನ್ನು ದೇವಸ್ಥಾನದ ಆಡಳಿತ ವೃಂದ ಮತ್ತು ಮೇಳಗಳ ಆಡಳಿತ ಸಮಿತಿಯು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.