ಕರ್ನಾಟಕ ಯಕ್ಷಗಾನ ಅಕಾಡೆಮಿಯು ಮಿತ್ರ ಸಂಗಮ (ರಿ), ಬೀಜಾಡಿ, ಗೋಪಾಡಿ ಇದರ ಸಹಯೋಗದೊಂದಿಗೆ ವಿಶಿಷ್ಟವಾದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಬಡಗು ತಿಟ್ಟು ಯಕ್ಷಗಾನ ಪರಂಪರೆಯ ಹಾರಾಡಿ ತಿಟ್ಟು ಮತ್ತು ಮಟಪಾಡಿ ತಿಟ್ಟುಗಳ ದಾಖಲೀಕರಣ ಪ್ರಕ್ರಿಯೆಯನ್ನು ಮೇಲಿನ ಎರಡೂ ಸಂಸ್ಥೆಗಳ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮ ೨೦. ೧೨. ೨೦೨೦ ರ ಆದಿತ್ಯವಾರದಂದು ಮದ್ಯಾಹ್ನ ಘಂಟೆ ೨. ೩೦ ರಿಂದ ಆರಂಭವಾಗಲಿದ್ದು ಉದ್ಘಾಟನಾ ಸಮಾರಂಭ, ಸಭಾ ಕಾರ್ಯಕ್ರಮಗಳ ನಂತರ ವಿಷಯ ಮಂಡನೆ, ಉಭಯ ತಿಟ್ಟುಗಳ ಪ್ರಾತ್ಯಕ್ಷಿಕೆ ನಡೆಯಲಿದ್ದು ಕೊನೆಯಲ್ಲಿ ಬಡಗು ತಿಟ್ಟಿನ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮವು ಕುಂದಾಪುರದ ವಡೇರ ಹೋಬಳಿಯಲ್ಲಿರುವ ಶ್ರೀ ವ್ಯಾಸರಾಜ ಮಠದಲ್ಲಿ ನಡೆಯಲಿದೆ. ಕಲಾಸಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನ ಕಲಾರಂಗ (ರಿ.), ಉಡುಪಿ ಸಂಸ್ಥೆಯ ಆಶ್ರಯದಾತರಾಗಿದ್ದ, ಯತಿಶ್ರೇಷ್ಠ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹೆಸರಿನಲ್ಲಿ ನೀಡುತ್ತಾ ಬಂದ ಪ್ರಶಸ್ತಿಗೆ ಯಕ್ಷಗಾನ ಸಂಶೋಧನೆ, ಪ್ರದರ್ಶನ, ಕಾರ್ಯಗಾರಗಳ ಮೂಲಕ ನಿರಂತರ ಕ್ರಿಯಾಶೀಲವಾಗಿರುವ ಕಾಸರಗೋಡಿನ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಆಯ್ಕೆಯಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 26, ಶನಿವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮತ್ತು ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಂಪನ್ನಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂಪಾಯಿ 50,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ.
“ಆ ಕಿರೀಟಿಯು ನುಡಿದುದಂ ಕೇಳ್ದು ನಗುತ ಕರುಣಾಕರಂ ಪೇಳ್ದ” ಎಂದು ಕರ್ಣ ಪರ್ವದ ಈ ಪದ್ಯವನ್ನು ಪಿಕವ ನಾಚಿಸುವ ತೆರದಿ ಕಲ್ಯಾಣಿ, ಚಾರುಕೇಶಿ ರಾಗದಲ್ಲಿ ತನ್ನ ಕೋಗಿಲೆಯ ಕಂಠದಿಂದ ಹಾಡಿದರೆ ನಾವು ಎಷ್ಟೊಂದು ತಲ್ಲೀನತೆಯಿಂದ ಕೇಳುತ್ತೇವೆ. ತಮ್ಮ ಸುಮಧುರವಾದ ಗಾಯನದಿಂದ ಎಂತಹ ಕಲ್ಲು ಮನಸ್ಸಿನವರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಶಕ್ತಿ ಯಕ್ಷಗಾನಕ್ಕಿದೆ. ಅಂತಹ ಶೃತಿ, ಲಯ ಬದ್ದ ಪರಂಪರೆಯ ಹವ್ಯಾಸಿ ಭಾಗವತರಾಗಿ ಡಾ. ಸುಬ್ರಹ್ಮಣ್ಯ ಪದ್ಯಾಣರವರನ್ನು ಕಾಣಬಹುದು. ಪದ್ಯಾಣ ಕುಟುಂಬದಲ್ಲಿ ಇರುವವರು ಎಲ್ಲರೂ ಸಂಗೀತ, ಗಮಕ, ಭಜನೆ, ಯಕ್ಷಗಾನ ಮುಂತಾದ ಕಲಾ ಪ್ರಕಾರದಲ್ಲಿ ಇರುವುದು ಹೆಮ್ಮೆಯ ವಿಷಯವಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಹವ್ಯಕ ಬ್ರಾಹ್ಮಣ ಮನೆತನದ ಪದ್ಯಾಣ ತಿಮ್ಮಣ್ಣ ಭಟ್ ಮತ್ತು ತಾಯಿ ಈಶ್ವರಿಯವರ ಮೂರು ಜನ ಮಕ್ಕಳಲ್ಲಿ ಹಿರಿಯವರಾಗಿ 02-08-1971ರಲ್ಲಿ ಜನಿಸಿದರು. ಪ್ರಾಥಮಿಕ ವಿಧ್ಯಾಭಾಸವನ್ನು ಕನ್ಯಾನ, ಮಿತ್ತನಡ್ಕ ಶಾಲೆ, ಪ್ರೌಢ ಶಿಕ್ಷಣವನ್ನು ಮಂಗಳೂರು ರಾಮಕೃಷ್ಣ ಆಶ್ರಮದಲ್ಲಿದ್ದು ಅಲ್ಲಿ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಕಾಸ್ಸಿಯಾ ಪ್ರೌಢ ಶಾಲೆಯಲ್ಲಿ ಕಲಿತು, ನಂತರ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರ್ವ ಹಾಗು ಬಿಎಸ್ಸಿ ಪದವಿಯನ್ನು ಪಡೆದರು. ಕೊಪ್ಪ ಆರೂರು ಲಕ್ಷ್ಮೀ ನಾರಾಯಣ ರಾವ್ ಮೆಮೋರಿಯಲ್ ಆಯುರ್ವೇದ ಕಾಲೇಜಿನಲ್ಲಿ ಬಿಎಯಂಯಸ್ ಪದವಿ, ಹೈದರಾಬಾದ್ ನ ಸರಕಾರಿ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಎನ್. ಟಿ. ಆರ್. ಆರೋಗ್ಯ ವಿಶ್ವ ವಿದ್ಯಾನಿಲಯದಿಂದ ಎಂ.ಡಿ. ಪದವಿಯನ್ನೂ, ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದಲ್ಲಿ ಆಯುರ್ವೇದ ಕ್ಷೇತ್ರದಲ್ಲಿ ಪಿಎಚ್ ಡಿ ( ಡಾಕ್ಟರೇಟ್) ಪದವಿಯನ್ನು ಪಡೆದವರಲ್ಲಿ ಮೊದಲಿಗರು ಎಂಬ ಖ್ಯಾತಿಯನ್ನು ಪಡೆದಿದ್ದಾರೆ.
2001ರಿಂದ ಮೂಡಬಿದರೆಯ ಅಳ್ವಾಸ್ ಆಯುರ್ವೇದ ಕಾಲೇಜಿನಲ್ಲಿ ದ್ರವ್ಯಗುಣ ವಿಭಾಗದಲ್ಲಿ ಉಪನ್ಯಾಸ ವೃತ್ತಿಯನ್ನು ಮಾಡುತ್ತಿದ್ದರು. ಪ್ರಸ್ತುತ ಅದೇ ಕಾಲೇಜಿನ ರಿಸರ್ಚ್ ಸೆಂಟರಿನ ನಿರ್ದೇಶಕರಾಗಿ, ದ್ರವ್ಯಗುಣ ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯವಾಗಿ ಔಷಧೀಯ ಸಸ್ಯಗಳ ಆಳವಾದ ಅಧ್ಯಯನ, ನಾಟಿ ವೈದ್ಯಕೀಯ ಕ್ಷೇತ್ರದಲ್ಲಿ ಅನುಭವ ದಾಖಲೀಕರಣ, ಸಂಶೋಧನೆ ಅಲ್ಲದೇ, ಮೂಡಬಿದಿರೆಯ ಅಭಿರಾಮ ಆಯುರ್ವೇದ ಕ್ಲಿನಿಕ್ ನಲ್ಲಿ ವಿವಿಧ ವ್ಯಾಧಿಗಳಿಗೆ ಶುದ್ಧ ಆಯುರ್ವೇದ ಚಿಕಿತ್ಸೆಯನ್ನೂ ನೀಡುತ್ತಾ ಜನಾನುರಾಗಿಯಾಗಿ ಪ್ರಸಿದ್ಧಿಯನ್ನು ಪಡೆದಿದ್ದಾರೆ.
ಶ್ರೀಯುತರು ಎಳವೆಯಲ್ಲೇ ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ತನ್ನ ತಂದೆ, ಚಿಕ್ಕಪ್ಪಂದಿರಿಂದ ಸಂಗೀತ ಕೇಳಿ ಅನುಭವಿಸಿ ವಿವಿಧ ರಾಗಗಳನ್ನು ಸಿದ್ಧಿಸಿ ಯಕ್ಷಗಾನದಲ್ಲಿ ಪ್ರಾಯೋಗಿಕವಾಗಿ ಯಶಸ್ಸನ್ನು ಕಂಡರು. ಇವರು ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನ ಭಾಗವತಿಕೆಯ ಮೊದಲ ಪಾಠವನ್ನು ಆರಂಭಿಸಿ ಮುಂದೆ ಅವರ ಮಗ ಮಾಂಬಾಡಿ ಸುಬ್ರಹ್ಮಣ್ಯ ಭಟ್ ರವರಿಂದ ಯಕ್ಷಗಾನ ಭಾಗವತಿಕೆಯನ್ನು ಕಲಿತರು.
ತೆಂಕುತಿಟ್ಟಿನ ಹೆಜ್ಜೆಯನ್ನು ಸಹ ಕಲಿತು, ತನ್ನ ಮೊದಲ ಯಕ್ಷಗಾನ ವೇಷವನ್ನು ತಾನು ಬಾಲಕನಾಗಿದ್ದಾಗ ಮಿತ್ತನಡ್ಕ ಶಾಲೆಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಕರಾಕ್ಷ ಕಾಳಗದ “ದುರ ದುರಂಧರನೆ ಕೇಳು” ಎಂದು ದೊಡ್ಡಪ್ಪ ರಾವಣೇಶ್ವರನಲ್ಲಿ ಪ್ರತಿಜ್ಞಾ ಬದ್ಧನಾಗಿ ಯುದ್ಧಕ್ಕೆ ಹೋಗುವ ಕಲಿ ಮಕರಾಕ್ಷನ ಪಾತ್ರದಲ್ಲಿ ರಂಗಸ್ಥಳ ಪ್ರವೇಶ ಮಾಡಿ ಪ್ರಥಮ ಪ್ರದರ್ಶನದಲ್ಲೇ ತನ್ನ ಸಾಮರ್ಥ್ಯದ ಅನಾವರಣ ಮಾಡಿದರು. ಮುಂದೆ ಕಾಲೇಜು ಜೀವನ ಹಾಗೂ ನಂತರದಲ್ಲಿ ದೇವೇಂದ್ರ, ಮುರಾಸುರ, ಅರ್ಜುನ ಮುಂತಾದ ಕಿರೀಟ ವೇಷಗಳನ್ನು ಮಾಡಿ ವಿಜೃಂಭಿಸಿದರು.
ಪ್ರಸಿದ್ಧ ಗಮಕಿಗಳಾದ ಚಿಕ್ಕಪ್ಪ ಗಣಪತಿ ಪದ್ಯಾಣ ಹಾಗೂ ಮಧೂರು ಮೋಹನ ಕಲ್ಲೂರಾಯರಿಂದ ಗಮಕ ಅಭ್ಯಸಿಸಿ ಕರ್ನಾಟಕ ಗಮಕ ಕಲಾ ಪರಿಷತ್ ನಡೆಸುವ ಗಮಕ ಪಾರೀಣ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಮಂಗಳೂರು ಆಕಾಶವಾಣಿಯಲ್ಲಿ ಗಮಕ ಕಲಾವಿದರಾಗಿ ಕಾರ್ಯಕ್ರಮ ನೀಡುತ್ತಾ ಸರ್ವಮಾನ್ಯರಾಗಿದ್ದಾರೆ. ಪದ್ಯಾಣ ಶಂಕರನಾರಾಯಣ ಭಟ್, ಪದ್ಯಾಣ ಗಣಪತಿ ಭಟ್, ಬಲಿಪ ನಾರಾಯಣ ಭಾಗವತರು, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಕುರಿಯ ಗಣಪತಿ ಶಾಸ್ತ್ರಿಗಳು ಹಾಗೂ ಪದ್ಯಾಣ ಕುಟುಂಬದವರ ಸಮಗ್ರ ಪ್ರೋತ್ಸಾಹ, ಮಾರ್ಗದರ್ಶನದಿಂದ ಯಕ್ಷಗಾನ ಭಾಗವತರಾಗಿ ರೂಪಗೊಂಡರು.
ಅಲ್ಲದೆ ಶನೀಶ್ವರ ಮಹಾತ್ಮೆಯ ಪ್ರಸಂಗದ “ಏನಿದು ಶನಿರಾಯ ನಿನ್ನನು ಕಾಣೆನು ಮಹನೀಯ” ಎಂದು ಸುರುಟಿ ರಾಗದ ಮಟ್ಟಿನಲ್ಲಿ ಏಕತಾಳದಲ್ಲಿ ಹಾಡಿದರೆ ಕರ್ಣಾನಂದಕರವಾಗಿರುತ್ತದೆ. ಶ್ರೀರಾಮ ನಿರ್ಯಾಣ ಪ್ರಸಂಗದ “ಜನಪ ಕುಲಮಣಿ ರಾಮಚಂದ್ರನು” ಇತ್ಯಾದಿಯಾಗಿ ಒಂದೇ ಪದ್ಯವನ್ನು ಸೌರಾಷ್ಟ್ರ, ನಾಟಿ ಅಥವಾ ಕಲ್ಯಾಣಿ ಆದಿ ವಿವಿಧ ರಾಗಗಳಲ್ಲಿ ಭಾವ, ರಸಗಳಿಗೆ ಚ್ಯುತಿ ಬರದಂತೆ ಹಾಡಿ ತೋರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಹಾಡುಗಾರಿಕೆಯಲ್ಲಿ ಯಾರದೇ ಅನುಕರಣೆಯಿಲ್ಲದೆ ಮಾಂಬಾಡಿ ಮಟ್ಟು, ಪದ್ಯಾಣ ಗಣಪತಿ ಭಟ್ಟರ ಛಾಯೆಯಿದ್ದರೂ ರಾಗ ಸಂಯೋಜನೆ, ಹಾಡಿನಲ್ಲಿ ತನ್ನದೇ ಆದ ಸ್ವಂತಿಕೆಯನ್ನೂ ಬಿಂಬಿಸುತ್ತಾರೆ. ಅದಕ್ಕಾಗಿ ಇವರು ವಿಶೇಷವೆನಿಸಿದ್ದಾರೆ. ಶ್ರೀಯುತರಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಡಾ. ಮೋಹನ್ ಆಳ್ವರ ಪ್ರೋತ್ಸಾಹ, ಹಾಗಯೇ ಮೂಡಬಿದರೆಯಲ್ಲಿ ಯಕ್ಷೋಪಾಸನಮ್ ಸಂಘದ ಕಲಾವಿದರು, ಎಂ. ಶಾಂತಾರಾಮ ಕುಡ್ವರು, ದೇವಾನಂದ ಭಟ್ ಮುಂತಾದವರ ಒಡನಾಟ ಮತ್ತು ಪ್ರಭಾಕರ ಜೋಷಿ, ಸುಣ್ಣಂಬಳ ವಿಶ್ವೇಶ್ವರ ಭಟ್, ವಿಟ್ಲ ಶಂಭು ಶರ್ಮ, ಉಜಿರೆ ಅಶೋಕ ಭಟ್, ವಾಸುದೇವ ರಂಗ ಭಟ್, ಸುಬ್ರಾಯ ಹೊಳ್ಳ, ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್, ಎಂ. ವಾಸುದೇವ ಸಾಮಗರು ಮುಂತಾದವರೊಂದಿಗೆ ಆಟ-ಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು ಅಲ್ಲದೇ ಅವರೆಲ್ಲರೂ ಶ್ರೀಯುತರ ಭಾಗವತಿಕೆಗೆ ಸ್ಪೂರ್ತಿಯಾದರು.
ಯಕ್ಷಗಾನವನ್ನು ಪ್ರವೃತ್ತಿಯಾಗಿ ತೆಗೆದುಕೊಂಡು ವಾರದಲ್ಲಿ ಎರಡು ದಿನ ಕಲೆಗೆ ಮೀಸಲಿಟ್ಟಿದ್ದೇನೆ ಎಂದು ಡಾ. ಪದ್ಯಾಣರು ಸಂತೋಷದಿಂದ ಹೇಳುತ್ತಿದ್ದರು. ಇವರ ಪ್ರತಿಭೆಯನ್ನು ಗುರುತಿಸಿ ಅಲ್ಲಲ್ಲಿ ಸಂಘ ಸಂಸ್ಥೆಗಳು ಸನ್ಮಾನ, ಗೌರವಗಳು ಅರಸಿ ಬಂದಿದೆ. ಹೊಸನಗರದ ರಾಘವೇಶ್ವರ ಶ್ರೀಗಳು ಹಾಗು ಒಡಿಯೂರಿನ ಶ್ರೀ ಗುರು ದೇವಾನಂದ ಸ್ವಾಮಿಗಳಿಂದ, ಮತ್ತು ಅಖಿಲ ಹವ್ಯಕ ಸಭಾ ಮುಂತಾದವರಿಂದ ಆಶೀರ್ವಾದ ಪೂರ್ವಕ ಸನ್ಮಾನ ಗಳು ನಡೆದಿವೆ. ಡಾ. ಸೌಮ್ಯ ಸರಸ್ವತಿ ಅವರನ್ನು ಪಾಣಿಗ್ರಹಣ ಮಾಡಿ ಕುಲದೀಪಕರಾದ ಪ್ರಣವ ಭಟ್ ಹಾಗು ಆತ್ರೇಯ ಭಟ್ ರೊಂದಿಗೆ ಮೂಡಬಿದರೆಯಲ್ಲಿ ಸುಖಿ ಜೀವನ ನಡೆಸುತ್ತಿದ್ದಾರೆ.
ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಲೇಖಕ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಹಿರಿಯ ಅರ್ಥಧಾರಿ, ಪ್ರವಚನಕಾರ, ನಿವೃತ್ತ ಉಪನ್ಯಾಸಕ ಸಾಂತೂರು ಸದಾಶಿವ ರಾವ್ ಹಾಗೂ ಅರ್ಥಧಾರಿ, ಲೇಖಕ, ನಿವೃತ್ತ ಉಪನ್ಯಾಸಕ ಎಂ. ಎನ್. ಹೆಗಡೆ ಯಲ್ಲಾಪುರ ಆಯ್ಕೆಯಾಗಿದ್ದಾರೆ.
ಸಾಂತೂರು ಸದಾಶಿವ ರಾವ್ಎಂ. ಎನ್. ಹೆಗಡೆ ಯಲ್ಲಾಪುರ
ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 25, ಶುಕ್ರವಾರ ಸಂಜೆ 5.00 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ಅನುಗ್ರಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ರೂ 20,000/- ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನು ಒಳಗೊಂಡಿರುತ್ತದೆ.
ಅಮೇರಿಕಾದ ಯಕ್ಷಗಾನ ಕಲಾವೃಂದದ ಸದಸ್ಯರು ಚಕ್ರಮೈದಾನ ಕೃಷ್ಣ ಪೂಜಾರಿ, ಬಾಲಕೃಷ್ಣ ನಾಯಕ್, ಶಂಭಯ್ಯ ಕಂಜರ್ಪಣೆ ಹಾಗೂ ಕಲ್ಲಗುಡ್ಡೆ ಲಕ್ಷ್ಮಣ ಈ ನಾಲ್ವರು ಕಲಾವಿದರಿಗೆ ತಲಾ 25,000/- ರೂಪಾಯಿ ಆರ್ಥಿಕ ನೆರವು ನೀಡಿರುತ್ತಾರೆ.
ಕರೋನದ ಸಂಕಷ್ಟದ ಕಾಲದಲ್ಲಿ ಯಕ್ಷಗಾನ ವೃತ್ತಿ ಕಲಾವಿದರ ಕಷ್ಟವನ್ನರಿತು ದೊಡ್ಡಮೊತ್ತದ ನೆರವು ನೀಡಿದ, ಅಮೇರಿಕಾದಲ್ಲಿದ್ದು ನಾಡಿನ ಕಲೆಯ ಉಳಿವು ಬೆಳವಣಿಗೆಗೆ ಸದಾ ಚಿಂತಿಸುತ್ತಾ, ಕ್ರಿಯಾಶೀಲರಾಗಿರುವ ಕಲಾವೃಂದದ ಮಿತ್ರರನ್ನು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದಿಸಿದರು.