Friday, August 28, 2026
Home Blog Page 360

ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಹೊಂದಿದ ಯಕ್ಷನಿಧಿ ಡೈರಿ ಬಿಡುಗಡೆ

ಎಲ್ಲಾ ವೃತ್ತಿ ಕಲಾವಿದರ ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಹೊಂದಿದ ಯಕ್ಷನಿಧಿ ಡೈರಿ- 2021ನ್ನು ಇಂದು (11-01-2021)ಯಕ್ಷಗಾನ ಕಲಾರಂಗದ ಕಛೇರಿಯಲ್ಲಿ ಖ್ಯಾತ ಕೂಚುಪುಡಿ ನೃತ್ಯ ಹಾಗೂ ಕಿರುತೆರೆ ಕಲಾವಿದೆ ಶ್ರೀಮತಿ ವೈಜಯಂತಿ ಕಾಶಿಯವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ. ಹಾಗೂ ವೈಜಯಂತಿ ಕಾಶಿಯವರ ಪುತ್ರಿ ಪ್ರತೀಕ್ಷಾ ಕಾಶಿ ಮತ್ತು ಈರ್ವರು ಶಿಷ್ಯೆಯರು ಉಪಸ್ಥಿತರಿದ್ದರು. ಸಂಸ್ಥೆಯ ಚಟುವಟಿಕೆಗಳನ್ನು ಅವಲೋಕಿಸಿದ ವೈಜಯಂತಿ ಕಾಶಿಯವರು ಇಂತಹ ಸಂಸ್ಥೆಯನ್ನು ತಾನು ಈ ತನಕ ನೋಡಿದ್ದಿಲ್ಲಾ, ಈ ಸಂಸ್ಥೆ ಉಳಿದವರಿಗೆ ಮಾದರಿ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.

ಮೇಳಗಳ ಇಂದಿನ (11.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (11.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಕುಂದಾಪುರ ಕೋಡಿ ಶ್ರೀ ಜಟ್ಟಿಗೇಶ್ವರ ದೇವಸ್ಥಾನದ ಆವರಣ   – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಅರಂತಕೋಡಿ ಉಳಾಯಿಬೆಟ್ಟು ಗುರುಪುರ
ಕಟೀಲು ಎರಡನೇ ಮೇಳ ಮುಚ್ಚೂರು ದೇವಸ್ಥಾನದ ವಠಾರ
ಕಟೀಲು ಮೂರನೇ ಮೇಳಮಾಲಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು
ಕಟೀಲು ನಾಲ್ಕನೇ ಮೇಳ ದಡ್ಡಿಮನೆ ಮಂಜನಕಟ್ಟೆ ಬಡಗ ಎಡಪದವು
ಕಟೀಲು ಐದನೇ ಮೇಳ ‘ಅಕ್ಷಯ’ ವಿದ್ಯಾನಗರ ಕುಳಾಯಿ – ಕಟೀಲು ಕ್ಷೇತ್ರದಲ್ಲಿ
ಕಟೀಲು ಆರನೇ ಮೇಳ‘ಹರಿಕೃಪಾ’ ಕಡ್ಲಕೆರೆ ಮೂಡುಬಿದ್ರಿ
ಮಂದಾರ್ತಿ ಒಂದನೇ ಮೇಳ ಕುದ್ರುಮನೆ ಹಾಲಾಡಿ 
ಮಂದಾರ್ತಿ ಎರಡನೇ ಮೇಳ ಉಪ್ಪಿನಕೋಟೆಮನೆ ಹಾಲಾಡಿ 
ಮಂದಾರ್ತಿ ಮೂರನೇ ಮೇಳ ಕೆಳಮನೆ ನಾಡ ಗುಡ್ಡೇಯಂಗಡಿ 
ಮಂದಾರ್ತಿ ನಾಲ್ಕನೇ ಮೇಳ ಶ್ರೀದೇವಿ ನಿಲಯ ಮಣಿಬಚ್ಚಲು, ಮಂಡಾಡಿಜೆಡ್ಡುಚಾರ 
ಮಂದಾರ್ತಿ ಐದನೇ ಮೇಳ ಕಟ್ಟೇಮನೆ ಕಕ್ಕುಂಜೆ 
ಶ್ರೀ ಹನುಮಗಿರಿ ಮೇಳ ಮುಡುಂಬು, ಇನ್ನಂಜೆ ಗ್ರಾಮ – ಶ್ರೀ ದೇವಿ ಮಹಾತ್ಮೆ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ನರಕಾಸುರ ವಧೆ 
ಶ್ರೀ ಮಾರಣಕಟ್ಟೆ ಮೇಳ ‘ಎ’ಕಲ್ಸಂಕ, ಹಾರ್ಮಣ್, ಚಿತ್ತೂರು 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕಳಿ, ಹಡ್ಬೈಲುಮನೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕಳಿ, ಹಡ್ಬೈಲುಮನೆ  
ಶ್ರೀ ಪಾವಂಜೆ ಮೇಳ ಪಾಣಾಜೆ – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಶಂಕರನಾರಾಯಣ      – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ಶ್ರೀ ಪಾಡಿ ನಂದಿಕೇಶ್ವರ ದೇವಸ್ಥಾನದಲ್ಲಿ 
ಕಮಲಶಿಲೆ ಮೇಳ ‘ಬಿ’ಅಂಪಾರು 
ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರದಲ್ಲಿ – ಬಪ್ಪನಾಡು ಕ್ಷೇತ್ರ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಮೈನಾಡಿಮನೆ, ಮೂಡುಗಿಳಿಯಾರು
ಶ್ರೀ ಬೋಳಂಬಳ್ಳಿ ಮೇಳ ಅಂಬಾಗಿಲು  – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಶಂಕರನಾರಾಯಣ ವೀರ ಕಲ್ಲುಕುಟ್ಟಿಗ ದೇವಸ್ಥಾನ ವಠಾರ – ಹಳನಾಡು ಕ್ಷೇತ್ರ ಮಹಾತ್ಮೆ  
ಶ್ರೀ ಹಾಲಾಡಿ ಮೇಳಯರುಕೋಣೆ ಶ್ರೀ ಮೂಕಾಂಬಿಕಾ ಕಾಂಪ್ಲೆಕ್ಸ್ ಬಳಿ 
ಶ್ರೀ ಬೆಂಕಿನಾಥೇಶ್ವರ ಮೇಳ  ಯೆಯ್ಯಾಡಿ ದಂಡೆಕೇರಿ ಕೊಪ್ಪಳ – ಸತ್ಯೊದ  ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳಬೇಳೂರು ದೇಲಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ದೇವಿ ಮಾಂಕಾಳಿ ಮಹಾತ್ಮೆ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಪ್ಪೂರು ಅಂಮುಂಜೆಗುಡ್ಡೆ – ಶ್ರೀ ದೇವಿ ಮಹಾತ್ಮೆ
ಶ್ರೀ ಹಿರಿಯಡಕ ಮೇಳಉಪ್ಪಿನಕೋಟೆ  – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಅಮಾಸೆಬೈಲು   
ಶ್ರೀ ಸಿಗಂದೂರು ಮೇಳಹೆಮ್ಮಾಡಿ 
ಶ್ರೀ ನೀಲಾವರ ಮೇಳ ಹೊನ್ನಾಳ 

ಮೇಳಗಳ ಇಂದಿನ (10.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (10.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಗುಲ್ವಾಡಿ ದೊಡ್ಮನೆ ವಠಾರ  – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳಪಡುಪೆರಾರ, ಪಡೀಲು, ವಯಾ ಬಜಪೆ 
ಕಟೀಲು ಎರಡನೇ ಮೇಳ ಕಟೀಲು ಕ್ಷೇತ್ರದಲ್ಲಿ 
ಕಟೀಲು ಮೂರನೇ ಮೇಳಕರ್ಪೆ, ಸಿದ್ದಕಟ್ಟೆ, ಬಂಟ್ವಾಳ 
ಕಟೀಲು ನಾಲ್ಕನೇ ಮೇಳ ಬಾಕ್ಯಾರು ಕೋಡಿ, ಬಡಗ ಎಡಪದವು 
ಕಟೀಲು ಐದನೇ ಮೇಳ ಸೆರ್ಕಳ, ಕೊಳ್ನಾಡು ಬಂಟ್ವಾಳ 
ಕಟೀಲು ಆರನೇ ಮೇಳಹೊಸಬೆಟ್ಟು ಕುಳಾಯಿ 
ಮಂದಾರ್ತಿ ಒಂದನೇ ಮೇಳ ಹಾಡಿಮನೆ ಅಲ್ಬಾಡಿ, ಆರ್ಡಿ 
ಮಂದಾರ್ತಿ ಎರಡನೇ ಮೇಳ ಕೊರ್ಗಿ, ಹೊಸ್ಮಠ 
ಮಂದಾರ್ತಿ ಮೂರನೇ ಮೇಳ ಶ್ರೀ ನಂದಿಕೇಶ್ವರ ದೇವಸ್ಥಾನ, ಮೆಕ್ಕೆಕಟ್ಟು 
ಮಂದಾರ್ತಿ ನಾಲ್ಕನೇ ಮೇಳ ಶಿರಂಗೂರು, ಮಡಾಮಕ್ಕಿ 
ಮಂದಾರ್ತಿ ಐದನೇ ಮೇಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಹೆಗ್ಗುಂಜೆ, ಮಂದಾರ್ತಿ 
ಶ್ರೀ ಹನುಮಗಿರಿ ಮೇಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ – ಮಹಾಬ್ರಾಹ್ಮಣ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಕೋರ್ದಬ್ಬು ಬಾರಗ 
ಶ್ರೀ ಮಾರಣಕಟ್ಟೆ ಮೇಳ ‘ಎ’ಹೆಸಿನಬೇರು, ಇಡೂರು, ಕುಂಜ್ನಾಡಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಹಳ್ಗೇರಿ, ದೊಡ್ಮನೆ, ಉಪ್ರಳ್ಳಿ, ಉಳ್ಳೂರು -೧೧
ಶ್ರೀ ಮಾರಣಕಟ್ಟೆ ಮೇಳ ‘ಸಿ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಪಾವಂಜೆ ಮೇಳ ಅಯ್ಯಪ್ಪ ಸೇವಾ ಸಮಿತಿ ಗುಂಡಮಜಲು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಶಿರಿಯಾರ     – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ಗರೋಡಿ ವಠಾರ, ಉಳ್ಳೂರು -೭೪
ಕಮಲಶಿಲೆ ಮೇಳ ‘ಬಿ’ಅಯ್ಯಪ್ಪ ಸ್ವಾಮಿ ದೇವಸ್ಥಾನ, ಜಾಜಿವನ, ತಟ್ಟಿಗುಳಿ, ಕಮಲಶಿಲೆ 
ಶ್ರೀ ಬಪ್ಪನಾಡು ಮೇಳಪಡು ಕೊಂಬೆಲ್ ಲಚ್ಚಿಲ್ , ಬೊಂಡಂತಿಲ – ಬಂಗಾರ್ ಬಾಲೆ
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ಬೆಳ್ಳಾಲ – ನಾಗ ಸುನೇತ್ರೆ 
ಶ್ರೀ ಸೌಕೂರು ಮೇಳಕಂದಾವರ, ಉಳ್ಳೂರು – ಬೇಲ್ತೂರು ಕ್ಷೇತ್ರ ಮಹಾತ್ಮೆ 
ಶ್ರೀ ಹಾಲಾಡಿ ಮೇಳಚಿಕ್ಕ ಹೈಗುಳಿ ದೈವಸ್ಥಾನ, ಸಳ್ಕೋಡು 
ಶ್ರೀ ಬೆಂಕಿನಾಥೇಶ್ವರ ಮೇಳ  ಬೈಲೂರು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನ – ಸತ್ಯೊದ  ಸ್ವಾಮಿ ಕೊರಗಜ್ಜ  
ಶ್ರೀ ಮಡಾಮಕ್ಕಿ ಮೇಳಜಪ್ತಿ ಗುಡ್ಡಿಮನೆ – ಮಡಾಮಕ್ಕಿಕ್ಷೇತ್ರ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಉಪ್ಪಿನಕೋಟೆ ಗುಡೆಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರ – ಶ್ರೀ ಕೋಟಿ ಚೆನ್ನಯ  
ಶ್ರೀ ಹಿರಿಯಡಕ ಮೇಳಕೋಟೇಶ್ವರ ಕಾಗೇರಿ ನಂದನ ಫುಡ್ಸ್ ವಠಾರ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಕೆಳಕಲ್ಲುಗುಡ್ಡೆ, ವಾಲ್ತೂರು
ಶ್ರೀ ಸಿಗಂದೂರು ಮೇಳವಂಡ್ಸೆ, ಕೆಳಾಪೇಟೆ  
ಶ್ರೀ ನೀಲಾವರ ಮೇಳ ಮೂಡಹಡು, ಪಾಂಡೇಶ್ವರ – ನೀಲಾವರ ಕ್ಷೇತ್ರ ಮಹಾತ್ಮೆ 

ಯಕ್ಷಗಾನ ಕಲಾವಿದ ಸುಬ್ರಾಯ ಭಟ್‍ ಗುಂಡಿಬೈಲ್ ನಿಧನ


ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಸುಬ್ರಾಯ ಭಟ್‍ ಗುಂಡಿಬೈಲ್ ನಿನ್ನೆ(08-01-2021) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.ಅವರಿಗೆ 71 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.


ಗುಂಡುಬಾಳ, ಇಡಗುಂಜಿ, ಕೊಳಗಿಬೀಸ್, ಅಮೃತೇಶ್ವರೀ, ಸಾಲಿಗ್ರಾಮ, ಬಚ್ಚಗಾರು ಮತ್ತು ಶಿರಸಿ ಮೇಳಗಳಲ್ಲಿ ಐದು ದಶಕಗಳ ಕಾಲ ಕಲಾಸೇವೆಗೈದಿದ್ದರು. ಬಬ್ರುವಾಹನ, ಅತಿಕಾಯ, ಇಂದ್ರಜಿತು, ಸುಗ್ರೀವ ಹೀಗೆ ಅನೇಕ ಪೌರಾಣಿಕ ಪಾತ್ರಗಳನ್ನು ರಂಗದಲ್ಲಿ ಮೆರೆಸಿದ್ದರು.ಯಕ್ಷಗಾನ ಗುರುಗಳಾಗಿ, ಪ್ರಸಂಗಕರ್ತರಾಗಿ, ಅರ್ಥಧಾರಿಯಾಗಿಯೂ ಈ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾದ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗ 2016ರಲ್ಲಿ ಶಿರಿಯಾರ ಮಂಜುನಾಥ ನಾಯ್ಕ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಸಸ್ತಿ’ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಮ್.ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಬಹುಮುಖ ಪ್ರತಿಭೆಯ ಅಧ್ಯಾಪಕ, ಲೇಖಕ, ಕಲಾವಿದ ಶ್ರೀ ಪಕಳಕುಂಜ ಶ್ಯಾಮ ಭಟ್

ಅಧ್ಯಾಪಕನಾಗಿ ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ, ಕಲಾವಿದನಾಗಿ ಕಲಾಭಿಮಾನಿಗಳ ಮತ್ತು ಸಹಕಲಾವಿದರ ಮೆಚ್ಚುಗೆ, ಪ್ರೀತಿಗೆ ಪಾತ್ರರಾದ ಪಕಳಕುಂಜ ಶ್ಯಾಮ ಭಟ್ಟರು ಬಹುಮುಖ ಪ್ರತಿಭೆ ಉಳ್ಳವರು. ಇವರು ಶ್ರೇಷ್ಠ ಲೇಖಕರೂ ಹೌದು. ಪಕಳಕುಂಜ ಶ್ರೀ ಶ್ಯಾಮ ಭಟ್ಟರು ಶ್ರೀ ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇಲ್ಲಿ 32 ವರ್ಷಗಳ ಕಾಲ ಅಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರು. ಈಗ ನಿವೃತ್ತ ಜೀವನವನ್ನು ನಡೆಸುತ್ತಿದ್ದಾರೆ. 

ಪಕಳಕುಂಜ ಶ್ರೀ ಶ್ಯಾಮ ಭಟ್ಟರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಪಕಳಕುಂಜ ಎಂಬಲ್ಲಿ 23-12-1949ರಂದು ಶ್ರೀ ನಾರಾಯಣ ಭಟ್ ಮತ್ತು ಪರಮೇಶ್ವರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ತಂದೆಯವರ ಸಂಚಾಲಕತ್ವದ ವೇಣುಗೋಪಾಲ ಹಿರಿಯ ಪ್ರಾಥಮಿಕ ಶಾಲೆ ಪಕಳಕುಂಜ ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಹೈಸ್ಕೂಲು ವಿದ್ಯಾಭ್ಯಾಸವನ್ನು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪ್ರೌಢಶಾಲೆಯಲ್ಲಿ ಪೂರೈಸಿದರು. ವಿವೇಕಾನಂದ ಕಾಲೇಜಿನಲ್ಲಿ (ಪುತ್ತೂರು) ವ್ಯಾಸಂಗ ಮಾಡಿ ಬಿ.ಎಸ್ಸಿ. ಪದವಿಯನ್ನು ಪಡೆದ (ಬಯೋಲಜಿ) ಶ್ಯಾಮ ಭಟ್ಟರು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ನಂತರ ಸರಕಾರೀ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಬಿ.ಎಡ್. ಶಿಕ್ಷಣವನ್ನು ಪೂರೈಸಿದರು. ವಿಠಲ ಪದವಿಪೂರ್ವ ಕಾಲೇಜು ವಿಟ್ಲದಲ್ಲಿ 32 ವರ್ಷ ಅಧ್ಯಾಪಕನಾಗಿ ಸೇವೆ ಸಲ್ಲಿಸಿ ಸಹೋದ್ಯೋಗಿಗಳ ಮೆಚ್ಚುಗೆಗೆ, ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾದರು.

ಶ್ಯಾಮ ಭಟ್ಟರಿಗೆ ಎಳವೆಯಲ್ಲೇ ಯಕ್ಷಗಾನಾಸಕ್ತಿ. ಮನೆಯ ವಾತಾವರಣವೇ ಅದಕ್ಕೆ ಕಾರಣ. ಅಜ್ಜ ಪಕಳಕುಂಜ ಶಂಭಟ್ಟರು ಒಳ್ಳೆಯ ಹಾಡುಗಾರರಾಗಿದ್ದರು. ತಂದೆಯವರು ಹಾಡುಗಾರರು ಮಾತ್ರವಲ್ಲ, ಉತ್ತಮ ಮೃದಂಗ ವಾದಕರೂ ಆಗಿದ್ದರು. ಅವರು ಹಿಮ್ಮೇಳ ತರಗತಿಯನ್ನೂ ನಡೆಸುತ್ತಿದ್ದರಂತೆ. ಕುದುರೆಕೋಡ್ಲು ಹಿರಿಯ ರಾಮ ಭಟ್ಟರು ಇವರ ಸಮೀಪದ ಬಂಧುಗಳಾಗಿದ್ದರು. ಮಳೆಗಾಲದಲ್ಲಿ ಇವರ ಮನೆಯಲ್ಲಿ ಹಾಡುವುದು, ಚೆಂಡೆಮದ್ದಳೆ ನುಡಿಸುವುದು ನಿರಂತರವಾಗಿ ನಡೆಯುತ್ತಿತ್ತು. ಆಗ ಶ್ಯಾಮ ಭಟ್ಟರು ಹಾರ್ಮೋನಿಯಂ ನುಡಿಸುತ್ತಿದ್ದರಂತೆ. ಈ ಸಂದರ್ಭದಲ್ಲಿ ಶ್ಯಾಮ ಭಟ್ಟರು ಕುದ್ರೆಕೋಡ್ಲು ರಾಮ ಭಟ್ಟರಿಂದ ಮದ್ದಳೆ ಬಾರಿಸುವುದನ್ನು ಕಲಿತರು. ಶ್ಯಾಮ ಭಟ್ಟರ ಚಿಕ್ಕಪ್ಪ ಶ್ರೀ ಸುಬ್ರಾಯ ಭಟ್ಟರೂ ಕಲಾವಿದರಾಗಿದ್ದರು. ಬಿ.ಎಡ್. ಶಿಕ್ಷಣ ಪೂರೈಸಿ ಅಧ್ಯಾಪಕ ವೃತ್ತಿಗೆ ಸೇರಿದ ಮೇಲೆ ಕುಕ್ಕಿಲ ಶಂಕರ ಭಟ್ಟರಿಂದ ಕರ್ನಾಟಕ ಸಂಗೀತ ಮೃದಂಗವಾದನವನ್ನೂ ಶ್ಯಾಮ ಭಟ್ಟರು ಅಭ್ಯಸಿಸಿದರು.

ಶ್ಯಾಮ ಭಟ್ಟರು ತಾಳಮದ್ದಳೆ ಅರ್ಥಧಾರಿಯಾಗಿ ಮೊದಲು ಕಾಣಿಸಿಕೊಂಡದ್ದು ಪಿ.ಯು.ಸಿ. ವಿದ್ಯಾರ್ಥಿಯಾಗಿದ್ದಾಗ. ಇಂದ್ರಜಿತು ಕಾಳಗದ ವಿಭೀಷಣನಾಗಿ. ಅಂದು ಇಂದ್ರಜಿತುವಾಗಿ ಹೊಸಹಿತ್ಲು ಮಹಾಲಿಂಗ ಭಟ್ಟರು ಅರ್ಥ ಹೇಳಿದ್ದರಂತೆ. ವೇಷಧಾರಿಯಾಗಿ ರಂಗಪ್ರವೇಶ ಮಾಡಿದ್ದು ಪಕಳಕುಂಜ ಶಾಲೆಯಲ್ಲಿ. ಹಳೆವಿದ್ಯಾರ್ಥಿಗಳಿಂದ ನಡೆದ ಆಟ- ಪಂಚವಟಿ ಪ್ರಸಂಗದ ಲಕ್ಷ್ಮಣನಾಗಿ. ಹೀಗೆ ಯಕ್ಷಗಾನದ ಉಭಯ ಪ್ರಕಾರಗಳಾದ ತಾಳಮದ್ದಳೆ ಮತ್ತು ಆಟಗಳಲ್ಲಿ ಹವ್ಯಾಸವಾಗಿ ಪಾತ್ರಗಳನ್ನು ಮಾಡುತ್ತಾ ಶ್ಯಾಮ ಭಟ್ಟರು ಕಲಾವಿದನಾಗಿ ಕಾಣಿಸಿಕೊಂಡರು. ಕುಕ್ಕಿಲ ನಾರಾಯಣ ಭಟ್ಟರ ಸಂಚಾಲಕತ್ವದ ಶ್ರೀ ವೀರಾಂಜನೇಯ ಯಕ್ಷಗಾನ ಕಲಾ ಸಂಘದ ಪ್ರದರ್ಶನಗಳಲ್ಲಿ ಶ್ಯಾಮ ಭಟ್ಟರು ಸಕ್ರಿಯರಾಗಿದ್ದರು. ಆಗ ವರುಷಕ್ಕೆ 30ರಿಂದ 40 ಪ್ರದರ್ಶನಗಳು ನಡೆಯುತ್ತಿತ್ತು. ತೆಂಕಬೈಲು ತಿರುಮಲೇಶ್ವರ ಭಟ್, ಪಾರೆಕೋಡಿ ಗಣಪತಿ ಭಟ್, ದಿವಾಣ ಗಣಪತಿ ಭಟ್ಟರು ಹಿಮ್ಮೇಳಕ್ಕೆ. ಕರ್ಗಲ್ಲು ವಿಶ್ವೇಶ್ವರ ಭಟ್, ಗುಂಡ್ಯಡ್ಕ ಈಶ್ವರ ಭಟ್, ಮಲಾರು ತಿರುಮಲೇಶ್ವರ ಭಟ್, ಕಿನಿಲ ಗೋವಿಂದ ಭಟ್, ಚಣಿಲ ತಿರುಮಲೇಶ್ವರ ಭಟ್, ಚಣಿಲ ಸುಬ್ರಹ್ಮಣ್ಯ ಭಟ್ ಮೊದಲಾದ ಕಲಾವಿದರಿದ್ದ ತಂಡ ಅದು. ಶ್ಯಾಮ ಭಟ್ಟರಿಗೆ ಹಿಮ್ಮೇಳದ ಜ್ಞಾನವಿದ್ದ ಕಾರಣ, ವೇಷ  ಮಾಡಲು, ಅರ್ಥ ಹೇಳಲು ಹೋದ ಸಂದರ್ಭ ಅನಿವಾರ್ಯಕ್ಕೆ ಮದ್ದಳೆ ಬಾರಿಸಿದ ಪ್ರಸಂಗಗಳು ಅನೇಕ. ಕಲಾವಿದನಾಗಿ ಶ್ರೀ ಶ್ಯಾಮ ಭಟ್ಟರು ಮರೆಯಲಾಗದ, ಕೆಲವು ವಿಶಿಷ್ಟ ಅನುಭವಗಳನ್ನು ನೆನಪಿಸಿ ಹಂಚಿಕೊಳ್ಳುತ್ತಾರೆ.
                             

ರಾತ್ರೆಯಿಂದ ಬೆಳಗಿನ ವರೇಗೆ ಎರಡು ಪ್ರಸಂಗಗಳ ತಾಳಮದ್ದಳೆ. ವಾಲಿವಧೆ ಮತ್ತು ಕರ್ಣಾರ್ಜುನ. ಶೇಣಿ ಗೋಪಾಲಕೃಷ್ಣ ಭಟ್ಟರು ವಾಲಿವಧೆ ಪ್ರಸಂಗಕ್ಕೆ ಪೂರ್ತಿ ಭಾಗವತರಾಗಿ ಪದ್ಯ ಹೇಳಿದರಂತೆ. ಅಂದು ಜೋಕಟ್ಟೆ ಮಹಮ್ಮದ್ ಅವರ ವಾಲಿ. ರಸಿಕರತ್ನ ವಿಟ್ಲ ಗೋಪಾಲಕೃಷ್ಣ ಜೋಷಿ ಹಾಸ್ಯಗಾರರ ಸುಗ್ರೀವ. ಶ್ಯಾಮ ಭಟ್ಟರು ತಾರೆಯಾಗಿ ಅರ್ಥ ಹೇಳಿದರಂತೆ. ನಂತರ ಕರ್ಣಾರ್ಜುನ ಪ್ರಸಂಗದಲ್ಲಿ ಶೇಣಿಯವರು ಕರ್ಣನಾಗಿ ಅರ್ಥ ಹೇಳಿದರಂತೆ (ಮೊದಲ ಪ್ರಸಂಗದಲ್ಲಿ ಪದ್ಯ ಹೇಳಿ). ಅಂದು ಶೇಣಿಯವರ ಕರ್ಣ ತೆಕ್ಕಟ್ಟೆಯವರ ಅರ್ಜುನ, ಪೆರ್ಲ ಪಂಡಿತರ ಕೃಷ್ಣ ಎಂದು ಶ್ಯಾಮ ಭಟ್ಟರು ನೆನಪಿಸುತ್ತಾರೆ. ಅಡ್ಯನಡ್ಕದಲ್ಲಿ ನಡೆದ ಇನ್ನೊಂದು ತಾಳಮದ್ದಳೆ. ಶ್ರೀಕೃಷ್ಣ ಪರಂಧಾಮ ಪ್ರಸಂಗ. ಶೇಣಿಯವರ ಕೃಷ್ಣ. ‘ಜರ’ನಾಗಿ ಅವರ ಜತೆ ಅರ್ಥ ಹೇಳಿದ್ದು, ಅತಿಕಾಯ ಮೋಕ್ಷ ಪ್ರಸಂಗದಲ್ಲಿ ಅವರ ಅತಿಕಾಯನಿಗೆ ಲಕ್ಷ್ಮಣನಾಗಿ ಅರ್ಥ ಹೇಳಿದ್ದು ವಿಶಿಷ್ಠ ಅನುಭವ. ಅದು ನನ್ನ ಭಾಗ್ಯ ಎಂಬುದು ಶ್ಯಾಮ ಭಟ್ಟರ ಅನಿಸಿಕೆ. ಶೇಣಿ ಮತ್ತು ದೇರಾಜೆಯವರ ಜತೆ ಧ್ವನಿಸುರುಳಿಗೆ ಅರ್ಥ ಹೇಳಿದ್ದೂ ಒಂದು ವಿಶಿಷ್ಠ ಅನುಭವ ಮತ್ತು ಭಾಗ್ಯ. ಉತ್ತರನ ಪೌರುಷ ಪ್ರಸಂಗದಲ್ಲಿ ದೇರಾಜೆಯವರ ಉತ್ತರನ ಪಾತ್ರ ಕೌರವನ ಪಾತ್ರ ಬೇಡ ಎಂದು ನಿರ್ಣಯವಾಗಿತ್ತು. ಆದರೆ ದೇರಾಜೆಯವರು ಉದಾರತೆಯಿಂದ ನನ್ನಲ್ಲಿ ಕೌರವನ ಅರ್ಥ ಹೇಳಿಸಿದರು. ರಾವಣವಧೆ ಪ್ರಸಂಗದಲ್ಲಿ ಅವರ ರಾಮನ ಪಾತ್ರಕ್ಕೆ ಮಾತಲಿಯಾಗಿ ಅರ್ಥ ಹೇಳಿದ್ದು. ಹೀಗೆ ಕಲಾವಿದನಾಗಿ ತನ್ನ ವಿಶೇಷ ಅನುಭವಗಳನ್ನು ಶ್ರೀ ಪಕಳಕುಂಜ ಶ್ಯಾಮ ಭಟ್ಟರು ಹಂಚಿಕೊಳ್ಳುತ್ತಾರೆ.
                       

ಅಧ್ಯಾಪಕನಾಗಿದ್ದಾಗ ಸಹೋದ್ಯೋಗಿಗಳಾಗಿದ್ದ ಅಂಗ್ರಿ ಶಂಕರ ಭಟ್, ಬಳ್ಳ ಶಂಕರನಾರಾಯಣ ಭಟ್ ಮೊದಲಾದವರು ಒಳ್ಳೆಯ ಕಲಾವಿದರಾಗಿದ್ದರು. ಶ್ಯಾಮ ಭಟ್ಟರ ಯಕ್ಷಗಾನಾಸಕ್ತಿಗೆ ಪೂರಕ ವಾತಾವರಣ ಸಿಕ್ಕಿತು. ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಿದರು. ವಿದ್ಯಾರ್ಥಿಗಳಿಗೆ ಕರ್ಗಲ್ಲು ಸುಬ್ಬಣ್ಣ ಭಟ್ಟರಿಂದ ತರಬೇತಿ ಕೊಡಿಸುವ ವ್ಯವಸ್ಥೆಯಾಯಿತು. ಮಳಿ ಶ್ಯಾಮ ಭಟ್ಟರು ಹಿಮ್ಮೇಳಕ್ಕೆ. ಹೀಗೆ ವಿದ್ಯಾರ್ಥಿಗಳಿಂದ ಪ್ರದರ್ಶನ ಏರ್ಪಡಿಸಿ ಶ್ಯಾಮ ಭಟ್ಟರು ಕಲಾಸೇವೆಯನ್ನು ಮಾಡಿದರು. ಶ್ಯಾಮ ಭಟ್ಟರು ಉತ್ತಮ ಲೇಖಕರೂ ಹೌದು. ಇವರು ಬರೆದ ಎರಡು ನಾಟಕಗಳು- 1) ಯಾರು ಹಿತವರು ನಿನಗೆ? – ದೇರಾಜೆಯವರಿಂದ ಕೃತಿ ಬಿಡುಗಡೆ 2) ನಾಟಕದೊಳಗೆ  ನಾಟಕ – ಶೇಣಿಯವರ ಹರಿಕಥಾ ಕಾರ್ಯಕ್ರಮ ಇರಿಸಿ ಬಿಡುಗಡೆಯಾಯಿತು.

ಅಲ್ಲದೆ ಇವರು ಬರೆದ ಅಪ್ರಕಟಿತವಾದ ಅನೇಕ ಪುಸ್ತಕಗಳಿವೆ. ಉಳಿಯ ಧನ್ವಂತರೀ ಯಕ್ಷಗಾನ ಕಲಾ ಸಂಘದ ವತಿಯಿಂದ ನಡೆದ ತಾಳಮದ್ದಳೆ ಸ್ಪರ್ಧೆಯಲ್ಲಿ ಯಕ್ಷಸಿಂಧೂರ ಪ್ರತಿಷ್ಠಾನ (ರಿ.), ವಿಟ್ಲ ತಂಡಕ್ಕೆ ಪ್ರಥಮ ಪ್ರಶಸ್ತಿ ಬಂದಿತ್ತು. ಆ ತಂಡದ ಸದಸ್ಯನಾಗಿ ಶ್ಯಾಮ ಭಟ್ಟರು ಶ್ರೇಷ್ಠ ಅರ್ಥಧಾರಿ ವೈಯುಕ್ತಿಕ ಪ್ರಶಸ್ತಿಯನ್ನು ಪಡೆದಿದ್ದರು. ಇನ್ನೂ ಹಲವೆಡೆಗಳಲ್ಲಿ ಸಂಘ-ಸಂಸ್ಥೆಗಳಿಂದ ಸನ್ಮಾನಗಳನ್ನು ಪಡೆದ ಶ್ರೀಯುತರು ಒರಿಸ್ಸಾದಲ್ಲಿ ಕನ್ನಡ ಸಂಘದ ವತಿಯಿಂದ ಸುನಾಬೇಡ ಎಂಬಲ್ಲಿ (1984), ಬೆಂಗಳೂರು, ಮುಂಬಯಿ ಮೊದಲಾದ ಕಡೆಗಳಲ್ಲಿ ತಾಳಮದ್ದಳೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
                                   2007ರ ವರೇಗೆ ಪಕಳಕುಂಜದಲ್ಲಿ ವಾಸ್ತವ್ಯ ವಿದ್ದ ಶ್ಯಾಮ ಭಟ್ಟರು ಪ್ರಸ್ತುತ ಅಳಿಕೆಯಲ್ಲಿ ನೆಲೆಸಿದ್ದಾರೆ. ಪತ್ನಿ ರತ್ನಾ ಎಸ್. ಭಟ್ (ಗೃಹಿಣಿ). ಮಕ್ಕಳು- ಅನಿಲ್, ಅಚಲ್, ಅಖಿಲಾ.

ಲೇಖಕ: ರವಿಶಂಕರ್ ವಳಕ್ಕುಂಜ

ಮೇಳಗಳ ಇಂದಿನ (09.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (09.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಆಜ್ರಿ ಹೊಸಬಾಳು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 
ಕಟೀಲು ಒಂದನೇ ಮೇಳರಥಬೀದಿ ಮಂಗಳೂರು 
ಕಟೀಲು ಎರಡನೇ ಮೇಳ ಮೂರು ಕಾವೇರಿ ವಯಾ ಕಿನ್ನಿಗೋಳಿ 
ಕಟೀಲು ಮೂರನೇ ಮೇಳಕಟೀಲು ಕ್ಷೇತ್ರದಲ್ಲಿ 
ಕಟೀಲು ನಾಲ್ಕನೇ ಮೇಳ ಎರ್ಮಾಳ್ ಶ್ರೀ ಜನಾರ್ದನ ದೇವಸ್ಥಾನದ ವಠಾರ 
ಕಟೀಲು ಐದನೇ ಮೇಳ ‘ಶ್ರೀ ದೇವಿ ಪ್ರಸಾದ್’ ವಾಮಂಜೂರು 
ಕಟೀಲು ಆರನೇ ಮೇಳಕೊಲ್ಯ, ಸೋಮೇಶ್ವರ, ಉಳ್ಳಾಲ 
ಮಂದಾರ್ತಿ ಒಂದನೇ ಮೇಳ ಅರೆಕಲ್ಲುಮನೆ, ಕತ್ ಗೋಡು, ರಟ್ಟಾಡಿ 
ಮಂದಾರ್ತಿ ಎರಡನೇ ಮೇಳ ಚಮ್ಮನಹಿತ್ಲು ಗರಡಿ ರಸ್ತೆ, ಬೀಜೂರು 
ಮಂದಾರ್ತಿ ಮೂರನೇ ಮೇಳ ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನ ಕಾಜ್ರಳ್ಳಿ 
ಮಂದಾರ್ತಿ ನಾಲ್ಕನೇ ಮೇಳ ಕಚ್ಚೂರು, ಹೆಬ್ರಿ 
ಮಂದಾರ್ತಿ ಐದನೇ ಮೇಳ ಸುಗೋಡಿ. ಹಾರ್ದಳ್ಳಿ, ಮಂಡಳ್ಳಿ 
ಶ್ರೀ ಹನುಮಗಿರಿ ಮೇಳ ಕೊಡಂಕೂರು ಫ್ರೆಂಡ್ಸ್ ಕಟ್ಟಡದ ಮುಂಭಾಗ (ಅಂಚೆ ನಿಟ್ಟೂರು)- ಅಮರೇಂದ್ರ ಪದ ವಿಜಯ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಜಾಬಾಲಿ – ನಂದಿನಿ 
ಶ್ರೀ ಸುಂಕದಕಟ್ಟೆ ಮೇಳ ಮಳಲಿ ಪೂವಾರು ಬಾಕಿಮಾರು ಗದ್ದೆ – ಸರ್ಪ ಸಂಬಂಧ 
ಶ್ರೀ ಮಾರಣಕಟ್ಟೆ ಮೇಳ ‘ಎ’ಶ್ರೀ ಕ್ಷೇತ್ರದಲ್ಲಿ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಕಟ್ಟಿನಮಕ್ಕಿ, ಗುಡಿಮನಿ, ಹರ್ಕೂರು 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕೆರೆಬೆಟ್ಟು, ಕುಂದಬಾರಂದಾಡಿ 
ಶ್ರೀ ಪಾವಂಜೆ ಮೇಳ ಪಟ್ಲ ಫೌಂಡೇಶನ್ ಮುಡಿಪು – ಶ್ರೀ ದೇವಿ ಮಹಾತ್ಮೆ 
ಶ್ರೀ ಹಟ್ಟಿಯಂಗಡಿ ಮೇಳಸಮುದಾಯ ಭವನ, ತೆಂಕನಿಡಿಯೂರು    – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ನರಸಿಂಹಪುರ 
ಕಮಲಶಿಲೆ ಮೇಳ ‘ಬಿ’ತಲ್ಲಂಜೆ, ಶಂಕರನಾರಾಯಣ 
ಶ್ರೀ ಬಪ್ಪನಾಡು ಮೇಳಮುಲ್ಕಿ ಬಸ್ ಸ್ಟಾಂಡ್ – ಶ್ರೀ ದೇವಿ ಮಹಾತ್ಮೆ 
ಶ್ರೀ ಸಸಿಹಿತ್ಲು ಭಗವತೀ ಮೇಳ ಬೈಕಂಪಾಡಿ ಎಪಿಎಂಸಿ ವಾಣಿಜ್ಯ ಸಂಕೀರ್ಣದ ಬಳಿ – ಅಬ್ಬರದ ಬಬ್ಬರ್ಯೆ (ತುಳು)
ಶ್ರೀ ಅಮೃತೇಶ್ವರೀ ಮೇಳಶ್ರೀ ಕ್ಷೇತ್ರದಲ್ಲಿ 
ಶ್ರೀ ಬೋಳಂಬಳ್ಳಿ ಮೇಳ ನಾವುಂದ – ಶ್ರೀ ಪದ್ಮಾವತಿ ಮಹಾತ್ಮೆ 
ಶ್ರೀ ಸೌಕೂರು ಮೇಳಕರ್ಕಿ – ನೂತನ ಪ್ರಸಂಗ  
ಶ್ರೀ ಹಾಲಾಡಿ ಮೇಳತಡಗಲ್ಲು, ನಂಚಾರು – ನಾಗಶ್ರೀ
ಶ್ರೀ ಬೆಂಕಿನಾಥೇಶ್ವರ ಮೇಳ  ಬೈಕಂಪಾಡಿ ಕುಡುಂಬೂರು ಕೇಂದ್ರ ಮೈದಾನದಲ್ಲಿ – ಶ್ರೀ ದೇವಿ ಅಗ್ನಿ ಕಲ್ಲುರ್ಟಿ
ಶ್ರೀ ಮಡಾಮಕ್ಕಿ ಮೇಳಮುದ್ರಾಡಿ ಬಲ್ಲಾಡಿ ಅಂಗನವಾಡಿ – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಬ್ರಹ್ಮಾವರ ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ – ನೂತನ ಪ್ರಸಂಗ 
ಶ್ರೀ ಶನೀಶ್ವರ ಮೇಳ ಶಂಕರ ಶೆಟ್ರ ವಠಾರ , ಹೊಸಂಗಡಿ ಗ್ರಾಮ 
ಶ್ರೀ ಸಿಗಂದೂರು ಮೇಳಹೇರಾಡಿ, ಚಂಡೆ 
ಶ್ರೀ ನೀಲಾವರ ಮೇಳ ನೀಲಾವರ ಕ್ರಾಸ್ – ನಾಗ ಚಂದ್ರಿಕೆ 
ಶ್ರೀ ಮಂಗಳಾದೇವಿ ಮೇಳಶ್ರೀ ಮಂಗಳಾದೇವಿ ದೇವಸ್ಥಾನದ ವಠಾರ – ಕೋಟಿ ಚೆನ್ನಯ್ಯ

ಅಡೂರು ಗಣೇಶ್ ರಾವ್ – ‘ಬಿಡಿತ’ದಲ್ಲೇ ‘ಮುಕ್ತಾಯ’ಗೊಳಿಸಿದ ವಾದಕ

ಶೀಘ್ರ ಸಾಧಕರಿಗೆ ಆಯುಸ್ಸು ಕಡಿಮೆ. ಇದು ನನ್ನ ಮಾತಲ್ಲ. ಚರಿತ್ರೆಯ ಪುಟಗಳೇ ಈ ಮಾತನ್ನು ಸಾರಿ ಹೇಳುತ್ತವೆ. ನಮ್ಮ ಭವ್ಯ ಪುರಾಣ, ಇತಿಹಾಸಗಳ ಗ್ರಂಥಗಳ ಒಂದೊಂದೇ ಹಾಳೆಗಳನ್ನು ತಿರುವುತ್ತಾ ಹೋದಂತೆ ಈ ಮಾತಿಗೆ ಸಾಕಷ್ಟು ಪುರಾವೆಗಳು ದೊರಕುತ್ತವೆ. ಹಾಗೆಂದು ಎಲ್ಲರೂ ಹೀಗೆಂದು ಅರ್ಥವಲ್ಲ. ಆದರೆ ಪೂರಕವಾಗಿ ತುಂಬಾ ಉದಾಹರಣೆಗಳು ಸಿಗುತ್ತವೆ ಅಷ್ಟೇ.

ನಮಗೆಲ್ಲಾ ಅದರ್ಶಪ್ರಾಯರಾಗಿರುವ ಭರತಖಂಡದ ಜನರು ಕಂಡ ಮಹಾನ್ ಆಡಳಿತಗಾರ ಶ್ರೀ ಶಿವಾಜಿ ಮಹಾರಾಜರು ಬದುಕಿದ್ದು ಕೇವಲ ಐವತ್ತು ವರ್ಷಗಳು ಮಾತ್ರ. ಹಾಗೆಯೇ ಸ್ವಾಮಿ ವಿವೇಕಾನಂದ, ಸುಭಾಸ್‍ಚಂದ್ರ ಬೋಸ್, ಭಗತ್‍ಸಿಂಗ್, ಚಂದ್ರಶೇಖರ ಆಜಾದ್, ಅಡೋಲ್ಫ್ ಹಿಟ್ಲರ್, ರಾಜೀವ್ ಗಾಂಧಿ, ಪ್ರಮೋದ್ ಮಹಾಜನ್ ಹಾಗೂ ಇತ್ತೀಚೆಗೆ ನಿಧನರಾದ ಅನಂತಕುಮಾರ್ ಇವರೆಲ್ಲಾ ಸಣ್ಣ ವಯಸ್ಸಿನಲ್ಲೆ ಸಾಧನೆಯನ್ನು ಮಾಡಿ ಈ ಲೋಕದಿಂದ ಕಣ್ಮರೆಯಾದವರು. ನಾವು ಯುಗಾಂತರದಷ್ಟು ಹಿಂದಕ್ಕೆ ನೋಡಿದರೆ ಅಲ್ಲಿಯೂ ನಮಗೆ ಇಂತಹಾ ನಿದರ್ಶನಗಳು ಕಾಣಸಿಗುತ್ತವೆ. ಎಳೆಯ ಹರೆಯದಲ್ಲೆ ಅದ್ಭುತವನ್ನು ಸಾಧಿಸಿ ಅಕಾಲ ವೀರಸ್ವರ್ಗವನ್ನು ಪಡೆದ ಅಭಿಮನ್ಯುವಿನ ಕತೆ ನೆನಪಾಗುತ್ತದೆ.

ಇನ್ನು ಈ ಕಾಲಕ್ಕೆ ಬಂದರೆ ತನ್ನ 35ನೆಯ ವಯಸ್ಸಿನಲ್ಲಿಯೇ ಪ್ರಖ್ಯಾತರಾಗಿ ಕಾಲನ ಕರೆಗೆ ಓಗೊಟ್ಟ ಸಿನಿಮಾ ರಂಗದ ಖ್ಯಾತ ನಟ ಶಂಕರ್ ನಾಗ್  ಮನಸ್ಸನ್ನು ತುಂಬಾ ಕಾಡುತ್ತಾರೆ. ಅದರಂತೆ ಮಿನುಗು ತಾರೆ ಕಲ್ಪನಾ, ನಟಿ ಸೌಂದರ್ಯಾ, ದಿವ್ಯಾ ಭಾರತಿ- ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಯಕ್ಷರಂಗದ ಬೆರಗು, ತನ್ನ ಅಪೂರ್ವ ಕಂಚಿನ ಕಂಠದಿಂದ ರಂಗವನ್ನು ಆಳಿದ ಜಿ.ಆರ್. ಕಾಳಿಂಗ ನಾವಡರ ಅಕಾಲ ಅಗಲಿಕೆಯ ನೋವು ಕೂಡಾ ಈ ಸಂದರ್ಭದಲ್ಲಿ ಮಾಸದ ನೆನಪಾಗಿ ಉಳಿದಿದೆ. ಅವರು ತನ್ನ 31ನೆಯ ವಯಸ್ಸಿನಲ್ಲೆ ನಮ್ಮನ್ನು ಬಿಟ್ಟು, ಯಕ್ಷರಂಗವನ್ನು ಬಡವಾಗಿಸಿ ಕೇವಲ ನೆನಪಾಗಿ ಉಳಿದು ಹೋದರು.

ವರ್ಷದ ಹಿಂದೆ ಇಹಲೋಕವನ್ನು ತ್ಯಜಿಸಿದ ಯಕ್ಷಗಾನದ ಖ್ಯಾತ ಮದ್ದಳೆಗಾರರಲ್ಲಿ ಒಬ್ಬರಾಗಿದ್ದ  ಶ್ರೀ ಅಡೂರು ಗಣೇಶ್ ರಾವ್ ಕೂಡಾ ಅಕಾಲ ಮೃತ್ಯುವಶರಾದವರು. ಯಕ್ಷಗಾನ ಕಲಾ ಜಗತ್ತಿನಲ್ಲಿ ‘ಅಡೂರು ಗಣೇಶ್ ರಾವ್’ ಎಂಬ ಹೆಸರನ್ನು ಕೇಳದ ಯಕ್ಷಗಾನ ಪ್ರಿಯರು ಇರಲಿಕ್ಕಿಲ್ಲ. ಹಾಗೆ ನೋಡಿದರೆ ಸಾಯಬೇಕಾದ ವಯಸ್ಸು ಖಂಡಿತಾ ಅವರದಲ್ಲ. ಇಷ್ಟು ಸಣ್ಣ ಪ್ರಾಯದಲ್ಲೇ ಅಷ್ಟನ್ನೂ ಸಾಧಿಸಿ ಹೋದವರು.


‘ಛೇ… ಬದುಕಬೇಕಾಗಿತ್ತು ಅವರು. ಬಹಳಷ್ಟು ಅಪರಿಮಿತ ಕೊಡುಗೆಗಳು ಅವರಿಂದ ಯಕ್ಷಗಾನಕ್ಕೆ ಸಲ್ಲುವುದಿತ್ತು’ ಎಂದು ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಾ ಉಂಟು. ಆದರೆ ಕಾಲನ ನಿರ್ಣಯಕ್ಕೆ ತಲೆಬಾಗದಿರುವುದುಂಟೇ? ಕೇವಲ ಮಧ್ಯವಯಸ್ಸಿನಲ್ಲೆ ಅಂದರೆ ತನ್ನ 50ರ ಹರೆಯದಲ್ಲೇ ತನ್ನ ಕಾಯವನ್ನು ಅಳಿದ ಅಡೂರು ಗಣೇಶ್ ರಾವ್ ಇನ್ನಿಲ್ಲ ಎಂಬ ವಾರ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಾಗ ಒಂದು ಕ್ಷಣ ಅಧೀರನಾದದ್ದು ಸತ್ಯ. ಈ ಜಗತ್ತಿನಲ್ಲಿ ಜೀವರಾಶಿಗಳಾಗಿ ಜನಿಸಿದ ಮೇಲೆ ಸಾವು ಕೂಡಾ ನಿರೀಕ್ಷಿತವೇ ಆಗಿರುವುದರಿಂದ ‘ಇಂದು ಅವರು, ನಾಳೆ ನಾವು… ಸಾವು ಯಾವ ವಯಸ್ಸಿನಲ್ಲಿಯೂ ಬರಬಹುದು’ ಎಂದು ಸಮಾಧಾನಪಟ್ಟುಕೊಳ್ಳುವುದೇ ನಮ್ಮ ಮುಂದಿರುವ ಏಕೈಕ ದಾರಿ ಎನ್ನದೆ ವಿಧಿಯಿಲ್ಲ.

ಗಣೇಶ ಎಂಬ ಬಾಲಕ ‘ಅಡೂರು ಗಣೇಶ್ ರಾವ್’ ಆಗಿ ರೂಪುಗೊಂಡದ್ದು : ಅಡೂರು, ಮಧೂರು, ಮುಜುಂಗಾವು, ಕುಂಬಳೆ ಎಂಬ ನಾಲ್ಕು ಪ್ರಸಿದ್ಧ ಕ್ಷೇತ್ರಗಳಿಂದ ಕಾಸರಗೋಡು ಜಿಲ್ಲೆಯನ್ನು ಗುರುತಿಸುತ್ತಾರೆ. ಈ ಪಟ್ಟಿಗೆ ಅನಂತಪುರ ಮತ್ತು ಮಲ್ಲ ದೇವಳಗಳನ್ನೂ ಸೇರಿಸಬಹುದು. ಈ ಹಿನ್ನೆಲೆಯಲ್ಲಿ ಅಡೂರು ಎಂಬ ಊರು ಇತಿಹಾಸ ಪ್ರಸಿದ್ಧವಾಗಿದೆ. ಕಾಸರಗೋಡಿನ ಅನೇಕ ಯಕ್ಷಗಾನದ ಮಹನೀಯರನ್ನು ಗುರುತಿಸುವಾಗ ಅಡೂರು ಎಂಬ ಊರು ಕೂಡಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಹಲವಾರು ಕಲಾವಿದರನ್ನು ಯಕ್ಷಗಾನಕ್ಕೆ ಪರಿಚಯಿಸಿದ ಕೀರ್ತಿ ಅಡೂರು ಎಂಬ ಊರಿಗೆ ಸಲ್ಲುತ್ತದೆ.

ಇಂತಹಾ ಐತಿಹಾಸಿಕವಾಗಿಯೂ ಕಲಾಪೋಷಕತ್ವದ ನೆಲೆಯಲ್ಲಿಯೂ ಪ್ರಸಿದ್ಧವಾದ ನಾಡಿನಲ್ಲಿ ಯಕ್ಷಗಾನದ ಕಂಪು ಪಸರಿಸಿದ ಕುಟುಂಬವೊಂದರಲ್ಲಿ ಗಂಡು ಮಗುವೊಂದರ ಜನನವಾಗುತ್ತದೆ. ತಂದೆ ಕೃಷ್ಣ ರಾವ್ ಮತ್ತು ತಾಯಿ ಪಾರ್ವತಿ ಅಮ್ಮ ದಂಪತಿ ತಮ್ಮ ಪುತ್ರನಿಗೆ ಗಣೇಶ ಎಂದು ಹೆಸರನ್ನಿಟ್ಟರು. ಕುಟುಂಬ ಪೂರ್ತಿ ಯಕ್ಷಗಾನದ ಕಲಾವಿದರೇ. ಅಡೂರು ಗಣೇಶರ ತಂದೆ ಕೃಷ್ಣ ರಾವ್ ಚೆಂಡೆವಾದಕರು. ಅಜ್ಜ (ತಂದೆಯ ಚಿಕ್ಕಪ್ಪ) ಕೂಡಾ ಮದ್ದಳೆವಾದಕರಾಗಿದ್ದವರು. ಹೀಗಾಗಿ ಬಾಲಕ ಗಣೇಶನಿಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಯಾಗಿರುವಾಗಲೇ ಚೆಂಡೆ ಬಾರಿಸುವ ಬಗ್ಗೆ ಅತೀವ ಕುತೂಹಲವಿತ್ತು. ಆದ್ದರಿಂದ 1968ರಲ್ಲಿ ಜನಿಸಿದ್ದ ಗಣೇಶ ಯಕ್ಷಗಾನದ ಆಸಕ್ತಿಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು 7ನೇ ತರಗತಿಗೆ ಮೊಟಕುಗೊಳಿಸಿದರೂ ಯಕ್ಷಗಾನವನ್ನು ತನ್ನ ಉಸಿರಾಗಿ ಸ್ವೀಕರಿಸಿದ್ದ.

ಚೆಂಡೆ ಬಾರಿಸುವುದು ಅವರ ಕುಲವೃತ್ತಿಯಾಗಿದ್ದುದು ಮತ್ತು ಅಜ್ಜ, ತಂದೆಯಾದಿಯಾಗಿ ಕುಟುಂಬದ ಎಲ್ಲರೂ ಚೆಂಡೆ, ಮದ್ದಳೆವಾದಕರಾದುದರಿಂದ ಸಹಜವಾಗಿಯೇ, ರಕ್ತಗತವಾಗಿಯೇ ಬೆಳೆದು ಬಂದ ಆಸಕ್ತಿ ಗಣೇಶನನ್ನು ಯಕ್ಷಗಾನ ಕಲಾವಿದನಾಗಿ ರೂಪಿಸುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿತು. ಚಿಕ್ಕಂದಿನಲ್ಲಿ ಕುತೂಹಲದಿಂದ ತಂದೆಯವರು ಇತರರಿಗೆ ಕಲಿಸುವುದನ್ನು ಆಸಕ್ತಿಭರಿತ ಕಣ್ಣುಗಳಿಂದ ನೋಡುತ್ತಿದ್ದರು. ಸಹಜವಾಗಿಯೇ ತಂದೆ ಮಗನ ಆಸಕ್ತಿಯನ್ನು ಗಮನಿಸಿದರು. ಮನೆಯಲ್ಲಿ ತಂದೆ ಕೃಷ್ಣ ರಾವ್ ಅವರಿಂದ ಚೆಂಡೆಯ ಪಾಠ ಸುರು ವಾಯಿತು. ಆಮೇಲೆ ಕಲಿಕೆಯ ಸ್ವಲ್ಪ ಭಾಗ ಅಜ್ಜ ಶಾಮ ಮದ್ದಲೆಗಾರರಿಂದ ಮತ್ತು ಕುಂಡಂಕುಳಿ ರಾಮಕೃಷ್ಣಯ್ಯನವರಿಂದ ಆಯಿತು. ತನ್ನ 9ನೆಯ ವಯಸ್ಸಿನಿಂದಲೇ ಚೆಂಡೆಯ ಬಡಿತದ ಪ್ರದರ್ಶನವನ್ನು ಆರಂಭಿಸಿದ್ದರು. ಹೀಗೆ ತನ್ನ 14ನೆಯ ವಯಸ್ಸಿನಲ್ಲಿ ಅಡೂರು ಗಣೇಶ್ ರಾವ್ ಅವರು ಮೇಳದ ಕಲಾವಿದನಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಬೆಳೆಯತೊಡಗಿದರು.

ಮೊದಲ ಮೇಳದ ಪಯಣ : 1983ರಲ್ಲಿ ತನ್ನ 15ನೆಯ ವಯಸ್ಸಿನಲ್ಲಿ ಕಲಾಯಾನದ ಪಯಣವನ್ನು ಆರಂಭಿಸಿದ ಅಡೂರು ಗಣೇಶ್ ರಾವ್ ಮೊದಲಾಗಿ ಸೇರಿಕೊಂಡದ್ದು ಸುರತ್ಕಲ್ ಮೇಳಕ್ಕೆ. ಅಲ್ಲಿ ಒಂದು ವರ್ಷದ ಅನುಭವ ಪಡೆದರು. ಮುಂದಿನ ವರ್ಷ ಕಟೀಲು ಮೇಳದಲ್ಲಿ ತಿರುಗಾಟ ಆರಂಭಿಸಿದ ಅವರು ಅಲ್ಲಿ ಪಕ್ವತೆಯ ಅನುಭವ ಪಡೆದರು. ಕಟೀಲು ಮೇಳದಲ್ಲಿ ಮೊದಲ ವರ್ಷ ಚಕ್ರತಾಳ ಬಾರಿಸುತ್ತಿದ್ದರು. ಆ ವರ್ಷ ವೇಷಧಾರಿಯಾಗಿಯೂ ಗುರುತಿಸಲ್ಪಟ್ಟಿದ್ದರು. ಕಟೀಲು ಮೇಳದಲ್ಲಿ ಇರಾ ಗೋಪಾಲಕೃಷ್ಣ ಭಾಗವತರ ಜೊತೆ ತಿರುಗಾಟ ಮಾಡಿದ್ದರು. ಜೊತೆ ಜೊತೆಯಲ್ಲಿ ಇರಾ ಗೋಪಾಲಕೃಷ್ಣ ಭಾಗವತರಿಂದ ಮದ್ದಳೆಯನ್ನೂ ಅಭ್ಯಾಸ ಮಾಡಿದ್ದರು. ಕಟೀಲು ಮೇಳದಲ್ಲಿ ಎರಡು ವರ್ಷ ತಿರುಗಾಟ ಮಾಡಿದ ನಂತರ 5 ವರ್ಷಗಳ ಕಾಲ ಪುತ್ತೂರು ಮೇಳದಲ್ಲಿ ಸೇವೆ ಸಲ್ಲಿಸಿದ್ದರು. ಈ ನಡುವೆ ಕುಕ್ಕಿಲ ಶಂಕರ ಭಟ್ಟರಿಂದ ಶಾಸ್ತ್ರೀಯ ಸಂಗೀತದ ಮೃದಂಗವನ್ನೂ ಕಲಿತು ಕೊಂಡಿದ್ದರು. ಇದಾದ ಮೇಲೆ ಪುನಃ ಕಟೀಲು ಮೇಳಕ್ಕೆ ಸೇರಿದ್ದರು. ಅಲ್ಲಿ 6 ವರ್ಷ ಹಿಮ್ಮೇಳ ವಾದಕರಾಗಿದ್ದು ಮುಂದಿನ 1 ವರ್ಷ ಕದ್ರಿ ಮೇಳ ದಲ್ಲಿ ಕಲಾ ವ್ಯವಸಾಯ ಮಾಡಿದ್ದರು. ಆ ಬಳಿಕ ನಿರಂತರ 22 ವರ್ಷಗಳ ಕಾಲ ಧರ್ಮಸ್ಥಳ ಮೇಳವೊಂದರಲ್ಲಿಯೇ ಸೇವೆ ಸಲ್ಲಿಸಿದ್ದರು.


ಅಡೂರು ಗಣೇಶ್ ರಾವ್ ಮತ್ತು ಮೇಳನಿಷ್ಟೆ: ತನ್ನ ವೃತ್ತಿಜೀವನದ ಪೂರ್ವಾರ್ಧದ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿದರೆ ಅಡೂರು ಗಣೇಶರೆಂದೂ ಮೇಳಗಳನ್ನು ಆಗಾಗ ಬದಲಾಯಿಸಿದವರಲ್ಲ. ತನ್ನ ಜೀವನಕ್ಕೆ ಸ್ಥಿರತೆ ಬಂದ ಮೇಲೆ ಅಥವಾ ತಾನು ಸೆಟ್ಲ್ ಆದ ಮೇಲೆ ಸ್ಥಿರವಾಗಿ ಧರ್ಮಸ್ಥಳ ಮೇಳವೊಂದರಲ್ಲೇ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಶ್ರೀ ಧರ್ಮಸ್ಥಳ ಮೇಳವನ್ನು ಕಲಾವಿದರ ನೆಚ್ಚಿನ ಮೇಳವೆಂದು ಅಡೂರು ಗಣೇಶ ರಾಯರು ಹೇಳುತ್ತಿದ್ದರು.


ಮಾರ್ಗದರ್ಶಕರು ಹಾಗೂ ಸಹಕಲಾವಿದ ರೊಂದಿಗೆ ಅಡೂರು: ಅಡೂರು ಗಣೇಶ್ ರಾವ್ ಅವರು ತನ್ನನ್ನು ಕಲಿಸಿ ಪ್ರೋತ್ಸಾಹಿಸಿದ ಇರಾ ಗೋಪಾಲಕೃಷ್ಣ ಭಾಗವತರು, ರಂಗಮಾಹಿತಿ ಮತ್ತು ನಡೆಗಳನ್ನು ಉಪದೇಶಿಸಿದ ನೆಡ್ಲೆ ನರಸಿಂಹ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ ಇವರನ್ನು ಆಗಾಗ ಉಲ್ಲೇಖಿಸುತ್ತಿದ್ದರು. ಅಡೂರು ಗಣೇಶ್ ರಾವ್ ಅವರು ಚೆಂಡೆ ಹಾಗೂ ಮದ್ದಳೆಗಳ ಸುಲ್ತಾನ್ ಮಾಡುವುದರಲ್ಲೂ (ಶ್ರುತಿಗೆ ತಕ್ಕಂತೆ ನಾದವನ್ನು ಹೊಂದಿಸುವುದು) ನಿಪುಣರಾಗಿದ್ದರು.


ಅಡೂರು ಮತ್ತು ಭಾಗವತಿಕೆ: ಅಡೂರು ಗಣೇಶ್ ರಾವ್ ಚೆಂಡೆಯ ಊರುಳಿಕೆಗಳಲ್ಲಿ, ಮದ್ದಲೆಯ ನುಡಿತಗಳಲ್ಲಿ ಮಾತ್ರ ನಿಪುಣರಲ್ಲ. ಅವರು ಭಾಗವತಿಕೆಯನ್ನೂ ಮಾಡಬಲ್ಲವರಾಗಿದ್ದರು. ಉತ್ತಮ ಶಾರೀರ ಹೊಂದಿರುವ ಅವರು ಧರ್ಮಸ್ಥಳ ಮೇಳದಲ್ಲಿ ಭಾಗವತರ ಅನುಪಸ್ಥಿತಿಯಲ್ಲಿ ಆಗಾಗ ಸಂಗೀತ ಭಾಗವತಿಕೆ ಮತ್ತು ಪ್ರಸಂಗ ಭಾಗವತಿಕೆಯನ್ನೂ ಮಾಡಿದ್ದಾರೆ. ಕೆಲವೊಂದು ಅನಿವಾರ್ಯತೆ ಎದುರಾದಾಗ ಬೆಳಗ್ಗಿನ ವರೆಗೂ ಹಾಡಿದ್ದುಂಟು ಎಂದು ಸ್ವತಃ ಅವರೇ ಹೇಳುತ್ತಿದ್ದರು.


ಭಾವನಾತ್ಮಕ ಅಡೂರು: ಯಕ್ಷಗಾನ ಕಲಾವಿದರಿಗೆ ಈಗ ಜೀವನ ನಿರ್ವಹಣೆಗೆ ಹೇಳಿಕೊಳ್ಳುವಂತಹಾ ಕಷ್ಟವೇನಿಲ್ಲ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ಅಡೂರು ಗಣೇಶ್ ರಾವ್ ಆಗಾಗ ತಮ್ಮ ಮನದಾಳದ ನೋವನ್ನು ಹೊರಹಾಕುತ್ತಿದ್ದರು. ಈಗಿನ ಅಭಿಮಾನಿ ಸಂಘಗಳ ಕಾಲಘಟ್ಟದಲ್ಲಿ ಹಿಮ್ಮೇಳವಾದಕರು ಕಳೆದು ಹೋಗುತ್ತಿದ್ದಾರೆ ಎಂಬುದು ಅವರ ಭಾವನೆಯಾಗಿತ್ತೆಂದು ತೋರುತ್ತದೆ. ಮುಮ್ಮೇಳ ಕಲಾವಿದರು ಮತ್ತು ಭಾಗವತರಿಗಿರುವಷ್ಟು ಮನ್ನಣೆ ಮದ್ದಳೆಗಾರರಿಗೆ ಸಿಗುತ್ತಿಲ್ಲವೆಂದು ಅವರು ವಿಷಾದಿಸುತ್ತಿದ್ದರು. “ಕಲಾವಿದನೊಬ್ಬ ಎಷ್ಟು ನಾಟ್ಯ ಮಾಡಿದ, ಎಷ್ಟು ಧೀಂಗಿಣ ಹಾರಿದ ಹಾಗೂ ಭಾಗವತರೊಬ್ಬರು ಎಷ್ಟು ಚೆನ್ನಾಗಿ ಹಾಡಿದರು ಎಂಬುದನ್ನು ಲೆಕ್ಕ ಹಾಕುತ್ತಾರೆಯೇ ವಿನಃ ಸಾಥ್ ನೀಡಿದ ವಾದಕರನ್ನು ಉಲ್ಲೇಖಿಸುವುದು ವಿರಳ” ಎಂಬ ಮಾತುಗಳು ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.

ಅದೇನೇ ಇರಲಿ. ಪೌರಾಣಿಕ ಪ್ರಸಂಗಗಳ ನಡೆ, ರಂಗಮಾಹಿತಿಗಳನ್ನು ಬಲ್ಲ ಅಪರೂಪದ ಹಿಮ್ಮೇಳವಾದಕ ಅಡೂರು ಗಣೇಶ್ ರಾವ್ ಓರ್ವ ಅಪರೂಪದ ಸಾಧಕ. ಕ್ಲಿಷ್ಟ ಪ್ರಸಂಗಗಳಾದ ದುಶ್ಶಾಸನ ವಧೆ, ಅಭಿಮನ್ಯು ಕಾಳಗ, ಕುಮಾರ ವಿಜಯ ಹಾಗೂ ತಾಮ್ರಧ್ವಜ ಕಾಳಗವೇ ಮೊದಲಾದ ಅಪೂರ್ವ ಪ್ರಸಂಗಗಳ ನುಡಿಸಾಣಿಕೆ ಯಲ್ಲೂ ನಿಪುಣರಾಗಿದ್ದ ಅವರ ಅಗಲಿಕೆ ಇಡೀ ಯಕ್ಷಗಾನ ರಂಗಕ್ಕಾದ ನಷ್ಟ. ಈ ಸಾವು ನ್ಯಾಯವಲ್ಲ. ಕೇವಲ 50 ವರ್ಷಗಳ ವಯಸ್ಸು. ಇನ್ನೂ 15 ಸಂವತ್ಸರಗಳ ಕಾಲ ಯಕ್ಷಗಾನದ ಹಿಮ್ಮೇಳದಲ್ಲಿ ಅದ್ವಿತೀಯರಾಗಿ ಮೆರೆಯಬಹುದಾಗಿದ್ದ ರತ್ನವೊಂದನ್ನು ಕಳೆದುಕೊಂಡಿದ್ದೇವೆ.


ನಾವು ಆಗಾಗ ಕೇರಳಕ್ಕೆ ಹೋಗುತ್ತಿದ್ದಾಗ ಅಡೂರು ಎಂಬ ಊರನ್ನು ದಾಟಿಯೇ ಹೋಗುವುದು. ಇತ್ತೀಚೆಗೆ ಹೋದಾಗ ಅಡೂರು ಎಂಬ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಗಣೇಶ್ ರಾವ್ ನೆನಪಾದರು. ಅಡೂರಿನ ಸ್ವಚ್ಛಂದ ಗಾಳಿಯ ಸುಂಯ್ ಎನ್ನುವ ಸಂಗೀತದ ನಿನಾದದ ಜೊತೆ ದೂರದಲ್ಲೆಲ್ಲೋ ಶ್ರುತಿ, ಲಯಬದ್ಧವಾದ ಚೆಂಡೆಯ ಧ್ವನಿ ಕೇಳಿಬರುತ್ತಿರುವ ಹಾಗೆ ಅಪೂರ್ವವಾದ ಅನುಭವ. ಹೌದು… ಅದು ಅಡೂರು ಗಣೇಶ್ ರಾವ್ ಅವರ ಚೆಂಡೆಯ ನುಡಿತವೇ ಇರಬೇಕು.

ಲೇಖನ: ಮನಮೋಹನ್ ವಿ.ಎಸ್ 

ಪೆರ್ಲ ವಾಗ್ವೈಭವ –  ಪೆರ್ಲ ಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು – 1

ದುಷ್ಟ ಸುಯೋಧನ | ನೊಡಗೊಂಡಿಹೆ ನೀ | ಎಷ್ಟಾಡಿದರೇನು | ಥಟ್ಟನೆ ನಿನ್ನನು | ಕದನದಿ ಗೆಲುವೊಡೆ | ತೊಟ್ಟಿಹೆ ಕರಗಳನು |


ಆಚಾರ್ಯರೆ, ನಿಮಗೆ ಕೌರವ ಒಬ್ಬನ ಹಂಗಿರುವುದು. ಆದರೆ ನನಗೆ ಹಾಗಾ? ಇಡೀ ವಿಶ್ವದ ಹಂಗನ್ನೇ ಇಟ್ಟುಕೊಂಡಿದ್ದೇನೆ ನಾನು. ಇಡೀ ವಿಶ್ವದಲ್ಲಿ ಧರ್ಮ ಎನ್ನುವುದು ಶಾಶ್ವತವಾಗಿ ಸ್ಥಿರವಾಗಿ ನಡೆಯಬೇಕು. ಧರ್ಮಕ್ಕೆ ಲೋಪ ಬಂದಾಗ ವಿಶ್ವವೇ ನಾಶವಾಗುತ್ತದೆ. ಅಂತಹಾ ಧರ್ಮ ರಕ್ಷಣೆ ಮಾಡುವ ಹಂಗನ್ನಿಟ್ಟುಕೊಂಡ ನಾನು ಯಾವ ಕಾಲಕ್ಕೆ ಏನು ಮಾಡಬೇಕೋ ಅದನ್ನು ಮಾಡಿಯೇ ತೀರುತ್ತೇನೆ. ಈಗ ನೀವು ಹೇಳಿದ್ದೀರಲ್ಲ ಕೌರವನ ಅನ್ನ ಅಂತ. ಅಲ್ಲಿಯೂ ನೀವು ಸ್ವಲ್ಪ ವಿಮರ್ಶೆ ಮಾಡಬೇಕಾಗಿತ್ತು. ಕುರುಕುಲದ ಹಿರಿಯರು ನೀವು. ಹಿರಿಯರಾದ ನೀವು ಹಸ್ತಿನಾವತಿಯ ಯೋಗಕ್ಷೇಮವನ್ನು ನೋಡಿಕೊಳ್ತೇನೆ ಅಂತ ಮಾತು ಕೊಟ್ಟಿದ್ದೀರಿ, ಅದಕ್ಕಾಗಿ ಬಂದಿದ್ದೇನೆ ಅಂತ ಹೇಳ್ತಾ ಇದ್ದೀರಿ.

ಈ ಹಸ್ತಿನಾವತಿಯ ಸಿಂಹಾಸನ ನಿಮ್ಮ ಜೀವಿತ ಕಾಲದಲ್ಲಿ ಏನೇನು ಅವಸ್ಥೆಯನ್ನು ಅನುಭವಿಸಿತು ಎಂದು ಪ್ರತ್ಯಕ್ಷ ಕಂಡವರಲ್ಲವೇ ನೀವು? ಕೌರವನಂತಹವರು, ಅಭಿಷೇಕ ಆಗದಿದ್ದರೂ ಬೇರೆ ಯಾರೂ ಇಲ್ಲ ಎಂಬ ಸಂದರ್ಭವನ್ನು ನೋಡಿ ಸಿಂಹಾಸನ ತನ್ನದು ಎಂದು ಏರಿದವ. ಅವನಿಗೊಂದು ಸಂಸ್ಕಾರ ಇರಲಿಲ್ಲ. ಹಾಗೆ ಪಾಂಡುವಿನ ಮಕ್ಕಳಾದ ಧರ್ಮರಾಜಾದಿಗಳು ಬಂದರು. ನೀವು ಇದ್ದುಕೊಂಡೇ ಧರ್ಮರಾಜನಿಗೆ ಒಂದು ಯೌವರಾಜ್ಯಾಭಿಷೇಕ ಮಾಡಿದ್ದು ಅಂತ ನಾನು ಕೇಳಿದ್ದೇನೆ. ಅದನ್ನು ಎಲ್ಲಿ ಬಚ್ಚಿಟ್ಟಿದ್ದೀರಿ ಇವತ್ತು? ಧರ್ಮರಾಜನಿಗೆ ನೀಡಿದ ಯುವರಾಜನ ಅಧಿಕಾರ ಈಗ ಎಲ್ಲುಂಟು? ಅಂತಹಾ ಧರ್ಮರಾಜಾದಿಗಳು ದ್ರೌಪದಿ ಸ್ವಯಂವರ ನಂತರ ಪುನಃ ಕಾಣಿಸಿಕೊಂಡಾಗ ಅವರಿಗೆ ರಾಜ್ಯವನ್ನು ಭಾಗಮಾಡಿ ಇಂದ್ರಪ್ರಸ್ಥಕ್ಕೆ ಕಳುಹಿಸಿಕೊಟ್ಟರು. ಹಿರಿಯರಾದ ನೀವೆಲ್ಲಾ ಇದ್ದುಕೊಂಡೇ ‘ರಾಜ್ಯಾಧಿಕಾರದಲ್ಲಿ ನನ್ನ ಕೈವಾಡ ಇಲ್ಲ’ ಎಂದು ನೀವು ಹೇಳುವುದಾದರೆ ಈ ವರೆಗೆ ಇದೆಲ್ಲಾ ಏನು ಮಾಡಿದ್ದು ಮತ್ತೆ?

ಆದ್ದರಿಂದ ತಾರತಮ್ಯ ಜ್ಞಾನವನ್ನು ಚೆನ್ನಾಗಿ ಆಲೋಚನೆ ಮಾಡಿ ಹಸ್ತಿನಾವತಿಗೆ ಯಾವುದು ಉಚಿತ ಮತ್ತು ಯಾವುದು ಅನುಚಿತ ಎಂದು ತಿಳಿದು ಮಾಡಬೇಕಾದ್ದನ್ನು ನೀವು ಮಾಡಬೇಕಾಗಿತ್ತು. ಅದರಲ್ಲಿ ಏನೋ ಒಂದು ಲೋಪ ಬಂದಿದೆ. ಯಾಕೆಂದರೆ ನಿಮಗೆ ಧೃತರಾಷ್ಟ್ರನ ಮೇಲಿನ ದಾಕ್ಷಿಣ್ಯ, ಧೃತರಾಷ್ಟ್ರನಿಗೆ ಮಗನ ಮೇಲಿನ ವಾತ್ಸಲ್ಯ. ಈ ದಾಕ್ಷಿಣ್ಯಗಳು, ಈ ವಾತ್ಸಲ್ಯಗಳು ಎಲ್ಲಾ ಒಟ್ಟು ಸೇರಿ ಏನೋ ಒಂದು ದೊಡ್ಡ ಗೊಂದಲವಾಗಿ ಇವತ್ತು ಪರಿಣಾಮ ಹೀಗಾಗಿದೆ. ಅದಕ್ಕೆ ಮೆಲ್ಲನೆ ಅವಕಾಶವನ್ನು ಮಾಡಿಕೊಟ್ಟವರಲ್ಲಿ ಜ್ಞಾತವಾಗಿಯೂ ಅಜ್ಞಾತವಾಗಿಯೂ ನೀವೊಬ್ಬರು ನಿಶ್ಚಯವೇ. ಇವತ್ತು ಬಂದಿದ್ದೀರಿ ನೀವು. ಕೌರವನ ಸೇನಾಧಿಪತಿಯಾಗಿ ಬಂದಿದ್ದೀರಿ. ನಿಮ್ಮ ಮಾತಿನಂತೆ ನಾನು, ನನ್ನ ಭಕ್ತರೆಲ್ಲಾ ಸಮಾನರು ಎಂದು ತಿಳಿದುಕೊಂಡು ‘ನಮೇ ಭಕ್ತ ಪ್ರಣಶ್ಯತಿ’ ಎಂದು ಹೇಳಿದ್ದೇನಲ್ಲ ನಾನು. ಇವನೂ ಒಬ್ಬ ಭಕ್ತ, ಸರಿ ಜಯಿಸಲಿ ಭೀಷ್ಮ ಎಂದು ಹೇಳಿದರೆ ಪರಿಣಾಮ ಏನಾದೀತು? ಈ ಜಯ ಯಾರಿಗೆ? ನಿಮಗೋ? ವೈಯುಕ್ತಿಕವಾಗಿಯಾ? ಭೀಷ್ಮನಿಗೆ ಈ ಜಯದಿಂದ ಏನು ಕೀರ್ತಿ ಬರಲಿಕ್ಕುಂಟ? ರಾಜ್ಯ ಬರಲಿಕ್ಕುಂಟ, ಸಂಪತ್ತು ಬರಲಿಕ್ಕುಂಟ, ಅಧಿಕಾರ ಬರಲಿಕ್ಕುಂಟ? ಏನಿದ್ದರೂ ಕೌರವನಿಗೆ ಮಾತ್ರ. ಪರಿಣಾಮ ಏನಾಗುತ್ತದೆ?

ಪ್ರಪಂಚದಲ್ಲಿ ಯಾವುದು ದೌಷ್ಟ್ರ್ಯ ಉಂಟೋ, ಯಾವುದು ಅಧರ್ಮ ಉಂಟೋ, ಯಾವುದು ಅನಾಚಾರ ಉಂಟೋ, ಯಾವುದು ಅತ್ಯಂತ ಗರಿಹಿತವಾದ ವಿಚಾರವುಂಟೋ ಅದನ್ನು ಎತ್ತಿಹಿಡಿದಂತಹಾ ಕೌರವನನ್ನು ನಿಮ್ಮ ಜಯದ ಮೂಲಕ ನಾನು ಎತ್ತಿಹಿಡಿದೆ ಅಂತ ಆದರೆ ನನ್ನ ಧರ್ಮದ ಹಂಗು ಎಲ್ಲಿ ಉಳಿಯಿತು? ಆದ್ದರಿಂದ ‘ದುಷ್ಟ ಸುಯೋಧನನೊಡಗೊಂಡಿಹೆ’ ಎಂಬ ಈ ಆವರಣ ಉಂಟು. ಆ ಆವರಣ ಛೇದ ಆಗುವವರೆಗೆ ಏನೂ ಪಾವಿತ್ರ್ಯ ಇಲ್ಲಿ ಬರುವುದಿಲ್ಲ. ಏನು ಮಾಡೋಣ ಹೇಳಿ? ಒಂದು ಸುಂದರವಾದ ಹೂವು ಇಲ್ಲಿ ಅರಳಿದೆ. ಪೂಜೆಗೆ ಯೋಗ್ಯವಾದದ್ದು. ದೇವತಾರ್ಚನೆಗೆ ಆ ಹೂವನ್ನು ತೆಗೆದುಕೊಂಡು ಹೋಗಬೇಕು. ಆದರೆ ಅದು ಅರಳಿದ್ದು ಸ್ಮಶಾನದಲ್ಲಿ. ಹೆಣ ಸುಟ್ಟ ಜಾಗದಲ್ಲಿ ಅರಳಿಕೊಂಡಿದೆ. ದೇವತಾರ್ಚನೆಗೆ ಯೋಗ್ಯವಲ್ಲ. ಅಲ್ಲಿ ಅಮೃತವೇ ಸಿಕ್ಕಿದ್ದು. ಆದರೆ ಪಾತ್ರೆ ಮಾತ್ರ ಹೆಂಡದ ಪಾತ್ರೆಯಾಗಿ ಹೋಗಿದೆ. ಹೆಂಡದ ಪಾತ್ರೆಯಲ್ಲಿ ಬಂದ ಅಮೃತದಂತೆ, ಸ್ಮಶಾನದಲ್ಲಿ ಹುಟ್ಟಿದ ಕುಸುಮದಂತೆ ಇವತ್ತು ಭೀಷ್ಮನಂತಹಾ ಒಬ್ಬ ಭಕ್ತ ಬಂದು ಕೌರವನ ಸೇನಾಧಿಪತಿಯಾಗಿ ‘ನನಗೆ ಜಯವನ್ನು ಕರುಣಿಸು ದೇವರೇ’ ಎಂದು ಹೇಳಿದರೆ ದೇವರಾದವರು ಕರುಣಿಸಿಯಾರೆ?

ಸ್ಪಷ್ಟವಾಗಿ ಹೇಳುತ್ತಾ ಇದ್ದೇನೆ. ಆ ಎಚ್ಚರಕ್ಕೋಸ್ಕರವೇ ನಿಮ್ಮಲ್ಲಿ ಇಷ್ಟು ದೀರ್ಘವಾಗಿ ಮಾತು ಬೆಳೆಸಿದ್ದು ನಾನು. ನೀವು ಏನೇನು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡಿದ್ದೀರೋ ‘ಕರ್ತವ್ಯ ಪಾಲನೆಗಾಗಿ ಬಂದಿದ್ದೇನೆ. ಧರ್ಮವೋ ಅಧರ್ಮವೋ, ಪರಿಣಾಮ ಶುಭವೋ, ಅಶುಭವೋ, ಆ ಕಡೆಗೆ ದೃಷ್ಟಿ ನನ್ನದಿಲ್ಲ. ಕೌರವನ ಸೇನಾಧಿಪತಿಯಾಗಿ ಹೊಡೆದಾಡುವುದು ನನ್ನ ಪರಮ ಪಾವನವಾದ ಕರ್ತವ್ಯ’ ಎಂದು ಹೇಳಿಕೊಂಡು ಬಂದಿದ್ದೀರಲ್ಲ. ಅಲ್ಲೇ ಅಜ್ಞಾನ ಇರುವುದು. ಆದ್ದರಿಂದ ದುಷ್ಟ ಸುಯೋಧನನೊಡಗೊಂಡು, ಅವನ ಸೇನಾಧಿಪತಿಯಾದ ನಿಮ್ಮನ್ನು ಇಂದು ಧರ್ಮಪಕ್ಷಪಾತಿಗಳಾದ ನನ್ನ ಕೈಯ ಆಯುಧಗಳಾದ ಪಾಂಡವರಲ್ಲಿ ಈ ಅರ್ಜುನನಿಂದಾಗಿ ಮುಂದೆ ನಡೆಯುವ ಯುದ್ಧದಲ್ಲಿ ನಿಮ್ಮನ್ನು ಸೋಲಿಸಿ ‘ಅಧರ್ಮ ಸೋಲುತ್ತದೆ, ಜಯ ಗೆಲ್ಲುತ್ತದೆ ಎಂಬುದನ್ನು ಪ್ರಪಂಚಕ್ಕೆ ಮಾಡಿ ತೋರಿಸಬೇಕು ಅಂತ ಪ್ರತಿಜ್ಞೆ ಮಾಡಿದ್ದೇನೆ ನಾನು. ಯುದ್ಧ ಮಾಡುತ್ತೀರಾ ನೀವು?

ಮೇಳಗಳ ಇಂದಿನ (08.01.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (08.01.2021) ಯಕ್ಷಗಾನ ಪ್ರದರ್ಶನಗಳ ವಿವರ
ಮೇಳಸ್ಥಳ/ಪ್ರಸಂಗ 
ಶ್ರೀ ಧರ್ಮಸ್ಥಳ ಮೇಳಸಿದ್ದಾಪುರ ಸಮೀಪದ ಕೊಡ್ಗಿ – ಸುದರ್ಶನ ವಿಜಯ, ಇಂದ್ರಜಿತು ಕಾಳಗ 
ಕಟೀಲು ಒಂದನೇ ಮೇಳಕುರಿಯಗುತ್ತು, ಪುತ್ತೂರು 
ಕಟೀಲು ಎರಡನೇ ಮೇಳ ಪಣಿಯೂರು, ಬೆಳಪು ವಯಾ ಕಾಪು 
ಕಟೀಲು ಮೂರನೇ ಮೇಳಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ವಠಾರ, ಕುದ್ರೋಳಿ 
ಕಟೀಲು ನಾಲ್ಕನೇ ಮೇಳ ಕಟೀಲು ಕ್ಷೇತ್ರದಲ್ಲಿ  
ಕಟೀಲು ಐದನೇ ಮೇಳ ಆರ್ನಾಮಲೆ, ಕನ್ಯಾಡಿ ವಯಾ ಉಜಿರೆ 
ಕಟೀಲು ಆರನೇ ಮೇಳಕನಕಗಿರಿ, ಮಂಚಿ, ಬಂಟ್ವಾಳ 
ಮಂದಾರ್ತಿ ಒಂದನೇ ಮೇಳ ಹೊಸಾಳ, ಬಾರ್ಕೂರು – ಕೂಡಾಟ 
ಮಂದಾರ್ತಿ ಎರಡನೇ ಮೇಳ ಮಡ್ಡಗೇರಿ, ಹೇರೂರು, ರಾಗಿಹಕ್ಕಲು 
ಮಂದಾರ್ತಿ ಮೂರನೇ ಮೇಳ ಹೊಸಾಳ, ಬಾರ್ಕೂರು – ಕೂಡಾಟ 
ಮಂದಾರ್ತಿ ನಾಲ್ಕನೇ ಮೇಳ ಮೇಲ್ ಕಟ್ಟಿನಬೈಲು, ೭೪ನೇ ಉಳ್ಳೂರು, ಕೂಡಾಟ 
ಮಂದಾರ್ತಿ ಐದನೇ ಮೇಳ ಮೇಲ್ ಕಟ್ಟಿನಬೈಲು, 74ನೇ ಉಳ್ಳೂರು, ಕೂಡಾಟ   
ಶ್ರೀ ಹನುಮಗಿರಿ ಮೇಳ ಸ್ವರಾಜ್ಯ ಮೈದಾನ ಮೂಡಬಿದ್ರೆ- ವಿರೋಚನ, ಗದಾಯುದ್ಧ, ರಕ್ತರಾತ್ರಿ 
ಶ್ರೀ ತಳಕಲ ಮೇಳಶ್ರೀ ಕ್ಷೇತ್ರದಲ್ಲಿ – ಅತಿಕಾಯ ಮೋಕ್ಷ
ಶ್ರೀ ಸುಂಕದಕಟ್ಟೆ ಮೇಳ ಕಿನ್ನಿಗೋಳಿ ಹೊಸಕಾವೇರಿ – ಕಾಡಮಲ್ಲಿಗೆ
ಶ್ರೀ ಮಾರಣಕಟ್ಟೆ ಮೇಳ ‘ಎ’ಸಾಲಿಮಕ್ಕಿ, ಕಮಲಶಿಲೆ 
ಶ್ರೀ ಮಾರಣಕಟ್ಟೆ ಮೇಳ ‘ಬಿ’ಬಣ್ಸಾಲೆಮನೆ, ಅರೆಹೊಳೆ 
ಶ್ರೀ ಮಾರಣಕಟ್ಟೆ ಮೇಳ ‘ಸಿ’ಕುಡೂರು, ಸಾಲಾಡಿಮನೆ, ಗೋಳಿಹೊಳೆ 
ಶ್ರೀ ಪಾವಂಜೆ ಮೇಳ ಪೊಳಲಿ – ಪಂಚವಟಿ, ತರಣಿಸೇನ, ರಾವಣವಧೆ  
ಶ್ರೀ ಹಟ್ಟಿಯಂಗಡಿ ಮೇಳಕಲ್ಮಾಡಿ   – ದಿವ್ಯಸನ್ನಿಧಿ 
ಕಮಲಶಿಲೆ ಮೇಳ ‘ಎ’ಬಸ್ರಿಬೇರು ಶಾಲಾ ವಠಾರ
ಕಮಲಶಿಲೆ ಮೇಳ ‘ಬಿ’ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮುದೂರು 
ಶ್ರೀ ಬಪ್ಪನಾಡು ಮೇಳಶ್ರೀ ಕ್ಷೇತ್ರದಲ್ಲಿ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ
ಶ್ರೀ ಸಸಿಹಿತ್ಲು ಭಗವತೀ ಮೇಳ ಧರ್ಮಸ್ಥಳ ಪಾಂಗಾಲ – ಶ್ರೀ ಭಗವತಿ ಮಹಾತ್ಮೆ 
ಶ್ರೀ ಅಮೃತೇಶ್ವರೀ ಮೇಳಶ್ರೀ ಓಡಗಿನ ನಂದಿಕೇಶ್ವರ ಹಾಗೂ ಪರಿವಾರ ದೈವಸ್ಥಾನ ದೇವಸ, ಮಣೂರು 
ಶ್ರೀ ಬೋಳಂಬಳ್ಳಿ ಮೇಳ ನಂದಿಕೇಶ್ವರ ದೇವಸ್ಥಾನದ ಬಳಿ, ಹೆರಗೋಡು (ಕಾಲಮಿತಿ) 
ಶ್ರೀ ಸೌಕೂರು ಮೇಳನೇರಳಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ – ರಕ್ತಸಂಬಂಧ  
ಶ್ರೀ ಹಾಲಾಡಿ ಮೇಳಹೈಕಾಡಿ – ನೂತನ ಪ್ರಸಂಗ
ಶ್ರೀ ಬೆಂಕಿನಾಥೇಶ್ವರ ಮೇಳ  ಸಾಲೆತ್ತೂರು – ಶ್ರೀ ದೇವಿ ಮಹಾತ್ಮೆ 
ಶ್ರೀ ಮಡಾಮಕ್ಕಿ ಮೇಳಸೂರಿಮಣ್ಣುಮಠ – ರಾಜವಂಶಗುಳಿ
ಶ್ರೀ ಕ್ಷೇತ್ರ ಗೋಳಿಗರಡಿ ಮೇಳಹೆಬ್ರಿ ಬ್ಯಾಣ ಶ್ರೀ ಅಮ್ಮನವರ ಗದ್ದಿಗೆ ವಠಾರ – ಶ್ರೀ ಮೂಡುಸಾರಿಬೇರು ಕ್ಷೇತ್ರ ಮಹಾತ್ಮೆ
ಶ್ರೀ ಹಿರಿಯಡಕ ಮೇಳಓಂತಿಬೆಟ್ಟು ಪೇಟೆ – ಪವಿತ್ರ ಫಲ್ಗುಣಿ 
ಶ್ರೀ ಶನೀಶ್ವರ ಮೇಳ ಶ್ರೀ ಗಣಪತಿ ದೇವಸ್ಥಾನ,ಕುಳ್ಳಂಬಳ್ಳಿ 
ಶ್ರೀ ಸಿಗಂದೂರು ಮೇಳಆಲೂರು ಕ್ರಾಸ್, ಕಂಚಿನಕೊಡ್ಲು
ಶ್ರೀ ನೀಲಾವರ ಮೇಳ ಗಂಗಾವಿಶ್ವೇಶ್ವರ ದೇವಸ್ಥಾನದ ಬಳಿ, ನೀಲಾವರ    
ಶ್ರೀ ಬಾಚಕೆರೆ ಮೇಳಶ್ರೀ ಕ್ಷೇತ್ರ ನಾಳ – ಗುಣಸುಂದರಿ, ಪಾಪಣ್ಣ ವಿಜಯ 

ಶೇಣಿ ವಾಗ್ವೈಭವ – ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಾರಿಕೆಯ ತುಣುಕು – 2

ಇತ್ತ ಶೋಣಿತಪುರದಿ ದೈತ್ಯ ಕುಲ ಪುಂಗವನು
ಮತ್ತೆ ಓಲಗದಲ್ಲಿ ಚಿತ್ತದುಮ್ಮಳದಿ ||


ಕುಲೋನ್ನತಿ ನಮಗೆ ಹುಟ್ಟಿನಿಂದಲೇ ಬಂದಿದೆ. ದೈತ್ಯಕುಲ. ಆದರೆ ಅಷ್ಟಕ್ಕೇ ವ್ಯಕ್ತಿಯಾದಂತಹ ನಾನು ನನ್ನ ಔನ್ನತ್ಯವನ್ನು ಬೌದ್ಧಿಕವಾಗಿ ಅಂಗೀಕರಿಸಲಿಲ್ಲ. ಸ್ವಪ್ರಯತ್ನದಿಂದ, ನನ್ನ ಸಾಧನೆಯಿಂದ ದೈತ್ಯಕುಲದಲ್ಲಿ ಉತ್ತುಂಗವಾದಂತಹ ಶ್ರೇಯಸ್ಸನ್ನು ಸಂಪಾದಿಸುವುದಕ್ಕಾಗಿ ದೈತ್ಯ ಕುಲದವನಾಗಿಯೂ ದೈತ್ಯ ಕುಲಪುಂಗವ ನಾಗಿಯೂ ತಲೆ ಎತ್ತಿದೆ. ಆವಾಗ ಹೇಗೆ? ಮಿಕ್ಕವರಿಗೆಲ್ಲಾ ಒಂದು ದಾರಿಯಾದರೆ ಮದ ಬಂದ ಆನೆಗೆ ಕಾಡಿನಲ್ಲಿ ಅದರದ್ದೇ ಆದ ಹಾದಿ. ನನ್ನ ಔನ್ನತ್ಯಕ್ಕೆ ಇದೇ ಸರಿ ಅಂತ ನಾನು ಹೋದದ್ದೇ ದಾರಿ, ನನಗೆ ಮಿಕ್ಕವರು ಹೋದ ಹಾದಿ ಅಲ್ಲ. ಇಷ್ಟು ಸಂಪಾದಿಸಿದ್ದೇನೆ. ಆದರೆ ಏನು ಮಾಡೋಣ? ಪರೋಕ್ಷವಾಗಿ ನನ್ನ ತಮ್ಮನನ್ನು ಕೊಲ್ಲುವುದರ ಮೂಲಕ ಆ ಹರಿ ಪಂಥಾಹ್ವಾನವನ್ನೇ ಕೊಟ್ಟ. ಅದೊಂದು ನೋವು ಸೇಡು ತೀರಿಸಲಾಗದೆ ಇದ್ದಂತಹಾ ಒಂದು ಕಳಕಳಿ. ಇದು ನನ್ನ ಹೊಟ್ಟೆಯಲ್ಲಿ ಉರಿಯುತ್ತಾ ಇತ್ತು.

ಆದರೆ ಆ ಉರಿ ನಂದಿ ಆನಂದದ ತಂಪು ಕೊಡುವುದಕ್ಕಾಗಿಯೇ ನನಗೊಬ್ಬ ಅಪರೂಪದ ಮಗ ಹುಟ್ಟಿದ. ಈ ಪುತ್ರೋತ್ಸವದಲ್ಲಿ ನನ್ನ ತಮ್ಮನನ್ನು ಕೊಂದಂತಹ ಹರಿಯನ್ನು ನಾನು ಮರೆತುಬಿಟ್ಟೆ. ಸ್ವಲ್ಪ ಕಾಲ ಮರೆತುಬಿಟ್ಟೆ. ಇನ್ನು ಮರೆಯುವುದೇ ಒಳ್ಳೆಯದು. ಯಾಕೆ? ಅವನನ್ನು ಮರೆಯುವುದಕ್ಕಾಗಿಯೇ ನನಗೊಬ್ಬ ಮಗ. ಇವನನ್ನು ಕಂಡಾವಾಗ ಅವನ ನೆನಪೇ ನನಗಿಲ್ಲದೆ ಹೋಗುತ್ತದೆ. ಇದು ನನ್ನದದ್ದಾದ ತಪಸ್ಸಿನ ಫಲ. ಈ ಹಿಂದೆ ನಾನು ಪುತ್ರವಂತನೇ. ಆದರೆ ಈ ಮಗನಿಂದ ನನ್ನ ಅಂತಃಕರಣದಲ್ಲಿ ಏನು ಅನುಭವವಾಯಿತೋ ಇದಕ್ಕೆ ಬೇರೆ ಶಬ್ದ ಸಿಕ್ಕದೆ ‘ಪ್ರಹ್ಲಾದ’ ಎಂದು ಹೆಸರಿಟ್ಟೆ. ಅಂದರೇನು? ಪ್ರಕರ್ಷೇಣ ಸಂತೋಷವನ್ನು ತಂದವ. ಈ ಮಗ ಹುಟ್ಟಿದ ಮೇಲೆ ಅವ ಯಾಕೆ ಬೇಗ ಬೆಳೆಯುವುದಿಲ್ಲ. ಅಂತಲೇ ನನ್ನ ಉತ್ಸಾಹ.

ಯಥಾರ್ಥಕ್ಕಾದರೆ ನಾನು ಬಿಟ್ಟುಹೋದ ಸ್ಥಾನವನ್ನು ತುಂಬಬೇಕಾಗಿದ್ದರೆ ಅವನೇ ಸರಿ. ವಯಸ್ಸಿನಲ್ಲಿ ಚಿಕ್ಕವನಾದರೇನು? ಆದಕಾರಣ ಅವಸರದಲ್ಲಿ ಐದನೇ ವಯಸ್ಸಿಗೆ ಉಪನಯನವನ್ನೂ ಮಾಡಿದೆ. ಹಾಗುಂಟು ಶಾಸ್ತ್ರದಲ್ಲಿ ಎಂದು ನಮ್ಮ ಗುರುಗಳು ಹೇಳಿದ್ದಾರೆ. ಅಂತಃಕರಣದ ಬೆಳವಣಿಗೆಯನ್ನು ನೋಡಿ ವಯಸ್ಸನ್ನು ನಿರ್ಣಯಿಸಬೇಕೇ ಹೊರತು ದೇಹದ ಬೆಳವಣಿಗೆಯನ್ನು ನೋಡಿ ಅಲ್ಲ. ಹಾಗಾಗಿ ಐದು ವರ್ಷದಲ್ಲೇ ಉಪನಯನ ಸಂಸ್ಕಾರವನ್ನು ಮಾಡಿ ವಿದ್ಯಾಭ್ಯಾಸಕ್ಕೆಂದು ಗುರುವಿಗೆ ಒಪ್ಪಿಸಿಬಿಟ್ಟಿದ್ದೇನೆ. ಮಾತೃದೇವೋಭವ, ಪಿತೃದೇವೋಭವ ಎಂದು ಮನೆಯಲ್ಲೇ ಅವನಿಗೆ ಪಾಠವಾಗಿದೆ. ಆಚಾರ್ಯ ದೇವೋಭವವಾಗಿ ನನ್ನ ಹಾಗೆ ಅವನಿಗೂ ಗೊತ್ತಾಗಬೇಕು. ಹೊರಗೆ ದೇವರಿಲ್ಲ. ಇದ್ದರೆ ನಾನೇ. ಅಹಂ ಬ್ರಹ್ಮಾಸ್ಮಿ ಎಂದು. ಹಾಗೆ ಹುಡುಗ ಹೋಗಿದ್ದಾನೆ.

ಹುಡುಗ ಹತ್ತಿರ ಇದ್ದರೆ ಅವನ ವಿದ್ಯೆಗೆ ಪೆಟ್ಟು ಬರುತ್ತದೆಯಲ್ಲ ಎಂದು ನಾನು ಕಳಿಸಿದೆ. ಹುಡುಗ ಇಲ್ಲದಿದ್ದರೆ ತುತ್ತು ಅನ್ನ ನನಗೆ ರುಚಿಸುವುದಿಲ್ಲ. ಅಂತೂ ನಾವು ಬಹಳ ಪ್ರೀತಿಯನ್ನು ಇರಿಸಿದರೂ ನಮಗೆ ನೋವೇ. ವಿರೋಧವನ್ನು ಸಾಧಿಸಿದರೂ ನೋವೇ. ನನ್ನ ಹಣೆಬರಹ ಹೀಗಾಯಿತಲ್ಲಾ. ಈ ಹುಡುಗ ಹುಟ್ಟುವಲ್ಲಿಯ ವರೆಗೆ ಹರಿ ದ್ವೇಷದಲ್ಲಿಯೇ ನಾನು ತಿಂದ ಅನ್ನ ನನಗೆ ರುಚಿಯಾಗಲಿಲ್ಲ. ಈಗ ಇಮ್ಮಡಿ ಮೋಹ ಈ ಬಾಲಕನಲ್ಲಿ ಆದ ದೆಸೆಯಿಂದ ಈಗಲೂ ಸುಖವಿಲ್ಲ. ಆದರೆ ಒಂದು, ನಾರಾಯಣನನ್ನು ಹುಡುಕಿದೆ. ಹುಡುಕಿದೆ. ಹುಡುಕಿದೆ. ಆದರೆ ಗೋಚರವಾಗಲಿಲ್ಲ. ನನ್ನ ಮಗನನ್ನು ನಾನು ಹುಡುಕುವುದಕ್ಕೇನುಂಟು? ಒಮ್ಮೆ ಕಾಣಬೇಕು ಮಗನನ್ನು. ‘ಮಗ ಬರಲಿ’ ಎಂದು ಹೇಳಿದರೆ ಬರುವುದಲ್ಲವೇ? ಬರ್ತಾನೆ. ಬರ್ತಾನೆ… ಆದ ಕಾರಣ ಗುರುಗಳಿಗೆ ಹೇಳಿ ಕಳುಹಿಸಿದ್ದೇನೆ. ಸಂದರ್ಭ ಇದ್ದರೆ ಒಂದು ಘಳಿಗೆ ನಮ್ಮ ಮಗ ಬಂದು ಹೋಗಲಿ. ಬಂದಾನು… ಬಂದಾನು… ನೋಡೋಣ.