Wednesday, March 11, 2026
Home Blog Page 344

ಕೊನೆಗೂ ಗಾಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಸಾವು ನೋವುಗಳನ್ನು ಒಪ್ಪಿಕೊಂಡ ಚೀನಾ –  ಕೊಲ್ಲಲ್ಪಟ್ಟ 4  ಸೈನಿಕರ ವಿವರ ಬಹಿರಂಗ 

ಕಳೆದ ವರ್ಷ ಭಾರತದೊಂದಿಗೆ ನಡೆದ ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ತನ್ನ ನಾಲ್ಕು ಸೈನಿಕರನ್ನು ಕಳೆದುಕೊಂಡಿರುವುದನ್ನು ಚೀನಾ ಶುಕ್ರವಾರ ಮೊದಲ ಬಾರಿಗೆ ಒಪ್ಪಿಕೊಂಡಿದೆ.

ರಾಜ್ಯ ನಿಯಂತ್ರಣಕ್ಕೊಳಪಟ್ಟ ಮಾಧ್ಯಮವಾದ ಪೀಪಲ್ಸ್ ಡೈಲಿಯ ವರದಿಯ ಪ್ರಕಾರ, “ಕಳೆದ ಜೂನ್‌ನ ಗಡಿ ಸಂಘರ್ಷದಲ್ಲಿ ತ್ಯಾಗಕ್ಕೊಳಗಾದ ನಾಲ್ಕು ಚೀನೀ ಸೈನಿಕರಿಗೆ ಮರಣೋತ್ತರವಾಗಿ ಗೌರವ ಪ್ರಶಸ್ತಿಗಳು ಮತ್ತು ಪ್ರಥಮ ದರ್ಜೆ ಅರ್ಹತಾ ಉಲ್ಲೇಖಗಳನ್ನು ನೀಡಲಾಯಿತು ಎಂದು ಕೇಂದ್ರ ಮಿಲಿಟರಿ ಆಯೋಗ ಶುಕ್ರವಾರ ಪ್ರಕಟಿಸಿದೆ.

ಅವರನ್ನು ಮುನ್ನಡೆಸಿದ ಕರ್ನಲ್ ಗೆ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ಗೌರವ ಪ್ರಶಸ್ತಿಯನ್ನು ನೀಡಲಾಯಿತು. ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಕಳೆದ ವರ್ಷ ಗಾಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಬೀಜಿಂಗ್ 45 ಸೈನಿಕರನ್ನು ಕಳೆದುಕೊಂಡಿದೆ ಎಂದು ಹೇಳಿಕೊಂಡಿತ್ತು.

ಟಾಸ್ ವರದಿಯ ಪ್ರಕಾರ, “2020 ರ ಮೇ ಮತ್ತು ಜೂನ್ ತಿಂಗಳಲ್ಲಿ ಈ ಪ್ರದೇಶದಲ್ಲಿ ಚೀನೀ ಮತ್ತು ಭಾರತೀಯ ಪಡೆಗಳು ಘರ್ಷಣೆ ನಡೆಸಿದವು, ಇದರ ಪರಿಣಾಮವಾಗಿ ಕನಿಷ್ಠ 20 ಭಾರತೀಯ ಮತ್ತು 45 ಚೀನೀ ಸೈನಿಕರು ಸಾವನ್ನಪ್ಪಿದರು.

ಈ ಘಟನೆಗಳ ನಂತರ, ನವದೆಹಲಿ ಮತ್ತು ಬೀಜಿಂಗ್ ಈ ಪ್ರದೇಶದಲ್ಲಿನ ಪಡೆಗಳ ಸಾಂದ್ರತೆಯನ್ನು  ತಲಾ 50,000 ಸೈನಿಕರಷ್ಟು ಹೆಚ್ಚಿಸಿದೆ. ” ಅಮೆರಿಕದ ಗುಪ್ತಚರ ವರದಿಯ ಪ್ರಕಾರ, ಚೀನಾದ ಕಡೆಯಿಂದ ಸಾವನ್ನಪ್ಪಿದವರ ಸಂಖ್ಯೆ 35 ಆಗಿತ್ತು. 

ಪಾಂಗೊಂಗ್ ಸರೋವರ ಪ್ರದೇಶದಲ್ಲಿ ಸೇನೆಯ ಕಾರ್ಯಾಚರಣೆಯನ್ನು ನಿಷ್ಕ್ರಿಯಗೊಳಿಸುವ ಒಪ್ಪಂದದಿಂದ ಎರಡೂ ಕಡೆಯವರು ತಮ್ಮ ಹಂತ ಹಂತದ ನಿಯೋಜನೆಯನ್ನು “ಹಂತ ಹಂತವಾಗಿ, ಸಂಘಟಿತ ಮತ್ತು ಪರಿಶೀಲಿಸಿದ ರೀತಿಯಲ್ಲಿ” ನಿಲ್ಲಿಸಲಿದೆ ಎಂದು ಊಹಿಸಲಾಗಿತ್ತು.

ಉಭಯ ದೇಶಗಳು ಕಳೆದ ವರ್ಷ ಏಪ್ರಿಲ್-ಮೇ ತಿಂಗಳಿನಿಂದ ಪೂರ್ವ ಲಡಾಕ್‌ನ ಎಲ್‌ಎಸಿ ಉದ್ದಕ್ಕೂ ನಿಂತುಹೋಗಿರುವ ಹಲವಾರು ಸುತ್ತಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿವೆ.

ಪುತ್ತೂರು ಶ್ರೀಧರ ಭಂಡಾರಿ ನಿಧನ – ಯಕ್ಷಗಾನ ಕಲಾರಂಗ ಸಂತಾಪ

ತೆಂಕುತಿಟ್ಟಿನ ಪುಂಡುವೇಷಕ್ಕೆತನ್ನಅಚ್ಚರಿಯ ಪ್ರತಿಭೆಯ ಮೂಲಕ ಛಾಪನ್ನು ಮೂಡಿಸಿದ, ಪುತ್ತೂರು ಶ್ರೀಧರ ಭಂಡಾರಿ (76ವರ್ಷ) ಇಂದು (19-02-2021) ದೈವಾಧೀನರಾದರು.

10ನೇ ವರ್ಷಕ್ಕೆ ವೃತ್ತಿಮೇಳ ಸೇರಿ ನಿರಂತರ 6 ದಶಕಗಳ ಕಾಲ ವೃತ್ತಿಕಲಾವಿದರಾಗಿ ಯಕ್ಷಲೋಕದಲ್ಲಿ ತನ್ನ ಚುರುಕಾದ ನೃತ್ಯದಿಂದ ಅಭಿಮನ್ಯು, ಬಭ್ರುವಾಹನ, ಶ್ರೀಕೃಷ್ಣ, ಅಶ್ವತ್ಥಾಮ ಮುಂತಾದ ಪಾತ್ರಗಳನ್ನು ಮನೋಜ್ಞವಾಗಿ ಕಟ್ಟಿಕೊಟ್ಟ ಕಲಾವಿದರಾಗಿದ್ದರು.

ಧರ್ಮಸ್ಥಳ ಮೇಳವೊಂದರಲ್ಲೇ 4 ದಶಕಗಳಿಗಿಂತಲೂ ಹೆಚ್ಚುಕಾಲ ವೇಷಧಾರಿಯಾಗಿ ಕಲಾ ಸೇವೆಗೈದ ಇವರು ಈ ಬಾರಿಯ ಧರ್ಮಸ್ಥಳದ ಸೇವೆಯಾಟದಲ್ಲಿ ಕೊನೆಯದಾಗಿ ಕೃಷ್ಣನ ವೇಷವನ್ನು ಸೊಗಸಾಗಿ ನಿರ್ವಹಿಸಿದ್ದರು.

ಪುತ್ತೂರು ಹಾಗೂ ಕಾಂತಾವರ ಮೇಳಗಳನ್ನು ಆರಂಭಿಸಿ ತಲಾ 3 ವರ್ಷಗಳ ಕಾಲ ಮೇಳವನ್ನು ಮುನ್ನಡೆಸಿದರು. ಮಳೆಗಾಲದಲ್ಲಿ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಮೂಲಕ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಪ್ರದರ್ಶನ ನಡೆಸುತ್ತಿದ್ದರು.

ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹೆಚ್ಚಿನ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಶ್ರೀಧರ ಭಂಡಾರಿಯವರಿಗೆ ಸಂಸ್ಥೆಯು ಯಕ್ಷಗಾನ ಕಲಾರಂಗ ಪ್ರಶಸ್ತಿ ನೀಡಿ ಗೌರವಿಸಿತ್ತು.

ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಪ್ರಾರ್ಥಿಸಿ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗು ಕಾರ್ಯದರ್ಶಿ ಮುರಲಿ ಕಡೆಕಾರ್ ಇವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಆಟಗಾರರ ಹರಾಜು 2021 – ದಾಖಲೆ ಮೊತ್ತಕ್ಕೆ ಕ್ರಿಸ್ ಮೋರಿಸ್ ಹರಾಜು, ಕೃಷ್ಣಪ್ಪ ಗೌತಮ್ ಭಾರತೀಯ ದುಬಾರಿ ಆಟಗಾರ 

ಐಪಿಎಲ್ ಹರಾಜಿನಲ್ಲಿ ಕ್ರಿಸ್ ಮೋರಿಸ್ (ರಾಜಸ್ತಾನ್ ರಾಯಲ್ಸ್) ಇದುವರೆಗಿನ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ಆದರೆ ಐಪಿಎಲ್ 2021 ರ ಹರಾಜಿನಲ್ಲಿ ಕೃಷ್ಣಪ್ಪ ಗೌತಮ್ (ಚೆನ್ನೈ ಸುಪರ್ ಕಿಂಗ್ಸ್) ಭಾರತದ ಅತ್ಯಂತ ದುಬಾರಿ ಆಟಗಾರನಾದರು.

ಚೆನ್ನೈ ಸೂಪರ್ ಕಿಂಗ್ಸ್ ಚೇತೇಶ್ವರ ಪೂಜಾರ ಅವರನ್ನು ಐವತ್ತು ಲಕ್ಷ ರೂಪಾಯಿಗಳಿಗೆ ಖರೀದಿಸಿದೆ. ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ಇಪ್ಪತ್ತು ಲಕ್ಷಕ್ಕೆ ಖರೀದಿಸಿದೆ,   

ಈ ವರೆಗಿನ ಒಟ್ಟು ಹರಾಜಿನಲ್ಲಿ ಒಟ್ಟು 292 ಆಟಗಾರರನ್ನು ಸೇರಿಸಿಕೊಳ್ಳಲಾಗಿದೆ ಅವರಲ್ಲಿ 164 ಭಾರತೀಯ ಕ್ರಿಕೆಟ್ ಆಟಗಾರರು ಮತ್ತು 128 ವಿದೇಶೀ ಆಟಗಾರರು. 


ಕ್ರಿಸ್ ಮೋರಿಸ್ 16. 25 ಕೋಟಿ ರೂಪಾಯಿಗಳಿಗೆ ಹರಾಜಾದರು. ಅವರನ್ನು ರಾಜಸ್ತಾನ್ ರಾಯಲ್ಸ್ ಕೊಂಡುಕೊಂಡಿತು.  ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್ ಪಡೆಯಲು ಆರ್.ಸಿ.ಬಿ   14.25 ಕೋಟಿ ರೂಪಾಯಿಗಳನ್ನು ವೆಚ್ಚಮಾಡಿತ್ತು.

ಜ್ಯೇ ರಿಚರ್ಡ್ ಸನ್ 14 ಕೋಟಿ ರೂಪಾಯಿಗಳಿಗೆ ಕಿಂಗ್ಸ್ ಇಲೆವೆನ್ ಪಂಜಾಬಿನ ಪಾಲಾದರು. ಕೃಷ್ಣಪ್ಪ ಗೌತಮ್ ಅವರನ್ನು9.25 ಕೋಟಿ ಕೊಟ್ಟು ಚೆನ್ನೈ ಸೂಪರ್ ಕಿಂಗ್ಸ್ ಕೊಂಡುಕೊಂಡಿತು. 

ಹರಾಜಿನಲ್ಲಿ ಮಾರಾಟವಾದ ಟಾಪ್ ಫೈವ್ ಆಟಗಾರರು 

1. ಕ್ರಿಸ್ ಮೋರಿಸ್ – ರೂ. 16.25 ಕೋಟಿ (ರಾಯಲ್ಸ್)
2. ಕೈಲ್ ಜಮಿಸನ್ – ರೂ. 15 ಕೋಟಿ (ಆರ್‌ಸಿಬಿ)
3. ಗ್ಲೆನ್ ಮ್ಯಾಕ್ಸ್ ವೆಲ್ – ರೂ. 14.25 ಕೋಟಿ (ಆರ್‌ಸಿಬಿ)
4. ಜ್ಯೆ ರಿಚರ್ಡ್ಸನ್ – ರೂ. 14 ಕೋಟಿ (ಕಿಂಗ್ಸ್ ಇಲೆವೆನ್ ಪಂಜಾಬ್ )
5. ಕೆ.ಗೌತಮ್ – ರೂ. 9.25 ಕೋಟಿ (ಸಿಎಸ್‌ಕೆ)

ಪುತ್ತೂರು ಶ್ರೀಧರ ಭಂಡಾರಿ ನಿಧನಕ್ಕೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ.,)ದೇಲಂಪಾಡಿ ಇದರ ಪದಾಧಿಕಾರಿಗಳು ಹಾಗೂ ಸದಸ್ಯರಿಂದ ಸಂತಾಪ ಸೂಚನೆ 

ಪ್ರಖ್ಯಾತ ಯಕ್ಷಗಾನ ವೇಷದಾರಿ ಯಕ್ಷಗಾನ ರಂಗಸ್ಥಳದ ಅಭಿಮನ್ಯು ಎಂದೇ ಖ್ಯಾತರಾಗಿದ್ದ ಪುತ್ತೂರು ಶ್ರೀಧರ ಭಂಡಾರಿಯವರ ನಿಧನಕ್ಕೆ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ (ರಿ.,) ದೇಲಂಪಾಡಿ ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಸಂತಾಪ ಸೂಚನೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಮತ್ತು ಸಾಹಿತಿ, ವಿದ್ವಾಂಸ ಡಾ. ರಮಾನಂದ ಬನಾರಿ ಮತ್ತು  ಹಾಗೂ ಸಂಘದ ಸರ್ವಸದಸ್ಯರು

ಯಕ್ಷಗಾನದ ಅಗ್ರಮಾನ್ಯ ವೇಷಧಾರಿ ವಿದ್ಯಾವಿನಯ ಸಂಪನ್ನ ಕಲಾವಿದ ಶ್ರೀಧರ ಭಂಡಾರಿಯವರು ರಂಗಸ್ಥಳದಿಂದ ಶಾಶ್ವತವಾಗಿ ನಿರ್ಗಮಿಸಿದ ವಾರ್ತೆ ಅತ್ಯಂತ ವಿಷಾದವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇವೆ. ಕುಟುಂಬಕ್ಕೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲೆಂದು ಪ್ರಾರ್ಥಿಸುತ್ತೇವೆ. ಅವರ ಕೀರ್ತಿ ಚಿರಕಾಲ ಉಳಿಯಲಿ.” ಎಂದು ಪ್ರಾರ್ಥಿಸಿದ್ದಾರೆ. 

ಮೇಳಗಳ ಇಂದಿನ (19.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (19.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಕಳಸ ಸಮೀಪ ಹಳುವಳ್ಳಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣ – ಹಿರಣ್ಯಾಕ್ಷ, ಶ್ರೀನಿವಾಸ ಕಲ್ಯಾಣ 

ಕಟೀಲು ಒಂದನೇ ಮೇಳ = ಕಟೀಲು ಕ್ಷೇತ್ರ (1)

ಕಟೀಲು ಎರಡನೇ ಮೇಳ ==   ಬೊಂಡಾಲ ಬಂಟ್ವಾಳ  

ಕಟೀಲು ಮೂರನೇ ಮೇಳ= ಶಿವಕೃಪಾ ಆಡಿಟೋರಿಯಂ, ಪರ್ಪುಂಜ  ಪುತ್ತೂರು 

ಕಟೀಲು ನಾಲ್ಕನೇ ಮೇಳ  == ಸುಂಕದಕಟ್ಟೆ ಆರ್ಟ್ಸ್, ಸುಂಕದಕಟ್ಟೆ ಬಜಪೆ 

ಕಟೀಲು ಐದನೇ ಮೇಳ == ಮೇಲೆಕ್ಕಾರು, ಪೆರ್ಮುದೆ ವಯಾ ಬಜಪೆ 

ಕಟೀಲು ಆರನೇ ಮೇಳ == ಗಾಂಧಿನಗರ, ಮೂಡುಬಿದ್ರೆ 

ಮಂದಾರ್ತಿ ಒಂದನೇ ಮೇಳ  ==  ದೋರ್ ಗಲ್ಲು ಹಿರೇಕೊಡಿಗೆ ಕೊಪ್ಪ 

ಮಂದಾರ್ತಿ ಎರಡನೇ ಮೇಳ   ==   ನೀರ್ಜೆಡ್ಡು, ಹೆಗ್ಗುಂಜೆ ಕೂಡಾಟ 

ಮಂದಾರ್ತಿ ಮೂರನೇ ಮೇಳ  ==   ನೀರ್ಜೆಡ್ಡು, ಹೆಗ್ಗುಂಜೆ ಕೂಡಾಟ    

ಮಂದಾರ್ತಿ ನಾಲ್ಕನೇ ಮೇಳ   ==  ತೋಟದಬೆಟ್ಟು ಅಸೋಡು  

ಮಂದಾರ್ತಿ    ಐದನೇ ಮೇಳ  ==  ದುರ್ಗಾನಿಲಯ ಕುದ್ರೆಬೆಟ್ಟು ಉಪ್ಪೂರು 

ಶ್ರೀ ಹನುಮಗಿರಿ ಮೇಳ  ==  ಅಡ್ವೆ ಶ್ರೀ ಮಹಾಗಣಪತಿ ದೇವಸ್ಥಾನ – ಮಹಾಕಲಿ ಮಗಧೇಂದ್ರ  

ಶ್ರೀ ಸಾಲಿಗ್ರಾಮ ಮೇಳ == ಆಗುಂಬೆ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಕುಮಟಾ ಮಣಕಿ ಗ್ರೌಂಡ್ – ಸುಧನ್ವಾರ್ಜುನ, ಚಂದ್ರಾವಳಿ, ಸುದರ್ಶನ 

ಶ್ರೀ ಸುಂಕದಕಟ್ಟೆ ಮೇಳ  ==  ಕರ್ಪೆ ನೆಕ್ಲಾಜೆ – ಅಬ್ಬರದ ಬಬ್ಬರ್ಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಹಾಡಿಮನೆ ಆಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಹಾಡಿಮನೆ ಮುದೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಶಿವಪಾರ್ವತಿ ಸದನ, ರಾಮಮಂದಿರ ಹತ್ತಿರ, ಮುಖ್ಯ ರಸ್ತೆ ಉಪ್ಪಿನಕುದ್ರು 

ಶ್ರೀ ಪಾವಂಜೆ ಮೇಳ  ==  ಕಾಂತಾವರ ಅಂಬೋಡಿಮಾರ್ – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಅರ್ಪಾಲು ಕಮಲಶಿಲೆ 

ಕಮಲಶಿಲೆ ಮೇಳ ‘ಬಿ‘ == ಕೆರ್ಕಾಡು 

ಶ್ರೀ ಬಪ್ಪನಾಡು ಮೇಳ == ಚಿತ್ರಾಪು ಶಾಲಾ ವಠಾರ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ – ಶ್ರೀ ಶನೀಶ್ವರ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ == ಶಂಕರ ಮರಕಾಲರ ಮನೆ, ವಡ್ಡರ್ಸೆ 

ಶ್ರೀ ಸೌಕೂರು ಮೇಳ == ಕೆದೂರು ಧರ್ಮದಗೋಳಿ ಹಳೆಯಮ್ಮ – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಜಂಬಳ್ಳಿ ಸರ್ಕಲ್ ಹೊಸನಗರ – ಶ್ರೀ ದೇವಿ ಮಹಾತ್ಮೆ 

ಶ್ರೀ ಬೆಂಕಿನಾಥೇಶ್ವರ ಮೇಳ  == ಕಾರ್ಕಳ ಅಯ್ಯಪ್ಪನಗರ – ಸತ್ಯೊದ ಸ್ವಾಮಿ ಕೊರಗಜ್ಜ 

ಶ್ರೀ ಮಡಾಮಕ್ಕಿ ಮೇಳ == ಹಿರೆಬೆಟ್ಟು ಚಿಂಟಿಕೆರೆ – ಶಶಿಪ್ರಭಾ, ಕಂಸವಧೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಬಾರ್ಕೂರು ಹನೇಹಳ್ಳಿ ತೆಂಕುಮಕ್ಕಿ – ಸರ್ಪ ಶಪಥ 

ಶ್ರೀ ಹಿರಿಯಡಕ ಮೇಳ == ಗುಂಡ್ಯಡ್ಕ 5 ಸೆಂಟ್ಸ್ ಅಂಗನವಾಡಿ ಬಳಿ – ಮಾಯೊದ ಅಜ್ಜೆ  

ಶ್ರೀ ಶನೀಶ್ವರ ಮೇಳ == ಮಳಲು ತಾಯಿ ದೇವಸ್ಥಾನ ಮಣೂರು 

ಶ್ರೀ ಸಿಗಂದೂರು ಮೇಳ == ನಾಡಾ ಸಂಸಾಡಿ ಶುಭ ನಿಲಯ 

ಶ್ರೀ ನೀಲಾವರ ಮೇಳ  == ಗೋಪಾಲಕೃಷ್ಣ ನಗರ ಹೊಂಬಾಡಿ ಹುಣ್ಸೆಮಕ್ಕಿ 

ಶ್ರೀ ಮಂಗಳಾದೇವಿ ಮೇಳ == ಮೂಡುಶೆಡ್ಡೆ – ಬಾಲೆ ಮಾಣಿಮಾಂಧವೆ (ತುಳು)

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ == ದೆಮ್ಲಾಪುರ 

ಶ್ರೀ ಮೇಗರವಳ್ಳಿ ಮೇಳ ==  ನಿಲುವಾಗಿಲು – ಕುಲದೈವ ಪಂಜುರ್ಲಿ 

ಯಕ್ಷಾಗಸದ ಚಂದಿರ, ಯಕ್ಷರಂಗದ ಅಭಿಮನ್ಯು ಡಾ. ಪುತ್ತೂರು ಶ್ರೀಧರ ಭಂಡಾರಿ ಇನ್ನಿಲ್ಲ (Puttur Sridhara Bhandari no more)

ಈ ವರ್ಷ ಯಕ್ಷರಂಗಕ್ಕೆ ಅನಿರೀಕ್ಷಿತಗಳ ಮೇಲೆ ಅನಿರೀಕ್ಷಿತಗಳೇ ಸಂಭವಿಸುತ್ತಿವೆ. ಇದೀಗ ಮತ್ತೊಂದು ರಾತ್ರಿ ಆಘಾತದ ಸುದ್ದಿ ಬಂದಿದೆ. ಯಕ್ಷರಂಗದ ಅಭಿಮನ್ಯು, ಯಕ್ಷಾಗಸದಲ್ಲಿ ಚಂದಿರನಂತೆ ಬೆಳಗಿದ ಪ್ರಸಿದ್ಧ ತೆಂಕು ತಿಟ್ಟಿನ ಪ್ರಸಿದ್ಧ ಪುಂಡುವೇಷಧಾರಿಯಾಗಿದ್ದ ಡಾ. ಪುತ್ತೂರು ಶ್ರೀಧರ ಭಂಡಾರಿಯವರು ನಿನ್ನೆ  ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.

ಯಕ್ಷಗಾನ ಕ್ಷೇತ್ರದಲ್ಲಿ ಶ್ರೀಧರ ಭಂಡಾರಿಯವರ ಹೆಸರು ಕೇಳದವರಿಲ್ಲ.  ಓದಿದ್ದು ಕೇವಲ 5ನೇ ತರಗತಿ. ಆದರೆ ಯಾರೂ ಊಹಿಸದೆ ಇದ್ದ ಎತ್ತರಕ್ಕೆ ಏರಿ ಗೌರವ ಡಾಕ್ಟರೇಟ್ ಪದವಿಯನ್ನು ತನ್ನದಾಗಿಸಿಕೊಂಡ ಸಾಧಕ. 

ಯಕ್ಷಗಾನದ ಅಗ್ರಪಂಕ್ತಿಯ ಕಲಾವಿದರಲ್ಲೊಬ್ಬರಾದ ಶ್ರೀ ಬಳ್ಳಂಬೆಟ್ಟು ಶೀನಪ್ಪ ಭಂಡಾರಿ, ಶ್ರೀಮತಿ ಸುಂದರಿ ದಂಪತಿಗಳ ಪುತ್ರನಾಗಿ 1945ರಲ್ಲಿ ಜನನ. ಮನೆಯ ಪರಿಸರ ತುಂಬೆಲ್ಲಾ ಯಕ್ಷಗಾನ ಪರಂಪರೆಯ ಸುವಾಸನೆ ಘಮಘಮಿಸುತ್ತಿತ್ತು. ಈ ಕಲಾ ಸುಗಂಧದಿಂದ ಪ್ರೇರಿತನಾದ ಬಾಲಕ ಶ್ರೀಧರ ಭಂಡಾರಿ ಇಷ್ಟು ಎತ್ತರಕ್ಕೆ ಏರಿದ್ದು ಈಗ ಇತಿಹಾಸ.   ಶ್ರೀಧರ ಭಂಡಾರಿಯವರ ಪರಂಪರೆಯೇ ಯಕ್ಷಗಾನದ್ದು. ಅಜ್ಜ ಅಂದರೆ ತಂದೆಯವರ ಮಾವ ಬಳ್ಳಂಬಟ್ಟಿನ ಸಮೀಪದ ಜತ್ತಪ್ಪ ರೈಗಳು ಆ ಕಾಲದಲ್ಲಿ ದೊಡ್ಡ ಭಾಗವತರು.

ಭಾಗವತರಾದ ಮೈಂದಪ್ಪ ರೈಗಳು ಶ್ರೀಧರ ಭಂಡಾರಿಯವರ ತಂದೆಯವರಾದ ಶೀನಪ್ಪ ಭಂಡಾರಿಗಳ  ಭಾವ,  ಹೀಗೆ ಯಕ್ಷಗಾನದ ದೊಡ್ಡ ಸಂಬಂಧವೇ ಇತ್ತು. ತಂದೆಯವರಾದ ದಿ| ಶೀನಪ್ಪ ಭಂಡಾರಿಗಳು ಪುತ್ತೂರಿಗೆ ಬಂದು ನೆಲಸಿದರು. ಪುತ್ತೂರಿನಲ್ಲಿ ಮೊದಲಿಗೆ ಬಳ್ಳಂಬೆಟ್ಟು ಮೇಳ ಎಂಬ ಹೆಸರಿನಲ್ಲಿ ಮೇಳ ಮಾಡಿದ್ದರು. ಆ ನಂತರ ಆದಿ ಸುಬ್ರಹ್ಮಣ್ಯ ಮೇಳ ಎಂದು ಪ್ರಾರಂಭಿಸಿದರು.

ತುಂಬಾ ಕಲಾವಿದರು, ಶಿಷ್ಯಂದಿರು ಶೀನಪ್ಪ ಭಂಡಾರಿಯವರ ಗರಡಿಯಲ್ಲಿ ಕಲಿತು ಪಳಗಿದವರು. ಇವರ ಅಣ್ಣನನ್ನು ತಂದೆಯವರೇ ನಾಟ್ಯ ಕಲಿಸಿ ತಯಾರಿ ಮಾಡಿ ಯಕ್ಷಗಾನದಲ್ಲೇ ತೊಡಗುವಂತೆ ಮಾಡಿದ್ದರು. ಆದರೆ ಶ್ರೀಧರ ಭಂಡಾರಿಯವರನ್ನುಮಾತ್ರ ಯಕ್ಷಗಾನ ಬೇಡವೆಂದು ಶಾಲೆಗೆ ಕಳಿಸಿ ವಿದ್ಯಾವಂತನನ್ನಾಗಿ ಮಾಡಬೇಕೆಂಬ ಅಭಿಲಾಷೆ ಶೀನಪ್ಪ ಭಂಡಾರಿಯವರಿಗಿತ್ತು. ಆದರೆ ಆಟದ ವ್ಯಾಮೋಹ, ಯಕ್ಷಗಾನದ ಆಸಕ್ತಿಯಿಂದಾಗಿ ಬಾಲ್ಯದಲ್ಲಿರುವಾಗಲೇ ಯಕ್ಷಗಾನದ ಪ್ರಸಂಗ ಪುಸ್ತಕದ ಪದ್ಯಗಳನ್ನು ಬಾಯಿಪಾಠ ಮಾಡಿ ಹೇಳುತ್ತಿದ್ದ ಬಾಲಕ ಶ್ರೀಧರನಿಗೆ ಶಾಲೆಗೆ ಹೋಗುವಾಗಲೇ ಅಭಿಮನ್ಯು, ಕರ್ಣಪರ್ವ, ಗದಾಪರ್ವ, ಶೂರ್ಪನಖಾ ಮಾನಭಂಗ, ಇಂದ್ರಜಿತು ಕಾಳಗವೇ ಮೊದಲಾದ ಪ್ರಸಂಗದ ಪದ್ಯಗಳು ಬಾಯಿಪಾಠ ಬರುತ್ತಿತ್ತು.

ಆಟಕ್ಕೆ ಬರದಂತೆ ನಿರ್ಬಂಧಿಸಿದರೂ ಆಗಾಗ ಕದ್ದುಮುಚ್ಚಿ ಆಟ ನೋಡಲು ಹೋಗುತ್ತಿದ್ದರು. ಮುಚ್ಚೂರು ಮೇಳ ಎಂಬ ಮೇಳವಿತ್ತು. ಶೀನಪ್ಪ ಭಂಡಾರಿಯವರ ಬಳ್ಳಂಬೆಟ್ಟು ಮೇಳಕ್ಕೂ ಮುಚ್ಚೂರು ಮೇಳಕ್ಕೂ ಪುತ್ತೂರಿನಲ್ಲಿ ಒಂದು ಜೋಡಾಟ ನಡೆಯಿತು. ಆ ಸಮಯದಲ್ಲಿ ಮುಚ್ಚೂರು ಮೇಳದಲ್ಲಿ ಕ್ರಿಶ್ಚಿಯನ್ ಬಾಬು ಎಂಬ ಕಲಾವಿದರಿದ್ದರು. ಪಾಂಡವಾಶ್ವಮೇಧ ಪ್ರಸಂಗದಲ್ಲಿ ಬಭ್ರುವಾಹನ ಪಾತ್ರವನ್ನು ಕ್ರಿಶ್ಚಿಯನ್ ಬಾಬು ಮಾಡಿದ್ದರು. ಕ್ರಿಶ್ಚಿಯನ್ ಬಾಬು ಅವರ ಅದ್ಭುತ ನಾಟ್ಯವನ್ನು ನೋಡಿ ಜನರು ಬೆರಗಾಗಿ ‘ಏನು ನಾಟ್ಯ’ ಎಂದು ಉದ್ಘರಿಸಿದಾಗ ಬಾಲಕ ಶ್ರೀಧರ ಭಂಡಾರಿಯವರಿಗೆ ‘ನನಗೇಕೆ ಈ ಸಾಧನೆ ಸಿದ್ಧಿಸಲಾರದು, ಅವರಂತೆ  ನನಗೇಕೆ ಸಾಧ್ಯವಿಲ್ಲ’ ಎಂಬ ಹಠ ಮೂಡಿತು.

ಆದಕಾರಣ ಮನಸ್ಸಿನಲ್ಲೇ ಕಲ್ಪಿಸಿಕೊಂಡರೂ ತಂದೆಯವರೊಡನೆ ಹೇಳುವ ಧೈರ್ಯವಿರಲಿಲ್ಲ. ಆದರೆ ಮಗನ ಯಕ್ಷಗಾನದ ಆಸಕ್ತಿ, ಚರ್ಯೆಗಳನ್ನು ಗಮನಿಸಿದ ತಂದೆಯವರಾದ ಶೀನಪ್ಪ ಭಂಡಾರಿಯವರು, ‘ಏನು ಮಾಡುವುದು’ ಎಂದು ಆಲೋಚಿಸಿ ಪುತ್ತೂರಿನ ಭರತನಾಟ್ಯದ ಕಲಾವಿದ, ಗುರುಗಳಾಗಿದ್ದ ಕುದ್ಕಾಡಿ ವಿಶ್ವನಾಥ ರೈ ಅವರಲ್ಲಿ ಪ್ರಸ್ತಾಪಿಸಿದಾಗ ಅವರು ತಮ್ಮ ಮನೆಗೆ ಕಳುಹಿಸಿ ಕೊಡುವಂತೆ ಹೇಳಿದ್ದರು. 1960ರ ಸುಮಾರಿಗೆ ಆಗ ಪರ್ಲಡ್ಕದಲ್ಲಿದ್ದ ಕುದ್ಕಾಡಿ ವಿಶ್ವನಾಥ ರೈಗಳ ಮನೆಗೆ ಪ್ರತಿದಿನ ಬೆಳಿಗ್ಗೆ ಭರತನಾಟ್ಯ ಕಲಿಯಲು ಹೋಗುತ್ತಿದ್ದರು.

ಪ್ರತಿನಿತ್ಯವೂ ಪಾಠ ಆಗುತ್ತಿತ್ತು. ಭರತನಾಟ್ಯದ ತರಗತಿಗಳು ಮುಗಿದ ನಂತರ ಗುರುಗಳ ಜೊತೆಗೆ ಭರತನಾಟ್ಯ ಪ್ರದರ್ಶನ ಹಾಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಕಾಳಿಂಗಮರ್ದನದ ಕೃಷ್ಣನೇ ಮೊದಲಾದ ಹಲವಾರು ಪಾತ್ರಗಳ ಭರತನಾಟ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಮ್ಮೆ ಕೇರಳದ ಎರ್ನಾಕುಲಂನಲ್ಲಿ ಒಂದು ಯಕ್ಷಗಾನ ಕಾರ್ಯಕ್ರಮ ನಿಗದಿಯಾಗಿತ್ತು. ಆ ದಿನ ಭಂಡಾರಿಯವರು ತಮ್ಮ ತಂದೆಯವರ ಜೊತೆ ಎರ್ನಾಕುಲಂಗೆ ಹೋಗಿದ್ದರು. ಪ್ರಥಮವಾಗಿ ಅಲ್ಲಿ ಕೃಷ್ಣನ ಪಾತ್ರಮಾಡಿದರು. ಗೆಜ್ಜೆ ಕಟ್ಟಿದ ದಿನ ಎರ್ನಾಕುಲಂನಲ್ಲಿ ಆಗಿತ್ತು.

ಸುಮಾರು ಒಂದೆರಡು ವರ್ಷಗಳ ವರೆಗೆ ತಂದೆಯವರ ಜೊತೆಯೇ ವೇಷಗಳನ್ನು ಮಾಡುತ್ತಿದ್ದರು . ಹೀಗೆ ಯಕ್ಷಗಾನ ವೇಷಗಳನ್ನು ಮಾಡಿ ಅನುಭವವಾಗಿತ್ತು. ತುಂಬಾ ತಿಳುವಳಿಕೆ ಬೇಕಾದ ಪಾತ್ರಗಳಲ್ಲದಿದ್ದರೂ ಬಾಲ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ‘ತ್ರಿಜನ್ಮ ಮೋಕ್ಷ’ ಪ್ರಸಂಗದಲ್ಲಿ ಪ್ರಹ್ಲಾದನ ಪಾತ್ರಕ್ಕೆ ಸೂಕ್ತ ಹುಡುಕಾಟದಲ್ಲಿದ್ದ ಧರ್ಮಸ್ಥಳ ಮೇಳದ ಶೇಣಿ ಗೋಪಾಲಕೃಷ್ಣ ಭಟ್ಟರು, ವಿಟ್ಲ ಗೋಪಾಲಕೃಷ್ಣ ಜೋಷಿ, ಪಾತಾಳ ವೆಂಕಟ್ರಮಣ ಭಟ್ಟರೇ ಮೊದಲಾದವರು ಇವರ  ತಂದೆಯವರನ್ನು ಸಂಪರ್ಕಿಸಿ ಧರ್ಮಸ್ಥಳ ಮೇಳದ ಸುಳ್ಯದ ಜಾತ್ರೆಯ ಆಟಕ್ಕೆ ಶ್ರೀಧರ ಭಂಡಾರಿಯವರು ಆ ಮೇಳವನ್ನು ಸೇರಿಕೊಳ್ಳುವಂತೆ ಮಾಡಿದರು.

ಹೀಗೆ 1963ರಲ್ಲಿ ಧರ್ಮಸ್ಥಳ ಮೇಳ ಸೇರಿದರು. ಅಲ್ಲಿಂದ ಮೊದಲ್ಗೊಂಡು ದಿಗ್ಗಜರ ಜೊತೆ ಶ್ರೀಧರ ಭಂಡಾರಿಯವರ ತಿರುಗಾಟ ಪ್ರಾರಂಭವಾಯಿತು. ಶೇಣಿ, ಪಾತಾಳ, ವಿಟ್ಲ ಜೋಷಿ, ಹೊಸಹಿತ್ಲು ಮಹಾಲಿಂಗ ಭಟ್, ಕುಡಾನ ಗೋಪಾಲಕೃಷ್ಣ ಭಟ್ ಮೊದಲಾದವರ ಮಾರ್ಗದರ್ಶನದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಹೋದರು.  ಅದೇ ಸಮಯದಲ್ಲಿ ಭಂಡಾರಿಯವರ ತಂದೆಯವರ ಗುರುಗಳೂ ಆದ ಕುರಿಯ ವಿಠಲ ಶಾಸ್ತ್ರಿಗಳಲ್ಲಿಗೆ ಹೋಗಿ ಸುಮಾರು ಆರು ತಿಂಗಳುಗಳ ಕಾಲ ಅಲ್ಲಿದ್ದು ಅವರಿಂದ ಯಕ್ಷಗಾನದ ಹೆಚ್ಚಿನ ತರಬೇತಿಯನ್ನು ಪಡೆದರು.

ಭರತನಾಟ್ಯವನ್ನು ಕಲಿತವನಾಗಿದ್ದರೂ ಅದನ್ನು ಪ್ರದರ್ಶಿಸುವ ಹಾಗೂ ಪ್ರಯೋಗ ಮಾಡುವ ಅವಕಾಶ ಅಷ್ಟಾಗಿ ಆಗದಿದ್ದರೂ ಭರತನಾಟ್ಯದ ಕಲಿಕೆಯಿಂದ ಅನುಕೂಲ ತುಂಬಾ ಆಗಿತ್ತು. ಅಭಿನಯಕ್ಕೆ ಹಾಗೂ ಸಣ್ಣ ಸಣ್ಣ ಹೆಜ್ಜೆಗಾರಿಕೆಯನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಭಾರತನಾಟ್ಯದ ಕಲಿಕೆ ಶ್ರೀಧರ ಭಂಡಾರಿಯವರಿಗೆ ಸಹಾಯವಾಯಿತು.

ಶ್ರೀಧರ ಭಂಡಾರಿಯವರ ಮಳೆಗಾಲದ ತಿರುಗಾಟದ ಮೇಳವಾದ  ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯು  ಕರ್ನಾಟಕದಾದ್ಯಂತ ಹೆಚ್ಚಿನ ಎಲ್ಲಾ ಕಡೆಗಳಿಗೆ ಮಳೆಗಾಲದ ತಿರುಗಾಟವನ್ನು ವಿಸ್ತರಿಸಿ ತಿರುಗಾಟದ ತನ್ನ 29 ವರ್ಷವನ್ನು ಪೂರೈಸಿತ್ತು.  

1980ರಲ್ಲಿ ಪುತ್ತೂರು ಮೇಳ ಮಾಡಿದ್ದರು. ಮೊದಲ ಎರಡು ಮೂರು ವರ್ಷಗಳು ಆರ್ಥಿಕವಾಗಿ ಮೇಳ ಮುನ್ನಡೆಯ ಹಾದಿಯಲ್ಲಿತ್ತು. ಆದರೆ ಕ್ರಮೇಣ ಕಲೆಕ್ಷನ್ ಕಡಿಮೆಯಾಗಿ ಆರ್ಥಿಕವಾಗಿ ಕೈಸುಟ್ಟುಕೊಂಡರು. ಕಲಾವಿದರ ಸಂಘಟನೆ ಒಳ್ಳೆಯದಿತ್ತು. ಒಳ್ಳೆಯ ಹೆಸರೂ ಇತ್ತು. ಆದರೆ ನಿರ್ವಹಣೆಗೆ ಆರ್ಥಿಕ ಬಲ ಇರಲಿಲ್ಲ. ಆಮೇಲೆ 1987ರಲ್ಲಿ ಕಾಂತಾವರ ಮೇಳ ಮಾಡಿದರು.

1990ರಲ್ಲಿ ಮೇಳದ ನಿರ್ವಹಣೆಯಿಂದ ನಷ್ಟವನ್ನನುಭವಿಸಿ ಬೇಸತ್ತು ಸ್ವಂತ ಮೇಳವನ್ನು ಕೈಬಿಟ್ಟು ಪುನಃ ಧರ್ಮಸ್ಥಳ ಮೇಳಕ್ಕೆ ಸೇರಿದರು. ಅಲ್ಲಲ್ಲಿ ನಾಟ್ಯ ತರಗತಿಗಳು, ಮಳೆಗಾಲದ ಪ್ರದರ್ಶನಗಳು ಮೊದಲಾದುವುಗಳು ಭಂಡಾರಿಯವರಿಗೆ ಹೆಸರು ತಂದುಕೊಟ್ಟಿತು. ಆರ್ಥಿಕವಾಗಿಯೂ ಸ್ವಲ್ಪ ಸ್ವಲ್ಪವೇ ಚೇತರಿಸಿಕೊಂಡರು. ಈಗಂತೂ ಮಳೆಗಾಲದಲ್ಲಿ ಇವರ ಯಕ್ಷಗಾನ ತಂಡವನ್ನು ನೋಡಿಯೇ ಅನೇಕ ಕಾರ್ಯಕ್ರಮಗಳು ಸಿಗುತ್ತವೆ. ಸಮಯಾವಕಾಶವಿಲ್ಲದಷ್ಟು ಆಟಗಳು ಸಿಗುತ್ತವೆ. ಸಮಯ, ದಿನಗಳ ಹೊಂದಿಸುವಿಕೆ ಕಷ್ಟಸಾಧ್ಯವಾಗಿ ಕೆಲವನ್ನು ಬಿಟ್ಟದ್ದೂ ಉಂಟು ಎಂದು ಶ್ರೀಧರ ಭಂಡಾರಿಯವರು ಹೇಳುತ್ತಿದ್ದರು. 

“ನನ್ನನ್ನು  ರಂಗದಲ್ಲಿ ಬೆಳೆಸಿದ್ದು ಹೊಸಹಿತ್ಲು ಮಹಾಲಿಂಗ ಭಟ್ಟರು” ಎಂದು ಅವರನ್ನು ನೆನಪಿಸಿಕೊಳ್ಳುತ್ತಿದ್ದ  ಶ್ರೀಧರ ಭಂಡಾರಿಯವರು ಪುತ್ತೂರಿನಲ್ಲಿ ಎರಡು ಮೂರು ಕಡೆ ನಾಟ್ಯ ತರಗತಿಗಳನ್ನು ನಡೆಸುತ್ತಿದ್ದರು. ಮುಂಬಯಿಯಲ್ಲಿ ಹಲವಾರು ಕಡೆ ನಾಟ್ಯ ನಿರ್ದೇಶನ, ತರಗತಿಗಳನ್ನು ಮಾಡಿದ್ದಾರೆ. 

ಯಕ್ಷಗಾನದಲ್ಲಿ ಒಬ್ಬ ವ್ಯಕ್ತಿಯಾಗಿ ಏನೆಲ್ಲಾ ಸಾಧನೆಗಳನ್ನು ಮಾಡಬಹುದೆಂದು ಇತರ ಕಲಾವಿದರಿಗೆ ತೋರಿಸಿಕೊಟ್ಟ ಒಬ್ಬ ಮಹಾನ್ ಕಲಾವಿದ ಶ್ರೀಧರ ಭಂಡಾರಿಯವರು ಈಗ ನಮ್ಮೊಂದಿಗಿಲ್ಲ ಎನ್ನುವುದು ಎಂಬುದು ಅತೀವ ದುಃಖವನ್ನು ನೀಡುವ ವಿಚಾರ. ಅವರಂತಹ ಅನರ್ಘ್ಯ ರತ್ನವನ್ನು ಕಳೆದುಕೊಂಡು ಯಕ್ಷರಂಗ ಬಡವಾಗಿದೆ. ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ನೀಡಲೆಂದು ಸಮಸ್ತ ಯಕ್ಷಾಭಿಮಾನಿಗಳ ಪರವಾಗಿ ಪ್ರಾರ್ಥನೆ.  

ಲಂಕಾದಹನ-ಪ್ರಮೀಳಾರ್ಜುನ- ಕನಕಾಂಗಿ ಕಲ್ಯಾಣ – ಮಂದರ್ತಿ ಮೇಳದ ಯಕ್ಷಗಾನ ಬಯಲಾಟ

ಮಂದರ್ತಿ ಮೇಳದ ಯಕ್ಷಗಾನ ಬಯಲಾಟವು  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ಮಂಗಳೂರು ಇಲ್ಲಿ  ನಾಡಿದ್ದು  ದಿನಾಂಕ 20-2-2021ರಂದು ಶನಿವಾರ  ರಾತ್ರಿ 8.30ರಿಂದ ಬೆಳಗಿನ ತನಕ ನಡೆಯಲಿದೆ. 
ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮೇಳ, ಮಂದರ್ತಿ

 ಪ್ರಸಂಗಗಳು – ಲಂಕಾದಹನ-ಪ್ರಮೀಳಾರ್ಜುನ- ಕನಕಾಂಗಿ ಕಲ್ಯಾಣ


 ಸ್ಥಳ : ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕಾವೂರು, ಮಂಗಳೂರು.


 ದಿನಾಂಕ:  20-2-2021, ಶನಿವಾರ. ರಾತ್ರಿ 8.30ರಿಂದ. 

ಕಲಾಭಿಮಾನಿಗಳಿಗೆ ಆದರದ ಸ್ವಾಗತ.  ಆಟದ ನಡುವೆ ಭಾಷಣ, ಸನ್ಮಾನ ಇತ್ಯಾದಿ ತಡೆಗಳಿರುವುದಿಲ್ಲ. ಮತ್ತು ಪ್ರೇಕ್ಷಕರಿಗೆ ಶೌಚಾಲಯ ವ್ಯವಸ್ಥೆ ಇದೆ ಹಾಗೂ ಬಯಲಾಟವು ದೇವಾಲಯದ ಹೊರಾಂಗಣದಲ್ಲಿ ನಡೆಯುತ್ತದೆ ಎಂದು ಆಯೋಜಕರಾದ ಶ್ರೀ ದೇವು ಹನೆಹಳ್ಳಿ, ಶ್ರೀಮತಿ ಗೀತಾ ಹನೆಹಳ್ಳಿ ಮತ್ತು ಕುಟುಂಬದವರು ತಿಳಿಸಿದ್ದಾರೆ.

ರಾಜ್ಯಮಟ್ಟದ ಆರನೆಯ ಅರೆಹೊಳೆ ನಾಟಕೋತ್ಸವ – 18.02.2021ರಿಂದ 22-02-2021ರ ವರೆಗೆ 

18.02.2021 ಗುರುವಾರ
ರಂಗಪಯಣ, ಬೆಂಗಳೂರು  ಇವರಿಂದ ಶ್ರೀನಿವಾಸ ವೈದ್ಯರ ಕಥೆಗಳ ಆಧಾರಿತ ನಾಟಕ ‘ಶ್ರದ್ಧಾ’
ನಿ- ರಾಜ್ ಗುರು
ರಾಜ್ ಗುರು ಅವರಿಗೆ ಅರೆಹೊಳೆ ರಂಗಭೂಮಿ ಪ್ರಶಸ್ತಿ‌ಪ್ರದಾನ

19.02.2021, ಶುಕ್ರವಾರ
ಸೌಗಂಧಿಕಾ ರಂಗ ತಂಡ, ಪುತ್ತೂರು ಇವರಿಂದ ರವೀಂದ್ರನಾಥ ಠಾಗೋರರ ಸಣ್ಣ ಕಥೆಗಳ ಆಧಾರಿತ ನಾಟಕ
‘ಲಿವಿಂಗ್ & ದ ಡೆಡ್’
ನಿ- ಪ್ರವೀಣ್ ಎಡಮಂಗಲ
ಅರೆಹೊಳೆ ಯುವ ರಂಗ ಸನ್ಮಾನ – ಪೃಥ್ವಿ ಎಸ್ ರಾವ್

20-02-2021, ಶನಿವಾರ

ಮಂದಾರ (ರಿ) ಬ್ರಹ್ಮಾವರ ಅಭಿನಯಿಸುವ ಕನ್ನಡ ನಾಟಕ ‘ಕೊಳ್ಳಿ’
ರ-ಜಿ ಎಸ್ ಭಟ್, ಸಾಗರ. ನಿ- ರೋಹಿತ್ ಎಸ್ ಬೈಕಾಡಿ
ಅರೆಹೊಳೆ ಯುವ ರಂಗ ಸನ್ಮಾನ- ಪ್ರಶಾಂತ್ ಉದ್ಯಾವರ

21-02-2021,ಬಾನುವಾರ
ಲೋಗೋಸ್ ಥಿಯೇಟರ್ ಟ್ರೂಪ್, ರೆ.ಫಾ.ಆಲ್ವಿನ್ ಸೆರಾವೋ ರಚಿಸಿದ  ಕೊಂಕಣಿ ನಾಟಕ ‘ಗೀತ್’
ರಂಗದಲ್ಲಿ- ಕ್ರಿಸ್ಟೋಫರ್ ನೀನಾಸಂ/ಝೀನಾ ಬ್ರ್ಯಾಗ್ಸ್
ಅರೆಹೊಳೆ ಯುವ ರಂಗ ಸನ್ಮಾನ- ಕ್ಲೆನ್ ವಿನ್ ಫೆರ್ನಾಂಡಿಸ್

22-02-2021,ಸೋಮವಾರ
ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇವರಿಂದ ಭಾವನಾ ಕೆರೆಮಠ ಅಭಿನಯಿಸುವ ಏಕವ್ಯಕ್ತಿ ನಾಟಕ ‘ಅಹಲ್ಯಾ’
ನಿ- ರವಿರಾಜ್ ಹೆಚ್ ಪಿ
ಅರೆಹೊಳೆ ಯುವ ರಂಗ ಸನ್ಮಾನ- ವಿಜಯ್ ಮಯ್ಯ ಐಲ

ಇದೇ ದಿನ ಅರೆಹೊಳೆ ಪ್ರತಿಷ್ಠಾನದ ವೆಬ್ ಸೈಟ್ ಲೋಕಾರ್ಪಣೆ

ಪ್ರತೀ ನಾಟಕಕ್ಕೂ ಪ್ರವೇಶ ಉಚಿತ

ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವಳದ ಜಾತ್ರೆ – ನಾಳೆ (19.01.2021) ಸಾಂಸ್ಕೃತಿಕ ಕಾರ್ಯಕ್ರಮ, ರಥೋತ್ಸವ ಮತ್ತು ಸುಡುಮದ್ದು ಸೇವೆ 

ಪುತ್ತೂರಿಗೆ ಸಮೀಪದ ಕಬಕ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದ ರಥೋತ್ಸವ ಕಾರ್ಯಕ್ರಮ ನಿನ್ನೆ 17.01.2020 ರಂದು ಆರಂಭವಾಗಿದೆ.

ಈ ಕಾರ್ಯಕ್ರಮ  17.01.2020ರಿಂದ 20.01.2021ರ ತನಕ ನಡೆಯಲಿದೆ. ಪ್ರತಿದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.  

ನಾಳೆ 19.01.2021ರಂದು ರಥೋತ್ಸವ ಮತ್ತು ಸುಡುಮದ್ದು ಸೇವೆ ನಡೆಯಲಿದೆ. 

ಕೊನೆಯ ದಿನ ಅಂದರೆ  20.01.2021ರಂದು ದೂಮಾವತಿ ಗುಳಿಗ ದೈವಗಳ ತಂಬಿಲ ಸೇವೆ, ಭಂಡಾರ ತೆಗೆಯುವುದು ಮತ್ತು ದೈವಗಳ ನೇಮ ನಡೆಯಲಿದೆ. 

ಸೂಚನಾ ಫಲಕದ ಬುಡದಲ್ಲಿಯೇ ತ್ಯಾಜ್ಯದ ರಾಶಿ – ಕಸ ಎಸೆಯುತ್ತಿರುವವರು ಯಾರು? ವೀಡಿಯೊ ನೋಡಿ 

‘ಇಲ್ಲಿ ಯಾವುದೇ ಭಿತ್ತಿಪತ್ರಗಳನ್ನು ಅಂಟಿಸಬಾರದು’ ಎಂಬ ಸೂಚನೆಯುಳ್ಳ ಬರಹದ ಸಮೀಪದಲ್ಲಿಯೇ ಭಿತ್ತಿಪತ್ರಗಳನ್ನು ಅಂಟಿಸುತ್ತಾರೆ. ಇಲ್ಲಿ ಮೂತ್ರ ಶಂಕೆ ಮಾಡಬಾರದು ಎಂದು ಬರೆದ ಬರಹದ ಬುಡದಲ್ಲಿಯೇ ಮೂತ್ರಬಾಧೆ ತೀರಿಸಿಕೊಳ್ಳುತ್ತಾರೆ. ಇದು ಕೆಲವು ಜನರ ವಿಕೃತ ಮನೋಭಾವ.

ನಿಜವಾಗಿ ನೋಡಿದರೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹಾ ಕೆಲಸಗಳನ್ನು ಮಾಡಬಾರದು ಎಂದು ತಿಳುವಳಿಕೆಯುಳ್ಳವರಿಗೆ ಅರ್ಥ ಆಗಬೇಕು. ಅದಕ್ಕೆ ಸೂಚನೆಯ ಅಗತ್ಯವಿಲ್ಲ.

ಆದರೆ ಸೂಚನೆಯನ್ನು ನೋಡಿಯೂ ನೋಡದವರಂತೆ ಅದನ್ನು ಉಲ್ಲಂಘಿಸುತ್ತಾರೆ ಎಂದಾದರೆ ಅದು ಉದ್ಧಟತನ. ಇಂತಹಾ ಘಟನೆಗಳಿಗೆ ನಿದರ್ಶನಗಳು ಹೇರಳ.  ಇಲ್ಲಿ ಅದಕ್ಕೊಂದು ಸಾಕ್ಷಿ.  

ಮಡಿಕೇರಿ -ಮಂಗಳೂರು ಹೆದ್ದಾರಿಯಲ್ಲಿ ಮಾಣಿ ಪೇಟೆಯ ಸಮೀಪ ರಸ್ತೆ ಬದಿಯಲ್ಲಿ ಸೂಚನಾ ಫಲಕವೊಂದನ್ನು ಅಳವಡಿಸಿದ್ದಾರೆ. “ನಾಗನ ಸಾನ್ನಿಧ್ಯ ಇರುವುದರಿಂದ ತ್ಯಾಜ್ಯ ವಸ್ತುಗಳನ್ನು ಎಸೆಯಬಾರದು” ಎಂದು ಸ್ಪಷ್ಟವಾಗಿ ಫಲಕದಲ್ಲಿ  ಉಲ್ಲೇಖಿಸಿದ್ದಾರೆ.

ಆದರೂ ಸೂಚನಾ ಫಲಕದ ಬುಡದಲ್ಲಿಯೇ ತ್ಯಾಜ್ಯದ ರಾಶಿ ಬಂದು ಬಿದ್ದಿದೆ.(ವೀಡಿಯೋ ನೋಡಿ) ನಾಗನ ಬಗ್ಗೆ ಭಯ ಭಕ್ತಿಯಿರುವ ಆಸ್ತಿಕ ಬಂದವರು ಯಾರೂ ಈ ಕೆಲಸ ಮಾಡಲು ಸಾಧ್ಯವಿಲ್ಲ. ಅಕ್ಕಪಕ್ಕದಲ್ಲಿ ಕಸ, ತ್ಯಾಜ್ಯಗಳಿಲ್ಲ. ಈ ಬೋರ್ಡಿನ ಬುಡದಲ್ಲಿ ಮಾತ್ರ ಕಾಣುತ್ತಿದೆ. ಹಾಗಾದರೆ ಇಲ್ಲಿ ಈ ಕೆಲಸ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಈ ಪ್ರದೇಶದ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಾ ಇದೆ.