Saturday, August 29, 2026
Home Blog Page 34

ಲಾಟರಿಯಲ್ಲಿ ಬಂತು 75 ಲಕ್ಷ – ಮೂರು ತಿಂಗಳ ನಂತರ ಆಕ್ಸಿಡೆಂಟ್ ರೂಪದಲ್ಲಿ ಸಾವು ಹುಡುಕಿಕೊಂಡು ಬಂತು!

ಮೂರು ತಿಂಗಳ ಹಿಂದೆ 75 ಲಕ್ಷ ರೂಪಾಯಿ ಲಾಟರಿ ಗೆದ್ದಿದ್ದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ.

ಕೊಚ್ಚಿ: ಮೂರು ತಿಂಗಳ ಹಿಂದೆ ಕೇರಳ ಲಾಟರಿಯಲ್ಲಿ ಪ್ರಥಮ ಬಹುಮಾನವಾಗಿ 75 ಲಕ್ಷ ರೂಪಾಯಿ ಗೆದ್ದಿದ್ದ ವ್ಯಕ್ತಿಯೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾನೆ.

ಈತನನ್ನು ಕಡಾಯಿರುಪ್ಪು ಮನಾಯತ್ ಹೌಸ್‌ನ ಎಂ ಸಿ ಯಾಕೋಬ್ ಎಂದು ಗುರುತಿಸಲಾಗಿದೆ.

ಕೊಳಂಚೇರಿ ಸಮೀಪದ ಮೂಸರಿಪಾಡಿ ಎಂಬಲ್ಲಿ ಸೋಮವಾರ ಅಪಘಾತ ಸಂಭವಿಸಿದೆ.

ಅಂಗಡಿ ಕಡೆಗೆ ತಿರುಗುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿದೆ. ಅವರನ್ನು ಕೋಲೆಂಚೇರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.

ನವೆಂಬರ್ 5ರಿಂದ ಚಿಟ್ಟಾಣಿ ಸಪ್ತಾಹ


ಕಳೆದ 16 ವರ್ಷಗಳಿಂದ ಚಿಟ್ಟಾಣಿ ಅಭಿಮಾನಿ ಬಳಗ ಆಯೋಜಿಸುತ್ತಾ ಬಂದ ಚಿಟ್ಟಾಣ ಸಪ್ತಾಹವು ಈ ವರ್ಷ ನವೆಂಬರ್ 5ರಿಂದ 11ರ ವರೆಗೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.

ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನವೆಂಬರ್ 5 ರಂದು ಸಂಜೆ 6.30 ಗಂಟೆಗೆ ಉದ್ಘಾಟಿಸಲಿದ್ದಾರೆ.

ವೀರಾಂಜನೇಯ ಯಕ್ಷಮಿತ್ರ ಮಂಡಳಿ ಮತ್ತು ಅತಿಥಿ ಕಲಾವಿದರ ಸಹಯೋಗದಲ್ಲಿ ಪ್ರತೀ ದಿನ ಸಂಜೆ 6.30 ಗಂಟೆಗೆ ಆರಂಭವಾಗುವ ಚಿಟ್ಟಾಣ ಸಂಸ್ಮರಣಾ ಸಪ್ತಾಹದಲ್ಲಿ

ಅನುಕ್ರಮವಾಗಿ ಶ್ರೀಮತಿ ಪರಿಣಯ, ಪಟ್ಟಾಭಿಷೇಕ, ಸತ್ಯಹರಿಶ್ಚಂದ್ರ, ಧರ್ಮಾಂಗದ ಧಿಗ್ವಿಜಯ, ನೃಗರಾಜ ಚರಿತ್ರೆ, ತರಣ ಸೇನ ಕಾಳಗ, ದಕ್ಷಯಜ್ಞ ಮತ್ತು ಶ್ವೇತಕುಮಾರ ಚರಿತ್ರೆ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ ಎಂದು ಅಭಿಮಾನಿ ಬಳಗದ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಎಂ. ಗೋಪಿಕೃಷ್ಣ ರಾವ್ ತಿಳಿಸಿದ್ದಾರೆ.

“ಸಮೀರ್ ನನ್ನ ಜೀವನವನ್ನು ಹಾಳು ಮಾಡಿದ್ದಾನೆ” ಎಂಬ ಬರಹವಿದ್ದ ಮಹಿಳೆಯ ಚೀಟಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಪತ್ತೆ – ಹೆತ್ತವರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾದ ಅಗತ್ಯ

“ಸಮೀರ್ ನನ್ನ ಜೀವನವನ್ನು ಹಾಳು ಮಾಡಿದ್ದಾನೆ” ಎಂಬ ಬರಹವಿದ್ದ ಮಹಿಳೆಯ ಚೀಟಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದೆ.

ಈ ಪ್ರಕರಣವು, ಹೆತ್ತವರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತದೆ.

ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕುತೂಹಲಕಾರಿ ಚೀಟಿಯೊಂದು ಪತ್ತೆಯಾದ ಪ್ರಕರಣ ನಡೆದಿದೆ.

ಈ ಚೀಟಿಯನ್ನು ಮಹಿಳೆಯೊಬ್ಬಳು ಬರೆದಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಈ ಚೀಟಿಯಲ್ಲಿ ಏನಿದೆ ಎಂದು ನೋಡೋಣ.

“ಸಮೀರ್ ಅನ್ನೋವನು ನನ್ನ ಜೀವನ ಹಾಳು ಮಾಡಿದ್ದಾನೆ. ಇವತ್ತು ನಾನು, ನನ್ನ ಮಗಳು ಬೀದಿಯಲ್ಲಿ ಇದ್ದೇವೆ. ಅವನ ಜೀವನ ಕೂಡಾ ಹಾಳು ಆಗಬೇಕು. ಅವನಿಗೆ ಮದುವೆ ಆಗಲು ಹುಡುಗಿ ಸಿಗಬಾರದು. ಓ ದೇವರೇ, ಇದು ನನ್ನ ಪ್ರಾರ್ಥನೇ….'” ಎಂದು ಈ ಚೀಟಿಯಲ್ಲಿ ಬರೆಯಲಾಗಿದೆ.

ಈ ಚೀಟಿಯನ್ನು ಯಾರು ಬರೆದು ಹುಂಡಿಯಲ್ಲಿ ಹಾಕಿದ್ದಾರೆ ಎಂದು ಪತ್ತೆಯಾಗಿಲ್ಲ, ಅದರಲ್ಲಿ ಯಾವುದೇ ಹಸ್ತಾಕ್ಷರಗಳಿಲ್ಲ.

ಈ ಘಟನೆಯ ಬಗ್ಗೆ ಹಿಂದೂ ಸಂಘಟನೆಗಳು ಪ್ರತಿಕ್ರಿಯೆ ನೀಡಿವೆ. ವಿಶ್ವ ಹಿಂದೂ ಪರಿಷತ್, ಭಜರಂಗದಳ, ಮಾತೃಶಕ್ತಿ ಹಾಗೂ ದುರ್ಗವಾಹಿನಿ ಸಂಘಟನೆಗಳ ಪುತ್ತೂರು ಘಟಕಗಳು ಯಾರಿಗಾದರೂ ಅನ್ಯಾಯವಾಗಿದ್ದರೆ ತಮ್ಮನ್ನು ಸಂಪರ್ಕಿಸುವಂತೆ ಸೂಚನೆ ನೀಡಿವೆ.

ವಿವೇಕಾನಂದ ಕಾಲೇಜಿನ ಬಿಸಿಎ ವಿಭಾಗದಿಂದ “ಆರ್ಡಿನೋ” ಕಾರ್ಯಗಾರ – ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಕಾಲೇಜಿನ ಬಿಸಿಎ ವಿಭಾಗದಿಂದ “ಆರ್ಡಿನೋ” ಕಾರ್ಯಗಾರ.

ಪುತ್ತೂರು: ದಿನಾಂಕ 28-10-2024ನೇ ಸೋಮವಾರದಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಕಲಾವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ) ಕಾಲೇಜಿನ ಬಿಸಿಎ ವಿಭಾಗದ ವಿದ್ಯಾರ್ಥಿಗಳಿಂದ ಶಾಲೆಯ ವಿದ್ಯಾರ್ಥಿಗಳಿಗೆ “ಆರ್ಡಿನೋ” ಎನ್ನುವ ಕಾರ್ಯಾಗಾರವು ನಡೆಯಿತು.

ವಿವೇಕಾನಂದ ಕಲಾವಾಣಿಜ್ಯ ಹಾಗೂ ವಿಜ್ಞಾನ (ಸ್ವಾಯತ್ತ ) ಕಾಲೇಜಿನ ಬಿಸಿಎ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ ಹಾಗೂ ಉಪನ್ಯಾಸಕ ಕೀರ್ತನ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಕಾರ್ಯಾಗಾರವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಈ ಒಂದು ದಿನದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರೋಗ್ರಾಮಿಂಗ್, ಡಿಸಿಷನ್ ಮೇಕಿಂಗ್ ಸ್ಟೇಟ್ ಮೆಂಟ್ಸ್ ಮತ್ತು ಲೂಪಿಂಗ್ ಸ್ಟೇಟ್ ಮೆಂಟ್ಸ್ ಗಳ ಬಗೆಗೆ ಅರಿವು ಮೂಡಿಸಿದರು.

8ನೇ ಮತ್ತು 9ನೇ ತರಗತಿಯ ಆಸಕ್ತ 40 ವಿದ್ಯಾರ್ಥಿಗಳ ತಂಡ ಭಾಗವಹಿಸಿದ್ದು, ಉಳಿದ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ತರಬೇತಿಯನ್ನು ಆಯೋಜಿಸಲಾಗುವುದು.

ಶಾಲಾ ವಿಜ್ಞಾನ ವಿಭಾಗದ ಶಿಕ್ಷಕ-ಶಿಕ್ಷಕಿಯರು ಸಹಕರಿಸಿದರು.

ಕಾಸರಗೋಡಿನ ನೀಲೇಶ್ವರಂನಲ್ಲಿ ಪಟಾಕಿ ಸಂಗ್ರಹ ಪ್ರದೇಶಕ್ಕೆ ಬೆಂಕಿ; ಗಂಭೀರ ಗಾಯಗೊಂಡ ಹಲವರು ಮಂಗಳೂರು ಆಸ್ಪತ್ರೆಗೆ ಶಿಫ್ಟ್

ಸಾಂದರ್ಭಿಕ ಚಿತ್ರ

ಕಾಸರಗೋಡು: ನೀಲೇಶ್ವರದ ಅಂಜೂತಂಬಳಂ ವೀರೇರ್ಕಾವು ತೆಯ್ಯಂಕೆಟ್ಟು ಮಹೋತ್ಸವದ ವೇಳೆ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಹಲವರು ಗಾಯಗೊಂಡಿದ್ದಾರೆ.

ಹಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ.

ಪಟಾಕಿಯ ಕಿಡಿಗಳು ಬೆಂಕಿ ಹೊತ್ತಿಕೊಂಡಿವೆ ಎಂದು ನಂಬಲಾಗಿದೆ.

ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆ ಮತ್ತು ನೀಲೇಶ್ವರಂ ಮತ್ತು ಕಾಞಂಗಾಡ್‌ನ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇದರಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲವು ಮಂದಿ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.

ಚೆಂಡೆವಾದಕ ಕೋಟ ಶಿವಾನಂದರಿಗೆ ಕಾಳಿಂಗ ನಾವಡ ಪ್ರಶಸ್ತಿ

ಕಲೆಯ ಮೂಲಸ್ವರೂಪ ಕಲುಷಿತಗೊಳ್ಳಬಾರದು : ಡಾ. ಆರ್.ಕೆ. ಪದ್ಮನಾಭ

ಪ್ರಶಸ್ತಿಗೆ ಕಲಾವಿದ ಅರ್ಜಿ ಹಾಕುವುದಲ್ಲ. ಪ್ರಭಾವದಿಂದ ಕೊಂಡುಕೊಳ್ಳುವುದಲ್ಲ. ಪ್ರತಿಭೆಯನ್ನು ನೋಡಿ ಗುರ್ತಿಸಿ ಕೊಡುವುದೇ ನಿಜವಾದ ಪ್ರಶಸ್ತಿ.  ನಮ್ಮ ನಾಡಿನ ಹೆಮ್ಮೆಯ ಯಕ್ಷಗಾನ ಕಲೆಯನ್ನು ಜೀವಂತವಿರಿಸಿ ಮುಂದಿನ ಪೀಳಿಗೆಗೆ ದಾಟಿಸುತ್ತಿರುವ ಕಲಾಕದಂಬ ಸಂಸ್ಥೆ ಹಿರಿಯ ಪ್ರತಿಭಾನ್ವಿತ ಕಲಾವಿದರನ್ನು ಗುರ್ತಿಸಿ ಗೌರವಿಸುವ ಮೂಲಕ ಮಹತ್ತರ ಕೆಲಸ ಮಾಡುತ್ತಿದೆ ಎಂದು ನಾಡು ಕಂಡ ಅಪ್ರತಿಮ ದ್ವನಿಯ ಗಾಯಕ ಖ್ಯಾತ ಸಂಗೀತ ವಿದ್ವಾಂಸರಾದ ಡಾ. ಆರ್.ಕೆ. ಪದ್ಮನಾಭ ನುಡಿದರು.

ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಕಲಾಸಂಘದ ವೇದಿಕೆಯಲ್ಲಿ ಹಿರಿಯ ಚಂಡೆ ವಾದಕ ಶ್ರೀ ಶಿವಾನಂದ ಕೋಟ ಇವರಿಗೆ, ಕಲಾಕದಂಬ ಆರ್ಟ್ ಸೆಂಟರ್ ಸಂಸ್ಥೆಯ 2024 ರ ಸಾಲಿನ ’’ಕಾಳಿಂಗ ನಾವಡ ಪ್ರಶಸ್ತಿ”ಯನ್ನು ಪ್ರದಾನಿಸಿ ಮಾತನಾಡಿದರು. ನಮ್ಮ ಈ ಜಾನಪದ ಸಾಂಪ್ರದಾಯಿಕ ಕಲೆಗಳು ತಮ್ಮ ಮೂಲ ಸ್ವರೂಪದಲ್ಲೇ ಇರಬೇಕು. ಪಾಶ್ಚಾತ್ಯ ಸಂಗೀತ ಬೆರೆಸದೆ ಶುದ್ದ ರೂಪದಲ್ಲಿರಿಸಿ ಕೊಳ್ಳುವುದು ಅತ್ಯಗತ್ಯ  ಎಂದು ಅಭಿಪ್ರಾಯಪಟ್ಟರು.

ಬೆಳ್ಳಿ ತಟ್ಟೆ, 15 ಸಾವಿರ ನಗದು ಸೇರಿದಂತೆ ಪ್ರಶಸ್ತಿ ಪತ್ರ ಸ್ವೀಕರಿಸಿ ಮಾತನಾಡಿದ ಶಿವಾನಂದ ಅವರು ತಮ್ಮನ್ನು ಮೇಳದಲ್ಲಿ ಈ ಮಟ್ಟಕ್ಕೆ  ಬೆಳೆಯುವುದಕ್ಕೆ ಕಾರಣರಾದ ನಾವಡರನ್ನು ಬಾವುಕರಾಗಿ ನೆನೆಯುತ್ತಾ ಇಂದು ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ತಮ್ಮ ಭಾಗ್ಯ ಎಂದರು.

ತಮ್ಮ ಇಂದಿನ ಸಾಧನೆಗೆ ಕಾರಣ ತಂದೆ ತಾಯಿಯರ ಪ್ರೋತ್ಸಾಹ ಮತ್ತು ಯಕ್ಷಗಾನ ಗುರುಗಳಾದ ಎಂ.ಎನ್.ಮದ್ಯಸ್ಥರು  ಕೊಟ್ಟ ಯಕ್ಷಶಿಕ್ಷಣ ಎಂದು ಸ್ಮರಿಸಿಕೊಂಡರು. 

 ಪ್ರಾಸ್ತಾವಿಕ ಮಾತನಾಡಿದ ಕಲಾ ಕದಂಬ ಆರ್ಟ್ ಸೆಂಟರ್ ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು  ಕಾಳಿಂಗ ನಾವಡರು ಅಳಿದ ಮೇಲೂ ಉಳಿದು ಇಂದಿನ ಪೀಳಿಗೆಗೂ ಯಕ್ಷಗಾನದ ವಿಚಾರದಲ್ಲಿ ಸ್ಪೂರ್ತಿಯಾದವರು. ಕಳೆದ 15 ವರುಷಗಳಿಂದ ನಾವಡರ ನೆನಪಿನಲ್ಲಿ ಪ್ರಶಸ್ತಿ ನೀಡುತ್ತಿರುವ ಸಂಸ್ಥೆ ಮ್ವೆಸೂರು ಗಂಗೂಬಾಯಿ ವಿಶ್ವವಿದ್ಯಾಲಯದ ಒಡಂಬಡಿಕೆಯೊಂದಿಗೆ ಯಕ್ಷಗಾನ ಕಲೆಯಲ್ಲಿ ಇಂದು ಡಿಪ್ಲೊಮೋ ಸರ್ಟಿಪಿಕೆಟ್‌ ಕೋರ್ಸ ಆರಂಭಿಸಿದೆ ಎಂದರು. 

ನಾವಡರ ನೆನಪು ಉಳಿಸುವ ಒಂದು ಪುತ್ಥಳಿ ಸ್ಥಾಪನೆಯಾಗಬೇಕೆಂಬ ಮುರಳೀಧರ ನಾವಡರ ಆಶಯಕ್ಕೆ ಸ್ಪಂಧಿಸಿ ಮಾತನಾಡಿದ ಕುಂದಾಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಕಿರಣಕುಮಾರ್‌ ಕೊಡ್ಗಿ ಅವರು ಸೂಕ್ತ ಯೋಜನೆಯನ್ನ ಸಿದ್ಧಪಡಿಸಿಕೊಂಡು ಮುನ್ನಡೆಯೋಣ ಎಂಬ ಭರವಸೆಯ ಮಾತನಾಡಿದರು. 

ಚಲನ ಚಿತ್ರ ಪತ್ರಕರ್ತರಾದ ಶ್ರೀ ಗಣೇಶ್ ಕಾಸರಗೋಡು ಮಾತನಾಡುತ್ತಾ ಚಲನ ಚಿತ್ರದಲ್ಲಿ ಶಂಕರ್‌ ನಾಗ್‌ರಂತೆ ನಾವಡರು ಕಿರಿಯ ವಯಸ್ಸಿನಲ್ಲೇ ಮಹತ್ತರ ಸಾದನೆ ಮಾಡಿದ ಮೇರುಕಂಠದ ಭಾಗವತರು ಎಂದರು.

ಯುವ ವಿಪ್ರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಕೃಷ್ಣಮೂರ್ತಿ ಅಡಿಗ, ಕಾಳಿಂಗ ನಾವಡರ  ಸಹೋದರ ಗಣಪಯ್ಯ ನಾವಡ, ಸಹೋದರಿ ಸುಶೀಲ ಉರಾಳ, ಕಲಾ ಕದಂಬ ಆರ್ಟ್ ಸೆಂಟರ್ ನ ಗೌರವ ಅಧ್ಯಕ್ಷರಾದ ಶ್ರೀ ದೇವರಾಜ ಕರಬ ವಿಶ್ವನಾಥ ಉರಾಳ ಕಾರ್ಯಕ್ರಮದಲ್ಲಿ,ಉಪಸ್ಥಿತರಿದ್ದರು.

ಮುರಳೀಧರ ನಾವಡರ ಶಿಷ್ಯರ ಹಾಡುಗಳು, ಕುಮಾರಿ ಮಧುಮಿತ ರವೀಂದ್ರ ಹಾಗೂ ಭೂಮಿ ಶೆಟ್ಟಿ ಅವರ ಭರತನಾಟ್ಯ, ಹೊಸ್ತೋಟ ಮಂಜುನಾಥ ಭಾಗವತರ ತೀರಾ ಅಪರೂಪದ ರಾಮಾಯಣ ಯಕ್ಷಗಾನ ಪ್ರಸಂಗ ಕಾಲನೇಮಿ ಕಾಳಗ ತುಂಬಿದ ಸಭಾಂಗಣದ ಪ್ರೇಕ್ಷಕರನ್ನು ರಂಜಿಸಿತು.

ಕನಕಾಂಗಿ ಕಲ್ಯಾಣ, ಪ್ರಶಸ್ತಿ ಪ್ರದಾನ

ಸರ್ಪಂಗಳ ಸ್ಮಾರಕ ಪ್ರಶಸ್ತಿ ಪ್ರದಾನ.

ಉಡುಪಿ:ಜೀವ ವಿಮಾ ಅಧಿಕಾರಿಗಳಾಗಿ ನಿವೃತ್ತರಾಗಿದ್ದ,ಕಲಾಪ್ರೇಮಿ ಸರ್ಪಂಗಳ ಸುಬ್ರಮಣ್ಯ ಭಟ್ ಸ್ಮರಣೆಯಲ್ಲಿ ಪ್ರತೀ ವರ್ಷ ಆಯೋಜಿಸುತ್ತಾ ಬಂದ ಸರ್ಪಂಗಳ ಯಕ್ಷೋತ್ಸವ,ಅಕ್ಟೋಬರ್ 27, ಭಾನುವಾರ ಯಕ್ಷಗಾನ ಕಲಾರಂಗದ ಐ.ವೈ.ಸಿ.ಸಭಾಂಗಣದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಕಟೀಲು ಮೇಳದ ಹಿರಿಯ ಭಾಗವತರಾದ ಪದ್ಯಾಣ ಗೋವಿಂದ ಭಟ್ ಇವರನ್ನು ಸರ್ಪಂಗಳ ಸುಬ್ರಮಣ್ಯ ಭಟ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚೌಕಿ ಸಹಾಯಕರಾಗಿ ಐದು ದಶಕ ಸೇವೆ ಸಲ್ಲಿಸಿದ ಕಾಟುಕುಕ್ಕೆ ಗೋವಿಂದ ನಾಯ್ಕ ಇವರಿಗೆ ಸರ್ಪಂಗಳ ಕಲಾ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಯಕ್ಷಗಾನ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಈರ್ವರನ್ನು ಸನ್ಮಾನಿಸಿದರು.ಕಾರ್ಯಕ್ರಮದ ಪ್ರಾಯೋಕರಾದ ಡಾ. ನರೇಂದ್ರ ಶೆಣೈ, ಮತ್ತು ಡಾ.ಶೈಲಜಾ ಭಟ್ ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ನಿರ್ವಹಿಸಿದ್ದರು. ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಂಡಿತು.

ಸರ್ಪಂಗಳ ಯಕ್ಷೋತ್ಸವ ಕಾರ್ಯಕ್ರಮ – ಪದ್ಯಾಣ ಗೋವಿಂದ ಭಟ್ಟರಿಗೆ ಸರ್ಪಂಗಳ ಪ್ರಶಸ್ತಿ, ಸರ್ಪಂಗಳ ಪುರಸ್ಕಾರಕ್ಕೆ ಗೋವಿಂದ ನಾಯ್ಕ್ ಕಾಟುಕುಕ್ಕೆ

ಸರ್ಪಂಗಳ ಯಕ್ಷೋತ್ಸವ ಕಾರ್ಯಕ್ರಮ

ಪ್ರತಿ ವರ್ಷದಂತೆ ಈ ಬಾರಿಯ ಸರ್ಪಂಗಳ ಯಕ್ಷೋತ್ಸವ ಕಾರ್ಯಕ್ರಮವು ಅಕ್ಟೋಬರ್ 27, 2024 ರಂದು ಸಂಜೆ 4.00 ಗಂಟೆಗೆ ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ & ರಿಸರ್ಚ್ ಸೆಂಟರ್‌ನಲ್ಲಿ ಜರಗಲಿದೆ.

ಈ ಸಂದರ್ಭದಲ್ಲಿ ಸರ್ಪಂಗಳ ಪ್ರಶಸ್ತಿಯನ್ನು ಕಟೀಲು ಮೇಳದ ಭಾಗವತರಾದ ಶ್ರೀ ಪದ್ಯಾಣ ಗೋವಿಂದ ಭಟ್ ಹಾಗೂ ಸರ್ಪಂಗಳ ಪುರಸ್ಕಾರವನ್ನು ನೇಪಥ್ಯ ಕಲಾವಿದರಾಗಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಗೋವಿಂದ ನಾಯ್ಕ್ ಕಾಟುಕುಕ್ಕೆ ಇವರಿಗೆ ಪ್ರದಾನ ಮಾಡಲಾಗುವುದು.

ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಕನಕಾಂಗಿ ಕಲ್ಯಾಣ ಪ್ರಸ್ತುತಗೊಳ್ಳಲಿದೆ ಎಂದು ಸರ್ಪಂಗಳ ಯಕ್ಷೋತ್ಸವದ ಪ್ರವರ್ತಕರಾದ ಡಾ. ಶೈಲಜಾ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ

‘ವಿಂಶತಿ ಸಂಭ್ರಮ’ದಲ್ಲಿ ಯಕ್ಷಸಿರಿ ಕಲಾ ವೇದಿಕೆ ಖಂಡಿಗೆ ಮೂಲೆ ಬನ್ನಡ್ಕ

ಕಲೆ ಯಾವುದೇ ಇರಬಹುದು, ಅದರಲ್ಲಿ ಸರ್ವ ಸಮರ್ಪಣಾ ಭಾವದಿಂದ ಅರ್ಥಾತ್ ಭಕ್ತಿ ಎಂಬ ಭಾವವನ್ನು ಪ್ರಧಾನ ಲಕ್ಷ್ಯವಾಗಿರಿಸಿ ತೊಡಗಿಸಿಕೊಂಡಾಗ ಒಂದು ವಿಶಿಷ್ಟವಾದ ಪ್ರಾಪ್ತಿ ಸಿದ್ಧಿಸುತ್ತದೆ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ. ಪ್ರಚಲಿತದಲ್ಲಿರುವ ಎಲ್ಲಾ ಕಲಾ ಪ್ರಕಾರಗಳನ್ನು ಗಮನಿಸಿದಾಗ ಒಂದು ವಿಶಿಷ್ಟವಾದ ಬೆರಗು, ವಿಸ್ಮಯಗಳನ್ನು ತನ್ನಲ್ಲಿ ಅಡಕಗೊಳಿಸಿ ಸರ್ವ ಜನರಿಗೆ ಅತೀವ ಆನಂದವನ್ನೂ, ಮನುಕುಲದ ಅಭ್ಯುದಯದ ಚರಮ ಲಕ್ಷ್ಯವನ್ನೂ ತೋರ್ಪಡಿಸುವ ಒಂದು ಅದ್ಭುತವಾದ ಕಲೆ ಎಂದರೆ ಅದು ಯಕ್ಷಗಾನ.


ಆಂಗಿಕ, ವಾಚಿಕ ,ಸಾತ್ವಿಕ, ಮತ್ತು ಆಹಾರ್ಯ ಇವು ಯಕ್ಷಗಾನದ ಪ್ರಧಾನ ಅಂಶಗಳೆಂದು ವಿದ್ವಾಂಸರು ಖಚಿತವಾಗಿ ವಿಶದಪಡಿಸಿದ್ದಾರೆ.
ಇಂತಹ ರಮ್ಯಾದ್ಬುತ ಕಲೆ ಯಕ್ಷಗಾನದಲ್ಲಿ ಎಷ್ಟೆಷ್ಟೋ ಖ್ಯಾತನಾಮ ಕಲಾವಿದರು ವಚೋವಿಲಾಸದಿಂದಲೂ ಅದ್ಭುತ ರಂಗ ನಿರ್ವಹಣೆಯಿಂದಲೂ ಇತಿಹಾಸವನ್ನು ಸೃಷ್ಟಿಸಿದ್ದಾರೆ.

ನಾವು ಗಮನಿಸಬೇಕಾದ ಒಂದು ಅಂಶ ಓರ್ವ ವರ್ಧಿಷ್ಣು ಕಲಾವಿದ ಅಥವಾ ಈ ಕಲಾ ಕ್ಷೇತ್ರದಲ್ಲಿ ಅನುಪಮವಾದ ಕೊಡುಗೆಯನ್ನು ನೀಡಿದ ಕಲಾವಿದ ಈ ಎರಡನ್ನೂ ತೌಲನಿಕ ನೆಲೆಯಲ್ಲಿ ನೋಡಿದರೆ ಇಬ್ಬರದೂ ಸಮಾನ ದೃಷ್ಟಿಕೋನ. ಅಂದರೆ ಕಲೆಯಲ್ಲಿ ತಮ್ಮ ಬೊಗಸೆಗೆ ದಕ್ಕುವಷ್ಟನ್ನು ಪಡೆದೇ ತೀರಬೇಕೆಂಬ ತೀವ್ರ ಹಪಹಪಿಕೆ. ಇದೊಂದು ಏಕಮುಖವಾದ ಸಾಧನಾಪಥ. ಇದನ್ನು ತಪ್ಪೆಂದೋ ಪ್ರಮಾದವೆಂದೋ ಗುರುತಿಸಲಿಕ್ಕೆ ಬರುವುದಿಲ್ಲ. ಇದು ದೀರ್ಘಕಾಲೀನವಾದ ಅವರ ಆಶೋತ್ತರಗಳನ್ನು ಬಿಂಬಿಸುತ್ತದೆ ಎನ್ನುವುದು ಮುಖ್ಯ.

ಈ ಕಲಾ ಮಾಧ್ಯಮದಲ್ಲಿ ಮತ್ತೊಂದು ವಿಧದ ಕಲಾ ಆರಾಧನೆ ವಿರಳ ವರ್ಗದಲ್ಲಿ ಕಂಡು ಬರುತ್ತದೆ. ಇಂತಹ ಕಲಾ ಆರಾಧಕರು ವೈಯಕ್ತಿಕ ನೆಲೆಯಲ್ಲಿ ಯೋಚಿಸದೆ ಸಮಷ್ಠಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ಎಸಗುವವರು . ಇದೊಂದು ರೀತಿಯ ಕಲೆಯ ಮೇಲಣ ಭಕ್ತಿ ಮತ್ತು ತಾದಾತ್ಮ್ಯ. ಕಲೆಯನ್ನು ತಾನು ಮಾತ್ರ ಆರಾಧಿಸಿದರೆ ,ಸವಿದರೆ ಸಾಲದು ,ಹತ್ತಾರು ಜನರಿಗೆ ಕಲೆಯ ಸ್ವಸ್ವರೂಪ ಗಮನಕ್ಕೆ ಬರಬೇಕು ಎಂಬ ದೃಷ್ಟಿಕೋನ ಪ್ರಧಾನವಾಗಿರುತ್ತದೆ.

ಈ ದಿಸೆಯಲ್ಲಿ ನಾನು ಯೋಚನೆಯನ್ನು ಮಾಡುವಾಗ ನನ್ನ ಗಮನಕ್ಕೆ ಬಂದ ಒಂದು ಸಂಸ್ಥೆ ಯಕ್ಷಗಾನ ಕಲೆಯ ಕುರಿತಾಗಿ ಅತೀವವಾದ ಭಕ್ತಿ ಶ್ರದ್ಧೆಯ ಮೂಲಕ ಅದನ್ನು ನಾಲ್ದೆಸೆಗೂ ಪಸರಿಸುವ ಕೈಂಕರ್ಯಯನ್ನು ಅತ್ಯಂತ ವ್ಯವಸ್ಥಿತವಾಗಿ ಕೈಗೊಂಡ ಯಕ್ಷ ಕಲಾವೇದಿಕೆ ಒಂದಿದ್ದರೆ ಅದು ಯಕ್ಷ ಸಿರಿ ಕಲಾವೇದಿಕೆ ಖಂಡಿಗೆ ಮೂಲೆ ಎಂಬುದು. ಇದು ಸುಳ್ಯ ತಾಲೂಕಿನ ಐವರ್ನಾಡು ಸಮೀಪದ ಖಂಡಿಗೆ ಮೂಲೆ ಎಂಬ ಪ್ರದೇಶವಾಗಿರುತ್ತದೆ.

ಇಲ್ಲಿ ವಾಸ್ತವ್ಯವಿರುವ ಶ್ರೀ ಶ್ಯಾಮ್ ಭಟ್ ಖಂಡಿಗೆ ಮೂಲೆ ಎಂಬವರು ಸರಕಾರಿ ಉದ್ಯೋಗಿಯಾಗಿದ್ದವರು. ಎಲ್ಲ ಕಲೆಗಳ ಕುರಿತು ಪ್ರೀತಿ ಗೌರವ ಇರುವ ಅವರು ಸರ್ವಾಂಗೀಣ ಕಲೆ ಯಕ್ಷಗಾನದ ಬಗ್ಗೆ ವಿಶೇಷವಾದ ಒಲವನ್ನು ಹೊಂದಿದವರು. ಇದು ಅಷ್ಟಕ್ಕೆ ಸೀಮಿತವಾದ ವಿಚಾರವಲ್ಲ. ಯಕ್ಷಗಾನದ ವಿಭಿನ್ನ ಆಖ್ಯಾನಗಳನ್ನು ವೀಕ್ಷಿಸುತ್ತ ಇದ್ದ ಅವರಿಗೆ ಇಂತಹ ಒಂದು ಸಮಗ್ರ ಕಲೆಯ ಹರಹು (ವ್ಯಾಪ್ತಿ,) ವಿಸ್ತರಿಸಬೇಕು, ಇದಕ್ಕೊಂದು ಶಾಸ್ತ್ರೀಯ ಚೌಕಟ್ಟನ್ನು ನೀಡಬೇಕು ಎನ್ನುವ ಮಹಾದಾಸೆಯನ್ನು ಹೊಂದಿದ್ದರು.

ಕಾಲದ ಪ್ರಭಾವವೋ,ಕಲೆಯ ಮೇಲಣ ತೀವ್ರವಾದ ಶ್ರದ್ಧೆಯೋ ಒಂದುಗೂಡಿದ ಒಂದು ಶುಭದಿನ ತಮ್ಮ ಮನೆಯ ಅಂಗಳದಲ್ಲಿ ಯಕ್ಷನಾಟ್ಯ ,ಹಿಮ್ಮೇಳ ತರಗತಿಗಳನ್ನು ಆರಂಭಿಸಿಬಿಡುತ್ತಾರೆ. ಇದು 2004 ನೇ ಇಸವಿಯಲ್ಲಿ ಆದ ವಿಶಿಷ್ಟ ವಿದ್ಯಮಾನ. ಈ ಕಲಾವೇದಿಕೆಯನ್ನು ಉದ್ಘಾಟಿಸಿದವರು ತೆಂಕುತಿಟ್ಟಿನ ಪ್ರಸಿದ್ಧ ಹವ್ಯಾಸಿ ಕಲಾವಿದರೂ ಯಕ್ಷ ಶಿಕ್ಷಕರೂ ಆದ ಶ್ರೀ ಕೋಡ್ಲ ಗಣಪತಿ ಭಟ್ ರವರು.

ಶ್ರೀಯುತರು ಕಲಾವೇದಿಕೆಯನ್ನು ಉದ್ಘಾಟಿಸಿದ್ದು ಮಾತ್ರವಲ್ಲ, ಕೆಲವು ಸಮಯದವರೆಗೆ ನಾಟ್ಯ ಅಭ್ಯಾಸಿ ವಿದ್ಯಾರ್ಥಿಗಳಿಗೆ ನೃತ್ಯ ಗುರುಗಳಾಗಿದ್ದರು. ನಂತರ ನಾಟ್ಯ ಕಲಿಸುವ ಹೊಣೆಯನ್ನು ಹೊತ್ತವರು ಕಟೀಲು ಮೇಳದಲ್ಲಿ ಸಾಕಷ್ಟು ತಿರುಗಾಟದ ನಂತರ ಪ್ರವರ್ಧಮಾನ ಕಲಾವಿದನಾಗಿದ್ದ ಶ್ರೀ ಸುಧಾಕರ ಕಾಂತಮಂಗಲ ಎಂಬವರು. ಸುಧಾಕರ ಅವರು ತಮ್ಮ ಕೌಶಲ್ಯ ಪೂರ್ಣ ತರಗತಿಗಳ ಮೂಲಕ ವಿದ್ಯಾರ್ಥಿಗಳನ್ನು ತಯಾರು ಮಾಡಿದರು ಮಾತ್ರವಲ್ಲ ಕಲಾ ವೇದಿಕೆಯ ಆಶ್ರಯದಲ್ಲಿ ನಡೆದ ಯಕ್ಷಗಾನ ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ವ ರೀತಿಯ ಮಾರ್ಗದರ್ಶನವನ್ನು ನೀಡಿದರು.

ಇದರ ಫಲಶ್ರುತಿಯಾಗಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಸಹೃದಯರಿಗೆ ಮುದ ನೀಡುತ್ತಿದ್ದವು. ಈ ಸಂದರ್ಭದಲ್ಲಿ ಹಿಮ್ಮೇಳ ವಾದಕರಾಗಿ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಾದ ಶ್ರೀ ಕುಮಾರ ಸುಬ್ರಹ್ಮಣ್ಯ ವಳಕುಂಜ, ಅಡೂರು ಮೋಹನ ಸರಳಾಯ ಸಾಥ್ ನೀಡುತ್ತಿದ್ದರು. ಭಾಗವತಿಕೆಯಲ್ಲಿ ರಾಮಚಂದ್ರ ಅರ್ಬಿತ್ತಾಯ,, ರವಿಕೃಷ್ಣ ಪುಣಚ ,ಶಿವಪ್ರಸಾದ್ ಕಾಂತಾವರ ಸಹಕರಿಸುತ್ತಿದ್ದರು.
ತೆಂಕ ಬೈಲಿನ ಟಿ ಡಿ ಗೋಪಾಲಕೃಷ್ಣ ಮೃದಂಗದಲ್ಲಿ ಸಹಕರಿಸಿದ್ದಾರೆ.

ಹೀಗೆ ನಿರಂತರತೆಯನ್ನು ಕಾಯ್ದುಕೊಂಡ ಕಲಾ ವೇದಿಕೆಯ ಯಕ್ಷಗಾನ ಪ್ರದರ್ಶನಗಳಿಗೆ ಮೂಲ ದ್ರವ್ಯವಾಗಿ ಒದಗಬೇಕಾದ ಪ್ರಸಂಗ ಮಾಹಿತಿ, ಪಾತ್ರೋಚಿತ ಸಂಭಾಷಣೆಗಳನ್ನು ಅತ್ಯಂತ ಹೃದ್ಯವಾಗಿ ಪೋಣಿಸಿಕೊಟ್ಟವರು ದೇಲಂಪಾಡಿ ಬನಾರಿಯ ಭಾಗವತ ,ಪ್ರಸಂಗ ಕರ್ತೃ, ಯಕ್ಷಗುರು ಶ್ರೀ ವಿಶ್ವ ವಿನೋದ ಬನಾರಿಯವರು. ಕಲಾವೇದಿಕೆಯ ಯಶಸ್ಸಿನಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಅವರ ಶ್ರಮ ಗಮನಾರ್ಹ.

ತೆಂಕಿನ ಮಹಿಳಾ ಭಾಗವತರಲ್ಲಿ ಸಾಕಷ್ಟು ಹೆಸರನ್ನು ಪಡೆದಿರುವ ಕಾವ್ಯಶ್ರೀ ಅಜೇರು ,ಭವ್ಯಶ್ರೀ ಹರೀಶ್ ಕುಲ್ಕುಂದ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಚಂಡೆಯಲ್ಲಿ ದಿವ್ಯಶ್ರೀ ಮರ್ಕಂಜ ಇರುತ್ತಿದ್ದರು.

ಸಾಂದರ್ಭಿಕ ಪರಿಸ್ಥಿತಿಗೆ ಅನುಸರಿಸಿ ಶ್ಯಾಮ್ ಭಟ್ ರವರು ಖಂಡಿಗೆ ಮೂಲೆಯಿಂದ ದೊಡ್ಡ ತೋಟದ ನಾರ್ಣಕಜೆ ಎಂಬಲ್ಲಿಗೆ ವಾಸ್ತವ್ಯವನ್ನು ಬದಲಾಯಿಸುತ್ತಾರೆ. ಬದಲಾಯಿಸಿದ್ದು ವಾಸ್ತವ್ಯವನ್ನು ಮಾತ್ರ, ಕಲೋಪಾಸನೆಯ ತುಡಿತವನ್ನಲ್ಲ ಎಂಬುದಕ್ಕೆ ಸಾಕ್ಷೀರೂಪವಾಗಿ ಅಲ್ಲಿಯೂ ಈ ಯಕ್ಷಗಾನ ತರಬೇತಿಯನ್ನು ಮುಂದುವರಿಸುತ್ತಾರೆ. ದೆಹಲಿ ಕರ್ನಾಟಕ ಸಂಘದ ಆಶ್ರಯದಲ್ಲಿ ಯಕ್ಷ ಸಿರಿ ಕಲಾವೇದಿಕೆಯ ಮಹಿಳಾ ತಂಡದಿಂದ ಯಕ್ಷಗಾನ ನಡೆದಿದೆ ಎನ್ನುವುದು ಕಲಾ ವೇದಿಕೆಗೊಂಡು ಸಾರ್ಥಕತೆಯ ಭಾವ.


ಇಲ್ಲಿ ಉಲ್ಲೇಖಿಸಬೇಕಾದ ಮತ್ತೊಂದು ಅಂಶ ಶ್ಯಾಮ್ ಭಟ್ ರವರ ತೀರ್ಥರೂಪರು ಗೋಪಾಲಕೃಷ್ಣ ಭಟ್ ಎಂಬುವರು. ಅವರೊಬ್ಬ ಪ್ರಬುದ್ಧ ಮನಸ್ಥಿತಿಯ ವಿಮರ್ಶಕರು. ಕಾರ್ಯಕ್ರಮವನ್ನು ಪೂರ್ಣ ವೀಕ್ಷಿಸಿ ಎಲ್ಲಿ ಒಳ್ಳೆಯ ಅಂಶವಿತ್ತು ಎಲ್ಲಿ ಲೋಪವಾಗಿದೆ ಎಂಬುದರ ಬಗ್ಗೆ ತಲಸ್ಪರ್ಶಯಾಗಿ ವಿಮರ್ಶಿಸಬಲ್ಲ ವಿಶೇಷತೆಯನ್ನು ಹೊಂದಿದವರು.


ಪ್ರಸ್ತುತ ಸಂದರ್ಭದಲ್ಲಿ ಶ್ಯಾಮ ಭಟ್ ರವರ ಕುಟುಂಬ ಮೂಡಬಿದಿರೆಯ ಸಮೀಪದ ಬನ್ನಡ್ಕ ಎಂಬಲ್ಲಿ ವಾಸವಾಗಿದ್ದಾರೆ. ಕಲಾಮಾತೆಯನ್ನು ಅವರು ಬಿಡಲಿಲ್ಲ ಅವರನ್ನು ಕಲಾ ಮಾತೆ ಕೃಪಾ ದೃಷ್ಟಿಯಿಂದ ಹರಸಿದಳು ಎಂಬುದಕ್ಕೆ ನಿದರ್ಶನವಾಗಿ ಬನ್ನಡ್ಕದಲ್ಲೂ ಯಕ್ಷಗಾನ ಕಲಾರಾಧನೆ ನಿರಂತರವಾಗಿ ನಡೆಯುತ್ತಿದೆ. ಪ್ರಸ್ತುತ ನಾಟ್ಯ ತರಗತಿಯ ಸಾರಥ್ಯವಹಿಸಿದವರು ಅವರ ಸುಪುತ್ರ ಗೋಪಾಲಕೃಷ್ಣ ಕೆ ಎಸ್ ರವರು. ಉಪನ್ಯಾಸಕರಾಗಿರುವ ಅವರು ಒಬ್ಬ ಒಳ್ಳೆಯ ಕಲಾವಿದ ಎಂಬುದು ಕೂಡ ಗಮನಾರ್ಹ.

ಇವರ ಸಹೋದರಿ ಸರೋಜಿನಿ ಬನಾರಿಯವರು ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ಒಳ್ಳೆಯ ಪ್ರಭುತ್ವವನ್ನು ಹೊಂದಿದವರು ಸಂದರ್ಭಕ್ಕೆ ಅನುಸರಿಸಿ ಯಕ್ಷ ನಾಟ್ಯದ ನಿರ್ವಹಣೆಯನ್ನು ಅವರು ಮಾಡುತ್ತಾರೆ. ಹಾಗೆಯೇ ಒಳ್ಳೆಯ ಯಕ್ಷಗಾನ ಕಲಾವಿದೆಯೂ ಹೌದು. ಪ್ರಕೃತ ಬನ್ನಡ್ಕರ ಪರಿಸರದಲ್ಲಿ ನಡೆಯುವ ಯಕ್ಷಗಾನ ಕಾರ್ಯಕ್ರಮಗಳಲ್ಲಿ ಚೆಂಡೆ ವಾದಕರಾಗಿ ಸರೋಜಿನಿಯವರ ಪತಿ ,ಶ್ಯಾಮ ಭಟ್ಟರ ಅಳಿಯ ಶ್ರೀ ವಿಷ್ಣುಶರಣ ಬನಾರಿ ತೊಡಗಿಸಿಕೊಳ್ಳುತ್ತಾರೆ.

2004 ರಿಂದ ಇಲ್ಲಿಯವರೆಗಿನ ಸುಧೀರ್ಘ ಪಯಣದಲ್ಲಿ ಒಂದು ಸಲವೂ ಕಲಾವೇದಿಕೆಯ ವಾರ್ಷಿಕೋತ್ಸವವನ್ನು ಆಚರಿಸಿಲ್ಲ ಎಂಬುದು ಅಚ್ಚರಿಯ ಸಂಗತಿ. ಆದರೆ ಈಗ ಕಲಿಕೆಯಲ್ಲಿ ತೊಡಗಿ ಸಾಕಷ್ಟು ಪ್ರವರ್ಧಮಾನ ಸ್ಥಿತಿಗೆ ಬಂದ ವಿದ್ಯಾರ್ಥಿಗಳ ಒತ್ತಾಸೆಗೆ ಮಣಿದು ಪ್ರಥಮ ಬಾರಿಗೆ ವಾರ್ಷಿಕೋತ್ಸವವನ್ನು ಆಚರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಇಪ್ಪತ್ತನೇ ವರ್ಷದ ವಾರ್ಷಿಕೋತ್ಸವ ಅಂದರೆ ‘ವಿಂಶತಿ ಸಂಭ್ರಮ’.

ಅವರೇ ಉಲ್ಲೇಖಿಸಿದಂತೆ ಇದು ಯಕ್ಷ ಸಂಗಮ. ಮೂಡುಬಿದಿರೆಯ ಬನ್ನಡ್ಕ ಎಂಬಲ್ಲಿ ಗುರು ರಾಘವೇಂದ್ರ ಮಠ ಇದ್ದು ಇಲ್ಲಿ ಈ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ. ದಿನಾಂಕ 31. 10 . 20204ನೇ ಗುರುವಾರದಂದು ಬೆಳಗ್ಗಿನಿಂದಲೇ ಸಾಂಸ್ಕೃತಿಕೋತ್ಸವ, ಯಕ್ಷಗಾನ ಮುಖವರ್ಣಿಕೆ, ಯಕ್ಷಗಾನ ವೈಭವ, ತಾಳಮದ್ದಳೆ, ನರಕಾಸುರ ಮೋಕ್ಷ, ದಕ್ಷಯಜ್ಞ ಎಂಬ ಬಯಲಾಟ ಕಾರ್ಯಕ್ರಮಕ್ಕೆ ಕಳೆಗಟ್ಟಲಿದೆ.

ನಾವು ಗಮನಿಸಬೇಕಾದ ಬಹಳ ಮುಖ್ಯವಾದ ವಿಚಾರ ಒಂದಿದೆ 20 ವರ್ಷಗಳ ಸುಧೀರ್ಘ ಅವಧಿಯಲ್ಲಿ ಯಕ್ಷ ನಾಟ್ಯ ತರಗತಿಗಳನ್ನು ಇಷ್ಟೊಂದು ವ್ಯವಸ್ಥಿತವಾಗಿ ನಡೆಸುತ್ತಿದ್ದರೂ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉಚಿತವಾಗಿ ಆಸಕ್ತರಿಗೆ ನಾಟ್ಯಾಭ್ಯಾಸವನ್ನು ಮಾಡಿಸುತ್ತಿದ್ದರು ಎಂಬುದು ಅಚ್ಚರಿಯ ಸಂಗತಿ ಆದರೂ ಇದು ಸತ್ಯ. ಇಂತಹ ಕಲೋಪಾಸನೆಯನ್ನು ಜೀವನ ದೃಷ್ಟಿಯಾಗಿ ಹೊಂದಿರುವ ಶ್ಯಾಮ ಭಟ್ ರವರ ಕಲಾ ಕೈಂಕರ್ಯ ನಿರಂತರವಾಗಿರಲೆಂದು ಹಾರೈಸೋಣ

ಬರಹ – ನಾರಾಯಣ ತೋರಣಗಂಡಿ, ಸಪ್ತಸ್ವರ, ಪೈಲೂರು ಸುಳ್ಯ

ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಆಯ್ಕೆ

0

ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಯಶಸ್ವೀ ಕಲಾವೃಂದ (ರಿ.) ಕೊಮೆ, ತೆಕ್ಕಟ್ಟೆ ಸಂಸ್ಥೆಯ ಆಯ್ಕೆ.

ಉಡುಪಿ : ಕಲಿಕೆಯೂ ಸೇರಿದಂತೆ ಯಕ್ಷಗಾನದ ಉಳಿವು, ಬೆಳವಣಿಗೆಗಾಗಿ ವಿಶಿಷ್ಟ ಕಾರ್ಯನಿರ್ವಹಿಸುತ್ತಾ, ರಜತ ಪರ್ವದ ಶುಭಾವಸರದಲ್ಲಿರುವ ಯಶಸ್ವೀ ಕಲಾವೃಂದ (ರಿ) ಕೊಮೆ, ತೆಕ್ಕಟ್ಟೆ ಸಂಸ್ಥೆಯು, ಯಕ್ಷಗಾನ ಕಲಾರಂಗ ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ ‘ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ’ಗೆ ಆಯ್ಕೆಗೊಂಡಿದೆ.

ಯಕ್ಷಗಾನ ಕಲಾರಂಗದ ಸುವರ್ಣ ವರ್ಷದ ಹಿನ್ನೆಲೆಯಲ್ಲಿ ಈ ವರ್ಷದಿಂದ ಪ್ರಶಸ್ತಿಯ ಮೊತ್ತವನ್ನು 1,00,000/- ರೂಪಾಯಿಗೆ ವೃದ್ಧಿಸಲಾಗಿದೆ.

ಆರಂಭದಿಂದಲೂ ನಗದು ಪುರಸ್ಕಾರದ ಅರ್ಧಾಂಶವನ್ನು ಶ್ರೀಮಠ ಬರಿಸುತ್ತಾ ಬಂದಿದೆ. ಪ್ರಶಸ್ತಿ ಪ್ರದಾನ ನವೆಂಬರ್ 17, 2024 ಭಾನುವಾರ ಉಡುಪಿಯ ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ & ರಿಸರ್ಚ್ ಸೆಂಟರ್‌ನಲ್ಲಿ ಜರಗಲಿದೆ.

ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.