Friday, March 13, 2026
Home Blog Page 320

ಮೇ 7ಕ್ಕೆ ಕರ್ನಾಟಕ ಯಕ್ಷಭಾರತಿಯಿಂದ ‘ರಾಜಾ ದಿಲೀಪ’ ಬಾನುಲಿ ಯಕ್ಷಗಾನ

ಆಕಾಶವಾಣಿ ಮಂಗಳೂರು ನಿಲಯದಿಂದ ಪ್ರತಿ ಶುಕ್ರವಾರ  ಪ್ರಸಾರವಾಗುವ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಈ ವಾರ ಕರ್ನಾಟಕ ಯಕ್ಷ ಭಾರತಿ ಬೆಟ್ಟಂಪಾಡಿ, ಪುತ್ತೂರು ತಂಡವು ‘ರಾಜಾ ದಿಲೀಪ’ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರಸ್ತುತ ಪಡಿಸಲಿದೆ‌. ಈ ಕಾರ್ಯಕ್ರಮ ಇದೇ ಮೇ.7 ಶುಕ್ರವಾರ ರಾತ್ರಿ 9.30 ಕ್ಕೆ ಬಾನುಲಿಯಲ್ಲಿ ಪ್ರಸಾರವಾಗುವುದು.   

ದೇವಲೋಕದ ಕಾಮಧೇನುವನ್ನು ನಿರ್ಲಕ್ಷಿಸಿದ ಕಾರಣದಿಂದ ಸಂತಾನ ಹೀನನಾದ  ಸೂರ್ಯವಂಶದ ಚಕ್ರವರ್ತಿ ದಿಲೀಪ ಮಹಾರಾಜ ವಶಿಷ್ಠಾಶ್ರಮದಲ್ಲಿ ಗೋಪೂಜೆ ಮಾಡಿದ ಫಲ ರೂಪವಾಗಿ ಕುಲದೀಪಕನಾದ ರಘುವನ್ನು ಮಗನಾಗಿ ಪಡೆಯುವ ವಿಶಿಷ್ಟ ಕಥಾ ಹಂದರದ ‘ರಾಜಾ ದಿಲೀಪ’ ಯಕ್ಷಗಾನದಲ್ಲಿ ಹೆಸರಾಂತ ಕಲಾವಿದರಾದ ಭಾಸ್ಕರ ರೈ ಕುಕ್ಕುವಳ್ಳಿ (ದಿಲೀಪ), ಎಂ.ಕೆ. ರಮೇಶಾಚಾರ್ಯ (ನಂದಿನಿ), ಗಣರಾಜ ಕುಂಬಳೆ (ರುಧಿರಾಕ್ಷ), ರಮೇಶ್ ಸಾಲ್ವಣ್ಕರ್ (ವಶಿಷ್ಠ), ಮತ್ತು ಉಮೇಶ ಗೇರುಕಟ್ಟೆ (ಸುದಕ್ಷಿಣೆ) ಅರ್ಥಧಾರಿಗಳಾಗಿ ಭಾಗವಹಿಸಿದ್ದಾರೆ.     

ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಪ್ರಸಿದ್ಧ ಭಾಗವತ ಪದ್ಯಾಣ ಗಣಪತಿ ಭಟ್ ಅವರ ಹಾಡುಗಾರಿಕೆಗೆ ಪಿ.ಟಿ ಜಯರಾಮ ಭಟ್, ಕೋಳ್ಯೂರು ಭಾಸ್ಕರ ಮತ್ತು ಹರಿಶ್ಚಂದ್ರ ಮಾಡೂರು ಅವರ ಹಿಮ್ಮೇಳವಿದೆ. ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ಮಾಪಕ ಸೂರ್ಯನಾರಾಯಣ ಭಟ್ ಪಿ.ಎಸ್. ಇದನ್ನು ಧ್ವನಿಮುದ್ರಿಸಿ ಪ್ರಸಾರಕ್ಕೆ ಅಳವಡಿಸಿದ್ದಾರೆ.

ಅಜ್ಜನಗದ್ದೆ ಗಣಪಯ್ಯ ಭಾಗವತ – ಗಾನಾಲಾಪನೆಯ ಮಹಾತಪಸ್ವಿ 

ಅಜ್ಜನಗದ್ದೆ ಗಣಪಯ್ಯ ಭಾಗವತರ ಹೆಸರು ಪ್ರಸ್ತುತ ಯಕ್ಷಗಾನದ ಯುವ ಪ್ರೇಕ್ಷಕರಲ್ಲಿ ಹೆಚ್ಚಿನವರಿಗೆ ತಿಳಿದಿರಲಾರದು. ಕೇವಲ ಹಿರಿಯ ಪ್ರೇಕ್ಷಕರಿಗೆ ಮಾತ್ರ ಪರಿಚಿತವಾದ ಮತ್ತು ಕೇಳಿ ತಿಳಿದ ಹೆಸರಾಗಿರಬಹುದು ಎಂದು ಭಾವಿಸುತ್ತೇನೆ. ಆದರೂ ಅಜ್ಜನಗದ್ದೆ ಗಣಪಯ್ಯ ಭಾಗವತರ ಕುರಿತು ತಿಳಿಯದಿದ್ದ ಸಮಯದಿಂದಲೂ  ‘ಅಜ್ಜನಗದ್ದೆ’ ಎಂಬುದು ಯಕ್ಷಗಾನ ರಂಗಕ್ಕೆ ತುಂಬಾ ಹತ್ತಿರವಾದ ಹೆಸರು ಎಂದು ಯಾಕೋ ನನ್ನ ಮನಸ್ಸು ಅಕಾರಣವಾಗಿ ಯೋಚಿಸುತ್ತಿತ್ತು! 

ಅಜ್ಜನಗದ್ದೆ ಎಂಬುದು ಸುಳ್ಯ ತಾಲೂಕಿನ ಚೊಕ್ಕಾಡಿಯ ಸಮೀಪದ ಊರು. ಇಲ್ಲಿಗೆ ಅಜ್ಜನಗದ್ದೆ ಎಂಬ ಹೆಸರು ಹೇಗೆ ಬಂತು ಎಂಬುದಕ್ಕೆ ರೋಚಕವಾದ ಒಂದು ಕಥೆಯಿದೆ. ಈ ಲೇಖನದ ನಾಯಕ ಅಜ್ಜನಗದ್ದೆ ಗಣಪಯ್ಯ ಭಾಗವತರ ಅಜ್ಜನ ಹೆಸರೂ ಕೂಡಾ ಗಣಪಯ್ಯ ಎಂಬುದಾಗಿ ಆಗಿತ್ತು. ಅವರೂ ಕೂಡಾ ಯಕ್ಷಗಾನ ಭಾಗವತರೇ ಆಗಿದ್ದರು!  ಅಜ್ಜನಗದ್ದೆ ಗಣಪಯ್ಯ ಭಾಗವತರ ಅಜ್ಜ ಅಂದರೆ ಹಿರಿಯ ಗಣಪಯ್ಯ ಭಾಗವತರು ಆ ಕಾಲದಲ್ಲಿ, ಅಂದರೆ ಸುಮಾರು ಒಂದೂವರೆ ಶತಮಾನಗಳ ಹಿಂದೆ ತಾವೊಬ್ಬರೇ ಗುಡ್ಡವನ್ನು ಕಡಿದು ಗದ್ದೆಯನ್ನಾಗಿ ಪರಿವರ್ತಿಸಿದ ಸಾಹಸಿ. ಆದುದರಿಂದ ಆ ಜಾಗಕ್ಕೆ ‘ಅಜ್ಜನಗದ್ದೆ’ (ಅಜ್ಜ ನಿರ್ಮಿಸಿದ ಗದ್ದೆ) ಎಂಬ ಹೆಸರು ಶಾಶ್ವತವಾಯಿತು.

ಹಿರಿಯ ಅಜ್ಜನಗದ್ದೆ ಗಣಪಯ್ಯ ಭಾಗವತರ ಹೆಸರು ಮೊಮ್ಮಗ ಕಿರಿಯ ಅಜ್ಜನಗದ್ದೆ ಗಣಪಯ್ಯ ಭಾಗವತರಿಗೆ ಹೇಗೆ ಬಂತೋ ಹಾಗೆಯೇ ಯಕ್ಷಗಾನ ಭಾಗವತಿಕೆ ಎಂಬ ಅಮೂಲ್ಯ ಕಲಾಸಂಪತ್ತು ಕೂಡಾ ಅಜ್ಜನಿಂದ ಮೊಮ್ಮಗನಿಗೆ ಹರಿದುಬಂತು. ಅಜ್ಜನಗದ್ದೆ ಗಣಪಯ್ಯ ಭಾಗವತರ ಕಲಾಯಾನ ಬಹಳಷ್ಟು ಎಡರುತೊಡರುಗಳ ನಡುವೆ ಎಗ್ಗಿಲ್ಲದೆ ಮುಂದುವರಿದ ಕಲಾತಪಸ್ಸು. ಬಡತನದ ಬೇಗೆಯಲ್ಲಿ ಮಿಂದು ಬೆಂದು ಪರಿಪಕ್ವವಾದರೂ ಕಲಾಶ್ರೀಮಂತಿಕೆ ಮತ್ತು ಹೃದಯಶ್ರೀಮಂತಿಕೆಗಳಿಗೆ ಅಜ್ಜನಗದ್ದೆ ಭಾಗವತರು ಹೆಸರುವಾಸಿ.

ಅತ್ಯುತ್ತಮ ಭಾಗವತರಾಗಿದ್ದುದು ಮಾತ್ರವಲ್ಲದೆ ಆ ಕಾಲದಲ್ಲಿ ಅಜ್ಜನಗದ್ದೆಯ ಆ ಮನೆ ಅತಿಥಿಸತ್ಕಾರಕ್ಕೆ ಹೆಸರಾಗಿತ್ತು. ತಾನುಣ್ಣದಿದ್ದರೂ ಪರರುಂಡಲ್ಲಿ ತೃಪ್ತಿಯನ್ನನುಭವಿಸುವ ಭಾಗವತರು ತಾನೆಂದಿಗೂ ಒಬ್ಬನೇ ಉಣ್ಣಲು ಚಡಪಡಿಸುವವರು.  ಇಂತಹಾ ಮಹಾನ್ ಹೃದಯವಂತ ಅಜ್ಜನಗದ್ದೆ ಗಣಪಯ್ಯ ಭಾಗವತರು ಸುಳ್ಯ ತಾಲೂಕಿನ ಅಮರಪಡ್ನೂರು ಗ್ರಾಮದ ಅಜ್ಜನಗದ್ದೆ ಎಂಬಲ್ಲಿ ಅಜ್ಜನಗದ್ದೆ ಸುಬ್ರಾಯ ಮತ್ತು ಸುಬ್ಬಮ್ಮ ದಂಪತಿಗಳಿಗೆ ಮಗನಾಗಿ 7.10.1916ರಂದು ಜನಿಸಿದರು. ತಂದೆ ಅಜ್ಜನಗದ್ದೆ ಸುಬ್ರಾಯರು ಮದ್ದಳೆವಾದನದಲ್ಲಿ ಸಿದ್ಧಹಸ್ತರಾಗಿದ್ದರು. ಹೀಗೆ ಗಣಪಯ್ಯ ಭಾಗವತರ ತಂದೆ, ಅಜ್ಜ, ದೊಡ್ಡಜ್ಜ ಸಹಿತ ಕುಟುಂಬದ ಹೆಚ್ಚಿನೆಲ್ಲಾ ಸದಸ್ಯರು ಯಕ್ಷಗಾನ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಆದ ಕಾರಣ ಸಹಜವಾಗಿ ಬಾಲಕ ಗಣಪಯ್ಯನವರು ಯಕ್ಷಗಾನದಿಂದ ಆಕರ್ಷಿತರಾಗಿದ್ದರು. 

ಗಣಪಯ್ಯನವರು ಕಲಿತದ್ದು ಎಂಟನೆಯ ತರಗತಿಯವರೆಗೆ. ಆದರೂ ಆ ಕಾಲದ ಮಟ್ಟಿಗೆ ಎಂಟನೆಯ ತರಗತಿಯ ವಿದ್ಯಾಭ್ಯಾಸ ಎನ್ನುವುದು ಕಡಿಮೆಯೇನೂ ಆಗಿರಲಿಲ್ಲ. ಗಣಪಯ್ಯನವರು ಸ್ವಂತ ಪರಿಶ್ರಮದಿಂದ ನೋಡಿ, ಕೇಳಿ ಕಲಿತದ್ದೇ ಹೆಚ್ಚು. ಜೊತೆಗೆ ತಂದೆ ಅಜ್ಜಂದಿರ ಪ್ರಭಾವವೂ ಸ್ವಲ್ಪ ಮಟ್ಟಿಗೆ ಆಗಿರಬಹುದಾದ ಸಾಧ್ಯತೆಯನ್ನೂ ಅಲ್ಲಗೆಳೆಯುವ ಹಾಗಿರಲಿಲ್ಲ. ರಾಗಗಳ, ಸ್ವರಸಂಚಾರದ ಅನುಭವಕ್ಕಾಗಿ ಹಾಗೂ ಸಂಗೀತಾಭ್ಯಾಸಕ್ಕಾಗಿ ಕಾಂಚನದಲ್ಲಿ ನಡೆಯುತ್ತಿದ್ದ ಸಂಗೀತ ಕಚೇರಿಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಸಂಗೀತ ಸಂಬಂಧೀ ಪುಸ್ತಕಗಳನ್ನು ಓದಿಯೂ ಹಾಡುಗಾರಿಕೆಯನ್ನು ಅಭ್ಯಾಸ ಮಾಡಿದ್ದರು. 

ಅಜ್ಜನಗದ್ದೆ ಗಣಪಯ್ಯನವರು ತನಗೆ ಸಂಬಂಧದಲ್ಲಿ ಚಿಕ್ಕಪ್ಪನಾಗಬೇಕಾಗಿದ್ದ ಯಕ್ಷಗಾನ ವಿದ್ವಾಂಸ, ಸಾಹಿತಿ, ಕಲಾವಿದ ದೇರಾಜೆ ಸೀತಾರಾಮಯ್ಯನವರ ಜೊತೆಯಲ್ಲಿ ಚೊಕ್ಕಾಡಿ ಮೇಳವನ್ನು ಸ್ಥಾಪಿಸಿದ್ದರು. ಈ ಮೇಳದ ಪ್ರದರ್ಶನಕ್ಕೆ ಅಜ್ಜನಗದ್ದೆ ಭಾಗವತರು ಖಾಯಂ ಭಾಗವತರಾಗಿದ್ದರು. ಚೊಕ್ಕಾಡಿ ಮೇಳದ ಹಾಗೂ ಸುಳ್ಯ ತಾಲೂಕಿನ ಪರಿಸರದಲ್ಲಿ ಭಾಗವತನಾಗಿ ಜನಪ್ರಿಯರಾಗಿದ್ದ ಗಣಪಯ್ಯ ಭಾಗವತರಿಗೆ ದೂರದೂರುಗಳಿಂದಲೂ ಕರೆ ಬರುತ್ತಿತ್ತು. ಅಷ್ಟೇ ಪ್ರಸಿದ್ಧಿ ಹೊಂದಿದರೂ ಬೇಡಿಕೆಯಿದ್ದರೂ ಆ ಕಾಲದಲ್ಲಿ ಯಕ್ಷಗಾನ ಕಲಾವಿದರಿಗಿದ್ದ ಸಂಬಳ ಬಹಳ ಕಡಿಮೆಯಾಗಿತ್ತು. ಇಡೀ ರಾತ್ರಿ ಭಾಗವತಿಕೆ ಮಾಡಿದ್ದಕ್ಕಾಗಿ ಅಜ್ಜನಗದ್ದೆ ಗಣಪಯ್ಯ ಭಾಗವತರಿಗೆ ಐದು ರೂಪಾಯಿ ಸಿಗುತ್ತಿತ್ತು. ಇಂತಹಾ ಸಂಕಷ್ಟದ ಸಮಯದಲ್ಲಿ ಭಾಗವತರಿಗೆ ಜೀವನ ನಿರ್ವಹಣೆ ಬಹಳ ಕಷ್ಟವಾಗಿದ್ದರೂ ಹೇಗೋ ಸುಧಾರಿಸಿಕೊಂಡು ಹೋಗುತ್ತಿದ್ದರು.

ತನ್ನಜ್ಜನ ಕಾಲಕ್ಕೆ ದೊಡ್ಡ ಜಮೀನುದಾರರಾಗಿದ್ದ ಅಜ್ಜನಗದ್ದೆಯ ಭೂಮಿ ಹಾಗೂ ಗೇಣಿಗೆ ಕೊಟ್ಟ ಆಸ್ತಿಯನ್ನೆಲ್ಲಾ ನಿಧಾನವಾಗಿ ಕಳೆದುಕೊಳ್ಳಬೇಕಾಗಿ ಬಂದಿತ್ತು. ಹಾಗೂ ಹೀಗೂ ಸ್ವಲ್ಪ ಆಸ್ತಿಯನ್ನು ಉಳಿಸಿಕೊಂಡಿದ್ದರು. ಹೀಗೆ ಒಂದೆಡೆಯಲ್ಲಿ ಕಷ್ಟಕರ ಜೀವನ ಸಾಗಿಸುತ್ತಿದ್ದರೂ ಗಣಪಯ್ಯ ಭಾಗವತರು ತಮ್ಮ ಅಪ್ರತಿಮ ಕಲಾಪ್ರೇಮ, ಕಲಾಸೇವೆಗಳನ್ನು ಬಿಡಲಿಲ್ಲ. ಚೊಕ್ಕಾಡಿ ಮೇಳದ ಪ್ರದರ್ಶನ, ತಾಳಮದ್ದಲೆಗಳ ನಂತರ ಅಜ್ಜನಗದ್ದೆ ಭಾಗವತರು ಕೂಡ್ಲು ಹಾಗೂ ಕಟೀಲು ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಕಟೀಲು ಮೇಳದಲ್ಲಿ ಹಿರಿಯ ಬಲಿಪ ನಾರಾಯಣ ಭಾಗವತರ ಜೊತೆ ಸಹಕಲಾವಿದರಾಗಿದ್ದರು.

ಅಜ್ಜನಗದ್ದೆಯ ಕುಟುಂಬದ ಅಪ್ರತಿಮ ಕಲಾಪ್ರೇಮವೂ ಕಲಾಸೇವೆಯೂ ಚೊಕ್ಕಾಡಿ, ಕಲ್ಮಡ್ಕದ ಪರಿಸರವು ಒಂದು ಯಕ್ಷಗಾನದ ಸಾಂಸ್ಕೃತಿಕ ಕೇಂದ್ರವಾಗಲು ಸಹಾಯ ಮಾಡಿತು ಎಂದರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಅಂದಿನ ಆ ಪರಿಸರದಲ್ಲಿ ಗಣಪಯ್ಯ ಭಾಗವತರ ಭಾವಪೂರ್ಣ ಹಾಡುಗಾರಿಕೆಗೆ ಮನಸೋಲದ ಯಕ್ಷಪ್ರೇಮಿಗಳಿರಲಿಲ್ಲ ಎನ್ನುವುದೂ ಕೂಡಾ ಅಷ್ಟೇ ಸತ್ಯ. ಗಣಪಯ್ಯ ಭಾಗವತರಿಗೆ ಮೂವರು ಶಿಷ್ಯಂದಿರಿದ್ದರು. ಅವರಲ್ಲಿ ಒಬ್ಬರು ಪ್ರಸಿದ್ಧ ಭಾಗವತರಾಗಿದ್ದ ದಾಸರಬೈಲು ಚನಿಯ ನಾಯ್ಕ. ಇನ್ನಿಬ್ಬರೆಂದರೆ ಕುಂಟಿಕಾನ ಪರಮೇಶ್ವರ ಆಚಾರ್ಯ ಮತ್ತು ಪಡ್ಪು ಕೂಸಪ್ಪ ಗೌಡ. ಆಗ ಅಜ್ಜನಗದ್ದೆ ಭಾಗವತರ ಭಾಗವತಿಕೆಯ ಶೈಲಿ ಪ್ರಖ್ಯಾತವಾಗಿತ್ತು. ಹಾಗೂ ಯಕ್ಷಗಾನ ಪ್ರೇಕ್ಷಕರು ಆ ಶೈಲಿಗೆ ಮನಸೋತಿದ್ದರು. ದಿವಂಗತ ದಾಸರಬೈಲು ಚನಿಯ ನಾಯ್ಕರು ಈ ಶೈಲಿಯಲ್ಲಿಯೇ ಹಾಡುತ್ತಿದ್ದರು. ಈಗಿನ ಪ್ರಖ್ಯಾತ ಭಾಗವತರಾದ ಪದ್ಯಾಣ ಗಣಪತಿ ಭಟ್ಟರೂ ಇದೆ ಶೈಲಿಯಲ್ಲಿಯೇ ಹಾಡುತ್ತಿದ್ದರು. 

ಅಜ್ಜನಗದ್ದೆ ಭಾಗವತರು ಕೆಲವು ಪ್ರಸಂಗಗಳನ್ನೂ ರಚಿಸಿದ್ದಾರೆ. ಅದರಲ್ಲಿ ಮನ್ಮಥ ವಿಜಯ(ಅಪ್ರಕಟಿತ), ಮೋಹಿನೀ ಚರಿತ್ರೆ(ಅಪ್ರಕಟಿತ), ಖಾಂಡವ ವನ ದಹನ (ಪ್ರಕಟಿತ) ಮೊದಲಾದುವುಗಳು ಸೇರಿವೆ. ಗಣಪಯ್ಯ ಭಾಗವತರಿಗೆ 1942ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಮಂಜಯ್ಯ ಹೆಗ್ಗಡೆಯವರಿಂದ ಸನ್ಮಾನದ ಗೌರವ ಲಭಿಸಿತ್ತು. 1972ರಲ್ಲಿ ಕಲ್ಮಡ್ಕದಲ್ಲಿ ಸನ್ಮಾನ ಮತ್ತು 1973ರಲ್ಲಿ ಕಳಂಜ ಗ್ರಾಮದ ಕೋಟೆಮುಂಡುಗಾರು ಎಂಬಲ್ಲಿ ಸನ್ಮಾನಿಶಿ ಗೌರವಿಸಿದ್ದರು. 

 ಭಾಗವತರಿಗೆ ಪುಸ್ತಕಗಳೆಂದರೆ ಬಲು ಪ್ರೀತಿ. ಬಹಳಷ್ಟು ಪುಸ್ತಕಗಳನ್ನು ಸಂಗ್ರಹಿಸಿದರು. ಮಾತ್ರವಲ್ಲದೆ ಜೀವನ ನಿರ್ವಹಣೆಗಾಗಿ ಪ್ರಸಿದ್ಧ ಸಾಹಿತಿಗಳ ಕೃತಿಗಳು, ಕಾದಂಬರಿಗಳು, ಪೌರಾಣಿಕ ಪುಸ್ತಗಳು, ದೇವರ ಭಜನೆ, ಹಾಗೂ ಇನ್ನಿತರ ಪುಸ್ತಕಗಳನ್ನು ಮನೆ ಮನೆಗೆ ಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಇದರಿಂದ ಊರಿನ ಜನರಿಗೂ ಉಪಕಾರ ಆಗುತ್ತಿತ್ತು. ಭಾಗವತರಿಗೂ ಮಾರಾಟದಿಂದ ಕಮಿಷನ್ ಸಿಗುತ್ತಿತ್ತು. ಭಾಗವತರಲ್ಲಿ ಸಾವಿರಾರು ಪುಸ್ತಕಗಳ ಸಂಗ್ರಹ ಇತ್ತು. ಅವರು ಸಂಗ್ರಹಿಸಿಟ್ಟ ಪುಸ್ತಕಗಳಲ್ಲಿ ಹೆಚ್ಚಿವನವನ್ನು ಅವರ ಸುಪುತ್ರರೂ ಖ್ಯಾತ ಸಾಹಿತಿಗಳೂ ಆದ ಸುಬ್ರಾಯ ಚೊಕ್ಕಾಡಿ ಮತ್ತು ಲಕ್ಷ್ಮೀಶ ಚೊಕ್ಕಾಡಿಯವರು ಸಂಗ್ರಹಿಸಿ ಜತನದಿಂದ ಇರಿಸಿದ್ದಾರೆ. 

ಅಜ್ಜನಗದ್ದೆ ಗಣಪಯ್ಯ ಭಾಗವತರ ಪತ್ನಿ ಶ್ರೀಮತಿ ಸುಬ್ಬಮ್ಮ (ಕಾಂಚೋಡು ಮನೆತನ). ಸುಬ್ಬಮ್ಮನವರು ಅನ್ನಪೂರ್ಣೆ. ಅದೆಷ್ಟೋ ಜನ ಹಸಿದು ಬಂದಾಗ ಅಡುಗೆ ಮಾಡಿ ಅನ್ನವಿಕ್ಕಿದ ಕೈ. ಅವರ ಕೈಯಡುಗೆ ಉಂಡವರು ಲೆಕ್ಕವಿಲ್ಲದಷ್ಟು ಮಂದಿ. ಅಜ್ಜನಗದ್ದೆ ದಂಪತಿಗೆ ಮೂವರು ಗಂಡುಮಕ್ಕಳು. ಮೂವರು ಮಕ್ಕಳೂ ಪ್ರಸಿದ್ದ ಸಾಹಿತಿಗಳೇ. ಹೆಸರು ಅರಿಯದವರು ವಿರಳ. ಸುಬ್ರಾಯ ಚೊಕ್ಕಾಡಿ, ಲಕ್ಷ್ಮೀಶ ಚೊಕ್ಕಾಡಿ ಮತ್ತು ಸಂತೋಷ ಚೊಕ್ಕಾಡಿ. ಮೂವರು ಮಕ್ಕಳಿಗೆ ಪುಸ್ತಗಳನ್ನು ಓದಲು ಕೊಟ್ಟು ಸಾಹಿತ್ಯದ ರುಚಿ ಹತ್ತಿಸಿದವರೇ ಅಜ್ಜನಗದ್ದೆ ಗಣಪಯ್ಯ ಭಾಗವತರು. ಆದುದರಿಂದ ಶ್ರೀ ಸುಬ್ರಾಯ ಚೊಕ್ಕಾಡಿ, ಶ್ರೀ ಲಕ್ಷ್ಮೀಶ ಚೊಕ್ಕಾಡಿ ಮತ್ತು ಶ್ರೀ ಸಂತೋಷ ಚೊಕ್ಕಾಡಿಯವರು, ಇಂದು ತಾವು ಪಡೆದ ಪ್ರಸಿದ್ಧಿಗೆ ಮತ್ತು ತಮ್ಮ ಸಾಧನೆಗೆ ಮೂಲ ಕಾರಣ ತಂದೆಯವರಾದ ಅಜ್ಜನಗದ್ದೆ ಗಣಪಯ್ಯ ಭಾಗವತರೇ ಎಂಬುದನ್ನು ಗೌರವಪೂರ್ವಕ ಸ್ಮರಿಸಿಕೊಳ್ಳುತ್ತಾರೆ. ಬಡತನದಲ್ಲಿ ಬೆಳೆದು ಆಸ್ತಿಪಾಸ್ತಿಯನ್ನು ಮಕ್ಕಳಿಗೆ ಉಳಿಸಿಹೋಗದಿದ್ದರೇನಾಯಿತು? ಅದ್ಭುತವಾದ ವಿದ್ಯೆಯನ್ನು, ಸಾಹಿತ್ಯವನ್ನು ತನ್ನ ಮಕ್ಕಳ ರಕ್ತದ ಕಣ ಕಣದಲ್ಲಿಯೂ ಸಂಚರಿಸುವಂತೆ ಮಾಡಿದ್ದರಲ್ಲವೇ? ಇದಕ್ಕಿಂದ ದೊಡ್ಡ ಸಂಪತ್ತು ಇನ್ನೇನಿದೆ? ಯಾರೂ ಕದಿಯಲಾರದ ಸಂಪತ್ತನ್ನು ಅಜ್ಜನಗದ್ದೆ ಗಣಪಯ್ಯ ಭಾಗವತರು ಬಿಟ್ಟು ಹೋಗಿದ್ದಾರೆ. ಆ ಸಂಪತ್ತು ಅವರ ಮೂವರು ಗಂಡುಮಕ್ಕಳಲ್ಲಿ ನಿಕ್ಷೇಪಿಸಲ್ಪಟ್ಟಿದೆ.

ಬರಹ: ಮನಮೋಹನ್ ವಿ. ಎಸ್ (ಪೂರಕ ಮಾಹಿತಿ: ಜಿ. ಎಸ್. ಉಬರಡ್ಕ ಬರೆದ “ಗಾನಯೋಗಿ ಅಜ್ಜನಗದ್ದೆ ಗಣಪಯ್ಯ ಭಾಗವತ”)

ಕರ್ನಾಟಕದಲ್ಲಿ ಇಂದು 37,733 (02.05.2021) ಕೊರೋನಾ ಕೇಸ್ – ಜಿಲ್ಲಾವಾರು ಪಟ್ಟಿ

ಕರ್ನಾಟಕ ರಾಜ್ಯದಲ್ಲಿ ಇಂದು (02.05.2021) ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ 

ಕೋಟೆಕಾರು ದೇರಣ್ಣ ರೈ – ಪರಂಪರೆಯ ಚೆಂಡೆವಾದನಕ್ಕೊಂದು ಅಪ್ರತಿಮ ಮಾದರಿ

“ಕುಂಬಳೆಯ ಕೋಟೆಕಾರು ಎಂಬಲ್ಲಿಯ ನಿವಾಸಿಯಾಗಿರುವ ಎಂಬತ್ತೇಳರ ಹರೆಯದ ದೇರಣ್ಣ ರೈ ಒಂದು ಊರುಗೋಲನ್ನು ಹಿಡಿದು ನಡೆಯುವುದನ್ನು ಕಂಡರೆ ತೆಂಕುತಿಟ್ಟಿನ ಇತಿಹಾಸವೆ ನಡೆಯುವಂತೆ ಭಾಸವಾಗುತ್ತದೆ” ಯಕ್ಷಗಾನದ ಪರಂಪರೆಯ ಹಿಮ್ಮೇಳ ವಾದಕ, ದಂತಕತೆ ಶ್ರೀ ಕೋಟೆಕಾರು ದೇರಣ್ಣ ರೈಗಳು ಬರೆದ ‘ತೆಂಕಣ ಯಕ್ಷಪಥ’ ಎಂಬ ಪುಸ್ತಕದಲ್ಲಿ ಯಕ್ಷಗಾನ ವಿದ್ವಾಂಸ ಶ್ರೀ ರಾಘವ ನಂಬಿಯಾರರು ಹೇಳಿದ ಮಾತುಗಳಿವು. ಇದರಲ್ಲಿ ಉತ್ಪ್ರೇಕ್ಷೆಗಳೇನೂ ಇಲ್ಲ. ಓರ್ವ ಹಿರಿಯ ಯಕ್ಷಗಾನ ವಿದ್ವಾಂಸರ ಕುರಿತಾಗಿ ಮತ್ತೋರ್ವ ವಿದ್ವಾಂಸರ ಬಾಯಿಯಿಂದ ಸಹಜವಾಗಿ ಹೊರಹೊಮ್ಮಿದ ಉದ್ಘಾರವಿದು. 

ಮೇಲಿನ ಮಾತುಗಳಂತೆ ದೇರಣ್ಣ ರೈಗಳು ತೆಂಕುತಿಟ್ಟಿನ ಪರಂಪರೆಯ ಪ್ರತೀಕವೆಂಬಂತೆ ತನ್ನ ಕಲಾಜೀವನದುದ್ದಕ್ಕೂ ಬಾಳಿ ಬದುಕಿದವರು. ಮುಂದಿನ ಪೀಳಿಗೆಯ ಕಲಾವಿದರಿಗೆ ಆದರ್ಶ ಕಲಾವಿದನಾಗಿ ಕಲಾಸೇವೆ ಮಾಡಿದವರು. ಬೆಳಿಂಜಗುತ್ತು ಕೆ. ದೇರಣ್ಣ ರೈಯವರು 24.02.1917ರಂದು ಕೋಟೆಕಾರು ಹಳೆಮನೆಯ ಶ್ರೀ ಬಟ್ಯಪ್ಪ ರೈ ಮತ್ತು ಬೆಳಿಂಜಗುತ್ತು ಶ್ರೀಮತಿ ಮುತ್ತಕ್ಕೆ ಹೆಂಗ್ಸು ದಂಪತಿಗೆ ಮಗನಾಗಿ ಜನಿಸಿದರು.

ತುಂಬು ಸಂಸಾರದ ಕುಟುಂಬದಲ್ಲಿ ದೇರಣ್ಣ ರೈಯವರು ಕಲಾವಾಸನೆಯ ಜೊತೆಜೊತೆಗೆ ಬೆಳೆಯತೊಡಗಿದರು. ಪುರಾಣ ಪುಣ್ಯ ಕಥೆಗಳ ಆಸಕ್ತಿಯಿರುವ, ಪೌರಾಣಿಕ ಕಲಾ ವಾಸನೆಯಿರುವ ಕುಟುಂಬವೆಂದ ಮೇಲೆ ಕೇಳಬೇಕೆ? ಸಹಜವಾಗಿಯೇ ಬಾಲಕ ದೇರಣ್ಣ ರೈಗಳಿಗೆ ಕಲಾಪ್ರೇಮವೂ ಪುರಾಣಜ್ಞಾನವೂ ಉಂಟಾಯಿತು. ತಂದೆ ಬಟ್ಯಪ್ಪ ರೈಗಳು ಮನೆಯಲ್ಲಿ ಮಾಡುತ್ತಿದ್ದ ಪುರಾಣ ಪುಣ್ಯ ಕತೆಗಳ ವಾಚನ ಮತ್ತು ಅದರ ಅರ್ಥವಿವರಣೆಯನ್ನು ಕೇಳುತ್ತಾ ಬೆಳೆದ ಮಗ ದೇರಣ್ಣನಿಗೆ ಸಹಜವಾಗಿಯೇ ಆ ಕಡೆಯೇ ಆಸಕ್ತಿ ವಾಲಿತು.

ತಂದೆಯಿಂದ ಪ್ರೇರೇಪಿತರಾದ ಇವರು ತಾನೂ ತಂದೆಯ ಪುರಾಣ ವಾಚನಕ್ಕೆ ಅರ್ಥ ವಿವರಣೆಯನ್ನು ಮಾಡಲು ಪ್ರಾರಂಭಿಸಿದರು. ತಂದೆಯ ಪ್ರೋತ್ಸಾಹವೂ ಧಾರಾಳವಾಗಿಯೇ ಲಭಿಸಿತು.   ಮೊದಲೇ ಹೇಳಿದಂತೆ ತುಂಬು ಸದಸ್ಯರಿರುವ ಕುಟುಂಬ. ದೇರಣ್ಣ ರೈಗಳಿಗೆ 4 ಜನ ಅಣ್ಣಂದಿರು ಮತ್ತು 4 ಜನ ತಮ್ಮಂದಿರು. ಹೀಗೆ ಒಂಭತ್ತು ಮಂದಿ ಗಂಡುಮಕ್ಕಳ ನಂತರ ಹತ್ತನೆಯವಳಾಗಿ ಜನಿಸಿದವಳೇ ದೇರಣ್ಣ ರೈಗಳ ಒಬ್ಬಳೇ ತಂಗಿ ಗಿರಿಜಾ. ದೇರಣ್ಣ ರೈಗಳ ಕಿರಿಯ ಸಹೋದರರಾದ ವಿದ್ವಾನ್ ಕೆ. ಬಾಬು ರೈಗಳು ಕರ್ನಾಟಕ ಶಾಸ್ತ್ರೀಯ ಸಂಗೀತದ ಅಪ್ರತಿಮ ಮೃದಂಗಪಟುವಾಗಿದ್ದು ಈ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿದವರು.  ಹಲವಾರು ಶಿಷ್ಯಂದಿರನ್ನು ತಯಾರುಮಾಡಿದ್ದಾರೆ. 

ದೇರಣ್ಣ ರೈಗಳ ವಿದ್ಯಾಭ್ಯಾಸ ಕುಂಬಳೆ ಶಾಲೆಯಲ್ಲಿ 8ನೆಯ ತರಗತಿಯ ವರೆಗೆ. ಆಮೇಲೆ ಅಂದರೆ 1930ರ ಸುಮಾರಿಗೆ ಅವರು ಮದ್ದಳೆಯ ಅಭ್ಯಾಸವನ್ನು ಪ್ರಾರಂಭಿಸಿದರು. ಕುಂಬಳೆಯ ಕೊಗ್ಗ ಮದ್ದಳೆಗಾರರ ಪುತ್ರ ಶ್ರೀ ನರಸಿಂಹ ಅವರಿಂದ  ಮದ್ದಳೆವಾದನವನ್ನು ಅಭ್ಯಸಿಸಿದರು. 1936ರಲ್ಲಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡರು. ಕಟೀಲು ಮೇಳದಲ್ಲಿ ಬಣ್ಣದ ವೇಷಧಾರಿಯಾಗಿದ್ದ ಕುಂಬಳೆ ಶಂಕರ ಪಾಟಾಳಿಯವರು ದೇರಣ್ಣ ರೈಯವರನ್ನು ಕಟೀಲು ಮೇಳಕ್ಕೆ ಸೇರಿಸಿದರು. ಆಗ ಮವ್ವಾರು ಕಿಟ್ಟಣ್ಣ ಭಾಗವತರು, ಪ್ರಧಾನ ಭಾಗವತರಾಗಿದ್ದ ಆ ಮೇಳದಲ್ಲಿ ಮದ್ದಳೆಗಾರರಾಗಿ ತಮ್ಮ ಕಲಾಜೀವನ ಆರಂಭಿಸಿದ್ದರು. ಕಟೀಲು ಮೇಳದಲ್ಲಿ ಒಂದು ವರ್ಷದ ತಿರುಗಾಟ ನಡೆಸಿದರು. ಅಲ್ಲಿ ಅವರಿಗೆ ಎಚ್ಚಣ್ಣ, ನೆಡ್ಲೆ ನರಸಿಂಹ ಭಟ್, ಕುದ್ರೆಕೊಡ್ಲು ರಾಮ ಭಟ್ ಮೊದಲಾದವರ ಸಾಮೀಪ್ಯ, ಮಾರ್ಗದರ್ಶನಗಳು ದೊರೆತವು.

ಆ ಬಳಿಕ  ಅಂದರೆ 1937ರಲ್ಲಿ ಮುಲ್ಕಿ ಮೇಳಕ್ಕೆ ಸೇರ್ಪಡೆಗೊಂಡರು. ಒಂದು ವರ್ಷದ ಅನುಭವದ ನಂತರ ಕೂಡ್ಲು ಮೇಳಕ್ಕೆ ಸೇರಿದರು. ಆದರೆ 1943ರಲ್ಲಿ ಕಲ್ಲಾಡಿ ಕೊರಗ ಶೆಟ್ಟಿಯವರ ಅಪೇಕ್ಷೆಯಂತೆ ಪುನಃ ಕಟೀಲು ಮೇಳದಲ್ಲಿ ತಿರುಗಾಟ ಪ್ರಾರಂಭಿಸಿದರು. ಅಗರಿ ಶ್ರೀನಿವಾಸ ಭಾಗವತರೊಂದಿಗೆ ಎರಡು ವರ್ಷಗಳ ಕಾಲ ತಿರುಗಾಟ ಮಾಡಿದ್ದರು. ಕೋಟೆಕಾರು ದೇರಣ್ಣ ರೈಗಳು 1954ರಿಂದ 1963ರ ವರೆಗೆ ಅಂದರೆ ಸುಮಾರು ಹತ್ತು ವರ್ಷಗಳ ಕಾಲ ಆ ಕಾಲದ ಪ್ರಸಿದ್ಧ ಭಾಗವತರಾಗಿದ್ದ ಮೈಂದಪ್ಪ ರೈಗಳೊಂದಿಗೆ  ಕರ್ನಾಟಕ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಈ ಹತ್ತು ವರ್ಷಗಳು ದೇರಣ್ಣ ರೈಗಳ ಕಲಾಜೀವನದ ಉತ್ಕರ್ಷದ ಸಮಯವಾಗಿತ್ತು. 1964ರಲ್ಲಿ ಯಕ್ಷಗಾನದಿಂದ ತಾತ್ಕಾಲಿಕವಾಗಿ ನಿವೃತ್ತರಾದರೂ ಯಕ್ಷಗಾನದ ಜೊತೆ ತಮ್ಮ ಸಂಬಂಧವನ್ನು ಉಳಿಸಿಕೊಂಡಿದ್ದರು. ಅಲ್ಲಲ್ಲಿ ಹಿಮ್ಮೇಳ ತರಗತಿಗಳನ್ನು ನಡೆಸುತ್ತಿದ್ದರು. ಖ್ಯಾತ ಯಕ್ಷಗಾನ ವಿದ್ವಾಂಸ, ಲೇಖಕ ಡಾ. ರಾಘವ ನಂಬಿಯಾರ್ ಕೂಡಾ ದೇರಣ್ಣ ರೈಗಳ ಶಿಷ್ಯಂದಿರಲ್ಲಿ ಒಬ್ಬರು. 

1965ರ ಸುಮಾರಿಗೆ ದೇರಣ್ಣ ರೈಯವರು ಬೆಳಂಜೆ ಗುತ್ತು ಜಾಗದಿಂದ ಪೊಸಣಿಕೆ ಎಂಬಲ್ಲಿ ಬಂದು ನೆಲೆಸಿದರು. ಆಮೇಲೆ ತಮ್ಮ ಜಾಗದಲ್ಲಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಕಲಾಜೀವನದ ಆಸಕ್ತಿ ಆಕರ್ಷಣೆಗಳು ಕಡಿಮೆಯಾಗಿರಲಿಲ್ಲ, 1967ರಲ್ಲಿ ಧರ್ಮಸ್ಥಳ ಮೇಳದ ತಿರುಗಾಟಕ್ಕೆ ತಯಾರಾಗಿದ್ದರು. ಕಡತೋಕಾ ಮಂಜುನಾಥ ಭಾಗವತರೊಂದಿಗೆ ಹಿಮ್ಮೇಳ ವಾದನದಲ್ಲಿ ದೇರಣ್ಣ ರೈಯವರು ಹೊಳೆದು ಕಾಣಿಸಿಕೊಂಡರು. ಹಲವಾರು ಹಿರಿಯ ಕಲಾವಿದರೊಂದಿಗೆ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಪುತ್ತೂರು ನಾರಾಯಣ ಹೆಗ್ಡೆ, ಎಂಪೆಕಟ್ಟೆ ರಾಮಯ್ಯ ರೈ, ಕುಂಬ್ಳೆ ಸುಂದರ ರಾವ್, ಕೆ. ಗೋವಿಂದ ಭಟ್, ಪಾತಾಳ ವೆಂಕಟ್ರಮಣ ಭಟ್, ವಿಟ್ಲ ಗೋಪಾಲಕೃಷ್ಣ ಜೋಶಿ ಮೊದಲಾದವರೊಂದಿಗೆ ದೇರಣ್ಣ ರೈಗಳು ಕಲಾಸೇವೆ ಸಲ್ಲಿಸಿದರು. ಹೀಗೆ ಹಲವಾರು ದಿಗ್ಗಜ ಕಲಾವಿದರೊಂದಿಗೆ ರಂಗಸ್ಥಳದಲ್ಲಿ ಸೇವೆ ಸಲ್ಲಿಸಿದ್ದ ಕೋಟೆಕಾರು ದೇರಣ್ಣ ರೈಗಳು ಯಕ್ಷಜಗತ್ತು ಕಂಡ ಓರ್ವ ಅಪರೂಪದ ಮದ್ದಳೆಗಾರ.

ಕಲೆ, ಕೃಷಿಯೊಂದಿಗೆ ದೇರಣ್ಣ ರೈಗಳು ಬರವಣಿಗೆ ಮತ್ತು ಸಾಹಿತ್ಯದಲ್ಲೂ ಕೈಯಾಡಿಸಿದವರು. ಜ್ಯೋತಿಷ್ಯ ಮತ್ತು ವಾಸ್ತುವನ್ನೂ ಕೂಡ ಹವ್ಯಾಸವನ್ನಾಗಿ ಸ್ವೀಕರಿಸಿದ್ದರು. ಸುಮಾರು 35ಕ್ಕೂ ಹೆಚ್ಚು ಭಜನೆಗಳನ್ನು ಬರೆದಿದ್ದಾರೆ. ಅವರು ರಚಿಸಿದ ಭಕ್ತಿಗೀತೆಗಳ ಧ್ವನಿಸುರುಳಿಯೊಂದು ಬಿಡುಗಡೆಯಾಗಿದೆ. ಕಿರಾತಾರ್ಜುನ ಪ್ರಸಂಗಕ್ಕೆ ಅರ್ಥವನ್ನೂ ಬರೆದಿದ್ದು ‘ಮುಜುಂಗಾವು ಕ್ಷೇತ್ರ ಮಹಾತ್ಮೆ’ ಎಂಬ ಗದ್ಯವನ್ನೂ ರಚಿಸಿದ್ದಾರೆ. ‘ತೆಂಕುತಿಟ್ಟಿನ ಮದ್ದಳೆ ವಾದನ ಕ್ರಮ’, ‘ರಂಗಸ್ಥಳ ವಿವರ’, ‘ತೆಂಕಣ ಯಕ್ಷಪಥ’ ಮೊದಲಾದ ಪುಸ್ತಕಗಳನ್ನೂ ಬರೆದಿದ್ದಾರೆ. ಕೋಟೆಕಾರು ದೇರಣ್ಣ ರೈಯವರು 28.07. 2008ರಂದು ತನ್ನ 91ನೆಯ ವಯಸ್ಸಿನಲ್ಲಿ ನಿಧನಹೊಂದಿದ್ದರು. 

ನೇರ ನಿಷ್ಠುರವಾದಿಯಾಗಿದ್ದ ಇವರು ತನಗಾಗದೆ ಇದ್ದುದನ್ನು ಸಹಿಸುತ್ತಿರಲಿಲ್ಲ. ಆಧುನಿಕ ಗಾಳಿ ಬೀಸುತ್ತಿರುವ ಕಾಲಘಟ್ಟದಲ್ಲಿ ಯಕ್ಷಗಾನದ ಅಸಹಜತೆಗಳನ್ನು ಎತ್ತಿ ತೋರಿಸಿ ಹಲವರ ಕೆಂಗಣ್ಣಿಗೂ ಗುರಿಯಾದವರು. ಆದುದರಿಂದಲೇ ಕೋಟೆಕಾರು ದೇರಣ್ಣ ರೈಗಳ ಹೆಸರು ಎಲ್ಲೂ ಹೆಚ್ಚಾಗಿ ಪ್ರಚಾರಕ್ಕೆ ಬಾರದೆ ಹೋಯಿತು. ಕೇವಲ ಪ್ರಸಿದ್ಧಿಗಾಗಿ ಏನನ್ನಾದರೂ ಮಾಡಬೇಕೆಂಬ ಹಂಬಲ ಅವರಲ್ಲಿರಲಿಲ್ಲ. 1972ರಲ್ಲಿ ಕಾಸರಗೋಡಿನಲ್ಲಿ ನಡೆದ ಕನ್ನಡ ಸಮ್ಮೇಳನದಲ್ಲಿ ಸನ್ಮಾನಪತ್ರ, ಕಾಸರಗೋಡು ಜಿಲ್ಲಾ ಜಾನಪದ ಮೇಳ ಮತ್ತು ವಿಚಾರಸಂಕಿರಣದಲ್ಲಿ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡೆಮಿಯ ಸನ್ಮಾನ ಹಾಗೂ ಇನ್ನಿತರ ಪ್ರಶಸ್ತಿ ಸನ್ಮಾನಗಳು ದೊರಕಿವೆ. ಯಕ್ಷಗಾನದ ಮೂಲ ಸ್ವರೂಪವು ಅಳಿಯದೆ ಉಳಿಯುವಂತೆ ಪ್ರಯತ್ನಗಳನ್ನು ಮಾಡಿದ ಮಹನೀಯರ ಸಾಲಿನಲ್ಲಿ ಕೋಟೆಕಾರು ದೇರಣ್ಣ ರೈಗಳ ಹೆಸರು ಖಂಡಿತಾ ಸ್ಥಾನ ಪಡೆಯುತ್ತದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಪರಂಪರಾಗತ ಮೂಲ ಸ್ವರೂಪದ ಮದ್ದಳೆವಾದನದ ಕ್ರಮವನ್ನು ಬಿಡದೆ, ನಾವೀನ್ಯತೆಯ ಪ್ರದರ್ಶನ ಮತ್ತು ಪರಿಸ್ಥಿತಿಯೊಂದಿಗೆ ಎಂದೂ ರಾಜಿ ಮಾಡಿಕೊಳ್ಳದೆ ತನ್ನ ಕಲಾಜೀವನದಲ್ಲಿ ಸ್ವಚ್ಛತೆಯನ್ನು ಅನವರತವೂ ಕಾಯ್ದುಕೊಂಡು ಪ್ರದರ್ಶನ ನೀಡಿದ ಕೋಟೆಕಾರು ದೇರಣ್ಣ ರೈಗಳಂತಹವರ ಅಗತ್ಯ ಈಗಿನ ಸನ್ನಿವೇಶದಲ್ಲಿ ತುಂಬಾ ಇದೆ. 

ಬರಹ: ಮನಮೋಹನ್ ವಿ. ಎಸ್ (ಪೂರಕ ಮಾಹಿತಿ: ‘ತೆಂಕಣ ಯಕ್ಷಪಥ’)

ಕರ್ನಾಟಕದಲ್ಲಿ ಇಂದು (30.04.2021) ಕೊರೋನಾ ಕೇಸ್ – ಜಿಲ್ಲಾವಾರು ಪಟ್ಟಿ

ಕರ್ನಾಟಕ ರಾಜ್ಯದಲ್ಲಿ ಇಂದು (30.04.2021) ಕೊರೋನಾ ದೃಢಪಟ್ಟವರ ಅಂಕಿಸಂಖ್ಯೆಗಳ ವಿವರ ಇಲ್ಲಿದೆ 

ಮೇ 1ರಿಂದಲೇ (ನಾಳೆ) 18-44 ವರ್ಷದವರಿಗೆ ಲಸಿಕೆ ದೊರಕುವುದು ಕಷ್ಟಸಾಧ್ಯ 

18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲೇ ಲಸಿಕೆ ದೊರೆಯುವುದು ಕಷ್ಟಸಾಧ್ಯ. ಆದುದರಿಂದ ನಾಳೆಯಿಂದಲೇ ಆ ವಯೋಮಾನದವರು ಆಸ್ಪತ್ರೆಗೆ ಬರುವ ಅಗತ್ಯವಿಲ್ಲ ಎಂದು ಅರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಅಗತ್ಯವಿರುವಷ್ಟು ಲಸಿಕೆಯ ಲಭ್ಯತೆ ನಮ್ಮಲ್ಲಿ ಇಲ್ಲದಿರುವುದರಿಂದ 18 ರಿಂದ 44ರ ವಯೋಮಾನದವರು ಮುಂದಿನ ಮಾಹಿತಿ ಬರುವ ತನಕ ಕಾಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.