ಅಕ್ಷರ ಸಂತ, ಕಿತ್ತಳೆ ಹಣ್ಣುಗಳನ್ನು ಮಾರಿ ಊರ ವಿದ್ಯಾರ್ಥಿಗಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ ಶ್ರೀ ಹರೇಕಳ ಹಾಜಬ್ಬನವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ವೀಡಿಯೊ ಲಿಂಕ್ ಇಲ್ಲಿದೆ. ನೋಡಿ
ಯಕ್ಷಗಾನ ವೇಷಧಾರಿ, ಸಂಘಟಕ, ತಾಳಮದ್ದಳೆ ಅರ್ಥಧಾರಿ ಹೀಗೆ ಯಕ್ಷಗಾನದ ವಿವಿಧಂಗಗಳಲ್ಲಿ ತೊಡಗಿಸಿಕೊಂಡ ಎಂ.ಆರ್.ವಾಸುದೇವ ಸಾಮಗರು ನಮ್ಮನ್ನಗಲಿ ನಿನ್ನೆಗೆ ವರುಷವೊಂದು ಸಂದಿತು. (ನಿಧನ – 07.11.2020). ವಾಸುದೇವ ಸಾಮಗ ಎಂದ ಕೂಡಲೇ ನಮಗೆ ಫಕ್ಕನೆ ನೆನಪಾಗುವುದು ಅವರ ‘ಸಂಯಮಂ’ ಯಕ್ಷಗಾನ ತಾಳಮದ್ದಳೆ ತಂಡ. ಸಂಯಮಂ ಎಂದರೆ ‘ಸಂಚಾರಿ ಯಕ್ಷಗಾನ ಮಂಡಳಿ’.
ತನ್ನ ಅರ್ಥಗಾರಿಕೆಯಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಿದ್ದ ವಾಸುದೇವ ಸಾಮಗರು ಸಂಯಮಂ ತಂಡ ಕಟ್ಟಿದ ಬಗ್ಗೆ ಅಂದೊಮ್ಮೆ ವಿವರಿಸಿದ್ದರು. ಮೊದಲು ಪ್ರಾಯೋಗಿಕವಾಗಿ ಮೂವತ್ತು ವರ್ಷಗಳ ಹಿಂದೆಯೇ ಒಮ್ಮೆ ಈ ತಾಳಮದ್ದಳೆ ತಂಡವನ್ನು ಪ್ರಾರಂಭಿಸಿದ್ದರು. ಅನುಭವದ ಕೊರತೆಯಿಂದ ಆಗ ಯಶಸ್ವಿಯಾಗಿರಲಿಲ್ಲ. ಆದರೆ ಈ ‘ಸಂಯಮಂ’ ತಂಡದ ವ್ಯವಸ್ಥಿತ ನಿರಂತರ ತಿರುಗಾಟಕ್ಕೆ 15 ವರ್ಷಗಳ ಇತಿಹಾಸವಿದೆ. ಎಲ್ಲಿಯೂ ಎಡರುತೊಡರುಗಳಿಲ್ಲದ ಪಯಣ ಈ ತಂಡದ್ದು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿ ಉತ್ತರಕುಮಾರನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ
ವಾಸುದೇವ ಸಾಮಗರ ತಂಡದ ಕಾರ್ಯಕ್ರಮಗಳು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿತ್ತು ಎಂದರೆ ಕೇವಲ ದೂರವಾಣಿಯ ಮೂಲಕ 100ಕ್ಕೂ ಹೆಚ್ಚು ತಾಳಮದ್ದಳೆ ಕಾರ್ಯಕ್ರಮಗಳು ಮಳೆಗಾಲದಲ್ಲಿ ನಿಗದಿಯಾಗುತ್ತಿತ್ತು. ಅದರಲ್ಲೂ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಖಾಯಂ ನೆಲೆಯಲ್ಲಿ ಕಾಯ್ದಿರಿಸಲಾಗುತ್ತಿತ್ತು. ಅವರಿಗೆ ದಿನಾಂಕ ಮಾತ್ರ ನಿಗದಿ ಮಾಡುವ ಕೆಲಸ ಉಳಿದಿರುತ್ತಿತ್ತು.
ಯಕ್ಷಗಾನಕ್ಕೆ ಅನ್ಯಾದೃಶ ಕೊಡುಗೆಯಿತ್ತ ಮನೆತನದಲ್ಲಿ ಖ್ಯಾತಿವೆತ್ತ ದಿ| ಮಲ್ಪೆ ರಾಮದಾಸ ಸಾಮಗರ ಸುಪುತ್ರರಾಗಿ ಜನಿಸಿ ಯಕ್ಷಗಾನದಲ್ಲಿ ತನ್ನದೇ ಆದ ಛಾಪನ್ನು ಒತ್ತಿ ಎತ್ತರಕ್ಕೆ ಬೆಳೆದವರು. ಇವರ ಯಕ್ಷಜೀವನದ ವಿವಿಧ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಹಲವಾರು ವಿಶಿಷ್ಠತೆಗಳು ಗೋಚರಿಸುತ್ತವೆ.
S. Mithyanthaya ಅವರ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿಅರ್ಜುನನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ
ನಾಗಶ್ರೀಯ ಶುಭ್ರಾಂಗ ಪಾತ್ರದ ದಾಖಲೆ ಶ್ರೀ ವಾಸುದೇವ ಸಾಮಗರಿಗೆ ಅಪಾರವಾದ ಖ್ಯಾತಿಯನ್ನು ತಂದುಕೊಟ್ಟಿತು. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಭೀಷ್ಮ ವಿಜಯದ ಭೀಷ್ಮನ ಪಾತ್ರವನ್ನು ಮಾಡುವ ಸಂದರ್ಭ ಒದಗಿತು. ಭೀಷ್ಮನ ಪಾತ್ರ ಮಾಡಲು ಹಿರಿಯ ಕಲಾವಿದರು ಒಪ್ಪದಿದ್ದಾಗ ತಾನು ಆ ಪಾತ್ರವನ್ನು ನಿರ್ವಹಿಸಿ ಚೌಕಿಗೆ ಬಂದು ವೇಷ ತೆಗೆಯುತ್ತಿದ್ದಾಗ ಪ್ರೇಕ್ಷಕರು ಬಂದು ‘ಸಾಮಗರೇ, ನಿಮ್ಮದು ಅದ್ಭುತ ಭೀಷ್ಮ’ ಎಂದು ಅಭಿನಂದಿಸಿದ್ದರು.
ಮತ್ತೊಂದು ಆಟದಲ್ಲಿ ಪ್ರಸಿದ್ಧ ಕಲಾವಿದರೊಬ್ಬರು ಕೌರವ ಮಾಡುತ್ತಾರೆಂದು ಪ್ರಚಾರ ಮಾಡಲಾಗಿತ್ತು. ಆದರೆ ಬಸ್ ಮುಷ್ಕರದಿಂದಾಗಿ ಆ ಕಲಾವಿದರಿಗೆ ಬರಲಾಗಲಿಲ್ಲ. ಮೊದಲಿನ ಪ್ರಸಂಗದಲ್ಲಿ ಚಿಟ್ಟಾಣಿಯವರು ದುಷ್ಟಬುದ್ಧಿ ಮಾಡಿಯಾಗಿತ್ತು. ಆಟ ಆಡಿಸುವವರು ಗಲಾಟೆಯಾಗಬಹುದೆಂಬ ಭಯದಲ್ಲಿ ವಾಸುದೇವ ಸಾಮಗರಲ್ಲಿ ಬಂದು ಏನು ಮಾಡುವುದೆಂದು ಅಲವತ್ತುಕೊಳ್ಳುತ್ತಾರೆ. ಆಗ ಧೈರ್ಯ ತುಂಬಿದ ಸಾಮಗರು ತಾನೇ ಕೌರವನ ಪಾತ್ರವನ್ನು ಅಮೋಘವಾಗಿ ನಿರ್ವಹಿಸಿದರು. ಅಂದಿನ ಕೌರವ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಚಿಟ್ಟಾಣಿಯವರ ಸಹಿತ ಅನೇಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಗದಾಯುದ್ಧದ ಕೌರವನಿಗೆ ವಾಸುದೇವ ಸಾಮಗರು ಸಮರ್ಥರೆಂದು ಕಾಳಿಂಗ ನಾವಡರಿಂದಲೇ ಹೊಗಳಿಸಿಕೊಂಡ ಕೀರ್ತಿ ವಾಸುದೇವ ಸಾಮಗರಿಗೆ ಸಲ್ಲುತ್ತದೆ.
ಮಧುಸೂದನ ಅಲೆವೂರಾಯ ಅವರ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿ ಕರ್ಣನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ
ಆಟಕೂಟಗಳೆರಡರಲ್ಲಿಯೂ ಸಮಾನ ಪ್ರಭುತ್ವವನ್ನು ಸಾಧಿಸಿದ್ದ ವಾಸುದೇವ ಸಾಮಗರ ಅಗಲಿಕೆ ಕಲಾಪ್ರಿಯರನ್ನು ಕಾಡುತ್ತಿದೆ, ಅವರು ಮರೆಯಾದರೂ ಅವರ ಆ ವಿಶಿಷ್ಟ ಶೈಲಿ, ವ್ಯಕ್ತಿತ್ವಗಳು ಎಂದೆಂದಿಗೂ ಮಾಸದ ನೆನಪಾಗಿ ಉಳಿಯುವುದು ಸತ್ಯ
ಅಪೂರ್ವ ನೃತ್ಯ ವೈವಿಧ್ಯದ ರಾಧಾ ವಿಲಾಸ ಎಂಬ ಅಪರೂಪದ ಯಕ್ಷಗಾನ ವೀಡಿಯೊ ಕೆ. ಆರ್. ಕೆ. ಭಟ್ ಚಿತ್ರಮೂಲ (KRK Bhat Chithramoola) ಅವರ ಯು ಟ್ಯೂಬ್ ಚಾನೆಲ್ ನಲ್ಲಿ ಇದೆ. ಅದರ ವೀಡಿಯೊ ಲಿಂಕ್ ಕೆಳಗಡೆ ಇದೆ.
ಯಕ್ಷಗಾನ ಇತಿಹಾಸ ಕಂಡ ಅಪರೂಪದ ಆದರೆ ಅಷ್ಟೇ ಅಪೂರ್ವವೂ ಆದ, ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಅವರ ಪತ್ನಿ ಖ್ಯಾತ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರ 75ನೇ ಹರೆಯದ ಸಂಭ್ರಮದಲ್ಲಿ ಅವರನ್ನು ಗೌರವಿಸಿ ಅಭಿನಂದಿಸುವ ಕಾರ್ಯಕ್ರಮ ‘ಶ್ರೀ ಹರಿಲೀಲಾ 75′ ನಾಳೆ ನವಂಬರ್ 7, 2021ರ ಭಾನುವಾರದಂದು ಮೂಡಬಿದಿರೆಯ ಅಲಂಗಾರಿನ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಭಿನಂದನಾ ಸಮಿತಿ ಮತ್ತು ಬೈಪಾಡಿತ್ತಾಯ ದಂಪತಿಗಳ ಶಿಷ್ಯವೃಂದ ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ದಿನಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿವರ ಲಗತ್ತಿಸಲಾಗಿದೆ.
ಕರಾವಳಿ ಭಾಗದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಉಳಿಯಲು ಮುಖ್ಯ ಕಾರಣ ಯಕ್ಷಗಾನ . ಯಾವುದೇ ಲಾಭದ ಅಪೇಕ್ಷೆಯಿಲ್ಲದೆ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಸಮಾಜ ಮತ್ತು ಸಂಘಟನೆಗಳು ಆಸಕ್ತಿ ಬೆಳೆಸಬೇಕು. ಸಾಮಾಜಿಕ ಕಳಕಳಿ ಹೊಂದಿ ಯಕ್ಷಗಾನ ಪ್ರದರ್ಶನದ ಜತೆಗೆ ಹಿರಿಯ ಕಲಾವಿದರ ಸನ್ಮಾನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶೈಕ್ಷಣಿಕ ಪ್ರೋತ್ಸಾಹ ನೀಡಿ ಯಕ್ಷಭಾರತಿ ಸಮಾಜದಲ್ಲಿ ಗುರುತಿಸಿಕೊಂಡಿದೆ . ಸಂಘಟನೆ ಉಜ್ವಲವಾಗಿ ಬೆಳೆದು ಯಕ್ಷಗಾನ ಕಲಾಸೇವೆಯಲ್ಲಿ ಯಕ್ಷಭಾರತಿ ಬಹುಕಾಲ ಮೆರೆದು ಸಾರ್ಥಕ್ಯಪಡೆಯಲಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ನುಡಿದರು.
ಅವರು ನ. 2 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಹಯೋಗದಲ್ಲಿ ಕನ್ಯಾಡಿಯ ಯಕ್ಷಭಾರತಿ (ರಿ) ಯ ಏಳನೇ ವಾರ್ಷಿಕ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಪರಿಸರದಲ್ಲಿ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರ ಆಶ್ರಯ , ಸಹಕಾರ ,ಪ್ರೋತ್ಸಾಹದಿಂದ ಯಕ್ಷಗಾನ ಕಲಾ ಸೇವೆ ನಿರಂತರವಾಗಿ ನಡೆಯುತ್ತಿರುವುದು ಸ್ತುತ್ಯಾರ್ಹ. ಹಿರಿಯ ಶ್ರೀಗಳೊಂದಿಗೆ ಈ ಮೊದಲು ಆಗಮಿಸಿ , ಇಲ್ಲಿಯ ಅಭಿವೃದ್ಧಿ ಕಾರ್ಯ ಹಾಗು ಕಲಾಸೇವೆಯನ್ನು ಕಂಡು ಆನಂದಿಸಿದ್ದೇನೆ .. ಎಂದು ತಮ್ಮ ನೆನಪನ್ನು ಹಂಚಿಕೊಂಡರು .
ಮುಖ್ಯ ಅತಿಥಿ ರೋಟರಿ ಜಿಲ್ಲಾ ನಿಯೋಜಿತ ಗವರ್ನರ್ ಪ್ರಕಾಶ ಕಾರಂತ ಆಧುನಿಕ ಒತ್ತಡ ,ಪಾಶ್ಚಾತ್ಯೀಕರಣದ ಒತ್ತಡ ,ಮೌಲ್ಯಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಸಂಗೀತ ,ನಾಟ್ಯ , ಮುಖವರ್ಣಿಕೆ , ಸಾಂಸ್ಕೃತಿಕ ಪ್ರಜ್ಞೆಯನ್ನು ಜನಮಾನಸಕ್ಕೆ ತಿಳಿಸಿ ಕಲಾಭಿಮಾನಿಗಳ ಮನಸ್ಸು ಅರಳಿಸುವ ಕೆಲಸ ಯಕ್ಷಗಾನದಿಂದ ನಡೆಯುತ್ತಿದೆ. ಭಾಷಾ ಸ್ಪಷ್ಟತೆ ,ಪಾರಂಪರಿಕ ಕಲೆಯಾದ ಯಕ್ಷಗಾನ ಎಳೆಯರ ಪ್ರತಿಭಾವಿಕಸನದಿಂದ ಕಲೆ ,ಸಮಾನತೆ ,ಏಕತೆ ಹಾಗು ಸೃಜನಶೀಲತೆಯನ್ನು ಕಲಿಸಿಕೊಡುತ್ತದೆ. . ಮಾನವೀಯ ಸಂಬಂಧ ಬೆಳೆಸುವ ಕಾರ್ಯ ಇತರರಿಗೆ ಪ್ರೇರಣೆಯಾಗಲಿ ಎಂದು ಶುಭಾಶಂಸನೆಗೈದರು.
ಅಧ್ಯಕ್ಷತೆ ವಹಿಸಿದ್ದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಹಾಗು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡುವೆಟ್ನಾಯ ಉಜಿರೆ ಕ್ಷೇತ್ರ ಹಾಗು ಎಡನೀರು ಮಠ ಯಕ್ಷಗಾನ ಕಲೆಗೆ ನೀಡುತ್ತಿರುವ ಕೊಡುಗೆ ಅನನ್ಯವಾದುದು . ಶ್ರೀಗಳು ಪೀಠಾರೋಹಣ ಬಳಿಕ ಮೊದಲ ಬಾರಿಗೆ ಉಜಿರೆ ಕ್ಷೇತ್ರಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸುಯೋಗ . ಯಕ್ಷಭಾರತಿ ಕಲೆಗೆ ಪ್ರೋತ್ಸಾಹ ನೀಡಿ ಕಲಾವಿದರನ್ನು ಗೌರವಿಸುತ್ತಿರುವುದು ಅಭಿನಂದನೀಯ ವೆಂದರು .
ಸನ್ಮಾನ,ವಿದ್ಯಾರ್ಥಿವೇತನ ವಿತರಣೆ: ಇದೆ ಸಂದರ್ಭದಲ್ಲಿ ಹಿರಿಯ ಸಮಾಜ ಸೇವಕ ಬಳ್ಳಮಂಜ ಸುಬ್ರಹ್ಮಣ್ಯ ಮತ್ತು ಹಿರಿಯ ಯಕ್ಷಗಾನ ಕಲಾವಿದ ಜನಾರ್ದನ ಆಚಾರ್ಯ ಕಲ್ಮಂಜ ಅವರನ್ನು ಶ್ರೀಗಳು ಸಮ್ಮಾನಿಸಿ ಗೌರವಿಸಿದರು .ಧರ್ಮಸ್ಥಳ ಪ್ರಾ.ಕೃ .ಪ .ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ ಗಾಂಭೀರ ಸಮ್ಮಾನಿತರನ್ನು ಅಭಿನಂದಿಸಿದರು. ಭವ್ಯ ಹೊಳ್ಳ ಮತ್ತು ಸಾಯಿಸುಮ ನಾವಡ ಸಂಮಾನಪತ್ರ ವಾಚಿಸಿದರು. . ಸಮ್ಮಾನಿತ ಸುಬ್ರಹ್ಮಣ್ಯ ಬಳ್ಳಮಂಜ ಕೃತಜ್ಞತೆ ವ್ಯಕ್ತಪಡಿಸಿದರು .
ವಿದ್ಯಾರ್ಥಿಗಳಾದ ರಮ್ಯಾ ಕಲ್ಮಂಜ ,ಎನ್ .ಎಸ್ .ನಿಶಾಂತ್ ಪಿಲ್ಯ .,ಕಿರಣ್ ನಾಯ್ಕ್ ಗೇರುಕಟ್ಟೆ ಮತ್ತು ಪ್ರೀತಿಕಾ ಬೆಳಾಲು ಅವರಿಗೆ ವಿದ್ಯಾರ್ಥಿ ವೇತನ ಪ್ರೋತ್ಸಾಹಧನ ವಿತರಿಸಲಾಯಿತು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಯಕ್ಷಭಾರತಿಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಸ್ತಾವಿಸಿದರು .
ಉಜಿರೆ ಶ್ರೀ ಜನಾರ್ದನ ದೇವಸ್ತಾನಕ್ಕೆ ಎಡನೀರು ಶ್ರೀ ಭೇಟಿ ಉಜಿರೆ: ಎಡನೀರು ಮಠಕ್ಕೆ ಪೀಠಾರೋಹಣಗೊಂಡ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ಮೊದಲಬಾರಿಗೆ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ನ. 2 ರಂದು ರಾತ್ರಿ ಭೇಟಿ ನೀಡಿದಾಗ ಅವರನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ಮಹಾದ್ವಾರದ ಬಳಿ ಸಕಲ ಗೌರವ, ವಾದ್ಯ , ಪೂರ್ಣಕುಂಭ ಸಹಿತ ಭಕ್ತಿಪೂರ್ವಕವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ದೇವಸ್ಥಾನದ ಪರವಾಗಿ ಶರತ್ ಕೃಷ್ಣ ಪಡುವೆಟ್ನಾಯ ಮಾಲಾರ್ಪಣೆಗೈದು ಸ್ವಾಗತಿಸಿದರು. ತುಳು ಶಿವಳ್ಳಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ಶ್ರೀಗಳವರು ಶ್ರೀ ಜನಾರ್ದನಸ್ವಾಮಿ ಹಾಗು ಪರಿವಾರ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ,ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದ ಪರವಾಗಿ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ ಶ್ರೀಗಳವರನ್ನು ಮಾಲಿಕೆ, ಫಲ ಸಮರ್ಪಿಸಿ ಗೌರವಿಸಿದರು. ಶ್ರೀಗಳವರು ಫಲ ಮಂತ್ರಾಕ್ಷತೆ ,ಶಾಲು ಹೊದಿಸಿ ಆಶೀರ್ವದಿಸಿದರು. ಶರತ್ ಕೃಷ್ಣ ಪಡುವೆಟ್ನಾಯ, ತುಳು ಶಿವಳ್ಳಿ ತಾಲೂಕು ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ ,ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ , ಜನಾರ್ದನ ಸೊಸೈಟಿ ಅಧ್ಯಕ್ಷ ಗಂಗಾಧರ ರಾವ್ ಕೆವುಡೇಲು, ಪರಾರಿ ವೆಂಕಟ್ರಮಣ ಹೆಬ್ಬಾರ್ , ಮುರಳಿಕೃಷ್ಣ ಆಚಾರ್ , ಗಿರೀಶ್ ಕುದ್ರೆತ್ತಾಯ , ಅರ್ಚಕ ಶ್ರೀನಿವಾಸ ಹೊಳ್ಳ ಮೊದಲಾದವರು ಉಪಸ್ಥಿತರಿದ್ದರು.
ಲೋಕೋ ಭಿನ್ನರುಚಿಃ ಎಂಬಂತೆ ಒಬ್ಬೊಬ್ಬರ ಅಭಿರುಚಿಯು ಒಂದೊಂದು ತೆರನಾಗಿರುತ್ತದೆ. ಯಕ್ಷಗಾನ ಪ್ರೇಕ್ಷಕರಲ್ಲೂ ಹಾಗೇ, ಕಲಾವಿದರಲ್ಲೂ ಹಾಗೇ. ಬಡಗಿನ ಪ್ರದರ್ಶನಗಳನ್ನೇ ಮೆಚ್ಚಿಕೊಳ್ಳುವ ಪ್ರೇಕ್ಷಕರು ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹಳಷ್ಟು ಮಂದಿ ಇದ್ದಾರೆ. ಬಡಗಿನ ಅನೇಕ ಪ್ರೇಕ್ಷಕರಿಗೆ ತೆಂಕಿನ ಆಟಗಳೆಂದರೆ ಪಂಚಪ್ರಾಣ. ಅದೇ ರೀತಿ ‘ನಾವು ತೆಂಕುತಿಟ್ಟಿನ ಕಲಾವಿದರಾಗಬೇಕೆಂದು ಬಡಗಿನವರೂ’, ‘ನಾವು ಬಡಗಿನ ಕಲಾವಿದರಾಗಬೇಕೆಂದು ತೆಂಕಿನವರೂ’ ಬಯಸುವುದನ್ನು ನಾವು ಗಮನಿಸಬಹುದು.
ಅದು ಅವರವರ ಅಭಿರುಚಿಗೆ, ಆಯ್ಕೆಗೆ ಬಿಟ್ಟ ವಿಚಾರ. ತೆಂಕು- ಬಡಗು ಎಂಬ ಭೇದ ನಮಗೇಕೆ. ಇವುಗಳೆರಡೂ ಯಕ್ಷಮಾತೆಯ ಉಭಯ ನೇತ್ರಗಳು. ಕಲಾಮಾತೆಗೆ ಕೊರತೆಯಾಗದಂತೆ ಎಚ್ಚರವಿರಬೇಕಾದುದು ಕಲಾವಿದರಿಗೂ ಪ್ರೇಕ್ಷಕರಿಗೂ ಕರ್ತವ್ಯ ಅಷ್ಟೆ. ಯಾವ ತಿಟ್ಟಿನ ಕಲಾವಿದನಾದರೇನು? ತಾನು ಯಕ್ಷಗಾನ ಕಲಾವಿದ, ಗಂಡು ಕಲೆಯೆಂದೇ ಖ್ಯಾತವಾದ ಯಕ್ಷಗಾನದ ಒಂದು ಅಂಗವಾಗಿರುವೆ ಎಂದು ಸಂತೋಷದಿಂದ ಹೇಳಿಕೊಳ್ಳಬಹುದು.
ಕುಂದಾಪುರ ಸಮೀಪದ ಉಪ್ಪುಂದದಲ್ಲಿ ಜನಿಸಿದರೂ ತೆಂಕು ತಿಟ್ಟು ಪ್ರದರ್ಶನಗಳತ್ತ ಆಕರ್ಷಿತರಾದವರು ಶ್ರೀ ಜನಾರ್ದನ ಅವರು. ಈಗ ತೆಂಕುತಿಟ್ಟಿನ ಉತ್ತಮ ಪುಂಡುವೇಷಧಾರಿಯಾಗಿ ಮಿಂಚುತ್ತಿದ್ದಾರೆ. ಇವರು ಕಿರೀಟ ವೇಷಗಳನ್ನೂ ಮಾಡುತ್ತಾರೆ. ಕಸೆ ಸ್ತ್ರೀ ವೇಷಗಳನ್ನೂ ನಿರ್ವಹಿಸುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಯಾವ ವೇಷವನ್ನಾದರೂ ಮಾಡಬಲ್ಲ ಕಲಾವಿದರು. ತಂಡಕ್ಕೆ ಇವರು ಒಬ್ಬ ಆಪದ್ಬಾಂಧವರು. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಕಲಾಸೇವೆಯನ್ನು ಮಾಡುತ್ತಿದ್ದಾರೆ.
ಕಟೀಲು ಮೇಳದ ಪುಂಡುವೇಷಧಾರಿ ಶ್ರೀ ಜನಾರ್ದನ ಅವರ ಹುಟ್ಟೂರು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ. ಶ್ರೀ ನಾರಾಯಣ ಡಿ.ಖಾರ್ವಿ ಮತ್ತಿ ಶ್ರೀಮತಿ ಕಮಲಾವತಿ ಎನ್. ಖಾರ್ವಿ ದಂಪತಿಗಳ ಪುತ್ರನಾಗಿ 1979ನೇ ಇಸವಿ ಅಕ್ಟೋಬರ್ 27ರಂದು ಜನನ. ಶ್ರೀ ನಾರಾಯಣ ಡಿ.ಖಾರ್ವಿ ಅವರ ಆರು ಮಕ್ಕಳಲ್ಲಿ ಇವರು ಕೊನೆಯವರು. (ಐದು ಗಂಡು, ಒಂದು ಹೆಣ್ಣು) ಉಪ್ಪುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವರೆಗೆ ಓದಿದ್ದರು.
ಎಳವೆಯಲ್ಲಿಯೇ ಯಕ್ಷಗಾನಾಸಕ್ತಿಯು ಇತ್ತು. ತೆಂಕು ತಿಟ್ಟಿನ ಪ್ರದರ್ಶನಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಧರ್ಮಸ್ಥಳ ಮತ್ತು ಕಟೀಲು ಮೇಳಗಳ ಆಟಗಳನ್ನು ನೋಡುತ್ತಿದ್ದರು. ಜತೆಗೆ ಬಡಗು ತಿಟ್ಟಿನ ಪ್ರದರ್ಶನಗಳನ್ನೂ ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂಬ ಆಸೆಯೂ ಚಿಗುರೊಡೆದಿತ್ತು. ಕಲಾವಿದನಾಗುವುದಕ್ಕೆ ಜನಾರ್ದನ ಉಪ್ಪುಂದ ಅವರು ತೆಂಕುತಿಟ್ಟನ್ನು ಆಯ್ಕೆಮಾಡಿಕೊಂಡರು.
ಯಕ್ಷಗಾನ ಹೆಜ್ಜೆಗಾರಿಕೆ ಕಲಿಯಲು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಸೇರಿಕೊಂಡರು. ಯಕ್ಷಗಾನ ಕ್ಷೇತ್ರದ ಹಿರಿಯ, ಖ್ಯಾತ ಸ್ತ್ರೀ ಪಾತ್ರಧಾರಿ ಶ್ರೀ ಕೋಳ್ಯೂರು ರಾಮಚಂದ್ರ ರಾಯರಿಂದ ನಾಟ್ಯಾಭ್ಯಾಸ. ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಪ್ರದರ್ಶನ ವೀರಮಣಿ ಕಾಳಗ ಪ್ರಸಂಗದ ಹನೂಮಂತನಾಗಿ ರಂಗಪ್ರವೇಶ. ಬಳಿಕ ಇಂದ್ರಜಿತು ಕಾಳಗ ಪ್ರಸಂಗದಲ್ಲಿ ಹನೂಮಂತನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು.
ಶ್ರೀ ಜನಾರ್ದನ ಉಪ್ಪುಂದ ಅವರು ತಿರುಗಾಟ ಆರಂಭಿಸಿದ್ದು ಕಟೀಲು ನಾಲ್ಕನೆಯ ಮೇಳದಲ್ಲಿ. ಕುಬಣೂರು ಶ್ರೀಧರ ರಾವ್ ಮತ್ತು ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಭಾಗವತರಾಗಿದ್ದರು. ಸದ್ರಿ ಮೇಳದಲ್ಲಿ 4 ವರ್ಷಗಳ ತಿರುಗಾಟ. ಮೊದಲ ಎರಡು ವರ್ಷ ಬಾಲಗೋಪಾಲನಾಗಿ. ಬಳಿಕ ಮುಖ್ಯ ಸ್ತ್ರೀ ವೇಷ, ಪೀಠಿಕಾ ಸ್ತ್ರೀ ವೇಷ ಮತ್ತು ಪ್ರಸಂಗದಲ್ಲಿ ತನಗೆ ಬಂದ ಸಣ್ಣಪುಟ್ಟ ಪಾತ್ರಗಳನ್ನೂ ನಿರ್ವಹಿಸಿದರು.
ಬಳಿಕ ಕಟೀಲು 1ನೇ ಮೇಳದಲ್ಲಿ ಕಲಾಸೇವೆ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಭಾಗವತಿಕೆಯಡಿ. ಈ ಸಂದರ್ಭದಲ್ಲಿ ಹೆಚ್ಚಿನ ಎಲ್ಲಾ ಪುಂಡುವೇಷಗಳನ್ನೂ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾದರು. ಪ್ರಸ್ತುತ ಮೂರು ವರ್ಷಗಳಿಂದ ಕಟೀಲು ನಾಲ್ಕನೆಯ ಮೇಳದಲ್ಲಿ ವ್ಯವಸಾಯವನ್ನು ಮಾಡುತ್ತಿದ್ದಾರೆ. ತನ್ನ ಪಾಲಿಗೆ ಬಂದ ಪಾತ್ರಕ್ಕೆ ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ಬ್ರಹ್ಮ,ವಿಷ್ಣು,ಬಬ್ರುವಾಹನ, ಅಭಿಮನ್ಯು, ಚಂಡಮುಂಡರು, ಶ್ರೀಕೃಷ್ಣ, ಜಯಂತ, ಸುದರ್ಶನ, ಪರಶುರಾಮ,ಭಂಡಾಸುರ, ದಂಭೋದ್ಭವ, ಹನೂಮಂತ, ಲಕ್ಷ್ಮಣ ಮೊದಲಾದುವು ಇವರಿಗೆ ಪ್ರಿಯವಾದ ಪಾತ್ರಗಳು. ಈ ಎಲ್ಲಾ ಪಾತ್ರಗಳಲ್ಲಿ ಅವರ ನಿರ್ವಹಣೆಯನ್ನು ಕಂಡಿರುವೆ.
ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳಲ್ಲೂ ಶ್ರೀ ಜನಾರ್ದನ ಉಪ್ಪುಂದ ಅವರಿಗೆ ಒಳ್ಳೆಯ ಹೆಸರಿದೆ. ಸಹಕಲಾವಿದನಾಗಿ ಅವರ ಜತೆ ಅಭಿನಯಿಸುವ ಅವಕಾಶವೂ ಆಗಿದೆ. ಕಿರೀಟ ವೇಷಗಳನ್ನೂ ಮೇಳದಲ್ಲಿ ನಿರ್ವಹಿಸುತ್ತಾರೆ. ಅನಿವಾರ್ಯ ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಪಾತ್ರಗಳನ್ನೂ ಮಾಡಿದ್ದಿದೆ. ಒಂದನೇ ಮೇಳದಲ್ಲಿರುವಾಗ ಹೆಚ್ಚಿನ ದಿನವೂ ಎರಡೆರಡು ಪಾತ್ರಗಳನ್ನು ಮಾಡುತ್ತಿದ್ದರು. ಈಗಲೂ ಅನಿವಾರ್ಯವಾದರೆ ಎರಡೆರಡು ಪಾತ್ರಗಳನ್ನು ಮಾಡಿ ಸಹಕಾರಿಯಾಗುತ್ತಾರೆ.
ಶ್ರೀ ಜನಾರ್ದನ ಉಪ್ಪುಂದ ಅವರು ಬಡಗು ತಿಟ್ಟಿನ ಪ್ರದರ್ಶನಗಳಲ್ಲೂ ವೇಷ ಮಾಡಿ ಅನುಭವ ಉಳ್ಳವರು. ಮಳೆಗಾಲದಲ್ಲಿ ಜೀವನ ನಿರ್ವಹಣೆಗಾಗಿ ಪೆಟ್ರೋಲ್ ಬಂಕ್ ಮತ್ತು ಹೊಟೇಲುಗಳಲ್ಲಿ ಕೆಲಸ ಮಾಡಿದ್ದರು. ಪ್ರಸ್ತುತ ಅನೇಕ ವರ್ಷಗಳಿಂದ ಮಂಗಳೂರು ಕುಳಾಯಿ ಶ್ರೀ ವಿಷ್ಣುಮೂರ್ತಿ ದೇವಾಯಲದ ವತಿಯಿಂದ ನಡೆಸಲ್ಪಡುವ ಚಿಕ್ಕ ಮೇಳದಲ್ಲೂ ಕಲಾವಿದನಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2009ರಲ್ಲಿ ವೀಣಾ ಅವರನ್ನು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಶ್ರೀ ಜನಾರ್ದನ ಉಪ್ಪುಂದ, ವೀಣಾ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. ಪ್ರಥಮ ಪುತ್ರ ಮಾಸ್ಟರ್ ಪ್ರಣವ್. 2ನೆಯ ತರಗತಿ. ದ್ವಿತೀಯ ಪುತ್ರ ಮಾಸ್ಟರ್ ಪವನನಿಗೆ ಐದು ವರ್ಷ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಜನಾರ್ದನ ಉಪ್ಪುಂದ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ. ಸಕಲ ಭಾಗ್ಯಗಳನ್ನೂ ಕಲಾಮಾತೆಯು ಅನುಗ್ರಹಿಸಲಿ ಎಂಬ ಆಶಯಗಳು.