Saturday, May 16, 2026
Home Blog Page 232

ದೆಹಲಿ ಐಜಿಐ ವಿಮಾನ ನಿಲ್ದಾಣದಲ್ಲಿ 1.24 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆ

ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಪುರುಷ ಪ್ರಯಾಣಿಕರೊಬ್ಬರಿಂದ ಸುಮಾರು 1.24 ಕೋಟಿ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

ಈ ಭಾರೀ ಮೊತ್ತದ ಹಣಕ್ಕೆ ಆ ಪ್ರಯಾಣಿಕರು ಸೂಕ್ತ ಧಾಖಲೆಗಳನ್ನು ಒದಗಿಸಲು ವಿಫಲರಾದರು.

ದಾಖಲೆಗಳನ್ನು ನೀಡಲು ಅಸಾಧ್ಯವಾದ ಕಾರಣ ಪತ್ತೆಯಾದ ಮೊತ್ತದೊಂದಿಗೆ ಪ್ರಯಾಣಿಕರನ್ನು ಮುಂದಿನ ಕ್ರಮಕ್ಕಾಗಿ ಕಸ್ಟಮ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎಂದು ಸಿಐಎಸ್ಎಫ್ ತಿಳಿಸಿದೆ.

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಕಲಿಕೆ ಎನ್ನುವುದು ನಿರಂತರ, ಕಾಲೇಜಿನಲ್ಲಿ ಕಲಿಯುವುದು ಮುಗಿದರೂ ನಿಮ್ಮ ನಿಜವಾದ ಜೀವನದ ಪಾಠ ಇನ್ನು ಮುಂದೆ ಪ್ರಾರಂಭವಾಗುತ್ತದೆ ಎಂದು ಮರ್ಸಿಡಿಸ್ ಬೆಂಝ್‌ನ ಪ್ರಾಡಕ್ಟ್ ಡೆವೆಲಪ್‌ಮೆಂಟ್ ವಿಭಾಗದ ಸೀನಿಯರ್ ಎಂಜಿನಿಯರ್ ಹಾಗೂ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್  ಎಂಡ್ ಟೆಕ್ನಾಲಜಿಯ ಪೂರ್ವ ವಿದ್ಯಾರ್ಥಿ ಪ್ರಬೋಧ್ ಐತಾಳ್ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್  ಎಂಡ್ ಟೆಕ್ನಾಲಜಿಯ ಅಂತಿಮ ವರ್ಷದ ಇಂಜಿನಿಯರಿಂಗ್  ಮತ್ತು ಎಂಬಿಎ ವಿಭಾಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. ಇತ್ತೀಚಿನ ದಿನಗಳಲ್ಲಿ ಭೌತಿಕ ಉಪಸ್ಥಿತಿಗಿಂತ ಆನ್ಲೈನ್  ವಿಧಾನಕ್ಕೆ ಹೆಚ್ಚಿನ ಪ್ರಾಶಸ್ತ್ಯ  ನೀಡಲಾಗುತ್ತಿದ್ದು, ನಿಮ್ಮನ್ನು ನೀವು ಹೇಗೆ ಪ್ರಸ್ತುತಪಡಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ನಿರ್ಧರಿತವಾಗುತ್ತದೆ ಎಂದರು.

ಹೊಸತನ್ನು ಕಲಿಯುತ್ತಾ ಹೋಗುವುದರ ಮೂಲಕ ಇತರರಿಗಿಂತ ಭಿನ್ನವಾಗುವುದಕ್ಕೆ ಪ್ರಯತ್ನಿಸಬೇಕು. ನಡವಳಿಕೆ ಮತ್ತು ತಾಂತ್ರಿಕತೆಯನ್ನು ಸಮಾನವಾಗಿ ಸಮತೋಲನ ಮಾಡಿಕೊಂಡರೆ ಮಾತ್ರ  ಒತ್ತಡವನ್ನು ನಿಭಾಯಿಸಬಹುದು ಎಂದು ನುಡಿದರು.


ಕಾಲೇಜಿನ ವಾರ್ಷಿಕಾಂಕ ‘ಅಂಕುರ’ವನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ಕಾಲೇಜು ಕರ್ನಾಟಕ ಸರ್ಕಾರದ ಸೂಪರ್-30 ಯೋಜನೆಗೆ ಆಯ್ಕೆಯಾಗಿದ್ದು, ವಿಶ್ವದರ್ಜೆಯ ಮಟ್ಟಕ್ಕೆ ಏರುವ ಅವಕಾಶ ಸಿಕ್ಕಿದೆ ಎಂದರು. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸೋಣ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ ಮಾತನಾಡಿ ಇದುವರೆಗೆ ಕಲಿಕೆಯಲ್ಲಿ ಮತ್ತು ಶಿಸ್ತಿನಲ್ಲಿ ನಿಮ್ಮನ್ನು ತಿದ್ದಿ ತೀಡಿ ಸಚ್ಚಾರಿತ್ರ್ಯವಂತರನ್ನಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿದ್ದೇವೆ. ನಿಮ್ಮ ಜೀವನ ಪಯಣದಲ್ಲಿ ಇದರ ನೆನಪು ಬಂದರೆ ನಮ್ಮ ಶ್ರಮ ಸಾರ್ಥಕ ಎಂದರು. ಜೀವನದಲ್ಲಿ ಹಣಗಳಿಸುವುದೇ ಧ್ಯೇಯವಾಗಬಾರದು ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದ ಮಾತಾ ಪಿತರು, ಗುರುಗಳು, ವಿದ್ಯಾಸಂಸ್ಥೆಗಳು ಹಾಗೂ ಇತರರನ್ನು ನೋಯಿಸದೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.


ಕಾಲೇಜಿನಿಂದ ಬೀಳ್ಕೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಆಟೋಟ ಸ್ಪರ್ಧೆಯಲ್ಲಿ ವಿಶಿಷ್ಟ ಸಾಧನೆಯನ್ನು ಮಾಡಿದ ಕ್ರೀಡಾಪಟುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿಡಿಯೋ ಎಡಿಟಿಂಗ್‌ನಲ್ಲಿ ವಿಶೇಷ ಸಾಧನೆಯನ್ನು ಮಾಡಿದ ಪ್ರತಿಭಾವಂತ ವಿಧ್ಯಾರ್ಥಿ ಎಲೆಕ್ಟ್ರಾನಿಕ್ಸ್  ಎಂಡ್ ಕಮ್ಯುನಿಕೇಶನ್ ವಿಭಾಗದ ಅಕ್ಷಯ್ ಕುಮಾರ್ ಅವರನ್ನು ಗೌರವಿಸಲಾಯಿತು.


ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಕೋಶಾಧಿಕಾರಿ ಮುರಳೀಧರ ಭಟ್ ಬಂಗಾರಡ್ಕ, ನಿರ್ದೇಶಕರಾದ ಸಂತೋಷ್ ಕುತ್ತಮೊಟ್ಟೆ, ಸತ್ಯನಾರಾಯಣ ಭಟ್, ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ವಿಭಾಗ ಮುಖ್ಯಸ್ಥರಾದ ಪ್ರೊ.ಕೃಷ್ಣಮೋಹನ್, ಡಾ.ಆನಂದ್.ವಿ.ಆರ್, ಡಾ.ಮನುಜೇಶ್.ಬಿ.ಜೆ, ಪ್ರೊ.ಶ್ರೀಕಾಂತ್ ರಾವ್.ಕೆ, ಡಾ.ಗೋವಿಂದ.ಪಿ, ಪ್ರೊ.ರಮಾನಂದ್ ಕಾಮತ್, ಡಾ.ಶೇಖರ್.ಎಸ್.ಅಯ್ಯರ್, ಡಾ.ವಂದನಾ, ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮತ್ತು ಮುಖ್ಯ ಗ್ರಂಥಪಾಲಕ ದಿನೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾರ್ಷಿಕ ಪತ್ರಿಕೆ ಅಂಕುರದ ಸಂಪಾದಕ ಪ್ರೊ.ಸುದರ್ಶನ್.ಎಂ.ಎಲ್ ತಮ್ಮ ಅನುಭವವನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಕಾಲೇಜಿನ ತಮ್ಮ ಶೈಕ್ಷಣಿಕ ಯಾನದ ಅನುಭವಗಳನ್ನು ಮೆಲುಕು ಹಾಕಿದರು. ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಕ ಡಾ. ಮನುಜೇಶ್.ಬಿ.ಜೆ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಪ್ರೊ.ನಿಶಾ.ಜಿ.ಆರ್ ಮತ್ತು ಪ್ರೊ.ನೀಮಾ ಕಾರ್ಯಕ್ರಮ ನಿರ್ವಹಿಸಿದರು.

ತಲಕಳ ಧರ್ಮಚಾವಡಿಯ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

ತಲಕಳ ಧರ್ಮಚಾವಡಿಯ ಸ್ವಾಮೀಜಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.

ಅವರ ದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರೂ ಇದೂ ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಮಂಗಳೂರಿನ ಬಜಪೆ ಸಮೀಪದ  ತಲಕಳದಲ್ಲಿರುವ ಶ್ರೀಕೃಷ್ಣ ದೇವಿಪ್ರಸಾದ ತೀರ್ಥ ಸ್ವಾಮೀಜಿಯವರ ದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅವರು ವಾಸವಾಗಿದ್ದ  ತಲಕಳ ಧರ್ಮಚಾವಡಿ ಕಟ್ಟಡದಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಅವರ ಪೂರ್ವಾಶ್ರಮದ ಹೆಸರು ದೇವಿಪ್ರಸಾದ್ ಶೆಟ್ಟಿ ಎಂಬುದಾಗಿದ್ದು ಅವರು ಹೋಟೆಲ್ ಉದ್ಯಮವನ್ನು ನಡೆಸುತ್ತಿದ್ದರು.

ಸಂಸಾರದಲ್ಲಿ ವಿರಸ, ವಿರಕ್ತಿಗಳನ್ನು ಹೊಂದಿ ಅವರು ಎಕರೆಗಟ್ಟಲೆ ಸ್ಥಳದಲ್ಲಿ ಧರ್ಮಚಾವಡಿ ಎಂಬ ಸಂಸ್ಥೆಯನ್ನು ಕಟ್ಟಿ ಸನ್ಯಾಸದೀಕ್ಷೆಯನ್ನು ಸ್ವೀಕರಿಸಿದ್ದರು. ಧರ್ಮಚಾವಡಿ ಸಂಸ್ಥೆಗೆ ಅಗಾಧ ಪ್ರಮಾಣದ ಅಸ್ತಿ, ಸಂಪತ್ತು ಇದೆ ಎಂದು ಹೇಳಲಾಗುತ್ತಿದೆ.

ಆದುದರಿಂದ  ಸಾವಿನ ಬಗ್ಗೆ ಕೆಲವೊಂದು ಸಂದೇಹಗಳನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಅವರ ಪೂರ್ವಾಶ್ರಮದ ಪತ್ನಿ ಮತ್ತು ತಾಯಿ ಅಲ್ಲಿಯೇ ದೂರದಲ್ಲಿದ್ದ ಅವರ ಪೂರ್ವಾಶ್ರಮದ ಮನೆಯಲ್ಲಿ ವಾಸಿಸುತ್ತಿದ್ದರು.

ಮಗಳು ವಿದೇಶದಲ್ಲಿ ನೆಲೆಸಿದ್ದಾರೆ ಎಂಬ ಮಾಹಿತಿಯಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ. 

ತಾಳಮದ್ದಳೆ ಸಪ್ತಾಹದಲ್ಲಿ ಇಂದು ‘ವಿಭೀಷಣ ನೀತಿ’ ತಾಳಮದ್ದಳೆ

ಯಕ್ಷಗಾನ ತಾಳಮದ್ದಳೆ ಕೂಟಗಳ ಆಸ್ವಾದಕರಿಗೆ ಜುಲೈ 22ರಿಂದ ಒಂದು ಒಳ್ಳೆಯ ಅವಕಾಶ ಸಿಗಲಿದೆ. ಸುಮಾರು ಏಳು ದಿನಗಳಲ್ಲಿ ವಿವಿಧ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.

ಕೊನೆಯ ದಿನ ಯಕ್ಷನೃತ್ಯ ಕಾರ್ಯಕ್ರಮವೂ ನಡೆಯಲಿದೆ. ಈ ತಾಳಮದ್ದಳೆ ಜುಲೈ 22ರಿಂದ ಜುಲೈ 29ರ ತನಕ ಪ್ರತಿದಿನ ಸಂಜೆ ಘಂಟೆ 5.45ರಿಂದ ಆರಂಭವಾಗಲಿದೆ.

ಇಂದು ‘ವಿಭೀಷಣ ನೀತಿ’ ಎಂಬ ಪ್ರಸಂಗದ ತಾಳಮದ್ದಳೆ  ನಡೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಯೂಟ್ಯೂಬ್ ನೇರ ಪ್ರಸಾರ ಲಭ್ಯವಿದೆ. 

ಬೆಳ್ತಂಗಡಿಯ ಲಾಯಿಲದ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾದಲ್ಲಿ ಕಾರ್ಯಕ್ರಮ ನಡೆಯಲಿದೆ.

ವಿವರಗಳಿಗೆ ಚಿತ್ರ ನೋಡಿ. 

ಮೂರು, ನಾಲ್ಕು ತಲೆಮಾರುಗಳಿಗೆ ಆಗುವಷ್ಟು ನಾವು ಮಾಡ್ಕೊಂಡಿದ್ದೇವೆ – ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ನಿನ್ನೆಯ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ

ಮೂರು, ನಾಲ್ಕು ತಲೆಮಾರುಗಳಿಗೆ ಆಗುವಷ್ಟು ನಾವು ಮಾಡ್ಕೊಂಡಿದ್ದೇವೆ ಎಂದು ನಿನ್ನೆ ಭಾಷಣದಲ್ಲಿ ಹೇಳಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಜನರು ವ್ಯಾಪಕ ಆಕ್ಷೇಪ ಖಂಡನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. 


ಕಳೆದ ವರ್ಷ ಅಸೆಂಬ್ಲಿಯಲ್ಲಿ ಅತ್ಯಾಚಾರದ ಕಾಮೆಂಟ್‌ಗಾಗಿ ವಿವಾದಕ್ಕೆ ಸಿಲುಕಿದ್ದ ರಮೇಶ್ ಕುಮಾರ್, ಕರ್ನಾಟಕದ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್‌ನ ಪ್ರತಿಭಟನೆಯ ಸಂದರ್ಭದಲ್ಲಿ ನೆಹರು-ಗಾಂಧಿ ಕುಟುಂಬದ ಬಗ್ಗೆ ಮಾಡಿದ ಕಾಮೆಂಟ್‌ಗಳ ನಂತರ ಮತ್ತೊಮ್ಮೆ ವಿವಾದವನ್ನು ಹುಟ್ಟುಹಾಕಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಶಾಸಕ ಮತ್ತು ಮಾಜಿ ವಿಧಾನಸಭಾ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರು ಗುರುವಾರ (ಜುಲೈ 21, 2022) ಕಾಂಗ್ರೆಸ್ ನಾಯಕರು 3-4 ತಲೆಮಾರುಗಳಿಗೆ ಸಾಕಾಗುವಷ್ಟು ಸಂಪಾದಿಸಿದ್ದಾರೆ ಮತ್ತು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬೆಂಬಲಕ್ಕೆ ನಿಲ್ಲುವಂತೆ ಕರೆ ನೀಡಿದರು.

ಕರ್ನಾಟಕದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಕುಮಾರ್ ಅವರು ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.ಜವಾಹರಲಾಲ್ ನೆಹರು, ಇಂದಿರಾಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಹೆಸರಿನಲ್ಲಿ ನಾವು 3-4 ತಲೆಮಾರುಗಳಿಗೆ ಸಾಕಾಗುವಷ್ಟು ಹಣವನ್ನು ಸಂಪಾದಿಸಿದ್ದೇವೆ, ಇಷ್ಟು ತ್ಯಾಗ ಮಾಡಲು ಸಾಧ್ಯವಾಗದಿದ್ದರೆ ಅದು ನಮಗೆ ಒಳ್ಳೆಯದಲ್ಲ ಎಂದು ಕುಮಾರ್ ಹೇಳಿದ್ದರು.

ಕೇರಳದ ವಯನಾಡಿನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ

ಕೇರಳದ ವಯನಾಡಿನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ, 300 ಹಂದಿಗಳನ್ನು ಕೊಲ್ಲಲಾಗುವುದು.

ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ನಲ್ಲಿ ಮಾದರಿಗಳನ್ನು ಪರೀಕ್ಷಿಸಿದ ನಂತರ ಕೇರಳದ ವಯನಾಡು ಜಿಲ್ಲೆಯ ಎರಡು ಫಾರ್ಮ್‌ಗಳ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ರೋಗ ದೃಢಪಟ್ಟಿದೆ.

ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಎರಡು ತೋಟಗಳಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಭೋಪಾಲ್‌ನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ನಲ್ಲಿ ಮಾದರಿಗಳನ್ನು ಪರೀಕ್ಷಿಸಿದ ನಂತರ ಜಿಲ್ಲೆಯ ಎರಡು ಫಾರ್ಮ್‌ಗಳ ಹಂದಿಗಳಲ್ಲಿ ರೋಗ ದೃಢಪಟ್ಟಿದೆ.

ಫಾರ್ಮ್ ಒಂದರಲ್ಲಿ ಹಂದಿಗಳು ಸಾಮೂಹಿಕವಾಗಿ ಸತ್ತ ನಂತರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. “ಈಗ ಪರೀಕ್ಷಾ ಫಲಿತಾಂಶದಲ್ಲಿ ಸೋಂಕು ದೃಢಪಟ್ಟಿದೆ. ಎರಡನೇ ಫಾರ್ಮ್‌ನ 300 ಹಂದಿಗಳನ್ನು ಕೊಲ್ಲಲು ನಿರ್ದೇಶನಗಳನ್ನು ನೀಡಲಾಗಿದೆ” ಎಂದು ಅಧಿಕಾರಿ ಹೇಳಿದರು.

ರೋಗ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಬಿಹಾರ ಮತ್ತು ಕೆಲವು ಈಶಾನ್ಯ ರಾಜ್ಯಗಳಲ್ಲಿ ಆಫ್ರಿಕನ್ ಹಂದಿ ಜ್ವರ ವರದಿಯಾಗಿದೆ ಎಂದು ಕೇಂದ್ರದ ಎಚ್ಚರಿಕೆಯ ನಂತರ ರಾಜ್ಯವು ಈ ತಿಂಗಳ ಆರಂಭದಲ್ಲಿ ಜೈವಿಕ ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿತ್ತು.

ಆಫ್ರಿಕನ್ ಹಂದಿ ಜ್ವರವು ದೇಶೀಯ ಹಂದಿಗಳ ಮೇಲೆ ಪರಿಣಾಮ ಬೀರುವ ಅತ್ಯಂತ ಸಾಂಕ್ರಾಮಿಕ ಮತ್ತು ಮಾರಣಾಂತಿಕ ವೈರಲ್ ಕಾಯಿಲೆಯಾಗಿದೆ.

(ಶೀರ್ಷಿಕೆಯನ್ನು ಹೊರತುಪಡಿಸಿ, ಈ ವಾರ್ತೆಯನ್ನು yakshadeepa.com ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಪ್ರಕಟಿಸಲಾಗಿದೆ.)

ಗುರುಪುರ ಕೈಕಂಬದ ಮೋದಿ ಪರಿವಾರ್ ರಿಕ್ಷಾ ಚಾಲಕ, ಮಾಲಕರ ನಿಸ್ವಾರ್ಥ ಸೇವೆ – ದಾನಿಗಳ ಹಾಗೂ ಸಾರ್ವಜನಿಕರ ಸಹಕಾರದಿಂದ ಪರಿಸರದ ಜನರಿಗೆ ಅಂಬುಲೆನ್ಸ್ ಕೊಡುಗೆ

ದಿನಾಂಕ 21/07/2022 ರ ಗುರುವಾರ ಕೈಕಂಬ ಜಂಕ್ಷನ್ ರಸ್ತೆ ಪಕ್ಕದಲ್ಲಿ, ಅನಾಥ ಶವಯೊಂದು ಇರುವ ಸುದ್ದಿಯನ್ನು ತಿಳಿದ, ಮೋದಿ ಪರಿವಾರ್ ರಿಕ್ಷಾ ಚಾಲಕರು ತಕ್ಷದಲ್ಲೆ ಬಜಪೆ ಪೋಲಿಸ್ ಠಾಣೆಗೆ ವಿಷಯವನ್ನು ತಿಳಿಸಿದ್ದು, ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ನಂತರದಲ್ಲಿ,ಅನಾಥ ಶವವನ್ನು ಪೋಲಿಸರ ಸಮ್ಮುಖದಲ್ಲಿ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸುವಲ್ಲಿಯೂ ಸಹಕಾರವನ್ನು ನೀಡಿರುತ್ತಾರೆ.



ತುರ್ತು ಪರಿಸ್ಥಿತಿಯಲ್ಲಿ ಕ್ಷಣಾರ್ದದಲ್ಲೇ ಅಂಬುಲೆನ್ಸ್ ಸೇವೆಯನ್ನು ನೀಡುತ್ತಿರುವ ಮೋದಿ ಪರಿವಾರ್ ರಿಕ್ಷಾ ಚಾಲಕರು ಗುರುಪುರ ಕೈಕಂಬದ ಆಟೋ ಚಾಲಕರಿಗೆ ಸಾರ್ವಜನಿಕರ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನ ಸಮರ್ಪಿಸುತಿದ್ದೇವೆ. 


ಗುರುಪುರ ಕೈಕಂಬದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಅಂಬುಲೆನ್ಸ್ ಕೊರತೆಯನ್ನು ಮನಗಂಡ,ಕೈಕಂಬ ಆಟೋ ಚಾಲಕರು ಅನೇಕ ಕೊಡುಗೈ ದಾನಿಗಳ ಹಾಗು ಸಾರ್ವಜನಿಕ ಸಹಕಾರದಲ್ಲಿ ಎರಡು ಅಂಬುಲೆನ್ಸನ್ನು ಲೋಕಾರ್ಪಣೆ ಮಾಡಿದ್ದು,ಸಾರ್ವಜನಿಕರಿಗೆ ತುಂಬಾ ಸಹಕಾರಿಯಾಗುತ್ತಿದೆ.

ಈಗಾಗಲೇ ತುರ್ತು ಪರಿಸ್ಥಿತಿಯಲ್ಲಿ  ತಕ್ಷಣದ ಸೇವೆಗಳನ್ನು ಮೋದಿ ಪರಿವಾರ್ ರಿಕ್ಷಾ ಚಾಲಕರು ಗುರುಪುರ ಕೈಕಂಬ ಇವರು ನೀಡುತ್ತಿದ್ದು,ಸಾರ್ವಜನಿಕರ ಮೆಚ್ಚುಗೆಯನ್ನು ಪಡೆಯುತ್ತಿದೆ.


ತುರ್ತು ಪರಿಸ್ಥಿತಿಗಳಲ್ಲಿ ಕರೆ ಮಾಡಿದಾಗ ಹಿಂದೆ ಮುಂದೆ ನೋಡದೆ ತಕ್ಷಣದಲ್ಲೇ ಬರುವ ಆಟೋ ಚಾಲಕರಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತ,ನಿಮ್ಮ ಅಂಬುಲೆನ್ಸ್ ಸೇವೆಯೂ ಮುಂದೆಯೂ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ನೆರವಾಗಲಿ, ದೇವರು ತಮಗೆ ಸಕಲೈಶ್ವರ್ಯಗಳನ್ನು ದಯಪಾಲಿಸಲಿ, ಸಾರ್ವಜನಿಕ ಸೇವೆಗಳನ್ನೂ ನಿರಂತರವಾಗಿ ಮಾಡುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಪ್ರಾರ್ಥಿಸುತ್ತೇವೆ.
ಬರಹ: ಸಾರ್ವಜನಿಕ ಬಂಧುಗಳು, ಗುರುಪುರ,ಕೈಕಂಬ

ಭಾರೀ ಮಳೆಯ ನಂತರ ನರ್ಮದಾ ನದಿಯ ನೀರಿನ ಮಟ್ಟ ಏರಿಕೆ – ನದಿಯ ಕಿನಾರೆಯಲ್ಲಿರುವ ದೇವಸ್ಥಾನಗಳ ಸಣ್ಣ ಸಣ್ಣ ಗುಡಿಗಳು ನೀರಿನಲ್ಲಿ ಮುಳುಗಡೆ – ವೀಡಿಯೊ

ಮಧ್ಯಪ್ರದೇಶದಲ್ಲಿ  ಭಾರೀ ಮಳೆ ಸುರಿಯುತ್ತಲಿದ್ದು, ನರ್ಮದಾ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗುತ್ತಿದೆ.

ನದಿಯ ಕಿನಾರೆಯಲ್ಲಿರುವ ದೇವಸ್ಥಾನಗಳ ಸಣ್ಣ ಸಣ್ಣ ಗುಡಿಗಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಾಣಬಹುದು.

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭಾರೀ ಮಳೆಯ ನಂತರ ನರ್ಮದಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ, ಟ್ವಿಟ್ಟರ್ ವೀಡಿಯೊ ನೋಡಿ

“ಸರ್ಕಾರದ ಯಾವುದೇ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕನ್ನು ನೀಡಬೇಕು” ಎಂದ ಕಾಂಗ್ರೆಸ್ ನಾಯಕ ಜಗದೀಶ್ ಠಾಕೂರ್ ಹೇಳಿಕೆಯಿಂದ ರೊಚ್ಚಿಗೆದ್ದ ಜನ – ಅಹಮದಾಬಾದ್ ನ ಗುಜರಾತ್ ಕಾಂಗ್ರೆಸ್ ಕಚೇರಿಗೆ ‘ಹಜ್ ಹೌಸ್’ ಎಂದು ಹೆಸರು ಬದಲಾವಣೆ

ನಿನ್ನೆ ಅಹಮದಾಬಾದ್‌ನಲ್ಲಿರುವ ಗುಜರಾತ್ ಕಾಂಗ್ರೆಸ್ ಪ್ರದೇಶ ಸಮಿತಿಯ ಕಚೇರಿಯಲ್ಲಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ವಿರೂಪಗೊಳಿಸಲಾಗಿದೆ. ‘ಇಂದಿನಿಂದ ಈ ಕಚೇರಿಯ ಹೆಸರನ್ನು ಹಜ್ ಹೌಸ್ ಎಂದು ಬದಲಾಯಿಸಲಾಗಿದೆ’ ಎಂಬ ಪೋಸ್ಟರ್‌ಗಳನ್ನು ಅವುಗಳ ಮೇಲೆ ಅಂಟಿಸಲಾಗಿದೆ.

ಜಗದೀಶ್ ಠಾಕೂರ್ ಹೇಳಿಕೆಯನ್ನು ವಿರೋಧಿಸಿ ಭಜರಂಗದಳದ ಗುಂಪು ಗುಜರಾತ್ ಕಾಂಗ್ರೆಸ್ ಕಚೇರಿಯನ್ನು ‘ಹಜ್ ಹೌಸ್’ ಎಂದು ಮರುನಾಮಕರಣ ಮಾಡಿದೆ ಎಂದು ತಿಳಿದುಬಂದಿದೆ.

ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ (ಜಿಪಿಸಿಸಿ) ಪ್ರಧಾನ ಕಚೇರಿ ರಾಜೀವ್ ಗಾಂಧಿ ಭವನದಲ್ಲಿ ಶುಕ್ರವಾರ ಮುಂಜಾನೆ ಅಪರಿಚಿತ ವ್ಯಕ್ತಿಗಳು ಕಾಂಗ್ರೆಸ್ ನಾಯಕರ ಚಿತ್ರಗಳನ್ನು ವಿರೂಪಗೊಳಿಸಿದ್ದಾರೆ ಮತ್ತು ಪೋಸ್ಟರ್‌ಗಳನ್ನು ಅಂಟಿಸಿ ಮತ್ತು ಗೋಡೆಗಳಿಗೆ ಬಣ್ಣ ಬಳಿಯುವ ಮೂಲಕ ಕಟ್ಟಡಕ್ಕೆ ‘ಹಜ್ ಹೌಸ್’ ಎಂದು ಮರುನಾಮಕರಣ ಮಾಡಿದ್ದಾರೆ.

ಈ ವಾರದ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ಜಿಪಿಸಿಸಿ ಅಧ್ಯಕ್ಷ ಜಗದೀಶ್ ಠಾಕೂರ್ ಅವರು ಅಲ್ಪಸಂಖ್ಯಾತರ ಬಗ್ಗೆ ಮಾಡಿದ ಹೇಳಿಕೆಯನ್ನು ವಿರೋಧಿಸಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ಸಿನ ಜಗದೀಶ್ ಠಾಕೂರ್ ಅವರು ಅಲ್ಲಿ ಅವರು “ಸರ್ಕಾರದ ಯಾವುದೇ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಮೇಲೆ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕನ್ನು ನೀಡಬೇಕು” ಎಂದು ಹೇಳಿದರು.

ಈ ಹೇಳಿಕೆಯಿಂದ ರೊಚ್ಚಿಗೆದ್ದ ಭಜರಂಗದಳದ ಕಾರ್ಯಕರ್ತರು ಬೆಳಗಾಗುವುದರೊಳಗೆ ಜಿಪಿಸಿಸಿ ಹೆಚ್‌ಕ್ಯುಗೆ ಆಗಮಿಸಿ ಕಟ್ಟಡದ ಕಾಂಪೌಂಡ್ ಗೋಡೆಯ ಮೇಲೆ ‘ಹಜ್ ಹೌಸ್’ ಎಂದು ಬರೆದಿದ್ದಾರೆ. ಪೋಸ್ಟರ್‌ಗಳಲ್ಲಿ ಕಾಂಗ್ರೆಸ್ ನಾಯಕರ ಮುಖಕ್ಕೆ ಮಸಿ ಬಳಿದರು ಮತ್ತು ಠಾಕೂರ್ ಸ್ಕಲ್ ಕ್ಯಾಪ್ ಧರಿಸಿರುವ ಚಿತ್ರದ ಜೊತೆಗೆ ಜಿಪಿಸಿಸಿ ಪ್ರಧಾನ ಕಚೇರಿಯ ಹೆಸರನ್ನು ‘ಹಜ್ ಹೌಸ್’ ಎಂದು ಬದಲಾಯಿಸಲಾಗಿದೆ ಎಂದು ಹೇಳುವ ಪೋಸ್ಟರ್‌ಗಳನ್ನು ಹಾಕಿದರು.

“ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣದಿಂದ ಬಹುಸಂಖ್ಯಾತ ಸಮುದಾಯದಲ್ಲಿರುವ ಸಿಟ್ಟನ್ನು ನಮ್ಮ ಕಾರ್ಯಕರ್ತರು ಪ್ರತಿಬಿಂಬಿಸಿದ್ದಾರೆ. ಇಂತಹ ರಾಜಕೀಯದಿಂದಲೇ ಕಾಂಗ್ರೆಸ್ ದೇಶಾದ್ಯಂತ ನೆಲೆ ಕಳೆದುಕೊಂಡಿದೆ. ಕಾಂಗ್ರೆಸ್ ನಾಯಕರ ಚಿತ್ರಗಳನ್ನು ವಿರೂಪಗೊಳಿಸುವ ಜವಾಬ್ದಾರಿಯನ್ನು ಭಜರಂಗದಳ ತೆಗೆದುಕೊಳ್ಳುತ್ತದೆ.” ಎಂದು ಬಜರಂಗದಳದ ಉತ್ತರ ಗುಜರಾತ್ ಸಂಚಾಲಕ ಜ್ವಾಲಿತ್ ಮೆಹ್ತಾ ಹೇಳಿದರು.

ಇದು ಬಜರಂಗದಳದ ಕಾರ್ಯಕರ್ತರ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಗೂಂಡಾಗಿರಿ ಎಂದು ರಾಜ್ಯ ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಆರೋಪಿಸಿದ್ದಾರೆ.

ಬಹುಮುಖ ಪ್ರತಿಭೆಯ ಹಾಸ್ಯಗಾರ – ತುಂಬೆ ಚಂದ್ರಹಾಸ ಪೂಜಾರಿ

ಹಾಸ್ಯಗಾರ ಶ್ರೀ ಚಂದ್ರಹಾಸ ಪೂಜಾರಿ ತುಂಬೆ ಓರ್ವ ಬಹುಮುಖ ಪ್ರತಿಭೆಯ ಕಲಾವಿದ. ಯಕ್ಷಗಾನದಲ್ಲಿ ಸ್ತ್ರೀ ಪಾತ್ರಗಳನ್ನು ಬಿಟ್ಟು ಉಳಿದ ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಬಲ್ಲರು. ವೇಷಭೂಷಣ ತಯಾರಿಕಾ ಕಲೆಯನ್ನೂ ಬಲ್ಲವರು. ಪೋಸ್ಟರ್ ಮತ್ತು ಬ್ಯಾನರ್ ಬರೆಯುವ ಕಲೆಯೂ ಇವರಿಗೆ ಕರಗತ. ಮನೆ, ಕಟ್ಟಡಗಳಿಗೆ ಪೈಂಟಿಂಗ್ ಮಾಡುವ ಕೆಲಸವನ್ನೂ ತಿಳಿದವರು.

ಸುಮಾರು 40 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಪ್ರಸ್ತುತ ಶ್ರೀ ಕಟೀಲು ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಹಾಸ್ಯಗಾರರಾಗಿ ತಿರುಗಾಟ ನಡೆಸುತ್ತಿದ್ದಾರೆ. 

ಹಾಸ್ಯಗಾರ ಶ್ರೀ ಚಂದ್ರಹಾಸ ಪೂಜಾರಿ ತುಂಬೆ ಅವರ ಹುಟ್ಟೂರು ಬಂಟ್ವಾಳ ತಾಲೂಕಿನ ತುಂಬೆ. ಶ್ರೀ ಕೊರಗಪ್ಪ ಪೂಜಾರಿ ಮತ್ತು ಶ್ರೀಮತಿ ಲಿಂಗಮ್ಮ ದಂಪತಿಗಳ ಪುತ್ರನಾಗಿ 1964ರಲ್ಲಿ ಜನನ. ಕೊರಗಪ್ಪ ಪೂಜಾರಿ ಅವರ ನಾಲ್ಕು ಮಂದಿ ಗಂಡು ಮಕ್ಕಳಲ್ಲಿ ಇವರು ಕಿರಿಯವರು. ವಿದ್ಯಾರ್ಜನೆ 9ನೇ ತರಗತಿ ವರೆಗೆ. ತುಂಬೆ ಶಾಲೆ ಮತ್ತು ಪಾಣೆಮಂಗಳೂರು ಹೈಸ್ಕೂಲಿನಲ್ಲಿ.

ವಿದ್ಯಾರ್ಥಿಯಾಗಿದ್ದಾಗಲೇ ಯಕ್ಷಗಾನ ಕಲೆಯು ಕೈಬೀಸಿ ಕರದಿತ್ತು. ಪ್ರದರ್ಶನಗಳನ್ನು ಆಸಕ್ತಿಯಿಂದ ನೋಡುತ್ತಿದ್ದರು. ಮನೆಯ ಹತ್ತಿರ ಸುಂಕದಕಟ್ಟೆ ಮೇಳದ ಪ್ರದರ್ಶನ ನೋಡಲು ಹೋಗಿದ್ದರು. ಚೌಕಿಗೆ ತೆರಳಿ ಮೇಳದ ಮ್ಯಾನೇಜರರಲ್ಲಿ ನಾನು ಮೇಳಕ್ಕೆ ಬರುತ್ತೇನೆ ಎಂದು ಕೇಳಿಕೊಂಡಿದ್ದರು. ಮನೆಯವರ ಒಪ್ಪಿಗೆ ಪಡೆದು ಬಾ ಎಂದು ಎಂದು ಹೇಳಿ ಮ್ಯಾನೇಜರ್ ಅವರು ಚಂದ್ರಹಾಸ ಪೂಜಾರಿ ಅವರನ್ನು ಮನೆಗೆ ಕಳಿಸಿದ್ದರು.

ಮನೆಯವರ ಒಪ್ಪಿಗೆಯಿರಲಿಲ್ಲ. ಮನೆಯವರಲ್ಲಿ ಹೇಳದೆ ಶಾಲಾ ಸಹಪಾಠಿಗಳಿಗೆ ಮಾತ್ರ ವಿಚಾರ ತಿಳಿಸಿ ಸುಂಕದಕಟ್ಟೆ ಮೇಳ ಸೇರಿದ್ದರು. ಮೇಳದಲ್ಲಿ ಕೆಲಸದ ಜತೆ ಸಣ್ಣಪುಟ್ಟ ವೇಷಗಳನ್ನು ಮಾಡುತ್ತಿದ್ದರು. ಮೇಳದಲ್ಲಿದ್ದುಕೊಂಡೇ ಕಲಾವಿದ ಶ್ರೀ ಕುಂಞಿರಾಮ ಅವರಿಂದ ಹೆಜ್ಜೆಗಾರಿಕೆ ಕಲಿತರು. ಕೋಡಂಗಿಯಿಂದ ಆರಂಭಿಸಿ ಬಾಲಗೋಪಾಲ, ಪೀಠಿಕೆ ಸ್ತ್ರೀ ವೇಷ ಮಾಡುತ್ತಿದ್ದರು.

ಆ ವರ್ಷದ ತಿರುಗಾಟ ಮುಗಿದ ಬಳಿಕ ಮಳೆಗಾಲದಲ್ಲಿ ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದಲ್ಲಿ ತರಬೇತಿ ಪಡೆದು ಸುಂಕದಕಟ್ಟೆ ಮೇಳದಲ್ಲಿ ನಾಲ್ಕು ವರ್ಷ ತಿರುಗಾಟ ನಡೆಸಿದ ಚಂದ್ರಹಾಸ ಅವರು ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ವೇಷ ಮಾಡಿದರು.

ಆಗ ಬೇಕೂರು ಕೇಶವ ಹಾಸ್ಯಗಾರರಾಗಿದ್ದರು. ಅವರಿಂದ ಹಾಸ್ಯ ಪಾತ್ರಗಳನ್ನು ನಿರ್ವಹಿಸುವ ರೀತಿಯನ್ನು ತಿಳಿದುಕೊಂಡರು. ಬಳಿಕ ಶ್ರೀ ತಿಮ್ಮಪ್ಪ ಗುಜರನ್ ಅವರ ನಾಯಕತ್ವದ ತಲಕಳ ಕಾಶೀ ವಿಶ್ವನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ಪುಂಡುವೇಷಧಾರಿಯಾಗಿ ವ್ಯವಸಾಯ. ಬಳಿಕ ಮೂರು ವರ್ಷ ಪುತ್ತೂರು ಶ್ರೀಧರ ಭಂಡಾರಿಗಳ ಪುತ್ತೂರು ಮೇಳದಲ್ಲಿ ಪುಂಡುವೇಷಗಳ ಜತೆ ಹಾಸ್ಯ ಪಾತ್ರಗಳನ್ನೂ ಮಾಡಿದ್ದರು.

ನಂತರ ಪುತ್ತೂರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ ಒಂದು ವರ್ಷ. ಬಳಿಕ ಕೆ.ಎಚ್ ದಾಸಪ್ಪ ರೈಗಳ ಕುಂಬಳೆ ಮೇಳದಲ್ಲಿ ಹಾಸ್ಯಗಾರರಾಗಿ 2 ವರ್ಷ. ಮುಂದೆ ಮಧೂರು ಮೇಳದಲ್ಲಿ ಒಂದು ವರ್ಷ, ವರ್ಕಾಡಿ ಐತಪ್ಪ ಅವರ ಪುತ್ತೂರು ಮೇಳದಲ್ಲಿ ಒಂದು ವರ್ಷ, ಕಲ್ಲಾಡಿ ದೇವಿಪ್ರಸಾದ್ ಶೆಟ್ಟರ ಕರ್ನಾಟಕ ಮೇಳದಲ್ಲಿ ಒಂದು ವರ್ಷ, ಕಿಶನ್ ಹೆಗ್ಡೆಯವರ ಮಂಗಳಾದೇವಿ ಮೇಳದಲ್ಲಿ ಒಂದು ವರ್ಷ, ದಯಾನಂದ ಗುಜರನ್ ಅವರ ಸಸಿಹಿತ್ಲು ಮೇಳದಲ್ಲಿ ಎಂಟು ವರ್ಷ ವ್ಯವಸಾಯ ಮಾಡಿದ್ದರು.

ಬಳಿಕ ಎರಡು ವರ್ಷ ಧರ್ಮಸ್ಥಳ ಮೇಳ,ವಿನೋದ್ ಕುಮಾರ್ ಬಜಪೆ ಅವರ ಬಪ್ಪನಾಡು ಮೇಳದಲ್ಲಿ ಒಂದು ವರ್ಷ, ಸಸಿಹಿತ್ಲು ಮೇಳದಲ್ಲಿ ಎರಡು ವರ್ಷ,  ವರ್ಕಾಡಿ ಐತಪ್ಪ ಅವರ ತಲಕಳ ಮೇಳದಲ್ಲಿ ಒಂದು ವರ್ಷ, ಹೀಗೆ ಚಂದ್ರಹಾಸ ತುಂಬೆ ಅವರ ಕಲಾಸೇವೆ ಸಾಗಿತ್ತು.

ಕಳೆದ ಐದು ವರ್ಷಗಳಿಂದ ಕಲ್ಲಾಡಿ ಶ್ರೀ ದೇವಿಪ್ರಸಾದ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪ್ರಧಾನ ಹಾಸ್ಯಗಾರರಾಗಿದ್ದಾರೆ. ತುಂಬೆ ಚಂದ್ರಹಾಸ ಪೂಜಾರಿ ಅವರು ಪುರಾಣ ಮತ್ತು ತುಳು ಪ್ರಸಂಗಗಳ ಅನುಭವಿ. ಪುಂಡುವೇಷ ಮತ್ತು ಹಾಸ್ಯಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿದವರು. ಕಿರೀಟ ವೇಷ ಮತ್ತು ಬಣ್ಣದ ವೇಷಗಳನ್ನೂ ಮಾಡಬಲ್ಲವರು.

ಕಳೆದ ಇಪ್ಪತ್ತು ವರ್ಷಗಳಿಂದ ಯಕ್ಷಗಾನ ವೇಷಭೂಷಣ ತಯಾರಿಕೆಯ ಕೆಲಸದಲ್ಲೂ ತೊಡಗಿಸಿಕೊಂಡಿರುತ್ತಾರೆ. ಕಳೆದ ಮೂರು ವರ್ಷಗಳಿಂದ ಕಟೀಲು ಮೇಳಗಳ ವೇಷಭೂಷಣ ತಯಾರಿಕೆಯ ಕೆಲಸ ಮಾಡುತ್ತಿದ್ದಾರೆ. ಪೋಸ್ಟರ್, ಬ್ಯಾನರ್ ಬರೆಯುವ ಮತ್ತು ಕಟ್ಟಡಗಳಿಗೆ ಪೈಂಟಿಂಗ್ ಮಾಡುವ ಕಲೆಯೂ ಇವರಿಗೆ ಕರಗತವಾಗಿದೆ.

ಪ್ರಸ್ತುತ ಕಿನ್ನಿಗೋಳಿ ಸಮೀಪದ ಕೆರೆಕಾಡು ಎಂಬಲ್ಲಿ ವಾಸವಾಗಿದ್ದಾರೆ. ಹಾಸ್ಯಗಾರ ಶ್ರೀ ಚಂದ್ರಹಾಸ ಪೂಜಾರಿ ತುಂಬೆ ಅವರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. 

ಲೇಖಕ: ರವಿಶಂಕರ್

ಲೇಖಕ: ರವಿಶಂಕರ್ ವಳಕ್ಕುಂಜ