ಉಜಿರೆ: ಬೆಳ್ತಂಗಡಿ ಕನ್ಯಾಡಿಯ ಯಕ್ಷಭಾರತಿ ಸಂಸ್ಥೆಯವರು ನಡೆಸಿಕೊಂಡು ಬರುತ್ತಿರುವ ವಾರ್ಷಿಕ ಕಾರ್ಯಕ್ರಮದಲ್ಲಿ ಯಕ್ಷಭಾರತಿ ಪ್ರಶಸ್ತಿ 2022 ನ್ನು ಕಳೆದ ಭಾನುವಾರ ಉಜಿರೆಯ ಜನಾರ್ದನ ದೇವಸ್ಥಾನದ ರಾಮಕೃಷ್ಣ ಸಭಾಂಗಣದಲ್ಲಿ ಆಡಳಿತ ಮೊಕ್ತೇಸರ ಯು.ಶರತ್ ಕೃಷ್ಣ ಪಡ್ವೆಣ್ಣಾಯರ ಅಧ್ಯಕ್ಷತೆಯಲ್ಲಿ ಕಾರ್ಕಳದ ಯಕ್ಷಗಾನ ನಾಟ್ಯ ಗುರು, ಸಂಘಟಕ ಕಾಂತಾವರ ಮಹಾವೀರ ಪಾಂಡಿಯವರಿಗೆ ನಗದು ಪುರಸ್ಕಾರದೊಂದಿಗೆ ನೀಡಲಾಯಿತು.
ಯಕ್ಷಗಾನ ಕಲಾವಿದರಾಗಿ ನಾಟ್ಯ ಗುರುಗಳಾಗಿ ಮತ್ತು ಕಲಾ ಸಂಘಟಕರಾಗಿ ,ಯಕ್ಷ ದೇಗುಲ ಕಾಂತಾವರದ ಸಂಸ್ಥಾಪಕರಾಗಿ ಸುಮಾರು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ಯಕ್ಷಗಾನದ ವಿವಿಧ ಆಯಾಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಾವೀರ ಪಾಂಡಿ ಅವರ ಹಲವು ಶಿಷ್ಯಂದಿರು ಹವ್ಯಾಸಿ ಮತ್ತು ವೃತ್ತಿಪರ ಕಲಾವಿದರಾಗಿ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ, ಯಕ್ಷಗಾನ ಕಲಾ ಪೋಷಕ ನಿವೃತ್ತ ಐಎಎಸ್ ಅಧಿಕಾರಿ ಡಾ. ಟಿ. ಶ್ಯಾಮ್ ಭಟ್ ಭಾಗವಹಿಸಿದ್ದರು.
ಸಂಸ್ಥೆಯ ಅಧ್ಯಕ್ಷ ರಾದ ರಾಘವೇಂದ್ರ ಬೈಪಡಿತ್ತಾಯ, ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಸಂಚಾಲಕ ಮಹೇಶ್ ಕನ್ಯಾಡಿ, ಧರ್ಮಸ್ಥಳದ ಹರಿದಾಸ್ ಗಾಂಬೀರ್, ಕಲಾವಿದ ಶಿತಿಕಂಠ ಭಟ್ ಉಜಿರೆ, ಶ್ರೀಮತಿ ಭವ್ಯ ಹೊಳ್ಳ, ಹಾಗೂ ಕಕ್ಕಿಂಜೆಯ ಮುರಲೀ ಕೃಷ್ಣ ಇರ್ವತ್ತಾಯ ಉಪಸ್ಥಿತರಿದ್ದರು.
ಯಕ್ಷಭಾರತಿ ಉಪಾಧ್ಯಕ್ಷ ಹರಿದಾಸ್ ಗಾಂಭೀರ್ ಅಭಿನಂದನಾ ನುಡಿಗಳನ್ನಾಡಿದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದವಿತ್ತರು. ಬಳಿಕ ಶ್ರೀ ಮಹಾಲಿಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿ ಪುತ್ತೂರು ಇವರಿಂದ ತುಳಸಿ ಜಲಂದರ ಯಕ್ಷಗಾನ ಬಯಲಾಟ ಜರಗಿತು.
ಆಟೋ ರಿಕ್ಷಾ ಮತ್ತು ಮೋಟಾರ್ಬೈಕ್ಗೆ ಕಾರು ಡಿಕ್ಕಿ ಹೊಡೆದು 6 ಮಂದಿ ಸಾವು ಸಂಭವಿಸಿದ ಘಟನೆ ಸಂಭವಿಸಿದೆ. ಆರೋಪಿ ಕಾರು ಚಾಲಕನನ್ನು ಬಂಧಿಸಲಾಗಿದೆ.
ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಎಸ್ಯುವಿ ಕಾರೊಂದು ಆಟೋ ರಿಕ್ಷಾ ಮತ್ತು ಮೋಟಾರ್ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದಾರೆ. ಕಾಂಗ್ರೆಸ್ ಶಾಸಕರೊಬ್ಬರ ಅಳಿಯ ಕೇತನ್ ಪಡಿಯಾರ್ ಕಾರು ಚಲಾಯಿಸುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗುರುವಾರ ಸಂಜೆ ಗುಜರಾತ್ನ ಆನಂದ್ ಜಿಲ್ಲೆಯಲ್ಲಿ ವೇಗವಾಗಿ ಬಂದ ಎಸ್ಯುವಿ ಆಟೋ ರಿಕ್ಷಾ ಮತ್ತು ಮೋಟಾರ್ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ. ಸೋಜಿತ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪುನಂಭೈ ಮಾಧಭಾಯಿ ಪರ್ಮಾರ್ ಅವರ ಅಳಿಯ ಖೇತನ್ ಪಾಧಿಯಾರ್ ಅವರು ತಮ್ಮ ಎಸ್ಯುವಿಯನ್ನು ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಜಿತ್ರಾ ಗ್ರಾಮದ ಬಳಿ ತಾರಾಪುರದಿಂದ ಆನಂದ್ ಪಟ್ಟಣವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕಾರು ಚಾಲಕ ಕುಡಿದ ಮತ್ತಿನಲ್ಲಿದ್ದ. ಆನಂದ್ನಲ್ಲಿ ರಾತ್ರಿ 7 ಗಂಟೆ ಸುಮಾರಿಗೆ ಕಾರು, ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಆಟೋದಲ್ಲಿದ್ದ ನಾಲ್ವರು ಹಾಗೂ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನಿಖೆ ನಡೆಯುತ್ತಿದೆ ಎಂದು ಅಭಿಷೇಕ್ ಗುಪ್ತಾ, ಎಎಸ್ಪಿ ಆನಂದ್ ಅವರು ಹೇಳಿದ್ದಾರೆ. ಪೊಲೀಸರು, “ಆರೋಪಿಯನ್ನು ಬಂಧಿಸಲಾಗಿದೆ. ಐಪಿಸಿ ಸೆಕ್ಷನ್ 304 ಅನ್ನು ಅನ್ವಯಿಸಲಾಗಿದೆ. ಆರು ಮೃತರ ವಿವರಗಳು ಪತ್ತೆಯಾಗಿವೆ. ಆರೋಪಿ ಕೇತನ್ ಪಾಧಿಯಾರ್ ಕಾಂಗ್ರೆಸ್ ಶಾಸಕರ ಅಳಿಯ.” ಅಪಘಾತದ ನಂತರ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, “ಇದು ಕಾಂಗ್ರೆಸ್ನ ನಿಜವಾದ ಮುಖ” ಎಂದು ಟ್ವೀಟ್ ಮಾಡಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಮೂವರು ಮಹಿಳೆಯರು ರಕ್ಷಾಬಂಧನ ಆಚರಿಸಿ ಹಿಂತಿರುಗುತ್ತಿದ್ದಾಗ ಆನಂದ್ ಅವರ ಸೋಜಿತ್ರಾ ಬಳಿ ಅಪಘಾತ ಸಂಭವಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 304 ರ ಅಡಿಯಲ್ಲಿ ಪೊಲೀಸರು ಕೇತನ್ ಪಾಧಿಯಾರ್ ವಿರುದ್ಧ ಅಪರಾಧಿ ನರಹತ್ಯೆಗಾಗಿ ಪ್ರಕರಣ ದಾಖಲಿಸಿದ್ದರು. ಕಾಂಗ್ರೆಸ್ ಶಾಸಕರ ಸಂಬಂಧಿಕರು ಚಲಾಯಿಸುತ್ತಿದ್ದ ಕಾರಿನ ನಂಬರ್ ಪ್ಲೇಟ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಮದ್ಯ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ.
6 dead after car rams into auto rickshaw, motorbike in Gujarat's Anand, accused arrested
“ಕಾಡು ಕುದುರೆ ಓಡಿ ಬಂದಿತ್ತಾ ..” ಖ್ಯಾತಿಯ ಕನ್ನಡದಖ್ಯಾತ ಹಿನ್ನೆಲೆ ಗಾಯಕ ಶಿವಮೊಗ್ಗ ಸುಬ್ಬಣ್ಣ ನಿಧನರಾಗಿದ್ದಾರೆ.
ಬೆಂಗಳೂರು: ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿವಮೊಗ್ಗ ಸುಬ್ಬಣ್ಣ ಗುರುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಸುಬ್ಬಣ್ಣ (83) ಅವರನ್ನು ಗುರುವಾರ ಮಧ್ಯಾಹ್ನ ಹೃದಯಾಘಾತವಾಗಿ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಿವಮೊಗ್ಗ ಮೂಲದ ಸುಬ್ಬಣ್ಣ ಅವರು ಕರ್ನಾಟಕ ಸಂಗೀತದಲ್ಲಿ ತರಬೇತಿ ಪಡೆದವರು. ಆದರೂ ಅವರ ಆಸಕ್ತಿಯು ಕನ್ನಡ ಸುಗಮ ಸಂಗೀತ (ಲಘು ಸಂಗೀತ) ಕಡೆಗೆ ಇತ್ತು.
1978 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ನಿರ್ದೇಶನದ ಕಾಡು ಕುದುರೆ ಚಿತ್ರದಲ್ಲಿನ ‘ಕಾಡು ಕುದುರೆ ಓಡಿ ಬಂದಿತ್ತ’ ಹಾಡಿಗೆ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ.
ಸಂಗೀತದಲ್ಲಿ ವೃತ್ತಿಜೀವನದ ಜೊತೆಗೆ, ಸುಬ್ಬಣ್ಣ ಅವರು ವಕೀಲರಾಗಿ ಮತ್ತು ನೋಟರಿ ಸಾರ್ವಜನಿಕರಾಗಿ ಸೇವೆ ಸಲ್ಲಿಸಿದ್ದರು. ಒಬ್ಬ ಅನುಕರಣೀಯ ಗಾಯಕ, ಸುಬ್ಬಣ್ಣ ಅವರು ಕನ್ನಡ ಸುಗಮ ಸಂಗೀತ (ಲಘು ಸಂಗೀತ) ಪ್ರಪಂಚಕ್ಕೆ ಅವರ ವ್ಯಾಪಕ ಕೊಡುಗೆಗಾಗಿ ಹೆಸರುವಾಸಿಯಾಗಿದ್ದರು.
ಕನ್ನಡದ ಹೆಸರಾಂತ ಕವಿಗಳಾದ ಕುವೆಂಪು (ಕೆ.ವಿ.ಪುಟ್ಟಪ್ಪ), ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹ ಸ್ವಾಮಿ, ಜಿ.ಎಸ್.ಶಿವರುದ್ರಪ್ಪ ಮುಂತಾದವರ ಕವನಗಳಿಗೆ ಸಾಂಪ್ರದಾಯಿಕ ರಾಗ ಆಧಾರಿತ ಸಂಗೀತವನ್ನು ರಚಿಸಿದ ಸುಬ್ಬಣ್ಣ ಅವರು ಖ್ಯಾತ ಕವಿಗಳ ಸಾಹಿತ್ಯವನ್ನು ತಮ್ಮ ಸುಮಧುರ ಕಂಠದ ಮೂಲಕ ಕಾವ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸಿದ್ದರು.
ಕುಸ್ತಿಪಟು ದಿವ್ಯಾ ಕಕ್ರನ್ ಅವರಿಗೆ ಸಹಾಯ ಮಾಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಾತುಕೊಟ್ಟು ಆಮೇಲೆ ಮಾತು ಮರೆತಿದ್ದಾರೆ.
ಹೀಗೆಂದು ಸ್ವತಃ ದಿವ್ಯಾ ಕಕ್ರನ್ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
“ನಾನು ಏಷ್ಯಾದಲ್ಲಿ ಪದಕ ಗೆದ್ದ ನಂತರ 2017 ರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದೆ, ನಾನು ಅವರಿಗೆ ಲಿಖಿತವಾಗಿ ಪತ್ರವನ್ನು ನೀಡಿದರೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.
ನಾನು ಹಾಗೆಯೇ ಮಾಡಿದೆ, ಆದರೆ ಅವರು ಅದರ ಬಗ್ಗೆ ಗಮನ ಹರಿಸಲಿಲ್ಲ. ಪ್ರೋತ್ಸಾಹ, ಪ್ರಯಾಣ, ಇತರ ಯಾವುದೇ ವೆಚ್ಚದಲ್ಲಿ ಅವರು ನನಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲಿಲ್ಲ” ಎಂದು ಕಾಮನ್ವೆಲ್ತ್ ಗೇಮ್ಸ್ – 22 ನಲ್ಲಿ ಕಂಚು ಗೆದ್ದ ಕುಸ್ತಿಪಟು ದಿವ್ಯಾ ಕಕ್ರನ್ ಹೇಳಿದ್ದಾರೆ.
Delhi | I met with CM Kejriwal in 2017 after winning medal in Asia, assured me of help if I gave him a letter in writing. I did, but he never got back to me. He didn't help me in any way, with nutrition, travel, any other expenses: Wrestler Divya Kakran who won Bronze in CWG22 pic.twitter.com/mnZaOPjVU6
ಪುತ್ತೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ಫಲಿತಾಂಶವು ಪ್ರಕಟಗೊಂಡಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಿದ್ಯಾರ್ಥಿಗಳು 97% ಫಲಿತಾಂಶದೊಂದಿಗೆ ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ಜುಲೈ ತಿಂಗಳಿನಲ್ಲಿ ನಡೆದ ಪರೀಕ್ಷೆಗೆ ಕಾಲೇಜಿನಿಂದ ಒಟ್ಟು 276 ವಿದ್ಯಾರ್ಥಿಗಳು ಹಾಜರಾಗಿದ್ದು 264 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಕಾಲೇಜಿನ ವಿಭಾಗವಾರು ಫಲಿತಾಂಶಗಳ ಪೈಕಿ ಕಂಪ್ಯೂಟರ್ ಸೈನ್ಸ್-100%, ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್-99%, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ-98% ಹಾಗೂ ಸಿವಿಲ್ ಇಂಜಿನಿಯರಿಂಗ್ ವಿಭಾಗ-89% ಫಲಿತಾಂಶವನ್ನು ದಾಖಲಿಸಿವೆ.
ಎಲ್ಲಾ ಅರ್ಹ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯ ಮೂಲಕ ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿದ್ದು, ಕೆಲವು ವಿದ್ಯಾರ್ಥಿಗಳು ಈಗಾಗಲೇ ಉದ್ಯೋಗಕ್ಕೆ ಸೇರಿಕೊಂಡಿದ್ದಾರೆ.
ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಂಡ ವಿದ್ಯಾರ್ಥಿಗಳ ಸಾಧನೆಯನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ಸಿಬ್ಬಂದಿಗಳು ಶ್ಲಾಘಿಸಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ. ಕೆ ತಿಳಿಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳಿಂದ ಭರ್ಜರಿ ಬೇಟೆ: ಮಹಾರಾಷ್ಟ್ರದಜಲ್ನಾದಉಕ್ಕು,ಬಟ್ಟೆ ವ್ಯಾಪಾರಿಯಿಂದ 100 ಕೋಟಿಗೂ ಮಿಕ್ಕಿದ ಆಸ್ತಿ, ಸೊತ್ತು ವಶ. ಹಣ ಎಣಿಸಲು 13 ಘಂಟೆ ಬೇಕಾಯಿತು!
ಆದಾಯ ತೆರಿಗೆ ಇಲಾಖೆ ಇರಿಸಿದ ಬೋನಿಗೆ ಭರ್ಜರಿಯಾದ ಮೃಗವೇ ಬಿದ್ದಿದೆ.
ಮಹಾರಾಷ್ಟ್ರದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಜಲ್ನಾದಲ್ಲಿ ಉಕ್ಕು, ಬಟ್ಟೆ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ನ ಆವರಣದಲ್ಲಿ ಆಗಸ್ಟ್ 1 ರಿಂದ 8ರ ವರೆಗೆ ದಾಳಿ ನಡೆಸಿದರು.
ಈ ದಾಳಿಯಲ್ಲಿ ಸುಮಾರು 100 ಕೋಟಿ ರೂ. ಬೇನಾಮಿ ಆಸ್ತಿಯನ್ನು ವಶಪಡಿಸಿಕೊಂಡಿದೆ. ಅದರಲ್ಲಿ ರೂ 56 ಕೋಟಿ ನಗದು, 32 ಕೆಜಿ ಚಿನ್ನ, ಮುತ್ತುಗಳು-ವಜ್ರಗಳು ಮತ್ತು ಆಸ್ತಿ ಪತ್ರಗಳು ಸೇರಿವೆ.
ವಶಪಡಿಸಿಕೊಂಡ ಹಣವನ್ನು ಎಣಿಸಲು ಸುಮಾರು 13 ಗಂಟೆ ಬೇಕಾಯಿತು. ಮುಂದಿನ ತನಿಖೆ ನಡೆಯುತ್ತಿದೆ.
ಸಿರಿಬಾಗಿಲು- ಗಡಿನಾಡು ಕಾಸರಗೋಡಿನ ಪ್ರಸಿದ್ಧ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಮುಂದಿನ ಸಾರ್ವಜನಿಕ ಲೋಕಾರ್ಪಣೆಯ ವರೇಗೆ ತಿಂಗಳ ಎರಡನೇ ಶನಿವಾರ ಮತ್ತು ಭಾನುವಾರ ಕಲಾ- ಸಾಂಸ್ಕೃತಿಕ- ಸಾಹಿತ್ಯ ವೈಭವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಆಜಾದಿ ಕಾ ಅಮೃತ್ ಮಹೋತ್ಸವ್ (ಸ್ವಾತಂತ್ರ್ಯದ ಅಮೃತ ಮಹೋತ್ಸವ) ಕಾರ್ಯಕ್ರಮದ ಅಂಗವಾಗಿ ದಿನಾಂಕ 13.08.2022ರ ಶನಿವಾರ ಮತ್ತು 14.08.2022ರ ಆದಿತ್ಯವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕಲಾ, ಸಾಂಸ್ಕೃತಿಕ, ಸಾಹಿತ್ಯ ವೈಭವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
13.08.2022 ರಂದು ಅಪರಾಹ್ನ 3 ಘಂಟೆಗೆ ‘ಪಾರ್ಥ ಸಾರಥ್ಯ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. 14.08.2022ರ ಆದಿತ್ಯವಾರ ಬೆಳಗ್ಗೆ 10 ಘಂಟೆಯಿಂದ ಕವಿಗೋಷ್ಠಿ ಮತ್ತು ಅಪರಾಹ್ನ 3 ಘಂಟೆಗೆ ‘ಶ್ರೀರಾಮ ದರ್ಶನ’ ತಾಳಮದ್ದಳೆ ನೆರವೇರಲಿದೆ.
ಎಲ್ಲಾ ಕಾರ್ಯಕ್ರಮಗಳು SV VISION LIVE ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಆಗಲಿದೆ. ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ
ಕೇರಳದ ಮಲಪ್ಪುರಂನಲ್ಲಿ ರಸ್ತೆಗಳಲ್ಲಿನ ಗುಂಡಿಗಳ ವಿರುದ್ಧ ವ್ಯಕ್ತಿಯೊಬ್ಬರು ರಸ್ತೆಯಲ್ಲಿನ ಶಾಸಕರ ಮುಂದೆ ನೀರಿನಿಂದ ತುಂಬಿದ ಗುಂಡಿಯಲ್ಲಿ ಸ್ನಾನ ಮತ್ತು ಯೋಗ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದರು.
ಕೇರಳದ ಮಲಪ್ಪುರಂ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ರಸ್ತೆಯ ಹೊಂಡಗಳ ವಿರುದ್ಧ ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಶಾಸಕರ ಸಮ್ಮುಖದಲ್ಲಿ ನೀರು ನಿಂತ ಗುಂಡಿಯಲ್ಲಿ ಯೋಗಾಸನ ಮಾಡಿ ಸ್ನಾನ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆದರು. ಇದೇ ಘಟನೆಯ ವಿಡಿಯೋವೊಂದು ಬೆಳಕಿಗೆ ಬಂದಿದೆ.
ಮಳೆನೀರು ತುಂಬಿದ ಗುಂಡಿಯಲ್ಲಿ ಮನುಷ್ಯ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ಕೆಸರಿನ ನೀರಿನಲ್ಲಿ ಬಟ್ಟೆ ಒಗೆಯುವುದನ್ನೂ ಕಾಣಬಹುದು. ಹಮ್ಜಾ ಪೊರಾಲಿ ಎಂದು ಗುರುತಿಸಲಾದ ವ್ಯಕ್ತಿ ಸ್ಥಳೀಯ ಶಾಸಕ ಯುಎ ಲತೀಫ್ ಅವರ ಮುಂದೆ ಯೋಗ ಮಾಡಿದ್ದಾನೆ.
ಸ್ಥಳೀಯ ಮುಖಂಡರ ಕಾರು ಸ್ಥಳಕ್ಕೆ ಬಂದಾಗ, ಪೊರಾಲಿ ಗುಂಡಿಯಲ್ಲಿ ಧ್ಯಾನ ಮಾಡಲು ಪ್ರಾರಂಭಿಸಿದರು. ಅಲ್ಲದೆ, ಆ ವ್ಯಕ್ತಿ ನಂತರ ಶಾಸಕರ ಮುಂದೆ ಮತ್ತೊಂದು ನಿಂತಿರುವ ಯೋಗ ಭಂಗಿಯನ್ನು ಮಾಡಲು ಎದ್ದು ನಿಂತುಕೊಂಡನು.
ಕಳೆದ ವಾರ ಕೇರಳದಲ್ಲಿ ರಸ್ತೆಗಳ ದುರವಸ್ಥೆಯ ವಿರುದ್ಧ ಹಲವು ಪ್ರತಿಭಟನೆಗಳು ನಡೆದಿದ್ದವು. ಆದಾಗ್ಯೂ, ಪ್ರತಿಭಟನೆಗಳು ಯಾವುದೇ ರಾಜಕಾರಣಿಗಳ ಗಮನವನ್ನು ಸೆಳೆಯಲು ವಿಫಲವಾಗಿವೆ.
ಪ್ರತಿಯೊಂದು ರಸ್ತೆಯನ್ನು ಸರಿಪಡಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಕೇರಳ ಹೈಕೋರ್ಟ್ ಸೂಚಿಸಿದೆ. ಇನ್ನು ವಿಳಂಬ ಮಾಡದೆ ಒಂದು ವಾರದೊಳಗೆ ಮಾಡುವಂತೆಯೂ ನ್ಯಾಯಾಲಯ ಸೂಚಿಸಿದೆ.
#WATCH | Kerala: A man in Malappuram protested against potholes on roads in a unique way by bathing & performing yoga in a water-logged pothole in front of MLA on the way pic.twitter.com/XSOCPrwD5f
ಯಕ್ಷಗಾನವು ಹಾಡು, ವಾದನ, ನೃತ್ಯ, ವೇಷ, ಅಭಿನಯ, ಮಾತುಗಾರಿಕೆಗಳ ಮಿಶ್ರಣದ ಸಮಷ್ಟಿ ಕಲೆಯಾಗಿದೆ. ಈ ಎಲ್ಲಾ ಅಂಗಗಳೂ ಶಾಸ್ತ್ರದ ಮೇರೆಯೊಳಗಿದ್ದು ಪರಂಪರೆಯುಳ್ಳದ್ದಾಗಿ ಆಕರ್ಷಣೀಯವಾಗಿದೆ. ವಾದನ ವಿಭಾಗದಲ್ಲಿ ಕಾಣಿಸುವುದೇ ಚೆಂಡೆ ಮದ್ದಳೆಯ ನುಡಿತಗಳು. ಗಾಯನ ಮತ್ತು ನರ್ತನಗಳಿಗೆ ಇದು ಪೂರಕವಾಗಿರುತ್ತದೆ. ಯಕ್ಷಗಾನ ಕಲೆಯಲ್ಲಿ ವಾದನ ಕ್ರಮವು ಹೇಗಿರಬೇಕೆಂದು ವಿದ್ವಾಂಸರೂ, ಹಿರಿಯ ಮದ್ದಳೆವಾದಕರೂ ತಿಳಿಸಿರುತ್ತಾರೆ. ಅದೇ ದಾರಿಯಲ್ಲಿ ಸಾಗಬೇಕಾದುದು ಅಭ್ಯಾಸಿಗಳಿಗೆ ಕರ್ತವ್ಯ. ಯಕ್ಷಗಾನದಲ್ಲಿ ಭಾಗವತನೇ ನಿರ್ದೇಶಕ. ಹಾಡುಗಾರಿಕೆಯೇ ಪ್ರಧಾನವು.
ಭಾಗವತನ ಹಾಡುಗಾರಿಕೆಯನ್ನು ಮೆರೆಸುವ ವಾದನ ಕ್ರಮವು ಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಡಿಗಾಗಿ ಮತ್ತು ಕುಣಿತಕ್ಕಾಗಿ ವಾದನವು ಇರುವುದಾದರೂ ಕುಣಿದದ್ದಕ್ಕೆಲ್ಲಾ ಬಾರಿಸಲೂ ಬಾರದು ಎಂದುದನ್ನು ಹಿರಿಯ ವಾದಕರು ಹೇಳಿರುತ್ತಾರೆ. ಚೆಂಡೆ ಮದ್ದಲೆಗಳ ನುಡಿತಗಳು ಅತ್ಯಂತ ಸ್ಪಷ್ಟವಾಗಿರಬೇಕು. ವೇಗದ ಅವಸರದಲ್ಲಿ ಸ್ಪಷ್ಟತೆಗೆ ತೊಡಕಾಗಬಾರದು ಎಂಬ ವಿಚಾರವನ್ನೂ ಹೇಳಿರುತ್ತಾರೆ. ಹೀಗೆ ಸಾಗಿಬಂದ ಅನೇಕರು ಖ್ಯಾತ ಮದ್ದಳೆಗಾರರಾಗಿ ಪ್ರಸಿದ್ಧರಾದರು. ಪ್ರಸ್ತುತ ಅದೇ ದಾರಿಯಲ್ಲಿ ಸಾಗುತ್ತಾ ಕಲಾ ವ್ಯವಸಾಯವನ್ನು ಮಾಡುತ್ತಿರುವ ಮದ್ದಳೆಗಾರರಲ್ಲಿ ಶ್ರೀ ದಯಾನಂದ ಶೆಟ್ಟಿಗಾರ್ ಮಿಜಾರು ಅವರನ್ನೂ ಗುರುತಿಸಬಹುದು.
ಇವರು ನಿಷ್ಠಾವಂತ ಅರ್ಪಣಾ ಭಾವದ ಅನುಭವೀ ಕಲಾವಿದರು. ಹೊಸ ಹೊಸ ಪ್ರಸಂಗಗಳು ಎದುರಾದಾಗ ಸಾಕಷ್ಟು ಸಿದ್ಧರಾಗಿಯೇ ರಂಗವೇರುತ್ತಾರೆ. ನೇಪಥ್ಯದಲ್ಲಿ ಭಾಗವತರು ಮತ್ತು ಕಲಾವಿದರೊಂದಿಗೆ ಪ್ರಸಂಗವನ್ನು ಮುನ್ನಡೆಸುವ ರೀತಿಯ ಬಗೆಗೆ ಚರ್ಚಿಸಿಯೇ ಮುಂದುವರಿಯುತ್ತಾರೆ. ರಂಗವು ಹಾಳಾಗಬಾರದು. ಪ್ರದರ್ಶನವು ಸೋಲಬಾರದು ಎಂಬ ಎಚ್ಚರಿಕೆ ಇವರಲ್ಲಿ ಸದಾ ಇರುತ್ತದೆ. ಅವರೊಂದಿಗಿನ ತಿರುಗಾಟದಲ್ಲಿ ನಾನು ಕಂಡುಕೊಂಡ ವಿಚಾರವಿದು. ಶ್ರೀಯುತರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಪ್ರಧಾನ ಮದ್ದಳೆಗಾರರು.
ಶ್ರೀ ದಯಾನಂದ ಶೆಟ್ಟಿಗಾರರ ಹುಟ್ಟೂರು ಮಂಗಳೂರು ತಾಲೂಕಿನ ತೆಂಕಮಿಜಾರು ಗ್ರಾಮದ ಪೂಮಾರಪದವು. ಶ್ರೀ ರಾಮ ಶೆಟ್ಟಿಗಾರ್ ಮತ್ತು ಶ್ರೀಮತಿ ವಾರಿಜ ದಂಪತಿಗಳ ಪುತ್ರನಾಗಿ 1972ನೇ ಇಸವಿ ಏಪ್ರಿಲ್ 12ರಂದು ಜನನ. ಓದಿದ್ದು ಎಸ್ ಎಸ್ ಎಲ್ ಸಿ ವರೆಗೆ. ೪ನೇ ತರಗತಿ ವರೆಗೆ ಮಿಜಾರು ದಡ್ಡಿ ಶಾಲೆಯಲ್ಲಿ. 7ನೇ ತರಗತಿ ವರೆಗೆ ಮೂಡುಪೆರಾರ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಎಡಪದವು ಸ್ವಾಮೀ ವಿವೇಕಾನಂದ ವಿದ್ಯಾಲಯದಲ್ಲಿ. ಇವರ ಅಜ್ಜ ಶ್ರೀ ದಾಸು ಶೆಟ್ಟಿಗಾರರು ಹವ್ಯಾಸಿ ಕಲಾವಿದರಾಗಿ ಆಟ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ತಂದೆ ಶ್ರೀ ರಾಮ ಶೆಟ್ಟಿಗಾರರು ಹವ್ಯಾಸೀ ಹಿಮ್ಮೇಳ ಮುಮ್ಮೇಳ ಕಲಾವಿದರಾಗಿದ್ದರು. ವೇಷಧಾರಿಯಾಗಿ ಹಾಸ್ಯ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡವರು. ಇವರಿಬ್ಬರೂ ಕುಲಕಸುಬನ್ನೂ ಬಲ್ಲವರಾಗಿದ್ದರು.
ಇಬ್ಬರೂ ಹಳ್ಳಿಯ ಔಷಧಗಳ ಬಗೆಗೆ ಅಪಾರ ಜ್ಞಾನವನ್ನು ಹೊಂದಿದ್ದರು. ಪಶು ಚಿಕಿತ್ಸಕರಾಗಿಯೂ ಹೆಸರು ಗಳಿಸಿದ್ದರು. ಶ್ರೀ ದಯಾನಂದ ಶೆಟ್ಟಿಗಾರರಿಗೆ ಯಕ್ಷಗಾನ ಕಲಾಸಕ್ತಿ ರಕ್ತಗತವಾಗಿಯೇ ಬಂದಿತ್ತು. ಎಳವೆಯಲ್ಲಿ ಪ್ರದರ್ಶನಗಳನ್ನು ನೋಡುತ್ತಿದ್ದರು. ಆಟ ನೋಡಿ ಬಂದು ಗೆಳೆಯರೊಂದಿಗೆ ಕುಣಿಯುವ ಕ್ರಮವೂ ಇತ್ತು. ಆ ಸಮಯದಲ್ಲಿ ತೆಂಕಮಿಜಾರು ಶ್ರೀ ಮಾರಿಕಾಂಬಾ ಯಕ್ಷಗಾನ ಕಲಾಮಂಡಳಿಯು ಕಲಾಚಟುವಟಿಕೆಗಳನ್ನು ನಡೆಸುತ್ತಿತ್ತು. ದಯಾನಂದ ಶೆಟ್ಟಿಗಾರರ ತಂದೆ ರಾಮ ಶೆಟ್ಟಿಗಾರರು ಈ ಸಂಸ್ಥೆಯಲ್ಲಿ ಸಕ್ರಿಯರಾಗಿದ್ದರು. ಹೆಸರಾಂತ ಕಲಾವಿದ ಮುಚ್ಚೂರು ಶ್ರೀ ಹರೀಶ್ ಶೆಟ್ಟಿಗಾರರು ಅಲ್ಲಿ ನಾಟ್ಯ ತರಬೇತಿಯನ್ನು ನೀಡುತ್ತಿದ್ದರು. ಅವರ ಒತ್ತಾಯದಂತೆ ಶ್ರೀ ದಯಾನಂದ ಶೆಟ್ಟಿಗಾರರು ಹೆಜ್ಜೆಗಾರಿಕೆಯನ್ನು ಕಲಿಯುವ ಮನಮಾಡಿದ್ದರು. ಶ್ರೀ ಮಾರಿಕಾಂಬಾ ಯಕ್ಷಗಾನ ಕಲಾ ಮಂಡಳಿಯ ಆಶ್ರಯದಲ್ಲಿ ಮುಚ್ಚೂರು ಶ್ರೀ ಹರೀಶ್ ಶೆಟ್ಟಿಗಾರರಿಂದ ಯಕ್ಷಗಾನ ನಾಟ್ಯಾಭ್ಯಾಸ.
ಮುಚ್ಚೂರು ಶ್ರೀ ಹರೀಶ್ ಶೆಟ್ಟಿಗಾರರು ಅಭ್ಯಾಸಿಗಳಿಗೆ ಸಂಭಾಷಣೆಗಳನ್ನು ಅಂದವಾಗಿ ಬರೆದುಕೊಡುತ್ತಿದ್ದರು. ಮಾರಿಕಾಂಬಾ ಕಲಾಮಂಡಳಿಯ ಪ್ರದರ್ಶನದಲ್ಲಿ ರಂಗಪ್ರವೇಶ ಮಾಡಿದ ದಯಾನಂದ ಶೆಟ್ಟಿಗಾರರು ಬಳಿಕ ನಡೆದ ಪ್ರದರ್ಶನಗಳಲ್ಲೆಲ್ಲಾ ವೇಷ ಮಾಡಿದ್ದರು. ಬಳಿಕ ಮಂಗಳೂರು ಬಿಕರ್ನಕಟ್ಟೆಯ ವೀರಾಂಜನೇಯ ಯಕ್ಷಗಾನ ಮಂಡಳಿಯಲ್ಲೂ ವೇಷ ಮಾಡಿದರು. ವೀರಾಂಜನೇಯ ಯಕ್ಷಗಾನ ಮಂಡಳಿಯ ಪ್ರದರ್ಶನಗಳಿಗೆ ಅತಿಥಿಗಳಾಗಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಬರುತ್ತಿದ್ದರು.
ಹರೀಶ್ ಶೆಟ್ಟಿಗಾರರು ಹೇಳಿಕೊಟ್ಟ ಸಂಭಾಷಣೆಗಳನ್ನು ತಪ್ಪದೆ ಅಂದವಾಗಿ ದಯಾನಂದ ಶೆಟ್ಟಿಗಾರರು ಹೇಳಿದಾಗ ಇವರಿಬ್ಬರೂ ಮೆಚ್ಚುಗೆಯನ್ನು ಸೂಚಿಸಿ ಹರಸಿದ್ದರು. ಎಸ್. ಎಸ್. ಎಲ್. ಸಿ ವಿದ್ಯಾರ್ಜನೆಯ ಬಳಿಕವೇ ಇವರು ನಾಟ್ಯ ಕಲಿತುದು. ಬಳಿಕ ಜೀವನೋಪಾಯಕ್ಕಾಗಿ ಎಡಪದವಿನಲ್ಲಿ ವೆಲ್ಡಿಂಗ್ ಕೆಲಸದಲ್ಲಿ ತೊಡಗಿಸಿಕೊಂಡರು. ಖ್ಯಾತ ಮದ್ದಳೆಗಾರರಾದ ಮಿಜಾರು ಮೋಹನ ಶೆಟ್ಟಿಗಾರ್ ಮತ್ತು ರಾಮಕೃಷ್ಣ ಶೆಟ್ಟಿಗಾರರು ಇವರ ಮಾವಂದಿರು. ಅವರು ಚೆಂಡೆ ಮದ್ದಳೆ ನುಡಿಸುವುದನ್ನು ನೋಡಿ ಕೇಳಿಯೇ ದಯಾನಂದ ಶೆಟ್ಟಿಗಾರರು ಹಿಮ್ಮೇಳದ ವಿದ್ಯೆಯನ್ನು ಕಲಿತಿದ್ದರು. ಸಮಯ ಸಿಕ್ಕಾಗಲೆಲ್ಲಾ ಚೆಂಡೆ ಮದ್ದಳೆ ನುಡಿಸಿದ್ದರು. ಇದನ್ನು ಗಮನಿಸಿದ ಶ್ರೀ ಹರೀಶ್ ಶೆಟ್ಟಿಗಾರರು ಶಾಸ್ತ್ರೀಯವಾಗಿ ಗುರುಗಳಿಂದಲೇ ಅಭ್ಯಾಸ ಮಾಡಲು ಸೂಚಿಸಿದ್ದರು.
ಗುರುಗಳ ಸಲಹೆಯಂತೆ ಮದ್ದಳೆಗಾರರಾದ ಗುರುಪುರ ಅಣ್ಣಿ ಭಟ್ಟರಿಂದ ಹಿಮ್ಮೇಳ ಕಲಿತರು. ಅಣ್ಣಿ ಭಟ್ಟರು ದಯಾನಂದ ಶೆಟ್ಟಿಗಾರರ ತಂದೆ ಶ್ರೀ ರಾಮ ಶೆಟ್ಟಿಗಾರರ ಗುರುಗಳು. ಕೆಲವು ಸಮಯ ದಿವಾಣ ಶ್ರೀ ಭೀಮ ಭಟ್ಟರಿಂದಲೂ ಕಲಿಯುವ ಭಾಗ್ಯ ಸಿಕ್ಕಿತ್ತು. ಹೀಗೆ ವೇಷಧಾರಿಯಾಗಿದ್ದ ಶ್ರೀ ದಯಾನಂದ ಶೆಟ್ಟಿಗಾರರು ಮದ್ದಳೆಗಾರರಾಗುವತ್ತ ಹೆಜ್ಜೆ ಇರಿಸಿದರು. ಈ ಸಂದರ್ಭಗಳಲ್ಲಿ ಊರ ಪರವೂರ ಪ್ರದರ್ಶನಗಳಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುತ್ತಾ ಬೆಳೆಯತೊಡಗಿದರು. ಮೇಳದಲ್ಲಿ ಪರಿಪೂರ್ಣವಾಗಿ ತಿರುಗಾಟ ನಡೆಸುವ ಮೊದಲೇ ಮಿಜಾರು ತಿಮ್ಮಪ್ಪ ಅವರ ಜತೆ ಹೋಗಿ ಕರ್ನಾಟಕ ಮೇಳದಲ್ಲಿ ಮದ್ದಳೆ ಬಾರಿಸಿದ್ದರು. ದಿನೇಶ ಅಮ್ಮಣ್ಣಾಯ, ಪ್ರಭಾಕರ ಗೋರೆ, ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರ ಒಡನಾಟ, ಸಹಕಾರವು ದೊರೆತಿತ್ತು. ಶ್ರೀ ದಯಾನಂದ ಶೆಟ್ಟಿಗಾರರು ಮೊಟ್ಟಮೊದಲು ತಿರುಗಾಟ ನಡೆಸಿದ್ದು ಶ್ರೀ ತಿಮ್ಮಪ್ಪ ಗುಜರನ್ ಅವರ ಸಂಚಾಲಕತ್ವದ ತಲಕಳ ಮೇಳದಲ್ಲಿ.
ಅಲ್ಲಿ ಶ್ರೀ ಬೈಪಾಡಿತ್ತಾಯ ದಂಪತಿಗಳು ಸಹಕಾರ, ಪ್ರೋತ್ಸಾಹವನ್ನು ನೀಡಿ ಹರಸಿದ್ದರು. ಕಲಾವಿದರಾದ ಪೊಳಲಿ ಶ್ರೀ ಸುದರ್ಶನ ಶೆಟ್ಟಿ ಮೂಡುಶೆಡ್ಡೆ ಶ್ರೀ ದೊಡ್ಡಣ್ಣ ಶೆಟ್ರ ಪ್ರೋತ್ಸಾಹವೂ ಇತ್ತು. ಆ ಕಾಲದಲ್ಲಿ ಪ್ರದರ್ಶನ ನಡೆಯುವ ಸ್ಥಳಕ್ಕೆ ಚೆಂಡೆ ಮದ್ದಲೆಗಳನ್ನು ಹೊತ್ತುಕೊಂಡು ಕಾಲ್ನಡಿಗೆಯಿಂದಲೇ ಸಾಗುತ್ತಿದ್ದರು. ತಲಕಳದಲ್ಲಿ ಮೂರು ವರ್ಷ ತಿರುಗಾಟ. ಆ ಸಂದರ್ಭದಲ್ಲಿ ಸುರತ್ಕಲ್ ಮೇಳಕ್ಕೆ ಮದ್ದಳೆಗಾರರ ಅನಿವಾರ್ಯತೆಯಿತ್ತು. ಕಲಾವಿದ ಶ್ರೀ ಕುಮಾರ ಗೌಡ ಪುತ್ತಿಗೆ ಅವರ ಹೇಳಿಕೆಯಂತೆ ಶ್ರೀ ದಯಾನಂದ ಶೆಟ್ಟಿಗಾರರು ಸುರತ್ಕಲ್ ಮೇಳವನ್ನು ಸೇರಿ (1997) 3 ವರ್ಷ ತಿರುಗಾಟ ನಡೆಸಿದ್ದರು.
ಸದ್ರಿ ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ಕಾಂಚನ ಸಂಜೀವ ರೈ, ವೇಣೂರು ಸುಂದರಾಚಾರ್ಯ, ಶಿವರಾಮ ಜೋಗಿ, ಎಂ.ಕೆ ರಮೇಶಾಚಾರ್ಯ, ಪೂಕಳ ಲಕ್ಷ್ಮೀನಾರಾಯಣ ಭಟ್, ಉಜಿರೆ ರಾಜ, ವೇಣೂರು ಸದಾಶಿವ ಕುಲಾಲ್, ವೇಣೂರು ಸದಾಶಿವ ಆಚಾರ್ಯ, ವೇಣೂರು ಅಶೋಕ ಆಚಾರ್ಯ ಮೊದಲಾದವರ ಒಡನಾಟ ಮತ್ತು ಸಹಕಾರವು ಬೆಳೆಯುವುದಕ್ಕೆ ಅನುಕೂಲವಾಯಿತು. ಆಗ ಶ್ರೀ ರವಿಚಂದ್ರ ಕನ್ನಡಿಕಟ್ಟೆ ಅವರು ಬಾಲಗೋಪಾಲನಾಗಿ ಅಭಿನಯಿಸುತ್ತಿದ್ದರು. ಪ್ರಸ್ತುತ ಅವರು ಯುವ ಭಾಗವತರಾಗಿ ಕಲಾಸೇವೆಯನ್ನು ಮಾಡುತ್ತಿರುವುದು ನಮಗೆಲ್ಲಾ ತಿಳಿದ ವಿಚಾರ. ಬಳಿಕ ೨ ವರ್ಷ ಶ್ರೀ ಕಿಶನ್ ಕುಮಾರ್ ಹೆಗ್ಡೆ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ ವ್ಯವಸಾಯ.
ಈ ಮೇಳದಲ್ಲಿ ಶ್ರೀ ಗೋರೆ ಮತ್ತು ಶ್ರೀ ದೇಲಂತಮಜಲು ಅವರುಗಳು ಅವಕಾಶಗಳನ್ನು ಇತ್ತು ಸಹಕರಿಸಿದ್ದರು. ಬಳಿಕ 5 ವರ್ಷ ಶ್ರೀ ದಯಾನಂದ ಗುಜರನ್ ಅವರ ಸಸಿಹಿತ್ಲು ಮೇಳದಲ್ಲಿ ತಿರುಗಾಟ. ಮುಖ್ಯ ಮದ್ದಳೆಗಾರರಾಗಿ ಈ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಮೇಳದ ತಿರುಗಾಟ ಮತ್ತು ವೆಲ್ಡಿಂಗ್ ಕೆಲಸವನ್ನು ಜತೆಜತೆಯಾಗಿಯೇ ನಿರ್ವಹಿಸಿದ್ದರು. ಬಳಿಕ 1 ವರ್ಷ ಮುಖ್ಯ ಮದ್ದಳೆಗಾರರಾಗಿ ಸುಂಕದಕಟ್ಟೆ ಮೇಳದಲ್ಲಿ ವ್ಯವಸಾಯ.
2010ಕ್ಕೆ ಕಟೀಲು ಮೇಳ ಸೇರಿದ ಶ್ರೀ ದಯಾನಂದ ಶೆಟ್ಟಿಗಾರರು ಮೋಹನ ಶೆಟ್ಟಿಗಾರರ ಜೊತೆ 2 ವರ್ಷ ಕಲಾಸೇವೆ ಮಾಡಿದ್ದರು. (4ನೇ ಮೇಳ) ಬಳಿಕ ಮುಖ್ಯ ಮದ್ದಳೆಗಾರನಾಗಿ ಸ್ಥಾನವು ದೊರಕಿತ್ತು. ಕಳೆದ 13 ವರ್ಷಗಳಿಂದ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಪುಂಡಿಕಾಯಿ ಗೋಪಾಲಕೃಷ್ಣ ಭಟ್, ಬಳ್ಳಮಂಜ ಶ್ರೀನಿವಾಸ, ಇವರುಗಳ ಪ್ರಧಾನ ಭಾಗವತಿಕೆಯಡಿಯಲ್ಲಿ ವ್ಯವಸಾಯ ಮಾಡುತ್ತಾ ಬಂದಿದ್ದಾರೆ. ಉಳಿದ ಭಾಗವತರುಗಳಿಗೂ ಹಾಗೂ ಎಲ್ಲಾ ಕಲಾವಿದರುಗಳಿಗೂ ದಯಾನಂದ ಶೆಟ್ಟಿಗಾರರೆಂದರೆ ಅಚ್ಚುಮೆಚ್ಚು. ಎಲ್ಲರಿಗೂ ಇವರು ಪ್ರೀತಿಯ ‘ದಯಣ್ಣ’
ಕಟೀಲು ಮೇಳದ ಪ್ರಧಾನ ಮದ್ದಳೆಗಾರರಾದ ಶ್ರೀ ದಯಾನಂದ ಶೆಟ್ಟರು ನಾಲ್ಕು ಬಾರಿ ವಿದೇಶ ಪ್ರವಾಸ ಮಾಡಿರುತ್ತಾರೆ. ಮೊಟ್ಟಮೊದಲು ವಿದೇಶ ಯಾತ್ರೆ ಕೈಗೊಂಡದ್ದು 2006ರಲ್ಲಿ. ಶ್ರೀ ಪಿ.ವಿ. ಪರಮೇಶ್ ಅವರ ಜತೆಯಾಗಿ ದುಬೈ ಯಕ್ಷಮಿತ್ರರು ಆಯೋಜಿಸಿದ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ದ್ವಿತೀಯ ವಿದೇಶಯಾತ್ರೆ 2010ರಲ್ಲಿ. ಮಿತ್ರ ಶ್ರೀ ಧನಂಜಯ ಕಿನ್ನಿಗೋಳಿ ಅವರ ಹೇಳಿಕೆಯಂತೆ ಬಹರೈನ್ ಕನ್ನಡ ಸಂಘದವರು ಆಯೋಜಿಸಿದ ಪ್ರದರ್ಶನದಲ್ಲಿ ತಮ್ಮ ವಾದನ ಕೌಶಲವನ್ನು ತೋರಿದ್ದರು. 2013ರಲ್ಲಿ ಮತ್ತೆ ಬಹರೈನ್ ಕನ್ನಡ ಸಂಘದವರು ಏರ್ಪಡಿಸಿದ ಪ್ರದರ್ಶನದಲ್ಲಿ.
ನಾಲ್ಕನೇ ಬಾರಿ ವಿದೇಶ ಯಾತ್ರೆ ಮಾಡಿದ್ದು 2019ರಲ್ಲಿ. ಶ್ರೀ ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಇವರ ದುಬೈ ಯಕ್ಷಗಾನ ಅಭ್ಯಾಸ ತರಗತಿ ಈ ಸಂಸ್ಥೆಯ ವತಿಯಲ್ಲಿ ಪಟ್ಲ ಸಂಭ್ರಮ ಕಾರ್ಯಕ್ರಮವು ನಡೆದಿತ್ತು. ಇದರ ಜತೆ ಪದ್ಮಶಾಲಿ ಸಮುದಾಯ ದುಬೈ ಇವರೂ ಪ್ರದರ್ಶನವನ್ನು ಏರ್ಪಡಿಸಿದ್ದರು. ಈ ಪ್ರದರ್ಶನದಲ್ಲಿ ಭಾಗವಹಿಸಿದ ದಯಾನಂದ ಶೆಟ್ಟಿಗಾರರು ಸನ್ಮಾನವನ್ನೂ ಸ್ವೀಕರಿಸಿದ್ದರು. ಮಳೆಗಾಲದಲ್ಲಿ ಮುಂಬೈ ಪ್ರದರ್ಶನಗಳಲ್ಲೂ ಭಾಗವಹಿಸಿ ಸನ್ಮಾನಗಳನ್ನು ಸ್ವೀಕರಿಸಿರುತ್ತಾರೆ. ಶ್ರೀ ಪದ್ಮನಾಭ ಕಟೀಲು ನಾಯಕತ್ವದ ‘ಕೀರ್ತಿಶೇಷ ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ ಮುಂಬೈ- ಯು. ಎ. ಇ. ಈ ಸಂಸ್ಥೆಯು ಕೊಡಮಾಡುವ ಕೀರ್ತಿಶೇಷ ಗೋಪಾಲಕೃಷ್ಣ ಸಂಸ್ಮರಣಾ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಮುಂಬೈಯ ಯಶಸ್ವೀ ಸಂಘಟಕ ಶ್ರೀ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ‘ಅಜೆಕಾರು ಕಲಾಭಿಮಾನಿ ಬಳಗ’ವು “ಯಕ್ಷರಕ್ಷಾ ಪ್ರಶಸ್ತಿ” ಯನ್ನು ಶ್ರೀ ದಯಾನಂದ ಶೆಟ್ಟಿಗಾರರಿಗೆ ನೀಡಿ ಗೌರವಿಸಿದೆ.
ಮೂಡಬಿದಿರೆಯ ಡಾ. ಮೋಹನ ಆಳ್ವರ ಆಳ್ವಾಸ್ ವಿದ್ಯಾಸಂಸ್ಥೆಯ ಧೀಂಕಿಟ ಅಧ್ಯಯನ ಕೇಂದ್ರದಲ್ಲಿ ಶ್ರೀ ಶೇಖರ ಡಿ. ಶೆಟ್ಟಿಗಾರರ ನಿರ್ದೇಶನಗಳ ಪ್ರದರ್ಶನಗಳ ಆರಂಭದಿಂದಲೇ ದಯಾನಂದ ಶೆಟ್ಟಿಗಾರರು ಚೆಂಡೆವಾದಕರಾಗಿ ಭಾಗವಹಿಸಿರುತ್ತಾರೆ. 1997-98ರಲ್ಲಿ ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಶ್ರೀ ದಾಮೋದರ ಶೆಟ್ಟಿಗಾರರ ಮೋಹಿನಿ ಕಲಾಸಂಪದ ತಂಡದಲ್ಲಿ ಶ್ರೀ ಶೇಖರ ಡಿ. ಶೆಟ್ಟಿಗಾರರ ನಿರ್ದೇಶನದಲ್ಲಿ ವಾದಕರಾಗಿ ಅನುಭವಗಳನ್ನು ಪಡೆದುಕೊಂಡಿದ್ದರು.
ಪರಂಪರೆ, ಮಟ್ಟುಗಳ ರೀತಿಯನ್ನು ಅರಿತುಕೊಳ್ಳುವುದಕ್ಕೆ ಈ ಪ್ರದರ್ಶನಗಳು ಅನುಕೂಲವಾಗಿತ್ತು. ಶ್ರೀಮತಿ ವಿದ್ಯಾ ಕೊಳ್ಯೂರು ವಾರ ‘ಯಕ್ಷಮಂಜೂಷ’ ತಂಡದ ಕೆಲವು ಪ್ರದರ್ಶನಗಳಲ್ಲೂ ಭಾಗವಹಿಸಿದ್ದರು. ಅಲ್ಲದೆ ಮುಂಬೈ, ಚೆನ್ನೈ, ಬೆಂಗಳೂರು, ಪಾಂಡಿಚೇರಿ ಮೊದಲಾದ ನಗರಗಳಲ್ಲಿ ನಡೆದ ಯಕ್ಷಗಾನ ಪ್ರದರ್ಶನಗಳಲ್ಲಿ ವಾದಕರಾಗಿ ಕಾಣಿಸಿಕೊಂಡಿದ್ದರು. ಸಾಧಕನು ತಾನು ಸಾಗಿ ಬಂದ ದಾರಿಯನ್ನು ಮತ್ತು ಸಹಕರಿಸಿದ ಮಹಾನುಭಾವರುಗಳನ್ನು ಎಂದಿಗೂ ಮರೆಯಲಾರ. ದಯಾನಂದ ಶೆಟ್ಟಿಗಾರರು ಕಲಾಬದುಕಿನಲ್ಲಿ ತಮಗೆ ಸಹಕರಿಸಿದ ಸಂಘಟಕರನ್ನೂ, ಕಲಾವಿದರನ್ನೂ, ಸಂಸ್ಥೆಗಳನ್ನೂ ಮರೆಯದೆ ನೆನಪಿಸಿಕೊಳ್ಳುತ್ತಾರೆ.
ಇವರ ಅಣ್ಣ ಶ್ರೀ ಸದಾನಂದ ಶೆಟ್ಟಿಗಾರರೂ ಮದ್ದಳೆಗಾರರು. ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ದಯಾನಂದ ಶೆಟ್ಟಿಗಾರರ ಪತ್ನಿ ಶ್ರೀಮತಿ ಸರಿತಾ ಗೃಹಣಿ. ಸರಿತಾ, ದಯಾನಂದ ಶೆಟ್ಟಿಗಾರ್ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಕೌಶಿಕ್ ಶೆಟ್ಟಿಗಾರ್ ೯ನೇ ತರಗತಿ ವಿದ್ಯಾರ್ಥಿ. ಕಿರಿಯ ಪುತ್ರ ಮಾ| ಸ್ವಸ್ತಿಕ್ ಶೆಟ್ಟಿಗಾರ್ ೬ನೇ ತರಗತಿ ವಿದ್ಯಾರ್ಥಿ. ಇಬ್ಬರೂ ದೊಡ್ಡಪ್ಪ ಶ್ರೀ ಸದಾನಂದ ಶೆಟ್ಟಿಗಾರರಿಂದ ನಾಟ್ಯ ಕಲಿತು ವೇಷ ಮಾಡುತ್ತಿದ್ದಾರೆ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಮದ್ದಳೆಗಾರ ಮಿಜಾರು ಶ್ರೀ ದಯಾನಂದ ಶೆಟ್ಟಿಗಾರರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಶ್ರೀ ದೇವರ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.