ಕಾಸರಗೋಡು ಸಮೀಪ ರೈಲ್ವೆ ಹಳಿಗಳ ಮೇಲೆ ಕಬ್ಬಿಣದ ತುಂಡು ಮತ್ತು ಸಿಮೆಂಟ್ ಕಲ್ಲುಗಳು ಪತ್ತೆಯಾಗಿ ವಿಧ್ವಂಸಕ ಕೃತ್ಯದ ಅನುಮಾನದ ಶಂಕೆ ವ್ಯಕ್ತಪಡಿಸಲಾಗಿತ್ತು. ಈಗ ಮಾತ್ರ ಪ್ರಕರಣ ಬೇರೆಯದೇ ಹಳಿಯನ್ನು ಪ್ರವೇಶಿಸಿದೆ! ಈ ಕೃತ್ಯಕ್ಕಾಗಿ ತಮಿಳುನಾಡು ಮೂಲದ 22 ವರ್ಷದ ಯುವತಿಯನ್ನು ಬಂಧಿಸಲಾಗಿದೆ.
ಚಿತ್ರದಲ್ಲಿ ತೋರಿಸಿರುವಂತೆ ದೊಡ್ಡ ಕಬ್ಬಿಣದ ಕಂಬದ ತುಂಡಿಗೆ ಸಿಮೆಂಟ್ ಕಲ್ಲು ಜೋಡಿಕೊಂಡಿತ್ತು. ಅದನ್ನು ರೈಲ್ವೆ ಹಳಿಗಳ ಮೇಲೆ ಇರಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ 22 ವರ್ಷದ ತಮಿಳುನಾಡು ಯುವತಿಯನ್ನು ಬಂಧಿಸಲಾಗಿದೆ.
ರೈಲು ಹಳಿ ಮೇಲೆ ಕಬ್ಬಿಣದ ತಟ್ಟೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ 22 ವರ್ಷದ ಯುವತಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಬೇಕಲದಲ್ಲಿ ಬಾಡಿಗೆಗೆ ವಾಸವಿದ್ದ ತಮಿಳುನಾಡು ಮೂಲದ ಕನಕವಲ್ಲಿ ಬಂಧಿತ ಆರೋಪಿ. ಕಾಂಕ್ರೀಟ್ನಲ್ಲಿ ಕಬ್ಬಿಣದ ದೊಡ್ಡ ತುಂಡನ್ನು ಅಳವಡಿಸಿರುವುದು ಪತ್ತೆಯಾಗಿದೆ. ಕಾಂಕ್ರೀಟ್ ಭಾಗವನ್ನು ರೈಲಿನಡಿಗೆ ಸಿಲುಕಿಸಿ ನಾಶಪಡಿಸಿದರೆ ಕಬ್ಬಿಣದ ತಟ್ಟೆಯನ್ನು ಮಾರಾಟ ಮಾಡಬಹುದು ಎಂಬುದು ಯುವತಿಯ ಸರಳ ಆಲೋಚನೆಯಾಗಿತ್ತು ಎಂದು ತನಿಖೆಯ ಮೇಲ್ವಿಚಾರಣೆ ನಡೆಸಿದ ಜಿಲ್ಲಾ ಪೊಲೀಸ್ ಮುಖ್ಯಸ್ಥ ವೈಭವ್ ಸಕ್ಸೇನಾ ಹೇಳಿದರು.
10 ದಿನಗಳ ಹಿಂದೆ ಕೊಟ್ಟಿಕುಲಂನಲ್ಲಿ ಹಳಿ ಮೇಲೆ ಕಾಂಕ್ರೀಟ್ನೊಂದಿಗೆ ಕಬ್ಬಿಣದ ತಟ್ಟೆ ಬಿದ್ದಿರುವುದು ಕಂಡುಬಂದಿತ್ತು. ಇದು ರೈಲು ಹಳಿಯನ್ನು ಹಾಳುಮಾಡಿ ವಿಧ್ವಂಸಕ ಕೃತ್ಯ ಮಾಡುವ ಪ್ರಯತ್ನ ಎಂದು ಪೊಲೀಸರು ಭಾವಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು, ಆರ್ ಪಿಎಫ್ ಹಾಗೂ ರೈಲ್ವೇ ಪೊಲೀಸರ ಜಂಟಿ ತನಿಖೆಯಲ್ಲಿ ಕನಕವಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದರಿಂದ ಅನುಮಾನಗೊಂಡು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಅಪಾಯ ಅಥವಾ ಇನ್ನಾವುದರ ಬಗ್ಗೆ ನಮಗೆ ತಿಳಿದಿರಲಿಲ್ಲ ಎಂದು ಯುವತಿ ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳಿಯಲ್ಲಿ ಕಬ್ಬಿಣದ ಪದರ ಪತ್ತೆಯಾದ ದಿನವೇ ಚಿತ್ತಾರಿಯಲ್ಲಿ ರೈಲಿಗೆ ಕಲ್ಲು ತೂರಾಟ, ಕೊಟ್ಟಿಕುಲಂನಲ್ಲಿ ಬಿಯರ್ ಬಾಟಲ್ ಎಸೆದು ಕುಂಬಳದಲ್ಲಿ ಹಳಿ ಮೇಲೆ ಕಲ್ಲು ಎಸೆದಿದ್ದಾರೆ. ಕಾಸರಗೋಡಿನ ತಳಂಗರಾ ಎಂಬಲ್ಲಿಯೂ ಹಳಿಗಳ ಮೇಲೆ ಕಲ್ಲುಗಳು ಪತ್ತೆಯಾಗಿವೆ. ಈ ಸಂಬಂಧ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಗಾದರೆ ಇದೆಲ್ಲಾ ಯಾರು ಮಾಡಿದ್ದು? ಗುಜರಿ ಹೆಕ್ಕುವ ಯುವತಿಯೇ? ರೈಲ್ವೆ ಹಳಿಗಳ ಮೇಲೆ ಕಬ್ಬಿಣ ಸಿಕ್ಕಿದ ಈ ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳುವಂತೆ ಯುವತಿಗೆ ಬಾಹ್ಯ ದುಷ್ಟ ಶಕ್ತಿಗಳ ಒತ್ತಡ ಹೇರಲಾಗಿದೆಯೇ ಅಥವಾ ನಿಜವಾಗಿಯೂ ಆಕೆ ತಪ್ಪಿತಸ್ಥಳೇ ಎಂದು ನಿಷ್ಪಕ್ಷಪಾತ ತನಿಖೆಯಿಂದ ಹೊರಬರಬೇಕಿದೆ.
ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ ಆಚಾರ್ (83 ವರ್ಷ) ನಿನ್ನೆ (31-08-2022) ಸಂಜೆ 5:30ಕ್ಕೆ ನಿಧನರಾದರು.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೂರು ದಶಕಗಳಿಗೂ ಮಿಕ್ಕಿ ವಿದ್ಯಾರ್ಥಿಗಳ ಅತ್ಯಂತ ಅಚ್ಚುಮೆಚ್ಚಿನ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಬಳಿಕ ಪೂರ್ಣಪ್ರಜ್ಞ ಸಂಧ್ಯಾಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ಸಲ್ಲಿಸಿದ್ದರು.
ಪ್ರಸ್ತುತ ಎಸ್.ವಿ.ಎಸ್.ಟಿ ಪ್ರೌಢಶಾಲೆ ಕಿದಿಯೂರು ಹಾಗೂ ಅಂಬಲಪಾಡಿ-ಕಿದಿಯೂರು ವಿದ್ಯಾಸಮುದ್ರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಚಾಲಕರಾಗಿದ್ದರು. ವಿ.ಆರ್.ಕಿದಿಯೂರ್ ರವರು ಸ್ಥಾಪಿಸಿದ ಕಿದಿಯೂರು ನಾಗಲಕ್ಷ್ಮೀ ಶ್ರೀನಿವಾಸ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಇದರ ಕಾರ್ಯದರ್ಶಿಯಾಗಿ ಕಳೆದ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರು.
ಅಲ್ಲದೆ ಹಲವಾರು ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಪೂರ್ಣಪ್ರಜ್ಞ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಬಿ.ಎಂ. ಸೋಮಯಾಜಿ, ಕಾರ್ಯದರ್ಶಿ ತೇಜಸ್ವಿ ಶಂಕರ್, ಪ್ರಾಂಶುಪಾಲ ಡಾ. ಎ. ರಾಘವೇಂದ್ರ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಬೆಳ್ತಂಗಡಿ ಆಶಾ ಸಾಲಿಯಾನ್ ಸಭಾಭವನದಲ್ಲಿ ಜರುಗಿದ 12ನೆ ವರ್ಷದ ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವದ ಸಂದರ್ಭದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದ ದಿವಾಕರ ಆಚಾರ್ಯ ಗೇರುಕಟ್ಟೆ ಇವರನ್ನು ಸನ್ಮಾನಿಸಲಾಯಿತು.ಕರ್ನಾಟಕ ವಿಧಾನ ಪರಿಷತ್ತಿನ ಶಾಸಕ ಮತ್ತು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್, ಉಜಿರೆ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ , ರಂಜನ್. ಜಿ ಗೌಡ ಮತ್ತು ಸಮಿತಿಯ ಪದಾಧಿಕಾರಿಗಳು ಸಾಧಕರನ್ನು ಗೌರವಿಸಿದರು.
ಬೆಳ್ತಂಗಡಿ ತಾಲೂಕು ಗೇರುಕಟ್ಟೆಯ ಸಾರ್ವಜನಿಕ ಶ್ರೀ ಗಣೇಶೋತ್ಸವದ 50ನೇ ವರ್ಷದ ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕವಿ ವಿಷ್ಣುಶರ್ಮ ವಿರಚಿತ ಗಣೇಶ ಮಹಾತ್ಮೆ ತಾಳಮದ್ದಳೆಯು ಕಳಿಯ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.
ತನ್ನ ಕಾರಿನಲ್ಲಿ ಬೃಹತ್ ಗಾತ್ರದ ನಾಗರ ಹಾವು ಅಡಗಿದೆ ಎಂದು ತಿಳಿಯದೆ ಒಂದು ತಿಂಗಳು ಕಾರಿನಲ್ಲಿ ವ್ಯಕ್ತಿಯೋರ್ವ ಪ್ರಯಾಣಿಸಿದ ಘಟನೆ ನಡೆದಿದೆ. ತನ್ನ ಕಾರಿನಲ್ಲಿ ನಾಗರ ಹಾವು ಅಡಗಿದೆ ಎಂಬುದೇ ತಿಳಿಯದೇ ಕೊಟ್ಟಾಯಂ ಅರ್ಪುಕರ ಮೂಲದ ಸುಜಿತ್ ಕುಟುಂಬ ಸಮೇತ ಪ್ರಯಾಣ ಬೆಳೆಸಿದ್ದಾರೆ.
ನಿಲಂಬೂರು ಕಾಡಿನಿಂದ ಬಂದಿದ್ದ ‘ಅತಿಥಿ’ ಒಂದು ತಿಂಗಳಿಂದ ಕಾರಿನಲ್ಲಿ ತಲೆಮರೆಸಿಕೊಂಡಿದ್ದ! ಒಂದು ತಿಂಗಳ ಹಿಂದೆ ಸುಜಿತ್ ಮತ್ತು ಆತನ ಸ್ನೇಹಿತರು ಕೆಲಸದ ನಿಮಿತ್ತ ನಿಲಂಬೂರಿಗೆ ಹೋಗಿದ್ದರು.
ಕೆಲಸ ಮುಗಿಸಿ ವಾಪಸಾಗುತ್ತಿದ್ದಾಗ ಕಾರಿನ ಸಮೀಪದಲ್ಲಿ ರಾಜ ನಾಗರಹಾವು ಕಾಣಿಸಿಕೊಂಡಿದ್ದು, ಬಳಿಕ ನಾಪತ್ತೆಯಾಗಿದೆ. ಕಾರಿಗೆ ಹಾವು ನುಗ್ಗಿದೆಯೇ ಎಂದು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಹಿಂತಿರುಗಿದ್ದರು.
ವಾರದ ಹಿಂದೆ ಸುಜಿತ್ ಕಾರು ತೊಳೆಯುತ್ತಿದ್ದಾಗ ಕಾರಿನೊಳಗೆ ಹಾವಿನ ಚರ್ಮ ಕಾಣಿಸಿಕೊಂಡಿತ್ತು. ಹಾವು ಇನ್ನೂ ಕಾರಿನಲ್ಲೇ ಇರುವುದನ್ನು ತಿಳಿದ ಸುಜಿತ್ ಹಾವು ಹಿಡಿಯುವ ವಾವ ಸುರೇಶ್ ಅವರ ಸಹಾಯ ಕೇಳಿದ್ದಾರೆ.
ಆಗ ವಾವಾ ಆಗಮಿಸಿ ಪರಿಶೀಲನೆ ನಡೆಸಿದಾಗ ಸಮೀಪದಲ್ಲಿ ಕಂಡ ಹಾವಿನ ಹಿಕ್ಕೆ ಕೇವಲ ಒಂದು ಗಂಟೆ ಹಳೆಯದಾಗಿದೆ ಎಂದು ತಿಳಿಸಿದರು. ಆದರೆ ಗಂಟೆಗಟ್ಟಲೆ ಸುತ್ತಲಿನ ಪರಿಶೀಲನೆ ನಡೆಸಿದರೂ ಹಾವು ಪತ್ತೆಯಾಗಲಿಲ್ಲ.
ಕೊನೆಗೆ ಮನೆಯ ಸಮೀಪವೇ ಹಾವಿನ ಬಾಲ ಇರುವುದು ಗಮನಕ್ಕೆ ಬಂತು. ಬಳಿಕ ಬಲೆಯಿಂದ ಮುಚ್ಚಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ನಂತರ ಅರಣ್ಯ ಇಲಾಖೆಯ ಹಾವು ಹಿಡಿಯುವವರಾದ ಅಭಿಷೇಕ ಆಗಮಿಸಿ ಹಾವನ್ನು ಹಿಡಿದಾಗ ಎಲ್ಲರಿಗೂ ಸಮಾಧಾನವಾಯಿತು.
ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಮಂಡಳಿಯ ಅನುಭವೀ ಕಲಾವಿದರು. 1991ರಿಂದ ತೊಡಗಿ ಕಳೆದ ಮೂವತ್ತೊಂದು ವರ್ಷಗಳಿಂದ ವೃತ್ತಿ ಕಲಾವಿದನಾಗಿ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಕೋಡಂಗಿ ವೇಷದಿಂದ ತೊಡಗಿ, ಸಾಧಕನಾಗಿ, ಹಂತ ಹಂತವಾಗಿ ಬೆಳೆಯುತ್ತಾ ಸಾಗಿ ಬಂದಿರುತ್ತಾರೆ.
ಮೇಳದಲ್ಲಿ ಇವರ ಸ್ಥಾನವು ಒಂದನೇ ಪುಂಡುವೇಷ. ಪುಂಡುವೇಷಧಾರಿಯಾದರೂ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಬಲ್ಲ ಕಲಾವಿದರಿವರು. ಕಿರೀಟ ವೇಷ, ಕಸೆ ಸ್ತ್ರೀವೇಷ, ಹೆಣ್ಣು ಬಣ್ಣಕ್ಕೆ ಸಂಬಂಧಿಸಿದ ಪಾತ್ರಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಂಗನಾಯಕ ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳ ಗರಡಿಯಲ್ಲಿ ಕಲಿತು ಬೆಳೆಯುತ್ತಾ ಸಾಗಿ ಬಂದ ಇವರು ಸದಾ ಅಧ್ಯಯನಶೀಲರು.
ಶ್ರೀ ಬಿ. ಮೋಹನ್ ಕುಮಾರರ ಹುಟ್ಟೂರು ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದ ಬಟ್ಲಬೆಟ್ಟು. ದಿ| ಶ್ರೀ ವೆಂಕಪ್ಪ ಬೆಳ್ಚಡ ಮತ್ತು ಶ್ರೀಮತಿ ಸುಶೀಲ ದಂಪತಿಗಳ ಪುತ್ರನಾಗಿ 1973ನೇ ಇಸವಿ ಜುಲೈ 4 ರಂದು ಜನನ. ಶ್ರೀ ವೆಂಕಪ್ಪ ಬೆಳ್ಚಡರಿಗೆ ಐದು ಮಂದಿ ಮಕ್ಕಳು. (ಇಬ್ಬರು ಪುತ್ರಿಯರು, ಮೂವರು ಪುತ್ರರು) ಮೋಹನ ಕುಮಾರರ ಹಿರಿಯ ಅಕ್ಕ ಶ್ರೀಮತಿ ಶಾಂಭವಿ. ಗೃಹಣಿ. ಇವರ ಪತಿ ಕಲಾಯಿ ಶ್ರೀ ಶೀನ ಬೆಳ್ಚಡ ಅವರು ಯಕ್ಷಗಾನ ಕಲಾಸಕ್ತರು. ಅವರಿಗೆ ಕೆಲವು ಪ್ರಸಂಗಗಳ ಹಾಡುಗಳು ಕಂಠಪಾಠವಾಗಿತ್ತು. ಬಿಡುವಿನ ಸಮಯದಲ್ಲಿ ಯಕ್ಷಗಾನದ ಹಾಡುಗಳನ್ನು ಗುನುಗುನಿಸುವ ಹವ್ಯಾಸವೂ ಇತ್ತು.
ಕಿರಿಯ ಅಕ್ಕ ಶ್ರೀಮತಿ ಭವಾನಿ. ಇವರು ಗೃಹಣಿ. ಮೋಹನ ಕುಮಾರರ ದೊಡ್ಡ ಅಣ್ಣ ಶ್ರೀ ಸುರೇಶ ಬೆಳ್ಚಡ ಶುಭ ಬೀಡಿ ಕಂಪೆನಿಯಲ್ಲಿ ಉದ್ಯೋಗಿ. ಕಲಾಸಕ್ತರು. ಮಾತು ಕಡಿಮೆ ದುಡಿಮೆ ಹೆಚ್ಚು ಎಂಬಂತೆ ಇವರ ವ್ಯವಹಾರ. ಸದಾ ಮುಚ್ಚಿಕೊಳ್ಳುವ ಸ್ವಭಾವವಾದರೂ ಸಹೋದರಿಯರ ವಿವಾಹ, ಸಹೋದರರ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತು ತೆರೆದು ಕಾಣಿಸಿಕೊಂಡವರು. ಕಿರಿಯ ಅಣ್ಣ ಶ್ರೀ ಜನಾರ್ದನ ಅಮ್ಮುಂಜೆ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉದ್ಯೋಗಿ. ಇವರು ಯಕ್ಷಗಾನ ಸಂಘಟಕರಾಗಿ, ನಿರೂಪಕರಾಗಿ ಕಲಾಭಿಮಾನಿಗಳಿಗೆ ಪರಿಚಿತರು. ಮೋಹನ ಕುಮಾರರ ತಂದೆತಾಯಿಯರು ಯಕ್ಷಗಾನಾಸಕ್ತರು. ತಾಯಿಯವರಿಗೆ ಭಜನೆ ಹೇಳುವುದು, ಮಕ್ಕಳಿಗೆ ಪುರಾಣ ಕಥೆಗಳನ್ನು ಹೇಳುವ ಹವ್ಯಾಸವಿತ್ತು. ಹಗಲಿಡೀ ದುಡಿಮೆ ಮಾಡಿ ರಾತ್ರಿ ಮಕ್ಕಳನ್ನು ಆಟಕ್ಕೆ ಕರೆದೊಯ್ಯುತ್ತಿದ್ದರು.
ಮೋಹನಕುಮಾರರ ಮಾವ ಬಿಕರ್ನಕಟ್ಟೆ ಲಕ್ಷ್ಮಣ ಬೆಳ್ಚಡ. ಇವರೂ ಯಕ್ಷಗಾನ ಕಲೆಯನ್ನು ಅತ್ಯಂತ ಪ್ರೀತಿಸುತ್ತಿದ್ದರು. ಹಾಗಾಗಿ ಮೋಹನರಿಗೆ ಯಕ್ಷಗಾನ ಕಲಾಸಕ್ತಿಯು ಹಿರಿಯರಿಂದಲೇ ಬಂದ ಬಳುವಳಿಯಾಗಿತ್ತು. ಅಮ್ಮ ಶ್ರೀಮತಿ ಸುಶೀಲ ಅವರು ರಾತ್ರಿ 9 ಘಂಟೆಯವರೆಗೂ ಬೀಡಿ ಕಟ್ಟಿ (ಮನೆಕೆಲಸಗಳನ್ನೂ ಮಾಡಿ) ಮಕ್ಕಳನ್ನು ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪ್ರದರ್ಶನಗಳನ್ನು ನೋಡಿ ಮತ್ತು ಭಾವನಾದ ಶ್ರೀ ಕಲಾಯಿ ಶೀನ ಬೆಳ್ಚಡ ಅವರು ಹಾಡುತ್ತಿದ್ದ ಯಕ್ಷಗಾನ ಪದ್ಯಗಳನ್ನು ಕೇಳಿ ಮೋಹನ ಕುಮಾರರಿಗೆ ಕಲಾವಿದನಾಗಬೇಕೆಂಬ ಆಸೆಯೂ ಹುಟ್ಟಿತ್ತು. ಇವರ ಆಸಕ್ತಿಯನ್ನು ಗಮನಿಸಿದ ಅಕ್ಕ, ಭಾವ ಮತ್ತು ಅಣ್ಣ ಜನಾರ್ದನ ಅಮ್ಮುಂಜೆ ಯಕ್ಷಗಾನ ಹೆಜ್ಜೆಗಾರಿಕೆ ಕಲಿಯಲು ವ್ಯವಸ್ಥೆ ಮಾಡಿದ್ದರು.
ಶ್ರೀ ಬಿ. ಮೋಹನ ಕುಮಾರರಿಗೆ ಹೆಜ್ಜೆಗಾರಿಕೆಯ ಪ್ರಾಥಮಿಕ ಪಾಠ ಮಾಡಿದವರು ಕಲಾಯಿಗುತ್ತು ಶ್ರೀ ಜಿ. ಶಂಕರ ಶೆಟ್ರು. ಅವರು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದರು. ಅವರು ವಾರಕ್ಕೊಮ್ಮೆ ಕಲಾಯಿಗುತ್ತು ಮನೆಗೆ ಬರುತ್ತಿದ್ದರು. ಹವ್ಯಾಸಿ ಉತ್ತಮ ಕಲಾವಿದರಾಗಿದ್ದ ಶ್ರೀ ಜಿ.ಶಂಕರ ಶೆಟ್ಟರಿಂದ ಮೋಹನ್ ಅವರು ನಾಟ್ಯ ಕಲಿತರು. ಕಲಾಪೋಷಕರಾದ ಪಂಜಿಕಲ್ಲು ಶ್ರೀ ಶ್ಯಾಮರಾಯ ಆಚಾರ್ಯರು ಪ್ರತಿವರ್ಷವೂ ತಮ್ಮ ಮನೆಯಲ್ಲಿ ಒಂದು ತಿಂಗಳಿನ ತರಬೇತಿಯನ್ನು ನಡೆಸಿ ಯಕ್ಷಗಾನ ನಾಟ್ಯ ಮತ್ತು ಹಿಮ್ಮೇಳ ಕಲಿಯುವ ಅವಕಾಶ ಮಾಡಿ ಕೊಡುತ್ತಿದ್ದರು. ಇದು ಗುರುಕುಲ ಪದ್ಧತಿಯ ಕೇಂದ್ರವಾಗಿತ್ತು. ಅಲ್ಲಿ ಪಡ್ರೆ ಚಂದು ಅವರು ನಾಟ್ಯ ಗುರುಗಳಾಗಿದ್ದರು. ಬಲಿಪ ನಾರಾಯಣ ಭಾಗವತರು ಮತ್ತು ಪುಂಡಿಕಾಯಿ ಶ್ರೀ ಕೃಷ್ಣ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. ಈ ಮೂವರ ಜತೆ ಒಂದು ತಿಂಗಳು ಕಳೆಯುವ ಭಾಗ್ಯವು ಮೋಹನ ಕುಮಾರರಿಗೆ ದೊರಕಿತ್ತು.
ತರಬೇತಿ ಕೇಂದ್ರದಲ್ಲಿ ಇದ್ದುಕೊಂಡು ಪಡ್ರೆ ಚಂದು ಅವರಿಂದ ನಾಟ್ಯಾಭ್ಯಾಸ. ತರಬೇತಿ ಮುಗಿದು ನಡೆದ ಪ್ರದರ್ಶನ, ಶ್ರೀಕೃಷ್ಣ ಸಂಧಾನ ಪ್ರಸಂಗದಲ್ಲಿ ಮೋಹನ್ ಕುಮಾರರು ಸಂಜಯನಾಗಿ ಅಭಿನಯಿಸಿದ್ದರು. (ಇದು ಎಂಟನೇ ಕ್ಲಾಸಿನ ವಿದ್ಯಾರ್ಥಿಯಾಗಿದ್ದಾಗ) ಮುಂದಿನ ವರ್ಷ ಪೊಳಲಿ ಯಕ್ಷಗಾನ ಸಂಘ ಮತ್ತು ಮಲ್ಲೂರಿನ ಯಕ್ಷಗಾನ ಸಂಘಗಳ ಪ್ರದರ್ಶನಗಳಲ್ಲಿ ವೇಷ ಮಾಡುವ ಅವಕಾಶವಾಗಿತ್ತು. ಎಸ್ಸೆಸ್ಸೆಲ್ಸಿ ಓದಿನ ಬಳಿಕ ಶ್ರೀ ಧರ್ಮಸ್ಥಳದ ಲಲಿತಕಲಾ ತರಬೇತಿ ಕೇಂದ್ರಕ್ಕೆ.
ಶ್ರೀ ಕೋಳ್ಯೂರು ರಾಮಚಂದ್ರ ರಾವ್ ಅವರಿಂದ ನಾಟ್ಯಾಭ್ಯಾಸ. ಆಗ ಬೈಪಾಡಿತ್ತಾಯ ದಂಪತಿಗಳು ಕೇಂದ್ರದ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಪಡುಮಲೆ ನಾರಾಯಣ ಪಾಟಾಳಿ, ಪದ್ಮನಾಭ ಎಕ್ಕಾರು, ಪ್ರವೀಣ ದೊಡ್ಡತೋಟ ಸಹಪಾಠಿಗಳಾಗಿದ್ದರು. ತರಬೇತಿ ಕೇಂದ್ರದ ಪ್ರದರ್ಶನಗಳಲ್ಲಿ ಬಬ್ರುವಾಹನ ಮತ್ತು ಮನ್ಮಥನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. ಬೈಪಾಡಿತ್ತಾಯ ದಂಪತಿಗಳು ಮೇಳಕ್ಕೆ ಸೇರಲು ಸಲಹೆ ನೀಡಿದ್ದರು. ಅಣ್ಣಂದಿರೂ, ಭಾವಂದಿರೂ ಸೇರಿ ಕಟೀಲು ಮೇಳಕ್ಕೆ ಸೇರಿಸಿದ್ದರು.
ಶ್ರೀ ಮೋಹನ್ ಕುಮಾರರು ತಿರುಗಾಟ ಆರಂಭಿಸಿದ್ದು ಕಟೀಲು ಮೂರನೇ ಮೇಳದಲ್ಲಿ. (1991) ಕುರಿಯ ಶ್ರೀ ಗಣಪತಿ ಶಾಸ್ತ್ರಿ ಮತ್ತು ಶ್ರೀ ಬಿ. ಪುರುಷೋತ್ತಮ ಪೂಂಜರ ಭಾಗವತಿಕೆ. ಮುಂದಿನ ವರ್ಷಗಳಲ್ಲಿ ಶ್ರೀ ಪೂಂಜರು ಕಟೀಲಿನ ಬೇರೊಂದು ತಂಡಕ್ಕೆ ಭಾಗವತರಾಗಿ ತೆರಳಿದ್ದರು. ಕಟೀಲು ಮೇಳದಲ್ಲಿ ಮೊಟ್ಟಮೊದಲು ಕೋಡಂಗಿಯಾಗಿ ವೇಷ. ಒಂದು ತಿಂಗಳ ಬಳಿಕ ಬಾಲಗೋಪಾಲನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. ಖ್ಯಾತ ಕಲಾವಿದ ಬೆಳ್ಳಾರೆ ಶ್ರೀ ಮಂಜುನಾಥ ಭಟ್ಟರು ಪೂರ್ವರಂಗದ ಎಲ್ಲಾ ಪಾತ್ರಗಳನ್ನೂ ಗಮನಿಸುವ ಗುಣವನ್ನು ಹೊಂದಿದ್ದರು. ಮೋಹನರ ಕುಣಿತ ಮತ್ತು ಅಭಿನಯವನ್ನು ನೋಡಿ, ಇವನನ್ನು ತಯಾರು ಮಾಡಬಹುದು ಎಂದು ಭಾಗವತರಲ್ಲಿ ಹೇಳಿದ್ದರಂತೆ. ಈ ವಿಚಾರವನ್ನು ಹಲವು ವರ್ಷಗಳ ಬಳಿಕ ಭಾಗವತರು ತಿಳಿಸಿದಾಗಲೇ ಮೋಹನ ಕುಮಾರರಿಗೆ ಗೊತ್ತಾದದ್ದು!
ಪ್ರಥಮ ವರುಷದ ತಿರುಗಾಟದ ಸಮಯದಲ್ಲಿ ಪಡ್ರೆ ಚಂದು ಅವರ ಒಡನಾಟವೂ ಸಿಕ್ಕಿತ್ತು. ನೆಡ್ಲೆ ನರಸಿಂಹ ಭಟ್ಟರೂ ಆಗಾಗ ಬಂದು ಹೋಗುತ್ತಿದ್ದರು. ಕಟೀಲು ಮೇಳದಲ್ಲಿ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಡಿ ಹತ್ತೊಂಭತ್ತು ವರ್ಷಗಳ ಕಾಲ ವ್ಯವಸಾಯ. “ನಾನು ವೇಷಧಾರಿಯಾಗಿ ಕಾಣಿಸಿಕೊಳ್ಳಲು ಕುರಿಯ ಶ್ರೀ ಗಣಪತಿ ಶಾಸ್ತ್ರಿಗಳೇ ಕಾರಣರು. ಅವಕಾಶಗಳನ್ನಿತ್ತು ವೇಷಗಳನ್ನು ಮೆರೆಸಿದ್ದಾರೆ. ನನ್ನನ್ನು ತಿದ್ದಿ ತೀಡಿ ಕಲಾವಿದನನ್ನಾಗಿ ರೂಪಿಸಿದ್ದಾರೆ. ಅವರ ಜತೆಯಲ್ಲಿದ್ದೇ ಬೆಳೆದವನು ನಾನು. ಆಟ ಮುಗಿದು ದಿನಾ ಅವರ ಜತೆಗೆ ಮನೆಗೆ ಹೋಗುತಿದ್ದೆ. ಅವರ ಪತ್ನಿ ಶ್ರೀಮತಿ ಶ್ಯಾಮಲಾ ಗಣಪತಿ ಶಾಸ್ತ್ರಿಗಳು ನನ್ನನ್ನು ಮಗನಂತೆಯೇ ಕಂಡಿದ್ದಾರೆ. ಅವರ ಮನೆಯವರೆಲ್ಲಾ ನನ್ನನ್ನು ಅವರ ಮನೆಯ ಸದಸ್ಯನೆಂದೇ ಭಾವಿಸಿ ಪ್ರೀತಿಸಿದ್ದಾರೆ”. ಇದು ಅಮ್ಮುಂಜೆ ಮೋಹನರ ಮನದಾಳದ ಮಾತುಗಳು.
ಈ 19 ವರ್ಷಗಳಲ್ಲಿ ಕೋಡಂಗಿ, ಬಾಲಗೋಪಾಲ, ಮುಖ್ಯ ಸ್ತ್ರೀವೇಷ, ಪೀಠಿಕಾ ಸ್ತ್ರೀ ವೇಷಗಳನ್ನು ಮಾಡುತ್ತಾ ಬೆಳೆದರು. ಕುರಿಯ ಗಣಪತಿ ಶಾಸ್ತ್ರಿಗಳು ಎಲ್ಲಾ ರೀತಿಯ ವೇಷಗಳನ್ನು ಮಾಡಿಸಿ ಧೈರ್ಯ ತುಂಬಿದ್ದರು. ಪುಂಡು ವೇಷಗಳಲ್ಲದೆ, ಕಿರೀಟ ವೇಷ, ಕಸೆ ಸ್ತ್ರೀವೇಷ, ಹೆಣ್ಣು ಬಣ್ಣದ ವೇಷಗಳನ್ನೂ ಮಾಡಲು ಅವಕಾಶವಾಗಿತ್ತು. ಮೂರನೇ ಮೇಳದಲ್ಲಿ ಹೆಸರಾಂತ ಕಲಾವಿದರ ಒಡನಾಟವು ಇವರಿಗೆ ದೊರಕಿತ್ತು. ಅರ್ಥಗಾರಿಕೆ ಬಗೆಗೆ ಶ್ರೀ ಪೂಂಜರ ಮತ್ತು ಬೆಳ್ಳಾರೆ ಮಂಜುನಾಥ ಭಟ್ಟರ ನಿರ್ದೇಶನವು ದೊರೆತಿತ್ತು. ಇವರಿಗೆ ಗುಂಡಿಮಜಲು ಶ್ರೀ ಗೋಪಾಲ ಭಟ್ಟರ ವೇಷಗಳೆಂದರೆ ಅಚ್ಚುಮೆಚ್ಚು. ಅವರ ಪಾತ್ರ ನಿರ್ವಹಣೆಯನ್ನು ನೋಡುತ್ತಾ ಬೆಳೆದವರು. ಅವರ ಜತೆಯೂ ವೇಷ ಮಾಡುವ ಭಾಗ್ಯವು ಸಿಕ್ಕಿತ್ತು. ಇವರಿಬ್ಬರೂ ಚಂಡಮುಂಡರು, ಚಂದ ಪ್ರಚಂಡರು, ಹುಂಡ ಪುಂಡರು ಮೊದಲಾದ ಜತೆ ವೇಷಗಳಲ್ಲಿ ಕಾಣಿಸಿಕೊಂಡಿದ್ದರು.
ಈ ಹತ್ತೊಂಭತ್ತು ವರ್ಷಗಳಲ್ಲಿ ಪುಂಡುವೇಷ ಮತ್ತು ಕಿರೀಟವೇಷಕ್ಕೆ ಸಂಬಂಧಿಸಿದ ಹೆಚ್ಚಿನ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಲು ಅವಕಾಶವಾಗಿತ್ತು. ಎರಡನೇ ಪುಂಡುವೇಷಧಾರಿಯಾದರೂ 1ನೇ ಪುಂಡುವೇಷಗಳನ್ನು ಮಾಡುವ ಅವಕಾಶ ಸಿಕ್ಕಿತ್ತು. ಬಳಿಕ 5ನೇ ಮೇಳ ಆರಂಭವಾದಾಗ ಸದ್ರಿ ಮೇಳದಲ್ಲಿ ಶ್ರೀ ಪಟ್ಲ ಸತೀಶ್ ಶೆಟ್ರ ಜತೆ 7 ವರ್ಷಗಳ ವ್ಯವಸಾಯ ಮಾಡಿದ್ದರು. ಪಟ್ಲ ಸತೀಶ್ ಶೆಟ್ರ ಹಾಡಿಗೆ ಇವರ ವೇಷಗಳೂ ರಂಜಿಸಿದ್ದುವು. 5ನೇ ಮೇಳಕ್ಕೆ ಇವರು ಸೇರಿದ್ದು 1ನೇ ಪುಂಡುವೇಷಧಾರಿಯಾಗಿ. ಅಲ್ಲಿ ಅಮ್ಮುಂಜೆ ಮೋಹನ್ ಮತ್ತು ಬೆಳ್ಳಿಪ್ಪಾಡಿ ಮೋಹನ ಅವರ ಚಂಡ ಮುಂಡರ ಜೋಡಿಯು ಯಶಸ್ವಿಯಾಗಿತ್ತು.
ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆಯವರು ಯಕ್ಷಗಾನ ಕಲಾವಿದನಾಗಿ 25 ತಿರುಗಾಟಗಳನ್ನು ಪೂರೈಸಿದಾಗ ಆ ಪ್ರಯುಕ್ತ “ಅಮ್ಮುಂಜೆ ರಜತ ಪರ್ವ” ಕಾರ್ಯಕ್ರಮ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ಬಯಲು ರಂಗಮಂದಿರದಲ್ಲಿ ನಡೆದಿತ್ತು. ಶ್ರೀಹರಿನಾರಾಯಣದಾಸ ಆಸ್ರಣ್ಣರು ಅಮ್ಮುಂಜೆ ರಜತಪರ್ವ ಸಮಿತಿಯ ಗೌರವಾಧ್ಯಕ್ಷರಾಗಿದ್ದರು. ಶ್ರೀ ಕ್ಷೇತ್ರ ಕಟೀಲಿನ ಆಸ್ರಣ್ಣ ಬಂಧುಗಳ, ಕಟೀಲು ಮೇಳದ ಸಂಚಾಲಕ ಶ್ರೀ ಕಲ್ಲಾಡಿ ದೇವಿಪ್ರಸಾದ ಶೆಟ್ರು, ಊರ ಪರವೂರ ಕಲಾಭಿಮಾನಿಗಳ ಸಹಕಾರದಿಂದ ಈ ರಜತ ಸಂಭ್ರಮ ಕಾರ್ಯಕ್ರಮವು ನಡೆದಿತ್ತು. 2016 ರ ಜೂನ್ 25ರ ಮಧ್ಯಾಹ್ನ 1ರಿಂದ ಆರಂಭವಾಗಿ ಮರುದಿನ ಮಧ್ಯಾಹ್ನದ ವರೆಗೆ ಈ ಕಾರ್ಯಕ್ರಮವು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆದಿತ್ತು. ಈ ಸಂದರ್ಭದಲ್ಲಿ ಶ್ರೀ ಅಮ್ಮುಂಜೆ ಮೋಹನ್ ಕುಮಾರರು ತಮ್ಮನ್ನು ರಂಗದಲ್ಲಿ ಬೆಳೆಸಿದ ಹಿರಿಯ ಕಲಾವಿದರನ್ನು, ತಮ್ಮ ಕಲಾ ಬದುಕಿನ ಶಿಲ್ಪಿಗಳನ್ನು, ವೈಯುಕ್ತಿಕ ಬದುಕಿಗೆ ಬೆಳಕಾದ ಮಹನೀಯರುಗಳನ್ನು, ಕಲಾ ಬದುಕಿನುದ್ದಕ್ಕೂ ಪ್ರೋತ್ಸಾಹಿಸಿದ ಕೌಟುಂಬಿಕ ಬಂಧುಗಳನ್ನು ಗೌರವಿಸಿದ್ದರು. ಅಮ್ಮುಂಜೆ ರಜತಪರ್ವ ಸಮಿತಿಯು ‘ಅಮ್ಮುಂಜೆ ರಜತಾಭಿನಂದನೆ’ ಕಾರ್ಯಕ್ರಮದಡಿಯಲ್ಲಿ ಶ್ರೀ ಮೋಹನ ಕುಮಾರರನ್ನು ಸನ್ಮಾನಿಸಿ ‘ಯಕ್ಷದ್ಯುಮಣಿ’ ಎಂಬ ಬಿರುದನ್ನು ನೀಡಿ ಗೌರವಿಸಿತ್ತು. ಶ್ರೀ ಜನಾರ್ದನ ಅಮ್ಮುಂಜೆ ಇವರ ಸಂಚಾಲಕತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಅಮ್ಮುಂಜೆ ಅಭಿಮಾನಿಗಳ ಪರಿಪೂರ್ಣ ಶ್ರಮವಿತ್ತು.
26 ವರ್ಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ. ಬಳಿಕ ಎರಡು ವರ್ಷಗಳ ಕಾಲ ಎಡನೀರು ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ಶ್ರೀಮಡೆದನೀರು ಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳ ಮತ್ತು ಪ್ರಸ್ತುತ ಪೀಠಾಧಿಪತಿಗಳಾಗಿರುವ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಆಶೀರ್ವಾದ ಮತ್ತು ಸಹಕಾರವು ದೊರೆತಿತ್ತು. ಶ್ರೀ ಸ್ವಾಮೀಜಿಯವರು ಅಮ್ಮುಂಜೆ ಮೋಹನ ಕುಮಾರರು ನೂತನವಾಗಿ ನಿರ್ಮಿಸಿದ ಮನೆಯ ಪ್ರವೇಶೋತ್ಸವಕ್ಕೆ ಬಂದು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ್ದರು. ಎಡನೀರು ಮೇಳದಲ್ಲಿ ಶ್ರೀ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಡಿ ವೇಷ ಮಾಡುವ ಭಾಗ್ಯವು ಸಿಕ್ಕಿತ್ತ್ತು. ದೇಲಂತಮಜಲು ಸುಬ್ರಹ್ಮಣ್ಯ ಭಟ್, ಪುತ್ತೂರು ಶ್ರೀಧರ ಭಂಡಾರಿ ಮೊದಲಾದ ಹಿರಿಯ ಕಲಾವಿದರ ಸಹಕಾರವೂ ದೊರೆತಿತ್ತು. ಬಳಿಕ ಒಂದು ವರ್ಷ ಶ್ರೀ ವಿನೋದ್ ಕುಮಾರ್ ಬಜಪೆ ಅವರ ಬಪ್ಪನಾಡು ಮೇಳದಲ್ಲಿ ವ್ಯವಸಾಯ. ಇಲ್ಲಿ ತುಳು ಪ್ರಸಂಗಗಳಲ್ಲೂ ಪಾತ್ರಗಳನ್ನು ನಿರ್ವಹಿಸಿದ್ದರು. ಕಳೆದ 2 ವರ್ಷಗಳಿಂದ ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಶ್ರೀ ಬಿ. ಮೋಹನ್ ಕುಮಾರರು ಐದು ಬಾರಿ ವಿದೇಶಯಾತ್ರೆ ಕೈಗೊಂಡಿರುತ್ತಾರೆ. ಕಟೀಲು ಮೇಳದ ತಂಡದಲ್ಲಿ ಸಿಂಗಾಪುರದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಮಸ್ಕತ್, ಬಹರೈನ್, (ದೀಪಕ್ ರಾವ್ ಪೇಜಾವರ ಅವರ ಅಪೇಕ್ಷೆಯಂತೆ) ದುಬೈ (ಯಕ್ಷಮಿತ್ರರು ದುಬೈ) ಮತ್ತು ಅಬುದಾಭಿಯಲ್ಲಿ ನಡೆದ ಪ್ರದರ್ಶನಗಳಲ್ಲೂ ಭಾಗಿಯಾಗಿದ್ದಾರೆ. ಇವರು ವೇಷಭೂಷಣ ತಯಾರಿಕೆಯನ್ನೂ ಬಲ್ಲವರು. ಹತ್ತು ವರ್ಷಗಳ ಕಾಲ ಕಟೀಲು ಮೇಳಗಳ ವೇಷಭೂಷಣ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ ಸಂಚಾಲಕತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ 15 ವರ್ಷ ವೇಷ ಮಾಡಿದ್ದರು. ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಲ್ಲಿ ಒಂದು ತಿಂಗಳು ಭಾಗವಹಿಸಿದ್ದರು.
ಶ್ರೀಮತಿ ವಿದ್ಯಾ ಕೋಳ್ಯೂರು ನೇತೃತ್ವದ ‘ಯಕ್ಷ ಮಂಜೂಷ’ ತಂಡದ ಸದಸ್ಯನಾಗಿ ಅಯೋಧ್ಯೆ ಮತ್ತು ಕಾಶಿಯಲ್ಲಿ ಹಿಂದಿ ಭಾಷೆಯಲ್ಲಿ ನಡೆದ ನಾಲ್ಕು ಪ್ರದರ್ಶನಗಳಲ್ಲಿ ವೇಷ ಮಾಡಿದ್ದರು. ಇಲ್ಲಿ ಪಂಚವಟಿ ಪ್ರಸಂಗದಲ್ಲಿ ಲಕ್ಷ್ಮಣನಾಗಿ ಅಭಿನಯಿಸಿದ್ದರು. ಯಕ್ಷಗಾನ ಸಂಘಟಕ ಶ್ರೀ ಎಚ್.ಬಿ.ಎಲ್ ರಾವ್ ಅವರ ಮುಂಬಯಿ ಪದವೀಧರ ಯಕ್ಷಗಾನ ಸಂಸ್ಥೆಯ ಪ್ರದರ್ಶನಗಳಲ್ಲೂ ಪಾತ್ರಗಳನ್ನು ನಿರ್ವಹಿಸಿದ್ದರು. ಇವರಿಗೆ ಯಕ್ಷಗಾನವೇ ಬದುಕು. ಕಲಾವಿದನಾಗಿ ದುಡಿದೇ ಜೀವನ ಮಾಡುವ ಅನಿವಾರ್ಯತೆ. ಈ ನಿಟ್ಟಿನಲ್ಲಿ ಪತ್ನಿಯ ಪೂರ್ಣ ಸಹಕಾರ ದೊರೆತಿತ್ತು. ಮನೆವಾರ್ತೆಯ ಸಂಪೂರ್ಣ ಹೊಣೆಯನ್ನು ಹೊತ್ತು ಪತಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿರುತ್ತಾರೆ.
“ಅಮ್ಮುಂಜೆ ರಜತ ಪರ್ವ” ಸಂದರ್ಭದಲ್ಲಿ ಮೇಳಗಳ ಸಂಚಾಲಕರಾದ ಶ್ರೀ ಕಿಶನ್ ಕುಮಾರ್ ಹೆಗ್ಡೆಯವರು ಭಾಷಣ ಮಾಡುತ್ತಾ ಉತ್ತಮವಾದ ಸಲಹೆಯೊಂದನ್ನು ಅಮ್ಮುಂಜೆ ಮೋಹನ್ ಕುಮಾರರಿಗೆ ನೀಡಿದ್ದರು. “ನೀವು ಕಲಿತು ಕಲಾವಿದರಾಗಿ ಇಪ್ಪತ್ತೈದು ವರ್ಷಗಳ ಅನುಭವವನ್ನು ಹೊಂದಿದಿರಿ. ನೀವು ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಡಿ” ಎಂಬ ಮಾತನ್ನು ಕಿಶನ್ ಹೆಗ್ಡೆಯವರು ಹೇಳಿದ್ದರು. ಈ ಸಲಹೆಯನ್ನು ಸ್ವೀಕರಿಸಿದ ಇವರು ಪ್ರಸ್ತುತ ನಾಲ್ಕು ಕಡೆ ತರಬೇತಿ ನೀಡುತ್ತಿದ್ದಾರೆ. ಶ್ರೀ ರಾಮಕೃಷ್ಣ ತಪೋವನದಲ್ಲಿ (60 ವಿದ್ಯಾರ್ಥಿಗಳು), ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ (25 ವಿದ್ಯಾರ್ಥಿಗಳು), ಓಂ ಜನಹಿತಾಯ ಆಂಗ್ಲಮಾಧ್ಯಮ ಶಾಲೆ ಗುಡ್ಡೆಯಂಗಡಿ (100 ವಿದ್ಯಾರ್ಥಿಗಳು) ಮತ್ತು ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ (45 ವಿದ್ಯಾರ್ಥಿಗಳು)ದಲ್ಲಿ ಕಲಿಕಾಸಕ್ತರಿಗೆ ನಾಟ್ಯ ಹೇಳಿ ಕೊಡುತ್ತಿದ್ದು, ಇನ್ನೂ ಹೆಚ್ಚಿನ ಕಡೆಗಳಲ್ಲಿ ತರಬೇತಿ ನೀಡುವ ಯೋಚನೆಯೂ ಇದೆ.
ಇವರು ಕಲಾಬದುಕಿನಲ್ಲಿಯೂ ಸಾಂಸಾರಿಕವಾಗಿಯೂ ತೃಪ್ತರು. ಶ್ರೀ ಬಿ. ಮೋಹನ ಕುಮಾರ್ ಅಮ್ಮುಂಜೆಅವರ ಪತ್ನಿ ಶ್ರೀಮತಿ ಶಶಿಕಲಾ (2003ರಲ್ಲಿ ವಿವಾಹ) ಇವರು ಗೃಹಣಿ. ಶ್ರೀ ಮೋಹನ ಕುಮಾರ್, ಶಶಿಕಲಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರ ಮಾ| ವೈಶಾಖ್ ಪಿಯುಸಿ ಶಿಕ್ಷಣ ಪೂರೈಸಿ ಮಂಗಳೂರು ಐಟಿಐ ಕಾಲೇಜಿನಲ್ಲಿ ಎಸಿ ಮೆಕ್ಯಾನಿಕ್ ಕಲಿಯುತ್ತಿದ್ದಾರೆ. ಪುತ್ರಿ ಕು| ವೈಷ್ಣವಿ ಓಂ ಜನ ಹಿತಾಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ. ಎಂಟನೇ ಕ್ಲಾಸಿನಲ್ಲಿ ಓದುತ್ತಿದ್ದಾಳೆ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಮೋಹನ್ ಕುಮಾರ್ ಅಮ್ಮುಂಜೆ ಅವರಿಂದ ಕಲಾ ಸೇವೆಯು ನಿರಂತರವಾಗಿ ನಡೆಯುತ್ತಿರಲಿ. ಶ್ರೀ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂಬ ಹಾರೈಕೆಗಳು.
ಶ್ರೀ ಬಿ. ಮೋಹನ್ ಕುಮಾರ್ ಅಮ್ಮುಂಜೆ, ಮೊಬೈಲ್: 9980257881
ಮದುವೆಮನೆಯ ಊಟದಲ್ಲಿ ಹೆಚ್ಚುವರಿ ಹಪ್ಪಳದ ವಿಚಾರವಾಗಿ ಮದುವೆ ಸಮಾರಂಭದಲ್ಲಿ ಜಗಳದಲ್ಲಿ 3 ಮಂದಿಗೆ ಗಾಯವಾಗಿ ಜಗಳ ಮಾಡಿದ 15 ಮಂದಿಯ ವಿರುದ್ಧ ಪ್ರಕರಣದಾಖಲಾಗಿದೆ. ಈ ಘಟನೆ ನಡೆದದ್ದು ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಹರಿಪ್ಪಾಡ್ ಎಂಬಲ್ಲಿ.
ಮದುವೆಯ ವೇಳೆ ಹೆಚ್ಚುವರಿ ಹಪ್ಪಳ ಕೊಡುವ ವಿಚಾರವಾಗಿ ನಡೆದ ವಾದ ವಿವಾದ ವಿಕೋಪಕ್ಕೆ ತಿರುಗಿದ್ದು, ಆಲಪ್ಪುಳ ಜಿಲ್ಲೆಯಲ್ಲಿ ನಡೆದ ಮದುವೆಯೊಂದು ತಪ್ಪು ತಿಳುವಳಿಕೆ ಮತ್ತು ವಿವಾದಾತ್ಮಕವಾಗಿ ನಡೆದಿದೆ. ಹರಿಪ್ಪಾಡ್ನ ಮುತ್ತಂನ ಚೂಂಡುಪಾಲಕ ಜಂಕ್ಷನ್ ಬಳಿಯ ಸಭಾಂಗಣದಲ್ಲಿ ಭಾನುವಾರ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದಾರೆ, 15 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಗಾಯಾಳುಗಳು ಆಡಿಟೋರಿಯಂ ಮಾಲೀಕ ಮುರಳೀಧರನ್ (74) ಮತ್ತು ಅತಿಥಿಗಳಾದ ಜೋಹಾನ್ (21) ಮತ್ತು ಹರಿ (21). ಕರೀಲಂಕುಳಂಗರ ಪೊಲೀಸರು 15 ಮಂದಿ ಗುರುತಿಸಿಕೊಂಡವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವರನ ಕೆಲವು ಸ್ನೇಹಿತರು ಹೆಚ್ಚುವರಿ ಹಪ್ಪಳಕ್ಕಾಗಿ ಒತ್ತಾಯಿಸಿದಾಗ ಜಗಳ ಪ್ರಾರಂಭವಾಯಿತು. ಬಹು-ಬಯಸಿದ ಕುರುಕುರಾದ ರುಚಿಯಾದ ಖಾರದ ಆಹಾರ ಪದಾರ್ಥ ಹಪ್ಪಳವನ್ನು ಮದುವೆಯ ಊಟದ ಸಮಯದಲ್ಲಿ ಇನ್ನೊಂದು ಬೇಕೆಂದು ವರನ ಕಡೆಯವರು ಕೇಳಿದಾಗ ಸರ್ವರ್ ಕೊಡಲು ನಿರಾಕರಿಸಿದಾಗ ವಾಗ್ವಾದ ನಡೆಯಿತು.
ಅತಿಥಿಗಳು ಎರಡು ಗುಂಪುಗಳಾಗಿ ಒಡೆದಿದ್ದರಿಂದ ಶೀಘ್ರದಲ್ಲೇ ಹೆಚ್ಚಿನ ಜನರು ವಾಗ್ವಾದದಲ್ಲಿ ಸೇರಿಕೊಂಡರು. ಸಭಾಂಗಣದ ಕುರ್ಚಿಗಳು ಮತ್ತು ಟೇಬಲ್ಗಳ ಮೇಲೆ ಜನರು ಪರಸ್ಪರ ಹಲ್ಲೆ ನಡೆಸುವುದರೊಂದಿಗೆ ಇದು ಕೊಳಕು ಮಾರಾಮಾರಿಯಾಗಿ ಉಲ್ಬಣಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.
ಗಲಾಟೆ ಕೇಳಿ ಸ್ಥಳಕ್ಕೆ ಧಾವಿಸಿದ ಆಡಿಟೋರಿಯಂ ಮಾಲೀಕ ಮುರಳೀಧರನ್ ತಲೆಗೆ ಪೆಟ್ಟು ಬಿದ್ದಿದ್ದು, ಅವರನ್ನು ತಟ್ಟಾರಂಬಳಂ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುರಳೀಧರನ್ ನೀಡಿದ ಹೇಳಿಕೆ ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೊಡೆದಾಟದಲ್ಲಿ ಸಭಾಂಗಣದಲ್ಲಿ ಟೇಬಲ್ಗಳು, ಕುರ್ಚಿಗಳು ಮತ್ತು ಉಪಕರಣಗಳು ಹಾನಿಗೊಳಗಾಗಿದ್ದು ಸುಮಾರು 1.5 ಲಕ್ಷ ರೂಪಾಯಿ ನಷ್ಟವನ್ನು ಅನುಭವಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ವಧು ವರರಿಬ್ಬರೂ ಕರಾವಳಿ ಅಲಪ್ಪುಳ ಜಿಲ್ಲೆಯ ಮುತ್ತೋಮ್ನವರು ಮತ್ತು ತೃಕ್ಕುನ್ನಪುಳಕ್ಕೆ ಸೇರಿದವರು.
ನೋ ಪಾರ್ಕಿಂಗ್ ಜಾಗದಲ್ಲಿ ರಾತ್ರಿ ಹೊತ್ತು ಪಾರ್ಕಿಂಗ್ ಮಾಡಿದರೆ ಪೊಲೀಸರು ನೋಡಲ್ಲ ಅಂತೀರಾ? ಆದರೆ ಇಲ್ಲಿ ಬೇರೆ ಪೊಲೀಸರು ಬಂದಿದ್ದಾರೆ ನೋಡಿ
ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕಿಂಗ್ ಮಾಡಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಆದರೆ ರಾತ್ರಿ ಹೊತ್ತು ಪೊಲೀಸರಿಗೆ ಗೊತ್ತಾಗುವುದಿಲ್ಲ ಎಂದು ಜನರು ಎಲ್ಲೆಂದರಲ್ಲಿ ಪಾರ್ಕ್ ಮಾಡುತ್ತಾರೆ.
ಅಂತಹುದೇ ಜಾಗದಲ್ಲಿ ಪಾರ್ಕ್ ಮಾಡಿದ ಬೈಕ್ ನ್ನು ಆನೆಯೊಂದು ಝಾಡಿಸಿ ಒದ್ದ ವೀಡಿಯೊ ಈಗ ವೈರಲ್ ಆಗುತ್ತಿದೆ. ರಾತ್ರಿ ಹೊತ್ತು ಪೊಲೀಸರ ಅನುಪಸ್ಥಿತಿಯಲ್ಲಿ ಸಂಚಾರ ನಿಯಮಗಳನ್ನು ಜಾರಿಗೊಳಿಸುವವರು ಬೇರೆಯೇ ಇದ್ದಾರೆ.
ಆನೆಯೊಂದು ರಾಜಾರೋಷವಾಗಿ ರಾತ್ರಿಯ ಹೊತ್ತಿನಲ್ಲಿ ರಸ್ತೆಯಲ್ಲಿ ಓಡಾಡುತ್ತಿತ್ತು. ಆಗ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಅದರ ಕಣ್ಣಿಗೆ ಕಾಣುತ್ತದೆ. ಆನೆಗೆ ಏನೆನ್ನಿಸಿತೋ ಏನೋ.. ಬೈಕನ್ನು ಝಾಡಿಸಿ ಒಡೆಯುತ್ತದೆ.
ನಂತರ ಮುಂದೆ ಹೋಗುತ್ತಿರುವ ಆನೆಯನ್ನು ಕಂಡು ಜನರೆಲ್ಲಾ ಭಯಗೊಂಡು ಓಡುವುದನ್ನು ವೀಡಿಯೋದಲ್ಲಿ ಕಾಣಬಹುದು.
Don’t park in no parking zone. Original owner of the land enforcing traffic rules at night. VC:NDTV pic.twitter.com/F1UGg9N43Z
ಹೌದು. ಈ ಸುದ್ದಿ ನಿಜ. ಯಕ್ಷಗಾನ ತಾಳಮದ್ದಳೆ ಕ್ಷೇತ್ರದ ಸುಪ್ರಸಿದ್ಧ, ಗಣ್ಯ ಕಲಾವಿದರೆಲ್ಲಾ ಕಟೀಲು ಕ್ಷೇತ್ರದತ್ತ ಪಯಣಿಸಲಿದ್ದಾರೆ. ಯಾಕೆ ಎಂದು ಆಶ್ಚರ್ಯಪಡಬೇಡಿ.
ಪ್ರತಿವರ್ಷದಂತೆ ಈ ವರ್ಷವೂ ಕಟೀಲು ಸರಸ್ವತೀ ಸದನದಲ್ಲಿ ಅಮೋಘ ತಾಳಮದ್ದಳೆ ಸಪ್ತಾಹ ನಡೆಯಲಿದೆ. ಸೆಪ್ಟೆಂಬರ್ 5ರಿಂದ 11ರ ವರೆಗೆ ನಡೆಯುವ ಹದಿನೆಂಟನೇ ವರ್ಷದ ಈ ಸಪ್ತಾಹದಲ್ಲಿ “ಗೃಹಣೀ ಗೃಹಮುಚ್ಯತೇ” ಎಂಬ ಆಖ್ಯಾನಕ್ಕೆ ಸಂಬಂಧಪಟ್ಟ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ತಾಳಮದ್ದಳೆ ಪ್ರತಿದಿನ ಸಂಜೆ 4 ಘಂಟೆಗೆ ಆರಂಭವಾಗಲಿದೆ. ಸೆಪ್ಟೆಂಬರ್ 5ರಿಂದ ಮೊದಲ್ಗೊಂಡು 11ರ ವರೆಗೆ “ಗಿರಿಜೆ, ಕಯಾದು, ಸುಕನ್ಯೆ, ಸಾವಿತ್ರೀ, ಚಂದ್ರಮತೀ, ಸೀತೆ, ರುಕ್ಮಿಣೀ, ತಾರೆಯರು” ಎಂಬ ಪ್ರಸಂಗಗಳ ತಾಳಮದ್ದಳೆ ನಡೆಯಲಿದೆ.
ಕೊನೆಯ ದಿನ ಪೂರ್ವಾಹ್ನ ಮತ್ತು ಅಪರಾಹ್ನ ಸೇರಿದಂತೆ ಎರಡು ತಾಳಮದ್ದಳೆ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ವಿವರಗಳಿಗೆ ಚಿತ್ರ ನೋಡಿ.
ಸಾರ್ವಜನಿಕ ಗಣೇಶೋತ್ಸವ ಸಮಿತಿ(ರಿ)ದೇವಿ ನಗರ ಇವರಿಂದ, ಸಾರ್ವಜನಿಕ ಶ್ರೀ ಗಣೇಶೋತ್ಸವ (ರಜತ ಮಹೋತ್ಸವ) ದ ಅಂಗವಾಗಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಂಕ 31.08.2022ರಿಂದ 02.09.2022ರ ವರೆಗೆ ವೈಭವದಲ್ಲಿ ನಡೆಯಲಿದೆ.
ನಾಳೆ ದಿನಾಂಕ 01.09.2022 ನೇ ಗುರುವಾರ ರಾತ್ರಿ ಘಂಟೆ 9.30ರಿಂದ ಸಾಲಿಗ್ರಾಮ ಮೇಳದವರಿಂದ ‘ಚಂದ್ರಮುಖಿ ಸೂರ್ಯಸಖಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಸರ್ವರಿಗೂ ಸವಿನಯ ಆಮಂತ್ರಣವನ್ನು ಕೋರಿದ್ದಾರೆ.