ಉಡುಪಿ : ಪದವಿ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಓದುತ್ತಿರುವ ವಿದ್ಯಾಪೋಷಕ್ ಪಲಾನುಭವಿ ವಿದ್ಯಾರ್ಥಿಗಳ ಅರ್ಧ ದಿನದ ಶೈಕ್ಷಣಿಕ ಸಮಾವೇಶ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಪ್ಟಂಬರ್ 4, 2022 ಭಾನುವಾರದಂದು ಸಂಪನ್ನಗೊ೦ಡಿತು.
ಹುಬ್ಬಳ್ಳಿಯ ಮೈಲೈಫ್ ಸಂಸ್ಥೆಯ ಸ್ಥಾಪಕ ಪ್ರವೀಣ ಗುಡಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಭಾಗವಹಿಸಿದ 300 ವಿದ್ಯಾರ್ಥಿಗಳಿಗೆ ನವೀಕರಣದ ಅರ್ಜಿ ನಮೂನೆ ವಿತರಿಸಲಾಯಿತು.
ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಸ್ಥಾವನೆಯ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಮಾವೇಶದ ಉದ್ದೇಶ ಅಗತ್ಯ ವಿವರಿಸಿದರು. ನಾರಾಯಣ ಎಂ.ಹೆಗಡೆ ವಿದ್ಯಾರ್ಥಿಗಳಿಗೆ ಅಗತ್ಯದ ಸೂಚನೆ ನೀಡಿದರು.
ರಾಜಗೋಪಾಲ ಆಚಾರ್ಯ, ಎಚ್.ಎನ್.ಶೃಂಗೇಶ್ವರ್, ಭುವನ ಪ್ರಸಾದ ಹೆಗ್ಡೆ, ಸಂತೋಷ್ ಕುಮಾರ್ ಶೆಟ್ಟಿ, ಅಶೋಕ ಎಂ, ಎಚ್ .ಎನ್.ವೆಂಕಟೇಶ್, ಗಣೇಶ ಬ್ರಹ್ಮಾವರ ಹಾಗೂ ಮಂಜುನಾಥ ಉಪಸ್ಥತರಿದ್ದರು.
ಪುತ್ತೂರು ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ತಾಳಮದ್ದಳೆ
ದಿನಾಂಕ 05.09.2022ನೇ ಸೋಮವಾರ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ “ಸೂರ್ಯಮಣಿ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು.
ಸ್ಕೂಟರಿನಲ್ಲಿ ತಾಯಿಯನ್ನು ಕರೆದುಕೊಂಡು ದೇಶದಾದ್ಯಂತ “ಮಾತೃಸೇವಾ ಸಂಕಲ್ಪಯಾತ್ರೆ” ಮಾಡುತ್ತಾ ಇರುವ ಮೈಸೂರಿನ ದಕ್ಷಿಣಾಮೂರ್ತಿ ಕೃಷ್ಣಕುಮಾರ್ ಹಾಗೂ ಇವರ ತಾಯಿ ಚೂಡಾರತ್ನಮ್ಮ ಇವರು 01.09.2022 ರಂದು ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಒಂದು ದಿವಸ ಶ್ರೀ ಕ್ಷೇತ್ರದಲ್ಲಿ ತಂಗಿದ್ದು ತಮ್ಮ ಅನುಭವಗಳನ್ನು ಹಂಚಿಕೊಂಡು ಬಳಿಕ ತಮ್ಮ ಯಾತ್ರೆಯನ್ನು ಮುಂದುವರಿಸಿದರು. ಈ ವಿಶೇಷ ಸಾಧನೆ ಮಾಡುತ್ತಾ ಇರುವ ಈ ಸಾಧಕರಿಗೆ ಶ್ರೀ ಕ್ಷೇತ್ರದಲ್ಲಿ ಸ್ಮರಣಿಕೆ ಮತ್ತು ಪ್ರಸಾದವನ್ನಿತ್ತು ಶಾಲುಹೊದೆಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಗೀತ ವಿದುಷಿ ಶ್ರೀಮತಿ ಉಷಾ ಈಶ್ವರ ಭಟ್ ಮತ್ತು ಈಶ್ವರ ಭಟ್, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಸುರೇಶ ಭಟ್ ಕೊಜಂಬೆ, ಗಿರಿಜಾ ಸುರೇಶ ಭಟ್ ಇವರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರ ಮೆನೇಜರ್ ಸೀತಾರಾಮ ಬಳ್ಳುಳ್ಳಾಯ ಕಾರ್ಯಕ್ರಮ ಸಂಯೋಜನೆ ಮಾಡಿದರು. ಗೋವಿಂದಬಳ್ಳಮೂಲೆ ಕಾರ್ಯಕ್ರಮ ನಿರೂಪಣೆ ಮಾಡಿದರು. ಕ್ಷೇತ್ರ ಅರ್ಚಕರಾದ ಅನಂತಪದ್ಮನಾಭ ಮಯ್ಯ ಸಾಂದರ್ಭಿಕ ಸಹಕಾರವನ್ನಿತ್ತರು.
ನಲುವತ್ತನಾಲ್ಕು ವರ್ಷದ ದಕ್ಷಿಣಾಮೂರ್ತಿ ಕೃಷ್ಣಕುಮಾರ್ ಇವರು ಐ ಟಿ ಉದ್ಯೋಗಿಯಾಗಿದ್ದು ಇದರಿಂದ ಸ್ವಯಂ ನಿವೃತ್ತಿ ಹೊಂದಿ 2018 ರಿಂದ ಮಾತೃ ಸೇವಾ ಸಂಕಲ್ಪ ಯಾತ್ರೆಯನ್ನು ಮಾಡುತ್ತಾ ಬಂದಿರುತ್ತಾರೆ. ತನ್ನ ತಂದೆಯವರು ನೀಡಿದ ಬಜಾಜ್ ಚೇತಕ್ ಸ್ಕೂಟರನ್ನು ಈ ಕಾರ್ಯಕ್ಕೆ ಬಳಸುತ್ತಿದ್ದಾರೆ. ಆ ಮೂಲಕ ಯಾತ್ರೆಯಲ್ಲಿ ತಂದೆಯೂ ಒಂದಿಗಿದ್ದಾರೆ ಎಂಬ ಸಂಕಲ್ಪ.
ಅಡುಗೆ ಮನೆಯ ಜಗತ್ತಿನಲ್ಲಿ ತನ್ನ ಕುಟುಂಬದ ಆರೈಕೆಯಲ್ಲಿ ಬದುಕು ಸಾರ್ಥಕ ಮಾಡಿದ ತಾಯಿ ಚೂಡಾರತ್ನಮ್ಮ ಅವರ ಆಸೆಯನ್ನು ಪೂರೈಸಲು ಕೃಷ್ಣಕುಮಾರ ಅವರು ಈ ಸಂಕಲ್ಪಯಾತ್ರೆಯನ್ನು ಮಾಡುತ್ತಾ ಇದ್ದಾರೆ. ಈ ಮೂಲಕ ತಾಯಿಗೆ ಭಾರತ ದರ್ಶನವನ್ನು ಮಾಡಿಸುವ ಸಂಕಲ್ಪಮಾಡಿದ್ದಾರೆ. ಭಾರತದಾದ್ಯಂತ ಪುಣ್ಯಕ್ಷೇತ್ರಗಳು, ಧಾರ್ಮಿಕ ಕೇಂದ್ರಗಳು, ವಿಶೇಷ ಸ್ಥಳಗಳು, ಮೊದಲಾಗಿ ನೇಪಾಳ ಭೂತಾನ್ ಮೇನ್ಮಾರ್, ಚೈನಾ ಗಡಿ ಮೊದಲಾದ ಸ್ಥಳಗಳಿಗೆ ಈಗಾಗಲೇ ಸುತ್ತಿ ಬಂದಿರುತ್ತಾರೆ. ಇಲ್ಲಿಯ ತನಕ 58302 ಕಿ ಮೀ ಕ್ರಮಿಸಿದ್ದಾರೆ.
ಊರಿನ ಪ್ರಾದೇಶಿಕ ಪರಿಚಯ ಪಡೆಯಲು ಮತ್ತು ಪ್ರಕೃತಿಯ ಸೊಬಗನ್ನು ಅನುಭವಿಸಲು, ಹಾಗೆಯೇ ತಾಯಿಯ ಅರೋಗ್ಯ ರಕ್ಷಣೆಯ ಕಾಳಜಿಯಿಂದಲೂ ಸ್ಕೂಟರಿನಲ್ಲಿ ಬಹಳ ನಿಧಾನವಾಗಿಯೇ ಸಾಗುವುದು ಇಲ್ಲಿ ಗಮನಾರ್ಹ. ಹಿತಮಿತ ಆಹಾರಪದ್ಧತಿಯನ್ನೂ ರೂಢಿಸಿಕೊಂಡಿರುವ ಕಾರಣ ಅನಾರೋಗ್ಯ ಸಮಸ್ಯೆಯೂ ಇಲ್ಲ ಎನ್ನುತ್ತಾರೆ ಇವರು.
ಅಮ್ಮನ ಆಸೆ ಪೂರೈಸುವುದರಲ್ಲಿಯೇ ಬದುಕು ಸಾರ್ಥಕ. ಇದಕ್ಕಿಂತ ಹೆಚ್ಚಿನ ಭಾಗ್ಯ ಬೇರಿಲ್ಲ ಎನ್ನುತ್ತಾ ಈ ಸಂದೇಶವನ್ನು ಜಗತ್ತಿಗೆ ಪ್ರಕಟಪಡಿಸುತ್ತಾ ಇದ್ದಾರೆ.ಹಲವು ಸಂಘಸಂಸ್ಥೆಗಳು ಇವರ ಸಾಧನೆಯನ್ನು ಮೆಚ್ಚಿ ಗೌರವಿಸಿರುತ್ತಾರೆ. ಇವರ ಬದುಕು ಒಂದು ಮಾದರಿ ಮತ್ತು ಇವರನ್ನು ಗುರುತಿಸಿ ಅಂಗೀಕರಿಸಬೇಕಾದ್ದು ನಮ್ಮ ಧರ್ಮವೂ ಹೌದು.
ಸೆಪ್ಟೆಂಬರ್ 4 ರಂದು ಆಗ್ರಾದ ಸೈಯಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮರಳು ಮಾಫಿಯಾಕ್ಕೆ ಸೇರಿದ ಕನಿಷ್ಠ 12 ಮರಳು ತುಂಬಿದ ಟ್ರ್ಯಾಕ್ಟರ್ಗಳು ಪೊಲೀಸರಿಂದ ತಪ್ಪಿಸಿಕೊಂಡು ಟೋಲ್ ಬ್ಯಾರಿಕೇಡ್ಗಳನ್ನು ಮುರಿದು ವೇಗವಾಗಿ ಧಾವಿಸಿವೆ.
ಕನಿಷ್ಠ 12 ‘ಮಾಫಿಯಾ’ ನಿಯಂತ್ರಿತ ಮರಳು ತುಂಬಿದ ಟ್ರ್ಯಾಕ್ಟರ್ಗಳು ಆಗ್ರಾ ಟೋಲ್ ಪ್ಲಾಜಾ ಬ್ರೇಕಿಂಗ್ ಬ್ಯಾರಿಕೇಡ್ಗಳ ಮೂಲಕ ವೇಗವಾಗಿ ಚಲಿಸುವ ವೀಡಿಯೊ ವೈರಲ್ ಆಗಿದೆ.
ಆಘಾತಕಾರಿ ಘಟನೆಯೊಂದರಲ್ಲಿ, ಕನಿಷ್ಠ 12 ಮರಳು ತುಂಬಿದ ಟ್ರಾಕ್ಟರ್ಗಳು ಭಾನುವಾರ ರಾತ್ರಿ ಉತ್ತರ ಪ್ರದೇಶದ ಆಗ್ರಾದ ಟೋಲ್ ಪ್ಲಾಜಾದಲ್ಲಿ ಬ್ಯಾರಿಕೇಡ್ಗಳನ್ನು ಮುರಿದು, ಟೋಲ್ ಸಿಬ್ಬಂದಿ ಅವುಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದರೂ ಸಹ ವೇಗವಾಗಿ ಓಡಿಸಿ ತಪ್ಪಿಸಿಕೊಂಡರು. ಮರಳು ತುಂಬಿದ ಟ್ರ್ಯಾಕ್ಟರ್ಗಳು ಸ್ಥಳೀಯ ಮರಳು ಮಾಫಿಯಾಕ್ಕೆ ಸೇರಿದವು ಎಂದು ತಿಳಿದುಬಂದಿದೆ.
ಆಗ್ರಾ ಗ್ವಾಲಿಯರ್ ಹೆದ್ದಾರಿಯ ಜಜೌ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ಟೋಲ್ ಪ್ಲಾಜಾದಲ್ಲಿನ ಕಾರ್ಮಿಕರು ಮೊದಲ ಟ್ರಾಕ್ಟರ್ ನಿಲ್ಲುವ ನಿರೀಕ್ಷೆಯಲ್ಲಿರುವುದು ಕಂಡುಬಂದಿದೆ. ಆದರೆ ಅವುಗಳು ಟೋಲ್ ಶುಲ್ಕ ಕಟ್ಟಲು ನಿಲ್ಲದೆ ಬ್ಯಾರಿಕೇಡ್ ಮುರಿದು ವೇಗವಾಗಿ ಸಾಗಿದೆ.
ಅದರ ಹಿಂದೆಯೇ ಸುಮಾರು 11ರಿಂದ 12 ಟ್ರ್ಯಾಕ್ಟರ್ಗಳು ಪ್ಲಾಜಾದಲ್ಲಿ ನಿಲ್ಲಿಸದೆ ಅತಿವೇಗದಲ್ಲಿ ಬ್ಯಾರಿಕೇಡ್ ದಾಟಿದವು. ಟೋಲ್ ಪ್ಲಾಜಾ ಕಾರ್ಮಿಕರು ವಾಹನಗಳ ಹಾದಿಗೆ ಅಡ್ಡಿಪಡಿಸಲು ಕೋಲುಗಳನ್ನು ಬೀಸುತ್ತಿರುವುದನ್ನು ಕಾಣಬಹುದು ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಆಗ್ರಾದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್ಎಸ್ಪಿ) ಪ್ರಭಾಕರ್ ಚೌಧರಿ ಅವರ ಪ್ರಕಾರ, ಪೊಲೀಸರು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಆರೋಪಿಗಳ ವಿರುದ್ಧ ದರೋಡೆಕೋರ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
#WATCH | Uttar Pradesh: At least 12 sand-laden tractors, belonging to the sand mafia, break toll barricading and speed past, in Saiyan Police Station area in Agra on 4th September.
ದಿನಾಂಕ 10.09.2022 ರಂದು ಯಕ್ಷಗಾನ ಪ್ರದರ್ಶನ “ಭಗವದ್ದರ್ಶನ” “(ಶ್ರೀ ಹರಿ ದರ್ಶನ, ಶ್ರೀ ರಾಮ ದರ್ಶನ”) ಎಡನೀರು ಮಠದಲ್ಲಿ ಅಪರೂಪದ ಯಕ್ಷಗಾನ ಪ್ರದರ್ಶನ
ಇಂದು 10.09.2022ರ ಶನಿವಾರದಂದು ಘಂಟೆ 5ಕ್ಕೆ ಶ್ರೀ ಎಡನೀರು ಮಠದಲ್ಲಿ ಶ್ರೀ ಹನುಮಗಿರಿ ಮೇಳ ಇವರು ಪ್ರಸ್ತುತಪಡಿಸುವ ಭಗವದ್ದರ್ಶನ” “(ಶ್ರೀ ಹರಿ ದರ್ಶನ, ಶ್ರೀ ರಾಮ ದರ್ಶನ”)” ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಸಮಾರೋಪ ಸಮಾರಂಭದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.
ಕೂಟೇಲು ಶ್ರೀ ಬಾಲಕೃಷ್ಣ ಭಟ್ಟರು ತೆಂಕುತಿಟ್ಟಿನ ಹಿರಿಯ ಅನುಭವಿ ಕಲಾವಿದರು. 1999ರಲ್ಲಿ ಮೇಳದ ವ್ಯವಸಾಯವನ್ನು ನಿಲ್ಲಿಸಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ. ಸ್ತ್ರೀ ಪಾತ್ರ ಮತ್ತು ಪುಂಡುವೇಷಧಾರಿಯಾಗಿ ಇವರು ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡಿರುತ್ತಾರೆ. ಮಾತುಗಾರಿಕೆಗೆ ಸಂಬಂಧಿಸಿದ ಸಾತ್ವಿಕ ಪಾತ್ರಗಳಲ್ಲಿ ಇವರು ಹೆಚ್ಚಾಗಿ ಕಾಣಿಸಿಕೊಂಡವರು.
ಆದಿಸುಬ್ರಹ್ಮಣ್ಯ, ಕೂಡ್ಲು, ಉಪ್ಪಳ ಶ್ರೀ ಭಗವತೀ ಮೇಳ, ಸುಂಕದಕಟ್ಟೆ ಮತ್ತು ಕಟೀಲು ಮೇಳಗಳಲ್ಲಿ ವ್ಯವಸಾಯ ಮಾಡಿ ನಿವೃತ್ತರಾದವರು. ಯಕ್ಷಗಾನ ಕ್ಷೇತ್ರದಲ್ಲಿ ಇವರು ಸುಮಾರು ಮೂವತ್ತೆರಡು ವರ್ಷಗಳ ಅನುಭವಿ. ಮೇಳದಲ್ಲಿ ಇದ್ದುಕೊಂಡೇ ಕಲಿತು ಹಂತಹಂತವಾಗಿ ಬೆಳೆದು ಕಾಣಿಸಿಕೊಂಡ ಕಲಾವಿದರಿವರು. ಕೋಡಂಗಿಯಿಂದ ತೊಡಗಿ ಎಲ್ಲಾ ವೇಷಗಳನ್ನೂ ನಿರ್ವಹಿಸಿದ ಅನುಭವಿ ಕಲಾವಿದರಿವರು.
ಶ್ರೀಯುತರ ಕುರಿತಾಗಿ ಲೇಖನವನ್ನು ಬರೆಯಲು ಸಂತೋಷವಾಗುತ್ತದೆ. ಇವರ ಬಗ್ಗೆ ಬರೆಯಲು ಸೂಚನೆ ನೀಡಿದವರು ದಿವಾಣ ಶ್ರೀ ಶಿವಶಂಕರ ಭಟ್ಟರು. ಕೂಟೇಲು ಶ್ರೀ ಬಾಲಕೃಷ್ಣ ಭಟ್ಟರ ಮನೆಗೆ ನನ್ನನ್ನು ಕರೆದುಕೊಂಡು ಹೋಗಿ ಬರೆಯಲು ಅನುಕೂಲ ಮಾಡಿಕೊಟ್ಟಿದ್ದಾರೆ.
ಹಿರಿಯ ಅನುಭವಿ ಕಲಾವಿದ ಶ್ರೀ ಬಾಲಕೃಷ್ಣ ಭಟ್ಟರ ಹುಟ್ಟೂರು ಬಂಟ್ವಾಳ ತಾಲೂಕು ಮಾಣಿಲ ಗ್ರಾಮದ ಕೂಟೇಲು ಎಂಬಲ್ಲಿ. 1951ನೇ ಇಸವಿ ನವೆಂಬರ್ 4ರಂದು ಕೂಟೇಲು ನಾರಾಯಣ ಭಟ್ ಮತ್ತು ಶ್ರೀಮತಿ ಕಲಾವತಿ ಅಮ್ಮ ದಂಪತಿಗಳಿಗೆ ಪುತ್ರನಾಗಿ ಜನನ. ಕೂಟೇಲು ನಾರಾಯಣ ಭಟ್ಟರು, ಪಕಳಕುಂಜ ಶ್ರೀ ನಾರಾಯಣ ಭಟ್ಟರು (ಪಕಳಕುಂಜ ಶ್ಯಾಮ ಭಟ್ಟರ ತಂದೆ) ನಡೆಸುತ್ತಿದ್ದ ಯಕ್ಷಗಾನ ನಾಟಕ ತಂಡದಲ್ಲಿ ವೇಷ ಮಾಡುತ್ತಿದ್ದರು.
ಶ್ರೀ ಬಾಲಕೃಷ್ಣ ಭಟ್ಟರು ಓದಿದ್ದು ಎಂಟನೇ ತರಗತಿ ವರೆಗೆ. ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 8ನೇ ತರಗತಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ. ಯಕ್ಷಗಾನಾಸಕ್ತಿಯಿಂದಾಗಿ ಶಾಲಾ ಕಲಿಕೆಯನ್ನು ನ್ಲಿಲಿಸಿದ್ದರು. ಎಳವೆಯಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಿದ್ದರು. ಬಳಿಕ ಹಗಲು ಅಡಿಕೆ ಮರದ ಸೋಗೆ, ಹಾಳೆ, ತೆಂಗಿನ ಮರದ ಗರಿ, ಮರದ ರೆಂಬೆ ಸೊಪ್ಪುಗಳಿಂದ ವೇಷ – ಭೂಷಣಗಳನ್ನು ಮಾಡಿ ಕಟ್ಟಿಕೊಂಡು ಕುಣಿಯುತ್ತಿದ್ದರು.
ಧರ್ಮತಡ್ಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ಶಾಲಾ ವಾರ್ಷಿಕೋತ್ಸವಕ್ಕೆ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ದಾಸನಡ್ಕ ಶ್ರೀ ರಾಮ ಕುಲಾಲ್ ಮತ್ತು ಪೊಳಲಿ ಶ್ರೀ ಲೋಕಯ್ಯರಿಂದ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿ ಮತ್ತು ಅರ್ಥಗಾರಿಕೆ ತರಬೇತಿ. ರತ್ನಾವತಿ ಕಲ್ಯಾಣ ಪ್ರಸಂಗದಲ್ಲಿ ಶಬರ ಪಡೆ, ಮತ್ತು ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಷಣ್ಮುಖನಾಗಿ ಶ್ರೀ ಬಾಲಕೃಷ್ಣ ಭಟ್ಟರು ರಂಗವೇರಿದ್ದರು. 8ನೇ ತರಗತಿ ಓದಿನ ಬಳಿಕ ಒಂದು ವರ್ಷ ಮನೆಯಲ್ಲಿ ಉಳಿದು ತಂದೆಯವರಿಗೆ ಕೃಷಿ ಕಾರ್ಯದಲ್ಲಿ ಸಹಕರಿಸಿದ್ದರು.
ಮುಂದಿನ ವರ್ಷ ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಶ್ರೀ ಆದಿ ಸುಬ್ರಹ್ಮಣ್ಯ ಮೇಳಕ್ಕೆ. ಕೋಡಂಗಿಯಿಂದ ಬಾಲಗೋಪಾಲ, ಮುಖ್ಯ ಸ್ತ್ರೀವೇಷ ಮತ್ತು ಪ್ರಸಂಗಗಳಲ್ಲಿ ಸಣ್ಣಪುಟ್ಟ ಪಾತ್ರಗಳ ನಿರ್ವಹಣೆ. ಮೂರು ವರ್ಷ ಸುಬ್ರಹ್ಮಣ್ಯ ಮೇಳದ ತಿರುಗಾಟ. ಬಳಿಕ ಒಂದು ವರ್ಷ ಮನೆಯಲ್ಲಿದ್ದು ಕೃಷಿಕಾರ್ಯ ನಡೆಸಿದ್ದರು. ಬಳಿಕ ಹದಿಮೂರು ವರ್ಷ ಕುಂಬಳೆ ಶ್ರೀ ಸೇಸಪ್ಪ ಅವರ ಉಪ್ಪಳ ಶ್ರೀ ಭಗವತೀ ಮೇಳದಲ್ಲಿ ವ್ಯವಸಾಯ. ಸ್ತ್ರೀವೇಷ ಮತ್ತು ಪುಂಡುವೇಷಗಳ ನಿರ್ವಹಣೆ. ಪ್ರಹ್ಲಾದ, ರಾಮ, ಅಯ್ಯಪ್ಪ, ಲಕ್ಷ್ಮಣ, ಮೋಹಿನಿ, ಶರ್ಮಿಷ್ಠೆ ಮೊದಲಾದ ವೇಷಗಳನ್ನು ಮಾಡಲು ಅವಕಾಶವಾಗಿತ್ತು.
ಶ್ರೀದೇವಿಯ ಪಾತ್ರದಲ್ಲಿ ಕೂಟೇಲು ಬಾಲಕೃಷ್ಣ ಭಟ್
ಮುದುಕುಂಜ ಶ್ರೀ ವಾಸುದೇವ ಪ್ರಭುಗಳು ಕಯಾದು ಪಾತ್ರ ಮಾಡುತ್ತಿದ್ದಾಗ ಇವರು ಪ್ರಹ್ಲಾದನಾಗಿ ಅಭಿನಯಿಸಿದ್ದರು. ಭಸ್ಮಾಸುರ ಮೋಹಿನಿ – ಶಬರಿಮಲೆ ಅಯ್ಯಪ್ಪ ಪ್ರಸಂಗದಲ್ಲಿ ಮೋಹಿನಿ ಪಾತ್ರವನ್ನು ನಿರ್ವಹಿಸಿ ಅಯ್ಯಪ್ಪನಾಗಿ ಅಭಿನಯಿಸಿದ್ದರು. ಆಗ ಮದಂಗಲ್ಲು ಶ್ರೀ ಆನಂದ ಭಟ್ಟರು ಭಸ್ಮಾಸುರನಾಗಿ ಅಭಿನಯಿಸುತ್ತಿದ್ದರು. ಅವರ ನಿರ್ದೇಶನವೂ ಬಾಲಕೃಷ್ಣ ಭಟ್ಟರಿಗೆ ಸಿಕ್ಕಿತ್ತು. ಬಳಿಕ ಬಬ್ರುವಾಹನ, ವಿಷ್ಣು, ಗುಣಸುಂದರಿ ಮೊದಲಾದ ವೇಷಗಳನ್ನು ಮಾಡಲು ಅವಕಾಶವಾಗಿತ್ತು. ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ಶ್ರೀಕೃಷ್ಣ ಹಾಗೂ ಸುಭದ್ರೆ ಈ ಎರಡೂ ಪಾತ್ರಗಳನ್ನೂ ನಿರ್ವಹಿಸಲು ಅವಕಾಶವಾಗಿತ್ತು.
ಮುಂದಿನ ದಿನಗಳಲ್ಲಿ ದಾಕ್ಷಾಯಿಣಿ, ಧರ್ಮರಾಯ, ಸತ್ರಾಜಿತ, ಪಾರಿಜಾತ ಪ್ರಸಂಗದ ಸತ್ಯಭಾಮೆ ಮೊದಲಾದ ವೇಷಗಳಲ್ಲಿ ಕಾಣಿಸಿಕೊಂಡಿದ್ದರು. ಉಪ್ಪಳ ಮೇಳದಲ್ಲಿ ಕೆಲವು ಬಾರಿ ಶ್ರೀ ದೇವಿ ಮಹಾತ್ಮೆ ಪ್ರಸಂಗದ ಶ್ರೀದೇವಿಯ ಪಾತ್ರವನ್ನು ಮಾಡುವ ಭಾಗ್ಯವೂ ಸಿಕ್ಕಿತ್ತು. ಆಗ ಬಣ್ಣದ ಕುಟ್ಯಪ್ಪು ಅವರು ಮಹಿಷಾಸುರನ ಪಾತ್ರವನ್ನು ನಿರ್ವಹಿಸಿದ್ದರು( ಅತಿಥಿ ಕಲಾವಿದ).
ಉಪ್ಪಳ ಮೇಳದ ವ್ಯವಸಾಯ 13 ವರ್ಷ. ಬಳಿಕ ಒಂದು ವರ್ಷ ಕುಬಣೂರು ಶ್ರೀಧರ ರಾಯರ ಸಂಚಾಲಕತ್ವದ ಕೂಡ್ಲು ಮೇಳದಲ್ಲಿ. ಇಲ್ಲಿ ಮಾಯಿಪ್ಪಾಡಿ ಕುಂಞಿರಾಮ, ಕುದ್ರೆಕೋಡ್ಲು ರಾಮ ಭಟ್ಟ, ಮಳಿ ಶ್ಯಾಮ ಭಟ್, ಅಡ್ಯನಡ್ಕ ಕೃಷ್ಣ ಭಂಡಾರಿ, ಕಾಟುಕುಕ್ಕೆ ರಾಮಚಂದ್ರ ಭಟ್ ಮೊದಲಾದವರ ಒಡನಾಟ ಸಿಕ್ಕಿತ್ತು. ಬಳಿಕ ಒಂದು ವರ್ಷ ಮನೆಯಲ್ಲಿ ಕೃಷಿ ಕಾರ್ಯ ನೋಡಿ ಮತ್ತೆ ಸುಂಕದಕಟ್ಟೆ ಮೇಳದಲ್ಲಿ 7 ವರ್ಷ ವ್ಯವಸಾಯ ಮಾಡಿದ್ದರು. ಇಲ್ಲಿ ಪುರಾಣ ಅಲ್ಲದೆ ತುಳು ಪ್ರಸಂಗಗಳ ಅನುಭವವನ್ನೂ ಪಡೆದುಕೊಂಡರು. ಇಲ್ಲಿಯೂ ಸ್ತ್ರೀ ವೇಷ ಮತ್ತು ಪುರುಷ ಪಾತ್ರಗಳನ್ನು ನಿರ್ವಹಿಸಿದ್ದರು. ತುಳುನಾಡ ಸಿರಿ ಪ್ರಸಂಗದ ದಾರು, ಕೋಟಿ ಚೆನ್ನಯ ಪ್ರಸಂಗದ ಚೆನ್ನಯ ಮೊದಲಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಈ ಮೇಳದಲ್ಲಿ ಪುತ್ತಿಗೆ ತಿಮ್ಮಪ್ಪ ರೈ, ಪದ್ಯಾಣ ಶಂಕರನಾರಾಯಣ ಭಟ್, ಕುದ್ರೆಕೋಡ್ಲು ರಾಮ ಭಟ್, ಅಣ್ಣಿ ಗೌಡ, ತ್ರಿವಿಕ್ರಮ ಶೆಣೈ, ಬೇತ ಕುಂಞ ಕುಲಾಲ್, ಕಟೀಲು ಶ್ರೀನಿವಾಸ ರಾವ್, ಮುಳಿಯಾಲ ಭೀಮ ಭಟ್, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಅಪ್ಪಯ್ಯ ಮಣಿಯಾಣಿ, ಉಜಿರೆ ಗೋಪಾಲಕೃಷ್ಣ ಭಟ್, ಮುತ್ತಣ್ಣ ರೈ, ಹಳುವಳ್ಳಿ ಗಣೇಶ್ ಭಟ್, ಚಂದ್ರಶೇಖರ ಹೆಗ್ಡೆ, ವಿಷ್ಣು ಶರ್ಮ, ಉಡುಪಿ ಆನಂದ, ಉಮಾಮಹೇಶ್ವರ ಶರ್ಮ, ರತ್ನಾಕರ ಹೆಗ್ಡೆ ಮೊದಲಾದವರು ಸಹಕಲಾವಿದರಾಗಿದ್ದರು.
ಬಳಿಕ ಎಂಟು ವರ್ಷಗಳ ಕಾಲ ಕಲ್ಲಾಡಿ ಶ್ರೀ ವಿಠಲ ಶೆಟ್ಟರ ಸಂಚಾಲಕತ್ವದ ಕಟೀಲು ಮೇಳದಲ್ಲಿ. 4ನೇ ಮೇಳದಲ್ಲಿ ವ್ಯವಸಾಯ. ಕುಬಣೂರು ಶ್ರೀಧರ ರಾವ್, ಮೋಹನ ಶೆಟ್ಟಿಗಾರ್, ಸಂಪಾಜೆ ಶೀನಪ್ಪ ರೈ, ಮಂಜೇಶ್ವರ ಜನಾರ್ದನ ಜೋಗಿ, ತೊಡಿಕಾನ ವಿಶ್ವನಾಥ ಗೌಡ, ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ್, ಸಂಜೀವ ಚೌಟ ಉದ್ಯಾವರ, ಕಾವು ಗಿರೀಶ, ಕೇಶವ ಶೆಟ್ಟಿಗಾರ, ವಿಷ್ಣು ಶರ್ಮ, ಉಮಾಮಹೇಶ್ವರ ಮೊದಲಾದವರು ಸಹಕಲಾವಿದರಾಗಿದ್ದರು.
ಇಲ್ಲಿ ಸ್ತ್ರೀ ಪಾತ್ರ ಮತ್ತು ಪುರುಷ ಪಾತ್ರಗಳನ್ನು ನಿರ್ವಹಿಸಿ ಕಲಾಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು. ಇವರು ತೆರೆದು ಕಾಣಿಸುವವರಲ್ಲ. ಸದಾ ಮುಚ್ಚಿಕೊಳ್ಳುವ ಸ್ವಭಾವ ಇವರದು. ಯಾವುದೇ ಪ್ರಚಾರವನ್ನು ಬಯಸದೆ ಕಲಾ ವ್ಯವಸಾಯವನ್ನು ಮಾಡಿದ್ದರು. ಮಳೆಗಾಲದ ಪ್ರದರ್ಶನಗಳಲ್ಲಿ ಇವರಿಗೆ ಬೆಳ್ಳಾರೆ ಶ್ರೀ ಮಂಜುನಾಥ ಭಟ್ ಮತ್ತು ರೆಂಜಾಳ ಶ್ರೀ ರಾಮಕೃಷ್ಣ ರಾಯರ ಒಡನಾಟವೂ ಸಿಕ್ಕಿತ್ತು.
ಇವರ ಕಲಾ ಸೇವೆಯನ್ನು ಗುರುತಿಸಿದ ಕೇರಳದ ತಪಸ್ಯ ಕಲಾ ವೇದಿಕೆಯ ಕಾಸರಗೋಡು ಘಟಕವು ಇವರನ್ನು ಸನ್ಮಾನಿಸಿ ಗೌರವಿಸಿತ್ತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಕುಂಬಳೆ ಘಟಕವೂ ಇವರನ್ನು ಗೌರವಿಸಿತ್ತು. ದುಬೈ ಯಕ್ಷಗಾನ ಅಭ್ಯಾಸ ತರಗತಿ ತಂಡವು ಶ್ರೀ ವಾಸು ಬಾಯಾರು ಅವರ ನೇತೃತ್ವದಲ್ಲಿ ಇವರಿಗೆ ಯಕ್ಷ ರಕ್ಷಾ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮನೆಯ ಹೊಣೆಯನ್ನು ನಿರ್ವಹಿಸುವ ಅನಿವಾರ್ಯತೆಯಿಂದ 1999ರಲ್ಲಿ ಮೇಳದ ವ್ಯವಸಾಯಕ್ಕೆ ಕೂಟೇಲು ಬಾಲಕೃಷ್ಣ ಭಟ್ಟರು ವಿದಾಯ ಹೇಳಿದ್ದರು.
ಎರಡು ವರ್ಷಗಳ ಹಿಂದೆ ಶ್ರೀಯುತರ ಪತ್ನಿ ಶ್ರೀಮತಿ ರಾಧಾ ಭಟ್ ಅವರು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡಿದ್ದರು. ಪ್ರಸ್ತುತ ಕೂಟೇಲು ಶ್ರೀ ಬಾಲಕೃಷ್ಣ ಭಟ್ಟರು ಅವರ ತಮ್ಮ ಶ್ರೀನಿವಾಸ ಭಟ್ಟರ ಮಕ್ಕಳಾದ ಶ್ರೀ ರಂಜಿತ್ ಕೂಟೇಲು ಮತ್ತು ಶ್ರೀ ಅಜಿತ್ ಕೂಟೇಲು ಅವರ ಆಶ್ರಯದಲ್ಲಿ ಜೀವಿಸುತ್ತಿದ್ದಾರೆ. ಶ್ರೀ ರಂಜಿತ್ ಮತ್ತು ಶ್ರೀ ಅಜಿತ್ ಅವರು ದೊಡ್ಡಪ್ಪನನ್ನು ಪ್ರೀತಿ, ಗೌರವದಿಂದ ನೋಡಿಕೊಳ್ಳುತ್ತಿದ್ದಾರೆ. ಇದು ಕಲಾಭಿಮಾನಿಗಳಾದ ನಮಗೆಲ್ಲಾ ಸಂತೋಷದ ವಿಚಾರ.
ದೇವರು ಮೆಚ್ಚುವ ಕೆಲಸವನ್ನು ಕೂಟೇಲು ಶ್ರೀ ಬಾಲಕೃಷ್ಣರ ತಮ್ಮನ ಮಕ್ಕಳಾದ ಶ್ರೀ ರಂಜಿತ್ ಮತ್ತು ಶ್ರೀ ಅಜಿತ್ ಅವರು ಮಾಡುತ್ತಿದ್ದಾರೆ. ಅವರಿಗೆ ಶ್ರೀ ದೇವರ ಅನುಗ್ರಹವಿರಲಿ. ಶ್ರೀ ಬಾಲಕೃಷ್ಣ ಭಟ್ ಕೂಟೇಲು ಅವರಿಗೆ ಆರೋಗ್ಯವೇ ಮೊದಲಾದ ಭಾಗ್ಯಗಳನ್ನು ಶ್ರೀ ದೇವರು ಅನುಗ್ರಹಿಸಲಿ. ವಿಶ್ರಾಂತ ಜೀವನವು ಸುಖ ಸಂತೋಷಗಳಿಂದ ಕೂಡಿರಲಿ ಎಂಬ ಹಾರೈಕೆಗಳು.
ಕೆಲವೊಮ್ಮೆ ಅನೈತಿಕ ದೈಹಿಕ ಸಂಬಂಧಗಳು ಮತ್ತು ಲೈಂಗಿಕತೆಯ ಅತಿಯಾದ ಆಸಕ್ತಿ ಮನುಷ್ಯನನ್ನು ಎಂತಹಾ ಕೆಲಸಗಳಿಗೂ ಪ್ರಚೋದಿಸುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇಲ್ಲೊಂದು ಪ್ರಕರಣವೂ ಅದೇ ರೀತಿ ಇದೆ.
ಮಾಂಗಲ್ಯ ಕಟ್ಟಿದ ಗಂಡನನ್ನೇ ಕೊಂದು ಪಿಟ್ಸ್ ರೋಗದಿಂದ ಸತ್ತ ಎಂದು ಪ್ರಚಾರ ಮಾಡಿದ ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಕೊನೆಗೂ ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ. ಮಹೇಶ್ ಎಂಬಾತನನ್ನು ಆತನ ಪತ್ನಿಯಾದ ಶಿಲ್ಪಾ ಮತ್ತು ಆಕೆಯ ಪ್ರಿಯತಮ ಸೇರಿಕೊಂಡು ಕೊಲೆ ಮಾಡಿದ್ದಾರೆ.
ಆಮೇಲೆ ಮೂರ್ಛೆರೋಗ ಬಂದು ಮೃತಪಟ್ಟಿದ್ದಾನೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಆಮೇಲೆ ಶವವನ್ನು ತಮ್ಮ ಊರಾದ ಮಂಡ್ಯಕ್ಕೆ ತಂದು ಮೂರ್ಛೆರೋಗದ ಕಟ್ಟುಕತೆ ಹೆಣೆದಿದ್ದಾಳೆ.
ಆದರೆ ಆಕೆಯ ಮಾತುಗಳಲ್ಲಿ ನಾಟಕದ ಛಾಯೆಯನ್ನು ಕಂಡ ಮಹೇಶನ ಮನೆಯವರು ಮೃತದೇಹವನ್ನು ಪರೀಕ್ಷೆ ಮಾಡಿದರು. ಆಗ ಅವರಿಗೆ ಮೃತ ಮಹೇಶನ ದೇಹದಲ್ಲಿ ಗಾಯಗಳ ಗುರುತುಗಳು ಕಂಡುಬಂದುವು. ಇದರಿಂದ ಮತ್ತಷ್ಟು ಅನುಮಾನಗೊಂಡ ಅವರು ಪೊಲೀಸರಿಗೆ ದೂರು ನೀಡಿದರು.
ಕೂಡಲೇ ಪೋಷಕರು ಮಂಡ್ಯ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೃತದೇಹವನ್ನು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಸತ್ಯ ಬಯಲಾಯಿತು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹೇಶ ಕೊಲೆಯಾದುದು ದೃಢಪಟ್ಟಿದೆ.
ಮಂಡ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಕೋಣನಕುಂಟೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಕೋಣನಕುಂಟೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಮೃತ ಮಹೇಶನ ಪತ್ನಿ ಶಿಲ್ಪಾ ಹಾಗೂ ಅವಳ ಪ್ರಿಯಕರನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮದುವೆಯಾದ 8 ವರ್ಷಗಳ ನಂತರ, ಹೆಂಡತಿ ದಪ್ಪವಾಗಲು ಪ್ರಾರಂಭಿಸಿದಳು ಎಂಬ ಕಾರಣ ಮುಂದಿಟ್ಟುಕೊಂಡು ಅವಳಿಂದ ವಿಚ್ಛೇದನ ಬಯಸಿದ ಗಂಡ!
ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ಸಹಾಯಕ್ಕಾಗಿ ಮನವಿ ಮಾಡಿದರು.ಸಂತ್ರಸ್ತ ಮಹಿಳೆ ನಜ್ಮಾಳನ್ನು ಅವಳ ಪತಿ ಸಲ್ಮಾನ್ “ನೀನು ದಪ್ಪವಾಗಿದ್ದೀ, ನಿನ್ನೊಂದಿಗೆ ಇರಲು ಸಾಧ್ಯವಿಲ್ಲ, ಹಾಗಾಗಿ ನಾನು ವಿಚ್ಛೇದನ ನೀಡುತ್ತಿದ್ದೇನೆ.” ಹೀಗೆ ಹೇಳುತ್ತಾ, ಆತ ಅವಳನ್ನು ಮನೆಯಿಂದ ಹೊರ ಹಾಕಿ ತಲಾಕ್ ನೀಡಿದ್ದಾನೆ.
ಇದೀಗ ಮಹಿಳೆ ತನ್ನ 7 ವರ್ಷದ ಮಗನ ಬಗ್ಗೆ ಚಿಂತಿಸುತ್ತಾ ನ್ಯಾಯಕ್ಕಾಗಿ ಪೊಲೀಸರಿಗೆ ಮೊರೆ ಹೋಗಿದ್ದಾಳೆ. ಉತ್ತರ ಪ್ರದೇಶದ ಮೀರತ್ನಿಂದ ವಿಚ್ಛೇದನದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ಮಹಿಳೆಯೊಬ್ಬಳು ತನ್ನ ಸ್ಥೂಲಕಾಯದ ಕಾರಣದಿಂದ ಪತಿ ತನಗೆ ತಲಾಕ್ ಹೇಳಿ ವಿಚ್ಛೇದನ ನೀಡಿದ್ದಾನೆ ಎಂದು ಹೇಳುತ್ತಾರೆ. ಅಧಿಕ ತೂಕದ ಕಾರಣಕ್ಕಾಗಿ ನಿರಂತರವಾಗಿ ನಿಂದಿಸಲಾಗುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮೀರತ್ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಕಿರ್ ಕಾಲೋನಿ ನಿವಾಸಿ ನಜ್ಮಾ ಅವರ ಪತಿ ಸಲ್ಮಾನ್ ಇದ್ದಕ್ಕಿದ್ದಂತೆ ವಿಚ್ಛೇದನ ನೀಡಿದ ವ್ಯಕ್ತಿ. ನಜ್ಮಾಳ ಏಕೈಕ ದೋಷವೆಂದರೆ ಅವಳು ದಪ್ಪವಾಗಿದ್ದಾಳೆ. ಈ ವಿಚಾರವಾಗಿಯೇ ಪತಿ ಪತ್ನಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ನೋಟಿಸ್ ನೋಡಿದ ಆಕೆ ಪತಿಯೊಂದಿಗೆ ಮಾತನಾಡಲು ಯತ್ನಿಸಿದಳು, ಆಗ ಪತಿ ನೀನು ದಪ್ಪ ಆಗಿದ್ದೀಯ ನಿನ್ನ ಜೊತೆ ಇರಲು ಸಾಧ್ಯವಿಲ್ಲ ಎಂದು ಉತ್ತರಿಸಿದ.
ಬಳಿಕ ನಜ್ಮಾ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಮನವಿ ಮಾಡಿದರು. ಅದೇ ಸಮಯದಲ್ಲಿ, ಯಾರಾದರೂ ಈ ರೀತಿ ಸಂಬಂಧವನ್ನು ಕೊನೆಗೊಳಿಸಿದ್ದರೆ, ತನಿಖೆ ನಡೆಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ.
ಠಾಣಾ ಲಿಸಾಡಿ ಗೇಟ್ ಪ್ರದೇಶದ ಜಾಕಿರ್ ಕಾಲೋನಿಯಲ್ಲಿ ವಾಸಿಸುವ ನಜ್ಮಾ ಅವರು 8 ವರ್ಷಗಳ ಹಿಂದೆ ಸಲ್ಮಾನ್ ನ್ನು ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗನೂ ಇದ್ದಾನೆ. 1 ತಿಂಗಳ ಹಿಂದೆ ಸಲ್ಮಾನ್ ತನ್ನನ್ನು ಮನೆಯಿಂದ ಹೊರಹೋಗುವಂತೆ ಹೇಳಿ ನಂತರ ವಿಚ್ಛೇದನ ನೋಟಿಸ್ ಕಳುಹಿಸಿದ್ದರು ಎಂದು ನಜ್ಮಾ ಆರೋಪಿಸಿದ್ದಾರೆ.
ವಿಚ್ಛೇದನದ ಕಾರಣವನ್ನು ತಿಳಿಯಲು ಪ್ರಯತ್ನಿಸಿದಾಗ, ಸಲ್ಮಾನ್ ನೀನು ದಪ್ಪವಾಗಿದ್ದೀ ಮತ್ತು ನಾನು ನಿನಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ. ಇದಾದ ನಂತರ ನಜ್ಮಾ ಹಲವು ಬಾರಿ ಕರೆ ಮಾಡಿದರೂ ಸಲ್ಮಾನ್ ಫೋನ್ ತೆಗೆಯಲಿಲ್ಲ. ನಂತರ ರಾತ್ರಿಯೇ ಕುಟುಂಬ ಸಮೇತ ಪೊಲೀಸ್ ಠಾಣೆ ಲಿಸಾಡಿ ಗೇಟ್ ತಲುಪಿದ ಬಳಿಕ ನಜ್ಮಾ ತನಗಾದ ಸಂಕಷ್ಟವನ್ನು ಪೊಲೀಸರಿಗೆ ವಿವರಿಸಿದ್ದಾಳೆ.
ತನ್ನ ತೂಕದ ಕಾರಣದಿಂದ ಸಲ್ಮಾನ್ ಈಗಾಗಲೇ ತನ್ನನ್ನು ಹೊಡೆದಿದ್ದಾನೆ ಎಂದು ನಜ್ಮಾ ಆರೋಪಿಸಿದ್ದಾರೆ. ಆದರೆ, ಈ ವೇಳೆ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾನೆ. ಕಳೆದ ಒಂದು ತಿಂಗಳಿನಿಂದ ನಜ್ಮಾ ತನ್ನ ಏಳು ವರ್ಷದ ಮಗನೊಂದಿಗೆ ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾಳೆ.
ಶ್ರೀ ರವೀಂದ್ರ ದೇವಾಡಿಗ ಕಮಲಶಿಲೆ ಅವರು ಬಡಗುತಿಟ್ಟಿನ ಯುವ, ಅನುಭವೀ ಕಲಾವಿದರು ಹಾಸ್ಯಗಾರರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಲಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಯಕ್ಷಗಾನ ಕಲೆಯಲ್ಲಿ ವೃತ್ತಿಕಲಾವಿದನಾಗಿ ಕಳೆದ ಮೂವತ್ತು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಬಾಲಗೋಪಾಲನಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರಿಗೆ ಮೊಟ್ಟಮೊದಲು ಹಾಸ್ಯಗಾರ ಹೊಳೆಮಗ್ಗಿ ನಾಗಪ್ಪ ಮೊಗವೀರ ಅವರ ಪಾತ್ರಗಳನ್ನು ನೋಡಿ ಆ ಕುರಿತಾಗಿ ಆಸಕ್ತಿ ಹುಟ್ಟಿಕೊಂಡಿತ್ತು. ಬಳಿಕ ಚಂದ್ರ ಶೆಟ್ಟಿ ಬೆದ್ರಳ್ಳಿ ಅವರ ಪಾತ್ರಗಳನ್ನು ನೋಡಿಯೂ ಆ ಬಗೆಗೆ ಒಲವು ಮೂಡಲು ಕಾರಣವಾಯಿತು.
ಪೆರ್ಡೂರು ಮೇಳದಲ್ಲಿ ಮೂರೂರು ರಮೇಶ ಭಂಡಾರಿಯವರ ವೇಷಗಳನ್ನು ನೋಡಿದ ಮೇಲೆ ತಾನೂ ಹಾಸ್ಯಗಾರನಾಗಬೇಕೆಂಬ ಆಸೆಯು ಹುಟ್ಟಿಕೊಂಡಿತ್ತು. ಶ್ರೀ ರವೀಂದ್ರ ದೇವಾಡಿಗರು ಯಕ್ಷಗಾನ ನಾಟ್ಯ ಕಲಿತು ಮೇಳಕ್ಕೆ ಸೇರಿದವರಲ್ಲ. ಮೇಳಕ್ಕೆ ಸೇರಿದ ಮೇಲೆ ನಾಟ್ಯ, ಮಾತುಗಾರಿಕೆಗಳನ್ನು ಅಭ್ಯಸಿಸಿ ಕಲಾವಿದನಾಗಿ ಕಾಣಿಸಿಕೊಂಡವರು. ಇವರು ಪ್ರಸ್ತುತ ಶ್ರೀ ವೈ. ಕರುಣಾಕರ ಶೆಟ್ಟಿ ಅವರ ಸಂಚಾಲಕತ್ವದ ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರರು.
ಬಡಗು ತಿಟ್ಟಿನ ಹಾಸ್ಯಗಾರರಾದ ರವೀಂದ್ರ ದೇವಾಡಿಗರ ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಮಲಶಿಲೆ. 1983ನೇ ಇಸವಿ ಏಪ್ರಿಲ್ 24ರಂದು ಶ್ರೀ ಬೇಡು ದೇವಾಡಿಗ ಮತ್ತು ಶ್ರೀಮತಿ ನೀಲು ದೇವಾಡಿಗ ದಂಪತಿಗಳ ಪುತ್ರನಾಗಿ ಜನನ. ಶ್ರೀ ರವೀಂದ್ರ ದೇವಾಡಿಗರ ತಾಯಿ ಶ್ರೀಮತಿ ನೀಲು ದೇವಾಡಿಗರ ತಂದೆ ಶ್ರೀ ತಿಮ್ಮ ದೇವಾಡಿಗರು ವೃತ್ತಿ ಕಲಾವಿದರು. ಇವರು ಆರ್ಗೋಡು ಗೋವಿಂದರಾಯ ಶೆಣೈ (ಆರ್ಗೋಡು ಮೋಹನದಾಸ ಶೆಣೈ ಅವರ ತಂದೆ) ಮತ್ತು ಆರ್ಗೋಡು ಸರಸಿಂಹರಾಯ ಶೆಣೈ ಅವರ ಸಮಕಾಲೀನರು. ತಾಯಿಯ ಕಡೆಯಿಂದ ಯಕ್ಷಗಾನವು ರಕ್ತಗತವಾಗಿಯೇ ರವೀಂದ್ರ ದೇವಾಡಿಗರಿಗೆ ಸಿಕ್ಕ ಬಳುವಳಿ.
ರವೀಂದ್ರ ದೇವಾಡಿಗರು ಓದಿದ್ದು 4ನೇ ತರಗತಿ ವರೆಗೆ. ಕಮಲಶಿಲೆ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ಎಳವೆಯಲ್ಲೇ ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯಿಂದಲೇ ಶಾಲಾ ಕಲಿಕೆಯನ್ನು ನಿಲ್ಲಿಸಿದ್ದರು. ಶ್ರೀ ರಾಮ ದೇವಾಡಿಗ ಕಮಲಶಿಲೆ (ರವೀಂದ್ರರ ಬಂಧುಗಳು) ಮತ್ತು ಶ್ರೀ ರಾಮ ದೇವಾಡಿಗ ಕೊಟ್ಟಾಡಿ ಅವರು ಆಗ ಕಮಲಶಿಲೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದರು. ಇವರಿಬ್ಬರೂ ಉತ್ತಮ ಕಲಾವಿದರಾಗಿದ್ದರು. ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿಯದ ಶ್ರೀ ರವೀಂದ್ರ ದೇವಾಡಿಗರು ಶ್ರೀರಾಮ ದೇವಾಡಿಗದ್ವಯರ ಒತ್ತಾಯದಂತೆ ಕಮಲಶಿಲೆ ಮೇಳಕ್ಕೆ ಸೇರಿಕೊಂಡರು.
ಆಗ ಸಿದ್ಧಾಪುರ ಜನ್ಸಾಲೆ ಶ್ರೀ ನಾರಾಯಣ ಶೆಟ್ರು ಕಮಲಶಿಲೆ ಮೇಳದ ಸಂಚಾಲಕರಾಗಿದ್ದರು. ಬಾಲಗೋಪಾಲನಾಗಿ ರಂಗಪ್ರವೇಶ. ಖ್ಯಾತ ಕಲಾವಿದ ವಿಶ್ವನಾಥ ಆಚಾರ್ಯ ತೊಂಬಟ್ಟು ಮತ್ತು ಶ್ರೀ ರವೀಂದ್ರ ದೇವಾಡಿಗರು ಒಟ್ಟಿಗೇ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡಿದವರು. ಮೇಳದಲ್ಲಿ ಶ್ರೀ ರಾಮ ದೇವಾಡಿಗ ಕೊಟ್ಟಾಡಿ ಅವರನ್ನು ನಾಟ್ಯಾಭ್ಯಾಸ. ಬಳಿಕ ಪೀಠಿಕಾ ಸ್ತ್ರೀವೇಷ ಮತ್ತು ಪ್ರಸಂಗಗಳಲ್ಲಿ ತನ್ನ ಪಾಲಿಗೆ ಬಂದ ಸಣ್ಣಪುಟ್ಟ ಪಾತ್ರಗಳ ನಿರ್ವಹಣೆ.
ಮೇಳದಲ್ಲಿ ಹಾಸ್ಯಗಾರರಾಗಿದ್ದ ಹೊಳೆಮಗ್ಗಿ ನಾಗಪ್ಪ ಮೊಗವೀರ ಅವರ ಪಾತ್ರಗಳನ್ನು ನೋಡಿ ಹಾಸ್ಯದ ಬಗ್ಗೆ ಆಸಕ್ತಿ ಉಂಟಾಗಿತ್ತು. ಬಳಿಕ ಹಾಸ್ಯಗಾರ ಚಂದ್ರ ಶೆಟ್ಟಿ ಬೆದ್ರಳ್ಳಿ ಅವರ ಹಾಸ್ಯ ನೋಡಿಯೂ ಹಾಸ್ಯದ ಬಗೆಗೆ ಒಲವು ಹೆಚ್ಚಾಗಿತ್ತು. ಅವರು ಅವಕಾಶವನ್ನು ನೀಡಿ ರಂಗಕ್ಕೆ ಕರೆದೊಯ್ಯುತ್ತಿದ್ದರು. ಈ ಸಂದರ್ಭದಲ್ಲಿ ಕಟ್ಟಿಗೆ ಮಾರುವವನ ವೇಷದಲ್ಲಿ ಅಭಿನಯಿಸಿ ಕಾಣಿಸಿಕೊಂಡಿದ್ದರು. ಇವರ ಅಭಿನಯವನ್ನು ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದರು. ಶ್ರೀ ರವೀಂದ್ರ ದೇವಾಡಿಗರ ಒಳಗಿರುವ ಹಾಸ್ಯಗಾರನನ್ನು ಅಂದೇ ಎಲ್ಲರೂ ಗುರುತಿಸಿದ್ದರು.
ಶ್ರೀ ರವೀಂದ್ರ ದೇವಾಡಿಗರು ಕಮಲಶಿಲೆ ಮೇಳದಲ್ಲಿ ನಾಲ್ಕು ವರ್ಷ ತಿರುಗಾಟ ನಡೆಸಿ ಬಳಿಕ ಪೆರ್ಡೂರು ಮೇಳವನ್ನು ಸೇರಿಕೊಂಡರು. ಸೇರಿದ್ದು ಬಾಲಗೋಪಾಲನಾಗಿ. ಅಲ್ಲಿ ಮುಖ್ಯಪ್ರಾಣ ಕಿನ್ನಿಗೋಳಿ ಪ್ರಧಾನ ಹಾಸ್ಯಗಾರರಾಗಿದ್ದರು. ಮೂರೂರು ಶ್ರೀ ರಮೇಶ್ ಭಂಡಾರಿಯವರೂ ಹಾಸ್ಯಗಾರರಾಗಿದ್ದರು. ಪೆರ್ಡೂರು ಮೇಳದಲ್ಲಿ ಅವರ ವೇಷಗಳನ್ನು ನೋಡಿದ ಮೇಲೆ ತಾನೂ ಹಾಸ್ಯಗಾರನಾಗಬೇಕೆಂಬ ಆಸೆಯುಂಟಾಗಿತ್ತು. ರವೀಂದ್ರ ದೇವಾಡಿಗರು ತಮ್ಮ ವೇಷ ಮುಗಿದ ಮೇಲೆ ಬೆಳಗಿನ ವರೆಗೂ ಆಟ ನೋಡುತ್ತಿದ್ದರು. ಹಿರಿಯ ಹಾಸ್ಯಗಾರರ ವೇಷಗಳನ್ನು ನೋಡಿಯೇ ರವೀಂದ್ರ ದೇವಾಡಿಗರು ಕಲಿತಿದ್ದರು.
ಮುಂದಿನ ತಿರುಗಾಟಗಳಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ, ಕಟೀಲು ಸೀತಾರಾಮ ಕುಮಾರ್ ಅವರ ಒಡನಾಟವೂ ದೊರಕಿತ್ತು. ಹಿರಿಯ ಅನುಭವಿ ಹಾಸ್ಯಗಾರರ ಒಡನಾಟವು ಕಲಿಕೆಗೆ ಅನುಕೂಲವಾಗಿತ್ತು. ಭಾಗವತರಾದ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರ ನಿರ್ದೇಶನವೂ ಕಲಿಕೆಗೆ ಅವಕಾಶವಾಗಿತ್ತು. ಬಳಿಕ ಚಪ್ಪರಮನೆ ಶ್ರೀಧರ ಹೆಗಡೆ ಅವರ ಒಡನಾಟವೂ ಸಿಕ್ಕಿತ್ತು. ಪೆರ್ಡೂರು ಮೇಳದಲ್ಲಿ ಎರಡು ವರ್ಷಗಳ ತಿರುಗಾಟದ ಬಳಿಕ ಅಮೃತೇಶ್ವರೀ ಮೇಳಕ್ಕೆ. ಒತ್ತು ಹಾಸ್ಯಗಾರನಾಗಿ. ಆಗ ಸದ್ರಿ ಮೇಳದಲ್ಲಿ ಮಡಾಮಕ್ಕಿ ಜಯರಾಮ ಶೆಟ್ರು ಮುಖ್ಯ ಹಾಸ್ಯಗಾರರಾಗಿದ್ದರು. ಮೂರು ತಿಂಗಳ ತಿರುಗಾಟದ ಬಳಿಕ ಪ್ರಧಾನ ಹಾಸ್ಯಗಾರನ ಸ್ಥಾನವು ದೊರೆತಿತ್ತು. ಮುಂದಿನ ವರ್ಷ ಮರಳಿ ಪೆರ್ಡೂರು ಮೇಳಕ್ಕೆ ಮೂರನೆಯ ಹಾಸ್ಯಗಾರನಾಗಿ ಸೇರ್ಪಡೆ.
ಫೋಟೋ ಕೃಪೆ: ಪ್ರವೀಣ್ ಪೆರ್ಡೂರು
ಪೆರ್ಡೂರು ಮೇಳದಲ್ಲಿ ಮತ್ತೆ ಹಳ್ಳಾಡಿ ಜಯರಾಮ ಶೆಟ್ಟಿ ಮತ್ತು ಮೂರೂರು ರಮೇಶ್ ಭಂಡಾರಿಯವರ ಜತೆ ತಿರುಗಾಟ. ಬಳಿಕ ಕ್ಯಾದಗಿ ಮಹಾಬಲ ಭಟ್ ಅವರು ಹಾಸ್ಯಗಾರರಾದಾಗ ಅವರ ಜತೆ ಒತ್ತು ಹಾಸ್ಯಗಾರರಾಗಿ ವ್ಯವಸಾಯ. ಆ ವರ್ಷ ಕ್ಯಾದಗಿ-ದೇವಾಡಿಗ ಜೋಡಿಯು ರಂಜಿಸಿ ಪ್ರೇಕ್ಷಕರ ಮನಸೂರೆಗೊಂಡಿತ್ತು. ಬಳಿಕ ದೇವಾಡಿಗರು ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರರಾದ ವರ್ಷ ‘ಕ್ಷಮಯಾ ಧರಿತ್ರಿ” ಪ್ರಸಂಗವು ರಂಜಿಸಿತ್ತು. ಮರು ವರ್ಷ ಪೆರ್ಡೂರು ಮೇಳಕ್ಕೆ ಮೂರೂರು ರಮೇಶ್ ಭಂಡಾರಿಯವರು ಪ್ರಧಾನ ಹಾಸ್ಯಗಾರರಾದಾಗ ರವೀಂದ್ರ ದೇವಾಡಿಗರು ಒತ್ತು ಹಾಸ್ಯಗಾರರಾಗಿದ್ದರು.
ಕಳೆದ ವರ್ಷದಿಂದ ಮತ್ತೆ ಶ್ರೀ ರವೀಂದ್ರ ದೇವಾಡಿಗರು ಪೆರ್ಡೂರು ಮೇಳದ ಪ್ರಧಾನ ಹಾಸ್ಯಗಾರರಾಗಿದ್ದಾರೆ. ಶಿವರಂಜಿನಿ ಪ್ರಸಂಗದ ‘ಗುಬ್ಬಿ ಗಣಪ’ ಎಂಬುದು ಸಣ್ಣ ಪಾತ್ರವಾದರೂ ಕಲಾಭಿಮಾನಿಗಳು ಈ ಪಾತ್ರದಲ್ಲಿ ದೇವಾಡಿಗರನ್ನು ಗುರುತಿಸಿದ್ದರು. ಬಳಿಕ ಗೋಕುಲಾಷ್ಟಮಿ ಪ್ರಸಂಗದ ‘ಬ್ರಹ್ಮಾಂಡ ಬಾಬಣ್ಣ’ ಪಾತ್ರವು ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ಪಾಪಣ್ಣ, ಚಂದ್ರಾವಳಿ ವಿಲಾಸದ ಅತ್ತೆ, ಭೀಷ್ಮ ಪ್ರತಿಜ್ಞೆಯ ಕಂಧರ, ಕೀಚಕ ವಧೆಯ ವಿಜಯ, ಕನಕಾಂಗಿ ಕಲ್ಯಾಣದ ಬಲರಾಮನ ದೂತ,ಚಂದ್ರಹಾಸ ಪ್ರಸಂಗದ ಕಪ್ಪ ದೂತ ಮತ್ತು ಮದುವೆ ಪುರೋಹಿತ, ದಾರುಕ ಅಲ್ಲದೆ ಅನೇಕ ಕಾಲ್ಪನಿಕ ಪ್ರಸಂಗಗಳ ಪಾತ್ರಗಳಲ್ಲಿ ಶ್ರೀ ರವೀಂದ್ರ ದೇವಾಡಿಗರು ರಂಜಿಸಿದ್ದಾರೆ.
ಮುಂಬೈ, ಹೈದರಾಬಾದ್, ಬೆಂಗಳೂರು ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿರುತ್ತಾರೆ. ಕೋಟೇಶ್ವರ ಯಕ್ಷೋತ್ಸವ ಪ್ರಶಸ್ತಿ ಮತ್ತು ಶಿರೂರು ಯಕ್ಷ ಋಕ್ಷ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಅನೇಕ ಸಂಘ ಸಂಸ್ಥೆಗಳೂ ಅವರನ್ನು ಗುರುತಿಸಿ ಗೌರವಿಸಿವೆ. ಮುಂಬಯಿ, ತಲ್ಲೂರು ಮತ್ತು ಕೋಟೇಶ್ವರ ದೇವಾಡಿಗ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ. ಮೆಳೆಗಾಲದಲ್ಲಿ ಶ್ರೀ ರವೀಂದ್ರ ದೇವಾಡಿಗರು ಬಡಗಿನ ಹೆಚ್ಚಿನ ಎಲ್ಲಾ ತಂಡಗಳ ಪ್ರದರ್ಶನಗಳಲ್ಲೂ ಭಾಗವಹಿಸುತ್ತಾರೆ.
ಶ್ರೀ ರವೀಂದ್ರ ದೇವಾಡಿಗರ ಪತ್ನಿ ಶ್ರೀಮತಿ ಗೀತಾ ದೇವಾಡಿಗ. ಇವರು ಗೃಹಣಿ. ರವೀಂದ್ರ ದೇವಾಡಿಗ, ಗೀತಾ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ಪೃಥ್ವಿ. 10ನೇ ತರಗತಿಯ ವಿದ್ಯಾರ್ಥಿನಿ. ಪುತ್ರ ಮಾ| ಪ್ರೀತೇಶ್ 8ನೇ ತರಗತಿ ವಿದ್ಯಾರ್ಥಿ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ರವೀಂದ್ರ ದೇವಾಡಿಗರಿಂದ ಕಲಾ ಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು.
ಕೇರಳದ ಇಡುಕ್ಕಿ ಜಿಲ್ಲೆಯ ಮಂಕುಲಂನಲ್ಲಿ ವ್ಯಕ್ತಿಯೊಬ್ಬ ಚಿರತೆಯನ್ನು ಕೊಂದು ಹಾಕಿದ್ದಾನೆ. ಚಿರತೆಯಿಂದ ಸ್ವಲ್ಪದರಲ್ಲೇ ಪಾರಾದ ಗೋಪಾಲನ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಪಾಲನ್ ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಕೊಂದು ಹಾಕಿದ್ದಾನೆ ಎಂದು ತಿಳಿದುಬಂದಿದೆ. ಕುತ್ತಿಗೆಗೆ ಆಳವಾದ ಗಾಯವಾದ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿದೆ. ಶನಿವಾರ ಬೆಳಗ್ಗೆ ಗೋಪಾಲನ್ ಅವರ ಮನೆ ಸಮೀಪದ ಪ್ಲಾಟ್ಗೆ ಹೋಗುತ್ತಿದ್ದಾಗ ಚಿರತೆ ದಾಳಿಗೆ ಯತ್ನಿಸಿದೆ.
ದಾರಿಯಲ್ಲಿ ಬಿದ್ದಿದ್ದ ಚಿರತೆ ಜಿಗಿದು ಕಚ್ಚಿದೆ ಎಂದು ಗೋಪಾಲನ್ ತಿಳಿಸಿದ್ದಾರೆ. ಗೋಪಾಲನ್ ತನ್ನ ಪ್ರಾಣ ಉಳಿಸಿಕೊಳ್ಳಲು ಅಂದು ಹಿಡಿದಿದ್ದ ಕತ್ತಿಯಿಂದ ಚಿರತೆಯನ್ನು ಕಡಿಯಬೇಕಾಯಿತು. ಚಿರತೆಯನ್ನು ಕಡಿದ ತಕ್ಷಣ ಅದು ಕೆಳಗೆ ಬಿದ್ದಿದೆ.
ಗೋಪಾಲನ ಕಿರುಚಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಆತನ ಎದೆ ಮತ್ತು ಎಲುಬುಗಳಿಗೆ ತೀವ್ರ ಗಾಯಗಳಾಗಿದ್ದು, ಕೈ ಮತ್ತು ಕಾಲು ಮುರಿದಿದೆ. ಸಾಕುಪ್ರಾಣಿಗಳ ಮೇಲೆ ಚಿರತೆ ದಾಳಿ ಮಾಡಿದ ಹಲವಾರು ನಿದರ್ಶನಗಳು ಈ ಪ್ರದೇಶದಲ್ಲಿ ಈ ಹಿಂದೆ ವರದಿಯಾಗಿದ್ದವು ಎಂದು ಗೋಪಾಲನ್ ಹೇಳಿದರು.
ಘಟನೆಯ ನಂತರ ಅವರಿಗೆ ಆಂಟಿ ರೇಬಿಸ್ ಲಸಿಕೆ ಹಾಕಲಾಯಿತು. ಮಂಕುಲಂನಲ್ಲಿ ಒಂದು ತಿಂಗಳಿನಿಂದ ಚಿರತೆ ಇರುವುದನ್ನು ಗುರುತಿಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಇಲ್ಲಿನ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯಗಳು ದಾಖಲಾಗಿವೆ. ಚಿರತೆ ಹಿಡಿಯಲು ಅಧಿಕಾರಿಗಳು ಹಲವೆಡೆ ಬೋನುಗಳನ್ನು ಹಾಕಿದ್ದರು.
ಆತ ತನ್ನ ಆತ್ಮರಕ್ಷಣೆಗಾಗಿ ಚಿರತೆಯನ್ನು ಕೊಳ್ಳಬೇಕಾಗಿ ಬಂದದ್ದರಿಂದ ಆತನ ಮೇಲೆ ಯಾವುದೇ ಕೇಸು ದಾಖಲಿಸದಿರಲು ಕೇರಳ ಸರಕಾರ ನಿರ್ಧರಿಸಿದೆ. ಈ ಸಂಬಂಧ ಸರಕಾರ ಅರಣ್ಯ ಇಲಾಖೆಗೆ ಈಗಾಗಲೇ ಸೂಚನೆ ನೀಡಿದೆ.