Saturday, August 1, 2026
Home Blog Page 93

ಆಂಬ್ಯುಲೆನ್ಸ್‌ಗೆ ಕೊಡಲು ಹಣವಿಲ್ಲ, ಮಗನ ಶವವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಬಸ್‌ನಲ್ಲಿ 200 ಕಿಮೀ ಪ್ರಯಾಣಿಸಿದ ಬಂಗಾಳದ ವ್ಯಕ್ತಿ

ಯಾರಿಗೂ ತಿಳಿಸದೆ ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಗಂಜ್‌ಗೆ ಶವವನ್ನು ಚೀಲದಲ್ಲಿ ಹಾಕಿಕೊಂಡು ಬಸ್‌ನಲ್ಲಿ ಪ್ರಯಾಣಿಸಿದ್ದೇನೆ ಎಂದು ತಂದೆ ಆಶಿಮ್ ದೇಬ್ಶರ್ಮಾ ಹೇಳಿದ್ದಾರೆ.

ಆಂಬ್ಯುಲೆನ್ಸ್ ಚಾಲಕನ ಬೇಡಿಕೆಯಂತೆ ತನ್ನ ಬಳಿ 8,000 ರೂಪಾಯಿ ಇಲ್ಲದ ಕಾರಣ, ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ 200 ಕಿಲೋಮೀಟರ್ ದೂರದವರೆಗೆ ತನ್ನ ಐದು ತಿಂಗಳ ಮಗುವಿನ ಶವವನ್ನು ಚೀಲದಲ್ಲಿಟ್ಟುಕೊಂಡು ಸಾರ್ವಜನಿಕ ಬಸ್‌ನಲ್ಲಿ ಪ್ರಯಾಣಿಸಿದ್ದೇನೆ ಎಂದು ವ್ಯಕ್ತಿಯೊಬ್ಬರು ಭಾನುವಾರ ಹೇಳಿದ್ದಾರೆ.

ಸಿಲಿಗುರಿಯಿಂದ ಕಲಿಯಾಗಂಜ್‌ನಲ್ಲಿರುವ ಮನೆಗೆ ಕರೆದುಕೊಂಡು ಹೋಗದ್ದಕ್ಕಾಗಿ. ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಸರ್ಕಾರದ ‘ಸ್ವಾಸ್ಥ್ಯ ಸತಿ’ ಆರೋಗ್ಯ ವಿಮಾ ಯೋಜನೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸಿದರೆ, ಮಗುವಿನ ದುರದೃಷ್ಟಕರ ಸಾವಿನ ಬಗ್ಗೆ ಕೇಸರಿ ಶಿಬಿರವು ರಾಜಕೀಯದಲ್ಲಿ ತೊಡಗಿದೆ ಎಂದು ಟಿಎಂಸಿ ಆರೋಪಿಸಿದೆ.

ಆರು ದಿನಗಳ ಕಾಲ ಸಿಲಿಗುರಿಯ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ನನ್ನ ಐದು ತಿಂಗಳ ಮಗ ಕಳೆದ ರಾತ್ರಿ ಸಾವನ್ನಪ್ಪಿದ್ದಾನೆ, ಈ ಸಮಯದಲ್ಲಿ ನಾನು 16,000 ರೂ. ಗಳನ್ನು ಚಿಕಿತ್ಸೆಗಾಗಿ ಖರ್ಚು ಮಾಡಿದ್ದೆ. “ನನ್ನ ಮಗುವನ್ನು ಕಲಿಯಗಂಜ್‌ಗೆ ಸಾಗಿಸಲು ಅಲ್ಲಿನ ಆಂಬ್ಯುಲೆನ್ಸ್ ಡ್ರೈವರ್ ಕೇಳಿದ್ದ 8,000 ರೂ ಪಾವತಿಸಲು ನನ್ನ ಬಳಿ ಹಣವಿರಲಿಲ್ಲ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸಿಬ್ಬಂದಿ ಸಹ ಪ್ರಯಾಣಿಕರಿಗೆ ತಿಳಿದರೆ ತಾನು ಡಿಬೋರ್ಡ್ ಆಗಬಹುದೆಂಬ ಭಯದಿಂದ ದೇಬ್‌ಶರ್ಮಾ ಮೃತದೇಹವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಡಾರ್ಜಿಲಿಂಗ್ ಜಿಲ್ಲೆಯ ಸಿಲಿಗುರಿಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಉತ್ತರ ದಿನಾಜ್‌ಪುರ ಜಿಲ್ಲೆಯ ಕಲಿಯಗಂಜ್‌ಗೆ ಯಾರಿಗೂ ತಿಳಿಸದೆ ಬಸ್‌ನಲ್ಲಿ ಪ್ರಯಾಣಿಸಿದರು.

102 ಯೋಜನೆಯಡಿ ಆಂಬ್ಯುಲೆನ್ಸ್ ಚಾಲಕರೊಬ್ಬರು ರೋಗಿಗಳಿಗೆ ಈ ಸೌಲಭ್ಯ ಉಚಿತವಾಗಿದೆ, ಆದರೆ ಶವಗಳನ್ನು ಸಾಗಿಸಲು ಅಲ್ಲ ಎಂದು ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡುವ ವ್ಯಕ್ತಿಯ ವೀಡಿಯೊಗಳೊಂದಿಗೆ ವಿಷಯವನ್ನು ಟ್ವೀಟ್ ಮಾಡಿದ ಅಧಿಕಾರಿ ಹೀಗೆ ಬರೆದಿದ್ದಾರೆ: “ನಾವು ತಾಂತ್ರಿಕತೆಗಳಿಗೆ ಹೋಗಬೇಡಿ, ಆದರೆ ಸ್ವಾಸ್ಥ್ಯ ಸತಿ ಸಾಧಿಸಿರುವುದು ಇದನ್ನೇ? ದುರದೃಷ್ಟವಶಾತ್ ಇದು ‘ಎಗಿಯೆ ಬಾಂಗ್ಲಾ’ (ಸುಧಾರಿತ ಬಂಗಾಳ) ಮಾದರಿಯ ನಿಜವಾದ ಚಿತ್ರಣವಾಗಿದೆ.

“ಮಗುವಿನ ದುರದೃಷ್ಟಕರ ಸಾವಿನೊಂದಿಗೆ ಬಿಜೆಪಿ “ಕೊಳಕು ರಾಜಕೀಯ” ಮಾಡಲು ಪ್ರಯತ್ನಿಸುತ್ತಿದೆ ಎಂದು ಟಿಎಂಸಿ ರಾಜ್ಯಸಭಾ ಸಂಸದ ಸಂತಾನು ಸೇನ್ ಆರೋಪಿಸಿದ್ದಾರೆ.

ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ನಡೆಸುವ ಯಕ್ಷಗಾನ ಬೇಸಿಗೆ ಶಿಬಿರ ಸಮಾರೋಪ

ಯಾವುದೇ ಕಲೆ ಮಾರಾಟದ ಸರಕಾಗಬಾರದು. ಹೃದಯ, ಹೃದಯಗಳ ನಡುವಿನ ಮನೋ ವ್ಯಾಪಾರವಾಗಬೇಕು. ನಮ್ಮ ಯಕ್ಷಗಾನ ನಮ್ಮ ಮನಸ್ಸನ್ನು ಅರಳಿಸಬೇಕೆ ವಿನಹ ಕೆರಳಿಸಬಾರದು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳೇ ಈ ಕಲೆಯನ್ನು ನೀವುಗಳು ಮುಂದೆ ಹವ್ಯಾಸಿಯಾಗಿ ಬಳಸಿಕೊಳ್ಳಿ ಹಾಗೂ ಒಳ್ಳೆಯ ಪ್ರೇಕ್ಷಕರಾಗಿ, ಬದಲಾಗಿ ವೃತ್ತಿಯಾಗಿ ತೆಗೆದುಕೊಳ್ಳಬೇಡಿ ಎಂದು ಸಾಲಿಗ್ರಾಮ ಮೇಳದ ಪ್ರದಾನ ಚಂಡೆವಾದಕರಾದ ಕೋಟ ಶಿವಾನಂದರು ಹೇಳಿದರು.

ಅವರು 06-05-2023ರಂದು ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ನಡೆಸುತ್ತಿರುವ ಯಕ್ಷಗಾನ ನೃತ್ಯ ಮತ್ತು ತಾಳಾಭ್ಯಾಸದೊಂದಿಗೆ ಪದಾಭ್ಯಾಸ ಎಂಬ ವಿಷಯದ ಬಗ್ಗೆ ಕೋಟದ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಸುತ್ತಿರುವ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.


ನಿವೃತ್ತ ಎಲ್.ಐ.ಸಿ. ಅಧಿಕಾರಿಯಾದ ಹಂದಟ್ಟು ಗಣಪಯ್ಯ ಭಟ್‌ರು ಮಾತನಾಡಿ ನಮ್ಮ ಕಾಲದಲ್ಲಿ ಯಕ್ಷಗಾನ ಕಲಿಕೆಗೆ ಕಲಾ ಶಾಲೆಗಳು ಇರಲಿಲ್ಲ, ಚೌಕಿ ಹಾಗೂ ರಂಗಸ್ಥಳಗಳೇ ಕಲಾವಿದರಿಗೆ ಅಭ್ಯಾಸ ಶಾಲೆಯಾಗಿತ್ತು. ಹಿರಿಯ ಕಲಾವಿದರೇ ಕಿರಿಯ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದರು. ಈಗ ಕಾಲ ಬದಲಾಗಿದೆ. ಸಾಕಷ್ಟು ತರಬೇತಿ ಶಾಲೆಗಳಿವೆ.

ನಿಜವಾದ ಕಲಾಸಕ್ತರಿಗೆ ಕಲಿಯಲಿಕ್ಕೆ ಒಳ್ಳೆಯ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಅನುಭವಿ ಗುರುಗಳಿಂದ ಕೂಡಿದ ಈ ಶಿಬಿರ ಅರ್ಥಪೂರ್ಣವಾಗಿದೆ. ಸಿಕ್ಕಿದ 7 ದಿವಸ ಚೆನ್ನಾಗಿ ಉಪಯೋಗಿಸಿಕೊಂಡಿದ್ದೀರಿ. ಅದರಲ್ಲೂ 120-130 ಕಿ.ಮೀ ದೂರದ ಕವಲಕ್ಕಿಯಿಂದ ಪ್ರತಿದಿನ ಸಮಯಕ್ಕೆ ಸರಿಯಾಗಿ ಶಿಬಿರಕ್ಕೆ ಬರುವ ಕೃಷ್ಣ ಭಟ್ ಎಂಬ ವಿದ್ಯಾರ್ಥಿಯ ಯಕ್ಷಗಾನ ಕಲಿಕೆಯ ಆಸಕ್ತಿಗೆ ಆಶ್ಚರ್ಯಪಡಬೇಕು ಎಂದರು.


ಹಾಗೆ ವೇದಿಕೆಯಲ್ಲಿ ಹಂದೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅಮರ ಹಂದೆ, ಯಕ್ಷಗಾನ ಗುರುಗಳಾದ ಕೋಟ ಸುದರ್ಶನ ಉರಾಳ ಹಾಗೂ ವೇಷ ಕಟ್ಟಿಕೊಂಡ ಶಿಬಿರಾರ್ಥಿ ಕೃಷ್ಣ ಭಟ್‌ರು ಉಪಸ್ಥಿತರಿದ್ದರು.
ಈ ನಡುವೆ ಶಿಬಿರಾರ್ಥಿಗಳಿಗೆ ಸರ್ಟಿಫಕೇಟ್‌ನ್ನು ನೀಡಲಾಯಿತು. ಕಾರ್ಯಕ್ರಮವನ್ನು ಸುಹಾಸ ಕರಬ ನಿರ್ವಹಿಸಿದರು. ಸುದೀಪ ಉರಾಳ ವಂದಿಸಿದರು.


ಈ ಏಳು ದಿನದ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ನವರ ಶಿಬಿರದಲ್ಲಿ ನೃತ್ಯ, ತಾಳಾಭ್ಯಾಸದೊಂದಿಗೆ ಪದಾಭ್ಯಾಸ ಹಾಗೂ ಯಕ್ಷಗಾನದ ಮೇಕಪ್, ವೇಷಭೂಷಣದ ಪರಿಚಯಿಸಿ, ವೇಷ ಕಟ್ಟಿ ತೋರಿಸಲಾಯಿತು.


ಈ ಶಿಬಿರಕ್ಕೆ ಶ್ರೀ ವಿಶ್ವವಿನಾಯಕ ವಿವಿದ್ದೋದ್ಧೇಶ ಸಹಕಾರ ಸಂಘ ಕೋಟ, ಕಾಮಧೇನು ವಿವಿದ್ದೋದ್ಧೇಶ ಸಹಕಾರ ಸಂಘ ಹಂದಟ್ಟು, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ, ಸಾಲಿಗ್ರಾಮ ಮಕ್ಕಳ ಮೇಳ, ಯಶಸ್ವಿ ಕಲಾವೃಂದ ತೆಕ್ಕಟ್ಟೆ, ರಂಗ ಸಂಪದ ಕೋಟ ಇವರುಗಳು ಸಹಕಾರ ನೀಡಿದರು.

ಕೋಟ ಸುದರ್ಶನ ಉರಾಳ
ಮೊ: 9448547237

ಯಕ್ಷಗಾನ ಹಿಮ್ಮೇಳ ಕಲಾವಿದರ ಮನೆಯ ಪ್ರವೇಶೋತ್ಸವ – ಯಕ್ಷಶಿಕ್ಷಣ ಟ್ರಸ್ಟಿನ ವತಿಯಿಂದ ಉಡುಗೊರೆಯಾಗಿ 50,000 ರೂಪಾಯಿ

ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ನ ಗುರುಗಳೂ, ಮಂದಾರ್ತಿ ಮೇಳದ ಹಿಮ್ಮೇಳ ಕಲಾವಿದರೂ ಆದ ಮಹೇಶ್‌ಕುಮಾರ್‌ ಇವರ ಗೃಹಪ್ರವೇಶ 06-05-2023ರಂದು ಮಂದಾರ್ತಿಯಲ್ಲಿ ಜರುಗಿತು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‌ ನೂತನ ಮನೆಗೆ ಭೇಟಿ ನೀಡಿ, ಯಕ್ಷಶಿಕ್ಷಣ ಟ್ರಸ್ಟಿನ ವತಿಯಿಂದ ಉಡುಗೊರೆಯಾಗಿ 50,000 ರೂಪಾಯಿಯನ್ನು ನೀಡಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್, ಸದಸ್ಯರಾದ ಎಸ್. ವಿ. ಭಟ್, ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಹಾಗೂ ಗಣೇಶ್ ಬ್ರಹ್ಮಾವರ ಉಪಸ್ಥಿತರಿದ್ದರು.

ಅಂಬಲಪಾಡಿ – ಯಕ್ಷಗಾನ ವೇಷಗಾರಿಕೆ ಕಮ್ಮಟ ಸಮಾರೋಪ

ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ 5 ದಿನಗಳ ವೇಷಗಾರಿಕೆ ಕಮ್ಮಟ ಇಂದು 13.05.2023 ಶ್ರೀ ಜನಾರ್ದನ ಮಂಟಪದಲ್ಲಿ ಸಮಾಪನಗೊಂಡಿತು.

ನರಸಿಂಹ ತುಂಗ ಮತ್ತು ಮಿಥುನ್‌ ಕುಮಾರ್‌ ಇವರ ಮಾರ್ಗದರ್ಶನದಲ್ಲಿ 20 ವಿದ್ಯಾರ್ಥಿಗಳು ವಿವಿಧ ವೇಷಗಳ ಮುಖವರ್ಣಿಕೆ ಮಾಡುವುದು ಮತ್ತು ಕಿರೀಟ ಕಟ್ಟಿಕೊಳ್ಳುವ ಕೌಶಲವನ್ನು ಈ ಶಿಬಿರದಲ್ಲಿ ತಿಳಿದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಶ್ರೀ ವಿಜಯಕುಮಾರ್‌ ಮುದ್ರಾಡಿ, ಶ್ರೀಮತಿ ವಿದ್ಯಾ ಪ್ರಸಾದ್‌ ಹಾಗೂ ಶ್ರೀ ಗೋವಿಂದ ಭಂಡಾರಿ ಪಾಲ್ಗೊಂಡರು. ಶ್ರೀ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ ಶ್ರದ್ಧೆಯಿಂದ ಪಾಲ್ಗೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಮಂಡಳಿಯ ಅಧ್ಯಕ್ಷ ಕೆ. ಅಜಿತ್‌ಕುಮಾರ್ ಮಾತನಾಡಿ ಮುಂದೆ ಪ್ರತಿ ಭಾನುವಾರ ಯಕ್ಷಗಾನ ನೃತ್ಯ ಅಭಿನಯ ಮತ್ತು ವೇಷಗಾರಿಕೆ ತರಗತಿಗಳು ಜರುಗಲಿವೆ ಎಂದು ತಿಳಿಸಿದರು.

ಶಿಬಿರಾರ್ಥಿಗಳ ಪರವಾಗಿ ಶೈಲೇಶ್, ಮಾನ್ಯ, ಅದಿತಿ ಹಾಗೂ ಶ್ರಾವ್ಯ ಇವರು ಶಿಬಿರದ ತಮ್ಮ ಅಮೂಲ್ಯ ಅನುಭವವನ್ನು ಹಂಚಿಕೊಂಡರು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಶ್ರೀಕರ ಭಟ್‌ ಮತ್ತು ಡಾ.ಪಾದೆಕಲ್ಲು ವಿಷ್ಣು ಭಟ್‌ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಉಡುಪಿ ಯಕ್ಷಗಾನ ಕಲಾರಂಗವು ಸಹೃದಯಿ ಕಲಾ ಪೋಷಕ ಮಟ್ಟಿ ಮುರಲೀಧರ ರಾವ್ ಮತ್ತು ಅರ್ಥಧಾರಿ, ಪಂಡಿತ ಪೆರ್ಲ ಕೃಷ್ಣ ಭಟ್ ನೆನಪಿನಲ್ಲಿ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಅನುಕ್ರಮವಾಗಿ ಅರ್ಥಧಾರಿ, ಪತ್ರಕರ್ತ, ಲೇಖಕ, ವಿಮರ್ಶಕ, ಸಂಘಟಕ ಶ್ರೀಕರ ಭಟ್ ಹಾಗೂ ಅರ್ಥಧಾರಿ, ಸಂಶೋಧಕ, ಲೇಖಕ, ಪ್ರವಚನಕಾರ ಡಾ.ಪಾದೆಕಲ್ಲು ವಿಷ್ಣು ಭಟ್‌ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ತಾಳಮದ್ದಲೆ ಸಪ್ತಾಹ ಮೇ 21ರಿಂದ 27ರ ವರೆಗೆ ನಡೆಯಲಿದ್ದು, ಮೇ 27 ಶನಿವಾರ ಸಂಜೆ 5.00 ಗಂಟೆಗೆ ಶಿರ್ವದ ಮಹಿಳಾ ಸೌಧದಲ್ಲಿ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಈ ವಿಷಯವನ್ನು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿಯು ರೂ. 20,000/- ನಗದು ಪುರಸ್ಕಾರ ಒಳಗೊಂಡಿರುತ್ತದೆ.

ಯಕ್ಷಗಾನ ಕೇಂದ್ರ ಸೇರ್ಪಡೆಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ
ಯಕ್ಷಗಾನ ಕೇಂದ್ರ ಸೇರ್ಪಡೆಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ ಇಲ್ಲಿಗೆ ಸೇರಲು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

  1. ವಿದ್ಯಾರ್ಥಿಗಳಿಗೆ ಉಚಿತ ಯಕ್ಷಗಾನ ತರಬೇತಿ ನೀಡಲಾಗುವುದು
  2. ಅದರೊಂದಿಗೆ ಶಾಲಾ ವಿದ್ಯಾಭ್ಯಾಸವನ್ನು ಉಚಿತವಾಗಿ ನೀಡಲಾಗುವುದು
  3. ಉಚಿತ ವಸತಿ ಹಾಗೂ ಊಟೋಪಚಾರದ ವ್ಯವಸ್ಥೆಯಿದೆ
  4. ಅರ್ಜಿಗಳು ಬಂದ ನಂತರ ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು
    ಅರ್ಜಿಯನ್ನು ಹಾಕಲು ಕೊನೆಯ ದಿನಾಂಕ: 22.05.2023.
    ಆಸಕ್ತರು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
    9901190392/ 9900907702/ 9113880188

ಯುವತಿಯ ಆತ್ಮಹತ್ಯೆ: ಸೈಬರ್ ಬೆದರಿಕೆಯ ಆರೋಪಿ ಕಾಸರಗೋಡಿನಲ್ಲಿ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಕೊಟ್ಟಾಯಂನಲ್ಲಿ ಆತ್ಮಹತ್ಯೆ ಮಾಡಿಕೊಂಡ ತನ್ನ ಮಾಜಿ ಸ್ನೇಹಿತ ಸೈಬರ್ ಬೆದರಿಕೆಯ ಆರೋಪಿ ಅರುಣ್ ವಿದ್ಯಾಧರನ್ (32) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕಾಸರಗೋಡಿನ ಕಾಞಂಗಾಡ್‌ನಲ್ಲಿರುವ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ಥಳದಿಂದ ದೊರೆತ ಗುರುತಿನ ಚೀಟಿಯಿಂದ ಅರುಣ್ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕೊಥನಲ್ಲೂರಿನ ವಿ ಎಂ ಅತಿರಾ (26) ಎಂಬಾಕೆ ಅರುಣ್‌ನಿಂದ ಸೈಬರ್ ಬೆದರಿಸುವಿಕೆಯಿಂದ ತನ್ನ ಜೀವನವನ್ನು ಕೊನೆಗೊಳಿಸಿದ ಬೆನ್ನಲ್ಲೇ ಅರುಣ್ ತಲೆಮರೆಸಿಕೊಂಡಿದ್ದ.

ಪೊಲೀಸರು ಹುಡುಕಾಟ ನಡೆಸಿದರೂ ಆತನ ಪತ್ತೆಗೆ ಸಾಧ್ಯವಾಗಲಿಲ್ಲ. ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಜಿಲ್ಲಾ ಪೊಲೀಸ್ ವರಿಷ್ಠ ಕೆ.ಕಾರ್ತಿಕ್ ಅವರಿಗೆ ಲುಕ್ ನೋಟಿಸ್ ನೀಡಿದ್ದರು. ಮಣಿಪುರದ ಸಬ್ ಕಲೆಕ್ಟರ್ ಆಶಿಶ್ ದಾಸ್ ಆಕೆಯ ಭಾವ. ಅತಿರಾ ಸೋಮವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಮಾನಸಿಕ ಕಿರುಕುಳದಿಂದ ಒಂದು ವರ್ಷದ ಹಿಂದೆ ಅರುಣ್ ಜೊತೆಗಿನ ಸಂಬಂಧವನ್ನು ಅತಿರಾ ಕಡಿದುಕೊಂಡಿದ್ದರು. ಇಬ್ಬರು ನೆರೆಹೊರೆಯವರಾಗಿದ್ದರು. ಆಕೆ ಸೈಬರ್ ಬೆದರಿಸುವಿಕೆ ಮತ್ತು ಆನ್‌ಲೈನ್ ಕಿರುಕುಳಕ್ಕೆ ಬಲಿಯಾದಳು.

ಭಾನುವಾರ ಆಥಿರಾ ಅವರ ‘ಪೆಣ್ಣು ಕಾಣಾಲ್’ ಕಾರ್ಯಕ್ರಮ. ಅದನ್ನು ತಿಳಿದ ಆತ ಆಕೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.

ಪೊಲೀಸರು ಅರುಣ್‌ಗೆ ಕರೆ ಮಾಡಿ ಸೋಮವಾರ ಬೆಳಗ್ಗೆ ಠಾಣೆಗೆ ಹಾಜರಾಗುವಂತೆ ತಿಳಿಸಿದರು. ಆದರೂ ಅರುಣ್‌ ಹಿಂದೆ ಸರಿಯಲಿಲ್ಲ. ಅವರು ಫೇಸ್ ಬುಕ್ ಮೂಲಕ ಆಶಿಶ್ ದಾಸ್ ಮೇಲೆ ನಿಂದನೆ ಮಾಡಿದ್ದಾರೆ.

ಇದರ ಬೆನ್ನಲ್ಲೇ  ಅತಿರಾ  ಕಠಿಣ ಹೆಜ್ಜೆ ಇಟ್ಟಿದ್ದಾಳೆ. ಆಶಿಶ್ ದಾಸ್ ಆಕೆಯ ಮಾನಸಿಕ ಸ್ಥಿತಿಯನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಅಂಬಿಕಾ ಪದವಿಪೂರ್ವ ವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಎನ್‌ಡಿಎ ತೇರ್ಗಡೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಮೂರು ಮಂದಿ ವಿದ್ಯಾರ್ಥಿಗಳು 2023ರ ಎನ್‌ಡಿಎ – 1 (ನ್ಯಾಶನಲ್ ಡಿಫೆನ್ಸ್ ಅಕಾಡೆಮಿ- 1) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಬೆಂಗಳೂರಿನ ಖುಷಿಕರ ಬಿ.ಎಸ್ ಹಾಗೂ ಉದಯಕಲಾ ಎನ್.ಎಲ್ ದಂಪತಿ ಪುತ್ರ ಪ್ರಜ್ವಲ್ ಬಿ.ಕೆ, ಕಡಬದ ಕೃಷ್ಣ ಮೂರ್ತಿ ಕೆ ಹಾಗೂ ಅನುಪಮ ದಂಪತಿ ಪುತ್ರ ಶ್ರೀಶ ಶರ್ಮ ಕೆ ಹಾಗೂ ಪುರುಷರಕಟ್ಟೆಯ ಚರಣ್ ಕುಮಾರ್ ಹಾಗೂ ಮಾಲತಿ ದಂಪತಿ ಪುತ್ರ ಶ್ಯಮಂತ್ ಕುಮಾರ್ ಸಿ.ಕೆ ಎನ್‌ಡಿಎ ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.


ಯುಪಿಎಸ್‌ಇಯು ವರ್ಷಕ್ಕೆ ಎರಡು ಬಾರಿ ಎನ್‌ಡಿಎ ಪರೀಕ್ಷೆ ನಡೆಸುತ್ತಿದ್ದು, ಎಪ್ರಿಲ್ ತಿಂಗಳಲ್ಲಿ ಮೊದಲ ಪರೀಕ್ಷೆ ನಡೆದಿತ್ತು. ದೇಶಾದ್ಯಂತ ಸುಮಾರು ಐದು ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಷ್ಟು ಮಂದಿ ವಿದ್ಯಾರ್ಥಿಗಳಲ್ಲಿ ಕೇವಲ ಎಂಟು ಸಾವಿರ ಮಂದಿ ವಿದ್ಯಾರ್ಥಿಗಳಷ್ಟೇ ಎಸ್‌ಎಸ್‌ಬಿ (ಸರ್ವಿಸ್ ಸೆಲೆಕ್ಷನ್ ಬೋರ್ಡ್) ನಡೆಸುವ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.

ಸಂದರ್ಶನದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಮುಂದೆ ಸೈನಿಕ ದಳ, ನೌಕಾದಳ ಅಥವ ವಾಯುದಳದಲ್ಲಿ ಮುಂದಿನ ಶಿಕ್ಷಣವನ್ನು ಪಡೆಯಲಿದ್ದು ನಂತರ ಭಾರತೀಯ ಸೇನೆಯಲ್ಲಿ ನಿಯುಕ್ತಿ ಹೊಂದಲಿದ್ದಾರೆ.


ಅಂಬಿಕಾ ಪದವಿಪೂರ್ವ ವಿದ್ಯಾಲಯವು ಎನ್‌ಡಿಎ ಪರೀಕ್ಷೆಗಾಗಿ ವಿಶೇಷ ಕೋಚಿಂಗ್ ತರಗತಿಗಳನ್ನು ನಡೆಸುತ್ತಿದ್ದು, ಭಾರತೀಯ ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಉತ್ಸಾಹ ಇರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವೆನಿಸಿದೆ.

ಪ್ರತಿವರ್ಷವೂ ಇಲ್ಲಿನ ವಿದ್ಯಾರ್ಥಿಗಳು ಎನ್‌ಡಿಎ ಪರೀಕ್ಷೆಯಲ್ಲಿ ಸಾಧನೆ ತೋರುತ್ತಿದ್ದಾರೆ. ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯುವುದರೊಂದಿಗೆ ಎನ್‌ಡಿಎ ಪರೀಕ್ಷೆಗೂ ತರಬೇತಿ ಲಭ್ಯವಾಗುತ್ತಿರುವುದು ಹೆತ್ತವರ ಸಂತಸಕ್ಕೂ ಕಾರಣವೆನಿಸಿದೆ.

ಅಂಬಲಪಾಡಿ ಯಕ್ಷಗಾನ ಶಿಬಿರ ಸಮಾರೋಪ

ಉಡುಪಿ ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಅಂಬಲಪಾಡಿಯ ಕಂಬ್ಳಕಟ್ಟದಲ್ಲಿರುವ ಸಂಸ್ಥೆಯ ಜನಾರ್ದನ ಮಂಟಪದಲ್ಲಿ ಹತ್ತು ದಿನಗಳ ಪರ್ಯಂತ ನಡೆಸಿದ ‘ಯಕ್ಷಗಾನ ಶಿಬಿರ’ ಇಂದು (04-05-2023) ಸಮಾಪನಗೊಂಡಿತು.

ಶಿಬಿರದಲ್ಲಿ 56 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ಕೆ.ಅಜಿತ್‌ಕುಮಾರ್ ಸ್ವಾಗತಿಸಿದರು. ನಿಕಟಪೂರ್ವಅಧ್ಯಕ್ಷ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್. ವಿ.ಭಟ್, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಪ್ರಮಾಣಪತ್ರ ವಿತರಿಸಿದರು. ಸಂಸ್ಥೆಯ ಉಪಾಧ್ಯಕ್ಷ ಕೆ.ಜೆ. ಗಣೇಶ್, ಕೆ. ಜೆ. ಕೃಷ್ಣ, ಗೋವಿಂದ ಭಂಡಾರಿ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕರಾದ ಕೋಟ ನರಸಿಂಹ ತುಂಗರನ್ನುಶಾಲು ಹೊದಿಸಿ ಗೌರವಿಸಲಾಯಿತು.

ಬಳಿಕ ವಿದ್ಯಾರ್ಥಿಗಳಿಂದ ಪೂರ್ವರಂಗದ ಪ್ರಾತ್ಯಕ್ಷಿಕೆ ಜರಗಿತು. ಮೇ 6ರಿಂದ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಕಮ್ಮಟ ಜರಗಲಿದೆ ಎಂದು ಅಧ್ಯಕ್ಷರು ತಿಳಿಸಿದರು.

ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭ – ಯುವ ಮನಸ್ಸುಗಳು ಸಾಮಾಜಿಕ ಋಣವನ್ನು ತೀರಿಸುವ ಕಾರ್ಯ ಶ್ಲಾಘನೀಯ: ಡಾ. ಎಚ್. ಎಸ್. ವೆಂಕಟೇಶ ಮೂರ್ತಿ

ಕನ್ನಡದ ಬಹು ಮುಖ್ಯ ಕಥೆಗಾರರಾದ ರಾಘವೇಂದ್ರ ಪಾಟೀಲರ ಹೆಸರಿನಲ್ಲಿ ಕಥಾ ಪ್ರಶಸ್ತಿ ನೀಡುವ ಮೂಲಕ ಯುವ ಮನಸ್ಸುಗಳು ಸಾಮಾಜಿಕ ಋಣವನ್ನು ತೀರಿಸುವ ಉತ್ತಮ ಕಾರ್ಯವನ್ನು ಮಾಡುತ್ತಿವೆ. ಪಾಟೀಲರ ಬದುಕಿನ ಆದರ್ಶ ಮತ್ತು ಸಾಹಿತ್ಯಕ ಧೋರಣೆಗಳನ್ನು ಅನುಸರಿಸುವುದರೊಂದಿಗೆ ಯೋಗ್ಯ ಬರಹಗಾರರನ್ನು ಆಯ್ದು ಪ್ರಶಸ್ತಿಯನ್ನು ನೀಡುವ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕನ್ನಡದ ಮಹತ್ವದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಹೇಳಿದರು. 

ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಧಾರವಾಡದ ರಂಗಾಯಣದಲ್ಲಿ ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಲಾಬಿ, ಸ್ವಜನ ಪಕ್ಷಪಾತಗಳಿಗೆ ಒಳಗಾಗದೆ, ಪಾರದರ್ಶಕ ನೀತಿಯ ಮೂಲಕ ಸತ್ಪಾತ್ರರಿಗಷ್ಟೇ ಯೋಗ್ಯತೆಯನ್ನು ಕಲ್ಪಿಸುವ ಇಂಥ ಯೋಜನೆಗಳು ಭವಿಷ್ಯದಲ್ಲಿ ಯಶಸ್ಸು ಕಾಣಲಿ ಎಂದು ಅವರು ಅಭಿಪ್ರಾಯ ಪಟ್ಟರು.

ಖ್ಯಾತ ಕಾದಂಬರಿಕಾರ ಎಂ. ಆರ್. ದತ್ತಾತ್ರಿಯವರು ರಾಘವೇಂದ್ರ ಪಾಟೀಲರ ‘ಗೈರ ಸಮಜೂತಿ’ ಕಾದಂಬರಿಯ ಕುರಿತು ಮಾತನಾಡಿದರು.

ಯುವ ವಿಮರ್ಶಕ ಮತ್ತು ಸಾಹಿತ್ಯ ವೇದಿಕೆಯ ಸಂಚಾಲಕರಾದ ಶ್ರೀ ವಿಕಾಸ ಹೊಸಮನಿಯವರು ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯ ಕುರಿತು ಮಾತನಾಡಿ, ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಮತ್ತು ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿಯ ಕುರಿತು ಮಾಹಿತಿಗಳನ್ನು ನೀಡಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಖ್ಯಾತ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠರು ಸಾಹಿತ್ಯ ವೇದಿಕೆಯ ಕಾರ್ಯ ಚಟುವಟಿಕೆಗಳು ಮತ್ತು ಪಾಟೀಲರ ಕುರಿತು ವಿಚಾರಗಳನ್ನು ಹಂಚಿಕೊಂಡರು. 

72 ವಸಂತಗಳನ್ನು ಪೂರೈಸಿದ ಕನ್ನಡದ ಶ್ರೇಷ್ಠ ಕಥೆಗಾರ ರಾಘವೇಂದ್ರ ಪಾಟೀಲರನ್ನು ಸನ್ಮಾನಿಸಿ ಗೌರವಿಸಲಾಯಿತು. 

ಕನ್ನಡದ ಖ್ಯಾತ ಕವಿಗಳಾದ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಮಹಾಂತೇಶ ನವಲಕಲ್ಲ ಮತ್ತು ಶ್ರೀಲೋಲ ಸೋಮಯಾಜಿಯವರಿಗೆ 2022ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಯನ್ನು, ಪ್ರೊ. ರಾಘವೇಂದ್ರ ಪಾಟೀಲರು ವಾಸುದೇವ ನಾಡಿಗ್ ಮತ್ತು ಡಾ. ರತ್ನಾಕರ ಕುನುಗೋಡು ಅವರಿಗೆ ಎಕ್ಕುಂಡಿ ಜನ್ಮಶತಮಾನೋತ್ಸವ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿದರು. 

ಈ ಸಮಾರಂಭದಲ್ಲಿ ರಾಘವೇಂದ್ರ ಪಾಟೀಲರು ಸ್ವತಃ ತಾವೇ ಇಂಗ್ಲಿಷಿಗೆ ಅನುವಾದಿಸಿದ ‘ದೇಸಗತಿ’ ಕಥಾಸಂಕಲನದ ಇಂಗ್ಲಿಷ್ ಅನುವಾದ ‘In the Domain of White Herons’ ಕೃತಿಯನ್ನು ಖ್ಯಾತ ವಿಮರ್ಶಕ ಡಾ. ಎಂ. ಜಿ. ಹೆಗಡೆಯವರು ಬಿಡುಗಡೆಗೊಳಿಸಿದರು. ತಮ್ಮ ಕಥೆಗಳನ್ನು ತಾವೇ ಅನುವಾದ ಮಾಡುವ ಸವಾಲನ್ನು ಸ್ವೀಕರಿಸಿದ ಪಾಟೀಲರು ಅದರಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದಾರೆ. ಇಂಗ್ಲಿಷ್ ಅನುವಾದದ ಮೂಲಕ ಅವರ ಕತೆಗಳು ಇನ್ನಷ್ಟು ಅರ್ಥ ವಿಸ್ತಾರಗಳನ್ನು ಪಡೆದಿವೆ ಎಂದು ಅವರು ನುಡಿದರು. 

ರಾಘವೇಂದ್ರ ಪಾಟೀಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟ ‘ತೇರು’ ಕಾದಂಬರಿಯನ್ನು ಹಿಂದಿಗೆ ಭಾಷಾಂತರಿಸಿದ ಹಿರಿಯ ಅನುವಾದಕಿ ಪ್ರೊ ಮಾಲತಿ ಆದವಾನಿಯವರ ಹಿಂದಿ ಅವತರಣಿಕೆ ‘ರಥ್’ ಅನ್ನು ಎಚ್. ಎಸ್. ವೆಂಕಟೇಶಮೂರ್ತಿಯವರು ಬಿಡುಗಡೆಗೊಳಿಸಿದರು.  

ಕನ್ನಡದ ಪ್ರತಿಷ್ಠಿತ ಕಥಾ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವೇದಿಕೆಯ ಮಹಾಪೋಷಕ ಡಾ. ಬಿ. ಸಿ. ಪ್ರಭಾಕರ, ಸಂಚಾಲಕ ವಿಕಾಸ ಹೊಸಮನಿ, ಎಂ. ಆರ್. ದತ್ತಾತ್ರಿ, ಸಂಕೇತ ಪಾಟೀಲ ಮತ್ತು ಡಾ. ಸುಭಾಷ್ ಪಟ್ಟಾಜೆಯವರನ್ನು ಎಚ್. ಎಸ್. ವೆಂಕಟೇಶ ಮೂರ್ತಿಯವರು ಅಭಿನಂದಿಸಿದರು. 

ರಾಘವೇಂದ್ರ ಪಾಟೀಲರ ‘ಮಾಯಿಯ ಮುಖಗಳು’ ಕಥಾಸಂಕಲನಕ್ಕೆ 25 ವರ್ಷ ಮತ್ತು ‘ತೇರು’ ಕಾದಂಬರಿಗೆ 20 ವರ್ಷ ತುಂಬಿದ ಸವಿನೆನಪಿಗೆ ಶ್ರೀ ಆನಂದ ಝಂಜರವಾಡ ಮತ್ತು ಬಸು ಬೇವಿನಗಿಡದ ಆ ಕೃತಿಗಳ ಕುರಿತು ಮಾತನಾಡಿದರು. 

ಮಹದೇವ ಹಡಪದ ತಂಡದವರು ಪ್ರಸ್ತುತ ಪಡಿಸಿದ ಪಾಟೀಲರ ‘ಮತ್ತೊಬ್ಬ ಮಾಯಿ’    ನಾಟಕ ನೆರೆದವರನ್ನು ಮಂತ್ರಮುಗ್ಧಗೊಳಿಸಿತು.

ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯೆ ಮೀನಾ ಮೈಸೂರು ಸ್ವಾಗತಿಸಿದರು. ಹನುಮಂತ ಕಾಖಂಡಕಿ ಕಾರ್ಯಕ್ರಮವನ್ನು ನಿರೂಪಿಸಿದರು. 

ಇಡೀ ದಿನ ಅದ್ದೂರಿಯಾಗಿ ನಡೆದ ರಾಘವೇಂದ್ರ ಪಾಟೀಲ 72ರ ಅಭಿನಂದನ ಮತ್ತು ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಾಹಿತ್ಯಪ್ರಿಯರು ಕಿಕ್ಕಿರಿದು ನೆರೆದು ಸಮಾರಂಭವನ್ನು ಯಶಸ್ವಿಗೊಳಿಸಿದರು.