ಪುತ್ತೂರು: ಕೇರಳದ ಕಾಲಡಿಯಲ್ಲಿ ಹುಟ್ಟಿದ ಶಂಕರಾಚಾರ್ಯರು ಸಮಾಜದಲ್ಲಿ ತುಂಬಿದ್ದ ಕರಾಳತೆಯನ್ನು ಮಟ್ಟಹಾಕಲು ಪಣತೊಟ್ಟರು. ಸಮಗ್ರ ಭಾರತವನ್ನು ಅದ್ವೈತ ತತ್ವದಡಿಯಲ್ಲಿ ಒಂದುಗೂಡಿಸಿದರು. ಅವರು ವೈದಿಕ ಸಂಸ್ಕೃತಿಯ ಮೂಲಕ ವೇದಗಳನ್ನು ಹಾಗೂ ಧರ್ಮವನ್ನು ಸಂರಕ್ಷಿಸಿದ ಪರಿ ಅದ್ಭುತವಾದುದು ಎಂದು ವಿದ್ವಾಂಸ ವಿದ್ವಾನ್ ಕೇಶವ ಭಟ್ಟ ಕೇಕಣಾಜೆ ಹೇಳಿದರು.
ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ ತತ್ವಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸೋಮವಾರದಂದು ಆಚರಿಸಲಾದ ಶಂಕರ ಜಯಂತಿ ಹಾಗೂ ವಿಶ್ವ ತತ್ವಜ್ಞಾನಿಗಳ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದರು.
ಶಂಕರಾಚಾರ್ಯರು ಹಲವಾರು ಭಾಷ್ಯಗಳನ್ನು ರಚಿಸಿದ್ದಾರೆ. ಅವರ ಭಾಷ್ಯಗಳು ಸುಲಲಿತವಾದ ಭಾಷೆಯಿಂದ ಕೂಡಿವೆ. ಜತೆಗೆ ಜೀವನಕ್ಕೆ ಅಗತ್ಯವಾದ ಮೌಲ್ಯಗಳನ್ನು ತಿಳಿಸುತ್ತವೆ. ಶಂಕರಾಚಾರ್ಯರು ತಮ್ಮ ವ್ಯಕ್ತಿತ್ವ ಹಾಗೂ ಸಾಧನೆಯಿಂದಾಗಿ ಇಂದು ಸಮಾಜದಲ್ಲಿ ಪೂಜಿಸಲ್ಪಡುತ್ತಿದ್ದಾರೆ ಎಂದರಲ್ಲದೆ ಶಂಕರಾಚಾರ್ಯರು ವಿಶ್ವದ ಮೊದಲ ತತ್ವಜ್ಞಾನಿಗಳು. ತದನಂತರ ಬಂದ ಎಲ್ಲಾ ತತ್ವಜ್ಞಾನಿಗಳು ಶಂಕರಾಚಾರ್ಯರು ನಡೆದ ಹಾದಿಯನ್ನು ಅನುಕರಿಸಿದ್ದಾರೆ ಎಂದರು.
ನಮ್ಮ ಅಂತಃ ಸತ್ವದ ಪರಿಚಯವಾಗಬೇಕಾದರೆ ನಮ್ಮನ್ನು ನಾವು ಅರ್ಥೈಸಿಕೊಳ್ಳಬೇಕು. ದೇಶ, ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಬೇಕು. ಇತಿಹಾಸದ ಬಗ್ಗೆ ಅಧ್ಯಯನ ಮಾಡಬೇಕು. ಮಾತ್ರವಲ್ಲದೆ, ಆದರ್ಶ ಪುರುಷರ ನಡೆ ನಮ್ಮ ಜೀವನದ ಬದಲಾವಣೆಗೆ ಪ್ರೇರಣೆಯಾಗಬೇಕು. ಅವರ ನುಡಿಗಳು ಜೀವನದಲ್ಲೊಂದು ಹೊಸ ಸ್ಪೂರ್ತಿಯನ್ನು ತುಂಬಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶಂಕರಾಚಾರ್ಯರು ಚಿಕ್ಕ ವಯಸ್ಸಿನಲ್ಲಿಯೇ ಸಾಧನಾ ಶಿಖರವನ್ನು ಏರಿದ್ದಾರೆ. ವಿಶ್ವವೇ ಅನುಕರಿಸುವಂತೆ ಬದುಕಿದ್ದಾರೆ. ಇಂದಿನ ಸಮಾಜವುಜಾತಿ, ಧರ್ಮಗಳ ನಡುವೆ ಸಿಲುಕಿ ಛಿದ್ರವಾಗಿದೆ. ಇಂತಹ ವಿಚ್ಛಿದ್ರ ಸಮಾಜವನ್ನು ಒಂದೇ ಸೂತ್ರದಡಿಯಲ್ಲಿ ಜೋಡಿಸಲು ಶಂಕರಾಚಾರ್ಯರು ಮತ್ತೊಮ್ಮೆ ಅವತರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಚೈತನ್ಯಾ ಪ್ರಾರ್ಥಿಸಿ, ವಿದ್ಯಾರ್ಥಿನಿಯರಾದ ಮಹಿಮಾ, ಅಂಕಿತ, ಪಂಚಮಿ ಶಂಕರಾಚಾರ್ಯ ವಿರಚಿತ ಸೋತ್ರವನ್ನು ಹಾಡಿದರು.
ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ್ ಭಟ್ ವಂದಿಸಿ, ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರ ‘ಡಯಟ್’ನಲ್ಲಿ ಇತ್ತೀಚೆಗೆ ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗವಾಗಿ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ ಜರಗಿತು. ಈ ಸಂದರ್ಭ ಉತ್ತರ ವಲಯದ ಶಿಕ್ಷಕರಿಂದ ರಾಷ್ಟ್ರ ಜಾಗೃತಿಯ ಯಕ್ಷಗಾನ ತಾಳಮದ್ದಳೆ ‘ಕ್ರಾಂತಿ ಕಹಳೆ’ ನಡೆಯಿತು.
ಈ ಪ್ರಸಂಗದ ಪರಿಕಲ್ಪನೆ ಮತ್ತು ಕಥಾ ಸಂಯೋಜನೆ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರದು. ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಹೋರಾಟದ ಘಟನೆಗಳನ್ನು ಆಧರಿಸಿದ ಯಕ್ಷಗಾನದ ಹಾಡುಗಳ ರಚನೆ ಡಾ.ದಿನಕರ ಎಸ್.ಪಚ್ಚನಾಡಿಯವರದು.
ತಾಳಮದ್ದಳೆ ಕಲಾವಿದರು:
ಸುಮಾರು 1 ಗಂಟೆ 10 ನಿಮಿಷದ ಅವಧಿಯ ‘ಕ್ರಾಂತಿ ಕಹಳೆ’ ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಹರೀಶ್ ಶೆಟ್ಟಿ ಸೂಡ ಅವರ ಭಾಗವತಿಕೆ, ಚೆಂಡೆ – ಮದ್ದಳೆಯಲ್ಲಿ ಸ್ಕಂದ ಕೊನ್ನಾರ್ ಮತ್ತು ಲಕ್ಷ್ಮೀನಾರಾಯಣ ಹೊಳ್ಳ ಭಾಗವಹಿಸಿದ್ದರು.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಉತ್ತರ ವಲಯದ ಶಿಕ್ಷಕರಾದ ನಾಗರಾಜ ಖಾರ್ವಿ (ಅಬ್ಬಕ್ಕ ರಾಣಿ), ಕೃಪಾ (ತಿಮ್ಮಣ್ಣ ನಾಯಕ ಮತ್ತು ದಿವಾನ್ ಪೂರ್ಣಯ್ಯ), ಪ್ರಮೀಳಾ (ಪೊರ್ಚುಗೀಸ್ ಕುಟಿನ್ನೊ), ಚಿತ್ರಶ್ರೀ ಕೆ.ಎಸ್. (ಝಾನ್ಸಿರಾಣಿ), ವಿನೋದಾ ಅಮೀನ್ (ನಾನಾಸಾಹೇಬ್), ಹರಿಪ್ರಸಾದ್ ಶೆಟ್ಟಿ (ಲಾರ್ಡ್ ಕಾರ್ನವಾಲಿಸ್, ಹ್ಯೂರೋಜ ಮತ್ತು ಆಂಗ್ಲಾಧಿಕಾರಿ), ವಸಂತ ಪಾಲನ್ (ಟಿಪ್ಪು ಮತ್ತು ಲಾಲಾ ಲಜಪತರಾಯ್), ಗೀತಾ ಎಸ್. (ಬಾಲ ಗಂಗಾಧರ ತಿಲಕ್), ಪ್ರೇಮನಾಥ್ ಮರ್ಣೆ (ಭಗತ್ ಸಿಂಗ್), ವೀಣಾ (ಚಂದ್ರಶೇಖರ ಆಜಾದ್), ಹಾಗೂ ವಿದ್ಯಾವತಿಯಾಗಿ ತಂಡದ ನಿರ್ದೇಶಕಿ ಡಾ. ಮಂಜುಳಾ ಶೆಟ್ಟಿ ಪಾತ್ರವಹಿಸಿದ್ದರು.
ಸ್ವಾತಂತ್ರ್ಯ ವೀರರ ಅಧ್ಯಯನ:
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರ ಬಗ್ಗೆ ಅಧ್ಯಯನ ಮಾಡಿ ಅವರ ಹೋರಾಟದ ಕಥೆಯನ್ನು ಹೊರತರುವುದೇ ಮುಖ್ಯ ಉದ್ದೇಶವಾಗಿದ್ದ ಕಾರ್ಯಾಗಾರಕ್ಕೆ ಮುಖ್ಯ ಅತಿಥಿಗಳಾಗಿ ಡಿಡಿಪಿಐ ದಯಾನಂದ ನಾಯಕ್ , ಯಕ್ಷಗಾನ ವಿದ್ವಾಂಸ ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಯುವ ಲೇಖಕ ಅನಿಂದಿತ್ ಗೌಡ ಉಪಸ್ಥಿತರಿದ್ಡರು.
ಸಿ.ಸಿ.ಆರ್.ಟಿ.ಯ ಈ ಡಿ.ಡಿ.ಆರ್. ಕಾರ್ಯಾಗಾರವನ್ನು ದೆಹಲಿಯಿಂದ ಆಗಮಿಸಿದ ಸಿ.ಸಿ.ಆರ್.ಟಿ.ಯ ಉಪ ನಿರ್ದೇಶಕ ರಾಹುಲ್ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಒಟ್ಟು 98 ಮಂದಿ ಶಿಕ್ಷಕರು ಮತ್ತು ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು.
ಡಯಟ್ ನ ಪ್ರಾಚಾರ್ಯೆ ರಾಜಲಕ್ಷ್ಮಿ ಸ್ವಾಗತಿಸಿ, ದೆಹಲಿಯ ವಿಮಲ್ ಧನ್ಯವಾದ ಸಮರ್ಪಿಸಿದರು. ಕಾರ್ಯಾಗಾರದ ಸಂಯೋಜಕಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ವಿಲ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.
ಡಿಸೆಂಬರ್ 22, 2022ರಂದು ಕಟೀಲಿನ ಸರಸ್ವತಿ ಸದನದಲ್ಲಿ ತ್ರಿಜನ್ಮ ಮೋಕ್ಷದ ಶಿಶುಪಾಲನ ವೇಷದಲ್ಲಿರುವಾಗಲೇ ಇಹಲೋಕ ಯಾತ್ರೆ ಮುಗಿಸಿದ ಕಲಾವಿದ, ಪ್ರಸಂಗಕರ್ತ ಗುರುವಪ್ಪ ಬಾಯಾರು ಹಾಗೂ ಇತ್ತೀಚೆಗೆ ಅಗಲಿದ ಸಸಿಹಿತ್ಲು ಮೇಳದ ಯುವ ಕಲಾವಿದ ಜಗದೀಶ ನಲ್ಕ ಇವರ ಕುಟುಂಬಕ್ಕೆ ಉಡುಪಿಯ ಯಕ್ಷಗಾನ ಕಲಾರಂಗದಿಂದ ಸಾಂತ್ವನ ನಿಧಿಯಾಗಿ ಅನುಕ್ರಮವಾಗಿ ರೂ. 50,000 ಮತ್ತು ರೂ.75,000 ನೀಡಲಾಯಿತು.
ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕರ್ಣಾಟಕ ಬ್ಯಾಂಕಿನ ನಿವೃತ್ತ ಆಡಳಿತಾಧಿಕಾರಿ ಮಹಾಬಲೇಶ್ವರ ಎಂ. ಎಸ್. ಮತ್ತು ಮಾಹೆಯ ಸಹಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಕಲಾವಿದರ ಪತ್ನಿಯರಿಗೆ ಚೆಕ್ಕನ್ನು ಹಸ್ತಾಂತರಿಸಿ ಸಂಸ್ಥೆ ಕಷ್ಟದಲ್ಲಿರುವ ಕಲಾವಿದರ ಕುಟುಂಬಕ್ಕೆ ನೆರವು ನೀಡುತ್ತಿರುವುದು ಮಾನವೀಯ ಕಳಕಳಿಯ ಕೆಲಸಕ್ಕೆ ಉದಾಹರಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಉಪಸ್ಥಿತರಿದ್ದರು.
ಮಂಗಳೂರು: ‘ಕಲೆಯಿಂದಾಗಿ ಕಲಾವಿದನಿಗೆ ಬದುಕು; ಕಲಾವಿದನಿಂದ ಕಲೆಗೆ ಬೆಳಕು. ಆದ್ದರಿಂದ ಕಲೆ ಮತ್ತು ಕಲಾವಿದರ ನಡುವೆ ಅವಿನಾಭಾವ ಸಂಬಂಧವಿದೆ’ ಎಂದು ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ಬಂಟ್ವಾಳ ತಾಲೂಕು ಪರಾರಿ ಗುತ್ತು ಮನೆವಠಾರದಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಸಂದರ್ಭ ಏರ್ಪಡಿಸಲಾದ ಪರಾರಿಗುತ್ತು ಬಾಲಕೃಷ್ಣ ಶೆಟ್ಟಿ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
’ಹಿರಿಯರನ್ನು ಗೌರವಿಸುವುದು ಮತ್ತು ಕಲೆಯನ್ನು ಆರಾಧಿಸುವುದು ಇವೆರಡೂ ಪವಿತ್ರ ಕಾರ್ಯಗಳು’ ಎಂದವರು ಬಯಲಾಟದ ಸೇವಾದಾರರನ್ನು ಅಭಿನಂದಿಸಿದರು. ಪೊಳಲಿ ಶ್ರೀ ರಾಮಕೃಷ್ಣ ತಪೋವನ ಆಶ್ರಮದ ಸ್ವಾಮಿ ವಿವೇಕಾ ಚೈತನ್ಯಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶಂಕರ ಶೆಟ್ಟಿ ಮುಂಡಡ್ಕ ಗುತ್ತು ಮತ್ತು ರಾಮಕೃಷ್ಣ ಆಳ್ವ ಪೊನ್ನೋಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂಸ್ಮರಣೆ – ಪ್ರಶಸ್ತಿ ಪ್ರದಾನ:
ಮಂಗಳೂರು ಕೆನರಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಜಿ. ಶಂಕರ ಶೆಟ್ಟಿ ಗುಂಡಿಲಗುತ್ತು ದಿ. ಬಾಲಕೃಷ್ಣ ಶೆಟ್ಟರ ಕುರಿತು ಸಂಸ್ಮರಣಾ ಭಾಷಣ ಮಾಡಿದರು. ಹಿರಿಯ ವೈದಿಕ ವಿದ್ವಾಂಸ ಹಾಗೂ ಕೊಳಕೆ ದೇವಳದ ಪ್ರಧಾನ ಅರ್ಚಕ ಮಹಾಬಲೇಶ್ವರ ಮಯ್ಯ ಮತ್ತು ಕಟೀಲು 2ನೇ ಮೇಳದ ಪ್ರಬಂಧಕ ಹಾಗೂ ಹಿರಿಯ ಯಕ್ಷಗಾನ ಕಲಾವಿದ ಶ್ರೀಧರ ಪಂಜಾಜೆಯವರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಬಯಲಾಟದ ಸೇವಾ ಕರ್ತರಾದ ದಿವಾಕರ ಶೆಟ್ಟಿ ಪರಾರಿ ಗುತ್ತು ಸ್ವಾಗತಿಸಿದರು. ಪಿ. ಕಿಶೋರ್ ಭಂಡಾರಿ ಬೆಳ್ಳೂರು ಸನ್ಮಾನ ಪತ್ರ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಶಂಕರ್ ಶೆಟ್ಟಿ ಪರಾರಿಗುತ್ತು ವಂದಿಸಿದರು. ಕಟೀಲು ಮೇಳದ ಕಲಾವಿದರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರಗಿತು
ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ಕೋಟದ ಹಂದೆ ಮಹಾ ಗಣಪತಿ ದೇವಸ್ಥಾನದಲ್ಲಿ ಇದೇ ಎಪ್ರಿಲ್ 30 ರಿಂದ 6 ರವರೆಗೆ ಬೇಸಗೆ ಶಿಬಿರದ ಪ್ರಯುಕ್ತ ಒಂದು ವಾರಗಳ ಕಾಲ ನರಸಿಂಹ ಸೋಮಯಾಜಿ ಹಂದಟ್ಟು, ಶ್ರೀ ವಿಶ್ವ ವಿನಾಯಕ ವಿವಿಧೋದ್ದೇಶ ಸಹಕಾಎ ಸಂಘ (ರಿ) ಕೋಟ, ಹಂದಟ್ಟು ಹಾಲು ಉತ್ಪಾದಕರ ಮಹಿಳಾ ಸಂಘ, ಕಾಮಧೇನು ವಿವಿಧೊದ್ದೇಶ ಸಹಕಾರಿ ಸಂಘ ಹಂದ್ಟಟು, ರಂಗ ಸಂಪದ ಕೋಟ, ಸಾಲಿಗ್ರಾಮ ಮಕ್ಕಳ ಮೇಳ, ಯಶಸ್ವಿ ಕಲಾವೃಂದ ತೆಕ್ಕಟ್ಟೆ ಮತ್ತು ವ್ಯವಸ್ಥಪನಾ ಸಮಿತಿ ಹಂದೆ ದೇವಸ್ಥಾನದದೊ0ದಿಗೆ ಜ0ಟಿಯಾಗಿ ಆಯೋಜಿಸಿದ ಯಕ್ಷಗಾನ ನೃತ್ಯ, ಭಾಗವತಿಕೆ, ಪದ್ಯದೊಂದಿಗೆ ತಾಳಾಭ್ಯಾಸ ಶಿಬಿರವನ್ನು ಚಂಡೆ ನುಡಿಸಿ ಸುಜಯೀಂದ್ರ ಹಂದೆಯವರು ಉದ್ಘಾಟಿಸಿದರು.
ಯಕ್ಷಾಂಗಣ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ಸುದರ್ಶನ ಉರಾಳರು ಅಧ್ಯಕ್ಷತೆ ವಹಿಸಿದ್ದರು. ಕೋಟ ಹಂದೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರೂ, ಮುಕ್ತೇಸರರು ಆದ ಅಮರ ಹಂದೆ ಶುಭಾಶಂಸನೆಗೈದರು. ಯಕ್ಷಗುರು ಲ0ಬೋದರ ಹೆಗಡೆ ಉಪಸ್ಥಿತರಿದ್ದರು. ರಂಗ ಸಂಪದದ ಕೋಟ ರಾಘವೇ0ದ್ರ ತು0ಗ ಸ್ವಾಗತಿಸಿ, ಯಶಸ್ವೀ ಕಲಾವೃಂದದ ವೆಂಕಟೇಶ ವೈದ್ಯ ವಂದಿಸಿದರು.
ಸಾಲಿಗ್ರಾಮ ಮಕ್ಕಳ ಮೇಳದ ಸುಹಾಸ ಕರಬ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ ಉರಾಳ, ಸುಜಯೀಂದ್ರ ಹಂದೆ, ಲಂಬೋದರ ಹೆಗಡೆ, ಸುಹಾಸ ಕರಬ ಶಿಬಿರದ ಗುರುಗಳಾಗಿ, ಸುದೀಪ ಉರಾಳ, ಮನೋಜ್ ಆಚಾರ್, ಶಶಾಂಕ್, ಸ್ಕಂದ ಉರಾಳ ಹಿಮ್ಮೇಳವಾದಕರಾಗಿ ಸಹಕರಿಸಿದರು.
ಕಳೆದ 12 ವರ್ಷಗಳಿಂದ ಮಕ್ಕಳ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವರಲ್ಲಿ ಅಂತಸ್ಥವಾಗಿರುವ ಕಲಾವಿದನನ್ನು ಪ್ರಚೋದಿಸಿ ಹೊರ ಹೊಮ್ಮಿಸುವ ಹಾಗೂ ಕಲೆಗೆ ಒತ್ತು ಕೊಡುವ ದಿಸೆಯಲ್ಲಿ ಉತ್ತರಹಳ್ಳಿ ಸಮೀಪದ ಚಿಕ್ಕಲ್ಲಸಂದ್ರದ ಕೆ.ಎಸ್.ಆರ್.ಟಿ.ಸಿ.ಲೇಔಟ್ ಶ್ರೀ ಸಿದ್ಧಿ ಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ನಡೆಸಿಕೊಂಡು ಬರುತ್ತಿರುವ “ಕಲಾವಿಕಸನ ಶಿಬಿರ” ನಿನ್ನೆ ಸಮಾರೋಪಗೊಂಡಿತು.
ಕೇವಲ ಒಂದೋ ಎರಡೋ ಚಟುವಟಿಕೆಗಳಿಗೆ ಸೀಮಿತ ಗೊಂಡಿರದೆ ಯಕ್ಷಗಾನ, ನಾಟಕ, ಜಾನಪದ, ಹಾಡು ನೃತ್ಯ, ಕರಾಟೆ, ಯೋಗ ಚಿತ್ರಕಲೆ, ಮಣ್ಣಿನ ಕರಕುಶಲತೆ ಹೀಗೆ ವೈವಿಧ್ಯಮಯ ರಚನಾತ್ಮಕ ವಿಷಯಗಳಿಗೆ ಮಕ್ಕಳಲ್ಲಿ ಮುಖಾಮುಖಿಯಾಗಿಸುವ ರೀತಿಯಲ್ಲಿ ಪ್ರತೀ ಭಾರಿಯೂ ನಾವು ಶಿಬಿರವನ್ನು ವಿನ್ಯಾಸ ಮಾಡುತ್ತಿರುವುದಾಗಿ ಯಕ್ಷಗಾನ ನಿರ್ದೇಶಕರು ಹಾಗೂ ಕಲಾಕದಂಬದ ನಿರ್ದೇಶಕರಾದ ಡಾ. ರಾಧಾಕೃಷ್ಣ ಉರಾಳ ತಿಳಿಸಿದರು.
ಶಿಬಿರ ನಿರ್ದೇಶಕರಾದ ಮುರಳೀಧರ ನಾವಡರ ಅವರಿಂದ ಕಲಿತ ಹಾಡು, ಕೇವಲ ಮೂರೇ ವಾರಗಳಲ್ಲಿ ಕಲಿತ ಗಣೇಶ ಜನ್ಮಯಕ್ಷಗಾನ (ಸಹ ನಿರ್ದೇಶನ: ಅದಿತಿ ಉರಾಳ, ನಿತ್ಯ ಗೌಡ), ಕಿಂದರಿ ಜೋಗಿನಾಟಕ, ಪಲ್ಲವಿ, ರಮೇಶ್ ಅವರಿಂದ ಕಲಿತ ನೃತ್ಯ, ಸುರೇಶ್ರ ಮಾರ್ಗದರ್ಶನ ಕರಾಟೆ, ಭಕ್ತಿಗೀತೆ, ಭಾವಗೀತೆ, ದೇಶಭಕ್ತಿ ಗೀತೆ, ವಚನಗಳ ಗಾಯನ, ಕರಾಟೆ, ಚಿತ್ರಕಲೆ, ಹೀಗೆ ವೈವಿಧ್ಯಮಯವಾದ ಸುಮಾರು 150 ನಿಮಿಷಗಳ ಪ್ರದರ್ಶನವನ್ನು ಮಕ್ಕಳು ನೀಡಿದರು.
ವಿಶ್ವನಾಥ ಉರಾಳ, ಪೂಜಾ ಆಚಾರ್ಯ, ಗುರುರಾಜ್, ರಮೇಶ್, ಸೃಜನ, ಡಿಪಿನ್, ಜ್ಞಾನೇಂದ್ರ, ತೇಜಸ್, ರಜತ್, ಪ್ರದೀಪ್ ಮೊದಲಾದವರು ನೇಪಥ್ಯ ನೆರವು ನೀಡಿದರು.
ಕೇವಲ ಬೇಸಿಗೆಯ ಶಿಬಿರವಾಗಷ್ಟೆ ಉಳಿಯದೆ ಈ ಕಲೆಯ ನಿರಂತರ ಕಲಿಯುವಿಕೆಗೆ ವಾರಾಂತ್ಯದ ತರಗತಿಗಳನ್ನು ಸಂಸ್ಥೆಯು ಮಾಡಿಕೊಂಡು ಬರುತ್ತಿರುವುದು ಮಕ್ಕಳ ಕಲಾ ಕಲಿಕೆಯ ನಿರಂತರತೆಗೆ ಒಂದು ಅವಕಾಶ ಒದಗಿಸಿದಂತಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಲಾಕದಂಬ ಅರ್ಟ್ ಸೆಂಟರ್, 9448510582 ,9886066732,8310482075
ಹೊಸದಿಲ್ಲಿ: ಕೇರಳದಲ್ಲಿ ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಜರ್ ಮದನಿ ಅವರಿಗೆ ಭದ್ರತೆ ಒದಗಿಸಲು ತಿಂಗಳಿಗೆ 20 ಲಕ್ಷ ರೂಪಾಯಿ ನೀಡಬೇಕೆಂಬ ಕರ್ನಾಟಕ ಪೊಲೀಸರ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದೆ.
ತಿಂಗಳಿಗೆ 20 ಲಕ್ಷ ರೂಪಾಯಿ ಬೇಡಿಕೆಯ ವಿರುದ್ಧದ ಅರ್ಜಿಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಕೇರಳಕ್ಕೆ ಬರಲು ಅನುಮತಿ ಪಡೆದಿದ್ದರೂ, ಕರ್ನಾಟಕ ಪೊಲೀಸರು ಮುಂದಿಟ್ಟಿದ್ದ ಬೇಡಿಕೆಯು ಮದನಿ ಅವರ ಕೇರಳ ಭೇಟಿಗೆ ದೊಡ್ಡ ಅಡ್ಡಿಯಾಗಿತ್ತು.
ಬೆಂಗಳೂರು ಸ್ಫೋಟ ಪ್ರಕರಣದ ಆರೋಪಿ ಮದನಿ ಜಾಮೀನು ಷರತ್ತುಗಳ ಪ್ರಕಾರ ಕರ್ನಾಟಕದಲ್ಲಿ ದೀರ್ಘಕಾಲ ನೆಲೆಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಂದೆಯನ್ನು ಭೇಟಿಯಾಗಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರ ಮದನಿಗೆ ಮತ್ತೆ ಕೇರಳಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು.
ಇದನ್ನು ಅನುಸರಿಸಿ, ಕರ್ನಾಟಕ ಪೊಲೀಸರು 82 ದಿನಗಳ ಕಾಲ ಮದನಿ ಅವರ ಕುಟುಂಬಕ್ಕೆ 60 ಲಕ್ಷ (ತಿಂಗಳಿಗೆ 20 ಲಕ್ಷ ರೂ) ನೀಡುವಂತೆ ಒತ್ತಾಯಿಸಿದರು.
ಮದನಿ ಅವರ ಕೇರಳ ಭೇಟಿಯುದ್ದಕ್ಕೂ ಬೆಂಗಾವಲು ಪಡೆಯುತ್ತಿರುವ 20 ಪೊಲೀಸ್ ಅಧಿಕಾರಿಗಳ ಪ್ರಯಾಣ ಮತ್ತು ವಸತಿ ಸೌಕರ್ಯಗಳಿಗೆ ಈ ಮೊತ್ತವನ್ನು ಬಳಸಲಾಗುವುದು ಎಂದು ಕರ್ನಾಟಕ ಪೊಲೀಸರು ವಿವರಿಸಿದರು.
ಇದರ ವಿರುದ್ಧ ಮದನಿ ಅವರ ಕುಟುಂಬ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಮಂಗಳೂರು: ‘ಒಂದು ಕಾಲಘಟ್ಟದಲ್ಲಿ ತನ್ನ ನಟನಾ ಕೌಶಲ್ಯ ಮತ್ತು ವಿಶಿಷ್ಟ ಹೆಜ್ಜೆಗಾರಿಕೆಯಿಂದ ತೆಂಕುತಿಟ್ಟು ಯಕ್ಷರಂಗವನ್ನು ಆಳಿದ ಅಳಿಕೆ ರಾಮಯ್ಯ ರೈ ಭವಿಷ್ಯದ ಕಲಾವಿದರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಪ್ರತಿ ವರ್ಷ ನಿವೃತ್ತ ಯಕ್ಷಗಾನ ಕಲಾವಿದರ ಮನೆಗೆ ತೆರಳಿ ನೀಡುವ ಸಹಾಯ ನಿಧಿಯು ಒಂದು ಸಾರ್ಥಕ ಸ್ಮೃತಿ ಗೌರವವಾಗಿದೆ’ ಎಂದು ಹಿರಿಯ ಅರ್ಥಧಾರಿ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಹೇಳಿದ್ದಾರೆ.
ಹಿರಿಯ ಯಕ್ಷಗಾನ ಕಲಾವಿದ ಬಿ.ಕೆ.ಚೆನ್ನಪ್ಪ ಗೌಡರ ನಿವಾಸದಲ್ಲಿ ಜರಗಿದ ದಿ.ಅಳಿಕೆ ರಾಮಯ್ಯ ರೈ ಸ್ಮೃತಿ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು.
ಬೆಂಗಳೂರಿನ ದಿ.ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ರೂ. 20,000/- ಯಕ್ಷ ಸಹಾಯ ನಿಧಿಯನ್ನು 2022 – 23ನೇ ಸಾಲಿಗೆ ಇರಾ ಗ್ರಾಮದ ಕೆಂಜಿಲ ಪದವಿನಲ್ಲಿರುವ ಬಿ.ಕೆ.ಚೆನ್ನಪ್ಪ ಗೌಡರಿಗೆ ಗೃಹ ಸಂಮಾನದೊಂದಿಗೆ ಸಮರ್ಪಿಸಲಾಯಿತು. ಮುಂಬಯಿ ಉದ್ಯಮಿ,ಲೇಖಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು.
ದಾಖಲೆಯ 70 ತಿರುಗಾಟ:
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ ಹಾಗೂ ಸಲಹಾ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಅಭಿನಂದನಾ ಭಾಷಣ ಮಾಡಿ ಮಾತನಾಡಿ ‘ಪ್ರಸ್ತುತ 92ರ ಹರೆಯದವರಾದ ಚೆನ್ನಪ್ಪ ಗೌಡರು ತೆಂಕು ಹಾಗೂ ಬಡಗು ತಿಟ್ಟಿನ ಒಟ್ಟು ಹನ್ನೊಂದು ಮೇಳಗಳಲ್ಲಿ 70 ತಿರುಗಾಟಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ. ಯಕ್ಷಗಾನದ ಎಲ್ಲಾ ಬಗೆಯ ವೇಷಗಳನ್ನು ಶ್ರದ್ಧಾ ಪೂರ್ವಕವಾಗಿ ನಿರ್ವಹಿಸಿದ ಅವರೊಬ್ಬ ದಶಾವತಾರಿ’ ಎಂದರು.
ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಮತ್ತು ಸಲಹಾ ಸಮಿತಿ ಸದಸ್ಯ ಉಬರಡ್ಕ ಉಮೇಶ ಶೆಟ್ಟಿ ಸ್ವಾಗತಿಸಿದರು. ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ವಂದಿಸಿದರು. ಟ್ರಸ್ಟ್ ನಿರ್ದೇಶಕರಾದ ಮಹಾಬಲ ರೈ ಬಜನಿ ಗುತ್ತು ಮತ್ತು ಚೆನ್ನಪ್ಪ ಗೌಡರ ಪುತ್ರಿ ರಕ್ಷಿತಾ ಈ ಸಂದರ್ಭದಲ್ಲಿ ಉಪಸಿತರಿದ್ದರು.