Sunday, August 2, 2026
Home Blog Page 84

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ವರ್ತುಲದ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ

ದಿನಾಂಕ 5-8-2023 ಶನಿವಾರದಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ವರ್ತುಲದ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರ ’Pedagogical Training for Teachers’ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕಾನಂದ ವರ್ತುಲದ ಅಡಿಯಲ್ಲಿ ಬರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ, ವಿವೇಕಾನಂದ ಸಿಬಿಎಸ್ಸಿ ಸ್ಕೂಲ್, ನೆಹರೂನಗರ – ಈ ಶಾಲೆಗಳ 153 ಅಧ್ಯಾಪಕರುಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿರುವ ಶ್ರೀ ಸತೀಶ್ ರಾವ್ ಅವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿಕೊಟ್ಟು, ವಿದ್ಯಾರ್ಥಿಗಳಲ್ಲಿ ಭಾವನಾತ್ಮಕ , ಸಾಮಾಜಿಕವಾದ ಬೆಳವಣಿಗೆ ಪ್ರಾಥಮಿಕ ಹಂತದಲ್ಲಿ ಆಗಬೇಕಾದರೆ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಗಾರಗಳು ಅತಿ ಅಗತ್ಯ. ಶಿಕ್ಷಕರಜ್ಞಾನ, ಆಲೋಚನೆಗಳು ಅಗಾಧವಾಗುವುದರೊಂದಿಗೆ ದೇಶದ ಪ್ರಗತಿಯಾಗಲಿ ಎಂಬುದಾಗಿ ಶುಭ ಹಾರೈಸಿದರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವಂತಹ ಡಾ|ಎಂ.ಶಿವಪ್ರಕಾಶ್ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಮಾತನಾಡಿ, ದೇಶಸಮೃದ್ಧ ಸದೃಢವಾಗುವಂತಹ ಕಡೆಗೆ ಶಿಕ್ಷಣವನ್ನು ರೂಪಿಸಬೇಕಾಗಿದೆ ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅತಿ ಪ್ರಮುಖವಾದದ್ದು, ಶಿಕ್ಷಕರುಗುರುಗಳಾಗಿ, ಪರಮಗುರುಗಳಾಗಿ, ಪರಾತ್ಪರಗುರುಗಳಾಗಿ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಎಂದರು.

ಈ ಶೈಕ್ಷಣಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ವೇದಿಕೆಯಲ್ಲಿ, ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರಾಗಿರುವಂತಹ ಶ್ರೀಯುತ ಜಯಪ್ರಸಾದ್ ಕಡಮ್ಮಾಜೆ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಆಡಳಿತ ಮಂಡಳಿ ಅಧ್ಯಕ್ಷರಾಗಿರುವ ಶ್ರೀಮತಿ ವಸಂತಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಸಂಧ್ಯಾ, ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ ಮುಖ್ಯ ಗುರುಗಳಾದ ಶ್ರೀಮತಿ ಸಿಂಧು ವಿ.ಜಿ, ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಗುರುಗಳಾದ ವೀಣಾ ಆರ್ ಪ್ರಸಾದ್, ವಿವೇಕಾನಂದ ವರ್ತುಲದ ಸಂಯೋಜಕರಾಗಿರುವಂತಹ ಶ್ರೀಮತಿ ರೇಖಾ ಆಚಾರ್ಯ ಇವರು ಉಪಸ್ಥಿತರಿದ್ದರು.

ಈ ಶೈಕ್ಷಣಿಕ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೂರ್ಯನಾರಾಯಣ ಕಶೆಕೋಡಿ, ರಾಜೇಶ್ ಶೆಟ್ಟಿ ಹಾಗೆ ಶ್ರದ್ಧಾ ಎಲ್ ರೈ ಭಾಗವಹಿಸಿದ್ದರು.

ಕಾರ್ಯಗಾರವು ಮೂರು ಅವಧಿಯಲ್ಲಿ ನಡೆದಿದ್ದು ಮೊದಲ ಅವಧಿಯಲ್ಲಿ ಕಶೆಕೊಡಿ ಸೂರ್ಯನಾರಾಯಣ ಭಟ್ ಅವರು ಭಾರತೀಯ ಸಂಸ್ಕೃತಿ ಮತ್ತು ಶಿಕ್ಷಣ ಎಂಬ ವಿಷಯದ ಬಗ್ಗೆ ಮಾತನಾಡಿ, ಭದ್ರ ಭಾರತದ ಬುನಾದಿಯನ್ನು ಹೊತ್ತಿರುವ ಶಿಕ್ಷಕರು ಮಗುವಿಗೆ ದಾರಿ ತೋರಿಸುವ ದೀಪವಾಗಬೇಕು ಹಾಗೆ ವಿದ್ಯೆಯಿಂದ ವ್ಯಕ್ತಿ ನಿರ್ಮಾಣ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣವಾಗುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಯಾರುಗೊಳಿಸಬೇಕಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬಿ ನಮ್ಮ ಸಂಸ್ಕೃತಿಯೇ ನಮಗೆ ಶಿಕ್ಷಣ ಎಂಬ ಅರಿವನ್ನು ಈ ಕಾಲಘಟ್ಟದಲ್ಲಿ ಮೂಡಿಸುವುದು ಅತಿ ಅನಿವಾರ್ಯವಾಗಿದೆ ಎಂದರು.

ಎರಡನೆಯ ಅವಧಿಗೆ ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿದ ಶ್ರೀರಾಜೇಶ್ ಶೆಟ್ಟಿ ಮಂಗಳೂರು ಇವರು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಯಾವ ರೀತಿ ಬೆಳೆಸಬಹುದು, ಅವರಲ್ಲಿ ಪ್ರಶ್ನೆಗಳನ್ನು ಕೇಳುವಂತಹ ಗುಣಗಳನ್ನು ಶಿಕ್ಷಕರಾದ ನಾವು ಹೇಗೆ ಬೆಳೆಸಬೇಕು ಎಂಬುದರ ಬಗ್ಗೆ ತಿಳಿಸಿದರು. ನಮ್ಮ ಆಚಾರ, ವಿಚಾರ, ನಂಬಿಕೆ ಎಲ್ಲದರ ಹಿಂದಿನ ವೈಜ್ಞಾನಿಕ ಅರಿವು ಏನು ಎಂಬ ಪ್ರಶ್ನೆಗಳಿಗೆ ವೈಜ್ಞಾನಿಕ ಉತ್ತರವನ್ನು ವಿದ್ಯಾರ್ಥಿಗಳು ಕಂಡುಕೊಳ್ಳುವಲ್ಲಿ ಶಿಕ್ಷಕರು ಅವರಿಗೆ ಮಾರ್ಗದರ್ಶನವನ್ನು ನೀಡಬೇಕಾಗಿದೆ, ಅದಕ್ಕಾಗಿ ಶಿಕ್ಷಕನಾದವನಲ್ಲಿ ಬೇಕಾದ ಗುಣಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.

ಮೂರನೇ ಅವಧಿಯ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಶ್ರದ್ಧಾ ಎಲ್. ರೈ ವಿದ್ಯಾರ್ಥಿಗಳಲ್ಲಿ ಕಲಿಕಾನ್ಯೂನತೆಯ ಬಗ್ಗೆ ಮಾಹಿತಿಯನ್ನು ನೀಡಿ, ಅವುಗಳನ್ನು ಬಗೆಹರಿಸುವ ಮಾರ್ಗೋಪಾಯಗಳ ಬಗ್ಗೆ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಆಡಳಿತ ಮಂಡಳಿಯ ಸದಸ್ಯರಾಗಿರುವ ಶ್ರೀಮತಿ ಅಮೃತ ಪ್ರಸಾದ್ , ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರಾದ ಶ್ರೀ ಸತೀಶ್ ಕುಮಾರ್ ರೈ, ಶ್ರೀಮತಿ ಸಂಧ್ಯಾ, ಶ್ರೀಮತಿ ಮಮತಾ ಉಪಸ್ಥಿತರಿದ್ದರು.

ಹೆತ್ತವರ ನಿರ್ಲಕ್ಷ್ಯ – ಚಿರತೆ ದಾಳಿಗೆ ಬಲಿಯಾದ ಆರು ವರ್ಷದ ಬಾಲಕಿ

ತಿರುಮಲ (ಆಂಧ್ರಪ್ರದೇಶ), ಆಗಸ್ಟ್ 12 ಆಂಧ್ರಪ್ರದೇಶದ ತಿರುಮಲದಲ್ಲಿ ಚಿರತೆಯೊಂದು ಆರು ವರ್ಷದ ಬಾಲಕಿಯನ್ನು ಕೊಂದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.


ಲಕ್ಷಿತಾ ಎಂಬ ಬಾಲಕಿ ಶುಕ್ರವಾರ ರಾತ್ರಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಅಲಿಪಿರಿ ವಾಕ್‌ವೇನಲ್ಲಿ ತಿರುಮಲಕ್ಕೆ ಬರುತ್ತಿದ್ದಾಗ ನಾಪತ್ತೆಯಾಗಿದ್ದು, ಶನಿವಾರ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಸಮೀಪ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಲಕ್ಷಿತಾ ಅವರ ತಂದೆ ದಿನೇಶ್, “ತಿರುಮಲದಲ್ಲಿ ಪಾದಚಾರಿ ಮಾರ್ಗವನ್ನು ಹತ್ತುವಾಗ, ಕೆಲವು ಹೆಜ್ಜೆ ಮುಂದಿದ್ದ ಅವರ ಮಗಳು ಬಿಸ್ಕೆಟ್ ಪ್ಯಾಕೆಟ್ ಖರೀದಿಸಲು ಹೋಗಿದ್ದಳು. ಭಕ್ತಾದಿಗಳ ದಟ್ಟಣೆಯಿಂದಾಗಿ ಮುಂದೆ ಬಂದಿದ್ದಾಳೆ ಎಂದುಕೊಂಡೆವು, ಆದರೆ ಸ್ವಲ್ಪ ಸಮಯದ ನಂತರ ನಮಗೆ ಅವಳು ಸಿಗಲಿಲ್ಲ. ನಂತರ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಚಿರತೆ ದಾಳಿಗೆ ಬಲಿಯಾಗಿದ್ದಾಳೆ.


ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುಪತಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ವಿದ್ವಾನ್ ಕಾಂಚನ ಈಶ್ವರ ಭಟ್ ಶಿಷ್ಯವೃಂದದವರಿಂದ ನಾಳೆ ಪುತ್ತೂರಿನಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ಜ್ಞಾನಗಂಗಾ ಪುಸ್ತಕ ಮಳಿಗೆಯು 11.08.2023 ರಿಂದ 13 – 08- 2023 ರ ವರೆಗೆ ಪುತ್ತೂರು ಟೌನ್ ಬ್ಯಾಂಕ್ ಹಾಲ್ ನಲ್ಲಿ ಆಯೋಜಿಸುತ್ತಿರುವ ಪುಸ್ತಕ ಹಬ್ಬ ಮತ್ತು ಪುಸ್ತಕದಾನಿಗಳ ಮೇಳದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನಾಳೆ 13.08.2023ರಂದು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ವಿದ್ವಾನ್ ಕಾಂಚನ ಈಶ್ವರ ಭಟ್ಟರ ಶಿಷ್ಯರಿಂದ 13-08-2023, ಆದಿತ್ಯವಾರ ಅಪರಾಹ್ನ 2 ಗಂಟೆಯಿಂದ 5 ಗಂಟೆಯ ವರೆಗೆ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಹಾಗೂ ಇನ್ನೊಬ್ಬನ ಬಂಧನ – ಮೃತದೇಹಕ್ಕಾಗಿ ವ್ಯಾಪಕ ಹುಡುಕಾಟ



ನಾಗ್ಪುರ: ನಾಗ್ಪುರ ಬಿಜೆಪಿ ನಾಯಕಿ ಸನಾ ಖಾನ್ ನಾಪತ್ತೆಯಾದ ಹತ್ತು ದಿನಗಳ ನಂತರ, ಮಧ್ಯಪ್ರದೇಶದ ಜಬಲ್ಪುರದಲ್ಲಿ ಆಕೆಯ ಪತಿ ಅಮಿತ್ ಸಾಹು ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಅಮಿತ್ ಸಾಹು ಅವರು ಅಪರಾಧವನ್ನು ಒಪ್ಪಿಕೊಂಡರು ಮತ್ತು ನಾಗ್ಪುರ ಪೊಲೀಸರ ತಂಡವು ಜಬಲ್ಪುರದ ಘೋರಾ ಬಜಾರ್ ಪ್ರದೇಶದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿತು.

ಪೊಲೀಸರ ಪ್ರಕಾರ, ಸಾಹು ಅವರು ಶ್ರೀಮತಿ ಖಾನ್ ಅವರ ದೇಹವನ್ನು ನದಿಗೆ ಎಸೆದರು. ಆದರೆ, ಸಂತ್ರಸ್ತೆಯ ದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗ್ಪುರ ನಿವಾಸಿ ಮತ್ತು ಬಿಜೆಪಿ ಅಲ್ಪಸಂಖ್ಯಾತ ಸೆಲ್ ಸದಸ್ಯೆ ಸನಾ ಖಾನ್ ಜಬಲ್ಪುರಕ್ಕೆ ಭೇಟಿ ನೀಡಿದ ನಂತರ ನಾಪತ್ತೆಯಾಗಿದ್ದಾರೆ. ಆಕೆಯ ಕುಟುಂಬದ ಪ್ರಕಾರ, ಆಗಸ್ಟ್ 1 ರಂದು ಶ್ರೀಮತಿ ಖಾನ್ ಅವರು ಕೊನೆಗೆ ಜಬಲ್ಪುರಕ್ಕೆ ಸಾಹುವನ್ನು ಭೇಟಿಯಾಗಲು ಹೋಗಿದ್ದರು. ಸನಾ ಖಾನ್ ನಾಗ್ಪುರದಿಂದ ಖಾಸಗಿ ಬಸ್‌ನಲ್ಲಿ ಹೊರಟರು ಮತ್ತು ನಗರವನ್ನು ತಲುಪಿದ ಮರುದಿನ ತನ್ನ ತಾಯಿಗೆ ಕರೆ ಮಾಡಿದರು. ಆದರೆ, ಸ್ವಲ್ಪ ಸಮಯದ ನಂತರ ಆಕೆ ನಾಪತ್ತೆಯಾಗಿದ್ದಳು.

ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಾಗ್ಪುರ ಪೊಲೀಸ್ ತಂಡ ಮಹಾರಾಷ್ಟ್ರಕ್ಕೆ ತೆರಳಿದ್ದು, ಇಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇಂದಿನಿಂದ (ಆಗಸ್ಟ್ 12ರಿಂದ 15ರವರೆಗೆ) ಪ್ರಭು ಚರುಂಬುರಿ ವತಿಯಿಂದ ಪುತ್ತೂರಿನಲ್ಲಿ ಚರುಂಬುರಿ ಹಬ್ಬ


ಪುತ್ತೂರು: ಪುತ್ತೂರಿನ ಮಂದಿಗೆ ‘ಪ್ರಭು ಚರುಂಬುರಿ’ ಚಿರಪರಿಚಿತ. ಈ ತಾಣಕ್ಕೆ ಭೇಟಿಕೊಡದವರಿಲ್ಲ ಎಂಬಷ್ಟರ ಮಟ್ಟಿಗೆ ಈ ಅಂಗಡಿ ಪ್ರಸಿದ್ಧಿ ಪಡೆದಿದೆ. ಎಷ್ಟೋ ಮಂದಿ ಜನರ ಸಂಜೆಗಳನ್ನು ಸುಂದರಗೊಳಿಸಿದ ಕೀರ್ತಿ ‘ಪ್ರಭು ಚರುಂಬುರಿ’ಯದ್ದು.

ಇದೀಗ ಪುತ್ತೂರಿನ ಜನ ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಪ್ರಭು ಚರುಂಬುರಿ ಪ್ರಾಯೋಜಿತ ಚರುಂಬುರಿ ಹಬ್ಬ ಆಯೋಜನೆಗೊಳ್ಳುತ್ತಿದೆ. ಆಗಸ್ಟ್ 12ರಿಂದ ತೊಡಗಿದಂತೆ 15ರವರೆಗೆ ಈ ಚರುಂಬುರಿ ಜಾತ್ರೆ ಪ್ರತಿ ದಿನ ಸಂಜೆ 4ರಿಂದ 10ರವರೆಗೆ ನಡೆಯಲಿದೆ.

ಸುಮಾರು ಹದಿನೈದು ವಿಧದ ಚರುಂಬುರಿಗಳು ಈ ಹಬ್ಬದಲ್ಲಿ ತಯಾರಾಗಿ ಜನರ ರುಚಿಯನ್ನು ಹೆಚ್ಚಿಸಲಿವೆ.


ಹಳೆಕಾಲದ ಚರುಂಬುರಿ ಆಕರ್ಷಣೆ: ಹಳೆಕಾಲದಲ್ಲಿ ಚರುಂಬುರಿ ಮಾಡುತ್ತಿದ್ದ ವಿಧಾನ ಹಾಗೂ ಆಗಿನ ರುಚಿಯ ಚರುಂಬುರಿಯನ್ನು ಈಗಿನ ಜನಕ್ಕೆ ಒದಗಿಸುವ ಪ್ರಯತ್ನವೂ ಈ ಬಾರಿಯ ಚರುಂಬುರಿ ಹಬ್ಬದಲ್ಲಿ ನಡೆಯಲಿದೆ. ನೆಲದ ಮೇಲೆ ಕುಳಿತು, ಗ್ಯಾಸ್ ಲೈಟ್ ಉರಿಸಿ, ಆಧುನಿಕ ರುಚಿವರ್ಧಕ ಬಳಸದೆ ಮಾಡುವ ಚರುಂಬುರಿ ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಮೂಡಿಬರಲಿದೆ.

ಇಷ್ಟಲ್ಲದೆ ಇಪ್ಪತ್ತು ರೂಪಾಯಿಗಳಿಂದ ತೊಡಗಿ ಐವತ್ತು ರೂಪಾಯಿಗಳವರೆಗಿನ ಚರುಂಬುರಿಗಳು ಈ ಹಬ್ಬದಲ್ಲಿ ಲಭ್ಯ ಇರಲಿವೆ.


ಪುತ್ತೂರಿಗೆ ಈ ಚರುಂಬುರಿ ಹಬ್ಬದ ಕಲ್ಪನೆಯನ್ನು ಪರಿಚಯಿಸಿದವರು ಸುಮಾರು ಇಪ್ಪತ್ತೆದು ವರ್ಷಗಳಿಂದ ಚರುಂಬುರಿ ವ್ಯವಹಾರದಲ್ಲಿ ತೊಡಗಿರುವ ಬಟ್ವಾಳದ ರಾಜೇಶ್ ಪ್ರಭು. ಆರಂಭದಲ್ಲಿ ಬಂಟ್ವಾಳದ ಸುತ್ತಮುತ್ತ ಚರುಂಬುರಿ ವ್ಯವಹಾರ ಮಾಡಿಕೊಂಡಿದ್ದ ರಾಜೇಶ್ ಪ್ರಭು ಅವರು ನಂತರ ಪುತ್ತೂರಿನ ಶ್ರೀಧರ ಭಟ್ ಅಂಗಡಿ ಎದುರು ಒಂದು ದಶಕಕ್ಕೂ ಮೀರಿ ಚರುಂಬುರಿ ವ್ಯವಹಾರ ನಡೆಸಿದವರು.

ಕಳೆದ ಮೂರು ವರ್ಷಗಳಿಂದ ಕೊಂಬೆಟ್ಟಿನ ಬಂಟರ ಭವನದ ಎದುಗಡೆಯ ಜಿ.ಎಲ್. ಸೆಂಟರ್‌ನಲ್ಲಿ ಇವರ ‘ಪ್ರಭು ಚರುಂಬುರಿ’ ಅಂಗಡಿ ಕಾರ್ಯನಿರ್ವಹಿಸುತ್ತಿದೆ. ಕೊರೋನ ಪೂರ್ವದಲ್ಲಿ ಒಮ್ಮೆ ಚರುಂಬುರಿ ಹಬ್ಬವನ್ನು ಆಯೋಜಿಸಿ ಅಪಾರ ಯಶಸ್ಸನ್ನು ಗಳಿಸಿದ್ದಾರೆ. ಇದೀಗ ಚರುಂಬುರಿ ಹಬ್ಬದ ಎರಡನೇ ಅವರತರಣ ಕೆ ಆರಂಭಗೊಳ್ಳುತ್ತಿದೆ. ರಾಜೇಶ್ ಪ್ರಭು ಅವರ ಜತೆಗೆ ಅವರ ಸಹವರ್ತಿಗಳಾದ ಆದರ್ಶ ವಿ, ಮಹೇಶ್, ದೇವಿಪ್ರಸಾದ್, ವನಿತಾ ಹಾಗೂ ಸುಮತಿ ಕೈ ಜೋಡಿಸಲಿದ್ದಾರೆ.


ಪಾರ್ಕಿಂಗ್ ಹಾಗೂ ಆಸನ ವ್ಯವಸ್ಥೆ: ಈ ಬಾರಿಯ ಚರುಂಬುರಿ ಹಬ್ಬಕ್ಕೆ ಆಗಮಿಸುವವರಿಗಾಗಿ ಕೊಂಬೆಟ್ಟಿನ ಪ್ರಭು ಚರುಂಬುರಿ ಅಂಗಡಿಯ ಎದುರಿನ ಬಂಟರ ಭವನದ ಪ್ರಾಂಗಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಅಂತೆಯೇ ಸುಮಾರು ಇನ್ನೂರು ಜನ ಕುಳಿತು ಚರುಂಬುರಿ ಸೇವಿಸುವ ವ್ಯವಸ್ಥೆಯನ್ನು ಜಿ.ಎಲ್.ಸೆಂಟರ್ ಮಾಳಿಗೆಯಲ್ಲಿ ಒದಗಿಸಿಕೊಡಲಾಗುತ್ತಿದೆ.


ಉದ್ಘಾಟನಾ ಸಮಾರಂಭ: ಆಗಸ್ಟ್ 12ರಂದು ಸಂಜೆ 4 ಗಂಟೆಯಿಂದ ಆರಂಭಗೊಳ್ಳುವ ಈ ಹಬ್ಬಕ್ಕೆ ಆ ದಿನ ಸಂಜೆ 6.30ಕ್ಕೆ ಅಧಿಕೃತ ಉದ್ಘಾಟನೆ ನಡೆಯಲಿದೆ. ತುಳುಚಿತ್ರರಂಗ ಹಾಗೂ ರಂಗಭೂಮಿಯ ನಟ ಸತೀಶ್ ಬಂದಳೆ ಚರುಂಬುರಿ ಹಬ್ಬ ಉದ್ಘಾಟಿಸಲಿದ್ದಾರೆ. ಭಟ್ ಅಂಡ್ ಭಟ್ ಯೂಟ್ಯೂಬ್ ವಾಹನಿಯ ಸ್ಥಾಪಕ ಸುದರ್ಶನ್ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಘೋಷಿಸಿದ ಪುತ್ತೂರಿನ ಡಾ.ಶಿವರಾಮ ಭಟ್ ಕ್ಲಿನಿಕ್‌ನ ಕಂಪೌಂಡರ್ ನರಸಿಂಹ ಭಟ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಕರ್ನಾಟಕದ ಅವಿಭಾಜ್ಯ ಅಂಗವಾದ ಕಾಸರಗೋಡಿನಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಚಟುವಟಿಕೆಗಳು ಶ್ಲಾಘನೀಯ: ಹಾದಿಗಲ್ಲು ಡಾ. ಲಕ್ಷ್ಮೀನಾರಾಯಣ

ಕಾಸರಗೋಡು: ಸಿರಿಬಾಗಿಲು ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ರಾಮಾಯಣ ಮಹಾಸಾಚರಣೆಯ ಪ್ರಯುಕ್ತ ಯಕ್ಷಗಾನ ತಾಳಮದ್ದಲೆ- ಭಜನೆ -ಪ್ರವಚನ ಕಾರ್ಯಕ್ರಮಕ್ಕೆ ಡಾ. ಲಕ್ಷ್ಮೀನಾರಾಯಣ ಹಾದಿಗಲ್ಲು ,ಧರ್ಮದರ್ಶಿಗಳು, ಶ್ರೀ ಅಭಯನೃ ಸಿಂಹ ದೇವಸ್ಥಾನ , ಹಾದಿಗಲ್ಲು ತೀರ್ಥಹಳ್ಳಿ ತಾಲೂಕು ಇವರು ಚಾಲನೆ ನೀಡಿದರು.

ಕಾಸರಗೋಡು ಪ್ರದೇಶವು ಕರ್ನಾಟಕದ ಅವಿಭಾಜ್ಯ ಅಂಗ ಯಾವುದೋ ಕಾರಣದಿಂದ ಕೇರಳ ಪಾಲಾಯಿತು. ಆದರೂ ನಮ್ಮ ಭಾವನೆಗಳಲ್ಲಿ ಕಾಸರಗೋಡು ನಮ್ಮದೇ, ಕರ್ನಾಟಕದ್ದೇ ಎಂಬುದಾಗಿ. ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರಕ್ಕೆ ಕಾಸರಗೋಡಿನ ಕೊಡುಗೆ ಮರೆಯಲಸದಳ. ಕೈಯಾರರಂತಹ ಕವಿ ಶ್ರೇಷ್ಠರು ಮೆರೆದ ನಾಡು.

ಯಾವುದೇ ವಿಚಾರಕ್ಕೂ ಹಿನ್ನಡೆ ಎಂಬುದೇ ಇಲ್ಲ. ಯಾಕೆಂದರೆ ಸಿರಿಬಾಗಿಲು ಪ್ರತಿಷ್ಠಾನದಂತಹ ಸಾಂಸ್ಕೃತಿಕ ಕನ್ನಡಪರ ಸಂಸ್ಥೆಗಳು ಹತ್ತು ಹಲವು ಚಟುವಟಿಕೆಗಳ ಮೂಲಕ ಸಂಸ್ಕೃತಿಯನ್ನು ಮೆರೆಸುವಂತೆ ಮಾಡುತ್ತಿದೆ.

ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದಂತಹ ಶ್ರೀ ರಾಮಕೃಷ್ಣ ಮಯ್ಯ ಇವರ ನೇತೃತ್ವದ ಪ್ರತಿಷ್ಠಾನ ಈಗಾಗಲೇ ವಿಶ್ವ ವ್ಯಾಪಕವಾಗಿದೆ. ಇಂತಹ ಸಾಂಸ್ಕೃತಿಕ ಕ್ಷೇತ್ರದಲ್ಲಿ ಪಾಲ್ಗೊಳ್ಳುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದರು. ರಾಮಾಯಣ ಮಾಸ ಆಚರಣೆಯ ರಾಮನ ಆದರ್ಶ ಬಗ್ಗೆ ಮನ ಮುಟ್ಟುವಂತೆ ವಿಸ್ತರಿಸಿ ಮಹಾಭಾರತ ಹಾಗೂ ರಾಮಾಯಣ ಹಿಂದೂ ಧರ್ಮದ ಪವಿತ್ರ ಗ್ರಂಥ ಅಂದರು.ಅಯೋಧ್ಯೆಯಲ್ಲಿ ಹಿಂದೆ ಪೇಜಾವರ ಶ್ರೀಗಳ ಜತೆ ಕರಸೇವೆಯಲ್ಲಿ ಶ್ರೀರಾಮನ ದಿವ್ಯ ಮೂರ್ತಿ ಯನ್ನು ಪ್ರತಿಷ್ಠಾಪಿಸಿದ ಸುದಿನ ನೆನಪಿಸಿದರು.

ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ಭಾರತೀಯರ ನಮಗೆಲ್ಲಾ ಸಂತಸ ವಿಚಾರ ಅಂದರು.


ದಿವಾಣ ಗೋವಿಂದ ಭಟ್
ಮುಖ್ಯ ಅತಿಥಿಗಳಾಗಿದ್ದ ಶ್ರೀ ಗೋವಿಂದ ಭಟ್ ದಿವಾಣ ಶ್ರೀ ಅನನ್ಯ ಸೀಡ್ಸ್ ತಾರಿಹಾಳ ಹುಬ್ಬಳ್ಳಿ ಇದರ ವ್ಯವಸ್ಥಾಪಕನಾಗಿದ್ದು ಯಕ್ಷಗಾನದ ದಿಗ್ಗಜ ಮೇರು ಕಲಾವಿದ ದಿವಂಗತ ಲಯಬ್ರಹ್ಮ ಬಿರುದಾಂಕಿತ ಭೀಮ ಭಟ್ಟ ಇವರ ಸುಪುತ್ರರಾಗಿದ್ದಾರೆ.

ಹಿರಿಯರು ಹಿಂದಿನ ಕಾಲದಲ್ಲಿ ಕಷ್ಟದಿಂದ ಉಳಿಸಿ ಬೆಳೆಸಿದ ಪವಿತ್ರ ಕಲೆ ಯಕ್ಷಗಾನ. ಅದನ್ನು ಉಳಿಸುವಲ್ಲಿ ನಾವೆಲ್ಲರೂ ಕೈಜೋಡಿಸಬೇಕು. ಹಿರಿಯರಾದ ದಿವಾಣ ಭಿಮ ಭಟ್ಟರು ಮಾರ್ಗದರ್ಶನದಲ್ಲಿ ಬೆಳೆದು ಬಂದವನು. ಉಧ್ಯಮಿಯಾಗಿದ್ದರೂ ಯಕ್ಷಗಾನಕ್ಕಾಗಿ, ಕಲಾವಿದರಿಗಾಗಿ ಸದಾ ಸಿದ್ದ ಹಸ್ತನಾಗಿದ್ದೇನೆ ಎಂದು ಹೇಳಿದರು.


ಡಾ.ತಲ್ಲೂರು ಶಿವರಾಮ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಡಾಕ್ಟರ್ ತಲ್ಲೂರು ಶಿವರಾಮ ಶೆಟ್ಟಿ ಸಿರಿಬಾಗಿಲು ಪ್ರತಿಷ್ಠಾನದ ಸಾಂಸ್ಕೃತಿಕ ಭವನದ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸಿದರು. ಇದೊಂದು ಅಧ್ಯಯನ ಯೋಗ್ಯ ಭವನ -ಮ್ಯೂಸಿಯಂ ಅಂತೂ ಅತ್ಯದ್ಭುತವಾಗಿದೆ. ಕಾಸರಗೋಡಿನಲ್ಲಿ ಇಂತಹ ಪ್ರಯತ್ನಗಳಿಂದ ಸಿರಿಬಾಗಲು ಪ್ರತಿಷ್ಠಾನದ ಯೋಜನೆ ಚಾರಿತ್ರಿಕವಾಗಿರಲಿ ಅಂದರು.

ಡಾಕ್ಟರ್ ಶ್ರುತಕೀರ್ತಿರಾಜ್ ಉಜಿರೆಯವರು ನಿರೂಪಿಸಿದರು ಶ್ರೀ ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ ಉಪಸ್ಥಿತರಿದ್ದರು ಆ ಬಳಿಕ ಪ್ರಸಿದ್ಧ ಕಲಾವಿದರಿಂದ ಪಾರ್ತಿಸುಬ್ಬ ವಿರಚಿತ ಪಟ್ಟಾಭಿಷೇಕ ಯಕ್ಷಗಾನ ತಾಳಮದ್ಲೆ ಜರಗಿತು.

ಹಿಮ್ಮೇಳ ದಲ್ಲಿ ರಮೇಶ್ ಭಟ್ ಪುತ್ತೂರು, ಮುರಾರಿ ಕಡಂಬಳಿತ್ತಾಯ, ಲಕ್ಮೀಶ ಬೆಂಗ್ರೋಡಿ ಸಹಕರಿಸಿದರೆ,ದಶರಥನಾಗಿ ರಾಧಾಕೃಷ್ಣ ಕಲ್ಚಾರ್ ವಿಟ್ಲ, ಕೈಕೇಯಿಯಾಗಿ ಹರೀಶ್ ಬಳಂತಿಮೊಗರು, ಮಂಥರೆಯಾಗಿ ಬಾಲಕೃಷ್ಣ ಮಣಿಯಾಣಿ ಮವ್ವಾರು, ಶ್ರೀರಾಮನಾಗಿ ಶ್ರುತಕೀರ್ತಿರಾಜ್, ಲಕ್ಷ್ಮಣನಾಗಿ ಲಕ್ಷ್ಮಣ ಕುಮಾರ್ ಮರಕಡ ಭಾಗವಹಿಸಿದರು.


ಇದಕ್ಕೆ ಮೊದಲು ಕೆನರಾ ಬೇಂಕ್ ನವರು ಪ್ರತಿಷ್ಠಾನಕ್ಕೆ ನೀಡಿದ ಮಹೇಂದ್ರ ಕಂಪೆನಿಯ ಜನರೇಟರ್ ನ್ನು ಕಂಪೆನಿಯ ಸದಸ್ಯರು ಉಪಸ್ಥಿತಿಯಲ್ಲಿ ಶ್ರೀ ಮಧುಕರ ಭಾಗವತರು ಚಾಲನೆ ನೀಡಿದರು.

ಸಂಜೆ 7 ರಿಂದ ಶ್ರೀ ಅಯ್ಯಪ್ಪ ಮಹಿಳಾ ಭಜನಾ ಸಂಘ ಬೆದ್ರಡ್ಕ ಇವರಿಂದ ಭಜನೆ, ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಇವರಿಂದ ಪ್ರವಚನ ನಡೆಯಿತು.

ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಕೆ. ಬಾಬು ರೈ ಆಯ್ಕೆ.

ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಗೆ ಕೆ. ಬಾಬು ರೈ ಆಯ್ಕೆ.


ಅಪ್ಪಟ ಕಲೋಪಾಸಕರಾಗಿರುವ ಮೃದಂಗ ವಿದ್ವಾನ್ ಕೋಟೆಕ್ಕಾರು ಬಾಬು ರೈ ಅವರಿಗೆ ಜನ್ಮಶತಮಾನೋತ್ಸವ. ಹರೆಯದಂತೆಯೇ ಇವರ ವಿದ್ವತ್ತಿನ ಘನತೆಗೂ ಶತ-ಮಾನ !

1943ರಲ್ಲಿ ಯಕ್ಷಗಾನ ಮದ್ದಲೆವಾದಕನಾಗಿ ಯಕ್ಷಗಾನ ಕಲಾಕ್ಷೇತ್ರವನ್ನು ಪ್ರವೇಶಿಸಿ ಮಧೂರು ಮೇಳದಲ್ಲಿ ತಿರುಗಾಟ ನಡೆಸಿದ ಇವರಿಗೆ ಸಹೋದರ ಕೋಟೆಕ್ಕಾರ್ ದೇರಣ್ಣ ರೈಗಳೇ ಮೊದಲ ಗುರು. ಜೀವನೋಪಾಯಕ್ಕಾಗಿ ಊರು ತೊರೆದು ಬೆಂಗಳೂರು, ಮೈಸೂರು ಸೇರಿ ಮೈಸೂರು ಮಹಾರಾಜರ ಆಸ್ಥಾನ ವಿದ್ವಾನ್ ಟಿ. ಎಂ. ವೆಂಕಟೇಶ ದೇವರ್ ಅವರೊಂದಿಗೆ ಶಿಷ್ಯತ್ವವನ್ನು ಅಂಗೀಕರಿಸಿಕೊಂಡರು.

ಏಳು ವರ್ಷ ಮೃದಂಗ ಕಲಿತು ಸಂಗೀತ ಕ್ಷೇತ್ರದ ವಿವಿಧ ಪ್ರಕಾರಗಳಲ್ಲಿ ಪರಿಣತಿ ಸಾಧಿಸಿದರು. ಚಲನಚಿತ್ರದಲ್ಲಿಯೂ ನಟಿಸಿದರು. ಆಕಾಶವಾಣಿಯ ಕಲಾವಿದರಾದರು.

ಊರಿಗೆ ಮರಳಿದ ಮೇಲೆ ‘ಕಲಾಸದನ’ ಎಂಬ ಸಂಸ್ಥೆ ಆರಂಭಿಸಿ ಕಲಾಕಾರ್ಯಕ್ರಮಗಳಿಗೆ ಆಸರೆಯಾದರು. ಟಿ. ಆರ್. ಮಹಾಲಿಂಗಂ, ದೊರೆಸ್ವಾಮಿ ಅಯ್ಯಂಗಾರ್, ಬಾಲಮುರಲೀಕೃಷ್ಣ ರಂಥ ದಿಗ್ಗಜರಿಗೆ ಸಾಥಿ ನೀಡಿದರು.

ಯಕ್ಷಗಾನ ಮದ್ದಲೆವಾದಕ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಿಗೆ ಮೃದಂಗ ಹೇಳಿಕೊಟ್ಟರು. ಪುತ್ತಿಗೆ ರಾಮಕೃಷ್ಣ ಜೋಯಿಸ, ಮಾಂಬಾಡಿ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ದಾಮೋದರ ಮಂಡೆಚ್ಚರಂಥ ಭಾಗವತರಿಗೆ ಮದ್ದಲೆ ಸಾಥಿ ನೀಡಿದರು. ಕುರಿಯ ವಿಠಲ ಶಾಸ್ತ್ರಿ ಮಲ್ಪೆ ಶಂಕರನಾರಾಯಣ ಸಾಮಗ, ಕರ್ಗಲ್ಲು ಸುಬ್ಬಣ್ಣ ಭಟ್ಟರಂಥ ಕಲಾವಿದರನ್ನು ರಂಗದ ಮೇಲೆ ಕುಣಿಸಿದರು. ಶೇಣಿ ಗೋಪಾಲಕೃಷ್ಣ ಭಟ್ಟರ ಪ್ರಿಯ ಮಿತ್ರರಾಗಿ ಅವರ ಹರಿಕಥೆಗೆ ತಬಲಾಸಾಥಿ ನೀಡಿದರು.

ಕುದ್ರೆಕೂಡ್ಲು ರಾಮ ಭಟ್, ನಿಡ್ಲೆ ನರಸಿಂಹ ಭಟ್ಟರಂಥ ಕಲಾವಿದರ ಒಡನಾಡಿಯಾದರು. ಮೃದಂಗ-ಮದ್ದಲೆಗಳ ಸಮ್ಯಕ್ ಬಂಧದ ಕುರಿತು ಸದಾ ಚಿಂತನಶೀಲರಾಗಿರುವ ಬಾಬು ರೈಗಳು ‘ಪ್ರತಿಧ್ವನಿ’ ಎಂಬ ಮೃದಂಗ ಪಾಠದ ಕೃತಿಯನ್ನೂ ಬರೆದಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ 75 ವರ್ಷಗಳ ಸಾಂದ್ರ ಅನುಭವ. ತಾಳಬಂಧಗಳ ಕುರಿತು ಮಾತನಾಡಲಾಂಭಿಸಿದರೆ ಬತ್ತದ ವಿದ್ವತ್ ಗಂಗೋತ್ರಿ. ವಿದ್ವತ್ತಿನಷ್ಟೇ ವಿನಮ್ರತೆಯನ್ನೂ ಭೂಷಣವಾಗಿಸಿಕೊಂಡ ಬಾಬು ರೈಗಳಿಗೆ

ಕಾಸರಗೋಡಿನ ಶ್ರೀ ಎಡನೀರು ಮಠದ ಸಭಾಂಗಣದಲ್ಲಿ ಆಗಸ್ಟ್ 15, ಮಂಗಳವಾರ 2023ರಂದು ಸಂಜೆ 5.00 ಗಂಟೆಗೆ ವಿದ್ವಾನ್ ಕೆ. ಬಾಬು ರೈ ಕಾಸರಗೋಡು ಜನ್ಮಶತಮಾನೋತ್ಸವ ಸಮಿತಿಯು ಆಚರಿಸುತ್ತಿರುವ ಜನ್ಮಶತಮಾನೋತ್ಸವ ಸಂಭ್ರಮ-ಅಭಿನಂದನೆ ಕಾರ್ಯಕ್ರಮದಲ್ಲಿ ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ

ಉಡುಪಿಯ ಯಕ್ಷಗಾನ ಕಲಾರಂಗವು ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಸ್ಥಾಪಿಸಿದ 40,000/- ಮೊತ್ತಗಳನ್ನೊಳಗೊಂಡ ‘ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ, ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ನೀಡಿ ಗೌರವಿಸುವುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿರುತ್ತಾರೆ.

ನಾಳೆಯಿಂದ ರಾಮಾಯಣ ಮಾಸಾಚರಣೆ ಮತ್ತು ತಾಳಮದ್ದಳೆ ಸಪ್ತಾಹ

11/08/2023 ಶುಕ್ರವಾರ ಮಧ್ಯಾಹ್ನ 2-30 ರಿಂದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ರಾಮಾಯಣ ಮಾಸಾಚರಣೆ ಮತ್ತು ತಾಳಮದ್ದಳೆ ಸಪ್ತಾಹ ನಡೆಯಲಿದೆ.

ರಾಮಾಯಣ ಮಾಸಾಚರಣೆ ಪ್ರಯುಕ್ತ ತಾಳಮದ್ದಳೆ ಸಪ್ತಾಹ
ಉದ್ಘಾಟನೆ:
ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣ
ಧರ್ಮದರ್ಶಿ
ಶ್ರೀ ಅಭಯಲಕ್ಷ್ಮೀನೃಸಿಂಹ ದೇವಸ್ಥಾನ ಹಾದಿಗಲ್ಲು
ತೀರ್ಥಹಳ್ಳಿ ತಾಲೂಕು
ಶಿವಮೊಗ್ಗ ಜಿಲ್ಲೆ


ಅದ್ಯಕ್ಷತೆ : ಡಾ.ಶಿವರಾಮ ಶೆಟ್ಟಿ ತಲ್ಲೂರು, ಅಧ್ಯಕ್ಷರು, ತಲ್ಲೂರು ಫೇಮಿಲಿ ಟ್ರಸ್ಟ್, ಉಡುಪಿ
ಅತಿಥಿಗಳು: ಶ್ರೀ ದಿವಾಣ ಗೋವಿಂದ ಭಟ್, ನಿರ್ದೇಶಕರು,ಅನನ್ಯ ಫೀಡ್ಸ್, ತಾರಿಹಳ್ಳ, ಹುಬ್ಬಳ್ಳಿ

ಶ್ರೀ ಅವಿನಾಶ್ ರಾವ್ ಬರಂಗಾಯ, ಧರ್ಮಸ್ಥಳ.
ಕಲಾಪೋಷಕರು
ಶ್ರೀ ರಮೇಶ್ ಮಂಜೇಶ್ವರ. ಮಾಜಿ ಉಪಾಧ್ಯಕ್ಷರು, ಕನ್ನಡ ಸಂಘ, ಬೆಹರೈನ್

ತಾಳಮದ್ದಳೆ: ಪಾರ್ತಿಸುಬ್ಬ ವಿರಚಿತ
ಪಟ್ಟಾಭಿಷೇಕ
ಭಾಗವತರು: ಶ್ರೀ ರಮೇಶ್ ಭಟ್ ಪುತ್ತೂರು
ಚೆಂಡೆ: ಮದ್ದಲೆ; ಶ್ರೀ ಮುರಾರಿ ಕಡಂಬಳಿತ್ತಾಯ,ಶ್ರೀ ಲಕ್ಷ್ಮೀಶ ಬೆಂಗ್ರೋಡಿ
ದಶರಥ:ಶ್ರೀ ರಾಧಾಕೃಷ್ಣ ಕಲ್ಚಾರ್
ಕೈಕೇಯಿ:ಶ್ರೀ ಹರೀಶ್ ಬಳಂತಿಮೊಗರು
ಮಂಥರೆ: ಶ್ರೀ ಬಾಲಕೃಷ್ಣ ಮಣಿಯಾಣಿ ಮವ್ವಾರು
ಶ್ರೀರಾಮ: ಡಾ.ಶ್ರುತಕೀರ್ತಿರಾಜ್ ಉಜಿರೆ
ಲಕ್ಷ್ಮಣ ;ಶ್ರೀ ಲಕ್ಷ್ಮಣ ಕುಮಾರ್ ಮರಕಡ

ಕಲಾಪೋಷಕ ಜಯರಾಮ ಭಟ್ಟರ ನಿಧನಕ್ಕೆ ಸಿರಿಬಾಗಿಲು ಪ್ರತಿಷ್ಠಾನ ಸಂತಾಪ

ಕರ್ಣಾಟಕ ಬ್ಯಾಂಕ್ ನ ಮಾಜಿ ಯಂ.ಡಿ. ಕಲಾಪೋಷಕ ಶ್ರೀ ಪಿ. ಜಯರಾಮ ಭಟ್ ರವರ ಅಗಲುವಿಕೆ ತುಂಬಲಾರದ ನಷ್ಟ. ಎಂದು ಸಿರಿಬಾಗಿಲು ಪ್ರತಿಷ್ಠಾನ ತನ್ನ ಸಂತಾಪ ವ್ಯಕ್ತಪಡಿಸಿದೆ.

ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚು ಆರ್ಥಿಕ ಸಹಕಾರ ಬೇಂಕ್ ನಿಂದ ಕೊಡಿಸಿ ಯಕ್ಷಗಾನ ಹಾಗು ಇನ್ನುಳಿದ ಕಲೆ, ಸಾಹಿತ್ಯ ಹೆಚ್ಚು ಪ್ರದರ್ಶನ ಗೊಳ್ಳುವಲ್ಲಿ ಪ್ರಧಾನವಾಗಿದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದ ಚಟುವಟಿಕೆ ಪ್ರೋತ್ಸಾಹಿಸಿದ ಉದಾರಿಗಳು. ಭಗವಂತ ಅವರ ಆತ್ಮಕ್ಕೆ ಸದ್ಘತಿ ಕರುಣಿಸಲಿ ಎಂದು ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. .