ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ ಇದೇ ಬರುವ 16 ನೇ ತಾರೀಕು ಸೋಮವಾರ ನವರಾತ್ರಿ ಶುಭ ಸಂದರ್ಭದಲ್ಲಿ ಸಂಜೆ 4 ಗಂಟೆಗೆ ತೆಂಕುತಿಟ್ಟು ಯಕ್ಷ ಮಾರ್ಗ- 2 ಉದ್ಘಾಟನೆ ಹಾಗೂ ತೆಂಕುತಿಟ್ಟು ಹಿಮ್ಮೇಳ ತರಗತಿ ಆರಂಭವಾಗಲಿದೆ.
ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ತೆಂಕುತಿಟ್ಟು ಯಕ್ಷಮಾರ್ಗ ಒಂದು ಕಾರ್ಯಕ್ರಮ ಕಳೆದ ತಿಂಗಳು ನಡೆದಿರುತ್ತದೆ. ತೆಂಕುತಿಟ್ಟು ಶಾಸ್ತ್ರಿಯ ನಾಟ್ಯದ ಪ್ರಾತ್ಯಕ್ಷಿಕೆ ಹಾಗೂ ದಾಖಲೀಕರಣ -ಸಂವಾದಗಳು ನಡೆಯಲಿದೆ. ದಾಖಲೀಕರಣಗಳು ಸಂಪೂರ್ಣ ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಯನ ಕೇಂದ್ರದಲ್ಲಿ ಶಾಶ್ವತವಾಗಿರುತ್ತದೆ.
ಮುಂದಿನ ದಿನಗಳಲ್ಲಿ ನಾಟ್ಯ ಅಭ್ಯಾಸದ ಕುರಿತು ಅಧ್ಯಯನ ನಡೆಸುವಲ್ಲಿ ಈ ದಾಖಲಿಕರಣಗಳು ಉಪಯುಕ್ತವಾಗಲಿದೆ. ಅದೇ ದಿನ ಮಾಂಬಾಡಿ ಗುರುಗಳ ಸಲಹೆಯಂತೆ ಕುದುರೆ ಕೂಡ್ಲು ರಾಮಮೂರ್ತಿ ಇವರಿಂದ ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ತರಗತಿಯು ಆರಂಭವಾಗಲಿದೆ.
ಈ ಕಾರ್ಯಕ್ರಮವನ್ನು ನಾಡಿನ ಗೌರವಾನ್ವಿತ ಉದ್ಯಮಿಗಳಾದ, ಕಲಾಪೋಷಕರು,ಧಾರ್ಮಿಕ ಮುಖಂಡರಾದ ಶ್ರೀ ಕೆ. ಕೆ. ಶೆಟ್ಟಿ ಅಹಮದ್ ನಗರ, ಮಹಾರಾಷ್ಟ್ರ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳಾದ ಶ್ರೀ ಶಿವರಾಮ ಭಟ್ ಕಾರಿಂಜೆ ಹಳೆಮನೆ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಲೆಯ ಬೆಳವಣಿಗೆಯಲ್ಲಿ ಕಲಾವಿದರಷ್ಟೇ ಪ್ರೇಕ್ಷಕರೂ ಮುಖ್ಯ’ ಸೋದೆ ಶ್ರೀಗಳು
‘ಯಕ್ಷಗಾನ ಕೇವಲ ಮನೋರಂಜನೆಗಾಗಿ ಇರುವ ಕಲೆಯಲ್ಲ. ಅದರಿಂದ ವ್ಯಕ್ತಿತ್ವದ ವಿಕಸನವಾಗುತ್ತದೆ, ನಾವು ಆರಾಧಿಸುವ ದೇವರ ಕಥನಗಳನ್ನು ಅರಿಯುವ ಅವಕಾಶವಾಗುತ್ತದೆ, ಯಕ್ಷಗಾನ ವೀಕ್ಷಿಸುವ ಸಾಮಾಜಿಕರಲ್ಲಿ ಸಂಸ್ಕಾರ ವೃದ್ಧಿಯಾಗುತ್ತದೆ. ಇಂಥ ಯಕ್ಷಗಾನಗಳನ್ನು ಸಂಘಟಿಸಿ, ಯಕ್ಷಗಾನ ಕಲಾವಿದರನ್ನು ಸಂಮಾನಿಸುವುದು ಪುಣ್ಯಪ್ರದವಾದ ಕಾರ್ಯವಾಗಿದೆ.
ಯಕ್ಷಗಾನದ ಬೆಳವಣಿಗೆಯಲ್ಲಿ ಪ್ರೇಕ್ಷಕರು ಕಲಾವಿದರಷ್ಟೇ ಮುಖ್ಯ’ ಎಂದು ಶ್ರೀಸೋದೆ ವಾದಿರಾಜ ಮಠಾಧೀಶ ಶ್ರೀಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು, 7 ಅಕ್ಟೋಬರ್ 2023 ರಂದು ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಜರಗಿದ ‘ಸರ್ಪಂಗಳ ಯಕ್ಷೋತ್ಸವ’ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.
ಹಿರಿಯ ಸ್ತ್ರೀವೇಷಧಾರಿ ಅಂಬಾಪ್ರಸಾದ್ ಪಾತಾಳ ಅವರಿಗೆ ಸರ್ಪಂಗಳ ಸುಬ್ರಹ್ಮಣ್ಯ ಭಟ್ ಯಕ್ಷಗಾನ ಕಲಾಸಾಧಕ ಪ್ರಶಸ್ತಿಯನ್ನು ಮತ್ತು ಚತುರ ಚಕ್ರತಾಳ ವಾದಕ ಬೆಳ್ತಂಗಡಿ ಕೃಷ್ಣ ಶೆಟ್ಟಿ ಅವರಿಗೆ ಸರ್ಪಂಗಳ ಯಕ್ಷಗಾನ ಕಲಾಸೇವಾ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಸಂಮಾನ ಸ್ವೀಕರಿಸಿ ಮಾತನಾಡಿದ ಅಂಬಾಪ್ರಸಾದ ಪಾತಾಳ ಅವರು ಪ್ರಶಸ್ತಿಯನ್ನು ನೀಡಿದ ಸರ್ಪಂಗಳ ಕುಟುಂಬಕ್ಕೆ ಮತ್ತು ಯಕ್ಷಗಾನ ಕಲಾರಂಗ ಸಂಸ್ಥೆಗೆ ಕೃತಜ್ಞತೆ ಹೇಳಿದರು.
ಕೀರ್ತಿಶೇಷರಾಗಿರುವ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರನ್ನು ನೆನಪಿಸಿಕೊಂಡ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು, ‘ಸರ್ಪಂಗಳ ಸುಬ್ರಹ್ಮಣ್ಯ ಭಟ್ಟರು ಯಕ್ಷಗಾನವೂ ಸೇರಿದಂತೆ ಎಲ್ಲ ಕಲೆಗಳನ್ನು ಸದ್ದಿಲ್ಲದೆ ಪ್ರೋತ್ಸಾಹಿಸುತ್ತ ಬಂದವರು.
ಅವರು ಮಾಡಿದ ಸತ್ಕಾರ್ಯಗಳಿಂದಾಗಿ ಅವರ ನೆನಪು ಈಗಲೂ ನಮ್ಮ ನಡುವೆ ಜೀವಂತವಾಗಿದೆ. ಅವರ ಪತ್ನಿ ಮತ್ತು ಮಕ್ಕಳು ಕಳೆದ ಹನ್ನೆರಡು ವರ್ಷಗಳಿಂದ ಆಯೋಜಿಸುತ್ತ ಬಂದಿರುವ ಸರ್ಪಂಗಳ ಯಕ್ಷೋತ್ಸವ-2023ವು ಅವರ ನಿಜವಾಗಿ ಆತ್ಮಸಂತೃಪ್ತಿ ಉಂಟುಮಾಡುತ್ತಿರಬೇಕು’ ಎಂದರು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಸರ್ಪಂಗಳ ಯಕ್ಷೋತ್ಸವದ ಆಯೋಜಕರಾದ ನಳಿನಿ ಸುಬ್ರಹ್ಮಣ್ಯ ಭಟ್, ಡಾ. ಶೈಲಜಾ ಎಸ್., ಡಾ. ನರೇಂದ್ರ ಶೆಣೈ, ಅನಿರುದ್ಧ, ಆವಂತಿಕಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತೆಂಕು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ “ಸಹಸ್ರಕರ” ಯಕ್ಷಗಾನ ಸೊಗಸಾಗಿ ಪ್ರಸ್ತುತಗೊಂಡಿತು.
ಬಡಗು ನಿಟ್ಟಿನ ಪ್ರಸಿದ್ಧ ಸ್ತ್ರೀವೇಷಧಾರಿ ಮೂರೂರು ವಿಷ್ಣುಭಟ್ (65) ಇಂದು ಉತ್ತರ ಕನ್ನಡದ ಸಿದ್ಧಾಪುರದಲ್ಲಿ ನಿಧನ ಹೊಂದಿದರು.
ಗುಂಡುಬಾಳ, ಅಮೃತೇಶ್ವರೀ, ಹಿರೇಮಹಾಲಿಂಗೆಶ್ವರ, ಶಿರಸಿ, ಪೆರ್ಡೂರು, ಮಂದಾರ್ತಿ, ಸಾಲಿಗ್ರಾಮ, ಪೂರ್ಣಚಂದ್ರ ಮೇಳಗಳಲ್ಲಿ ನಾಲ್ಕು ದಶಕಗಳ ಕಲಾ ಸೇವೆ ಗೈದಿದ್ದರು. ದಾಕ್ಷಯಿಣಿ, ಸೀತೆ, ಅಂಬೆ, ಚಂದ್ರಮತಿ, ದಮಯಂತಿ ಮೊದಲಾದ ಪೌರಾಣಿಕ ಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದರು.
ತಮ್ಮ ಭಾವಪೂರ್ಣ ಅಭಿನಯ, ಮಾತುಗಾರಿಕೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ಪ್ರೀತ್ಯಾದರಕ್ಕೆ ಪಾತ್ರರಾಗಿದ್ದರು. ಯಕ್ಷಗಾನ ಕಲಾರಂಗ ಪ್ರಶಸ್ತಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕರಗಳಿಗೆ ಭಾಜನರಾಗಿದ್ದರು.
ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ.ಅವರ ನಿಧಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಸರಗೋಡು: ಯಕ್ಷಗಾನ ಕಲಾವಿದರಿಗೆ ಸಮಗ್ರ ಮಾಹಿತಿ ಇರುವ ತೆಂಕು ತಿಟ್ಟು ಯಕ್ಷಮಾರ್ಗ ಸರಣಿಯ ಮೊದಲ ಪ್ರಾತ್ಯಕ್ಷಿಕೆಯನ್ನು ಹಿರಿಯ ಯಕ್ಷಗಾನ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಗುರುವಾರ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆಸಿಕೊಟ್ಟರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಕ್ಷಗಾನ ಕಲಾಪೋಷಕ ಶ್ರೀಕರ ಭಟ್ ಮುಂಡಾಜೆ, ‘ಈಗಿನ ಯಕ್ಷಗಾನ ಹಾದಿ ತಪ್ಪುತ್ತಿದೆ. ಯಕ್ಷಗಾನ ಪ್ರದರ್ಶನಕ್ಕೂ ನಿಯಂತ್ರಕ ಶಕ್ತಿ ಬೇಕು. ಭಾಗವತರು ನಿರ್ದೇಶಕರು, ಆದರೆ ಅವರಿಗೆ ಹೇಳಲು ದಾಕ್ಷಿಣ್ಯ. ಈ ಕಾರಣದಿಂದಾಗಿ ಯಕ್ಷಗಾನದ ಸತ್ವ ಕ್ಷೀಣಿಸುತ್ತಿದೆ. ಜೊತೆಗೆ, ಯಕ್ಷಗಾನ ಆಡಿಸುವವರು ಕೂಡ “ಬಹುಜನರ ಅಪೇಕ್ಷೆ ಮೇರೆಗೆ” ಎಂದು ಪ್ರೇಕ್ಷಕರ ಮೇಲೆಯೇ ಎಲ್ಲವನ್ನೂ ಹಾಕಿ ನುಣುಚಿಕೊಳ್ಳುತ್ತಾರೆ’ ಎಂದು ವಿಷಾದಿಸಿದರು.
‘ಅಕಾಡೆಮಿಯೊಂದು ಮಾಡಬೇಕಿರುವ ಕಾರ್ಯಕ್ರಮವನ್ನು ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮಾಡುತ್ತಿದ್ದಾರೆ. ಈಗ ಸಮಯವಿದ್ದರೂ ವ್ಯವಧಾನವಿಲ್ಲದ ಈ ಕಾಲದಲ್ಲಿ, ಸಿರಿಬಾಗಿಲು ಪ್ರತಿಷ್ಠಾನವು ಮಾಡುತ್ತಿರುವ ದಾಖಲೀಕರಣಗಳು ಕಲಾವಿದರಿಗೆ ಸದಾ ಕಾಲಕ್ಕೂ ಪ್ರಯೋಜನಕರ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ಮಾತನಾಡಿ, ‘ಯಕ್ಷಗಾನವೊಂದು ಚೌಕಟ್ಟಿನ ಆಧಾರದಲ್ಲಿರುವ ಕಲೆಯಾಗಿದ್ದು, ಆ ಚೌಕಟ್ಟು ಮೀರಿ ಹೋಗಬಾರದು, ಇದು ಗುರು ಪರಂಪರೆಯನ್ನು ಬೆಳೆಸಿದ ಕಲೆ’ ಎಂದರಲ್ಲದೆ, ‘ಈಗಿನ ಗಾನವೈಭವ ಅಥವಾ ನಾಟ್ಯವೈಭವಗಳು ಒಂದು ಕಮ್ಮಟವಾಗಿ ಬದಲಾಗಬೇಕು. ಅದರಿಂದಲೇ ಹೊಸ ಕಲಾವಿದರು ಯಕ್ಷಗಾನಕ್ಕೆ ಸಂಬಂಧಿಸಿದಂತೆ ಏನನ್ನಾದರೂ ಕಲಿಯುವಂತಿರಬೇಕು’ ಎಂದು ಅಭಿಪ್ರಾಯಪಟ್ಟರು.
ಯಕ್ಷಗಾನ ಹೇಗಿತ್ತು, ಅದರಲ್ಲಿ ಏನೆಲ್ಲ ಮಾರ್ಪಾಟು ಮಾಡಬಹುದು ಎಂಬುದನ್ನೆಲ್ಲ ಮನದಟ್ಟು ಮಾಡಿಸಿ, ಮುಂದಿನ ಪೀಳಿಗೆಗೆ ದಾಟಿಸುವ ಸಿರಿಬಾಗಿಲು ಪ್ರತಿಷ್ಠಾನದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಅಮ್ಮಣ್ಣಾಯರು ಹೇಳಿದರು.
ಅತಿಥಿಗಳಾಗಿ ಕಲಾಪೋಷಕ, ಅಮೆರಿಕದ ನಿವಾಸಿ ವಾಸುದೇವ ಐತಾಳ್ ಪಣಂಬೂರು, ಕಲಾವಿದ, ದುಬೈ ನಿವಾಸಿ ಶೇಖರ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ಅವರು ಶುಭ ಹಾರೈಸಿದರು. ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರನ್ನು ಕಾರ್ಯಕ್ರಮದ ಸಂಯೋಜಕರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಪ್ರತಿಷ್ಠಾನದ ಪರವಾಗಿ ಗೌರವಿಸಿದರು. ಕಲಾವಿದ, ನಾಟ್ಯಗುರು ಲಕ್ಷ್ಮಣ ಕುಮಾರ್ ಮರಕಡ ಅವರು ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ, ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಶಾಸ್ತ್ರೀಯ ಚೌಕಟ್ಟಿನಲ್ಲಿ ಯಕ್ಷಗಾನದ ನಾಟ್ಯ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಪ್ರಾತ್ಯಕ್ಷಿಕೆಯನ್ನು ಹಿರಿಯ ಕಲಾವಿದ ಶಂಭಯ್ಯ ಕಂಜರ್ಪಣೆ ನಿರ್ವಹಿಸಿದರು. ಆರಾಧನಾ ಕಲೆಯಾದ ಯಕ್ಷಗಾನವು ಜನಪದವಾಗಿ, ಜಾನಪದೀಯವಾಗಿ ಮತ್ತು ಶಾಸ್ತ್ರೀಯತೆಯ ಚೌಕಟ್ಟು ಸೃಷ್ಟಿಸಿಕೊಂಡು ವಿಕಾಸಗೊಂಡ ಬಗೆಯನ್ನು ಅವರು ವಿವರಿಸಿದರು.
ಯಕ್ಷಗಾನದಲ್ಲಿ ವಂದನೆ, 6 ವಿಧದ ಪಾದ-ಘಾತಗಳು, ಗತಿಗಳು, ತಿತ್ತಿತೈ ಹೆಜ್ಜೆಗಳ ವಿವರಣೆ, ನೃತ್ತ, ನೃತ್ಯ, ನಾಟ್ಯದ ವ್ಯತ್ಯಾಸಗಳು, 7 ವಿಧದ ಮೂಲಭೂತ ಹೆಜ್ಜೆಗಳ ವಿವರಣೆ, ಚಲನೆ-ಸ್ಥಿತಿಗಳನ್ನು ಪ್ರಸ್ತುತಪಡಿಸಿದರು. ದೇಸೀ ಕಲೆಯಾದ ಯಕ್ಷಗಾನವನ್ನು ಶಾಸ್ತ್ರೀಯವಾಗಿ ವಿಕಾಸವಾಗಿಲು ಅವಕಾಶಗಳ, ಸಾಧ್ಯತೆಗಳ ಅಗಾಧತೆಯನ್ನು ಅವರು ತೆರೆದಿಟ್ಟರು. ಜೊತೆಗೆ, ಪೂರ್ವರಂಗದ ಮಹತ್ವವೇನೆಂಬುದನ್ನು ಖಚಿತವಾಗಿ ವಿವರಿಸಿದರು. ಬಳಿಕ ಪ್ರೇಕ್ಷಕರೊಂದಿಗೆ ಸಂವಾದ ಜರುಗಿತು.
ಶ್ರೀಮದ್ ಎಡನೀರು ಮಠದಲ್ಲಿ ಸಿರಿ ಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ತೃತೀಯ ಚಾತುರ್ಮಾಸ್ಯ ಪ್ರಯುಕ್ತ ವಿಶಿಷ್ಟರಂಗ ಸಂಯೋಜನೆಯಲ್ಲಿ ಚಕ್ರವ್ಯೂಹ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.
ಯಕ್ಷಗಾನೀಯ ಹಲವು ಚಟುವಟಿಕೆಗಳ ಕೇಂದ್ರ ಬಿಂದುವಾಗಿರುವ ಸಿರಿ ಬಾಗಿಲು ಪ್ರತಿಷ್ಠಾನದ ಈ ಅಪರೂಪದ ಕಾರ್ಯಕ್ರಮ ವು ಸೇರಿದ ಪ್ರೇಕ್ಷಕವನ್ನು ಸರಿ ಹಿಡಿದವು.
ಥಿಯೇಟರ್ ಯಕ್ಷ (ರಿ) ಸಂಸ್ಥೆ ಪೃಥ್ವಿರಾಜ್ ಕವತ್ತಾರ್ ನೇತೃತ್ವದಲ್ಲಿ ಈ ಪ್ರದರ್ಶನಕ್ಕೆ ನಿರ್ದೇಶಿಸಿದರು.
ತೆಂಕುತಿಟ್ಟು ಯಕ್ಷಮಾರ್ಗ -1 ನಿರಂತರ ಚಟುವಟಿಕೆಗಳು ಕೇಂದ್ರಬಿಂದುವಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ, ಸಾಂಸ್ಕೃತಿಕ ಭವನದಲ್ಲಿ ಸೆಪ್ಟೆಂಬರ್ 28ರಂದು ಸಂಜೆ 4:00ಗೆ ಗಂಟೆಗೆ ತೆಂಕುತಿಟ್ಟು ಯಕ್ಷಮಾರ್ಗ -೧ ಕಾರ್ಯಕ್ರಮ ನಡೆಯಲಿದೆ.
ಇಂದು ಯುವ ಪೀಳಿ ಯು ಯಕ್ಷಗಾನದತ್ತ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯಕ್ಷಗಾನ ನಾಟ್ಯದ ವಿಶೇಷತೆ ಏನು? ಘನತೆ ಏನು? ಶಾಸ್ತ್ರೀಯತೆ ,ಎಂಬಿತ್ಯಾದಿ ವಿಚಾರವಾಗಿ ನಾಟ್ಯದ ಸೂಕ್ಷ್ಮತೆ ಮೂಲಪಾಠ, ಸಪ್ತ ತಾಳಗಳ ನಾಟ್ಯ ವೈಶಿಷ್ಟ್ಯ, ಇತ್ಯಾದಿಗಳ ಬಗ್ಗೆ ಶಾಸ್ತ್ರೀಯವಾಗಿ ಯಕ್ಷಗಾನದ ಹಿರಿಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳು ಇವರಿಂದ ಪ್ರಾತ್ಯಕ್ಷಿಕೆ ನಡೆಯಲಿದೆ.
ಇಂದಿನ ಯಕ್ಷಗಾನದ ನಾಟ್ಯ ಶಿಕ್ಷಕರು, ಹವ್ಯಾಸಿ ಕಲಾವಿದರು, ವೃತ್ತಿ ಕಲಾವಿದರು, ಅಭ್ಯಸಿಸುವ ವಿದ್ಯಾರ್ಥಿಗಳು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪ್ರತಿಷ್ಠಾನದ ವಿನಮ್ರ ವಿನಂತಿ.
ಕೆ.ಯಂ.ಸಿ.ಹಾಸ್ಪಿಟಲ್ ಅತ್ತಾವರ ಮಂಗಳೂರು ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಜನಪ್ರಿಯ ಸಂಸ್ಥೆಯಾದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಉಚಿತ ವೈದ್ಯಕೀಯ ತಪಾಸಣೆ ನಡೆಯಿತು. ಗಡಿನಾಡು ಕಾಸರಗೋಡಿನ ಹಿರಿಯ ವೈದ್ಯ ಡಾ. ಬಿ.ಯಸ್. ರಾವ್ ಅವರು ದೀಪಬೆಳಗಿಸಿ ಉದ್ಘಾಟಿಸಿ ಗ್ರಾಮೀಣ ಪ್ರದೇಶದ ಜನರಲ್ಲಿ ಆರೋಗ್ಯ ದ ಬಗ್ಗೆ ಜಾಗೃತಿ ಮೂಡಿಸುವ ಶಿಬಿರ ನಡೆಸುತ್ತಿರುವ ಕೆ.ಯಂ.ಸಿ.ಯವರ ಕಾರ್ಯ ಸ್ತುತ್ಯರ್ಹ ವೆಂದರು.
ಸಾಂಸ್ಕೃತಿಕ ವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ಪ್ರತಿಷ್ಠಾನ ತನ್ನ ಸಾಂಸ್ಕೃತಿಕ ಕ್ಷೇತ್ರದ ಹೊರತಾದ ಚಟುವಟಿಕೆ ಮೆಚ್ಚುವಂತಹದು. ಈ ಹಿಂದೆ ಕೊವಿಡ್ ಸಮಯದಲ್ಲೂ ಪ್ರತಿಷ್ಠಾನವು ಕೊರೋನಾ ಯಕ್ಷಗಾನದ ಮೂಲಕ ಸಮಾಜಕ್ಕೆ ಜಾಗೃತಿ ಮೂಡಿಸಿ ವಿಶ್ವ ಆರೋಗ್ಯ ಸಂಸ್ಥೆಯ ಮೆಚ್ಚುಗೆಗೆ ಪಾತ್ರರಾದುದನ್ನು ನೆನಪಿಸಿದರು.
ಕೆ.ಯಂ.ಸಿ.ಯ ಕ್ಯಾನ್ಸರ್ ತಜ್ಞ ವ್ಯೆದ್ಯರಾದ ಡಾ.ಅಭಿಷೇಕ್ ಕೃಷ್ಣ ಅವರು ಕ್ಯಾನ್ಸರ್ ಕುರಿತಾದ ಮಾಹಿತಿ ನೀಡಿದರು. ನಾಗರಿಕರು ದುಶ್ಟಟ ದಿಂದ ಮುಕ್ತರಾಗಿ , ಹಿತ ಮಿತವಾದ ಆಹಾರ ಸೇವನೆ ಯಿಂದ ಆರೋಗ್ಯ ವಂತರಾಗಿರಿ. ಕ್ಯಾನ್ಸರ್ ರೋಗಿಗಳು ಭಯ ಪಡ ಬೇಕಾಗಿಲ್ಲ. ಈಗ ರೋಗ ಲಕ್ಷಣಗಳು ಯಾವ ಹಂತದಲ್ಲಿದ್ದರೂ ಈಗ ಗುಣಪಡಿಸಬಹುದು.
ಕೆ.ಯಂ. ಸಿ.ಯ ಶಿಬಿರದ ಸಂಘಟಕ ಉದಯ ಭಟ್ ರವರು ಈ ಹಿಂದೆ ನಡೆಸಿದ ಹಲವು ಶಿಬಿರ,ಅದರಿಂದ ನಾಗರಿಕರಿಗಾದ ಪ್ರಯೋಜನಗಳು ವಿವರಿಸಿದರು. ಮಣಿಪಾಲ ಕೆ.ಯಂ. ಸಿ.ಯ ನೇತ್ರ ತಜ್ಞೆ ಡಾ.ಶೈಲಜಾ, ಮಂಗಳೂರಿನ ಡಾ. ನಾರಾಯಣ ಮಧೂರು. ಡಾ.ರಾಜಾರಾಮ ದೇವಕಾನ, ಶಿವನಾರಾಯಣ ಗೆಳೆಯರ ವಾಟ್ಸಾಪ್ ಬಳಗದ ಅಧ್ಯಕ್ಷರಾದ ಶ್ರೀ ವಾಸುದೇವ ಕಾರಂತ ಉಪಸ್ಥತರಿದ್ದರು.
ಶಿವನಾರಾಯಣ ಗೆಳೆಯರ ವಾಟ್ಸಾಪ್ ಬಳಗದ ವತಿಯಿಂದ ಸಿರಿಬಾಗಿಲು ಪ್ರತಿಷ್ಠಾನಕ್ಕೆ ಬೃಹತ್ ಮೊತ್ತದ ಪಾತ್ರೆ ಸಾಮಗ್ರಿಗಳನ್ನು ಬಳಗದ ಸದಸ್ಯರು ಜತೆ ಗೂಡಿ ಡಾ.ಬಿ.ಯಸ್. ರಾವ್ ಮುಖಾಂತರ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಇವರಿಗೆ ಹಸ್ತಾಂತರಿಸಿದರು. ರಾಮಕೃಷ್ಣ ಮಯ್ಯ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಶ್ರೀ ಜಗದೀಶ ಕೆ.ಕೂಡ್ಲು ಇವರು ನಿರೂಪಿಸಿ, ಶ್ರೀ ಮೋಹನ್ ಕುಮಾರ್ ಶೆಟ್ಟಿ ಸಿರಿಬಾಗಿಲು ವಂದಿಸಿದರು. ಆ ಬಳಿಕ ಪ್ರಸಿದ್ದ ವೈದ್ಯರುಗಳಿಂದ 335 ಕ್ಕೂ ಹೆಚ್ಚು ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಸಿರಿಬಾಗಿಲು ಪ್ರತಿಷ್ಠಾನದ ವತಿಯಿಂದ ಉಚಿತ ಕನ್ನಡಕ ಹಾಗು ಔಷದಗಳನ್ನು ನೀಡಲಾಯಿತು.