Saturday, March 7, 2026
Home Blog Page 388

ಮುರಲಿ ಕಡೆಕಾರ್ ಅಂಬಲಪಾಡಿ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಪುನರಾಯ್ಕೆ


ಅಂಬಲಪಾಡಿಯ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 62ನೇ ವಾರ್ಷಿಕ ಮಹಾಸಭೆ ಮುರಲಿ ಕಡೆಕಾರ್ ಅಧ್ಯಕ್ಷತೆಯಲ್ಲಿ ಸೆಪ್ಟಂಬರ್ 27, 2020ರಂದು ಜರಗಿತು. ಪ್ರಕಾಶ್ ಹೆಬ್ಬಾರ್ ಗತಸಭೆ ವರದಿ ಮಂಡಿಸಿದರು. ಕೆ.ಜೆ. ಕೃಷ್ಣ ವಾರ್ಷಿಕ ವರದಿ ಮಂಡಿಸಿದರು. ಎ. ನಟರಾಜ ಉಪಾಧ್ಯರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಿ.ಎ ಗಣೇಶ್ ಹೆಬ್ಬಾರ್ ಅವರನ್ನು ಲೆಕ್ಕಪರಿಶೋಧಕರಾಗಿ ನಿಯುಕ್ತಿಗೊಳಿಸಲಾಯಿತು. 2020-21ನೇ ಸಾಲಿಗೆ ಈ ಕೆಳಗಿನ ಆಡಳಿತ ಮಂಡಳಿಯನ್ನು ಆರಿಸಲಾಯಿತು.
ಅಧ್ಯಕ್ಷ : ಮುರಲಿ ಕಡೆಕಾರ್, ಉಪಾಧ್ಯಕ್ಷ : ಕೆ. ಅಜಿತ್ ಕುಮಾರ್, ಕಾರ್ಯದರ್ಶಿ : ಕೆ.ಜೆ ಕೃಷ್ಣ, ಜತೆಕಾರ್ಯದರ್ಶಿ : ಪ್ರಕಾಶ್ ಹೆಬ್ಬಾರ್, ಕೋಶಾಧಿಕಾರಿ : ಎ. ನಟರಾಜ ಉಪಾಧ್ಯ, ಸದಸ್ಯರು : ಕೆ.ಜೆ ಗಣೇಶ್, ಡಾ. ಗಣಪತಿ ಭಟ್, ಪ್ರವೀಣ್ ಉಪಾಧ್ಯ, ನಾರಾಯಣ ಎಂ. ಹೆಗಡೆ, ಮಂಜುನಾಥ ತೆಂಕಿಲ್ಲಾಯ, ಜಯ.ಕೆ, ಮಾಧವ ಕೆ., ರಮೇಶ ಸಾಲಿಯಾನ್, ಕೆ.ಜೆ ಸುಧೀಂದ್ರ, ವಸಂತ ಪಾಲನ್
ಸಲಹಾ ಸಮಿತಿ : ಎಸ್.ವಿ ಭಟ್, ಶ್ರೀರಮಣ ಆಚಾರ್ಯ, ವಿಜಯ್ ಕುಮಾರ್, ವಿಠಲ ಗಾಣಿಗ, ವಿದ್ಯಾಪ್ರಸಾದ್, ಜಗದೀಶ, ಅರವಿಂದ ಆಚಾರ್ಯ, ಪ್ರಶಾಂತ್ ಕೆ.ಎಸ್, ಸುನೀಲ್, ನಚಿಕೇತ
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮುರಲಿ ಕಡೆಕಾರ್ ಮಾತನಾಡಿ ಸಂಸ್ಥೆಯ ನೂತನ ಕಟ್ಟಡ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂದೆ ಅದರಲ್ಲಿ ನಿರಂತರ ಕಲಾ ಚಟುವಟಿಕೆಗಳನ್ನು ನಡೆಸುವ ಹೊಣೆಗಾರಿಕೆ ನಮ್ಮೆಲ್ಲರಿಗಿದೆ ಎಂದು ನುಡಿದರು. ಕಾರ್ಯದರ್ಶಿ ಕೆ.ಜೆ ಕೃಷ್ಣ ಧನ್ಯವಾದ ಸಮರ್ಪಿಸಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಆಯ್ಕೆ

ಉಡುಪಿಯ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ 45ನೇ ಮಹಾಸಭೆಯಲ್ಲಿ ಆಯ್ಕೆಯಾದ ಕಾರ್ಯಕಾರಿ ಸಮಿತಿಯು ಸೆಪ್ಟಂಬರ್ 28, 2020ರಂದು ಸಭೆ ನಡೆಸಿ ಎಂ. ಗಂಗಾಧರ್ ರಾವ್ ಇವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿತು. 2020-21ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳು.
ಉಪಾಧ್ಯಕ್ಷರು : ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಕಾರ್ಯದರ್ಶಿ: ಮುರಲಿ ಕಡೆಕಾರ್, ಜತೆಕಾರ್ಯದರ್ಶಿಗಳು : ನಾರಾಯಣ ಎಂ.ಹೆಗಡೆ, ಎಚ್.ಎನ್. ಶೃಂಗೇಶ್ವರ, ಕೋಶಾಧಿಕಾರಿ : ಮನೋಹರ ಕೆ., ಸದಸ್ಯರು : ಕೆ. ಗಣೇಶ್ ರಾವ್, ತಲ್ಲೂರು ಶಿವರಾಮ ಶೆಟ್ಟಿ, ಬಿ.ನಾರಾಯಣ, ಪ್ರೊ. ಕೆ. ಸದಾಶಿವ ರಾವ್, ಪ್ರೊ.ಎಂ.ಎಲ್.ಸಾಮಗ, ಗಣರಾಜ್ ಭಟ್, ಭುವನಪ್ರಸಾದ್ ಹೆಗ್ಡೆ, ಕೆ.ಎಸ್ ಸುಬ್ರಹ್ಮಣ್ಯ ಬಾಸ್ರಿ, ಅನಂತರಾಜ ಉಪಾಧ್ಯ, ಎಚ್.ಎನ್.ವೆಂಕಟೇಶ್, ವಿಜಯ್ ಕುಮಾರ್ ಮುದ್ರಾಡಿ, ಎ. ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ವಿದ್ಯಾಪ್ರಸಾದ್, ಅಶೋಕ್ ಎಂ, ದಿನೇಶ್ ಪಿ. ಪೂಜಾರಿ, ರಾಜೇಶ್ ನಾವಡ,
ಆಹ್ವಾನಿತರು : ಕೆ. ಗೋಪಾಲ, ರಮೇಶ್ ರಾವ್, ಗಣೇಶ್ ಬ್ರಹ್ಮಾವರ, ಪೃಥ್ವಿರಾಜ್ ಕವತ್ತಾರ್, ಕೆ. ಆನಂದ ಶೆಟ್ಟಿ, ನಾಗರಾಜ ಹೆಗಡೆ, ರಾಜೀವಿ, ಸಂತೋಷ್ ಕುಮಾರ್ ಶೆಟ್ಟಿ, ಕೃಷ್ಣಮೂರ್ತಿ ಭಟ್ ಪುತ್ತೂರು, ಡಾ. ಶೈಲಜಾ, ಕಿಶೋರ್. ಸಿ. ಉದ್ಯಾವರ, ಪ್ರಸಾದ್ ರಾವ್ ಪುತ್ತೂರು, ಸುದರ್ಶನ ಬಾಯರಿ, ಗಣೇಶ್ ರಾವ್ ಎಲ್ಲೂರು, ರಮಾನಾಥ ಶ್ಯಾನುಭಾಗ.

ಪುಚ್ಚೆಕೆರೆ ಕೃಷ್ಣ ಭಟ್ಟ (ಜೀವನ-ಸಾಧನೆ)

‘ಪುಚ್ಚೆಕೆರೆ ಕೃಷ್ಣ ಭಟ್ಟ.  ಜೀವನ-ಸಾಧನೆ’ ಎಂಬ ಈ ಕೃತಿಯು ಲೋಕಾರ್ಪಣೆಗೊಂಡು ಓದುಗರ ಕೈ ಸೇರಿದ್ದು 2017ರಲ್ಲಿ. ಈ ಹೊತ್ತಗೆಯ ಪ್ರಕಾಶಕರು ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ) ಉಜಿರೆ ಎಂಬ ಸಂಸ್ಥೆಯು. ಸಂಪಾದಕರು ಖ್ಯಾತ ತಾಳಮದ್ದಳೆ ಅರ್ಥಧಾರಿ, ವೇಷಧಾರಿ, ಯಕ್ಷಗಾನ ಸಂಘಟಕ, ಶ್ರೀ ಉಜಿರೆ ಎನ್. ಅಶೋಕ ಭಟ್ಟರು. ಕಟೀಲು ಶಾಲೆಯ ಮುಖ್ಯೋಪಾಧ್ಯಾಯರಾಗಿ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಸಂಘಟಕರಾಗಿ ಯಕ್ಷಗಾನ ಕಲಾಪ್ರಿಯರಾಗಿ ಶ್ರೀಯುತರು ಸರ್ವರಿಗೂ ಪ್ರಿಯರಾಗಿದ್ದವರು. ಸರಳ, ಸಜ್ಜನ, ಸಹೃದಯೀ ವ್ಯಕ್ತಿತ್ವವನ್ನು ಹೊಂದಿ ಅಜಾತಶತ್ರು ಎನಿಸಿಕೊಂಡಿದ್ದರು. ಶ್ರೀಯುತರ ಕುರಿತಾಗಿ ಹಿಂದೊಂದು ಲೇಖನವನ್ನು ಬರೆಯುವ ಅವಕಾಶವಾಗಿತ್ತು. ಅವರ ಕುರಿತಾದ ಈ ಪುಸ್ತಕದ ಬಗ್ಗೆ ಬರೆಯಲೂ ಸಂತೋಷಪಡುತ್ತೇನೆ.  ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನ (ರಿ) ಉಜಿರೆ ಎಂಬ ಸಂಸ್ಥೆಯ ಸಂಚಾಲಕರೂ, ಈ ಪುಸ್ತಕದ ಸಂಪಾದಕರೂ ಆದ ಶ್ರೀ ಉಜಿರೆ ಎನ್. ಅಶೋಕ ಭಟ್ಟರು ‘ಅರಿಕೆ-ನೆನವರಿಕೆ’ ಎಂಬ ಬರಹದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಸಹಕರಿಸಿದ ಎಲ್ಲರನ್ನೂ ನೆನಪಿಸಿರುತ್ತಾರೆ. ಬಳಿಕ ಇಪ್ಪತ್ತಾರು ಮಂದಿ ಮಹನೀಯರುಗಳ ಲೇಖನಗಳನ್ನು ನೀಡಲಾಗಿದೆ. ಲೇಖನಗಳನ್ನು ಬರೆದವರು ಡಾ. ಎಂ. ಪ್ರಭಾಕರ ಜೋಶಿ, ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ, ದೂಮಣ್ಣ ರೈ ಪಿ. ಮಂಚಿ, ಉಜಿರೆ ಅಶೋಕ ಭಟ್, ಗಣಪತಿ ಭಟ್ ಬೆತ್ತಸರವು, ವೈ. ಗೋಪಾಲ ಶೆಟ್ಟಿ ಕಟೀಲು, ಕುರಿಯ ಗಣಪತಿ ಶಾಸ್ತ್ರಿ, ಕೆ. ಗೋವಿಂದ ಭಟ್ಟ, ಭುವನಾಭಿರಾಮ ಉಡುಪ, ನಾ. ಕಾರಂತ ಪೆರಾಜೆ, ಸೇರಾಜೆ ಸೀತಾರಾಮ ಭಟ್ಟ, ವಾಸುದೇವ ಶೆಣೈ ಕಟೀಲು, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಟೆಪಡ್ಪು ವಿಷ್ಣು ಶರ್ಮ, ರೆಂಜಾಳ ರಾಮಕೃಷ್ಣ ರಾವ್, ಬೆಳ್ಳಾರೆ ಮಂಜುನಾಥ ಭಟ್, ಪು. ಗುರುಪ್ರಸಾದ್ ಭಟ್ ಕಟೀಲು, ಎನ್. ಸವಿತಾ ಕೃಷ್ಣ ಭಟ್ ಕೋಕಳ, ಶ್ರೀಮತಿ ಅನಿತಾ ನರೇಶ್ ಮಂಚಿ, ಪಿ.ಕೆ. ವೆಂಕಟ್ರಮಣ ಭಟ್, ಶ್ರೀಕೃಷ್ಣ ಭಟ್ ಮಾದಕಟ್ಟೆ, ವಿದುಷಿ ಶ್ರೀಮತಿ ಪಾರ್ವತಿ ಭಟ್, ಶ್ರೀಮತಿ ವಸಂತಲಕ್ಷ್ಮಿ, ಶ್ರೀಮತಿ ಅನುರಾಧ, ವಿ. ಮಹೇಶ್ ಕುಮಾರ್ ಕನ್ಯಾನ, ದೀಪ್ತಿ ಪಟಿಕ್ಕಲ್ಲು ಇವರುಗಳು. ವಿದ್ವಾಂಸರಾದ ಪುಚ್ಚೆಕೆರೆ ಕೃಷ್ಣ ಭಟ್ಟರ ಬಗ್ಗೆ ಬರೆದ ಲೇಖನಗಳನ್ನು ನೀಡಲಾಗಿದೆ. ಬಳಿಕ ಪುಚ್ಚೆಕೆರೆ ಕೃಷ್ಣ ಭಟ್ಟರ ಬಗ್ಗೆ ಈ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ನಾಲ್ಕು ಬರಹಗಳನ್ನು ನೀಡಲಾಗಿದೆ. ಬರೆದವರು ಡಾ. ರಾಧಾಕೃಷ್ಣ ಭಟ್ ಪೆರ್ಲ, ಎಲ್. ಎನ್. ಭಟ್ ಮಳಿ, ಪದ್ಮನಾಭ ಕಟೀಲು, ದುಬೈ, ಡಾ. ಎಂ. ಪ್ರಭಾಕರ ಜೋಶಿ. ಬಳಿಕ  ಪುಚ್ಚೆಕೆರೆ ಶ್ರೀ ಕೃಷ್ಣ ಭಟ್ಟರು ಪಡೆದ ಪ್ರಶಸ್ತಿ, ಸನ್ಮಾನ, ಪುರಸ್ಕಾರ, ಗೌರವಾರ್ಪಣೆ, ಅಭಿನಂದನೆಗಳ ವಿವರಗಳನ್ನೂ ನೀಡಿರುತ್ತಾರೆ. ಈ ಪುಸ್ತಕದಲ್ಲಿ ಸುಮಾರು ಹದಿನೈದು ಛಾಯಾಚಿತ್ರಗಳನ್ನು ನೀಡಲಾಗಿದ್ದು ಹೊರ ಆವರಣದಲ್ಲಿ ವಿದ್ವಾನ್ ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯರು  ಪುಚ್ಚೆಕೆರೆ ಕೃಷ್ಣ ಭಟ್ಟರ ಬಗೆಗೆ ಆಡಿದ ನಲ್ನುಡಿಗಳನ್ನು ನೀಡಲಾಗಿದೆ. ಪುಚ್ಚೆಕೆರೆ ಕೃಷ್ಣ ಭಟ್ಟ ಶ್ರೇಷ್ಠ ವ್ಯಕ್ತಿತ್ವ, ಉತ್ತಮ ಪುಸ್ತಕ. ಇದು ಅವರಿಗೆ ಅರ್ಪಿಸಿದ ಗೌರವವೇ ಹೌದು. 

ಲೇಖಕ: ರವಿಶಂಕರ್ ವಳಕ್ಕುಂಜ 

ಡಾ. ಶಿವರಾಮ ಕಾರಂತ ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆ – ಕಿರಿಯ ಬಲಿಪ ನಾರಾಯಣ ಭಾಗವತರ ಕೃತಿಗಳು

ಈ ಕೃತಿಯು ತೆಂಕುತಿಟ್ಟಿನ ಹಿರಿಯ ಶ್ರೇಷ್ಠ ಭಾಗವತರಾದ  ಕಿರಿಯ ಬಲಿಪ ನಾರಾಯಣ ಭಾಗವತರು ರಚಿಸಿರುವ ಐದು ಯಕ್ಷಗಾನ ಪ್ರಸಂಗಗಳನ್ನು ಒಳಗೊಂಡ ಸಂಪುಟವು. ಡಾ. ಶಿವರಾಮ ಕಾರಂತ  ಸಂಸ್ಮರಣ ಯಕ್ಷಗಾನ ಪ್ರಸಂಗ ಮಾಲಿಕೆಯಾಗಿ ಈ ಸಂಪುಟವು ಪ್ರಕಟವಾಗಿರುವುದು ಸಂತೋಷದ ವಿಚಾರ. ಇದು ಯಕ್ಷಗಾನಕ್ಕೆ ಅನುಪಮ ಕೊಡುಗೆಗಳನ್ನು ನೀಡಿದ, ಮೇರು ವ್ಯಕ್ತಿತ್ವವನ್ನು ಹೊಂದಿದ ಡಾ. ಶಿವರಾಮ ಕಾರಂತರಿಗೆ ಸಲ್ಲಿಸಿದ ಗೌರವವೇ ಹೌದು. ಈ ಪ್ರಸಂಗ ಮಾಲಿಕೆಯ ಪ್ರಕಾಶಕರು ಪದವೀಧರ ಯಕ್ಷಗಾನ ಸಮಿತಿ ಮುಂಬಯಿ. ಸಂಪಾದಕರು ಶ್ರೀ ಎಚ್. ಬಿ. ಎಲ್. ರಾವ್ ಅವರು. ಸಹಕಾರವನ್ನು ನೀಡಿದವರು ಶ್ರೀ ಪು. ಶ್ರೀನಿವಾಸ ಭಟ್, ಕಟೀಲು ಮತ್ತು ಶ್ರೀ ಕೊಡೆತ್ತೂರು ಭುವನಾಭಿರಾಮ ಉಡುಪ ಅವರುಗಳು. ಮುನ್ನುಡಿಯನ್ನು ಬರೆದವರು ವಿದ್ವಾಂಸರಾದ ಡಾ. ಎಂ. ಪ್ರಭಾಕರ ಜೋಶಿ ಅವರು. ಅತ್ಯುತ್ತಮ ಪ್ರಸಂಗಗಳನ್ನು ಹೊಂದಿದ ಒಳ್ಳೆಯ ಸಂಪುಟವನ್ನು ಹೊರತರಲು ಕಾರಣರಾದವರನ್ನು ಡಾ. ಪ್ರಭಾಕರ ಜೋಶಿ ಅವರು ತಮ್ಮ ಮುನ್ನುಡಿ ಲೇಖನದಲ್ಲಿ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಸಂಗ್ರಾಹಕರು ಸಹಕರಿಸಿದ ಮಹನೀಯರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಈ ಪ್ರಸಂಗ ಮಾಲಿಕೆಯು ಪ್ರಕಟವಾದುದು 1998ರಲ್ಲಿ ಈ ಸಂಪುಟದಲ್ಲಿ  ಕಿರಿಯ ಬಲಿಪ ನಾರಾಯಣ ಭಾಗವತರು ಬರೆದ ಅಮೃತಾಪಹರಣಂ (ಗರುಡೋದ್ಭವ), ಕಂತುಕಾವತೀ ಕಲ್ಯಾಣ (ಧರ್ಮಗುಪ್ತ ವಿಜಯ ), ನವಗ್ರಹ ಮಹಾತ್ಮೆ, ದೇವಾಂಗ ಮದನಿಕೆ (ಕಾಳಿಂದಿ ವಿವಾಹ), ಮತ್ಸ್ಯಾವತಾರ ಕೇತಕೀ ಶಾಪ ಎಂಬ ಐದು ಪ್ರಸಂಗಗಳಿವೆ. ಜತೆಗೆ ಪ್ರಸಂಗದಲ್ಲಿ ಪಾತ್ರಗಳ ವಿವರಗಳನ್ನೂ ನೀಡಲಾಗಿದೆ. ಇದು ಸುಮಾರು ನೂರಾ ಎಪ್ಪತ್ತು ಪುಟಗಳಿಂದ ಕೂಡಿದ ಪ್ರಸಂಗ ಸಂಪುಟ. ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ ಈ ಸಂಸ್ಥೆಯು ಪ್ರಕಟಿಸಿದ ಹದಿನೈದನೇ ಪ್ರಸಂಗ ಸಂಪುಟವಿದು. ಎಲ್ಲವೂ ಚಾಲ್ತಿಯಲ್ಲಿರುವ ಪ್ರಸಂಗಗಳು.

ಲೇಖಕ: ರವಿಶಂಕರ ವಳಕ್ಕುಂಜ 

ಹಗಲು ವೇಷ – ಕರ್ನಾಟಕದ ವಿಶಿಷ್ಟ  ಜಾನಪದ ಕಲೆ Hagalu Vesha, Folk Art of Karnataka (ಭಾರತದ ಕಲಾವೈವಿಧ್ಯತೆ – ಭಾಗ 1)

‘ಹಗಲು ವೇಷ’ ಎಂಬುದು ಕರ್ನಾಟಕದ ಒಂದು ವಿಶಿಷ್ಟ ಜಾನಪದ ಕಲೆ. ಇದು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿಯೂ ‘ಪಗತಿ ವೇಷಂ’ ಎಂಬ ಹೆಸರಿನಲ್ಲಿಯೂ ಪ್ರದರ್ಶಿಸಲ್ಪಡುತ್ತದೆ. ಇದು ಹೆಚ್ಚಾಗಿ ಒಂದು ಪ್ರವಾಸಿ ಕಲಾವಿದರ ತಂಡವಾಗಿದ್ದು ಅಲ್ಲಲ್ಲಿ ತೆರೆದ ಸ್ಥಳಗಳಲ್ಲಿ ಪ್ರದರ್ಶನ ನೀಡುತ್ತಾರೆ. ಯಾವುದೇ ರಂಗಸಜ್ಜಿಕೆಯಿಲ್ಲದೆ ನೆಲದ ಮೇಲೆ ಪ್ರದರ್ಶನಗಳನ್ನು ನೀಡುತ್ತಾರೆ. ಹೆಸರೇ ಸೂಚಿಸುವಂತೆ ಇದು ಹಗಲಿನಲ್ಲಿ ಪ್ರದಶನಗೊಳ್ಳುವ ಕಲೆ. ಪೌರಾಣಿಕ ಕಥೆಗಳನ್ನೇ ಹೆಚ್ಚಾಗಿ ಪ್ರದರ್ಶನಕ್ಕೆ ಅಳವಡಿಸುವುದರಿಂದ ಅದಕ್ಕೆ ಬೇಕಾದ ಪರಿಕರಗಳಾದ ಬಣ್ಣಗಾರಿಕೆ, ವೇಷಭೂಷಣಗಳು, ಆಯುಧಗಳು ಎಲ್ಲವನ್ನೂ ಈ ‘ಹಗಲು ವೇಷ’ ಎಂಬ ಕಲೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗುತ್ತದೆ. ಈ ಕಲೆಯಲ್ಲಿ ಯಾವುದೇ ಬರೆದು ಸಿದ್ಧಪಡಿಸಿದ ಪಾಠಾಕ್ಷರಗಳಿರುವುದಿಲ್ಲ. ಹಾಡುಗಾರನು ಹಾರ್ಮೋನಿಯಂ ಜೊತೆಗೆ ಹಾಡಿದ ಹಾಡಿಗೆ ತಬಲಾ ಸಾಥ್ ಇರುತ್ತದೆ. ಕಲಾವಿದರ ತಂಡವು ಸ್ಥಳದಿಂದ ಸ್ಥಳಕ್ಕೆ ತೆರಳುತ್ತಾ ಆಯಾ ಪ್ರದೇಶಗಳಲ್ಲಿ ತಮ್ಮ ಡೇರೆಯ ಬಿಡಾರಗಳನ್ನು ನಿರ್ಮಿಸಿ ಪ್ರದರ್ಶನಗಳನ್ನು ನೀಡುತ್ತಾರೆ. ಕೆಲವೊಮ್ಮೆ ಪೌರಾಣಿಕ ಕಥೆಗಳಲ್ಲದೆ ದೈನಂದಿನ ಜೀನಕ್ಕೆ ಸಂಬಂಧಪಟ್ಟ ಸಾಮಾಜಿಕ ಕತೆಗಳನ್ನೂ ಇತಿಹಾಸದ ಕತೆಗಳನ್ನೂ ಪ್ರದರ್ಶಿಸಲಾಗುತ್ತದೆ. ಪುರುಷರೇ ಕಲಾವಿದರಾಗಿ ಪಾತ್ರಗಳನ್ನು ನಿರ್ವಹಿಸುವ ಪರಂಪರೆಯು ಈ ಜಾನಪದ ಕಲೆಗಿತ್ತು. ಮೊದಲೆಲ್ಲಾ ಸ್ತ್ರೀ ಪಾತ್ರಗಳನ್ನೂ ಪುರುಷರೇ ನಿರ್ವಹಿಸುತ್ತಿದ್ದರು. ಇದೊಂದು  ಆಕರ್ಷಕವೂ ರಂಜನೀಯವೂ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲೆಯೂ ಆಗಿದೆ. 

ಎಸ್. ಪಿ. ಬಾಲಸುಬ್ರಹ್ಮಣ್ಯಂ ಅಗಲಿಕೆಗೆ ದುಃಖಿಸಿದ ಎಸ್. ಜಾನಕಿ  

ಎಸ್. ಪಿ. ಬಾಲಸುಬ್ರಹ್ಮಣ್ಯಂ ಮತ್ತು ತಮ್ಮ ಒಡನಾಟದ ಬಗ್ಗೆ ಜನಪ್ರಿಯ ಗಾಯಕಿ ಎಸ್. ಜಾನಕಿ ಭಾವನಾತ್ಮಕವಾಗಿ ಮಾತನಾಡಿದರು. 

ಎಸ್. ಪಿ. ಬಾಲಸುಬ್ರಹ್ಮಣ್ಯಂ ಸರಳತೆ ಮತ್ತು ಆದರ್ಶಕ್ಕೆ ಈ ವೀಡಿಯೊ ಸಾಕ್ಷಿ

ಎಸ್. ಪಿ. ಬಾಲಸುಬ್ರಹ್ಮಣ್ಯಂ ಸರಳತೆಗೆ ಮತ್ತು ಅವರು ಹಿರಿಯರನ್ನು ಗೌರವಿಸುವ ರೀತಿಯನ್ನು ಮಾತಿನಲ್ಲಿ, ಬರಹದಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅವರು ಎಲ್ಲದಕ್ಕೂ ನಮಗೆ ಆದರ್ಶ ಮತ್ತು ಪೂಜನೀಯ ವ್ಯಕ್ತಿ. ಹಿರಿಯ ಗಾಯಕರಾದ ಕೆ.ಜೆ. ಯೇಸುದಾಸ್ ಬಗ್ಗೆ ಅವರ ಭಕ್ತಿ ಭಾವಗಳು ಅನುಕರಣೀಯ. 

ಯಕ್ಷ ರಸ ಚೇತನ – ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ

‘ಯಕ್ಷ ರಸ ಚೇತನ’ ಎಂಬ ಈ ಹೊತ್ತಗೆಯು ಪ್ರಕಟವಾದುದು 1994ರಲ್ಲಿ. ಕಲಾತಪಸ್ವಿ, ಶ್ರೇಷ್ಠ ಕಲಾವಿದ, ಮಹಾನ್ ಸಾಧಕ,  ಪ್ರಸಂಗಕರ್ತರಾದ, ಶ್ರೀ ಕೀರಿಕ್ಕಾಡು ದಿ| ವಿಷ್ಣು ಭಟ್ಟರ ಕುರಿತಾದ ಪುಸ್ತಕವಿದು. ಶ್ರೀಯುತರು ಸ್ಥಾಪಿಸಿ ಬೆಳೆಸಿದ ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಸುವರ್ಣ ಮಹೋತ್ಸವ ಸಂಭ್ರಮದ ವರ್ಷವೇ ಈ ಪುಸ್ತಕವು ಪ್ರಕಟವಾಗಿತ್ತು. ಪ್ರಕಾಶಕರು ಸುವರ್ಣ ಮಹೋತ್ಸವ ಮತ್ತು  ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ ಸ್ಮಾರಕ ಸಮಿತಿ, ದೇಲಂಪಾಡಿ. ಸಂಪಾದಕರು – ಪ್ರಾಧ್ಯಾಪಕರೂ, ತಾಳಮದ್ದಳೆ ಅರ್ಥಧಾರಿಗಳೂ ಲೇಖಕರೂ ಆಗಿರುವ ಶ್ರೀ ವೆಂಕಟರಾಮ ಭಟ್ಟ  ಸುಳ್ಯ. ಸಲಹೆ ಡಾ. ರಮಾನಂದ ಬನಾರಿ ಮತ್ತು ಚಂದ್ರಶೇಖರ ಏತಡ್ಕ. ‘ನಿಮ್ಮಲ್ಲಿ’ ಎಂಬ ಶೀರ್ಷಿಕೆಯಡಿ ಸಂಪಾದಕರಾದ ಶ್ರೀ ವೆಂಕಟರಾಮ ಭಟ್, ಸುಳ್ಯ. ಅವರು ಈ ಹೊತ್ತಗೆಯ ಬಗೆಗೆ ವಿವರಗಳನ್ನು ನೀಡಿರುತ್ತಾರೆ. ಬಳಿಕ ಸುವರ್ಣ ಮಹೋತ್ಸವ ಮತ್ತು ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ ಸ್ಮಾರಕ ಸಮಿತಿಯ ಪದಾಧಿಕಾರಿಗಳಾಗಿದ್ದವರ ಹೆಸರುಗಳನ್ನು ನೀಡಲಾಗಿದೆ.  ಕೀರಿಕ್ಕಾಡು ಮಾಸ್ತರರ ವಂಶಾವಳೀ ವಿವರವನ್ನು ಕೊಡಲಾಗಿದೆ.

ಈ ಪುಸ್ತಕದಲ್ಲಿ ಒಟ್ಟು ಮೂವತ್ತೊಂದು ಲೇಖನಗಳಿವೆ. ಪೆರ್ಲ ಕೃಷ್ಣ ಭಟ್, ಕಯ್ಯಾರ ಕಿಂಞಣ್ಣ  ರೈ, ಮಂದಾರ ಕೇಶವ ಭಟ್, ರಾಮಚಂದ್ರ ಉಚ್ಚಿಲ, ಅಂಬೆಮೂಲೆ ಗೋವಿಂದ ಭಟ್, ಅಮೃತ ಸೋಮೇಶ್ವರ, ಅರ್ತಿಕಜೆ, ಕೆ.ಎಂ.ರಾಘವ ನಂಬಿಯಾರ್, ಪಟ್ಟಾಜೆ ವೆಂಕಟ್ರಮಣ ಭಟ್, ಎಂ. ಪ್ರಭಾಕರ ಜೋಶಿ, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಕೆದಂಬಾಡಿ ಜತ್ತಪ್ಪ ರೈ, ಕುಂಬಳೆ ನಾರಾಯಣ ಗಟ್ಟಿ, ಕೆ. ವಿ. ಗೋವಿಂದ ಭಟ್ಟ, ವಿಚಿತ್ರ ಏತಡ್ಕ, ಹರಿನಾರಾಯಣ ಮಾಡಾವು, ಡಾ. ರಮಾನಂದ ಬನಾರಿ, ಉಡುಪುಮೂಲೆ ಗೋಪಾಲಕೃಷ್ಣ ಭಟ್,  ಎಸ್.ವಿ. ಖಂಡಿಗೆ, ಗಣೇಶ್ ಕುತ್ಯಾಡಿ, ವೆಂಕಟರಾಜ ಪುಣಿಚಿತ್ತಾಯ,ತುದಿಯಡ್ಕ ವಿಷ್ಣ್ವಯ್ಯ, ಪ್ರೊ| ವೇಣುಗೋಪಾಲ ಕಾಸರಗೋಡು, ಕೇದಗಡಿ ಗುಡ್ಡಪ್ಪ ಗೌಡ, ಗಣಪತಿ ದಿವಾಣ, ಸೊಡಂಕೂರು ತಿರುಮಲೇಶ್ವರ ಭಟ್ಟ, ಡಾ. ಸೀ. ಹೊಸಬೆಟ್ಟು, ಅಡ್ಕ ಗೋಪಾಲಕೃಷ್ಣ ಭಟ್, ಡಾ. ಚಂದ್ರಶೇಖರ ದಾಮ್ಲೆ, ಬಿ.ಕೆ.ಭಟ್ ಇವರುಗಳು ಕೀರಿಕ್ಕಾಡು ಮಾಸ್ತರರ ಕುರಿತು ಬರೆದಿರುವ ಲೇಖನಗಳನ್ನು ನಮಗೆ ಇಲ್ಲಿ ಓದಬಹುದು. ಅಲ್ಲದೆ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕಪ್ಪು ಬಿಳುಪಿನ ಛಾಯಾಚಿತ್ರಗಳೂ ಈ ಪುಸ್ತಕದಲ್ಲಿವೆ. 

ಲೇಖನ: ರವಿಶಂಕರ್ ವಳಕ್ಕುಂಜ

“ನೆನಪಿನುಂಗುರ”  ಸತ್ಯಮೂರ್ತಿ ದೇರಾಜೆ – ಹಳ್ಳಿ ಹಾದಿಯಲಿ ನೆನೆವ ಪದಗಳು 

ನೆನಪಿನುಂಗುರ- ಸತ್ಯಮೂರ್ತಿ ದೇರಾಜೆ ಈ ಕೃತಿಯು ಪ್ರಕಟವಾದುದು 2007ರಲ್ಲಿ. ದಿ| ಶ್ರೀ ಸತ್ಯಮೂರ್ತಿ ಅವರ ವ್ಯಕ್ತಿತ್ವವನ್ನು ಸಮರ್ಥವಾಗಿ ನಿರೂಪಿಸಿದ ನೆನಪಿನ ಸಂಚಿಕೆಯಾಗಿ ಈ ಹೊತ್ತಗೆಯು ಓದುಗರ ಕೈ ಸೇರಿತ್ತು. ದೇರಾಜೆ ಸೀತಾರಾಮಯ್ಯ ಸಂಸ್ಕೃತಿರಂಗ ಚೊಕ್ಕಾಡಿ ಎಂಬ ಸಂಸ್ಥೆಯು ಚಿಗುರೊಡೆದುದು 1999ರಲ್ಲಿ. ಸದ್ರಿ ಸಂಸ್ಥೆಯಲ್ಲಿ ಸಕ್ರಿಯರಾಗಿ ಕಲಾ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು ಶ್ರೀ ಸತ್ಯಮೂರ್ತಿ ದೇರಾಜೆ ಅವರು. ಈ ಸಂಸ್ಥೆಯನ್ನು ಸರ್ವರ ಸಹಕಾರದಿಂದ ಶ್ರೀಯುತರು ಹುಟ್ಟುಹಾಕಿದ್ದರು. ಸಂಸ್ಕೃತಿ ರಂಗದ ರೂವಾರಿಯೇ ಆಗಿದ್ದರು. ತಾಳಮದ್ದಳೆ ಅರ್ಥಧಾರಿಯಾಗಿ, ಉತ್ತಮ ಬರಹಗಾರರಾಗಿ, ಕಲಾಸಂಘಟಕರಾಗಿ, ಸಹೃದಯೀ ಬಂಧುವಾಗಿ ಶ್ರೀ ಸತ್ಯಮೂರ್ತಿ ದೇರಾಜೆ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದವರು. ವಿವಿಧ ಸಹಕಾರೀ ಸಂಸ್ಥೆಗಳಲ್ಲಿ, ಆಡಳಿತ ಮಂಡಳಿಗಳಲ್ಲಿ ಹೊಣೆಯರಿತು ಅತ್ಯುತ್ತಮ ಸೇವೆ ಸಲ್ಲಿಸಿದ್ದರು. ಶ್ರೀಯುತರ ಜೀವಿತಾವಧಿ 1952 – 2005. ಶ್ರೀ ಸತ್ಯಮೂರ್ತಿ ದೇರಾಜೆ ಅವರ ನೆನಪಿನ ಸಂಚಿಕೆ ‘ನೆನಪಿನುಂಗುರ’ ಇದರ ಪ್ರಕಾಶಕರು ದೇರಾಜೆ ಸೀತಾರಾಮಯ್ಯ ಸಂಸ್ಕೃತಿರಂಗ,ಚೊಕ್ಕಾಡಿ. ಸಂಪಾದಕರು ಶ್ರೀ ಲಕ್ಷ್ಮೀಶ ತೋಳ್ಪಾಡಿ. ನೂರಾ ಇಪ್ಪತ್ತನಾಲ್ಕು ಪುಟಗಳಿಂದ ಕೂಡಿದ ಪುಸ್ತಕವಿದು. ಮೊದಲಾಗಿ ಸಂಸ್ಕೃತಿ ರಂಗದ ಅಧ್ಯಕ್ಷರು ಮತ್ತು ಸದಸ್ಯರ ಮನದ  ಮಾತುಗಳನ್ನು ರಂಗದ ಅಂತರಂಗ ಎಂಬ ಬರಹದಡಿ ನೀಡಲಾಗಿದೆ. ಸಂಪಾದಕರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರು ‘ಮರಳಿ ಪಡೆಯುವ ತನಕ’ ಎಂಬ ಶೀರ್ಷಿಕೆಯಡಿ ಲೇಖನವನ್ನು ಬರೆದಿರುತ್ತಾರೆ. ಬಳಿಕ ಒಟ್ಟು ಮೂವತ್ತೊಂಬತ್ತು ಬರಹಗಳನ್ನು ನೀಡಲಾಗಿದೆ. ಶ್ರೀ ಸತ್ಯಮೂರ್ತಿ ದೇರಾಜೆಯವರ ಕುರಿತು ಲೇಖನಗಳನ್ನು ಬರೆದವರು ಡಾ. ಎಂ. ಪ್ರಭಾಕರ ಜೋಶಿ, ವಿದ್ವಾನ್ ಉಮಾಕಾಂತ ಭಟ್ಟ, ವಿದ್ವಾನ್ ಗ. ನಾ. ಭಟ್ಟ, ಉಜಿರೆ ಅಶೋಕ ಭಟ್, ಪಾಲೆಪಾಡಿ ಗಣಪಯ್ಯ ಭಟ್, ಆನೆಕಾರ ಗಣಪಯ್ಯರು, ಕೋಟೆ ವಸಂತಕುಮಾರ, ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ, ಲಕ್ಷ್ಮೀನಾರಾಯಣ ಉಬರಡ್ಕ, ಎಂ.ಬಿ. ಸದಾಶಿವ, ಗಂಗಾಧರ ಬೆಳ್ಳಾರೆ, ಎನ್. ಪದ್ಮನಾಭ ಗೌಡ, ಎನ್. ಶೀನಪ್ಪ, ಎಂ.ಟಿ. ಶಾಂತಿಮೂಲೆ, ಪದ್ಯಾಣ ಗಣಪತಿ ಭಟ್, ಸುಬ್ರಾಯ ಚೊಕ್ಕಾಡಿ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಎಸ್. ಆರ್. ವಿಜಯಶಂಕರ, ಹರೀಶ್ ಕೇರ, ಡಾ. ಶ್ರೀಕೃಷ್ಣ ಚೊಕ್ಕಾಡಿ, ಪದ್ಯಾಣ ಪರಮೇಶ್ವರ ಭಟ್, ವೆಂಕಟರಾಮ ಭಟ್ಟ ಸುಳ್ಯ, ನಾರಾಯಣ ಕಂಜರ್ಪಣೆ, ಕೆ. ರಾಮ ಜೋಯಿಸ, ಜಿ. ಎಸ್. ಉಬರಡ್ಕ, ವತ್ಸಲಾ ಎಂ.ಎನ್, ಪ್ರಸಾದ್ ರಕ್ಷಿದಿ, ಡಾ. ಕೃಷ್ಣಮೂರ್ತಿ ಪಾರೆ, ಮೂರ್ತಿ ದೇರಾಜೆ, ಸತ್ಯನ್ ದೇರಾಜೆ, ಸಾವಿತ್ರಿ ಕೃಷ್ಣ ಬೆಂಗಳೂರು, ಸತ್ಯವತಿ ಉಬರಡ್ಕ, ರಾಧೆ ಯು. ಪ್ರಸಾದ್, ಸತ್ಯಪ್ರೇಮ ಪಾರೆ, ಜಯಂತಿ ದೇರಾಜೆ, ಸುಧನ್ವಾ ದೇರಾಜೆ ಇವರುಗಳು. ಬಳಿಕ ‘ಹಲವು ಚಿತ್ರ-ನೂರು ನೆನಪು’ ವಿಚಾರದಡಿ ಮೂವತ್ತೆರಡು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಿರುತ್ತಾರೆ. ಸಂಸ್ಕೃತಿ ರಂಗದ ಉಪಾಧ್ಯಕ್ಷರಾಗಿದ್ದ ಭಾಗವತ ಶ್ರೀ ಬೊಮ್ಮೆಟ್ಟಿ ಮೋಹನ ಭಟ್ ಅವರು 2006ರಲ್ಲಿ ನಿಧನರಾಗಿದ್ದು ಅವರ ವ್ಯಕ್ತಿತ್ವವನ್ನು ನೆನೆವ ಪದಗಳಾಗಿ ಈ ಸಂಪುಟದಲ್ಲಿ ಅಳವಡಿಸಲಾಗಿದೆ. ಅವರ ಬಗೆಗೆ ಕೆ.ವಿಶ್ವವಿನೋದ ಬನಾರಿ ಮತ್ತು ಸುಧನ್ವಾ ದೇರಾಜೆಯವರು ಬರೆದ ‘ನೆನಪ ನೇವರಿಸುವ ಮೋಹನ’ ಮತ್ತು ‘ಮೌನಕ್ಕೊಂದು ಮೋಹನ ರಾಗ’ ಎಂಬ ಲೇಖನಗಳನ್ನು ನೀಡಲಾಗಿದೆ. ಲೇಖನಗಳ ನಡುವೆ, ಶ್ರೀ ಸತ್ಯಮೂರ್ತಿ ದೇರಾಜೆಯವರು ತಾಳಮದ್ದಳೆ ಅರ್ಥಧಾರಿಯಾಗಿ ಸೃಜನಶೀಲತೆಯಿಂದ ಹೇಳುತ್ತಿದ್ದ ಸಂಭಾಷಣೆಗಳನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ

‘ಮನಸಿಜ ಪಿತ ನೀನು’ – ಯಕ್ಷಗಾನ ವೀಡಿಯೊ

ಮಧುಸೂದನ ಅಲೆವೂರಾಯರ ಯು ಟ್ಯೂಬ್ ಚಾನೆಲ್ ನ ಈ ವಿಡಿಯೋ ಬಹಳವಾಗಿ ಇಷ್ಟವಾಗುತ್ತದೆ.  ಯಾಕೆಂದರೆ ಬಲಿಪರ ಸುಂದರ ಪದ್ಯಕ್ಕೆ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಮದ್ದಳೆಯ ಕೈಚಳಕದ ಜೊತೆ ಸೇರಿದಾಗ ಅದೊಂದು ಅಪೂರ್ವ ಅನುಭವ.