Wednesday, April 23, 2025
Home Blog Page 368

ಯಕ್ಷ ಶಾಂತಲಾ ಪಾತಾಳ – ಶ್ರೀ ಪಾತಾಳ ವೆಂಕಟ್ರಮಣ ಭಟ್ (Yaksha Shanthala Pathala – Sri Pathala Venkatramana Bhat)

‘ಯಕ್ಷ ಶಾಂತಲಾ ಪಾತಾಳ’ ಇದು ಹಿರಿಯ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರ ಅಭಿನಂದನಾ ಕೃತಿ. ಈ ಕೃತಿಯು 2005ರಲ್ಲಿ ಪ್ರಕಟವಾಗಿ ಓದುಗರ ಕೈ ಸೇರಿತ್ತು. ಇದರ ಪ್ರಕಾಶಕರು ಶ್ರೀ ಪಾತಾಳ ಅಭಿನಂದನ ಕೃತಿ ಪ್ರಕಾಶನ ಸಮಿತಿ, ಪುತ್ತೂರು ಇವರು. ಸಂಪಾದಕರು ಶ್ರೀ ಮುಳಿಯ ಶಂಕರ ಭಟ್ಟರು. ಇದು ಒಟ್ಟು ಇನ್ನೂರ ಇಪ್ಪತ್ತೇಳು ಪುಟಗಳನ್ನು ಹೊಂದಿದ್ದು  ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು ಧರಿಸಿದ ವೇಷಗಳ ಬಣ್ಣದ ಮತ್ತು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ನೀಡಲಾಗಿದೆ. ಎಡನೀರು ಮಠಾಧೀಶರಾಗಿದ್ದ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ‘ನೆನಪಿನಾಳದಿಂದ’ ಎಂಬ ಶೀರ್ಷಿಕೆಯಡಿ ನೀಡಿದ ಅನುಗ್ರಹ ಸಂದೇಶವನ್ನು ನೀಡಲಾಗಿದೆ. ಸಂಪಾದಕ ಶ್ರೀ ಮುಳಿಯ ಶಂಕರ ಭಟ್ಟರು ‘ಓದುವ ಮುನ್ನ’ ಎಂಬ ಬರಹದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಸಹಕರಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿದ್ದಾರೆ. ಶ್ರೀ ಮುಳಿಯ ಶಂಕರ ಭಟ್ ಮತ್ತು ಶ್ರೀ ನ. ಕಾರಂತ ಪೆರಾಜೆಯವರು ಬರೆದ ‘ಬದುಕಿನ ಬಣ್ಣ ಮತ್ತು ಬಣ್ಣದ ಬದುಕು’ ಎಂಬ ಲೇಖನವಿದ್ದು ಅದರಲ್ಲಿ ಪಾತಾಳ ವೆಂಕಟ್ರಮಣ ಭಟ್ಟರ ಬದುಕು, ಬಣ್ಣದ ಬದುಕು ಮತ್ತು ಸಂದರ್ಶನದ ವಿವರಗಳನ್ನು ನೀಡಲಾಗಿದೆ. ಬಳಿಕ ಪಾತಾಳದ ನೆನಹುಗಳು, ಸ್ವಾಭೀಮಾನಿ ಕಲಾವಿದ, ಅವಿಸ್ಮರಣೀಯ ಸನ್ನಿವೇಶಗಳು, ಪಾತಾಳದ ಆಳ, ಶಿಲ್ಪಗಳ ಸ್ಪೂರ್ತಿಯಿಂದ ಪಾತ್ರಗಳನ್ನು ತುಂಬಿದ ಪ್ರತಿಭಾವಂತ, ನಂಬರ್ 1 ಸ್ತ್ರೀ ಪಾತ್ರಧಾರಿ, ಸ್ತ್ರೀಪಾತ್ರಗಳೊಳಪ್ರತಿಮ ರತ್ನ, ಜೀವ ತಳೆದು ಬಂದ ಶಿಲಾಬಾಲಿಕೆ, ಸಜ್ಜನ ಒಡನಾಡಿ, ರೂಪಶ್ರೀ ನಾಗಾಂಗನೆ, ನಿಯತ್ತಿನ ಕಲಾವಿದ, ಕಲಾತಪಸ್ವಿ, ಅನನ್ಯ ಕೊಡುಗೆ – ಕೇಶಾಲಂಕಾರ, ಪಡುವಲಪಾಯ ಯಕ್ಷಗಾನ ಸ್ತ್ರೀವೇಷದಲ್ಲಿ ಸುಧಾರಣೆ ಮತ್ತು ಸೌಂದರ್ಯ, ಯಕ್ಷಗಾನ ಪೂರ್ವರಂಗ, ಯಕ್ಷಗಾನ ಅಂದು ಇಂದು, ಯಕ್ಷಗಾನ ಮುಖವರ್ಣಿಕಾ ಪರಂಪರೆ, ಪುರಾಣ ಪ್ರಜ್ಞಾವರ್ಧನ ಯಕ್ಷಗಾನ, ನಮ್ಮ ಯಕ್ಷಗಾನ ಬಯಲಾಟ ಎತ್ತ ಸಾಗುತ್ತಿದೆ, ಯಕ್ಷಗಾನದಲ್ಲಿ ಪರಂಪರೆಯ ಪ್ರಜ್ಞೆ, ಯಕ್ಷಗಾನ ರಂಗಭೂಮಿ ಮತ್ತು ಕೊರಿಯೋಗ್ರಫಿ, ಒಂದು ಅಪೂರ್ವ ಯಕ್ಷಗಾನ ಪ್ರಸಂಗ, ಆಟದೊಳಗಣ ಆಟ, ಪ್ರಸಂಗಗಳಲ್ಲಿ ಸ್ತ್ರೀಪಾತ್ರಗಳು, ಯಕ್ಷಗಾನಕ್ಕೆ ಶಕ್ತಿ ತುಂಬಿಸಿ, ಒಂದು ಮುನ್ನುಡಿ, ಪಾತಾಳದ ನಾಗಕನ್ಯೆ, ದಕ್ಷಿಣ ಕನ್ನಡದಲ್ಲಿ ಯಕ್ಷಗಾನ, ಯಕ್ಷಗಾನ ಅರ್ಥಗಾರಿಕೆಯಲ್ಲಿ ಸ್ವಗತ, ಯಕ್ಷಗಾನದಲ್ಲಿ ಸ್ತ್ರೀ ವೇಷ ಎಂಬ ಬರಹಗಳಿವೆ.

ಲೇಖನಗಳನ್ನು ಬರೆದವರು ಕ್ರಮವಾಗಿ ರಾಜಗೋಪಾಲ ಕನ್ಯಾನ, ಕೆ, ಗೋವಿಂದ ಭಟ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಹಾಸ್ಯಗಾರ ಪೆರುವಡಿ ನಾರಾಯಣ ಭಟ್ಟ, ಕುಂಬಳೆ ಸುಂದರ ರಾವ್, ಕಡತೋಕಾ ಮಂಜುನಾಥ ಭಾಗವತರು, ಡಾ. ಗೋವಿಂದ ಭಟ್ ಅಂಬೆಮೂಲೆ, ಎಚ್. ಶ್ರೀಧರ ಹಂದೆ, ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕೊಳ್ಯೂರು ರಾಮಚಂದ್ರ ರಾವ್, ಕಜೆ ಈಶ್ವರ ಭಟ್, ಪ್ರೊ| ಎಂ.ಎಲ್.ಸಾಮಗ, ಪುಚ್ಚೆಕೆರೆ ಕೃಷ್ಣ ಭಟ್, ಶತಾವಧಾನಿ ಡಾ. ಆರ್.ಗಣೇಶ್, ಬಲಿಪ ನಾರಾಯಣ ಭಾಗವತ, ಅಮೃತ ಸೋಮೇಶ್ವರ, ಮಹಾಬಲ ಕಲ್ಮಡ್ಕ, ಪ್ರೊ| ಟಿ. ಕೇಶವ ಭಟ್ಟ, ತುದಿಯಡ್ಕ ವಿಷ್ಣ್ವಯ್ಯ, ವೆಂಕಟರಾಜ ಪುಣಿಂಚತ್ತಾಯ, ಕೆರೆಮನೆ ಶಂಭು ಹೆಗಡೆ, ಡಾ| ಕಮಲಾಕ್ಷ ಕೆ., ಮೂರ್ತಿ ನಾಯ್ಕಾಪು, ವಿ.ಬಿ.ಅರ್ತಿಕಜೆ, ಕೃಷ್ಣ ಭಟ್ ಪೆರ್ಲ, ತೇಜಸ್ವಿನಿ ಕೀರಿಕ್ಕಾಡು, ಸಂಜೀವ ಶೆಟ್ಟಿ ಅಳಿಕೆ, ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಗಣರಾಜ ಕುಂಬಳೆ. ಈ ಕೃತಿಯ ಕೊನೆಯಲ್ಲಿ ಶ್ರೀ ಪಾತಾಳರಿಗೆ ಸಂದ ಮಾನ-ಸನ್ಮಾನ, ಪಾತಾಳ ವಂಶವಾಹಿನಿ, ಲೇಖಕರ ವಿಳಾಸ, ಶ್ರೀ ಪಾತಾಳ ಅಭಿನಂದನ-ಕೃತಿ ಪ್ರಕಾಶನ ಸಮಿತಿ ಈ ವಿಚಾರಗಳ ಬಗೆಗೆ ಮಾಹಿತಿಗಳನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಯಕ್ಷರಂಗ ಕಂಡ ವಿಸ್ಮಯ – ಎಂಪೆಕಟ್ಟೆ ರಾಮಯ್ಯ ರೈ (Empekatte Ramayya Rai)

ಯಾವುದೇ ಕಲಾಪ್ರಾಕಾರಗಳೇ ಇರಲಿ ಅಥವಾ ಒಂದು ಒಲಿಂಪಿಕ್ಸ್, ವಿಶ್ವಕಪ್ ಗಳಂತಹಾ ಆಟಗಳೇ ಇರಲಿ, ಅಥವಾ ಸಂಶೋಧನೆ, ಯುದ್ಧಗಳೇ ಇರಲಿ ಎಲ್ಲರೂ ಒಂದು ತಂಡವಾಗಿ (Team Work) ಕೆಲಸ ಮಾಡಿದಾಗ ಮಾತ್ರ ಅಲ್ಲಿ ಯಶಸ್ಸು ಬೇಗನೆ ಸಿಗಲು ಸಾಧ್ಯ.

ತನ್ನ ಸಾಮರ್ಥ್ಯವನ್ನು ಪ್ರಕಟಪಡಿಸುವುದರ ಜೊತೆಗೆ ಇನ್ನೊಬ್ಬರನ್ನು ಯಶಸ್ಸಿನತ್ತ ಪ್ರೇರೇಪಿಸುವ ಒಳ್ಳೆಯತನವೇ ಮುಖ್ಯವಾಗಿ ಗುರುತಿಸಲ್ಪಡುವ ವಿಚಾರ. ತಾನು ಸೋತು ಒಟ್ಟು ಸನ್ನಿವೇಶವನ್ನು ಗೆಲ್ಲಿಸುವ ಕೆಲವು ವ್ಯಕ್ತಿತ್ವಗಳನ್ನಾದರೂ ನಾವು ಗಮನಿಸಬಹುದು. ಅಂತಹವರಲ್ಲಿ ಯಕ್ಷಗಾನದ ವಿಶಿಷ್ಟ ಶೈಲಿಯ ಕಲಾವಿದ ಎಂಪೆಕಟ್ಟೆ ರಾಮಯ್ಯ ರೈಗಳು ಒಬ್ಬರು.  ಎಂಪೆಕಟ್ಟೆ ರಾಮಯ್ಯ ರೈಗಳು ನಮಗೆ ಇಷ್ಟವಾಗುವುದು ಇದೇ ಕಾರಣಕ್ಕೆ.

ಇಂದಿನ ಕಲಾವಿದರು ಎಂಪೆಕಟ್ಟೆಯವರ ಈ ಆದರ್ಶಗಳನ್ನು ಗೌರವಿಸಬೇಕಾದ ಹಾಗೂ ಅನುಸರಿಸಬೇಕಾದ ಅವಶ್ಯಕತೆ ತುಂಬಾ ಇದೆ. ಎಂಪೆಕಟ್ಟೆ ರಾಮಯ್ಯ ರೈಗಳು ಇಂದು ನಮ್ಮೊಡನಿಲ್ಲದಿದ್ದರೂ ಕಲಾವಿದನಾಗಿ ಅವರು ಏರಿದ ಎತ್ತರ ಮತ್ತು ರಂಗದಲ್ಲಿ ಅವರ ಪ್ರದರ್ಶನ ಎಂದಿಗೂ ಮೌಲ್ಯಯುತವಾಗಿರುತ್ತದೆ ಹಾಗೂ ಗೌರವಿಸಲ್ಪಡುತ್ತದೆ.

ಯಕ್ಷಗಾನದ ಇತಿಹಾಸ, ಆಗುಹೋಗುಗಳ ಬಗ್ಗೆ ಮಾತಾಡುವಾಗ, ನಡುವೆ ಇವರ ಹೆಸರೊಂದು ಉಲ್ಲೇಖಿಸದಿದ್ದರೆ ಆ ಮಾತುಕತೆಗಳು ಅರ್ಥ ಕಳೆದುಕೊಳ್ಳುತ್ತವೆ. ಶೇಣಿ, ಸಾಮಗರಾದಿಯಾಗಿ ಹಲವಾರು ಕಲಾಕೋವಿದರ ಪಾಂಡಿತ್ಯಪೂರ್ಣ ಮಾತುಗಾರಿಕೆ ಹಾಗೂ ಧಿಗಿಣಗಳಿಂದೊಡಗೂಡಿದ ಮತ್ತು ಅಪೂರ್ವ ನೃತ್ಯಕೌಶಲದ ಕಲಾವಿದರ ಪಾಂಡಿತ್ಯ ಪ್ರದರ್ಶನ.  ಇವರೆಲ್ಲರ ನಡುವೆ ಎಂಪೆಕಟ್ಟೆಯವರದು ಪ್ರತ್ಯೇಕವಾಗಿ ನಿಲ್ಲುವ ಪ್ರದರ್ಶನ . 

ಕಲಾಜಗತ್ತಿನಲ್ಲಿ  ಮುಂದಿನ ಪೀಳಿಗೆಯವರು ನೆನಪಿನಲ್ಲಿಡುವಂತೆ ಯಕ್ಷಗಾನ ಲೋಕದಲ್ಲಿ ತನ್ನತನದ ಬೀಜವನ್ನು ಬಿತ್ತಿದರು.   ದೇವೇಂದ್ರ’’ನ ಪಾತ್ರದಲ್ಲಿ ಎಂಪೆಕಟ್ಟೆಯವರಷ್ಟು ಪ್ರಭಾವಶಾಲಿಯಾಗಿ ನಿರ್ವಹಿಸುವವರು ಮತ್ತೊಬ್ಬರಿಲ್ಲ. ಸಮುದ್ರಮಥನದ ದೇವೇಂದ್ರ ಎಂಪೆಕಟ್ಟೆ ರಾಮಯ್ಯ ರೈಗಳಿಗೆ ಹೆಸರು ತಂದುಕೊಟ್ಟ ಪಾತ್ರ. ಅದು ಅವರ ಮಾಸ್ಟರ್ ಪೀಸ್. ಅದರಂತೆಯೇ ತ್ರಿಪುರ ಮಥನದ ದೇವೇಂದ್ರ ಕೂಡಾ. ಒಡ್ಡೋಲಗದ ದೇವೇಂದ್ರನ ಪಾತ್ರವನ್ನು ವಿಭಿನ್ನ ರೀತಿಯಲ್ಲಿ ಚಿತ್ರಿಸುವುದರಲ್ಲಿ ಎಂಪೆಕಟ್ಟೆಯವರದು ಎತ್ತಿದ ಕೈ.

ಎಂಪೆಕಟ್ಟೆಯವರು ಒಮ್ಮೆ ಮಾಡಿದ ಪಾತ್ರವನ್ನು ನೋಡಿದ ಪ್ರೇಕ್ಷಕರಿಗೆ ಅದೇ ಪಾತ್ರವನ್ನು ಬೇರೆ ಕಲಾವಿದರು ಮಾಡಿದಾಗ ಅಷ್ಟು ಪರಿಣಾಮಕಾರಿ ಎಂದೆನಿಸುತ್ತಿರಲಿಲ್ಲ. ಆದುದರಿಂದ ಆ ಕಾಲದಲ್ಲಿ ಅವರ ಅನುಪಸ್ಥಿತಿಯಲ್ಲಿ ಅವರು ನಿರ್ವಹಿಸಿದ ಪಾತ್ರವನ್ನು ಮಾಡುವುದು ಬೇರೆಯವರಿಗೆ ದೊಡ್ಡ ಸವಾಲೇ ಆಗಿತ್ತು. 

ಎಂಪೆಕಟ್ಟೆಯವರ ಮಾತುಗಾರಿಕೆ ಕೆಲವರಿಗೆ ಪಾತ್ರದ ಮತ್ತು ಸಂದರ್ಭದ ಔಚಿತ್ಯವನ್ನು ಮೀರಿದಂತೆ ಎಂದು ಅನಿಸಿದರೂ ಕೆಲವೊಮ್ಮೆ ಮಾತಿನ ಮಲ್ಲರ ನಡುವಿನ ಬಿಗು ಸನ್ನಿವೇಶದಲ್ಲಿ ಅವರ ವಿತಂಡ ವಾದವು ಪರಿಸ್ಥಿತಿಯನ್ನು ತಿಳಿಗೊಳಿಸಲು ಸಹಾಯಕವಾಗುತ್ತಿತ್ತು. ಶೇಣಿ, ಸಾಮಗ, ಸುಂದರ ರಾಯರೇ ಮೊದಲಾದವರು ರೈಗಳ ಮಾತಿಗೆ ನಕ್ಕು ಸುಮ್ಮನಾಗುತ್ತಾರೆ. ಎಂಪೆಕಟ್ಟೆ ಏರು ಪದ್ಯದ ಕುಣಿತದ ಶೈಲಿ ಬಹಳ ಆಕರ್ಷಕ. ಅಂತಹ ಆಕರ್ಷಕ ಶೈಲಿ ಈಗಿನ ಯಕ್ಷಗಾನದಲ್ಲಿ ಮಾಯವಾಗಿರುವುದು ಕಂಡುಬರುತ್ತದೆ.

ಆ ಶೈಲಿಯನ್ನು ಎಂಪೆಕಟ್ಟೆಯವರೇ ಹುಟ್ಟು ಹಾಕಿದರು ಎಂಬುದು ಈ ಮಾತಿನ ಅರ್ಥವಲ್ಲ. ವೀರ ರಸದ ಪದ್ಯಗಳಿಗೆ ಮೂರು ಕುತ್ತುಗಳನ್ನು ಹಾರಿ ಮತ್ತೆ ಒಂದು ಸುತ್ತು ಬರಲು ತೊಡಗುವ ಮುನ್ನ ಒಮ್ಮೆ ಕೆಳಗೆ ನೋಡಿ ಮುಖವನ್ನು ಮೇಲೆತ್ತುವ ಆ ಶೈಲಿ ಅಪೂರ್ವವೂ ಅನನ್ಯವೂ ಆಗಿತ್ತು. ಈಗಿನ ಕಲಾವಿದರು ಯಾಕೆ ಇಂತಹಾ ಶೈಲಿಗಳನ್ನು ತಮ್ಮ ನಾಟ್ಯದಲ್ಲಿ ಅಳವಡಿಸಿಕೊಳ್ಳುವುದಿಲ್ಲ ಎಂದು ಆಶ್ಚರ್ಯವಾಗುತ್ತದೆ. ದಡ ಬಡ ಹಾರಿ ದೇಹವನ್ನು ದಂಡಿಸಿಕೊಳ್ಳುವ ಬದಲು ನಿರಾಯಾಸವಾಗಿ ಆಕರ್ಷಕ ಶೈಲಿಯಿಂದ ನೃತ್ಯವನ್ನು ಪ್ರಸ್ತುತಪಡಿಸುವ ಕಲೆ ಅವರಿಗೆ ಕರಗತವಾಗಿತ್ತು.

ವೈಯುಕ್ತಿಕ ವಿಚಾರಗಳನ್ನು ಎಂದೂ ರಂಗದಲ್ಲಿ ಪ್ರತಿಫಲಿಸದೆ ತಾನು ಸೋತು ಸಹಪಾತ್ರಧಾರಿಗಳನ್ನು ಗೆಲ್ಲಿಸಿದ ಮಹಾನುಭಾವ ಅವರು. ಖಳ ಪಾತ್ರಗಳಲ್ಲಿ ಮಾತ್ರವಲ್ಲದೆ ಅರ್ಜುನ, ಅತಿಕಾಯನಂತಹಾ ಸಾತ್ವಿಕ ಪಾತ್ರಗಳಲ್ಲೂ ಮಿಂಚಿದ ಎಂಪೆಕಟ್ಟೆ ರಾಮಯ್ಯ ರೈಗಳು  ಮಹಾಕಲಿ ಮಗಧೇಂದ್ರದಲ್ಲಿ ಮಾಗಧ, ಸಮುದ್ರಮಥನದ ಮತ್ತು ತ್ರಿಪುರಮಥನದ ದೇವೇಂದ್ರ, ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ವ್ಯಾಪಾರಿ ಶೆಟ್ಟಿ ಮತ್ತು ಕುಟ್ಟಿಮೂಸೆ, ಗದಾಯುದ್ಧದ ಭೀಮ, ದೇವಿ ಮಹಾತ್ಮೆಯಲ್ಲಿ ಮಧು, ಕೈಟಭ, ‘ಶಬರಿಮಲೆ ಅಯ್ಯಪ್ಪ’ದಲ್ಲಿ ವಾವರ, ವಂಶವಾಹಿನಿಯ ಯುಧಾಜಿತು, ಇಂದ್ರಜಿತು, ಅರ್ಜುನ, ಅತಿಕಾಯ, ಹಿರಣ್ಯಾಕ್ಷ, ಮೊದಲಾದುವು ಅವರ ಇಷ್ಟದ ಪಾತ್ರಗಳು.

ಖ್ಯಾತ ಹಾಸ್ಯ ಕಲಾವಿದ ನಯನ ಕುಮಾರ್ ಮತ್ತು ಎಂಪೆಕಟ್ಟೆಯವರದು ರಂಗದಲ್ಲಿ ಅವಿನಾಭಾವ ಸಂಬಂಧ. ಆ ದಿನಗಳಲ್ಲಿ ಈ ಜೋಡಿ ಅತ್ಯಂತ ಪ್ರಸಿದ್ಧಿಯನ್ನು ಪಡೆದಿತ್ತು. ‘ಪೌಂಡ್ರಕ ವಾಸುದೇವ’ ಪಾತ್ರವಹಿಸಿ ‘ಅಜಯ’ನಾಗಿ ಪಾತ್ರವಹಿಸಿದ ನಯನ ಕುಮಾರರ ಜೊತೆ ಹಾಸ್ಯದ ಹೊನಲನ್ನೇ ಹರಿಸುವ ಸನ್ನಿವೇಶ, ಕೃಷ್ಣನ ಪಾತ್ರವಹಿಸುವ ಕುಂಬಳೆ ಸುಂದರ ರಾವ್ ಜೊತೆಗಿನ ವಾಗ್ವಾದ ಇವೆಲ್ಲಾ ರಮಣೀಯವೂ ಮನರಂಜನೀಯವೂ ಆದ ಸನ್ನಿವೇಶಗಳು.

ಚಂದ್ರಾವಳಿ ವಿಲಾಸ ಚಂದಗೋಪ, ‘ಮಹಾರಥಿ ಕರ್ಣ’ ಪ್ರಸಂಗದ ಕರ್ಣನಿಗೆ ಶಾಪಗೈಯುವ ಪರಶುರಾಮ ಪಾತ್ರಗಳೂ ಇವರಿಗೆ ಹೆಸರು ತಂದು ಕೊಟ್ಟ ಪಾತ್ರಗಳು.  ಏರುಪದ್ಯದಲ್ಲಿ ಎದೆಯ ಮೇಲೆ ಕೈಯಿಟ್ಟು ಸುತ್ತುಬರುವ ವಿಧಾನ, ನಾಟ್ಯಶೈಲಿ, ಕಣ್ಣನ್ನು ತಿರುಗಿಸುವ ರೀತಿ, ಗದೆಯನ್ನೊಮ್ಮೆ ಮೇಲೆತ್ತಿ ತಿರುಗಿಸುವ ಪರಿ, ಕುತ್ತು ಹಾರಿದ ನಂತರ ಒಮ್ಮೆ ಕೆಳಮುಖವಾಗಿ ನೋಡಿ ಮುಖ ಮೇಲೆತ್ತುವ ಶೈಲಿ ಇವುಗಳೆಲ್ಲಾ ಎಂಪೆಕಟ್ಟೆಯವರ ಮಾಸ್ಟರ್ ಪೀಸ್ ಗಳು.

ಖಳ ಪಾತ್ರಗಳಷ್ಟೇ ಅಲ್ಲದೆ ಪ್ರಣಯ ದೃಶ್ಯಗಳಲ್ಲೂ ಎಂಪೆಕಟ್ಟೆಯವರು ಉತ್ಕೃಷ್ಟವಾದ ಅಭಿನಯವನ್ನು ನೀಡುತ್ತಿದ್ದವರು. ಆ ದಿನಗಳಲ್ಲಿ ಉತ್ತಮ ಜೋಡಿಯೆಂದೇ ಗುರುತಿಸಲ್ಪಿಟ್ಟಿದ್ದ ಎಂಪೆಕಟ್ಟೆ-ನಯನಕುಮಾರ್ ಜೋಡಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿತ್ತು. ಆದರೆ ಈಗ ಇಬ್ಬರೂ ಇಲ್ಲ. ಜನರು ಇಬ್ಬರ ಮೇಲೆ ಇನ್ನಷ್ಟು ನಿರೀಕ್ಷೆಗಳನ್ನು ಇರಿಸಿದ್ದರೂ ಎಲ್ಲರ ನಂಬಿಕೆಗಳನ್ನೂ ಹುಸಿಗೊಳಿಸಿ ಇಬ್ಬರೂ ಮರೆಯಾದದ್ದು ವಿಪರ್ಯಾಸವೆಂದೇ ಹೇಳಬೇಕು. 


ಲೇಖನ : ಮನಮೋಹನ್ ವಿ. ಎಸ್.

ದೇರಾಜೆ ಸೀತಾರಾಮಯ್ಯ – ಜೀವನ ಸಾಧನೆ (Deraje Seetharamayya – Jeevana Sadhane)

ಶೀರ್ಷಿಕೆಯೇ ಸೂಚಿಸುವಂತೆ ಇದು ಯಕ್ಷಗಾನ ಕಲೆಯ, ಕನ್ನಡ ಸಾಹಿತ್ಯ ಲೋಕದ ಸಾಧಕರಾದ ರಸಋಷಿ ಎಂದೇ ಖ್ಯಾತರಾದ ಶ್ರೀ ದೇರಾಜೆ ಸೀತಾರಾಮಯ್ಯ ಅವರ ಬದುಕು ಮತ್ತು ಸಾಧನೆಗಳ ಕುರಿತಾಗಿ ಪ್ರಕಟಗೊಂಡ ಹೊತ್ತಗೆ. ಈ ಪುಸ್ತಕವು ಮೊದಲು ಮುದ್ರಣಗೊಂಡದ್ದು 1997ರಲ್ಲಿ. ಪ್ರಕಾಶಕರು ಕರ್ನಾಟಕ ಸಂಘ ಪುತ್ತೂರು. ಇದು ದ್ವಿತೀಯ ಮುದ್ರಣವಾದುದು 2014ರಲ್ಲಿ. ಇದರ ಪ್ರಕಾಶಕರು ಜ್ಞಾನಗಂಗಾ ಪ್ರಕಾಶನ ಪುತ್ತೂರು. ಈ ಹೊತ್ತಗೆಯ ಲೇಖಕರು ಶ್ರೀ ವಿಜಯ ಕುಮಾರ ಮೊಳೆಯಾರ, ಪುತ್ತೂರು. ಇದು ಒಟ್ಟು ನಲುವತ್ತು ಪುಟಗಳನ್ನು ಹೊಂದಿದ ಪುಸ್ತಕ. ಪ್ರಕಾಶಕರಾದ ಜ್ಞಾನಗಂಗಾ ಪ್ರಕಾಶನದ ಶ್ರೀ ಪ್ರಕಾಶ್ ಕೊಡೆಂಕಿರಿಯವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿರುತ್ತಾರೆ.

1997ರಲ್ಲಿ ಬೋಳಂತಕೋಡಿ ಈಶ್ವರ ಭಟ್ಟರು ಪುತ್ತೂರು ಕರ್ನಾಟಕ ಸಂಘದ ಮೂಲಕ ಹೊರತಂದ ಪುಸ್ತಕ ಇದು. ಮೊದಲನೇ ಮುದ್ರಣದ ಪ್ರತಿಗಳು ಮುಗಿದಿದ್ದು, ಬಹು ಬೇಡಿಕೆ ಇರುವುದರಿಂದ ಇದನ್ನು ಮತ್ತೆ ಪ್ರಕಟಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿದಾಗ ಡಾ. ವಿಜಯ ಕುಮಾರ ಮೊಳೆಯಾರ ಅವರು ಸಂತೋಷದಿಂದ ಒಪ್ಪಿಕೊಂಡಿರುತ್ತಾರೆ. ಅವರ ಸೂಚನೆಯಂತೆ ಕೆಲವು ಬದಲಾವಣೆಗಳೊಂದಿಗೆ ಈ ಪುಸ್ತಕವನ್ನು ಪ್ರಕಟಿಸುತ್ತಿದ್ದೇವೆ ಎಂದು ಶ್ರೀ ಪ್ರಕಾಶ್ ಕೊಡೆಂಕಿರಿಯವರು ತಮ್ಮ ಲೇಖನದಲ್ಲಿ ತಿಳಿಸಿರುತ್ತಾರೆ. ಲೇಖಕರಾದ ಡಾ. ವಿಜಯ ಕುಮಾರ ಮೊಳೆಯಾರ ಅವರು ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ಅಕ್ಷರರೂಪಕ್ಕಿಳಿಸಿರುತ್ತಾರೆ. ದೇರಾಜೆ ಸೀತಾರಾಮಯ್ಯ – ಬದುಕು, ದೇರಾಜೆ ಸೀತಾರಾಮಯ್ಯ-ಬರಹ, ಯಕ್ಷಗಾನ ಸಂಬಂಧೀ ಕೃತಿಗಳು, ಇತರ ಕೃತಿಗಳು, ದೇರಾಜೆಯವರ ಲೇಖನಗಳು, ದೇರಾಜೆ ಸೀತಾರಾಮಯ್ಯ- ಅರ್ಥಧಾರಿಯಾಗಿ ಎಂಬ ವಿಚಾರಗಳಡಿಯಲ್ಲಿ ಶ್ರೀ ಡಾ. ವಿಜಯಕುಮಾರ ಮೊಳೆಯಾರ ಅವರು ದೇರಾಜೆಯವರ ಜೀವನ ಸಾಧನೆಗಳ ಬಗ್ಗೆ ವಿವರಣೆಯನ್ನು ಅಂದವಾಗಿ ನೀಡಿರುತ್ತಾರೆ. ಪುಸ್ತಕದ ಕೊನೆಯಲ್ಲಿ ಶ್ರೀ ದೇರಾಜೆಯವರು ಬರೆದ ಕೃತಿಗಳ ಬಗೆಗೆ ವಿವರಗಳನ್ನು ನೀಡಲಾಗಿದೆ.

ಲೇಖಕ: ರವಿಶಂಕರ್ ವಳಕ್ಕುಂಜ 

ಅಳಿಕೆ  ಅಳಿಕೆ ರಾಮಯ್ಯ ರೈ ಸ್ಮೃತಿ-ಕೃತಿ (Alike Ramayya Rai Smruthi-Krithi)

ಶೀರ್ಷಿಕೆಯೇ ಸೂಚಿಸುವಂತೆ ಇದು ಯಕ್ಷಗಾನ ಕಲೆಯ ಮೇರು ಕಲಾವಿದರಾಗಿ ಮೆರೆದ ದಿ| ಅಳಿಕೆ ಶ್ರೀ ರಾಮಯ್ಯ ರೈಗಳ ಕುರಿತಾದ ಕೃತಿಯು. ಈ ಪುಸ್ತಕವು ಪ್ರಕಟವಾದುದು 2012ರಲ್ಲಿ. ಪ್ರಕಾಶಕರು ‘ದೆಹಲಿಮಿತ್ರ’ ಎಂಬ ಸಂಸ್ಥೆ. ಸಂಪಾದಕರು ಶ್ರೀ ಡಾ. ನಿತ್ಯಾನಂದ ಬಿ. ಶೆಟ್ಟಿ ಅವರು. ಸಹ ಸಂಪಾದಕರು ಶ್ರೀ ವಸಂತ ಶೆಟ್ಟಿ ಬೆಳ್ಳಾರೆ, ಕೆ. ಬಾಲಕೃಷ್ಣ  ನಾಯಕ್, ಡಾ. ವೈ. ಅವನೀಂದ್ರನಾಥ ರಾವ್ ಅವರುಗಳು. ಅಳಿಕೆ ಶ್ರೀ ರಾಮಯ್ಯ ರೈಗಳ ಬಗೆಗೆ ಹಿಂದೆ ಒಂದು ಲೇಖನವನ್ನು ಬರೆಯಲು ಅವಕಾಶವಾಗಿತ್ತು. ಅವರ ಕುರಿತಾದ ಪುಸ್ತಕದ ಬಗೆಗೆ ಬರೆಯಲೂ ಸಂತೋಷಪಡುತ್ತೇನೆ. ಸಂಪಾದಕರಾದ ಶ್ರೀ ಡಾ. ನಿತ್ಯಾನಂದ ಬಿ. ಶೆಟ್ಟರು ‘ಸಂಪಾದಕರ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ. ಸಹಸಂಪಾದಕ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರ ‘ಮಿತ್ರನ ಮಾತು’ ಎಂಬ ಲೇಖನವನ್ನೂ ನೀಡಲಾಗಿದೆ. ಈ ಹೊತ್ತಗೆಯು ಒಟ್ಟು ಆರು ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಭಾಗ ಒಂದರಲ್ಲಿ ಅಳಿಕೆಯವರ ಆತ್ಮಕಥನವನ್ನು ನೀಡಲಾಗಿದೆ. ಭಾಗ ಎರಡರಲ್ಲಿ ಅಳಿಕೆಯವರ ಬರಹಗಳನ್ನು ನೀಡಲಾಗಿದೆ. ಭಾಗ ಮೂರರಲ್ಲಿ ಅಳಿಕೆಯವರ ಸಂದರ್ಶನ ಲೇಖನವಿದೆ. ಸಂದರ್ಶಿಸಿದವರು ಶ್ರೀ ದಿವಾಕರ ಶೆಟ್ಟಿ. ಭಾಗ ನಾಲ್ಕರಲ್ಲಿ ಅಳಿಕೆಯವರ ಮಕ್ಕಳಾದ ದುರ್ಗಾಪ್ರಸಾದ್ ರೈ, ವೇದಾ ಜಿ.ಶೆಟ್ಟಿ ಮತ್ತು ಬಂಧು ಉಬರಡ್ಕ ಉಮೇಶ ಶೆಟ್ಟರ ಲೇಖನವಿದೆ.

ಭಾಗ ಐದರಲ್ಲಿ ಅಗರಿ ಶ್ರೀನಿವಾಸ ಭಾಗವತ, ಮಲ್ಪೆ ಶಂಕರನಾರಾಯಣ ಸಾಮಗ, ನೆಡ್ಲೆ ನರಸಿಂಹ ಭಟ್ಟ , ಕೆ.ಪುರುಷೋತ್ತಮ ಭಟ್, ಬಲಿಪ ನಾರಾಯಣ ಭಾಗವತ, ಧನಂಜಯ ಕುಂಬ್ಳೆ, ಕೊಳ್ಯೂರು ರಾಮಚಂದ್ರ ರಾವ್, ಎಚ್. ಶ್ರೀಧರ ಹಂದೆ, ವೆಂಕಟರಾಮ ಭಟ್ಟ ಸುಳ್ಯ, ಪಡ್ರೆ ಚಂದು, ಮಿಜಾರು ಅಣ್ಣಪ್ಪ, ಬಾಲಕೃಷ್ಣ ಶೆಟ್ಟಿ ಮುಂಡಾಜೆ, ಸದಾಶಿವ ಶೆಟ್ಟಿ ಮುಂಡಾಜೆ, ತಾರಾನಾಥ ವರ್ಕಾಡಿ, ಕೆ.ಎಚ್. ದಾಸಪ್ಪ ರೈ, ಅರುವ ಕೊರಗಪ್ಪ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಬಾಲಕೃಷ್ಣ ಶೆಟ್ಟಿ ಪೊಳಲಿ, ಅಮೃತ ಸೋಮೇಶ್ವರ, ಎಂ. ಪ್ರಭಾಕರ ಜೋಶಿ, ಪು. ಶ್ರೀನಿವಾಸ ಭಟ್ಟ, ಎನ್. ವಿ. ಶೆಟ್ಟಿ ಮುಲ್ಕಿ, ಕೆ. ಸದಾಶಿವ, ಪಿ.ಪೂವಪ್ಪ ಶೆಟ್ಟಿ ಇವರುಗಳ ಲೇಖನಗಳಿವೆ. ಭಾಗ ಆರರಲ್ಲಿ ಬಣ್ಣ ಮತ್ತು ಕಪ್ಪು ಬಿಳುಪಿನ ಸುಮಾರು ಹದಿನೈದು ಚಿತ್ರಗಳಿವೆ. ಅಳಿಕೆ ಶ್ರೀ ರಾಮಯ್ಯ ರೈಗಳ ಜೀವಿತಾವಧಿ 1915-1989. ಶ್ರೀಯುತರು ತಮ್ಮ ಆತ್ಮಕಥನದಲ್ಲಿ ಅವರು ಪ್ರವೇಶಿಸಿದಾಗ ಯಕ್ಷಗಾನವು ಹೇಗಿತ್ತು ? ಹೇಗೆ ಬದಲಾಗುತ್ತಾ ಬಂತು, ಅದಕ್ಕೆ ಕಾರಣಗಳು, ಸಹ ಕಲಾವಿದರು, ಪ್ರೇಕ್ಷಕರು, ಕಲಾಬದುಕಿನಲ್ಲಿ ಸಂತೋಷ, ನೋವಿನ ಅನುಭವಗಳನ್ನು ಹೊಂದಿದ ಕ್ಷಣಗಳು, ಮೊದಲಾದ ವಿಚಾರಗಳ ಬಗೆಗೆ ಬಹಳ ಸೊಗಸಾಗಿ ವಿವರಣೆಯನ್ನು ನೀಡಿರುತ್ತಾರೆ. ‘ಅಳಿಕೆ- ಯಕ್ಷಗಾನದ ಮೇರು ಕಲಾವಿದ ಅಳಿಕೆ ರಾಮಯ್ಯ ರೈ ಸ್ಮೃತಿ-ಕೃತಿ’ ಯು ಸಂಗ್ರಹಯೋಗ್ಯ ಅತ್ಯುತ್ತಮ ಪುಸ್ತಕವು.

ಲೇಖನ: ರವಿಶಂಕರ್ ವಳಕ್ಕುಂಜ 

ಭಾವಝರಿಯಲಿ ತೋಯಿಸಿದ ಭಾಗವತ ಕುಬಣೂರು ಶ್ರೀಧರ ರಾವ್ (Kubanooru Sridhara Rao)

ಒಂದು ಪ್ರಸಿದ್ಧ ಭಾಗವತರುಗಳು ಮೇಳೈಸಿದ ಗಾನಸುಧೆಯ ರಸಧಾರೆ. ತೆಂಕುತಿಟ್ಟಿನ ಪ್ರಸಿದ್ಧ ಭಾಗವತರಲ್ಲಿ ಕೆಲವರು ಭಾಗವಹಿಸಿದ್ದ ಅಪೂರ್ವವಾದ ಕಾರ್ಯಕ್ರಮ. ಭಾಗವತರೊಬ್ಬರು ತಮ್ಮ ಸರದಿಯಲ್ಲಿ ದ್ರೌಪದಿ ವಸ್ತ್ರಾಪಹಾರದ “ಕರುಣದಿ ಕಾಯೋ ಗೋವಿಂದಾ…” ಹಾಡಲು ಪ್ರಾರಂಭಿಸಿದರು. ಪ್ರಥಮ ಚರಣದಲ್ಲಿಯೇ ಸಭೆಯನ್ನು ನಿಶ್ಶಬ್ದವಾಗಿಸಿ ಸಭಿಕರೆಲ್ಲರ ಚಿತ್ತವನ್ನು ತನ್ನ ಅತ್ಯದ್ಭುತವಾದ ರಾಗದಾಲಾಪನೆಗಳಿಂದ ತನ್ನ ವಶದಲ್ಲಿರಿಸಿಕೊಳ್ಳುವಲ್ಲಿ ಈ ಮಹಾನ್ ಗಾಯಕರು ಯಶಸ್ವಿಯಾದರು. ಇವರು ಬೇರೆ ಯಾರೂ ಅಲ್ಲ. ತನ್ನ ಸಂಗೀತದ ಅನುಭವಗಳಿಂದ ದಿ| ದಾಮೋದರ ಮಂಡೆಚ್ಚರ ನಂತರ ಯಕ್ಷಗಾನದ ಹಾಡುಗಳ ಪರಂಪರೆಯ ಶೈಲಿಗೆ ಸಂಗೀತದ ಹೊಳಪನ್ನು ಕೊಟ್ಟ ದಿ| ಕುಬಣೂರು ಶ್ರೀಧರ ರಾವ್.
ಕುಬಣೂರರು ಇಂದು ನಮ್ಮೊಡನಿಲ್ಲ ಎಂಬುದು ನಿಜವಾದರೂ ಕೆಲವು ವರ್ಷಗಳ ಹಿಂದೆ ಇವರನ್ನು ಮಾತನಾಡಿಸಬೇಕೆಂದು ಬಹಳಷ್ಟು ಬಾರಿ ಅಂದುಕೊಂಡಿದ್ದೆ. ಆದರೆ ಅವರು ಸದಾ ಬಿಡುವಿಲ್ಲದ ಕಾರ್ಯಕ್ರಮಗಳು, ಅವರೇ ನಡೆಸುತ್ತಿದ್ದ ಮಾಸಪತ್ರಿಕೆಯ ಕೆಲಸ, ಮೇಳದ ಉದ್ಯೋಗಗಳಲ್ಲಿ ವ್ಯಸ್ತರಾಗಿರುತ್ತಿದ್ದುದರಿಂದ ಅವಕಾಶವಾಗಿರಲಿಲ್ಲ. ಆದರೆ ಒಂದು ದಿನ ಮೊದಲೇ ದಿನ ನಿಶ್ಚೈಸಿ ಅವರನ್ನು ಭೇಟಿಯಾಗಲು ಅವಕಾಶ ಸಿಕ್ಕಿತು. ಸಣ್ಣದೊಂದು ಸಂದರ್ಶನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿ ದಾಗ ಸಂತೋಷದಿಂದ ಒಪ್ಪಿಕೊಂಡಿದ್ದರು.
1956ರಲ್ಲಿ ಜನಿಸಿದ ಕುಬಣೂರು ಶ್ರೀಧರ ರಾವ್ ಮೂಲತಃ ಕೊಡಗು ಜಿಲ್ಲೆಯ ಭಾಗಮಂಡಲದವರು. ಒಂದೂವರೆ ವರ್ಷ ಇರುವಾಗಲೇ ತಾಯಿ ತೀರಿಹೋದ ಕಾರಣ ಕುಬಣೂರಿನ ಮಾವನ ಮನೆಯಲ್ಲಿ ಬೆಳೆಯ ಬೇಕಾಯಿತು. ಆದ ಕಾರಣ ಕುಬಣೂರು ಶ್ರೀಧರ ರಾವ್ ಅಂತ ಹೆಸರು ಬಂತು. ತಂದೆಯ ಹೆಸರು ಶ್ರೀ ಕೃಷ್ಣಯ್ಯ ಹಾಗೂ ತಾಯಿ ಶ್ರೀಮತಿ ರುಕ್ಮಿಣಿ. ಪ್ರಾಥಮಿಕ ವಿದ್ಯಾಭ್ಯಾಸ ಅಂದರೆ 7ನೇ ತರಗತಿಯ ವರೆಗೆ ಕುಬಣೂರು ಶಾಲೆಯಲ್ಲಿ ಆಯಿತು. ನಂತರ ಪ್ರೌಢಶಿಕ್ಷಣ ಮಂಗಲ್ಪಾಡಿ ಪ್ರೌಢಶಾಲೆಯಲ್ಲಿ ಹಾಗೂ ನಂತರ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‍ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದರು.
ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಕುಬಣೂರಿನ ಶಾಲೆಯಲ್ಲಿ ಯಕ್ಷಗಾನದ ಪರಿಸರವಿದ್ದ ಕಾರಣ ಆ ವಯಸ್ಸಿನಲ್ಲೆ ಶಾಲಾ ವಾರ್ಷಿಕೋತ್ಸವವೇ ಮೊದಲಾದ ಸಂದರ್ಭಗಳಲ್ಲೆಲ್ಲಾ ಯಕ್ಷಗಾನದಲ್ಲಿ ವೇಷಗಳನ್ನು ಮಾಡುತ್ತಿದ್ದರು. ರಾಜ್ಯಪ್ರಶಸ್ತಿ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕರಾದ ಉಪ್ಪಳ ಕೃಷ್ಣ ಮಾಸ್ತರ್ ಹಾಗೂ ಆ ಕಾಲದ ಮೇಳದ ಕಲಾವಿದರಾದ ಬೇಕೂರು ಕೇಶವರಲ್ಲಿ ನಾಟ್ಯಾಭ್ಯಾಸವನ್ನು ಮಾಡಿದ್ದರು. ಶಾಲಾ ದಿನಗಳಲ್ಲಿಯೇ ಐ. ರಘು ಮಾಸ್ತರರಿಂದ ಐದಾರು ವರ್ಷ ಕರ್ನಾಟಕ ಸಂಗೀತವನ್ನು ಅಭ್ಯಾಸ ಮಾಡಿ ಟಿ. ಗೋಪಾಲಕೃಷ್ಣ ಮಯ್ಯ ಹಾಗೂ ಮಾಂಬಾಡಿ ನಾರಾಯಣ ಭಟ್ಟರಲ್ಲಿ ಭಾಗವತಿಕೆಯನ್ನು ಅಭ್ಯಸಿಸಿದರು.
ಪ್ರಾರಂಭದಲ್ಲಿ ವಿಶ್ವಭಾರತಿ ಕಲಾಸಂಘದಿಂದ ಹಲವು ಕಡೆ ಪ್ರದರ್ಶನಗಳನ್ನು ನಡೆಸುತ್ತಿದ್ದುದು ಮಾತ್ರವಲ್ಲದೆ ಯಕ್ಷಗಾನದ ವೇಷಭೂಷಣಗಳನ್ನು ಕೂಡಾ ಯಕ್ಷಗಾನ ಸಂಘ ಸಂಸ್ಥೆಗಳಿಗೆ ಹಾಗೂ ಪ್ರದರ್ಶನಗಳಿಗೆ ಬಾಡಿಗೆಗೆ ಒದಗಿಸುತ್ತಾ ಇದ್ದರು. ಆಗ ಅವರ ಭಾಗಮಂಡಲದ ಆಸ್ತಿ ಪಾಲಾಗಿ ಸಿಕ್ಕಿತು ಹಾಗೂ ಇವರ ತಂದೆಯವರು ವಿಧಿವಶರಾದುದರಿಂದ ಮಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗವನ್ನು ಬಿಟ್ಟು ತೋಟ ನೋಡಿಕೊಳ್ಳಲು ಭಾಗಮಂಡಲದಲ್ಲಿ ನೆಲೆಸಬೇಕಾಗಿ ಬಂತು. ಏಲಕ್ಕಿ ತೋಟವಾದುದರಿಂದ ಮಳೆಗಾಲದಲ್ಲಿ ಮಾತ್ರ ಕೆಲಸವಿರುತ್ತಿತ್ತು. ಮೊದಲು ಕೆಲಸದಲ್ಲಿದ್ದಾಗಲೂ ಕರ್ನೂರು ಕೊರಗಪ್ಪ ರೈಗಳ ಗೋಪಾಲಕೃಷ್ಣ ಕಲಾ ಸಂಪದ, ಪಡೀಲ್ ಇದರಲ್ಲಿ ಭಾಗವತನಾಗಿ ಹೋಗುತ್ತಿದ್ದರು. ಆಮೇಲೆ ಕುಂಬಳೆ ಶೇಷಪ್ಪನವರ ಅನಂತಾಡಿ ಮೇಳ ಹಾಗೂ ಉಪ್ಪಳ ಮೇಳಗಳಿಗೂ ಹವ್ಯಾಸೀ ಭಾಗವತನಾಗಿ ಹಾಡುತ್ತಿದ್ದರು. ಕುಬಣೂರು ಮನೆಯಲ್ಲಿ ಚೆಂಡೆ, ಮದ್ದಳೆಗಳು ಇದ್ದು ಅವುಗಳನ್ನು ಆಟಗಳಿಗೂ ಒದಗಿಸುತ್ತಿದ್ದರು. ಅಲ್ಲದೆ ಕುಬಣೂರು ಶ್ರೀಧರ ರಾವ್ ಹಲವಾರು ಹವ್ಯಾಸೀ ಸಂಸ್ಥೆಗಳಿಗೆ ಭಾಗವತಿಕೆಯನ್ನೂ ಮಾಡುತ್ತಿದ್ದರು. ಅದೂ ಅಲ್ಲದೆ ಆ ಕಾಲದಲ್ಲಿ “ಜುಗಲ್ ಬಂದಿ” ಪ್ರಯೋಗವನ್ನು ಪ್ರಥಮ ಬಾರಿಗೆ ಪರಿಚಯಿಸಿದ ಶ್ರೇಯಸ್ಸು ಕುಬಣೂರು ಶ್ರೀಧರ ರಾವ್ ಅವರಿಗೆ ಸಲ್ಲುತ್ತದೆ. ಅದರಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟರು, ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರು ಚೆಂಡೆಗೆ ಮತ್ತು ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಮದ್ದಳೆಗೆ ಇದ್ದು “ಬ್ರಹ್ಮಕಪಾಲ” ಎಂಬ ಪ್ರಸಂಗದಲ್ಲಿ ಇದನ್ನು ಪ್ರಪ್ರಥಮವಾಗಿ ಪ್ರಯೋಗ ಮಾಡಲಾಯಿತು. ಬಳಿಕ 1979ರಲ್ಲಿ ಕೂಡ್ಲು ಮೇಳವನ್ನು ಸಂಘಟಿಸಿದ್ದ ಕುಬಣೂರು ಅವರು ಅದರಲ್ಲಿ ದೊಡ್ಡ ಅಗರಿ ಭಾಗವತರು, ಕುದ್ರೆಕೋಡ್ಲು ರಾಮ ಭಟ್ಟರು, ಮಾಂಬಾಡಿಯವರು, ಶಂಕರನಾರಾಯಣ ಸಾಮಗರು, ಹೊಸಹಿತ್ಲು ಮಹಾಲಿಂಗ ಭಟ್ಟರು, ಪೆರುವೋಡಿ ನಾರಾಯಣ ಭಟ್ಟರು, ಕೋಡ್ಳ ಗಣಪತಿ ಭಟ್ಟರು, ಶಂಭು ಶರ್ಮ ಮೊದಲಾದ ಕಲಾವಿದರನ್ನು ಒಟ್ಟು ಸೇರಿಸಿದ್ದರು. ಕೇವಲ ಪೌರಾಣಿಕ ಪ್ರಸಂಗಗಳನ್ನು ಮಾತ್ರ ಸಂಯೋಜಿಸಿದ ಕಾರಣವೋ ಏನೋ, ಅದರಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಯಿತು.
ಆ ಸಮಯದಲ್ಲಿ ಅಂದರೆ 1981ರಲ್ಲಿ ಕರ್ನೂರು ಕೊರಗಪ್ಪ ರೈಗಳು ಕದ್ರಿ ಮೇಳವನ್ನು ಆರಂಭಿಸಿದರು. ಆಗ ಅವರ ಕೋರಿಕೆಯಂತೆ ಕದ್ರಿ ಮೇಳಕ್ಕೆ ಸೇರಿದರು. ಮರುವರ್ಷ ಗಣಪತಿ ಭಟ್ಟರ ನಂದಾವರ ಮೇಳ, ಅದರ ಮರುವರ್ಷ ಅರುವ ಮೇಳ, ಮತ್ತೆ ನಾಲ್ಕು ವರ್ಷ ಬಪ್ಪನಾಡು ಮೇಳಗಳ ತಿರುಗಾಟ. ನಂತರ ಪುನಃ ಕದ್ರಿ ಮೇಳಕ್ಕೆ ಕರೆಬಂದಾಗ ಅಲ್ಲಿ ದೊಡ್ಡ ಕಲಾವಿದರ ಗಡಣವೇ ಇತ್ತು. ರಾಮದಾಸ ಸಾಮಗರು, ಕೋಳ್ಯೂರು ರಾಮಚಂದ್ರ ರಾಯರು, ಚೆನ್ನಪ್ಪ ಶೆಟ್ಟರು, ವಿಶ್ವನಾಥ ಶೆಟ್ಟರು, ಸೀತಾರಾಮ ಕುಮಾರ್, ಬಂಟ್ವಾಳ ಜಯರಾಮ ಆಚಾರ್ಯ, ಮೊದಲಾದವರಿದ್ದರು. ನಂತರ ಕಾಂತಾವರ ಮೇಳಕ್ಕೆ, ಆಮೇಲೆ ಕಲ್ಲಾಡಿ ವಿಠಲ ಶೆಟ್ಟರು ಕಟೀಲು ಮೇಳಕ್ಕೆ ಆಹ್ವಾನಿಸಿದರು. ಹಾಗೆ ಕಳೆದ 27 ವರ್ಷಗಳಿಂದ ಕಟೀಲು ಮೇಳದಲ್ಲೇ ಪ್ರಧಾನ ಭಾಗವತರಾಗಿದ್ದರು.
ಬಪ್ಪನಾಡು ಮೇಳದಲ್ಲಿರುವಾಗ ದೇವೇಂದ್ರನ ಬಗ್ಗೆ ನೃತ್ಯರೂಪಕವೊಂದನ್ನು ಸಂಯೋಜಿಸಿದ್ದರು. ಆ ದೃಶ್ಯದಲ್ಲಿ ಮಾತುಗಳಿಲ್ಲ, ಬರಿಯ ನೃತ್ಯರೂಪಕ. ಕಟೀಲು ಮೇಳಕ್ಕೆ ಸೇರಿದ ನಂತರ ನಾಲ್ಕು ಕನ್ನಡ ಪ್ರಸಂಗಗಳನ್ನು ಬರೆದಿದ್ದ ಶ್ರೀಯುತರು (ದಾಶರಥಿ ದರ್ಶನ, ಮನುವಂಶವಾಹಿನಿ, ಸಾರ್ವಭೌಮ ಸಂಕರ್ಷಣ, ಮಹಾಸತಿ ಮಂದಾಕಿನಿ) ತುಳುವಿನಲ್ಲಿ ಪಟ್ಟದ ಮಣೆ ಎಂಬ ಒಂದು ಪ್ರಸಂಗವನ್ನೂ ಬರೆದಿದ್ದರು. ಅದಲ್ಲದೆ ಕೆಲವು ಸಣ್ಣ ಸಣ್ಣ ಪ್ರಸಂಗಗಳನ್ನೂ ಬರೆದಿದ್ದರು. 1995ರಲ್ಲಿ ‘ಯಕ್ಷಪ್ರಭಾ’ ಮಾಸಪತ್ರಿಕೆಯನ್ನು ಆರಂಭಿಸಿದ್ದರು. ಪತ್ರಿಕೆ ನಡೆಸಲು ಆರಂಭದಲ್ಲಿ ಬಹಳಷ್ಟು ಕಷ್ಟಪಟ್ಟಿದ್ದರು. ಈಗ ಅಲ್ಲಿಂದಲ್ಲಿಗೆ ನಡೆಯುತ್ತಾ ಉಂಟು ಅಂತ ಹೇಳುತ್ತಿದ್ದರು.

“ಪತ್ರಿಕೆಯನ್ನು ಲಾಭಕ್ಕೋಸ್ಕರ ಮಾಡಿದ್ದಲ್ಲ. 8 ವರ್ಷಗಳಿಂದ ದಿ| ದಾಮೋದರ ಮಂಡೆಚ್ಚ ಪ್ರಶಸ್ತಿ ಸಮಿತಿಯ ಸಂಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಗರಿ ಪ್ರಶಸ್ತಿ ಹಾಗೂ ಇತರ ಹಲವಾರು ಪ್ರಶಸ್ತಿ, ಸನ್ಮಾನಗಳು ಬಂದಿವೆ. ಆಮೇಲೆ ಕಲ್ಲಾಡಿ ವಿಠಲ ಶೆಟ್ಟರ ಜೀವನಚರಿತ್ರೆಯ ಬಗ್ಗೆ ಪ್ರಕಟವಾದ ಪುಸ್ತಕ “ಯಕ್ಷ ವಿಜಯ ವಿಠಲ”ದ ಸಂಪಾದಕನಾಗಿದ್ದೆ. ಮದುವೆಯಾದ ಬಳಿಕ ಭಾಗಮಂಡಲದ ಆಸ್ತಿಯನ್ನು ಮಾರಿ ಉಜಿರೆಯಲ್ಲಿ ಆಸ್ತಿ ಖರೀದಿಸಿ ಅಲ್ಲೇ ವಾಸ್ತವ್ಯ ಹೂಡಿದ್ದೇನೆ. ಇಬ್ಬರು ಮಕ್ಕಳಲ್ಲಿ ಮಗಳು ಶ್ರೀವಿದ್ಯಾ ಪತ್ರಿಕೋದ್ಯಮ ಪದವಿ ಪಡೆದು ಟಿವಿ9, ಈಟಿವಿಯಲ್ಲಿ ಕೆಲಸ ಮಾಡಿದ್ದಳು. ಅಳಿಯ ಸಿಂಗಾಪುರದಲ್ಲಿ ಸಾಫ್ಟ್‍ವೇರ್ ಉದ್ಯೋಗಿ. ಮಗ ಶ್ರೀಕಾಂತ ಕರ್ಣಾಟಕ ಬ್ಯಾಂಕ್ ನಲ್ಲಿ ಸಹಾಯಕ ಪ್ರಬಂಧಕನಾಗಿ ಸೇವೆ ಸಲ್ಲಿಸುತ್ತಿದ್ದಾನೆ. ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಶ್ರೀ ಭೀಮ ಭಟ್ಟರ ಮುಂಬೈ, ಮಹಾರಾಷ್ಟ್ರದ ಮಳೆಗಾಲದ ತಿರುಗಾಟಗಳು ಹಾಗೂ ಶ್ರೀ ನಿಡ್ಲೆ ಗೋವಿಂದ ಭಟ್ಟರ ಮಳೆಗಾಲದ ತಿರುಗಾಟದ ಪ್ರಾರಂಭದ ವರ್ಷಗಳಲ್ಲಿ ಭಾಗವಹಿಸಿದ್ದೆ. ಆಮೇಲೆ ಪತ್ರಿಕೆಯ ಸಂಪಾದಕನಾಗಿ ಜವಾಬ್ದಾರಿ ಹೆಚ್ಚಿದುದರಿಂದ ಅನಿವಾರ್ಯವಾಗಿ ಹೋಗಲಾಗಲಿಲ್ಲ. ಅಗರಿ ಶ್ರೀನಿವಾಸ ಭಾಗವತರ ಸಂಪುಟ ಹೊತ್ತಗೆಯನ್ನು ಸಂಸ್ಕರಿಸಿ ಮುದ್ರಿಸುವಲ್ಲಿ ಸಹಕರಿಸಿದ್ದೇನೆ. ತೆಂಕುತಿಟ್ಟಿನ ಯಕ್ಷಗಾನದ ಕಟೀಲು ಮೇಳದ ಪ್ರಸ್ತುತ ಕಲಾವಿದರಲ್ಲಿ ಅತೀ ಹಿರಿಯನೂ, ತೆಂಕುತಿಟ್ಟಿನ ವೃತ್ತಿಪರ ಹಿರಿಯ ಕಲಾವಿದರಲ್ಲಿ ನಾನೂ ಒಬ್ಬನೂ ಎಂದು ಹೇಳಲು ಸಂತೋಷಿಸುತ್ತೇನೆ…” ಎಂದು ಅಂದು ಮನಬಿಚ್ಚಿ ಮಾತನಾಡಿದ್ದರು.
ಮುಂದೆ ಭಾಗವತರಾಗ ಬಯಸುವವರಿಗೆ ನನ್ನ ಸಂದೇಶ “ಹಾಡುವುದಕ್ಕಾಗಿ ಯಕ್ಷಗಾನವನ್ನು ಆರಿಸಿಕೊಳ್ಳಬೇಡಿ, ಯಕ್ಷಗಾನಕ್ಕಾಗಿ ಹಾಡಿ” ಎಂಬುದಾಗಿ ಅಂದು ಹೇಳಿದ್ದ ಅವರು ಯಕ್ಷಗಾನಕ್ಕಾಗಿಯೇ ಹಾಡಿದರು. ಯಕ್ಷಗಾನದಲ್ಲಿಯೇ ತಮ್ಮ ಸಾರ್ಥಕ ಬದುಕನ್ನು ಕಂಡವರು.
ರಾಗಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನನಗೆ ಕೊಡಬೇಕೆಂದು ಶ್ರೀ ಕುಬಣೂರು ಶ್ರೀಧರ ರಾವ್ ಅವರಲ್ಲಿ ವಿನಂತಿಸಿಕೊಂಡಿದ್ದೆ. ಅವರು ಸಂತೋಷದಿಂದ ‘‘ಇನ್ನೊಮ್ಮೆ ಮಾತನಾಡುವ, ಬನ್ನಿ” ಎಂದು ಒಪ್ಪಿದ್ದರು. ಆದರೆ ಅವರು ಹೇಳಿದ ‘ಇನ್ನೊಮ್ಮೆ…’ ಮತ್ತೆ ಬರಲಾರದು ಎನ್ನುವುದು ವಾಸ್ತವ, ಆದರೆ ಅಷ್ಟೇ ಕಟುವಾದ ಕಹಿ.

ಲೇಖನ: ಮನಮೋಹನ್ ವಿ.ಎಸ್.  

ನಾವರಿಯದ ದೇರಾಜೆ – ಸೀತಾರಾಮಯ್ಯನವರ ಸಾಧನೆಯ ಬೆಳಕು (Navariyada Deraje Seethramayyanavara sadhaneya Belaku)

‘ ನಾವರಿಯದ ದೇರಾಜೆ ಸೀತಾರಾಮಯ್ಯನವರ ಸಾಧನೆಯ ಬೆಳಕು’ ಎಂಬ ಈ ಹೊತ್ತಗೆಯ ಲೇಖಕರು ಶ್ರೀ ಪ್ರಸಾದ್ ರಕ್ಷಿದಿ. ಇದು ದ್ವಿತೀಯ ಮುದ್ರಣವಾಗಿದ್ದು, ಮೊದಲೊಮ್ಮೆ ಕಾಂತಾವರ ಕನ್ನಡ ಸಂಘದವರಿಂದ ಮುದ್ರಿಸಲ್ಪಟ್ಟಿತ್ತು. (2014ರಲ್ಲಿ) ದ್ವಿತೀಯ ಮುದ್ರಣವೂ 2014 ರಲ್ಲಿಯೇ ನಡೆದಿತ್ತು. ದ್ವಿತೀಯ ಮುದ್ರಣದ ಪ್ರಕಾಶಕರು ಜ್ಞಾನಗಂಗಾ ಪ್ರಕಾಶನ, ಪುತ್ತೂರು. ಶ್ರೀ ಪ್ರಕಾಶ್ ಕೊಡೆಂಕಿರಿ ಅವರು ‘ಪ್ರಕಾಶಕರ ಮಾತು’ ಎಂಬ ಬರಹದಲ್ಲಿ ‘ನಾವರಿಯದ ದೇರಾಜೆ’ ಎಂಬ ಪುಸ್ತಕವು ಸೆಪ್ಟೆಂಬರ್ 2014ರಂದು ಕಾಂತಾವರ ಕನ್ನಡ ಸಂಘದವರಿಂದ ಪ್ರಕಟವಾಗಿತ್ತು. ಪ್ರತಿಗಳು ಮುಗಿದಿದ್ದು, ಬಹು ಬೇಡಿಕೆ ಇರುವುದರಿಂದ ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನದವರ ಅಪೇಕ್ಷೆಯಂತೆ ಮರು ಮುದ್ರಿಸುತ್ತಿದ್ದೇವೆ. ಲೇಖಕರಾದ ಶ್ರೀ ಪ್ರಸಾದ್ ರಕ್ಷಿದಿಯವರು ‘ಮೊದಲ ಮಾತು’ ಎಂಬ ಶೀರ್ಷಿಕೆಯಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ದೇರಾಜೆಯವರ ಬಗೆಗೆ ಬರೆಯಲು ಅವಕಾಶ ಸಿಕ್ಕಿದ ಸನ್ನಿವೇಶ, ದೇರಾಜೆಯವರ ವಿಚಾರಗಳನ್ನು ಸಂಗ್ರಹಿಸಲು ಅವರು ಪಟ್ಟ ಪ್ರಯತ್ನ, ಆಗ ಉಂಟಾದ ಅನುಭವಗಳನ್ನು ಶ್ರೀ ಪ್ರಸಾದ್ ರಕ್ಷಿದಿಯವರು ತಮ್ಮ ‘ಮೊದಲ ಮಾತು’ ಬರಹದಲ್ಲಿ ತಿಳಿಸಿದ್ದಾರೆ. ಬಳಿಕ ಶ್ರೀ ದೇರಾಜೆಯವರು ಆರ್ತರನ್ನು ರಕ್ಷಿಸುವ ಕರುಣಾಮಯಿಯಾಗಿ, ಯಶಸ್ವೀ ಕೃಷಿಕರಾಗಿ, ಸಮಾಜ ಸೇವಕರಾಗಿ, ಯಕ್ಷಗಾನ ಕಲಾವಿದರಾಗಿ, ಸಂಘಟಕರಾಗಿ, ಧಾರ್ಮಿಕ ಮುಖಂಡರಾಗಿ, ಶ್ರೇಷ್ಠ ಸಾಹಿತಿಯಾಗಿ ಸಮಾಜಕ್ಕೆ ಸಲ್ಲಿಸಿದ ಅನುಪಮ ಕೊಡುಗೆಗಳನ್ನು ಶ್ರೀ ಪ್ರಸಾದ್ ರಕ್ಷಿದಿ ಅವರು ಓದುಗರಿಗೆ ಮನಮುಟ್ಟುವಂತೆ ವಿವರಿಸಿದ್ದಾರೆ. ಚೊಕ್ಕಾಡಿ, ಬೆಳ್ಳಾರೆ, ಬೆಳ್ತಂಗಡಿ, ವಿಟ್ಲ, ಎಂಬ ನಾಲ್ಕು ವಿಭಾಗಗಳನ್ನು ಮಾಡಿ ‘ನಾವರಿಯದ ದೇರಾಜೆ’ ಎಂಬ ಪುಸ್ತಕವನ್ನು ಶ್ರೀ ಪ್ರಸಾದ್ ರಕ್ಷಿದಿಯವರು ಬರೆದಿರುತ್ತಾರೆ. ಇವು ನಾಲ್ಕು ಶ್ರೀ ದೇರಾಜೆಯವರು ಬೇರೆ ಬೇರೆ ಕಾಲಘಟ್ಟಗಳಲ್ಲಿ ವಾಸಿಸಿದ್ದ ಸ್ಥಳಗಳು. ಸುಮಾರು ಮೂವತ್ತಕ್ಕೂ ಹೆಚ್ಚು ಕಪ್ಪು ಬಿಳುಪಿನ ಛಾಯಾಚಿತ್ರಗಳನ್ನು ಶ್ರೀ ದೇರಾಜೆಯವರು ಬರೆದ ಕೃತಿಗಳ ವಿವರಗಳನ್ನೂ ನೀಡಲಾಗಿದೆ. ಶ್ರೀ ದೇರಾಜೆಯವರ ಕುರಿತು ಶ್ರೀ ಪ್ರಸಾದ್ ರಕ್ಷಿದಿಯವರು ಬರೆದ ನಲುವತ್ತನಾಲ್ಕು ಪುಟಗಳ ಉತ್ತಮ ಹೊತ್ತಗೆಯಿದು.

ಲೇಖಕ: ರವಿಶಂಕರ್ ವಳಕ್ಕುಂಜ 

ಲಕ್ಷ್ಮೀಶ ಅಮ್ಮಣ್ಣಾಯ – ಮದ್ದಳೆಯ ‘ಶುದ್ಧಹಸ್ತ’ (Lakshmisha Ammannaya)

ಮಾತಿಗೆ ಕುಳಿತರೆ ಬಹಳಷ್ಟೂ ಮಾತನಾಡುವ ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆಯ ನುಡಿತದಲ್ಲೂ  ನಿಪುಣರು. ತಾನು ಸ್ವತಃ  ಪ್ರಚಾರಪ್ರಿಯರಲ್ಲ. ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವುದಿಲ್ಲ. ಆದರೆ ಅವರ ಮದ್ದಳೆಯ ನುಡಿತ ಅವರ ಬಗ್ಗೆ ಎಲ್ಲವನ್ನೂ ನಮಗೆ ತಿಳಿಸಿಕೊಡುತ್ತದೆ. ಕೆಲವೊಮ್ಮೆ ಜನಪ್ರಿಯತೆ ಮತ್ತು ಶ್ರೇಷ್ಠತೆಗಳು ಪರಸ್ಪರ ಸಂಬಂಧವಿರದ ಶಬ್ದಗಳ ಹಾಗೆ ಗೋಚರಿಸುತ್ತವೆ. ಶ್ರೇಷ್ಠರೆಲ್ಲಾ ಜನಪ್ರಿಯರಲ್ಲ. ಜನಪ್ರಿಯರೆಲ್ಲ ಶ್ರೇಷ್ಠರಾಗಿಯೂ ಇಲ್ಲ. ಅಮ್ಮಣ್ಣಾಯರು ತಮ್ಮ  ಕಲಾಜೀವನದಲ್ಲಿ 22 ವರ್ಷಗಳನ್ನು ಮೇಳದ ತಿರುಗಾಟಗಳಲ್ಲಿಯೂ  ಆಮೇಲೆ ವಿಶೇಷ ಅಭಿಮಾನದಿಂದ ಕರೆದಲ್ಲಿಗೆ ಹವ್ಯಾಸೀ ಕಲಾವಿದನಾಗಿಯೂ  ಭಾಗವಹಿಸಿದ್ದಾರೆ. ಎಡನೀರು ಮೇಳದಲ್ಲಿ ಹೆಚ್ಚಾಗಿ ಅತಿಥಿ ಕಲಾವಿದನಾಗಿ ಭಾಗವಹಿಸಿದ್ದಾರೆ. ಅವರಿಗೆ ಕೃಷಿಭೂಮಿ ಸಾಕಷ್ಟಿದೆ. ಕೃಷಿ ಕೆಲಸಗಳಲ್ಲಿ ಹಾಗೂ ಹವ್ಯಾಸೀ ಕಲಾವಿದನಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಲಕ್ಷ್ಮೀಶ ಅಮ್ಮಣ್ಣಾಯರು ಯಕ್ಷಗಾನದ ಹಿಮ್ಮೇಳ ಕಲಿತ ಕಥೆಯೇ ಆಸಕ್ತಿದಾಯಕ ಮತ್ತು ರೋಚಕವಾಗಿದೆ. ಅವರ  ಮೂಲ ತರವಾಡು ಮನೆಯಲ್ಲಿ ಯಕ್ಷಗಾನದ ವೇಷಭೂಷಣಗಳು ಮತ್ತು  ಯಕ್ಷಗಾನದ ರಂಗಸ್ಥಳದ ಪರಿಕರಗಳಾದ ಪರದೆ, ನಾಟಕದ ಪರದೆ ಮತ್ತು ಹಿಮ್ಮೇಳದ ವಾದನಗಳೆಲ್ಲಾ ಇದ್ದುವು. ಇವರ ತಂದೆಯವರಾದ ವಿಷ್ಣು ಅಮ್ಮಣ್ಣಾಯರು ಉತ್ತಮ ಭಾಗವತ ಮತ್ತು ಅರ್ಥಧಾರಿಯಾಗಿದ್ದರು. ಅವರ ಮನೆಯಲ್ಲಿ  ಪ್ರತಿದಿನವೂ ಸಂಗೀತದ ಸಮಾರಾಧನೆಯೇ ನಡೆಯುತ್ತಿತ್ತಂತೆ.  ಇವರ ದೊಡ್ಡಪ್ಪನ ಮಗ ಪುರುಷೋತ್ತಮ ಅಮ್ಮಣ್ಣಾಯ ಮತ್ತು ಚಿಕ್ಕಪ್ಪನ ಮಗ ದಿನೇಶ ಅಮ್ಮಣ್ಣಾಯ ಹಾಗೂ ಲಕ್ಷ್ಮೀಶ ಅಮ್ಮಣ್ಣಾಯರು ಒಟ್ಟು ಸೇರಿದರೆ ಮತ್ತೆ ಕೇಳುವುದೇ ಬೇಡ. ದಿನಾಲೂ ಯಕ್ಷೋತ್ಸವ.  ಚಿಕ್ಕಂದಿನಲ್ಲಿ  ಲಕ್ಷ್ಮೀಶ ಅಮ್ಮಣ್ಣಾಯರಿಗೆ ಯಕ್ಷಗಾನದ ಆಸಕ್ತಿಯಿರಲಿಲ್ಲ.  ಬ್ಯಾನರ್ ಬರೆಯುವುದೇ ಮೊದಲಾದ ಚಿತ್ರಕಲೆ(painting)ಯಲ್ಲಿ ಅತೀವ ಉತ್ಸಾಹ, ಶ್ರದ್ಧೆಗಳಿದ್ದುವು.  ಸುತ್ತಮುತ್ತಲಿನ ಜನರೆಲ್ಲರೂ ಬ್ಯಾನರ್ ಬರೆಯುವ ಕೆಲಸಗಳನ್ನು ಮಾಡಿಕೊಡಬೇಕೆಂದು ದುಂಬಾಲು ಬೀಳುತ್ತಿದ್ದರು. ಇದರಿಂದಾಗಿ ಯಕ್ಷಗಾನ ಕಲಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರು.  ಭಾಗವತಿಕೆ ಕಲಿಸಬೇಕೆಂದು ತಂದೆಯವರ ಇಚ್ಛೆಯಾಗಿತ್ತು. ಆದರೆ ಇವರಿಗೆ ಪದ್ಯ ಹೇಳಲು ಬರಲಿಲ್ಲ.  ಸಹೋದರ ಸಂಬಂಧಿ ದಿನೇಶ ಅಮ್ಮಣ್ಣಾಯರು ಕಲಿತು ಪರಿಣತಿಯನ್ನೂ ಸಾಧಿಸಿದರು.  ಆ ನಂತರ ಅಮ್ಮಣ್ಣಾಯರ ತಂದೆಯವರು ಭಾಗವತಿಕೆ ಕಲಿಸುವ ಸಾಹಸವನ್ನು ಕೈಬಿಟ್ಟು ಚೆಂಡೆ-ಮದ್ದಳೆ ಕಲಿಸಲು ಆರಂಭಿಸಿದರು.  15 ದಿನಗಳ ಅವಧಿಯ ಕ್ಲಾಸು ಮಾಡಿದರೂ ಅಷ್ಟಾಗಿ ಬಾರಿಸಲು ಬರಲೇ ಇಲ್ಲ. ವಿಷ್ಣು ಅಮ್ಮಣ್ಣಾಯರು ಮಗನ ಮೇಲಿನ ಕೋಪದಿಂದ  ಚೆಂಡೆ-ಮದ್ದಳೆಯನ್ನು ಅಟ್ಟಕ್ಕೆ ಹಾಕಿದರು. ಕಾರಣವಿಷ್ಟೇ.  ಲಕ್ಷ್ಮೀಶ ಅಮ್ಮಣ್ಣಾಯರ  ದೊಡ್ಡ ಅಣ್ಣ ಮೋಹನ್ ಅಮ್ಮಣ್ಣಾಯ ಮೃದಂಗ ವಿದ್ವಾನ್ ಇನ್ನೊಬ್ಬ ರಘುರಾಮ ಅಮ್ಮಣ್ಣಾಯ ವಯೋಲಿನ್, ವೋಕಲ್ ವಿದ್ವಾನ್. ಇವನಿಗೆ ಮಾತ್ರ  ಸಂಗೀತ ಸಿದ್ಧಿಸುವುದಿಲ್ಲವೋ ಎಂಬ ಆತಂಕದಿಂದ ಅವರು ಹಾಗೆ ಮಾಡಿದ್ದಿರಬಹುದು. ಆಮೇಲೆ  ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ಹಿಮ್ಮೇಳ ತರಗತಿಗೆ ಸೇರಿದರು. ಒಂದು ದಿನ ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆ ಬಾರಿಸುತ್ತಿದ್ದುದನ್ನು ಧರ್ಮಸ್ಥಳ ಕೇಂದ್ರದಲ್ಲಿ ಗಮನಿಸಿದ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಅವರನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿದರು. ಮುಂದಿನದ್ದು ಇತಿಹಾಸ. ಚಿಪ್ಪಾರು ಕೃಷ್ಣಯ್ಯ ಬಲ್ಲಾಳರ ಪ್ರೋತ್ಸಾಹ ಮತ್ತು ಕಲಿಸುವಿಕೆ, ಕಡತೋಕ ಮಂಜುನಾಥ ಭಾಗವತರ ಒಡನಾಟ ಮಾರ್ಗದರ್ಶನಗಳಿಂದ ಲಕ್ಷ್ಮೀಶ ಅಮ್ಮಣ್ಣಾಯರು ಬಹುಬೇಗ ಪ್ರಸಿದ್ಧಿಯ ಪಥದತ್ತ ಮುನ್ನಡೆದರು.  ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು  ಮೇಳಕ್ಕೆ ಸೇರಿದ ಎರಡನೇ ವರ್ಷದಲ್ಲೇ ಪೀಠಿಕೆ ಬಾರಿಸಲು ಅವಕಾಶ ನೀಡಿದರು. ಲಕ್ಷ್ಮೀಶ ಅಮ್ಮಣ್ಣಾಯರು ಚೆಂಡೆ ಬಾರಿಸುವ ಸಂದರ್ಭಗಳಲ್ಲೆಲ್ಲಾ ಸ್ವತಃ ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು ಮದ್ದಳೆ ಬಾರಿಸಲು ಕುಳಿತು ಹುರಿದುಂಬಿಸುತ್ತಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಬಲ್ಪದಲ್ಲಿದ್ದ ಅವರ ಜಾಗ ಮಾರಾಟವಾಗುವ ಸಂದರ್ಭದಲ್ಲಿ  ಕೃಷಿಯನ್ನು ನೋಡಿಕೊಳ್ಳಬೇಕಾದ ಕಾರಣದಿಂದ ಲಕ್ಷ್ಮೀಶ ಅಮ್ಮಣ್ಣಾಯರು ಧರ್ಮಸ್ಥಳ ಮೇಳವನ್ನು ಬಿಡಬೇಕಾಗಿ ಬಂತು. ಆದರೂ ಆಮೇಲೆ ವಿವಿಧ ಮೇಳಗಳಲ್ಲಿ ತಿರುಗಾಟ ಮಾಡಿದ್ದರು. 

1958ರಲ್ಲಿ ಸುಳ್ಯ ತಾಲೂಕಿನ ಪಂಜದ ಸಮೀಪ ಬಲ್ಪ ಗ್ರಾಮದ ಮೂಡ್ನೂರು ಮನೆಯಲ್ಲಿ ಹುಟ್ಟಿದ  ಲಕ್ಷ್ಮೀಶ ಅಮ್ಮಣ್ಣಾಯರು ಮದ್ದಳೆಗಾರನಾಗಿ ಧರ್ಮಸ್ಥಳ ಮೇಳದಲ್ಲಿ 4 ವರ್ಷಗಳು, ಮಂಗಳಾದೇವಿ ಮತ್ತು ಬಪ್ಪನಾಡು ಮೇಳಗಳಲ್ಲಿ ತಲಾ 2 ವರ್ಷಗಳು, ಪುತ್ತೂರು, ಅರುವ, ಕರ್ನಾಟಕ ಮೇಳಗಳಲ್ಲಿ ತಲಾ 1 ವರ್ಷ, ಕುಂಬ್ಳೆ ಮೇಳದಲ್ಲಿ 4 ವರ್ಷ, ಕದ್ರಿ ಮೇಳದಲ್ಲಿ ಸುಮಾರು 7 ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ. ಯಕ್ಷಗಾನದಲ್ಲಿ ಗುರುಗಳು ಶ್ರೀ ಮುಂಡ್ರುಪ್ಪಾಡಿ ಶ್ರೀಧರ ರಾವ್ ಮತ್ತು ತಂದೆಯವರಾದ ಶ್ರೀ ವಿಷ್ಣು ಅಮ್ಮಣ್ಣಾಯರು. ಲಕ್ಷ್ಮೀಶ ಅಮ್ಮಣ್ಣಾಯರ ತಂದೆ  ಶ್ರೀ ವಿಷ್ಣು ಅಮ್ಮಣ್ಣಾಯ ತಾಯಿ  ಶ್ರೀಮತಿ ಲಕ್ಷ್ಮೀ, ಪತ್ನಿ ಶ್ರೀಮತಿ ಗೀತಾ ಎಲ್. ಅಮ್ಮಣ್ಣಾಯ, ಮಗಳು ವಿಭಾರಾಣಿ(ಬರಹಗಾರ್ತಿ, ಸಾಹಿತಿ), ಅಳಿಯ ಕೃಷ್ಣಪ್ರಕಾಶ ಉಳಿತ್ತಾಯ(ಖ್ಯಾತ ಯುವ ಮದ್ದಳೆಗಾರ, ಕರ್ನಾಟಕ ಬ್ಯಾಂಕ್ ಅಧಿಕಾರಿ, ಸೃಜನಶೀಲ ಸಾಹಿತಿ ), ಮಗ ಗುರುಮೂರ್ತಿ, ಸೊಸೆ  ಅನುಷ್ಕಾ (ಸಂಗೀತ ಪ್ರವೀಣೆ) ಮಗಳು ಶುಭಾರಾಣಿ, ಅಳಿಯ ಕಾರ್ತಿಕೇಯ. 

“ಒಂದು ಕಾಲದಲ್ಲಿ ಮೈಕ್ ವ್ಯವಸ್ಥೆ ಹೇಗಿತ್ತು ಅಂದರೆ, ಇಡೀ ರಂಗಸ್ಥಳದಲ್ಲಿ ಎರಡೇ ಮೈಕ್ ಇತ್ತು. ಒಂದು ಮೈಕ್ ಭಾಗವತರಿಗಿಂತ ಸ್ವಲ್ಪ ದೂರವೇ ಇತ್ತು. ಈಗಿನ ಹಾಗೆ ಭಾಗವತರ ಮುಖದ ಸಮೀಪ ಇರಲಿಲ್ಲ. ಆಗ ಭಾಗವತರ ಪದ್ಯ, ಚೆಂಡೆ, ಮದ್ದಳೆಗಳ ಸಮನ್ವಯವು ನಾದದಲ್ಲಿ ಪ್ರತಿಫಲಿಸಿ ಸುಂದರವಾಗಿ ಮೂಡುತ್ತಿದ್ದುವು. ಯಾವಾಗ ಮೈಕ್ ಭಾಗವತರ ಮುಖದ ಸಮೀಪಕ್ಕೆ ಬಂತೋ ಆಗ ಮದ್ದಳೆಯ ನಾದವೂ ಅನಿವಾರ್ಯವಾಗಿ ಏರಿಕೆಯನ್ನು ಬಯಸಿತು. ಮದ್ದಳೆಗೆ ಮೈಕ್ ಇಡುವುದರಲ್ಲಿ ಒಂದು ನಿಪುಣತೆಯಿದೆ. ಮದ್ದಳೆಯ ಎರಡೂ ಬದಿಗೆ ಮೈಕ್ ಇಡಬೇಕು. ಬಲಕ್ಕೆ ಇಡುವ ಮೈಕ್‍ನ ಶಬ್ದಕ್ಕಿಂತ ಎಡಕ್ಕೆ ಇಡುವ ಮೈಕ್‍ನ Volume ಕಡಿಮೆ ಇಡಬೇಕು. ಸುಮಾರು ಅರ್ಧದಷ್ಟು ಕಡಿಮೆ. ಹಾಗೂ ಮೈಕ್‍ನ್ನು ಮದ್ದಳೆಗಿಂತ ಎಷ್ಟು ದೂರದಲ್ಲಿ ಇಡಬೇಕು ಎಂದು ಮದ್ದಳೆಗಾರನಿಗೆ ತಿಳಿದಿರಬೇಕು. ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳದಿದ್ದರೆ ಮದ್ದಳೆಯ ನಾದವೇ ಅತಿಯಾಗಿ ಕೇಳಿಸಿ ಚೆಂಡೆಯ ತೀವ್ರತೆ ಕಡಿಮೆಯಾದೆಂತೆನಿಸುತ್ತದೆ. ಧ್ವನಿವರ್ಧಕಗಳನ್ನು ಉಪಯೋಗಿಸಲು ಹಿಮ್ಮೇಳದವರಿಗೆ ಗೊತ್ತಿರಬೇಕು. ಇದಕ್ಕೇ ಹೇಳುವುದು ಸಮನ್ವಯತೆ ಬೇಕು ಅಂತ. ಇದನ್ನೆಲ್ಲಾ ನೋಡುವಾಗ ಈ ರೀತಿಯ ವ್ಯವಸ್ಥೆಗಳನ್ನು ನಿರ್ಧರಿಸಲು ಸರಿಯಾದ ಒಬ್ಬ ರಂಗತಂತ್ರಜ್ಞ, ನಿರ್ದೇಶಕ ಬೇಕಾಗುತ್ತದೆ. ಅವರ ಮಾತೇ ಅಂತಿಮವಾಗಿರಬೇಕು”. ಎಂದು ಶ್ರೀ ಲಕ್ಷ್ಮೀಶ ಅಮ್ಮಣ್ಣಾಯರು ಹೇಳುತ್ತಾರೆ. 

ಹೇಮಸ್ವಾತಿ ಕುರಿಯಾಜೆ ಮತ್ತು ದೇವಿಕಾ ಕುರಿಯಾಜೆ ವಿದ್ಯಾರ್ಜನೆಯ ಜೊತೆ ಕಲಾಸೇವೆ (Hemaswathi Kuriyaje and Devika Kuriyaje)

ಯಕ್ಷಗಾನವು ಶ್ರೇಷ್ಠ ಕಲೆ ಎಂಬ ಅರ್ಥದಲ್ಲಿ ಗಂಡುಕಲೆ ಎಂದು ಪ್ರಸಿದ್ಧವಾಗಿದೆ. ಹೆಣ್ಣು ಮಕ್ಕಳೂ ಗಂಡು ಕಲೆಯಲ್ಲಿ ತೊಡಗಿಸಿಕೊಂಡು ಕಲಾಸೇವೆಯನ್ನು ಮಾಡುತ್ತಿದ್ದಾರೆ. ರಂಗವೇರಿ ಅಭಿನಯಿಸುತ್ತಿದ್ದಾರೆ. ಬಾಲಕಲಾವಿದ ಕಲಾವಿದೆಯರನ್ನು ವೃತ್ತಿಕಲಾವಿದರಿಗೆ ಹೋಲಿಸುವುದು ಸರಿಯಲ್ಲ. ಆದರೂ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದದ್ದು ಧರ್ಮ. ವಿದ್ಯಾರ್ಜನೆಯ ಜೊತೆ ಕಲಾಸೇವೆಯನ್ನು ಮಾಡುತ್ತಾ ಹೊಳೆದು ಕಾಣಿಸಿಕೊಳ್ಳುತ್ತಿರುವ ಬಾಲಕ ಬಾಲಕಿಯರನ್ನು ನಾವು ಪ್ರೋತ್ಸಾಹಿಸೋಣ. ನಮ್ಮೆಲ್ಲರ ಪ್ರೋತ್ಸಾಹ ಉತ್ತೇಜನವು ಇನ್ನಷ್ಟು ಕಲಾಸೇವೆಯನ್ನು ಮಾಡುವಲ್ಲಿ ಅವರಿಗೆ ಟಾನಿಕ್ ಆಗಿ ಪರಿಣಮಿಸಲಿ. ಮೊದಲೆಲ್ಲಾ ಬಾಲಕಿಯರ ಕಲಾಕಲಿಕೆ ಸಂಗೀತಕ್ಕೆ ಮಾತ್ರ ಸೀಮಿತವಾಗಿತ್ತು. ಇಂದು ಹಾಗಿಲ್ಲ. ನಮ್ಮ ಎಲ್ಲಾ ಕಲಾ ಪ್ರಾಕಾರ ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಯಕ್ಷಗಾನದಲ್ಲೂ ಕೂಡಾ. ಅಂತಹ ಅನೇಕ ವಿದ್ಯಾರ್ಥಿನಿಯರ ಸಾಲಿನಲ್ಲಿ ಕು| ಹೇಮಸ್ವಾತಿ ಕುರಿಯಾಜೆ ಮತ್ತು ಈಕೆಯ ಸಹೋದರಿ ಕು| ದೇವಿಕಾ ಕುರಿಯಾಜೆ ಸೇರಿಕೊಳ್ಳುತ್ತಾರೆ.
ಕುರಿಯಾಜೆ ಸಹೋದರಿಯರು ಶ್ರೀ ಉದಯಶಂಕರ ಕುರಿಯಾಜೆ ಮತ್ತು ಶ್ರೀಮತಿ ವಸಂತಿಲಕ್ಷ್ಮಿ ದಂಪತಿಗಳ ಪುತ್ರಿಯರು. ಸುಳ್ಯ ತಾಲೂಕು ಕೊಡಿಯಾಲ ಗ್ರಾಮದ ಕುರಿಯಾಜೆ ಮನೆ. ಹೇಮಸ್ವಾತಿಯ ಜನ್ಮ ದಿನಾಂಕ 15.05.2003. ಬೆಳ್ಳಾರೆ ಪದವಿಪೂರ್ವ ಕಾಲೇಜಿನಲ್ಲಿ ಮತ್ತು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಕು| ದೇವಿಕಾ ಜನಿಸಿದ್ದು 2004 ಡಿಸೆಂಬರ್ 11ರಂದು. ಬೆಳ್ಳಾರೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತ್ತು ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಳು. ಇಬ್ಬರೂ ಈಗ ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ಇವರಿಬ್ಬರೂ ಯಕ್ಷಗಾನ ನಾಟ್ಯ ಕಲಿತದ್ದು ಅಧ್ಯಾಪಕ, ಕಲಾವಿದ ಹಾಗು ಯಕ್ಷರಂಗ ಬೆಳ್ಳಾರೆಯ ಸಂಚಾಲಕ ಶ್ರೀ ವಾಸುದೇವ ರೈಗಳಿಂದ. ಸಂಗೀತ ಹೇಳಿಕೊಟ್ಟ ಗುರುಗಳು ಶ್ರೀಮತಿ ಸುಮತಿ ಬೆಳ್ಳಾರೆ, ಶ್ರೀಮತಿ ಮಾಲಿನಿ ಮತ್ತು ಶ್ರೀಮತಿ ವೀಣಾ ರಾಘವೇಂದ್ರ (ಗಾನಸರಸ್ವತಿ ಕಲಾಶಾಲೆ, ನೆಹರು ನಗರ, ಪುತ್ತೂರು) ಶ್ರೀಮತಿ ಯೋಗೀಶ್ವರೀ ಜಯಪ್ರಕಾಶ್ ಇವರಿಂದ ಭಾರತನಾಟ್ಯವನ್ನೂ ಕಲಿಯುತ್ತಿದ್ದಾರೆ.

ಕು| ಹೇಮಸ್ವಾತಿಯು ಮೊದಲು ರಂಗವೇರಿದ್ದು ಅಭಿಮನ್ಯು ಕಾಳಗದ ದ್ರೋಣನಾಗಿ. ಯಕ್ಷರಂಗ, ಬೆಳ್ಳಾರೆ ತಂಡದ ಸದಸ್ಯೆಯಾಗಿ ಸ್ಪರ್ಧೆ ಹಾಗೂ ಇನ್ನಿತರ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾಳೆ. ಜಾಂಬವತೀ ಕಲ್ಯಾಣ ಪ್ರಸಂಗದ ಶ್ರೀಕೃಷ್ಣನಾಗಿ 25ಕ್ಕೂ ಹೆಚ್ಚು ಬಾರಿ, ರಾಮಾಂಜನೇಯ ಪ್ರಸಂಗದ ಹನುಮಂತನಾಗಿ 13 ಬಾರಿ, ಕೃಷ್ಣಲೀಲೆ- ಕಂಸ ವಧೆಯ ಕೃಷ್ಣನಾಗಿ, ಕುಶಲವರ ಕಾಳಗದ ಕುಶನಾಗಿ ರಂಗವೇರಿದ್ದಾಳೆ. ಸಂಪಾಜೆ ಕಲ್ಲುಗುಂಡಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಯಕ್ಷರಂಗ ತಂಡದಲ್ಲಿದ್ದು ಇಂದ್ರಜಿತು ಕಾಳಗದ ಲಕ್ಷ್ಮಣನಾಗಿ ಅಲ್ಲದೆ ಕಲಾವಿದ, ಉದ್ಯಮಿ ಸಂಘಟಕ ಶ್ರೀ ಬೆಳ್ಳಾರೆ ರಾಮ ಜೋಯಿಸರ ಸಂಯೋಜನೆಯ ಮಡಿಕೇರಿ ಸಿದ್ಧಾಪುರದಲ್ಲಿ ನಡೆದ ಪ್ರದರ್ಶನದಲ್ಲೂ ಲಕ್ಷ್ಮಣನಾಗಿ ಅಭಿನಯಿ ಸಿದ್ದಳು.

ಅಂದು ರಂಗದ ರಾಜ ಶ್ರೀ ರಾಧಾಕೃಷ್ಣ ನಾವುಡರು ಇಂದ್ರಜಿತುವಾಗಿಯೂ ಕಟೀಲು ಮೇಳದ ಸ್ತ್ರೀಪಾತ್ರಧಾರಿ ಮಹೇಶ್ ಸಾಣೂರು ಅವರು ಶ್ರೀರಾಮನ ಪಾತ್ರವನ್ನೂ ನಿರ್ವಹಿಸಿದ್ದರು. ಬೆಳ್ಳಾರೆಯಲ್ಲಿ ಹಿರಣ್ಯಾಕ್ಷನ ಪಾತ್ರವನ್ನು ಮಾಡಿದಾಗ ಈಕೆಯ ತಂಗಿ ದೇವಿಕಾ ಕುರಿಯಾಜೆ ಭೂದೇವಿ ಪಾತ್ರ ವಹಿಸಿದ್ದಳು. ಖ್ಯಾತ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು ಇವರ ಬಂಧುಗಳು. ಉದಯಶಂಕರ ಕುರಿಯಾಜೆಯವರು ಬಾಯಾರು ಸೌದಿಮೂಲೆಯವರು. (ಪದ್ಯಾಣ ಮನೆತನ) ಪದ್ಯಾಣ ಗಣಪತಿ ಭಟ್ಟರ ಮನೆಗೆ ಹೋಗಿ ಹೇಮಸ್ವಾತಿಯು ಭಾಗವತಿಕೆಯನ್ನು ಕಲಿಯುತ್ತಿದ್ದಾಳೆ. ರಂಗದಲ್ಲಿ ಪೂರ್ವರಂಗದ ಪದ್ಯಗಳನ್ನು ಹಾಡಿರುತ್ತಾಳೆ.ಈಗ ತಾಳಮದ್ದಳೆ ಕೂಟಗಳಲ್ಲೂ, ಯಕ್ಷಗಾನ ಪ್ರದರ್ಶನಗಳಲ್ಲೂ ಹಾಡುತ್ತಾಳೆ. ಭರತನಾಟ್ಯ ಸೀನಿಯರ್ ಕಲಿಯುತ್ತಿದ್ದು ಗುರು ಶ್ರೀಮತಿ ಯೋಗೀಶ್ವರೀ ಜಯಪ್ರಕಾಶ್‍ರ ವೈಷ್ಣವಿ ನಾಟ್ಯಾಲಯ, ಪುತ್ತೂರು ತಂಡದಲ್ಲಿದ್ದು ಪುತ್ತೂರು ಜಾತ್ರೋತ್ಸವ, ಉಡುಪಿ ರಾಜಾಂಗಣ, ಬೆಳ್ಳಾರೆ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ಪ್ರದರ್ಶನಗಳಲ್ಲಿ ಹಾಗೂ ಅನೇಕ ಕಡೆ ತ್ರಿಕಾಲ ಪೂಜೆಯ ಅಷ್ಟಾವಧಾನ ಕಾರ್ಯಕ್ರಮಗಳಲ್ಲೂ ನೃತ್ಯ ಪ್ರದರ್ಶನ ನೀಡಿರುತ್ತಾಳೆ.


ಕಿರಿಯವಳು ದೇವಿಕಾ ಕುರಿಯಾಜೆ ಜೂನಿಯರ್ ಗ್ರೇಡ್ ಸಂಗೀತ ಉತ್ತೀರ್ಣಳಾಗಿದ್ದು ಭರತನಾಟ್ಯದಲ್ಲೂ ಜೂನಿಯರ್ ಪೂರೈಸಿ ಸೀನಿಯರ್ ಕಲಿಯುತ್ತಿದ್ದಾಳೆ. ಅಕ್ಕನ ಜೊತೆಯಲ್ಲಿ ಪುತ್ತೂರು, ಉಡುಪಿ, ಬೆಳ್ಳಾರೆ ಈಶ್ವರಮಂಗಲ ಮೊದಲಾದೆಡೆ ಭಾಗವಹಿಸಿರುತ್ತಾಳೆ. ಯಕ್ಷಗಾನ ವೇಷ ಮೊದಲು ನಿರ್ವಹಿಸಿದ್ದು ಕೋಟೆ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ ರಾಮಾಂಜನೇಯ ಪ್ರಸಂಗದ ಸೀತೆಯಾಗಿ. ಜಾಂಬವತಿ ಕಲ್ಯಾಣದ ಬಲರಾಮ, ಕುಶಲವರ ಕಾಳಗದ ಶ್ರೀರಾಮ, ಲಕ್ಷ್ಮಣ, ಹಿರಣ್ಯಾಕ್ಷ ವಧೆಯ ಭೂದೇವಿ (2 ಬಾರಿ), ಆರು ಬಾರಿ ಮಾಯಾ ಪೂತನಿಯ ಪಾತ್ರವನ್ನು ನಿರ್ವಹಿಸಿದ್ದಾಳೆ.


“ಭರತನಾಟ್ಯ ಕಲಿತದ್ದು ಯಕ್ಷಗಾನಕ್ಕೂ, ಯಕ್ಷಗಾನ ನಾಟ್ಯ ಕಲಿತದ್ದು ಭರತನಾಟ್ಯ ಕಲಿಕೆಗೂ ಅನುಕೂಲವಾಯಿತು. ನಾವಿನ್ನೂ ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಕಲಾಸೇವೆಯನ್ನೂ ಮಾಡುತ್ತಿದ್ದೇವೆ. ಮನೆಯವರ, ಶಾಲಾ ಶಿಕ್ಷಕರ, ಕಲಾವಿದ್ಯೆಗಳನ್ನು ಹೇಳಿಕೊಡುತ್ತಿರುವ ಗುರುಗಳ ಆಶೀರ್ವಾದದಿಂದ ಇದು ಸಾಧ್ಯವಾಯಿತು” ಎಂದು ಕುರಿಯಾಜೆ ಸಹೋದರಿಯರು ಹೇಳುತ್ತಾರೆ. ಹೇಮಸ್ವಾತಿಯು ವಿಜ್ಞಾನ ವಸ್ತುಪ್ರದರ್ಶನದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹಾಗೂ ದೇವಿಕಾ ಶಾಲಾ ತಂಡದ ರಾಜ್ಯಮಟ್ಟದ ನಾಟಕ ಪ್ರದರ್ಶನಗಳಲ್ಲೂ ಭಾಗವಹಿಸಿರುತ್ತಾರೆ. ಕು| ಹೇಮಸ್ವಾತಿಯು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಪ್ರತಿಭಾ ಕಾರಂಜಿ ಸೀನಿಯರ್ ವಿಭಾಗದ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿರುತ್ತಾಳೆ. ಬಾಲ ಕಲಾವಿದೆಯರೀರ್ವರಿಗೂ ಶುಭಾಶಯಗಳು. ಉನ್ನತ ವ್ಯಾಸಂಗವು ಚೆನ್ನಾಗಿ ನಡೆಯಲಿ. ಉಜ್ವಲ ಭವಿಷ್ಯವು ದೊರಕಲಿ. ಬಾಳು ಹಸನಾಗಲಿ.

ಲೇಖಕ: ರವಿಶಂಕರ್ ವಳಕ್ಕುಂಜ 

ಶ್ರೀ ಮಿಜಾರು ತಿಮ್ಮಪ್ಪ ಹಾಸ್ಯಗಾರ – ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ರಂಜಿಸುವ ಹಾಸ್ಯಗಾರ (Sri Mijaru Thimmappa Hasyagara)

ನವರಸಗಳಲ್ಲಿ ಒಂದು ಹಾಸ್ಯ. ಪ್ರತಿಯೊಂದು ರಸಗಳೂ ಉತ್ಪತ್ತಿ ಸ್ಥಾನ, ಸಂಕೇತಿಸುವ ಬಣ್ಣ, ಅಭಿಮಾನೀ ದೇವತೆ, ಸ್ಥಾಯೀ ಭಾವ, ವಿರುದ್ಧ ರಸ ಎಂಬ ಐದು ವಿಚಾರಗಳನ್ನು ಒಳಗೊಂಡಿರುತ್ತದೆ. ವಿಕಾರ ವೇಷಗಳು, ಕುಣಿತ, ವಿಕಟ ನಗು, ಸಂಭಾಷಣೆಗಳು ಹಾಸ್ಯ ರಸದ ಉತ್ಪತ್ತಿಗೆ ಕಾರಣವಾಗುತ್ತದೆ. ಸಂಕೇತಿಸುವ ಬಣ್ಣ ಬಿಳಿ. ಗಣಪತಿಯೇ ದೇವರು. ಸ್ಥಾಯೀ ಭಾವ ನಗು. ಯಕ್ಷಗಾನದಲ್ಲಿ ಹಾಸ್ಯ ರಸಕ್ಕೂ ಹಾಸ್ಯಗಾರನಿಗೂ ವಿಶೇಷ ಸ್ಥಾನವಿದೆ. ಗೌರವವಿದೆ. ಮೊದಲಿನ ಕಾಲದಲ್ಲಿ ಎಲ್ಲಾ ವೇಷಗಳನ್ನು ಮಾಡುತ್ತಾ ಹಂತ ಹಂತವಾಗಿ ಸಾಗಿ ಬಂದವನೇ ಹಾಸ್ಯಗಾರನಾಗುತ್ತಾನೆ. ಹಾಸ್ಯಗಾರನು ಅನುಭವಿಯಾದುದರಿಂದ ಕಲಿಕಾಸಕ್ತರು ಮಾಹಿತಿಗಳನ್ನು ಅವರಲ್ಲಿಯೇ ಕೇಳಿ ರಂಗವೇರುವುದು ಮೊದಲಿನಿಂದಲೂ ಬಂದ ರೀತಿಯಾಗಿತ್ತು. ವನಪಾಲಕ, ಬಾಗಿಲ ದೂತ ಮೊದಲಾದ ವೇಷಗಳಲ್ಲಿ ಸಭಿಕರನ್ನು ನಗಿಸಿದಲ್ಲಿಗೆ ಕಲಾವಿದ ಹಾಸ್ಯಗಾರ ಎನಿಸಿಕೊಳ್ಳಲಾರ. ಪುರಾಣ ಪ್ರಸಂಗಗಳ ನಾರದ, ಅಕ್ರೂರ, ಸಂಜಯ, ಪ್ರಾತಿಕಾಮಿ, ಬಾಹುಕ, ಕಟ್ಟು ಹಾಸ್ಯಗಳಿಗೆ ಸಂಬಂಧಿಸಿದ ಪಾತ್ರಗಳನ್ನೂ ನಿರ್ವಹಿಸುವಾಗ ಹಾಸ್ಯಗಾರನೆಷ್ಟು ಪ್ರಬುದ್ಧನೆಂದು ಗುರುತಿಸಬಹುದು. ಪುರಾಣದ ಹೆಚ್ಚಿನ ಎಲ್ಲಾ ಪ್ರಸಂಗಗಳಲ್ಲಿ ನಾರದನ ಪಾತ್ರ ಇರುತ್ತದೆ. ಅಧ್ಯಯನಶೀಲನಲ್ಲದಿದ್ದರೆ ಎಲ್ಲಾ ಪ್ರಸಂಗದ ನಾರದನಾಗಿ ಅಭಿನಯಿಸಲು ಸಾಧ್ಯವೇ ಇಲ್ಲ. ಹಾಸ್ಯಗಾರರು ನಿರ್ವಹಿಸುವ ಪಾತ್ರಗಳು ಪ್ರಸಂಗವನ್ನು ಮುನ್ನಡೆಸಲು ಸಹಕಾರಿಯಾಗುವಂತಿರಬೇಕು. ಜತೆ ವೇಷಗಳನ್ನು ಗೆಲ್ಲಿಸುವಂತಿರಬೇಕು. ಕೊಲ್ಲುವಂತಿರಬಾರದು. ಒಂದೇ ರಾತ್ರಿಯಲ್ಲಿ ಒಂದೇ ಪ್ರಸಂಗದಲ್ಲಿ ಬಾಗಿಲ ದೂತನಾಗಿ, ವನಪಾಲಕನಾಗಿ, ರಾಕ್ಷಸದೂತನಾಗಿ, ನಾರದನಂತಹ ಸಾತ್ವಿಕ, ಭಾವನಾತ್ಮಕ ಪಾತ್ರಗಳಲ್ಲಿ (ಅಕ್ರೂರ, ಬಾಹುಕ, ಸಂಜಯ ಮೊದಲಾದವು) ಅಭಿನಯಿಸಬೇಕಾಗುತ್ತದೆ. ಇದು ಅಷ್ಟು ಸುಲಭವಲ್ಲ. ಮಂಥರೆ, ಚಂದ್ರಾವಳಿ ವಿಲಾಸದ ಅತ್ತೆ, ಚಿತ್ರಾಕ್ಷಿ ಕಲ್ಯಾಣ, ಮನ್ಮಥೋಪಾಖ್ಯಾನ ಮೊದಲಾದ ಪ್ರಸಂಗಗಳ ಮುದುಕಿ ಪಾತ್ರಗಳ ಬಗ್ಗೆ ಹೇಳುವುದಾದರೆ ಎಲ್ಲಾ ವಿಭಿನ್ನ ಸ್ವಭಾವದ ಪಾತ್ರಗಳು. ಬಣ್ಣದ ಮನೆಯಲ್ಲಿ ಮೇಕಪ್ ಮಾಡಿ ಸೀರೆ ಉಟ್ಟು ಸಿದ್ಧರಾಗಬಹುದು. ಆದರೆ ರಂಗವೇರಿ ಅಭಿನಯಿಸುವುದು, ಪಾತ್ರಗಳಿಗೆ ನ್ಯಾಯ ಒದಗಿಸಿ ಕೊಡುವುದು ಅತ್ಯಂತ ಕಷ್ಟ. ನೋಡಿ ಕಲಿತ, ಕೇಳಿ ತಿಳಿದ ಮಾಡಿ ಅನುಭವವುಳ್ಳ ಹಾಸ್ಯಗಾರರು ಮಾತ್ರ ಈ ವೇಷಗಳನ್ನು ನಿರ್ವಹಿಸಿ ಗೆಲ್ಲಬಲ್ಲರು. ನಡೆಯಿಂದಲೂ ನುಡಿಯಿಂದಲೂ ಆತ ಚುರುಕಾಗಿರಬೇಕು. ಪ್ರತ್ಯುತ್ಪನ್ನಮತಿಯಾಗಿರಬೇಕು. ನೇಪಥ್ಯದಲ್ಲಿ ಕ್ಷಿಪ್ರಾತಿಕ್ಷಿಪ್ರವಾಗಿ ಸಿದ್ಧವಾಗುವ ಕಲೆಯೂ ಕರಗತವಾಗಿರಬೇಕು. ಹಿರಿಯ ಅನೇಕ ಹಾಸ್ಯಗಾರರು ಹೀಗೆ ಪ್ರಸಿದ್ಧರಾದರು. ಕೆಲವರು ಪುರಾಣ ಪ್ರಸಂಗಗಳಲ್ಲಿ ರಂಜಿಸಿದರು. ಕೆಲವರು ತುಳು ಪ್ರಸಂಗಗಳಲ್ಲಿ ಮಿಂಚಿದರು. ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಸರಿಸಮನಾಗಿ ಪ್ರಸಿದ್ಧಿಯನ್ನೂ ಪಡೆದವರಿದ್ದಾರೆ. ಪ್ರಸ್ತುತ ಪುರಾಣ ಮತ್ತು ತುಳು ಪ್ರಸಂಗಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದವರು ಶ್ರೀ ತಿಮ್ಮಪ್ಪ ಹಾಸ್ಯಗಾರರು. ತಿಮ್ಮಪ್ಪ ಹಾಸ್ಯಗಾರರು ತೆಂಕು ತಿಟ್ಟಿನ ಅನುಭವೀ ಹಾಸ್ಯಗಾರರಲ್ಲೊಬ್ಬರು. ಕಳೆದ 38 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.

ಶ್ರೀಯುತರು ಮಂಗಳೂರು ತಾಲೂಕಿನ ಬಡಗ ಎಡಪದವು ಗ್ರಾಮದ ಮಿಜಾರು ಎಂಬಲ್ಲಿ 1963ನೇ ಇಸವಿ ಶ್ರೀ ಹೊನ್ನಯ್ಯ ಶೆಟ್ಟಿಗಾರ್ ಮತ್ತು ಶ್ರೀಮತಿ ಸೀತಮ್ಮ ದಂಪತಿಗಳ ಮಗನಾಗಿ ಜನಿಸಿದರು. ಓದಿದ್ದು ಎಸ್.ಎಸ್.ಎಲ್.ಸಿ ವರೆಗೆ. 4ನೇ ತರಗತಿ ವರೆಗೆ ಮಿಜಾರು ದಡ್ಡಿ ಶಾಲೆಯಲ್ಲಿ, 5 – 7ರ ವರೆಗೆ ಮಿಜಾರು ಶಾಲೆಯಲ್ಲಿ ಮತ್ತು 8ರಿಂದ 10ರ ವರೆಗೆ ಎಡಪದವಿನ ಶ್ರೀ ವಿವೇಕಾನಂದ ಪ್ರೌಢ ಶಾಲೆಯಲ್ಲಿ ವಿದ್ಯಾಭಾಸ ಮಾಡಿದ್ದರು. ಮನೆಯವರಾರೂ ಯಕ್ಷಗಾನ ಕಲಾವಿದರಲ್ಲದಿದ್ದರೂ ಕಲಾಸಕ್ತರಾಗಿದ್ದರು. ತಿಮ್ಮಪ್ಪನವರ ತೀರ್ಥರೂಪರು ಹೊನ್ನಯ್ಯ ಶೆಟ್ಟಿಗಾರರು ಶನಿಕಥೆ ವಾಚನ ಮಾಡುತ್ತಿದ್ದರು. ತಿಮ್ಮಪ್ಪ ಅವರಿಗೆ ಬಾಲ್ಯದಲ್ಲಿಯೇ ಯಕ್ಷಗಾನಾಸಕ್ತಿಯಿತ್ತು. ಊರಲ್ಲಿ ನಡೆಯುತ್ತಿದ್ದ ಪ್ರದರ್ಶನಗಳನ್ನು ತಪ್ಪದೆ ನೋಡುತ್ತಿದ್ದರು. ತಾನೂ ಕಲಾವಿದನಾಗಬೇಕೆಂದು ನಿರ್ಧರಿಸುವಷ್ಟು ಯಕ್ಷಗಾನ ಕಲೆಯು ಇವರನ್ನು ಆಕರ್ಷಿಸಿತ್ತು. ಖ್ಯಾತ ಕಲಾವಿದ ಮುಚ್ಚೂರು ಹರೀಶ ಶೆಟ್ಟಿಗಾರರಿಂದ ಹೆಜ್ಜೆಗಾರಿಕೆಯನ್ನು ಅಭ್ಯಸಿಸಿದರು. ಸರಳ ಸಾತ್ವಿಕ ಸ್ವಭಾವದ ಹರೀಶ್ ಶೆಟ್ಟಿಗಾರರು ಸಂಭಾಷಣೆಗಳನ್ನು ಉತ್ತಮವಾಗಿ ವಿದ್ಯಾರ್ಥಿಗಳಿಗೆ ಬರೆದು ಕೊಡುತ್ತಿದ್ದರು ಎಂಬುದನ್ನು ಅವರಿಂದ ಕಲಿತ ವಿದ್ಯಾರ್ಥಿಗಳೂ ಅವರನ್ನು ಹತ್ತಿರದಿಂದ ಬಲ್ಲವರೂ ಹೇಳುತ್ತಾರೆ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಮುಚ್ಚೂರು ದೇವಸ್ಥಾನದಲ್ಲಿ ನಡೆದ ಪ್ರದರ್ಶನ ‘ಕಚ ದೇವಯಾನಿ’ ಪ್ರಸಂಗದಲ್ಲಿ ನಾರದನಾಗಿ ಮಿಜಾರು ತಿಮ್ಮಪ್ಪ ಅವರು ರಂಗವೇರಿದರು.  ಎಸ್.ಎಸ್.ಎಲ್.ಸಿ ಆದ ನಂತರ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸುವ ನಿರ್ಣಯವನ್ನು ಮಾಡಿದ್ದರು. ಶಾಲಾ ವಿದ್ಯಾರ್ಥಿಯಾಗಿದ್ದಾಗ ತಿಮ್ಮಪ್ಪ ಅವರು ನಾಟಕಗಳಲ್ಲಿ ಅಭಿನಯಿಸಿದ್ದರು.  ಮಿಜಾರು ತಿಮ್ಮಪ್ಪ ಹಾಸ್ಯಗಾರರ ಮೊದಲ ತಿರುಗಾಟ ಶ್ರೀಧರ ಭಂಡಾರಿಯವರ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ. ಖ್ಯಾತ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರ ಜತೆ ಸಹ ವಿದೂಷಕನಾಗಿ. (1981-82) ಈ ಮೇಳದಲ್ಲಿ 3 ವರ್ಷಗಳ ತಿರುಗಾಟ. ಬಳಿಕ ಅರುವ ಶ್ರೀ ನಾರಾಯಣ ಶೆಟ್ಟರ ಸಂಚಾಲಕತ್ವದ ಅಳದಂಗಡಿ ಮೇಳದಲ್ಲಿ 2 ವರ್ಷ ಕಲಾಸೇವೆ. ನಂತರ ಶ್ರೀ ನಾರಾಯಣ ಕಮ್ತಿಯವರ ಯಾಜಮಾನ್ಯದ ಬಪ್ಪನಾಡು ಮೇಳಕ್ಕೆ. ಈ ಸಂದರ್ಭ ‘ಧರ್ಮದೈವ ಕೊಡಮಣಿತ್ತಾಯ’ ತುಳು ಪ್ರಸಂಗದ ಮುದುಕಿಯ ವೇಷ ಇವರಿಗೆ ಪ್ರಸಿದ್ಧಿಯನ್ನು ನೀಡಿತ್ತು. ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗದ ಎಲ್ಲಾ ಹಾಸ್ಯ ಪಾತ್ರಗಳನ್ನು ನಿರ್ವಹಿಸಿದ್ದರು. ಪುರಾಣ ಮತ್ತು ತುಳು ಸಾಮಾಜಿಕ ಪ್ರಸಂಗಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಾ ಅನುಭವಗಳನ್ನು ಗಳಿಸಿ ಪಕ್ವರಾಗತೊಡಗಿದರು. ಬಪ್ಪನಾಡು ಮೇಳದಲ್ಲಿ ಎರಡು ತಿರುಗಾಟ. ಇವರ ಪ್ರತಿಭಾ ಪ್ರಧರ್ಶನವನ್ನು ನೋಡಿದ ಕರ್ನಾಟಕ ಮೇಳದ ಸಂಚಾಲಕರಾದ ಕಲ್ಲಾಡಿ ದೇವಿಪ್ರಸಾದ ಶೆಟ್ಟರು (ಪ್ರಸ್ತುತ ಕಟೀಲು ಆರೂ ಮೇಳಗಳ ಸಂಚಾಲಕರು) ಮೇಳಕ್ಕೆ ಬರಲು ಆಹ್ವಾನಿಸಿದ್ದರು. ಮುಂದಿನ ವರ್ಷ ಕರ್ನಾಟಕ ಮೇಳದಲ್ಲಿ ತಿರುಗಾಟ. ಅದೂ ಹೆಸರಾಂತ ಹಾಸ್ಯ ಕಲಾವಿದ ಮಿಜಾರು ಅಣ್ಣಪ್ಪನವರ ಜತೆ. ಕರ್ನಾಟಕ ಮೇಳವು ಪ್ರಸಿದ್ಧ ಕಲಾವಿದರ ಶ್ರೇಷ್ಠ ತಂಡವಾಗಿತ್ತು. ಮಿಜಾರು ಅಣ್ಣಪ್ಪ ಅವರೊಂದಿಗೆ ಅನೇಕ ಜತೆ ವೇಷಗಳಲ್ಲಿ ತಿಮ್ಮಪ್ಪನವರು ಕಾಣಿಸಿಕೊಂಡಿದ್ದರು. ಮಿಜಾರು ಅಣ್ಣಪ್ಪರು ಆಶೀರ್ವದಿಸಿ ಸಹಕಾರ, ಪ್ರೋತ್ಸಾಹಗಳನ್ನು ನೀಡಿದ್ದರು ಎನ್ನುವ ಮೂಲಕ ಅವರಿಗೆ ತಿಮ್ಮಪ್ಪ ಅವರು ಗೌರವವನ್ನು ಸಲ್ಲಿಸುತ್ತಾರೆ.

16 ವರ್ಷಗಳ ಕಾಲ ಸದ್ರಿ ಮೇಳದಲ್ಲಿ ವ್ಯವಸಾಯ. ಬಳಿಕ ಕುಂಟಾರು ಮೇಳದಲ್ಲಿ 2 ವರ್ಷಗಳು, ಮತ್ತೆ ಕಟೀಲು ಮೇಳದಲ್ಲಿ 2 ವರ್ಷಗಳು, ಎಡನೀರು ಮೇಳದಲ್ಲಿ 2 ವರ್ಷಗಳು, ಸುಂಕದಕಟ್ಟೆ ಮೇಳದಲ್ಲಿ 13 ವರ್ಷಗಳು, ಮತ್ತು 1 ವರ್ಷ ಮಂಗಳಾದೇವಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಪುರಾಣ ಪ್ರಸಂಗದ ಎಲ್ಲಾ ಹಾಸ್ಯ ಪಾತ್ರಗಳನ್ನೂ ಕೊರತೆಯಿಲ್ಲದೆ ತುಂಬಬಲ್ಲ ಸಾಮರ್ಥ್ಯ ಇವರಿಗಿದೆ. ಕೋಟಿ ಚೆನ್ನಯ, ದೇವ ಪೂಂಜ ಪ್ರತಾಪ, ಕೋರ್ದಬ್ಬು ಬಾರಗ, ಕಾಡಮಲ್ಲಿಗೆ ಮೊದಲಾದ ತುಳು ಪ್ರಸಂಗಗಳ ವಿವಿಧ ಪಾತ್ರಗಳೂ ಮಿಜಾರು ತಿಮ್ಮಪ್ಪ ಅವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿತ್ತು. ತನ್ನದೇ ಶೈಲಿಯ ನಾಟ್ಯ ಮತ್ತು ಮಾತುಗಾರಿಕೆಯಿಂದ ಇವರು ಪ್ರೇಕ್ಷಕರನ್ನು ಬಹು ಬೇಗನೆ ಆಕರ್ಷಿಸುತ್ತಾರೆ. ಮಿಜಾರಿನಲ್ಲಿ ಕಳೆದ ವರ್ಷ ಕಟ್ಟಿಸಿದ ಮನೆಯಲ್ಲಿ ಪತ್ನಿ ಶ್ರೀಮತಿ ಜಯಶ್ರೀ ಇವರೊಂದಿಗೆ ವಾಸ. ಮಿಜಾರು ತಿಮ್ಮಪ್ಪ ಹಾಸ್ಯಗಾರರಿಂದ ಇನ್ನಷ್ಟು ಕಲಾಸೇವೆಯು ನಡೆಯಲಿ. ಅರೋಗ್ಯ, ಸಕಲ ಭಾಗ್ಯಗಳನ್ನು ಕಲಾಮಾತೆಯು ನೀಡಲಿ. ಅವರ ಮನೋಕಾಮನೆಗಳನ್ನೆಲ್ಲಾ ಶ್ರೀ ದೇವರು ಅನುಗ್ರಹಿಸಲಿ. ಕಲಾಭಿಮಾನಿಗಳೆಲ್ಲರ ಪರವಾಗಿ ಶುಭಹಾರೈಕೆಗಳು.

ಲೇಖಕ: ರವಿಶಂಕರ್ ವಳಕ್ಕುಂಜ  ಫೋಟೋ: ಕೋಂಗೋಟ್ ರಾಧಾಕೃಷ್ಣ ಭಟ್ 

ಪ್ರಖ್ಯಾತ ಮದ್ದಲೆಗಾರ ಹಾಗೂ ಗುರು ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಅವರಿಗೆ ಮಾತೃವಿಯೋಗ

ದಿ| ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಪುತ್ರಿ ಹಾಗೂ ದಿ| ವಳಕ್ಕುಂಜ ನಾರಾಯಣ ಭಟ್ಟರ ಪತ್ನಿ ಶ್ರೀಮತಿ ಭುವನಮಾತ ಅವರು ಇಂದು ನಿಧನರಾಗಿದ್ದಾರೆ. ಮೃತ ಭುವನಮಾತ ಅವರ ಪುತ್ರ ಈಗಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದಂತಹ ಪ್ರಖ್ಯಾತ ಹಿಮ್ಮೇಳ ಕಲಾವಿದ, ಮದ್ದಳೆಗಾರ ಹಾಗೂ ಗುರು ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ. ಮಕ್ಕಳು, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಸಹಿತ ಅಪಾರ ಬಂಧುವರ್ಗ ಮತ್ತು ಸ್ನೇಹಿತರನ್ನು ಅಗಲಿದ ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಮತ್ತು ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಸರ್ವರಿಗೂ ಆ ಭಗವಂತನು ನೀಡಲಿ.