Saturday, May 18, 2024
Home Blog Page 353

ರಾಧಾ ಬಾರೇ….  ನಿನ್ನ ಪ್ರತಿರೂಪ ತೋರಿಸುವೆ ಇಲ್ಲಿ … 

ಮಂಜುಳಾ ಸುಬ್ರಹ್ಮಣ್ಯ … ಒಬ್ಬಳು ಬಹುಮುಖ ಪ್ರತಿಭಾವಂತೆ ಹಾಗೂ ಭರತನಾಟ್ಯ ಕಲಾವಿದೆ.  ಕನ್ನಡ ಎಂ.ಎ ಪದವೀಧರೆ, ದೂರದರ್ಶನದ ಬಿ ಗ್ರೇಡ್ ಕಲಾವಿದೆ(ಭರತನಾಟ್ಯ), ಆಕಾಶವಾಣಿ ಬಿ ಗ್ರೇಡ್ ಕಲಾವಿದೆ(ನಾಟಕ), ಕಳರಿ ಪಯಟ್ಟು ನಿಷ್ಣಾತೆ, ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ ಲೇಖಕಿ, ಆಕಾಶವಾಣಿ ಕಾರ್ಯಕ್ರಮ ನಿರೂಪಕಿ, ಭರತನಾಟ್ಯ ನೃತ್ಯ ಶಿಕ್ಷಕಿ, ಸದಾ ಹೊಸತನ್ನು ಅರಸುವ ಅನ್ವೇಷಕಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಮಂಜುಳಾ ಕಾಣಿಸಬಹುದು. ಆದರೆ ನನಗಿಲ್ಲಿ ರಾಧೆಯಾಗಿ ಕಂಡಳು.

ರಾಧಾ’ ಏಕವ್ಯಕ್ತಿ ಪ್ರದರ್ಶನದ ವಿಡಿಯೋ

ಅವರ ಬಗ್ಗೆ ಕೆಲವು ದಿನಗಳ ನಂತರ ವಿಸ್ತೃತವಾಗಿ ಬರೆಯುವೆ. ಈಗ ಅವರ ರಾಧೆಯ ಬಗ್ಗೆ ಮಾತ್ರ ಹೇಳುವೆ. ಕೆಲವು ದಿನಗಳ ಹಿಂದೆ ಮಂಜುಳಾಳ ರಾಧೆ ಎನ್ನುವ ಏಕ ವ್ಯಕ್ತಿ ಪ್ರದರ್ಶನದ ವಿಡಿಯೋ ತುಣುಕೊಂದನ್ನು ನೋಡಿದೆ. ಬಹಳ ಇಷ್ಟವಾಯಿತು. ಅದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಎಂದು ಅನಿಸಿತು. ನಾನು ಇಲ್ಲಿ ಅದನ್ನು ಶಬ್ದಗಳಲ್ಲಿ ವಿವರಿಸಹೊರಟರೆ ರಸಭಂಗವಾದೀತು. ರಾಧೆಯ ಹೃದಯದ ಧ್ವನಿ ಕೇಳಿಸದೇ ಹೋದೀತು. ಮೂಲ ಕಥೆಯ ಜಾಡನ್ನು ಕೆದಕಲು ಹೋಗದೆ ಇದನ್ನು ವೀಕ್ಷಿಸಿ. ಭರತನಾಟ್ಯದಲ್ಲಿ ರಾಧೆಯ ತುಡಿತ ಮಿಡಿತಗಳನ್ನು ಹೇಗೆ ಅಭಿವ್ಯಕ್ತಿಗೊಳಿಸಿದ್ದಾರೆ ಎಂಬುದನ್ನು ಈ ವಿಡಿಯೋ ನೋಡಿದಾಗ ತಿಳಿಯಬಹುದು. ರಂಗದ ಈ ರಾಧೆಯ ಯಶಸ್ಸಿಗೆ ರಂಗದ ಹಿಂದಿನ ಹಲವು ಕಲಾವಿದರು ಕಾರಣ ಎಂದು ಮಂಜುಳಾ ನಿರ್ವಂಚನೆಯಿಂದ ಹೇಳಿಕೊಳ್ಳುತ್ತಾರೆ. ಅಭಿನಂದನೆಗಳು ರಾಧೆ (ಮಂಜುಳಾ)…

ಚತುರ್ಭುಜನಾದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ

ತನ್ನ ವಿಶಿಷ್ಟ ಶೈಲಿಯ ಮಾತುಗಾರಿಕೆಯಿಂದ ಮತ್ತು ನೃತ್ಯಗಳಿಂದ ಮನೆ ಮಾತಾಗಿರುವ  ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಅವರು ಇಂದು ಮಮತಾ ಅವರನ್ನು ವಿವಾಹವಾದರು. ಯಾವುದೇ ಪಾತ್ರಗಳನ್ನು ರಂಗದಲ್ಲಿ ಸುಲಲಿತವಾಗಿ ನಿರ್ವಹಿಸಬಲ್ಲ ಹೆಗ್ಗಳಿಕೆ ಇವರಿಗಿತ್ತು. 

ಧರ್ಮಸ್ಥಳ ಮೇಳದಲ್ಲಿ ಮೊದಲ ವರುಷ ಬಾಲಗೋಪಾಲನಾಗಿ ಮತ್ತು ಪ್ರಸಂಗಗಳಲ್ಲಿ ಬರುವ ಇನ್ನಿತರ ವೇಷಗಳನ್ನು ಮಾಡುತ್ತಾ ನಿರಂತರ 5 ವರ್ಷಗಳ ಕಾಲ ಲಲಿತ ಕಲಾ ಕೇಂದ್ರಕ್ಕೆ ಹೋಗಿ ಅಭ್ಯಾಸಿಗಳ ಜತೆ ಕುಣಿಯುವುದರ ಜತೆಗೆ ಹೇಳಿಕೊಡುತ್ತಿದ್ದರು. ಕಟೀಲು ಮೇಳದಲ್ಲಿ 1 ವರ್ಷ. ಬಳಿಕ ಕುಂಟಾರು ಮೇಳದಲ್ಲಿ 2 ವರ್ಷ. ಎಡನೀರು ಮೇಳದಲ್ಲಿ ಪ್ರಜ್ವಲ್ ಅವರು 2 ವರ್ಷ, ನಂತರ 12 ವರ್ಷಗಳ ಕಾಲ ಹೊಸನಗರ ಮೇಳದಲ್ಲಿ. ಮತ್ತೆ 1 ವರ್ಷ ಎಡನೀರು ಮೇಳ. ಪ್ರಸ್ತುತ 3 ವರ್ಷಗಳಿಂದ ಹನುಮಗಿರಿ ಮೇಳದಲ್ಲಿ ಕೆಲಸ ಮಾಡುತ್ತಿದ್ದಾರೆ. 

ಸ್ವರ ಸಾಮ್ರಾಜ್ಯದ ಒಡೆಯ – ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಡುಗಳ ನೋಡಲೇಬೇಕಾದ ವೀಡಿಯೊ 

ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಹೆಸರು ಕೇಳದವರಿಲ್ಲ. ಸಂಗೀತ ಎಲ್ಲಿಯ ವರೆಗೆ ಇರುತ್ತದೋ ಅಲ್ಲಿಯ ವರೆಗೆ   ಎಸ್. ಪಿ.ಬಿ. ಹೆಸರು ಇದ್ದೇ ಇರುತ್ತದೆ. ಅವರೊಬ್ಬ ಗಾಯನ ಲೋಕದ ಜೀವಂತ ದಂತಕತೆ. ಅವರು ಭಾರತದ ಹೆಚ್ಚಿನ ಎಲ್ಲ ಭಾಷೆಗಳಲ್ಲಿ ಹಾಡಿ ಹಾಡುಗಳ ಸಂಖ್ಯೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದರೂ ಹಾಡುಗಳ ಸಂಖ್ಯೆಗಿಂತಲೂ ಅವರ ಮಧುರ ಸ್ವರದ ಇಂಪುಗಳ ಕಂಪನ್ನು ಹೊರಸೂಸುವ ಕಂಠಕ್ಕೆ ಶರಣುಹೋಗದ ಸಂಗೀತ ಪ್ರೇಮಿಯಿಲ್ಲ. ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಎಸ್. ಜಾನಕಿ ಜೊತೆಯಲ್ಲಿ ಹಾಡಿದ ಅಪೂರ್ವ ಹಾಡುಗಳ ಸಂಗ್ರಹ ಸರಿಗಮ ಸೌತ್ ಯು ಟ್ಯೂಬ್ ಚಾನೆಲ್ ನವರ ವೀಡಿಯೋದಲ್ಲಿದೆ. ಈ ವೀಡಿಯೋದ ಲಿಂಕ್ ಕೆಳಗಡೆ ಇದೆ.    

ಕನ್ನಡದಲ್ಲಂತೂ ಅವರು ಹಾಡಿದ ಅಸಂಖ್ಯಾತ ಮಧುರ ಹಾಡುಗಳು ಇಂದು ಎಲ್ಲರ ಬಾಯಿಯಲ್ಲೂ ಗುಣುಗುಟ್ಟುತ್ತಾ ಇರುತ್ತವೆ. ಅವರೆಂದರೆ ಜೀವವನ್ನೇ ಬಿಡುವ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಅಂತಹಾ ಸಂಗೀತ ಸಾಮ್ರಾಜ್ಯದ ಅನಭಿಷಿಕ್ತ ದೊರೆ ಇಂದು ಕೊರೊನದಿಂದ ಅಸೌಖ್ಯಪೀಡಿತರಾಗಿ ಆಸ್ಪತ್ರೆ ಸೇರಿದ್ದಾರೆ. ಸುಮಾರು ದಿನಗಳಿಂದಲೂ ವೆಂಟಿಲೇಟರ್ ಅಳವಡಿಕೆಯೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರ ಪರಿಸ್ಥಿತಿ ಒಮ್ಮೆ ಗಂಭೀರ ಹಾಗೂ ಚಿಂತಾಜನಕ ಸ್ಥಿತಿಗೆ ತಲುಪಿತ್ತು. ಆದರೆ ಆಶಾದಾಯಕ ಹಾಗೂ ಸಂತೋಷದ ಸುದ್ದಿಗಾಗಿ ಜನರೆಲ್ಲರೂ ಪ್ರತಿಕ್ಷಣವೂ ಪ್ರಾರ್ಥಿಸುತ್ತಿದ್ದಾರೆ.    

ಹೌದು.  ಎಸ್. ಪಿ. ಬಾಲಸುಬ್ರಹ್ಮಣ್ಯಂ ಕೊರೋನಾ ಪರೀಕ್ಷೆಯಲ್ಲಿ ಗೆದ್ದು ಬರಲಿ.  ಶೀಘ್ರವೇ ಅವರು ಚೇತರಿಸಿಕೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸಲಿ. ಮತ್ತೆ ಸಂಗೀತ ಪ್ರೇಮಿಗಳು ಅವರು ಹಾಡುವುದನ್ನು ಶೀಘ್ರವಾಗಿ ಕಾಣುವಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ. 

ಕಲಾವಿದರು ಈಗೇನು ಮಾಡುತ್ತಿದ್ದಾರೆ?

ಕೊರೋನಾ ವ್ಯಾಪಕವಾಗಿ ಹಬ್ಬುತ್ತಿದೆ ಮತ್ತು ಅದರ ಪರಿಣಾಮವಾಗಿ ಎಲ್ಲೆಲ್ಲೂ ಸಾಮಾಜಿಕ ಅಂತರ ಮತ್ತು ಮುಕ್ತ ಸಂಚಾರಕ್ಕೆ ನಿರ್ಬಂಧಗಳಿರುವುದು ಎಲ್ಲಿರಿಗೂ ತಿಳಿಯದ ವಿಚಾರವೇನಲ್ಲ. ಮದುವೆ, ಮುಂಜಿ , ಜಾತ್ರೆ, ಸಮಾರಂಭಗಳಿಗೆ ನಿರ್ಬಂಧ ವಿಧಿಸಲಾಗಿದೆ. 50 ಜನರಿಗಿಂತ ಹೆಚ್ಚಾಗಿ ಗುಂಪಾಗಿ ಒಟ್ಟು ಸೇರುವುದನ್ನು ನಿಷೇಧಿಸಲಾಗಿದೆ. ಆದುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿಲ್ಲ.  

ಅದರಂತೆ ನಮ್ಮ ದೇಶದ ಶ್ರೀಮಂತ ಕಲಾ ವಿಭಾಗವೂ ಬಡವಾಗಿದೆ. ಯಾವುದೇ ಕಲಾ ಸಂಬಂಧಿತ ಪ್ರದರ್ಶನಗಳು ನಡೆಯುತ್ತಿಲ್ಲ. ನರ್ತಿಸುವ ಕಾಲುಗಳು ಸ್ತಬ್ಧವಾಗಿವೆ. ವಾದನದ ಕರಗಳು ಯಾಕೋ ಚುರುಕಾಗಿ ಚಲಿಸುತ್ತಿಲ್ಲ. ಹಾಡುವ ಬಾಯಿಗಳಿಂದ ಸ್ವರಗಳು ಕೇಳಿಸುತ್ತಿಲ್ಲ. ಅಭಿನಯದ ಅಂಗಾಂಗಗಳು ಭಾವನೆಗಳನ್ನು ಸ್ಪುರಿಸುತ್ತಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಕಲಾವಿದರು ಪ್ರದರ್ಶನಗಳಿಲ್ಲದೆ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಸುತ್ತಿದ್ದಾರೆ.  

ಮಧುರವಾಗಿ ಉಲಿಯುವ ಕೋಗಿಲೆಗೆ ಹಾಡಬೇಡವೆಂದರೆ ಹೇಗೆ? ನರ್ತಿಸುವ ನವಿಲಿಗೆ ನಾಟ್ಯವಾಡಬೇಡವೆಂದರೆ ಅದು ಕೇಳೀತೆ? ಹಾಗೆಯೇ ಆಗಿದೆ ಕಲಾವಿದರ ಬದುಕು. ನಿಂತ ನೀರಿನಂತೆ ಮನಸು ಕಾದ ಕಾವಲಿಯಂತೆ ಚುರುಗುಟ್ಟುತ್ತಾ ಇದೆ.      

ಅದು ಯಕ್ಷಗಾನವಿರಲಿ, ಸಂಗೀತವಿರಲಿ, ಭಾರತನಾಟ್ಯವಿರಲಿ, ನಾಟಕಗಳಿರಲಿ  ಕಲಾವಿದರಲ್ಲಿ ಕೆಲವರು  ನೇರ ಪ್ರಸಾರದ ಅಂದರೆ online ಪ್ರದರ್ಶನಗಳನ್ನು ನೆಚ್ಚಿಕೊಂಡಿದ್ದಾರೆ. ಹಾಗಾದರೂ ತಮ್ಮ ಸಮಯವನ್ನು ಕಲಾಕ್ಷೇತ್ರದಲ್ಲಿ ತೊಡಗಿಸಿಕೊಂಡು ನೆಮ್ಮದಿಯನ್ನು ಕಂಡುಕೊಳ್ಳುತ್ತಿದ್ದಾರೆ. ಆದರೆ ಈ ಭಾಗ್ಯ ಹೆಚ್ಚಿನ ಕಲಾವಿದರಿಗೆ ದೊರಕುವುದಿಲ್ಲ ಎಂಬುದು ಖೇದಕರ ವಿಚಾರ.      

ಅದಿರಲಿ. ಈಗ ಈ ಸಂಕಷ್ಟದಲ್ಲಿ ಕಲಾವಿದರು ಏನು ಮಾಡುತ್ತಿರಬಹುದು ಎಂಬ ಯೋಚನೆ ಕಲಾಪ್ರೇಮಿಗಳಿಗೆ ಬರುವುದು ಸಹಜವೇ. ಕೆಲವು ಕಲಾವಿದರು ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಸ್ವಂತ ಉದ್ಯೋಗಗಳನ್ನು ಪ್ರಾರಂಭಿಸಿರಬಹುದು. ಇನ್ನು ಕೆಲವರು ಕೂಲಿ ಕೆಲಸ ಅಥವಾ ಮೇಸ್ತ್ರಿ ಕೆಲಸಗಳಿಗೆ ಹೋಗುವವರೂ ಇದ್ದಾರೆ. ಇನ್ನು ಕೆಲವರು online ಮುಖಾಂತರ ತರಗತಿಗಳನ್ನೂ ನಡೆಸುತ್ತಿದ್ದಾರೆ.    

ಹಾಗಾದರೆ ಯಾರು ಯಾರು ಏನೇನು ಮಾಡುತ್ತಿದ್ದಾರೆ ಎಂಬುದನ್ನು ಮುಂದಿನ ಸುದ್ದಿಗಳಲ್ಲಿ ತಿಳಿಸಲು ಪ್ರಯತ್ನಿಸುತ್ತೇವೆ. ಅಲ್ಲಿಯ ವರೆಗೂ ಒಂದು ಸಣ್ಣ ವಿರಾಮ. 

ಯಕ್ಷಗಾನದಲ್ಲಿ ಪಲಾಂಡು ಪರಿಮಳ … ಏನಿದು ಚೋದ್ಯ? 

ಸಾಧಾರಣವಾಗಿ ಪಲಾಂಡು  ಎನ್ನುವ ಶಬ್ದದ ಅರ್ಥ ಹಲವಾರು ಜನರಿಗೆ ತಿಳಿದಿರಲಾರದು. ನೀರುಳ್ಳಿಗೆ ಇನ್ನೊಂದು ಹೆಸರೇ ಪಲಾಂಡು ಎಂಬುದಾಗಿ. ಈ ಪಲಾಂಡು ಶಬ್ದ ಯಕ್ಷಗಾನದಲ್ಲಿ ಹೇಗೆ ಬಂತು? ರಂಗಸ್ಥಳದಲ್ಲಿ ನೀರುಳ್ಳಿಯ ಪರಿಮಳ ಹೇಗೆ ಪಸರಿಸಿತು ಎಂಬುದೇ ಈಗ ಯಕ್ಷಪ್ರಶ್ನೆ ?   ಆದರೆ ಇಂತಹ ಯಕ್ಷಪ್ರಶ್ನೆಗಳಿಗೆ ಸಮರ್ಥವಾದ ಉತ್ತರಗಳು ಗಡಿನಾಡು ಕಾಸರಗೋಡಿನ ಸಿರಿಬಾಗಿಲು ಶ್ರೀ ವೆಂಕಪ್ಪಯ್ಯ ಸ್ಮಾರಕ ಪ್ರತಿಷ್ಠಾನದ ಬಳಿ ಇವೆ ಎಂದರೆ ಅದು ಅತಿಶಯೋಕ್ತಿ ಆಗಲಾರದು. ರಂಗಸ್ಥಳಕ್ಕೆ ಪಲಾಂಡುವನ್ನು ಪರಿಚಯಿಸುವಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ರೂವಾರಿ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯರ ಉತ್ಸಾಹ ಮೆಚ್ಚುವಂತಹುದು.

SV Vision ಚಾನೆಲ್ ನ ಪಲಾಂಡು ಚರಿತ್ರೆ ವಿಡಿಯೋ 

   ಹಾಗೆ ನೋಡಿದರೆ ‘ಪಲಾಂಡು ಚರಿತ್ರೆ’ ಎಂಬ ಈ ಪ್ರಸಂಗ ರಚಿಸಲ್ಪಟ್ಟದ್ದು ಸುಮಾರು 120 ವರ್ಷಗಳ ಹಿಂದೆ ಎಂದು ಹೇಳುತ್ತಾರೆ. ಪ್ರಸಂಗ ಕರ್ತೃ ಆ ಕಾಲದ ಖ್ಯಾತ ಸಾಹಿತಿ ಕೆರೋಡಿ ಸುಬ್ಬ ರಾವ್. ಶತಮಾನದಷ್ಟು ಹಿಂದಿನ ಕೃತಿಯನ್ನು ರಂಗಕ್ಕಿಳಿಸಿದ ಸಂಬಂಧಪಟ್ಟವರ ಸಾಹಸವನ್ನು ಮೆಚ್ಚಲೇ ಬೇಕು. 

ಪ್ರಸಂಗದ ಹೆಸರೇ ಸೂಚಿಸುವಂತೆ ಇದು ಕೇವಲ ನೀರುಳ್ಳಿಯ ಕತೆಯಲ್ಲ!!!  ಭೂಮಿಯ ಮೇಲೆ ಬೆಳೆಯುವ ಹಣ್ಣು, ತರಕಾರಿಗಳು ಹಾಗೂ ಭೂಮಿಯ ಒಳಗೆ ಮಣ್ಣಿನಡಿಯಲ್ಲಿ ಬೆಳೆಯುವ ಗೆಡ್ಡೆ ಗೆಣಸು ತರಕಾರಿಗಳ ನಡುವೆ ತಾವೇ ಶ್ರೇಷ್ಠರೆಂಬ ಅಹಂಭಾವ ಮೊಳೆತು ಹೆಮ್ಮರವಾಗುತ್ತದೆ. ಅದು ವಾಗ್ಯುದ್ಧ, ಸಮರಕ್ಕೆ ಹೇತುವಾಗುತ್ತದೆ. ಆದರೆ ಇದು ಇವರ ಕತೆಯಲ್ಲ. ಕತೆಯ ಗೂಡಾರ್ಥ , ಮೂಲಾರ್ಥ ಇನ್ನೂ ಒಳ ಹೊಕ್ಕು ನೋಡಿದಾಗ ಅರಿವಾಗುತ್ತದೆ ಪ್ರಪಂಚದಲ್ಲಿ ಶ್ರೇಷ್ಠ ನಿಕೃಷ್ಠರೆಂಬ ಬೇಧಭಾವ ಮೊದಲಿನಿಂದಲೂ ಇದೆ. ಶ್ರೀಮಂತ ಮತ್ತು ಬಡವ, ಪಂಡಿತ ಮತ್ತು ಪಾಮರ, ಆಳುವವರು ಮತ್ತು ಸಾಮಾನ್ಯ ಜನರು ಇವರೆಲ್ಲಾ ಈ ಪ್ರಸಂಗದ ಹಾಗೂ ಕವಿಯ ಆಶಯದಲ್ಲಿ ಒಳಗೊಳ್ಳುತ್ತಾರೆ. ವೃಥಾ ಮೇಲಾಟಗಳಲ್ಲಿ ತೊಡಗದೆ ಪರಸ್ಪರ ಸಹಕಾರದಿಂದ ಬಾಳುವೆ ಮಾಡಬೇಕೆಂಬುದನ್ನು ಕಥೆ ಸೂಚಿಸುತ್ತದೆ.

  

ಪ್ರಸಂಗದ ಅಂತ್ಯ ಮಾತ್ರ ತುಂಬಾ ರೋಚಕವಾಗಿದೆ. ಅದನ್ನು ನೀವು SV Vision ಅವರ ಯು ಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಇದು ನೇರಪ್ರಸಾರಗೊಂಡ ಯಕ್ಷಗಾನ ಪ್ರದರ್ಶನ. ಸಂಚಾರ ನಿರ್ಬಂಧ ಇರುವ ಕಾರಣದಿಂದ ಗಡಿನಾಡಿನ ಕಲಾವಿದರನ್ನು ಮಾತ್ರ ಸೇರಿಸಿ ಪ್ರದರ್ಶಿಸಿದ ಯಕ್ಷಗಾನ ಪ್ರದರ್ಶನ. ಗಡಿನಾಡಿನ ಯಕ್ಷಗಾನ ಕಲಾವಿದರನ್ನು ಒಟ್ಟು ಸೇರಿಸಿ ಈ ಸಂಕಷ್ಟ ಕಾಲದಲ್ಲಿ ಅವರನ್ನು ಪ್ರೋತ್ಸಾಹಿಸಿದ ರಾಮಕೃಷ್ಣ ಮಯ್ಯರ ಪ್ರಯತ್ನ ಸ್ತುತ್ಯರ್ಹ. ಕಾಸರಗೋಡು ಜಿಲ್ಲೆಯ ಕಲಾವಿದರ ಪಟ್ಟಿಯನ್ನು ನೋಡುವಾಗ ಒಂದು ಅತ್ಯುತ್ತಮ ವೃತ್ತಿಪರ ಮೇಳವನ್ನು ಹೊರಡಿಸುವಷ್ಟು ಕಲಾವಿದರ ಗಡಣವೇ ಅಲ್ಲಿದೆ. 

ಕೈರಂಗಳ ದೇವಸ್ಥಾನದಲ್ಲಿ ಯಕ್ಷಗಾನ ನಾಟ್ಯ ವೈಭವ 

ಕೈರಂಗಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಿನಾಂಕ 28.08.2020 ಶುಕ್ರವಾರದಂದು ಮಧ್ಯಾಹ್ನ 2 ಘಂಟೆಯಿಂದ ಯಕ್ಷಗಾನ ನಾಟ್ಯ ವೈಭವ ಜರಗಲಿದೆ. ಈ ಕಾರ್ಯಕ್ರಮ ಯು ಟ್ಯೂಬ್ ಮತ್ತು ಫೇಸಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. 

ನೇರಪ್ರಸಾರದಲ್ಲಿ ಭರತಾಗಮನ 

ವಾಟ್ಸಾಪ್ ಯಕ್ಷಗಾನ ಗುಂಪುಗಳು ಸೇರಿ ಆಯೋಜಿಸುತ್ತಿರುವ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದ ನೇರ ಪ್ರಸಾರ  05.09.2020ರಂದು ನಡೆಯಲಿದೆ. ನಾಲ್ಕು ಯಕ್ಷಗಾನ ವಾಟ್ಸಾಪ್ ಗುಂಪುಗಳು ಸೇರಿಕೊಂಡು ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಇದರ ಸಹಯೋಗದೊಂದಿಗೆ ‘ಭರತಾಗಮನ’ ಎಂಬ ಪ್ರಸಂಗವನ್ನು ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ತಾಳಮದ್ದಳೆಯ ರೂಪದಲ್ಲಿ ಪ್ರಸ್ತುತಪಡಿಸಲಿದೆ.    

ಸೆಪ್ಟೆಂಬರ್  5, ಶನಿವಾರ ಸಂಜೆ ಘನತೆ 6ರಿಂದ ಘಂಟೆ 9ರ ವರೆಗೆ ನಡೆಯಲಿರುವ ಈ ತಾಳಮದ್ದಳೆಯು  ವಿವಿಧ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಯೂಟ್ಯೂಬ್ ಮತ್ತು ಕಹಳೆ ನ್ಯೂಸ್ ಚಾನೆಲ್ ಗಳಲ್ಲಿ  ನೇರಪ್ರಸಾರದಲ್ಲಿ ಪ್ರದರ್ಶನಗೊಳ್ಳಲಿದೆ.    

ಯಕ್ಷ ಮಿತ್ರರು ಬಾಯಾರು, ಯಕ್ಷ ಭಾಗವತ ಹಂಸ, ಬಲ್ಲಿರೇನಯ್ಯ ಯಕ್ಷಕೂಟ, ಭ್ರಾಮರೀ ಯಕ್ಷಮಿತ್ರರು ಈ ನಾಲ್ಕು ವಾಟ್ಸಾಪ್ ಗುಂಪುಗಳು  ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ಇದರ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದೆ. 

ಆಕಾಶವಾಣಿಯಲ್ಲಿ ಯಕ್ಷಕವಿ ದೇವಿದಾಸ

ಆಕಾಶವಾಣಿ ಮಂಗಳೂರು ಪ್ರಸ್ತುತಪಡಿಸುವ ಜನಪ್ರಿಯ ಯಕ್ಷಾಂತರಂಗದ 65ನೆಯ ಸರಣಿಯಲ್ಲಿ ನಾಳೆ ಅಂದರೆ ದಿನಾಂಕ 23.08.2020 ನೇ ಭಾನುವಾರ ಬೆಳಿಗ್ಗೆ 9.10 ಘಂಟೆಗೆ ಯಕ್ಷಕವಿ ದೇವಿದಾಸ ಎಂಬ ವಿಷಯದ ಬಗ್ಗೆ ಕಾರ್ಯಕ್ರಮವಿರುತ್ತದೆ. ಈ ಕಾರ್ಯಕ್ರಮಕ್ಕೆ ಬರಹದ ಮೆರುಗನ್ನು ನೀಡಿದವರು  ಖ್ಯಾತ ಯಕ್ಷಗಾನ ಕಲಾವಿದರೂ ಉಪನ್ಯಾಸಕರೂ ಆದ ಶ್ರೀ ಗಣರಾಜ ಕುಂಬ್ಳೆಯವರು.