Wednesday, March 11, 2026
Home Blog Page 342

ಪ್ರತಿಭಾವಂತ ಹಾಸ್ಯಗಾರ, ಯಕ್ಷರಂಗದ ಕಾಶೀಮಾಣಿ – ಮವ್ವಾರು ಬಾಲಕೃಷ್ಣ ಮಣಿಯಾಣಿ  

ಯಕ್ಷಗಾನದಲ್ಲಿ ಭಾಗವತನ ನಂತರದ ಸ್ಥಾನ ಹಾಸ್ಯಗಾರನಿಗೆ. ಬೆಳಗಿನವರೇಗೂ ಪ್ರಸಂಗವನ್ನು ಮುನ್ನಡೆಸಬಲ್ಲ ಚತುರತೆ ಅವನಿಗಿರಬೇಕು. ಎರಡನೇ ವೇಷಧಾರಿಯಾಗಿ ಚೌಕಿಗೆ ನಿರ್ದೇಶಕನಾಗಿ, ಸೇವಾಕರ್ತರಿಂದ ವೀಳ್ಯವನ್ನು ಪಡೆದು, ಪ್ರಸಂಗ ಮುಗಿಯುವ ತನಕವೂ ವ್ಯವಹರಿಸುತ್ತಾ ಕಾಣಿಸಿಕೊಳ್ಳುತ್ತಾನೆ.

ಪ್ರಸ್ತುತ ಅನೇಕ ಹಾಸ್ಯಗಾರರು ತಮ್ಮ ವಿಶಿಷ್ಠ ಅಭಿನಯಗಳಿಂದ, ತಮ್ಮದೇ ಕಲ್ಪನೆಯಿಂದ, ಪಾತ್ರಗಳಿಗೆ ಜೀವತುಂಬಿ ರಂಗದಲ್ಲಿ ಮೆರೆಯುತ್ತಿದ್ದಾರೆ. ಅವರಲ್ಲೊಬ್ಬರು. ಮವ್ವಾರು ಶ್ರೀ ಬಾಲಕೃಷ್ಣ ಮಣಿಯಾಣಿ.

ಕೇರಳ ರಾಜ್ಯದ ಕಾಸರಗೋಡು ತಾಲೂಕು, ನೀರ್ಚಾಲು ಗ್ರಾಮದ ಪೂವಾಳ ಎಂಬಲ್ಲಿ 1966ನೇ ಇಸವಿ ಎಪ್ರಿಲ್ 12ರಂದು ಕುಂಞರಾಮ ಮಣಿಯಾಣಿ ಮತ್ತು ನಾರಾಯಣಿ ದಂಪತಿಗಳಿಗೆ ಮಗನಾಗಿ ಬಾಲಕೃಷ್ಣ ಮಣಿಯಾಣಿಯವರು ಜನಿಸಿದರು. ಎಳವೆಯಲ್ಲೇ ತೀರ್ಥರೂಪರನ್ನು ಕಳೆದುಕೊಂಡ ಇವರು ಅಜ್ಜನ ಮನೆಯಲ್ಲೇ ಬೆಳೆದವರು.

ನಾರಂಪಾಡಿ ಫಾತಿಮಾ ಎ.ಎಲ್.ಪಿ. ಶಾಲೆಯಲ್ಲಿ ನಾಲ್ಕನೇ ತರಗತಿಯ ವರೇಗೆ ಓದಿದರು. ಇವರ ಚಿಕ್ಕಪ್ಪನಾದ ಅಪ್ಪಯ್ಯ ಮಣಿಯಾಣಿಯವರು ಆಗ ಮಾರ್ಪನಡ್ಕದಲ್ಲಿ ನಾಟ್ಯ ತರಗತಿಯನ್ನು ನಡೆಸುತ್ತಿದ್ದರು. (ಅಪ್ಪಯ್ಯ ಮಣಿಯಾಣಿಯವರು ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ). ಅವರಿಂದ ಯಕ್ಷಗಾನ ನಾಟ್ಯ ಕಲಿತು ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದರು.

ಮುಂದಿನ ಮಳೆಗಾಲ ಶ್ರೀ ಧರ್ಮಸ್ಥಳ ಲಲಿತ ಕಲಾಕೇಂದ್ರಕ್ಕೆ ಸೇರಿ ಶ್ರೀ ಕೆ. ಗೋವಿಂದ ಭಟ್ಟರಿಂದ ನಾಟ್ಯವನ್ನು ಅಭ್ಯಸಿಸಿದರು. ಮುಂದಿನ 5 ವರುಷಗಳ ಕಾಲ ಕಟೀಲು ಮೇಳದಲ್ಲಿ ತಿರುಗಾಟ ನಡೆಸಿದರು.(ಕಟೀಲು 2 ಮೇಳ ಇದ್ದ ಸಂದರ್ಭ). ಆಗ ಇರಾ ಗೋಪಾಲಕೃಷ್ಣ ಭಾಗವತರು ನೆಡ್ಲೆ ನರಸಿಂಹ ಭಟ್ಟರು, ಕೇದಗಡು ಗುಡ್ಡಪ್ಪ ಗೌಡ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟ, ಪೂರ್ವರಂಗದಲ್ಲಿ, ಪ್ರಸಂಗದಲ್ಲಿ ತನಗೆ ಬಂದ ಪಾತ್ರಗಳನ್ನು ನಿಷ್ಠೆಯಿಂದ ಮಾಡುತ್ತಾ, ಹಂತ ಹಂತವಾಗಿ ಬೆಳೆಯುತ್ತಾ ಮವ್ವಾರು ಬಾಲಕೃಷ್ಣ ಮಣಿಯಾಣಿ ಕಲಾವಿದನಾಗಿ ಕಾಣಿಸಿಕೊಂಡರು.


                        ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಸಂಚಾಲಕತ್ವದ ಆದಿಸುಬ್ರಹ್ಮಣ್ಯ ಮೇಳದಲ್ಲಿ 6 ವರ್ಷ, ಪುತ್ತೂರು ಶ್ರೀಧರ ಭಂಡಾರಿಗಳ ಸಂಚಾಲಕತ್ವದ ಪುತ್ತೂರು ಮೇಳದಲ್ಲಿ ಮೂರು ವರ್ಷ, ಶ್ರೀ ರಾಧಾಕೃಷ್ಣ ನಾವಡರು ಸಂಚಾಲಕರಾಗಿದ್ದ ಮಧೂರು ಮೇಳದಲ್ಲಿ 3 ವರ್ಷ, ಶ್ರೀ ಡಿ. ಮನೋಹರ ಕುಮಾರ್ ಸಂಚಾಲಕತ್ವದ ಕದ್ರಿ ಮೇಳದಲ್ಲಿ 5 ವರ್ಷ, ಶ್ರೀ ಕಿಶನ್ ಕುಮಾರ್ ಹೆಗ್ಡೆಯವರ ನೇತೃತ್ವದ ಮಂಗಳಾದೇವಿ ಮೇಳದಲ್ಲಿ 7 ವರ್ಷಗಳ ಕಾಲ ಮವ್ವಾರು ಬಾಲಕೃಷ್ಣ ಮಣಿಯಾಣಿಯವರು ಕಲಾಸೇವೆಯನ್ನು ಮಾಡಿದರು. 14 ವರುಷ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ. ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.
                             

ಕಟೀಲು ಮೇಳದಲ್ಲಿ ಪುರಾಣ ಪ್ರಸಂಗಗಳ ಜ್ಞಾನವನ್ನು ಪಡೆದಿದ್ದ ಇವರು ನಂತರ ಹೆಚ್ಚಾಗಿ ತುಳು ಪ್ರಸಂಗಗಳಲ್ಲೇ ಅಭಿನಯಿಸಿ ಪ್ರಸಿದ್ಧರಾದರು. ನಂತರ ಎಡನೀರು ಮೇಳದಲ್ಲಿ ತಿರುಗಾಟ ನಡೆಸಿದ್ದು ಪುರಾಣ ಪ್ರಸಂಗಗಳ ಜ್ಞಾನ ಪ್ರಸಂಗನಡೆಗಳನ್ನು ತಿಳಿಯಲು ಅನುಕೂಲವಾಯಿತು. ತಿರುಗಾಟ ನಡೆಸಿದ ಎಲ್ಲಾ ಮೇಳಗಳ ಸಂಚಾಲಕರ ಸಹಕಾರ ನನಗಿತ್ತು. ಹಿರಿಯ ಕಿರಿಯ ಸಹಕಲಾವಿದರೆಲ್ಲಾ ಸಹಕರಿಸಿದ್ದಾರೆ. ಪ್ರೀತಿಸಿದ್ದಾರೆ.

ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳು ಆಶೀರ್ವದಿಸಿದ್ದಾರೆ. ಚಿಕ್ಕವನಿದ್ದಾಗ ಬಡತನವಿತ್ತು. ಹೊಟ್ಟೆಪಾಡಿಗಾಗಿ ಯಕ್ಷಗಾನಕ್ಕೆ ಸೇರಿದೆ. ಈಗ ಏನೂ ತೊಂದರೆಯಿಲ್ಲ. ಯಕ್ಷಗಾನ ನನಗೆ ಎಲ್ಲವನ್ನೂ ನೀಡಿದೆ. ಕಲಾಭಿಮಾನಿಗಳ ಹಾರೈಕೆಯೂ ಇದೆ. ಇನ್ನೇನು ಬೇಕು? ನಾನು ಸಂಪೂರ್ಣ ತೃಪ್ತ ಎಂದು ಹಾಸ್ಯಗಾರ ಶ್ರೀ ಮವ್ವಾರು ಬಾಲಕೃಷ್ಣ ಮಣಿಯಾಣಿಯವರು ಮನತುಂಬಿ ಹೇಳುತ್ತಾರೆ.
                               

ಮವ್ವಾರು ಶ್ರೀ ಬಾಲಕೃಷ್ಣ ಮಣಿಯಾಣಿಯವರಿಗೆ ಬೇಡರ ಕಣ್ಣಪ್ಪ ಪ್ರಸಂಗದ ಕಾಶಿಮಾಣಿಯ ಪಾತ್ರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಶ್ರೀ ದಿನೇಶ ಅಮ್ಮಣ್ಣಾಯರ ಹಾಡುಗಾರಿಕೆಯಲ್ಲಿ ಎಡನೀರು ಮೇಳದಲ್ಲಿ ಅವರು ರಂಜಿಸಿದರು. ಪೂಕಳ ಲಕ್ಷ್ಮೀನಾರಾಯಣ ಭಟ್, ರವಿರಾಜ್ ಪನೆಯಾಲ ಅವರ ಕೈಲಾಸ ಶಾಸ್ತ್ರಿ ಅಲ್ಲದೆ ಮಳೆಗಾಲದಲ್ಲಿ ಖ್ಯಾತ ಹಾಸ್ಯಗಾರರಾದ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರ ಕೈಲಾಸ ಶಾಸ್ತ್ರಿ ಜತೆ ಮಣಿಯಾಣಿಯವರ ಕಾಶೀಮಾಣಿ ಪಾತ್ರ ರಂಜಿಸಿತ್ತು.

ಭಕ್ತ ಕುಚೇಲ ಪ್ರಸಂಗದ ಸುಧಾಮನ ಪಾತ್ರವೂ ಮವ್ವಾರು ಅವರಿಗೆ ಹೆಸರನ್ನು ತಂದುಕೊಟ್ಟಿತು. ಬೈರಾಗಿ, ವಿಜಯ, ದಾರುಕ, ಮಾಲಿನಿದೂತ ಮೊದಲಾದವು ಇವರಿಗೆ ಅತಿಪ್ರಿಯವಾದ ಪಾತ್ರಗಳು. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ ‘ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ’ ತಂಡದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಭಾಗವಹಿಸಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ.

ಲೇಖಕ:
ರವಿಶಂಕರ್ ವಳಕ್ಕುಂಜ

ವರುಷವೈದು ಸಂದಾಯ್ತು ‘ಕಣ್ಣಿ’ ನೀ ನಮ್ಮ ಹೃದಯ ಬರಿದು ಮಾಡಿ… 

ಬಡಗು ತಿಟ್ಟು ರಂಗವನ್ನು ಮಾತ್ರವಲ್ಲದೆ ಪೂರ್ತಿ ಯಕ್ಷಗಾನ ರಂಗವನ್ನೆ ತನ್ನ ನಾವೀನ್ಯತೆಯ ಶೈಲಿಯಿಂದ ಆಕ್ರಮಿಸಿಕೊಂಡಿದ್ದ ಯಕ್ಷಗಾನ ಕಲಾವಿದ ಕಣ್ಣಿಮನೆ ಗಣಪತಿ ಭಟ್ ನಮನ್ನಗಲಿ ಮೊನ್ನೆ ಫೆಬ್ರವರಿ 18ಕ್ಕೆ ವರುಷ ಐದಾಯ್ತು.

ಹೌದು. 2016ನೇ ಇಸವಿಯ ಇದೇ ತಿಂಗಳಿನ ದಿನಾಂಕ 18ಕ್ಕೆ ಕಣ್ಣಿಮನೆ ಎಂಬ ಯಕ್ಷಲೋಕದ ಬೆರಗು ಇಡೀ ಯಕ್ಷಗಾನ ರಂಗವನ್ನು ದುಃಖಸಾಗರದಲ್ಲಿ ತೇಲಾಡಿಸಿ ಕಾಲನ ಕರೆಗೆ ಓಗೊಟ್ಟು ಅಸ್ತಂಗತರಾದರು. 

ಮೊದಲಿಗೆ ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿದ ಅವರು ಮಂದಾರ್ತಿ, ಕೋಟ ಅಮೃತೇಶ್ವರಿ, ಸಾಲಿಗ್ರಾಮ, ಪೆರ್ಡೂರು ಮೇಳಗಳಲ್ಲಿ ವೃತ್ತಿ ಕಲಾವಿದನಾಗಿ ತನ್ನ ಪ್ರತಿಭೆಯಿಂದ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದಿದ್ದಾರೆ. ಕಣ್ಣಿಮನೆ ಗಣಪತಿ ಭಟ್ಟರಿದ್ದರೆ ಶ್ರೀಕೃಷ್ಣನ ಪಾತ್ರ ಅವರಿಗೆ ಕಟ್ಟಿಟ್ಟದ್ದು ಎನ್ನುವಷ್ಟು ಪ್ರಬುದ್ಧ ಪಾತ್ರಾಭಿನಯವನ್ನು ಶ್ರೀಕೃಷ್ಣನಾಗಿ ಅವರು ನಿರ್ವಹಿಸುತ್ತಿದ್ದವರು. 

ತನ್ನದೇ ಆದ ಶೈಲಿಯಿಂದ ತನ್ನ ಕೇದಗೆ ಮುಂದಲೆಯನ್ನು ತಿರುಗಿಸುತ್ತಾ ನಾಟ್ಯ ಮಾಡುವ ಅವರ ಶೈಲಿ ಬಹಳ ಆಕರ್ಷಕ. ಕೇದಗೆ ಮುಂದಲೆಯನ್ನು ಪಕ್ಕಕ್ಕೆ ಮತ್ತು ಹಿಂದಕ್ಕೆ ಬಾಗಿಸುವ ಆ ಶೈಲಿ ‘ಕಣ್ಣಿ ಶೈಲಿ’ ಎಂದೇ ಪ್ರಸಿದ್ಧವಾಗಿದೆ. 

ಶ್ರೀಕೃಷ್ಣ, ನಾಗಶ್ರೀ ಪ್ರಸಂಗದ ಶಿಥಿಲ, ದೇವವೃತ, ಸಾಲ್ವ, ಕೀಚಕ, ಸುಧನ್ವ ಹೀಗೆ ಪುಂಡು ವೇಷ, ಪುರುಷ ವೇಷಗಳಲ್ಲಿ ಮಿಂಚಿ ಯಕ್ಷಗಾನ ಲೋಕದ ಅನಭಿಷಿಕ್ತ ದೊರೆಯಾಗಿದ್ದ ಅವರು ಅಕಾಲದಲ್ಲಿ ಮರೆಯಾದದ್ದು ಮಾತ್ರ ವಿಪರ್ಯಾಸವೆಂದೇ ಹೇಳಬೇಕು.

ಕೇವಲ ತನ್ನ 47ನೆಯ ವಯಸ್ಸಿನಲ್ಲಿಯೇ ಅಸ್ತಂಗತರಾದ ಅವರ ಬದುಕು ತನ್ನ ಯಕ್ಷಗಾನದ ಕುಣಿತದಂತೆ ವಿಶಿಷ್ಟತೆಯಿಂದ ಕೂಡಿದ್ದರೂ ಅಂತ್ಯ ಮಾತ್ರ ದುರಂತವಾಗಿತ್ತು. ಅಷ್ಟು ಸಣ್ಣ ವಯಸ್ಸಿನಲ್ಲಿಯೇ ಗಂಭೀರ ಕಾಯಿಲೆಗಳಿಗೆ ತುತ್ತಾದದ್ದು ಯಕ್ಷಗಾನಕ್ಕೊಂದು ತುಂಬಲಾರದ ನಷ್ಟ. 

ತನ್ನ ವಿಶಿಷ್ಟ ಶೈಲಿಯಿಂದ ಹಲವಾರು ಸಂಖ್ಯೆಯಲ್ಲಿ ಅಭಿಮಾನಿಗಳನ್ನು  ಪಡೆದುಕೊಂಡರೂ ಮತ್ತದೇ ವಿಶಿಷ್ಟ ಶೈಲಿಯು ಕೆಲವು ವಿಮರ್ಶಕರ ಟೀಕೆ ಟಿಪ್ಪಣಿಗಳಿಗೂ ಆಹಾರವಾಗಿತ್ತು. ಸಣ್ಣ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿದ ವ್ಯಕ್ತಿಗಳಿಗೆ ಆಯಸ್ಸು ಕಡಿಮೆ ಎಂದು ಹೇಳುತ್ತಾರೆ.

ಇದಕ್ಕೆ ಉದಾಹರಣೆಯಾಗಿ ಹಲವಾರು ಪ್ರಸಿದ್ಧ ವ್ಯಕ್ತಿಗಳು ನಮ್ಮ ಕಣ್ಣ ಮುಂದೆ ಹಾದು ಹೋಗುತ್ತಾರೆ. ಕಣ್ಣಿಮನೆ ಗಣಪತಿ ಭಟ್ಟರೂ ಈ ಪಟ್ಟಿಗೆ ಸೇರುತ್ತಾರೆ. ಅವರಿಂದ ಇನ್ನೂ ಎಷ್ಟೆಷ್ಟೋ ಸಾಧನೆಗಳನ್ನು ಈ ಯಕ್ಷರಂಗ ನಿರೀಕ್ಷಿಸಿತ್ತು.

ಆದರೆ ಆ ನಿರೀಕ್ಷೆಗೆ ಸೊಪ್ಪು ಹಾಕದೆ ಅವರು ಹೋಗಿಯೇ ಬಿಟ್ಟರು. ಆದರೆ ಹೋಗುವ ಮುನ್ನ ಬಹಳಷ್ಟನ್ನು ಸಾಧಿಸಿದ್ದರು. ಮುಂದೆ ಇನ್ನೊಬ್ಬರು ಏರಲು ಅತಿಯಾದ ಶ್ರಮ ಪಡುವಷ್ಟು ಎತ್ತರವನ್ನು ಅವರು ತನ್ನ ಸಣ್ಣ ವಯಸ್ಸಿನಲ್ಲಿಯೇ ಏರಿದ್ದರು. 

ಪ್ರತಿದಿನವೂ ಅವರ ನೆನಪು ಕಲಾಪ್ರೇಮಿಗಳಿಗೆ ಆಗದೆ ಇರಲಾರದಾದರೂ ಫೆಬ್ರವರಿ 18 ಬಂದಾಗ ಯಾಕೋ ಮತ್ತೆ ಮತ್ತೆ ‘ಕಣ್ಣಿಮನೆ’ ಎಂಬ ಶಬ್ದ ಕಿವಿಗಳಲ್ಲಿ ಮಾರ್ದನಿಸುತ್ತದೆ. “ಕಣ್ಣಿ ನೀ ಯಾಕೆ ನಮ್ಮ ಹೃದಯ ಬರಿದು ಮಾಡಿ ಹೋಗಿಬಿಟ್ಟೆ” ಎಂದು ಮನಸ್ಸು ಚೀರಿ ಹೇಳುತ್ತದೆ. 

ಬರಹ: ಮನಮೋಹನ್ ವಿ.ಎಸ್ 

ಕೊರೋನಾ ಮತ್ತೊಮ್ಮೆ ಹರಡುವ ಭೀತಿ – ಐದು ರಾಜ್ಯಗಳಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಕೇಂದ್ರದ ಸೂಚನೆ 

ಈಗಾಗಲೇ ಕೆಲವು ರಾಜ್ಯಗಳಲ್ಲಿ ಕೊರೋನಾ ವೈರಸ್ ಭಾದಿತರ ಸಂಖ್ಯೆ ಗಣನೀಯವಾಗಿ ಇಳಿಯುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೂ ಸೋಂಕಿತರ ಪ್ರಮಾಣ ಇಳಿಕೆಯಲ್ಲಿದೆ.

ಆದರೆ ದೇಶದ ಕೆಲವು ರಾಜ್ಯಗಳಲ್ಲಿ ದ್ವಿತೀಯ ಹಂತದ ಕೊರೋನಾ ಅಲೆ ಹರಡುತ್ತಲಿದ್ದು ಕೇಂದ್ರ ಸರಕಾರ ಆ ರಾಜ್ಯಗಳಿಗೆ ತೀವ್ರ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಕಟ್ಟಿನಿಟ್ಟಿನ ಸೂಚನೆಯನ್ನು ನೀಡಿದೆ. 

ಜಮ್ಮು ಕಾಶ್ಮೀರವು ಪ್ರವಾಸಿಗರು ಹೆಚ್ಚಾಗಿ ಬರುವ ತಾಣವಾಗಿದ್ದು ಅಲ್ಲಿ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಕೇಂದ್ರ ಸರಕಾರ ಎಚ್ಚರಿಸಿದೆ.

ಆರ್ಟಿಪಿಆರ್ ಪರೀಕ್ಷೆಗಳನ್ನು ಹೆಚ್ಚಿಸುವಂತೆಯೂ ಕೇಂದ್ರವು ರಾಜ್ಯ ಸರಕಾರಗಳಿಗೆ ಸುತ್ತೋಲೆ ಹೊರಡಿಸಿದೆ. 

ಮಹಾರಾಷ್ಟ್ರ, ಪಂಜಾಬ್, ಕೇರಳ, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಗುರುತಿಸಿದ ಕೇಂದ್ರವು ಈ ರಾಜ್ಯಗಳಿಗೆ ಎಚ್ಚರ ವಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಚ್ಚರಿಸಿದೆ.

ಈ ರಾಜ್ಯಗಳ ನೆರೆ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಒಡಿಸ್ಸಾ,ಗುಜರಾತ್ ರಾಜ್ಯಗಳಲ್ಲೂ ಎಚ್ಚರ ವಹಿಸುವಂತೆ ಕೇಂದ್ರ ಸೂಚಿಸಿದೆ. 

ಭಾಗವತ ಪೂಂಜರ ಚಿಕಿತ್ಸೆಗೆ ನೆರವು – ಅಜೆಕಾರು ಕಲಾಭಿಮಾನಿ ಬಳಗ ನೇತೃತ್ವದಲ್ಲಿ ರೂ.1 ಲಕ್ಷ ನಿಧಿ ಸಮರ್ಪಣೆ

ಯಕ್ಷಗಾನದ ಸವ್ಯಸಾಚಿ ‘ಮಾನಿಷಾದ’ ಖ್ಯಾತಿಯ ಪ್ರಸಂಗಕರ್ತೃ, ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಕಳೆದ ಕೆಲವು ತಿಂಗಳಿಂದ Myelodysplasia ಎಂಬ ರಕ್ತ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ ಶುಶ್ರೂಷೆಗಾಗಿ azacytidine + venetoclax ಎಂಬ ಔಷಧಿಗೆ 6 ತಿಂಗಳ ಚಿಕಿತ್ಸೆಯ ಒಟ್ಟು ವೆಚ್ಚ 35 ರಿಂದ 40 ಲಕ್ಷದವರೆಗೆ ತಗಲುವುದೆಂಬ ವೈದ್ಯರ ಸೂಚನೆಯಿರುವುದರಿಂದ ಅವರ ಕುಟುಂಬ ಆರ್ಥಿಕ ಸಹಾಯಕ್ಕಾಗಿ ಕಲಾಭಿಮಾನಿಗಳನ್ನು ವಿನಂತಿಸಿದೆ.           

ತೀರಾ ಇತ್ತೀಚಿನವರೆಗೂ ಕಟೀಲು ಮೇಳದ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿರುವ ಪುರುಷೋತ್ತಮ ಪೂಂಜರ ಪ್ರಸಕ್ತ ಸ್ಥಿತಿಯನ್ನು ಗಮನಿಸಿ ಅವರ  ಚಿಕಿತ್ಸೆಗಾಗಿ  ಮುಂಬಯಿ ಅಜೆಕಾರು ಕಲಾಭಿಮಾನಿ ಬಳಗವು ಮೊದಲ ಹಂತದಲ್ಲಿ  ರೂ. 1 ಲಕ್ಷದ  ನಿಧಿಯನ್ನು ಹಸ್ತಾಂತರಿಸಿದೆ.

ಈ ನಿಧಿಗೆ ಮುಂಬೈಯ ಕಲಾ ಪೋಷಕರಾದ ಉದ್ಯಮಿ ರವೀಂದ್ರನಾಥ ಭಂಡಾರಿ, ಸಿಎ ಸುರೆಂದ್ರ ಶೆಟ್ಟಿ, ಸತೀಶ್ ಶೆಟ್ಟಿ ಕೊಟ್ರಾಡಿ, ಬಾಬು ಶೆಟ್ಟಿ ಪೆರಾರ, ಆನಂದ ಬಂಗೇರ ಬಜಪೆ, ಜಗದೀಶ್ ಶೆಟ್ಟಿ ಶಿವಪುರ, ಸುರೇಶ ಶೆಟ್ಟಿ ಕಡಂದಲೆ, ಅಜಿತ್ ಶೆಟ್ಟಿ ಕೊಟ್ರಾಡಿ, ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ, ವಸಾಯಿ ಜೀವದಾನಿ ಯಕ್ಷಕಲಾ ವೇದಿಕೆಯ ಅಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ ಮತ್ತು ಪದಾಧಿಕಾರಿಗಳು ದೇಣಿಗೆ ನೀಡಿ ಸಹಕರಿಸಿದ್ದಾರೆ.         

ಮುಂಬಯಿ ಕಲಾಭಿಮಾನಿಗಳಿಂದ ಸಂಗ್ರಹವಾದ ಒಟ್ಟು ಹಣವನ್ನು ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಇತ್ತೀಚೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುರುಷೋತ್ತಮ ಪೂಂಜರಿಗೆ ನೀಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಮುಂಬಯಿ ಉದ್ಯಮಿಗಳಾದ ಆನಂದ ಬಂಗೇರ ಬಜ್ಪೆ ಮತ್ತು ಅಜಿತ್ ಶೆಟ್ಟಿ ಕೊಟ್ರಾಡಿ ಉಪಸ್ಥಿತರಿದ್ದರು.       

(ಪುರುಷೋತ್ತಮ ಪೂಂಜರ ಚಿಕಿತ್ಸೆಗೆ ನೆರವು ನೀಡಲಿಚ್ಛಿಸುವ ಕಲಾಭಿಮಾನಿಗಳು ಮತ್ತು ದಾನಿಗಳು Parikshith Poonja a/c no. 343901507425 IFSC : ICIC 0003439 Google pay no. 8197256366 ಇದಕ್ಕೆ ಸಂಪರ್ಕಿಸಲು ಕೋರಲಾಗಿದೆ.)

ನೀವು ತಿಳಿಯಲೇ ಬೇಕಾದ ಮಾಹಿತಿ – ಒತ್ತಡದಿಂದ ರಿಲ್ಯಾಕ್ಸ್ ಸ್ಥಿತಿಗೆ ಬರುವ  ವಿಧಾನ – ಡಾ. ಸ್ನೇಹಾ (ಮಾನಸಿಕ ರೋಗಗಳ ತಜ್ಞೆ)

ನಮ್ಮ ದಿನನಿತ್ಯದ ಜೀವನದಲ್ಲಿ ಮತ್ತು ಕಾರ್ಯಕ್ಷೇತ್ರದಲ್ಲಿ ಎದುರಾಗುವ ಒತ್ತಡಗಳನ್ನು ನಿಭಾಯಿಸಲು ಹಲವಾರು ಮಂದಿ ಹೆಣಗಾಡುವುದನ್ನು ಕಾಣುತ್ತೇವೆ.

ಕೆಲವರಂತೂ ಈ ಒತ್ತಡವನ್ನ ನಿಭಾಯಿಸಲು ಹೆಣಗಾಡುತ್ತಾ ಮಾನಸಿಕ ಖಿನ್ನತೆಗೆ ಒಳಗಾಗುವುದನ್ನೂ ನೋಡುತ್ತೇವೆ.  ಈ ಒತ್ತಡ ಅಥವಾ Stress ನ ಲಕ್ಷಣಗಳೇನು?

ದೈನಂದಿನ ಜೀವನದಲ್ಲಿ ಎದುರಾಗುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ?  ಈ ಎಲ್ಲ ವಿಚಾರಗಳ ಬಗ್ಗೆ ಬೆಂಗಳೂರಿನ ವಿಕ್ಟೊರಿಯಾ ಆಸ್ಪತ್ರೆಯ ಮಾನಸಿಕ ರೋಗಗಳ ತಜ್ಞರಾದ ಡಾ. ಸ್ನೇಹಾ ವಿ.ಜಿ ಈ ವೀಡಿಯೋದಲ್ಲಿ ವಿವರಿಸಿದ್ದಾರೆ.

ವೀಡಿಯೋ ನೋಡಿ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಿ 

ಮೇಳಗಳ ಇಂದಿನ ( 22.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 22.02.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ == ಹೊಳೆಕೊಪ್ಪ, ಹಳಕ, ಶೃಂಗೇರಿ ತಾಲೂಕು – ಶ್ರೀಶನೀಶ್ವರ ಮಹಾತ್ಮೆ 

ಕಟೀಲು ಒಂದನೇ ಮೇಳ = ಶ್ರೀ ಮಹಾಗಣಪತಿ ದೇವಸ್ಥಾನ, ಉರ್ವಸ್ಟೋರ್, ಮಂಗಳೂರು 

ಕಟೀಲು ಎರಡನೇ ಮೇಳ ==   ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದ ಬಳಿ ಬಂಟ್ವಾಳ 

ಕಟೀಲು ಮೂರನೇ ಮೇಳ= ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರ 

ಕಟೀಲು ನಾಲ್ಕನೇ ಮೇಳ  == ಮದ್ಯ ಪಂತಡ್ಕ ಕಾಟಿಪಳ್ಳ 

ಕಟೀಲು ಐದನೇ ಮೇಳ == ತಲೆಮೊಗರು ಕೋಟೆಕಣಿ ಸಜಿಪ ಪಡು ಬಂಟ್ವಾಳ 

ಕಟೀಲು ಆರನೇ ಮೇಳ == ಇಡ್ಕಿದು ಕೋಲ್ಪೆ ದೇವಸ್ಥಾನದ ವಠಾರ 

ಮಂದಾರ್ತಿ ಒಂದನೇ ಮೇಳ  ==  ಹಳೆಗದ್ದೆ, ಹೊಸ ಅಗ್ರಹಾರ, ತೀರ್ಥಹಳ್ಳಿ  ತಾಲೂಕು 

ಮಂದಾರ್ತಿ ಎರಡನೇ ಮೇಳ   ==   ಮೂಡುವಳ್ಳಿ ಹೈಕಾಡಿ, ಹಾಲಾಡಿ 

ಮಂದಾರ್ತಿ ಮೂರನೇ ಮೇಳ  ==   ಜಾತಬೆಟ್ಟು ಉಪ್ಪೂರು 

ಮಂದಾರ್ತಿ ನಾಲ್ಕನೇ ಮೇಳ   ==  ಅಂಗಡಿ, ನಂಚಾರು 

ಮಂದಾರ್ತಿ    ಐದನೇ ಮೇಳ  ==  ಶ್ರೀ ಕೊರಗಜ್ಜ  ಮಂತ್ರದೇವತೆ ಚಾಮುಂಡೇಶ್ವರಿ ಗುಳಿಗ ಸನ್ನಿಧಿ, ಕಿನ್ನಿಗೋಳಿ, ದ.ಕ 

ಶ್ರೀ ಹನುಮಗಿರಿ ಮೇಳ  ==  ಚೇಳಾಯಿರು ‘ಮಾತೃಛಾಯ ‘ ಮನೆಯ ವಠಾರ – ಶುಕ್ರನಂದನೆ 

ಶ್ರೀ ಸಾಲಿಗ್ರಾಮ ಮೇಳ == ಕಾರವಾರ – ಬಹ್ಮಕಪಾಲ, ಮಾರುತಿ ಪ್ರತಾಪ 

ಶ್ರೀ ಪೆರ್ಡೂರು ಮೇಳ == ಮೂಕಾಂಬಿಕಾ ಮನೆಯಂಗಳ, ಹರಾವತಿ(ಚಿತ್ತೂರು) – ದೇವಿ ಮಹಾತ್ಮೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ನಂದ್ರೊಳ್ಳಿ ಕ್ಷೇತ್ರಪಾಲ್ 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಕೇಳಾಮನೆ ಗೋಳಿಹೊಳೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಯಕ್ಷೇಶ್ವರಿ ದೇವಸ್ಥಾನ ಇಡೂರು 

ಶ್ರೀ ಪಾವಂಜೆ ಮೇಳ  ==  ಕನ್ಯಾನ ಶ್ರೀ ಗುರುದೇವ ಕಲ್ಯಾಣ ಮಂಟಪದ ಬಳಿ – ಶ್ರೀ ದೇವಿ ಮಹಾತ್ಮೆ  (ಸಂಜೆ 6ರಿಂದ ರಾತ್ರಿ 12)

ಕಮಲಶಿಲೆ ಮೇಳ ‘ಎ‘ = ಅತ್ರಿಕೊಡ್ಲು ಸಿದ್ದಾಪುರ 

ಕಮಲಶಿಲೆ ಮೇಳ ‘ಬಿ‘ == ಕೈಮರ ತೀರ್ಥಹಳ್ಳಿ 

ಶ್ರೀ ಬಪ್ಪನಾಡು ಮೇಳ == ಬಾರಿಂಜೆ ದಾಸಮಾರ್ – ಬಂಗಾರ್ ಬಾಲೆ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಹೊಸ್ಮಾರು ಈದು, ಪಲ್ಕೆ ಸ್ವಾಮಿ ವಿವೇಕಾನಂದ ಕ್ರೀಡಾಂಗಣ – ಶ್ರೀ ಕೊಲ್ಲೂರು ಕ್ಷೇತ್ರ ಮಹಾತ್ಮೆ 

ಶ್ರೀ ಅಮೃತೇಶ್ವರೀ ಮೇಳ == ಶ್ರೀ ಕ್ಷೇತ್ರದಲ್ಲಿ 

ಶ್ರೀ ಬೋಳಂಬಳ್ಳಿ ಮೇಳ== ವಂಡ್ಸೆ 

ಶ್ರೀ ಸೌಕೂರು ಮೇಳ == ಸಾರ್ಕಲ್ ಇಂಧನಕೊಡ್ಲು – ನೂತನ ಪ್ರಸಂಗ 

ಶ್ರೀ ಹಾಲಾಡಿ ಮೇಳ == ಬೆಳ್ಳಾಲ ಕಾರೆಬೈಲು – ನಾಗಶ್ರೀ (ರಾತ್ರಿ 8ರಿಂದ 12)

ಶ್ರೀ ಬೆಂಕಿನಾಥೇಶ್ವರ ಮೇಳ  == ಐಕಳ ಬ್ರಹ್ಮಮುಗೇರ್ಕಳ ದೈವಸ್ಥಾನದ ಮುಂಭಾಗ – ಪಿಲಿ ಏರಿ ಪಿಲಿಚಂಡಿ 

ಶ್ರೀ ಮಡಾಮಕ್ಕಿ ಮೇಳ == ಕಳತ್ತೂರ್ ಸಂತೆಕಟ್ಟೆ (ಹೆಬ್ರಿ) – ಶ್ರೀ ದೇವಿ ಮಾಂಕಾಳಿ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಗೋಳಿಗರಡಿ ಶ್ರೀ ಪಂಜುರ್ಲಿ ಸನ್ನಿಧಾನ – ನಾಗಮಂಡಲ 

ಶ್ರೀ ಹಿರಿಯಡಕ ಮೇಳ == ಹೆಬ್ರಿ ತಾಣ ಅರ್ಧನಾರೇಶ್ವರ ದೇವಸ್ಥಾನ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಕಿರಿಮಂಜೇಶ್ವರ  

ಶ್ರೀ ಸಿಗಂದೂರು ಮೇಳ == ನೇರ್ಲಕಟ್ಟೆ ಕಾಳ್ನಾಡಿ 

ಶ್ರೀ ನೀಲಾವರ ಮೇಳ  == ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಸಾಲಿಕೇರಿ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಹೊಸಳ್ಳಿ 

ಶ್ರೀ ಮೇಗರವಳ್ಳಿ ಮೇಳ == ನೂಜಿಕೊರ್ಗಿ  – ಮಧುರ ಮನಸ್ವಿ  

‘ಲವ್ ಜಿಹಾದ್ ಮೂಲಕ ಕೇರಳವನ್ನು ಇಸ್ಲಾಮಿಕ್ ಸ್ಟೇಟ್ ಮಾಡಲು ಸಂಚು’  – ಕಾಸರಗೋಡಿನಲ್ಲಿ ಯೋಗಿ ಆದಿತ್ಯನಾಥ್   

ಲವ್ ಜಿಹಾದ್’ ಸೋಗಿನಲ್ಲಿ ‘ಕೇರಳವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಪಿತೂರಿ’ ನಡೆಯುತ್ತಿದೆ. ಆದರೆ ಇದರ ಕುರಿತು ಯುಡಿಎಫ್ ಸರ್ಕಾರ ಲಕ್ಷಿಸದೆ ನಿದ್ರಿಸುತ್ತಿದೆ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಭಾನುವಾರ ಕಾಸರಗೋಡಿನಲ್ಲಿ ಆರೋಪಿಸಿದ್ದಾರೆ.  

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾನುವಾರ ಬಿಜೆಪಿಯ ವಿಜಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದರು.  ಕಾಸರಗೋಡಿನಲ್ಲಿ ನಡೆದ ಬಿಜೆಪಿಯ ಮತದಾನ ಅಭಿಯಾನವನ್ನುದ್ದೇಶಿಸಿ ಮಾತನಾಡಿದ ಅವರು, 2009 ರಲ್ಲಿ ಕೇರಳ ಹೈಕೋರ್ಟ್ ‘ಲವ್ ಜಿಹಾದ್’ ಗಮನಕ್ಕೆ ತಂದಿದ್ದರೂ, ಸರ್ಕಾರ ಇದಕ್ಕೆ ಗಮನ ಕೊಡಲಿಲ್ಲ. ತಮ್ಮ ಉತ್ತರ ಪ್ರದೇಶ  ರಾಜ್ಯದ ಲವ್ ಜಿಹಾದ್ ಕಾನೂನನ್ನು ಉಲ್ಲೇಖಿಸಿದ ಅವರು, ಕೇರಳದ ಜನರು ಎಚ್ಚರಗೊಂಡು ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಹೇಳಿದರು.
 

“ಕೇರಳ ಲವ್ ಜಿಹಾದ್ ಬಗ್ಗೆ ಎಚ್ಚರಗೊಳ್ಳಬೇಕು” “2009 ರಲ್ಲಿ ಕೇರಳ ಹೈಕೋರ್ಟ್ ಲವ್ ಜಿಹಾದ್ ಕಡೆಗೆ ಸರ್ಕಾರದ ಗಮನವನ್ನು ತಂದಿತು. ಆದರೆ ಲವ್ ಜಿಹಾದ್ ಬಗ್ಗೆ ಸರ್ಕಾರ ಇಲ್ಲಿ ಯಾವುದೇ ಕಾನೂನು ಮಾಡಿಲ್ಲ. ಕೇರಳ ರಾಜ್ಯವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಲು ಪಿತೂರಿ ಲವ್ ಜಿಹಾದ್ ಎಂದು ಹೈಕೋರ್ಟ್ ಹೇಳಿದೆ, ಆದರೆ ಸರ್ಕಾರ ನಿದ್ರಿಸುತ್ತಿದೆ.

ಭದ್ರತೆ ಮತ್ತು  ಭಾರತ ವಿರೋಧಿ ಪಿತೂರಿಯ ಬಗ್ಗೆ ಕಾಳಜಿ ವಹಿಸಿ. ನೀವು ಎಚ್ಚರಗೊಂಡು ಬಿಜೆಪಿಯನ್ನು ಆರಿಸಬೇಕಾಗುತ್ತದೆ. ನಾವು ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಬಹುದು. ಉತ್ತರ ಪ್ರದೇಶದಲ್ಲಿ ನಾವು ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಿದ್ದೇವೆ ಮತ್ತು ಜನರನ್ನು ಬಂಧಿಸಲು ಪ್ರಾರಂಭಿಸಿದ್ದೇವೆ “ಎಂದು ಯೋಗಿ ಆದಿತ್ಯನಾಥ್ ಹೇಳಿದರು.    

ಉತ್ತರ ಪ್ರದೇಶದ ಲವ್ ಜಿಹಾದ್ ಕಾನೂನಿನಲ್ಲಿ ‘ಲವ್ ಜಿಹಾದ್’ ಎಂಬ ಪದವನ್ನು ಉಲ್ಲೇಖಿಸಲಾಗಿಲ್ಲ ಅಥವಾ ಈ ಪದವನ್ನು ವ್ಯಾಖ್ಯಾನಿಸುವುದಿಲ್ಲ, ಆದರೆ ಇದು ವಿವಾಹದ ಮೂಲಕ ಸೇರಿದಂತೆ ಬಲವಾದ ಧಾರ್ಮಿಕ ಮತಾಂತರವನ್ನು ನಿಷಧಿಸುತ್ತದೆ. 

1-5 ವರ್ಷಗಳ ಜೈಲು ಶಿಕ್ಷೆಯೊಂದಿಗೆ 15,000 ರೂ. ಇದಲ್ಲದೆ, ಮಹಿಳೆ ಅಪ್ರಾಪ್ತ ವಯಸ್ಸಿನವರಾಗಿದ್ದರೆ ಅಥವಾ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ, ಜೈಲು ಶಿಕ್ಷೆ 3-10 ವರ್ಷಗಳ ನಡುವೆ ಮತ್ತು 25 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ. ಸಾಮೂಹಿಕ ಮತಾಂತರಕ್ಕೆ 3-10 ವರ್ಷ ಜೈಲು ಶಿಕ್ಷೆ ಮತ್ತು  ಇದನ್ನು ನಡೆಸುವ ಸಂಸ್ಥೆಗಳ ಮೇಲೆ 50,000 ರೂ. ದಂಡ.  

ಯುಪಿಯಲ್ಲಿ ಕಾನೂನು ಜಾರಿಗೆ ಬಂದ 1 ತಿಂಗಳೊಳಗೆ 51 ಬಂಧನಗಳು ಮತ್ತು 14 ಪ್ರಕರಣಗಳನ್ನು ಹೊಸ ‘ಲವ್ ಜಿಹಾದ್ ಕಾನೂನು’ ಅಡಿಯಲ್ಲಿ ದಾಖಲಿಸಲಾಗಿದ್ದು, ಯುಪಿಯನ್ನು ಅನುಸರಿಸಿ, ಮಧ್ಯಪ್ರದೇಶವೂ ಸಹ ಅಂತಹ ಕಾನೂನನ್ನು ಜಾರಿಗೆ ತಂದರೆ, ಹರಿಯಾಣ, ಕರ್ನಾಟಕ, ಅಸ್ಸಾಂ ಮತ್ತು ಗುಜರಾತ್ – ಬಿಜೆಪಿ ಆಡಳಿತದಲ್ಲಿರುವ ಎಲ್ಲರೂ ಇದೇ ರೀತಿಯ ಕಾನೂನನ್ನು ಜಾರಿಗೆ ತರುವ ಭರವಸೆ ನೀಡಿದ್ದಾರೆ. 

‘ಲವ್ ಜಿಹಾದ್’ ಎಂದರೇನು?ಲವ್ ಜಿಹಾದ್ ಎಂಬುದು ಪ್ರೀತಿಯ ನೆಪದಲ್ಲಿ ಹಿಂದೂ ಹುಡುಗಿಯರನ್ನು ಮತಾಂತರಗೊಳಿಸಲು ಮುಸ್ಲಿಂ ಪುರುಷರು ನಡೆಸುವ ಕಾರಸ್ಥಾನವನ್ನು ಉಲ್ಲೇಖಿಸುವ ಪದವಾಗಿದೆ. ಎನ್‌ಸಿಡಬ್ಲ್ಯು ಅಧ್ಯಕ್ಷೆ ರೇಖಾ ಶರ್ಮಾ ಅವರು ಕೇರಳಕ್ಕೆ ‘ಅತಿರೇಕದ’ ಪ್ರೀತಿಯ ಜಿಹಾದ್ ಇದೆ ಎಂದು ಹೇಳಿಕೊಂಡಿದ್ದಾರೆ, ಅವರು ಮಹಿಳೆಯರನ್ನು ಆಮಿಷವೊಡ್ಡುತ್ತಿದ್ದರು – ಹಿಂದೂಗಳಷ್ಟೇ ಅಲ್ಲ, ಕ್ರಿಶ್ಚಿಯನ್ನರು ಮತ್ತು ಅವರನ್ನು ಕೇರಳದಲ್ಲಿ ಬಲವಂತವಾಗಿ ಮತಾಂತರಗೊಳಿಸಿದರು.

ತನಿಖೆಯ ನಂತರ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2017 ರ ಆಗಸ್ಟ್‌ನಲ್ಲಿ ಕೇರಳದ ಕೆಲವು ಪ್ರಕರಣಗಳನ್ನು  ಕಂಡುಕೊಂಡಿದ್ದರೂ, ಅಂತಹ ಪ್ರಕರಣಗಳಲ್ಲಿ ಬಲವಂತವಾಗಿ ಮತಾಂತರಕ್ಕೆ ಯತ್ನಿಸಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

2020 ರಲ್ಲಿ ಜಿ ಕಿಶನ್ ರೆಡ್ಡಿ ಅವರು ಸಂಸತ್ತಿನಲ್ಲಿ ‘ಲವ್ ಜಿಹಾದ್’ ಅನ್ನು ಪ್ರಸ್ತುತ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ ಮತ್ತು ಅಂತಹ ಯಾವುದೇ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ ಎಂದು ಹೇಳಿದರು. ಪ್ರಸ್ತುತ, ಅರುಣಾಚಲ ಪ್ರದೇಶ, ಒಡಿಶಾ, ಮಧ್ಯಪ್ರದೇಶ, ಛತ್ತೀಸಗಡ್ , ಗುಜರಾತ್, ಹಿಮಾಚಲ ಪ್ರದೇಶ, ಜಾರ್ಖಂಡ್ ಮತ್ತು ಉತ್ತರಾಖಂಡದಲ್ಲಿ ಮತಾಂತರ ವಿರೋಧಿ ಕಾನೂನುಗಳು ಜಾರಿಯಲ್ಲಿವೆ.

ಲಕ್ಷ್ಮೀಶ ತೋಳ್ಪಾಡಿ ಅವರಿಗೆ ವಿ ಕೃ ಗೋಕಾಕ್ ಪ್ರಶಸ್ತಿ – 2020

ಹಿರಿಯ ವಿದ್ವಾಂಸ, ಸಾಹಿತಿ ಲಕ್ಷ್ಮೀಶ ತೋಳ್ಪಾಡಿ, ಪುತ್ತೂರು ಅವರಿಗೆ ಪ್ರತಿಷ್ಠಿತ ವಿ ಕೃ ಗೋಕಾಕ್ ಪ್ರಶಸ್ತಿ ನೀಡಲಾಗುತ್ತಿದೆ.

ಭಾರತೀಯ ವಿದ್ಯಾಭವನ ಬೆಂಗಳೂರು ಮತ್ತು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಲಕ್ಷ್ಮೀಶ ತೋಳ್ಪಾಡಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ 22.02.2021ರ ಸೋಮವಾರ ಬೆಳಗ್ಗೆ 11ಘಂಟೆಗೆ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ  ತಿಳಿಸಿದೆ. ಕಾರ್ಯಕ್ರಮದ ವಿವರವನ್ನು ಈ ಕೆಳಗೆ ಕೊಡಲಾಗಿದೆ. 

ಕಾಂಗ್ರೆಸ್ ಸಂಘಟಿಸಿದ ಜಾರ್ಖಂಡ್ ರೈತ ರಾಲಿಯಲ್ಲಿ ನರ್ತಕಿಯಿಂದ ವೇದಿಕೆಯ ಮೇಲೆ ನೃತ್ಯದ ವೀಡಿಯೋ – ಟ್ವಿಟ್ಟರ್ ನಲ್ಲಿ ವೀಡಿಯೋ ವೈರಲ್

ಜಾರ್ಖಂಡ್‌ನ ಸರೈಕೆಲಾದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಂಘಟಿತ ಕಿಸಾನ್ ಜನಕ್ರೋಶ್ ರ್ಯಾಲಿಯಲ್ಲಿ ಬಾಲಿವುಡ್ ಹಾಡೊಂದರ ರಾಗಕ್ಕೆ ನರ್ತಕಿಯೊಬ್ಬರು ನರ್ತಿಸಿದರು.

ಜಾರ್ಖಂಡ್‌ನ ಸರೈಕೆಲಾದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಂಘಟಿತ ಕಿಸಾನ್ ಜನಕ್ರೋಶ್ ರ್ಯಾಲಿಯಲ್ಲಿ ನರ್ತಕಿ ಬಾಲಿವುಡ್ ಹಾಡೊಂದರ ರಾಗಕ್ಕೆ ಗರಗರನೆ ಕುಣಿದಿದ್ದು ಪಕ್ಷದ ಮುಖಂಡರು ವೇದಿಕೆಯಿಂದ ನೋಡುತ್ತಿದ್ದರು. 

ಸಾರೈಕೆಲಾದಲ್ಲಿ ನಡೆದ ಕಾಂಗ್ರೆಸ್ Rallyಯ ಆಶಯ ಮತ್ತು ಉದ್ದೇಶವನ್ನು ಪ್ರಶ್ನಿಸಿದ ಬಿಜೆಪಿ ಅಲ್ಲಿ ನೃತ್ಯದ ಅವಶ್ಯಕತೆಯನ್ನು ಪ್ರಶ್ನಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಜನಕ್ರೋಶ್ ರಾಲಿಯ ನೃತ್ಯದ ವಿಡಿಯೋವೊಂದರಲ್ಲಿ, ನಾಯಕರು ವೇದಿಕೆಯಲ್ಲಿ ಕುಳಿತಾಗ ಪ್ರದರ್ಶನವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು.

ಕಾಂಗ್ರೆಸ್ಸಿನ ಈ ರಾಲಿಯಲ್ಲಿನ ತುಣುಕನ್ನು ಹಂಚಿಕೊಂಡ ಬಿಜೆಪಿ ವಕ್ತಾರ ಆರ್.ಪಿ.ಸಿಂಗ್ ಅವರು ರೈತರ ಪರವಾಗಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯ ಸತ್ಯಾಸತ್ಯತೆಯನ್ನು ಪ್ರಶ್ನಿಸಿದರು ಮತ್ತು ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಯಲ್ಲಿ ಮುಂದೆ ಯಾರು ಎಂದು ಕೇಳಿದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರು ‘ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರನ್ನು ಪ್ರಚೋದಿಸಲು ಪಕ್ಷವು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲುದು ಎಂಬುದನ್ನು ಇದರಿಂದ ತಿಳಿಯಬಹುದು’ ಎಂದು ವಾಗ್ದಾಳಿ ನಡೆಸಿದರು.  

ಶಂಭೂರು ಯಕ್ಷೋತ್ಸವದಲ್ಲಿ ಬೊಂಡಾಲ ಪ್ರಶಸ್ತಿ ಪ್ರದಾನ – ‘ಯಕ್ಷಗಾನವು ಪರಂಪರೆಯನ್ನು ಬೆಸೆಯುವ ಕಲೆ ‘: ಅನಂತ ಆಸ್ರಣ್ಣ

ಯಕ್ಷಗಾನ ಒಂದು ಅಪೂರ್ವವಾದ ಪ್ರದರ್ಶನ ಕಲೆ. ಕರಾವಳಿಯಲ್ಲಿ ದೇವತಾರಾಧನೆಯ ರೂಪದಲ್ಲಿ ಪ್ರತಿದಿನ ಯಕ್ಷಗಾನ ಸೇವೆ ನಡೆಯುತ್ತದೆ. ಇದು ಪರಂಪರೆಯನ್ನು ಬೆಸೆಯುವ ಮಹತ್ವದ ಕಲೆಯಾಗಿ ಉಳಿದಿದೆ. ಬೊಂಡಾಲ ಕುಟುಂಬಿಕರು ತಲೆಮಾರುಗಳಿಂದ ಹರಕೆ ಬಯಲಾಟಗಳನ್ನು ಏರ್ಪಡಿಸುವ ಮೂಲಕ ಇದನ್ನು ಸತ್ಯವಾಗಿಸಿದ್ದಾರೆ’  ಎಂದು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದ್ದಾರೆ .

ಬಂಟ್ವಾಳ ತಾಲೂಕು ಶಂಭೂರಿನಲ್ಲಿ ಜರಗಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಎರಡು ದಿನಗಳ ಯಕ್ಷೋತ್ಸವದಲ್ಲಿ ದ್ವಿತೀಯ ದಿನ ‘ಬೊಂಡಾಲ ಪ್ರಶಸ್ತಿ ಪ್ರದಾನ’ ಮಾಡಿ ಅವರು ಮಾತನಾಡಿದರು.         

ಸಮಾರಂಭದಲ್ಲಿ ಕಟೀಲು ಮೇಳದಲ್ಲಿ 35 ವರ್ಷಗಳ ಕಲಾಸೇವೆ ಮಾಡಿದ ಶ್ರೀದೇವಿ ಪಾತ್ರಧಾರಿ ಬಾಯಾರಿನ ಸರವು ರಮೇಶ ಭಟ್ಟರಿಗೆ 2020 – 21 ನೇ ಸಾಲಿನ ‘ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಸ್ಮಾರಕ ಯಕ್ಷಗಾನ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಶಾಲು, ಸ್ಮರಣಿಕೆ, ಫಲತಟ್ಟೆ ಮತ್ತು ಗೌರವ ನಿಧಿಯನ್ನೊಳಗೊಂಡಿತ್ತು. ಕಲಾಸಂಘಟಕ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರು ಪ್ರತಿವಚನ ಹೇಳಿದರು.

ಬೊಂಡಾಲ ಸಂಸ್ಮರಣೆ :  ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಕೀರ್ತಿಶೇಷ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ ಹಾಗೂ ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂಸ್ಮರಣಾ ಭಾಷಣ ಮಾಡಿ ಮಾತನಾಡುತ್ತಾ ‘ಊರಿನ ಪಟೇಲರಾಗಿ, ಆದರ್ಶ ಅಧ್ಯಾಪಕರಾಗಿ ಮತ್ತು ಪ್ರಗತಿಪರ ಕೃಷಿಕರಾಗಿ ಜನಾನುರಾಗಿಗಳಾಗಿದ್ದ ಬೊಂಡಾಲ ಜನಾರ್ದನಶೆಟ್ಟರು ಹಳೆಯ ತಲೆಮಾರಿನ  ದಿಗ್ಗಜ  ಅರ್ಥಧಾರಿಗಳೊಂದಿಗೆ ಸರಸ ಮಾತುಗಾರರಾಗಿ ಗುರುತಿಸಿಕೊಂಡಿದ್ದರು.

ಅವರ ಪುತ್ರ ಬೊಂಡಾಲ ರಾಮಣ್ಣ ಶೆಟ್ಟರು ಭೂಮಾಪನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಸ್ವತ: ಯಕ್ಷಗಾನ ಕಲಾವಿದರಾಗಿ ಮತ್ತು ಸಂಘಟಕರಾಗಿ ಹೆಸರು ಪಡೆದಿದ್ದರು. ಇವರೀರ್ವರ ಸ್ಮರಣೆಗಾಗಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುವವರಿಗಾಗಿಯೇ ವರ್ಷಂಪ್ರತಿ ನೀಡುತ್ತಿರುವ ಬೊಂಡಾಲ ಪ್ರಶಸ್ತಿ ವಿಶೇಷ ಮಹತ್ವ ಪಡೆದಿದೆ ‘ ಎಂದು ನುಡಿದರು.

ಶಂಭೂರಿನ ನಿವೃತ್ತ ಶಿಕ್ಷಕ ಎನ್. ಕೃಷ್ಣರಾಜ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ‘ನುಡಿನಮನ’ –    ಕಾರ್ಯಕ್ರಮದಂದು ಮುಂಜಾನೆ ನಿಧನರಾದ ತೆಂಕುತಿಟ್ಟು ಯಕ್ಷರಂಗದ ಸಿಡಿಲಮರಿ, ಸುಪ್ರಸಿದ್ಧ ಪುಂಡು ವೇಷಧಾರಿ ಪುತ್ತೂರು ಶ್ರೀಧರ ಭಂಡಾರಿ ಅವರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು . ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿದರು.

ಇದರೊಂದಿಗೆ ಕಳೆದ ನಲವತ್ತೇಳು ವರ್ಷ ಎಡೆಬಿಡದೆ ಬೊಂಡಾಲ ಯಕ್ಷೋತ್ಸವದಲ್ಲಿ ದೇವಿಯ ಪೂಜಾವಿಧಿಗಳನ್ನು ನೆರವೇರಿಸುತ್ತಿದ್ದ ಮೇಳದ ಅರ್ಚಕ ಅನಂತರಾಮ ಭಟ್ ಕಾಂತಾವರ ಅವರ ನಿಧನಕ್ಕೂ ಸಂತಾಪ ಸೂಚಿಸಲಾಯಿತು. 

ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಸಮಿತಿ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ಬೊಂಡಾಲ ವಂದಿಸಿದರು . ಬೊಂಡಾಲ ದೇವಿಪ್ರಸಾದ ಶೆಟ್ಟಿ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಟೀಲು ಮೇಳದ ಕಲಾವಿದರಿಂದ ಮೊದಲ ದಿನ ಊರಿನ ಹತ್ತು ಸಮಸ್ತರ ಪರವಾಗಿ ‘ಸಮಗ್ರ ರಾವಣ’ ಹಾಗೂ ಮರುದಿನ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ‘ ಶ್ರೀದೇವಿ ಮಹಾತ್ಮೆ’  ಹರಿಕೆಯ ಬಯಲಾಟ ಜರಗಿತು.