Sunday, August 30, 2026
Home Blog Page 337

ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು (ಭಾಗ – 3)

 ಕಂಡೆತ್ತೋಡಿ ಶ್ರೀ ನಾರಾಯಣ ಕೇಕುಣ್ಣಾಯರು ಆ ಕಾಲದ ಪ್ರಸಿದ್ಧ ತಾಳಮದ್ದಳೆ ಅರ್ಥಧಾರಿ. ಇವರೇ ಯಕ್ಷಗಾನ ಕಲಾವಿದನಾಗಲು ವಿಷ್ಣು ಭಟ್ಟರಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ಪ್ರಿಯ ಶಿಷ್ಯನಾಗಿಯೇ ವಿಷ್ಣು ಭಟ್ಟರು ಕಲಾವಿದನಾಗಿ ಕಾಣಿಸಿಕೊಂಡಿದ್ದರು.   ಮದರಾಸು ಸರಕಾರದ ಆಡಳಿತ. ಭಾರತವು ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಆಗ ಪ್ರಾಥಮಿಕ ಶಾಲಾ ಶಿಕ್ಷಕನಾಗಲು ವಿದ್ಯಾರ್ಹತೆಯ ನಿಬಂಧನೆಗಳು ಇರಲಿಲ್ಲ.

ಅದೇ ಕಾಲಕ್ಕೆ ಊರ ಮಕ್ಕಳೆಲ್ಲಾ ವಿದ್ಯಾವಂತರಾಗಬೇಕೆಂಬ ಸದುದ್ದೇಶದಿಂದ ಸಮಾನಮನಸ್ಕರೆಲ್ಲ  ಕೀರಿಕ್ಕಾಡಿನಲ್ಲಿ ಪ್ರಾಥಮಿಕ  ಶಾಲೆಯನ್ನು ಆರಂಭಿಸಿದರು. (ಕೀರಿಕ್ಕಾಡು ಕೇಶವ ಭಟ್, ವಿಷ್ಣು ಭಟ್ಟರ ದೊಡ್ಡಪ್ಪಂದಿರು, ಕಂಡೆತ್ತೋಡಿ ರಾಮಚಂದ್ರ ಕೇಕುಣ್ಣಾಯರು, ವರಂಬುಡಿ  ಶಂಕರ ಭಟ್ಟರು ಸೇರಿ ಪ್ರಯತ್ನಿಸಿ ತೆರೆದ ಶಾಲೆ). ಸುಮಾರು 1927ರಲ್ಲಿ ಇರಬೇಕು. 5ನೇ ಕ್ಲಾಸಿನ ವರೆಗೆ ಓದಿದ 14 ವರ್ಷ ಪ್ರಾಯದ ವಿಷ್ಣು ಭಟ್ಟರು ಶ್ರೀ ವಿದ್ಯಾದಾಯಿನೀ ಕಿರಿಯ ಪ್ರಾಥಮಿಕ ಶಾಲೆಯ ಮೊದಲ ಏಕೋಪಾಧ್ಯಾಯರಾಗಿ ನೇಮಕಗೊಂಡಿದ್ದರು.

ಪ್ರತ್ಯೇಕ ಕಟ್ಟಡ ಇರಲಿಲ್ಲ. ಕೀರಿಕ್ಕಾಡು ಕೇಶವ ಭಟ್ಟರ ಮನೆಯ ಉಪಕಟ್ಟಡದಲ್ಲಿ ವಿದ್ಯಾಲಯವು ಕಾರ್ಯಾರಂಭ ಮಾಡಿತ್ತು. ಗೋಮಯ ಸರಿಸಿದ ನೆಲ. ವಿದ್ಯಾರ್ಥಿಗಳು ಕುಳಿತಿದ್ದರೆ ವಿಷ್ಣು ಎಂಬ ಎಳೆಯ ವಯಸ್ಸಿನ, ಟೀನೇಜಿನ ಅಧ್ಯಾಪಕ ನಿಂತೇ ಪಾಠ ಮಾಡಲು ಆರಂಭಿಸಿದ್ದ! ಆಗ ಶಾಲಾ ಅಧ್ಯಾಪಕರನ್ನು ಮಾಸ್ತರ್ ಎಂದು ಕರೆಯುವುದು ರೂಢಿಯಲ್ಲಿತ್ತು. ವಿಷ್ಣು ಭಟ್ಟರು ಮಾಸ್ತರ್ ವಿಷ್ಣು ಭಟ್ಟರೆಂದು ಕರೆಸಿಕೊಂಡರು. ಶಾಲೆಯಲ್ಲಿ ಮಾಸ್ತರರಾಗಿ  ಪಾಠ.

ಮುಂದಿನ ದಿನಗಳಲ್ಲಿ ಕೀರಿಕ್ಕಾಡು ಮಣ್ಣಿನಲ್ಲಿ ಯಕ್ಷಗಾನ ಕಲಾಸಕ್ತರಿಗೂ ಮಾಸ್ತರರಾಗಿ ಪಾಠ ಹೇಳಲಾರಂಭಿಸಿದರು. 1928ನೇ ಇಸವಿ. ಕೀರಿಕ್ಕಾಡು ಶಾಲೆಯಲ್ಲಿ ನಡೆದ ತಾಳಮದ್ದಳೆ. ‘ರಾಜಸೂಯಾಧ್ವರ, ಪ್ರಸಂಗ. ಗುರುಗಳಾದ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ಸೂಚನೆಯಂತೆ ಅರ್ಜುನನಾಗಿ ರಂಗಪ್ರವೇಶ. ವಿಷ್ಣು ಭಟ್ಟರು ಯಶಸ್ವಿಯಾಗಿ ಪ್ರೇಕ್ಷಕರಿಂದ ಹೊಗಳಿಸಿಕೊಂಡಿದ್ದರು. ಅಂದಿನಿಂದ ಯಕ್ಷಗಾನ ಕ್ಷೇತ್ರದಲ್ಲೂ ಕೀರಿಕ್ಕಾಡು ಮಾಸ್ತರರೆಂದೇ ಕರೆಸಿಕೊಂಡರು.

ಸಾಹಿತ್ಯದತ್ತ ಆಕರ್ಷಿತರಾದ ಇವರು ಲೇಖನಿಯಿಂದ ಸರಸ್ವತಿ ದೇವಿಯ ಸೇವೆಯನ್ನು ಮಾಡುವಲ್ಲಿ ತೊಡಗಿಸಿಕೊಂಡರು. ಸ್ವಯಂ ಪ್ರತಿಭಾವಂತರಾಗಿ ಕಾವ್ಯ, ಪುರಾಣಗಳನ್ನು ಓದಿ ಪಡೆದ ಅನುಭವಗಳು ಪದ್ಯ ರಚನೆಗೆ ಅನುಕೂಲವೂ ಆಗಿತ್ತು. ತನ್ನ 16ನೆಯ ವಯಸ್ಸಿನಲ್ಲಿ ‘ಶಿವ ಪಂಚಾಕ್ಷರೀ ಮಹಿಮೆ’ (ಶ್ವೇತಕುಮಾರ ಚರಿತ್ರೆ) ಎಂಬ ಪ್ರಸಂಗವನ್ನು ರಚಿಸಿದರು. 16ನೇ ವಯಸ್ಸಿನಲ್ಲಿ ಯಕ್ಷಗಾನ ಪ್ರಸಂಗವೊಂದನ್ನು ರಚಿಸಿದ ಹೆಗ್ಗಳಿಕೆ ಶ್ರೀಯುತರದು.

ಯಕ್ಷಗಾನ ಕ್ಷೇತ್ರದಲ್ಲಿ ಈಗಲೂ ವಿಜೃಂಭಿಸುತ್ತಿರುವ ಪ್ರಸಂಗವದು.  ಏಳಕ್ಕಿಂತಲೂ ಹೆಚ್ಚು ಬಾರಿ ಮುದ್ರಿತವಾಗಿತ್ತು. ಈ ವರೆಗೂ ಎಷ್ಟೋ ಸಾವಿರ ಬಾರಿ ಪ್ರದರ್ಶನಗೊಂಡಿರಬಹುದು. ಶೃಂಗಾರ, ಹಾಸ್ಯ, ಭಕ್ತಿ, ಕರುಣ ರಸಗಳಿಂದ ಈ ಪ್ರಸಂಗವು ಪ್ರೇಕ್ಷಕರನ್ನು ಬಹುವಾಗಿ ಆಕರ್ಷಿಸುತ್ತದೆ. ಯಕ್ಷಗಾನಕ್ಕೆ ಇದೊಂದು ಅಪೂರ್ವ ಕೊಡುಗೆ. ಕೂಡ್ಲು ಮನೆತನದ ಎರೆಯಪ್ಪಾಡಿ ಕೇಶವ ಶಾನುಭೋಗರ ಆದೇಶದಂತೆ ಈ ಪ್ರಸಂಗವನ್ನು ಮಾಸ್ತರರು ರಚಿಸಿದ್ದರಂತೆ. ಬಂಧುಗಳಾದ ಸರ್ಪ೦ಗಳ ವೆಂಕಪ್ಪ ಶಾಸ್ತ್ರಿಗಳಿಂದ ಸಂಸ್ಕೃತ ಕಲಿತುದೂ ಅನುಕೂಲವಾಗಿತ್ತು.

1927ರಿಂದ 1942ರ ವರೆಗೆ ಕೀರಿಕ್ಕಾಡು ವಿದ್ಯಾದಾಯಿನೀ ಶಾಲೆಯಲ್ಲಿ ಅಧ್ಯಾಪನ. ಜತೆಗೆ ತಾಳಮದ್ದಳೆ ಅರ್ಥಗಾರಿಕೆ, ಕೃಷಿ ವ್ಯವಹಾರ , ಸಂಸಾರ ನಿರ್ವಹಣೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದರು. ದೇಹ ಮತ್ತು ಮನಸ್ಸುಗಳೆರಡೂ ಬಲಿಷ್ಠವಾಗಿದ್ದುದರಿಂದ ಮಾತ್ರ ಈ ಸಾಹಸವನ್ನು ನಿರೀಕ್ಸಿಸಬಹುದು. 1935ರಲ್ಲಿ ತೀರ್ಥರೂಪರು (ಕೀರಿಕ್ಕಾಡು ಕೇಶವ ಭಟ್ಟರು) ನಿಧನರಾದಾಗ ಸಂಸಾರದ ಹೊಣೆಯೂ ಹೆಚ್ಚಿತ್ತು. 1930ರಲ್ಲಿ ಅಂದರೆ ಹದಿನೇಳನೇ ವಯಸ್ಸಿಗೆ ಮರಕ್ಕಿಣಿ ಗೋವಿಂದ ಭಟ್ಟ , ಶಂಕರಿ ಅಮ್ಮ ದಂಪತಿಗಳ ಪುತ್ರಿ ಪರಮೇಶ್ವರಿ ಅವರನ್ನು ವಿವಾಹವಾಗಿ ಗೃಹಸ್ಥಾಶ್ರಮಿಯಾದರು.

ಯಕ್ಷಗಾನಾಸಕ್ತಿ ತೀವ್ರವಾಗಿದ್ದರೂ ಮನೆಯನ್ನು ನಿರ್ಲಕ್ಸಿಸದೆ ನೋಡಿಕೊಳ್ಳುತ್ತಿದ್ದರು. ಕಾಸರಗೋಡು ಪ್ರದೇಶದೆಲ್ಲೆಡೆ ನಡೆಯುವ ಕೂಟಗಳಿಗೆ ನಡೆದೇ ಸಾಗುತ್ತಿದ್ದರು. ಪೊಳಲಿ ಶಾಸ್ತ್ರಿಗಳು, ಕವಿಭೂಷಣ ವೆಂಕಪ್ಪ ಶೆಟ್ಟರು, ಪಡ್ರೆ ಶ್ರೀಪತಿ ಶಾಸ್ತ್ರಿಗಳು(ಪೆರ್ಲ ಕೃಷ್ಣ ಭಟ್ಟರ ತೀರ್ಥರೂಪರು), ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರು, ಪುಂಡೂರು ಗೋಪಾಲಕೃಷ್ಣ ಪುಣಿಚಿತ್ತಾಯರು, ಏನ್. ಎಸ್. ಕಿಲ್ಲೆ , ದೊಡ್ಡ ಸಾಮಗರು, ಅರ್ಕುಳ ಸುಬ್ರಾಯ ಆಚಾರ್ಯರು, ಕುಬಣೂರು ಬಾಲಕೃಷ್ಣ ರಾಯರು, ಕೊಳಂಬೆ ಪುಟ್ಟಣ್ಣ ಗೌಡರು ಮೊದಲಾದವರು ಆಗ ಕೂಟಗಳಲ್ಲಿ ದಿಗ್ಗಜರು. ಅವರೊಂದಿಗೆ ಅರ್ಥ ಹೇಳುತ್ತಾ ಅನುಭವಗಳಿಂದ ಸಮದಂಡಿಯಾಗಿ ಮೆರೆದರು.

ಕುರಿಯ ವಿಠಲ ಶಾಸ್ತ್ರಿಗಳೂ, ಮಾಸ್ತರರೂ ಸಾಧಾರಣ ಸಮಾನವಯಸ್ಕರು. ಜತೆಯಾಗಿಯೇ ಆಟ  ಕೂಟಗಳಲ್ಲಿ ಭಾಗವಹಿಸಿದ್ದರು. ಕೀರಿಕ್ಕಾಡು ಶಾಲೆಯಲ್ಲಿ ಅಧ್ಯಾಪಕರಾಗಿದ್ದಾಗ ಶಿಕ್ಷಣಾಧಿಕಾರಿಯವರ ಪ್ರಸಂಶೆಗೂ ಪಾತ್ರರಾಗಿದ್ದರು. ಶಾಲೆಯಲ್ಲಿ ನವರಾತ್ರಿ ಪೂಜಾ ಸಂದರ್ಭವಲ್ಲದೆ ಅವಕಾಶಗಳಿದ್ದಾಗ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರ ನೇತೃತ್ವದಲ್ಲಿ ಕೂಟಗಳು ನಡೆಯುತ್ತಿತ್ತು. ಪಂಬೆತಡ್ಕ ಶ್ರೀನಿವಾಸ ಕಡಂಬಳಿತ್ತಾಯರೂ ಕೂಟಗಳಲ್ಲಿ ಮಾಸ್ತರರ ಒಡನಾಡಿಯಾಗಿದ್ದರು. ಕೀರಿಕ್ಕಾಡಿನಲ್ಲಿರುವಾಗಲೇ ಶಿಷ್ಯಂದಿರನ್ನು ಸಿದ್ಧಗೊಳಿಸುವ ಕಾಯಕಕ್ಕೆ ತೊಡಗಿದ್ದರು.

ಶೇಣಿಯವರು ಬಾಲಕನಾಗಿದ್ದಾಗ ಅವರನ್ನೂ ತಾಳಮದ್ದಳೆ ಕ್ಷೇತ್ರಕ್ಕೆ ಸೆಳೆದು ಪ್ರೋತ್ಸಾಹಿಸಿದ್ದರು. ಉಕ್ಕಿನಡ್ಕ ಶ್ರೀ ವಸಿಷ್ಠಾಶ್ರಮ ಸಂಸ್ಕೃತ ಪಾಠಶಾಲೆಯಲ್ಲಿ ನಡೆದ ಕೂಟದಲ್ಲಿ ರತಿ ಕಲ್ಯಾಣ ಪ್ರಸಂಗದಲ್ಲಿ ಮಾಸ್ತರರಿಂದ ಪ್ರಚೋದಿಸಲ್ಪಟ್ಟ ಶೇಣಿಯವರು ಮೊತ್ತ ಮೊದಲ ಬಾರಿ ತಾಳಮದ್ದಳೆ ಅರ್ಥಧಾರಿಯಾಗಿ ಕಾಣಿಸಿಕೊಂಡರು. ನಿರಂತರ ಯಕ್ಷಗಾನ ಪಾಠವನ್ನೂ ಕೂಟಗಳನ್ನೂ ನಡೆಸಿ ಕೀರಿಕ್ಕಾಡಿನಲ್ಲಿರುವಾಗಲೇ ‘ಯಕ್ಷಗಾನ ಗುರು’ ಎನಿಸಿಕೊಂಡರು.

ಇವರ ಶಿಷ್ಯರಲ್ಲಿ ಶೇಣಿ ಮತ್ತು ಕಡಾರು  ನಾರಾಯಣ ಭಟ್ ಪ್ರಮುಖರು. ‘ಕೀರಿಕ್ಕಾಡು ಮಾಸ್ತರರಿಂದಾಗಿಯೇ ನಾನು ಯಕ್ಷಗಾನ ಕ್ಷೇತ್ರಕ್ಕೆ ಬಂದೆ. ಅವರೇ ನನ್ನನ್ನು ಕೂಟಗಳಿಗೆ ಎಳೆತಂದವರು. ವಿವೇಕಾನಂದರಿಗೆ ಪರಮಹಂಸರಿದ್ದಂತೆ ನನಗೆ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು’ ಎಂದು ಶೇಣಿಯವರು ಹೇಳುತ್ತಿದ್ದರು. ಕಡಾರು ನಾರಾಯಣ ಭಟ್ಟರು ನಾಟ್ಯ ಕಲಿತು ಒಳ್ಳೆಯ ಕಿರೀಟ ವೇಷಧಾರಿಯಾಗಿ ಮೇಳದ ತಿರುಗಾಟವನ್ನು ಮಾಡಿದವರು. ಅತಿಕಾಯನ ಪಾತ್ರವು ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತ್ತು. ಅವರನ್ನು ಎಲ್ಲರೂ ಅತಿಕಾಯ ನಾರಾಯಣಣ್ಣ ಎಂದು ಕರೆಯುತ್ತಿದ್ದರಂತೆ.

ಈ ಎಲ್ಲಾ ವಿಚಾರಗಳನ್ನು ನನ್ನ ತೀರ್ಥರೂಪರು ನನಗೆ ಹೇಳಿದ್ದರು. ಮೊಟ್ಟಮೊದಲು ಕೀರಿಕ್ಕಾಡು ಪ್ರಶಸ್ತಿಯನ್ನು ಶೇಣಿ ಗೋಪಾಲಕೃಷ್ಣ ಭಟ್ಟರಿಗೇ ನೀಡಿ ಗೌರವಿಸಲಾಗಿತ್ತು. ಇದು ಅಭಿನಂದನೀಯವೂ ಗುರು ಶಿಷ್ಯ ಪರಂಪರೆಗೆ ಸಂದ ಗೌರವವೂ ಆಗಿದೆ. ಮಾಸ್ತರರು ಎಳವೆಯಲ್ಲೇ ಅಧ್ಯಯನಾಸಕ್ತರಾಗಿ ಉಳಿದವರಿಗೆ ಬೋಧಿಸುವ ಕ್ರಮವನ್ನು ಪಾಲಿಸಿಕೊಂಡು ಬಂದವರು.  

– (ಮುಂದುವರಿಯುವುದು)

ಲೇಖನ: ರವಿಶಂಕರ್ ವಳಕ್ಕುಂಜ

ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳ ಆರಂಭಕ್ಕೆ ಮುನ್ನ

ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳ ಆರಂಭಕ್ಕೆ ಸ್ವಲ್ಪ ಸಮಯ ಮೊದಲಿನ ಚಿತ್ರಗಳು 

ಮೇಳಗಳ ಇಂದಿನ (12.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (12.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಗಡಿಕಲ್ಲು, ಗಣಪತಿಕಟ್ಟೆ – ಚಕ್ರವ್ಯೂಹ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ =  = ಕಿಲೆಂಜೂರು ನಡುಗೋಡು 

ಕಟೀಲು ಎರಡನೇ ಮೇಳ ==  ಕಟೀಲು ಕ್ಷೇತ್ರ – ಸರಸ್ವತಿ ಸದನ 

ಕಟೀಲು ಮೂರನೇ ಮೇಳ= ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನ ಮಂಜನಾಡಿ 

ಕಟೀಲು ನಾಲ್ಕನೇ ಮೇಳ  == ಬುಡೋಳಿ ಪುಂಚೋಡಿ ಪಂಜಿಕಲ್ಲು ಬಂಟ್ವಾಳ 

ಕಟೀಲು ಐದನೇ ಮೇಳ ==  ಮಠದ ಮಜಲು ಮನೆ, ಚಾರ್ಮಾಡಿ ಬೆಳ್ತಂಗಡಿ  

ಕಟೀಲು ಆರನೇ ಮೇಳ == ‘ ಚಾವಡಿದಡಿ ಮನೆ, ಕೆಂಜಾರು ಪೇಜಾವರ ಬಜಪೆ 

ಮಂದಾರ್ತಿ ಒಂದನೇ ಮೇಳ  ==  ಅನುಗ್ರಹ ನಿಲಯ, ಕಾವಡಿ 

ಮಂದಾರ್ತಿ ಎರಡನೇ ಮೇಳ   ==  ಕಡಿದಾಳು, ಹಾರೋಗುಳಿಗೆ 

ಮಂದಾರ್ತಿ ಮೂರನೇ ಮೇಳ  ==   ಹಳ್ಳಿಕಟ್ಟು ಶೀರೂರು ಮುದ್ದುಮನೆ 

ಮಂದಾರ್ತಿ ನಾಲ್ಕನೇ ಮೇಳ   == ಕೋಣ್ಕೆರೆ , ಎನ್. ಆರ್. ಪುರ 

ಮಂದಾರ್ತಿ    ಐದನೇ ಮೇಳ  ==  ಮರ್ತುಗುಡ್ಡೆ ಭೀಮನಕೆರೆ ಹೊಸನಗರ 

ಶ್ರೀ ಹನುಮಗಿರಿ ಮೇಳ  ==  ಹೊಸಬೆಟ್ಟು ಶ್ರೀ ಕೋಡ್ದಬ್ಬು ದೈವಸ್ಥಾನದ ವಠಾರ – ಶುಕ್ರ ನಂದನೆ (ರಾತ್ರಿ 6.30)

ಶ್ರೀ ಸಾಲಿಗ್ರಾಮ ಮೇಳ == ಗಂಗೊಳ್ಳಿ ಎಸ್.ವಿ. ಜೂನಿಯರ್ ಕಾಲೇಜು ಮೈದಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಇಚಡ್ಕ (ಉ,ಕ) – ಶಶಿಪ್ರಭಾ, ಗದಾಯುದ್ಧ (ಕಾಲಮಿತಿ)

ಶ್ರೀ ಸುಂಕದಕಟ್ಟೆ ಮೇಳ  ==  ಕುಪ್ಪೆಪದವು ಬೊಳಿಯ, ವಜ್ರಕೋಗಿಲೆ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಕಾಸನಕಟ್ಟೆ ವಂಡ್ಸೆ  

ಶ್ರೀ ಮಾರಣಕಟ್ಟೆ ಮೇಳ ‘ಬಿ == ಬೆಣ್ಣೇರಿ ಪಡುವಾಯಿನಮನೆ ಗುಜ್ಜಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ವಸಂತನಮನೆ ಅರೆಹೊಳೆ 

ಶ್ರೀ ಪಾವಂಜೆ ಮೇಳ  ==  ಯಕ್ಷಾಭಿಮಾನಿ ವಕೀಲರ ಸಂಘ, ಮಂಗಳೂರು – ಶ್ರೀ ದೇವಿ ಮಹಾತ್ಮೆ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ವಾಲ್ತೂರು ನಂದಿಕೇಶ್ವರ ದೈವಸ್ಥಾನ – ದಿವ್ಯ ಸನ್ನಿಧಿ (ಕಾಲಮಿತಿ)

ಕಮಲಶಿಲೆ ಮೇಳ ‘ಎ‘ = ಶ್ರೀ ಮಹಾಂಕಾಳಿ ದೇವಸ್ಥಾನ ಕೆದೂರು 

ಕಮಲಶಿಲೆ ಮೇಳ ‘ಬಿ‘ ==  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶಾರದಾನಗರ , ಮುಂಡಾಜೆ, ಉಜಿರೆ  

ಶ್ರೀ ಬಪ್ಪನಾಡು ಮೇಳ == ಉಪ್ಪರಡ್ಕ ಅರಸಿನಮಕ್ಕಿ – ಬಂಗಾರ್ ಬಾಲೆ(ತುಳು)

ಶ್ರೀ ಅಮೃತೇಶ್ವರೀ ಮೇಳ == ಮಣೂರು ಜಟ್ಟೆಗೇಶ್ವರ ದೇವಸ್ಥಾನ 

ಶ್ರೀ ಬೋಳಂಬಳ್ಳಿ ಮೇಳ==  ಜಾಲಿಗದ್ದೆ ಕಾರ್ಗಲ್ – ಚಂದ್ರಾವಳಿ, ಕುಶಲವ  

ಶ್ರೀ ಸೌಕೂರು ಮೇಳ ==  ಕೋಟ ಆನಂದ ಶೆಟ್ಟಿ ಕಂಪೌಂಡ್ – ಚತುರ್ಜನ್ಮ ಮೋಕ್ಷ 

ಶ್ರೀ ಹಾಲಾಡಿ ಮೇಳ == ನಾಲ್ಕೂರು ಜಂಗಮೇಶ್ವರ ದೇವಸ್ಥಾನದ ವಠಾರ – ವೀರ ಬರ್ಬರೀಕ (ಕಾಲಮಿತಿ)

ಶ್ರೀ ಬೆಂಕಿನಾಥೇಶ್ವರ ಮೇಳ  ==ಇಂದ್ರಾಳಿ ರೈಲ್ವೆ ಗೋಡೌನ್ ರಸ್ತೆ ಬಳಿ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಮರೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಮಡಾಮಕ್ಕಿ ಕ್ಷೇತ್ರ ಮಹಾತ್ಮೆ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಉಳ್ಳೂರು – 74, ಶ್ರೀ ಬ್ರಹ್ಮಬೈದರ್ಕಳ ಗರಡಿ ವಠಾರ – ಸಿರಿವಂತ ಶಿವರಾಯ 

ಶ್ರೀ ಹಿರಿಯಡಕ ಮೇಳ == ಕುಂಟಿಗೆ ಗೊರಗೋಡು (ಜಯನಗರ)- ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ ==  ಬ್ರಹ್ಮಾವರ  

ಶ್ರೀ ಸಿಗಂದೂರು ಮೇಳ == ಸೌಳ್ನಾಡು ಶ್ರೀ ಕೋಟೇಶ್ವರ ದೇವಸ್ಥಾನ ಹೊಸಕೊಪ್ಪ  

ಶ್ರೀ ನೀಲಾವರ ಮೇಳ  == ಹೆಬ್ರಿ ಪೇಟೆ – ದೈವ ಮಂಟಪ 

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಮಂಡಗದ್ದೆ ಮಳವಳ್ಳಿ 

ಶ್ರೀ ಮೇಗರವಳ್ಳಿ ಮೇಳ == ಬೆಜ್ಜವಳ್ಳಿ – ಮಧುರ ಮನಸ್ವಿ 

ಗೋವಾ ರಜಾದಿನದಲ್ಲಿ ಕನಸಿನ ಚಿತ್ರಗಳನ್ನು ಹಂಚಿಕೊಂಡ ಸರ್ಗುನ್ ಮೆಹ್ತಾ

ಸರ್ಗುನ್ ಮೆಹ್ತಾ ಅವರು ಇತ್ತೀಚೆಗೆ ರಜಾದಿನಗಳಲ್ಲಿ ಗೋವಾದಲ್ಲಿ ತೆಗೆದಿದ್ದ ಸ್ವಪ್ನಮಯ ಚಿತ್ರಗಳನ್ನು ಇನ್ಸ್ಟಾಗ್ರಾಮ್ಹಂ ನಲ್ಲಿ ಹಂಚಿಕೊಂಡಿದ್ದಾರೆ.

ಸರ್ಗುನ್ ಮೆಹ್ತಾ ಅವರು ಇತ್ತೀಚೆಗೆ ಗೋವಾಕ್ಕೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ತೆಗೆದ ತನ್ನ ಕನಸಿನ ಚಿತ್ರಗಳೊಂದಿಗೆ ತನ್ನ ಅಭಿಮಾನಿಗಳಿಗೆ ಸಂತೋಷವನ್ನು ನೀಡಿದರು. ಪ್ರಕಾಶಮಾನವಾಗಿ ಬೆಳಗಿದ ಸ್ವಿಂಗ್ ಮೇಲೆ ಕುಳಿತಿದ್ದ ಫೋಟೋವನ್ನು ಹಂಚಿಕೊಳ್ಳಲು ಬಾಲಿಕಾ ವಧು ನಟಿ ಇನ್ಸ್ಟಾಗ್ರಾಮ್ ಆಯ್ಕೆ ಮಾಡಿಕೊಂಡರು.

ಒಂದು ಫೋಟೋದಲ್ಲಿ ಅವಳು ಹೃದಯ ಆಕಾರದ-ರೇಲಿಂಗ್ನಿಂದ ಮಾಡಿದ ಸ್ವಿಂಗ್ ಮೇಲೆ ಕುಳಿತು ಕಾಲ್ಪನಿಕ ದೀಪಗಳಿಂದ ಅಲಂಕರಿಸಲ್ಪಟ್ಟ ಚಿತ್ರದಲ್ಲಿ ರಾರಾಜಿಸುತ್ತಿದ್ದಾಳೆ. ಬದಿಯಲ್ಲಿ ನೇರಳೆ ಮತ್ತು ಬಿಳಿ ಹೂವುಗಳಿವೆ, ಮತ್ತು ಸ್ವಿಂಗ್ ಸ್ನೇಹಶೀಲವಾಗಿ ಕಾಣುವ ಉದ್ಯಾನವನದಲ್ಲಿದೆ. ಸರ್ಗುನ್ ಸಡಿಲವಾದ ಉದ್ದನೆಯ ಶರ್ಟ್ ಧರಿಸಿರುವುದು ಕಂಡುಬರುತ್ತದೆ.

ಬಡಗುತಿಟ್ಟಿನ ಹಿರಿಯ ಬಣ್ಣದ ವೇಷದಾರಿ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರಿಗೆ ಕಂಡ್ಲೂರಿನಲ್ಲಿ ಸನ್ಮಾನ

ಶ್ರೀ ಕನ್ನಿಕಾ ಪರಮೇಶ್ವರಿ ಯಕ್ಷಗಾನ ಕಲಾ ಸಂಘ,  ಕಂಡ್ಲೂರು ಇದರ ವತಿಯಿಂದ,  ಸಂಘದ 46ನೇ ಯಕ್ಷಕಲೋತ್ಸವದ ಅಂಗವಾಗಿ  ಮಾರ್ಚ್ 5, 2021ನೇ ಶುಕ್ರವಾರದಂದು ಪ್ರಸಿದ್ಧ ಯಕ್ಷಗಾನ ಕಲಾವಿದ, ಬಡಗುತಿಟ್ಟಿನ ಹಿರಿಯ ಬಣ್ಣದ ವೇಷದಾರಿ ಶ್ರೀ ಎಳ್ಳಂಪಳ್ಳಿ ಜಗನ್ನಾಥ ಆಚಾರ್ಯರಿಗೆ  ಕಂಡ್ಲೂರಿನಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು.   

ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದಿಂದ ಅಮೃತಾಭಿವಂದನಂ – ಸನ್ಮಾನ, ಗೌರವಕ್ಕಿಂತ ಪ್ರೀತಿ ದೊಡ್ಡದು: ಪ್ರೊ. ಅಮೃತ ಸೋಮೇಶ್ವರ

‘ಸ್ಥಾನ-ಮಾನಕ್ಕಿಂತ ಮಿಗಿಲಾಗಿ ತತ್ವ-ಸಿದ್ಧಾಂತಗಳಿಗಾಗಿ ಬದುಕುವುದು ನಮ್ಮ ಧ್ಯೇಯವಾಗಬೇಕು. ಅಂಥವರಿಗೆ ಸಮಾಜದ ಅಭಿಮಾನವೇ ಶ್ರೀರಕ್ಷೆ. ನಾವು ಮಾಡಿದ ಸಾಧನೆಗೆ ಸನ್ಮಾನ ಅಥವಾ ಗೌರವ ಲಭಿಸುವುದು ಸರ್ವೇಸಾಮಾನ್ಯ. ಆದರೆ ಅದಕ್ಕಿಂತ ಜನರು ತೋರುವ ಪ್ರೀತಿಯೇ ದೊಡ್ಡದು’ ಎಂದು ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಹೇಳಿದ್ದಾರೆ.         

ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾದ ಸಂದರ್ಭದಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನ – ವಿರಾಂಟ್ ವತಿಯಿಂದ ಉಳ್ಳಾಲ ಸೋಮೇಶ್ವರದ ಸ್ವಗ್ರಹ ‘ಒಲುಮೆ’ ಯಲ್ಲಿ ಏರ್ಪಡಿಸಲಾದ ‘ಅಮೃತಾಭಿವಂದನಂ’ ಕಾರ್ಯಕ್ರಮದಲ್ಲಿ ಸನ್ಮಾನಕ್ಕೆ ಪ್ರತಿಯಾಗಿ ಅವರು ಮಾತನಾಡಿದರು.         

ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿ ‘ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ ದುಡಿಯುವ ನೂರಾರು ಎಳೆಯರಿಗೆ ಅಮೃತರು ಓರ್ವ ಮಾರ್ಗದರ್ಶಕ ವಿದ್ವಾಂಸರು. ಎಂಬತ್ತಾರರ ಹರೆಯದಲ್ಲೂ ಜೀವನ ಪ್ರೀತಿಯೊಂದಿಗೆ ಸದಾ ಬರವಣಿಗೆಯಲ್ಲಿ ತೊಡಗಿರುವ ಅವರು ಬೆಳೆಯುವ ಕವಿ – ಸಾಹಿತಿಗಳಿಗೆ ಆದರ್ಶಪ್ರಾಯರು. ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿಯ ಪ್ರಧಾನ ಸಲಹೆಗಾರರಾಗಿ ಅವರ ಸೇವೆ ಸ್ಮರಣೀಯ’ ಎಂದು ನುಡಿದರು.         

ಕಾರ್ಯಕ್ರಮದಲ್ಲಿ ಡಾ.ಅಮೃತ ಸೋಮೇಶ್ವರ ಮತ್ತು ನರ್ಮದಾ ಸೋಮೇಶ್ವರ ದಂಪತಿಯನ್ನು ಮೈಸೂರು ಪೇಟ, ಶಾಲು, ಸ್ಮರಣಿಕೆ ಮತ್ತು ಫಲತಾಂಬೂಲ ನೀಡಿ ಸನ್ಮಾನಿಸಲಾಯಿತು. ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ್ ಕುಮಾರ್  ಸ್ವಾಗತಿಸಿದರು.

ವಿರಾಂಟ್ ಕೋಶಾಧಿಕಾರಿ ಪಿ.ಡಿ.ಶೆಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿಜಯ ಲಕ್ಷ್ಮೀ ಕಟೀಲು ಮತ್ತು ಸುಮಾ ಪ್ರಸಾದ್ ಸಹಕರಿಸಿದರು. ಜೀವನ್ ಸೋಮೇಶ್ವರ ಮತ್ತು ಸತ್ಯಾ ಜೀವನ್ ಉಪಸ್ಥಿತರಿದ್ದರು.

ಮೇಳಗಳ ಇಂದಿನ (11.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ (11.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ತೀರ್ಥಹಳ್ಳಿ ಸೊಪ್ಪುಗುಡ್ಡೆ ಮೈದಾನ – ಬ್ರಹ್ಮಕಪಾಲ, ಗಿರಿಜಾ ಕಲ್ಯಾಣ 

ಕಟೀಲು ಒಂದನೇ ಮೇಳ =  ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ 

ಕಟೀಲು ಎರಡನೇ ಮೇಳ ==  ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೂಡಬಿದ್ರಿ 

ಕಟೀಲು ಮೂರನೇ ಮೇಳ= ಶ್ರೀ ನಂದನೇಶ್ವರ ದೇವಸ್ಥಾನ ಪಣಂಬೂರು ಬೀಚ್ ರೋಡ್, ನ್ಯೂ ಮಂಗಳೂರು 

ಕಟೀಲು ನಾಲ್ಕನೇ ಮೇಳ  == ದುರ್ಗಾನಿಲಯ ಕುದ್ರಿಪದವು ಕಲ್ಲಮುಂಡ್ಕೂರು 

ಕಟೀಲು ಐದನೇ ಮೇಳ ==  ಧನ್ವಂತರಿ ಆಯುರ್ವೇದ ಔಷಧಾಲಯ ಉಜಿರೆ 

ಕಟೀಲು ಆರನೇ ಮೇಳ == ‘ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕುಂಡಾವು 

ಮಂದಾರ್ತಿ ಒಂದನೇ ಮೇಳ  ==  ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಕೋಣ್ಕಿ, ತಾರಿಬೇರು ನಾಡ  

ಮಂದಾರ್ತಿ ಎರಡನೇ ಮೇಳ   ==  ಮಲ್ಲಿಕಾರ್ಜುನ ದೇವಸ್ಥಾನ ಎಂ.ಕೆ ನಗರ, ಕಮ್ಮರಡಿ ಕೊಪ್ಪ, 

ಮಂದಾರ್ತಿ ಮೂರನೇ ಮೇಳ  ==   ಶ್ರೀ ಕಲ್ಲುಮಹಾಲಿಂಗೇಶ್ವರ ದೇವಸ್ಥಾನ ಹೆಗ್ಗುಂಜೇ ಮಂದರ್ತಿ 

ಮಂದಾರ್ತಿ ನಾಲ್ಕನೇ ಮೇಳ   ==  ಬೆಳ್ಳೂರು, ಎನ್. ಆರ್. ಪುರ 

ಮಂದಾರ್ತಿ    ಐದನೇ ಮೇಳ  ==  ನೀಲಕಂಠೇಶ್ವರ ದೇವಸ್ಥಾನ ಎಳಜಿತ್ ಅರೆಹೊಳೆ   

ಶ್ರೀ ಹನುಮಗಿರಿ ಮೇಳ  ==  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಳಗೋಡು – ಶುಕ್ರ ನಂದನೆ (ರಾತ್ರಿ 8.30)

ಶ್ರೀ ಸಾಲಿಗ್ರಾಮ ಮೇಳ == ಮಣಿಪಾಲ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ – ಚಂದ್ರಮುಖಿ ಸೂರ್ಯಸಖಿ 

ಶ್ರೀ ಪೆರ್ಡೂರು ಮೇಳ == ಯಡಾಡಿ ಮತ್ಯಾಡಿಯ ತೇರ್ ಬೀದಿ ಮಹಾಲಿಂಗೇಶ್ವರ ದೇವಸ್ಥಾನ – ಅಹಂ ಬ್ರಹ್ಮಾಸ್ಮಿ 

ಶ್ರೀ ಸುಂಕದಕಟ್ಟೆ ಮೇಳ  ==  ನೀರುಮಾರ್ಗ ಪೆದಮಲೆ ಶ್ರೀ ಉಮಾಮಹೇಶ್ವರ ದೇವಸ್ಥಾನ  – ಸರ್ಪಸಂಬಂಧ 

ಶ್ರೀ ದೇಂತಡ್ಕ ಮೇಳ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾವರ – ಕಾರ್ಣಿಕದ ಸ್ವಾಮಿ ಕೊರಗಜ್ಜ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೂಕಾಂಬಿಕಾ ನಿಲಯ ಸುಬ್ಬರಸನತೊಪ್ಲು ಕೊಲ್ಲೂರು 

ಶ್ರೀ ಮಾರಣಕಟ್ಟೆ ಮೇಳ ‘ಬಿ == ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಇಡೂರು ಕುಂಜ್ಞಾಡಿ 

ಶ್ರೀ ಮಾರಣಕಟ್ಟೆ ಮೇಳ ‘ಸಿ ==  ಕೂಕನಾಡ್ 11ನೇ ಉಳ್ಳೂರು 

ಶ್ರೀ ಪಾವಂಜೆ ಮೇಳ  ==  ನಿರಂಜನ್ ಮೂಡುಬೆಳ್ಳೆ – ಶಿವಪಂಚಾಕ್ಷರಿ ಮಹಿಮೆ (ಸಂಜೆ 6.30ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಶ್ರೀ ವೀರಭದ್ರ ದೇವಸ್ಥಾನ ಹೊಸಕೆಸರೆ, ಮಾರುತಿಪುರ – ಚಂದ್ರಾವಳಿ ಬ್ರಹ್ಮಕಪಾಲ 

ಕಮಲಶಿಲೆ ಮೇಳ ‘ಎ‘ = ಶ್ರೀ ಗಂಗಾಧರೇಶ್ವರ ದೇವಸ್ಥಾನ ಮಾವಿನಕೊಪ್ಪ ಹೊಸನಗರ  

ಕಮಲಶಿಲೆ ಮೇಳ ‘ಬಿ‘ ==  ಕಡ್ಕಿ  ನಾಡಗುಡ್ಡೆಯಂಗಡಿ 

ಶ್ರೀ ಬಪ್ಪನಾಡು ಮೇಳ == ತೆಂಕಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನ – ಸರ್ವಮಂಗಲೆ ಮಾಂಗಲ್ಯೇ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಶಿರ್ತಾಡಿ ಅರ್ಜುನಪುರ – ನಾಗತಂಬಿಲ 

ಶ್ರೀ ಅಮೃತೇಶ್ವರೀ ಮೇಳ == ಬ್ರಹ್ಮಸ್ಥಾನ ತೆಕ್ಕಟ್ಟೆ ಶ್ರೀ ಹಿರೇಮಹಾಲಿಂಗೇಶ್ವರ ದೇವಸ್ಥಾನ ವಠಾರ (ಕಾಲಮಿತಿ)    

ಶ್ರೀ ಬೋಳಂಬಳ್ಳಿ ಮೇಳ==  ಕೊರಾಳಿಕೊಪ್ಪ ಯಡೆಹಳ್ಳಿ – ದಕ್ಷಯಜ್ಞ, ಚಂದ್ರಾವಳಿ 

ಶ್ರೀ ಸೌಕೂರು ಮೇಳ ==  ಸಿದ್ಧಾಪುರ ಕವಡೆಕಟ್ಟೆ  ಮೇಲ್ ಕೊಪ್ಪ ಶ್ರೀ ಉಮಾಮಹೇಶ್ವರ ದೇವಸ್ಥಾನ – ಪುಷ್ಪ ಚಂದನ 

ಶ್ರೀ ಹಾಲಾಡಿ ಮೇಳ == ಕೋಟೆಲಿಂಗೇಶ್ವರ ದೇವಸ್ಥಾನ ಅರೆಶಿರೂರು ಗೋಳಿಹೊಳೆ – ಬ್ರಹ್ಮಕಪಾಲ, ಭಸ್ಮಾಸುರ   

ಶ್ರೀ ಬೆಂಕಿನಾಥೇಶ್ವರ ಮೇಳ  ==ಮಣಿಪಾಲ ಪೆರಂಪಳ್ಳಿ ಶಿವಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ – ಸತ್ಯೊದ ಸ್ವಾಮಿ ಕೊರಗಜ್ಜ

ಶ್ರೀ ಮಡಾಮಕ್ಕಿ ಮೇಳ == ಉಡುಪಿ ಪುತ್ತೂರು ಮುಂಡ್ರಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಮಹಾಶಕ್ತಿ ಮಂತ್ರದೇವತೆ, ಮೀನಾಕ್ಷಿ ಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಸಾಸ್ತಾನ ಅನಲಾಡಿ ಮಠ – ಕಾರ್ತವೀರ್ಯ, ಸುದರ್ಶನ, ಮೀನಾಕ್ಷಿ ಕಲ್ಯಾಣ 

ಶ್ರೀ ಹಿರಿಯಡಕ ಮೇಳ == ವಕ್ವಾಡಿ ದೇವರಹಾಡಿ ಬ್ರಹ್ಮಲಿಂಗೇಶ್ವರ ಚಿಕ್ಕಮ್ಮ ಸಪರಿವಾರ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ಶ್ರೀ ವೀರಭದ್ರ ದೇವಸ್ಥಾನದ ವಠಾರ ಉಂಬ್ಳೆಬೈಲು  

ಶ್ರೀ ಸಿಗಂದೂರು ಮೇಳ == ಸುಂಕತ್ತಿ ಯರಗೇಶ್ವರ ದೇವಸ್ಥಾನ 

ಶ್ರೀ ನೀಲಾವರ ಮೇಳ  == ಮಾರಿಯಮ್ಮ ದೇವಸ್ಥಾನ ಚಿತ್ರಪಾಡಿ ಸಾಲಿಗ್ರಾಮ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಬಾಚಕೆರೆ ಮೇಳ == ಭಾಗಮಂಡಲ ಭಗಂಡೇಶ್ವರ ದೇವಾಲಯ – ಭಸ್ಮಾಸುರ ಮೋಹಿನಿ, ಶಬರಿಮಲೆ ಅಯ್ಯಪ್ಪ 

ಶ್ರೀ ಮಂಗಳಾದೇವಿ ಮೇಳ == ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ – ಬೂಡುದ ಬಂಡಾರ (ತುಳು)

ಶ್ರೀ ಗುತ್ಯಮ್ಮ ಮೇಳ, ಸೋಮವಾರಸಂತೆ, ಹೊಸಳ್ಳಿ ತೀರ್ಥಹಳ್ಳಿ  ==  ಹಾಸನ ದೊಡ್ಡಮಂಡೇನಹಳ್ಳಿ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಕಟ್ಟಿಗೆಹಳ್ಳ ಮತ್ತು ಗುಳಿಗುಳಿ ಶಂಕರದಲ್ಲಿ 

ಶ್ರೀ ಮೇಗರವಳ್ಳಿ ಮೇಳ == ಮೇಗರವಳ್ಳಿ ಶ್ರೀ ದುರ್ಗಾಪರಮೇಶ್ವರಿ  ಅಮ್ಮನವರ ಸನ್ನಿಧಿ – ದ್ರೌಪದಿ ಪ್ರತಾಪ, ಕನಕಾಂಗಿ 

ಶ್ರೀ ಕ್ಷೇತ್ರ ಕಾಂತಾವರ ಮೇಳ  == ಶ್ರೀ ಕ್ಷೇತ್ರದಲ್ಲಿ – ಶಿವ ಪಂಚಾಕ್ಷರಿ ಮಹಿಮೆ (ರಾತ್ರಿ 7ರಿಂದ)

ಪುತ್ತೂರಿನಲ್ಲಿ ರಾಜ್ಯ ಮಟ್ಟದ ಪುಸ್ತಕ ಮೇಳ ಮತ್ತು ಆಹಾರ ಮೇಳ ಖಾದ್ಯೋತ್ಸವ 

ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪುತ್ತೂರು ಘಟಕವು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಆಯೋಜಿಸುತ್ತಿರುವ ರಾಜ್ಯ ಮಟ್ಟದ ಪುಸ್ತಕ ಮೇಳವು ಪುತ್ತೂರಿನಲ್ಲಿ ನಡೆಯಲಿದೆ.

ಈ ಪುಸ್ತಕ ಮೇಳವು 2021ರ ಮಾರ್ಚ್ 12, 13, 14ನೇ ತಾರೀಖು ಶುಕ್ರವಾರ, ಶನಿವಾರ ಮತ್ತು ಆದಿತ್ಯವಾರಗಳಂದು ನಡೆಯಲಿದೆ. 

ಇದರೊಂದಿಗೆ ಈ ಮೂರು ದಿನಗಳಲ್ಲಿ ದೇವಸ್ಥಾನದ ಗದ್ದೆಯಲ್ಲಿ ಜೆಸಿಐ (JCI) ಪುತ್ತೂರು ಸಾದರಪಡಿಸುತ್ತಿರುವ ಸಾಂಪ್ರದಾಯಿಕ ಮತ್ತು ಹೊಸ ಶೈಲಿಯ ಆಹಾರ ಮೇಳ ನಡೆಯಲಿದೆ. ಕಾರ್ಯಕ್ರಮದ ವಿವರ ಹಾಗೂ ಮೆನು ಕೆಳಗೆ ಕೊಡಲಾಗಿದೆ.  

ಬಡಗುತಿಟ್ಟು ಯಕ್ಷಗಾನದ ಶ್ರೇಷ್ಠ ಭಾಗವತ – ಗಾನಕೋಗಿಲೆ ಶ್ರೀ ಕೇಶವ ಹೆಗಡೆ ಕೊಳಗಿ 

ಸೂಕ್ತ ತರಬೇತಿಯನ್ನು ಹೊಂದಿಯೇ ಒಳ್ಳೆಯ ಹೆಸರನ್ನು ಗಳಿಸಿ ಬಹು ಬೇಡಿಕೆಯ ಭಾಗವತರಾಗಿ ಪ್ರಸ್ತುತ ಕಲಾಸೇವೆಯನ್ನು ಮಾಡುತ್ತಿರುವವರಲ್ಲಿ ಕೊಳಗಿ ಶ್ರೀ ಕೇಶವ ಹೆಗಡೆಯವರೂ ಒಬ್ಬರು. ಶ್ರೀಯುತರು ಪ್ರಾಚಾರ್ಯ ಶ್ರೀ ಎಂ. ನಾರ್ಣಪ್ಪ ಉಪ್ಪೂರರ ಶಿಷ್ಯ. ಬಡಗು ತಿಟ್ಟಿನ ಹಿರಿಯ ಖ್ಯಾತ ವೇಷಧಾರಿ ಕೊಳಗಿ ಶ್ರೀ ಅನಂತ ಹೆಗಡೆಯವರ ಪುತ್ರ. 

ಗಾನಕೋಗಿಲೆ ಶ್ರೀ ಕೊಳಗಿ ಕೇಶವ ಹೆಗಡೆಯವರು ಉತ್ತರ ಕನ್ನಡ ಆಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊಳಗಿ ಎಂಬಲ್ಲಿ ಶ್ರೀ ಅನಂತ ಹೆಗಡೆ ಮತ್ತು ಅರುಂಧತೀ ದಂಪತಿಗಳಿಗೆ ಪುತ್ರನಾಗಿ 1964 ಮಾರ್ಚ್ 29ರಂದು ಜನಿಸಿದರು. ಕೊಳಗಿ ಶಾಲೆ ಮತ್ತು ಸಿದ್ಧಾಪುರದ ಶ್ರೀ ಸಿದ್ಧಿವಿನಾಯಕ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವರೆಗೆ ವಿದ್ಯಾಭ್ಯಾಸ. ಎಳವೆಯಲ್ಲೇ ಯಕ್ಷಗಾನ ನೋಡುವ ಹವ್ಯಾಸವಿತ್ತು.

ತಂದೆ ಕೊಳಗಿ ಶ್ರೀ ಅನಂತ ಹೆಗಡೆಯವರು ಆ ಕಾಲದ ಖ್ಯಾತ ಕಲಾವಿದ. ಇಡಗುಂಜಿ ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದರು. ಹಾಗಾಗಿ ಕೊಳಗಿ ಕೇಶವ ಹೆಗಡೆಯವರಿಗೆ ಯಕ್ಷಗಾನವು ರಕ್ತಗತವಾಗಿಯೇ ಇತ್ತು. ಕೊಳಗಿ, ಬಿಳಗಿ, ಹಾರ್ಸಿಕಟ್ಟಾ, ಕ್ಯಾದಗಿ, ಹೆಗ್ಗರಣೆ, ಹೇರೂರು, ಒಂದಾನೆ ಮೊದಲಾದ ಕಡೆಗಳಲ್ಲಿ ನಡೆಯುತ್ತಿದ್ದ ಇಡಗುಂಜಿ ಮೇಳದ ಪ್ರದರ್ಶನಗಳನ್ನು ನೋಡುತ್ತಿದ್ದರು. ನೆಬ್ಬೂರರ ಭಾಗವತಿಕೆಯನ್ನೂ ತಂದೆ ಕೊಳಗಿ ಅನಂತ ಹೆಗಡೆಯವರ ಮತ್ತು ಗೋಡೆ ನಾರಾಯಣ ಹೆಗಡೆ ಮೊದಲಾದವರ ವೇಷಗಳನ್ನು ನೋಡುತ್ತಾ ಬೆಳೆದವರು.

ಬಾಲಕನಾಗಿದ್ದಾಗ ಕೊಳಗಿ ಕೇಶವ ಹೆಗಡೆಯವರಿಗೆ ವೇಷಧಾರಿಯಾಗಬೇಕೆಂಬ ಆಸೆಯಿತ್ತು. ಏಳನೆಯ ತರಗತಿಯ ವಿದ್ಯಾರ್ಥಿಯಾಗಿದ್ದಾಗ ನಾಟ್ಯವನ್ನು ಕಲಿತಿದ್ದರು. ಬಾಲಗೋಪಾಲನಾಗಿ ರಂಗಪ್ರವೇಶ ಮಾಡುವ ಅವಕಾಶವೂ ಆಗಿತ್ತು. ವಿಂದಾನುವಿಂದ ಕಾಳಗ ಪ್ರಸಂಗದಲ್ಲಿ ಅನುವಿಂದ, ವಿಶ್ವಾಮಿತ್ರ ಮೇನಕೆ ಪ್ರಸಂಗದಲ್ಲಿ ರತಿ ಮೊದಲಾದ ವೇಷಗಳನ್ನು ಮಾಡಿದ್ದರು. ನೆಬ್ಬೂರು ನಾರಾಯಣ ಭಾಗವತರ ಹಾಡುಗಳನ್ನು ಕೇಳಿಯೇ ತಾನೂ ಭಾಗವತನಾಗಬೇಕೆಂಬ ಬಯಕೆಯು ಚಿಗುರೊಡೆದಿತ್ತು. ಎಸ್.ಎಸ್.ಎಲ್.ಸಿ ಆದ ಬಳಿಕ ಯಕ್ಷಗಾನ ಹಾಡುಗಾರಿಕೆಯನ್ನು ಕಲಿಯುವುದೆಂದು ನಿರ್ಧರಿಸಿಯೂ ಆಗಿತ್ತು.

ತಂದೆ ಶ್ರೀ ಕೊಳಗಿ ಅನಂತ ಹೆಗಡೆಯವರಿಗೆ ಮನಸ್ಸಿಲ್ಲದಿದ್ದರೂ ಮಗನ ಆಸೆಗೆ ತಣ್ಣೀರೆರಚದೆ ಕಳುಹಿಸಿಕೊಟ್ಟಿದ್ದರು. ಯಕ್ಷಗಾನ ಭಾಗವತಿಕೆಯನ್ನು ಅಭ್ಯಸಿಸುವ ಉದ್ದೇಶದಿಂದ 1984ರಲ್ಲಿ ಕೊಳಗಿ ಕೇಶವ ಹೆಗಡೆಯವರು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರವನ್ನು ಸೇರಿದ್ದರು. ಅಲ್ಲಿ ಪ್ರಾಚಾರ್ಯ ಭಾಗವತ ಶ್ರೀ ಎಂ. ನಾರ್ಣಪ್ಪ ಉಪ್ಪೂರರು ಗುರುಗಳಾಗಿ ಕಲಿಕಾಸಕ್ತರಿಗೆ ಪಾಠ ಹೇಳಿಕೊಡುತ್ತಿದ್ದರು. ಮಳೆಗಾಲ ಮೂರು ತಿಂಗಳು ಕಲಿಕೆ. ಹೀಗೆ ಮೂರು ವರ್ಷಗಳ ಕಾಲ ಹಂಗಾರಕಟ್ಟೆ ಕಲಿಕಾ ಕೇಂದ್ರದ ವಿದ್ಯಾರ್ಥಿಯಾಗಿ ಭಾಗವತಿಕೆಯನ್ನು ಅಭ್ಯಸಿಸಿದ್ದರು.

ಒಂದನೇ ವರ್ಷದ ತರಬೇತಿಯ ನಂತರ ಊರ ಪ್ರದರ್ಶನಗಳಲ್ಲಿ ಹಾಡುವ ಅವಕಾಶವೂ ಆಗಿತ್ತು. ಹಂಗಾರಕಟ್ಟೆ ಕೇಂದ್ರಕ್ಕೆ 1984ರಲ್ಲಿ ಕಲಿಕಾಸಕ್ತರಾಗಿ ಸಂದರ್ಶನಕ್ಕೆ ಸುಮಾರು ನೂರು ಜನ ಬಂದಿದ್ದರು. 12 ಮಂದಿ ಮಾತ್ರ ಆಯ್ಕೆಯಾಗಿದ್ದರು. ಹಾಡು ಹೇಳುವುದಕ್ಕೆ ರಂಗವೇರುವ ಮೊದಲೇ ನೇಪಥ್ಯದಲ್ಲೇ ಗುರು ಉಪ್ಪೂರರ ಸಂದೇಶಗಳನ್ನು ನೆನಪಿಸುತ್ತಿದ್ದರು. ಶಿಸ್ತಿನ ಸಿಪಾಯಿಯಾಗಿದ್ದ ಅವರು ಅದಕ್ಕೆ ಕೊರತೆಯಾದರೆ ಸಹಿಸಿಕೊಳ್ಳುತ್ತಿರಲಿಲ್ಲವಂತೆ. ಸರಿಯಾಗಿ ಅಭ್ಯಾಸ ಮಾಡದೆ, ಪೂರ್ವಸಿದ್ಧತೆಯಿಲ್ಲದೆ ರಂಗವೇರಬಾರದು, ಸಮಯದ ಬಗ್ಗೆ ಗಮನಹರಿಸಬೇಕು ಎಂದು ಆಗಾಗ ಎಚ್ಚರಿಸುತ್ತಿದ್ದರಂತೆ.

“ತಪ್ಪಿದರೆ ತಿದ್ದಿ ತೀಡುತ್ತಿದ್ದರು. ರಂಗದಲ್ಲಿ ಕುಳಿಯುಕೊಳ್ಳುವ ಕ್ರಮದಿಂದ ತೊಡಗಿ ಎಲ್ಲವನ್ನೂ ಸೊಗಸಾಗಿ ಹೇಳಿಕೊಡುತ್ತಿದ್ದರು. ಸಂತೋಷವಾದರೆ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದ್ದರು”. ಎಂದು ಹೇಳುವ ಮೂಲಕ ಕೊಳಗಿ ಕೇಶವ ಹೆಗಡೆಯವರು ಗುರು ಶ್ರೀ ಎಂ. ನಾರ್ಣಪ್ಪ ಉಪ್ಪೂರರನ್ನು ಗೌರವಿಸುತ್ತಾರೆ. ಊರ ಪರವೂರ ಪ್ರದರ್ಶನಗಳಲ್ಲಿ ಭಾಗವಹಿಸುವ ಸಂದರ್ಭ ಕೊಳಗಿಯವರಿಗೆ ಕಡತೋಕಾ ಮಂಜುನಾಥ ಭಾಗವತರ ಭಾಗವತಿಕೆಯನ್ನು ಕೇಳುವ ಅವಕಾಶವೂ ಸಿಕ್ಕಿತ್ತು. 

ಹಂಗಾರಕಟ್ಟೆ ಕೇಂದ್ರದಲ್ಲಿ ಮೂರು ವರ್ಷಗಳ ತರಬೇತಿಯನ್ನು ಪಡೆದು ಗುಂಡಬಾಳ ಮೇಳದಲ್ಲಿ ಸಂಗೀತ ಭಾಗವತನಾಗಿ ಒಂದು ವರ್ಷ ತಿರುಗಾಟ. ಬಳಿಕ ಮುಲ್ಕಿ ಮೇಳದಲ್ಲಿ ಒಂದು ವರ್ಷ ಕಲಾಸೇವೆ. ಆಗ ಮುಲ್ಕಿ ಮೇಳದಲ್ಲಿ ನೆಲ್ಲೂರು ಮರಿಯಪ್ಪಾಚಾರ್ ಮತ್ತು ಕೆ.ಪಿ.ಹೆಗಡೆಯವರು ಭಾಗವತರಾಗಿದ್ದರು. ಕಟ್ಟೆ ಶ್ರೀನಿವಾಸ ಆಚಾರ್ ಮದ್ದಳೆಗಾರರಾಗಿದ್ದರು. ತಂದೆ ಕೊಳಗಿ ಅನಂತ ಹೆಗಡೆ, ಐರೋಡಿ ಗೋವಿಂದಪ್ಪ, ನಗರ ಜಗನ್ನಾಥ ಶೆಟ್ಟಿ, ಹಳ್ಳಾಡಿ ಜಯರಾಮ ಶೆಟ್ಟಿ, ಅರಾಟೆ ಮಂಜುನಾಥ, ಮೊದಲಾದವರು ಆಗ ಮುಲ್ಕಿ ಮೇಳದ ಕಲಾವಿದರಾಗಿದ್ದರು. ಬಳಿಕ ಒಂದು ವರ್ಷ ಕಮಲಶಿಲೆ ಮೇಳದ ಮುಖ್ಯ ಭಾಗವತನಾಗಿ ತಿರುಗಾಟ ನಡೆಸಿದ್ದರು.

ಆಮೇಲೆ ಶಿರಸಿ ಪಂಚಲಿಂಗೇಶ್ವರ ಮೇಳದಲ್ಲಿ ಎರಡು ವರ್ಷ ಎರಡನೇ ಭಾಗವತನಾಗಿ ಕಲಾಸೇವೆ. ಬಳಿಕ ಶಿರಸಿ ಮಾರಿಕಾಂಬಾ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಈ ಸಂದರ್ಭ ಅನೇಕ ಹಿರಿಯ ಕಲಾವಿದರ ಒಡನಾಟವು ಸಿಕ್ಕಿತ್ತು. ಬಳಿಕ ಏಳು ವರ್ಷಗಳ ಕಾಲ ಬಚ್ಚಗಾರು ಮೇಳದಲ್ಲಿ ಕಲಾಸೇವೆ. ಈ ಮೇಳದಲ್ಲಿ ಅಪಾರ ಅನುಭವವನ್ನು ಕೊಳಗಿ ಕೇಶವ ಹೆಗಡೆಯವರು ಪಡೆದಿದ್ದರು. ಪೌರಾಣಿಕ ಪ್ರಸಂಗಗಳು, ಅವುಗಳ ನಡೆ, ಪ್ರಸಂಗವನ್ನು ಮುನ್ನಡೆಸುವ ರೀತಿ, ರಂಗತಂತ್ರ ಎಲ್ಲವನ್ನೂ ಕರಗತ ಮಾಡಿಕೊಂಡಿದ್ದರು. ಶ್ರೀ ಪಿ.ವಿ.ಹಾಸ್ಯಗಾರ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಮಹಾಬಲ ಹೆಗಡೆ, ಮಂಟಪ ಪ್ರಭಾಕರ ಉಪಾಧ್ಯ, ಕೊಳಗಿ ಅನಂತ ಹೆಗಡೆ ಮೊದಲಾದ ಖ್ಯಾತ ಕಲಾವಿದರನ್ನು ಕುಣಿಸುವ ಅವಕಾಶವೂ ಒದಗಿತ್ತು.

ತಂದೆ ಮತ್ತು ಮಗ (ಕೊಳಗಿ ಅನಂತ ಹೆಗಡೆ ಮತ್ತು ಕೊಳಗಿ ಕೇಶವ ಹೆಗಡೆ) ಒಟ್ಟಾಗಿ ತಿರುಗಾಟ ಮಾಡಿದ ಮೇಳಗಳು ಮುಲ್ಕಿ ಮೇಳ ಮತ್ತು ಬಚ್ಚಗಾರು ಮೇಳ. ರಂಗದಲ್ಲಿ ತಂದೆಯನ್ನು ಕುಣಿಸಿದ ಭಾಗವತರು ಕೊಳಗಿ ಕೇಶವ ಹೆಗಡೆಯವರು. ಬಳಿಕ ಸಾಲಿಗ್ರಾಮ ಮೇಳದಲ್ಲಿ ಒಂದು ವರ್ಷ. ಶ್ರೀ ನಾರಾಯಣ ಶಬರಾಯರ ನಂತರ ಕಲಾಸೇವೆಯನ್ನು ಮಾಡಿದ್ದರು. ಕೆರೆಮನೆ ಶ್ರೀ ಶಂಭು ಹೆಗಡೆಯವರ ವೇಷಕ್ಕೆ ಹಾಡು ಹೇಳುವ ಅವಕಾಶ ಸೀಗಲಿಲ್ಲ ಎಂಬ ನೋವು ಕೊಳಗಿ ಕೇಶವ ಹೆಗಡೆಯವರಿಗಿದೆ. ಆದರೂ ತಾಳಮದ್ದಳೆಗಳಲ್ಲಿ  ಅರ್ಥಗಾರಿಕೆಯಲ್ಲಿ ಪದ್ಯ ಹೇಳಿದ್ದೇನೆ ಎಂಬ ಸಂತೋಷವನ್ನೂ ಹೊಂದಿದ್ದಾರೆ. ಶಂಭು ಹೆಗಡೆಯವರು ರಂಗದಲ್ಲಿ ಮೆರೆಯುತ್ತಿರುವ ಕಾಲಕ್ಕೆ ನಾನು ಕಿರಿಯವನಾಗಿದ್ದೆ. ಅನನುಭವಿಯಾಗಿದ್ದೆ. ಹಾಗಾಗಿ ಅವಕಾಶ ಸಿಕ್ಕಿರಲಿಲ್ಲ ಎಂದು ಕೊಳಗಿಯವರು ನೋವಿನ ಜೊತೆ ಸಮಾಧಾನವನ್ನೂ ಹೊಂದುತ್ತಾರೆ.

ಉಪ್ಪೂರರನ್ನು ಬಿಟ್ಟರೆ ಚಿಟ್ಟಾಣಿಯವರನ್ನು ಅತ್ಯಂತ ಹೆಚ್ಚು ಕುಣಿಸಿದ ಭಾಗವತರು ಕೊಳಗಿ ಕೇಶವ ಹೆಗಡೆಯವರೇ ಆಗಿರಬಹುದೆಂದು ನನ್ನ ಊಹೆ. ಅದ್ಭುತವಾದ ಲಯಸಿದ್ಧಿಯನ್ನು ಹೊಂದಿ, ಹೊಂದಾಣಿಕೆಯ ಸ್ವಭಾವದಿಂದ ಹಿಮ್ಮೇಳದವರನ್ನು ಚಿಟ್ಟಾಣಿಯವರು ಪ್ರೋತ್ಸಾಹಿಸುತ್ತಿದ್ದರೆಂದು ಕೊಳಗಿಯವರು ಅವರೊಂದಿಗಿನ ಒಡನಾಟವನ್ನು ಸದಾ ನೆನಪಿಸುತ್ತಾರೆ. ಕೆರೆಮನೆ ಮಹಾಬಲ ಹೆಗಡೆಯವರು ಲಯ, ರಾಗ, ತಾಳ, ಕುಣಿತ, ಮಾತುಗಾರಿಕೆ, ಸಾಹಿತ್ಯದ ಬಗೆಗೆ ತಿಳಿದಿರುವ ಕಲಾವಿದ. ಅವರ ಒಡನಾಟವೂ ಬೆಳವಣಿಗೆಗೆ ಸಹಕಾರವಾಗಿತ್ತು ಎಂದು ಹೇಳುವ ಮೂಲಕ ಆ ಖ್ಯಾತ ಕಲಾವಿದರನ್ನು ಕೊಳಗಿಯವರು ಗೌರವಿಸುತ್ತಾರೆ. 

ಸಾಲಿಗ್ರಾಮ ಮೇಳದ ತಿರುಗಾಟ, ರಂಗನಾಯಕಿ, ಸತ್ಯಹರಿಶ್ಚಂದ್ರ, ಕಾರ್ತವೀರ್ಯಾರ್ಜುನ, ಕೀಚಕ ವಧೆ, ಗದಾಯುದ್ಧ ಮೊದಲಾದ ಪ್ರಸಂಗಗಳ ಹಾಡುಗಳು ಕೊಳಗಿಯವರಿಗೆ ಖ್ಯಾತಿಯನ್ನು ತಂದುಕೊಟ್ಟಿತ್ತು. ಈ ಸಮಯದಲ್ಲಿ ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ ಒಡನಾಟವೂ ದೊರೆತಿತ್ತು. ಸಾಲಿಗ್ರಾಮ ಮೇಳ ಬಿಟ್ಟ ಬಳಿಕ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ನೇತೃತ್ವದ ಪೂರ್ಣಚಂದ್ರ ಕಲಾ ಮಂಡಳಿ ತಂಡದ ಪೂರ್ಣಕಾಲಿಕ ಭಾಗವತನಾಗಿ ಸೇವೆ ಅಲ್ಲದೆ ಸುಬ್ರಹ್ಮಣ್ಯ ಚಿಟ್ಟಾಣಿ ಅವರ ನಾಯಕತ್ವದ ‘ವೀರಾಂಜನೇಯ ಯಕ್ಷಮಿತ್ರ ಮಂಡಳಿ’ ಯಲ್ಲಿಯೂ ಭಾಗವತನಾಗಿ ವ್ಯವಸಾಯ. ಈ ಸಂದರ್ಭದಲ್ಲಿ ಒಂದೇ ಮನೆಯ ಮೂರು ಮಂದಿಗಳ ವೇಷಕ್ಕೆ ಪದ್ಯ ಹೇಳುವ ಅವಕಾಶವಾಗಿತ್ತು. (ತಂದೆ, ಮಗ, ಮೊಮ್ಮಗ- ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಕಾರ್ತಿಕ್ ಚಿಟ್ಟಾಣಿ)

ಸಾಲಿಗ್ರಾಮ ಮೇಳದ ಮಳೆಗಾಲದ ಮುಂಬೈ ಪ್ರದರ್ಶನಗಳಲ್ಲಿಯೂ ಭಾಗಿಯಾಗಿದ್ದರು. ಪ್ರಸ್ತುತ ಅತಿಥಿ ಕಲಾವಿದರಾಗಿ ಕೊಳಗಿ ಶ್ರೀ ಕೇಶವ ಹೆಗಡೆಯವರು ಯಕ್ಷಗಾನ ಕ್ಷೇತ್ರದ ಭಾಗವತರಾಗಿ ವ್ಯವಸಾಯ ಮಾಡುತ್ತಿದ್ದಾರೆ. 2009ರಲ್ಲಿ ಕೊಳಗಿ ಶ್ರೀ ಕೇಶವ ಹೆಗಡೆಯವರು ತಮ್ಮ ತೀರ್ಥರೂಪರಾದ ಕೊಳಗಿ ಶ್ರೀ ಅನಂತ ಹೆಗಡೆಯವರ ಹೆಸರಿನಲ್ಲಿ ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನ (ರಿ) ಸಿದ್ಧಾಪುರ ಎಂಬ ಸಂಸ್ಥೆಯನ್ನೂ ಆರಂಭಿಸಿದ್ದಾರೆ. ಶ್ರೀ ಅನಂತ ಪ್ರಶಸ್ತಿ ಪ್ರದಾನವೂ ನಡೆಯುತ್ತಿದೆ. ಶ್ರೀ ಎಂ.ಎಂ.ಹೆಗಡೆ ಮತ್ತು ನೆಬ್ಬೂರು ನಾರಾಯಣ ಭಾಗವತರು ಈ ಪ್ರಶಸ್ತಿಯನ್ನು ಈಗಾಗಲೇ ಪಡೆದಿರುತ್ತಾರೆ. ಕೊಳಗಿ ಕೇಶವ ಹೆಗಡೆಯವರು ವಿದೇಶಗಳಲ್ಲೂ ತಮ್ಮ ಗಾನಸುಧೆಯನ್ನು ಹರಿಸಿದವರು. ಕೊಂಡದಕುಳಿ ಶ್ರೀ ರಾಮಚಂದ್ರ ಹೆಗಡೆಯವರ ತಂಡದ ಭಾಗವತನಾಗಿ ಎರಡು ಬಾರಿ ಸಿಂಗಾಪುರ, ಅಲ್ಲದೆ ಅಮೆರಿಕಾ, ದುಬೈಯಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಕೊಳಗಿ ಕೇಶವ ಹೆಗಡೆಯವರ ಪತ್ನಿ ಶ್ರೀಮತಿ ಮಂಜುಳಾ ಅವರು ಚೆನ್ನಕಂಡ ಶ್ರೀ ವೆಂಕಟೇಶ ಹೆಗಡೆ ಮತ್ತು ಸುಮತಿ ಹೆಗಡೆ ದಂಪತಿಗಳ ಪುತ್ರಿ. ಶ್ರೀ ವೆಂಕಟೇಶ ಹೆಗಡೆ ಅವರು ವಿದ್ವಾಂಸರಾಗಿದ್ದು ಯಕ್ಷಗಾನ ವೇಷಧಾರಿಯೂ ತಾಳಮದ್ದಳೆ ಅರ್ಥಧಾರಿಯೂ ಆಗಿ ಪ್ರಸಿದ್ಧರು. ಭಾವನಾತ್ಮಕ ಪಾತ್ರಗಳಲ್ಲಿ ಒಳ್ಳೆಯ ಹೆಸರು ಪಡೆದವರು. ಕೊಳಗಿ ಶ್ರೀ ಕೇಶವ ಹೆಗಡೆ ಮತ್ತು ಮಂಜುಳಾ ದಂಪತಿಗಳ ಪುತ್ರಿ ಕು| ಹರ್ಷಿತಾ ಆರನೆಯ ತರಗತಿ ವಿದ್ಯಾರ್ಥಿನಿ. ಯಶಸ್ವೀ ಪ್ರದರ್ಶನಕ್ಕೆ ಯಾವ ಮಾರ್ಗವನ್ನು ಅನುಸರಿಸಬೇಕು? ಭಾಗವತರು, ವೇಷಧಾರಿಗಳು ಹೇಗಿರಬೇಕು? ಎಂಬುದನ್ನು ಕೊಳಗಿ ಕೇಶವ ಹೆಗಡೆಯವರು ಮನ ಮುಟ್ಟುವಂತೆ ಹೇಳುತ್ತಾರೆ. ಅವರ ಮಾತುಗಳಲ್ಲಿ ಸಂತಸದ ಜತೆ ನೋವಿನ ಧ್ವನಿಯನ್ನೂ ಗುರುತಿಸಬಹುದು.

“ಪ್ರದರ್ಶನವು ಯಶಸ್ವಿಯಾಗಬೇಕಾದರೆ ಹಿಮ್ಮೇಳ ಮತ್ತು ಮುಮ್ಮೇಳಗಳ ಸಾಂಗತ್ಯ ಅಗತ್ಯ. ಪರಸ್ಪರ ಅರಿತು ಸಹಕರಿಸಬೇಕಾದುದು ಉಭಯರಿಗೂ ಕರ್ತವ್ಯ. ಭಾಗವತಿಕೆ ಭಾವಪೂರ್ಣವಾಗಿರಬೇಕು. ಅವನು ವೇಷಧಾರಿಯಾಗಲೇಬೇಕು. ಕಲಾವಿದರ ಜತೆ ಸಮಾಲೋಚನೆ ಮಾಡಲೇಬೇಕು ಇಂತಹಾ ಪದ್ಯ ಹೀಗೆ ಹೇಳುತ್ತೇನೆ ಎಂದು ಸೂಚಿಸಬೇಕು. ಭಾಗವತನಿಗೂ ನಿರ್ದೇಶನದ ಅಗತ್ಯವಿದೆ. ಯಾರೂ ಪರಿಪೂರ್ಣರಲ್ಲ. ಹಿರಿಯ ಮುಮ್ಮೇಳ ಕಲಾವಿದರ ಅನುಭವಗಳನ್ನು ಪಡೆಯಬೇಕು. ನಾನು ಭಾಗವತ ಎಂಬ ಅಹಂಕಾರ ಸಲ್ಲದು. ಹಿರಿತನ, ಅನುಭವಗಳಿಂದ ಮಾಗಿದ ಮುಮ್ಮೇಳ ಕಲಾವಿದರನ್ನು ಗೌರವಿಸಿ ಮಾಹಿತಿ ಪಡೆಯಬೇಕು. ಪ್ರೇಕ್ಷಕರಿಗೆ ಇನ್ನೂ ಬೇಕು ಎನಿಸಿದಾಗ ಭಾಗವತನೂ ವೇಷಧಾರಿಯೂ ಮುಗಿಸಬೇಕು. ಕುಣಿತವೂ ಅಭಿನಯವೂ ಜತೆಯಾಗಿರಬೇಕು. (ಅದು ಕಷ್ಟ. ಆದರೂ ಜತೆಯಾಗಿರಬೇಕು) ಉದಾಹರಣೆಗೆ ಭೀಷ್ಮ ವಿಜಯ ಪ್ರಸಂಗದ ಸಾಲ್ವನಿಗಿರುವ ಪದ್ಯ. ‘ಅರರೇ ಶಾಭಾಸು ದ್ರವ್ಯವನೀವೆ ಎನುತಲೀ ಕರೆತಂದಳೀ ವಿಪ್ರನ …” ಇದು ಶೃಂಗಾರ ಅಲ್ಲ. ಹಲವು ಬಾರಿ ಅಭಿನಯ ಸಲ್ಲದು. ಹಾಗೆ ಪದ್ಯ ಹೇಳದಿದ್ದರೆ ಭಾಗವತಿಕೆ ಗೊತ್ತಿಲ್ಲ ಎಂಬ ಆರೋಪ ಬರುತ್ತದೆ. ಕಲಾವಿದರಿಗೆ ಬೇಕಾದಂತೆ ಪದ್ಯ ಹೇಳಬೇಕಾದ ಕಾಲ ಇದು. ಪ್ರಸಂಗಕ್ಕೆ ಬೇಕಾದಂತೆ ಪದ್ಯ ಹೇಳಿದರೆ ಬೇಡಿಕೆ ಇಲ್ಲ. ಕಲಾವಿದರೂ ಪ್ರೇಕ್ಷಕರೂ ಇದನ್ನು ತಿಳಿದುಕೊಳ್ಳಬೇಕು. ಕನಕಾಂಗೀ ಕಲ್ಯಾಣ ಪ್ರಸಂಗದ ‘ತಾಯೆ ಚಿಂತಿಪುದೇನು ಪೇಳೆನ್ನೊಳು ಮಾಯವಿದರೊಳಿನ್ನು ತೋಯಜ ಮುಖಿ ಸುಪ್ರೀಯದೊಳೇಳು ಆಯಾಸಗಳುಳಿದು….” ಚಿಂತೆ ಏನೆಂದು ಕೇಳುವ ಪದ್ಯ ಇದು. ಹಲವು ತಾಳಗಳಲ್ಲಿ ಹೇಳಿ ಕುಣಿಸುತ್ತಾರೆ! ಇಂತಹ ಉದಾಹರಣೆಗಳು, ಸಂದರ್ಭಗಳು ಹಲವಾರು ಇವೆ. ಕುಶಲವರ ಕಾಳಗ ಪ್ರಸಂಗದ ಹಾಡು. ‘ಚೆಲುವರನು ನೋಡಿದರೆ ನಲಿವುದೆನ್ನಯ ಮನವು..’ ಇದಕ್ಕೂ ಭಾವ ಇಲ್ಲದ ಹಾಡು! ರಾಮನ ಪಾತ್ರಧಾರಿಯೂ ಕುಣಿಯುತ್ತಾನೆ. ಭಾವನಾತ್ಮಕ ಹಾಡು ಯಕ್ಷಗಾನದಲ್ಲಿ ಸತ್ತು ಹೋದಾಗ ಬೇಸರವಾಗುತ್ತದೆ. ವೇಗದ ಹಾಡುಗಾರಿಕೆಗೆ ಅಭಿನಯ ಮತ್ತು ಕುಣಿತ ಎರಡೂ ಕಷ್ಟ. ಅಭಿನಯ ಮತ್ತು ಕುಣಿತ ಜತೆಯಾಗಿರಬೇಕಾದುದು ಅಗತ್ಯ. ಹಾಗಾಗಿ ಯಕ್ಷಗಾನಕ್ಕೆ ವೇಗವು ಸಲ್ಲದು”

ಇದು ಕೊಳಗಿ ಕೇಶವ ಹೆಗಡೆ ಅವರ ಮನದ ಮಾತುಗಳು. ಗಾನಕೋಗಿಲೆ ಬಡಗುತಿಟ್ಟಿನ ಹೆಸರಾಂತ ಭಾಗವತರಾದ ಕೊಳಗಿ ಶ್ರೀ ಕೇಶವ ಹೆಗಡೆಯವರಿಗೆ ಇನ್ನೂ ಹೆಚ್ಚಿನ ಕಲಾಸೇವೆ ಮಾಡುವ ಭಾಗ್ಯವು ದೊರೆಯಲಿ. ಅವರ ಗಾನಾಮೃತವನ್ನು ಕಲಾಭಿಮಾನಿಗಳು ದೀರ್ಘಕಾಲ ಸವಿಯುವಂತಾಗಲಿ. 

ಲೇಖನ: ರವಿಶಂಕರ್ ವಳಕ್ಕುಂಜ 

 

ಕೀರಿಕ್ಕಾಡು ದಿ। ಮಾಸ್ತರ್ ವಿಷ್ಣು ಭಟ್ಟರು ಮತ್ತು ಯಕ್ಷಗಾನಕ್ಕೆ ಕೀರಿಕ್ಕಾಡು ಮನೆತನದ ಅನುಪಮ ಕೊಡುಗೆಗಳು (ಭಾಗ – 2)

ಕಲಾತಪಸ್ವಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಕುರಿತು ಬರೆಯುವ ಅರ್ಹತೆಯನ್ನು ನಾನು ಹೊಂದಿಲ್ಲ. ಆದರೆ ಅವರ ಬಗೆಗೆ ಕೇಳಿ ತಿಳಿದ, ಪುಸ್ತಕಗಳಿಂದ ಓದಿ ತಿಳಿದ, ಅವರು ಬರೆದ ಪ್ರಸಂಗಗಳಲ್ಲಿ ವೇಷ ಮಾಡಿದ ಅನುಭವಗಳಿಂದ ಬರೆಯಲು ಅನುಕೂಲವಾದುದು ಭಾಗ್ಯವೆಂದು ಭಾವಿಸುತ್ತೇನೆ. ಯಕ್ಷಗಾನದ ಭೀಷ್ಮನೆಂದೇ ಕರೆಸಿಕೊಂಡ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರೂ ‘ಗುರುಗಳೇ ..” ಎಂದು ಸಂಬೋಧಿಸಿ ಗೌರವಿಸುತ್ತಿದ್ದರೆಂದರೆ ಕೀರಿಕ್ಕಾಡು ಮಾಸ್ತರ್  ವಿಷ್ಣು ಭಟ್ಟರ ವ್ಯಕ್ತಿತ್ವವೇನು, ಅವರೆಷ್ಟು ವರ್ಚಸ್ವಿಯಾಗಿದ್ದರು ಎಂಬುದನ್ನು ನಮಗೆ ಊಹಿಸಬಹುದು. 

ಕೀರಿಕ್ಕಾಡು ಎಂಬುದು ಕೇರಳ ರಾಜ್ಯದ ಕಾಸರಗೋಡು ತಾಲೂಕು ಕುಂಬಡಾಜೆ ಗ್ರಾಮದ ಒಂದು ಊರು. ತೀರಾ ಹಿಂದುಳಿದ ಹಳ್ಳಿಯ ಪ್ರದೇಶ. ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರಿತ್ತು. ಆಗ ಕನ್ನಡಿಗರಿಂದಲೇ ತುಂಬಿದ ಪ್ರದೇಶವಾದರೂ ಕೇರಳ ರಾಜ್ಯಕ್ಕೆ ಸೇರಿದ್ದು ವಿಶೇಷವೆನ್ನೋಣವೇ? ಕನ್ನಡಿಗರ ದೌರ್ಭಾಗ್ಯವೆನ್ನೋಣವೇ? ಕೀರಿಕ್ಕಾಡು ಸಮೀಪದ ವಳಕ್ಕುಂಜ ನನ್ನ ಹುಟ್ಟೂರು. ವಳಕ್ಕುಂಜದಿಂದ ಕೀರಿಕ್ಕಾಡಿಗೆ ಕೇವಲ ಒಂದು ಮೈಲಿ ದೂರವಷ್ಟೇ ಅಂತರ. ಹಾಗಾಗಿ ಕೀರಿಕ್ಕಾಡು ಎಂಬ ಊರನ್ನು ನಾನು ತಿಳಿದಿರುವೆ.

ಏತಡ್ಕದ ಸಮೀಪದಿಂದ ತೊಡಗಿ ನೇರಪ್ಪಾಡಿ, ವಳಕ್ಕುಂಜ, ಪಳ್ಳತ್ತಡ್ಕ ದಾರಿಯಾಗಿ ಹರಿದು ಕುಂಬಳೆಯ ಸಿರಿಯಾ ಎಂಬಲ್ಲಿ ಪಡುಗಡಲನ್ನು ಸೇರುವ ಹೊಳೆಯ ಬದಿಯಲ್ಲಿದೆ ಕೀರಿಕ್ಕಾಡು ಎಂಬ ಹಳ್ಳಿ. ನೇರಪ್ಪಾಡಿ ಮತ್ತು ವಳಕ್ಕುಂಜದ ಮಧ್ಯೆ ಇರುವ ಭೂಮಿ. ಸಾಧಾರಣ 2010ನೇ ಇಸವಿಯ ವರೆಗೂ ನಾನು ತಿಳಿದಂತೆ ಮಳೆಗಾಲದಲ್ಲಿ ಸಂಪರ್ಕ ವ್ಯವಸ್ಥೆ ಇರಲಿಲ್ಲ. ಕೇವಲ ತೂಗು ಸೇತುವೆ ಮಾತ್ರ ಇದ್ದುದು.

ಇತ್ತೀಚಿಗೆ ಏತಡ್ಕದಿಂದ ಕೀರಿಕ್ಕಾಡಿಗೆ ಹಳ್ಳಿ ರಸ್ತೆಯೊಂದು ನಿರ್ಮಾಣವಾಗಿತ್ತು. ಜೀಪುಗಳು ಭಾರೀ ಕಷ್ಟದಲ್ಲಿ ಓಡಾಡುವಂತಾಗಿತ್ತು. ಕಳೆದ ವರ್ಷ ಕೀರಿಕ್ಕಾಡಿನಲ್ಲಿ ಕಟೀಲು ಮೇಳದ ಸೇವಾ ಬಯಲಾಟ ನಡೆದಿತ್ತು. 1 ಕಿ. ಮೀ. ದೂರ ಮೇಳದ ಬಸ್ ನಿಲ್ಲಿಸಿ ವೇಷಭೂಷಣಗಳನ್ನು ಅನ್ಲೋಡ್ ಮಾಡಿ ಜೀಪಿನಲ್ಲಿ ಕೊಂಡು ಹೋಗಬೇಕಾಗಿ ಬಂದಿತ್ತು. ಈ ವಿಚಾರ ಹೇಳಲು ಕಾರಣವಿಷ್ಟೇ. ಈಗಲೂ ಇಂತಹ ಸ್ಥಿತಿಯಾದರೆ ಮಾಸ್ತರರು ಜನಿಸಿ ಬೆಳೆದ ಆ ದಿನಗಳಲ್ಲಿ ಕೀರಿಕ್ಕಾಡು ಎಂಬ ಊರಿನ ಸ್ಥಿತಿ ಹೇಗಿದ್ದಿರಬಹುದು?!

ಕೇವಲ ನಾಲ್ಕೈದು ಮನೆಗಳಿದ್ದ ಕುಗ್ರಾಮವಾಗಿತ್ತು. ಸುತ್ತಲೂ ದಟ್ಟವಾದ ಕಾಡು. ಕ್ರೂರ ಮೃಗಗಳ ಸಂಚಾರ, ಉಪಟಳವೂ ಜೋರಾಗಿತ್ತು. ಭತ್ತ, ಕಂಗು, ತೆಂಗು ಕೃಷಿ ಪ್ರದೇಶ. ಹುಲಿಗಳು ಹಟ್ಟಿಗೆ ದಾಳಿ ಮಾಡಿ ಹಸುಗಳನ್ನು ತಿಂದು ಹಾಕುವ ಪ್ರಕರಣಗಳೂ ನಡೆಯುತ್ತಿದ್ದ ಕಾಲ ಅದು. ಗುಡ್ಡೆಗೆ ಮೇಯಲು ಬಿಟ್ಟ ಹಸುಗಳು ಬರದೇ ಹುಲಿಗೆ ಆಹಾರವಾಗುತ್ತಿದ್ದುವು. ಬೆಳೆಗೂ ಸಾಕುಪ್ರಾಣಿಗಳಿಗೂ ಕೊಬ್ಬಿದ ಪ್ರಾಣಿಗಳ ಕಾಟ. ದೂರದೂರುಗಳ ಸಂಪರ್ಕದಿಂದ ವಂಚಿತವಾಗಿದ್ದ ಕೀರಿಕ್ಕಾಡು ಯಕ್ಷಗಾನದ ಕುಲಪತಿ ಸದೃಶ್ಯರಾದ ಮಾಸ್ತರ್ ವಿಷ್ಣು ಭಟ್ಟರ ಹುಟ್ಟೂರು. 1913ನೇ ಇಸವಿ  ಆಗಸ್ಟ್ 4ರಂದು ಕೀರಿಕ್ಕಾಡು ಕೇಶವ ಭಟ್ಟರು ಮತ್ತು ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮಗನಾಗಿ ಜನನ. ಕೃಷಿ ಕುಟುಂಬದ ಸಂಪ್ರದಾಯಸ್ಥ ಮನೆತನ.

ಓದಬೇಕೆಂಬ ಹಂಬಲವಿದ್ದರೂ ಕೀರಿಕ್ಕಾಡು ಪರಿಸರದವರಿಗೆ ಅದಕ್ಕೆ ಅವಕಾಶಗಳಿರಲಿಲ್ಲ. ಹತ್ತಿರದಲ್ಲಿ ಶಾಲೆ ಇರಲಿಲ್ಲ. ಮಳೆಗಾಲದಲ್ಲಿ ಹೊಳೆ ದಾಟಿ ಹೋಗಲೂ ಆಗುತ್ತಿರಲಿಲ್ಲ. ಹಾಗಾಗಿ ಈ ಪ್ರದೇಶದ ಜನರು ವಿದ್ಯೆಯಿಂದ ವಂಚಿತರಾಗಿದ್ದರು. ಹಾಗಿದ್ದರೂ ಹೊಳೆಯಾಚೆಯ ಬದಿಯ ಮೂರು ಕಿ. ಮೀ. ದೂರದ ಕರ್ವಲ್ತಡ್ಕ ಶಾಲೆಯಲ್ಲಿ 4ನೇ ತರಗತಿ ವರೆಗೆ ಓದಿದ್ದರು. ಮತ್ತೆ ಏತಡ್ಕ ಶಾಲೆಯಲ್ಲಿ 5ನೇ ತರಗತಿಯನ್ನು ಪೂರೈಸಿದ್ದರು. ಉಣ್ಣಬೇಕಾದರೆ ದುಡಿಯಲೇ ಬೇಕಾದ ಕಾಲ ಅದು. ಹಣ ಸಂಪಾದನೆಗೆ  ಈಗಿನಂತೆ ದಾರಿಗಳೇ ಇರಲಿಲ್ಲ. ಕೆಲಸಗಾರರಿಗೆ ವಸ್ತು ರೂಪದಲ್ಲೇ ಸಂಬಳ. ಬೆಲೆ ಬೆಳೆಸಿದರೆ ಮಾತ್ರ ಹೊಟ್ಟೆಗೆ ಅನ್ನ.

ಮಾಸ್ತರರ ತಾಯಿ ಲಕ್ಷ್ಮಿ ಅಮ್ಮ ಪರಮ ಸಾಧ್ವಿಯಾಗಿದ್ದರು. ಮನೆಕೆಲಸಗಳಲ್ಲಿ ಶ್ರದ್ಧೆ. ದೇವರಲ್ಲಿ ಭಕ್ತಿ ಉಳ್ಳವರಾಗಿ ಮನೆಯನ್ನೇ ವಿದ್ಯಾಲಯದಂತೆ, ದೇವಾಲಯದಂತೆ ಇರಿಸಿದ ಸಂತುಷ್ಟ ಗೃಹಣಿಯಾಗಿದ್ದರು. ಮನೆಯ ಗೃಹಣಿಯಾಗಿ ಕರ್ತವ್ಯಗಳನ್ನು ಮಾಡುತ್ತಿರುವಾಗ ಸದಾ ದೇವರನಾಮ ಸ್ಮರಣೆಯ ಜೊತೆ ಕೀರ್ತನೆಗಳನ್ನೂ ಹಾಡುತ್ತಿದ್ದರು. ಅಲ್ಲದೆ ಆಷಾಡ ಮಾಸದಲ್ಲಿ ದಿನವೂ ಶಿವಪುರಾಣದ ಬ್ರಹ್ಮೋತ್ತರ ಖಂಡವನ್ನು ಕ್ರಮವತ್ತಾಗಿ ಓದುತ್ತಿದ್ದರು. ಸಾಯಂ ಸಂಧ್ಯೆಯಲ್ಲಿ ಪ್ರತಿ ದಿನವೂ ಮಕ್ಕಳಿಗೆ ಪುರಾಣ ಪುಣ್ಯ ಪುರುಷರು, ದೇವಾಧಿದೇವತೆಗಳು, ಪ್ರಾತಃಸ್ಮರಣೀಯ ಪತಿವ್ರತಾ ನಾರಿಯರು ಬಾಳಿ ಬದುಕಿದ ರೀತಿಯನ್ನು ಮನಮುಟ್ಟುವಂತೆ ವಿವರಿಸುತ್ತಿದ್ದರು.

ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಎಂಬಂತೆ ಮಕ್ಕಳಿಗೆ ಸಂಸ್ಕಾರವೆಂಬ ಅಮೃತವನ್ನು ಉಣಿಸಿದವರು ಲಕ್ಷ್ಮಿ ಅಮ್ಮ. ಇದರ ಪರಿಣಾಮವನ್ನು ಅನುಭವಿಸಿದವರು ವಿಷ್ಣು ಭಟ್ಟರು. ಅವರಿಗೆ ಎಳವೆಯಲ್ಲೇ ಗೋಪಾಲಕೃಷ್ಣನು ಪ್ರಿಯನಾದ ದೇವರಾಗಿದ್ದ. ಮಾಸ್ತರರೊಳಗೆ ಅವ್ಯಕ್ತನಾಗಿ ಕುಳಿತಿದ್ದ ಕಲಾವಿದನು ಪ್ರಕಟವಾಗಿ ಬೆಳೆಯಲು ಇದೂ ಕಾರಣವಾಗಿತ್ತು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು.

ಪ್ರದರ್ಶನ ಆರಂಭವಾಗುವುದಕ್ಕೆ ಮೊದಲೇ ಅಲ್ಲಿದ್ದು ಬೆಳಗಿನ ತನಕವೂ ನೋಡುತ್ತಿದ್ದರು. ಚೌಕಿಯೊಳಗೆ ಕಲಾವಿದರು ಸಿದ್ಧರಾಗುವ ರೀತಿಯನ್ನೂ ಗಮನಿಸುತ್ತಿದ್ದರು. ಬಳಿಕ ಕೀರಿಕ್ಕಾಡು ಗುಡ್ಡವೇ ಗೆಳೆಯರ ಸಹಿತ ಇವರಿಗೆ ರಂಗಸ್ಥಳವಾಗುತ್ತಿತ್ತು. ಬಣ್ಣ ಬಣ್ಣದ ಮಣ್ಣನ್ನು ತಂದು ಮುಖಕ್ಕೆ ಮೆತ್ತಿ ವೇಷಗಳು ಸಿದ್ಧವಾಗುತ್ತಿತ್ತು. ಅಡಿಕೆ ಹಾಳೆಯಿಂದ ಕಿರೀಟ ತಯಾರಾಗುತ್ತಿತ್ತು. ಮಕ್ಕಳಾಟವು ಬಹು ಚಂದವಲ್ಲವೇ? ಪುಟ್ಟ ಮಕ್ಕಳು ನಾಟ್ಯ ಗೊತ್ತಿಲ್ಲದಿದ್ದರೂ ವೇಷ ಧರಿಸಿ ರಂಗವೇರಿ ತಪ್ಪಾಗಿ ಕುಣಿದರೂ ಅದೆಷ್ಟು ಸೊಗಸು! ನಾವದನ್ನು ಆಸ್ವಾದಿಸುತ್ತೇವೆ.

ಮೊಟ್ಟಮೊದಲು ಇವರ ಕೈಗೆ ಸಿಕ್ಕಿದ್ದು ಪಂಚವಟಿ, ವಾಲಿ ಸುಗ್ರೀವರ ಕಾಳಗದ ಪ್ರಸಂಗ ಪುಸ್ತಕ. ಅದನ್ನು ಓದಿ ಅರಗಿಸಿಕೊಂಡಿದ್ದರು. ಏತಡ್ಕ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಕುಶಲವ ಎಂಬ ಪೌರಾಣಿಕ ನಾಟಕದಲ್ಲಿ ಮೊತ್ತ ಮೊದಲು ವಾಲ್ಮೀಕಿಯ ಪಾತ್ರದಲ್ಲಿ ರಂಗವೇರಿದ್ದರು. ಇವರ ಅಭಿನಯ ಸಾಮರ್ಥ್ಯವನ್ನು ಕಂಡ ಯಕ್ಷಗಾನ ವಿದ್ವಾಂಸ, ಸಂಸ್ಕೃತ ಶಿರೋಮಣಿ ಪಡ್ರೆ ಶ್ರೀಪತಿ ಶಾಸ್ತ್ರಿಗಳು ಮೆಚ್ಚಿ ಮೊದಲ ಬಹುಮಾನವನ್ನೇ ನೀಡಿದ್ದರು. ವಿಷ್ಣು ಭಟ್ಟರೊಳಗೆ ಅಡಗಿ ಕುಳಿತಿದ್ದ ಮಹಾನ್ ಕಲಾವಿದನೊಬ್ಬನನ್ನು ಪಡ್ರೆ ಶ್ರೀಪತಿ ಶಾಸ್ತ್ರಿಗಳು ಅಂದೇ ಗುರುತಿಸಿದ್ದರು.  – (ಮುಂದುವರಿಯುವುದು)

ಲೇಖನ: ರವಿಶಂಕರ್ ವಳಕ್ಕುಂಜ