Sunday, August 30, 2026
Home Blog Page 331

ಮಹಿಷ ವಧೆ ಯಕ್ಷಗಾನ (ದೇವೇಂದ್ರ ಮತ್ತು ವಿದ್ಯುನ್ಮಾಲಿಯ ಯುದ್ಧ) – ವೀಡಿಯೊ 

ಮಹಿಷ ವಧೆ ಪ್ರಸಂಗದ ವಿದ್ಯುನ್ಮಾಲಿ ಮತ್ತು ದೇವೇಂದ್ರನ ಯುದ್ಧದ ದೃಶ್ಯದ ವೀಡಿಯೊ ಇಲ್ಲಿದೆ. ವಿದ್ಯುನ್ಮಾಲಿಯಾಗಿ ಅರಳ ಗಣೇಶ ಶೆಟ್ಟಿ ಮತ್ತು ದೇವೇಂದ್ರನಾಗಿ ಉಮಾಮಹೇಶ್ವರ ಶರ್ಮ ಪಾತ್ರ ನಿರ್ವಹಿಸಿದ್ದಾರೆ. 

ಯಕ್ಷಕಲೆಯ ಭೀಷ್ಮ ಶ್ರೀ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರು (1918-2006)

ಹರಿದಾಸ ಶೇಣಿ ಡಾ. ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷರಂಗದ ಭೀಷ್ಮನೆಂದೇ ಖ್ಯಾತರಾಗಿದ್ದವರು. ಹರಿದಾಸರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ವೇಷಧಾರಿಯಾಗಿ ಕಲಾಬದುಕಿನುದ್ದಕ್ಕೂ ಕಲಾಭಿಮಾನಿಗಳನ್ನು ರಂಜಿಸಿ, ಅವರ ಪ್ರಶಂಸೆಗೆ ಪಾತ್ರರಾಗಿದ್ದರು. ಸಂಘಟಕರಾಗಿಯೂ ಪ್ರಸಂಗಕರ್ತರಾಗಿಯೂ ಯಕ್ಷಗಾನಕ್ಕೆ ಶ್ರೀ ಶೇಣಿಯವರ ಕೊಡುಗೆಗಳಿವೆ. ಯಕ್ಷಗಾನದ ವಿದ್ವಾಂಸರಾಗಿದ್ದ ಶ್ರೀ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರ ಬಗೆಗೆ ಬರೆಯಬೇಕೆಂಬ ಆಸೆಯ ಜೊತೆಗೆ ಭಯವೂ ಹುಟ್ಟಿಕೊಂಡಿತ್ತು. ಅವರ ಬಗೆಗೆ ಬರೆಯುವ ಅರ್ಹತೆ ನನಗಿದೆಯೇ? ಬರೆಯಲು ನನ್ನಿಂದ ಸಾಧ್ಯವೇ? ಹೀಗೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿದ್ದುವು. ನಿಜವಾಗಿಯೂ ಶೇಣಿ ಸಾಮಗರಂತಹಾ ವಿದ್ವಾಂಸರ ಬಗೆಗೆ ಬರೆಯಲು ನಾನು ಅರ್ಹತೆಯನ್ನು ಹೊಂದಿಲ್ಲ. ಆದರೂ ಲೇಖಕನಿಗೆ ಕರ್ತವ್ಯ ಎಂಬ ನೆಲೆಯಲ್ಲಿ ಇದು ಒಂದು ನನ್ನ ಸಣ್ಣ ಪ್ರಯತ್ನ ಅಷ್ಟೆ.

ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಇಳಿವಯಸ್ಸಿನಲ್ಲಿ ಅವರು ನಿರ್ವಹಿಸಿದ ಕೆಲವು ವೇಷಗಳನ್ನು ನೋಡುವ ಅವಕಾಶ ಸಿಕ್ಕಿದೆ. ತಾಳಮದ್ದಳೆ ಅರ್ಥಗಾರಿಕೆಯನ್ನು ಅದೆಷ್ಟೋ ಬಾರಿ ಕೇಳುವ ಅವಕಾಶವೂ ದೊರೆತಿದೆ. ಅವರ ಬಳಿ ಕುಳಿತು ಮಾತನಾಡುವ ಭಾಗ್ಯವೂ ನನ್ನದಾಗಿತ್ತು. ಪ್ರೀತಿಯಿಂದ ಬಹಳ ಹೊತ್ತು ಹಲವು ಬಾರಿ ಮಾತನಾಡಿಸಿದ್ದಾರೆ. ಹಲವು ಬಾರಿ ಅವರ ಭಾಷಣಗಳನ್ನು ಕೇಳುವ ಭಾಗ್ಯವೂ ನನ್ನದಾಗಿತ್ತು. ಶ್ರೀ ಶೇಣಿಯವರ ಕುರಿತು ಹಿರಿಯರಿಂದ ಕೇಳಿ ತಿಳಿದ ವಿಚಾರ, ನನ್ನ ಅನಿಸಿಕೆ ಮತ್ತು ಅವರ ಕುರಿತಾಗಿ ಪ್ರಕಟವಾದ ಪುಸ್ತಕಗಳನ್ನು ಓದಿ ಸಂಗ್ರಹಿಸಿದ ವಿಚಾರಗಳಿಂದ ಭಯದಿಂದಲೇ ಬರೆಯುವುದಕ್ಕೆ ಪ್ರಯತ್ನಿಸುತ್ತೇನೆ. 

ಸರಕಾರದಿಂದ ಮಾಶಾಸನವನ್ನು ಪಡೆಯುವುದಕ್ಕೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆಯುವುದಕ್ಕೆ ಅದರದ್ದೇ ಆದ ರೀತಿ ನೀತಿಗಳಿರುತ್ತವೆ (Formalities). ಆದರೆ ಯಾವುದೇ ನಿಯಮಕ್ಕೊಳಪಡದೆ ತನ್ನ ಪ್ರತಿಭೆ ಸಾಮರ್ಥ್ಯದಿಂದಲೇ ಇವೆರಡನ್ನೂ ತನ್ನದಾಗಿಸಿಕೊಂಡವರು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು. ಅಲ್ಲದೆ ಕೀರ್ತಿ, ಗೌರವ, ಪ್ರಶಸ್ತಿಗಳೆಲ್ಲವೂ ತಾನಾಗಿ ಒಲಿದು ಬಂದಿದ್ದುವು. ಎಲ್ಲವೂ ಶೇಣಿಯವರನ್ನು ಅರಸಿ ಬಂದು ಸೇರಿಕೊಂಡಿದ್ದುವು.

ಶ್ರೀ ಶೇಣಿಯವರು ಕಾಸರಗೋಡು ಪ್ರದೇಶದ ಕುಂಬಳೆ ಸಮೀಪದ ಎಡನಾಡು ಗ್ರಾಮದ ಅಜ್ಜಕಾನ ಮನೆಯವರು. ಅಜ್ಜಕಾನ ಶಂಭಟ್ಟರ ಪುತ್ರ ಶ್ರೀ ಅಜ್ಜಕಾನ ನಾರಾಯಣ ಭಟ್ಟ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳ ಪುತ್ರನಾಗಿ 1918 ಏಪ್ರಿಲ್ ತಿಂಗಳ 7ರಂದು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು ಈ ಲೋಕದ ಬೆಳಕನ್ನು ಕಂಡವರು. ಜನಿಸಿದ್ದು ನೀರ್ಚಾಲು ಸಮೀಪದ ಉಬ್ಬಾನ ಮನೆಯಲ್ಲಿ. ಇದು ಶೇಣಿಯವರ ಅಜ್ಜನ ಮನೆ. ನಾರಾಯಣ ಭಟ್ ಮತ್ತು ಲಕ್ಷ್ಮಿ ಅಮ್ಮ ದಂಪತಿಗಳಿಗೆ ಮದುವೆಯಾಗಿ ಬಹಳ ಕಾಲ ಮಕ್ಕಳನ್ನು ಪಡೆಯುವ ಭಾಗ್ಯ ಒದಗಿರಲಿಲ್ಲ. ಆ ಭಾಗ್ಯವು ನಮಗಿಲ್ಲ ಎಂದೇ ಭಾವಿಸಿದ್ದರಂತೆ. ಆದರೆ ದೇವರ ಇಚ್ಛೆ ಹಾಗಿರಲಿಲ್ಲ. ಲಕ್ಷ್ಮಿ ಅಮ್ಮನವರು ತನ್ನ ಇಪ್ಪತ್ತಾರನೆಯ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮವಿತ್ತರು. ಇದು ಕುಂಬಳೆಯ ಶ್ರೀ ಗೋಪಾಲಕೃಷ್ಣ ದೇವರ ಪ್ರಸಾದ ಎಂದು ಭಾವಿಸಿ ಅಜ್ಜಕಾನ ನಾರಾಯಣ ಭಟ್, ಲಕ್ಷ್ಮಿ ಅಮ್ಮ  ದಂಪತಿಗಳು ಸಂತಸದಿಂದ ಹಿಗ್ಗಿದರು. ಅಜ್ಜಕಾನ ಗೋಪಾಲಕೃಷ್ಣ ಎಂದು ಹೆಸರನ್ನಿರಿಸಿದರು.

ಕೇವಲ ಮೂರು ವರ್ಷ ತುಂಬುವ ಮೊದಲೇ ತೀರ್ಥರೂಪರನ್ನು ಕಳೆದುಕೊಂಡು, ತಾಯಿ ಮತ್ತು ಅಜ್ಜಿಯ ಆಸರೆಯಲ್ಲೇ ಬೆಳೆಯಬೇಕಾಗಿ ಬಂದಿತ್ತು. ಉಬ್ಬಾನ ಮನೆಯನ್ನು ತೊರೆದು ಪೆರಡಾಲದ ಕೊಡ್ವಕೆರೆ ಎಂಬಲ್ಲಿ ವಾಸ. ಕೆಲ ಸಮಯದ ಬಳಿಕ ಅಜ್ಜನನ್ನೂ ಕಳೆದುಕೊಂಡಿದ್ದರು. (ತಾಯಿಯ ತಂದೆ). ಚಿಕ್ಕಪ್ಪ ಕಾರಿಂಜ ವೆಂಕಟೇಶ ಭಟ್ಟರು (ಚಿಕ್ಕಮ್ಮನ ಗಂಡ) ತನ್ನ ಕುಟುಂಬದ ಹೊಣೆಯ ಜತೆ ಇವರ ಮನೆಯ ಹೊಣೆಯನ್ನೂ ಹೊತ್ತು ಸಹಕರಿಸಿದ್ದರು. ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದ ಶೇಣಿಯವರು ಚಿಕ್ಕಮ್ಮನ ಮನೆಗೆ ಹೋಗಿ ರಜಾದಿನಗಳನ್ನು ಕಳೆಯುವ ನೆಪವನ್ನು ಹೂಡಿ ಅಲ್ಲಿ ನಡೆಯುತ್ತಿದ್ದ ಇಚ್ಲಂಪಾಡಿ ಮೇಳದ ಆಟಗಳನ್ನು ನೋಡುತ್ತಿದ್ದರು. ಹಾಗಾಗಿ ಹಿಂದಿನ ಕಾಲದ ಪ್ರದರ್ಶನಗಳು ಹೇಗಿದ್ದುವು ಎಂಬುದನ್ನು ಪ್ರತ್ಯಕ್ಷದರ್ಶಿಯಾಗಿ ಶ್ರೀ ಶೇಣಿಯವರು ಹೇಳುವ ಅಧಿಕಾರವನ್ನು ಹೊಂದಿದ್ದರು.

ಓದಿದ್ದು ಮೂರು ವಿದ್ಯಾಸಂಸ್ಥೆಗಳಲ್ಲಿ. ಐದನೇ ತರಗತಿಯ ವರೆಗೆ ಬೇಳ ಬೋರ್ಡ್ ಎಲಿಮೆಂಟರಿ ಶಾಲೆಯಲ್ಲಿ. ಅಲ್ಲಿನ ಅಧ್ಯಾಪಕರು ಯಕ್ಷಗಾನ ಪ್ರಿಯರಾಗಿದ್ದರು. ಶ್ರೀ ಶೇಣಿಯವರ ಹಸ್ತಾಕ್ಷರಗಳು ಸುಂದರವಾಗಿವೆ ಎಂಬ ಕಾರಣಕ್ಕೆ ‘ಅಂಶುಮತಿ ಕಲ್ಯಾಣ’ ಎಂಬ ಪ್ರಸಂಗ ಪುಸ್ತಕವನ್ನು ನೀಡಿ ಹಸ್ತಪ್ರತಿ ಬರೆಯಲು ಅಧ್ಯಾಪಕರು ಸೂಚಿಸಿದ್ದರು. ಆಟ ನೋಡಿ ಶೇಣಿಯವರು ಆ ಪ್ರಸಂಗದ ಪದ್ಯಗಳನ್ನು ಮೊದಲೇ ಕೇಳಿದ್ದರು. ಓದುತ್ತಾ ಬರೆಯುತ್ತಾ ಇಡೀ ಪ್ರಸಂಗವೇ ಶೇಣಿಯವರಿಗೆ ಕಂಠಪಾಠವಾಗಿತ್ತು. ಅದೇ ಹೊತ್ತಿಗೆ ಬೇಳದಲ್ಲಿ ಕೋಡಿಂಗಾರು ಕೋಚಣ್ಣ ಭಂಡಾರಿಗಳು ಮತ್ತು ಕಿಂಞಣ್ಣ ಭಂಡಾರಿಗಳು ಸಮಾನ ಮನಸ್ಕರನ್ನು ಸೇರಿಸಿಕೊಂಡು ‘ಶ್ರೀ ಸುಬ್ರಹ್ಮಣ್ಯ ಕೃಪಾಪೋಷಿತ ನಾಟಕ ಮಂಡಳಿ’ ಎಂಬ ತಂಡವನ್ನು ಸ್ಥಾಪಿಸಿದರು. ಮೊದಲ ನಾಟಕ ‘ಭಕ್ತಿ ಸಾಮ್ರಾಜ್ಯ’. ಅಹಲ್ಯೆಯ ಪಾತ್ರ ಧರಿಸಿ ಶೇಣಿಯವರು ರಂಗವೇರಿದ್ದರು (1927). ಈ ನಾಟಕವನ್ನು ಬರೆದವರು ಸುರತ್ಕಲ್ಲು ಸುಬ್ಬರಾಯರು. ಇವರು ಬರೆದ ನಾಟಕದಲ್ಲಿ ಮೊದಲು ಬಣ್ಣ ಹಚ್ಚಿದ ಶೇಣಿಯವರು ಶ್ರೀ ಸುರತ್ಕಲ್ ಮೇಳದಲ್ಲಿ ಕೊನೆವರೆಗೂ ಬಣ್ಣ ಹಚ್ಚಿ ಕಲಾವಿದನಾಗಿ ರಂಜಿಸಿದ್ದು ವಿಶೇಷ.

ಮೊದಲ ನಾಟಕ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು ಉತ್ಸಾಹಿತರಾಗಿ ನಾಟಕ ಶಾಲೆಯನ್ನೇ ತೆರೆಯಲಾಯಿತು. ನಾಟಕ ಅಧ್ಯಾಪಕರಾಗಿ ವಿಟ್ಲ ಗಣಪತಿ ರಾಯರು ತರಬೇತಿಯನ್ನು ನೀಡಿದ್ದರು. ಸದಾರಮೆ ನಾಟಕದಲ್ಲಿ ಶೇಣಿಯವರು ಲೀಲಾವತಿ ಪಾತ್ರವನ್ನು ನಿರ್ವಹಿಸಿದರು. ಬಳಿಕ ಮೃಚ್ಛಕಟಿಕ, ಹರಿಶ್ಚಂದ್ರ, ಗಿರಿಜಾ ಕಲ್ಯಾಣ, ಪ್ರಹ್ಲಾದ ಚರಿತ್ರೆ ಮೊದಲಾದ ಸಂಗೀತ ನಾಟಕಗಳು ಯಶಸ್ವಿಯಾದವು. ಅಭಿನಯದ ರೀತಿ, ಮಾತಿನ ಧಾಟಿ, ಸಂಗೀತದ ಜ್ಞಾನ, ತಾಳಲಯಗಳ ಹೊಂದಾಣಿಕೆಯಿಂದ ಛಂದಸ್ಸಿಗೆ ಭಂಗವಾಗದಂತೆ ಸಾಹಿತ್ಯ ಶುದ್ಧಿಯಿಂದ ಹಾಡುವ ರೀತಿಗಳು ವಿಟ್ಲ ಗಣಪತಿ ರಾಯರ ಪಾಠದಿಂದ ತಿಳಿದುಕೊಂಡ ಶೇಣಿಯವರ ಕಲಾಜೀವನದ ಗೆಲುವಿಗೆ ಅದುವೇ ಮೂಲಧನವಾಗಿ ಪರಿಣಮಿಸಿತ್ತು.

ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಎರಡು ವರ್ಷಗಳ ಕಾಲ ನಾಟಕ ನಟನಾಗಿ ಕಲಾಸೇವೆ. ಮತ್ತೆ ವಿದ್ಯಾರ್ಜನೆಯತ್ತ. ಕುಂಬಳೆಯ ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಗೆ ಆರನೇ ತರಗತಿಗೆ ಸೇರ್ಪಡೆ. ಎಂಟನೇ ತರಗತಿಯಲ್ಲಿ ಉತ್ತೀರ್ಣನಾಗಿ ನಾಯ್ಕಾಪು ಏಡೆಡ್ ಎಲಿಮೆಂಟರಿ ಶಾಲೆಯಲ್ಲಿ ಅಧ್ಯಾಪಕನಾಗಿ ಸೇವೆ. ಅದು ಖ್ಯಾತ ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರ ಸಹೋದರ ವಿದ್ವಾನ್ ಡಿ.ವಿ. ಹೊಳ್ಳರ ಮ್ಯಾನೇಜ್ಮೆಂಟ್ ಶಾಲೆಗಳಲ್ಲಿ ಒಂದಾಗಿತ್ತು. ಅವರೇ ಮುಖ್ಯೋಪಾದ್ಯಾಯರಾಗಿದ್ದರು. ಶ್ರೀಯುತರು ಅರ್ಥಧಾರಿಗಳೂ ಪ್ರಸಂಗಕರ್ತರೂ ಆದುದರಿಂದ ಶೇಣಿಯವರಿಗೆ ಅನುಕೂಲವೇ ಆಗಿತ್ತು. ಒಂದು ವರ್ಷ ಅಧ್ಯಾಪಕನಾಗಿ ಮತ್ತೆ ಹೆಚ್ಚಿನ ವಿದ್ಯಾರ್ಜನೆಗಾಗಿ ಪೆರಡಾಲ ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿಗೆ ಸೇರ್ಪಡೆ. ಕನ್ನಡದೋಜ ಪೆರಡಾಲ ಕೃಷ್ಣಯ್ಯ, ಸಂಸ್ಕೃತ ವಿದ್ವಾಂಸರಾದ ದರ್ಭೆ ನಾರಾಯಣ ಶಾಸ್ತ್ರಿ, ಚಾರಿಗುಳಿ ಸುಬ್ರಾಯ ಶಾಸ್ತ್ರಿಗಳಿಂದ ಜ್ಞಾನಾರ್ಜನೆ. ಮುಖ್ಯೋಪಾಧ್ಯಾಯರಾದ ಶ್ರೀ ಬಿ. ನಾರಾಯಣ ಭಟ್ಟರಿಂದ ನಾಟಕ ಪ್ರದರ್ಶನಕ್ಕೆ ಪ್ರೋತ್ಸಾಹ. ಪ್ರಿನ್ಸಿಪಾಲ, ಅಧ್ಯಾಪಕರುಗಳ ನಿರ್ದೇಶನದಲ್ಲಿ ವಿಷಮ ವಿವಾಹ, ಸತ್ಯ ಸಂಕಲ್ಪ, ಕಂಸ ವಧೆ, ನಿರುಪಮಾ ಎಂಬ ನಾಟಕಗಳು ಯಶಸ್ವಿಯಾಗಿದ್ದುವು.

ಹೀಗೆ ವಿದ್ಯಾರ್ಥಿ, ಅಧ್ಯಾಪಕ, ನಾಟಕ ನಟ ಎಂಬ ಸ್ತರಗಳಲ್ಲಿ ಹದಿನೈದು ವರ್ಷ ಕಳೆದರೂ ಯಕ್ಷಗಾನಾಸಕ್ತಿ ಅವ್ಯಕ್ತವಾಗಿಯೇ ಇತ್ತು. ಅದು ಹೊರಪ್ರಪಂಚಕ್ಕೆ ಪ್ರಕಟವಾಗಲು ಚಡಪಡಿಸುತ್ತಿತ್ತು. ಇಚ್ಲಂಪಾಡಿ, ಕೂಡ್ಲು, ಕೊರಕ್ಕೋಡು, ಹಂಪನಕಟ್ಟೆ ಮೊದಲಾದ ಮೇಳಗಳ ಪ್ರದರ್ಶನಗಳನ್ನು ಬಿಡದೆ ನೋಡುತ್ತಿದ್ದರು. ಕೊರಕ್ಕೋಡು ಮೇಳದವರು ಪ್ರದರ್ಶಿಸಿದ  ಮೊತ್ತ ಮೊದಲ ದೇವಿ ಮಹಾತ್ಮೆ ಪ್ರಸಂಗ. ಮೂರು ದಿನಗಳ ಆಟ. ಎರಡನೇ ದಿನದ ಆಟವನ್ನು ಶೇಣಿಯವರು ನೋಡಿದ್ದರಂತೆ. ಆ ಕಾಲದ ಸುಪ್ರಸಿದ್ಧ ಕಲಾವಿದರ ಅರ್ಥಗಾರಿಕೆಯನ್ನು ವೇಷಗಾರಿಕೆಯನ್ನು ನೋಡುತ್ತಾ ಬೆಳೆದವರು. ಪೆರಡಾಲ ಮಹಾಜನ ಕಾಲೇಜಿನ ವಿದ್ಯಾರ್ಥಿಯಾಗಿರುವಾಗ ಪೆರಡಾಲ ಕೃಷ್ಣಯ್ಯನವರ ಸೂಚನೆಯಂತೆ ‘ಯಾದವಾಭ್ಯುದಯ’ ಎಂಬ ಪ್ರಸಂಗದ ಹಸ್ತಪ್ರತಿಯನ್ನು ಬರೆದು ನೀಡಿದ್ದರು. ಅಂದಿನ ಎಲ್ಲಾ ತಾಳಮದ್ದಳೆ ಕಲಾವಿದರ ಅರ್ಥಗಾರಿಕೆಯನ್ನು ಕೇಳುತ್ತಿದ್ದರು. ಅದರಲ್ಲಿ ಶೇಣಿಯವರ ಮನಸ್ಸನ್ನು ಆಕರ್ಷಿಸಿದವರು ಕೆ.ಪಿ.ವೆಂಕಪ್ಪ ಶೆಟ್ಟರು ಮತ್ತು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರು.

ಪೆರಡಾಲ ಮಹಾಜನ ಕಾಲೇಜಿನಲ್ಲಿ ವಿದ್ಯಾರ್ಜನೆಯ ಬಳಿಕ ಮೈರೆ ಗ್ರಾಮದ ಶೇಣಿ  ಎಂಬಲ್ಲಿ ವಾಸ. ಹೀಗೆ ಅಜ್ಜಕಾನ ಗೋಪಾಲಕೃಷ್ಣ ಭಟ್ಟರು ಶೇಣಿ ಗೋಪಾಲಕೃಷ್ಣ ಭಟ್ ಎನಿಸಿಕೊಂಡರು. ಉಕ್ಕಿನಡ್ಕ ಮತ್ತು ಪೆರ್ಲ ಶೇಣಿಗೆ ಸಮೀಪದ ಊರುಗಳು. ಈ ಊರುಗಳಲ್ಲಿ ವಿದ್ವಾಂಸರ, ಕಲಾವಿದರ ಗಡಣವೇ ತುಂಬಿತ್ತು. ಆಟ ತಾಳಮದ್ದಲೆಗಳೂ ನಡೆಯುತ್ತಿದ್ದುವು. ಉಕ್ಕಿನಡ್ಕ ವಸಿಷ್ಠಾಶ್ರಮ ಶಾಲೆಯಲ್ಲಿ ರತಿಕಲ್ಯಾಣ ಪ್ರಸಂಗ. ಕೀರಿಕ್ಕಾಡು ಮಾಸ್ತರರ ಹೇಳಿಕೆಯಿಂದ ಅರ್ಜುನನಾಗಿ ತಾಳಮದ್ದಳೆ ರಂಗಪ್ರವೇಶ. ಮತ್ತೆ ಹಿಂತಿರುಗಿ ನೋಡಿದವರಲ್ಲ. ತಾಳಮದ್ದಳೆ ಅರ್ಥಧಾರಿಯಾಗಿ ಹಿರಿಯರ ಜತೆ ಖಾಯಂ ಕಾಣಿಸಿಕೊಂಡರು. ಅದೇ ಉಕ್ಕಿನಡ್ಕ ಶಾಲೆಯಲ್ಲಿ ಅನಿವಾರ್ಯವಾಗಿ ಹರಿಕಥೆಯನ್ನೂ ನಡೆಸಿಕೊಡುವ ಸಂದರ್ಭವು ಒದಗಿತ್ತು. ಮೊದಲ ಪ್ರಯೋಗದಲ್ಲೇ ಯಶಸ್ವಿಯಾದುದು ಮಾತ್ರವಲ್ಲ, ಆರು ತಿಂಗಳೊಳಗೆ ಶಾಲೆ, ದೇವಸ್ಥಾನ, ಮನೆಗಳಲ್ಲಿ ನೂರಕ್ಕೂ ಹೆಚ್ಚು ಹರಿಕಥೆಗಳನ್ನು ನಡೆಸುವಂತಾಗಿತ್ತು. ಗಾಳಿಗೆ ಸಿಕ್ಕ ಕಸ್ತೂರಿಯ ಪರಿಮಳವು ಹರಡಿದಂತೆ ಶೇಣಿಯವರ ಹರಿಕಥೆಯ ಕೀರ್ತಿಯು ಎಲ್ಲೆಡೆ ಪ್ರಚಾರವನ್ನು ಪಡೆದಿತ್ತು.

1944ರಲ್ಲಿ ಮೇಘನಾದ ವಿಜಯ ಎಂಬ ಪ್ರಸಂಗ ರಚನೆ. 1945ರಲ್ಲಿ ಶೇಣಿಯಿಂದ ತೆರಳಿ ಕಾಸರಗೋಡಿನಲ್ಲಿ ನೆಲೆಸಿದ್ದರು. ಆದರೂ ಶೇಣಿ ಗೋಪಾಲಕೃಷ್ಣ ಭಟ್ ಎಂದೇ ಕರೆಸಿಕೊಂಡರು. ಮೈಸೂರು, ಕಲ್ಲಿಕೋಟೆ ಮೊದಲಾದೆಡೆ ಹರಿಕಥೆಗಳನ್ನು ನಡೆಸಿ ಹರಿದಾಸರೆಂಬ ಖ್ಯಾತಿಗೆ ಪಾತ್ರರಾದರು. ಆ ವೇಳೆಗಾಗಲೇ ಗೃಹಣಿ, ರಾಮಾಂಜನೇಯ, ಮಾತೃಭಕ್ತಿ ಎಂಬ ನಾಟಕಗಳನ್ನು ಬರೆದಿದ್ದರು. ಇವೆಲ್ಲವೂ ಪ್ರದರ್ಶಿಸಲ್ಪಟ್ಟಿತ್ತು. ಇವುಗಳಲ್ಲಿ ಮಾತೃಭಕ್ತಿ ಎಂಬ ನಾಟಕವು ಅಚ್ಚಾಗಿ ಪ್ರಕಟವಾಗಿತ್ತು. ಮೈಸೂರು ಕಲ್ಲಿಕೋಟೆಯಿಂದ ಮರಳಿದ ಬಳಿಕ ತಾಳಮದ್ದಳೆ ಅರ್ಥಧಾರಿಯಾಗಿ ತೊಡಗಿಸಿಕೊಂಡರು. ಕವಿಭೂಷಣ ವೆಂಕಪ್ಪ ಶೆಟ್ಟಿ, ಕೀರಿಕ್ಕಾಡು ಮಾಸ್ತರ್ ಮೊದಲಾದ ಹಿರಿಯರೊಂದಿಗೆ ಅರ್ಥಗಾರಿಕೆಯಲ್ಲಿ ತೊಡಗಿ ಬೆಳೆಯುತ್ತಾ ಸಾಗಿದ್ದರು. ಇವರ ಗರಡಿಯಲ್ಲಿ ನಾನು ಕಲಿತು ಪಳಗಿದೆನೆಂದು ಶೇಣಿಯವರು ಹೇಳುತ್ತಿದ್ದರು. ವೆಂಕಪ್ಪ ಶೆಟ್ಟರ ಜೊತೆಯಾಗಿ ಅರ್ಥ ಹೇಳಲು ತೊಡಗಿ, ಪೊಳಲಿ ಶಾಸ್ತ್ರಿಗಳು, ಕುಬಣೂರು ಬಾಲಕೃಷ್ಣ ರಾಯರು, ಮಲ್ಪೆ ಶಂಕರನಾರಾಯಣ ಸಾಮಗ ಮೊದಲಾದ ಹಿರಿಯರ ಜತೆಗೆ ಅರ್ಥ ಹೇಳುವ ಭಾಗ್ಯವೂ ಒದಗಿತ್ತು.

ಕೆ.ಪಿ.ವೆಂಕಪ್ಪ ಶೆಟ್ಟರ ಇಳಿ ವಯಸ್ಸಿನಲ್ಲಿ ಅವರನ್ನು ನೋಡಲು ಕುಬಣೂರು ಬಾಲಕೃಷ್ಣ ರಾಯರೂ ಶೇಣಿಯವರೂ ತೆರಳಿದ ಸಂದರ್ಭದಲ್ಲಿ “ನಾನಿನ್ನು ಮೊದಲಿನಂತಾಗಿ ಅರ್ಥ ಹೇಳಲು ಸಾಧ್ಯತೆಯಿದೆಯೆಂಬ ಭರವಸೆ ಇಲ್ಲ. ಆದರೆ ಇದೋ ಈ ಶೇಣಿಯನ್ನು ನನ್ನ ಪ್ರತಿನಿಧಿಯಾಗಿ ನಿಮ್ಮ ಕೈಗೆ ಒಪ್ಪಿಸುತ್ತೇನೆ. ಸ್ವಲ್ಪ ದುಡುಕು, ಒಗರಿದೆಯೆಂಬ ದೋಷವನ್ನು ಬಿಟ್ಟರೆ ಈತನನ್ನು ತಿದ್ದಿ ಸರಿ ದಾರಿಯಲ್ಲಿ ನೀವು ನಡೆಸಿಕೊಂಡರೆ ಒಬ್ಬ ಒಳ್ಳೆಯ ಅರ್ಥಧಾರಿಯನ್ನು ನೀವು ಸಂಗ್ರಹಿಸಿದಂತಾದೀತು. ನಾನು ಕಂಡ ಕಿರಿಯರಲ್ಲಿ ನನಗೆ ಭರವಸೆ ಹುಟ್ಟಿಸಿದವರಲ್ಲಿ ಈತನೇ ಮೊದಲಿಗನೆಂದು ಈ ಮಾತನ್ನು ಹೇಳುತ್ತಿದ್ದೇನೆ” ಕೆ.ಪಿ.ವೆಂಕಪ್ಪ ಶೆಟ್ಟರು ಕುಬಣೂರು ಬಾಲಕೃಷ್ಣ ರಾಯರಲ್ಲಿ ಹೇಳಿದ ಮಾತಿದು. ಶೇಣಿಯವರಿಗೆ ಬೇರೆ ಪ್ರಮಾಣ ಪತ್ರ ಬೇಕೇ?

ಅವರ ಮಾತು ಹುಸಿಯಾಗಲಿಲ್ಲ. ಕುಬಣೂರು ಬಾಲಕೃಷ್ಣ ರಾಯರ ತಂಡವು ಕಡತೋಕಾ ಮಂಜುನಾಥ ಭಾಗವತರ ಕೇಳಿಕೆಯಂತೆ ಉತ್ತರ ಕನ್ನಡದಾದ್ಯಂತ ನಡೆಸಿಕೊಟ್ಟ ತಾಳಮದ್ದಳೆಗಳಲ್ಲಿ ಶೇಣಿಯವರು ಹೊಳೆದು ಕಾಣಿಸಿಕೊಂಡಿದ್ದರು. ಕೂಡ್ಲು ಮೇಳದ ಪ್ರದರ್ಶನ. ಕೃಷ್ಣ ಸಂಧಾನ ಪ್ರಸಂಗ. ಶಂಕರನಾರಾಯಣ ಸಾಮಗರ ಕೌರವ. ಶೇಣಿಯವರು ಶ್ರೀಕೃಷ್ಣನಾಗಿ ಕಾಣಿಸಿಕೊಂಡು ವೇಷಧಾರಿಯಾಗಿ ರಂಗಪ್ರವೇಶ ಮಾಡಿದರು. ಇದಕ್ಕಿಂತ ಮೊದಲು ಕೆಲವು ಬಾರಿ ಯಕ್ಷಗಾನ ನಾಟಕಗಳಲ್ಲಿ ವೇಷ ಮಾಡಿದ್ದರಂತೆ. ಬಳಿಕ ಧರ್ಮಸ್ಥಳ ಮೇಳದಲ್ಲೂ ಸಾಮಗರು ಮತ್ತು ಶೇಣಿಯವರು ಅತಿಥಿ ಕಲಾವಿದರಾಗಿ ಭಾಗವಹಿಸಿದ್ದರು. ಇವರುಗಳ ಪ್ರವೇಶದಿಂದ ನೇಪಥ್ಯವನ್ನು ಸೇರಿಕೊಂಡಿದ್ದ ರಾವಣವಧೆ, ವಾಲಿವಧೆ, ಮಾಗದವಧೆ ಮೊದಲಾದ ಪ್ರಸಂಗಗಳು ಮತ್ತೆ ಪ್ರದರ್ಶನಗೊಂಡವು. ಹರಿದಾಸರಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ವೇಷಧಾರಿಯಾಗಿ ಶ್ರೀ ಶೇಣಿಯವರ ಕಲಾಬದುಕು ವಿಜೃಂಭಿಸುತ್ತಾ ಮುನ್ನಡೆಯಿತು. 

ಭಾಷಾವಾರು ಪ್ರಾಂತ್ಯಗಳು ರಚನೆಯಾದಾಗ ಕಾಸರಗೋಡು ಕರ್ನಾಟಕದ ಕೈತಪ್ಪಿ ಕೇರಳಕ್ಕೆ ಸೇರಿ ಹೋಗಿತ್ತು. ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಗುರಿಯನ್ನು ಹೊಂದಿ ಎರಡು ಶತಮಾನಗಳ ಭವ್ಯ ಇತಿಹಾಸವುಳ್ಳ ಕೂಡ್ಲು ಮೇಳವನ್ನು ಬೆಳೆಸಿ ಕರ್ನಾಟಕದಾದ್ಯಂತ ತಿರುಗಾಟ ನಡೆಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಇದು ಕೂಡ್ಲು ಶಾನುಭಾಗ ಮನೆಯವರ ನಿರ್ಣಯ. ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಭಾ ಎಂಬ ಹೆಸರಿನಲ್ಲಿ ಶೇಣಿಯವರ ಸಂಚಾಲಕತ್ವದಲ್ಲಿ ಮೇಳವು ತಿರುಗಾಟಕ್ಕೆ ಹೊರಟಿತ್ತು. ಹೀಗೆ ಸಂಘಟಕನಾಗಿಯೂ ಕಾಣಿಸಿಕೊಂಡರು.

ಮೂರು ವರ್ಷಗಳ ಕಾಲ ಮೇಳದ ಸಂಚಾಲಕರಾಗಿ ಮತ್ತು ಕಲಾವಿದರಾಗಿ ಕೂಡ್ಲು ಮೇಳದಲ್ಲಿ ತಿರುಗಾಟ. ಬಳಿಕ ಕಸ್ತೂರಿ ಪೈ ಸಹೋದರರ ಕೇಳಿಕೆಯಂತೆ ಸುರತ್ಕಲ್ ಮೇಳಕ್ಕೆ. ಬಳಿಕ ಕಲ್ಲಾಡಿ ಕೊರಗ ಶೆಟ್ಟರ ಆಹ್ವಾನದಂತೆ ಕುಂಡಾವು ಮೇಳಕ್ಕೆ. ಒಂದು ವರ್ಷ ತಿರುಗಾಟ. ಮತ್ತೆ ಕೂಡ್ಲು ಮೇಳದಲ್ಲಿ ಮೂರು ತಿರುಗಾಟ. ಬಳಿಕ ಒಂದು ವರ್ಷ ಧರ್ಮಸ್ಥಳ ಮೇಳದಲ್ಲಿ. ಮತ್ತೆ ಪುನಃ ಒಂದು ವರ್ಷ ಕುಂಡಾವು ಮೇಳದಲ್ಲಿ. ಬಳಿಕ ಕಸ್ತೂರಿ ವಾಸುದೇವ ಪೈ ಸಹೋದರರ ಸುರತ್ಕಲ್ ಮೇಳದಲ್ಲಿ ತಿರುಗಾಟ. ಅಗರಿಯವರ ಭಾಗವತಿಕೆಯಲ್ಲಿ ಹೆಸರಾಂತ ಕಲಾವಿದರ ತಂಡ. ನಿವೃತ್ತಿಯ ತನಕವೂ ಸುರತ್ಕಲ್ ಮೇಳದಲ್ಲಿ ಕಲಾವ್ಯವಸಾಯ.

ವೇಷಧಾರಿಯಾಗಿ ತಾಳಮದ್ದಳೆ ಅರ್ಥಧಾರಿಯಾಗಿ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಸಾಧನೆ, ಅವರು ಗಳಿಸಿದ ಕೀರ್ತಿಯ ಬಗೆಗೆ ಎಲ್ಲರಿಗೂ ತಿಳಿದಿದೆ. ರಾಜ್ಯ ಪ್ರಶಸ್ತಿ, ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿ, ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ, ಹೀಗೆ ಪಡೆದ ಗೌರವಗಳು ಅನೇಕ. ಶೇಣಿಯವರು ಬರೆದ ಪ್ರಸಂಗಗಳಲ್ಲಿ ಒಂದಾದ ‘ಶ್ರೀಮತಿ ಪರಿಣಯ’ ಪ್ರಸಂಗ ಪುಸ್ತಕದಲ್ಲಿ ಶೇಣಿಯವರು ಬರೆದ ಪ್ರಸಂಗಗಳು, ನಾಟಕಗಳು, ಕೃತಿಗಳು ಮತ್ತು ಅವರ ಕುರಿತಾಗಿ ಪ್ರಕಟಗೊಂಡ ಕೃತಿಗಳ ವಿವರಗಳಿವೆ. ಕರ್ನಾಟಕ ಮತ್ತು ಕೇರಳ ಉಭಯ ರಾಜ್ಯಗಳು ಕೊಡಮಾಡುವ ರಾಜ್ಯಪ್ರಶಸ್ತಿಗಳನ್ನು ಪಡೆದ ಯಕ್ಷಗಾನ ಕಲಾವಿದರು ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರು. ಶ್ರೀಯುತರ ಜೀವಿತಾವಧಿ 1918-2006. ದಿನಾಂಕ 08.06.2006ರಂದು ಶೇಣಿಯವರು ಈ ಲೋಕದ ಯಾತ್ರೆಯನ್ನು ಮುಗಿಸಿದರು. ಯಕ್ಷರಂಗದ ಭೀಷ್ಮ ದಿ| ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ನುಡಿನಮನಗಳು. 

ಲೇಖಕ: ರವಿಶಂಕರ್ ವಳಕ್ಕುಂಜ 

ಯಕ್ಷ ಕಲಾ ಅಕಾಡೆಮಿಯಲ್ಲಿ ತಾಳಮದ್ದಳೆ – ವಾಲಿ ವಧೆ

ವಿಶ್ವ ರಂಗಭೂಮಿಯ ದಿನದ ಪ್ರಯುಕ್ತ, ಬೆಂಗಳೂರಿನ ಯಕ್ಷ ಕಲಾ ಅಕಾಡೆಮಿಯು ವಿಶೇಷ ಕಾರ್ಯಕ್ರಮ‌ವನ್ನು ಹಮ್ಮಿಕೊಂಡಿದೆ. ವಿಶ್ವ ರಂಗಭೂಮಿಯ ದಿನದ ಅಂಗವಾಗಿ ಮಾರ್ಚ್ 28ರಂದು ಯಕ್ಷ ಕಲಾ ಅಕಾಡೆಮಿಯ ಆವರಣದಲ್ಲಿ “ವಾಲಿ ವಧೆ ” ಎಂಬ ಪೌರಾಣಿಕ ಪ್ರಸಂಗದ ತಾಳಮದ್ದಳೆಯನ್ನು ಸಂಸ್ಥೆಯ ಕಲಾವಿದರು ನಡೆಯಿಸಿ ಕೊಡಲಿದ್ದಾರೆ.      

ಭಾಗವತಿಕೆ‌ಯಲ್ಲಿ, ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ, ಗುರು ಕೋಟ ಕೃಷ್ಣ ಮೂರ್ತಿ ತುಂಗ, ಹಾಗೂ ಕುಮಾರಿ ಚಿತ್ಕಲಾ ಕೆ. ತುಂಗ, ಮದ್ದಳೆಯ‌ಲ್ಲಿ ರಾಘು ಶರ್ಮಾ, ಮುಮ್ಮೇಳದಲ್ಲಿ, ರವಿ ಮಡೋಡಿ, ಮನೋಜ್ ಭಟ್, ಆದಿತ್ಯ ಉಡುಪ, ಶಶಾಂಕ್ ಕಾಶಿ, ಸುಹಾಸ ಕರಬ, ಪ್ರದೀಪ ಮಧ್ಯಸ್ಥ, ಆದಿತ್ಯ ಹೊಳ್ಳ, ಸದಾಶಿವ ತುಂಗ, ಶ್ರೀ ನಿಧಿ ಎಂ.ಎಸ್., ವಾಸುದೇವ, ಶ್ರೀಮತಿ ಅರ್ಚನಾ, ಶ್ರೀ‌ಮತಿ ಚೇತನಾರವರು ಭಾಗವಹಿಸಲಿದ್ದಾರೆ ಎಂದು ಯಕ್ಷ ಕಲಾ ಅಕಾಡೆಮಿಯ ಕಾರ್ಯದರ್ಶಿ ಕೆ.ಅನಸೂಯಾರವರು ತಿಳಿಸಿದ್ದಾರೆ.

ಸರಕಾರದ ಕೋವಿಡ್ ನಿಯಮಗಳನ್ನು ಅನುಸರಿಸಿ ಕಾರ್ಯ‌ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೇಳಗಳ ಇಂದಿನ ( 28.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 28.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ನೂಜಾಡಿ ಹೊಟ್ಲುಬೈಲು – ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ 

ಕಟೀಲು ಒಂದನೇ ಮೇಳ ==  ಮೂಡುಪೆರಾರ ಚರ್ಚ್ ಬಳಿ ವಯಾ ಗಂಜಿಮಠ  

ಕಟೀಲು ಎರಡನೇ ಮೇಳ ==   ಮೂಡುಕಟ್ಟೆ ಶಾಲೆ, ಪದವು ಶ್ರೀ ಶನೀಶ್ವರ ಕಟ್ಟೆ ಬಳಿ  

ಕಟೀಲು ಮೂರನೇ ಮೇಳ= ಕುಡುಂಬೂರು ಬೈಕಂಪಾಡಿ 

ಕಟೀಲು ನಾಲ್ಕನೇ ಮೇಳ  ==  ಕಾರಿಯಾನಮನೆ ಅಟ್ಲಾಜೆ ಶಾಲಾ ಬಳಿ, ಪಡಂಗಡಿ ವಯಾ ವೇಣೂರು 

ಕಟೀಲು ಐದನೇ ಮೇಳ ==  ಪರಣೆ ಮನೆ ಸವಣೂರು, ತುಲಸಿಪುರಂ ಪರಣೆ  

ಕಟೀಲು ಆರನೇ ಮೇಳ == ಪಾದೆಲಚ್ಚಿಲ್ ಸಂಕಲಕರಿಯ ವಯಾ ಮೂರುಕಾವೇರಿ ಕಿನ್ನಿಗೋಳಿ 

ಮಂದಾರ್ತಿ ಒಂದನೇ ಮೇಳ  == ಮಳೂರು ದೇವಂಗಿ 

ಮಂದಾರ್ತಿ ಎರಡನೇ ಮೇಳ   == ಶ್ರೀ ನಂದಾದೀಪ ನಿಲಯ, ಹೆಸ್ಕುತ್ತೂರು   

ಮಂದಾರ್ತಿ ಮೂರನೇ ಮೇಳ  ==  ಬೀರನಹಳ್ಳಿ ಶಿವಮೊಗ್ಗ 

ಮಂದಾರ್ತಿ ನಾಲ್ಕನೇ ಮೇಳ   ==  ಹರ್ಕಾಡಿ ದೊಡ್ಮನೆ ಕಕ್ಕುಂಜೆ 

ಮಂದಾರ್ತಿ    ಐದನೇ ಮೇಳ  ==  ನೆಲ್ಲಿಕಟ್ಟೆ , ಜೆಡ್ಡಿನಸಾಲು ಸೂರಾಲು 

ಶ್ರೀ ಹನುಮಗಿರಿ ಮೇಳ  ==  ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್ – ಶ್ರೀ ದೇವಿ ಮಹಾತ್ಮೆ (ಸಂಜೆ 6 ರಿಂದ)

ಶ್ರೀ ಸಾಲಿಗ್ರಾಮ ಮೇಳ == ಕನ್ನಾರು ಚೇರ್ಕಾಡಿ – ಕುಶಲವ (ಕಾಲಮಿತಿ)

ಶ್ರೀ ಪೆರ್ಡೂರು ಮೇಳ == ಉಜಿರೆ ಜನಾರ್ದನ ದೇವಸ್ಥಾನದ ರಥಬೀದಿ – ಶೂದ್ರ ತಪಸ್ವಿನಿ (ಸಂಜೆ 6.30ರಿಂದ)

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಶ್ರೀ ಲೋಕನಾಥೇಶ್ವರ ದೇವಸ್ಥಾನ ಹಟ್ಟಿಯಂಗಡಿ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಶಾರಾಳ ಕರ್ಕುಂಜೆ 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಶ್ರೀ ಭದ್ರಮಹಾಕಾಳಿ ದೇವಸ್ಥಾನ ವಠಾರ ಕಟ್ ಬೇಲ್ತೂರು 

ಶ್ರೀ ಪಾವಂಜೆ ಮೇಳ  ==  ಕುಂಭಾಶಿ ಆನೆಗುಡ್ಡೆ – ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ  (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಕದ್ಕೆ ಬಡಾನಿಡಿಯೂರು (ಕಾಲಮಿತಿ ರಾತ್ರಿ 8.30ರಿಂದ, ನಿನ್ನೆ ನಡೆಯಬೇಕಾಗಿದ್ದ ಆಟ ಇಂದು)

ಕಮಲಶಿಲೆ ಮೇಳ ‘ಎ‘ = ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹೊಳೆಕೋಣು ಹೋಳಿ ಹುಣ್ಣಿಮೆಯ ಪ್ರಯುಕ್ತ 

ಕಮಲಶಿಲೆ ಮೇಳ ‘ಬಿ‘ ==  ಮಾತೃಶ್ರೀ ಸ್ವಸಹಾಯ ಸಂಘ, ಹುಣಸೆಕಟ್ಟೆ, ಕೈಲ್ ಕೆರೆ 

ಶ್ರೀ ಬಪ್ಪನಾಡು ಮೇಳ == ಅಜ್ಜಿನಡ್ಕ ಗಡಿಕಲ್ಲ್ – ಬಂಗಾರ್ ಬಾಲೆ (ತುಳು)

ಶ್ರೀ ಸಸಿಹಿತ್ಲು ಭಗವತೀ ಮೇಳ == ನಿಡ್ಡೋಡಿ ಇಂದಿರಾನಗರ – ಕಂಚೀಲ್ದ ಪರಕೆ (ತುಳು)

ಶ್ರೀ ಅಮೃತೇಶ್ವರೀ ಮೇಳ ==  ಮೇಲ್ಮನೆ ಚಾರುಕೊಟ್ಟಿಗೆ ಕೊರ್ಗಿ 

ಶ್ರೀ ಬೋಳಂಬಳ್ಳಿ ಮೇಳ==  ಕಿರುಹೊಳೆ ಮಹಾಸತಿ ದೇವಸ್ಥಾನ ಗೊರಟೆ (ಕಾಲಮಿತಿ)

ಶ್ರೀ ಸೌಕೂರು ಮೇಳ ==  ಗುಲ್ವಾಡಿ ಆಂಜನೇಯ ದೇವಸ್ಥಾನ ಬಳಿ -ಬೇಲ್ತೂರು ಕ್ಷೇತ್ರ ಮಹಾತ್ಮೆ 

ಶ್ರೀ ಹಾಲಾಡಿ ಮೇಳ == ನೂಲೇರಿನಗರ – ನೂತನ ಪ್ರಸಂಗ  

ಶ್ರೀ ಬೆಂಕಿನಾಥೇಶ್ವರ ಮೇಳ  ==  ಬಾರಕೂರು ಹೊಸಾಳ ಶಾಲಾ ಮೈದಾನ – ಸತ್ಯೊದ ಸ್ವಾಮಿ ಕೊರಗಜ್ಜ (ಕನ್ನಡ)

ಶ್ರೀ ಮಡಾಮಕ್ಕಿ ಮೇಳ == ಅರಸಮ್ಮಕಾನು ದೊಡ್ದಬೆಳಾರು ಶ್ರೀ ಓಂಕಾರ ನಿಲಯ – ಭೀಷ್ಮ ವಿಜಯ, ರತಿಕಲ್ಯಾಣ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಗುಬ್ ಗೋಡ್ ಶ್ರೀ ಸಿದ್ಧಿವಿನಾಯಕ ದೇವಸ್ಥಾನ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಕನ್ನಾರು ಚೇರ್ಕಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ – ಪವಿತ್ರ ಫಲ್ಗುಣಿ 

ಶ್ರೀ ಶನೀಶ್ವರ ಮೇಳ == ಕಟ್ಟೆ ಗಣಪತಿ ದೇವಸ್ಥಾನ ಬಗ್ವಾಡಿ  

ಶ್ರೀ ಸಿಗಂದೂರು ಮೇಳ == ನಾಗೂರು ಕುಂಜಾಣಗುಡ್ಡೆ 

ಶ್ರೀ ನೀಲಾವರ ಮೇಳ  == ದೊಡ್ಡನಗುಡ್ಡೆ ಅಶ್ವತ್ಥಕಟ್ಟೆ ಬಳಿ 

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಆಲ್ಮನೆ 

ಶ್ರೀ ಮೇಗರವಳ್ಳಿ ಮೇಳ == ಕಾಜ್ರಳ್ಳಿ ಶ್ರೀ ವನದುರ್ಗಾ ದೇವಸ್ಥಾನ – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ 

ಭಾಗವತರ ಔಷಧೋಪಚಾರಕ್ಕೆ ಕಲಾಭಿಮಾನಿ ಬಳಗದ ನೆರವು – ಕಲಾವಿದರ ಬದುಕಿಗೆ ಅಭಿಮಾನಿಗಳ ಶ್ರೀರಕ್ಷೆ : ಪುರುಷೊತ್ತಮ ಪೂಂಜ

‘ಬಾಯಿಮಾತಿನ ಅಭಿಮಾನದಿಂದಲೇ ಸಂತೃಪ್ತಿ ಪಡೆಯುವುದು ಕಲಾವಿದರ ಸ್ವಭಾವ. ಆದರೆ ಅಂತಹ ಅಭಿಮಾನ ದೃಢವಾಗುವುದು ಕಲಾವಿದರು ಸಂಕಷ್ಟದಲ್ಲಿದ್ದಾಗ ಮಾತ್ರ. ಯಾರಿಂದಲೂ ಏನನ್ನೂ ನಿರೀಕ್ಷಿಸದೆ ಯಕ್ಷಗಾನ ರಂಗದಲ್ಲಿ ಪ್ರಾಮಾಣಿಕವಾಗಿ ದುಡಿದ ತನಗೆ ನಾಡು – ಹೊರನಾಡುಗಳಲ್ಲಿ ಅಸಂಖ್ಯ ಸಂಖ್ಯೆಯ ಅಜ್ಞಾತ ಅಭಿಮಾನಿಗಳಿರುವುದು ಮನದಟ್ಟಾಗುತ್ತಿದೆ. ಅವರ ಸಾಂತ್ವನದ ಮಾತುಗಳು, ಹಣಕಾಸಿನ ನೆರವು ಶ್ರೀರಕ್ಷೆಯಾಗಿ ಬದುಕಿನ ಬಗ್ಗೆ ಭರವಸೆ ಮೂಡಿಸಿದೆ ‘ ಎಂದು ಯಕ್ಷಗಾನದ ಹಿರಿಯ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೊತ್ತಮ ಪೂಂಜ ಹೇಳಿದ್ದಾರೆ.         

ರಕ್ತ ಸಂಬಂಧಿಯಾದ ಗಂಭೀರ ಕಾಯಿಲೆಗೆ ಒಳಗಾಗಿ ನಗರದ ಕದ್ರಿ ಕಂಬಳದ ತಾತ್ಕಾಲಿಕ ನಿವಾಸದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಔಷಧೋಪಚಾರಕ್ಕಾಗಿ ಮುಂಬೈ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ನೀಡಲಾದ ಆರ್ಥಿಕ ನೆರವನ್ನು ಸ್ವೀಕರಿಸಿ ಪುರುಷೋತ್ತಮ ಪೂಂಜ ಮಾತನಾಡಿದರು.       

ಈಗಾಗಲೇ ಮೊದಲ ಹಂತದಲ್ಲಿ ರೂ 1 ಲಕ್ಷದ ಮೊತ್ತವನ್ನು ಚಿಕಿತ್ಸೆಗಾಗಿ ನೀಡಿದ್ದ ಕಲಾಭಿಮಾನಿ ಬಳಗ, ಎರಡನೇ ಸುತ್ತಿನಲ್ಲಿ ಮುಂಬಯಿ ಹಾಗೂ ಊರಿನ ದಾನಿಗಳಿಂದ ಸಂಗ್ರಹಿಸಿದ ರೂಪಾಯಿ 75 ಸಾವಿರ ನಿಧಿಯನ್ನು ಅವರಿಗೆ ಹಸ್ತಾಂತರಿಸಿತು. ಈ ನಿಧಿಗೆ ಮುಂಬೈ ಹೋಟೆಲ್ ಪಾಪಿಲ್ಲೋನ್ ನ ರಘು ಎಲ್. ಶೆಟ್ಟಿ , ಕೊಟ್ರಪ್ಪಾಡಿ ಲಕ್ಷ್ಮೀಜನಾರ್ಧನ ಬ್ರಹ್ಮಸಿರಿ ಕಲಾ ಬಳಗದ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ಕೊಟ್ರಪಾಡಿ, ಅಜೆಕಾರು ಕಲಾಭಿಮಾನಿ ಬಳಗದ ಪ್ರಾದೇಶಿಕ ಸಮಿತಿ ಅಧ್ಯಕ್ಷ ವಿಜಯ್ ಶೆಟ್ಟಿ ಅಜೆಕಾರು, ಶ್ರೀ ಶನೇಶ್ಚರ ಸೇವಾ ಸಮಿತಿ ಬಟ್ಟಿಪಾಡ ಭಾಂಡೂಪ್, ಶ್ರೀ ನಾರಾಯಣ ಗುರು ಭಜನಾ ಮಂಡಳಿ ಭಟ್ಟಿಪಾಡ, ಅಡ್ವೋಕೇಟ್ ಶೇಖರ್ ಆರ್. ಶೆಟ್ಟಿ ಮುಂಬೈ ಮತ್ತು ಅಡ್ವೋಕೇಟ್ ದಯಾನಂದ್ ಕೆ.ಶೆಟ್ಟಿ ಮುಂಬಯಿ ದೇಣಿಗೆಯಿತ್ತು ಸಹಕರಿಸಿದ್ದರು.

ನೆರವಿನ ಹಸ್ತ ದೊರೆಯಲಿ: ದಾನಿಗಳ ಪರವಾಗಿ ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ ನಿಧಿ ಸಮರ್ಪಣೆ ಮಾಡಿದರು. ಬಳಗದ ಸಲಹೆಗಾರ ಮತ್ತು ಯಕ್ಷಗಾನ ಅರ್ಥಧಾರಿ  ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಯಕ್ಷಗಾನ ರಂಗಕ್ಕೆ ಪೂಂಜರ ಕೊಡುಗೆಯನ್ನು ವಿವರಿಸಿ ಅವರು ಶೀಘ್ರ ಗುಣಮುಖರಾಗುವಂತೆ ಹಾರೈಸಿದರು. ‘ಈ ಅಪರೂಪದ ಕಾಯಿಲೆಗೆ ಹೊರದೇಶದಿಂದ ದುಬಾರಿ ಔಷಧಿಗಳನ್ನು ತರಿಸಿ ಚಿಕಿತ್ಸೆ  ನೀಡಬೇಕಾದ್ದರಿಂದ ಭಾಗವತರನ್ನು ಮೊದಲಿನಂತಾಗಿಸಲು ಇನ್ನಷ್ಟೂ ನೆರವಿನ ಹಸ್ತಗಳು ಒದಗಿ ಬರಬೇಕು’ ಎಂದವರು ನುಡಿದರು. ಈ ಸಂದರ್ಭದಲ್ಲಿ ಕಾರ್ಕಳದ ಉದ್ಯಮಿ ವಿಜಯ ಶೆಟ್ಟಿ ಅಜೆಕಾರು  ಮತ್ತು ಪೂಂಜರ ಧರ್ಮಪತ್ನಿ ಶೋಭಾ ಪೂಂಜ ಉಪಸ್ಥಿತರಿದ್ದರು.

‘ಸಂಸ್ಕೃತಿ’ ಕಾವು ಇಲ್ಲಿ ಇಂದು ‘ಭಕ್ತ ಅಂಬರೀಷ, ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ’ ಯಕ್ಷಗಾನ ಬಯಲಾಟ 

‘ಸಂಸ್ಕೃತಿ’ ಕಾವು ಇಲ್ಲಿ ಇಂದು ‘ಭಕ್ತ ಅಂಬರೀಷ, ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ’ ಯಕ್ಷಗಾನ ಬಯಲಾಟ ನಡೆಯಲಿದೆ. 

ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ಮಕ್ಕಳು,  ‘ಸಂಸ್ಕೃತಿ’ ಕಾವು, ಪುತ್ತೂರು  ಇವರ ಸಂಯೋಜನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರು ರಾತ್ರಿ 9.30ಕ್ಕೆ ಸರಿಯಾಗಿ  ‘ಭಕ್ತ ಅಂಬರೀಷ, ವಿರೋಚನ ಕಾಳಗ, ಭಕ್ತ ಮಾರ್ಕಂಡೇಯ’ ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ.   

ಮೇಳಗಳ ಇಂದಿನ ( 27.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಮೇಳಗಳ ಇಂದಿನ ( 27.03.2021) ಯಕ್ಷಗಾನ ಪ್ರದರ್ಶನಗಳ ವಿವರ

ಶ್ರೀ ಧರ್ಮಸ್ಥಳ ಮೇಳ ==  ಕಾವ್ರಾಡಿ ನೆಲ್ಲಿಕಟ್ಟೆ ಗಿರಿಜಾ ಟೈಲ್ಸ್ ಆವರಣ – ಮಾನಿಷಾದ, ಕುಶ ಲವ 

ಕಟೀಲು ಒಂದನೇ ಮೇಳ ==  ಅಡ್ಯಾರು ಮಂಗಳೂರು 

ಕಟೀಲು ಎರಡನೇ ಮೇಳ ==   ಆಶ್ರಯ, ಪಡುಬೊಂಡಂತಿಲ ವಯಾ ನೀರುಮಾರ್ಗ 

ಕಟೀಲು ಮೂರನೇ ಮೇಳ= ತಾರಿಕಂಬಳ ಬಜಪೆ 

ಕಟೀಲು ನಾಲ್ಕನೇ ಮೇಳ  ==  ಶ್ರೀ ಕ್ಷೇತ್ರ ಪಾರೆಂಕಿ ಬೆಳ್ತಂಗಡಿ 

ಕಟೀಲು ಐದನೇ ಮೇಳ == ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ಮಕ್ಕಳು,  ‘ಸಂಸ್ಕೃತಿ’ ಕಾವು, ಪುತ್ತೂರು  

ಕಟೀಲು ಆರನೇ ಮೇಳ == ರಾಜ್ ಟೈಲ್ಸ್ ಗುರುಪುರ 

ಮಂದಾರ್ತಿ ಒಂದನೇ ಮೇಳ  == ಕನ್ನಂಗಿ ತೀರ್ಥಳ್ಳಿ 

ಮಂದಾರ್ತಿ ಎರಡನೇ ಮೇಳ   ==  ಕುಂಜೂರುಕಲ್ಮನೆ ಕುದಿ ಬೈದೆಬೆಟ್ಟು  

ಮಂದಾರ್ತಿ ಮೂರನೇ ಮೇಳ  ==  ಹರಿಹರನಿಲಯ ಶೆಡ್ಡಿನಮನೆ ಹುಲ್ ಮಕ್ಕಿಕೊಪ್ಪ  

ಮಂದಾರ್ತಿ ನಾಲ್ಕನೇ ಮೇಳ   ==  ಶಿರೂರು, ಮೇಗರವಳ್ಳಿ    

ಮಂದಾರ್ತಿ    ಐದನೇ ಮೇಳ  ==  ಹುಬ್ಬಾರಿ ನಾರ್ಕಳಿ ಹರ್ಕೂರು   

ಶ್ರೀ ಹನುಮಗಿರಿ ಮೇಳ  ==  ಮೂಡುಬಿದ್ರೆ ಸ್ವರಾಜ್ ಮೈದಾನ – ಕಲ್ಯಾಣತ್ರಯ (ರಾತ್ರಿ 10ರಿಂದ)

ಶ್ರೀ ಸಾಲಿಗ್ರಾಮ ಮೇಳ == ಬೀಜಾಡಿ ನಂದಿಕೇಶ್ವರ ಫ್ರೆಂಡ್ಸ್ – ಬಿಚ್ಚುಗತ್ತಿ ಭರಮಣ್ಣ 

ಶ್ರೀ ಪೆರ್ಡೂರು ಮೇಳ == ಭಗವತಿಕೃಪ, ಕೆಂಜರ್ ಜೆಡ್ಡು – ಬ್ರಹ್ಮ ಕಪಾಲ, ಚಿತ್ರಾಕ್ಷಿ ಕಲ್ಯಾಣ (ಸಂಜೆ 7ರಿಂದ)

ಶ್ರೀ ಸುಂಕದಕಟ್ಟೆ ಮೇಳ  ==   ಕೂಳೂರು ಗೋಪಿ ನಿಲಯ – ಕೋಟಿ ಚೆನ್ನಯ 

ಶ್ರೀ ಮಾರಣಕಟ್ಟೆ ಮೇಳ ‘ಎ‘ == ಮೇಲ್ಮನೆ ಕಿರಿಮಂಜೇಶ್ವರ 

ಶ್ರೀ ಮಾರಣಕಟ್ಟೆ ಮೇಳ ‘ಬಿ ==   ಮುಟ್ಟೋಣ್ಕಿಜೆಡ್ಡು ಚಿತ್ತೂರು 

ಶ್ರೀ ಮಾರಣಕಟ್ಟೆ ಮೇಳ ‘ಸಿ == ಗೌರಜ್ಜಿಮನೆ, ಕೊಡೇರಿ ಗಂಗಬೈಲು 

ಶ್ರೀ ಪಾವಂಜೆ ಮೇಳ  ==  ಅಲ್ಸೇಕೆರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಶ್ರೀ  ದೇವಿ ಲಲಿತೋಪಾಖ್ಯಾನ (ಸಂಜೆ 6.45ರಿಂದ ರಾತ್ರಿ 12)

ಶ್ರೀ ಹಟ್ಟಿಯಂಗಡಿ ಮೇಳ == ಕದ್ಕೆ ಬಡಾನಿಡಿಯೂರು (ಕಾಲಮಿತಿ ರಾತ್ರಿ 8.30ರಿಂದ)

ಕಮಲಶಿಲೆ ಮೇಳ ‘ಎ‘ = ಶ್ರೀ ಗಣಪತಿ ದೇವಸ್ಥಾನ, ಕೆ.ಜಿ.ರೋಡ್ ಉಪ್ಪೂರು 

ಕಮಲಶಿಲೆ ಮೇಳ ‘ಬಿ‘ ==  ಶಾಲೆಗುಡ್ಡಿ, ಕಾರೇಬೈಲು 

ಶ್ರೀ ಬಪ್ಪನಾಡು ಮೇಳ == ವಿವೇಕನಗರ ಗಂಜಿಮಠ, ಮೂಡುಪೆರಾರ – ಅಜ್ಜ ಅಜ್ಜ ಕೊರಗಜ್ಜ 

ಶ್ರೀ ಸಸಿಹಿತ್ಲು ಭಗವತೀ ಮೇಳ == ಮುಳಿಹಿತ್ಲು ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ವಠಾರ (ಮಂಗಳಾದೇವಿ) – ಕೋಟಿ ಚೆನ್ನಯ 

ಶ್ರೀ ಅಮೃತೇಶ್ವರೀ ಮೇಳ ==  ಮಣೂರು ಬಾಳೆಬೆಟ್ಟು 

ಶ್ರೀ ಸೌಕೂರು ಮೇಳ ==  ಕಂಡ್ಲೂರು ರಘುಸನ್ ಟೈಲ್ಸ್ – ಹಳನಾಡು ಕ್ಷೇತ್ರ ಮಹಾತ್ಮೆ  

ಶ್ರೀ ಹಾಲಾಡಿ ಮೇಳ == ನೇರಳಕಟ್ಟೆ ಜಡ್ಡಿನಕೂಡ್ಲು – ಶ್ರೀ ಹಾಲಾಡಿ ಕ್ಷೇತ್ರ ಮಹಾತ್ಮೆ  

ಶ್ರೀ ಬೆಂಕಿನಾಥೇಶ್ವರ ಮೇಳ  ==  ಬಜಾಲ್ ಪೂಂಜಾರಬೆಟ್ಟು ಕೇಶವ ಭಂಡಾರಿಯವರ ಗದ್ದೆ – ಶ್ರೀ ದೇವಿ ರಕ್ತೇಶ್ವರಿ ಮಹಾತ್ಮೆ 

ಶ್ರೀ ಮಡಾಮಕ್ಕಿ ಮೇಳ == ಗುಡ್ಡೆಯಂಗಡಿ ಅಡಿಗಳಬೆಟ್ಟು 5 ಸೆಂಟ್ಸ್ ವಠಾರ – ಪೌರಾಣಿಕ ಪ್ರಸಂಗ 

ಶ್ರೀ ಕ್ಷೇತ್ರ ಗೋಳಿಗರಡಿ ಮೇಳ == ಶೃಂಗೇರಿ ಮಾತುವಳ್ಳಿ ಅಂಗನವಾಡಿ ವಠಾರ – ಮಾಯದ ಗೆಜ್ಜೆ 

ಶ್ರೀ ಹಿರಿಯಡಕ ಮೇಳ == ಕುಂದಾಪುರ ಬಂಕನಗದ್ದೆ ಚರ್ಚ್ ರಸ್ತೆ ನಾಗಯಕ್ಷಿ ರಕ್ತೇಶ್ವರಿ ದೇವಸ್ಥಾನ – ಹಿರಿಯಡಕ ಕ್ಷೇತ್ರ ಮಹಾತ್ಮೆ 

ಶ್ರೀ ಶನೀಶ್ವರ ಮೇಳ ==  ನಾರ್ಕಳಿ ಪಡುಕಟ್ಟೆಮನೆ  

ಶ್ರೀ ಸಿಗಂದೂರು ಮೇಳ == ಅಲ್ತಾರು ತಾಣ 

ಶ್ರೀ ನೀಲಾವರ ಮೇಳ  == ನೀಲಾವರ ಜೀವನಾಧರ ನಗರ – ನೀಲಾವರ ಕ್ಷೇತ್ರ ಮಹಾತ್ಮೆ 

ಶ್ರೀ ಮಂಗಳಾದೇವಿ ಮೇಳ == ವಾಮದಪದವು ರಾಮೊಟ್ಟು ಮೈದಾನ – ಬಾಲೆಮಾನಿ ಮಾಯಂದಾಲ್ (ತುಳು)

ಶ್ರೀ ಚಂಡಿಕೇಶ್ವರಿ ಮೇಳ, ಶ್ರೀ ಕ್ಷೇತ್ರ ಆಲಸೆ, ತೀರ್ಥಹಳ್ಳಿ ==  ಹೊನ್ನಾಳಿ 

ಶ್ರೀ ಮೇಗರವಳ್ಳಿ ಮೇಳ == ಕೊಳಿಗೆ ಗ್ರಾಮಸ್ಥರು – ಮೇಗರವಳ್ಳಿ ಕ್ಷೇತ್ರ ಮಹಾತ್ಮೆ 

ಯಕ್ಷಗಾನ ಕೃತಿ ಸಂಪುಟ – ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಐದು ಪ್ರಸಂಗಗಳ ಸಂಪುಟ

ಕರ್ನಾಟಕ ಯಕ್ಷಗಾನ ಅಕಾಡೆಮಿ  ಇತ್ತೀಚೆಗೆ  ಪ್ರಕಟಿಸಿದ ಕೃತಿ ಕೀರ್ತಿಶೇಷ ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯರ ಐದು ಪ್ರಸಂಗಗಳ ಸಂಪುಟ ಇದು. ಯಕ್ಷಗಾನದ ಮಟ್ಟುಗಳ ಅದ್ಭತ ಸಿದ್ಧಿಯನ್ನು ಎಳವೆಯಲ್ಲೇ ಸಾಧಿಸಿದ ಮಹಾಕವಿಯೊಬ್ಬರ ಕೃತಿಸಂಪುಟವನ್ನು ಪ್ರಕಟಿಸುವುದರ ಮೂಲಕ ಅಕಾಡೆಮಿ ಸ್ತುತ್ಯಕಾರ್ಯವನ್ನೇ ಮಾಡಿದೆ.

ಉಪಾಧ್ಯಾಯರ ಗುರುದ್ರೋಣ, ಬಾಘಟೋತ್ಕಚ ಪ್ರಕಟವಾಗಿ ದಶಕಗಳೇ ಕಳೆದು ಹೋಗಿ ಈಗ ಉಪಲಬ್ಧವೇ ಇರಲಿಲ್ಲ. ಅವರಿನ್ನೂ ಹದಿನೆಂಟನೆಯ ವರ್ಷದವರಿದ್ದಾಗ ಬರೆದ ಧರಣಿಮೋಹಿನಿ ಕಲ್ಯಾಣ ಛಂದೋವಿದ ಡಾ. ನಾರಾಯಣ ಶೆಟ್ಟರಿಗೆ ಅನೇಕ ಮಟ್ಟುಗಳನ್ನು ಸೂಚಿಸಲು ಸಹಕಾರಿಯಾಗದ್ದವು. ಈ ಸಂಪುಟದಲ್ಲಿ ಧರಣಿ ಮೋಹಿನಿ ಕಲ್ಯಾಣ,(1928) ಬಾಲಘಟೋತ್ಕಚ,(1942) ಗುರುದ್ರೋಣ, (ಇದು ಅವರು ರಚಿಸುವಾಗ ಅಪೂರ್ಣವಾಗಿದ್ದು 1980 ರ ಸಮಯಕ್ಕೆ ಅವರ ಪುತ್ರರುಗಳಿಂದ ಪೂರ್ಣವಾಗಿದೆ) ಅಶೋಕಸುಂದರೀ ಕಲ್ಯಾಣ,(1952)ಮೋಹಿನೀ ಕಲಾವಿಲಾಸ (1930) ಹೀಗೆ ದಿ.ಉಪಾಧ್ಯಾಯರ ಎಲ್ಲಾ ಐದು ಪ್ರಸಂಗಗಳು  ಇವೆ.

ಕೊನೆಯ  ಪ್ರಸಂಗ ತಂಬಾಕು, ನಸ್ಯ, ಮದ್ಯ ಮುಂತಾದ ಅಮಲು ಪದಾರ್ಥಗಳ ಕುರಿತ ಕಾಲ್ಪನಿಕ ಪ್ರಸಂಗ. ಎಲ್ಲವೂ ಪೌರಾಣಿಕ ಪಾತ್ರಗಳೇ ಇರುವ ಈ ಪ್ರಸಂಗದಲ್ಲಿ 442 ಪದ್ಯಗಳಿವೆ!.  ಪ್ರಖ್ಯಾತ ರಂಗ ಕರ್ಮಿ, ವಿದ್ವಾಂಸ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಈ ಕೃತಿಯನ್ನು ಸಂಪಾದಿಸಿ ಯಕ್ಷಲೋಕದ ಮುಂದಿಟ್ಟಿದ್ದಾರೆ.

ಯಕ್ಷಗಾನಕ್ಕೊಂದು ಅಪೂರ್ವ ಕೃತಿ ಸಂಪುಟವನ್ನು ನೀಡಿದ ಅಕಾಡೆಮಿಯ ಅಧ್ಯಕ್ಷರಾದ ಪ್ರೊ|ಎಂ ಎ ಹೆಗಡೆಯವರು ಕೃತಿಯನ್ನು ಕುರಿತು ಬರೆದಿದ್ದಾರೆ. ನಾನು ಕೃತಿಗಳ ಕಿರುಪರಿಚಯದ ಮುನ್ನುಡಿಯ ಸೇವೆ ಮಾಡಿದ್ದೇನೆ. ಕನ್ನಡಕ್ಕೊಂದು ಹೊಸ ಶಬ್ದ “ಇನ್ನುಡಿ” ಯನ್ನು ಸಂಪಾದಕ ಕೆ ಎಸ್ ಉಪಾಧ್ಯಾಯ ನೀಡಿದ್ದಾರೆ. ಪ್ರಖ್ಯಾತ ಅರ್ಥವಾದಿ ಕೀರ್ತಿಶೇಷ ಕೊರ್ಗಿ ವೇಂಕಟೇಶ್ವರ ಉಪಾಧ್ಯಾಯರು ಈ ಕವಿಯ ಸುಪುತ್ರರು. ಯಕ್ಷಗಾನಾಸಕ್ತರೆಲ್ಲ ತಮ್ಮ ಸಂಗ್ರಹದಲ್ಲಿಟ್ಟುಕೊಳ್ಳಬೇಕಾದ ಕೃತಿ.

ಪ್ರಕಾಶಕರು: ಯಕ್ಷಗಾನ ಅಕಾಡೆಮಿ, ಬೆಂಗಳೂರು. ಬೆಲೆ: 130/  ಪುಟಗಳು 270.

ಶ್ರೀಧರ್ ಡಿ. ಎಸ್.

ಯಕ್ಷಗಾನ ಪ್ರಪಂಚದ ಸವ್ಯಸಾಚಿಯಾಗಿ ಮೆರೆದ ಗಡಿನಾಡ ಕನ್ನಡಿಗ ಮಧೂರು ಗಣಪತಿ ರಾವ್

ಮಧೂರು ಗಣಪತಿ ರಾವ್ ಅವರ ಹೆಸರನ್ನು ಕೇಳದವರು ಅಪರೂಪ. ಹಳೆಯ ಯಕ್ಷಗಾನ ಪ್ರೇಕ್ಷಕರೆಲ್ಲರಿಗೂ ಚಿರಪರಿಚಿತರಾಗಿದ್ದ ಹೆಸರು. ಇತ್ತೀಚೆಗಿನ ಯಕ್ಷಗಾನ ಪ್ರೇಕ್ಷಕರಿಗೆ ಅವರ ಹಾಗೂ ಅವರು ನಿರ್ವಹಿಸಿದ ಪಾತ್ರಗಳ ಪರಿಚಯ ಅಷ್ಟಾಗಿ ಇರದಿದ್ದರೂ ಹಳೆಯ ತಲೆಮಾರಿನ ಹಿರಿಯ ಪ್ರೇಕ್ಷಕರು ಅವರ ಬಗ್ಗೆ ಆಡಿಕೊಳ್ಳುವುದನ್ನು ಕೇಳಿ ಗೊತ್ತಿರಬಹುದು. 

ಯಕ್ಷಗಾನದ ವಿವಿಧ ಅಂಗಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಕಲಾವಿದ ಮಧೂರು ಗಣಪತಿ ರಾವ್. ಸುಬ್ಬರಾವ್ ಮತ್ತು ರುಕ್ಮಿಣಿ ದಂಪತಿಗಳ ಪುತ್ರನಾಗಿ 1924ರಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಯಕ್ಷಗಾನದ ಪರಿಸರದಲ್ಲಿಯೇ ಬೆಳೆದವರಾದ ಕಾರಣ ಸಹಜವಾಗಿಯೇ ಯಕ್ಷಗಾನ ಕಲೆಯತ್ತ ಸೆಳೆಯಲ್ಪಟ್ಟಿದ್ದರು. 

ಇವರ ಸಹೋದರರಾಗಿದ್ದ ಮಧೂರು ನಾರಾಯಣ ಹಾಸ್ಯಗಾರರು ಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದರು. ಗಣಪತಿ ರಾವ್ ಅವರಿಗೆ ಸಹೋದರನ ನಿರಂತರ ಪ್ರೋತ್ಸಾಹವಿತ್ತು. ಯಕ್ಷಗಾನ ಕಲಿತ ಮೊದಲಿಗೆ ಧರ್ಮಸ್ಥಳ ಮೇಳದಲ್ಲಿ ವೇಷಧಾರಿಯಾಗಿ ಸೇರ್ಪಡೆಗೊಂಡರು. ಆಮೇಲೆ ಹಲವಾರು ಮೇಳಗಳಲ್ಲಿ ವೇಷಧಾರಿಯಾಗಿ ಸೇವೆ ಸಲ್ಲಿಸಿದ್ದರು.

ಕೂಡ್ಲು ಮೇಳ, ಕುಂಡಾವು ಮೇಳ, ಕುಂಡಾಪು, ಕುದ್ರೋಳಿ, ಮೂಲ್ಕಿ. ಸುರತ್ಕಲ್ ಮೇಳ, ಮಲ್ಲ ಮೇಳ, ಮಧೂರು ಮೇಳ, ಉಪ್ಪಳ ಭಗವತೀ ಮೇಳವೇ ಮೊದಲಾದ ಮೇಳಗಳಲ್ಲಿ ಪ್ರಬುದ್ಧ ಜನಪ್ರಿಯ ವೇಷಧಾರಿಯಾಗಿ ಜನಮನ್ನಣೆ ಗಳಿಸಿದ್ದರು.  ಮಧೂರು ಗಣಪತಿ ರಾವ್ ಅವರದು ಯಕ್ಷಗಾನ ಕ್ಷೇತ್ರದಲ್ಲಿ ಐದು ದಶಕಗಳಿಗೂ ಮಿಕ್ಕಿದ ಕಲಾಸೇವೆ. ಅಷ್ಟು ದೀರ್ಘಾವದಿಯಲ್ಲಿಯೂ ಕಲಾವಿದನಾಗಿ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದ್ದರು.

ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳೆರಡನ್ನೂ ಬಲ್ಲ ಇವರು ಯಕ್ಷಗಾನಕ್ಕೊಬ್ಬ ಸಂಪನ್ಮೂಲ ವ್ಯಕ್ತಿಯಾಗಿದ್ದವರು. ಮುಮ್ಮೇಳ ವೇಷಧಾರಿಯಾಗಿ ಪ್ರಸಿದ್ಧಿಯನ್ನು ಪಡೆದುದು ಮಾತ್ರವಲ್ಲದೆ ತಾಳಮದ್ದಳೆಯ ಜನಮೆಚ್ಚಿದ ಅರ್ಥಧಾರಿಯೂ ಆಗಿದ್ದರು. ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರೊಂದಿಗೆ ಹಿಮ್ಮೇಳಕ್ಕೆ ಸಹಕಲಾವಿದರಾಗಿದ್ದುಕೊಂಡು ಆಮೇಲೆ ವೇಷಧಾರಿಯಾಗಿ ಗುರುತಿಸಲ್ಪಟ್ಟು ಕರ್ಣ, ಅರ್ಜುನ, ಸುದರ್ಶನ, ಬಬ್ರುವಾಹನ, ಧರ್ಮಾಂಗದ, ಚಂದ್ರಸೇನ, ಇಂದ್ರಜಿತು, ರಕ್ತಬೀಜ, ತಾಮ್ರಧ್ವಜ, ದೇವೇಂದ್ರ, ಋತುಪರ್ಣ ಮೊದಲಾದ ವೇಷಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದವರು. 

ಗಣಪತಿ ರಾಯರು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಹಿರಿಯ ಸದಸ್ಯರಾಗಿದ್ದುದು ಮಾತ್ರವಲ್ಲದೆ ಆ ಸಂಸ್ಥೆಯ ಉನ್ನತಿಗಾಗಿ ದುಡಿದ ಮಾರ್ಗದರ್ಶಕರೂ ಆಗಿದ್ದರು. ಇವರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿಯ ಗುರುಪೂಜಾ ಗೌರವವನ್ನು ಪಡೆದಿರುವ ಮಧೂರು ಗಣಪತಿ ರಾಯರನ್ನು ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘ, ಸುರತ್ಕಲ್ ಮೇಳ, ಎಡನೀರು ತರುಣ  ಕಲಾವೃಂದ, ಕೊಲ್ಯದ ಶಿವಾಜಿ ಸಂಘ ಮತ್ತು ಎಡನೀರು ಮಠ, ಮಧೂರಿನ ಮಿತ್ರ ಕಲಾವೃಂದ, ಉಳಿಯತ್ತಡ್ಕದ ಆದರ್ಶ ಕಲಾ ಸಂಘ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕೂಡ್ಲು ಶ್ರೀ ಗೋಪಾಲಕೃಷ್ಣ ಶಾನುಭೋಗ್ ಪ್ರತಿಷ್ಠಾನ ಮೊದಲಾದೆಡೆಗಳಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

ಇನ್ನೂ ಹಲವಾರು ಪ್ರಶಸ್ತಿ ಸನ್ಮಾನಗಳು ಅವರಿಗೆ ಬಂದಿವೆ. ಯಕ್ಷಗಾನದ ಸವ್ಯಸಾಚಿ ಎಂದು ಗುರುತಿಸಿಕೊಂಡಿದ್ದ ಮಧೂರು ಗಣಪತಿ ರಾವ್ ಅವರು ಆಟ, ಕೂಟಗಳೆರಡರಲ್ಲಿಯೂ ಸಮಾನ ಆಸಕ್ತಿಯನ್ನು ಬೆಳೆಸಿಕೊಂಡು ಬಂದವರು. ಮಾತ್ರವಲ್ಲ, ಅವೆರಡರಲ್ಲಿಯೂ ಪ್ರಸಿದ್ಧಿಯನ್ನೂ ಪಡೆದವರು. ಪಾತ್ರದ ಔಚಿತ್ಯ, ಸ್ವಭಾವ ಮತ್ತು ಘನತೆಗಳನ್ನು ಅರಿತು ಪಾತ್ರ ನಿರ್ವಹಿಸಿ ಅಭಿನಯಿಸುವವರು.

ಅವರ ಹುಟ್ಟೂರು ಅಡೂರು ಆಗಿದ್ದರೂ ಕ್ರಮೇಣ ಮಧೂರಿಗೆ ತನ್ನ ವಾಸ್ತವ್ಯವನ್ನು ಬದಲಾಯಿಸಿದ ನಂತರ ಮಧೂರು ಗಣಪತಿ ರಾವ್ ಎಂದೇ ಕರೆಸಿಕೊಂಡರು.  ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾ ಸಂಘದ ಮೂಲಕ ಹಲವಾರು ಕಲಾವಿದರನ್ನು ತರಬೇತಿಗೊಳಿಸಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ಮಧೂರಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ  ದೇವಸ್ಥಾನದಲ್ಲಿ ಪ್ರತಿವರ್ಷವೂ ಇವರ ನೇತೃತ್ವದಲ್ಲಿ ಯಕ್ಷಗಾನ ಆಟ, ಕೂಟ ಮತ್ತು ಪ್ರದರ್ಶನಗಳು ನಡೆಯುತ್ತಿದ್ದುವು. 

ಯಕ್ಷಗಾನದಲ್ಲಿ ಮಹೋನ್ನತ ಸಾಧನೆಯನ್ನು ಮಾಡಿ, ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟ ಮಧೂರು ಗಣಪತಿ ರಾವ್ ತನ್ನ 89ನೆಯ ವಯಸ್ಸಿನಲ್ಲಿ ಈ ಲೋಕದ ಯಾತ್ರೆಯನ್ನು ಮುಗಿಸಿದ್ದರೂ ಯಕ್ಷಗಾನ ಪ್ರೇಮಿಗಳ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. 

ಭವಾನಿ ಬಾಬು ಶೆಟ್ಟಿಗಾರ್ ನಿಧನ

ಅಂಬಲಪಾಡಿ ಯಕ್ಷಗಾನ ಮಂಡಳಿಯ ಸ್ಥಾಪಕ ಸದಸ್ಯರಾದ ಕಪ್ಪೆಟ್ಟು ಬಾಬು ಶೆಟ್ಟಿಗಾರರ ಪತ್ನಿ ಭವಾನಿ ಬಿ. ಶೆಟ್ಟಿಗಾರ (86 ವರ್ಷ) 26-03-2021 ರಂದು ನಿಧನರಾದರು.

ನೇಕಾರ ವೃತ್ತಿಯ ಮನೆತನದ ಇವರು ಪ್ರಸಿದ್ಧ ಹವ್ಯಾಸಿ ಯಕ್ಷಗಾನ ಕಲಾವಿದ ಅಜಿತ್‍ಕುಮಾರ್ ಸಹಿತ ನಾಲ್ವರು ಪುತ್ರರು ಹಾಗು ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಅಂಬಲಪಾಡಿಯಕ್ಷಗಾನ ಮಂಡಳಿಯ ಅಧ್ಯಕ್ಷ ಮುರಲಿ ಕಡೆಕಾರ್ ಹಾಗೂ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್‍ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.