ಯಕ್ಷಗಾನ ಕೇಂದ್ರ, ಇಂದ್ರಾಳಿ, ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಮತ್ತು ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು ಇದರ ಸಹಯೋಗದಲ್ಲಿ ದಿನಾಂಕ 14.112021 ರಂದು ಬೆಳಿಗ್ಗೆ 10 ಗಂಟೆಗೆ ಯಕ್ಷಗಾನ ಕೇಂದ್ರ, ಇಂದ್ರಾಳಿಯಲ್ಲಿ ಒಂದು ತಿಂಗಳ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿಯ ಕಮ್ಮಟ ನಡೆಯಲಿದೆ.
ತರಬೇತಿ ಕಮ್ಮಟದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಕುಮಾರ ಬೆಕ್ಕೇರಿ ಅವರು ನೆರವೇರಿಸಲಿರುವರು. ಯಕ್ಷಗಾನ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಪಿ.ಎಲ್. ಎನ್. ರಾವ್ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ಭುವನ ಪ್ರಸಾದ್ ಹೆಗ್ಡೆ, ಶ್ರೀ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಭಾಗವಹಿಸಲಿರುವರು.
ಖ್ಯಾತ ಯಕ್ಷಗಾನ ಕಲಾವಿದ ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದಲ್ಲಿ ಉಚಿತವಾಗಿ ನಡೆಯುತ್ತಿರುವ ಎರಡನೇ ಕಮ್ಮಟ ಇದಾಗಿದೆ ಎಂದು ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಕ್ಷಗಾನ ಕಲಾಭಿಮಾನಿಗಳಿಗೆಲ್ಲಾ ಆದರದ ಸ್ವಾಗತ.
ಕಡಬ ಸಂಸ್ಮರಣಾ ಸಮಿತಿಯ ಎರಡನೆಯ ವರ್ಷದ ‘ಕಡಬದ್ವಯ ಸಂಸ್ಮರಣ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 03.10.2021ರ ಆದಿತ್ಯವಾರ ಪ್ರಶಸ್ತಿ’ ಪ್ರದಾನ ಸಮಾರಂಭ ಮತ್ತು ಯಕ್ಷಗಾನ ಬಯಲಾಟ ಪ್ರದರ್ಶನದೊಂದಿಗೆ ಮೂಡಬಿದಿರೆಯ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ರಾಜಾಂಗಣದಲ್ಲಿ ನಡೆಯಿತು. ಈ ಬಾರಿಯ ಕಡಬ ಸಂಸ್ಮರಣಾ ಪ್ರಶಸ್ತಿಯನ್ನು ಖ್ಯಾತ ಹಿರಿಯ ಮದ್ದಳೆಗಾರರಾದ ಶ್ರೀ ಮಿಜಾರು ಮೋಹನ ಶೆಟ್ಟಿಗಾರರಿಗೆ ನೀಡಿ ಗೌರವಿಸಲಾಯಿತು.
ಕಡಬ ವಿನಯ ಆಚಾರ್ಯರು ಪೀಠಿಕೆ ಚೆಂಡೆ ಬಾರಿಸುವ ವೀಡಿಯೊ ಸುಕೇಶ್ ಭಟ್ ಅವರ ಯು ಟ್ಯೂಬ್ ಚಾನೆಲಿನಲ್ಲಿ ನೋಡಿ.
ಅಕ್ಷರ ಸಂತ, ಕಿತ್ತಳೆ ಹಣ್ಣುಗಳನ್ನು ಮಾರಿ ಊರ ವಿದ್ಯಾರ್ಥಿಗಳಿಗೆ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ ಶ್ರೀ ಹರೇಕಳ ಹಾಜಬ್ಬನವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ವೀಡಿಯೊ ಲಿಂಕ್ ಇಲ್ಲಿದೆ. ನೋಡಿ
ಯಕ್ಷಗಾನ ವೇಷಧಾರಿ, ಸಂಘಟಕ, ತಾಳಮದ್ದಳೆ ಅರ್ಥಧಾರಿ ಹೀಗೆ ಯಕ್ಷಗಾನದ ವಿವಿಧಂಗಗಳಲ್ಲಿ ತೊಡಗಿಸಿಕೊಂಡ ಎಂ.ಆರ್.ವಾಸುದೇವ ಸಾಮಗರು ನಮ್ಮನ್ನಗಲಿ ನಿನ್ನೆಗೆ ವರುಷವೊಂದು ಸಂದಿತು. (ನಿಧನ – 07.11.2020). ವಾಸುದೇವ ಸಾಮಗ ಎಂದ ಕೂಡಲೇ ನಮಗೆ ಫಕ್ಕನೆ ನೆನಪಾಗುವುದು ಅವರ ‘ಸಂಯಮಂ’ ಯಕ್ಷಗಾನ ತಾಳಮದ್ದಳೆ ತಂಡ. ಸಂಯಮಂ ಎಂದರೆ ‘ಸಂಚಾರಿ ಯಕ್ಷಗಾನ ಮಂಡಳಿ’.
ತನ್ನ ಅರ್ಥಗಾರಿಕೆಯಲ್ಲಿ ಸೃಜನಶೀಲತೆಯನ್ನು ಸೃಷ್ಟಿಸಿದ್ದ ವಾಸುದೇವ ಸಾಮಗರು ಸಂಯಮಂ ತಂಡ ಕಟ್ಟಿದ ಬಗ್ಗೆ ಅಂದೊಮ್ಮೆ ವಿವರಿಸಿದ್ದರು. ಮೊದಲು ಪ್ರಾಯೋಗಿಕವಾಗಿ ಮೂವತ್ತು ವರ್ಷಗಳ ಹಿಂದೆಯೇ ಒಮ್ಮೆ ಈ ತಾಳಮದ್ದಳೆ ತಂಡವನ್ನು ಪ್ರಾರಂಭಿಸಿದ್ದರು. ಅನುಭವದ ಕೊರತೆಯಿಂದ ಆಗ ಯಶಸ್ವಿಯಾಗಿರಲಿಲ್ಲ. ಆದರೆ ಈ ‘ಸಂಯಮಂ’ ತಂಡದ ವ್ಯವಸ್ಥಿತ ನಿರಂತರ ತಿರುಗಾಟಕ್ಕೆ 15 ವರ್ಷಗಳ ಇತಿಹಾಸವಿದೆ. ಎಲ್ಲಿಯೂ ಎಡರುತೊಡರುಗಳಿಲ್ಲದ ಪಯಣ ಈ ತಂಡದ್ದು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿ ಉತ್ತರಕುಮಾರನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ
ವಾಸುದೇವ ಸಾಮಗರ ತಂಡದ ಕಾರ್ಯಕ್ರಮಗಳು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿತ್ತು ಎಂದರೆ ಕೇವಲ ದೂರವಾಣಿಯ ಮೂಲಕ 100ಕ್ಕೂ ಹೆಚ್ಚು ತಾಳಮದ್ದಳೆ ಕಾರ್ಯಕ್ರಮಗಳು ಮಳೆಗಾಲದಲ್ಲಿ ನಿಗದಿಯಾಗುತ್ತಿತ್ತು. ಅದರಲ್ಲೂ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಖಾಯಂ ನೆಲೆಯಲ್ಲಿ ಕಾಯ್ದಿರಿಸಲಾಗುತ್ತಿತ್ತು. ಅವರಿಗೆ ದಿನಾಂಕ ಮಾತ್ರ ನಿಗದಿ ಮಾಡುವ ಕೆಲಸ ಉಳಿದಿರುತ್ತಿತ್ತು.
ಯಕ್ಷಗಾನಕ್ಕೆ ಅನ್ಯಾದೃಶ ಕೊಡುಗೆಯಿತ್ತ ಮನೆತನದಲ್ಲಿ ಖ್ಯಾತಿವೆತ್ತ ದಿ| ಮಲ್ಪೆ ರಾಮದಾಸ ಸಾಮಗರ ಸುಪುತ್ರರಾಗಿ ಜನಿಸಿ ಯಕ್ಷಗಾನದಲ್ಲಿ ತನ್ನದೇ ಆದ ಛಾಪನ್ನು ಒತ್ತಿ ಎತ್ತರಕ್ಕೆ ಬೆಳೆದವರು. ಇವರ ಯಕ್ಷಜೀವನದ ವಿವಿಧ ಪುಟಗಳನ್ನು ತಿರುಗಿಸುತ್ತಾ ಹೋದಂತೆ ಹಲವಾರು ವಿಶಿಷ್ಠತೆಗಳು ಗೋಚರಿಸುತ್ತವೆ.
S. Mithyanthaya ಅವರ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿಅರ್ಜುನನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ
ನಾಗಶ್ರೀಯ ಶುಭ್ರಾಂಗ ಪಾತ್ರದ ದಾಖಲೆ ಶ್ರೀ ವಾಸುದೇವ ಸಾಮಗರಿಗೆ ಅಪಾರವಾದ ಖ್ಯಾತಿಯನ್ನು ತಂದುಕೊಟ್ಟಿತು. ಕೆಲವು ಅನಿವಾರ್ಯ ಕಾರಣಗಳಿಂದಾಗಿ ಭೀಷ್ಮ ವಿಜಯದ ಭೀಷ್ಮನ ಪಾತ್ರವನ್ನು ಮಾಡುವ ಸಂದರ್ಭ ಒದಗಿತು. ಭೀಷ್ಮನ ಪಾತ್ರ ಮಾಡಲು ಹಿರಿಯ ಕಲಾವಿದರು ಒಪ್ಪದಿದ್ದಾಗ ತಾನು ಆ ಪಾತ್ರವನ್ನು ನಿರ್ವಹಿಸಿ ಚೌಕಿಗೆ ಬಂದು ವೇಷ ತೆಗೆಯುತ್ತಿದ್ದಾಗ ಪ್ರೇಕ್ಷಕರು ಬಂದು ‘ಸಾಮಗರೇ, ನಿಮ್ಮದು ಅದ್ಭುತ ಭೀಷ್ಮ’ ಎಂದು ಅಭಿನಂದಿಸಿದ್ದರು.
ಮತ್ತೊಂದು ಆಟದಲ್ಲಿ ಪ್ರಸಿದ್ಧ ಕಲಾವಿದರೊಬ್ಬರು ಕೌರವ ಮಾಡುತ್ತಾರೆಂದು ಪ್ರಚಾರ ಮಾಡಲಾಗಿತ್ತು. ಆದರೆ ಬಸ್ ಮುಷ್ಕರದಿಂದಾಗಿ ಆ ಕಲಾವಿದರಿಗೆ ಬರಲಾಗಲಿಲ್ಲ. ಮೊದಲಿನ ಪ್ರಸಂಗದಲ್ಲಿ ಚಿಟ್ಟಾಣಿಯವರು ದುಷ್ಟಬುದ್ಧಿ ಮಾಡಿಯಾಗಿತ್ತು. ಆಟ ಆಡಿಸುವವರು ಗಲಾಟೆಯಾಗಬಹುದೆಂಬ ಭಯದಲ್ಲಿ ವಾಸುದೇವ ಸಾಮಗರಲ್ಲಿ ಬಂದು ಏನು ಮಾಡುವುದೆಂದು ಅಲವತ್ತುಕೊಳ್ಳುತ್ತಾರೆ. ಆಗ ಧೈರ್ಯ ತುಂಬಿದ ಸಾಮಗರು ತಾನೇ ಕೌರವನ ಪಾತ್ರವನ್ನು ಅಮೋಘವಾಗಿ ನಿರ್ವಹಿಸಿದರು. ಅಂದಿನ ಕೌರವ ‘ನ ಭೂತೋ ನ ಭವಿಷ್ಯತಿ’ ಎಂಬಂತೆ ಚಿಟ್ಟಾಣಿಯವರ ಸಹಿತ ಅನೇಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಗದಾಯುದ್ಧದ ಕೌರವನಿಗೆ ವಾಸುದೇವ ಸಾಮಗರು ಸಮರ್ಥರೆಂದು ಕಾಳಿಂಗ ನಾವಡರಿಂದಲೇ ಹೊಗಳಿಸಿಕೊಂಡ ಕೀರ್ತಿ ವಾಸುದೇವ ಸಾಮಗರಿಗೆ ಸಲ್ಲುತ್ತದೆ.
ಮಧುಸೂದನ ಅಲೆವೂರಾಯ ಅವರ ಯು ಟ್ಯೂಬ್ ಚಾನೆಲಿನಲ್ಲಿ ಇರುವ ತಾಳಮದ್ದಳೆಯಲ್ಲಿ ಕರ್ಣನಾಗಿ ವಾಸುದೇವ ಸಾಮಗರು. ಆ ತಾಳಮದ್ದಳೆಯ ಲಿಂಕ್ ಕೆಳಗಡೆ ಇದೆ
ಆಟಕೂಟಗಳೆರಡರಲ್ಲಿಯೂ ಸಮಾನ ಪ್ರಭುತ್ವವನ್ನು ಸಾಧಿಸಿದ್ದ ವಾಸುದೇವ ಸಾಮಗರ ಅಗಲಿಕೆ ಕಲಾಪ್ರಿಯರನ್ನು ಕಾಡುತ್ತಿದೆ, ಅವರು ಮರೆಯಾದರೂ ಅವರ ಆ ವಿಶಿಷ್ಟ ಶೈಲಿ, ವ್ಯಕ್ತಿತ್ವಗಳು ಎಂದೆಂದಿಗೂ ಮಾಸದ ನೆನಪಾಗಿ ಉಳಿಯುವುದು ಸತ್ಯ
ಅಪೂರ್ವ ನೃತ್ಯ ವೈವಿಧ್ಯದ ರಾಧಾ ವಿಲಾಸ ಎಂಬ ಅಪರೂಪದ ಯಕ್ಷಗಾನ ವೀಡಿಯೊ ಕೆ. ಆರ್. ಕೆ. ಭಟ್ ಚಿತ್ರಮೂಲ (KRK Bhat Chithramoola) ಅವರ ಯು ಟ್ಯೂಬ್ ಚಾನೆಲ್ ನಲ್ಲಿ ಇದೆ. ಅದರ ವೀಡಿಯೊ ಲಿಂಕ್ ಕೆಳಗಡೆ ಇದೆ.
ಯಕ್ಷಗಾನ ಇತಿಹಾಸ ಕಂಡ ಅಪರೂಪದ ಆದರೆ ಅಷ್ಟೇ ಅಪೂರ್ವವೂ ಆದ, ತೆಂಕುತಿಟ್ಟಿನ ಹಿರಿಯ ಮದ್ದಳೆಗಾರರಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಅವರ ಪತ್ನಿ ಖ್ಯಾತ ಭಾಗವತರಾದ ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಅವರ 75ನೇ ಹರೆಯದ ಸಂಭ್ರಮದಲ್ಲಿ ಅವರನ್ನು ಗೌರವಿಸಿ ಅಭಿನಂದಿಸುವ ಕಾರ್ಯಕ್ರಮ ‘ಶ್ರೀ ಹರಿಲೀಲಾ 75′ ನಾಳೆ ನವಂಬರ್ 7, 2021ರ ಭಾನುವಾರದಂದು ಮೂಡಬಿದಿರೆಯ ಅಲಂಗಾರಿನ ಶ್ರೀ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಅಭಿನಂದನಾ ಸಮಿತಿ ಮತ್ತು ಬೈಪಾಡಿತ್ತಾಯ ದಂಪತಿಗಳ ಶಿಷ್ಯವೃಂದ ಮತ್ತು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ. ದಿನಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ವಿವರ ಲಗತ್ತಿಸಲಾಗಿದೆ.