ನಿನ್ನೆ ರವೀಂದ್ರ ಕಲಾಕ್ಷೇತ್ರದಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್ಸ್ ನ ಸಂದರ್ಭದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಹುಲಿ ಸಿದ್ದೇಶ್ವರ ಯಕ್ಷನೈದಿಲೆ ಕಲಾ ಬಳಗದ ಕಲಾವಿದರು ನಮ್ಮ ನಾಡು ನುಡಿಯ ಕುರಿತಾದ ಯಕ್ಷಗಾನ ನೃತ್ಯ ಪ್ರದರ್ಶನವನ್ನು ನೀಡಿದರು. ಈ ಒಂದು ಯಕ್ಷಗಾನ ನೃತ್ಯಕ್ಕೆ ಕಲಾಕದಂಬ ಆರ್ಟ್ ಸೆಂಟರ್ ನ ಡಾ.ರಾಧಾಕೃಷ್ಣ ಉರಾಳರು ನಿರ್ದೇಶನ ನೀಡಿದ್ದರು. ಪೂಜಾ ಆಚಾರ್ಯ ಹಾಗೂ ನಿತ್ಯಾ ಗೌಡ ಈ ಒಂದು ಯಕ್ಷ ನೃತ್ಯವನ್ನು ಅಭಿನಯಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ಯಕ್ಷನಿಧಿ ಕಳೆದ 22 ವರ್ಷಗಳಿಂದ ಯಕ್ಷಗಾನ ಕಲಾವಿದರ ಕ್ಷೇಮಚಿಂತನೆಗೆ ಹಲವು ಯೋಜನೆಗಳ ಮೂಲಕ ಕೆಲಸ ಮಾಡುತ್ತಿದ್ದು ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಗಮನಿಸಿ ಕಡತೋಕ ಕೃಷ್ಣ ಭಾಗವತರ ಸಂಸ್ಮರಣ ವೇದಿಕೆ ರೂ. ಒಂದು ಲಕ್ಷ ನಿಧಿ ಸಮರ್ಪಿಸಿ ಪ್ರೋತ್ಸಾಹಿಸಿದೆ.
ಕೃಷ್ಣ ಭಾಗವತರು ಕರ್ಕಿ,ಇಡಗುಂಜಿ ,ಕೊಳಗಿಬೀಸ್,ಧರ್ಮಸ್ಥಳ,ಅಮೃತೇಶ್ವರಿ,ಸಾಲಿಗ್ರಾಮ,ಪೆರ್ಡೂರು,ಸುರತ್ಕಲ್,ಮೂಲ್ಕಿ ಸೇರಿದಂತೆ ಹಲವು ಮೇಳಗಳಲ್ಲಿ ನಾಲ್ಕು ದಶಕಗಳ ಕಲಾಸೇವೆ ಮಾಡಿ ಪ್ರಸಿದ್ಧರಾಗಿದ್ದರು. ಕಡತೋಕ ಕೃಷ್ಣ ಭಾಗವತ ಸಂಸ್ಮರಣ ವೇದಿಕೆ ಈವರೆಗೆ ತಲಾ ರೂ. 5000 ನಗದು ಪುರಸ್ಕಾರದೊಂದಿಗೆ 38 ಕಲಾವಿದರನ್ನು ಸಮ್ಮಾನಿಸಿದೆ.
ಶ್ರೇಷ್ಠ ಕಲಾವಿದರ ನೆನಪಿನಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿರುವ ಭಾಗವತರ ಸುಪುತ್ರ ಎಂ.ಕೆ.ಭಟ್ ಮತ್ತು ವೇದಿಕೆಯ ಸರ್ವ ಸದಸ್ಯರಿಗೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಸುಂದರವಾದ, ಸಂಶೋಧಿತ ಲೇಖನ ಸರಣಿಗಳ ಸಂಕಲಿತ ಕೃತಿಯನ್ನು ರವಿ ಮಡೋಡಿಯವರು ಗ್ರಂಥರೂಪದಲ್ಲೂ ಪ್ರಕಟಗೊಳಿಸುತ್ತಿರುವುದು ತುಂಬಾ ಸಂತೋಷದ ವಿಷಯ. ಈ ಲೇಖನ ಮಾಲಿಕೆಯು ವಾಟ್ಸಾಪ್, ಫೇಸ್ಬುಕ್ನಲ್ಲಿ ಸರಣಿಯಾಗಿ ಮೂಡಿಬಂದಾಗ ಬಹಳ ಖುಶಿಪಟ್ಟಿದ್ದೇನೆ. ನಾನು, ರವಿ ಇಬ್ಬರೂ ಒಂದೇ ಪ್ರದೇಶದವರು, ಉದ್ಯೋಗ ನಿಮಿತ್ತ ದೂರದ ನೆಲೆಯಲ್ಲಿ ಬದುಕು ಕಂಡವರು.
ವೃತ್ತಿ ಬೇರೆಬೇರೆ. ಆದರೂ ಪ್ರವೃತ್ತಿ ಒಂದೇ. ಅದು ಯಕ್ಷಗಾನ. ನನಗೆ ಬಾಲ್ಯದಲ್ಲೇ ಹತ್ತಿದ ಹುಚ್ಚು ಇನ್ನೂ ಬಿಟ್ಟಿಲ್ಲ. ರವಿಗೆ ಬಿಡುವಷ್ಟು ಸಮಯವಾಗಿಲ್ಲ. ಸಂಪೂರ್ಣ ಯಕ್ಷಗಾನಾಸಕ್ತಿಯಲ್ಲಿ ಅಂದರೆ ಯಕ್ಷಗಾನ ಸಂಬಂಧಿಯಾದ ಸರ್ವ ವಿಷಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಪ್ರಯತ್ನಶೀಲರಾಗಿ ಅವರು ಮುಂದುವರೆದಿದ್ದಾರೆ. ಇದು ನನ್ನಂತವನಿಗೆ ಆಪ್ತವಾಗುವ ವಿಷಯ. ಯಕ್ಷಗಾನ ನೃತ್ಯವನ್ನು ಶಾಸ್ತ್ರೀಯವಾಗಿ ಕಲಿತು, ಅದಕ್ಕೆ ಸಂಬಂಧಿಸಿದ ಸಕಲವನ್ನೂ ಅಧ್ಯಯನಮಾಡಿ, ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಬೆಂಗಳೂರಿನಂತಹ ಅಯಕ್ಷಗಾನೀಯ ನೆಲದಲ್ಲಿ ನೆಲೆಯನ್ನು ಕಲ್ಪಿಸಿದ್ದಾರೆ.
ಮುನ್ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ನಾಡಿನಾದ್ಯಂತ ನಡೆಸಿ ಹವ್ಯಾಸಿಯಾದರೂ ವೃತ್ತಿನಿರತರ ಪ್ರಾವೀಣ್ಯವನ್ನು ಸಾಧಿಸಿದ್ದಾರೆ. ಯಕ್ಷವಾಹಿನಿ ಮತ್ತು ಯಕ್ಷ ಸಿಂಚನ ಎಂಬೆರಡು ಸಮರ್ಥ ಸಂಸ್ಥೆಯ ಕರ್ಣಧಾರತ್ವವಹಿಸಿ ಎರಡು ಭುಜದಲ್ಲಿ ಎರಡು ಸಂಸ್ಥೆಗಳನ್ನು ಹೊತ್ತ ಆಂಜನೇಯ ಶಕ್ತಿಯ ಅನುಭಾವಿ ರವಿ. ಜೊತೆಗೆ ಪೋಟೋಗ್ರಫಿಯಂತಹ ಪ್ರವೃತ್ತಿಯಲ್ಲೂ ಪರಿಣತಿಯನ್ನು ಸಾಧಿಸಿದವರು.
ವೃತ್ತಿಯಿಂದ ತಂತ್ರಜ್ಞಾನಿಯಾದ ಇವರು ಯಕ್ಷಲೋಕದ ಆಂತರ್ಯವನ್ನು ಪ್ರವೇಶಿಸಿ ಅಲ್ಲಿಯ ಸೊಗವನ್ನು ಆಸಕ್ತರೆಲ್ಲರಿಗೆ ಉಣಬಡಿಸುವ ಪ್ರಯತ್ನಶೀಲ ಸಾಹಸಿ. ಹಿಂದೆಯೇ ಇವರು `ಯಕ್ಷಲೋಕ’ ಎಂಬ ಮೊಬೈಲ್ ಆಪ್ ಸಿದ್ಧಪಡಿಸಿ ಎಲ್ಲೆಲ್ಲಿ ಯಕ್ಷಗಾನ ನಡೆಯುತ್ತದೆ ಎಂಬುದರ ವಿವರಗಳನ್ನೆಲ್ಲ ಅಂಗೈಗೆ ತಂದುಕೊಟ್ಟಿದ್ದರು. ಮತ್ತೆ ಶ್ರೀ ನಟರಾಜ ಉಪಾಧ್ಯರೆಂಬ ಬಹುಮುಖೀ ಪ್ರತಿಭೆಯ ಸಮಾನಾಸಕ್ತರ ಜೊತೆಗಾರಿಕೆಗೆ ಬಂದಾಗ ಯಕ್ಷವಾಹಿನಿ ಎಂಬ ಸಂಸ್ಥೆಯ ಉದಯವಾಯಿತು.
ಇದಕ್ಕಾಗಿ ಪ್ರಸಂಗಪ್ರತಿಸಂಗ್ರಹ ಎಂಬ ಆಪ್ ಸಿದ್ಧವಾಯಿತು. ನಾಡಿನಾದ್ಯಂತದ ಯಕ್ಷಗಾನಾಸಕ್ತರ ಸ್ವಯಂಸೇವೆಯ ಬಲವನ್ನು ಪಡೆದು ಯಕ್ಷಪ್ರಸಂಗಕೋಶ, ಯಕ್ಷಗಾನ ಮಟ್ಟುಕೋಶ, ಯಕ್ಷಗಾನ ಪ್ರಸಂಗಪ್ರತಿ ಸಂಗ್ರಹ ಹೀಗೆ ಬಹುಮುಖದ ಕೆಲಸದಲ್ಲಿ ಆಸಕ್ತರಾಗಿ ದಾಖಲೆಯ ಸಾಧನೆಯತ್ತ ಸಾಗಿದ್ದಾರೆ. ಇವರ ಕೆಲಸವನ್ನು ಮೆಚ್ಚಿ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಪ್ರೋ ಎಂ. ಎ. ಹೆಗಡೆಯವರು ಅಕಾಡೆಮಿಯ ಸಹಾಯವನ್ನೂ ಒದಗಿಸಿಕೊಟ್ಟರು.
ಇವರ ಪ್ರಯತ್ನದ ಫಲವಾಗಿ ಈಗ ನಮ್ಮ ಅಂಗೈಗೆ ಇನ್ನೂರೈವತ್ತರಷ್ಟು ಪರಿಷ್ಕೃತ ಪ್ರಸಂಗಗಳು ಲಭ್ಯವಾಗಿವೆ. ಪ್ರಸಂಗ ರಚನೆಯ ರೀತಿಯನ್ನು ತಿಳಿಸುವ ಕಾರ್ಯಾಗಾರ, ಪ್ರಸಂಗರಚನಾ ಸ್ಪರ್ಧೆ ಮುಂತಾದವೂ ಸಂಪನ್ನವಾಗಿವೆ. ಇವಿಷ್ಟೂ ಹಿನ್ನೆಲೆಗಳೊಂದಿಗೆ ಕಳೆದ ಕೆಲವು ವರ್ಷಗಳಿಂದ ರವಿಯವರು ಕೈಗೆತ್ತಿಕೊಂಡ ಕೆಲಸ ಮಲೆನಾಡಿನ ಯಕ್ಷಚೇತನಗಳನ್ನು ನಾಡಿಗೆ ಪರಿಚಯಿಸುವ ಪ್ರಯತ್ನ. ಇದು ಅಕ್ಷರಶಃ ಸಾಹಸ.
ಸಾಮಾನ್ಯವಾಗಿ ಯಕ್ಷಗಾನವೆಂದರೆ ಕರಾವಳಿ ಪ್ರದೇಶದ ಕಲೆ ಎಂತಲೇ ಪ್ರಸಿದ್ಧ. ಆದರೆ ಇದು ಅಲ್ಲಿ ಹೇಗೆ ಬೆಳೆದಿತ್ತೋ ಹಾಗೆಯೇ ಮಲೆನಾಡ ಪ್ರಾಂತದಲ್ಲೂ ಪ್ರಸಿದ್ಧವಾಗಿತ್ತು ಎಂಬುದು ಸತ್ಯವಾದ ವಿಚಾರ. ಮಲೆನಾಡ ಪ್ರಾಂತವನ್ನಾಳಿದ ಕೆಳದಿ ಅರಸರ ಕಾಲದಲ್ಲಿ ಧರ್ಮ, ಕಲೆ, ಸಾಹಿತ್ಯಕ್ಕೆ ವಿಶೇಷ ಪ್ರೋತ್ರಾಹ ಸಿಕ್ಕಿತ್ತು ಎಂಬುದು ಸರ್ವವೇದ್ಯ.
ಈ ಅರಸರ ಕಾಲದಲ್ಲಿ ಮಹಾಕವಿ ವೆಂಕಾಮಾತ್ಯ, ಹನೂಮದ್ರಾಮಾಯಣ, ಯಕ್ಷಗಾನ ಪಾರಿಜಾತ, ರುಕ್ಮಿಣೀ ಸ್ವಯಂವರ, ಮುಂತಾದ ಪ್ರಸಂಗವನ್ನು ಬರೆದ ಕವಿ, ಆತನ ಮಗ ವೆಂಕಣ್ಣ ಮೈರಾವಣ ಕಾಳಗ ಪ್ರಸಂಗದ ಕವಿ, ಪರಮದೇವ, ನಂಜುಂಡ, ಸುಬ್ರಹ್ಮಣ್ಯ ಕವಿ ಮುಂತಾದವರೆಲ್ಲ ಈ ಪ್ರದೇಶದಲ್ಲೇ ಇದ್ದರು. ರಾಜಾಶ್ರಯದ ನೆಲೆ ತಪ್ಪಿದ ಮೇಲೂ ಅಲ್ಲಲ್ಲಿ ವ್ಯಕ್ತಿಗತ ಪ್ರಯತ್ನ, ಸಂಸ್ಥೆಗಳ ಆಸಕ್ತಿಯಿಂದ ಕೆಲವುಕಾಲ ಯಕ್ಷಗಾನ ಬದುಕಿತ್ತು, ಕಷ್ಟದಲ್ಲಿ ಬಾಳಿತ್ತು. ಸ್ವಾತಂತ್ರ್ಯ ಬಂದ ನಂತರ ಅಭಿವೃದ್ಧಿ ಮಂತ್ರ ಜೋರಾದಂತೆ ಮಲೆನಾಡಿನ ಭವ್ಯ ಸಂಪತ್ತು ಸರಕಾರಗಳ ಕಣ್ಣಿಗೆ ಬಿದ್ದು ಕಲೆ ಮೂಲೆಗೆ ಸರಿದು ಅಣೆಕಟ್ಟುಗಳ ನಿರ್ಮಾಣದಂತಹ ಕಾಮಗಾರಿಗಳು ಮುನ್ನೆಲೆಗೆ ಬಂದವು.
ರಾತ್ರಿಯನ್ನು ಬೆಳಕು ಮಾಡುತ್ತಿದ್ದ ಕಲಾವಿದರ ಬದುಕು ಮತ್ತು ಅವರವರ ಊರು ನೆಲೆಗಳನ್ನು ಮುಳುಗಿಸಿ ಕತ್ತಲೆಯ ಹಿನ್ನೆಲೆಗೆ ಜಾರಿಸಿದವು. ಕರಾವಳಿಯಲ್ಲಿ ರಾಜಾಶ್ರಯವಿಲ್ಲದಿದ್ದರೂ ಸುಪ್ರಸಿದ್ಧ ಕ್ಷೇತ್ರಗಳ ಆಶ್ರಯದಲ್ಲಿ ಯಕ್ಷಗಾನ ಬದುಕಿ ಬೆಳೆಯಿತು. ಇಲ್ಲಿ ಅನೇಕರು ಈ ಕಷ್ಟದಲ್ಲೂ ಪ್ರಯತ್ನಶೀಲರಾಗಿ ಮುಂದುವರೆದಿದ್ದರು. ಆದರೆ ಅವರ ಕೊಡುಗೆ ಯಕ್ಷಲೋಕಕ್ಕೆ ದೊರಕದೆ ಮರೆಯಾಗಿಯೇ ಉಳಿದಿತ್ತು. ಇಂತಹ ಕಲಾವಿದರ ಬದುಕಿನ ಕೊಡುಗೆಗಳು ಮುಂದಿನ ತಲೆಮಾರಿಗೆ ನೆನಪಾಗಿ ಉಳಿಸಬೇಕು ಎಂಬ ಆಸೆಯಿಂದ ರವಿ ಮಡೋಡಿಯವರು ಬಹಳ ಶ್ರಮವಹಿಸಿ ಬಹುಮಂದಿ ಆಗಿಹೋದ ಕಲಾವಿದರ ಇತ್ಯೋಪರಿಗಳನ್ನು ಸಂಗ್ರಹಿಸಿ ಕೃತಿರೂಪದಲ್ಲಿ ಪ್ರಕಟಿಸುತ್ತಿದ್ದಾರೆ.
ರವಿಯವರು ಮಾಹಿತಿಗಳಿಗಾಗಿ ಅರಿವುಳ್ಳ ಹಿರಿಯರು, ಗೆಳೆಯರು, ಕಲಾವಿದರ ಮಕ್ಕಳು, ಬಂಧುಗಳು, ಕಲಾವ್ಯವಸಾಯಿಗಳು, ಕಲಾವಿದರ ಶಿಷ್ಯರು ಮುಂತಾದವರ ಸಂಪರ್ಕವನ್ನು ಸಾಧಿಸಿ ಅವರೊಂದಿಗೆಲ್ಲ ಚರ್ಚಿಸಿ ಬರೆದುದನ್ನು ಪರಿಣತರ ಗಮನಕ್ಕೆ ತಂದು ಮತ್ತೆ ಫೇಸ್ಬುಕ್, ವಾಟ್ಸಾಪ್ ಪ್ರಕಟಿಸಿ ಆಮೇಲೆ ಪುಸ್ತಕಕ್ಕಿಳಿಸಲು ಮನಸ್ಸು ಮಾಡಿದ್ದಾರೆ. ಈ ಕೆಲಸ ಸುಲಭದ್ದಲ್ಲ. ಕೇಳಿದರೂ ತಿಳಿದವರು ಸ್ಪಂದಿಸದೆ ಇರುವುದು, ಅದೆಲ್ಲ ಬರೆಯುವಷ್ಟು ದೊಡ್ಡದಲ್ಲ ಎಂಬ ದೊಡ್ಡಸ್ತಿಕೆಯ ಮಾತಾಡುವುದು, ನಾಳೆ ಹೇಳುವೆ ನಾಡಿದ್ದು ಹೇಳುವೆ ಎಂದು ಸತಾಯಿಸುವುದು, ಹೇಳಿದರೆ ನಮಗೇನು ಲಾಭ ಇವನಿಗೇನೋ ಅನುಕೂಲವಿರಬೇಕೆಂದು ಊಹಿಸುವುದು ಮುಂತಾದ ಹಲವು ಅಡಚಣೆಗಳನ್ನು ದಾಟಿ ಮುಂದುವರಿಯಬೇಕಾಗುತ್ತದೆ.
ಕಲಾವಿದರು ಜೀವಿಸಿದ್ದ ಕಾಲ ದೂರದೂರವಾದಷ್ಟೂ ಮಾಹಿತಿಗಳೂ ದೂರದೂರವಾಗುತ್ತವೆ. ಕಲಾವಿದನ ಕೊಡುಗೆ ದೊಡ್ಡದೇ ಇದ್ದರೂ ಅವರ ಉತ್ತರಾಧಿಕಾರಿಗಳಿಗೆ ಆಸಕ್ತಿಯೇ ಇಲ್ಲದಿರುವುದು ಬಹುದೊಡ್ಡ ತೊಡಕಾಗುತ್ತದೆ. ಈ ಎಲ್ಲ ಪ್ರಯತ್ನಗಳನ್ನು ಮಾಡುತ್ತಾ ಇಷ್ಟೊಂದು ಕಲಾವಿದರನ್ನು ಕುರಿತು ಇವರು ಸಂಗ್ರಹಿಸಿದ ಮಾಹಿತಿ ಯಕ್ಷಗಾನಕ್ಕೆ ಬಹುದೊಡ್ಡ ಕೊಡುಗೆಯಾಗಿದೆ.
ಮಲೆನಾಡಿನಲ್ಲಿ ಹಿಂದೆ ಸೀಮೆಗೊಂದೊಂದು ಮೇಳವಿದ್ದ ದಾಖಲೆ ಇದೆ. ಈಗ ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಕಳೆದು ಹೋದುದು ಸಿಗದಾದರೂ ಅಲ್ಲಿಯ ನೆನಪು ಉಳಿಯಬೇಕು. ಈ ಪ್ರದೇಶಗಳ ವ್ಯಾಪ್ತಿಯೂ ದೊಡ್ಡದು. ರವಿಯವರು ಪರಿಚಯಿಸಿದ ಕಲಾವಿದರು ಬಾಳಿಬದುಕಿದ ಪ್ರದೇಶ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ ಮೂರು ಜಿಲ್ಲೆಗಳಲ್ಲಿ ಶೃಂಗೇರಿಯಿಂದ ಯಲ್ಲಾಪುರದವರೆಗೆ ವ್ಯಾಪಿಸಿದೆ. ಪರಿಚಿತ, ಅಪರಿಚಿತ ಮೇಳಗಳಿವೆ, ಪ್ರಸಿದ್ಧ, ಸುಪ್ರಸಿದ್ಧ, ಅಪ್ರಸಿದ್ಧ ಕಲಾವಿದರೂ ಇದ್ದಾರೆ.
ಇವೆಲ್ಲ ಈಗ ರವಿಯವರ ಬರೆಹದಿಂದ ಸಾಕಷ್ಟು ಮಂದಿಯ ಅರಿವಿಗೂ ಬಂದಿವೆ. ಈಗ ಕೃತಿಯಾಗಿಯೂ ಬರುತ್ತಿದೆ. ಹಾಗೆಂದು ಮುಗಿಯುವುದಿಲ್ಲ. ಇನ್ನೂ ಮುಂದೆಯೂ ಬರುತ್ತಿರುತ್ತದೆ. ಕಲಾವಿದರ ಕುರಿತು ಇಲ್ಲಿ ಬಂದ ಮಾಹಿತಿ ಪರಿಪೂರ್ಣ ಎನ್ನುವಂತಿಲ್ಲ. ಇದು ಲೇಖಕರಿಗೂ ತಿಳಿದಿದೆ. ಮೊದಲ ಬರವಣಿಗೆಯನ್ನು ಮತ್ತೆ ಪರಿಷ್ಕರಿಸಿದ್ದಾರೆ. ಇನ್ನೂ ಸೇರಬಹುದಾದುದೂ ಇರಬಹುದು. ಅದನ್ನೂ ಮಡೋಡಿಯವರು ಮಾಡಬಲ್ಲವರು. ಇಲ್ಲಿ ಪ್ರಸ್ತಾಪಿಸದ ಅನೇಕ ಪ್ರಸಿದ್ಧ ಕಲಾವಿದರೇ ಉಳಿದುಹೋಗಿರುವ ಸಾಧ್ಯತೆ ಇದೆ.
ಇದು ಮಾಹಿತಿಗಳಿಂದಲೇ ರೂಪುಗೊಳ್ಳಬೇಕಾದ ಬರೆಹ. ಅದು ಸಿಕ್ಕಷ್ಟೂ ಗಟ್ಟಿಗೊಳ್ಳುತ್ತದೆ. ಈ ಕೃತಿ ಸರಣಿಯ ಒಂದನೇ ಸಂಪುಟ ಎಂದು ಭಾವಿಸೋಣ. ಮುಂದುವರಿಯಲಿ ಎಂದು ಆಶಿಸೋಣ. ಕಲಾವಿದರನ್ನು ಕುರಿತು ಅರಿವಿರುವವರು ರವಿಯವರಿಗೆ ವಿಫುಲ ಮಾಹಿತಿ ನೀಡಿ ನಮ್ಮ ಮಲೆನಾಡಿನ ಕಲಾವಿದರ ಕಲಾಸೇವೆಯನ್ನು ಜನಮನಕ್ಕೆ ತಲುಪುವಂತೆ ಮಾಡಿರೆಂದು ಪ್ರಾರ್ಥಿಸುತ್ತೇನೆ.
ಈ ಅಪೂರ್ವ ಪ್ರಯತ್ನಕ್ಕಾಗಿ ರವಿ ಮಡೋಡಿಯವರನ್ನು ಅಭಿನಂದಿಸುತ್ತಾ ಇಂತಹ ಪ್ರಯತ್ನ ನಿಮ್ಮ ನಿರಂತರ ಕಾರ್ಯವಾಗಲಿ ಎಂದು ಹಾರೈಸಿ ಶುಭಕೋರುತ್ತೇನೆ.
ಯಕ್ಷಗಾನಂ ಗೆಲ್ಗೆ.
ಶ್ರೀಧರ ಡಿ. ಎಸ್. ತಾಳಿಪಾಡಿ ಅಂಚೆ: ಎಳತ್ತೂರು ವಯಾ : ಕಿನ್ನಿಗೋಳಿ. ದ.ಕ 574159 ದೂರವಾಣಿ: 7760647383
‘ಕರ್ನಾಟಕ ರಾಜ್ಯ ಹಲವಾರು ಪ್ರಾದೇಶಿಕ, ಜಾನಪದ ಹಾಗೂ ಲಲಿತ ಕಲೆಗಳ ಆಗರ. ಅವುಗಳಲ್ಲಿ ನಮ್ಮ ಕಣ್ಣು ಮತ್ತು ಕಿವಿಗಳಿಗೆ ಅದ್ಭುತರಮ್ಯ ಅನುಭವ ನೀಡುವ ಯಕ್ಷಗಾನ ರಾಜ್ಯದ ಶ್ರೇಷ್ಠ ಕಲೆ. ಅದರ ಜನಪ್ರಿಯತೆಯಲ್ಲಿ ಕಲಾವಿದರು ಹಾಗೂ ಕಲಾ ಸಂಘಟನೆಗಳು ಮಹತ್ತರ ಪಾತ್ರವಹಿಸಿವೆ’ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ ಮತ್ತು ವಿಕಾಸ್ ಕಾಲೇಜಿನ ಸ್ಥಾಪಕಾಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ಹೇಳಿದ್ದಾರೆ.
‘ ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಸಹಯೋಗದಲ್ಲಿ ಮಂಗಳೂರು ವಿ.ವಿ. ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿಸಿದ ಎರಡು ದಿನಗಳ ‘ಯಕ್ಷಗಾನ ತಾಳಮದ್ದಳೆ ಪರ್ವ’ 9ನೇ ವರ್ಷದ ನುಡಿಹಬ್ಬ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಕ್ಷಗಾನದ ಹಿರಿಯ ಸ್ತ್ರೀವೇಷಧಾರಿ 88ರ ಹರೆಯದ ‘ಯಕ್ಷ ಶಾಂತಲಾ’ ಬಿರುದಾಂಕಿತ ಪಾತಾಳ ವೆಂಕಟ್ರಮಣ ಭಟ್ಟರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿಯನ್ನು ಅವರು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಪುರುಷೋತ್ತಮ ಪ್ರಸಂಗ, ಪದ್ಯಾಣ ಪ್ರಣತಿ ಹಾಗೂ ದಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆಯೂ ಜರಗಿತು.
ಕನ್ನಡ ಭಾಷೆಯ ಹಿರಿಮೆ: ಕರ್ನಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡಿ ‘ಸಾಂಸ್ಕೃತಿಕ ಹಿರಿಮೆ ಹಾಗೂ ಶುದ್ಧ ಕನ್ನಡ ಭಾಷಾ ಪ್ರಯೋಗ ಯಕ್ಷಗಾನ ರಂಗದಲ್ಲಿ ಬಹುವಾಗಿ ಬಳಕೆಯಲ್ಲಿರುವ ಕಾರಣ ಯಕ್ಷಗಾನದ ಶ್ರೇಯಸ್ಸು ಜಗತ್ತಿನಾದ್ಯಂತ ಹರಡುವಂತಾಗಿದೆ. ಅದರಿಂದ ಕಲಾವಿದರಿಗೂ ಮಾನ ಸನ್ಮಾನಗಳು ಪ್ರಾಪ್ತವಾಗಿವೆ’ ಎಂದರು.
ಕೆನರಾ ಬ್ಯಾಂಕ್ ವಲಯ ಮುಖ್ಯಸ್ಥರು ಹಾಗೂ ಪ್ರಧಾನ ವ್ಯವಸ್ಥಾಪಕ ಯೋಗೀಶ್ ಆಚಾರ್ಯ ಮುಖ್ಯ ಅತಿಥಿಯಾಗಿದ್ದರು
ಯಕ್ಷಾಂಗಣ ದಶಮಾನೋತ್ಸವ: ಯಕ್ಷಾಂಗಣ ಮಂಗಳೂರು ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ ‘ಯಕ್ಷಗಾನ ರಂಗದಲ್ಲಿ ಹೊಸ ಆಲೋಚನೆಯ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಯಕ್ಷಾಂಗಣವು 2022 ರಲ್ಲಿ ದಶಮಾನೋತ್ಸವ ಆಚರಿಸುತ್ತಿದೆ. ಅದರಂತೆ ಮುಂದಿನ ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಹತ್ತುದಿನಗಳ ನುಡಿಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ನಡೆಸಲಾಗುವುದು’ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪೂಂಜ – ಪದ್ಯಾಣ ಸಂಸ್ಮರಣೆಯನ್ನು ಮಂಗಳೂರು ವಿ.ವಿ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಶ್ರೀಪತಿ ಕಲ್ಲೂರಾಯ ನೆರವೇರಿಸಿದರು.ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ, ರಾಜ್ಯ ಅಲೆಮಾರಿ ಆಯೋಗದ ರವೀಂದ್ರ ಶೆಟ್ಟಿ, ವಿವಿ ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ, ನ್ಯಾಯವಾದಿ ಶ್ರೀಧರ ಶೆಟ್ಟಿ ಪುಳಿಂಚ, ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ, ದಿ.ಪುರುಷೋತ್ತಮ ಪೂಂಜರ ಧರ್ಮಪತ್ನಿ ಶೋಭಾ ಪೂಂಜಾ, ದಿ.ಪದ್ಯಾಣ ಗಣಪತಿ ಭಟ್ಟರ ಪುತ್ರ ಸ್ವಸ್ತಿಕ್ ಪದ್ಯಾಣ ಉಪಸ್ಥಿತರಿದ್ದರು.
ಆರಂಭದಲ್ಲಿ ಯಕ್ಷಾಂಗಣದ ಸದಸ್ಯರು ನಾಡಗೀತೆಯನ್ನು ಹಾಡಿದರು. ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು; ಸಂಚಾಲಕ ಲಕ್ಷ್ಮೀನಾರಾಯಣ ರೈ ಹರೇಕಳ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಉಮೇಶ್ ಆಚಾರ್ಯ ಗೇರುಕಟ್ಟೆ ವಂದಿಸಿದರು. ಪದಾಧಿಕಾರಿಗಳಾದ ಸುಧಾಕರ ರಾವ್ ಪೇಜಾವರ, ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಕೃಷ್ಣಪ್ಪ ಗೌಡ ಪಡ್ಡಂಬೈಲ್, ಸಿದ್ದಾರ್ಥ ಅಜ್ರಿ,ನಿವೇದಿತಾ ಎನ್.ಶೆಟ್ಟಿ ಮತ್ತು ಸುಮಾ ಪ್ರಸಾದ್ ಸಹಕರಿಸಿದರು.
ತಾಳಮದ್ದಳೆ: ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಪುರುಷೋತ್ತಮ ಸರಣಿಯಲ್ಲಿ ದಿ.ಬೊಟ್ಟಿಕೆರೆ ಪುರುಷೊತ್ತಮ ಪೂಂಜ ವಿರಚಿತ ‘ಗಂಗಾ ಸಾರಥ್ಯ’ ಮತ್ತು ‘ಮಾ ನಿಷಾದ’ ಪ್ರಸಂಗಗಳ ತಾಳಮದ್ದಳೆ ಜರಗಿತು. ಹರೀಶ್ ಶೆಟ್ಟಿ ಸೂಡ ಮತ್ತು ಗಣೇಶ್ ಕುಮಾರ್ ಹೆಬ್ರಿ ಅವರ ಭಾಗವತಿಕೆಯಲ್ಲಿ ಪ್ರಸಿದ್ಧ ಕಲಾವಿದರು ಅರ್ಥಧಾರಿಗಳಾಗಿ ಪಾಲ್ಗೊಂಡರು.
ಪ್ರಪ್ರಥಮ ಯಕ್ಷಗಾನವನ್ನು ವಿದೇಶಕೊಯ್ದ ದಾಖಲೆಯ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಲ್ಲೊಬ್ಬರಾದ ರಾಷ್ಟçಪ್ರಶಸ್ತಿ ಪುರಸ್ಕೃತ ಶಿಕ್ಷಕ, ರಂಗನಟ, ಸಾಹಿತಿ ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣ 2022 ರ ಪ್ರಶಸ್ತಿಯನ್ನು ಯಕ್ಷಗಾನದ ನಡುತಿಟ್ಟಿನ ಹಾರಾಡಿ ಶೈಲಿಯ ಹಿರಿಯ ಕಲಾವಿದ ಕೋಡಿ ವಿಶ್ವನಾಥ ಗಾಣಿಗರಿಗೆ ಪ್ರದಾನ ಮಾಡಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಕಾರ್ಯಾಧ್ಯಕ್ಷ ಮಹೇಶ ಉಡುಪ ಮಂದರ್ತಿ, ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂಡ ಸಮಿತಿ ನಿರ್ಧರಿಸಿದೆ.
ಕಮಲಶಿಲೆ ಮೇಳದಲ್ಲಿ ಗೆಜ್ಜೆ ಕಟ್ಟಿ, ಅಮೃತೇಶ್ವರಿ, ಸಾಲಿಗ್ರಾಮ, ಹಾಲಾಡಿ, ಸೌಕೂರು ಮೇಳಗಳಲ್ಲಿ ಕರ್ಣ, ಜಾಂಬವ, ಅರ್ಜುನ, ಶಲ್ಯ, ರಾವಣ, ಕಂಸ, ಶೂರಸೇನ, ಈಶ್ವರ, ಕಾಲನೇಮಿ, ಶುಂಭ, ಮಧುಕೈಟಭ, ಅತಿಕಾಯ ಮೊದಲಾದ ಪಾತ್ರಗಳನ್ನು ನಿರ್ವಹಿಸಿದ ವಿಶ್ವನಾಥರು, ಅಟ್ಟೆ ಮುಂಡಾಸು ಕಟ್ಟುವುದರಲ್ಲಿ ದಾಖಲೆ ನಿರ್ಮಿಸಿದವರು.
ಹಳೆಯ ಹಾಗೂ ಹೊಸ ಪ್ರಸಂಗಗಳೆರಡರಲ್ಲು ಎತ್ತರದ ಶರೀರ ಮತ್ತು ಶಾರೀರದ ಕೋಡಿಯವರು ಹಿತ ಮಿತ ಮಾತು, ಗತ್ತಿನ ಕುಣಿತಗಳಿಂದ ಆಟ-ಜೋಡಾಟದ ರಂಗಸ್ಥಳದಲ್ಲಿ ವಿಜೃಂಭಿಸಿದವರು.
ಮುಂಬರುವ 2022 ರ ಫೆಬ್ರುವರಿ 2 ರಂದು ಕೋಟದ ಪಟೇಲರ ಮನೆಯಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಕೋಡಿಯವರಿಗೆ ಉಡುಪ ಪ್ರಶಸ್ತಿಯನ್ನಿತ್ತು ಗೌರವಿಸಲಾಗುವುದೆಂದು ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ಕಾರ್ಯದರ್ಶಿ ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.