ಕಳೆದ ತಿಂಗಳು ವಾಹನ ಅಪಘಾತದಲ್ಲಿ ನಿಧನ ಹೊಂದಿದ ಹಿರಿಯಡಕ ಮೇಳದ ಪ್ರಸಿದ್ಧ ಕಲಾವಿದ ವೇಣೂರು ವಾಮನ ಕುಮಾರ್ ಇವರ ಪತ್ನಿ ಆಶಾ ಇವರಿಗೆ ಉಡುಪಿಯ ಯಕ್ಷಗಾನ ಕಲಾರಂಗದ ವತಿಯಿಂದ ಐವತ್ತು ಸಾವಿರ ರೂಪಾಯಿಯ ಸಾಂತ್ವನ ನಿಧಿಯನ್ನು ದಿನಾಂಕ 04-02-2022ರಂದು ಹಿರಿಯಡಕ ಮೇಳದ ವೇದಿಕೆಯಲ್ಲಿ ನೀಡಲಾಯಿತು.
ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸ ರಾವ್ ನೇತೃತ್ವದಲ್ಲಿ ಹಿರಿಯಡಕದ ನಾಗರಿಕರಿಂದ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಾಗೂ ಮೇಳದ ಕಲಾವಿದರಿಂದ ಸಂಗ್ರಹಿಸಿದ ಮೂವತ್ತೆರಡು ಸಾವಿರ ರೂಪಾಯಿಯ ನಿಧಿಯನ್ನು ಕಲಾವಿದನ ಕುಟುಂಬಕ್ಕೆ ನೀಡಲಾಯಿತು.
ಮೇಳದ ಯಜಮಾನ ಪಿ. ಕಿಶನ್ ಹೆಗ್ಡೆಯವರು ವಾಮನ ಕುಮಾರರ ಈರ್ವರು ಮಕ್ಕಳ ಮುಂದಿನ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವುದಾಗಿ ಹೇಳಿದರು.
ಹಿರಿಯಡಕ ದೇವಳದ ಅರ್ಚಕರಾದ ಶ್ರೀ ರಂಗನಾಥ ಭಟ್, ಶ್ರೀಮತಿ ಪೂರ್ಣಿಮಾ ಸುರೇಶ್ ಹಾಗೂ ಕಲಾವಿದರ ಪ್ರತಿನಿಧಿಯಾದ ಸಿದ್ಧಕಟ್ಟೆ ಸದಾಶಿವ ಶೆಟ್ಟಿ ಈ ಸಂದರ್ಭದಲ್ಲಿ ನುಡಿನಮನ ಸಲ್ಲಿಸಿದರು.
“ಕೊರೋನ ಮಹಾ ಮಾರಿಯಿಂದ ಸಾಕಷ್ಟು ಸಂಕಟಕ್ಕೆ ಒಳಗಾದವರು ಯಕ್ಷಗಾನ ಕಲಾವಿದರು. ತೆಂಕು, ಬಡಗು, ಬಡಾ ಬಡಗು ತಿಟ್ಟಿನ ಅನೇಕ ಕಲಾವಿದರು ಪ್ರದರ್ಶನಗಳಿಲ್ಲದೆ ನೊಂದಿದ್ದಾರೆ, ಅವರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ, ಯಾವುದೇ ಆತಂಕವಿಲ್ಲದೆ ಮುಕ್ತ ವಾತಾವರಣದಲ್ಲಿ ಪ್ರದರ್ಶನ ನಡೆಯುವಂತೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೆ ಮಾತುಕತೆ ನಡೆದಿದೆ. ಕಲೆ ಕಲಾವಿದರ ಬಲವಾಗಿ ಘನ ಸರಕಾರ ಸದಾ ನಿಮ್ಮೊಂದಿಗಿದೆ” ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಮಾನ್ಯ ಕೊಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೋಟ ಪಟೇಲರ ಮನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೆನರಾ ಬ್ಯಾಂಕ್ ಮಣಿಪಾಲ, ಕರ್ಣಾಟಕ ಬ್ಯಾಂಕ್ ನ ಸಹಕಾರದೊಂದಿಗೆ ನಡೆದ ಸಾಲಿಗ್ರಾಮ ಗುರು ಪ್ರಸಾದಿತ ಯಕ್ಷಗಾನ ಮಂಡಲಿಯ ಯಕ್ಷಗಾನ ಪ್ರದರ್ಶನದಲ್ಲಿ ಸರ್ವ ಕಲಾವಿದರನ್ನು ಗೌರವಿಸಿ ಅವರು ಮಾತನಾಡಿದರು.
ಪಿ. ಕಿಶನ್ ಹೆಗ್ಡೆ ಸಾರಥ್ಯದ ಸಾಲಿಗ್ರಾಮ ಮೇಳದ ಹಿರಿಯ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿ, ಹಾಸ್ಯಗಾರರಾದ ರಮೇಶ್ ಭಂಡಾರಿ, ಭಾಗವತ ರಾಮಕೃಷ್ಣ ಹಿಲ್ಲೂರು, ನೀಲ್ಕೋಡು ಶಂಕರ ಹೆಗಡೆ, ಶಶಿಕಾಂತ ಶೆಟ್ಟಿ ಸಹಿತ ಸಾಲಿಗ್ರಾಮ ಮೇಳದ ಎಲ್ಲಾ ಕಲಾವಿದರೂ ಹಾಗೂ ಸಿಬ್ಬಂದಿ ವರ್ಗದವರನ್ನು ಸಾಲಿಗ್ರಾಮ ಮಕ್ಕಳ ಮೇಳದ ಪರವಾಗಿ ಗೌರವಿಸಲಾಯಿತು.
ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಶ್ರೀಧರ ಹಂದೆ ಎಚ್., ಮಣಿಪಾಲ ಕೆನರಾ ಬ್ಯಾಂಕ್ನ ಮಹಾ ಪ್ರಬಂಧಕ ರಾಮ ನಾಯ್ಕ್ ಕೆ, ಬೆಂಗಳೂರಿನ ಸಾಫ್ಟ್ವೇರ್ ಇಂಜನಿಯರ್ ಹಾಗೂ ಕಲಾವಿದರೂ ಆದ ಎಂ. ಸುಧೀಂದ್ರ ಹೊಳ್ಳ, ಕಲಾ ಸಾಹಿತಿ ಜನಾರ್ದನ ಹಂದೆ ಮಂಗಳೂರು, ಯಕ್ಷದೇಗುಲದ ಸುದರ್ಶನ ಉರಾಳ, ಉಪಸ್ಥಿತರಿದ್ದರು.
ವೆಂಕಟೇಶ ವೈದ್ಯ ಸ್ವಾಗತಿಸಿ, ಲಂಬೋದರ ಹೆಗಡೆ ವಂದಿಸಿದರು. ಮಕ್ಕಳ ಮೇಳದ ಕಾರ್ಯದರ್ಶಿ ಉಪನ್ಯಾಸಕ ಸುಜಯೀಂದ್ರ ಹಂದೆ ನಿರ್ವಹಿಸಿದರು.
ಬಳಿಕ ಸುಜಯೀಂದ್ರ ಹಂದೆ ವಿರಚಿತ ರುರು ಪ್ರಮದ್ವರಾ ಹಾಗೂ ನಿತ್ಯಾನಂದ ಅವಧೂತ ವಿರಚಿತ ಕನಕಾಂಗಿ ಕಲ್ಯಾಣ ಪ್ರದರ್ಶನಗೊಂಡಿತು.
ಭಾರತದ ನಾನಾ ಭಾಷೆಗಳಲ್ಲಿ ಬರೆಯಲ್ಪಟ್ಟಿರುವ, ಅದರಲ್ಲೂ ಕವಿ ಜನ್ನನಿಂದ ರಚಿತವಾಗಿ ಕನ್ನಡ ಸಾಹಿತ್ಯಲೋಕದಲ್ಲಿ ಚಿರಪರಿಚಿತವಾದಂತಹ ಕೃತಿ‘ಯಶೋಧರಚರಿತೆ’.ದಕ್ಷಿಣ ಕನ್ನಡದ ಗಂಡುಕಲೆಯೆಂದೇ ಖ್ಯಾತವಾದ ಯಕ್ಷಗಾನದಲ್ಲಿ ರಾಮಾಯಣ, ಮಹಾಭಾರತಾದಿ ಕಥೆಗಳೊಂದಿಗೆ ವೈದಿಕ ಸಾಹಿತ್ಯವು ಯಕ್ಷಗಾನ ರೂಪದಿಂದ ಜನತೆಯ ಅನುಭವಕ್ಕೆ ಬಂದಿರುವುದು ನಮಗೆಲ್ಲ ವೇದ್ಯವಾದ ವಿಚಾರ.
ಆದರೆ ಜೈನ ಸಾಹಿತ್ಯವು ಎಲ್ಲ ಜನಮನಕೆ ತಲುಪಿಲ್ಲದೇ ಇರುವುದರಿಂದ ಆ ದಿಶೆಯ ಪ್ರಯತ್ನವಾಗಿ ಕಂಡು ಬರುವುದು1955ರಲ್ಲಿ ಕವಿಭೂಷಣ ವೆಂಕಪ್ಪ ಶೆಟ್ಟಿ ಅವರಿಂದ ರಚಿತವಾದ ಪಾತ್ರವರ್ಗದ ಮಾತುಗಳಿಂದ ಕೂಡಿದ ‘ಯಶೋಧರಚರಿತೆ’(ಜೀವದಯಾ ಪ್ರಬೋಧೆ) ಎಂಬ ಯಕ್ಷಗಾನರೂಪಕ.
ಸಂಕಲ್ಪ ಹಿಂಸೆಯ ಪರಿಣಾಮ ಯಶೋಧರ-ಚಂದ್ರಮತಿಯರು ಜನ್ಮಾಂತರಗಳಲ್ಲಿ ಬಳಲಿದ ಕಥೆಯನ್ನು, ಅಹಿಂಸಾ ಧರ್ಮದ ಮಹತ್ವವನ್ನು ಸಾರುವುದೇ ಕೃತಿಯ ಮೂಲ ಉದ್ದೇಶವಾಗಿದೆ.ಧರ್ಮದ ಹೆಸರಿನಲ್ಲಿ ದೇವತಾ ಸನ್ನಿಧಿಯಲ್ಲಿ ಪ್ರಾಣಿಬಲಿಯನ್ನು ಕೊಡುವುದು ಶಾಸ್ತçಕ್ಕೆ ವಿರುದ್ಧವಾಗಿರುವ ತಾಮಸ ಕರ್ಮವಾಗಿದೆ.
ಮನುಷ್ಯನು ತನ್ನ ಒಳಿತಿಗಾಗಿ ಮೂಕಪಶುವನ್ನು ಬಲಿ ಕೊಡುವುದನ್ನುತಡೆಗಟ್ಟುವ ಸಂಪ್ರದಾಯಕ್ಕೆ ನಾಂದಿ ಹಾಡಲು, ಭಾವಹಿಂಸೆಯೇ ಜನ್ಮಾಂತರದ ದುಃಖವನ್ನು ತರುವುದು ಎಂದಾದಲ್ಲಿ, ನಿಜ ಹಿಂಸೆಯು ಇನ್ನಷ್ಟು ಘೋರ ದುಃಖವನ್ನು ತAದೊಡ್ಡುವುದು ಎಂಬ ವಿಚಾರವನ್ನು ಜನರ ಮನಸ್ಸಿನಲ್ಲಿ ಮೂಡಿಸುವ ಉದ್ದೇಶ ಈ ಕೃತಿಯದು. ಈ ರೂಪಕದಲ್ಲಿನ ಬೋಧನಾಪರ ವಾಕ್ಯಗಳು ಸಂದರ್ಭಾನುಸಾರ ಗಂಭೀರತೆಯಿಂದ ಮೂಡಿ ಕಥೆಯು ಅತ್ಯಂತ ಸೊಗಸಾಗಿ ಸಾಗಿದೆ.
ಶಾರದಾ ಪ್ರಾರ್ಥನೆಯೊಂದಿಗೆ ಆರಂಭವಾಗುವ ಪ್ರಸಂಗವು ಪಾತ್ರಗಳ ವಿವರಗಳೊಂದಿಗೆ, ಮಾತ್ರೆ, ತಾಳ ಪ್ರಸ್ತಾರದ ವಿವರಗಳನ್ನು ಒಳಗೊಂಡಿದೆ. ಇದರ ಕೊನೆಯಲ್ಲಿ ಅಹಿಂಸಾಧರ್ಮದ ಬಗೆಗೆ ಮಹಾಭಾರತದಲ್ಲಿ ಕಂಡುಬರುವ ಉಲ್ಲೇಖಗಳು ಹಾಗೂ ಇದಕ್ಕೆ ವಿರುದ್ಧವಾಗಿ ಅಲ್ಲಿ ಕಂಡುಬರುವ ಸನ್ನಿವೇಶದ ವಿವರಗಳನ್ನೂ ನೀಡಿದ್ದಾರೆ.
ಹೆಚ್ಚಾಗಿ ರಾಮಾಯಣ, ಮಹಾಭಾರತದಿಂದ ಆಯ್ದ ಪ್ರಸಂಗಗಳ ನಡುವೆ ಜೈನಧರ್ಮಕ್ಕೆ ಸಂಬಂಧಿಸಿದ ಕನ್ನಡ ಸಾಹಿತ್ಯ ಮಾತ್ರವಲ್ಲ ಭಾರತದ ಹೆಚ್ಚಿನ ಎಲ್ಲ ಭಾಷೆಗಳಲ್ಲೂ ಪ್ರಚುರತೆಯನ್ನು ಪಡೆದಿರುವ ಕಥಾನಕವೊಂದು ಯಕ್ಷಗಾನ ರೂಪಕವಾಗಿ ಸುಮಾರು 75 ವರ್ಷಗಳ ಹಿಂದೆಯೇ ರಚಿತವಾಗಿದ್ದುದು ಕಣ್ಣಿಗೆ ಬಿದ್ದಾಗ ವಿಶೇಷವೆನಿಸಿದ್ದಂತೂ ನಿಜ.
ಲೇಖಕಿ: ಡಾ. ಮೈತ್ರಿ ಭಟ್
ಡಾ. ಮೈತ್ರಿ ಭಟ್, ಉಪನ್ಯಾಸಕಿ, ಕನ್ನಡ ವಿಭಾಗ, ವಿವೇಕಾನಂದಕಾಲೇಜು, ನೆಹರೂ ನಗರ, ಪುತ್ತೂರು – 574203 ಮೊಬೈಲು ಸಂಖ್ಯೆ: 9449793584