ಭೀಕರ ಅಫಘಾತವೊಂದರಲ್ಲಿ ಎರ್ಟಿಗಾ ಕಾರು ಮತ್ತು ಮಾರುತಿ ಓಮ್ನಿ ನಡುವೆ ಢಿಕ್ಕಿ ಸಂಭವಿಸಿ ಏಳು ಜನ ಗಾಯಗೊಂಡ ಘಟನೆ ನಿನ್ನೆ ಶನಿವಾರ ನಡೆದಿದೆ.
ಧರ್ಮಸ್ಥಳ-ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣದಲ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು ಕಾರುಗಳೆರಡೂ ನುಜ್ಜುಗುಜ್ಜಾಗಿದ್ದು ಎರಡೂ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ಗಾಯಗೊಂಡಿದ್ದಾರೆ.
ಬೆಂಗಳೂರು ಮೂಲದ ಕುಟುಂಬವೊಂದು ಧರ್ಮಸ್ಥಳ ಕ್ಷೇತ್ರ ಸಂದರ್ಶನ ಮುಗಿಸಿ ಸುಬ್ರಹ್ಮಣ್ಯ ಕ್ಷೇತ್ರದತ್ತ ಪ್ರಯಾಣಿಸುತ್ತಿತ್ತು. ಓಮ್ನಿ ಕಾರಿನಲ್ಲಿದ್ದ ಶಿವಮೊಗ್ಗ, ಶಿಕಾರಿಪುರದ ಪ್ರಯಾಣಿಕರು ಧರ್ಮಸ್ಥಳದತ್ತ ಬರುತ್ತಿದ್ದರು ಎಂದು ತಿಳಿದುಬಂದಿದೆ.
ನೆಟ್ಟಣ ಸಮೀಪದ ಅಮಲ ಫಾರ್ಮ್ ಸಮೀಪ ಎರಡೂ ಕಾರುಗಳು ಮುಖಾಮುಖಿಯಾಗಿ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಏಳು ಮಂದಿ ಗಾಯಗೊಂಡಿದ್ದು ಕೂಡಲೇ ಕಡಬ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು.
ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳಕ್ಕೆ ಕಡಬ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ಭಾನುವಾರ, ಆಗಸ್ಟ್ 28 ರಂದು, ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಸೂಪರ್ಟೆಕ್ ಅವಳಿ ಗೋಪುರಗಳು 3,700 ಕೆಜಿ ಸ್ಫೋಟಕಗಳ ಬಳಕೆಯಿಂದ ಸುಮಾರು 15 ಸೆಕೆಂಡುಗಳಲ್ಲಿ ಧೂಳು ಮತ್ತು ಅವಶೇಷಗಳಾಗಲಿವೆ.
ದೆಹಲಿಯ ಕುತುಬ್ ಮಿನಾರ್ಗಿಂತಲೂ ಎತ್ತರವಾಗಿರುವ ಈ ಗಗನಚುಂಬಿ ಕಟ್ಟಡಗಳು ನೆಲಸಮವಾಗಲಿರುವ ಭಾರತದ ಅತಿ ಎತ್ತರದ ಕಟ್ಟಡಗಳಾಗಲಿವೆ. ಅವಳಿ ಗೋಪುರಗಳು ವಸತಿ ಸಮುಚ್ಚಯಕ್ಕೆ ಬಹಳ ಸಮೀಪದಲ್ಲಿ ಇರುವುದರಿಂದ ಅಧಿಕಾರಿಗಳು ಮತ್ತು ಸರ್ಕಾರಿ ಸಂಸ್ಥೆಗಳು ಉರುಳಿಸುವ ಮೊದಲು ಹಲವಾರು ಅಡೆತಡೆಗಳನ್ನು ಎದುರಿಸುತ್ತಿವೆ.
ಡೆಮೊಲಿಷನ್ -ಡೇಗಾಗಿ ನಿವಾಸಿಗಳು ಹೇಗೆ ತಯಾರಿ ನಡೆಸುತ್ತಿದ್ದಾರೆ ಎಂಬುದರ ವಿವರವಾದ ವರದಿ ಇಲ್ಲಿದೆ.
ಸೂಪರ್ಟೆಕ್ನ ಅವಳಿ ಗೋಪುರಗಳ ಸಮೀಪವಿರುವ ಕಟ್ಟಡಗಳಲ್ಲಿ ವಾಸಿಸುವ ಹಲವಾರು ಜನರು ರಜೆಯ ಮೇಲೆ ಹೋಗಲು ನಿರ್ಧರಿಸಿದ್ದಾರೆ, ಆದರೆ ಅನೇಕರನ್ನು ಭಾನುವಾರ ಹೋಟೆಲ್ಗಳಲ್ಲಿ ಇರಿಸಲಾಗುವುದು, ಆಗ ಕಟ್ಟಡಗಳನ್ನು ಸ್ಫೋಟಕಗಳ ಸಹಾಯದಿಂದ ಕೆಡವಲು ನಿರ್ಧರಿಸಲಾಗಿದೆ.
ಅವಳಿ ಗೋಪುರದಿಂದ ಕೆಲವು ಮೀಟರ್ ದೂರದಲ್ಲಿ ವಾಸಿಸುವ ಗೌರವ್ ಸಕ್ಸೇನಾ ಮೂರು ದಿನಗಳ ಕಾಲ ಕುಟುಂಬದೊಂದಿಗೆ ನೈನಿತಾಲ್ಗೆ ವಿಹಾರಕ್ಕೆ ಹೋಗುತ್ತಿದ್ದಾರೆ. ಸಕ್ಸೇನಾಗೆ ಧೂಳಿನ ಅಲರ್ಜಿಯ ಭಯವಿದೆ.
“ನಾವು ರಜೆಯ ಮೇಲೆ ಹೋಗಲು ನಿರ್ಧರಿಸಿದ್ದೇವೆ, ನನ್ನ ತಾಯಿ ಅಸ್ತಮಾ ರೋಗಿ, ಅವಳನ್ನು ಮನೆಯಲ್ಲಿ ಇರಿಸುವ ಅಪಾಯವನ್ನು ನಾವು ತೆಗೆದುಕೊಳ್ಳಲಾಗುವುದಿಲ್ಲ. ಆದ್ದರಿಂದ, ನಾವು ನೈನಿತಾಲ್ಗೆ ಸಣ್ಣ ರಜೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ. ನಾವು ಸ್ವಲ್ಪ ಸಮಯ ಕಳೆಯಲು ಸಾಧ್ಯವಾಗುತ್ತದೆ. ನಗರದ ಹೊರಗೆ ಮತ್ತು ಅಲ್ಲಿಯವರೆಗೆ ಧೂಳು ನೆಲೆಗೊಳ್ಳುತ್ತದೆ, ”ಸಕ್ಸೇನಾ ತಿಳಿಸಿದರು.
Noida twin towers demolition: What will be the impact of dust on residents?
ಶ್ರೀ ದಿವಾಣ ಶಿವಶಂಕರ ಭಟ್ಟರು ಯಕ್ಷಗಾನ ಕಲಾವಿದನಾಗಿ, ಕಲಿಕಾಸಕ್ತರಿಗೆ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಹೇಳಿಕೊಟ್ಟ ಗುರುವಾಗಿ ಎಲ್ಲರಿಗೂ ಪರಿಚಿತರು. ಇವರು ತೆಂಕುತಿಟ್ಟಿನ ಅನುಭವೀ ಹಿರಿಯ ಕಲಾವಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರದ ಗುರುವಾಗಿ, ಹಲವಾರು ಕಡೆಗಳಲ್ಲಿ ಯಕ್ಷಗಾನ ತರಬೇತಿಯನ್ನು ನೀಡಿ, ಶಿಷ್ಯಂದಿರನ್ನು ಸಿದ್ಧಗೊಳಿಸಿ ಕಲಾಮಾತೆಯ ಮಡಿಲಲ್ಲಿ ಇರಿಸಿದ ಗುರುಗಳೂ ಹೌದು. ಕಲಾಕ್ಷೇತ್ರದಲ್ಲಿ ಇವರು ನಲುವತ್ತೆರಡು ವರುಷಗಳ ಅನುಭವಿ.
ದಿವಾಣ ಮನೆತನದಿಂದ ಯಕ್ಷಗಾನಕ್ಕೆ ಅನುಪಮವಾದ ಕೊಡುಗೆಗಳಿವೆ. ಖ್ಯಾತ ಮದ್ದಳೆಗಾರರಾದ ಲಯಬ್ರಹ್ಮ ದಿವಾಣ ಭೀಮ ಭಟ್ಟರು, ದಿವಾಣ ಶಂಕರ ಭಟ್ಟರು ಇವರಲ್ಲಿ ಪ್ರಮುಖರು. ಅದೇ ಮನೆತನದಲ್ಲಿ ಜನಿಸಿದ ಶಿವಶಂಕರ ಭಟ್ಟರು ಹಂತಹಂತವಾಗಿ ಬೆಳೆಯುತ್ತಾ ಯಕ್ಷಗಾನ ಕ್ಷೇತ್ರದಲ್ಲಿ ಸಾಗಿಬಂದವರು. ಪ್ರಸ್ತುತ ಇವರು ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ದಿವಾಣ ಶಿವಶಂಕರ ಹುಟ್ಟೂರು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಎಡನಾಡು ಗ್ರಾಮದ ನೂಚನಗುಳಿ. ಶ್ರೀ ಗಣಪತಿ ದಿವಾಣ ಮತ್ತು ಮತ್ತು ಶ್ರೀಮತಿ ಶಾರದಾ ದಂಪತಿಗಳ ಪುತ್ರನಾಗಿ 1964ನೇ ಇಸವಿ ಮೇ 31ರಂದು ಜನನ. ಶಿವಶಂಕರ ಭಟ್ಟರ ಅಜ್ಜ ಶ್ರೀ ಭೀಮ ಭಟ್ ಅವರು ದಿವಾಣದಿಂದ ಬಂದು ಇಲ್ಲಿ ನೆಲೆಸಿದವರು. ಆಗ ಶಿವಶಂಕರ ಭಟ್ಟರ ತಂದೆ ಗಣಪತಿ ದಿವಾಣರಿಗೆ 13 ವರ್ಷ ಪ್ರಾಯ. ಅಜ್ಜ ದಿವಾಣ ಭೀಮ ಭಟ್ಟರು ತಾಳಮದ್ದಳೆ ಅರ್ಥಧಾರಿ. ದೊಡ್ಡಜ್ಜ ದಿವಾಣ ಕೃಷ್ಣ ಭಟ್ಟರು ಭಾಗವತರಾಗಿದ್ದರು. ಇವರು ಖ್ಯಾತ ಮದ್ದಳೆಗಾರರಾಗಿ ಹೆಸರುಗಳಿಸಿದ ದಿವಾಣ ಭೀಮ ಭಟ್ಟರಿಗೆ ಗುರುಗಳಾಗಿದ್ದರು.
ಶಿವಶಂಕರ ಭಟ್ಟರ ತಂದೆ ಗಣಪತಿ ದಿವಾಣ ಅವರು ಯಕ್ಷಗಾನ ವೇಷಧಾರಿ ಮತ್ತು ಉತ್ತಮ ಬರಹಗಾರರಾಗಿದ್ದರು. ಸೂರಂಬೈಲು ಅಂಚೆಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿದವರು. ದಿವಾಣ ಶಿವಶಂಕರ ಭಟ್ಟರು ಓದಿದ್ದು ಹತ್ತನೇ ತರಗತಿ ವರೆಗೆ. ಸೂರಂಬೈಲು ಸರಕಾರೀ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕುಂಬಳೆ ಸರಕಾರೀ ಪ್ರೌಢಶಾಲೆಯಲ್ಲಿ. ಹೊಸಹಿತ್ತಿಲು ಮನೆಯವರು ಇವರ ಬಂಧುಗಳು. (ಅಪ್ಪನ ಸೋದರತ್ತೆಯ ಮನೆ) ಇವರಿಗೆ ಯಕ್ಷಗಾನ ಕಲೆಯು ರಕ್ತಗತವಾಗಿಯೇ ಬಂದಿತ್ತು.
ಎಳವೆಯಲ್ಲೇ ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂದು ಬಯಸಿದವರು. ಮಾಣಂಗಾಯಿ ಕೃಷ್ಣ ಭಟ್ಟರ ಕಂಸ, ಕಾರ್ತವೀರ್ಯ, ರಾಮದಾಸ ಸಾಮಗರ ರುಕ್ಮಾಂಗದ, ಹೊಸಹಿತ್ತಿಲು ಮಹಾಲಿಂಗ ಭಟ್ಟರ ಧರ್ಮಾಂಗದ, ಪುತ್ತೂರು ನಾರಾಯಣ ಹೆಗ್ಡೆಯವರ ವಾಲಿ, ಶೇಣಿಯವರ ಶುಕ್ರಾಚಾರ್ಯ, ಮಹಮ್ಮದ್ ಬಿನ್ ತುಘಲಕ್, ಬಪ್ಪಬ್ಯಾರಿ, ರಾವಣ, ಕೆ.ಗೋವಿಂದ ಭಟ್ಟರ ದೂರ್ವಾಸ, ಕೌಶಿಕ, ಜಾಂಬವ, ಕೌರವ, ಪ್ರಕಾಶ್ ಚಂದ್ರ ಬಾಯಾರು ಅವರ ಕಚ ಮೊದಲಾದ ಪಾತ್ರಗಳು ಇವರ ಮನಸ್ಸನ್ನು ಸೂರೆಗೊಂಡಿತ್ತು. ಆದರೂ ನಾಟ್ಯ ಕಲಿಕೆಗೆ ಅವಕಾಶವಿಲ್ಲದ ಕಾರಣ ಎಸ್ಸೆಸ್ಸೆಲ್ಸಿ ಆದ ನಂತರ ಬೆಂಗಳೂರಿಗೆ ತೆರಳಿ ಕಂಗಣ್ಣಾರು ಶಂಕರನಾರಾಯಣ ಭಟ್ಟರ ಜತೆ 1 ವರ್ಷ ಕೆಲಸ ಮಾಡಿದ್ದರು.
ಆದರೆ ಯಕ್ಷಗಾನ ಕಲೆಯು ಇವರನ್ನು ಕೈಬೀಸಿ ಊರಿಗೆ ಕರೆದಿತ್ತು. ಮರಳಿ ಊರಿಗೆ ಬಂದು ಯಕ್ಷಗಾನ ಪ್ರದರ್ಶನಗಳನ್ನು ನೋಡಲು ಆರಂಭಿಸಿದರು. ಆಗ ಊರಲ್ಲಿ ಖ್ಯಾತ ಯಕ್ಷಗಾನ ಸಂಘಟಕ ಶ್ರೀ ವೈ.ಡಿ ನಾಯಕ್ ರ ನೇತೃತ್ವದಲ್ಲಿ ಅಲ್ಲಲ್ಲಿ ತಾಳಮದ್ದಳೆ ನಡೆಯುತ್ತಿತ್ತು. 1980ನೇ ಇಸವಿ. ಪತ್ತನಾಜೆಯ ಮುನ್ನಾದಿನ ನಾಯ್ಕಾಪು ಎಂಬಲ್ಲಿ ಶ್ರೀ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘದ ತಾಳಮದ್ದಳೆಗೆ ತೆರಳಿದ್ದರು. ಕಚದೇವಯಾನಿ ಪ್ರಸಂಗದಲ್ಲಿ ದೇವೇಂದ್ರನ ಬಲ (ಅಗ್ನಿ) ಪಾತ್ರದಲ್ಲಿ ಅರ್ಥ ಹೇಳಲು ಇವರಿಗೆ ಸಂಘಟಕರು ಸೂಚಿಸಿದ್ದರು. ತಾಳಮದ್ದಳೆಯಾದರೂ ಪದ್ಯಕ್ಕೆ ಕುಣಿದು ಅರ್ಥ ಹೇಳಲು ಭಾಗವತರೂ, ಮದ್ದಳೆಗಾರರೂ ಇವರಿಗೆ ಸೂಚಿಸಿದರು. ಇವರು ಕುಣಿದು ಆಮೇಲೆ ಅರ್ಥ ಹೇಳಿದರು. ಇದನ್ನು ನೋಡಿದ ಭಾಗವತ ಶೇಡಿಗುಮ್ಮೆ ಕೃಷ್ಣ ಭಟ್ಟರೂ ವೈ.ಡಿ ನಾಯಕ್ ಅವರೂ ಧರ್ಮಸ್ಥಳ ಕೇಂದ್ರದಲ್ಲಿ ಕೆ.ಗೋವಿಂದ ಭಟ್ಟರಿಂದ ಶಾಸ್ತ್ರೀಯವಾಗಿ ನಾಟ್ಯ ಕಲಿಯಲು ಸಲಹೆ ನೀಡಿದರು.
ಪತ್ತನಾಜೆಯ ದಿನ ಮೇಳಕ್ಕೆ ರಜೆಯಾದುದರಿಂದ ಅಂದು ಮಂಗಳೂರು ಪುರಭವನದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಶಶಿಪ್ರಭಾ- ಕುಶಲವ ಕಾಳಗ ಆಟವಿತ್ತು. ಅಲ್ಲಿಗೆ ವೈ.ಡಿ ನಾಯಕ್ ಅವರ ಜತೆ ತೆರಳಿದ್ದರು. ಅಲ್ಲಿಗೆ ಕಲಾವಿದರಾಗಿ ಬಂದಿದ್ದ ನೆಡ್ಲೆ ನರಸಿಂಹ ಭಟ್ಟ ಮತ್ತು ಕೆ.ಗೋವಿಂದ ಭಟ್ಟರೊಡನೆ ಮಾತನಾಡಿ ಅವರೊಂದಿಗೇ ಧರ್ಮಸ್ಥಳಕ್ಕೆ ಹೋಗಿದ್ದರು. ಧರ್ಮಸ್ಥಳ ಲಲಿತ ಕಲಾ ಕೇಂದ್ರದಲ್ಲಿ ಕೆ.ಗೋವಿಂದ ಭಟ್ಟರಿಂದ ನಾಟ್ಯಾಭ್ಯಾಸ. ಕೇಂದ್ರದಲ್ಲಿ ಕಬ್ಬಿನಾಲೆ ವಸಂತ ಭಾರಧ್ವಾಜ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಕೋಳ್ಯೂರು ಗೋಪಾಲಕೃಷ್ಣ ಭಟ್, ಕೇಶವ ಕೊಕ್ಕಡ, ರಾಜೀವ ಬ್ರಹ್ಮರಕೂಟ್ಲು, ಲಕ್ಷ್ಮೀನಾರಾಯಣ ಕಲ್ಚಾರ್, ಶ್ರೀಹರಿ ತಲೆಂಗಳ, ದೇಲಂಪಾಡಿ ಬಾಲಕೃಷ್ಣ, ಬಾಲಕೃಷ್ಣ ಪೈ ಬಳ್ಳಂಬೆಟ್ಟು, ಗೇರುಕಟ್ಟೆ ದಾಸಪ್ಪ ಗೌಡ, ಪದ್ಮನಾಭ ಶೆಟ್ಟಿ, ಪೆಲತ್ತಡ್ಕ ಪಾಂಡುರಂಗ ಭಟ್ ಇವರ ಸಹಪಾಠಿಗಳಾಗಿದ್ದರು.
ತರಬೇತಿ ಕೇಂದ್ರದಲ್ಲಿ ಒಟ್ಟು ನಾಲ್ಕು ಪ್ರದರ್ಶನಗಳು ನಡೆದಿತ್ತು. ಮಾಧ್ಯಮ ವ್ಯಾಯೋಗ ಪ್ರಸಂಗದಲ್ಲಿ ಭೀಮನಾಗಿ ದಿವಾಣ ಶಿವಶಂಕರ ಭಟ್ಟರು ರಂಗಪ್ರವೇಶ ಮಾಡಿದ್ದರು. ಅಂದು ಕಬ್ಬಿನಾಲೆ ಅವರು ಹಿಡಿಂಬೆಯ ಪಾತ್ರ ಮಾಡಿದ್ದರು. ಬಳಿಕ ದಕ್ಷಯಜ್ಞ ಪ್ರಸಂಗದಲ್ಲಿ ಈಶ್ವರನಾಗಿ, ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ಕಾರ್ತವೀರ್ಯ, ಕೃಷ್ಣಾರ್ಜುನ ಪ್ರಸಂಗದಲ್ಲಿ ಗಯನ ಪಾತ್ರಗಳನ್ನು ಮಾಡಿದ್ದರು. ಭೀಷ್ಮಾರ್ಜುನ ಪ್ರಸಂಗ ತಾಳಮದ್ದಳೆಯಲ್ಲಿ ಕೌರವನಾಗಿ ಅರ್ಥ ಹೇಳಿದ್ದರು.
ದಿವಾಣ ಶಿವಶಂಕರ ಭಟ್ಟರ ಮೊದಲ ತಿರುಗಾಟ 1980ರಲ್ಲಿ. ನೆಡ್ಲೆ ನರಸಿಂಹ ಭಟ್ಟರ ಹೇಳಿಕೆಯಂತೆ ಕಟೀಲು ಮೇಳಕ್ಕೆ. ಬಳಿಕ ಕುಬಣೂರು ಶ್ರೀಧರ ರಾಯರ ಕೂಡ್ಲು ಮೇಳದಲ್ಲಿ 1 ವರ್ಷ. ಇಲ್ಲಿ ಕಾವೂರು ಕೇಶವರ ಒಡನಾಟವಿತ್ತು. ಬಳಿಕ ಪಟ್ಲಗುತ್ತು ಮಹಾಬಲ ಶೆಟ್ಟರ ಮಲ್ಲ ಮೇಳದಲ್ಲಿ 3 ವರ್ಷ. ಈ ಮೇಳದಲ್ಲಿ ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿ ಮತ್ತು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಒಡನಾಟವಿತ್ತು. ಬಳಿಕ ಪುತ್ತೂರು ಶ್ರೀಧರ ಭಂಡಾರಿಗಳ ಪುತ್ತೂರು ಮೇಳ, ಬಳ್ಳಂಬೆಟ್ಟು ಶೀನಪ್ಪ ಭಂಡಾರಿಗಳ ಆದಿ ಸುಬ್ರಹ್ಮಣ್ಯ ಮೇಳ, ಅಡ್ಯಾರು ಶಂಕರ ಆಳ್ವರ ಬಪ್ಪನಾಡು ಮೇಳದಲ್ಲೂ ವ್ಯವಸಾಯ ನಡೆಸಿದ್ದರು. ಬಳಿಕ ಕಟೀಲು ಮೇಳದಲ್ಲಿ ತಿರುಗಾಟ.
1994ರಿಂದ ಯಕ್ಷಗಾನ ತಿರುಗಾಟದಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಯಿತು. ಬಳಿಕ ಕೆಲಸಮಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ಕಚೇರಿಯಲ್ಲಿ ಕೆಲಸ ಮಾಡಿದ್ದರು. ಶ್ರೀ ದಿವಾಣ ಶಿವಶಂಕರ ಭಟ್ಟರನ್ನು ಮತ್ತೆ ಮೇಳದ ತಿರುಗಾಟ ನಡೆಸುವಂತೆ ಸೂಚನೆ ನೀಡಿದವರು ಗುರುಗಳಾದ ಕೆ. ಗೋವಿಂದ ಭಟ್ಟರು. 1999ರಲ್ಲಿ ಶ್ರೀ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆ. ಮರುವರ್ಷ 2000ನೇ ಇಸವಿಯಲ್ಲಿ ಖಾವಂದರ ಹೇಳಿಕೆಯಂತೆ ಧರ್ಮಸ್ಥಳ ಲಲಿತಕಲಾ ಕೇಂದ್ರದಲ್ಲಿ ಗುರುವಾಗಿ ನಿಯುಕ್ತರಾದರು. 2007ರ ವೆರೆಗೆ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ್ದರು. 2008ರ ವರೆಗೆ ಧರ್ಮಸ್ಥಳ ಕಲಿಕಾ ಕೇಂದ್ರದಲ್ಲಿ ಗುರುವಾಗಿ ಅಭ್ಯಾಸಿಗಳಿಗೆ ತರಬೇತಿ ನೀಡಿದ್ದರು.
ಧರ್ಮಸ್ಥಳ ಮೇಳದ ತಿರುಗಾಟದ ಬಳಿಕ ಎಡನೀರು, ಹೊಸನಗರ, ಕಟೀಲು ಮೇಳಗಳಲ್ಲಿ ಒಂದೊಂದು ವರ್ಷ ತಿರುಗಾಟ ನಡೆಸಿದ್ದರು. ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಕುಂಬಳೆಯ ದರ್ಬಾರ್ ಕಟ್ಟೆಯಲ್ಲಿರುವ ದೇವಸ್ಥಾನದಲ್ಲಿ ಹನ್ನೊಂದು ತಿಂಗಳ ಕಾಲ ಅರ್ಚಕರಾಗಿಯೂ ಕೆಲಸ ಮಾಡಿದ್ದರು. ದಿವಾಣ ಶಿವಶಂಕರ ಭಟ್ಟರು ಕಳೆದ 2 ವರ್ಷಗಳಿಂದ ಪಾವಂಜೆ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಶ್ರೀ ದಿವಾಣ ಶಿವಶಂಕರ ಭಟ್ಟರು ಬಡಗಿನ ನಾಟ್ಯವನ್ನೂ ಕಲಿತಿದ್ದರು. 1984ರಲ್ಲಿ ಮಳೆಗಾಲ ಉಡುಪಿಯ ಯಕ್ಷಗಾನ ಕಲಿಕಾ ಕೇಂದ್ರ ಸೇರಿ ಕೋಟ ಮಹಾಬಲ ಕಾರಂತ, ನೀಲಾವರ ಲಕ್ಷ್ಮೀನಾರಾಯಣ ರಾವ್, ಚೇರ್ಕಾಡಿ ಮಂಜುನಾಥ ಪ್ರಭು, ವಿದ್ವಾನ್ ಗಣಪತಿ ಭಟ್, ಬನ್ನಂಜೆ ಸಂಜೀವ ಸುವರ್ಣರಿಂದ ಬಡಗುತಿಟ್ಟಿನ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿದ್ದರು.
ಶ್ರೀ ಧರ್ಮಸ್ಥಳ ಲಲಿತ ಕಲಾ ಕೇಂದ್ರದ ಗುರುವಾಗಿ ಅಲ್ಲದೆ ಇನ್ನೂ ಹಲವಾರು ಕಡೆಗಳಲ್ಲಿ ಕಲಿಕಾಸಕ್ತರಿಗೆ ಇವರು ತರಬೇತಿ ನೀಡಿದ್ದರು. ಬೆದ್ರಡ್ಕ ಶ್ರೀರಾಮ ಯಕ್ಷ ಕಲಾ ಸಂಘ, ಕೋಳ್ಯೂರು ಶಂಕರನಾರಾಯಣ ದೇವಸ್ಥಾನ, ಪುತ್ತೂರು ಬೊಳುವಾರು ಶ್ರೀ ಮಲರಾಯ, ದುರ್ಗಾಪರಮೇಶ್ವರೀ ಯಕ್ಷಗಾನ ಸಂಘ, ಪಾರ್ತಿಸುಬ್ಬ ಯಕ್ಷಗಾನ ಸಂಘ ಶೇಡಿಕಾವು, ಕುಂಬಳೆ, ಸೂರಂಬೈಲು ಸರಕಾರೀ ಹಿರಿಯ ಪ್ರಾಥಮಿಕ ಶಾಲೆ, ಕುಂಬಳೆ ಸರಕಾರೀ ಹೈಸ್ಕೂಲ್, ಮುಜುಂಗಾವು ಪಾರ್ಥಸಾರಥಿ ದೇವಸ್ಥಾನ, ಬದಿಯಡ್ಕ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ, ಬೆಳ್ತಂಗಡಿಯ ಕೊಯ್ಯೂರು ದೇವಸ್ಥಾನ, ಮತ್ತು ಆದೂರು ಪೇರಾಲ್ ಶಾಲೆ ಮೊದಲಾದ ಕಡೆ ತರಬೇತಿ ನೀಡಿದ್ದರು. ಎರಡು ವರ್ಷಗಳ ಕಾಲ ವಿಟ್ಲದ ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕ ಚಣಿಲ ಶ್ರೀ ಸಿ.ಎಚ್ ಸುಬ್ರಹ್ಮಣ್ಯ ಭಟ್ ಇವರ ನೇತೃತ್ವದ ‘ಯಕ್ಷಸಿಂಧೂರ’ ವಿಟ್ಲ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಕಳೆದ ಹದಿಮೂರು ವರ್ಷಗಳಿಂದ ಸರಕಾರೀ ಕಾಲೇಜು ಕಾಸರಗೋಡು ಇಲ್ಲಿ ಪ್ರಾಧ್ಯಾಪಕರಾದ ಶ್ರೀ ಪ್ರೊ| ಡಾ.ರತ್ನಾಕರ ಮಲ್ಲಮೂಲೆ ಇವರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಕೇರಳ ರಾಜ್ಯದ ತೃಶೂರ್ ಜಿಲ್ಲೆಯ ಇರಿಂಜಾಲಕುಡ ತಾಲೂಕಿನ ಶ್ರೀಕೃಷ್ಣ ಶಾಲೆಯ ವಿದ್ಯಾರ್ಥಿಗಳಿಗೆ ನಾಟ್ಯ ಹೇಳಿಕೊಟ್ಟಿದ್ದರು. ಇವರಿಂದ ನಾಟ್ಯ ಕಲಿತ ಮಲೆಯಾಳೀ ವಿದ್ಯಾರ್ಥಿಗಳು ಶಾಲಾ ಕಲೋತ್ಸವದ ಯಕ್ಷಗಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದರು. ಮೈಸೂರು ಕರಾವಳೀ ಯಕ್ಷಗಾನ ಕೇಂದ್ರದಲ್ಲಿ ತರಬೇತಿ ನೀಡಿ ಪ್ರದರ್ಶನ ನೀಡಲು ಕಾರಣರಾಗಿದ್ದರು. ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಸಂಸ್ಕೃತ ಶಾಲೆಯ ಮಕ್ಕಳಿಗೆ ತರಬೇತಿ ನೀಡಿ, ಅವರಿಂದ ಎರಡು ಪ್ರದರ್ಶನ ನಡೆಸಿದ್ದರು.
ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳ ಆಶೀರ್ವಾದ, ಶ್ರೀ ಹರ್ಷೇ೦ದ್ರ ಕುಮಾರರ ಪ್ರೋತ್ಸಾಹವನ್ನು ಸದಾ ದಿವಾಣ ಶಿವಶಂಕರ ಭಟ್ಟರು ನೆನಪಿಸಿಕೊಂಡು ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಕಟೀಲು ಮೇಳದ ತಿರುಗಾಟ ಮತ್ತು ಉಳಿದ ಸಂದರ್ಭಗಳಲ್ಲೂ ಶ್ರೀ ಕ್ಷೇತ್ರ ಕಟೀಲಿನ ಶ್ರೀ ಆಸ್ರಣ್ಣ ಬಂಧುಗಳ ಸಹಕಾರ ಪ್ರೋತ್ಸಾಹ ಇವರಿಗೆ ದೊರೆತಿತ್ತು. ಮುಂಬೈಯಲ್ಲಿ ವಿಜಯಕುಮಾರ್ ಶೆಟ್ಟಿ ತೋನ್ಸೆ, ಶ್ರೀ ಪ್ರಕಾಶ್ ಭಂಡಾರಿ ನೇತೃತ್ವದ ಚಿಣ್ಣರ ಬಿಂಬ ತಂಡದ ಮಕ್ಕಳಿಗಾಗಿ ಯಕ್ಷಗಾನ ಶಿಬಿರವನ್ನೂ ದಿವಾಣ ಶಿವಶಂಕರ ಭಟ್ಟರು ನಡೆಸಿಕೊಟ್ಟಿರುತ್ತಾರೆ. ನಿಡ್ಲೆ ಗೋವಿಂದ ಭಟ್ಟರ ನೇತೃತ್ವದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಆರಂಭದಿಂದ ತೊಡಗಿ ಮೂರು ವರ್ಷಗಳ ಕಾಲ ಸದ್ರಿ ತಂಡದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಮುಳಿಯಾಲ ಭೀಮ ಭಟ್ಟರ ಮತ್ತು ಕುಬಣೂರು ಶ್ರೀಧರ ರಾಯರ ತಂಡಗಳಲ್ಲೂ ಕಲಾವಿದನಾಗಿ ಭಾಗವಹಿಸಿರುತ್ತಾರೆ.
ದಿವಾಣ ಶಿವಶಂಕರ ಭಟ್ಟರ ಅನೇಕ ಶಿಷ್ಯಂದಿರು ಇಂದು ಅನೇಕ ಮೇಳಗಳಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀಯುತರನ್ನು ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿವೆ. 2012ರಲ್ಲಿ ಕುರಿಯ ವಿಠಲ ಶಾಸ್ತ್ರಿಗಳ ಜನ್ಮ ಶತಾಬ್ಧಿ ಯಕ್ಷೋತ್ಸವದ ಸಂದರ್ಭ ಧರ್ಮಸ್ಥಳದ ಖಾವಂದರ ಉಪಸ್ಥಿತಿಯಲ್ಲಿ ‘ಕಲಾಶಿಕ್ಷಣ ಗೌರವ’ ಪ್ರಶಸ್ತಿಯು ದೊರೆತಿದೆ. ಕರ್ನಾಟಕ ಜಾನಪದ ಪರಿಷತ್ತು- ಕೇರಳ ಗಡಿನಾಡು ಘಟಕ ಕಾಸರಗೋಡು ಇವರ ಜಾನಪದ ಸಂಧ್ಯಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರ ಉಪಸ್ಥಿತಿಯಲ್ಲಿ ಸನ್ಮಾನದ ಗೌರವವು ದೊರೆತಿದೆ. (2012) ಯಕ್ಷಧ್ರುವ ಪಟ್ಲ ಫೌಂಡೇಶನಿನ ಯಕ್ಷಧ್ರುವ ಪಟ್ಲ ಸಂಭ್ರಮ -2017ರಲ್ಲಿ ‘ಯಕ್ಷಧ್ರುವ ಕಲಾಗೌರವ’ ಪ್ರಶಸ್ತಿಯೂ ದೊರೆತಿದೆ. ಒಂದು ಲಕ್ಷ ರೂ. ಗೌರವ ಧನದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನಿನ ಕುಂಬಳೆ ಘಟಕದ ಸನ್ಮಾನ, ಮಂಗಳೂರಿನ ಕೇಂದ್ರ ಮಹಿಳಾ ಘಟಕದಿಂದಲೂ ಸನ್ಮಾನವನ್ನು ಸ್ವೀಕರಿಸಿದ್ದಾರೆ.
ತಾನು ಕಲಾಸೇವೆಯನ್ನು ಮಾಡುತ್ತಾ ಕಲಿತ ವಿದ್ಯೆಯನ್ನು ಕಲಿಕಾಸಕ್ತರಿಗೆ ಹೇಳಿಕೊಟ್ಟವರು ಶ್ರೀ ದಿವಾಣ ಶಿವಶಂಕರ ಭಟ್ಟರು. ಪ್ರಸ್ತುತ ತೆಂಕಿನ ಎಲ್ಲಾ ಮೇಳಗಳಲ್ಲೂ ಇವರಿಂದ ನಾಟ್ಯ ಕಲಿತವರು ಕಲಾವಿದರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಇದು ಅವರು ಅತ್ಯಂತ ಸಂತೋಷ ಪಡಬೇಕಾದ ವಿಚಾರವು. ಯಕ್ಷಗಾನಕ್ಕೆ ಶ್ರೀಯುತರ ಕೊಡುಗೆಯಿದು.
ದಿವಾಣ ಶಿವಶಂಕರ ಭಟ್ಟರ ಪತ್ನಿ ಶ್ರೀಮತಿ ರೋಹಿಣಿ ದಿವಾಣ . ಇವರು ಗೃಹಣಿ. ಇವರ ತಂದೆ ಅರಂಬೂರು ಶ್ರೀ ಗೋವಿಂದ ಭಟ್ಟರು ಮದ್ದಳೆಗಾರರು. ಇವರು ಗೋಪಾಲಕೃಷ್ಣ ಕುರುಪ್ ಅವರ ಶಿಷ್ಯ. ರೋಹಿಣೀ ಶಿವಶಂಕರ್ ದಿವಾಣ ಅವರು ಸಂಗೀತ ಜೂನಿಯರ್ ಕಲಿತಿರುತ್ತಾರೆ. ದಿವಾಣ ಶಿವಶಂಕರ್ ಭಟ್, ರೋಹಿಣಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯಪುತ್ರ ಶ್ರೀ ಗಣೇಶ ದಿವಾಣ ಪ್ರಜ್ಞಾ ವಿಶೇಷ ಚೇತನರ ವಸತಿ ಶಾಲೆ ಪುತ್ತೂರು ಇಲ್ಲಿಯ ವಿದ್ಯಾರ್ಥಿ. ಕಿರಿಯ ಪುತ್ರ ಶ್ರೀ ಸ್ಕಂದ. ಶೃಂಗೇರಿಯ ಸಂಸ್ಕೃತ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ದ್ವಿತೀಯ ಎಂ.ಎ ಸಂಸ್ಕೃತ ದರ್ಶನ ಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ. ಮಕ್ಕಳಿಬ್ಬರಿಗೂ ಉಜ್ವಲವಾದ ಭವಿಷ್ಯವು ದೊರಕಲಿ. ದಿವಾಣ ಶಿವಶಂಕರ ಭಟ್ಟರಿಂದ ಇನ್ನೂ ಹೆಚ್ಚಿನ ಕಲಾಸೇವೆಯು ನಡೆಯಲಿ. ಸಕಲ ಭಾಗ್ಯಗಳನ್ನೂ ಶ್ರೀ ದೇವರು ಅನುಗ್ರಹಿಸಲಿ ಎಂಬ ಹಾರೈಕೆಗಳು.
ಮಹಾರಾಷ್ಟ್ರದ ಬಸ್ ನಿಲ್ದಾಣದಲ್ಲಿ ಕಾಮನ್ ಬಾಯ್ ಫ್ರೆಂಡ್ ಮೇಲೆ ಇಬ್ಬರು ಹುಡುಗಿಯರ ಜಗಳವಾಡುತ್ತಾರೆ. ಮುಂದೆ ಅವನು ಮಾಡಿದ್ದು ಕಂಡು ನಿಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ.
ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯ ಜನನಿಬಿಡ ಬಸ್ ನಿಲ್ದಾಣದಲ್ಲಿ 17 ವರ್ಷದ ಇಬ್ಬರು ಹುಡುಗಿಯರು ತಮ್ಮಿಬ್ಬರ ಒಬ್ಬ ಗೆಳೆಯನ ಬಗ್ಗೆ ಜಗಳವಾಡಿದ್ದಾರೆ. ಪ್ರೀತಿ ಕೆಲವೊಮ್ಮೆ ಮೂರ್ಖತನವನ್ನು ಮೀರಿಸುತ್ತದೆ ಮತ್ತು ವ್ಯಕ್ತಿಯನ್ನು ಮಾಡಬಾರದ ಬಹಳಷ್ಟು ಕೆಲಸಗಳನ್ನು ಮಾಡಿಸುತ್ತದೆ.
ಇದು ಒಂದು ಸುಂದರ ಭಾವನೆ, ನಿಸ್ಸಂದೇಹವಾಗಿ, ಆದರೆ ದುಡುಕಿನ ಮತ್ತು ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಬಹುದು. ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯ ವಿಲಕ್ಷಣ ಘಟನೆಯೊಂದರಲ್ಲಿ 17 ವರ್ಷದ ಇಬ್ಬರು ಹುಡುಗಿಯರು ಸಾರ್ವಜನಿಕವಾಗಿ ಹುಡುಗನ ಮೇಲೆ ಜಗಳವಾಡಿದ್ದಾರೆ.
ಬುಧವಾರ ಬೆಳಗ್ಗೆ ಪೈಠಾಣ್ನ ಜನನಿಬಿಡ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಜವಾಗಲೂ ಒಬ್ಬ ಹುಡುಗಿ ಹುಡುಗನ ಜೊತೆ ಬಸ್ ಸ್ಟ್ಯಾಂಡ್ ಗೆ ಬಂದಿದ್ದಳು.
ಈ ವಿಷಯ ತಿಳಿದ ಮತ್ತೊಬ್ಬ ಬಾಲಕಿ ಕೂಡ ಸ್ಥಳಕ್ಕಾಗಮಿಸಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿಯರ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಅದು ಜಗಳವಾಗಿ ಪರಿಣಮಿಸಿದೆ. ಹುಡುಗನಿಗೆ ಏನಾಯಿತು ಎಂದು ನೀವು ಕೇಳುತ್ತೀರಾ?
ಹುಡುಗಿಯರು ಹೊಡೆದಾಡಿಕೊಂಡಾಗ ಹುಡುಗ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ. ಈ ಅಪಾಯವನ್ನು ಊಹಿಸಿದ ಹುಡುಗ ಸದ್ದಿಲ್ಲದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಅಧಿಕಾರಿಯ ಪ್ರಕಾರ, ಹುಡುಗಿಯರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ನಂತರ ಬಿಡುಗಡೆ ಮಾಡಲಾಗಿದೆ.
ವಂದೇ ಭಾರತ್ ರೈಲು ಪ್ರಾಯೋಗಿಕ ಚಾಲನೆಯಲ್ಲಿ 180 ಕಿಮೀ ವೇಗವನ್ನು ದಾಖಲಿಸಿದೆ. ಭಾರತದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಶುಕ್ರವಾರ ಪರೀಕ್ಷಾರ್ಥ ಚಾಲನೆಯ ಸಮಯದಲ್ಲಿ 180 ಕಿಮೀ ವೇಗದ ಮಿತಿಯನ್ನು ಮೀರಿ ಚಲಿಸಿದೆ. ವಂದೇ ಭಾರತ್ ರೈಲಿನ ಪ್ರಾಥಮಿಕ ತಪಾಸಣೆ ವೇಳೆ ವಾಷಿಂಗ್ ಪಿಟ್ ನಲ್ಲಿ ತೊಳೆದು ಶುಚಿಗೊಳಿಸಲಾಯಿತು.
ಇದಲ್ಲದೆ, ರೈಲಿನ ಎಲ್ಲಾ ರೀತಿಯ ಉಪಕರಣಗಳು ಮತ್ತು ಪ್ಯಾನಲ್ಗಳನ್ನು ಸಹ ಪರಿಶೀಲಿಸಲಾಯಿತು. ವಂದೇ ಭಾರತ್ನ ವೇಗ ಪ್ರಯೋಗವನ್ನು ಕೋಟಾ-ನಾಗ್ಡಾ ರೈಲ್ವೆ ವಿಭಾಗದಲ್ಲಿ ವಿವಿಧ ವೇಗದ ಹಂತಗಳಲ್ಲಿ ನಡೆಸಲಾಯಿತು.
RDSO (ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ) ತಂಡವು ಹೊಸದಾಗಿ ವಿನ್ಯಾಸಗೊಳಿಸಲಾದ ವಂದೇ ಭಾರತ್ ರೈಲು ಸೆಟ್ನೊಂದಿಗೆ ಗರಿಷ್ಠ 180 kmph ಪರೀಕ್ಷಾ ವೇಗದೊಂದಿಗೆ ರೈಲಿನ 16 ಕೋಚ್ಗಳ ಮೂಲಮಾದರಿಯ ರೇಕ್ನ ವಿವರವಾದ ಆಂದೋಲನ ಪ್ರಯೋಗಗಳನ್ನು ನಡೆಸಿದೆ. ಕೋಟಾ ವಿಭಾಗದಲ್ಲಿ ವಿವಿಧ ಹಂತದ ಪ್ರಯೋಗಗಳನ್ನು ನಡೆಸಲಾಯಿತು.
ಕೋಟಾ ಮತ್ತು ಘಾಟ್ ಕಾ ಬಾರಾನಾ ನಡುವೆ ಹಂತ ಒಂದನೇ ಪ್ರಯೋಗ, ಎರಡನೇ ಪ್ರಯೋಗ ಘಾಟ್ ಕಾ ಬಾರಾನಾ ಮತ್ತು ಕೋಟಾ, ಕುರ್ಲಾಸಿ ಮತ್ತು ರಾಮ್ಗಂಜ್ ಮಂಡಿ ನಡುವಿನ ಡೌನ್ ಲೈನ್ನಲ್ಲಿ ಮೂರನೇ ಟ್ರಯಲ್ ನಾನ್-ರೆಕಾರ್ಡಿಂಗ್, ಕುರ್ಲಾಸಿ ಮತ್ತು ರಾಮಗಂಜ್ ಮಂಡಿ ನಡುವಿನ ಡೌನ್ ಲೈನ್ನಲ್ಲಿ ನಾಲ್ಕನೇ ಮತ್ತು ಐದನೇ ಪ್ರಯೋಗ ಮತ್ತು ಆರನೇ ಪ್ರಯೋಗ ಕುರ್ಲಾಸಿ ಮತ್ತು ರಾಮಗಂಜ್ ಮಂಡಿ ನಡುವೆ ಡೌನ್ ಲೈನ್ ಮತ್ತು ಲಾಬನ್ ಅನ್ನು ಡೌನ್ ಲೈನ್ನಲ್ಲಿ ಮಾಡಲಾಗಿದೆ.
ಈ ಸಮಯದಲ್ಲಿ, ಅನೇಕ ಸ್ಥಳಗಳಲ್ಲಿ ವೇಗವು ಗಂಟೆಗೆ 180 ಕಿಮೀ ವೇಗವನ್ನು ಮುಟ್ಟಿತು. ವಂದೇ ಭಾರತ್ ರೈಲು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲ್ಪಟ್ಟಿದೆ. ಇದು ಅರೆ-ಅತಿ ವೇಗದ ರೈಲು.
ವಂದೇ ಭಾರತ್ ರೈಲು ಸ್ವಯಂ ಚಾಲಿತ ಎಂಜಿನ್ ರೈಲು, ಅಂದರೆ, ಇದು ಪ್ರತ್ಯೇಕ ಎಂಜಿನ್ ಹೊಂದಿಲ್ಲ. ಇದು ಸ್ವಯಂಚಾಲಿತ ಬಾಗಿಲುಗಳು ಮತ್ತು ಹವಾನಿಯಂತ್ರಿತ ಚೇರ್ ಕಾರ್ ಕೋಚ್ಗಳನ್ನು ಹೊಂದಿದೆ ಮತ್ತು 180 ಡಿಗ್ರಿಗಳವರೆಗೆ ತಿರುಗಬಲ್ಲ ರಿವಾಲ್ವಿಂಗ್ ಕುರ್ಚಿಯನ್ನು ಹೊಂದಿದೆ.
ಸೆಕ್ಟರ್ 96 ರ ಸಮೀಪವಿರುವ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ಪ್ರೆಸ್ವೇ ನಿನ್ನೆ (ಆಗಸ್ಟ್ 26) ರಸ್ತೆಯಲ್ಲಿ ಕಾಣಿಸಿಕೊಂಡ 12-15 ಅಡಿ ಉದ್ದದ ಬಿರುಕಿನ ನಂತರ ವಾಹನ ಸಂಚಾರ ನಿಲ್ಲಿಸಲಾಗಿದೆ.
ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ಪ್ರೆಸ್ವೇಯಲ್ಲಿ ಬಿರುಕು ಬಿಟ್ಟಿದ್ದು, ರಸ್ತೆಯಲ್ಲಿ ಸಂಚಾರವನ್ನು ನಿಲ್ಲಿಸಲಾಗಿದೆ. ನೋಯ್ಡಾದ ಸೆಕ್ಟರ್ 96 ರ ಸಮೀಪವಿರುವ ಸೂಪರ್ಟೆಕ್ ಕಟ್ಟಡದ ಮುಂಭಾಗದ ರಸ್ತೆಯಲ್ಲಿ ಬಿರುಕು ಬಿಟ್ಟಿದ್ದರಿಂದ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ಪ್ರೆಸ್ವೇಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ.
ಅಧಿಕಾರಿಗಳು ಬ್ಯಾರಿಕೇಡ್ ಹಾಕಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.ಅಧಿಕಾರಿಗಳು ದೀರ್ಘ ಕಾಲದಿಂದ ಎಕ್ಸ್ಪ್ರೆಸ್ವೇಯನ್ನು ದುರಸ್ತಿಪಡಿಸುತ್ತಿದ್ದಾರೆ, ಇದರಿಂದಾಗಿ ರಸ್ತೆಯಲ್ಲಿ ಆಗಾಗ್ಗೆ ಟ್ರಾಫಿಕ್ ಜಾಮ್ ಆಗುತ್ತಿದೆ.
ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್ಪ್ರೆಸ್ವೇ ಆರು ಪಥಗಳ ಹೆದ್ದಾರಿಯಾಗಿದ್ದು, ಉತ್ತರ ಪ್ರದೇಶದ ನೋಯ್ಡಾವನ್ನು ಗ್ರೇಟರ್ ನೋಯ್ಡಾಗೆ ಸಂಪರ್ಕಿಸುತ್ತದೆ. ಅಂದಾಜು 400 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ
Uttar Pradesh | The Noida-Greater Noida expressway near Sector 96 witnessed slow traffic movement yesterday (August 26), after a 12-15 ft long chunk of the road caved. pic.twitter.com/JNhiceR2kw
ಕೊಣಾಜೆ: ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ(ರಿ) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ವತಿಯಿಂದ ಅಭಿನವ ವಾಲ್ಮೀಕಿ, ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಸಂಸ್ಮರಣಾ ಕಾರ್ಯಕ್ರಮ ಇಂದು ಆ.27 ಶನಿವಾರದಂದು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ ನಡೆಯಲಿದೆ.
ಬೆಳಿಗ್ಗೆ 10ರಿಂದ ನಡೆಯುವ ಉದ್ಘಾಟನಾ ಸಮಾರಂಭ ನಡೆಯಲಿದ್ದು ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ಜಿ.ಎಲ್. ಹೆಗಡೆ ಕುಮಟಾ ಅವರು ಯಕ್ಷ ಪುರುಷೋತ್ತಮ ಸಂಸ್ಕರಣ ಗ್ರಂಥ ಬಿಡುಗಡೆಗೊಳಿಸಲಿದ್ದು, ಹಿರಿಯ ಕಲಾವಿದರಾದ ವಿಶ್ವೇಶ್ವರ ಭಟ್ ಸುಣ್ಣಂಬಳ ಅವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ಯಕ್ಷಗಾನ ವಿದ್ವಾಂಸರಾದ ಡಾ.ಎಂ.ಪ್ರಭಾಕರ ಜೋಷಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ, ಯಕ್ಷ ಪುರುಷೋತ್ತಮ ಸಂಪಾದಕರಾದ ಭಾಸ್ಕರ ರೈ ಕುಕ್ಕುವಳ್ಳಿ, ಮುಂಬಾಯಿ ಅಜೆಕಾರು ಕಲಾಭಿಮಾನಿ ಬಳಗದ ಅಜೆಕಾರು ಬಾಲಕೃಷ್ಣ ಶೆಟ್ಟಿ, ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ.ಶ್ರೀಪತಿ ಕಲ್ಲೂರಾಯ ಅವರು ಭಾಗವಹಿಸಲಿದ್ದಾರೆ.
ಕಟೀಲು ಮೇಳದ ಸಂಚಾಲಕರಾದ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ಮಂಜನಾಡಿ ವಿಷ್ಣುಮೂರ್ತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಟಿ.ಸುಬ್ರಮಣ್ಯ ಭಟ್, ಅಂಬುರುಹ ಯಕ್ಷಸದನ ಪ್ರತಿಷ್ಠಾನದ ಅಧ್ಯಕ್ಷರಾದ ಶೋಭಾ ಪುರುಷೋತ್ತಮ ಪೂಂಜ, ಉಪಾಧ್ಯಕ್ಷರಾದ ರಾಜರಾಮ ಹೊಳ್ಳ ಕೈರಂಗಳ ಉಪಸ್ಥಿತರಿರಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ‘ಮಾನಿಷಾದ’ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಮಂಗಳೂರು ವಿವಿ ಕುಲಸಚಿವ ಡಾ.ಕಿಶೋರ್ ಕುಮಾರ್ ಸಿ.ಕೆ ದೀಪಪ್ರಜ್ವಲನೆ ಮಾಡಲಿದ್ದಾರೆ ಹಾಗೂ ಯಕ್ಷಗಾನ ಪ್ರದರ್ಶನದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಇಂದು ದಿನಾಂಕ 27.08.2022ರಂದು ಶನಿವಾರ ಪೂರ್ವಾಹ್ನ 10 ಘಂಟೆಯಿಂದ ಸಿ.ಪಿ.ಸಿ.ಆರ್.ಐ ವಿಟ್ಲದಲ್ಲಿ ‘ಅಡಿಕೆಯಲ್ಲಿ ಸಸ್ಯ ಅರೋಗ್ಯ ನಿರ್ವಹಣೆ’ ಎಂಬ ವಿಷಯದ ಬಗ್ಗೆ ಕೃಷಿ ವಿಚಾರಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮ ನಡೆಯಲಿದೆ.
ಬೆಳಗ್ಗೆ 10 ಘಂಟೆಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. 10.45ರಿಂದ ವಿವಿಧ ವಿಷಯಗಳ ಬಗ್ಗೆ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ 2 ಘಂಟೆಯಿಂದ 3 ಘಂಟೆಯ ವರೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿನ ಎಲ್.ಕೆ.ಜಿ ವಿದ್ಯಾರ್ಥಿನಿ ಅನ್ವಿಕಾ ಪ್ರಭುಳ ಹೆಸರು India Book of Records ನಲ್ಲಿ ದಾಖಲಾಗಿದೆ.
ಇವಳ ವಯಸ್ಸು 3ವರ್ಷ, 8ತಿಂಗಳು. ಅತೀಕಿರಿಯ ವಯಸ್ಸಿನಲ್ಲಿ ಈಕೆ 35 ಹಣ್ಣುಗಳ, 16 ಬಣ್ಣಗಳ, ಹೆಸರನ್ನು ಗುರುತಿಸಿರುತ್ತಾಳೆ. 2 ಶ್ಲೋಕ, 4 Rhymes, ದೇಹದ 20 ಅಂಗಗಳ ಹೆಸರುಗಳನ್ನು ಗುರುತಿಸಿ 8 ರಾಷ್ಟ್ರ ಲಾಂಛನವನ್ನು ಗುರುತಿಸಿದ ಸಾಧನೆ ಈಕೆಯದು.
ಅನ್ವಿಕಾ ಪ್ರಭು ಪುತ್ತೂರು ಕೋಡಿಂಬಾಡಿಯ ನಿವಾಸಿ ಶ್ರೀ ಅಶೋಕ್ ಪ್ರಭು.ಡಿ.ಕೆ ಹಾಗೂ ಶ್ವೇತಾ ಪ್ರಭು ಇವರ ಪುತ್ರಿ.
3 ವರ್ಷ 8 ತಿಂಗಳ ಅತಿ ಕಿರಿಯ ವಯಸ್ಸಿನಲ್ಲಿ India Book of Records ನಲ್ಲಿ ಈಕೆಯ ಹೆಸರು ದಾಖಲೆಯಾಗಿದೆ ಹಾಗೂ ನಮ್ಮ ಶಾಲೆಯ ಇತಿಹಾಸದಲ್ಲಿ ಇದೊಂದು ವಿಶಿಷ್ಠ ಸಾಧನೆಯಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.