Saturday, August 29, 2026
Home Blog Page 69

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಚತುರ್ಥಚರಣ  ಕಬ್ಸ್ ರಾಜ್ಯಪಾಲರಿಂದ ಪ್ರಶಸ್ತಿ ಸ್ವೀಕಾರ

ಎಂ ಜಶಿತ್ ಆಚಾರ್ಯ ಅದ್ವೈತ ಶಂಕರ ವೈ  ರಾಹುಲ್ ಜಿ ಎಂ        ಸ್ಕಂದ ಎಂ           ವಸಿಷ್ಟ ಸಿ ಎಸ್

ಆರ್ಯನ್ ಪಿ.ಎಲ್       ಸಂಹಿತ್ ಸಿ ಅಲಾರ್       ಕೃತಿಕ್ ಬಿ ಆರ್           ಪ್ರಣವ್ ಕೇಕುಣ್ಣಾಯ  

ಪುತ್ತೂರು :ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಮಂಗಳೂರಿನ ಪಿಲಿಕುಳದಲ್ಲಿ ನಡೆದ ಕಬ್ಸ್ ಚತುರ್ಥ ಚರಣ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರಿನ  9 ವಿದ್ಯಾರ್ಥಿಗಳು ತೇರ್ಗಡೆಗೊಂಡು ಬೆಂಗಳೂರಿನ ರಾಜ ಭವನದ ಗಾಜಿನ ಮನೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜನವರಿ ತಿಂಗಳ 19ನೇ ತಾರೀಖಿನಂದು ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

     ಪ್ರಸ್ತುತ 5ನೇ ತರಗತಿಯ ವಿದ್ಯಾರ್ಥಿಗಳಾದ ಅದ್ವೈತ ಶಂಕರ ವೈ  (ರಾಜೇಶ್ ವೈ ಹಾಗೂ ದಿವ್ಯ ವೈ ದಂಪತಿಯ ಪುತ್ರ ) ಆರ್ಯನ್ ಪಿ .ಎಲ್. (ಪ್ರವೀಣ್ ಕುಮಾರ್ ಕೆ ಹಾಗೂ ಲತಾ ಬಿ ದಂಪತಿಯ ಪುತ್ರ)ಕೃತಿಕ್ ಬಿ ಆರ್( ಬಿ ರಮೇಶ್ ಹಾಗೂ ಅನುಪಮಾ ಬಿ ಎಂ ದಂಪತಿಯ ಪುತ್ರ) ಎಂ ಜಶಿತ್ ಆಚಾರ್ಯ (ಎಂ ಜಯಪ್ರಕಾಶ್ ಹಾಗೂ ಗೌತಮಿ ಕೆ ದಂಪತಿ ಪುತ್ರ )ಪ್ರಣವ್ ಕೇಕುಣ್ಣಾಯ (ಕೃಷ್ಣಪ್ರಸಾದ  ಕೇಕುಣ್ಣಾಯ ಹಾಗೂ ಅರ್ಚನಾ ಕೆ ದಂಪತಿ ಪುತ್ರ) ರಾಹುಲ್ ಜಿ ಎಂ ( ಗಿರೀಶ್ ಎಂ ಹಾಗೂ ಮಲ್ಲಿಕಾ ದಂಪತಿ ಪುತ್ರ ) ಸಂಹಿತ್ ಸಿ  ಅಲಾರ್ (ಚಂದ್ರಹಾಸ ಅಲಾರ್  ಹಾಗೂ ಯಾಮಿನಿ

ದಂಪತಿ  ಪುತ್ರ). ಸ್ಕಂದ ಎಂ  (ಮೋಹನ್ ಹಾಗೂ ಶೋಭಾ ದಂಪತಿಯ ಪುತ್ರ) ವಸಿಷ್ಟ ಸಿ ಎಸ್ (ಚಂದ್ರಶೇಖರ್ ಎಸ್ ಹಾಗೂ ಸುಜಾತ ಡಿ ದಂಪತಿಯ ಪುತ್ರ)  ಹಾಗೂ ಲೇಡಿ ಕಬ್ ಮಾಸ್ಟರ್ ಶ್ರೀಮತಿ ಪುಷ್ಪಲತಾ ಕೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾರೆ

ಕೆರೆ ಹೊಂಡದಲ್ಲಿ ತಾಯಿ ಮತ್ತು ಇಬ್ಬರು ಎಳೆಯ ಮಕ್ಕಳ ಮೃತ ದೇಹಗಳು ಪತ್ತೆ

ಕೆರೆಯೊಂದರಲ್ಲಿ ತಾಯಿ ಹಾಗೂ ತನ್ನ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಬಳಿಯ ಕೆರೆಯೊಂದರಲ್ಲಿ ಮೃತದೇಹಗಳು ಪತ್ತೆಯಾಗಿವೆ.

ಎಳೆಯ ಮಕ್ಕಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ವ್ಯಕ್ತಪಡಿಸಲಾಗಿದೆ.

ಶವಗಳು ತೇಲಾಡುತ್ತಿದ್ದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಮೇಲಕ್ಕೆ ತೆಗೆಯಲಾಗಿದ್ದು ತಾಯಿ ಚಿಂತಾಮಣಿ ತಾಲೂಕು ಯಗವಕೋಟೆ ನಿವಾಸಿ ರಾಧ ಎಂದು ಪತ್ತೆ ಮಾಡಲಾಗಿದೆ.

ಮಹಿಳೆಯ ಗಂಡ ಮಲ್ಲಿಕಾರ್ಜುನ್ ಮತ್ತು 4 ವರ್ಷದ ಮಗಳು ಪೂರ್ವಿತಾ ಮತ್ತು ಇನ್ನೊಬ್ಬ ಮಗಳಿಗೆ ಇನ್ನೂ ಹೆಸರಿಟ್ಟಿರಲಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬಾಗೇಪಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

8 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ – ಡೆತ್ ನೋಟ್ ಪತ್ತೆ

ಪ್ರೀತಿಸಿ 8 ತಿಂಗಳ ಹಿಂದೆಯಷ್ಟೇ ಮದುವೆವಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಘಟನೆ ನಡೆದದ್ದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ದಾಸನಕೂಡಿಗೆ ಎಂಬಲ್ಲಿ.

ಶಮಿತಾ (24) ಎಂಬವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವತಿ. ರಾತ್ರಿ ಮಲಗಲು ಮನೆಯ ಉಪ್ಪರಿಗೆಯ ಕೊಠಡಿಗೆ ಹೋಗಿದ್ದಳು. ಬೆಳಗ್ಗೆ ಬಹಳ ಹೊತ್ತಾದರೂ ಹೊರ ಬಂದಿರಲಿಲ್ಲ. ಅನುಮಾನಗೊಂಡ ಮನೆಯ ಕೆಲಸದವರು ಕಿಟಕಿ ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಗಿದೆ.

ಈ ವೇಳೆಯಲ್ಲಿ ರಾತ್ರಿ ಪಾಳಿ ಕೆಲಸಕ್ಕೆ ಪತಿ ವಿದ್ಯಾರ್ಥ್ ತೆರಳಿದ್ದರು. ಮನೆಯಲ್ಲಿ ಗಂಡನ ತಂದೆ, ತಾಯಿ ಇದ್ದರು.

ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ, ಅಸೌಖ್ಯತೆಯ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ.

ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜ್ಜಳ ಗ್ರಾಮದ ಶಮಿತಾ 2023ರಲ್ಲಿ ದಾಸನಕೊಡಿಗೆಯ ವಿದ್ಯಾರ್ಥ್ ಜೊತೆ ಮದುವೆವಾಗಿದ್ದರು. ವಿದ್ಯಾರ್ಥ್ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸ್ಯೆಬೈಲು ವಲಯ ಅರಣ್ಯದಲ್ಲಿ ಕೆಲಸಮಾಡುತ್ತಿದ್ದರು.

.
ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಕುರಿಯ ಪ್ರತಿಷ್ಠಾನದಿಂದ ಬಲಿಪ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಯಕ್ಷಗಾನ ಭಾಗವತಿಕೆ ಸ್ಪರ್ಧೆಗೆ ಆಹ್ವಾನ

ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇದರ ರಜತ ಪರ್ವ ಸರಣಿಯ ಸಮಾಪನ ಪ್ರಯುಕ್ತ, ಬಲಿಪ ನಾರಾಯಣ ಭಾಗವತರ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಯಕ್ಷಗಾನ ಭಾಗವತಿಕೆ ಸ್ಪರ್ಧೆ ಆಯೋಜಿಸಲಾಗಿದೆ.

ರಜತಪರ್ವ ಸರಣಿಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 150 ತಾಳಮದ್ದಳೆಗಳನ್ನು ಸಂಘಟಿಸಲಾಗಿದ್ದು ಸಮಾರೋಪ ಸಮಾರಂಭದ ಪ್ರಯುಕ್ತ, ತೆಂಕುತಿಟ್ಟು ಭಾಗವತಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಪದವಿ ಪೂರ್ವ ಕಾಲೇಜು ವಿಭಾಗ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ.

ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ಎಲ್ಲ ಸ್ಪರ್ಧಾಳುಗಳಿಗೆ ಪ್ರಯಾಣ ವೆಚ್ಚ ಭರಿಸಲಾಗುವುದು. ಒಬ್ಬ ಸ್ಪರ್ಧಾಳುವಿಗೆ 10 ನಿಮಿಷಗಳ ಕಾಲಾವಕಾಶ ಇದ್ದು, ಹಿಮ್ಮೇಳ ಪರಿಕರ ಹಾಗೂ ನುರಿತ ಹಿಮ್ಮೇಳ ವಾದಕರನ್ನು ಪ್ರತಿಷ್ಠಾನದ ವತಿಯಿಂದ ಒದಗಿಸಲಾಗುವುದು.

ಒಡ್ಡೋಲಗದ ಪದ್ಯ, ಶೃಂಗಾರ, ವೀರರಸದ ಹಾಡುಗಳನ್ನು ಆಯ್ಕೆ ಮಾಡುವುದು ಕಡ್ಡಾಯ. ಕೊಟ್ಟ ಸಮಯದ ಮಿತಿಯಲ್ಲಿ ಎಷ್ಟು ಹಾಡುಗಳನ್ನಾದರೂ ಹಾಡಬಹುದು. ಪೌರಾಣಿಕ ಪ್ರಸಂಗಗಳ ಹಾಡುಗಳನ್ನೇ ಆಯ್ದುಕೊಳ್ಳಬೇಕು.

ಸ್ಪರ್ಧಾಳುಗಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುರಿತು ಪ್ರಾಂಶುಪಾಲರಿಂದ ದೃಢೀಕರಣ ಮಾಡಿರಬೇಕು. ಜ.30ರ ಒಳಗೆ ಆಸಕ್ತರು ಸಂಪರ್ಕಿಸಬೇಕಾದ ವಿಳಾಸ:


ಉಜಿರೆ ಅಶೋಕ ಭಟ್, ಚಿನ್ಮಯ, ಅಜಿತ ನಗರ, ಉಜಿರೆ 574240 ದ.ಕ., ದೂ: 9449510666, 9449255666.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಕೆಟಿಗ ಕೆ ಎಲ್ ರಾಹುಲ್ ಭೇಟಿ ನೀಡಿ ದೇವರ ದರ್ಶನ

ನಿನ್ನೆಯ ಕೊಲ್ಲೂರು ಕ್ಷೇತ್ರದ ಭೇಟಿಯ ನಂತರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕ್ರಿಕೆಟಿಗ ಕೆಎಲ್ ರಾಹುಲ್ ಭೇಟಿ ನೀಡಿ ದೇವರ ದರ್ಶನ ಪಡೆದರು.

ಖ್ಯಾತ ಕ್ರಿಕೆಟ್ ಆಟಗಾರ ಕೆ.ಎಲ್. ರಾಹುಲ್ ಬುಧವಾರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವಿಶೇಷ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಅವರು ಹೊಸಳಿಗಮ್ಮನ ದೇಗುಲಕ್ಕೂ ತೆರಳಿ ನಮನ ಸಲ್ಲಿಸಿದರು.
ಅವರನ್ನು ದೇವಸ್ಥಾನದ ಅಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅಧಿಕಾರಿಗಳು, ಅರ್ಚಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಯಕ್ಷಗಾನ ಕಲಾರಂಗ ಕಚೇರಿಗೆ ಪುತ್ತಿಗೆ ಶ್ರೀಗಳ ಭೇಟಿ

0

ಯಕ್ಷಗಾನ ಕಲಾರಂಗ ಕಚೇರಿಗೆ ಪುತ್ತಿಗೆ ಶ್ರೀಗಳ ಭೇಟಿ

ಸರ್ವಜ್ಞ ಪೀಠವನ್ನು ಅಲಂಕರಿಸಲಿರುವ ಭಾವೀ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಪರ್ಯಾಯ ಪೂರ್ವಭಾವಿಯಾಗಿ ಯಕ್ಷಗಾನ ಕಲಾರಂಗದ ಕಚೇರಿಗೆ 16.01.2024ರಂದು ಭೇಟಿ ನೀಡಿದರು.

ಯಕ್ಷಗಾನ ಕಲಾರಂಗದ ಚಟುವಟಿಕೆಗಳನ್ನು ಮೆಚ್ಚಿ, ಮುಂದೆ ಪರ್ಯಾಯದ ಅವಧಿಯಲ್ಲಿ ಸಂಸ್ಥೆಯ ಸಮಾಜಮುಖಿ ಚಟುವಟಿಕೆಗಳಿಗೆ ಸರ್ವ ರೀತಿಯ ಸಹಕಾರ ನೀಡಲಾಗುವುದು ಎಂದು ತಮ್ಮ ಅನುಗ್ರಹ ಸಂದೇಶದಲ್ಲಿ ನುಡಿದರು.

ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿದರು. ಪುತ್ತಿಗೆ ಮಠದ ಅಂತರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪಸನ್ನ ಆಚಾರ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವೀಡಿಯೋ: ದ್ವಿಚಕ್ರ ವಾಹನದ ಮೇಲೆ ಯುವ ಜೋಡಿಯ ರೊಮಾನ್ಸ್ – ಪೊಲೀಸರಿಂದ ಕೇಸ್ ದಾಖಲು

ಯುವ ಜೋಡಿಗಳು ವೇಗವಾಗಿ ಬೈಕುಗಳಲ್ಲಿ ಸಾರ್ವಜನಿಕವಾಗಿ ಪ್ರೀತಿಯನ್ನು ಪ್ರದರ್ಶಿಸುವ (ರೊಮಾನ್ಸ್) ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ವರದಿಯಾಗಿವೆ.

ಮುಂಬೈನಲ್ಲಿ ವೇಗವಾಗಿ ದ್ವಿಚಕ್ರ ವಾಹನದಲ್ಲಿ ಜೋಡಿಯೊಂದು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ನೋಡುಗರು ರೆಕಾರ್ಡ್ ಮಾಡಿದ ಕ್ಲಿಪ್ ಬಾಂದ್ರಾ ರಿಕ್ಲಮೇಷನ್ ಪ್ರದೇಶದಿಂದ ಬಂದಿದೆ.


ಈ ಪೋಸ್ಟ್ ಅನ್ನು ಬಾಂದ್ರಾ ಬಜ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಪುರುಷ ಮತ್ತು ಮಹಿಳೆ ಶಾಲು ಧರಿಸಿ ಸ್ಕೂಟರ್‌ನಲ್ಲಿ ಮುಖಾಮುಖಿಯಾಗಿ ಕುಳಿತುಕೊಂಡು ಇಬ್ಬರೂ ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿಕೊಳ್ಳುತ್ತಾರೆ ಮತ್ತು ವೀಡಿಯೊದ ಕೊನೆಯಲ್ಲಿ ಕ್ಯಾಮರಾವನ್ನು ನೋಡಿ ನಗುತ್ತಾರೆ.

ಇದಲ್ಲದೆ, ಇಬ್ಬರೂ ಜನನಿಬಿಡ ರಸ್ತೆಯಲ್ಲಿ ಹೆಲ್ಮೆಟ್ ಇಲ್ಲದೆ ಕಾಣಿಸಿಕೊಂಡರು
ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಬೇಜವಾಬ್ದಾರಿ ಮತ್ತು ಅಶ್ಲೀಲ ನಡವಳಿಕೆಗಾಗಿ ಹಲವರು ಟೀಕಿಸಿದ್ದಾರೆ.


ಇದೀಗ ದಂಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಟ್ರಾಫಿಕ್ ಪೊಲೀಸರಿಗೆ ಮನವಿ ಮಾಡಲಾಗಿದೆ.

ನಾಳ ದೇವಸ್ಥಾನದಲ್ಲಿ ತಾಳಮದ್ದಳೆ

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಾವನ ಪುರುಷೋತ್ತಮ ಶ್ರೀರಾಮ ತಾಳಮದ್ದಳೆ ಜರಗಿತು.
ಕವಿ ಡಾ. ವಸಂತ ಭಾರದ್ವಾಜ ಕೃತಿಯಾಧರಿತ ಯಜ್ಞ ಸಂರಕ್ಷಣೆಯಿಂದ ರಾಮಘಟ್ಟಾಭಿಷೇಕದ ವರೆಗಿನ ಸನ್ನಿವೇಶಗಳನ್ನು ಕಲಾವಿದರು ರೂಪಕದ ರೀತಿಯಲ್ಲಿ ಪ್ರಸ್ತುತಪಡಿಸಿದರು. ಮೂರು ಗಂಟೆಯ ಅವಧಿಯಲ್ಲಿ 18 ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.

ಭಾಗವತರು ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಶ್ರೀ ನಿತೀಶ್ ಮನೋಳಿತ್ತಾಯ ಮತ್ತು ಹಿಮ್ಮೇಳದಲ್ಲಿ ವಾಸುದೇವ ಆಚಾರ್ಯ ಉಜಿರೆ,ಮುರಲೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಮತ್ತು ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ವಿಶ್ವಾಮಿತ್ರ )ಗೋಪಾಲ ಶೆಟ್ಟಿ(ಹನುಮಂತ) ಜಯರಾಮ ಭಟ್ ದೇವಸ್ಯ(ಶ್ರೀ ರಾಮ) ಸತೀಶ ಶಿರ್ಲಾಲು(ದಶರಥ)

ದಿನೇಶ್ ಭಟ್ ಬಳೆಂಜ(ಶ್ರೀ ರಾಮ)ಹರೀಶ್ ಆಚಾರ್ಯ ಬಾರ್ಯ(ಜನಕ)ರಾಘವ ಮೆದಿನ(ಸೀತೆ )ರಾಘವ ಗೇರುಕಟ್ಟೆ (ದೇವೇಂದ್ರ)ಜಯರಾಮ ಬಲ್ಯ(ದನು ಮತ್ತು ಕಬಂಧ)ಶಿವಾನಂದ ಭಂಡಾರಿ(ತಾಟಕಿ)ಜಿನೇಂದ್ರ ಜೈನ್ ಬಳ್ಳಮಂಜ(ರಾವಣ ) ರಾಹುಲ್ ಶೆಟ್ಟಿ ಗೇರುಕಟ್ಟೆ(ಲಕ್ಷ್ಮಣ ) ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ರಾಮ) ಭಾಗವಹಿಸಿದ್ದರು.

ಕಳಿಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಸಂತ ಮಜಲು, ಬೆಳ್ತಂಗಡಿ ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆರ್ಮುಡ, ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭುವನೇಶ ಗೇರುಕಟ್ಟೆ ,ಶ್ರೀನಾಳ ಮೇಳದ ಪ್ರಬಂಧಕ ರಾಘವ .ಎಚ್ ಕಲಾವಿದರನ್ನು ಗೌರವಿಸಿದರು.

ದೇವಳದ ಕಚೇರಿ ವ್ಯವಸ್ಥಾಪಕರಾದ ಗಿರೀಶ್ ಶೆಟ್ಟಿನಾಳ ಸ್ವಾಗತಿಸಿ ಕಥಾ ಸಂಯೋಜನೆ ಮಾಡಿದ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಅರ್ಕುಳ ಸುಬ್ರಾಯ ಆಚಾರ್ಯ ಪ್ರತಿಷ್ಠಾನ ಮತ್ತು ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಿತ್ತು.

ಮೇಕಪ್ ಸಾಮಾಗ್ರಿ ಬಳಸಿ ಹುಡುಗಿಯಂತೆ ವೇಷ ಧರಿಸಿ, ತನ್ನ ಪ್ರೇಯಸಿಯ ಬದಲು ಪರೀಕ್ಷೆಗೆ ಹಾಜರಾದ ಯುವಕ

ಬಿಂದಿ, ಲಿಪ್ಸ್ಟಿಕ್ ಮತ್ತು ಕೈಬಳೆ ಧರಿಸಿ ಪರೀಕ್ಷೆಯಲ್ಲಿ ಹುಡುಗಿಯಂತೆ ನಟಿಸಿದ್ದಕ್ಕಾಗಿ ಪಂಜಾಬ್ ವ್ಯಕ್ತಿಯನ್ನು ಬಂಧಿಸಲಾಗಿದೆ


ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್‌ನ ಇನ್ವಿಜಿಲೇಟರ್‌ಗಳು ಬಯೋಮೆಟ್ರಿಕ್ ಬಳಸಿ ತನ್ನ ವಿವರಗಳನ್ನು ಪರಿಶೀಲಿಸಿದ ನಂತರ ಯುವಕ ಅಂಗ್ರೇಜ್ ಸಿಂಗ್ ಸಿಕ್ಕಿಬಿದ್ದಿದ್ದಾನೆ.


ಇತ್ತೀಚೆಗೆ ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಬಾಲಕಿಯಂತೆ ವೇಷ ಧರಿಸಿ ಪರೀಕ್ಷೆ ಬರೆಯಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫಜಿಲ್ಕಾದ ಅಂಗ್ರೇಜ್ ಸಿಂಗ್ ಎಂದು ಗುರುತಿಸಲಾದ ಯುವಕ, ಬಾಬಾ ಫರೀದ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಜನವರಿ 7 ರಂದು ಕೊಟ್ಕಾಪುರದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಸಿದ ಬಹುಪಯೋಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆಗೆ ಹುಡುಗಿಯಂತೆ ಮೇಕಪ್ ಮಾಡಿ ಹಾಜರಾಗಿದ್ದ.

ವಿಶ್ವವಿದ್ಯಾನಿಲಯ ಆಡಳಿತವು ಬಯೋಮೆಟ್ರಿಕ್ ಸಾಧನಗಳ ಸಹಾಯದಿಂದ ನಕಲಿ ಆಧಾರ್ ಮತ್ತು ಮತದಾರರ ಚೀಟಿಯೊಂದಿಗೆ ನಕಲಿ ಗುರುತನ್ನು ತಯಾರಿಸಿದ ಆರೋಪಿಗಳನ್ನು ಹಿಡಿದಿದೆ.
ವಿಶ್ವವಿದ್ಯಾನಿಲಯ ಆಡಳಿತವು ತಕ್ಷಣವೇ ಪೊಲೀಸರಿಗೆ ದೂರು ನೀಡಿತು, ಇದರ ಹಿಂದೆ ದೊಡ್ಡ ಜಾಲ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಈ ಹಿಂದೆ ವರದಿಯಾದ ಇದೇ ರೀತಿಯ ಪ್ರಕರಣದ ನಂತರ ಈ ಘಟನೆ ನಡೆದಿದೆ.

ಪರೀಕ್ಷೆಗಾಗಿ ಬಾಲಕಿಯ ವೇಷ ಧರಿಸಿದ್ದ ಹುಡುಗ ಕೆಂಪು ಬಳೆ, ಬಿಂದಿ, ಲಿಪ್‌ಸ್ಟಿಕ್‌ ತೊಡಿಸಿ, ಹೆಂಗಸರ ಸೂಟ್‌ ಧರಿಸಿ ಕುಳಿತಿದ್ದ.


ವ್ಯಕ್ತಿಯನ್ನು ತಕ್ಷಣವೇ ಪೊಲೀಸರು ವಶಕ್ಕೆ ತೆಗೆದುಕೊಂಡರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

“ನಾವು ಬಾಬಾ ಫರೀದ್ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ದೂರು ಸ್ವೀಕರಿಸಿದ್ದೇವೆ ಮತ್ತು ನಾವು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ನಮ್ಮ ವಿಚಾರಣೆಯನ್ನು ಪೂರ್ಣಗೊಳಿಸಿದ ನಂತರ ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಫರೋಯ್ಡ್ಕೋಟ್ ಎಸ್ಪಿ ಜಸ್ಮೀತ್ ಸಿಂಗ್ ಹೇಳಿದ್ದಾರೆ.

ಕೇಳುಗರ ಮನರಂಜಿಸಿದ ಪಾಲ್ಘಾಟ್ ರಾಮ್ ಪ್ರಸಾದ್ ಶಾಸ್ತ್ರೀಯ ಗಾಯನ – ಸುನಾದ ಸಂಗೀತ ಕಲಾಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಮೃದಂಗದ ಝೇಂಕಾರ 

0

14.01.2023ರ ಸಂಜೆ ಪುತ್ತೂರಿನ ಸುದಾನ ವಸತಿ ಶಾಲೆಯ ಆವರಣ ಒಂದು ಅತ್ಯಪೂರ್ವ ಸಂಗೀತ ರಸದೌತಣವನ್ನು ಸವಿಯುವ ವೇದಿಕೆಯಾಗಿ ಪರಿವರ್ತಿತವಾಯಿತು. ಕೆಲವೊಮ್ಮೆ ಹಾಗೆಯೇ. ಶಾಸ್ತ್ರೀಯ ಸಂಗೀತಪ್ರೇಮಿಗಳಿಗೆ ತಾವು ಬಯಸಿದ ಸಂಗೀತ ಕಾರ್ಯಕ್ರಮವನ್ನು ಕೇಳಲು ದೂರದ ಊರುಗಳಿಗೆ ಹೋಗಬೇಕು. ಹೋದರೂ ಸಂಗೀತವನ್ನು ಸವಿಯಲು, ಆಸ್ವಾದಿಸಲು ಬೇಕಾದ ವಾತಾವರಣ ಅಲ್ಲಿರುತ್ತದೆಯೇ ಎಂಬ ಖಚಿತ ವಿಶ್ವಾಸವಂತೂ ಇರುವುದಿಲ್ಲ. ಆದರೆ ಪುತ್ತೂರಿನ ಜನತೆಗೆ ಒಂದು ಉತ್ತಮ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಚೇರಿಯನ್ನು ಸವಿಯುವ ಸೌಭಾಗ್ಯ ದೊರಕಿತು. ಇದರ ಶ್ರೇಯ ಸಂಗೀತ ಗುರು ಶ್ರೀ ಕಾಂಚನ ಎ. ಈಶ್ವರ ಭಟ್ ಮತ್ತು ಅವರ ಸುನಾದ ಸಂಗೀತ ಕಲಾಶಾಲೆಗೆ ಸಲ್ಲಬೇಕು. 

ಸುನಾದ ಸಂಗೀತ ಕಲಾಶಾಲೆ ಪುತ್ತೂರು, ಇದರ ವಾರ್ಷಿಕೋತ್ಸವವು ಇದೇ ಜನವರಿ ತಿಂಗಳ 13ರ ಶನಿವಾರ ಮತ್ತು 14ರ ಆದಿತ್ಯವಾರದಂದು ಪುತ್ತೂರಿನ ಸುದಾನ ವಸತಿಯುತ ಶಾಲೆಯ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ  14. 01.2024 ಆದಿತ್ಯವಾರ ವಿದ್ವಾನ್ ಪಾಲ್ಘಾಟ್ ರಾಮಪ್ರಸಾದ್, ಚೆನ್ನೈ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ ಕಚೇರಿ ನಡೆಯಿತು. 

ವಿದ್ವಾನ್ ಪಾಲ್ಘಾಟ್ ರಾಮಪ್ರಸಾದ್, ಚೆನ್ನೈ ಅವರಿಗೆ ವಿದ್ವಾನ್ ತ್ರಿವೇಂಡ್ರಮ್ ಡಾ. ಸಂಪತ್ ವಯೋಲಿನ್ ನಲ್ಲಿ, ಮೃದಂಗದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್, ಮೋರ್ಸಿಂಗ್ ನಲ್ಲಿ ವಿದ್ವಾನ್ ಗೋವಿಂದ ಪ್ರಸಾದ್ ಪಯ್ಯನ್ನೂರು ಅವರು ಸಾಥ್ ನೀಡಿದರು. ಇಡೀ ಕಾರ್ಯಕ್ರಮವು  ಕರ್ನಾಟಕ ಶಾಸ್ತ್ರೀಯ ಸಂಗೀತದ ಈ ನಾಲ್ಕಂಗಗಳ ಆರೋಗ್ಯಕರ ಸ್ಪರ್ಧೆಯ ಮೇಲಾಟವೆಂಬಂತೆ ಭಾಸವಾಯಿತು.

ಮೊದಲಿಗೆ ಪಾಲ್ಘಾಟ್ ರಾಮಪ್ರಸಾದ್ ಅವರು ‘ರಾಮ ನನ್ನು ಬ್ರೋವರ” ಎಂಬ ತ್ಯಾಗರಾಜರ ಕೃತಿಯನ್ನು ಹರಿಕಾಂಭೋಜಿ ರಾಗದಲ್ಲಿ ಸುಂದರವಾಗಿ ಅನಾವರಣಗೊಳಿಸಿದರು. ಮುಂದಿನ ಮುತ್ತುಸ್ವಾಮಿ ದೀಕ್ಷಿತರ ‘ಮಾಮವ ಮೀನಾಕ್ಷಿ” ಎಂಬ ಹಾಡನ್ನು ಅಷ್ಟೇ ಸುಲಲಿತವಾಗಿ ಹಾಡಿದರು. ಈ ಹಾಡಿಗೆ ಕಾಂಚನ ಈಶ್ವರ ಭಟ್ ಅವರ ಮೃದಂಗ ಮತ್ತು ಡಾ. ಸಂಪತ್ ಅವರ ವಯೊಲಿನ್ ನುಡಿಸಾಣಿಕೆಯು ಕೂಡ ಅಷ್ಟೇ ಪರಿಣಾಮಕಾರಿಯಾಗಿತ್ತು.

ಮುಂದಿನ ಹಾಡು, ಸ್ವಾತಿ ತಿರುನಾಳ್ ಅವರ ಕೃತಿಯಾದ ಭೋಗೀಂದ್ರ ಸಾಯಿನಮ್’. ಕುಂತಲಾವರಾಳಿ ರಾಗದಲ್ಲಿ ಈ ಹಾಡು ಸುಶ್ರಾವ್ಯವಾಗಿ ಮೂಡಿಬಂತು. ಈ ಹಾಡಿಗೆ ಗಾಯನ ಮತ್ತು ಮೃದಂಗದ ನಡುವೆ ಒಂದು ಅತ್ಯುತ್ತಮ ಸಮನ್ವಯತೆಯ ಮತ್ತು ಸ್ಪರ್ಧೆಯ ನುಡಿಸಾಣಿಕೆ ಕಂಡುಬಂತು. ಈ ಹಂತದಲ್ಲಿ ವಿದ್ವಾನ್ ಕಾಂಚನ ಈಶ್ವರ ಭಟ್ ಅವರು ಮೃದಂಗದ ಜೊತೆ ಸರ್ಕಸ್ ಮಾಡುತ್ತಿರುವಂತೆ ಅದ್ಭುತ ಲಯವಿನ್ಯಾಸವನ್ನು ಪ್ರಸ್ತುತಪಡಿಸಿದರು. ವಯೊಲಿನ್ ಮತ್ತು ಮೋರ್ಸಿಂಗ್ ಅಷ್ಟೇ ಪರಿಣಾಮಕಾರಿಯಾಗಿತ್ತು. ಮುಂದಿನ ‘ಕಂಡು ಮನ ಹಿಗ್ಗಿತು ರಂಗಯ್ಯನ’ ಮತ್ತು ‘ಕಲಿಯುಗದೊಳು ಹರಿ ನಾಮವ’ ಎಂಬ ಕೃತಿಗಳು ಅತ್ಯುತ್ತಮವಾಗಿ ಮೂಡಿಬಂದುವು. ಕೊನೆಗೆ ‘ಭಾವಯಾಮಿ ಗೋಪಾಲಪಾಲಂ’ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮೂಡಿಬಂತು.

ಕಾರ್ಯಕ್ರಮದುದ್ದಕ್ಕೂ ಶಿಸ್ತುಬದ್ಧ ಪ್ರೇಕ್ಷಕರ ಗಡಣ ಗಮನ ಸೆಳೆಯಿತು. ಉತ್ತಮ ಪ್ರಸ್ತುತಿಗೆ ಚಪ್ಪಾಳೆಯ ಪ್ರೋತ್ಸಾಹ ಮತ್ತು ಕರತಾಡನದ ಉತ್ಸಾಹ ಸಭಾಸದರಲ್ಲಿ ಕಾಣಿಸಿತು. ಒಳ್ಳೆಯ ಹಾಡಿಗೆ ಪ್ರೇಕ್ಷಕರು ಸೂಚನೆ ನೀಡದೆ ಸ್ಪಂದಿಸುತ್ತಾರೆ. ಹೆಚ್ಚಿನ ಕಾರ್ಯಕ್ರಮಗಳಲ್ಲಿ ನಿರೂಪಕರು “ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ” ಎಂದು ಪ್ರೇಕ್ಷಕರನ್ನು ಅಂಗಲಾಚಿ ಅಸಹ್ಯ ಹುಟ್ಟಿಸುತ್ತಾರೆ. ಆದರೆ ಇಂತಹಾ ಕ್ರಿಯೆಗಳು ಶಾಸ್ತ್ರೀಯ ಸಂಗೀತದ ಕಚೇರಿಗಳಲ್ಲಿ ಕಾಣಸಿಗುವುದಿಲ್ಲ. ಇಲ್ಲಿ ಪ್ರಬುದ್ಧ ಪ್ರೇಕ್ಷಕರು ಉತ್ತಮ ಕಲಾಪ್ರಸ್ತುತಿಗೆ ತಾವಾಗಿಯೇ ಸ್ಪಂದಿಸುತ್ತಾರೆ. ಇದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. 

 ಒಟ್ಟು ಕಾರ್ಯಕ್ರಮ ಮುಗಿಸಿ ತೆರಳುವಾಗ ಒಂದೊಳ್ಳೆಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಸ್ವಾದಿಸಿದ ತೃಪ್ತಿ ಮನಸ್ಸಿನಲ್ಲಿ ಹಾಗೆಯೇ ಉಳಿಯಿತು.