Friday, August 28, 2026
Home Blog Page 401

ಮಾತಿನ ಮಂಟಪದಲ್ಲಿ ಬಂಟ್ವಾಳ ಜಯರಾಮ ಆಚಾರ್ಯರೊಂದಿಗೆ ಮಾತುಕತೆ 

ಕರ್ನಾಟಕ ಯಕ್ಷಗಾನ ಅಕಾಡೆಮಿ ಸಂಯೋಜಿಸಿದ ಪ್ರತಿದಿನದ ಕಾರ್ಯಕ್ರಮವಾದ ಯಕ್ಷಗಾನ  ಕಲಾವಿದರೊಂದಿಗೆ ಮಾತುಕತೆಯ ಮಾತಿನ ಮಂಟಪದ 3ನೇ  ಕಾರ್ಯಕ್ರಮದಲ್ಲಿ ಇಂದು ಪ್ರಸಿದ್ಧ ಯಕ್ಷಗಾನ ಹಾಸ್ಯ ಕಲಾವಿದರಾದ ಶ್ರೀ ಬಂಟ್ವಾಳ ಜಯರಾಮ ಆಚಾರ್ಯರೊಂದಿಗೆ ಮಾತುಕತೆ ನಡೆಯಲಿದೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ, ಯಕ್ಷಗಾನ ಕಲಾವಿದೆಯೂ ಉಪನ್ಯಾಸಕರೂ ಆದ ಶ್ರೀಮತಿ ಆರತಿ ಪಟ್ರಮೆಯವರು ಕಾರ್ಯಕ್ರಮವನ್ನು ಸಂಯೋಜಿಸಿ ಮಾತುಕತೆಯನ್ನು ನಡೆಸಿಕೊಡಲಿದ್ದಾರೆ.

ಈ ಕಾರ್ಯಕ್ರಮ ಫೇಸ್ಬುಕ್ ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಸಮಯ ಇಂದು ಅಂದರೆ ಆಗಸ್ಟ್ 31 ಸೋಮವಾರ ಸಂಜೆ ಘಂಟೆ 6.30ರಿಂದ  7.30ರ ವರೆಗೆ. ಈ ಕಾರ್ಯಕ್ರಮದಲ್ಲಿ ಪ್ರತಿದಿನ ಬೇರೆ ಬೇರೆ ಯಕ್ಷಗಾನ ಕಲಾವಿದರೊಂದಿಗೆ ಮಾತುಕತೆ ನಡೆಯಲಿದೆ. 

ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಅಂಬುರುಹ ಕುಶ ಮತ್ತು ಅಂಬುರುಹ ಲವ

ಭಾಗವತರೂ ಪ್ರಸಂಗಕರ್ತರೂ ಆದ ಶ್ರೀ  ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ‘ಅಭಿನವ ವಾಲ್ಮೀಕಿ’ ಎಂದೇ ಪ್ರಸಿದ್ಧರು. ಯಕ್ಷಗಾನದ ಸರ್ವಾಂಗಗಳನ್ನೂ ಬಲ್ಲವರು. ಯಕ್ಷಗಾನದ ಓರ್ವ ಶ್ರೇಷ್ಠ ನಿರ್ದೇಶಕರೂ ಹೌದು. ಪದವೀಧರರಾದ ಇವರು ಆನೆಗುಂಡಿ ಗಣಪತಿ ಭಟ್ಟರ ಪ್ರಿಯ ಶಿಷ್ಯನಾಗಿ ಸತತ ಸಾಧನೆ ಮತ್ತು ಸ್ವಯಂ ಪ್ರತಿಭೆಯಿಂದ ಬೆಳೆದು ಕಾಣಿಸಿಕೊಂಡವರು. ಉದ್ಯೋಗಾರ್ಥಿಯಾಗಿ ವಾಣಿಜ್ಯ ನಗರಿ ಮಂಬೈಗೆ ತೆರಳಿದವರು. ಅಲ್ಲಿಯೂ ಯಕ್ಷಗಾನದ ನಂಟು ಇವರ ಜತೆಯಾಗಿಯೇ ಇತ್ತು. ವೇಷವನ್ನೂ ಮಾಡಿ ಅನುಭವವುಳ್ಳವರು. ತಾಳಮದ್ದಳೆ ಅರ್ಥಧಾರಿಯಾಗಿಯೂ ಕಾಣಿಸಿಕೊಂಡವರು. ಚೆಂಡೆ ಮದ್ದಲೆಗಳನ್ನು ನುಡಿಸಬಲ್ಲವರು.

ಮುಂಬಯಿಯಿಂದ ಮರಳಿದ ಬಳಿಕ ಯಕ್ಷಗಾನವನ್ನು ವೃತ್ತಿಯಾಗಿ ಸ್ವೀಕರಿಸಿ ಕಲಾಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ. ಭಾಗವತರಾಗಿ ಪುತ್ತೂರು, ಕರ್ನಾಟಕ ಮತ್ತು ಕಟೀಲು ಮೇಳಗಳಲ್ಲಿ ನಾಲ್ಕು ದಶಕಕ್ಕೂ ಮಿಕ್ಕಿದ ಕಲಾಸೇವೆ ಪೂಂಜರದ್ದು. ಮೇಳಕ್ಕೆ ಸೇರುವ ಮೊದಲೇ ಪೂಂಜರು ಪ್ರಸಂಗ ರಚನಾ ಕಾಯಕದಲ್ಲಿ ತೊಡಗಿದ್ದರು. ಮೇಳದ ತಿರುಗಾಟ ಮತ್ತು ಪ್ರಸಂಗ ರಚನೆಯು ಜತೆಯಾಗಿಯೇ ಸಾಗಿತ್ತು. ಅದರಲ್ಲಿ ಅತ್ಯಂತ ಯಶಸ್ವಿಯೂ ಆಗಿದ್ದರು. ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಪ್ರಸಂಗ ರಚನೆ ಮತ್ತು ಪದ್ಯ ರಚನಾ ಕೌಶಲವು ಪ್ರಶಂಶನೀಯವಾದುದು. ಅವರ ಪ್ರಸಂಗದ ಪದ್ಯಗಳಿಗೆ ಎಷ್ಟು ಚೆನ್ನಾಗಿ ಅರ್ಥ ಹೇಳಿದರೂ ಅದು ಕಡಿಮೆಯೇ ಆಗುತ್ತದೆ. ಸಾಲದು ಎಂದೇ ತೋರುತ್ತದೆ. ಪ್ರಸಿದ್ಧ ಕಲಾವಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿಯವರ ಈ ಮಾತುಗಳು ಪೂಂಜರ ಪದ್ಯ ರಚನಾ ಸಾಮರ್ಥ್ಯವೇನು ಎಂಬುದನ್ನು ಪ್ರಕಟಿಸುತ್ತದೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಪುರಾಣ, ಸಾಮಾಜಿಕ ಅನೇಕ ಪ್ರಸಂಗಗಳನ್ನು ಶ್ರೀ ಪೂಂಜರು ಬರೆದಿದ್ದರು. ಅನೇಕ ಪ್ರಸಂಗಗಳು ಮುದ್ರಣವಾಗದೆ ಉಳಿದದ್ದೂ ಇದೆ. ಮಾನಿಷಾದ ಪ್ರಸಂಗವು ಇವರಿಗೆ ಅಪಾರ ಕೀರ್ತಿಯನ್ನು ತಂದು ಕೊಟ್ಟಿತು. ಕರ್ನಾಟಕ ಮೇಳದಲ್ಲಿ ಜಯಭೇರಿ ಬಾರಿಸಿದ ಈ ಪ್ರಸಂಗ ಪೂಂಜರಿಗೆ ಅಭಿನವ ವಾಲ್ಮೀಕಿ ಎಂಬ ಬಿರುದನ್ನೇ ನೀಡಿತು. ಕಟೀಲು ಮೇಳದಲ್ಲಿ ಪೂಂಜರ ಜೊತೆಗೆ ನನ್ನ ಮೊದಲ ಮೂರು ತಿರುಗಾಟಗಳು ಮರೆಲಾಗದು. ಪ್ರೋತ್ಸಾಹಿಸಿ ಸಹಕರಿಸಿದ್ದಾರೆ. ಅವರಿಗೆ ನಾನು ಕೃತಜ್ಞನಾಗಿರುವೆ. ಸಂಭಾಷಣೆಗಳು ಅತ್ಯಂತ ರುಚಿ ರುಚಿಯಾಗಿರಬೇಕೆಂದು ಬಯಸುವ ಇವರು ಅಂತಹ ಕಲಾವಿದರಿಗೆ ಸದಾ ಸಹಕರಿಸುತ್ತಾರೆ. ಸರಳ, ಸಜ್ಜನ,ನಿಗರ್ವಿಯಾದ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿನೋದ ಪ್ರಿಯರೂ ಹೌದು. ಬಿಡುವಿನ ವೇಳೆಯಲ್ಲಿ ನಮಗದನ್ನು ಕಾಣಬಹುದು.

ಪೂಂಜರು ರಚಿಸಿದ ಪ್ರಸಂಗಗಳಲ್ಲಿ ೨೯ ಪ್ರಸಂಗಗಳು  ಅಂಬುರುಹ ಕುಶ ಮತ್ತು ಅಂಬುರುಹ ಲವ ಎಂಬ ಎರಡು ಸಂಪುಟಗಳಾಗಿ ಪ್ರಕಟವಾಗಿದ್ದು ಇದು ಯಕ್ಷಗಾನ ಕ್ಷೇತ್ರಕ್ಕೊಂದು ಶ್ರೇಷ್ಠ ಕೊಡುಗೆ. ಈ ಎರಡೂ ಸಂಪುಟಗಳ ಪ್ರಕಾಶಕರು ಖ್ಯಾತ ಭಾಗವತ ಶ್ರೀ ಪಟ್ಲ ಸತೀಶ ಶೆಟ್ಟಿಯವರ ಸಾರಥ್ಯದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ ) ಮಂಗಳೂರು ಎಂಬ ಸಂಸ್ಥೆ. ವಿದ್ವಾಂಸರೂ ಪ್ರಸಂಗಕರ್ತರೂ ಆಗಿರುವ ಡಾ. ಅಮೃತ ಸೋಮೇಶ್ವರ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಶ್ರೀ ಪೂಂಜರ ಪ್ರಸಂಗ ರಚನಾ ಸಾಮರ್ಥ್ಯ ಮತ್ತು ಅವರ ಪ್ರಸಂಗಗಳು ಯಶಸ್ವಿಯಾಗಲು ಅನುಕೂಲವಾಗಿರುವ ಕಾರಣಗಳನ್ನು ಅಮೃತ ಸೋಮೇಶ್ವರರು ವಿವರಿಸಿದ್ದಾರೆ.  ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರಾಗಿ  ಶ್ರೀ ಪಟ್ಲ ಸತೀಶ ಶೆಟ್ಟಿಯವರು ಪ್ರಕಾಶಕರ ನೆಲೆಯಲ್ಲಿ ಶುಭ ಹಾರೈಸಿದ್ದಾರೆ. ಸಿತ್ಲ ಫೌಂಡೇಶನ್ ಟ್ರಸ್ಟ್ ನ ರೂವಾರಿ ಕಟೀಲು ಸಿತ್ಲ ರಂಗನಾಥ ರಾಯರು ಕವಿಪರಿಚಯ ತಲೆಬರಹದಡಿಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ‘ಬರೆದವನ ಬಿನ್ನಹ’ ಶೀರ್ಷಿಕೆಯಡಿಯಲ್ಲಿ ಲೇಖಕರಾದ  ಶ್ರೀ  ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿ ಕೃತಾರ್ಥರಾಗಿದ್ದಾರೆ. ಪೂಂಜರು ಈ ಎರಡೂ ಸಂಪುಟಗಳನ್ನು ವಿದ್ವಾಂಸರಾದ ಶಿಮಂತೂರು ಶ್ರೀ ನಾರಾಯಣ ಶೆಟ್ಟಿಯವರಿಗೆ ಗೌರವಪೂರ್ವಕ ಅರ್ಪಿಸಿದ್ದು ಪ್ರಶಂಶನೀಯ ವಿಚಾರ.

ಅಂಬುರುಹ ಕುಶ ಎಂಬ ಸಂಪುಟವು ಹದಿನೈದು ಪ್ರಸಂಗಗಳ ಗೊಂಚಲು. ವಧೂ ವೈಶಾಲಿನಿ, ನಳಿನಾಕ್ಷ ನಂದಿನಿ, ಗಂಡುಗಲಿ ಘಟೋತ್ಕಜ, ರಾಜಾ ದ್ರುಪದ, ಸತಿ ಉಲೂಪಿ,  ಲೋಕಾಭಿರಾಮ, ಸೋಮೇಶ್ವರ ಕ್ಷೇತ್ರ ಮಹಾತ್ಮೆ, ಬೋಪದೇವೋಪಾಖ್ಯಾನ, ದತ್ತ ಸಂಭವ, ಅಂಧಕ ನಿಧಾನ, ಸ್ವರ್ಣ ನೂಪುರ, ಮೇಘ ಮಾಣಿಕ್ಯ, ಕುಡಿಯನ ಕಣ್ಣ್ , ಕುಡಿಯನ ಕೊಂಬಿರೆಲ್, ದಳವಾಯಿ ಮುದ್ದಣ್ಣೆ  ಎಂಬ ಪ್ರಸಂಗಗಳು ಈ ಸಂಪುಟದಲ್ಲಿವೆ. ಅಂಬುರುಹ ಲವ  ಎಂಬ ಸಂಪುಟವು ಹದಿನಾಲ್ಕು ಪ್ರಸಂಗಗಳನ್ನು ಒಳಗೊಂಡಿದೆ. ಮನಿಷಾದ, ಉಭಯಕುಲ ಬಿಲ್ಲೋಜ, ಮನ್ಮಥೋಪಾಖ್ಯಾನ, ಮಾತಂಗ ಕನ್ಯೆ, ಕಲಿ, ಕೀಚಕ, ಅಮರ ಸಿಂದೂದ್ಭವ, ಕಾರ್ತಿಕೇಯ ಕಲ್ಯಾಣ, ಪಾಂಚಜನ್ಯ, ಭಕ್ತ ಕುಚೇಲ, ಭುವನಾಭಿರಾಮ, ಮೇಘ ಮಯೂರಿ, ಐಗುಳೆ ದಚ್ಚಿನೆ, ಜೇವು ಕೇದಗೆ, ಬಂಗಾರ್ದ ಗೆಜ್ಜೆ ಎಂಬ ಪ್ರಸಂಗಗಳು ಈ ಸಂಪುಟದಲ್ಲಿವೆ. ಈ ಎರಡೂ ಸಂಪುಟಗಳು ಯಕ್ಷಗಾನ ಕಲೆಗೊಂದು  ಶ್ರೀ  ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಅಮೂಲ್ಯ ಕೊಡುಗೆಯಾಗಿ ಪರಿಣಮಿಸಿದೆ. ಈ ಸಂಪುಟಗಳಲ್ಲಿ  ಶ್ರೀ  ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಬರೆದ ಕನ್ನಡ ಪೌರಾಣಿಕ ಯಕ್ಷಗಾನ ಪ್ರಸಂಗಗಳ, ಕನ್ನಡ ಕಾಲ್ಪನಿಕ ಯಕ್ಷಗಾನ ಪ್ರಸಂಗಗಳ , ತುಳು  ಪೌರಾಣಿಕ ಮತ್ತು ಕಾಲ್ಪನಿಕ ಯಕ್ಷಗಾನ ಪ್ರಸಂಗಗಳ, ನಾಟಕಗಳ, ನೃತ್ಯರೂಪಕಗಳ ಮತ್ತು ಇತರ ಕೃತಿಗಳ ವಿವರಗಳನ್ನೂ ನೀಡಲಾಗಿದೆ. ಪತ್ನಿ ಶೋಭಾ ಮತ್ತು ಮಕ್ಕಳಾದ ಜೀವಿತೇಶ ಮತ್ತು ಪರೀಕ್ಷಿತ ಇವರುಗಳ ಸಹಕಾರ ಪ್ರೋತ್ಸಾಹವೂ ಪೂಂಜರ ಯಶಸ್ಷಿನೊಳಗೆ ಅಡಗಿದ್ದು ಪ್ರಸ್ತುತ ಮಂಗಳೂರು ಮಂಜನಾಡಿಯ ಅಂಬುರುಹ ಮನೆಯಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳಿಬ್ಬರೂ ವಿದ್ಯಾವಂತರಾಗಿದ್ದು ಯಕ್ಷಗಾನ ಕಲೆಯ ಸಂಬಂಧವಿರಿಸಿಕೊಂಡೇ ಬದುಕುತ್ತಿರುವುದು ಸಂತೋಷದ ವಿಚಾರ. 

ಲೇಖನ:ರವಿಶಂಕರ್ ವಳಕ್ಕುಂಜ 

0

0

ಉಡುವೆಕೋಡಿ ಸುಬ್ಬಪ್ಪಯ್ಯನವರ ರಾವಣ – ನೋಡಲೇ ಬೇಕಾದ ವೀಡಿಯೋ

ಆಗ ಕ್ಯಾಸೆಟ್ ಗಳ ಯುಗ..  ನನ್ನ ಚಿಕ್ಕಂದಿನಲ್ಲಿ ಅಂದರೆ ಹಲವಾರು ವರ್ಷಗಳ ಮೊದಲು ಉಡುವೆಕೋಡಿಯವರ ಅರ್ಥವನ್ನು ಕ್ಯಾಸೆಟ್ ನಲ್ಲಿ ಕೇಳಿದ್ದೆ. ಕೌರವನ ಅರ್ಥವಾಗಿತ್ತು ಅದು. ಆ ಪ್ರಸಂಗದಲ್ಲಿ  ಕೌರವ ಪಾತ್ರಧಾರಿಗೆ ಒಂದೆರಡು ಪದ್ಯಗಳಿತ್ತೋ ಏನೋ ? ಆದರೆ ಆಗ ನನ್ನ ಮನಸ್ಸಿನಲ್ಲಿ  ತನ್ನ ಪ್ರಭುದ್ದತೆಯ ಅರ್ಥಗಾರಿಕೆಯಿಂದ ಬಹಳಷ್ಟು ಪ್ರಭಾವವನ್ನು ಉಡುವೆಕೋಡಿ ಸುಬ್ಬಪ್ಪಯ್ಯನವರು  ಬೀರಿದ್ದರು. ಆ ಪ್ರಭಾವ ಎಷ್ಟಿತ್ತೆಂದರೆ ಯಾವ ಪಾತ್ರಧಾರಿಯ ಕೌರವನ ಅರ್ಥ ಕೇಳಿದಾಗಲೂ ಉಡುವೆಕೋಡಿಯವರೇ ನೆನಪಾಗುತ್ತಿದ್ದರು. ಕೌರವ ಎಂದರೆ ಉಡುವೆಕೋಡಿ ಎಂದು ಭಾವಿಸುವಷ್ಟು ಪಾತ್ರದ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು.    ಆಮೇಲೆ ಅವರ ಅರ್ಥವನ್ನು ಕೇಳಬೇಕೆಂಬ ಬಯಕೆಯಿಂದ ಅಂತರ್ಜಾಲಗಳನ್ನು ಹುಡುಕಾಡಿದ್ದೆ. ಒಂದೆರಡು ಸಣ್ಣ ವೀಡಿಯೊ ತುಣುಕುಗಳು ಮಾತ್ರ ಗೋಚರಿಸಿತ್ತು. ಶೇಣಿ, ಸಾಮಗರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಅರ್ಥಧಾರಿಗಳಲ್ಲಿ ಓರ್ವರಾಗಿದ್ದ ಹಾಗೂ ಅವರೊಡನೆ ತನ್ನ ಪ್ರಬುದ್ಧ ಮಾತುಗಾರಿಕೆಯಿಂದ ಗುರುತಿಸಿಕೊಂಡು ಅವರೊಡನೆ ವೇದಿಕೆ ಹಂಚಿಕೊಳ್ಳುತ್ತಿದ್ದ ಉಡುವೆಕೋಡಿಯವರು ಆಮೇಲೆ ಸ್ವಲ್ಪ ತಾಳಮದ್ದಳೆ ಅರ್ಥಧಾರಿಯಾಗಿ ಭಾಗವಹಿಸುವಲ್ಲಿ ಸ್ವಲ್ಪ ನಿರಾಸಕ್ತಿ ವಹಿಸಿದರೇನೋ ಎಂಬ ಸಂಶಯ ನನ್ನಲ್ಲಿ ಮನೆಮಾಡಿತ್ತು. ಆದರೆ ಕೆಲವು ವರ್ಷಗಳ ಹಿಂದೆ ಅವರ ಅರ್ಥಗಾರಿಕೆಯು ಅಲ್ಲಲ್ಲಿ ಕೇಳಲು ಸಿಗತೊಡಗಿದ್ದು ತಾಳಮದ್ದಳೆಯ ರಸಿಕರ ಸೌಭಾಗ್ಯವೆಂದೇ ಹೇಳಬೇಕು. ಕೊರೋನಾ ಭಾದಿಸುವ ಕೆಲವೇ ದಿನಗಳ ಮೊದಲು ಅವರ ಮನೆಗೆ ಹೋಗಿ ಮಾತನಾಡಿಸಿದ್ದೆ. ಆಗ ಅವರಲ್ಲಿ ಇರುವ ಅರ್ಥಗಾರಿಕೆಯ ಧ್ವನಿಮುದ್ರಣಗಳ ಸಂಗ್ರಹವನ್ನು ಕೇಳಲು ಕೊಡುವುದಾಗಿ ಹೇಳಿದ್ದರು. ಆದರೆ ಅಷ್ಟರಲ್ಲೇ ಕೊರೋನಾ ಅವರಿಸತೊಡಗಿದ್ದುದರಿಂದ ಎಲ್ಲರೂ ಅವರವರ ವೃತ್ತಿ, ಕಾರ್ಯಕ್ಷೇತ್ರಗಳನ್ನು ಮರೆತು ಮನೆಯಲ್ಲಿಯೇ ಉಳಿಯುವಂತಾಯಿತು. ನಾನೂ ನಮ್ಮ ಬರವಣಿಗೆಯ ಕಾಯಕ ಮತ್ತು ಪತ್ರಿಕೆಯ ಕೆಲಸಗಳಿಗೆ ಒಂದು ಸಣ್ಣ ವಿರಾಮವನ್ನು ಘೋಷಿಸಿದ್ದೆ. ಆದರೆ ಇತ್ತೀಚೆಗೆ ಅವರ ರಾವಣನ ಅರ್ಥಗಾರಿಕೆಯ ವೀಡಿಯೊ ಒಂದನ್ನು ಯು ಟ್ಯೂಬ್ ಚಾನೆಲ್ ನಲ್ಲಿ ನೋಡುವ ಅವಕಾಶ ಒದಗಿ ಬಂತು. ಸೀತಾಪಹರದ ರಾವಣನಾಗಿ ಉಡುವೆಕೋಡಿಯವರು ಇಲ್ಲಿ ವಿಜೃಂಭಿಸಿದ್ದಾರೆ. ಇದು ಯಕ್ಷಗಾನ ಕಲಾವಿದ, ಛಾಯಾಗ್ರಾಹಕರೂ ಆದ ಶ್ರೀ ಮಧುಸೂದನ ಅಲೆವೂರಾಯರು ಅಪ್ಲೋಡ್ ಮಡಿದ ವೀಡಿಯೋ . ಇದಕ್ಕಾಗಿ ಮಧುಸೂದನ ಅಲೆವೂರಾಯರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಕಡಿಮೆಯೇ. ಅವರ ವೀಡಿಯೋದ ಕೊಂಡಿಯನ್ನು ಕೆಳಗೆ ಕೊಡಲಾಗಿದೆ.

ಸೀತಾಪಹಾರದ ರಾವಣನಾಗಿ ಶ್ರೀ ಉಡುವೆಕೋಡಿ ಸುಬ್ಬಪ್ಪಯ್ಯ 

ಮಾತಿನ ಮಂಟಪವನ್ನು ಕಟ್ಟುವ ವೇಳೆಯಲ್ಲಿ ನಡುವೆ ನುಡಿಮುತ್ತುಗಳನ್ನು ಪೋಣಿಸುವುದು ಹಾಗೂ  ಅರ್ಥಗರ್ಭಿತ ಮಾತುಗಳನ್ನು ಎಸೆಯುವುದು ಉಡುವೆಕೋಡಿಯವರ ಶೈಲಿ. ಅದನ್ನು ಈ ರಾವಣನ ಅರ್ಥಗಾರಿಕೆಯಲ್ಲಿ ಅಲ್ಲಲ್ಲಿ ಕೇಳಬಹುದು. ಉದಾಹರಣೆಗೆ,  “ಹೋಮಕ್ಕೆ ತುಪ್ಪ ಹಾಕುವುದಕ್ಕೆ ಮುಂದಾದರೇ ಹೊರತು ನನ್ನ ಪ್ರಶ್ನೆಗೆ ಉತ್ತರ ಕೊಡುವುದಕ್ಕೆ ಸಿದ್ಧರಾಗಲಿಲ್ಲ” “ಬಾಳೆ ಗೊನೆ ಹಾಕಿದ ಮೇಲೆ ಬಾಳೆಯ ಗೊನೆ. ಅದು ಬಾಳೆಗೆ ಗೊನೆ , ಬಾಳೆ ಕೊನೆ””ಆ ಎಸೆಯ ಓಲಗ .. ಅದು ಎಸೆಯಬೇಕಾದ ಓಲಗ “ಇಂತಹ ಹಲವು ಮಾತಿನ ಮುತ್ತುಗಳನ್ನು ಇದರಲ್ಲಿ ಕೇಳಬಹುದು. ಎಲ್ಲರೂ ನೋಡಲೇಬೇಕಾದ ಹಾಗೂ ಕೇಳಲೇ ಬೇಕಾದ ವೀಡಿಯೊ 

ರಾನಂ ಪ್ರಸಂಗ ಸಂಪುಟ – ಡಾ। ಕೆ.ಎಂ. ರಾಘವ ನಂಬಿಯಾರ್ 

ಡಾ। ಕೆ.ಎಂ. ರಾಘವ ನಂಬಿಯಾರರು ನಮ್ಮ ಹೆಮ್ಮೆಯ ಕಲೆ ಯಕ್ಷಗಾನದ ಶ್ರೇಷ್ಠ ವಿದ್ವಾಂಸರು. ಕನ್ನಡ ಸಾರಸ್ವತ ಲೋಕಕ್ಕೆ ಇವರ ಕೊಡುಗೆ ಅಪಾರ. ಲೇಖಕರಾಗಿ, ವಿಮರ್ಶಕರಾಗಿ, ಕಲಾವಿದರಾಗಿ, ಪ್ರಸಂಗಕರ್ತರಾಗಿ ಎಲ್ಲರಿಗೂ ಸುಪರಿಚಿತರು. ಯಕ್ಷಗಾನದ ಸರ್ವ ಅಂಗಗಳಲ್ಲಿಯೂ ಪರಿಣತಿಯನ್ನು ಹೊಂದಿ ಇತರರಿಗೆ ತಿಳಯಹೇಳಬಲ್ಲವರು. ಮೂಲತಃ ಇವರು ಕೇರಳದವರಾದರೂ ಶ್ರೀಯುತರ ತೀರ್ಥರೂಪರು ಕಾರ್ಕಳ ಸಮೀಪದ ಹಿರೇಬೈಲೂರಿನಲ್ಲಿ ವೈದ್ಯರಾಗಿದ್ದು ೧೯೫೮ರಲ್ಲಿ ಕಾರ್ಕಳ ನಗರಕ್ಕೆ ಬಂದು ನೆಲೆಸಿದ್ದರು. ಇವರ ಮನೆಯು ಒಂದು ಪೌರಾಣಿಕ ಅವರಣವನ್ನೇ ಹೊಂದಿತ್ತು. ಪುರಾಣ ಕಾವ್ಯಗಳ ಓದು, ಭಗವದ್ಗೀತೆಯ ಪಾರಾಯಣಗಳ ಪುರಾಣ ಅಧ್ಯಾತ್ಮಗಳ ಸಂಬಂಧವಿಟ್ಟುಕೊಂಡೇ ಬೆಳೆದವರು. ಪರಿಸರವು ವ್ಯಕ್ತಿನಿರ್ಮಾಣವನ್ನು ಮಾಡುತ್ತದೆ ಎಂಬುದಕ್ಕೆ  ರಾಘವ ನಂಬಿಯಾರರೇ ನಿದರ್ಶನ. ಆ ಸಮಯದಲ್ಲಿ ಮನೋರಂಜನೆಗಾಗಿ ಇದ್ದುದು ಯಕ್ಷಗಾನ ಎಂಬ ಮಾಧ್ಯಮ ಮಾತ್ರ. ಪ್ರದರ್ಶನಗಳನ್ನು ಆಸಕ್ತಿಯಿಂದ ನೋಡಿ ಮನನ ಮಾಡಿಕೊಂಡಿದ್ದರು. ಇವರು ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಕಾರ್ಕಳ ಶ್ರೀ ವೆಂಕಟ್ರಮಣ ದೇವಳದ ಸಮೀಪ ಕಾರ್ಯಾಚರಿಸುತ್ತಿದ್ದ ಸಂಘದ ತಾಳಮದ್ದಳೆಗಳಲ್ಲಿ ಅಧ್ಯಾಪಕರಾದ ಶ್ರೀ ವಾಮನ ಪ್ರಭುಗಳ ಪ್ರೇರೇಪಣೆಯಿಂದ ಅರ್ಥ ಹೇಳಲು ಆರಂಭಿಸಿದ್ದರು. ಪದವಿ ಶಿಕ್ಷಣವನ್ನು ಪಡೆಯುವಾಗಲೂ ಭಾಗವಹಿಸುತ್ತಿದ್ದರು. ಹರಿದಾಸರೆಲ್ಲಾ ಆ ಕಾಲಕ್ಕೆ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಕಾರಣದಿಂದ ಮಾತಿನಿಂದಲೇ ರಂಗ ನಿರ್ಮಾಣ ಮಾಡಬಹುದೆಂಬ ಸೂಕ್ಷ್ಮತೆಯನ್ನು ಚತುರಮತಿಗಳಾದ ನಂಬಿಯಾರರು ಅರಿತುಕೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿಯೇ ಯಕ್ಷಗಾನ ಕ್ಷೇತ್ರದಲ್ಲಿ ಪಳಗಿದ ಇವರು ಮುಮ್ಮೇಳದ ಜೊತೆಗೆ ಹಿಮ್ಮೇಳವನ್ನೂ ಕರಗತ ಮಾಡಿಕೊಂಡಿದ್ದರು. ರಾಘವ ನಂಬಿಯಾರರು ಸಂಸ್ಕೃತ ಎಂ. ಎ . ಪದವೀಧರರು. ಅವರು ರಚಿಸಿದ ‘ಹಿಮ್ಮೇಳ’ ಎಂಬ ಬೃಹತ್ ಸಂಶೋಧನಾ ಗ್ರಂಥ ಯಕ್ಷಗಾನ ಕಲಾಲೋಕಕ್ಕೆ ಒಂದು ಅನುಪಮ ಕೊಡುಗೆಯಾಗಿದೆ. ಈ ಗ್ರಂಥಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಡಾ। ಕೆ.ಎಂ. ರಾಘವ ನಂಬಿಯಾರರು ಉಭಯ ತಿಟ್ಟುಗಳ ಪರಿಣಿತರು. ಹಿರಿಯ ಕಲಾವಿದರೆಲ್ಲರ ಒಡನಾಟ ಇವರಿಗೆ ಯಕ್ಷಗಾನದ ಸರ್ವ ವಿದ್ಯೆಗಳನ್ನು ತಿಳಿದುಕೊಳ್ಳಲು ಪೂರಕವಾಯಿತು. ಇವರು ಪತ್ರಿಕಾ ರಂಗದಲ್ಲೂ ವ್ಯವಸಾಯವನ್ನು ಮಾಡಿದ್ದರು. ಹಿಮ್ಮೇಳ, ದೀವಟಿಗೆ, ರಂಗಸ್ಥಳದ ಬೆಳಕು, ದ್ರಾವಿಡ ನಾಡು-ನುಡಿ, ಮದ್ದಳೆಯ ಮಾಯಾಲೋಕ, ಯಾಜಿ ಭಾಗವತರು, ಚಿನ್ನದ ತಾಳಿ, ಮುಂದಲೆ, ವಿಲೋಕನ, ಆಶುವೈಖರಿ ಮೊದಲಾದುವುಗಳು  ಇವರು ರಚಿಸಿದ ಗ್ರಂಥಗಳು. ‘ರಂಗ ವಿಚಿಕಿತ್ಸೆ’ ಎಂಬುದು ನಂಬಿಯಾರರ ವಿಶಿಷ್ಟ ಕೃತಿ. ಯಕ್ಷಗಾನದ ಅನೇಕ ವಿದ್ವಾಂಸರ, ಹಿರಿಯ ಕಲಾವಿದರ ಸಂದರ್ಶನ ನಡೆಸಿ ದಾಖಲೀಕರಣಗೊಳಿಸಿದ ಸಿತ್ಲ ಫೌಂಡೇಶನ್ ನ ಸಿತ್ಲ ರಂಗನಾಥ ರಾವ್ ನಂಬಿಯಾರರ ವಿಚಾರಧಾರೆಯನ್ನು ಈ ಪುಸ್ತಕದಲ್ಲಿ ನಿರೂಪಿಸಿರುತ್ತಾರೆ. ಶ್ರೀಧರ ಡಿ. ಎಸ್ , ರಾಜಕುಮಾರ್ ಪೈವಳಿಕೆ,ಧನಂಜಯ ನೆಲ್ಯಾಡಿ, ಸಮೀರ್ ದಾಮ್ಲೆಯವರ ಲೇಖನಗಳು ಈ ಹೊತ್ತಗೆಯಲ್ಲಿವೆ. ಈ ಕೃತಿಯ ಬಗ್ಗೆ ಮದ್ದಳೆಗಾರರಾದ ಶ್ರೀ ಕೃಷ್ಣ ಪ್ರಕಾಶ ಉಳಿತ್ತಾಯರು ಲೇಖನವೊಂದನ್ನು ಬರೆದಿದ್ದರು. ಪ್ರಸಂಗಕರ್ತರಾಗಿಯೂ ಯಕ್ಷಗಾನಕ್ಕೆ ನಂಬಿಯರರ ಕೊಡುಗೆ ಅಪಾರ. ಎಲ್ಲವೂ ಯಶಸ್ವೀ ಪ್ರಸಂಗಗಳು. ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ಅಮರೇಂದ್ರ ಪದ ವಿಜಯಿ, ವಜ್ರಧರ ವಿಲಾಸ, ರಘುವಂಶ, ಚಾರು ಚರಿತೆ, ಮಣಿಕಂಠ ಚರಿತೆ ಎಂಬ ಪ್ರಸಂಗಗಳನ್ನು ಬರೆದಿರುತ್ತಾರೆ. ಇವುಗಳಲ್ಲಿ ಚಕ್ರೇಶ್ವರ ಪರೀಕ್ಷಿತ,  ಉತ್ತಮ ಸೌದಾಮಿನಿ, ಅಮರೇಂದ್ರ ಪದ ವಿಜಯಿ, ವಜ್ರಧರ ವಿಲಾಸ, ರಘುವಂಶ ಎಂಬ ಐದು ಪ್ರಸಂಗಗಳ ಸಂಪುಟವೇ ‘ರಾನಂ ಪ್ರಸಂಗ ಸಂಪುಟ’ ಎಂಬ ಕೃತಿಯ ರೂಪದಲ್ಲಿ ೨೦೧೫ರಲ್ಲಿ ಲೋಕಾರ್ಪಣೆಗೊಂಡಿತು. ರಾನಂ ಎಂಬುದು ನಂಬಿಯಾರರ ಕಾವ್ಯನಾಮ.  ಅದೇ ಹೆಸರಿನಲ್ಲಿ ಪುಸ್ತಕವು ಪ್ರಕಟವಾಯಿತು. ಈ ಪುಸ್ತಕವನ್ನು ನಂಬಿಯಾರರು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ವಿನಯಪೂರ್ವಕ ಅರ್ಪಿಸಿ ಅವರನ್ನು ಯಕ್ಷಗಾನದ ಆಕೃತಿಗೆ ನಿಷ್ಠರಾಗಿ ಈ ರಂಗವನ್ನು ನಮ್ಮ ಕಾಲದ ವರೆಗೆ ಸುಸ್ಥಿತಿಯಲ್ಲಿ ತಲುಪಿಸಿದ ಧರ್ಮಸ್ಥಳ ಮೇಳದ ಯಜಮಾನ ಎಂದು ಹೇಳಿ ಗೌರವಿಸಿದ್ದಾರೆ. ಈ ಕೃತಿಯ ಪ್ರಕಾಶಕರು ಯಕ್ಷ ಗುರುಕುಲ ಶಿಕ್ಷಣ ಟ್ರಸ್ಟ್, ಉಡುಪಿ. ಪ್ರಕಾಶಕರಾಗಿ ಶ್ರೀ ಹೇರಂಜೆ ಕೃಷ್ಣ ಭಟ್ಟರು ರಾನಂ ಪ್ರಸಂಗ ಸಂಪುಟ ಕೃತಿಯನ್ನು ಇದು ಇತಿಹಾಸ ನಿರ್ಮಿಸಿದ ವರ್ತಮಾನ ಎಂದು ಹೇಳಿದ್ದಾರೆ. ಋಣಭಾರ ಎಂಬ ಶೀರ್ಷಿಕೆಯಡಿ ನಂಬಿಯಾರರು ಲೇಖಕನಾಗಿ ತಮ್ಮ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿ ಕೃತಾರ್ಥರಾಗಿರುವರು. ಐದು ಪ್ರಸಂಗಗಳ ಒಂದು ಗೊಂಚಲು ಇದು. ಅಲ್ಲದೆ ಅನುಬಂಧ ೧, ಅನುಬಂಧ ೨ ವಿಭಾಗಗಳಲ್ಲಿ ಡಾ. ಎಂ. ಪ್ರಭಾಕರ ಜೋಶಿ, ಡಾ. ಅಮೃತ ಸೋಮೇಶ್ವರ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಕಡತೋಕ ಮಂಜುನಾಥ ಭಾಗವತರು, ಕುಂಬಳೆ ಸುಂದರ ರಾವ್, ಪ್ರೊ. ಕೇಶವ ಉಚ್ಚಿಲ, ಮತ್ತು ಡಾ. ಪಾದೆಕಲ್ಲು ವಿಷ್ಣು ಭಟ್ಟರು  ಡಾ। ಕೆ.ಎಂ. ರಾಘವ ನಂಬಿಯಾರರ ಮತ್ತು ಅವರ ಪ್ರಸಂಗಗಳ ಬಗೆಗೆ ಮನಮುಟ್ಟುವಂತೆ ವಿವರಿಸಿದ್ದಾರೆ. ಅದನ್ನು ಓದಿಯೇ ನಾವು ಸಂತೋಷಪಡಬೇಕು. ಅತ್ಯಂತ ಉಪಯುಕ್ತ ಕೃತಿ ಇದು. ಒಟ್ಟು ೩೪೩ ಪುಟಗಳ ಶ್ರೇಷ್ಠ ಹೊತ್ತಗೆಯಾಗಿ ರಾನಂ ಪ್ರಸಂಗ ಸಂಪುಟವು ಓದುಗರ ಕೈ ಸೇರಿತ್ತು.  ಡಾ। ಕೆ.ಎಂ. ರಾಘವ ನಂಬಿಯಾರರ ಚಕ್ರೇಶ್ವರ ಪರೀಕ್ಷಿತ,  ಉತ್ತಮ ಸೌದಾಮಿನಿ, ಅಮರೇಂದ್ರ ಪದ ವಿಜಯಿ ಪ್ರಸಂಗಗಳಲ್ಲಿ ವೇಷಗಳನ್ನು ಮಾಡುವ ಅವಕಾಶವು ಶ್ರೀ ಕಟೀಲು ಮೇಳದಲ್ಲಿ ಒದಗಿದ್ದು ನನ್ನ ಭಾಗ್ಯವೆಂದು ಭಾವಿಸುತ್ತೇನೆ. 

ಲೇಖನ: ರವಿಶಂಕರ ವಳಕ್ಕುಂಜ 

ಶತಸ್ಮೃತಿ – ನಾರ್ಣಪ್ಪ ಉಪ್ಪೂರರ ನೂರರ ನೆನಪು

ನವೆಂಬರ್ ತಿಂಗಳು, 2018ನೇ ಇಸವಿಯಲ್ಲಿ ಬಡಗು ತಿಟ್ಟಿನ ಖ್ಯಾತ ಭಾಗವತರಾಗಿದ್ದ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಬಗೆಗೆ  ‘ಬದುಕಿ ಇರುತ್ತಿದ್ದರೆ ನೂರನೆಯ ವರುಷ’ ಎಂಬ ಲೇಖನವನ್ನು ಬರೆದಿದ್ದೆ. ಆ ಹೊತ್ತಿಗೆ ಜನ್ಮಶತಮಾನೋತ್ಸವ ಸಮಿತಿಯು ರೂಪೀಕರಣಗೊಂಡು ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು ‘ಶತಸ್ಮೃತಿ’ ಎಂಬ ಕೃತಿಯನ್ನು ಹೊರತರುವ ಸಿದ್ಧತೆಯೂ ನಡೆಯುತ್ತಿತ್ತು. (ಶ್ರೀಯುತರ ಜೀವಿತಾವಧಿ 1918-1984) ಸರ್ವರ ಸಹಕಾರದಿಂದ  2018ರ ನವೆಂಬರ್ ತಿಂಗಳಿನಿಂದ ತೊಡಗಿ ಕರ್ನಾಟಕ ರಾಜ್ಯದ ವಿವಿಧ ಸ್ಥಳಗಳಲ್ಲಿ ಸರಣಿ ಕಾರ್ಯಕ್ರಮಗಳು ನಡೆದು 2019ರಲ್ಲಿ ಶತಸ್ಮೃತಿ ಎಂಬ ಕೃತಿಯು ಓದುಗರ ಕೈ ಸೇರಿತ್ತು. ಶ್ರೀ ಅಮೃತೇಶ್ವರೀ ಮೇಳದ ಖ್ಯಾತ ಭಾಗವತರಾಗಿದ್ದ ಶ್ರೀ ಉಪ್ಪೂರರು 1972ರಲ್ಲಿ ಸ್ಥಾಪಿಸಲ್ಪಟ್ಟ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಪ್ರಾಚಾರ್ಯರೂ ಆಗಿ ಸೇವೆ ಸಲ್ಲಿಸಿ ಅನೇಕ ಶಿಷ್ಯಂದಿರನ್ನು ಸಿದ್ಧಗೊಳಿಸಿದ್ದರು.

1978ರಲ್ಲಿ ‘ಯಕ್ಷಗಾನ – ಅಧ್ಯಯನ’ ಎಂಬ ಪುಸ್ತಕವನ್ನೂ ಬರೆದಿದ್ದರು. 1980ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಇವರು ತನ್ನ ಕಲಾಜೀವನದ ಮುಖ್ಯ ವಿಚಾರಗಳನ್ನು ಡೈರಿಯಲ್ಲಿ ಬರೆದಿರಿಸಿದ್ದರು. ಆ ಡೈರಿಯ ಆಧಾರದಲ್ಲೇ ‘ಪ್ರಾಚಾರ್ಯ ಪಥ’ ಎಂಬ ಪುಸ್ತಕವು ಶ್ರೀ ನಾಗರಾಜ ಮತ್ತಿಗಾರರ ಸಂಪಾದಕತ್ವದಲ್ಲಿ ಪ್ರಕಟವಾಗಿತ್ತು.

ಶ್ರೀ ಅಮೃತೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯು ಭಾಗವತ ಶ್ರೀ ನಾರಣಪ್ಪ ಉಪ್ಪೂರ ಪ್ರಶಸ್ತಿಯನ್ನು ಸಾಧಕರಿಗೆ ನೀಡುವ ಕ್ರಮವನ್ನು ಆರಂಭಿಸಿ ಉಪ್ಪೂರರನ್ನು ಗೌರವಿಸುತ್ತಿರುವುದು ಸಂತೋಷದ ವಿಷಯ. ಶತಸ್ಮೃತಿ ಪುಸ್ತಕವು ಭಾಗವತ, ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರರ ನೂರರ ನೆನಪು ಸುಮಾರು ಮುನ್ನೂರ ಎಪ್ಪತ್ತೈದು ಪುಟಗಳನ್ನೊಳಗೊಂಡ ಒಂದು ಕೃತಿ. ಈ ಕೃತಿಗೆ ಮುನ್ನುಡಿಯನ್ನು ಬರೆದವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ. ಪ್ರೊ. ಎಂ. ಎ . ಹೆಗಡೆಯವರು ಪ್ರಾಸ್ತಾವಿಕ ಮಾತುಗಳನ್ನು ಬರೆದಿದ್ದಾರೆ. ಸಂಪಾದಕ ಮಂಡಳಿಯ ಪರವಾಗಿ ಪ್ರಧಾನ ಸಂಪಾದಕರಾದ ಡಾ. ಶ್ರೀಧರ ಉಪ್ಪೂರರ ಸಂಪಾದಕೀಯವಿದೆ. ಈ ಕೃತಿಯ ಪ್ರಕಾಶಕರು ಮಾರ್ವಿ ನಾರ್ಣಪ್ಪ ಉಪ್ಪೂರ ಜನ್ಮಶತಮಾನೋತ್ಸವ ಸಮಿತಿ, ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ, ಐರೋಡಿ. ಶತಸ್ಮೃತಿ ಹೊತ್ತಗೆಯು ಅಭಿಮಾನ, ಅಭಿಜ್ಞಾನ, ಆತ್ಮೀಯತೆ, ಅನುಬಂಧ ಎಂಬ ನಾಲ್ಕು ವಿಭಾಗಗಳನ್ನೂ ನೂರು ಲೇಖನಗಳನ್ನೂ ಒಳಗೊಂಡಿದೆ. ವಿದ್ವಾಂಸರು, ಕಲಾಭಿಮಾನಿಗಳೂ ಕಲಾವಿದರೂ ಉಪ್ಪೂರರ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೊನೆಯ ಇಪ್ಪತ್ತು ಪುಟಗಳಲ್ಲಿ ಸುಮಾರು ನೂರಕ್ಕೂ ಹೆಚ್ಚು ಬಣ್ಣದ ಮತ್ತು ಕಪ್ಪು ಬಿಳುಪಿನ ಚಿತ್ರಗಳಿವೆ. ಸುಂದರವೂ ಅತ್ಯುತ್ತಮವೂ ಆದ ಕೃತಿ. ಕೃತಿಗಾಗಿ ಸಹಕರಿಸಿದ ಮಹನೀಯರಿಗೆ ಅಭಿನಂದನೆಗಳು. ಮಾರ್ವಿ ಶೈಲಿಯ ಕೀರ್ತಿಯನ್ನು ಬೆಳಗಿಸಿದ ಪ್ರಾಚಾರ್ಯ ಭಾಗವತ ಶ್ರೀ ಎಂ. ನಾರ್ಣಪ್ಪ ಉಪ್ಪೂರರಿಗೆ ನಮನಗಳು. 

ಲೇಖನ:ರವಿಶಂಕರ್ ವಳಕ್ಕುಂಜ

ಯಕ್ಷ ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ ಅಸ್ತಂಗತ 

ಅಭಿನವ ನಾಗವರ್ಮ, ಯಕ್ಷ ಛಂದೋಬ್ರಹ್ಮ ಹೀಗೆ ಹತ್ತು ಹಲವು ಬಿರುದುಗಳನ್ನು ಪಡೆದಿದ್ದ ಯಕ್ಷಗಾನ ಛಂದಸ್ಸಿನ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದ ‘ಯಕ್ಷ  ಛಂದೋಂಬುಧಿ’ ಕೃತಿಯನ್ನು ಯಕ್ಷ ಲೋಕಕ್ಕೆ ಕೊಡುಗೆಯಾಗಿ ನೀಡಿದ ಮಹಾನ್ ಯಕ್ಷಗಾನ ವಿದ್ವಾಂಸ ಡಾ. ಶಿಮಂತೂರು ನಾರಾಯಣ ಶೆಟ್ಟಿ  ನಿಧನರಾಗಿದ್ದಾರೆ. ನಿವೃತ್ತ ಶಿಕ್ಷಕರೂ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಆಗಿದ್ದ ಇವರು ಪಾರ್ತಿಸುಬ್ಬ ಪ್ರಶಸ್ತಿ, ತಲ್ಲೂರು  ಕನಕ ಅಣ್ಣಯ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದರು. ತಾನು ಶಾಲಾ ದಿನಗಳಲ್ಲಿ ಓದುತ್ತಿರುವಾಗಲೇ ‘ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಅದ್ಭುತ ಪ್ರಸಂಗವನ್ನು ಬರೆದ ಇವರು ಆಮೇಲೆ ಸಾಧನೆಯತ್ತಲೇ ಮುಖ ಮಾಡಿದವರು.  ಯಕ್ಷಗಾನ ಛಂದೋಂಬುಧಿ, ಕನ್ನಡದ ಅನರ್ಘ್ಯ ಛಂದೋ ರತ್ನಗಳು, ವಿ-ಚಿತ್ರಾ ತ್ರಿಪದಿ, ದೇಸೀ ಛಂದೋಬಂಧಗಳ ಪುದುವಟ್ಟು ಎಂಬ ನಾಲ್ಕು ಯಕ್ಷಗಾನ ಛಂದಸ್ಸಿನ ಕೃತಿಗಳನ್ನು ರಚಿಸಿದ್ದ ಇವರು ಹಲವಾರು ಪ್ರಸಂಗಗಳನ್ನು ರಚಿಸಿದ್ದರು. ಛಂದಸ್ಸಿನ ಬಗ್ಗೆಯೂ ಯಕ್ಷಗಾನ ಬಗ್ಗೆಯೂ ಹೀಗೆಯೇ ಎಂದು ಸ್ಪಷ್ಟ ನಿರ್ದೇಶನ ಕೊಡಬಲ್ಲ ಶ್ರೀ ನಾರಾಯಣ ಶೆಟ್ಟಿಯವರ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೂ ಸಾಹಿತ್ಯ ಕ್ಷೇತ್ರಕ್ಕೂ ಒಂದು ತುಂಬಲಾರದ ನಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರನ್ನು ಕಳಕೊಂಡು ಇಂದು ಕನ್ನಡ ಸಾರಸ್ವತ ಲೋಕ ಮತ್ತು ಕಲಾಪ್ರಪಂಚ ಬಡವಾಗಿದೆ. ಯಕ್ಷರಂಗದಲ್ಲಿ ಹಲವಾರು ಮಂದಿ ಶಿಷ್ಯರನ್ನು ಹೊಂದಿದ್ದ ಅವರ ಅಗಲಿಕೆಯನ್ನು ಸಹಿಸುವ ಶಕ್ತಿಯನ್ನು ಅವರ ಅಭಿಮಾನಿಗಳಿಗೂ ಕುಟುಂಬದವರಿಗೂ ಮತ್ತು ಇಡೀ ಕಲಾಕ್ಷೇತ್ರಕ್ಕೂ ಆ ಭಗವಂತನು ದಯಪಾಲಿಸಲಿ. 

ಮುಗಿಯದ ಪಯಣವಾಗಿದ್ದರೂ ಮತ್ತೆ ಆರಂಭ ಯಾವಾಗ?!!!

ವರ್ತಮಾನದ ವಿಷಯ ಬೇರೆಯೇ ಇರಬಹುದು. ಅದು ಲೋಕಕ್ಕೆ ಎರಗಿದ ಕಂಟಕ. ಆದರೆ ಮೊದಲು ಹಾಗೆ ಹೇಳುವ ಹಾಗಿರಲಿಲ್ಲ. ಮೊದಲೆಲ್ಲಾ ಪತ್ತನಾಜೆ ಅಥವಾ ಹತ್ತನಾವಧಿಗೆ ಯಕ್ಷಗಾನದ ಪ್ರದರ್ಶನಗಳು ನಿಂತೇ ಬಿಡುತ್ತಿದ್ದುವು. ಈಗ ಒಂದೆರಡು ದಿನಗಳ ನಂತರ ಪುನಃ ತಿರುಗಾಟ, ಪ್ರದರ್ಶನಗಳು ಆರಂಭವಾಗುತ್ತವೆ. ಆದ್ದರಿಂದ ಈ ಹತ್ತನಾವಧಿ ಎನ್ನುವುದು ಈಗ ಕೇವಲ ತಿರುಗಾಟದ ಮೇಳಗಳು ಪ್ರದರ್ಶನ ನಿಲ್ಲಿಸುವ ಅಥವಾ ಗೆಜ್ಜೆ ಬಿಚ್ಚುವ ಒಂದು ಸಾಂಪ್ರದಾಯಿಕ ಪ್ರಕ್ರಿಯೆಯಾಗಿ ಉಳಿದುಬಿಟ್ಟಿದೆ. ಏಕೆಂದರೆ ಪುನಃ ಮಳೆಗಾಲದ ತಿರುಗಾಟಕ್ಕೆ ಹೊರಡಬೇಕಲ್ಲ.
ಹಿರಿಯರಿಂದ ನಾವು ಕೇಳಿ ತಿಳಿದ ಪ್ರಕಾರ ಮಳೆಗಾಲದ ಪ್ರದರ್ಶನಗಳು ಎಂಬುದು ಈ ರೀತಿಯಾಗಿ ಬೆಳವಣಿಗೆಯನ್ನು ಕಂಡುದು ಹತ್ತಾರು ವರ್ಷಗಳಿಂದೀಚೆಗೆ. ಸುಮಾರು ಕೆಲವು ದಶಕಗಳಷ್ಟು ಹಿಂದಕ್ಕೆ ಹೋದರೆ ಮಳೆಗಾಲದ ಪ್ರದರ್ಶನಗಳು ಬಹಳ ಅಪರೂಪವಾಗಿದ್ದುವು. ಅಥವಾ ಕೇವಲ ಕೆಲವೇ ಕೆಲವು ತಾಳಮದ್ದಳೆಗಳಿಗೆ ಮಳೆಗಾಲದ ಯಕ್ಷಗಾನ ಸೀಮಿತವಾಗಿತ್ತು. ಆಗೆಲ್ಲಾ ಹಾಲ್‍ಗಳು, ಕಲ್ಯಾಣ ಮಂಟಪಗಳು ಬಹಳ ವಿರಳ. ತಾಳಮದ್ದಳೆ ಕೂಟಗಳು ಶಾಲೆಗಳಲ್ಲಿ ರಜಾದಿನಗಳಲ್ಲಿ ನಡೆಯುತ್ತಿದ್ದುವು. ಹೆಚ್ಚಿನೆಲ್ಲಾ ಯಕ್ಷಗಾನ ಚಟುವಟಿಕೆಗಳಿಗೆ ಶಾಲೆಗಳೇ ಆಶ್ರಯತಾಣಗಳಾಗಿದ್ದುವು. ಅದೂ ರಜಾದಿನಗಳಲ್ಲಿ ಮಾತ್ರ. ಏಕೆಂದರೆ ಹಗಲು ಶಾಲೆಯನ್ನು ನಡೆಸಬೇಕಲ್ಲ…!
ಹತ್ತನಾವಧಿ ಮುಗಿದು ಮಳೆಗಾಲ ಬಂತೆಂದರೆ ಹೆಚ್ಚಿನೆಲ್ಲಾ ಕಲಾವಿದರು ಉದ್ಯೋಗವನ್ನಾಗಿ ವಿವಿಧ ವೃತ್ತಿಗಳನ್ನು ಅವಲಂಬಿಸುತ್ತಿದ್ದರು. ಕೃಷಿ ಚಟುವಟಿಕೆಗಳು, ಕೂಲಿ ಕೆಲಸ, ವಿವಿಧ ಬಗೆಯ ಕಾರ್ಮಿಕ ವೃತ್ತಿಗಳು ಹೀಗೆ ಕಲಾವಿದರು ಜೀವನೋಪಾಯಕ್ಕಾಗಿ ವಿವಿಧ ಬಗೆಯ ಕಾಯಕಗಳಲ್ಲಿ ತೊಡಗಿರುತ್ತಿದ್ದರು. ಹೆಚ್ಚಿನ ಕಲಾವಿದರು ಆರ್ಥಿಕವಾಗಿ ಸುದೃಢ ಸ್ಥಿತಿಯಲ್ಲಿ ಇಲ್ಲದಿದ್ದುದೇ ಇದಕ್ಕೆ ಕಾರಣವಿರಬಹುದು.
ಕಾಲ ಸರಿಯುತ್ತಾ ಬಂತು. ವರ್ಷಗಳು ಉರುಳುತ್ತಾ ಬಂದಂತೆ ಆದ ಬದಲಾವಣೆಗಳು ಕಲಾವಿದರಿಗೆ ಪೂರಕವೇ ಆಯಿತು. ಮಳೆಗಾಲದಲ್ಲಿ ಯಕ್ಷಗಾನ ಸಂಘಟಕರು ಅಲ್ಲಲ್ಲಿ ‘ಪುರಭವನ’ಗಳಲ್ಲಿ ಆಟವನ್ನು ಸಂಯೋಜಿಸ ತೊಡಗಿದರು. ತಾಳಮದ್ದಳೆಗಲ್ಲದೆ ಯಕ್ಷಗಾನ ಪ್ರದರ್ಶನಗಳೂ ನಡೆಯಲು ಆರಂಭವಾಯಿತು. ಜನರ ಜೀವನಕ್ರಮದಲ್ಲಿ ಆದ ಬದಲಾವಣೆಗಳಿಂದಾಗಿ ಅನೇಕ ಅನುಕೂಲತೆಗಳು ಉಂಟಾದುವು. ಎಲ್ಲವೂ ವ್ಯವಹಾರಮಯವಾದಾಗ ಕಲ್ಯಾಣ ಮಂಟಪಗಳು, ಹಾಲ್‍ಗಳು ಒಂದೊಂದಾಗಿ ತಲೆಯೆತ್ತಿಕೊಂಡುವು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಹ ಹಾಲ್‍ಗಳು, ಸಭಾಂಗಣಗಳು ಬಾಡಿಗೆಗೆ ಸಿಗಲು ಸುರುವಾಯಿತು. ಈ ನಿಟ್ಟಿನಲ್ಲಿ ಯಕ್ಷಗಾನದ ಮಳೆಗಾಲದ ಸಂಘಟಕ, ಸಂಯೋಜಕರಿಗೆ ಭಾರೀ ಅನುಕೂಲವಾಯಿತು. ಇದರಿಂದಾಗಿ ಮಳೆಗಾಲದಲ್ಲಿಯೂ ಶುಲ್ಕ ಸಹಿತ ಮತ್ತು ಶುಲ್ಕ ರಹಿತ ಯಕ್ಷಗಾನ ಪ್ರದರ್ಶನಗಳು ನಡೆಯಲು ಪ್ರಾರಂಭವಾಯಿತು.
ಈಗೀಗ ಯಕ್ಷಗಾನದ ಗೀಳು ಅಥವಾ ಕ್ರೇಜ್ ಎಲ್ಲಿಯವರೆಗೆ ಮುಟ್ಟಿದೆಯೆಂದರೆ ಯಾವುದೇ ಸಮಾರಂಭವಿರಲಿ ಅಲ್ಲೊಂದು ಆಟ ಅಥವಾ ಕೂಟವಿರಲೇಬೇಕೆಂಬ ಅಲಿಖಿತ ನಿಯಮಕ್ಕೆ ಜನರು ಕಟ್ಟುಬಿದ್ದಂತಹಾ ಪರಿಸ್ಥಿತಿಯಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದೆ. ಜಾತ್ರೆಯೋ, ಹೋಮ, ಹವನಗಳೋ, ಮದುವೆ, ಉಪನಯನ, ವಾರ್ಷಿಕೋತ್ಸವಗಳು ಆಟಕೂಟಗಳಿಲ್ಲದೆ ಅಪೂರ್ಣವೋ ಎಂಬಂತೆ ಅನಿಸತೊಡಗಿವೆ. ಅಷ್ಟರಮಟ್ಟಿಗೆ ಯಕ್ಷಗಾನವೆಂಬ ಚುಂಬಕ ಶಕ್ತಿಯ ಕಲೆಯ ಗೀಳು ನಮ್ಮಲ್ಲಿ ಅಂಟಿಕೊಂಡಿದೆ. ಇದರಿಂದ ಕಲೆಗೆ ಲಾಭವೇ ಆಗಲಿದೆ.
ಜೂನ್ ತಿಂಗಳ ವರ್ಷಧಾರೆಯ ಆರಂಭದ ದಿನಗಳೂ ಸೇರಿದಂತೆ ನಡೆಯುವ ಯಕ್ಷಗಾನ ಪ್ರದರ್ಶನಗಳು, ಆಮೇಲೆ ಬರುವ ವಿವಿಧ ಹಬ್ಬ ಹರಿದಿನಗಳಾದ ಚೌತಿ, ದೀಪಾವಳಿ, ನವರಾತ್ರಿಗಳೇ ಮೊದಲಾದ ದಿನಗಳಲ್ಲಿ ನಡೆಯುವ ಅಸಂಖ್ಯಾತ ಯಕ್ಷಗಾನ ಕಾರ್ಯಕ್ರಮಗಳು ಕಲಾವಿದರಿಗೆ ತಮ್ಮ ಭವಿಷ್ಯಗಳನ್ನು ರೂಪಿಸಿಕೊಳ್ಳಲು ಮತ್ತು ತಮ್ಮ ಹಣಕಾಸಿನ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿವೆ.
ಕಲಾವಿದರೊಬ್ಬರು ಹೇಳುವ ಪ್ರಕಾರ ವಿಶೇಷ ದಿನಗಳಲ್ಲಿ ಅಂದರೆ ಚೌತಿ, ದೀಪಾವಳಿ, ನವರಾತ್ರಿಗಳಲ್ಲಿ ಅವರು ದಿನವೊಂದಕ್ಕೆ ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅಪರೂಪದ ಘಟನೆಗಳೂ ಉಂಟಂತೆ. ಆದರೆ ಇಂತಹ ಸನ್ನಿವೇಶಗಳು ನಿರಂತರವಲ್ಲ. ಆದರೆ ದಿನಕ್ಕೆ ಒಂದಕ್ಕಿಂತ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅನೇಕ ಮಂದಿ ಕಲಾವಿದರಿದ್ದಾರೆ. ಇದರಿಂದಾಗಿ ಅವರ ಆರ್ಥಿಕ ಮಟ್ಟ ಸುಧಾರಿಸಿದೆ. ಆದರೆ ಅವರ ಆರೋಗ್ಯದ ಮಟ್ಟ ಹಾಗೂ ಪ್ರದರ್ಶನದ ಗುಣಮಟ್ಟವನ್ನು ಅವರು ಕಾಯ್ದುಕೊಳ್ಳುವ ಅವಶ್ಯಕತೆಯಿದೆ ಎಂದು ಆ ಕಲಾವಿದರು ಎಚ್ಚರಿಸುತ್ತಾರೆ. ಕೆಲವೊಂದು ಮೂಲಗಳ ಪ್ರಕಾರ ಕೆಲವು ಕಲಾವಿದರು ಮೇಳದ ತಿರುಗಾಟಕ್ಕಿಂತ ಮಳೆಗಾಲದ ತಿರುಗಾಟ ಹಾಗೂ ಕಾರ್ಯಕ್ರಮಗಳನ್ನು ಇಷ್ಟಪಡುತ್ತಾರೆ. ಮೇಳದ ಆರು ತಿಂಗಳ ತಿರುಗಾಟದ ಸಂಬಳ ಅಥವಾ ಸಂಪಾದನೆಗಿಂತ ಉಳಿದ ಆರು ತಿಂಗಳಿನ ಕಾರ್ಯಕ್ರಮಗಳಲ್ಲಿ ಕೆಲವು ಮಂದಿ ಕಲಾವಿದರು ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ. ಇದು ಮೆಚ್ಚತಕ್ಕ ಸಂಗತಿ. ಕಲಾವಿದರು ಆರ್ಥಿಕವಾಗಿ ಸದೃಢರಾಗಿರಬೇಕಾದುದು ಕೂಡಾ ಅಗತ್ಯ.
ಹಿಂದಿನ ಕಾಲದ ಮಳೆಗಾಲದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕಲಾವಿದರ ಸಂಪಾದನೆಯನ್ನೂ ಈಗಿನ ಕಲಾವಿದರ ಮಳೆಗಾಲದ ಸಂಪಾದನೆಯನ್ನು ತೂಗಿ ನೋಡಿದರೆ ಆದ ಬೆಳವಣಿಗೆಯು ನಮಗೆ ಅಚ್ಚರಿಯನ್ನು ಉಂಟುಮಾಡುತ್ತದೆ.
ಆದ್ದರಿಂದ ಮೊದಲೆಲ್ಲಾ ಪತ್ತನಾಜೆ ಎಂಬುದು ಕಲಾವಿದರ ಜೀವನಕ್ಕೆ ಒಂದು break ಆಗಿರುತ್ತಿತ್ತು. ಈಗ ಹಾಗಲ್ಲ. ಪತ್ತನಾಜೆ ಕಳೆದ ಕೂಡಲೇ ಕಲಾವಿದರು ತಮ್ಮ ಎರಡನೇ ಇನ್ನಿಂಗ್ಸ್‍ಗೆ accelerator ಕೊಡುವ ಸಮಯ.
ಆದರೆ ಸದ್ಯದ ಪರಿಸ್ಥಿತಿ ಭಿನ್ನವಾಗಿದೆ. ಕಲಾವಿದರು ಪ್ರದರ್ಶನಗಳಿಲ್ಲದೆ ನಿರಾಶರಾಗಿ ಕುಳಿತಿದ್ದಾರೆ. ಮಳೆಗಾಲದಲ್ಲಂತೂ ಕೊರೋನಾ ನಿಯಮಾವಳಿಗಳಿಂದಾಗಿ ಮತ್ತು ಜನರ ಹಿತ ಕಾಯುವ ಬದ್ಧತೆಯಿರಬೇಕಾದ ಕಾರಣದಿಂದ ಪ್ರದರ್ಶನಗಳಿಲ್ಲ ಎಂಬುದು ನಿಜ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ಬಾರಿಯ ಮೇಳಗಳ ತಿರುಗಾಟ ನಡೆಯುವುದು ಅಷ್ಟು ಸುಲಭದ ವಿಚಾರವಲ್ಲ. ಇದರಿಂದ ಕಲಾವಿದರಿಗೆ ಆರ್ಥಿಕ ಸಮಸ್ಯೆಯ ಜೊತೆಗೆ ಚಿಂತೆಯ ಕಾರ್ಮೋಡ ಕವಿಯಲಿದೆ.

ಇದು ಕೇವಲ ಯಕ್ಷಗಾನ ಕಲಾವಿದರಿಗೆ ಮಾತ್ರ ಸೀಮಿತವಾದ ವಿಚಾರವಲ್ಲ. ಸಂಗೀತ, ನಾಟಕ, ಸಿನಿಮಾ, ಭಾರತನಾಟ್ಯವೇ ಮೊದಲಾದ ಭಾರತದ ಎಲ್ಲಾ ರಂಗ ಕಲೆಗಳ ಎಲ್ಲ ಸಾಂಸ್ಕೃತಿಕ ಸಮಾರಂಭಗಳನ್ನೂ ನಡೆಸುವುದು ಸದ್ಯದ ಮಟ್ಟಿಗೆ ದುರ್ಲಭವೆಂದೇ ಹೇಳಬಹುದು. ಆದುದರಿಂದ ಭಾರತದ ಎಲ್ಲ ರಂಗೇಕಲೆಗಳ ಕಲಾವಿದರೂ ಒಂದೇ ರೀತಿಯಲ್ಲಿ ಇದರಿಂದ ಭಾದಿತರಾಗಿದ್ದಾರೆ . ಅವರ ಯೋಚನೆಯಲ್ಲಿ ಒಂದೇ ಒಂದು ಪ್ರಶ್ನೆ ಮೂಡುತ್ತಿರಬಹುದು. ನಮ್ಮದು ಮುಗಿಯದ ಪಯಣವಾಗಿದ್ದರೂ ಮತ್ತೆ ಆರಂಭ ಯಾವಾಗ?!!!

ಹೊಸ ಪ್ರಯೋಗಕ್ಕೆ ಮೊದಲು ಎಚ್ಚರ…

ಈ ಪ್ರಪಂಚವೇ ಹಾಗೆ. ಜನರ ಯೋಚನೆಯ ಅಲೆಗಳು ಸಾಗುವುದು ಆ ದಿಕ್ಕಿನಲ್ಲೇ. ನಾಗರಿಕ ಸಮಾಜ ಯೋಚಿಸುವುದು ಮತ್ತು ಆಚರಿಸಲು ಇಷ್ಟಪಡುವುದು ನವನವೀನವಾದ ಸಂಗತಿಗಳನ್ನೇ ಆಗಿದೆ. ಹಾಗೆ ನೋಡಿದರೆ ‘ನಾಗರಿಕತನ’ ಎನ್ನುವುದು ಮನುಷ್ಯನ ಬದಲಾವಣೆ ಅಥವಾ ಹೊಸತನದ ಯೋಚನೆಗಳಿಂದ ಪ್ರಪಂಚದಲ್ಲಿ ಆವಿರ್ಭವಿಸಿದ ಧನಾತ್ಮಕ ಕೊಡುಗೆ ಎಂದೇ ಹೇಳಬಹುದು. ಅನಾದಿ ಕಾಲದಿಂದ ಮನುಷ್ಯನ ಬೆಳವಣಿಗೆಯು ಹೊಸತನದ ಸೃಷ್ಟಿ ಅಥವಾ ಬದಲಾವಣೆಯಿಂದಲೇ ಆಯಿತು.


ಮನುಷ್ಯನ ಸ್ವಭಾವವೇ ಹಾಗೆ. ದೈನಂದಿನ ಚಟುವಟಿಕೆಗಳಲ್ಲಿ ಹೊಸತನ್ನು ಹುಡುಕುತ್ತಾ ಬದಲಾವಣೆಯನ್ನು ಅನ್ವೇಷಿಸುವುದು ಮತ್ತು ಅದರಲ್ಲಿ ನೆಮ್ಮದಿಯನ್ನು, ಸಂತೋಷವನ್ನು ಅನುಭವಿಸುವುದು ನಿರಂತರವಾಗಿ ಸಾಗಿಬಂದ ಪ್ರಕ್ರಿಯೆ. ಹೊಸತನದ ಯೋಚನೆ ಇಲ್ಲದಿದ್ದರೆ ಯುಗ ಯುಗಾಂತರಗಳ ಹಿಂದೆ ಕಾಡುಮನುಷ್ಯರಾಗಿದ್ದ ಮಾನವರು ಪ್ರಸ್ತುತ ನಾಗರಿಕ ಲೋಕದ ಬೆಳವಣಿಗೆಗಳನ್ನು ಕಾಣುವುದಕ್ಕಿತ್ತೇ?


ಆಟದಲ್ಲಿ ಬದಲಾವಣೆ, ನೋಟದಲ್ಲಿ ಹೊಸತನ, ರಾಜಕೀಯ, ಕ್ರೀಡೆ, ವಿಜ್ಞಾನ, ಸಾಂಸ್ಕೃತಿಕ ರಂಗ ಹೀಗೆ ಎಲ್ಲ ರಂಗಗಳಲ್ಲಿಯೂ ಹೊಸತನದ ಸೃಷ್ಟಿಯ ಮೂಲಕ ಆಕರ್ಷಣೆ ಹಾಗೂ ಯಶಸ್ಸನ್ನು ಸಂಪಾದಿಸುವ ವಿಧಾನವನ್ನು ಅರಿತ ಮಂದಿ ಅವುಗಳನ್ನು ನಗದೀಕರಿಸಿಕೊಂಡರು. ನಿರಂತರ ಅನ್ವೇಷಣೆಯಿಂದ ಯಶಸ್ಸು ಹಾಗೂ ಅಭಿವೃದ್ಧಿಯನ್ನೂ ಕಂಡುಕೊಂಡರು.
ಯಾರಲ್ಲೂ ಇಲ್ಲದ ಹೊಸ ವಿನ್ಯಾಸದ ಬಟ್ಟೆಯನ್ನು ತೊಡಬೇಕೆಂಬ ತುಡಿತದಿಂದ ವಿದ್ಯಾರ್ಥಿನಿಯೊಬ್ಬಳು ಚಿತ್ರವಿಚಿತ್ರ ಆಧುನಿಕ ವಿನ್ಯಾಸದ ಹರಿದಂತಿರುವ ಹೊಸ ಉಡುಗೆಯನ್ನು ಧರಿಸುತ್ತಾ ರಸ್ತೆಯಲ್ಲಿ ನಡೆಯುತ್ತಾಳೆ. ಹೊಸ ವಿನ್ಯಾಸದ ಕೇಶವಿನ್ಯಾಸವನ್ನು ತಾನೇ ಮೊದಲು ಮಾಡಿಸಬೇಕೆಂಬ ಆಸೆಯಿಂದ ಹುಡುಗನೊಬ್ಬ ಅರ್ಧ ಬೋಳುತಲೆ ಮತ್ತು ಚಿತ್ರವಿಚಿತ್ರ ಗೆರೆ ಗಳಿರುವ ಎಳನೀರು ಕೆತ್ತಿದಂತೆ ಕಾಣುವ ಕೇಶವಿನ್ಯಾಸವನ್ನು ಮಾಡಿಸಿಕೊಂಡು ಇತರರಿಗೆ ಮಾದರಿಯಾಗುತ್ತಾನೆ!


ಮಾಧ್ಯಮಗಳು ನಿಮಿಷಕ್ಕೆರಡು ಚಿತ್ರವಿಚಿತ್ರವಾದ ಬ್ರೇಕಿಂಗ್ ನ್ಯೂಸ್ ಗಳನ್ನು ಕೊಡುತ್ತಾ ಇದು ನಮ್ಮಲ್ಲೇ ಮೊದಲು ಎಂದು ಹೇಳುತ್ತಾ ಹೊಸತನದ ದಾರಿಯಲ್ಲಿ ಹೆಜ್ಜೆ ಹಾಕುತ್ತದೆ. ರಾಜಕಾರಣಿಗಳು ಕತ್ತೆಯ ಮೇಲೆ ಕುಳಿತು ವಿಭಿನ್ನ ಮಾದರಿಯ ಮತಪ್ರಚಾರಗಳನ್ನೂ ಮಾಡುತ್ತಾರೆ.
ತರುಣಿಯೊಬ್ಬಳು ಯಾರಲ್ಲೂ ಇಲ್ಲದ ಹೊಸ ವಿನ್ಯಾಸದ ಕಿವಿಯೋಲೆಯನ್ನೋ, ಕೊರಳಹಾರವನ್ನೋ ಮಾಡಿಸಿಕೊಂಡು ಸಭೆ, ಸಮಾರಂಭಗಳಲ್ಲಿ ದೃಷ್ಟಿಗೆ ಕೇಂದ್ರಬಿಂದುವಾಗುತ್ತಾಳೆ. ಹೆಂಗಸೊಬ್ಬಳು ತನ್ನ ಕುಪ್ಪಸದ ಹಿಂದೆ ಚಿತ್ರ ವಿಚಿತ್ರ ಕಿಟಕಿಗಳನ್ನು, ಕಿಂಡಿಗಳನ್ನು ವಿನ್ಯಾಸಗೊಳಿಸಿ ಗೊಂಡೆ, ಕುಚ್ಚುಗಳನ್ನು ನೇತಾಡಿಸುತ್ತಾ ಬೆನ್ನ ಹಿಂದಿನ ಮೆಚ್ಚುಗೆಯ ನೋಟಕ್ಕೆ ಆಹಾರವಾಗುತ್ತಾಳೆ.


ಆದ್ದರಿಂದ ಈ ಬದಲಾವಣೆಯ ಹಪಹಪಿಸುವಿಕೆ, ಆಗ್ರಹಗಳು ಇಂದು ನಿನ್ನೆಯದಲ್ಲ. ಹೊಸತನ್ನ ಕೊಡುವ ಕಾತರ, ತುಡಿತಗಳು ಎಲ್ಲ ರಂಗದಲ್ಲೂ ಇವೆ. ಮೊದಲಿನ ಶಾಸ್ತ್ರೀಯವಾದ ಬರವಣಿಗೆ ಸಾಹಿತ್ಯಗಳು ಮಾಯವಾಗಿ ಸಾಹಿತ್ಯಕ್ಕೊಂದು ನಾವೀನ್ಯತೆಯ ಶೈಲಿ ಬಂದಿದೆ. ಈಗಿನ ಯುವ ಬರಹಗಾರರಲ್ಲಿ ಅದನ್ನು ಕಾಣಬಹುದು. ಛಂದಸ್ಸು, ವ್ಯಾಕರಣ ಯಾವುದೂ ಇಲ್ಲದ ಕವನ, ಹನಿಗಳು ಬಂದಿವೆ. ಕೊನೆಗೆ ಪ್ರಾಸ ಒಂದಿದ್ದರೆ ಆಯಿತು. ಆದ್ದರಿಂದ ಆದಿಕವಿಗಳ ಹಳೆಗನ್ನಡ ಕಾವ್ಯದಿಂದ ತೊಡಗಿ ನಾವು ಇಂಥದ್ದೇ ಎಂದು ಗುರುತಿಸಲಾಗದ ನವ್ಯಕವನಗಳ ಕಾಲಕ್ಕೆ ಬಂದಿದ್ದೇವೆ.


ಸಮಾಜಕ್ಕೆ ಒಳಿತಾಗುವ, ಮೂಲಕ್ಕೆ ತೊಡಕಾಗದೆ ಯಾವುದೇ ಪ್ರಾಕಾರಗಳ ಸಂಶೋಧನೆ ಹಾಗೂ ಹೊಸ ಪ್ರಯೋಗಗಳು ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ಆದರೆ ಕೇವಲ ತನ್ನನ್ನು ಗುರುತಿಸಬೇಕು ಹಾಗೂ ಬಹುಬೇಗ ಪ್ರಸಿದ್ಧಿಗೆ ಬರಬೇಕೆಂಬ ಹುಚ್ಚು ಹಂಬಲಗಳಿಂದ ಮಾಡುವ ಅನಾರೋಗ್ಯಕರ ಬದಲಾವಣೆಗಳು, ಅಪಾಯಕಾರೀ ಸಂಶೋಧನೆಗಳು ಹಾಗೂ ಅವುಗಳ ಪ್ರಯೋಗ ಪರಿಸರಕ್ಕೆ ಮಾರಕವಾಗಬಹುದು.
ವಿಜ್ಞಾನಕ್ಕೆ ಸಂಬಂಧಪಟ್ಟಂತೆ ಅಣು ಹಾಗೂ ರಾಸಾಯನಿಕ ಅಸ್ತ್ರಗಳ ಸಂಶೋಧನೆ ಒಳ್ಳೆಯದೇ. ಆದರೆ ಪ್ರಯೋಗದಿಂದ ಮಾತ್ರ ಪರಿಣಾಮ ಘೋರ. ಕೇವಲ ವಿಜ್ಞಾನ ಮಾತ್ರವಲ್ಲ ಎಲ್ಲ ವಿಭಾಗಗಳಿಗೂ ಈ ಮಾತು ಅನ್ವಯಿಸುತ್ತದೆ.


ಯಾವುದೇ ವಿಚಾರದಲ್ಲಿ ಭಿನ್ನತೆಯ ಹಾದಿ ತುಳಿಯುವುದು ಅಷ್ಟು ಸುಲಭವಲ್ಲ. ಮೊದಲು ಉಲ್ಲೇಖಿಸಿದಂತೆ ಸಾಹಿತ್ಯದ ಅಥವಾ ಪುರಾಣದ ಕಥಾನಕದ ಪಾತ್ರಗಳನ್ನು ಈಗಿನ ಕಾಲದ ಜೀವನಕ್ರಮ ಮತ್ತು ವಿಧಾನಗಳ ವ್ಯಾಪ್ತಿಯಲ್ಲಿ ವಿಮರ್ಶಿಸಹೊರಟರೆ ಸಮಂಜಸವೆನಿಸುವುದಿಲ್ಲ.
ಯುಗಾಂತರದ ಹಿಂದೆ ಇದ್ದ ‘ನಿಯೋಗ’ ಪದ್ಧತಿಯನ್ನು ಈ ಕಾಲದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸುವುದು ಅಷ್ಟೊಂದು ಸಮಂಜಸ ಎನಿಸುವುದಿಲ್ಲ. ಈ ಕಾಲದಲ್ಲಿ ಆ ಪದ್ಧತಿ ‘ಅನಾಗರಿಕ’ವೇ ಆಗಿರಬಹುದು. ಆದರೆ ಆ ಕಾಲಕ್ಕೆ ಅದು ಪ್ರಸ್ತುತವೇ ಆಗಿತ್ತು ಎಂಬುದು ಎಲ್ಲರೂ ಒಪ್ಪುವ ಮಾತು. ಆ ಕಾಲದಲ್ಲಿ ವಿಜ್ಞಾನ ಮುಂದುವರಿಯಲಿಲ್ಲ ಎಂಬುದರಿಂದ ನಿಯೋಗ ಪದ್ಧತಿಯಿಂದ ನಡೆಯುತ್ತಿದ್ದ ಗರ್ಭದಾನವು ಈಗ ಪರಿಷ್ಕೃತಗೊಂಡು Sperm Donate (ವೀರ್ಯದಾನ) ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಆದ್ದರಿಂದ ಅಂದಿನ ನಿಯೋಗ ಪದ್ಧತಿಯನ್ನು ಈ ಕಾಲದಲ್ಲಿ ಭಿನ್ನ ದೃಷ್ಟಿಕೋನದಿಂದ ನೋಡುತ್ತಿದ್ದವರೆಲ್ಲಾ ಈಗಿನ ಪದ್ಧತಿಯ ಬಗ್ಗೆ ಮೌನವಾಗಿದ್ದಾರೆ


ಪೌರಾಣಿಕ ಪಾತ್ರಗಳಿಗೆ ವರ್ತಮಾನದ ಜೀವನಕ್ರಮಗಳ ಲೇಪನವನ್ನು ಕೊಟ್ಟು ಚಿತ್ರಿಸುವುದು ಈಗ ಒಂದು ಪಿಡುಗಾಗಿ ಮಾರ್ಪಟ್ಟಿದೆ. ಬರಹಗಾರರು, ನಟರು, ರಂಗ ಕಲಾವಿದರು ಹೊಸತನದ ಸೃಷ್ಟಿಯಲ್ಲಿ ಅಗ್ಗದ ಜನಪ್ರಿಯತೆಗೆ ಜೋತುಬಿದ್ದು ಮೂಲದಲ್ಲಿ ಇಲ್ಲದ್ದನ್ನು ತಮ್ಮದೇ ವ್ಯಾಖ್ಯಾನವೆಂಬಂತೆ ರಂಗದಲ್ಲಿ ಅಥವಾ ಬರಹದಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಇದು ತುಂಬಾ ಅಪಾಯಕಾರಿ. ಯಾಕೆಂದರೆ ಇದೇ ನೈಜಕಥೆ ಎಂದು ಸಾಮಾನ್ಯ ಪ್ರೇಕ್ಷಕರು ತಿಳಿದುಕೊಳ್ಳುವ ಅಪಾಯವಿದೆ. ಆದ್ದರಿಂದ ಮೂಲಕಥೆಯಲ್ಲಿ ಇಲ್ಲದ್ದನ್ನು ತಂದು ಪ್ರದರ್ಶಿಸುವ ಮೊದಲು ಅಥವಾ ಕೃತಿ ರಚಿಸುವಾಗ “ಅಲ್ಲಲ್ಲಿ ಕಾಲ್ಪನಿಕ ದೃಶ್ಯಗಳನ್ನು ಸೇರಿಸಿ ಕಥೆ ಹೆಣೆಯಲಾಗಿದೆ’’ ಎಂಬ ಸೂಚನೆಯನ್ನು ನೀಡುವುದು ಉತ್ತಮ.


ಒಬ್ಬರಿಗೆ ಕರ್ಣನ ಬಗ್ಗೆ ವಿಪರೀತ ಮರುಕ ಹುಟ್ಟಿ ಕಥೆಯನ್ನು ವಿರೂಪಗೊಳಿಸಿ ಕರ್ಣನ ಪರವಾಗಿ ಚಿತ್ರಣ ಕೊಡಬಹುದು. ಇನ್ನೊಬ್ಬರಿಗೆ ಕುಂತಿಯ ಮನದಾಳದ ಬಗ್ಗೆ ಬರೆಯಬೇಕೆಂದು ಅನಿಸಿ ಉತ್ಸಾಹದಿಂದ ಮೂಲಕಥೆಯಲ್ಲಿ ಕುಂತಿಯ ಮನಸ್ಸಿನಲ್ಲಿ ಇಲ್ಲದ ಸಂಗತಿಗಳನ್ನೆಲ್ಲಾ ತುರುಕಿ ಈ ಕಾಲಕ್ಕನುಗುಣವಾಗಿ ಪಾತ್ರಚಿತ್ರಣ ಮಾಡಬಹುದು. ಇನ್ನೊಬ್ಬರು ದ್ರೌಪದಿಯ ಬಗ್ಗೆ, ಕಣ್ಣಿಗೆ ಬಟ್ಟೆ ಕಟ್ಟಿದ ಗಾಂಧಾರಿಯ ಬಗ್ಗೆ ಮರುಕ ಹುಟ್ಟಿ ಪುರಾಣದಲ್ಲಿ ಇಲ್ಲದ್ದನ್ನೆಲ್ಲಾ ಸ್ತ್ರೀಶೋಷಣೆ ಎಂದು ಹೇಳುತ್ತಾ ಪ್ರಸ್ತುತಪಡಿಸಬಹುದು. ಮಗದೊಬ್ಬರಿಗೆ ಅಂಬೆಯ ನೋವಿನ ಬಗ್ಗೆ ಅತೀವ ಹೃದಯಮಿಡಿತವಿದ್ದು ಅಂಬೆಯಾಗಿ ಈ ಕಾಲದಲ್ಲಿ ನಿಂತು ಮಾತನಾಡುವಂತೆ ಭಾವನೆಗಳನ್ನು ಪ್ರಕಟಿಸಿ ಬರೆಯಬಹುದು. ಆದರೆ ಅದು ಸಾಹಿತ್ಯವಿರಲಿ ಅಥವಾ ಪ್ರದರ್ಶನವಿರಲಿ ಇಂತಹಾ ಎಷ್ಟೋ ಲೇಖನಗಳಲ್ಲಿ ಅಥವಾ ಪ್ರದರ್ಶನಗಳಲ್ಲಿ ಕಾಲ್ಪನಿಕ ಸಂಗತಿಗಳನ್ನು ಸೇರಿಸಿ ಕಥೆ ಹೆಣೆಯಲಾಗಿದೆ ಎಂಬುದರ ಉಲ್ಲೇಖವಿರದಿದ್ದರೆ ಅದು ಆಕ್ಷೇಪಾರ್ಹ.


ರಂಗಕಲೆಗಳಿರಲಿ ಅಥವಾ ಸಾಹಿತ್ಯವೇ ಇರಲಿ ಮೂಲಕಥೆಗೆ ಚ್ಯುತಿಬರದಂತೆ ಪ್ರಸ್ತುತಪಡಿಸುವುದು ಮುಖ್ಯವಾಗುತ್ತದೆ. ಇಲ್ಲದಿದ್ದರೆ ತಾನು ನಡೆದದ್ದೇ ದಾರಿ ಎಂಬಂತೆ ಆಗುತ್ತದೆ.
ಇತ್ತೀಚೆಗೆ ಭಾರತೀಯ ರಂಗಕಲೆಯ ಕಲಾವಿದರೊಬ್ಬರು ಮಾತನಾಡುತ್ತಾ ‘‘ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತನ್ನ ಮಿತಿಯೊಳಗೆ ವಿಮರ್ಶಿಸಲು ಕೆಲವು ಕಲಾವಿದರಲ್ಲಿ ಅರಿವಿನ ಕೊರತೆಯಿರುವುದು ನಿಜ. ಆದರೆ ಎಲ್ಲರೂ ಹಾಗೆಂದು ಅರ್ಥವಲ್ಲ. ಅಂತಹಾ ಕಲಾವಿದರಲ್ಲಿ ಪ್ರಶ್ನಿಸಿದಾಗ ‘ನನ್ನ ದೇವಿಯ ಪಾತ್ರ ಹೀಗೆ, ನನ್ನ ಇಂದ್ರಜಿತು ಹೀಗೆ, ನನ್ನ ಮುಖವರ್ಣಿಕೆ ಹೀಗೆ’ ಎಂದು ಹೇಳುತ್ತಾರೆಯೇ ವಿನಃ ಈ ರಂಗಕಲೆಯ ದೇವಿ, ಇಂದ್ರಜಿತು ಪಾತ್ರಗಳ ಬಗ್ಗೆ ಹೀಗೆ ಎಂದು ಹೇಳುವುದಿಲ್ಲ’’ ಎಂದು ಹೇಳಿದರು. ಅಕ್ಷರಶಃ ಸತ್ಯವನ್ನೇ ಅವರು ಅಂದು ಹೇಳಿದ್ದರು.