Monday, August 3, 2026
Home Blog Page 40

ಗಾಯಕಿ ದುರ್ಗಾ ವಿಶ್ವನಾಥ್ ಖಾಸಗಿ ಸಮಾರಂಭದಲ್ಲಿ ಮತ್ತೊಮ್ಮೆ ವಿವಾಹ

0

ದೂರದರ್ಶನದ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಗಾಯಕಿ ದುರ್ಗಾ ವಿಶ್ವನಾಥ್ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗುರುವಾಯೂರು ದೇವಸ್ಥಾನದಲ್ಲಿ ಸರಳ ಸಮಾರಂಭ ನಡೆದಿದ್ದು, ಕೇವಲ ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಹಾಜರಿದ್ದರು.

ವರ ರಿಜು, ಕಣ್ಣೂರು ಮೂಲದವರಾಗಿದ್ದು, ಗುರುವಾಯೂರು ದೇವಸ್ವಂ ಉದ್ಯೋಗಿಯಾಗಿದ್ದಾರೆ. ದುರ್ಗಾ ಹಸಿರು ಬಣ್ಣದ ಕಾಂಜೀವರಂ ಸೀರೆಯನ್ನು ಧರಿಸಿ ಸರಳ, ಸೊಗಸಾಗಿ ಕಂಗೊಳಿಸುತ್ತಿದ್ದರು.

ದುರ್ಗಾ ಈ ಹಿಂದೆ ಉದ್ಯಮಿ ಡೆನ್ನಿಸ್ ಅವರನ್ನು ಮದುವೆಯಾಗಿದ್ದರು, ಅವರಿಗೆ ಮಗಳಿದ್ದಾಳೆ. ಕೆಲವು ವರ್ಷಗಳ ಹಿಂದೆ ದಂಪತಿಗಳು ಬೇರ್ಪಟ್ಟರು, ಆದರೂ ದುರ್ಗಾ ತಮ್ಮ ಪ್ರತ್ಯೇಕತೆಯ ಹಿಂದಿನ ಕಾರಣಗಳನ್ನು ಸಾರ್ವಜನಿಕವಾಗಿ ಚರ್ಚಿಸದಿರಲು ನಿರ್ಧರಿಸಿದರು.

ಐಡಿಯಾ ಸ್ಟಾರ್ ಸಿಂಗರ್‌ನ ಎರಡನೇ ಸೀಸನ್‌ನಲ್ಲಿ ರನ್ನರ್ ಅಪ್ ಆಗಿ ಖ್ಯಾತಿಗೆ ಏರಿದರು, ದುರ್ಗಾ ನಂತರ ಹಿನ್ನೆಲೆ ಗಾಯಕರಾಗಿ ಪರಿವರ್ತನೆಗೊಂಡರು, ಹಲವಾರು ಚಲನಚಿತ್ರಗಳ ಹಾಡುಗಳಿಗೆ ಧ್ವನಿ ನೀಡಿದರು.

ಎನ್‌ಐಎ ಅಧಿಕಾರಿಯ ಪುತ್ರಿ ಕಾನೂನು ವಿದ್ಯಾರ್ಥಿನಿ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆ

0

ಎನ್‌ಐಎ ಅಧಿಕಾರಿಯ ಪುತ್ರಿ ಕಾನೂನು ವಿದ್ಯಾರ್ಥಿನಿ ಅನಿಕಾ ಲಕ್ನೋದ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ

19 ವರ್ಷದ ಕಾನೂನು ವಿದ್ಯಾರ್ಥಿನಿ ಅನಿಕಾ ರಸ್ತೋಗಿ ಅವರ ದೇಹವು ಲಕ್ನೋದ ಆಶಿಯಾನಾ ಪ್ರದೇಶದ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯ ನೆಲದ ಮೇಲೆ ಬಿದ್ದಿರುವುದು ಪತ್ತೆಯಾಗಿದೆ.

ಮೂರನೇ ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿನಿಯಾಗಿರುವ ಅನಿಕಾ, ಪ್ರಸ್ತುತ ದೆಹಲಿಯ ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ (ಎನ್‌ಐಎ) ಇನ್‌ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಸಂತೋಷ್ ರಸ್ತೋಗಿ ಅವರ ಪುತ್ರಿ.

ನಿನ್ನೆ ತಡರಾತ್ರಿ ಅನಿಕಾ ಹಾಸ್ಟೆಲ್ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಆಕೆಯ ಸಾವಿಗೆ ಕಾರಣ ಅಸ್ಪಷ್ಟವಾಗಿದ್ದು, ಆಶಿಯಾನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ

ಆರಂಭಿಕ ವರದಿಗಳ ಪ್ರಕಾರ, ಅನಿಕಾ ಕಳೆದ ರಾತ್ರಿ ತನ್ನ ಕೋಣೆಗೆ ಮರಳಿದ್ದಳು ಮತ್ತು ನಂತರ ಯಾವುದೇ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಆಕೆಯ ಮೌನದಿಂದ ಚಿಂತಿತರಾದ ಆಕೆಯ ಸ್ನೇಹಿತರು ಆಕೆಯ ಕೋಣೆಯ ಬಾಗಿಲು ಒಡೆದು ನೋಡಿದಾಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರು. ಕೊಠಡಿ ಒಳಗಿನಿಂದ ಲಾಕ್ ಆಗಿರುವುದನ್ನು ಪೊಲೀಸರು ಖಚಿತಪಡಿಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಅನಿಕಾಳ ಬಟ್ಟೆ ಹಾಗೇ ಇತ್ತು ಮತ್ತು ಆಕೆಯ ದೇಹದಲ್ಲಿ ಯಾವುದೇ ಗಾಯಗಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಾವಿಗೆ ಕಾರಣ ತಿಳಿಯಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿಯು ಸಂಶಯಾಸ್ಪದ ವ್ಯಕ್ತಿಗಳ ಸುಳಿವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ದರ್ಬೆತ್ತಡ್ಕ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳೊಂದಿಗೆ ತಾಲೂಕು ಮಟ್ಟಕ್ಕೆ ಆಯ್ಕೆ

0

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಕುಂಬ್ರ ಇವರ ಜಂಟಿ ಆಶ್ರಯದಲ್ಲಿ ಕುಂಬ್ರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಆಗಸ್ಟ್ ರಂದು ಏಕತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ದರ್ಬೆತ್ತಡ್ಕ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಹಿರಿಯ ವಿಭಾಗದಲ್ಲಿ 7ನೇ ತರಗತಿಯ ಪ್ರತೀಕ್ಷಾ ಆಶುಭಾಷಣದಲ್ಲಿ ಪ್ರಥಮ, ಸಂಸ್ಕ್ರತ ಧಾರ್ಮಿಕ ಪಠಣದಲ್ಲಿ ತೃತೀಯ, 6ನೇ ತರಗತಿಯ ತೇಜಸ್ ಎಲ್.ಕೆ ದೇಶಭಕ್ತಿ ಗೀತೆಯಲ್ಲಿ ಪ್ರಥಮ, ಭಕ್ತಿಗೀತೆಯಲ್ಲಿ ತೃತೀಯ, 6ನೇ ತರಗತಿಯ ಜಲಜಾಕ್ಷಿ ಕನ್ನಡ ಕಂಠಪಾಠದಲ್ಲಿ ದ್ವಿತೀಯ, 5ನೇ ತರಗತಿಯ ಎಸ್. ತೇಜಸ್ ನಾಯ್ಕ್ ಮಿಮಿಕ್ರಿಯಲ್ಲಿ ದ್ವಿತೀಯ, 5ನೇ ತರಗತಿಯ ಲಕ್ಷ್ಮೀಶ ಕ್ಲೇ ಮಾಡೆಲಿಂಗ್ ನಲ್ಲಿ ತೃತೀಯ ಬಹುಮಾನ ಪಡೆದಿರುತ್ತಾರೆ.

ಹಾಗೂ ಕಿರಿಯ ವಿಭಾಗದಲ್ಲಿ 4ನೇ ತರಗತಿಯ ತಸ್ವಿನ್ ಆರ್.ಎಚ್ ಭಕ್ತಿಗೀತೆಯಲ್ಲಿ ಪ್ರಥಮ, ಇಂಗ್ಲೀಷ್ ಕಂಠಪಾಠದಲ್ಲಿ ತೃತೀಯ, 4ನೇ ತರಗತಿಯ ಜಾಹ್ನವಿ ಡಿ.ಜಿ. ಛದ್ಮವೇಷದಲ್ಲಿ ಪ್ರಥಮ, 3ನೇ ತರಗತಿಯ
ದಿಶಾ.ಡಿ ಅಭಿನಯ ಗೀತೆಯಲ್ಲಿ ತೃತೀಯ, 4ನೇ ತರಗತಿಯ ರಂಜಿತ್ ಕುಮಾರ್ ಕ್ಲೇ ಮಾಡೆಲಿಂಗ್ ನಲ್ಲಿ ತೃತೀಯ,

4ನೇ ತರಗತಿಯ ಮನ್ವಿ.ಕೆ ಕಥೆ ಹೇಳುವುದರಲ್ಲಿ ತೃತೀಯ ಬಹುಮಾನ ಗಳಿಸಿದ್ದು, ಪ್ರಥಮ ಬಹುಮಾನ ಪಡೆದ ಪ್ರತೀಕ್ಷಾ, ತೇಜಸ್.ಎಲ್.ಕೆ, ತಸ್ವಿನ್ ಆರ್.ಎಚ್ ಮತ್ತು ಜಾಹ್ನವಿ ಡಿ.ಜಿ. ಇವರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿರುತ್ತಾರೆ ಎಂದು ದರ್ಬೆತ್ತಡ್ಕ ಶಾಲಾ ಪ್ರಭಾರ ಮುಖೋಪಾಧ್ಯಾಯರಾದ ಶ್ರೀ ರಾಜು ಇವರು ತಿಳಿಸಿದ್ದಾರೆ.

ಅಂಬಿಕಾ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಸಂಘದ ಉದ್ಘಾಟನೆ

0


ಕಾಲೇಜು ಜೀವನದಲ್ಲಿ ವೈವಿಧ್ಯಮಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಚಟುವಟಿಕೆಗಳು ನಮ್ಮಲ್ಲಿ ಧೈರ್ಯ ಹುಮ್ಮಸ್ಸುಗಳನ್ನು ತುಂಬುತ್ತವೆ. ಹೊಸ ಆಲೋಚನೆಗಳನ್ನು ಹುಟ್ಟುಹಾಕುವಲ್ಲಿ ಸಹಕರಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಚಟುವಟಿಕೆಗಳಲ್ಲಿನ ಲಾಭವನ್ನು ಪಡೆದುಕೊಳ್ಳಬೇಕು ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ ಎ.ಆರ್. ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಣಿಜ್ಯ ಸಂಘವನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಮಾತನಾಡಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯದ ಜತೆಜತೆಗೆ ಪಠ್ಯೇತರ ಚಟುವಟಿಕೆಗಳೂ ಮುನ್ನಡೆಯಬೇಕು. ಅಂತಹ ಚಟುವಟಿಕೆಗಳಿಲ್ಲದ ಶಿಕ್ಷಣ ಶುಷ್ಕವೆನಿಸುತ್ತದೆ. ಪಠ್ಯಗಳು ಕೇವಲ ಪದವಿ ನೀಡಬಹುದು. ಆದರೆ ಪಠ್ಯದ ಹೊರತಾದ ಸಂಗತಿಗಳು ನಮಗೆ ವ್ಯಕ್ತಿತ್ವ ನೀಡುತ್ತವೆ. ಹಾಗಾಗಿ ಅವುಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಅಗತ್ಯ ಎಂದರು.

ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ., ವಾಣಿಜ್ಯ ಉಪನ್ಯಾಸಕಿ ಶ್ರೀಕೀರ್ತನಾ, ಇಂಗ್ಲಿಷ್ ವಿಭಾಗ ಮುಖ್ಯಸ್ಥ ಗಣೇಶ ಪ್ರಸಾದ್ ಎ, ಸಂಸ್ಕೃತ ವಿಭಾಗ ಮುಖ್ಯಸ್ಥೆ ಶಶಿಕಲಾ ವರ್ಕಾಡಿ, ಕನ್ನಡ ವಿಭಾಗ ಮುಖ್ಯಸ್ಥೆ ಜಯಂತಿ ಪಿ, ಕನ್ನಡ ಉಪನ್ಯಾಸಕ ಗಿರೀಶ ಭಟ್ ಕುವೆತ್ತಂಡ, ಪತ್ರಿಕೋದ್ಯಮ ಉಪನ್ಯಾಸಕ ಹರ್ಷಿತ್ ಪಿಂಡಿವನ ಉಪಸ್ಥಿತರಿದ್ದರು.

ವಾಣಿಜ್ಯ ಸಂಘದ ಕಾರ್ಯದರ್ಶಿ ಪ್ರಿಯಾಲ್ ಆಳ್ವಾ ವಾರ್ಷಿಕ ವರದಿಯನ್ನು ಪ್ರಸ್ತುತಪಡಿಸಿದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಪ್ರಾರ್ಥಿಸಿದರು.

ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಸಾಕೇತ್ ಸ್ವಾಗತಿಸಿದರು. ತೃತೀಯ ಬಿ.ಕಾಂ ವಿದ್ಯಾರ್ಥಿನಿ ಶರಣ್ಯಾ ರೈ ವಂದಿಸಿದರು.

ಯಕ್ಷಗಾನ ಪ್ರಾತ್ಯಕ್ಷಿಕೆ, ಪ್ರಶಸ್ತಿ ಪ್ರದಾನ, ಶರಸೇತು ಬಂಧನ ತಾಳಮದ್ದಳೆ, ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಇವರ ಪ್ರಾಯೋಜಕತ್ವದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಯೋಗದೊಂದಿಗೆ ಗಡಿನಾಡು ಕಾಸರಗೋಡಿನ ಸಿರಿಬಾಗಿಲಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ನಡೆದ ಎರಡು ದಿನಗಳ ತೆಂಕುತಿಟ್ಟು ಯಕ್ಷ ಮಾರ್ಗ- ಶಿಬಿರ- ಯಕ್ಷಗಾನ ಪ್ರದರ್ಶನ ಇಂದು ಸಂಪನ್ನಗೊಂಡಿತು.

ತೆಂಕುತಿಟ್ಟು ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಎರಡು ದಿನಗಳು ಪ್ರಾತ್ಯಕ್ಷಿಕೆಗಳು ನಡೆದವು. 50ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದರು. ಯಕ್ಷಗಾನದ ಸಭಾ ವಂದನೆ -ಸಭಾ ಕಲಸು ತ್ತಿತ್ತಿತೈಯ ನಾಟ್ಯ ಕುಣಿತ ಇತ್ಯಾದಿಗಳ ಕುರಿತಾಗಿ ಮಾರ್ಗದರ್ಶನ ನೀಡಿದರು. ಜೊತೆಯಲ್ಲಿ ವಿದ್ಯಾರ್ಥಿಗಳನ್ನು ಪ್ರಾತ್ಯಕ್ಷಿಕೆಯಲ್ಲಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು..

ಸಮಾರೋಪ ಸಮಾರಂಭಕ್ಕೆ ಮೊದಲು ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿಯನ್ನು ಯಕ್ಷಗಾನ ವಿದ್ವಾಂಸ, ಪ್ರಸಂಗ ಕರ್ತ , ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತರಾದ ಶ್ರೀಧರ ಡಿಎಸ್ ರವರಿಗೆ ನೀಡಿ ಗೌರವಿಸಲಾಯಿತು.

ಸದಸ್ಯತ್ವ ನೋಂದಾವಣಾ ಅಭಿಯಾನದ ಅಂಗವಾಗಿ ಯಚ್. ಕೃಷ್ಣ ಭಟ್ ಮಂಗಳೂರು ಇವರಿಗೆ ಪೋಷಕರು ಗೌರವ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಸರಗೋಡು ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಎನ್.ಎ .ನೆಲ್ಲಿಕುನ್ನು ಅವರು ಭಾಗವಹಿಸಿದರು .ಯಕ್ಷಗಾನ ಕ್ಷೇತ್ರಕ್ಕೆ ಸಿರಿಬಾಗಿಲು ಪ್ರತಿಷ್ಠಾನದ ಕೊಡು ಅಪಾರವಾದುದು. ಕೇರಳ ಸರ್ಕಾರದಿಂದಲೂ ಪ್ರತಿಷ್ಠಾನಕ್ಕೆ ಆರ್ಥಿಕ ಸಹಕಾರ ಸಿಗುವಂತೆ ವಿಧಾನಸಭೆಯಲ್ಲಿ ಪ್ರಸ್ಥಾಪಿಸಿ ತಾನು ಪ್ರಯತ್ನಿಸುತ್ತೇನೆ. ಎಂದು ನುಡಿದರು.

ಪ್ರತಿಷ್ಠಾನಕ್ಕೆ ಬರುವ ರಸ್ತೆಯನ್ನು ದುರಸ್ತಿಗೊಳಿಸುವಲ್ಲಿ ಸಹಕರಿಸುತ್ತೇನೆ ಎಂದು ಆಶ್ವಾಸನೆಯಿತ್ತರು. ಸಿರಿಬಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಅಕಾಡೆಮಿಯ ಕಾರ್ಯಕ್ರಮವು ಗಮನಾರ್ಹವಾಗಿದೆ, ಔಚಿತ್ಯಪೂರ್ಣವಾಗಿದೆ ಎಂದರು.


ಸಭೆಯ ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿಯ ರಿಜಿಸ್ಟರ್ ಶ್ರೀಮತಿ ನಮ್ರತಾ ಅವರು ವಹಿಸಿ ,ಗಡಿನಾಡು ಕಾಸರಗೋಡಿನಲ್ಲಿ ಇಂತಹ ಚಟುವಟಿಕೆಗೆ ಅಕಾಡೆಮಿ ಯಾವತ್ತೂ ನಿಮ್ಮ ಜೊತೆ ಇದೆ ಎಂದು ಭರವಸೆ ಕೊಟ್ಟರು. ಮುಖ್ಯ ಅತಿಥಿಗಳಾಗಿ ಕೃಷ್ಣಪ್ಪ ಕೀನ್ಯಾ ಸದಸ್ಯರು ಯಕ್ಷಗಾನ ಅಕಾಡೆಮಿ ಭಾಗವಹಿಸಿದ್ದರು. ಗಡಿನಾಡು ಕಾಸರಗೋಡಿನ ಏಕೈಕ ಅಕಾಡೆಮಿಯ ಸದಸ್ಯರಾದ ಶ್ರೀ ಸತೀಶ ಅಡಪ ಸಂಕಬೈಲು ಅವರು ನಿರೂಪಿಸಿದರು .ಜಗದೀಶ್ ಕೆ ಕೂಡ್ಲು ಮುಂತಾದವರು ಸಭಾ ಕಾರ್ಯಕ್ರಮದಲ್ಲಿ ಸಹಕರಿಸಿದರು.

ಅದಕ್ಕೂ ಮೊದಲು ಯಕ್ಷ ಬಳಗ ಹೊಸಂಗಡಿಯವರಿಂದ ಶರಸೇತುಬಂಧನ ಯಕ್ಷಗಾನ ತಾಳಮದಲಿ ನಡೆಯಿತು. ಸಮರೋಪ ಸಮಾರಂಭದ ಬಳಿಕ ಸಿರಿಬಾಗಿಲು ಪ್ರತಿಷ್ಠಾನದ ನೇತೃತ್ವದಲ್ಲಿ ಪ್ರಸಿದ್ಧ ಕಲಾವಿದರಿಂದ ಭಕ್ತ ಪ್ರಹ್ಲಾದ ಯಕ್ಷಗಾನ ಪ್ರದರ್ಶನ ನಡೆದು ಜನ ಮೆಚ್ಚುಗೆ ಗಳಿಸಿತು.

ಅರಿವು ಕೇಂದ್ರದ ಗ್ರಂಥಪಾಲಕರಿಗೆ ಇಂಗ್ಲಿಷ್‌ ತರಬೇತಿ

ಪುತ್ತೂರು: ಆಕಾಂಕ್ಷಾ ಚಾರಿಟೆಬಲ್‌ ಟ್ರಸ್ಟ್‌, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮತ್ತು  ಕೋಡ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಅವರ ಸಂಯುಕ್ತ ಆಶ್ರಯದಲ್ಲಿ ‘ಅರಿವು ಕೇಂದ್ರ’ಗಳ ಗ್ರಂಥಪಾಲಕರಿಗಾಗಿ ಇಂಗ್ಲಿಷ್ ತರಬೇತಿ ಕಾರ್ಯಕ್ರಮವು ಪುತ್ತೂರಿನಲ್ಲಿ ನಡೆಯಿತು.

ಈ ಕಾರ್ಯಕ್ರಮದ ಮೊದಲ ಹಂತದಲ್ಲಿ 25 ಗಂಟೆಗಳ ಆನ್‌ಲೈನ್‌ ತರಗತಿಗಳನ್ನು ನಡೆಸಲಾಯಿತು.  ಅಂತಿಮ ಹಂತವಾಗಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲ್ಲೂಕಿನ ಗ್ರಂಥಪಾಲಕರಿಗಾಗಿ ಕಾರ್ಯಾಗಾರವನ್ನು ಪುತ್ತೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಆಗಸ್ಟ್ 17 ಮತ್ತು 18, 2024 ರಂದು ನಡೆದ ಈ ಕಾರ್ಯಾಗಾರದಲ್ಲಿ 65 ಕ್ಕೂ ಹೆಚ್ಚು ಗ್ರಂಥಪಾಲಕರು ಭಾಗವಹಿಸಿದರು. ಪುತ್ತೂರು ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್‌ ಭಂಡಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಗ್ರಂಥಪಾಲಕರಿಗೆ ಡಿಜಿಟಲ್‌ ಸಂಪನ್ಮೂಲಗಳನ್ನು ಬಳಸಿಕೊಂಡು ಇಂಗ್ಲಿಷ್‌ ಪಠ್ಯಶಕ್ತಿ ಅಭಿವೃದ್ದಿಪಡಿಸಲು ಸೂಚಿಸಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲಿಷ್‌ ಭಾಷೆಯ ಮಹತ್ವವನ್ನು ಅವರು ಪ್ರಸ್ತಾಪಿಸಿದರು.

ಇದೇ ಸಂದರ್ಭದಲ್ಲಿ ಬೇರೆ ತಾಲೂಕುಗಳ ಗ್ರಂಥಪಾಲಕರಿಗಾಗಿ ಮಂಗಳೂರು ಮತ್ತು ಬೆಳ್ತಂಗಡಿ ತಾಲೂಕು ಪಂಚಾಯತ್‌ಗಳ ಸಭಾಭವನಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಾಯಿತು.

ಈ ಕಾರ್ಯಾಗಾರವು ಮಂಗಳೂರಿನ ಕೋಡ್‌ಕ್ರಾಫ್ಟ್‌ ಟೆಕ್ನಾಲಜೀಸ್‌ ಕಂಪನಿಯ ಸಿಎಸ್ ರ್ ನಿಧಿಯ  ಸಹಾಯದಿಂದ ನಡೆಯಿತು. ಆಕಾಂಕ್ಷಾ ಚಾರಿಟೆಬಲ್‌ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಶ್ರೀಶ ಬೈಪದವು  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗ್ರಂಥಪಾಲಕರಿಗೆ ಸಂಧ್ಯಾ ಸಾವಿತ್ರಿ, ನವ್ಯಶ್ರೀ, ಕೌಶಿಕ್‌, ಸೀಮಾ ಲಹರಿ ಮತ್ತು ಸ್ಪೂರ್ತಿ ಲಕ್ಷ್ಮಿ ಇವರುಗಳು ತರಬೇತಿ ನೀಡಿದರು.

2024ರ ಪ್ರತಿಷ್ಠಿತ ಕೀರಿಕ್ಕಾಡು ಪ್ರಶಸ್ತಿ ಪ್ರಕಟ – ಯಾರಿಗೆ ಒಲಿಯಿತು ಪ್ರಶಸ್ತಿ?

ಎಂಭತ್ತರ ಸಂಭ್ರಮದಲ್ಲಿರುವ ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಸಂಸ್ಥಾಪಕಧ್ಯಕ್ಷರು, ಯಕ್ಷಗಾನ ಗುರುಕುಲದ ರೂವಾರಿ ಕವಿ, ಅರ್ಥಧಾರಿ, ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸಂಸ್ಮರಣೆಯೊಂದಿಗೆ ನೀಡಲಾಗುತ್ತಿರುವ 2024 ರ ಸಾಲಿನ ಪ್ರತಿಷ್ಠಿತ ಕೀರಿಕ್ಕಾಡು ಪ್ರಶಸ್ತಿಗೆ ವಿದ್ವಾನ್ ಕೆರೆಕೈ ಉಮಾಕಾಂತ ಭಟ್ಟರ ಹೆಸರನ್ನು ಘೋಷಿಸಲಾಗಿದೆ.

ವಿದ್ವಾನ್ ಉಮಾಕಾಂತ ಭಟ್ಟರು ಖ್ಯಾತ ಯಕ್ಷಗಾನ ಅರ್ಥಧಾರಿಯಾಗಿ, ಪ್ರವಚನಕಾರರಾಗಿ, ಉಪನ್ಯಾಸಕರಾಗಿ, ಕವಿಯಾಗಿ ನಾಡಿನ ಉದ್ದಗಲಗಳಲ್ಲೂ ಪ್ರಸಿದ್ಧರಾದವರು‌‌.

ನ್ಯಾಯಶಾಸ್ತ್ರ ಪಂಡಿತರಾಗಿ, ಪ್ರಾಚಾರ್ಯರಾಗಿ ಮೇಲುಕೋಟೆಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸುದೀರ್ಘ ಕಾಲ ಸೇವೆಯನ್ನು ಸಲ್ಲಿಸಿದ ಉಮಾಕಾಂತ ಭಟ್ಟರು ಬಹುಮಾನ್ಯರು ಮತ್ತು ಬಹುಶ್ರುತ ವಿದ್ವಾಂಸರು‌.

ಆಗಸ್ಟ್ 31ರಂದು ದಿನಪೂರ್ತಿ ನಡೆಯಲಿರುವ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಎಂಭತ್ತರ ಸಂಭ್ರಮದ ಕಲೋತ್ಸವದಲ್ಲಿ ಪ್ರೊ‌. ಶ್ರೀಪತಿ ಕಲ್ಲೂರಾಯ ಅವರ ಅಧ್ಯಕ್ಷತೆಯಲ್ಲಿ, ಸನ್ಮಾನ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಗೌರವ ಉಪಸ್ಥಿತಿಯೊಂದಿಗೆ

ಗಣ್ಯಾತಿಗಣ್ಯರ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಕೀರಿಕ್ಕಾಡು ಪ್ರಶಸ್ತಿಯನ್ನು ವಿದ್ವಾನ್ ಉಮಾಕಾಂತ ಭಟ್ಟರಿಗೆ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಬನಾರಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಪ್ರಕಟಣೆ ತಿಳಿಸಿದೆ.

ಕುರಿಯ ಗೋಪಾಲಕೃಷ್ಣ ಭಟ್ ನಿಧನ


ಕುರಿಯ ವಿಠಲ ಶಾಸ್ತ್ರಿಗಳ ಸಹೋದರನ ಮಗ, ಭಾಗವತ ಕುರಿಯ ಗಣಪತಿ ಶಾಸ್ತಿçಗಳ ಕಿರಿಯ ಸಹೋದರ ಕುರಿಯ ಗೋಪಾಲಕೃಷ್ಣ ಭಟ್ ನಿನ್ನೆ (21.08.24) ನಿಧನ ಹೊಂದಿದರು.

ಕುರಿಯ ಮೂಲ ಮನೆಯ ಸಮೀಪಲ್ಲಿದ್ದು ಮನೆಯ ವ್ಯವಹಾರ ನೋಡಿಕೊಳ್ಳುತ್ತಿದ್ದ ಇವರು ಅಣ್ಣ ಗಣಪತಿ ಶಾಸ್ತ್ರಿಗಳ ಕಲಾಬದುಕಿಗೆ ಯಾವುದೇ ತೊಡಕಾಗದಂತೆ ಅವರನ್ನು ಚೆನ್ನಾಗಿ ನೋಡಿಕೊಂಡು ಬಂದಿದ್ದರು.

ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯಲ್ಲಿ ಕಛೇರಿ ಅಧೀಕ್ಷಕರಾಗಿದ್ದ ಇವರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ದೊಡ್ಡ ಕಲಾಮನೆತನದಲ್ಲಿ ಜನಿಸಿದ, ಸಹೃದಯಿ ಕಲಾಪೋಷಕರಾಗಿದ್ದ ಇವರ ನಿಧನಕ್ಕೆ ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಂಸ್ಕೃತ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮ

0

ಭಾಷೆ ಅಂದರೆ ಅದು ಹೃದಯ ಹೃದಯಗಳ ಸಂವಹನ. ಭಾವನೆಗಳ ಪರಸ್ಪರ ಪರಿಚಯಾತ್ಮಕ ವಿನಿಮಯಕ್ಕೆ ಭಾಷೆ ಅತ್ಯಂತ ಅವಶ್ಯ ಮಾರ್ಗ. ಸಂಸ್ಕೃತ ಜಗತ್ತಿನ ಅತ್ಯಂತ ಪ್ರಭಾವಶಾಲಿ ಭಾಷೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಶ್ರೀ ಲಕ್ಷ್ಮೀಶ ಗಬ್ಲಡ್ಕ ಹೇಳಿದರು.

ಅವರು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಗಸ್ಟ್ 18ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಂಸ್ಕೃತ ಪ್ರತಿಭಾ ಪುರಸ್ಕಾರ ಹಾಗೂ ಸಂಸ್ಕೃತೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸಂಸ್ಕೃತ ಭಾಷೆ ಒಂದು ಸೀಮಿತ ವರ್ಗದ ಭಾಷೆ ಎಂಬ ಆರೋಪ, ಅಪವಾದಗಳಿವೆ. ಆದರೆ ಈ ಅಪವಾದ ನಿರಾಧಾರ ಎಂಬುದಕ್ಕೆ ಸಂಸ್ಕೃತವನ್ನು ಕಲಿತ ಹಾಗೂ ಸಂಸ್ಕೃತಾಭ್ಯಾಸ ಮುಂದುವರಿಸುತ್ತಿರುವ ಎಲ್ಲಾ ಧರ್ಮಗಳ ಹಾಗೂ ಸಮಾಜದ ಎಲ್ಲಾ ವರ್ಗಗಳ ಮಕ್ಕಳೇ ಸಾಕ್ಷಿ ಎಂದೂ ಅವರು ಹೇಳಿದರು.

ದೀಪ ಬೆಳಗಿಸಿ ಉದ್ಘಾಟಿಸಿದ ಕಾಲೇಜಿನ ಪ್ರೌಢಶಾಲಾ ಮುಖ್ಯಸ್ಥರಾದ ಶ್ರೀ ಯಶವಂತ ರೈ ಮಾತನಾಡಿ ಭಾಷೆ ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರತೀಕ. ಸಂಸ್ಕಾರಯುತ ಜೀವನ, ಆರೋಗ್ಯಕರ ಮನಸ್ಥಿತಿಯಿಂದ ನೆಮ್ಮದಿ ಸಿಗುತ್ತದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಸಂಸ್ಕೃತ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಶ್ರೀ ಪರಮೇಶ್ವರ ಹೆಗಡೆಯವರು ಅಧ್ಯಕ್ಷತೆ ವಹಿಸಿ, ಸಂಸ್ಕೃತ ಭಾಷೆಯ ಇತಿಹಾಸ, ಸಾಹಿತ್ಯಗಳನ್ನು ಉಲ್ಲೇಖಿಸಿ, ಸಂಸ್ಕೃತ ಅಧ್ಯಯನದ ಇಂದಿನ ಅವಶ್ಯಕತೆಗಳನ್ನು ತಿಳಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜು ಉಪ ಪ್ರಾಂಶುಪಾಲೆ ಶ್ರೀಮತಿ ರೇಖಾರಾಣಿಯವರು ಎಲ್ಲಾ ಭಾಷೆಗಳ ಮೂಲ ಸಂಸ್ಕೃತ. ಪ್ರತಿಯೊಂದು ಭಾಷೆಯ ಅತ್ಯಧಿಕ ಶಬ್ದ ಭಂಡಾರ ಸಂಸ್ಕೃತದಲ್ಲಿಯೇ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಸಂಸ್ಕೃತದಲ್ಲಿ 125, 124 ಅಂಕ ಮತ್ತು ತೃತೀಯ ಭಾಷೆ ಸಂಸ್ಕೃತದಲ್ಲಿ 100, 99 ಅಂಕ ಗಳಿಸಿದ ದಕ್ಷಿಣ ಕನ್ನಡ ಜಿಲ್ಲೆಯ 39 ಶಾಲೆಗಳ 270 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ಶಾಲು, ಸ್ಮರಣಿಕೆ ನೀಡಿ ಪ್ರತಿಭಾ ಪುರಸ್ಕಾರ ನಡೆಸಲಾಯಿತು.

ವಿಶೇಷ ಆಕರ್ಷಣೆಯಾಗಿ, ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಶಿಕ್ಷಕರಾದ ಶ್ರೀ ರಘು ಬಿಜೂರ್ ಇವರ ಉಸ್ತುವಾರಿಯಲ್ಲಿ, ಸಂಸ್ಕೃತೋತ್ಸವದ ಅಂಗವಾಗಿ ಮೂಡಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ಗಜಾನನ ಮರಾಠೆ, ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಹಾಗೂ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿನಿಯರು ಸಂಸ್ಕೃತ ಗಾಯನ, ಸಂಸ್ಕೃತ ಹಾಡುಗಳಿಗೆ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವೆಂಕಟೇಶ್ ಪ್ರಸಾದ್ ಪುರಸ್ಕೃತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಸತ್ಯಶಂಕರ್ ಪ್ರಸ್ತಾವನೆಗೈದರು. ಮೂಡಬಿದಿರೆ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಯ ಶ್ರೀ ವೆಂಕಟರಮಣ ಕೆರೆಗದ್ದೆ ಸ್ವಾಗತಿಸಿ, ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ಶ್ರೀ ದಿವಸ್ಪತಿ ವಂದಿಸಿದರು.

ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ಶ್ರೀಮತಿ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಲ್ಲದೇ ಸುಮಾರು 500 ಕ್ಕೂ ಅಧಿಕ ಸಂಸ್ಕೃತಾಭಿಮಾನಿ ಪೋಷಕ ಬಂಧುಗಳು ಉಪಸ್ಥಿತರಿದ್ದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ 2024-25ನೇ ಸಾಲಿಗೆ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಕೃತ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ರವಿಶಂಕರ್ ವಳಕ್ಕುಂಜ ಅವರು ಬರೆದ ಆರನೆಯ ಪುಸ್ತಕ ‘ಯಕ್ಷಗಾನ ವಾಚಿಕ ಸಮಾರಾಧನೆ ಭಾಗ – 2’ ಆಗಸ್ಟ್ 23ಕ್ಕೆ ಎಡನೀರು ಮಠದಲ್ಲಿ ಬಿಡುಗಡೆ

ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಶ್ರೀ ರವಿಶಂಕರ್ ವಳಕ್ಕುಂಜ ಅವರ ಆರನೆಯ ಕೃತಿ ‘ಯಕ್ಷಗಾನ ವಾಚಿಕ ಸಮಾರಾಧನೆ ಭಾಗ – 2’ ಆಗಸ್ಟ್ 23ಕ್ಕೆ ಎಡನೀರು ಮಠದಲ್ಲಿ ಬಿಡುಗಡೆಗೊಳ್ಳಲಿದೆ.

ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳ ಚತುರ್ಥ ಚಾತುರ್ಮಾಸ್ಯದ ಅಂಗವಾಗಿ ಹಮ್ಮಿಕೊಂಡ ವಿವಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಿನಾಂಕ. 23.08.2024ನೇ ಶುಕ್ರವಾರ ಅಪರಾಹ್ನ 3 ಗಂಟೆಗೆ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ಅನಂತರ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ವಿವರಗಳಿಗೆ ಚಿತ್ರವನ್ನು ನೋಡಿ.

ರವಿಶಂಕರ್ ವಳಕ್ಕುಂಜ ಅವರ ಮೊದಲ ಐದು ಕೃತಿಗಳು.

1. ಯಕ್ಷಗಾನ ವಾಚಿಕ ಸಮಾರಾಧನೆ

  1. ಯಕ್ಷಗಾನ ಪ್ರಸಂಗ ದೃಶ್ಯಾವಳೀ
  2. ಯಕ್ಷಪಾತ್ರದೀಪಿಕಾ
  3. ಯಕ್ಷಗಾನ ಪ್ರಸಂಗ ದೃಶ್ಯಾವಳೀ – ಭಾಗ ೨
  4. ಯಕ್ಷಗಾನ ಪ್ರಸಂಗಗಳಲ್ಲಿ ನಾರದ