Monday, August 31, 2026
Home Blog Page 307

ಪ್ರತಿ ದಿನದ ಮುಖ್ಯ ಅತಿಥಿಗಳು – ‘ಶ್ರೀ ಕೋಳ್ಯೂರು ವೈಭವ’ದಲ್ಲಿ

ಪ್ರತೀ ದಿನ ಯೂ-ಟ್ಯೂಬ್‌ನಲ್ಲಿ ಪ್ರಸಾರಗೂಳ್ಳಲಿರುವ ‘ಶ್ರೀ ಕೋಳ್ಯೂರು ವೈಭವ’ದಲ್ಲಿ  ಪ್ರತಿ ದಿನದ ಮುಖ್ಯ ಅತಿಥಿಗಳ ಹೆಸರುಗಳು ಈ ರೀತಿ ಇವೆ. 

. ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳು, ಎಡನೀರು ಶ್ರೀಶಂಕರಾಚಾರ್ಯ ಮಹಾಸಂಸ್ಥಾನಮ್
• ಡಾ. ಟಿ. ಶ್ಯಾಮ ಭಟ್, ಯಕ್ಷಗಾನ ಮಹಾಪೋಷಕರು, ವಿಶ್ರಾಂತ ಐ.ಎ.ಎಸ್ ಅಧಿಕಾರಿಗಳು
• ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ
• ಡಾ. ಬಿ. ಎ. ವಿವೇಕ ರೈ
• ಬಲಿಪ ನಾರಾಯಣ ಭಾಗವತ
• ಡಾ. ಎಂ. ಮೋಹನ ಆಳ್ವ
• ಕುಂಬ್ಳೆ ಸುಂದರ ರಾವ್
• ಪ್ರೊ. ಅಮೃತ ಸೋಮೇಶ್ವರ
• ಶ್ರೀ ದೇವಿಪ್ರಸಾದ್ ಶೆಟ್ಟಿ
• ವೇದಮೂರ್ತಿ ಶ್ರೀಹರಿನಾರಾಯಣದಾಸ ಆಸ್ರಣ್ಣ
• ಸೂರಿಕುಮೇರಿ ಕೆ. ಗೋವಿಂದ ಭಟ್
• ಅಂಬಾತನಯ ಮುದ್ರಾಡಿ
• ಡಾ. ಎಂ. ಪ್ರಭಾಕರ ಜೋಶಿ
• ಶ್ರೀಮತಿ ಲೀಲಾವತಿ ಬೈಪಡಿತ್ತಾಯ
• ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರ
• ಪಿ. ಕಿಶನ್ ಹೆಗ್ಡೆ
• ಪ್ರತಿಭಾ ಎಮ್. ಎಲ್. ಸಾಮಗ
• ಕೆರೆಮನೆ ಶಿವಾನಂದ ಹೆಗಡೆ
• ಶಿವರಾಮ ಜೋಗಿ ಬಿ. ಸಿ. ರೋಡ್
• ಪದ್ಯಾಣ ಶಂಕರನಾರಾಯಣ ಭಟ್
• ಗೋಪಾಲಕೃಷ್ಣ ಕುರುಪ್
• ಐರೋಡಿ ಗೋವಿಂದಪ್ಪ
• ಡಾ. ಆನಂದ ಹಾಸ್ಯಗಾರ
• ಮೂರ್ತಿ ದೇರಾಜೆ
• ಡಾ. ಪುರುಷೋತ್ತಮ ಬಿಳಿಮಲೆ
• ಈರೋಡಿ ಶಂಕರನಾರಾಯಣ ಭಟ್
• ಎಮ್. ಎಲ್. ಸಾಮಗ
• ಬನ್ನಂಜೆ ಸಂಜೀವ ಸುವರ್ಣ
• ಡಾ. ಭಾಸ್ಕರಾನಂದ ಕುಮಾರ್
• ಸುಣ್ಣಂಬಳ ವಿಶ್ವೇಶ್ವರ ಭಟ್
• ದಿನೇಶ ಅಮ್ಮಣ್ಣಾಯ

‘ಶ್ರೀ ಕೋಳ್ಯೂರು ವೈಭವ’ದಲ್ಲಿ ಪ್ರದರ್ಶನಗೊಳ್ಳಲಿರುವ ಪಾತ್ರ ವೈವಿಧ್ಯ

ಪ್ರತೀ ದಿನ ಯೂ-ಟ್ಯೂಬ್‌ನಲ್ಲಿ ಪ್ರಸಾರಗೂಳ್ಳಲಿರುವ ‘ಶ್ರೀ ಕೋಳ್ಯೂರು ವೈಭವ’ದಲ್ಲಿ ಪ್ರತಿದಿನ ಪ್ರಸ್ತುತಿಗೊಳ್ಳಲಿರುವ ಪಾತ್ರಗಳು ಈ ಕೆಳಗಿನಂತಿವೆ.  ಅಕ್ಟೋಬರ್ 14 ರಿಂದ ನವೆಂಬರ್ 14ರ ವರೆಗೆಒಂದು ತಿಂಗಳ ಪರ್ಯಾಂತ ಪ್ರತಿದಿನ ಕೋಳ್ಯೂರು ಮುಖ್ಯ ಭೂಮಿಕೆಯಲ್ಲಿರುವ ಆಖ್ಯಾನವನ್ನು ಪ್ರದರ್ಶಿಸಲಾಗುವುದು.
• ಭೀಷ್ಮ ವಿಜಯದಲ್ಲಿ ಅಂಬೆ
• ಶ್ರೀರಾಮ ಪಟ್ಟಾಭಿಷೇಕದಲ್ಲಿ ಕೈಕೇಯಿ
• ಮುದ್ರಿಕಾ ಪ್ರದಾನದಲ್ಲಿ ಸೀತೆ
• ದಾಕ್ಷಾಯಣಿ ದಹನದಲ್ಲಿ ದಾಕ್ಷಾಯಣಿ
• ರುಕ್ಮಾಂಗದ ಮೋಹಿನಿಯಲ್ಲಿ ಮೋಹಿನಿ
• ಸೀತಾ ಪರಿತ್ಯಾಗದಲ್ಲಿ ಸೀತೆ
• ಕರ್ಣ-ಕುಂತಿಯಲ್ಲಿ ಕುಂತಿ
• ಕೀಚಕ ವಧೆಯಲ್ಲಿ ಸೈರೇಂದ್ರಿ
• ವಿಶ್ವಾಮಿತ್ರ ಮೇನಕೆಯಲ್ಲಿ ಮೇನಕೆ
• ಮಹಾಸತಿ ಮಂಡೋದರಿಯಲ್ಲಿ ಮಂಡೋದರಿ
• ಚಂದ್ರಾವಳಿ ವಿಲಾಸದಲ್ಲಿ ಚಂದ್ರಾವಳಿ
• ಪ್ರಮೀಳಾರ್ಜುನಾದಲ್ಲಿ ಪ್ರಮೀಳೆ
• ನಳ ದಮಯಂತಿಯಲ್ಲಿ ದಮಯಂತಿ
• ಮಾಯಾ ಶೂರ್ಪನಖಿಯಲ್ಲಿ ಶೂರ್ಪನಖಿ
• ಶ್ರೀಕೃಷ್ಣ ಪಾರಿಜಾತದಲ್ಲಿ ಸತ್ಯಭಾಮೆ
• ರಾಧಾಕೃಷ್ಣದಲ್ಲಿ ರಾಧೆ
• ಸುಭದ್ರ ಸಂಧಾನದಲ್ಲಿ ಸುಭದ್ರೆ
• ಅಭಿಜ್ಜಾನ ಶಾಕುಂತಳೆಯಲ್ಲಿ ಶಾಕುಂತಳೆ
• ವಾಲಿ ಪತನದಲ್ಲಿ ತಾರೆ
• ದ್ರೌಪದಿ ವಸ್ತ್ರಾಪಹರಣದಲ್ಲಿ ದ್ರೌಪದಿ
• ಸತ್ಯ ಹರಿಶ್ಚಂದ್ರದಲ್ಲಿ ಚಂದ್ರಮತಿ  
• ದುರ್ವಾಸ ಅಜಮುಖಿಯಲ್ಲಿ ಅಜಮುಖಿ
• ಕಚದೇವಯಾನಿಯಲ್ಲಿ ದೇವಯಾನಿ
• ಭಕ್ತ ಪ್ರಹ್ಲಾದದಲ್ಲಿ ಕಯಾದು
• ಕಾಡಮಲ್ಲಿಗೆ
• ಪಟ್ಟದ ಪದ್ಮಲೆ
• ಆರ್‌ಆರ್ ಸಿ ಡೋಕ್ಯುಮೆಂಟ್

ಯಕ್ಷ ಉತ್ಸವ – ಯಕ್ಷ ಗಾನವೈಭವ ಮತ್ತು ಯಕ್ಷಗಾನ ಪ್ರದರ್ಶನ

ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನ ಸುಂಕದಕಟ್ಟೆ, ಬಜ್ಪೆ ಇಲ್ಲಿ ದಿನಾಂಕ 13.10.2021ನೇ ಬುಧವಾರ ಬೆಳಗ್ಗೆ 10 ಘಂಟೆಯಿಂದ ‘ಯಕ್ಷ ಉತ್ಸವ’ ನಡೆಯಲಿದೆ.

ಈ ಕಾರ್ಯಕ್ರಮದ ಅಂಗವಾಗಿ  ಬೆಳಗ್ಗೆ 10 ಘಂಟೆಯಿಂದ 12.30ರ ವರೆಗೆ  ಯಕ್ಷ ಗಾನವೈಭವ ಮತ್ತು ಅಪರಾಹ್ನ 1.30ರಿಂದ  8.30ರ ವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಒಡಿಯೂರು ಶ್ರೀಗಳಿಗೆ ಗುರುವಂದನೆ

ಷಷ್ಟ್ಯಬ್ದ ಸಂಭ್ರಮಕ್ಕೆ ಭಾಜನರಾದ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ಎಸ್.ವಿ.ಟಿ ರಸ್ತೆಯ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಗುರುವಂದನೆ ಜರಗಿತು. ಜ್ಞಾನವಾಹಿನಿ ೬ರ ಕಾಸರಗೋಡು ವಲಯ ಸಮಿತಿಯ ಸಮಾರೋಪ ಮತ್ತು ಕಾಸರಗೋಡು ಯಕ್ಷೋತ್ಸವದ ಪಂಚಮ ಕಾರ್ಯಕ್ರಮ ಪೇಟೆ ಶ್ರೀ ವೆಂಕಟ್ರಮಣ ದೇವಾಲಯದ ಶ್ರೀ ವ್ಯಾಸ ಮಂಟಪದಲ್ಲಿ ಜರಗಿದ ವೇಳೆ ಗುರುವಂದನೆ ನಡೆಸಲಾಯಿತು.

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಗೌರವ ಸಲ್ಲಿಸಿದರು. ಷಷ್ಟ್ಯಬ್ದ ವಲಯ ಸಮಿತಿ ಅಧ್ಯಕ್ಷ ಕೆ. ಎನ್. ವೆಂಕಟ್ರಮಣ ಹೊಳ್ಳ ಅವರು ನೇತೃತ್ವ ವಹಿಸಿದ್ದರು. ತಂತ್ರಿವರ್ಯ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರ, ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿ, ನ್ಯಾಯವಾದಿ ಕೆ. ಶ್ರೀಕಾಂತ್ ಹರಿದಾಸ ಜಯಾನಂದ ಕುಮಾರಾ ಹೊಸದುರ್ಗ, ಶಿವರಾಮ ಕಾಸರಗೋಡು, ಕೆ.ಟಿ ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು.

ಕೆ. ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್ ಮೊದಲಾದವರು ಸಹಕರಿಸಿದವರು. ಷಷ್ಟ್ಯಬ್ದ ಸಮಿತಿ ಕೋಶಾಧಿಕಾರಿ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಾರ್ಡ್ ಸದಸ್ಯೆ ಶ್ರೀಲತಾ ಟೀಚರ್ ಸನ್ಮಾನ ಪಾತ್ರ ವಾಚಿಸಿದರು. 

ಸುಂದರಕೃಷ್ಣ ಮಧೂರು ಅವರಿಗೆ ಕಾಸರಗೋಡು ಯಕ್ಷೋತ್ಸವದ ಸನ್ಮಾನ: 

ಯಕ್ಷಗಾನದ ಹಿರಿಯ ಕಲಾವಿದ, ಅರ್ಥಧಾರಿ ಸುಂದರಕೃಷ್ಣ ಮಧೂರು ಅವರಿಗೆ ಕಾಸರಗೋಡು ಯಕ್ಷೋತ್ಸವ ಸನ್ಮಾನ ಜರಗಿತು. ಎಸ್.ವಿ.ಟಿ ರಸ್ತೆಯ  ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರ ಆಶ್ರಯದಲ್ಲಿ  ಜ್ಞಾನವಾಹಿನಿ 6ರ ಸರಣಿಯ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷ   ಕೆ. ಎನ್. ವೆಂಕಟ್ರಮಣ ಹೊಳ್ಳ ಅವರು ನೇತೃತ್ವದಲ್ಲಿ ಸನ್ಮಾನ ಜರಗಿತು. 

ಎಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅಭಿನಂದಿಸಿದರು. ಒಡಿಯೂರು ಶ್ರೀ ಶ್ರೀ  ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.  ವಲಯ ಸಮಿತಿ ಕೋಶಾಧಿಕಾರಿ ರಾಮಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. 

ತಂತ್ರಿವರ್ಯ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರ, ಬ್ರಹ್ಮಶ್ರೀ ಕುಂಟಾರು ಶ್ರೀ ರವೀಶ ತಂತ್ರಿ, ನ್ಯಾಯವಾದಿ ಕೆ. ಶ್ರೀಕಾಂತ್ ಹರಿದಾಸ ಜಯಾನಂದ ಕುಮಾರಾ ಹೊಸದುರ್ಗ, ಶಿವರಾಮ ಕಾಸರಗೋಡು, ಕೆ.ಟಿ ಸುಬ್ರಹ್ಮಣ್ಯನ್ ಮೊದಲಾದವರು ಉಪಸ್ಥಿತರಿದ್ದರು. ಕೆ. ಎನ್. ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್ ಮೊದಲಾದವರು ಸಹಕರಿಸಿದವರು. ಜಗದೀಶ ಕೂಡ್ಲು ಸನ್ಮಾನ ಪಾತ್ರ ವಾಚಿಸಿದರು. 

ಪದ್ಯಾಣ ಭಾಗವತರ ನಿಧನಕ್ಕೆ ಗಣ್ಯರ ಸಂತಾಪ

ಖ್ಯಾತ ಭಾಗವತ ಪದ್ಯಾಣ ಗಣಪತಿ ಭಟ್ಟರ ನಿಧಾನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಸಚಿವ ಅರವಿಂದ ಲಿಂಬಾವಳಿ ಇವರಲ್ಲಿ ಸೇರಿದ್ದಾರೆ. 

ಪದ್ಯಾಣ ಗಣಪತಿ ಭಟ್ ವಿಧಿವಶ – ಯಕ್ಷಗಾನ ಕಲಾರಂಗ ಸಂತಾಪ

ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ಪದ್ಯಾಣ ಗಣಪತಿ ಭಟ್ಟರು66) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತುಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಬಹುಬೇಗನೆ ಸಿದ್ಧಿಪ್ರಸಿದ್ಧಿ ಪಡೆದ ಅವರು ‘ಯಕ್ಷರತ್ನ’ ಬಿರುದಿಗೆ ಭಾಜನರಾಗಿದ್ದರು.

ಇವರಿಗೆ ಯಕ್ಷಗಾನ ಮನೆತನದ ಬಳುವಳಿ. ಅಜ್ಜ ಪುಟ್ಟು ನಾರಾಯಣರು ಪ್ರಸಿದ್ಧ ಭಾಗವತರಾಗಿದ್ದರು. ತಂದೆ ಹಿಮ್ಮೇಳವಾದಕರಾಗಿದ್ದರು. ಪದ್ಯಾಣ ಮನೆತನ ಸಾಕಷ್ಟು ಕಲಾವಿದರನ್ನು ಈ ಕ್ಷೇತ್ರಕ್ಕೆ ನೀಡಿದೆ. ಪದ್ಯಾಣತಿರುಮಲೇಶ್ವರಭಟ್- ಸಾವಿತ್ರಿ ದಂಪತಿಗಳ ಸುಪುತ್ರರಾಗಿ ಜನಿಸಿದ ಇವರಿಗೆ ಮನೆಯೇ ಮೊದಲ ಯಕ್ಷಗಾನ ಪಾಠಶಾಲೆಯಾಯಿತು. ಮಾಂಬಾಡಿ ನಾರಾಯಣ ಭಾಗವತರಲ್ಲಿ ಭಾಗವತಿಕೆ ಅಭ್ಯಾಸ ಮಾಡಿ ಹದಿನೈದರ ಹರೆಯದಲ್ಲೆ ಯಕ್ಷರಂಗ ಪ್ರವೇಶಿಸಿದರು.

ಚೌಡೇಶ್ವರಿ, ಕುಂಡಾವು, ಸುರತ್ಕಲ್, ಮಂಗಳಾದೇವಿ, ಎಡನೀರು,ಹೊಸನಗರ ಹಾಗೂ ಹನುಮಗಿರಿ ಮೇಳಗಳಲ್ಲಿ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕನ್ನಡ, ತುಳು ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ಭಾಗವತಿಕೆ ಮಾಡಿ ಕಲಾರಸಿಕರ ಮನಗೆದ್ದಿದ್ದಾರೆ. ಸಂಗೀತ ಜ್ಞಾನವುಳ್ಳ ಪದ್ಯಾಣರು ಯಕ್ಷಗಾನದ ಪದ್ಯಗಳಿಗೆ ಹೊಸ ರಾಗ ಸಂಯೋಜನೆ ಮಾಡಿದ್ದಾರೆ.

ಶೇಣಿ ಗೋಪಾಲಕೃಷ್ಣ ಭಟ್ಟರ ನೆಚ್ಚಿನ ಭಾಗವತರು. 1500ಕ್ಕೂ ಹೆಚ್ಚು ಧ್ವನಿಸುರುಳಿಗಳಲ್ಲಿ 200ಕ್ಕೂ ಹೆಚ್ಚು ಯಕ್ಷಗಾನದ ವಿಡಿಯೋಗಳಲ್ಲಿ ಇವರ ಸಿರಿಕಂಠದ ಧ್ವನಿ ದಾಖಲಾಗಿದೆ. ಹೊರನಾಡುಗಳಲ್ಲಿ ಹೊರರಾಷ್ಟ್ರಗಳಲ್ಲಿ ಯಕ್ಷಗಾನ ಆಟಕೂಟಗಳಲ್ಲಿ ಭಾಗವಹಿಸಿ ಮಧುರ ಹಾಡುಗಳಿಂದ ಕಾರ್ಯಕ್ರಮ ಕಳೆಗಟ್ಟಿಸಿದ್ದಾರೆ. ಹಿಮ್ಮೇಳದ ಎಲ್ಲ ಅಂಗಗಳಲ್ಲಿ ಪರಿಣಿತರಾದ ಇವರು ಅನೇಕ ಶಿಷ್ಯರಿಗೆ ತರಬೇತಿ ನೀಡಿದ್ದಾರೆ. ಕನ್ನಡಿಕಟ್ಟೆಯಂತಹ ಯುವ ಭಾಗವತರು ಇವರ ಗರಡಿಯಲ್ಲಿ ಸಿದ್ಧಗೊಂಡಿದ್ದಾರೆ.

ನಿಡುಗಾಲದ ಯಕ್ಷಗಾನಕ್ಕೆ ಪುರಸ್ಕಾರ ರೂಪವಾಗಿ ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರು. ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಮಲ್ಪೆ ಶಂಕರನಾರಾಯಣ ಸಾಮಗ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್‌ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಕ್ಷರ ನಮನ- ಪದ್ಯಾಣ ಗಣಪತಿ ಭಟ್ಟರಿಗೆ ನುಡಿನಮನ

ಯಕ್ಷಲೋಕದ ತಾರೆ ಮಿನುಗಿ ಮರೆಯಾಯ್ತೇನು

ಸುತ್ತ ಪಸರಿಸಿದ ಬೆಳಕೆಲ್ಲ ತಿಮಿರವಾಗಿ

ದಶಕಗಳ ಕಾಲದಲಿ ಯಕ್ಷಲೋಕದಿ ಮೆರೆದ

ಅಗ್ರಗಣಿ ಪದ್ಯಾಣ ಗಣಪಣ್ಣ ಕಾಣದಾಗಿ.


ಭೌತಿಕದ ಈ ದೇಹ ತೊರೆದು ಸಾಗಿದರೇನು

ಶಾಶ್ವತದ ಸ್ಥಾನ ಜನರಮಾನಸದಲ್ಲಿ

ಅಪ್ರತಿಮ ಭಾಗವತರೆಂದು ಕೊಂಡಾಡುತಲಿ

ಗುಣಗಾನ ಗೈಯುತಿರೆ ಲೋಗರಿಲ್ಲಿ.


ಸಾಧನೆಯ ಮಾಡಿಹರು ಸನ್ಮಾನ ಪಡೆದಿಹರು

ಒಂದಲ್ಲ ಎರಡಲ್ಲ ಹಲವಾರು ಜಾಗದಲಿ

ಜನರೊಡನೆ ಒಡನಾಡಿ ಲಘುಹಾಸ್ಯದ ಮಾತು

ಮರೆಯಲಾರದ ಸತ್ಯ ಜೀವಂತವಾಗಿ.


ಖಾಲಿ ಮಾಡಿದಿರಲ್ಲ ನೀವಿದ್ದ ಜಾಗವನು

ಸರಿಸಾಟಿ ನಿಮಗ್ಯಾರು ನೀವೇ ಸಾಟಿ

ಸದ್ಗತಿಯು ನಿಮಗಿರಲಿ ದುಃಖ ಭರಿಸುವ ಶಕ್ತಿ

ಬಂಧುಗಳಿಗೆ ಮಿತ್ರರಿಗೆಲ್ಲ ಪ್ರಾಪ್ತವಾಗಿ.


ನಮನವಿದು ಅಗಲಿರುವ ನಿಮ್ಮ ದಿವ್ಯಾತ್ಮಕ್ಕೆ

ಸೇರಿದಿರಿ ಶಿವಪಾದ ಜಗವ ತೊರೆದಿಲ್ಲಿ

ನಮನವಿದೊ ಮತ್ತೊಮ್ಮೆ ನಿಮ್ಮ ವ್ಯಕ್ತಿತ್ವಕ್ಕೆ

ಬರೆದಿಹೆನು ಸಾಲುಗಳ ಅಕ್ಷರದ ರೂಪದಲ್ಲಿ.

ಗೋಪಾಲಕೃಷ್ಣ ಭಟ್, ಮನವಳಿಕೆ


ಕವಿ: ಗೋಪಾಲಕೃಷ್ಣ ಭಟ್, ಮನವಳಿಕೆ.12.10.2021

(ನಮ್ಮನ್ನಗಲಿದ ಯಕ್ಷಲೋಕದ ಧ್ರುವತಾರೆ ಪದ್ಯಾಣ ಗಣಪತಿ ಭಟ್ಟರಿಗೆ ನುಡಿನಮನ).

ಖ್ಯಾತ ಯಕ್ಷಗಾನ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಅಸ್ತಂಗತ

 
ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಗಾನಗಂಧರ್ವ ಪದ್ಯಾಣ ಗಣಪತಿ ಭಟ್ ಅವರು ಇಂದು ಬೆಳಿಗ್ಗೆ (12.102017, ಮಂಗಳವಾರ) ಅಸ್ತಂಗತರಾಗಿದ್ದಾರೆ. ನ್ಯುಮೋನಿಯಾ ಜ್ವರದಿಂದ ಬಳಲಿ ಚೇತರಿಸಿಕೊಂಡಿದ್ದ ಅವರು ಹೃದಯಾಘಾತದಿಂದ ನಿಧನರಾದರು.  ಜನಪ್ರಿಯ ಪದ್ಯಾಣ ಶೈಲಿಯ ಜನಕರಾಗಿದ್ದ ಅವರ ದಿಢೀರ್ ಅಗಲಿಕೆಯಿಂದ ಯಕ್ಷಗಾನಾಭಿಮಾನಿಗಳು ಮತ್ತು ಇಡೀ ಯಕ್ಷಲೋಕವೇ ದಿಗ್ಭ್ರಮೆಗೊಳಗಾಗಿದೆ. ಹಲವಾರು ಕಲಾಭಿಮಾನಿಗಳು ದುಃಖದ ಕಡಲಿನಲ್ಲಿ ಮುಳುಗಿದ್ದಾರೆ. ತೆಂಕುತಿಟ್ಟು ಯಕ್ಷಗಾನ ಭಾಗವತಿಕೆಗೆ ಹೊಸ ಆಯಾಮವನ್ನೇ ನೀಡಿದ, ದೇಶ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ ಪದ್ಯಾಣ ಗಣಪತಿ ಭಟ್ಟರಿಗೆ ಎಲ್ಲರೂ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದಾರೆ. 

ಪದ್ಯಾಣ ಗಣಪತಿ ಭಟ್ಟರ ಕಲಾಯಾನ: ಶ್ರೀ ಪದ್ಯಾಣ ಗಣಪತಿ ಭಟ್ಟರು 1955 ಜನವರಿ 21ರಂದು ಸುಳ್ಯ ತಾಲೂಕಿನ ಕಲ್ಮಡ್ಕದ ಸಮೀಪ ಗೋಳ್ತಜೆ ಎಂಬಲ್ಲಿ ಪದ್ಯಾಣ ತಿರುಮಲೇಶ್ವರ ಭಟ್, ಸಾವಿತ್ರಿ ಅಮ್ಮ ದಂಪತಿಗಳಿಗೆ ಮಗನಾಗಿ ಜನಿಸಿದರು. ಚಿಕ್ಕ ಮಗುವಾಗಿದ್ದಾಗ ಬಾಲಪೀಡೆ ಎಂಬ ರೋಗಕ್ಕೆ ತುತ್ತಾಗಿ ಕಾಲನಾಲಯದ ಬಳಿಯವರೆಗೂ ಸಾಗಿ ಮೃತ್ಯುವನ್ನು ಜಯಿಸಿ ಬಂದಿದ್ದರು. ಒಂದು ರೀತಿಯಲ್ಲಿ ಪುನರ್ಜನ್ಮ. ಕಲ್ಮಡ್ಕ ಸರಕಾರೀ ಶಾಲೆಯಲ್ಲಿ 7ನೇ ತರಗತಿ ವರೇಗೆ ಓದಿ ಬಾಳಿಲ ವಿದ್ಯಾಬೋಧಿನೀ ಶಾಲೆಗೆ ಸೇರಿದ್ದರು. ಶಾಲೆಯಲ್ಲಿ ಯಕ್ಷಗಾನ ತಂಡವು ಸಿದ್ಧವಾಗಿತ್ತು. ಶಾಲಾ ವಾರ್ಷಿಕೋತ್ಸವದ ಪ್ರದರ್ಶನ ಬಭ್ರುವಾಹನ ಕಾಳಗ ಪ್ರಸಂಗದಲ್ಲಿ ವೃಷಕೇತು ಪಾತ್ರವನ್ನು ಮಾಡಿದ್ದರು. 


ಅದೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಆರಂಭವಾಗಿತ್ತು. ಯಕ್ಷಗಾನವು ಪದ್ಯಾಣ ಮನೆಯವರಿಗೆ  ರಕ್ತಗತವೇ ಆಗಿರುವ ವಿಚಾರ. ಗಣಪತಿ ಭಟ್ಟರು ಧರ್ಮಸ್ಥಳದತ್ತ ಸಾಗಿದರು. ಶ್ರೀ ಧರ್ಮಸ್ಥಳ ಯಕ್ಷಗಾನ ಲಲಿತ ಕಲಾ ತರಬೇತಿ ಕೇಂದ್ರದಲ್ಲಿ ಮಾಂಬಾಡಿ ನಾರಾಯಣ ಭಟ್ಟರ ಶಿಷ್ಯನಾಗಿ ಕಲಿಕೆಯತ್ತ ಗಮನಹರಿಸಿದರು. ತರಬೇತಿ ಮುಗಿದು ಮನೆಗೆ ತೆರಳುವಾಗ ಸಂದರ್ಶನದಲ್ಲಿ ಅನುತ್ತೀರ್ಣನಾಗಿದ್ದ ನೀನು ಮನೆಗೆ ಹೋಗಿದ್ದರೆ, ನಿನ್ನಂತಹ ಶಿಷ್ಯನನ್ನು ಕಳೆದುಕೊಳ್ಳುತ್ತಿದ್ದೆ. ನಿನಗೂ ನಷ್ಟವಾಗುತ್ತಿತ್ತು ಎಂದು ಮಾಂಬಾಡಿ ನಾರಾಯಣ ಭಾಗವತರು ಹೇಳಿದ್ದರಂತೆ.

ಧರ್ಮಸ್ಥಳ ಕಲಿಕಾ ಕೇಂದ್ರದಿಂದ ಮರಳಿದ ನಂತರ ಪದ್ಯಾಣ ಗಣಪತಿ ಭಟ್ಟರು ಕಲ್ಮಡ್ಕ ಪರಿಸರದಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಿದರು. ಭಾಗವತರಾದ ದಾಸರಬೈಲು ಚನಿಯ ನಾಯ್ಕರ ಒಡನಾಟ ರಂಗದೊಳಗೆ ಪ್ರತ್ಯಕ್ಷ ಕಲಿಕೆಗೆ ವೇದಿಕೆಯಾಯಿತು. 1972-73ರ ಕಾಲ ಚೌಡೇಶ್ವರೀ ಮೇಳದ ಪ್ರದರ್ಶನ,    ಪೆರಾಜೆ, ಪೆರ್ನಾಜೆ ಮೊದಲಾದ ಸ್ಥಳಗಳಲ್ಲಿ ನಡೆಯುತ್ತಿದ್ದ ಆಟಕೂಟಗಳಲ್ಲಿ ಭಾಗವಹಿಸಿದರು. ದಾಸರಬೈಲು ಚನಿಯ ನಾಯ್ಕರು ಪ್ರಸಂಗವನ್ನು ಮುನ್ನಡೆಸುತ್ತಿದ್ದ ಕ್ರಮವನ್ನು ನೋಡಿ ಕಲಿತರು. ಚನಿಯ ನಾಯ್ಕ, ಪ್ರಸಂಗಕರ್ತ ಮಧುಕುಮಾರ್ ಭಾಗವತರ ಹಾಡುಗಳಿಗೆ ಚೆಂಡೆ ಮದ್ದಳೆ ವಾದಕನಾಗಿಯೂ ಭಾಗವಹಿಸಿದರು.


ಮುಂದೆ ಶಂಕರ ಭಟ್ಟರ ‘ಟೂರಿಂಗೆ ಕ್ಯಾಂಪು’ ತಿರುಗಾಟ. ಭಾಗವತನಾಗಿ ಕಲಾಸೇವೆ. ಆ ತಂಡದಲ್ಲಿ ಶಿವರಾಮ ಜೋಗಿ, ಬಾಯಾರು ಪ್ರಕಾಶ್ಚಂದ್ರ ರಾವ್, ವೇಣೂರು ಸುಂದರ ಆಚಾರ್ಯ ಮೊದಲಾದ ಕಲಾವಿದರಿದ್ದರು. ಮುಂದಿನ ವರುಷ ಸುರತ್ಕಲ್ಲು ಮೇಳಕ್ಕೆ ಸಂಗೀತಗಾರರಾಗಿ ಬರಲು ಶಿವರಾಮ ಜೋಗಿಯವರು ಮತ್ತು ವೇಣೂರು ಸುಂದರ ಆಚಾರ್ಯರು ಆಹ್ವಾನಿಸಿದಾಗ ಗಣಪತಿ ಭಟ್ಟರು ಸಂತೋಷದಿಂದ ಒಪ್ಪಿಕೊಂಡಿದ್ದರು.


ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ, ಸತೀ ಶೀಲವತಿ, ತುಳುನಾಡ ಬಲಿಯೇಂದ್ರೆ ಪದ್ಯಾಣ ಗಣಪತಿ ಭಟ್ಟರಿಗೆ ತಾರಾಮೌಲ್ಯವನ್ನು ತಂದಿತ್ತವು. ಯಶಸ್ವೀ ಯಜಮಾನರಾದ ಕಸ್ತೂರಿ ಪೈಗಳ ಸುರತ್ಕಲ್ಲು ಮೇಳವು ಗಜಮೇಳವಾಗಿ ವಿಜೃಂಭಿಸುತ್ತಿತ್ತು. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತರು, ಜಲವಳ್ಳಿ ಅಲ್ಲದೆ ಅನೇಕ ಹಿರಿಯ ಕಲಾವಿದರ ಒಡನಾಟ ಇವರಿಗೆ ದೊರಕಿತು. ರಾಮದಾಸ ಸಾಮಗರ ಜತೆ ತಿರುಗಾಟವೂ ಇತ್ತು. ಶೇಣಿಯವರು ತಿದ್ದಿ ತೀಡಿದರು. ಅಗರಿ ರಘುರಾಮ ಭಾಗವತರು ಹೆಚ್ಚು ಹೆಚ್ಚು ಹಾಡಲು ಅವಕಾಶವಿತ್ತು ಗಣಪತಿ ಭಟ್ಟರ ಪ್ರತಿಭೆ ಬೆಳಗಲು ಕಾರಣರಾದರು. ಅಗರಿಯವರ ನಿವೃತ್ತಿಯ ನಂತರ ಪ್ರಧಾನ ಭಾಗವತರಾಗಿ ಸುರತ್ಕಲ್ಲು ಮೇಳವನ್ನು ಮುನ್ನಡೆಸಿದರು. 


ಶೇಣಿಯವರಿಗೆ ಬಡಗಿನ ಶ್ರೇಷ್ಠ ಭಾಗವತರಾಗಿದ್ದ ಜಿ. ಆರ್. ಕಾಳಿಂಗ ನಾವಡ ಮತ್ತು ತೆಂಕಿನ ಶ್ರೇಷ್ಠ ಭಾಗವತರಾಗಿದ್ದ ಶ್ರೀ ದಾಮೋದರ ಮಂಡೆಚ್ಚರೆಂದರೆ ಅಚ್ಚುಮೆಚ್ಚು. ಕಾಳಿಂಗ ನಾವಡರಿಂದ ಪ್ರಶಂಸಿಸಲ್ಪಟ್ಟವರು ಪದ್ಯಾಣ ಗಣಪತಿ ಭಟ್ಟರು. ದಾಮೋದರ ಮಂಡೆಚ್ಚರು ಅವ್ಯಕ್ತ ಲೋಕವನ್ನು ಸೇರಿಕೊಂಡ ಮೇಲೆ ಆಟ, ಕೂಟಗಳಿಗೆ ಶೇಣಿಯವರು ಪದ್ಯಾಣರನ್ನೇ ಆಯ್ಕೆ ಮಾಡುತ್ತಿದ್ದರಂತೆ. ಇದು ಪದ್ಯಾಣ ಗಣಪತಿ ಭಟ್ಟರ ಪ್ರತಿಭೆಗೆ ಸಂದ ಗೌರವ. ಶೇಣಿ, ತೆಕ್ಕಟ್ಟೆ, ಅಗರಿ ರಘುರಾಮ ಭಾಗವತ ಮೊದಲಾದ ಶ್ರೇಷ್ಠ ಕಲಾವಿದರ ಒಡನಾಟದಿಂದ ಪಕ್ವರಾಗಿ ಶ್ರೀ ಪದ್ಯಾಣ ಗಣಪತಿ ಭಟ್ಟರು ರಂಗದಲ್ಲಿ ವಿಜೃಂಭಿಸಿದರು. ಸುರತ್ಕಲ್, ಮಂಗಳಾದೇವಿ, ಹೊಸನಗರ ಮೇಳಗಳಲ್ಲಿ ತಿರುಗಾಟ ನಡೆಸಿ ಕೊನೆಯ ಕೆಲವು ವರ್ಷಗಳಲ್ಲಿ  ಶ್ರೀ ಹನುಮಗಿರಿ ಮೇಳದಲ್ಲಿ ಕಲಾಸೇವೆಯನ್ನು ನಡೆಸುತ್ತಿದ್ದರು. 


 ‘‘ರಂಗವನ್ನು ಆಳುವ ಜಾಣ್ಮೆ ಪದ್ಯಾಣರಲ್ಲಿ ಮೈತುಂಬಿದೆ. ಅವರು ರಂಗದಲ್ಲಿದ್ದಷ್ಟು ಹೊತ್ತು ರಂಗದ ಎಲ್ಲಾ ಸೂಕ್ಷ್ಮ ಸಂಗತಿಗಳು ಅವರಿಗೆ ಶರಣಾಗುವ ಅವ್ಯಕ್ತ ಸಂಗತಿಯೊಂದು ಗೋಚರವಾಗುವುದು ಪದ್ಯಾಣರ ದೀರ್ಘಕಾಲದ ಅನುಭವದ ಪರಿಪಕ್ವ ಫಲವಾಗಿದೆ’’. ಸಂಪಾಜೆ ಯಕ್ಷೋತ್ಸವದ ರೂವಾರಿ, ಕಲಾಪೋಷಕ ಡಾ. ಟಿ. ಶ್ಯಾಮ್ ಭಟ್ಟರು ಆಟಕೂಟಗಳಲ್ಲಿ ಭಾಗವತರಾಗಿ ಪದ್ಯಾಣ ಗಣಪತಿ ಭಟ್ಟರ ಪ್ರಸಂಗವನ್ನು ಮುನ್ನಡೆಸಿದ ರೀತಿಯನ್ನು ನೋಡಿ, ಅನುಭವಿಸಿ ಹೇಳಿದ ಮಾತಿದು. 

ಪದ್ಯಾಣ ಗಣಪತಿ ಭಟ್ಟರ ನಿಧನ ಯಕ್ಷಗಾನ ಕ್ಷೇತ್ರಕ್ಕೊಂದು ತುಂಬಲಾರದ ನಷ್ಟ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬ, ಬಂಧುಮಿತ್ರರಿಗೂ, ಅಪಾರ ಸಂಖ್ಯೆಯ ಕಲಾಭಿಮಾನಿಗಳಿಗೂ ನೀಡಲಿ ಎಂದು ಪ್ರಾರ್ಥಿಸೋಣ. 

ಶ್ರೀ ಕೋಳ್ಯೂರು ವೈಭವ

ಕೋಳ್ಯೂರು ಎಂಬುದು ಒಂದು ಊರಿನ ಹೆಸರು. ಆ ಹೆಸರನ್ನು ಕೇಳಿದ ಕೂಡಲೆ ಕೋಳ್ಯೂರು ರಾಮಚಂದ್ರರಾಯರು ಕಣ್ಣೆದುರು ಬರುತ್ತಾರೆ. ಮೋಹಿನಿಯಂಥ ಶೃಂಗಾರ ಪಾತ್ರದಿಂದ ತೊಡಗಿ, ಚಂದ್ರಮತಿ, ದಮಯಂತಿಯಂತಹ ಕರುಣರಸದ ಪಾತ್ರಗಳನ್ನು ಪ್ರಮೀಳೆ, ಶಶಿಪ್ರಭೆಯಂಥ ವೀರರಸದ ಪಾತ್ರಗಳನ್ನು ಮಾಡಿ, ತುಳು ತಿಟ್ಟಿನಲ್ಲಿ ಬೊಮ್ಮಕ್ಕೆ ನಾಗ್ವಕ್ಕೆಯಂಥ ವಿಭಿನ್ನ ಮನೋಧರ್ಮದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ಜನಮಾನಸದಲ್ಲಿ ನಿರಂತರ ವಿಹರಿಸುತ್ತಿರುವ ಕೋಳ್ಯೂರು ರಾಮಚಂದ್ರರಾಯರಿಗೆ ಈಗ ನವತ್ಯಬ್ದ ಸಡಗರ.

ತೊಂಬತ್ತು ವರ್ಷದ ಜೀವಮಾನವೆಂದರೆ ಸರಳ ಸಂಗತಿಯಲ್ಲ. ಅವರು ತಮ್ಮ ಕಿಶೋರ ಹರೆಯದಲ್ಲಿ 60 ವರ್ಷದ ಹಿರಿಯ ಕಲಾವಿದರೊಂದಿಗೆ ಒಡನಾಡಿದ ಅನುಭವವನ್ನು ಸಮಗ್ರವಾಗಿ ನೋಡಿದರೆ ಕೋಳ್ಯೂರು ರಾಮಚಂದ್ರರಾಯರು ನಮ್ಮೊಂದಿಗೆ ನಡೆದಾಡುತ್ತಿರುವ 150 ವರ್ಷಗಳ ಇತಿಹಾಸದ ದಾಖಲೆ ಪುಸ್ತಕ. ಇಂಥ ಯಕ್ಷಗಾನದ ವಿಶ್ವಕೋಶವಾಗಿರುವ ಕೇಂದ್ರ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಂಗಳೂರು ವಿ.ವಿ ಗೌರವ ಡಾಕ್ಟರೇಟ್ ಪದವಿ ಪಡೆದ ಕೋಳ್ಯೂರು ರಾಮಚಂದ್ರರಾಯರನ್ನು ನವತ್ಯಬ್ದ ಸಂಭ್ರಮದ ನಿಮಿತ್ತ ಸಮ್ಮಾನಿಸಬೇಕೆಂದು ಸಮಾಲೋಚಿಸುತ್ತಿದ್ದೆವು.

ಆಗ ಕೋಳ್ಯೂರು ಅವರ ಕುಟುಂಬದ ಪ್ರತಿನಿಧಿಯಾಗಿ ಅವರ ತೃತೀಯ ಪುತ್ರ ಶ್ರೀಧರ ರಾವ್‌ ಅವರು ನಮ್ಮನ್ನು ಸಂಪರ್ಕಿಸಿ ಅಭಿನಂದನ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಮಕ್ಕಳಾದ ನಾವೆಲ್ಲ ಸೇರಿ ಭರಿಸುವುದಾಗಿ ಹೇಳಿದರು. ಹೀಗೆ ಇದರ ಪ್ರಾಯೋಜಕತ್ವ ವಹಿಸಿ ಸಂಸ್ಥೆಗೆ ದೊಡ್ಡ ಸಹಕಾರ ನೀಡಿರುತ್ತಾರೆ.


ಅಕ್ಟೋಬರ್ 14 ರಿಂದ ನವೆಂಬರ್ 14ರ ವರೆಗೆಒಂದು ತಿಂಗಳ ಪರ್ಯಾಂತ ಕಾರ್ಯಕ್ರಮ ಆಯೋಜಿಸಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪೂಜ್ಯ ಧರ್ಮಾಧಿಕಾರಿಗಳಿಂದ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಎಡನೀರು ಮಠಾಧೀಶರು ನಮಗೆ ಅನುಗ್ರಹ ಮಂತ್ರಾಕ್ಷತೆಯನ್ನು ನೀಡಿದ್ದಾರೆ. ಪ್ರತಿದಿನ ಒಬ್ಬೊಬ್ಬ ಮೇರುಕಲಾವಿದರ ನೆನಪಿಗೆ ಕಾರ್ಯಕ್ರಮವನ್ನು ಸಮರ್ಪಿಸಲಾಗುತ್ತಿದೆ. ದಿನಕ್ಕೊಬ್ಬರಂತೆ ಕಲಾಪೋಷಕರು, ಮೇಳದ ಯಜಮಾನರು, ಕೋಳ್ಯೂರು ಅವರ ಒಡನಾಡಿ ಕಲಾವಿದರು ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ. ಪ್ರತಿದಿನ ಕೋಳ್ಯೂರು ಮುಖ್ಯ ಭೂಮಿಕೆಯಲ್ಲಿರುವ ಆಖ್ಯಾನವನ್ನು ಪ್ರದರ್ಶಿಸಲಾಗುವುದು.

ನವಂಬರ್ 14 ರಂದು ಬೆಳಿಗ್ಗೆ 9 ಗಂಟೆಯಿಂದ ದಿನಪೂರ್ತಿ ನಡೆಯುವ ಕಾರ್ಯಕ್ರಮದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಮತ್ತು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ಜರಗಲಿದೆ. ಹಿರಿಯ ಕಲಾವಿದ ಪೆರ್ವೋಡಿ ನಾರಾಯಣ ಭಟ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಸೇರಿದಂತೆ ಅನೇಕ ಹಿರಿಯ ಕಲಾವಿದರು ಭಾಗವಹಿಸಲಿದ್ದಾರೆ.

ಸುಮಾರು 90 ಜನ ಸ್ತ್ರೀ ವೇಷಧಾರಿಗಳನ್ನು ಕೋಳ್ಯೂರು ರಾಮಚಂದ್ರರಾಯರು ಗೌರವಿಸಲಿದ್ದಾರೆ. ಹಿರಿಯ ವಿದ್ವಾಂಸರುಗಳಾದ ಲಕ್ಷ್ಮೀಶ ತೋಳ್ಪಾಡಿ, ಅರುವಕೊರಗಪ್ಪ ಶೆಟ್ಟಿ, ಎ. ಪಿ. ಮಾಲತಿ, ಮಂಟಪ ಪ್ರಭಾಕರಉಪಾಧ್ಯ, ಎಚ್.ಎಸ್. ಬಲ್ಲಾಳ್, ಪಿ.ಎಸ್. ಎಡಪಡಿತ್ತಾಯ, ಪದ್ಮಾ ಸುಬ್ರಹ್ಮಣ್ಯಂ, ವಿದ್ವಾನ್ ಪಪ್ಪು, ವೇಣುಗೋಪಾಲ್, ಕಲಾಮಂಡಲಂ ಗೋಪಿ, ರಾಜ್ ಕೆ. ಶೆಟ್ಟಿ, ಪೆರುವೋಡಿ ನಾರಾಯಣ ಭಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು.

ಇದೇ ಸಂದರ್ಭದಲ್ಲಿ ಕೋಳ್ಯೂರ್‌ರ ಕುರಿತಾದ ಗ್ರಂಥ ಪ್ರಕಟಣೆಗೊಳ್ಳಲಿದೆ. ಹಿರಿಯ ವಿದ್ವಾಂಸರ ಮತ್ತು ಯುವ ಕಲಾವಿದರ ಘೋಷ್ಠಿ ಸಂಪನ್ನಗೊಳ್ಳಲಿದೆ. ಕೊನೆಯಲ್ಲಿ ಕಥಕಳಿ-ಯಕ್ಷಗಾನ ಜುಗಲ್‌ಬಂದಿ ಕಲಾಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ಪ್ರತಿದಿನದ ಕಾರ್ಯಕ್ರಮಗಳು ಯೂ-ಟ್ಯೂಬ್ ಸ್ಟ್ರೀಮ್ ನಲ್ಲಿ ಪ್ರಸಾರಗೊಳ್ಳಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಮ್. ಗಂಗಾಧರ ರಾವ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು, ಕಾರ್ಯದರ್ಶಿ ಮುರಲಿ ಕಡೆಕಾರ್ ವಿವರ ನೀಡಿದರು. ಸಂಸ್ಥೆಯಉಪಾಧ್ಯಕ್ಷರಾದ ಎಸ್. ವಿ ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿ ಮನೋಹರ ಕೆ., ಜತೆ ಕಾರ್ಯದರ್ಶಿ ನಾರಾಯಣ ಎಮ್. ಹೆಗಡೆ ಹಾಗೂ ಕೋಳ್ಯೂರರ ಸುಪುತ್ರ ಶ್ರೀಧರ ರಾವ್ ಮತ್ತು ಮೊಮ್ಮಗ ನಟರಾಜ ಗೋಪಾಡಿ ಉಪಸ್ಥಿತರಿದ್ದರು.

ನಗುಮೊಗದ ಅನುಭವಿ, ಸಜ್ಜನ ಕಲಾವಿದ – ಶ್ರೀ ವಾಮನ್ ಕುಮಾರ್ ವೇಣೂರು

ಶ್ರೀ ವಾಮನ್ ಕುಮಾರ್ ವೇಣೂರು ಅವರು ತೆಂಕುತಿಟ್ಟಿನ ಅನುಭವಿ ಕಲಾವಿದರು. ಸುಮಾರು ಮೂವತ್ತು ವರ್ಷಗಳಿಂದ ಕಲಾಸೇವೆಯನ್ನು ಮಾಡುತ್ತಿದ್ದಾರೆ. ಸ್ತ್ರೀ ವೇಷ ಮತ್ತು ಪುಂಡುವೇಷಧಾರಿಯಾಗಿ ಕಲಾಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಗುಮೊಗದ ಸರಳ, ಸಜ್ಜನ ಕಲಾವಿದರಿವರು. ಪ್ರಸ್ತುತ ಕಿಶನ್ ಹೆಗ್ಡೆ ಸಂಚಾಲಕತ್ವದ ಹಿರಿಯಡಕ ಮೇಳದಲ್ಲಿ ಕಲಾವಿದರಾಗಿ ಮತ್ತು ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಶ್ರೀ ವಾಮನ ಕುಮಾರರು ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಗೋಳಿತ್ಯಾರು ಎಂಬಲ್ಲಿ ಶ್ರೀ ಅಣ್ಣು ದೇವಾಡಿಗ ಮತ್ತು ಶ್ರೀಮತಿ ಮೋನಮ್ಮ ದಂಪತಿಗಳ ಪುತ್ರನಾಗಿ 1974 ಎಪ್ರಿಲ್ 18ರಂದು ಜನಿಸಿದರು. ಅವರ ಮನೆಯವರು (ಹಿರಿಯರಿಂದಲೂ) ವೇಣೂರು ಅಜಿಲ ಸೀಮೆಯ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಪದಾರ್ಥಿಗಳಾಗಿ ಸೇವೆ ಸಲ್ಲಿಸುತ್ತಾ ಬಂದವರು. ಇವರ ಅಣ್ಣನೂ ಮಹಾಲಿಂಗೇಶ್ವರ ದೇವರ ಸೇವೆ ಮಾಡಿದ್ದರು. ಪ್ರಸ್ತುತ ವಾಮನ ಕುಮಾರರ ಅಳಿಯ ಈ ಕಾಯಕವನ್ನು ನಡೆಸುತ್ತಿದ್ದಾರೆ.

ವಾಮನಕುಮಾರರು ಓದಿದ್ದು ವೇಣೂರು ವಿದ್ಯೋದಯ ಶಾಲೆಯಲ್ಲಿ. ಎಂಟನೇ ತರಗತಿ ವರೆಗೆ. ಇವರೂ ಮದ್ದಳೆಗಾರರಾದ ಕೊಂಕಣಾಜೆ ಚಂದ್ರಶೇಖರ ಭಟ್ಟರೂ ಶಾಲೆಯಲ್ಲಿ ಸಹಪಾಠಿಗಳಾಗಿದ್ದರು. ಬಾಲ್ಯದಲ್ಲೇ ಯಕ್ಷಗಾನಾಸಕ್ತರಾಗಿದ್ದರು. ವೇಣೂರಿನಲ್ಲಿ ಪ್ರತಿ ಮಂಗಳವಾರ ಮೇಳದ ಆಟ ನಡೆಯುತ್ತಿತ್ತು. (ವಾರದ ಸಂತೆಯ ದಿನ) ಅಲ್ಲದೆ ಬೇರೆ ದಿನಗಳಲ್ಲಿಯೂ ಪ್ರದರ್ಶನಗಳು ನಡೆಯುತ್ತಿತ್ತು. ಶಾಲಾ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಪ್ರದರ್ಶನ ನೋಡುವ ಅವಕಾಶ ಇತ್ತು.

ಪ್ರದರ್ಶನಗಳನ್ನು ನೋಡುತ್ತಾ ತಾನೂ ಕಲಾವಿದನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ಪುಂಡುವೇಷ ಮತ್ತು ಸ್ತ್ರೀವೇಷಧಾರಿಯಾಗಬೇಕೆಂದು ಬಯಸಿದ್ದರು. ನಾಟ್ಯ ಕಲಿಯುವ ತೀರ್ಮಾನವನ್ನೂ ಮಾಡಿದರು. ಬಾವನಾದ ಶ್ರೀ ಜಗದೀಶ ದೇವಾಡಿಗರು (ಅಕ್ಕನ ಗಂಡ) ಇವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. 1989ರಲ್ಲಿ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಯಾಗಿ ಕರ್ಗಲ್ಲು ಶ್ರೀ ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು.

ಜಾಹೀರಾತು 

ಕಲಿಕಾ ಕೇಂದ್ರದಲ್ಲಿ ಶಂಭಯ್ಯ ಭಟ್, ಮಹೇಶ ಮಣಿಯಾಣಿ. ಪಂಜ ಕಿರಣ್ ಕುಮಾರ್, ಸುಜಯ ಹೆಗ್ಡೆ ಕುತ್ಲೂರು ಇವರ ಸಹಪಾಠಿಗಳಾಗಿದ್ದರು. ಕಲಿಕಾ ಕೇಂದ್ರದ ಮೊದಲ ಪ್ರದರ್ಶನ ಪಂಚವಟಿ ಪ್ರಸಂಗದಲ್ಲಿ ಸೀತೆಯಾಗಿ ರಂಗಪ್ರವೇಶ. ಬಳಿಕ ರತಿಕಲ್ಯಾಣ ಪ್ರಸಂಗದ ಮನ್ಮಥ. ಬಾಲಲೀಲೆ ಪ್ರಸಂಗದ ಶ್ರೀಕೃಷ್ಣನಾಗಿ ಅಭಿನಯಿಸುವ ಅವಕಾಶವು ಸಿಕ್ಕಿತ್ತು. 

ಶ್ರೀ ವಾಮನ ಕುಮಾರರ ಮೊದಲ ತಿರುಗಾಟ ಶ್ರೀ ಧರ್ಮಸ್ಥಳ ಮೇಳದಲ್ಲಿ. ಕಲಿಕಾ ಕೇಂದ್ರದ ಸಹಪಾಠಿ ಪಂಜ ಕಿರಣ್ ಕುಮಾರರ ಜತೆ ಬಾಲಗೋಪಾಲರಾಗಿ ವ್ಯವಸಾಯ ಆರಂಭ. ಎರಡು ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ. ಹಿರಿಯ ಹೆಸರಾಂತ ಕಲಾವಿದರ ಒಡನಾಟ ಕಲಿಕೆಗೆ ಅವಕಾಶವಾಗಿತ್ತು. ಅದು ನನ್ನ ಭಾಗ್ಯ ಎಂದು ವಾಮನಕುಮಾರರು ಹೇಳುತ್ತಾರೆ. ಬಳಿಕ ಮೇಳದ ತಿರುಗಾಟ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು.

ಭಾಗವತರಾದ ಪೆರುವಡಿ ಶ್ರೀ ಶ್ಯಾಮ ಭಟ್ಟರ ಕೇಳಿಕೆಯಂತೆ ಕದ್ರಿ ಮೇಳಕ್ಕೆ ಸೇರಿದ್ದರು. ಖ್ಯಾತ ಹಿರಿಯ ಕಲಾವಿದ ಡಿ. ಮನೋಹರ ಕುಮಾರರ ಸಂಚಾಲಕತ್ವದ ಕದ್ರಿ ಮೇಳದಲ್ಲಿ 4 ವರ್ಷಗಳ ವ್ಯವಸಾಯ ಮಾಡಿದ್ದರು. ಈ ಸಂದರ್ಭದಲ್ಲಿ ವಾಮನ ಕುಮಾರರ ವೇಷಗಳನ್ನು ರಂಗದಲ್ಲಿ ಮೆರೆಸಿದವರು ಶ್ರೀ ಮನೋಹರ ಕುಮಾರರು. ತಿರುಮಲೆತ ತೀರ್ಥ ಪ್ರಸಂಗದ ತೇಜಾಕ್ಷಿ ಪಾತ್ರ. ಕೇವಲ ಒಂದು ಪದ್ಯದ ಪಾತ್ರ. ತೇಜಾಕ್ಷನ ಪಾತ್ರ ನಿರ್ವಹಿಸುತ್ತಿದ್ದ ಡಿ. ಮನೋಹರ ಕುಮಾರರು ಅವಕಾಶಗಳನ್ನಿತ್ತು ವಾಮನ ಕುಮಾರರ ತೇಜಾಕ್ಷಿ ಪಾತ್ರವನ್ನು ಮೆರೆಸಿದ್ದರು. (ಅಣ್ಣ-ತಂಗಿ ಪಾತ್ರ)

ಡಿ.ಮನೋಹರ ಕುಮಾರರ ಜತೆ ಕೋಟಿ- ಚೆನ್ನಯ, ಕಾಂತಾಬಾರೆ ಬೂದಬಾರೆ ಮೊದಲಾದ ಜೋಡಿ ಪಾತ್ರಗಳಲ್ಲಿ ಮಿಂಚಲು ಅವಕಾಶವಾಗಿತ್ತು. ಈ ಸಂದರ್ಭ ಕೊಕ್ಕಡ ಈಶ್ವರ ಭಟ್ ,ಮತ್ತು ಬಂಟ್ವಾಳ ಜಯರಾಮ ಆಚಾರ್ಯರ ಒಡನಾಟ ಕಲಿಕೆಗೆ ಅನುಕೂಲವಾಗಿತ್ತು. ಗೆಜ್ಜೆದ ಪೂಜೆ ಪ್ರಸಂಗದಲ್ಲಿ ನಾಗನಾಗಿ ಅಭಿನಯಿಸಿ ಖ್ಯಾತರಾದ ಮನೋಹರಕುಮಾರರು ವಾಮನಕುಮಾರರ ರವಿವರ್ಮನ ಪಾತ್ರವೂ ರಂಜಿಸುವಂತೆ ಸಹಕರಿಸಿದ್ದರು.

ಪುರಾಣ ಪ್ರಸಂಗಗಳಲ್ಲಿ ಸಿದ್ದಕಟ್ಟೆ ಶ್ರೀ ವಿಶ್ವನಾಥ ಶೆಟ್ಟರ ನಿರ್ದೇಶನ, ಸಹಕಾರಗಳು ವಾಮನ ಕುಮಾರರಿಗೆ ದೊರಕಿತ್ತು. ಅವರ ಜತೆ, ಜತೆಪಾತ್ರಗಳಲ್ಲಿ ರಂಜಿಸಿದರು. (ವಿಷ್ಣು-ಸುದರ್ಶನ, ಶ್ರೀರಾಮ-ತರಣಿಸೇನ ಮೊದಲಾದವುಗಳು). ಕದ್ರಿ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಬಳಿಕ ಶ್ರೀ ಕಿಶನ್ ಹೆಗ್ಡೆ ಅವರ ಸಂಚಾಲಕತ್ವದ ಮಂಗಳಾದೇವಿ ಮೇಳದಲ್ಲಿ. ಆರಂಭದಿಂದ ಕೊನೆ ತನಕ ಹದಿನೈದು ವರ್ಷ ಸದ್ರಿ ಮೇಳದಲ್ಲಿ ವ್ಯವಸಾಯ. ಖ್ಯಾತ ಕಲಾವಿದರ ಒಡನಾಟ ದೊರಕಿತ್ತು. ಖ್ಯಾತ ಪುಂಡುವೇಷಧಾರಿಯಾಗಿದ್ದ ಶ್ರೀ ಉದಯ ನಾವಡರೊಂದಿಗೆ ಜತೆ ವೇಷಗಳಲ್ಲಿ ರಂಜಿಸಿದ್ದರು.

ಬಾರ್ಕೂರ್ದ ಬಂಗಾರಿ ಪ್ರಸಂಗದಲ್ಲಿ ಉದಯ ನಾವಡರು ವೀರವರ್ಮನಾಗಿಯೂ, ವಾಮನ ಕುಮಾರರು ಕನಕವರ್ಮನಾಗಿಯೂ ಕೋಟಿ ಚೆನ್ನಯ ಪ್ರಸಂಗದಲ್ಲಿ ನಾವಡರು ಕೋಟಿ ಪಾತ್ರದಲ್ಲಿಯೂ ವಾಮನ ಕುಮಾರರು ಚೆನ್ನಯ ಪಾತ್ರದಲ್ಲೂ ಹೆಸರು ಗಳಿಸಿದ್ದರು. ಮಂಗಳಾದೇವಿ ಮೇಳದಲ್ಲಿ ಪದ್ಯಾಣ ಗಣಪತಿ ಭಟ್, ಪೊಲ್ಯ, ಶಬರಾಯರು, ಸತ್ಯನಾರಾಯಣ ಪುಣಿಂಚತ್ತಾಯ, ರವೀಂದ್ರ ಶೆಟ್ಟಿ, ಕಡಬ, ಉಪಾಧ್ಯಾಯರು, ಲಕ್ಷ್ಮೀಶ ಅಮ್ಮಣ್ಣಾಯ, ಪಡ್ರೆ ಶ್ರೀಧರ, ಪಡ್ರೆ ಆನಂದ, ದಾಸಪ್ಪ ರೈ, ಶಿವರಾಮ ಜೋಗಿ, ಕೊಳ್ತಿಗೆ, ಮನೋಹರ ಕುಮಾರ್, ರಾಧಾಕೃಷ್ಣ ನಾವಡ, ಅಂಬಾ ಪ್ರಸಾದ, ಸರಪಾಡಿ ಅಶೋಕ ಶೆಟ್ಟಿ, ಉದಯ ನಾವಡ, ಸಿದ್ದಕಟ್ಟೆ ಸದಾಶಿವ ಶೆಟ್ಟಿ, ಸೀತಾರಾಮ ಕುಮಾರ್, ಮವ್ವಾರು ಬಾಲಕೃಷ್ಣ, ವೇಣೂರು ಸದಾಶಿವ ಆಚಾರ್ಯ, ವೇಣೂರು ಸದಾಶಿವ ಕುಲಾಲ್ ಮೊದಲಾದವರ ಒಡನಾಟ ದೊರಕಿತ್ತು.

ಮಳೆಗಾಲದಲ್ಲಿ ಪುತ್ತೂರು ಶ್ರೀಧರ ಭಂಡಾರಿಗಳ ನೇತೃತ್ವದ ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯಲ್ಲಿ ಹತ್ತು ವರ್ಷ ಕಲಾಸೇವೆ ಮಾಡುವ ಅವಕಾಶವಾಗಿತ್ತು.(2008ರಿಂದ ತೊಡಗಿ) ಶ್ರೀಧರ ಭಂಡಾರಿ ಅವರ ನಿರ್ದೇಶನದಲ್ಲಿ ಪುರಾಣ ಪ್ರಸಂಗಗಳ ಅನುಭವವನ್ನೂ ಪಡೆದುಕೊಂಡಿದ್ದರು. ಅಲ್ಲದೆ ಈ ತಂಡದಲ್ಲಿ ಖ್ಯಾತ ಕಲಾವಿದರ ಒಡನಾಟವೂ ಪುರಾಣ ಪ್ರಸಂಗಗಳಲ್ಲಿ ವೇಷ ಮಾಡಲು ಸಹಕಾರಿಯಾಗಿತ್ತು.

ಪುರಾಣ ಪ್ರಸಂಗದ ಹೆಚ್ಚಿನ ಎಲ್ಲಾ ಪುಂಡುವೇಷ ಮತ್ತು ಸ್ತ್ರೀ ಪಾತ್ರಗಳಲ್ಲಿ ವಾಮನ ಕುಮಾರರು ಅಭಿನಯಿಸಿದ್ದಾರೆ. ಚಂಡಮುಂಡರು, ಬಬ್ರುವಾಹನ, ವಿಷ್ಣು, ಶ್ರೀಕೃಷ್ಣ, ಭಾರ್ಗವ, ಶ್ರೀರಾಮ, ಲಕ್ಷ್ಮಣ, ಶ್ವೇತಕುಮಾರ, ತ್ರಿಲೋಕಸುಂದರಿ, ಪದ್ಮಾವತಿ, ಲಕ್ಷ್ಮಿ ಅಲ್ಲದೆ ಅನೇಕ ಶೃಂಗಾರಕ್ಕೆ ಸಂಬಂಧಿಸಿದ ಸ್ತ್ರೀ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ವೇತಕುಮಾರ ಚರಿತ್ರೆ ಪ್ರಸಂಗದಲ್ಲಿ ಶ್ವೇತಕುಮಾರ, ತ್ರಿಲೋಕಸುಂದರಿ, ಸಿತಕೇತ, ರಂಭೆ ಈ ನಾಲ್ಕೂ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ ಕಲ್ಯಾಣ ಪ್ರಸಂಗದಲ್ಲಿ ಕಿರಾತನ ಪಾತ್ರವನ್ನೂ, ಪದ್ಮಾವತಿಯ ಪಾತ್ರವನ್ನೂ ಮಾಡಬಲ್ಲರು.

ಭೃಗುಲಾಂಛನ ಪ್ರಸಂಗದಲ್ಲಿ ನಿಷ್ನು ಮತ್ತು ಲಕ್ಷ್ಮಿ ಪಾತ್ರಗಳನ್ನು ಮಾಡಿದ ಅನುಭವಿ. ಸುದರ್ಶನ ವಿಜಯ ಪ್ರಸಂಗದಲ್ಲಿ ವಿಷ್ಣು, ಲಕ್ಷ್ಮಿ, ಸುದರ್ಶನ ಎಂಬ ಮೂರೂ ಪಾತ್ರಗಳನ್ನು ಮಾಡಿರುತ್ತಾರೆ. ಇದು ವಾಮನಕುಮಾರರ ಪ್ರತಿಭಾ ಸಾಮರ್ಥ್ಯ. ಪುರಾಣ ಪ್ರಸಂಗಗಳ ಪರಿಪೂರ್ಣ ಅನುಭವ ದೊರೆಯಲು ಪುತ್ತೂರು ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ ತಿರುಗಾಟ ಕಾರಣ ಎಂಬುದು ವಾಮನಕುಮಾರರ ಅಭಿಪ್ರಾಯ.

ಕಸೆ ಸ್ತ್ರೀ ವೇಷಗಳಲ್ಲೂ ವಾಮನ ಕುಮಾರರು ಕಾಣಿಸಿಕೊಂಡರು. ಮೀನಾಕ್ಷಿ, ಶಶಿಪ್ರಭೆ, ಭ್ರಮರಕುಂತಳೆ, ಪ್ರಮೀಳೆ, ಸ್ವಯಂಪ್ರಭೆ ಮೊದಲಾದ ಪಾತ್ರಗಳನ್ನೂ ನಿರ್ವಹಿಸಿದ್ದರು. ಶ್ರೀ ವಾಮನ ಕುಮಾರರು ಕಳೆದ ಎಂಟು ವರ್ಷಗಳಿಂದ ಹಿರಿಯಡಕ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಈಗ ಸದ್ರಿ ಮೇಳದ ಮ್ಯಾನೇಜರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಾಂಸಾರಿಕವಾಗಿಯೂ ಇವರು ತೃಪ್ತರು. ಇವರ ಪತ್ನಿ ಶ್ರೀಮತಿ ಆಶಾ ವಾಮನಕುಮಾರ್. ಗೃಹಣಿ. ಆಶಾ, ವಾಮನಕುಮಾರ್ ದಂಪತಿಗಳಿಗೆ ಇಬ್ಬರು ಮಕ್ಕಳು. ಪುತ್ರಿ ಕುಮಾರಿ ವಂಶಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಳೆ. ಪುತ್ರ ಮಾ| ಭುವನ 4ನೇ ತರಗತಿಯಲ್ಲಿ ಓದುತ್ತಿದ್ದಾನೆ. ವಾಮನಕುಮಾರರು ಮಕ್ಕಳಿಬ್ಬರಿಗೂ ಯಕ್ಷಗಾನ ಹೆಜ್ಜೆಗಾರಿಕೆ ಕಲಿಸಿದ್ದಾರೆ. ಮಕ್ಕಳು ಶಾಲಾ ಪ್ರದರ್ಶನಗಳಲ್ಲಿ ವೇಷ ಮಾಡಿರುತ್ತಾರೆ. ಮಕ್ಕಳಿಗೆ ಉಜ್ವಲ ಭವಿಷ್ಯವು ಸಿದ್ಧಿಸಲಿ. ಶ್ರೀ ವಾಮನಕುಮಾರರಿಂದ ಕಲಾ ಸೇವೆಯು ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು. 

ಲೇಖಕ: ರವಿಶಂಕರ್ ವಳಕ್ಕುಂಜ