Monday, August 31, 2026
Home Blog Page 301

ಮನೋಹರ್ ಕೆ. ಇವರಿಗೆ ಯಕ್ಷಚೇತನ ಪ್ರಶಸ್ತಿ

ಯಕ್ಷಗಾನ ಕಲಾರಂಗದ ಸಕ್ರಿಯ, ಹಿರಿಯ ಕಾರ್ಯಕರ್ತರಿಗಾಗಿ, ವಿಜಯ ಕುಮಾರ್ ಮುದ್ರಾಡಿಯವರು ಸ್ಥಾಪಿಸಿದ ಯಕ್ಷಚೇತನ ಪ್ರಶಸ್ತಿಯನ್ನು ಈ ಬಾರಿ ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ, ಸಂಸ್ಥೆಯ ಕೋಶಾಧಿಕಾರಿ ಮನೋಹರ ಕೆ. ಇವರಿಗೆ ನೀಡಲಾಗುವುದು.

ನಿಡಂಬೂರು ಯುವಕ ಮಂಡಲ ಅಧ್ಯಕ್ಷರಾಗಿ, ಕುತ್ಪಾಡಿ ಯಕ್ಷಗಾನ ಮಂಡಳಿಯಲ್ಲಿ ವೇಷಧಾರಿಯಾಗಿ ಹಾಗೂ ಯಕ್ಷಗಾನ ಕಲಾರಂಗದಲ್ಲಿ ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಿರವ ಮನೋಹರ ಕೆ. ಇವರಿಗೆ ನವಂಬರ್ 28, ಭಾನುವರ ರಾಜಾಂಗಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂಬುದಾಗಿ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಮಾಡಾವು ಕೊರಗಪ್ಪ ರೈಗಳಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ

ಮಾಡಾವು ಕೊರಗಪ್ಪ ರೈಗಳು ಈ ಬಾರಿಯ ಯಕ್ಷಗಾನ ಕಲಾರಂಗ ಕೊಡಮಾಡುವ ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾಡಾವು ಶ್ರೀ ಕೊರಗಪ್ಪ ರೈಗಳು ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಹೊಂದಿದವರು. 2021-22ನೇ ಸಾಲಿನದು ಪ್ರಾಯಶಃ ಇವರ 40ನೇ ತಿರುಗಾಟ. ಯಕ್ಷಗಾನದ ಪುಂಡುವೇಷಧಾರಿಯಾಗಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.    

ಶ್ರೀ ಕೊರಗಪ್ಪ ರೈಯವರು ಪುತ್ತೂರು ತಾಲೂಕು ಕೈಯ್ಯೂರು ಗ್ರಾಮದ ಸನಂಗಳ ಎಂಬಲ್ಲಿ 1955ನೇ ಇಸವಿ ಡಿಸೆಂಬರ್ 26ರಂದು ಜನಿಸಿದರು.  ತಂದೆ ಮಹಾಬಲ ರೈ. ತಾಯಿ ಶ್ರೀಮತಿ ಕಮಲಾ. ಇವರದು ಕೃಷಿಕ ಕುಟುಂಬ.  ಕೈಯ್ಯೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ವರೆಗೆ ಓದಿದ್ದರು.

ಮೊದಲ ತಿರುಗಾಟ 1972ರಿಂದ. ಕಲ್ಲಾಡಿ ವಿಠಲ ಶೆಟ್ಟರ ಸಂಚಾಲಕತ್ವದ ಕರ್ನಾಟಕ ಮೇಳದಲ್ಲಿ. ಕರ್ನಾಟಕ ಮೇಳದಲ್ಲಿ ಐದು ವರ್ಷಗಳ ತಿರುಗಾಟ. ಆ ಬಳಿಕ ಮುಂಬೈಯಲ್ಲಿ ಕೆಲವು ವರ್ಷಗಳ ಕಾಲ ಉದ್ಯೋಗಿಯಾಗಿದ್ದರು. ಮಾಡಾವು ಕೊರಗಪ್ಪ ರೈಗಳು 1984ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಹೇಮಾವತಿ ಜತೆ ವಿವಾಹ. ವಿವಾಹದ ಬಳಿಕ ಮುಂಬಯಿಗೆ ಗುಡ್ ಬೈ ಹೇಳಿ ಊರಿಗೆ ಮರಳಿದ್ದರು.

ಆ ಹೊತ್ತಿಗೆ ಶೇಖರ ಶೆಟ್ರು ಮುಂಬಯಿಯಿಂದ ಊರಿಗೆ ಮರಳಿದ್ದರು. ಅವರ ಸಂಚಾಲಕತ್ವದ ಬಪ್ಪನಾಡು ಮೇಳದಲ್ಲಿ 2 ವರ್ಷ ತಿರುಗಾಟ, ನಂತರ ಶೇಖರ ಶೆಟ್ರು  ಬೆಳ್ಮಣ್ ಮೇಳ ಆರಂಭಿಸಿದ್ದರು. 1987-88ರಲ್ಲಿ ಕದ್ರಿ ಮೇಳದಲ್ಲಿ ತಿರುಗಾಟ. ಕರ್ನೂರು ಕೊರಗಪ್ಪ ರೈಗಳ ಸಂಚಾಲಕತ್ವ, ಕದ್ರಿ ಮೇಳದಲ್ಲಿ ಎರಡು ತಿರುಗಾಟ. ಬಳಿಕ ಒಂದು ವರ್ಷ ಪುತ್ತೂರು ಶ್ರೀಧರ ಭಂಡಾರಿಗಳ ಕಾಂತಾವರ ಮೇಳದಲ್ಲಿ ತಿರುಗಾಟ. ಬಳಿಕ ಮೇಳದ ತಿರುಗಾಟ ನಿಲ್ಲಿಸಿ ಒಂದು ವರ್ಷ ಮನೆಯಲ್ಲಿಯೇ ಇದ್ದರು.

1993ರಲ್ಲಿ ಭಾಗವತರಾದ ಕುಬಣೂರು ಶ್ರೀಧರ ರಾಯರ ಬೇಡಿಕೆಯಂತೆ ಕೊರಗಪ್ಪ ರೈಗಳು ಕಟೀಲು ಮೇಳಕ್ಕೆ ಸೇರಿದ್ದರು.  ಕಟೀಲು ನಾಲ್ಕನೇ ಮೇಳ ಆರಂಭವಾದಾಗ ಆ ಮೇಳಕ್ಕೆ. ನಿರಂತರ 28 ವರ್ಷಗಳಿಂದ ಅದೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರು ಹಂತ ಹಂತವಾಗಿ ಮೇಲೇರಿಯೇ ಕಲಾವಿದನಾಗಿ ಗಟ್ಟಿಗರಾದವರು. ಪೂರ್ವರಂಗದಲ್ಲಿ ಬಾಲಗೋಪಾಲನಿಂದ ತೊಡಗಿ ನಿಧಾನವಾಗಿ, ದೃಢವಾಗಿ ಬೆಳೆದೇ ಈ ಎತ್ತರವನ್ನು ಏರಿದವರು.

ಬಾಲಲೀಲೆಯ ಶ್ರೀಕೃಷ್ಣ, ಮಾರ್ಕಂಡೇಯ, ಸರ್ವದಮನ, ಧ್ರುವ,ಪ್ರಹ್ಲಾದ, ಲಕ್ಷ್ಮಣ, ಸಿತಕೇತ, ಸುದರ್ಶನ, ಬಬ್ರುವಾಹನ, ಪರಶುರಾಮ, ಅಭಿಮನ್ಯು ಹೀಗೆ ಪುಂಡುವೇಷಕ್ಕೆ ಸಂಬಂಧಿಸಿದ ಎಲ್ಲಾ ಪಾತ್ರಗಳನ್ನು ಮಾಡಿದ್ದಾರೆ. ಪ್ರಸ್ತುತ ಅನೇಕ ವರ್ಷಗಳ ಕಾಲ ದೇವಿ ಮಹಾತ್ಮೆಯ ಬ್ರಹ್ಮ, ಚಂಡ ಮುಂಡರಾಗಿ ಅಭಿನಯಿಸಿದ್ದರು. ಈಗ ಶ್ರೀಕೃಷ್ಣ, ವಿಷ್ಣು ಮೊದಲಾದ ಮಾತುಗಾರಿಕೆ ಪ್ರಧಾನವಾದ ವೇಷಗಳನ್ನು ಮಾಡುತ್ತಾರೆ. ಕೊರಗಪ್ಪ ರೈಗಳು ಹಾಸ್ಯರಸಕ್ಕೆ ಸಂಬಂಧಿಸಿ ಕೆಲವು ಪಾತ್ರಗಳನ್ನೂ ಚೆನ್ನಾಗಿ ಮಾಡುತ್ತಾರೆ. ಶಿವಪ್ರಭ ಪರಿಣಯದ ಚಂದ್ರದ್ಯುಮ್ನ, ಯಶೋಮತಿ ಏಕಾವಳೀ ಪ್ರಸಂಗದ ವೀರಕೀರ್ತಿ, ಚಂದ್ರಹಾಸ ಪ್ರಸಂಗದ ಮದನ ಮೊದಲಾದ ಪಾತ್ರಗಳಿಗೆ ತನ್ನದೇ ಶೈಲಿಯಲ್ಲಿ ಕಲ್ಪನೆಯಿಂದ ಜೀವ ತುಂಬಿದ್ದಾರೆ. 

ಮಾಡಾವು ಕೊರಗಪ್ಪ ರೈಗಳನ್ನು ಅನೇಕ ಸಂಸ್ಥೆಗಳು ಸನ್ಮಾನಿಸಿವೆ. ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಒಟ್ಟು ಮೇಳದ ತಿರುಗಾಟ 38. ಆದರೂ ಯಕ್ಷಗಾನ ಕ್ಷೇತ್ರದಲ್ಲಿ 48 ವರ್ಷಗಳ ಅನುಭವಿ ಇವರು. ಅಳಿಕೆ ಪ್ರಶಸ್ತಿ, ಕದ್ರಿ ವಿಷ್ಣು ಪ್ರಶಸ್ತಿಯನ್ನು ಪಡೆದುದಲ್ಲದೆ ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣರ ಸಂಸ್ಮರಣೆಯ ರಜತ ಮಹೋತ್ಸವದ ಸಂದರ್ಭದಲ್ಲಿ ಸನ್ಮಾನಿತರಾಗಿದ್ದಾರೆ.

ಕಳೆದ ವರ್ಷ ಮುಂಬಯಿಯಲ್ಲಿ ಸ್ವರ್ಗೀಯ ಶ್ರೀ ಶೇಖರ್ ಶೆಟ್ಟಿ  ಬೆಳ್ಮಣ್ ಸಂಸ್ಮರಣಾ ಸಮಿತಿಯವರೂ ಸನ್ಮಾನಿಸಿರುತ್ತಾರೆ. ಮಾಡಾವು ಕೊರಗಪ್ಪ ರೈಗಳಿಗೆ ಯಕ್ಷಗಾನ ಕಲಾರಂಗದ ಈ ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ಅರ್ಹವಾಗಿಯೇ ಸಂದಿದೆ. 

ಅಕ್ಷಯಾಂಬರ, ಗಿರಿಜಾಕಲ್ಯಾಣ – ಧರ್ಮಸ್ಥಳ ಮೇಳದ ಆಟ Live (21.11.2021)

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಇಂದಿನ(21.112021) ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಧರ್ಮಸ್ಥಳದ ಯೂಟ್ಯೂಬ್ ಚಾನೆಲಿನಲ್ಲಿ ನೇರಪ್ರಸಾರ ಆಗುತ್ತಿದೆ. ಲಿಂಕ್ ಕೆಳಗಿದೆ. 

ಸಮಾಜಸ್ಪಂದಿಯಾದಾಗ ಮಾತ್ರ ಕಲೆಯ ಉಳಿವು-ಡಾ.ಸದಾನಂದ ಮಯ್ಯ

ಕಲೆ ಹಾಗೂ ಕಲಾವಿದರು ದೇಶಾದ್ಯಂತ ನಡೆಯುವ ವಿದ್ಯಮಾನಗಳಿಗೆ ಸ್ಪಂದಿಸುತ್ತ ತನ್ನ ಕೊಡುಗೆಯನ್ನು ಕೊಡುವುದೂ ಕೂಡಾ ಅತ್ಯವಶ್ಯ. ಇತ್ತೀಚೆಗೆ ಗಂಗೆಯ ಶುದ್ಧೀಕರಣದ ಮಾತು ದೇಶಾದ್ಯಂತ ಕೇಳುವಂತಾದ್ದು, ಆ ಪ್ರಯತ್ನವೂ ನಡೆಯುತ್ತಿರುವುದು, ಅದಕ್ಕೆ ಸರಿಯಾಗಿ ದೇವನದಿ ಗಂಗೆಯನ್ನು ಭುವಿಗೆ ತರುವಲ್ಲಿ ಭಗೀರಥ ಶ್ರಮ ಎಂತಾದ್ದು. ಅದರ ಪಾವಿತ್ರ್ಯತೆಯನ್ನು ಕಾಪಾಡಿ ಕೊಳ್ಳುವುದು ಕೂಡ ನಮ್ಮ ಜವಾಬ್ದಾರಿ ಈ ಅಂಶಗಳೆಲ್ಲವನ್ನೂ ಪ್ರೇರೆಪಿಸುವಂತೆ ಮಾಡುವಲ್ಲಿ ಗಂಗಾವತರಣ ಶುದ್ಧೀಕರಣ ಯಕ್ಷಪ್ರಸಂಗವಾಗಿ ರಂಗಸ್ಥಳದಲ್ಲಿ ಯಶಸ್ವೀಯಾಗಿ ಮೂಡಿಬಂದಿದೆ ಎಂದು ಕಲಾ ಪೋಷಕರು ಹಾಗೂ ಮಯ್ಯಾಸ್ ಬೆವರೇಜಸ್ ಮತ್ತು ಫುಡ್ ಪ್ರೊಡಕ್ಟ್ ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪಿ. ಸದಾನಂದ ಮಯ್ಯರು ಹೇಳಿದರು.


ಕಲಾಕದಂಬ ಆರ್ಟ್ ಸೆಂಟರ್ ಸಂಯೋಜನೆಯಲ್ಲಿ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ನೆರವಿನೊಂದಿಗೆ ಬೆಂಗಳೂರಿನ ಚಿಕ್ಕಲ್ಲಸಂದ್ರದ ಶ್ರೀ ಸಿದ್ಧಿಗಣಪತಿ ದೇವಾಲಯದ ಮನೋರಂಜಿನಿ ಸಭಾಂಗಣದಲ್ಲಿ ನಿನ್ನೆ ಸಂಜೆ (20.11.2021) ಡಾ ರಾಧಾಕೃಷ್ಣ ಉರಾಳರ ನಿರ್ದೇಶನದಲ್ಲಿ ಪ್ರದರ್ಶಿಸಿದ ಯಕ್ಷಗಾನ “ಗಂಗಾವತರಣ” ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತಾಡಿದ ಅವರು ಸಮಕಾಲೀನ ಬದಲಾವಣೆಗೆ ಯಾವುದು ಹೊಂದಿಕೊಳ್ಳುವುದೋ ಅದು ದೀರ್ಘ ಕಾಲ ಉಳಿಯುವುದಕ್ಕೆ ಸಾಧ್ಯ. ಯಕ್ಷಗಾನ ಕಲೆಯು ಕೂಡಾ ಕಳೆದಾರು ಶತಮಾನಗಳಿಂದ ಪ್ರದರ್ಶನಗೊಳ್ಳುತ್ತಲೇ ಬದಲಾವಣೆಗಳನ್ನು ಕಾಣುತ್ತ ಕಾಣುತ್ತ ಪ್ರೇಕ್ಷಕರನ್ನು ಮುಟ್ಟುವಲ್ಲಿ ತನ್ನದಾದೊಂದು ಶಕ್ತಿಯೇನೆಂದು ತೋರಿದೆ.

ಇಂದಿನ ಯುವ ಪೀಳಿಗೆ ಹಾಗೂ ಮುಂದಿನ ಜನಾಂಗದಲ್ಲೂ ಈ ಒಂದು ಕಲೆಯ ಬಗ್ಗೆ ಆಸಕ್ತಿಯನ್ನು ಕಾಪಾಡಿಕೊಳ್ಳುವ ಪ್ರಯತ್ನಗಳೂ ಕೂಡ ಆಗ ಬೇಕಿದೆ ಆ ನಿಟ್ಟಿನಲ್ಲಿ ಕಲಾಕದಂಬ ಸಂಸ್ಥೆ ತನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಯಕ್ಷಗಾನದ ಉಳಿವು ಇಂತಹ ಸಂಘ ಸಂಸ್ಥೆಗಳಿಂದ ಆಗ ಬೇಕಾಗಿದೆ. ಹೇಗೆ ನಾವು ತರಕಾರಿ ಹಾಗೂ ತಿನ್ನುವ ಪದಾರ್ಥಗಳನ್ನು ಕೆಡದಂತೆ ರಕ್ಷಣೆ ಮಾಡುತ್ತೇವೆಯೋ ಹಾಗೆ ನಮ್ಮ ನಾಡಿನ ಈ ಕಲೆಯು ಅಳಿಯದಂತೆ ಉಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮಕ್ಕಳಲ್ಲಿ ಈ ಒಂದು ಕಲಾಸಕ್ತಿಯನ್ನು ಬೆಳೆಸುವಲ್ಲಿ ಪೋಷಕರು ಆಸಕ್ತಿವಹಿಸುವುದು ತುಂಬಾ ಮುಖ್ಯವಾಗಿದೆ ಎಂದು ಯಕ್ಷಗಾನ ಪೋಷಕರು, ಕಲಾವಿದರು ಆದ ಶ್ರೀ ಜನಾರ್ಧನ ಹಂದೆ ತಮ್ಮ ಕಾಳಜಿಯ ನುಡಿಗಳನ್ನಾಡಿದರು.


ರಾಮೋಹಳ್ಳಿಯ ಆರೂಢ ಆಶ್ರಮದ ಶ್ರೀ ಆರೂಢ ಭಾರತಿ ಸ್ವಾಮೀಜಿಯವರು, ಶ್ರೀ ಸಿದ್ಧಿಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದಮೂರ್ತಿ ವೇದಿಕಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು. ಮುರಳೀಧರ ನಾವಡ ನಿರೂಪಣೆ ಮಾಡಿದರು. ವಿಶ್ವನಾಥ ಉರಾಳ, ರಾಜೇಶ್ ಆಚಾರ್ಯ ನೇಪಥ್ಯ ನಿರ್ವಹಣೆಯಲ್ಲಿದ್ದರು.

ಶಾಪಗ್ರಸ್ಥ ಸಗರ ಪುತ್ರರ ಪಾಪ ತೊಳೆದು, ಶುದ್ಧೀಕರಿಸಿ ಮೋಕ್ಷ ಕರುಣಿಸಿದ ಗಂಗೆಯನ್ನು ಸಂಪೂರ್ಣ ಶುದ್ಧೀಕರಿಸುವುದರ ಜೊತೆಗೆ ಇಡೀ ವ್ಯವಸ್ಥೆಯ ಶುದ್ಧೀಕರಣವೂ ಕೂಡಾ ಆಗಬೇಕಾದ್ದು ಮುಖ್ಯ ಅಲ್ಲದೇ ಸಮಾಜದ ಕೆಟ್ಟ ಮನಸುಗಳ ಶುದ್ಧೀಕರಣವಾದರೆ “ಗಂಗಾವತರಣ” ಅರ್ಥಪೂರ್ಣ ಆಗುವುದಕ್ಕೆ ಸಾಧ್ಯ ಎಂಬುದನ್ನು ರಂಗದಲ್ಲಿ ಭಾಗವಹಿಸಿದ ಕಲಾಕದಂಬ ಆರ್ಟ್ ಸೆಂಟರ್ ಕಲಾವಿದರಾದ ಸುಬ್ರಾಯ ಹೆಬ್ಬಾರ್, ನಾರಾಯಣ ಹೆಬ್ಬಾರ್,ಮನೋಜ್, ಡಾ. ರಾಧಾಕೃಷ್ಣ ಉರಾಳ,ಅಂಬರೀಷ ಭಟ್ಟ,ರವೀಶ್ ಹೆಗಡೆ,ಭರತ್ ಪರ್ಕಳ,ಅಜಿತ್ ಕಾರಂತ್,ಆದಿತ್ಯ ಹಾಲ್ಕೋಡ್,ಪ್ರಜ್ವಲ್ ಪರ್ಕಳ ಹಾಗೂ ಪೂಜಾ ಆಚಾರ್ಯ ಮೊದಲಾದ ಕಲಾವಿದರು ನಿರೂಪಿಸಿದರು.

‘ಯಕ್ಷಗಾನ ಕಲಾರಂಗ ಪ್ರಶಸ್ತಿ’ ಪ್ರಕಟ

ಪ್ರತೀ ವರ್ಷ ಸಂಸ್ಥೆಯು ಹಿರಿಯ ಸಾಧಕರ ಸ್ಮರಣಾರ್ಥ ಮತ್ತು ಗೌರವಾರ್ಥ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ತೆಂಕು ಬಡಗಿನ ಈ ಕೆಳಗಿನ 17 ಹಿರಿಯ ಕಲಾವಿದರು ಆಯ್ಕೆಯಾಗಿದ್ದಾರೆ.


ಡಾ. ಬಿ.ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಸುರೇಂದ್ರ ಆಲೂರು, ಕುಂದಾಪುರ
ಪ್ರೊ. ಬಿ.ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ : ಶಾಂತಾರಾಮ ಆಚಾರಿ, ಬ್ರಹ್ಮಾವರ
ನಿಟ್ಟೂರು ಸುಂದರ ಶೆಟ್ಟಿ- ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಸದಾಶಿವ ಕುಲಾಲ, ವೇಣೂರು
ಬಿ. ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಕೊರಗಪ್ಪ ರೈ, ಮಾಡಾವು
ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ : ಕೃಷ್ಣ ಜಿ. ನಾಯ್ಕ್, ಬೇಡ್ಕಣಿ
ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ : ದಿನಕರ ಗೋಖಲೆ, ಬೆಳ್ತಂಗಡಿ
ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ : ನಾರಾಯಣ ಶಬರಾಯ ಜಿ. ಎ., ಉಡುಪಿ
ದಶಾವತಾರಿ ಮಾರ್ವಿರಾಮಕೃಷ್ಣ ಹೆಬ್ಬಾರ್-ಭಾಗವತ ವಾದಿರಾಜ ಹೆಬ್ಬಾರ್ ಸ್ಮರಣಾರ್ಥ ಪ್ರಶಸ್ತಿ : ಬಿ. ಜನಾರ್ದನ ಗುಡಿಗಾರ, ಬೆಳ್ತಂಗಡಿ
ಶಿರಿಯಾರ ಮಂಜು ನಾಯ್ಕ್ ಸ್ಮರಣಾರ್ಥ ಪ್ರಶಸ್ತಿ : ಕೊಂಡದಕುಳಿ ರಾಮಚಂದ್ರ ಹೆಗಡೆ, ಕುಂಭಾಶಿ
ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ : ಕೃಷ್ಣ ಮೊಗವೀರ, ಮೊಳಹಳ್ಳಿ
ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ : ಬೋಳ್ಗೆರೆ ಗಜಾನನ ಭಂಡಾರಿ, ಹೊನ್ನಾವರ
ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ : ವಿಶ್ವೇಶ್ವರ ರಾವ್, ಕಟೀಲು
ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ : ನಿಟ್ಟೂರು ಸುಬ್ರಹ್ಮಣ್ಯ ಭಟ್, ಹೊಸನಗರ
ಐರೋಡಿ ರಾಮಗಾಣಿಗ ಸ್ಮರಣಾರ್ಥ ಪ್ರಶಸ್ತಿ : ಎ. ಸದಾನಂದ ಶೆಣೈ, ಕಮಲಶಿಲೆ
ಎಮ್. ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ : ಅಪ್ಪಕುಂಞ ಮಣಿಯಾಣಿ, ಕಾಸರಗೋಡು
ಶ್ರೀ ಕೋಳ್ಯೂರು ರಾಮಚಂದ್ರರಾವ್ ಗೌರವಾರ್ಥ ಪ್ರಶಸ್ತಿ : ರಾಜೀವ ಶೆಟ್ಟಿ, ಹೊಸಂಗಡಿ
ಶ್ರೀಮತಿ ಪ್ರಭಾವತಿ ವಿ. ಶೆಣೈ, ಶ್ರೀ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ : ಬಾಲಕೃಷ್ಣ ಶೆಟ್ಟಿ, ಮುಂಡಾಜೆ

ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 28 ಭಾನುವಾರ ಅಪರಾಹ್ನ 3 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪ್ರತಿಯೊಂದು ಪ್ರಶಸ್ತಿಯು 20,000 ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ನೀವಣೆ ಗಣೇಶ ಭಟ್ ನಿಧನ

ಹಿರಿಯ ವಿದ್ವಾಂಸ ನೀವಣೆ ಗಣೇಶ ಭಟ್ (80) 17.11.2021ರಂದು ರಾತ್ರಿ ಹುಬ್ಬಳ್ಳಿಯ ಮಗಳ ಮನೆಯಲ್ಲಿ ನಿಧನ ಹೊಂದಿದರು. ಅವರು ಪುತ್ರಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಪ್ರಸಿದ್ಧ ಪ್ರವಚನಕಾರ ಆಗಿದ್ದ ನೀವಣೆಯವರು ನೂರಾರು ಭಾಗವತ ಸಪ್ತಾಹ ಮಾಡಿದ್ದರು.

ಹರಿದಾಸರಾಗಿ, ಯಕ್ಷಗಾನ ಅರ್ಥಧಾರಿಯಾಗಿ, ಹವ್ಯಾಸಿ ವೇಷಧಾರಿಯಾಗಿ ಸಾಧನೆ ಮಾಡಿದ್ದರು. ಹಲವು ಉಪಯುಕ್ತ ಪುಸ್ತಕಗಳನ್ನು ಬರೆದಿದ್ದಾರೆ. ಉಡುಪಿಯ ಯಕ್ಷಗಾನ ಕಲಾರಂಗ ಎರಡು ವರ್ಷದ ಹಿಂದೆ ಅವರಿಗೆ ಪೆರ್ಲ ಕೃಷ್ಣ ಭಟ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಕೊಲ್ಲಂಗಾನ ಮೇಳದ ತಿರುಗಾಟ ಆರಂಭ


ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಮಂಡಳಿ,ಶ್ರೀ ಕ್ಷೇತ್ರ ಕೊಲ್ಲಂಗಾನ,

ಮೇಳದ 24ನೇ ವರ್ಷದ ತಿರುಗಾಟವು ಇದೇ ಬರುವ ನವಂಬರ್- 19- 2021ನೇ ಶುಕ್ರವಾರ, ತುಲಾ ಮಾಸ ಕಾರ್ತಿಕ ಹುಣ್ಣಿಮೆಯ ಶುಭ ದಿನದಂದು ಶ್ರೀ ಚಕ್ರ ಪೂಜೆಯೊಂದಿಗೆ ಪ್ರಾರಂಭವಾಗಲಿದೆ..

ತಾ. 19-11-2021- ಪ್ರಸಂಗ: ಅಶ್ವಮೇಧ
ತಾ.20-11-2021- ಸಂಜೆ 7ಕ್ಕೆ ಸರಿಯಾಗಿ
ಪ್ರಸಂಗ: ಗಂಧರ್ವ ಕನ್ನಿಕೆ

ಸ್ಥಳ:: ಶ್ರೀ ಕ್ಷೇತ್ರ ಕೊಲ್ಲಂಗಾನ

ಚಕ್ರೇಶ್ವರ ಪರೀಕ್ಷಿತ Live – ಇಂದು ಕುಡುಪುವಿನಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಆಟ

ಸಾಂದರ್ಭಿಕ ಚಿತ್ರ 

ಇಂದು 17.11.2021ರ ಬುಧವಾರ ರಾತ್ರಿ 7.30ಕ್ಕೆ ಸರಿಯಾಗಿ ಕುಡುಪು ಅನಂತಪದ್ಮನಾಭ ದೇವಸ್ಥಾನದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಚಕ್ರೇಶ್ವರ ಪರೀಕ್ಷಿತ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಹಿಮ್ಮೇಳ: ಪುತ್ತಿಗೆ ರಘುರಾಮ ಹೊಳ್ಳ, ರವಿಚಂದ್ರ ಕನ್ನಡಿಕಟ್ಟೆ, ಸುಬ್ರಹ್ಮಣ್ಯ ಶಾಸ್ತ್ರಿ ಮಣಿಮುಂಡ, ಪದ್ಮನಾಭ ,ಉಪಾಧ್ಯಾಯ, ಮುರಾರಿ ಕಡಂಬಳಿತ್ತಾಯ, ಮುರಾರಿ ಸುಬ್ರಹ್ಮಣ್ಯ ಭಟ್ ಪಂಜಿಗದ್ದೆ

ಹಾಸ್ಯ: ಬಂಟ್ವಾಳ ಜಯರಾಮ ಆಚಾರ್ಯ, ಸೀತಾರಾಮ್ ಕುಮಾರ್ ಕಟೀಲು. 

ಮುಮ್ಮೇಳ: ಪರೀಕ್ಷಿತ: ಸುಬ್ರಾಯ ಹೊಳ್ಳ  ಕಾಸರಗೋಡು,ಜನಮೇಜಯ: ಸುಣ್ಣಂಬಳ ವಿಶ್ವೇಶ್ವರ ಭಟ್, ಶಮೀಕ ಋಷಿ: ವಾಟೆಪಡ್ಪು ವಿಷ್ಣು ಶರ್ಮ, ಕಲಿಪುರುಷ: ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಇರಾವತಿ : ರವಿ ಅಲೆವೂರಾಯ ವರ್ಕಾಡಿ, ರಕ್ತಾಕ್ಷ: ಹರಿನಾರಾಯಣ ಭಟ್ ಎಡನೀರು, ಮಂತ್ರಿ: ಉಮೇಶ ಕುಪ್ಪೆಪದವು, ಸೇನಾಧಿಪತಿ: ಅಕ್ಷಯ ಸುವರ್ಣ,

ಜನಮೇಜಯನ ತಮ್ಮಂದಿರು: ರವಿ ಭಟ್ ನೆಲ್ಯಾಡಿ, ವೃಷಭ್ ಶೆಟ್ಟಿ, ದೇವೇಂದ್ರ: ಅರಳ ಗಣೇಶ್ ಶೆಟ್ಟಿ, ಶೃಂಗಿ: ಪ್ರೇಮರಾಜ್ ಕೊಯಿಲ, ತಕ್ಷಕ: ಲಕ್ಷ್ಮಣ ಕುಮಾರ್ ಮರಕಡ, ವನಪಾಲಕರು: ಚಿಂತನ್ ಆರ್.ಕೆ, ಚಿರಾಗ್ ಆರ್.ಕೆ, ಆಸ್ತೀಕ: ಮುಕ್ಕ ರಾಮಚಂದ್ರ, ಗುರುವಾಯಾರಪ್ಪ: ಶ್ರೀ ಸಂದೀಪ್ ಶೆಟ್ಟಿ ದೋಟ. 

ವೇಷಭೂಷಣ: ಶ್ರೀ ಗಣೇಶ ಕಲಾವೃಂದ, ಪೈವಳಿಕೆ. ಸಂಯೋಜನೆ: ಶ್ರೀಕೃಷ್ಣ ಯಕ್ಷಸಭಾ ಮಲ್ಲಿಕಟ್ಟೆ, ಕದ್ರಿ

live link

ಮೂಡಬಿದ್ರೆಯ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರಕ್ಕೆ ಈ ಬಾರಿಯ ಯಕ್ಷಗಾನ ಕಲಾರಂಗದ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿ

ಸಾಂದರ್ಭಿಕ ಚಿತ್ರ 

ಶಿಕ್ಷಣದೊಂದಿಗೆ ಯಕ್ಷಗಾನ ಕಲಿಕೆ ಹಾಗೂ ಪ್ರದರ್ಶನಗಳಿಗೆ ಕಳೆದ 12 ವರ್ಷಗಳಿಂದ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದ ಮೂಡಬಿದ್ರೆಯ ಡಾ. ಎಂ. ಮೋಹನ್ ಆಳ್ವರ ನೇತೃತ್ವದ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಉಡುಪಿಯ ಯಕ್ಷಗಾನ ಕಲಾರಂಗ ನೀಡುವ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಗೆ ಆಯ್ಕೆಯಾಗಿದೆ. ಉಭಯ ತಿಟ್ಟುಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಹಿಮ್ಮೇಳ ಹಾಗೂ ಮುಮ್ಮೇಳದ ಶಿಕ್ಷಣವನ್ನು ಮಾಸಿಕ ಶಿಷ್ಯವೇತನದೊಂದಿಗೆ ಕಲಿಸುತ್ತಾ, 2 ವರ್ಷಗಳ ಯಕ್ಷಗಾನ ಡಿಪ್ಲೊಮಾ ಕೋರ್ಸ್ ಅಳವಡಿಸಿದ ಏಕೈಕ ಶಿಕ್ಷಣ ಸಂಸ್ಥೆಯಾಗಿದೆ.

ಪ್ರಶಸ್ತಿಯು 50000/- ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 28, 2021 ಭಾನುವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಅದಮಾರು ಶ್ರೀಗಳ ಹಾಗೂ ಪೇಜಾವರ ಶ್ರೀಗಳ ಉಪಸ್ಥಿತಿಯಲ್ಲಿ ಜರಗಲಿದೆ ಎಂಬುದಾಗಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.