ಕಾಸರಗೋಡು ಸಮೀಪದ ಕುಂಬಳೆಯಲ್ಲಿ ಯುವಕನೊಬ್ಬ ಯುವತಿಯರನ್ನು ಸ್ಪರ್ಶಿಸುವ ಉದ್ದೇಶದಿಂದ ಅವರ ಜೊತೆ ಇರಲು ಬುರ್ಕಾ ಧರಿಸಿ ಸಿಕ್ಕಿಬಿದ್ದಿದ್ದಾನೆ. ಬಳಿಕ ಸಾರ್ವಜನಿಕರು ಅವನನ್ನು ಹಿಡಿದು ಹೊಡೆತದ ಸ್ಪರ್ಶ ನೀಡಿದ್ದಾರೆ.
ಈ ಘಟನೆ ಕಾಸರಗೋಡು ಜಿಲ್ಲೆಯ ಮಂಗಳೂರು – ಕಾಸರಗೋಡು ಹೆದ್ದಾರಿಯ ಕುಂಬಳೆ ಎಂಬಲ್ಲಿ ನಡೆದಿದೆ. ಈ ಯುವಕ ಬಸ್ಸಿನಲ್ಲಿ ಬುರ್ಕಾ ಹಾಕಿಕೊಂಡು ಯುವತಿಯರ ನಡುವೆ ಬಂದು ಕುಳಿತಿದ್ದ.
ಬಸ್ಸಿನಲ್ಲಿ ಕುಳಿತಿದ್ದ ಕಾಲೇಜು ಯುವತಿಯರ ನಡುವೆ ಈತ ಮುಸ್ಲಿಂ ಯುವತಿಯರಂತೆ ಬುರ್ಕಾ ಧರಿಸಿ ಪ್ರಯಾಣಿಸುತ್ತಿದ್ದ ಎಂದು ಹೇಳಲಾಗುತ್ತದೆ. ಗಾಳಿ ಬೀಸುತ್ತಿದ್ದುದರಿಂದ ಮುಖದ ಬಟ್ಟೆ ಹಾರಿದಾಗ ಬುರ್ಕಾ ಧರಿಸಿರೋದು ಹುಡುಗಿಯಲ್ಲ, ಅದು ಯುವಕ ಎಂದು ಪಕ್ಕದಲ್ಲಿದ್ದ ಯುವತಿಯರಿಗೆ ಗೊತ್ತಾಗಿದೆ.
ಬಳಿಕ ಕುಬಳೆಯಲ್ಲಿ ಬಸ್ಸು ನಿಲ್ಲುತ್ತಿದ್ದಂತೆ ವಿಷಯ ತಿಳಿದ ಸಾರ್ವಜನಿಕರು ಈ ಯುವಕನಿಗೆ ನಾಲ್ಕೇಟು ಬಿಗಿದಿದ್ದಾರೆ. ಬಳಿಕ ಕುಂಬಳೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಚಾರಣೆ ನಡೆಸಿ ಬಾಯಿ ಬಿಡಿಸಿದಾಗ ಆತನು ಪಶ್ಚಿಮ ಬಂಗಾಳದ ನಸೀಬುಲ್ ಎಂದು ತಿಳಿದುಬಂದಿದೆ, ಯುವತಿಯ ಜೊತೆ ಇರುವ ಬಯಕೆಯಿಂದ ತಾನು ಈ ಕೃತ್ಯ ಎಸಗಿರುವುದಾಗಿ ನಸೀಬುಲ್ ಹೇಳಿದ್ದಾನೆ.
ಹೊಡೆದ ಬಳಿಕ ಯುವಕನನ್ನು ಸಾರ್ವಜನಿಕರು ಕುಂಬಳೆ ಪೋಲೀಸರಿಗೆ ಅವರು ಬಂಧಿಸಿ ಮುಂದಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಅಸಾಧಾರಣ ಕೃತುಶಕ್ತಿ, ಪಾರಂಪರಿಕ ಕಲೆಯ ಪೂರ್ಣರೂಪದ ಸಾಕ್ಷಾತ್ಕಾರ, ಇದನ್ನು ಪೂರೈಸುವಲ್ಲಿ ಇರಬಹುದಾದ ಇಚ್ಛಾಶಕ್ತಿ. ಹತ್ತಿರ ಹತ್ತಿರ ಒಂದು ಶತಮಾನದಷ್ಟು ಸುದೀರ್ಘ ಅವಧಿಯ ನಿರಂತರ ಕಲಾ ಸೇವೆ. ಪ್ರಾತಿನಿಧಿಕವಾಗಿ ಈಗಲೂ ಹೊಸ ಹುಮ್ಮಸ್ಸು, ಜೀವಂತಿಕೆಯ ದ್ಯೋತಕವಾಗಿ ಇರತಕ್ಕ ಒಂದು ವಿಶಾಲ ವಟವೃಕ್ಷ. ವಟವೃಕ್ಷ ಎನ್ನುವ ಪದ ಬಳಕೆ ಯಾಕೆಂದರೆ, ಕಲೆಯಲ್ಲಿ ವ್ಯಸ್ತರಾದ, ಆರಾಧನೆಯೇ ಪ್ರಧಾನ ಲಕ್ಷ್ಯವಾದ ಪ್ರಭುದ್ಧ ಕಲಾವಿದರಿಗೆ ಹಾಗೆಯೇ ಕುತೂಹಲ ಮತ್ತು ಆಕರ್ಷಣೆ ಎಂಬ ನೆಲೆಯಲ್ಲಿ ತೊಡಗಿಕೊಂಡ ಅಭ್ಯಾಸಿಗಳಿಗೆ ನಿತ್ಯ ನಿರಂತರ ಆಶ್ರಯ, ಮಾರ್ಗದರ್ಶಿ ವ್ಯವಸ್ಥೆ.
ಈ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಒಂದು ಅದ್ಭುತವಾದ, ಕಲೋಪಾಸನೆಯನ್ನೇ ಪ್ರಧಾನ ಲಕ್ಷ್ಯವಾಗಿ ಹೊಂದಿದ ಒಂದು ವಿಶಿಷ್ಟವಾದ ಯಕ್ಷಗಾನ ಕಲಾ ಕೇಂದ್ರವನ್ನು ಪರಿಚಯಿಸುವ ಹೊಣೆಗಾರಿಕೆ ನನ್ನದು. ಇದು ವಿದ್ವಜ್ಜನ ಮಾನ್ಯವಾದ, ಕಲೆಯ ಸಾಕ್ಷಾತ್ಕಾರಕ್ಕಾಗಿ ಹಪಹಪಿಸುವ ಇದೀಗ ಕೆಲವು ವರ್ಷಗಳಿಂದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಕಲಾ ಕೇಂದ್ರವನ್ನು ಕೂಡಿಕೊಂಡಿರುವವ ಆಶ್ರಯ ತಾಣವೂ, ಮಾರ್ಗದರ್ಶೀ ಕೇಂದ್ರವೂ ಆಗಿರುವ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ.
ಯಕ್ಷಗಾನ ರಂಗದ ಆಚಾರ್ಯ ಪುರುಷರೆಂದೇ ಖ್ಯಾತಿಯನ್ನು ಪಡೆದ ಅಸಾಧಾರಣ ಸಾಧಕರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ದೂರದರ್ಶಿತ್ವ ಈ ಕಲಾಸಂಘದ ಸ್ಥಾಪನೆಗೆ ಪ್ರೇರಣೆ. ಮಾಸ್ತರರು ಬನಾರಿಗೆ ಬಂದು ಇಲ್ಲಿ ವಾಸ್ತವ್ಯ ಹೊಂದುವ ಮೊದಲು ಕೀರಿಕ್ಕಾಡು ಅವರ ಊರಾಗಿತ್ತು. ಶಾಲಾ ಅಧ್ಯಾಪಕರಾಗಿದ್ದ ಅವರು ಯಕ್ಷಗಾನದ ಬಗ್ಗೆ ಅತ್ಯುಚ್ಚ ಅಭಿಮಾನ ಹೊಂದಿದವರಾಗಿದ್ದರು.
ಅರ್ಥಗಾರಿಕೆಯಲ್ಲಿ ಹಲವರನ್ನು ತಯಾರುಗೊಳಿಸಿದ್ದರು. ಬನಾರಿಗೆ ಕುಟುಂಬದೊಂದಿಗೆ ಬಂದು ನೆಲೆಸಿದ ಸಂದರ್ಭದಲ್ಲಿ ಆಕಸ್ಮಿಕವಾಗಿ ಒಂದು ಸಾಲಿಗ್ರಾಮ ಶಿಲೆ ಅವರಿಗೆ ಸಿಗುತ್ತದೆ .ಇದು ವಿಷ್ಣುವಿನ ಸಾನಿಧ್ಯವನ್ನು ಹೊಂದಿರುವಂತಹದು. ಇದನ್ನು ಭಕ್ತಿ ಪುರಸ್ಸರವಾಗಿ ಪೂಜಿಸಲು ತೊಡಗುತ್ತಾರೆ. ಈಗ ನಾವು ಕಾಣುತ್ತಿರುವ ಬನಾರಿ ಶ್ರೀ ಗೋಪಾಲಕೃಷ್ಣ ದೇವರ ಸಾನಿಧ್ಯವನ್ನು ಹೊಂದಿರುವ ಕಲಾಮಂದಿರ.
ಮಾಸ್ತರರು ಬನಾರಿಗೆ ಬಂದು ನೆಲೆಸಿದ ಮೇಲೆ ಅವರ ಕಾರ್ಯಕ್ಷೇತ್ರ ಇನ್ನಷ್ಟು ವಿಸ್ತಾರವಾಗುತ್ತದೆ. ಯಕ್ಷಗಾನ ನಾಟ್ಯ ತರಗತಿ, ಅರ್ಥಗಾರಿಕೆಯಲ್ಲಿ ತರಬೇತಿ ಹೀಗೆ ಒಂದು ಕಲಾಸಂಬಂಧಿ ವಾತಾವರಣವನ್ನು ಉಂಟು ಮಾಡುತ್ತಾರೆ. ಶ್ರೀಯುತರು ಪುರಾಣಾಂತರ್ಗತ ಕಥಾನಕಗಳಿಗೆ ತಮ್ಮ ವಾಗ್ವೈಖರಿಯಿಂದ ಕೂಡಿದ ಅರ್ಥಗಾರಿಕೆಯ ಮೂಲಕ ಹೊಸ ದಿಸೆಯನ್ನು ಪರಿಚಯಿಸಿದವರು. ಹಲವು ಪ್ರಸಂಗಗಳಿಗೆ ಜೀವ ತುಂಬಿದವರು. ಅವರ “ಶಿವ ಪಂಚಾಕ್ಷರಿ ಮಹಿಮೆ “ಎಂಬ ಪ್ರಸಂಗ ದಾಖಲೆಯ ಪ್ರದರ್ಶನಗಳನ್ನು ಕಂಡಿದೆ ..ಒಂದು ಸಮೃದ್ಧ ಯಕ್ಷಗಾನ ಪರಿಸರಕ್ಕೆ ಅವರು ನಾಂದಿ ಹಾಡಿದರು.
ಮಾಸ್ತರರ ಶಿಷ್ಯ ವೃಂದವೂ ಯಕ್ಷಗಾನ ರಂಗಕ್ಕೆ ಒಂದು ಕೊಡುಗೆ ಆಗಿದ್ದಾರೆ .ಈ ಬಗ್ಗೆ ಹೇಳುವುದಿದ್ದರೆ ಯಕ್ಷರಂಗದ ಭೀಷ್ಮ ಎಂಬ ನೆಗಳ್ತೆಗೆ ಪಾತ್ರರಾದ ಶೇಣಿ ಗೋಪಾಲಕೃಷ್ಣ ಭಟ್ಟರು. ಇವರು ಮಾಸ್ತರರ ಶಿಷ್ಯರಾಗಿ ಪೌರಾಣಿಕ ಪಾತ್ರಗಳಿಗೆ ಹೊಸತೊಂದು ಆಯಾಮ ನೀಡಿದವರು. ಈಗಲೂ ಶೇಣಿ ಎನ್ನುವ ಎರಡಕ್ಷರದ ಪದ ಉಂಟು ಮಾಡುವ ಪ್ರಭಾವ ಕಲಾಪ್ರೇಮಿಗಳಿಗೆ ಒಂದು ಬೆರಗು, ವಿಸ್ಮಯ.
ಮಾಸ್ತರರ ಗರಡಿಯಲ್ಲಿ ಪಳಗಿದ ಮತ್ತೋರ್ವ ಪ್ರಸಿದ್ಧ ಕಲಾವಿದ ಕೇದಗಡಿ ಗುಡ್ಡಪ್ಪ ಗೌಡ. ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಹೊಸತೊಂದು ಶಕೆಯನ್ನು ತೆರೆದವರು.ಹಾಗೆಯೇ ಬಣ್ಣದ ವೇಷಧಾರಿ ಕೆ .ವಿ ನಾರಾಯಣ ರೈ, ಮುದಿಯಾರು ನಾರಾಯಣ ರೈ, ಹೀಗೆ ಹಲವು ಶಿಷ್ಯಂದಿರು ಮಾಸ್ತರರ ಗರಡಿಯಲ್ಲಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದವರು.
1943-1944ನೇ ಇಸವಿಯಲ್ಲಿ ಕೀರಿಕ್ಕಾಡು ಮಾಸ್ತರರ ದೂರದರ್ಶಿತ್ವದ ಫಲವಾಗಿ ಬನಾರಿ ಕಲಾಸಂಘದ ಆರಂಭ.ನಾಟ್ಯ, ಅರ್ಥಗಾರಿಕೆ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸಬೇಕು, ದುಶ್ಚಟಗಳಿಂದ ದೂರವಿರಬೇಕು ಎಂಬ ಆದೇಶ ಮಾಸ್ತರರದು. ಇಂತಹ ಕಲಾ ಕೇಂದ್ರದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಯಕ್ಷ ಲೋಕದಲ್ಲಿ ಹೊಸತೊಂದು ಸಾಧನೆಗೆ ಮುನ್ನುಡಿ ಬರೆದರು ಎಂಬುದು ಈಗ ಇತಿಹಾಸ.
ಮಾಸ್ತರರು ಕಲಾಮಂದಿರದ ಸಮಗ್ರ ಅಭಿವೃದ್ಧಿಯನ್ನು ಲಕ್ಷಿಸಿ ಕೈಗೊಂಡ ನಿರ್ಣಯಗಳು ಮಹತ್ವವಾದುದು ಎಂದರೆ ಉತ್ಪ್ರೇಕ್ಷೆಯಲ್ಲ. ಆಗ ಅವರು ಹಾಕಿಕೊಟ್ಟ ಭದ್ರ ತಳಹದಿ ಇಂದಿಗೂ ಕೂಡ ಬನಾರಿಯೆಂದಾಕ್ಷಣ ಅದ್ಬುತವಾದ ಒಂದು ಧನ್ಯತಾ ಭಾವ ನಮ್ಮಲ್ಲಿ ಮೂಡುತ್ತದೆ. ದೀರ್ಘಕಾಲ ಕಲಾಮಂದಿರವನ್ನು ವ್ಯವಸ್ಥಿತ ರೀತಿಯಲ್ಲಿ ಮುನ್ನಡೆಸಿದ ಮಾಸ್ತರರು ವಯೋ ಸಹಜವಾದ ಪ್ರತಿಕೂಲ ಪರಿಸ್ಥಿತಿಯಿಂದ ಕಾರ್ಯವೆಸಗಲು ಅಶಕ್ತರಾದಾಗ ಅವರ ಹಿರಿಯ ಮಗ ವನಮಾಲ ಕೇಶವ ಭಟ್ಟರು ಹೊಣೆಗಾರಿಕೆಯನ್ನು ತಮ್ಮ ಹೆಗಲಿಗೆ ತೆಗೆದುಕೊಳ್ಳುತ್ತಾರೆ. ಶ್ರೀಯುತರು ನೆಲ್ಲಿ ಕುಂಜೆ ಜತ್ತಪ್ಪ ರೈಗಳಿಂದ ಭಾಗವತಿಕೆಯನ್ನು ಅಭ್ಯಾಸ ಮಾಡಿದವರು. ಹಾಗಾಗಿ ಕಲಾಸಹಜವಾದ ಒಂದು ತುಡಿತ ಶ್ರೀಯುತರಲ್ಲಿ ಇದ್ದದ್ದು ವಿಶೇಷವಲ್ಲ.
ತಂದೆಯವರ ಸಕಾಲಿಕ ಮಾರ್ಗದರ್ಶನ ,ತನ್ನದೇ ಆದ ಒಳನೋಟ ಇವುಗಳಿಂದಾಗಿ ಕಲಾಮಂದಿರದಲ್ಲಿ ಮತ್ತದೇ ಹುರುಪು ,ಉತ್ಸಾಹಗಳಿಂದ ಕಲಾ ಚಟುವಟಿಕೆಗಳು ಗರಿಗೆದರಲು ತೊಡಗಿದವು. ಕೇಶವ ಭಟ್ಟರು ನಿಗರ್ವಿ, ಸರಳ ಸಜ್ಜನಿಕೆಯ ಎಲ್ಲರನ್ನು ವಿಶ್ವಾಸದಿಂದ ಕಾಣುವ ಅಂದರೆ “ವಸುದೈವ ಕುಟುಂಬಕಂ” ಎಂಬ ಮಾತಿಗೆ ನಿದರ್ಶನವಾಗಿ ಉಳ್ಳವರು. ಕಲಾಮಂದಿರದಲ್ಲಿ ಪ್ರತಿ ತಿಂಗಳು ತಾಳಮದ್ದಳೆ, ವರ್ಷಕೊಂದಾವರ್ತಿ ವಾರ್ಷಿಕೋತ್ಸವ ಇವು ಬಹಳ ಕಾಲದಿಂದ ನಡೆದುಕೊಂಡು ಬರುತ್ತಿರುವ ಒಂದು ಪರಿಪಾಠ.
ತಿಂಗಳ ತಾಳಮದ್ದಳೆ ಕೂಟದಲ್ಲಿ ಅಭ್ಯಾಸಿ ಕಲಾವಿದರು, ಜೊತೆಗೆ ನುರಿತ ಕಲಾವಿದರು ನಡೆಸಿಕೊಡುವ ಕಾರ್ಯಕ್ರಮ ಒಂದು ಮಾದರಿ ಎನ್ನಬಹುದು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಖ್ಯಾತನಾಮ ಕಲಾವಿದರನ್ನು ಗೌರವಿಸುವ ಒಂದು ಪರಿಪಾಠ ಬಹಳ ಹಿಂದಿನಿಂದಲೇ ಇದೆ. ಕೀರಿಕ್ಕಾಡು ಮಾಸ್ತರರ ಕಾಲಾನಂತರ ಕೀರಿಕ್ಕಾಡು ಪ್ರಶಸ್ತಿಯನ್ನು ಅಗ್ರಮಾನ್ಯ ಕಲಾವಿದರಿಗೆ ನೀಡುವ ಒಂದು ಸತ್ ಪರಂಪರೆ ಕಲಾಮಂದಿರದಲ್ಲಿ ಆರಂಭವಾಯಿತು. ಅದು ಕೀರಿಕ್ಕಾಡು ಪ್ರಶಸ್ತಿ ಎಂಬ ಹೆಸರಿನಲ್ಲಿ ಕೊಡಲ್ಪಡುತ್ತದೆ. ಪ್ರಸಿದ್ಧ ಕಲಾವಿದರಾದ ಕುಂಬಳೆ, ಶೇಣಿ, ವೆಂಕಟರಾಜ ಪುಂಚತ್ತಾಯ, ಕೋಳ್ಯೂರು, ಬಣ್ಣದ ಮಾಲಿಂಗ , ಡಾ!ಎಂ. ಪ್ರಭಾಕರ ಜೋಶಿ ,ವಿದ್ವಾನ್ ಉಮಾ ಕಾಂತ ಭಟ್ ಮೇಲುಕೋಟೆ ಮುಂತಾದ ಪ್ರಸಿದ್ಧ ಯಕ್ಷಗಾನ ಕಲಾವಿದರಿಗೆ ನೀಡಲಾಗಿದೆ.
ಸುಧೀರ್ಘ ಸಮಯದವರೆಗೆ ಬನಾರಿ ಕಲಾಮಂದಿರವನ್ನು ಉಚ್ಛ್ರಾಯ ಸ್ಥಿತಿಗೆ ತಂದು ಬನಾರಿ , ದೇಲಂಪಾಡಿ ಈ ಪರಿಸರದಲ್ಲಿ ಒಂದು ಸಾಂಸ್ಕೃತಿಕ ಲೋಕವನ್ನು ಅನಾವರಣಗೊಳಿಸಿದ ಶ್ರೀಯುತ ವನಮಾಲ ಕೇಶವ ಭಟ್ಟರು ಸ್ವಲ್ಪ ಸಮಯದ ಹಿಂದೆ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ಆದರೆ ಅವರು ಹಾಕಿಕೊಟ್ಟ ಆದರ್ಶ, ಮಾನವೀಯ ಮೌಲ್ಯಗಳು ಸದಾ ಜೀವಂತಿಕೆಯಲ್ಲಿ ನಮ್ಮ ಅನುಭವಕ್ಕೆ ಬರುತ್ತಿದೆ.
ಪ್ರಸ್ತುತ ಕಲಾಸಂಘವನ್ನು ಎತ್ತರಿಸಿ ಬಿತ್ತರಿಸುವ ಹೊಣೆಯನ್ನು ಸ್ವೀಕರಿಸಿದವರು ಕೀರಿಕ್ಕಾಡು ಮಾಸ್ತರರ ಸುಪುತ್ರ , ಖ್ಯಾತ ವೈದ್ಯರು, ಪ್ರಸಿದ್ಧ ಅರ್ಥಧಾರಿಗಳು ಆದ ಡಾ! ರಮಾನಂದ ಬನಾರಿಯವರು. ಶ್ರೀಯುತರು ಸಾಹಿತ್ಯಕ, ಸಾಂಸ್ಕೃತಿಕ ಹೀಗೆ ವಿಭಿನ್ನ ಸ್ತರಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ತೋರಿಸಿದವರು. ಬನಾರಿ ಕಲಾಮಂದಿರ ಈಗ ಸುವ್ಯವಸ್ಥಿತವಾಗಿದೆ. ಯಕ್ಷಗಾನ ಕಾರ್ಯಕ್ರಮಕ್ಕೆ ಹೊಂದಿಕೆಯಾಗುವ ರಂಗಸ್ಥಳ, ಕಲಾಪ್ರೇಕ್ಷಕರಿಗೆ ಆಸೀನರಾಗಲು ವ್ಯವಸ್ಥೆ, ಯಕ್ಷಗಾನ ಪ್ರಸಂಗ ಸಾಹಿತ್ಯ ,ಪ್ರಸಿದ್ಧ ಲೇಖಕರಿಂದ ಬರೆಯಲ್ಪಟ್ಟ ವಿಶಿಷ್ಟ ಕೃತಿಗಳು, ಅಧ್ಯಯನ ಯೋಗ್ಯ ವಾತಾವರಣ. ಈ ವಿಭಾಗದ ವಿದ್ವಾಂಸರ ಮುಕ್ತ ಮನದ ಮಾರ್ಗದರ್ಶನ ಹೀಗೆ ಕಲಾಮಂದಿರದ ವ್ಯಾಪ್ತಿ ವಿಸ್ತರಿಸಲ್ಪಟ್ಟಿದೆ.
ಡಾ. ಬನಾರಿಯವರು ಸ್ವತಹ ಪ್ರಸಿದ್ಧ ಅರ್ಥದಾರಿಯಾದ್ದರಿಂದ ಅರ್ಥಗಾರಿಕೆಯ ಸೂಕ್ಷ್ಮತೆಗಳಿಗೆ ಅವರ ಮಾರ್ಗದರ್ಶನ ಇದೆ ಎಂದು ನಂಬಿದ್ದೇನೆ. ಇದು ಕೀರಿಕ್ಕಾಡು ಮಾಸ್ತರರ ಪರಂಪರೆ. ಇದನ್ನು ಯಥಾ ರೀತಿ ಮುನ್ನಡೆಸುತ್ತಿದ್ದಾರೆ ಎಂಬುದು ನಮಗೂ ಧನ್ಯತೆ.
ಕೀರಿಕ್ಕಾಡು ಮಾಸ್ತರರ ಮತ್ತೋರ್ವ ಸುಪುತ್ರ ಶ್ರೀ ವಿಶ್ವ ವಿನೋದ ಬನಾರಿಯವರ ಉಲ್ಲೇಖ ಮಾಡದೆ ಇರಲು ಸಾಧ್ಯವಿಲ್ಲ. ಓರ್ವ ಖ್ಯಾತನಾಮ ಭಾಗವತರು. ಮೇಲಾಗಿ ಯಕ್ಷ ಗುರುಗಳು. ಭಾಗವತಿಕೆಯಲ್ಲಿ ಹಲವಾರು ಅಭ್ಯಾಸಿಗಳಿಗೆ ಮನ ಮುಟ್ಟುವಂತೆ ಭಾಗವತಿಕೆಯನ್ನು ಕಲಿಸಿದ ಓರ್ವ ನಿಷ್ಣಾತ ಗುರುಗಳು.
ಈಗ ಕಲೆ ವ್ಯಾವಹಾರಿಕವಾಗಿ ಮಾನವೀಯ ಮೌಲ್ಯಗಳಿಗೆ ಪ್ರಾಧಾನ್ಯತೆ ಸಿಗದ ಒಂದು ಸಂಧಿಕಾಲ.ಹಾಗಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಕಲಿಸುವಿಕೆ ಎನ್ನುವುದು ದೊಡ್ಡ ಭ್ರಮೆ. ಇಂತಹ ಕಾಲಘಟ್ಟದಲ್ಲಿ ಶ್ರೀಯುತ ಬನಾರಿಯವರು ಪ್ರತಿಫಲದ ನಿರೀಕ್ಷೆಯಿಲ್ಲದೆ ವಿದ್ಯಾರ್ಥಿಗಳ ಹಸಿವು, ಬಾಯಾರಿಕೆಯನ್ನು ತಣಿಸಿ ಉಚಿತವಾಗಿ ಕಲಿಸಿದ, ಕಲಿಸುತ್ತಿರುವ ಒಂದು ನಿದರ್ಶನ . ಪ್ರಾಯಶಃ ಯಕ್ಷರಂಗದಲ್ಲಿ ನನಗೆ ತಿಳಿದಂತೆ ಇಲ್ಲ. ಭಾಗವತಿಕೆ ಮಾತ್ರವಲ್ಲ ಅಭ್ಯಾಸಿಗಳಿಗೆ ಅರ್ಥವನ್ನು ತಿಳಿಹೇಳುವುದು ಇವರ ವಿಶೇಷತೆ. ಭಾಗವತಿಕೆಯಲ್ಲಿ ಶ್ರೀಯುತರ ಶಿಷ್ಯ ನಾನೆನ್ನಲು ನನಗೆಷ್ಟೋ ಅಭಿಮಾನ. ಲೆಕ್ಕಕ್ಕೆ ಸಿಗದ ಅವರ ಶಿಷ್ಯಂದಿರು ಬೇರೆಬೇರೆ ಕಲಾ ಸಂಬಂಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಿಶ್ವವಿನೋದ ಬನಾರಿಯವರು ಪ್ರಸ್ತುತ ಕಲಾಮಂದಿರದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಮ್ಮ ಬನಾರಿ ಕಲಾಸಂಘಕ್ಕೆ ಈಗ 80ರ ಸಂಭ್ರಮ. ಒಂದು ಮಾಗಿದ, ಪಕ್ವಗೊಂಡ ಕಲೆಯ ಅಸೀಮ ಸಾಧ್ಯತೆಗಳನ್ನು ವಿಸ್ತರಿಸಿದ, ಸಾರ್ಥಕತೆಯ ಭಾವದಲ್ಲಿ ವಿಹರಿಸುವ, ಒಂದು ಮಧುರ ಅನುಭೂತಿಯ ಸಂಕಲ್ಪ ಹೊಂದಿದ ಕಲಾಮಂದಿರ. 80 ವರ್ಷ ಓರ್ವ ವ್ಯಕ್ತಿಯ ಜೀವಿತದ ಪರಮೋಚ್ಚ ಸ್ಥಿತಿ ಎನ್ನಬಹುದು. ಸಿಂಹಾವಲೋಕನ ಕ್ರಮದಿಂದ ವ್ಯಕ್ತಿ ತನ್ನ ಜೀವಿತದಲ್ಲಿ ಅರ್ಜಿಸಿರಬಹುದಾದ ಸಾಧನೆಯನ್ನೋ ತನಗೆ ದಕ್ಕಿದ ಪ್ರಾಪ್ತಿಯನ್ನೋ ಮನನ ಮಾಡುವ ಒಂದು ವಿಶಿಷ್ಟ ಸನ್ನಿವೇಶ. ಹಾಗೆಯೇ ನಮ್ಮ ಕಲಾಮಂದಿರದ 80ರ ಹರೆಯದ ಈ ಸಂದರ್ಭದಲ್ಲಿ ಕಲಾಮಂದಿರ ಯಕ್ಷಗಾನ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ, ಕಲಾವಿದರಿಗೆ ಮಾರ್ಗದರ್ಶಿ ಮೇಲ್ಪಂಕ್ತಿಯನ್ನು ಹಾಕಿ ಕೊಟ್ಟ ಒಂದು ಅನನ್ಯತೆ, ಒಂದು ಸಮಗ್ರ ಯಕ್ಷರಂಗ ಭೂಮಿಯ ನಿರಂತರತೆಯನ್ನು ಕಾಯ್ದುಕೊಳ್ಳುವಲ್ಲಿ ಕಲಾಮಂದಿರದ ಪಾತ್ರ ಬಹಳ ಮುಖ್ಯವಾಗುತ್ತದೆ.
80ರ ಸಂಭ್ರಮದ ವಾರ್ಷಿಕೋತ್ಸವವನ್ನು ಕಲೋತ್ಸವವಾಗಿ ಒಂದು ಇಡೀ ದಿನದ ಕಾರ್ಯಕ್ರಮವಾಗಿ ದಿನಾಂಕ 31-08-2024ರಂದು ವಿಜೃಂಭಣೆಯಿಂದ ಆಚರಿಸಲಾಯಿತು. ಹಿರಿಯ ವಿದ್ವಾಂಸ, ತಾಳಮದ್ದಳೆ ಅರ್ಥಧಾರಿ ಕೆರೆಕೈ ಉಮಾಕಾಂತ ಭಟ್ಟರಿಗೆ ಕೀರಿಕ್ಕಾಡು ಪಶಸ್ತಿಯನ್ನು ಪ್ರದಾನಮಾಡಲಾಯಿತು. ಅಧ್ಯಕ್ಷತೆಯನ್ನು ಡಾ. ಶ್ರೀಪತಿ ಕಲ್ಲೂರಾಯ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸನ್ಮಾನ್ಯ ಶಾಸಕರು ಕುಮಾರಿ ಭಾಗೀರಥಿ ಮುರುಳ್ಯ ಆಗಮಿಸಿದ್ದರು. ಶ್ರೀ ಗಣರಾಜ ಕುಂಬ್ಳೆ ಅಭಿನಂದನೆ ಮಾಡಿ, ಶ್ರೀ ಉಜಂಪಾಡಿ ನಾರಾಯಣ ನಾಯಕ್ ಶುಭ ಹಾರೈಸಿದರು. ಹಾಗೂ ಆ ದಿನ ಯಕ್ಷಗಾನ ತಾಳಮದ್ದಳೆಗಳು, ಬಯಲಾಟ ಪ್ರಸಂಗಗಳು, ಹಾಗೂ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಇದೀಗ 80ರ ಸಂಭ್ರಮದ ಶುಭವಸರದಲ್ಲಿ ನವಂಬರ್ ತಿಂಗಳ ದಿನಾಂಕ 30 ರಂದು ಶನಿವಾರ ಬನಾರಿ ಕಲಾಮಂದಿರದಲ್ಲಿ ವಿಶೇಷ ಕಾರ್ಯಕ್ರಮವು ನಡೆಯಲಿದ್ದು ಈ ಸಂದರ್ಭದಲ್ಲಿ ಕೀರಿಕ್ಕಾಡು ಪುರಸ್ಕಾರ ಪ್ರದಾನ ಮತ್ತು ಅರೋಗ್ಯ ವರ್ಧನೆಗೆ ಸುಲಭ ಸೂತ್ರಗಳು- ಸರಳ ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಇತ್ಯಾದಿ ಉಚಿತ ತರಬೇತಿ ಪ್ರಾತಿಕ್ಷಿಕೆ ನಡೆಯಲಿರುವುದು.
ಈ ಕೀರಿಕ್ಕಾಡು ಪುರಸ್ಕಾರವನ್ನು ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಅಂತರಾಷ್ಟ್ರೀಯ ಯೋಗ ತೀರ್ಪುಗಾರರು, ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರಿಗೆ ನೀಡಲಾಗುವುದು. ಸಭಾಧ್ಯಕ್ಷತೆಯನ್ನು ಶ್ರೀ ಜಯಪ್ರಕಾಶ್ ತೊಟ್ಟೆತೋಡಿ, ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕ ಇವರು ವಹಿಸಲಿದ್ದಾರೆ. ಡಾ!ರಮಾನಂದ ಬನಾರಿಯವರ ಉಪಸ್ಥಿತಿ, ಗಣ್ಯರ ಸಮಕ್ಷಮದಲ್ಲಿ ಈ ಕಾರ್ಯಕ್ರಮದ ಜೊತೆಗೆ ತಾಳಮದ್ದಳೆ ಸಹಿತ ಮೂಡಿ ಬರಲಿದೆ.
ಬನಾರಿ ಕಲಾಮಂದಿರವು ಕಲಾ ಕ್ಷೇತ್ರಕ್ಕೆ ಅನುಪಮವಾದ ಅಸದೃಶವಾದ ಕೊಡುಗೆಯನ್ನು ನೀಡಿದೆ. ಕಲೆಯನ್ನು ಕಲೆಯಲ್ಲಿ ವ್ಯಸ್ತರಾಗುವ, ಕಲೆಯ ಆರಾಧನೆಯಲ್ಲಿ ತೊಡಗಿಕೊಂಡವರಿಗೆ ಇನ್ನಷ್ಟು ಸಮೃದ್ಧವಾದ ಆಶ್ರಯ ಒದಗಿ ಬರಲಿ, ಈ ಸಂಸ್ಥೆ ಶತಮಾನೋತ್ತರ ಕಾಲದಲ್ಲಿ ಬೆಳಗಲಿ ಎಂದು ನಮ್ಮೆಲ್ಲರ ಆಶಯ.
ಪ್ರಧಾನಿ ನರೇಂದ್ರ ಮೋದಿ ಪಕ್ಕದಲ್ಲಿ ಮಹಿಳಾ ಕಮಾಂಡೋ ಇರುವ ಚಿತ್ರವೊಂದು ವೈರಲ್ ಆಗಿದೆ.
ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಮಹಿಳಾ ಕಮಾಂಡೋವನ್ನು ತೋರಿಸುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಟಿ-ರಾಜಕಾರಣಿ ಕಂಗನಾ ರನೌತ್ ಸೇರಿದಂತೆ ಹಲವಾರು ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮಹಿಳಾ ಕಮಾಂಡೋ SPG (ವಿಶೇಷ ಸಂರಕ್ಷಣಾ ಗುಂಪು) ಯ ಒಂದು ಭಾಗವಾಗಿದೆ ಎಂದು ಹಲವರು ಊಹಾಪೋಹ ಮಾಡುವುದರೊಂದಿಗೆ, ಮಹಿಳಾ ಅಧಿಕಾರಿಯ ಗುರುತು ಮತ್ತು ಅವರ ಸೇವೆಯ ಶಾಖೆಯು ತಿಳಿದುಬಂದಿಲ್ಲ.
ಮಹಿಳಾ ಕಮಾಂಡೋಗಳು ವರ್ಷಗಳಿಂದ ಎಸ್ಪಿಜಿಯ ಭದ್ರತಾ ಚೌಕಟ್ಟಿನ ಭಾಗವಾಗಿದ್ದಾರೆ. ಈ ಫೋಟೋ ಸಂಸತ್ತಿನದ್ದು, ಅಲ್ಲಿ ಮಹಿಳಾ SPG ಕಮಾಂಡೋಗಳು ನೆಲೆಸಿದ್ದಾರೆ.
ಈ ಕಮಾಂಡೋಗಳನ್ನು ಸಾಮಾನ್ಯವಾಗಿ ಮಹಿಳಾ ಸಂದರ್ಶಕರನ್ನು ಪರೀಕ್ಷಿಸಲು ಗೇಟ್ಗಳಲ್ಲಿ ನಿಯೋಜಿಸಲಾಗುತ್ತದೆ ಮತ್ತು ಆವರಣಕ್ಕೆ ಪ್ರವೇಶಿಸುವ ಅಥವಾ ಹೊರಹೋಗುವ ಜನರನ್ನು ಮೇಲ್ವಿಚಾರಣೆ ಮಾಡುವಲ್ಲಿಯೂ ತೊಡಗಿಸಿಕೊಂಡಿದ್ದಾರೆ.
2015 ರಿಂದ, ಎಸ್ಪಿಜಿಯ ಕ್ಲೋಸ್ ಪ್ರೊಟೆಕ್ಷನ್ ಟೀಮ್ನಲ್ಲಿ (ಸಿಪಿಟಿ) ಮಹಿಳೆಯರನ್ನೂ ಸೇರಿಸಲಾಗಿದೆ.
ಪ್ರಸ್ತುತ, ಎಸ್ಪಿಜಿ ಸುಮಾರು 100 ಮಹಿಳಾ ಕಮಾಂಡೋಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಅವರು ನಿಕಟ ರಕ್ಷಣೆ ಪಾತ್ರಗಳು ಮತ್ತು ಸುಧಾರಿತ ಭದ್ರತಾ ಸಂಪರ್ಕ ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸುತ್ತಾರೆ.
Woman Commando in PM's SPG!
From Agniveer to Fighter pilots, from Combat Positions to Commando in Prime Minister's SPG, the participation of women in the armed forces has increased significantly and women are leading from the front.
ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಶಿಕ್ಷಣಾರ್ಥಿಗಳಿಗೆ ಮುಟ್ಟಿನ ರಜೆ ಮತ್ತು ಶನಿವಾರದ ರಜೆಯನ್ನು ಕೇರಳ ರಾಜ್ಯ ಶಿಕ್ಷಣ ಸಚಿವ ವಿ ಶಿವನ್ಕುಟ್ಟಿ ಘೋಷಿಸಿದ್ದಾರೆ.
ಹಿಂದೆ, ಶನಿವಾರವನ್ನು ಕೆಲಸದ ದಿನಗಳು ಎಂದು ಪರಿಗಣಿಸಲಾಗುತ್ತಿತ್ತು. ಐಟಿಐಗಳಲ್ಲಿ ಮಹಿಳಾ ತರಬೇತಿ ಪಡೆಯುವವರು ಈಗ ಪ್ರತಿ ತಿಂಗಳು ಎರಡು ದಿನಗಳ ಋತುಚಕ್ರದ ರಜೆಗೆ ಅರ್ಹರಾಗಿರುತ್ತಾರೆ.
ಶನಿವಾರದ ರಜೆಯಿಂದಾಗಿ ಕಳೆದುಹೋದ ತರಬೇತಿ ಸಮಯವನ್ನು ಸರಿದೂಗಿಸಲು, ಐಟಿಐ ಶಿಫ್ಟ್ಗಳನ್ನು ಮರುಹೊಂದಿಸಲಾಗಿದೆ. ಮೊದಲ ಪಾಳಿಯು ಈಗ 7:30 AM ನಿಂದ 3:00 PM ವರೆಗೆ ಮತ್ತು ಎರಡನೇ ಪಾಳಿ 10:00 AM ನಿಂದ 5:30 PM ವರೆಗೆ ನಡೆಯುತ್ತದೆ.
ಶಿಕ್ಷಣಾರ್ಥಿಗಳಿಗೆ ಶನಿವಾರ ರಜೆಯಿದ್ದರೂ, ಈ ದಿನಗಳನ್ನು ಪಠ್ಯೇತರ ಚಟುವಟಿಕೆಗಳಿಗೆ ಮತ್ತು ಅವರಿಗೆ ಅಗತ್ಯವಿರುವವರಿಗೆ ಅಲ್ಪಾವಧಿಯ ತರಬೇತಿ ಕೋರ್ಸ್ಗಳಿಗೆ ಇನ್ನೂ ಬಳಸಿಕೊಳ್ಳಬಹುದು.
ಇಂದು ಮಹಿಳೆಯರು ಹೆಚ್ಚಿನ ಕೌಶಲ್ಯ ಮತ್ತು ದೈಹಿಕವಾಗಿ ಬೇಡಿಕೆಯಿರುವ ವ್ಯಾಪಾರಗಳು ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಈ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಐಟಿಐಗಳಲ್ಲಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಎರಡು ದಿನಗಳ ಋತುಚಕ್ರದ ರಜೆ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
25 ವರ್ಷದ ಏರ್ ಇಂಡಿಯಾ ಪೈಲಟ್ ಸೋಮವಾರ ಬೆಳಗ್ಗೆ ಮುಂಬೈನ ಅಂಧೇರಿಯಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆಗಾಗಿ ದೆಹಲಿಯಲ್ಲಿ ಬಂಧನಕ್ಕೊಳಗಾದ ಆಕೆಯ 27 ವರ್ಷದ ಗೆಳೆಯ, ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರಿ ಆಹಾರವನ್ನು ಸೇವಿಸಿದ್ದಕ್ಕಾಗಿ ಆಕೆಯನ್ನು ಅವಮಾನಿಸಿದ್ದಾನೆ ಎಂದು ಆಕೆಯ ಕುಟುಂಬ ಹೇಳಿಕೊಂಡಿದೆ.
ಪೊಲೀಸರ ಪ್ರಕಾರ, ಸೃಷ್ಟಿ ತುಲಿ ಉತ್ತರ ಪ್ರದೇಶದ ಗೋರಖ್ಪುರಕ್ಕೆ ಸೇರಿದವಳು ಮತ್ತು ಆದಿತ್ಯನಿಂದ ನಿಂದನೆಗೆ ಒಳಗಾಗಿದ್ದಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಹೋರಾಡುತ್ತಿದ್ದಳು.
ಗುರುಗ್ರಾಮ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಂಸಾಹಾರ ಸೇವಿಸಿದ್ದಕ್ಕಾಗಿ ಆದಿತ್ಯ ಅವಳನ್ನು ಇತರರ ಮುಂದೆ ಅವಮಾನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಆದಿತ್ಯ ಆಕೆಯನ್ನು ಅರ್ಧ ದಾರಿಯಲ್ಲಿ ಬಿಟ್ಟು ಮನೆಗೆ ತೆರಳಿದ್ದಾನೆ.
ಸೃಷ್ಟಿ ಭಾನುವಾರ ಸಂಜೆ ಕೆಲಸ ಮುಗಿಸಿ ವಾಪಸ್ ಬಂದಾಗ ಮನೆಯಲ್ಲಿದ್ದ ಆದಿತ್ಯ ಎಂಬಾತನ ಜತೆ ಜಗಳವಾಡಿದ್ದಾಳೆ. ಬಳಿಕ ಸೋಮವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆದಿತ್ಯ ದೆಹಲಿಗೆ ತೆರಳಿದ್ದಾರೆ
ಸೃಷ್ಟಿ ನಂತರ ಅವನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಳು, ಕೂಡಲೇ ಆದಿತ್ಯ ಆಕೆಯ ಮನೆಗೆ ಮರಳಿದ. ಆದರೆ, ಆಕೆಯ ಮನೆ ತಲುಪಿದಾಗ ಬಾಗಿಲು ಹಾಕಿರುವುದು ಕಂಡು ಕೂಗಿದರೂ ಆಕೆ ಪ್ರತಿಕ್ರಿಯಿಸಲಿಲ್ಲ.
ಆದಿತ್ಯ ಕೀ ಮೇಕರ್ ಸಹಾಯದಿಂದ ಬೀಗ ಒಡೆದು ನೋಡಿದಾಗ ಆಕೆ ಪ್ರಜ್ಞಾಹೀನಳಾಗಿದ್ದಳು. ಸೃಷ್ಟಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವಳು ಸಾವನ್ನಪ್ಪಿದ್ದಾಳೆ ಎಂದು ಘೋಷಿಸಲಾಯಿತು.
ಆಕೆಯ ಕುಟುಂಬ ಸದಸ್ಯರು ಆದಿತ್ಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆತ ಅವಳನ್ನು ನಿಂದಿಸುತ್ತಿದ್ದ ಎಂದು ಆರೋಪಿಸಿದ್ದಾರೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು.
ಸೃಷ್ಟಿಯ ಬ್ಯಾಂಕ್ ಖಾತೆಯಿಂದ ಆದಿತ್ಯಗೆ ಕಳೆದ ತಿಂಗಳು 65 ಸಾವಿರ ರೂಪಾಯಿ ವ್ಯವಹಾರ ನಡೆದಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಸೃಷ್ಟಿಯು ಕತ್ತು ಹಿಸುಕಿ ಸಾವನ್ನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಪೈಲಟ್ ಕೊಠಡಿಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ
ಆದಿತ್ಯನೊಡನೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವನ್ನು ಹೇಳಿದಾಗ ಆದಿತ್ಯ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ ಎಂದು ಸೃಷ್ಟಿಯ ಚಿಕ್ಕಪ್ಪ ವಿವೇಕ್ ಪ್ರಶ್ನಿಸಿದ್ದಾರೆ.
ಆದಿತ್ಯ ಅಪರಾಧ ನಡೆದ ಸ್ಥಳವನ್ನು ವಿರೂಪಗೊಳಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಮನೆ ಯಥಾಸ್ಥಿತಿಯಲ್ಲಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಆದಿತ್ಯನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇಂದು ಮುಂಜಾನೆ ಟ್ರಕ್ಗೆ ಸ್ಕಾರ್ಪಿಯೊ ಎಸ್ಯುವಿ ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ
ಆಗ್ರಾ-ಲಖನೌ ಎಕ್ಸ್ಪ್ರೆಸ್ವೇಯಲ್ಲಿ ಇಂದು ಮುಂಜಾನೆ ಟ್ರಕ್ಗೆ ಸ್ಕಾರ್ಪಿಯೊ ಎಸ್ಯುವಿ ಡಿಕ್ಕಿ ಹೊಡೆದ ಪರಿಣಾಮ ಐವರು ವೈದ್ಯರು ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸೈಫೈನಲ್ಲಿರುವ ಉತ್ತರ ಪ್ರದೇಶ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ತರಬೇತಿ ಪಡೆದ ವೈದ್ಯರು, ಲಕ್ನೋದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ
ಇಂದು ಮುಂಜಾನೆ 3.30ರ ಸುಮಾರಿಗೆ ಅವರು ಪ್ರಯಾಣಿಸುತ್ತಿದ್ದ ಸ್ಕಾರ್ಪಿಯೋ ಎಸ್ಯುವಿ ನಿಯಂತ್ರಣ ತಪ್ಪಿ ಡಿವೈಡರ್ ಮುರಿದು ಎದುರುಗಡೆಯಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ವರದಿಗಳ ಪ್ರಕಾರ, ಚಾಲಕನು ಡ್ರೈವಿಂಗ್ ಮಾಡುತ್ತಿದ್ದಾಗ ನಿದ್ರಿಸಿದನು, ಇದು ಮಾರಣಾಂತಿಕ ಅಪಘಾತಕ್ಕೆ ಕಾರಣವಾಯಿತು.
ಅಪಘಾತದ ನಂತರ ವೈದ್ಯರನ್ನೆಲ್ಲಾ ಆಸ್ಪತ್ರೆಗೆ ಸಾಗಿಸಿದರು ಮತ್ತು ಅವರಲ್ಲಿ ಐವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಉಳಿದ ಒಬ್ಬರ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಲಿಯಾದವರನ್ನು ಡಾ ಅನಿರುದ್ಧ್ ವರ್ಮಾ, ಡಾ ಸಂತೋಷ್ ಕುಮಾರ್ ಮೌರ್ಯ, ಡಾ ಜೈವೀರ್ ಸಿಂಗ್, ಡಾ ಅರುಣ್ ಕುಮಾರ್ ಮತ್ತು ಡಾ ನರದೇವ್ ಎಂದು ಗುರುತಿಸಲಾಗಿದೆ.
ತಿರ್ವಾ ವಲಯದ ಪೊಲೀಸ್ ಅಧಿಕಾರಿ ಪ್ರಿಯಾಂಕಾ ಬಾಜಪೈ ಮಾತನಾಡಿ, ಇಂದು ಮುಂಜಾನೆ 3.30ರ ಸುಮಾರಿಗೆ ಲಕ್ನೋದಿಂದ ಆಗ್ರಾ ಕಡೆಗೆ ಹೊರಟಿದ್ದ ಸ್ಕಾರ್ಪಿಯೋ ಎಸ್ಯುವಿ ಬ್ಯಾಲೆನ್ಸ್ ಕಳೆದುಕೊಂಡು ಡಿವೈಡರ್ ಮುರಿದು ಸಮಾನಾಂತರ ಮಾರ್ಗಕ್ಕೆ ನುಗ್ಗಿ ಎದುರಿನಿಂದ ಬರುತ್ತಿದ್ದ ಟ್ರಕ್ಗೆ ಡಿಕ್ಕಿ ಹೊಡೆದಿದೆ.
ಸ್ಕಾರ್ಪಿಯೋ ನುಜ್ಜುಗುಜ್ಜಾಗಿದೆ ಮತ್ತು ಮೃತರೆಲ್ಲರೂ ಸೈಫೈ ಆಸ್ಪತ್ರೆಯಲ್ಲಿ ವೈದ್ಯರು ಅಥವಾ ವೈದ್ಯರು ಅಥವಾ ಲ್ಯಾಬ್ ತಂತ್ರಜ್ಞರಾಗಿದ್ದರು. ನಾವು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅಪಘಾತದ ತೀವ್ರತೆಯನ್ನು ಸೂಚಿಸುವ ಸ್ಥಳದಿಂದ ಬಂದ ದೃಶ್ಯಗಳು ಕಾರಿನ ತೀವ್ರವಾಗಿ ಪುಡಿಪುಡಿಯಾದ ಅವಶೇಷಗಳನ್ನು ತೋರಿಸುತ್ತಿತ್ತು.
ಲಾಡ್ಜ್ ಕೊಠಡಿಯಲ್ಲಿ ಯುವತಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮಲಪ್ಪುರಂ ಜಿಲ್ಲೆಯ ವೆಟ್ಟತ್ತೂರ್ ನಿವಾಸಿ ಫಸೀಲಾ ಎಂದು ಗುರುತಿಸಲಾಗಿದೆ.
ಕೋಜಿಕೋಡು ಜಿಲ್ಲೆಯ ಎರಂಜಿಪಾಲಂನ ವಸತಿಗೃಹದ ಕೋಣೆಯನ್ನು ಪಡೆಯಲು ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಫಸೀಲಾ ಮತ್ತು ಅಬ್ದುಲ್ ಸನೂಫ್ ಎಂಬ ವ್ಯಕ್ತಿ ಲಾಡ್ಜ್ಗೆ ಬಂದಿದ್ದಾರೆ. ಲಾಡ್ಜ್ ಸಿಬ್ಬಂದಿ ಪ್ರಕಾರ, ಸನೂಫ್ ತಡರಾತ್ರಿ ಕೊಠಡಿಯಿಂದ ಹೊರಗೆ ಹೋದರು ಮತ್ತು ಹಿಂತಿರುಗಲಿಲ್ಲ.
ಕೊಠಡಿಯಿಂದ ಯಾವುದೇ ಚಟುವಟಿಕೆಯ ಸದ್ದು ಇಲ್ಲದಿದ್ದಾಗ ಅನುಮಾನಗೊಂಡ ಸಿಬ್ಬಂದಿ ತನಿಖೆಗೆ ಒಳಪಡಿಸಿದರು. ಒಳಪ್ರವೇಶಿಸಿದಾಗ ಫಸೀಲಾಳ ಮೃತದೇಹ ಪತ್ತೆಯಾಗಿದೆ.
ಕೋಣೆಯಲ್ಲಿ ಆಕೆಯ ಆಧಾರ್ ಮತ್ತು ಪಡಿತರ ಚೀಟಿಗಳು ಪತ್ತೆಯಾಗಿದ್ದು, ಆಕೆಯನ್ನು ಗುರುತಿಸಲು ಸಹಾಯಕವಾಗಿದೆ. ಸಾವಿನ ಸುತ್ತಲಿನ ಸಂದರ್ಭಗಳು ಅಸ್ಪಷ್ಟವಾಗಿಯೇ ಉಳಿದಿವೆ ಮತ್ತು ಕೊಲೆ ನಡೆದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಹದಿಹರೆಯದವರ ಕುರುಡು ಪ್ರೀತಿಗೆ ಮತ್ತೊಂದು ಬಲಿಯಾಗಿದೆ. ಯುವಕನೊಬ್ಬ ತಾನು ಪ್ರಿತಿಸುವ ಹುಡುಗಿಯನ್ನೇ ಕೊಂದಿದ್ದಾನೆ. ಘಟನೆ ನಡೆದದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ.
ಹುಡುಗಿಯನ್ನು ಚಾಕುವಿನಿಂದ ಹಲವಾರು ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಆಕೆಯ ಪ್ರಿಯಕರನೇ ತನ್ನ ಗೆಳತಿಯನ್ನು ಈ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ.
ಬೆಂಗಳೂರಿನಲ್ಲಿ ದಿನೇದಿನೇ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಯುವತಿಯೊಬ್ಬಳನ್ನು ಆಕೆಯ ಪ್ರಿಯಕರನೇ ಚಾಕು ಇರಿದು ದಾರುಣವಾಗಿ ಕೊಲೆ ಮಾಡಿರುವ ಘಟನೆ ಇಂದಿರಾ ನಗರದ ಅಪಾರ್ಟ್ಮೆಂಟಿನಲ್ಲಿ ನಡೆದಿದೆ.
ಅಸ್ಸಾಂ ಮೂಲದ ಮಾಯಾ ಗೊಗಾಯ್ ಎಂದು ಕೊಲೆಯಾದ ಯುವತಿಯನ್ನು ಗುರುತಿಸಲಾಗಿದೆ. ಈ ಯುವತಿಯು ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಳು.
ಕೊಲೆಗೆ ಕಾರಣವೇನೆಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.
ಕೊಲೆ ನಡೆದ ಜಾಗಕ್ಕೆ ಇಂದಿರಾ ನಗರದ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ
ಶ್ರೀ ರವಿಕುಮಾರ್ ಮುಂಡಾಜೆ ಅವರು ತೆಂಕುತಿಟ್ಟು ಯಕ್ಷಗಾನದ ಪ್ರತಿಭಾವಂತ ಪುಂಡುವೇಷಧಾರಿಗಳು. ನಾಟ್ಯ ಮತ್ತು ಮಾತುಗಾರಿಕೆ ಎಂಬ ಎರಡೂ ವಿಭಾಗಗಳಲ್ಲಿ ಪಳಗಿದ ಕಲಾವಿದರಿವರು. ತೆಂಕುತಿಟ್ಟಿನ ಭರವಸೆಯ, ಭವಿಷ್ಯದ ಕಲಾವಿದರಾಗಿ ಇವರು ಈಗಾಗಲೇ ಕಾಣಿಸಿಕೊಂಡಿದ್ದಾರೆ. ಸತತ ಅಧ್ಯಯನದಿಂದ ಬಹುಬೇಗನೇ ಯಕ್ಷಗಾನ ಕಲಾವಿದರಾಗಿ ಕಾಣಿಸಿಕೊಂಡು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಳ, ಹರಿಶ್ಚಂದ್ರ, ರುಕ್ಮಾಂಗದ ಮೊದಲಾದ ಭಾವನಾತ್ಮಕ ಪಾತ್ರಗಳಲ್ಲೂ ಪ್ರೇಕ್ಷಕರು ಮೆಚ್ಚುವಂತೆ ಅಭಿನಯಿಸಿ ತಾವು ಪ್ರತಿಭಾವಂತರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಶ್ರೀಯುತರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಕಲಾವಿದರು.
ಶ್ರೀ ರವಿಕುಮಾರ್ ಅವರ ಹುಟ್ಟೂರು ಬೆಳ್ತಂಗಡಿ ತಾಲೂಕಿನ ಮುಂಡಾಜೆ. ‘ಶ್ರೀ ದುರ್ಗಾನಿಲಯ’ ಇವರ ನಿವಾಸದ ಹೆಸರು. ಇವರು1986ನೇ ಇಸವಿ ಮಾರ್ಚ್ 22ರಂದು ಶ್ರೀ ರಾಘವ ಪೂಜಾರಿ ಮತ್ತು ಶ್ರೀಮತಿ ಕಮಲ ದಂಪತಿಗಳಿಗೆ ಮಗನಾಗಿ ಈ ಲೋಕದ ಬೆಳಕನ್ನು ಕಂಡರು. ಶ್ರೀ ರಾಘವ ಪೂಜಾರಿ, ಕಮಲ ದಂಪತಿಗಳ ಮೂವರು ಮಕ್ಕಳಲ್ಲಿ ಇವರು ಹಿರಿಯರು. ರವಿಕುಮಾರ್ ಮುಂಡಾಜೆ ಅವರಿಗೆ ಇಬ್ಬರು ಸಹೋದರಿಯರು.
ಶ್ರೀ ರವಿಕುಮಾರ್ ಅವರು ಪದವೀಧರರು. 7ನೇ ತರಗತಿಯ ವರೆಗೆ ಮುಂಡಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಬಳಿಕ ಪಿಯುಸಿ ವರೆಗೆ ಮುಂಡಾಜೆ ಪದವಿಪೂರ್ವ ಕಾಲೇಜಿನಲ್ಲೂ ವಿದ್ಯಾರ್ಜನೆಯನ್ನು ಮಾಡಿದ್ದರು. ಖಾಸಗಿಯಾಗಿ ಅಭ್ಯಸಿಸಿ ಪದವಿಯನ್ನೂ ಪಡೆದ ಕಲಾವಿದರಿವರು. ಇವರ ತೀರ್ಥರೂಪರು ಶ್ರೀ ರಾಘವ ಪೂಜಾರಿಯವರು ದೈವಭಕ್ತರು. ಶ್ರೀ ದೇವಿಯ ಆರಾಧಕರಾಗಿ ಪ್ರಸಿದ್ಧರು.
ಶ್ರೀ ರವಿಕುಮಾರ್ ಅವರು ಎಳವೆಯಲ್ಲೇ ಯಕ್ಷಗಾನಾಸಕ್ತರಾಗಿದ್ದರು. ಯಕ್ಷಗಾನ ಪ್ರದರ್ಶನಗಳನ್ನು ನೋಡುತ್ತಾ ಬೆಳೆದವರು. ತಾನು ಯಕ್ಷಗಾನ ಕಲಾವಿದನಾಗಬೇಕೆಂಬ ಬಯಕೆಯು ಬಾಲ್ಯದಲ್ಲಿಯೇ ಚಿಗುರೊಡೆದಿತ್ತು. 5ನೇ ತರಗತಿಯಲ್ಲಿ ಓದುತ್ತಿರುವಾಗಲೇ ಯಕ್ಷಗಾನ ಕಲಾವಿದನಾಗಿ ರಂಗವೇರುವ ಅವಕಾಶವು ಸಿಕ್ಕಿತ್ತು. ಮುಂಡಾಜೆ ಶಾಲಾ ಪ್ರದರ್ಶನದಲ್ಲಿ ಶ್ರೀ ರಾಮ ಭಂಡಾರಿ ಅವರಿಂದ ತರಬೇತಿಯನ್ನು ಪಡೆದು ಗಿರಿಜಾ ಕಲ್ಯಾಣ ಪ್ರಸಂಗದಲ್ಲಿ ಷಣ್ಮುಖನಾಗಿ ಅಭಿನಯಿಸಿದ್ದರು.
ಪಿಯುಸಿ ಶಿಕ್ಷಣವನ್ನು ಪೂರೈಸಿ ಬಳಿಕ ಉದ್ಯೋಗವನ್ನರಸಿ ಮುಂಬೈಗೆ ತೆರಳಿದರೂ ಯಕ್ಷಗಾನ ಕಲೆಯಿಂದ ದೂರವಾದವರಲ್ಲ. ಮನೆಯ ಹೊಣೆಗಾರಿಕೆ ಬಂದ ಕಾರಣ ಮತ್ತೆ ಊರಿಗೆ ಬರಬೇಕಾಗಿ ಬಂದಿತ್ತು. 2003ರಲ್ಲಿ ಯಕ್ಷಗಾನ ನಾಟ್ಯ ಪರಿಪೂರ್ಣವಾಗಿ ಕಲಿತು ಕಲಾವಿದನಾಗುವ ನಿರ್ಧಾರ. ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತ ಕಲಾ ಕೇಂದ್ರಕ್ಕೆ ಸೇರ್ಪಡೆ. ದಿವಾಣ ಶ್ರೀ ಶಿವಶಂಕರ ಭಟ್ಟರಿಂದ ಯಕ್ಷಗಾನ ಹೆಜ್ಜೆಗಾರಿಕೆಯ ಅಭ್ಯಾಸ. ಅಲ್ಲಿ ತೆಂಕಬೈಲು ಶ್ರೀ ತಿರುಮಲೇಶ್ವರ ಶಾಸ್ತ್ರಿಗಳು ಹಿಮ್ಮೇಳ ಗುರುಗಳಾಗಿದ್ದರು.
ತರಬೇತಿ ಕೇಂದ್ರದ ನಾಲ್ಕು ಪ್ರದರ್ಶನಗಳಲ್ಲಿ ಬಭ್ರುವಾಹನ ಕಾಳಗ ಪ್ರಸಂಗದಲ್ಲಿ ಅರ್ಜುನನ ಪಾತ್ರವನ್ನೂ ದಕ್ಷಯಜ್ಞ ಪ್ರಸಂಗದಲ್ಲಿ ಈಶ್ವರನ ಪಾತ್ರವನ್ನೂ ಗಿರಿಜಾ ಕಲ್ಯಾಣದ ಮನ್ಮಥನಾಗಿಯೂ, ಪಂಚವಟಿ ಪ್ರಸಂಗದ ಶ್ರೀರಾಮನಾಗಿಯೂ ಅಭಿನಯಿಸುವ ಅವಕಾಶವು ದೊರಕಿತ್ತು.
ಶ್ರೀ ರವಿಕುಮಾರ್ ಮುಂಡಾಜೆ ಅವರು ತಿರುಗಾಟ ಆರಂಭಿಸಿದ್ದು ಕಟೀಲು ಮೇಳದಲ್ಲಿ. 2003ರಲ್ಲಿ ಮೇಳಕ್ಕೆ ಸೇರ್ಪಡೆ. ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯ ಮೂರನೇ ಮೇಳದಲ್ಲಿ ನಾಲ್ಕು ವರ್ಷಗಳ ತಿರುಗಾಟ. ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ, ಪ್ರಸಂಗದಲ್ಲಿ ಸಿಕ್ಕಿದ ಪಾತ್ರಗಳನ್ನು ನಿರ್ವಹಿಸುತ್ತಾ ಅನುಭವವನ್ನು ಪಡೆದುಕೊಂಡರು. ತಿರುಗಾಟದ ಎರಡನೇ ವರ್ಷದಲ್ಲಿ ಪ್ರಹ್ಲಾದ, ಷಣ್ಮುಖ ಬಾಲಸರಸ್ವತಿ ಮೊದಲಾದ ಪಾತ್ರಗಳನ್ನು ನಿರ್ವಹಿಸಲು ಅವಕಾಶವು ಸಿಕ್ಕಿತ್ತು.
ಕಟೀಲು ಮೇಳದ ನಾಲ್ಕು ವರ್ಷಗಳ ತಿರುಗಾಟದ ಬಳಿಕ ಎಡನೀರು ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಬಳಿಕ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಪೌರೋಹಿತ್ಯ ಕಲಿಕೆ. ಮುಂಬೈಯ ಸಾಂತಾಕ್ರೂಜ್ ನಲ್ಲಿರುವ ಶ್ರೀ ಮಹಾಕಾಳಿ ದೇವಳದಲ್ಲಿ ಮೂರು ವರ್ಷ ಅರ್ಚಕನಾಗಿ ಸೇವೆ. ಊರಿಗೆ ಮರಳಿದ ರವಿಕುಮಾರ್ ಅವರು ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ ಮಾಡುವ ನಿರ್ಧಾರ ಮಾಡಿದರು.
ಎರಡನೇ ಪುಂಡುವೇಷಧಾರಿಯಾಗಿ ಕಟೀಲು ಎರಡನೇ ಮೇಳಕ್ಕೆ ಸೇರ್ಪಡೆ. ಶ್ರೀ ಬಲಿಪ ಪ್ರಸಾದ, ಪೆರುವಾಯಿ ನಾರಾಯಣ ಭಟ್, ದಿನೇಶ್ ಕಾವಳಕಟ್ಟೆ ಮೊದಲಾದವರ ಒಡನಾಟ, ಸಹಕಾರವು ಈ ಸಂದರ್ಭದಲ್ಲಿ ಸಿಕ್ಕಿತ್ತು. ಕಲಾವಿದನಾಗಿ ಬೆಳೆಯುವುದಕ್ಕೆ ಇದರಿಂದ ಅವಕಾಶವಾಯಿತು. ಬಲಿಪ ಪ್ರಸಾದ ಮತ್ತು ದಿನೇಶ್ ಶೆಟ್ಟಿಯವರ ಸಹಕಾರದಿಂದ 1ನೇ ಪುಂಡುವೇಷಗಳನ್ನೂ ನಿರ್ವಹಿಸುವ ಅವಕಾಶವು ಸಿಕ್ಕಿತ್ತು.
ಬಳಿಕ ಕಟೀಲಿನ 5ನೇ ಮೇಳದಲ್ಲಿ 1ನೇ ಪುಂಡುವೇಷಧಾರಿಯಾಗಿ ನಾಲ್ಕು ವರ್ಷಗಳ ವ್ಯವಸಾಯ. ಈ ಸಂದರ್ಭದಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್, ರವಿರಾಜ ಪನೆಯಾಲ ಅವರ ಒಡನಾಟ ಮತ್ತು ಸಹಕಾರವು ಸಿಕ್ಕಿ ಕಲಾ ಕ್ಷೇತ್ರದಲ್ಲಿ ಅನುಭವವನ್ನು ಗಳಿಸಿದರು. ಕಳೆದ ಎರಡು ವರ್ಷಗಳಿಂದ ರವಿಕುಮಾರ್ ಮುಂಡಾಜೆಯವರು ಕಟೀಲು ನಾಲ್ಕನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಬಳ್ಳಮಂಜ ಶ್ರೀನಿವಾಸ ಭಾಗವತ, ರವಿಶಂಕರ್ ವಳಕ್ಕುಂಜ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಮೊದಲಾದವರ ಒಡನಾಟದಲ್ಲಿ ಪ್ರಸ್ತುತ ತಿರುಗಾಟ ನಡೆಸುತ್ತಿದ್ದಾರೆ. ಮೂರನೇ ಮೇಳದಲ್ಲಿರುವಾಗ ಪುಂಡರೀಕಾಕ್ಷ ಉಪಾಧ್ಯಾಯ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮೊದಲಾದವರೊಂದಿಗೆ ಕಲಾ ಸೇವೆಯನ್ನು ಮಾಡುವ ಅವಕಾಶವೂ ಸಿಕ್ಕಿತ್ತು. ಕಟೀಲು ಎರಡನೇ ಮೇಳದಲ್ಲಿ ವ್ಯವಸಾಯ ಮಾಡುತ್ತಿರುವಾಗ ಹೊಸ ಮನೆಯ ಪ್ರವೇಶೋತ್ಸವದಂದು ಕಟೀಲು ಮೇಳದ ಬಯಲಾಟವನ್ನು ಸೇವಾ ರೂಪದಲ್ಲಿ ನಡೆಸುವ ಅವಕಾಶವೂ ಸಿಕ್ಕಿತ್ತು.
2021ರಲ್ಲಿ ಗೃಹಸ್ಥಾಶ್ರಮಿಯಾದ ರವಿಕುಮಾರ್ ಮುಂಡಾಜೆ ಅವರ ಪತ್ನಿ ಶ್ರೀಮತಿ ನಮಿತಾ. ವೇಷಗಾರಿಕೆ, ಮಾತುಗಾರಿಕೆ ಬಗೆಗೆ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಟೆಪಡ್ಪು ವಿಷ್ಣು ಶರ್ಮ, ರವಿರಾಜ ಪನೆಯಾಲರಿಂದ ಮಾಹಿತಿ ಪಡೆದುದನ್ನು ಇವರು ಸದಾ ನೆನಪಿಸುತ್ತಾರೆ. ಶ್ರೀ ಗಣೇಶ್ ಕೊಲಕಾಡಿ ಅವರಿಂದ ಯಕ್ಷಗಾನ ಸಂಗೀತವನ್ನು ಅಭ್ಯಸಿಸಿದ ಇವರು ಹಲವಾರು ಕಡೆಗಳಲ್ಲಿ ಯಕ್ಷಗಾನ ನಾಟ್ಯ ತರಬೇತಿಯನ್ನು ನೀಡಿರುತ್ತಾರೆ.
ಎಡನೀರು, ಚೀರುಂಭ ಭಗವತಿ ಮೇಳಗಳಲ್ಲದೆ ಬಿಡುವಿನ ಸಮಯದಲ್ಲಿ ಬೇರೆ ಬೇರೆ ಮೇಳಗಳಲ್ಲಿ ವ್ಯವಸಾಯ ನಡೆಸಿರುತ್ತಾರೆ. ಈ ಸಂದರ್ಭಗಳಲ್ಲಿ ಪುರಾಣ ಮತ್ತು ತುಳು ಪ್ರಸಂಗಗಳಲ್ಲೂ ಪಾತ್ರಗಳನ್ನು ನಿರ್ವಹಿಸಿ ಜನರ ಮೆಚ್ಚುಗೆಯನ್ನು ಗಳಿಸಿದ ಕಲಾವಿದರಿವರು. ವಿಷ್ಣು, ಶ್ರೀಕೃಷ್ಣ, ಶ್ರೀರಾಮ, ಬಭ್ರುವಾಹನ, ಚಂಡಮುಂಡರು, ಹನುಮಂತ, ಅಭಿಮನ್ಯು, ಲಕ್ಷ್ಮಣ, ಮಾನಿಷಾದ ಪ್ರಸಂಗದ ರೂಕ್ಷ ಮೊದಲಾದ ಪಾತ್ರಗಳಲ್ಲಿ ರಂಜಿಸಿದ ಇವರು ಕಸೆ ಸ್ತ್ರೀ ವೇಷಗಳನ್ನೂ ಚೆನ್ನಾಗಿ ಮಾಡಬಲ್ಲರು.
ಮುಂಡಾಜೆ ಶಾಲೆ, ಬೋಳ ಕಾಂತಾವರ, ಬೊಂಡಾಲ ಶಾಲೆ, ಬಜಪೆ ವಿಜಯ ವಿಠಲ ಭಜನಾ ಮಂದಿರ, ಎಕ್ಕಾರು ಶಾಲೆ, ಮುಚ್ಚೂರು, ಎಕ್ಕಾರು ಶ್ರೀ ಭ್ರಾಮರೀ ಯಕ್ಷ ಕಲಾ ಸಂಘ ಮೊದಲಾದ ಕಡೆಗಳಲ್ಲಿ ಇವರು ನಾಟ್ಯ ತರಗತಿಗಳನ್ನು ನಡೆಸಿರುತ್ತಾರೆ.
ಕಿರೀಟ ವೇಷವನ್ನೂ ನಿರ್ವಹಿಸುವ ಇವರು ತೆಂಕುತಿಟ್ಟಿನ ಭರವಸೆಯ, ಭವಿಷ್ಯದ ಕಲಾವಿದರು. ಇವರಿಗೆ ಉತ್ತಮ ಭವಿಷ್ಯವು ಸಿದ್ಧಿಸಲಿ. ದೇವರು ಸಕಲ ಸೌಭಾಗ್ಯಗಳನ್ನೂ ಅನುಗ್ರಹಿಸಲಿ. ಮನದಾಸೆಗಳನ್ನು ಕಲಾ ಮಾತೆಯು ಅನುಗ್ರಹಿಸಲಿ ಎಂಬ ಹಾರೈಕಗಳೊಂದಿಗೆ,
ರವಿಶಂಕರ್ ವಳಕ್ಕುಂಜ (ಮೊಬೈಲ್: 91644 87083)
ಫೋಟೋಗಳು: ರವಿಕುಮಾರ್ ಮುಂಡಾಜೆ ಅವರ ಫೇಸ್ಬುಕ್ ಖಾತೆಯಿಂದ