ಕೋಟ ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಳದ ರಥೋತ್ಸವ ಹಾಗೂ ನೂತನ ಕಟ್ಟಡ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಎರಡನೇಯ ದಿನದ ಕಾರ್ಯಕ್ರಮದ ಸಂದರ್ಭದಲ್ಲಿ ಸಾಲಿಗ್ರಾಮ ಮೇಳದ ಕಲಾವಿದರಾದ ಶಿವಾನಂದ ಕೋಟ, ಶಶಿಕಾಂತ ಶೆಟ್ಟಿ, ಪರಮೇಶ್ವರ ಭಂಡಾರಿ ಇವರಿಗೆ ಕಲಾ ಪೋಷಕರಾದ ಹಂದಟ್ಟು ಸೂರ್ಯನಾರಾಯಣ ಹಂದೆಯವರು ನಗದು ಪುರಸ್ಕಾರದೊಂದಿಗೆ ಗೌರವಿಸಿದರು.
ದೇವಾಲಯಗಳೇ ಕಲೆಗಳಿಗೆ ಆಶ್ರಯತಾಣ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಶಾಸ್ತ್ರೀಯ ಹಾಗೂ ಪರಂಪರೆಯ ಕಲೆಗಳನ್ನು ಪ್ರದರ್ಶಿಸುವುದು ಒಳಿತು. ಹಾಗೆಯೇ ಕಲೆಗಾಗಿ ಜೀವನವನ್ನೇ ಮುಡಿಪಾಗಿರಿಸಿರುವ ಕಲಾವಿದರನ್ನು ಗೌರವಿಸುವ, ಅಭಿನಂದಿಸುವ ಕಾರ್ಯ ಶ್ಲಾಘನೀಯ.
ಹಂದಟ್ಟು ಸೂರ್ಯನಾರಾಯಣ ಹಂದೆಯವರು ನಗದು ಪುರಸ್ಕಾರದೊಂದಿಗೆ ಮೂವರು ಹಿರಿಯ ಕಲಾವಿದರನ್ನು ಸನ್ಮಾನಿಸಿರುವುದು ಸಮಾಜಕ್ಕೆ ಮಾದರಿ ಎಂದು ಸಾಲಿಗ್ರಾಮ ಮಕ್ಕಳ ಮೇಳದ ನಿರ್ದೇಶಕ ಶ್ರೀಧರ ಹಂದೆ ಹೇಳಿದರು.
ಹಂದೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಅಮರ ಹಂದೆಯವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ವೆಂಕಟರಮಣ ಸೋಮಯಾಜಿ ಸ್ವಾಗತಿಸಿ, ಸುಬ್ರಹ್ಮಣ್ಯ ಹೊಳ್ಳ ವಂದಿಸಿದರು. ರಾಘವೇಂದ್ರ ತುಂಗ ಕೋಟ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಐಪೋಕಸ್ ಬೆಂಗಳೂರು ಪ್ರಾಯೋಜಕತ್ವದಲ್ಲಿ, ಕೆ. ಮೋಹನ್ ನಿರ್ದೇಶನದಲ್ಲಿ, ಕೋಟ ಸುದರ್ಶನ ಉರಾಳರ ಸಂಯೋಜನೆಯಲ್ಲಿ ಸುಜಯೀಂದ್ರ ಹಂದೆ ಎಚ್, ಚಂದ್ರಕಾ0ತ ಮೂಡುಬೆಳ್ಳೆ, ಲಂಬೋದರ ಹೆಗಡೆ, ಪರಮೇಶ್ವರ ಭಂಡಾರಿ, ರಾಘವೇಂದ್ರ ಹೆಗಡೆ, ಶಿವಾನಂದ ಕೋಟ, ಸುದೀಪ ಉರಾಳ, ಸ್ಫೂರ್ತಿ ಭಟ್, ಅಶೋಕ ಆಚಾರ್ಯ, ಅಜಿತ್ ಅಂಬಲಪಾಡಿ, ಆದಿತ್ಯ ಹೆಗಡೆ, ಕೃಷ್ಣಮೂರ್ತಿ ಉರಾಳ, ನವೀನ್ ಕೋಟ, ನರಸಿಂಹ ತುಂಗ, ಸುಹಾಸ ಕರಬ, ರಾಘವೇಂದ್ರ ತುಂಗ, ಮನೋಜ, ಸ್ಕಂದ, ರಾಜು ಪೂಜಾರಿ, ನಾಗರಾಜ ಪೂಜಾರಿ ಇನ್ನಿತರ ಕಲಾವಿದರನ್ನೊಳಗೊಂಡ ಸೈಂಧವ ವಧೆ ಯಕ್ಷಗಾನ ಪ್ರದರ್ಶನಗೊಂಡಿತು.
ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ತೆಂಕುತಿಟ್ಟಿನಲ್ಲಿ ಮೂರು ದಶಕಗಳ ಕಾಲ ಭಾಗವತರಾಗಿ, ಅನುಭವಿ ರಂಗ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳು ಆಯ್ಕೆಯಾಗಿದ್ದಾರೆ.
ತೆಂಕುತಿಟ್ಟು ಯಕ್ಷಗಾನದ ಗುರುಕುಲವೆಂದು ಮನ್ನಣೆ ಪಡೆದ ಕುರಿಯ ಮನೆತನದವರಾದ ಗಣಪತಿ ಶಾಸ್ತ್ರಿಗಳು, ತಮ್ಮ ದೊಡ್ಡತಂದೆಯವರಾದ ಕುರಿಯ ವಿಠಲ ಶಾಸ್ತ್ರಿಗಳ ಶಿಷ್ಯರಾಗಿ ಪ್ರಸಿದ್ಧ ವೇಷಧಾರಿಯಾಗಿದ್ದವರು. ಅಗರಿ ಶ್ರೀನಿವಾಸ ಭಾಗವತರ ಪ್ರೇರಣೆಯೊಂದಿಗೆ ಭಾಗವತಿಕೆ ಕ್ಷೇತ್ರವನ್ನು ಪ್ರವೇಶಿಸಿದರು.
ಕಟೀಲು ಮೇಳದಲ್ಲಿ ಪ್ರದಾನ ಭಾಗವತರಾಗಿ ಮೂರು ದಶಕಗಳ ವ್ಯವಸಾಯದ ಅವಧಿಯಲ್ಲಿ ನೆಡ್ಲೆ ನರಸಿಂಹ ಭಟ್, ಮರವಂತೆ ನರಸಿಂಹದಾಸ, ಪಡ್ರೆ ಚಂದ್ರು, ಕೇದಗಡಿ ಗುಡ್ಡಪ್ಪ ಗೌಡ, ಮುದುಕುಂಜ ವಾಸುದೇವ ಪ್ರಭು, ಕುಡಾಣ ಗೋಪಾಲ ಭಟ್, ಕೋಡಿ ಕುಷ್ಠ ಗಾಣಿಗ, ಪುಂಡರಿಕಾಕ್ಷ ಉಪಾಧ್ಯಾಯ, ಗೇರುಕಟ್ಟೆ ಗಂಗಯ್ಯ ಶೆಟ್ಟಿ ಮುಂತಾದ ಹಿರಿಯ ಕಲಾವಿದರೊಂದಿಗೆ ಒಡನಾಟದ ಅನುಭವವನ್ನು ಹೊಂದಿದ್ದಾರೆ.
ಮೇ 11, 2022 ಬುಧವಾರ ಪೂರ್ವಾಹ್ನ 11.00 ಗಂಟೆಗೆ ಪಲಿಮಾರಿನಲ್ಲಿ ಜರಗುವ ಶ್ರೀ ವಿದ್ಯಾಮಾನ್ಯತೀರ್ಥರ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ವನ್ನು ಪ್ರಶಸ್ತಿ ಫಲಕ ಮತ್ತು ರೂ. 50,000 ನಿಧಿಯೊಂದಿಗೆ ಪ್ರದಾನ ಮಾಡಲಾಗುವುದು ಎಂದು ಪಲಿಮಾರು ಮಠದ ದಿವಾನರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.