Thursday, May 14, 2026
Home Blog Page 208

ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಪುತ್ತೂರು

ಇವರ ಸಂಯುಕ್ತ ಆಶ್ರಯದಲ್ಲಿ 2022ನೇ ಸಾಲಿನ ಜಿಲ್ಲಾಮಟ್ಟದ ಸರ್‌ ಸಿ.ವಿ ರಾಮನ್‌ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯು  ಅಂಬಿಕಾ ಪದವಿಪೂರ್ವ ವಿದ್ಯಾಲಯ ಬಪ್ಪಳಿಗೆ ಪುತ್ತೂರು ಇಲ್ಲಿ 20-08-2022ರಂದು  ನಡೆಯಿತು.

ಜಿಲ್ಲೆಯಾದ್ಯಾಂತದ 87 ಪ್ರೌಢ ಶಾಲಾ ತಂಡಗಳು ಭಾಗವಹಿಸಿದ್ದು, ತೆಂಕಿಲದ  ವಿವೇಕಾನಂದ ಆಂಗ್ಲ ಮಾಧ್ಯಮಶಾಲೆ  ಯ ಅನ್ವಿತ್‌ಎನ್, 10ನೇತರಗತಿ [ಶ್ರೀಪತಿ ಎನ್‌ ಮತ್ತು ವಿದ್ಯಾಲಕ್ಷ್ಮಿ ಎ ದಂಪತಿ ಪುತ್ರ]   ಹಾಗೂ ಧಾತ್ರಿ ಸಿ.ಹೆಚ್, 10ನೇ ತರಗತಿ [ದಿನೇಶ್.ಸಿ.ಎಚ್‌ ಮತ್ತು ಪದ್ಮ ಲಕ್ಷ್ಮಿ  ದಂಪತಿ ಪುತ್ರಿ] ಅವರನ್ನೊಳಗೊಂಡ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರಥಮ ಸ್ಥಾನವು ಪ್ರಶಸ್ತಿ ಪತ್ರ ಹಾಗೂ ರೂಪಾಯಿ 3000 ನಗದನ್ನು ಒಳಗೊಂಡಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಚಿಕ್ಕೋಡಿಯಲ್ಲಿ ವಿದ್ಯಾರ್ಥಿನಿಯರು ತುಂಬಿದ್ದ ಕಾಲೇಜು ಬಸ್ ಮತ್ತು ಗೂಡ್ಸ್ ವಾಹನ ಢಿಕ್ಕಿ – ಇಬ್ಬರು ಚಾಲಕರ ಸಾವು, 40 ವಿದ್ಯಾರ್ಥಿನಿಯರಿಗೆ ಗಾಯ 

ಕರ್ನಾಟಕದ ಚಿಕ್ಕೋಡಿಯಲ್ಲಿ ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿದ್ದ  ಕಾಲೇಜು ಬಸ್ ಹಾಗೂ ಗೂಡ್ಸ್ ವಾಹನ ಢಿಕ್ಕಿ ಹೊಡೆದು ಎರಡೂ ವಾಹನಗಳ ಇಬ್ಬರು ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಗೂ 40 ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಈ ನಡೆದದ್ದು ಬೆಳಗಾವಿ ಅಥಣಿ ಪಟ್ಟಣದಲ್ಲಿ.   

ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆ ಸೇರಿಸಲಾಗಿದೆ. ಶಿಕ್ಷಕಿ ಸೇರಿದಂತೆ ಮೂವರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು  ಬೆಳಗಾವಿ  ಆಸ್ಪತ್ರೆ ಸೇರಿಸಲಾಗಿದೆ.

ಮದುವೆ ಮಂಟಪದಿಂದ ನೇರವಾಗಿ ಹನಿಮೂನ್ ಗೆ! ವೀಡಿಯೊ ನೋಡಿ 

ಶೀರ್ಷಿಕೆ ನೋಡಿ ಆಶ್ಚರ್ಯವಾಗಬಹುದು ಅಲ್ಲವೇ? ವಧೂವರರ ಆತುರವನ್ನು ನೋಡಿ ಹೀಗೆ ವ್ಯಂಗ್ಯವಾಗಿ ಹೇಳಲಾಗಿದೆ.

ಟ್ವಿಟ್ಟರ್ ನಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಪಾಶ್ಚಿಮಾತ್ಯ ದೇಶವೊಂದರಲ್ಲಿ ಈ ಘಟನೆ ನಡೆದಿದೆ.

ಪಾಶ್ಚಾತ್ಯ ಪದ್ಧತಿಯಂತೆ ಮದುವೆಯ ವಿಧಿವಿಧಾನ, ಪ್ರತಿಜ್ಞೆಗಳನ್ನು ಪೂರೈಸಿಕೊಟ್ಟ ಅಧಿಕಾರಿ ಅಥವಾ ಪ್ರೀಸ್ಟ್ (ಅರ್ಚಕ) ವಧೂವರರನ್ನು ಪರಸ್ಪರ ಆಲಿಂಗಿಸಿಕೊಳ್ಳಲು ಸೂಚಿಸುತ್ತಾರೆ.

ಆದರೆ ಇಲ್ಲಿ ಆತುರಗೊಂಡಂತೆ ಕಾಣಿಸುತ್ತಿದ್ದ ವರನು ಆಲಿಂಗಿಸುವ ಭರದಲ್ಲಿ ವಧುವಿನೊಡನೆ ತಾನೂ ಕೆಳಕ್ಕೆ ಬೀಳುತ್ತಾನೆ. ಇದನ್ನು ನೋಡಿ ಆ ವೀಡಿಯೋಕ್ಕೆ “Straight to the Honeymoon” (ನೇರವಾಗಿ ಹನಿಮೂನ್ ಗೆ ) ಎಂದು ವ್ಯಂಗ್ಯವಾಗಿ ಶೀರ್ಷಿಕೆ ಕೊಡಲಾಗಿದೆ. 

ಭೀಕರ ರಸ್ತೆ ಅಪಘಾತದಲ್ಲಿ 6 ಸಾವು, 20 ಮಂದಿ ಗಾಯ

ಭೀಕರ ರಸ್ತೆ ಅಪಘಾತವೊಂದರಲ್ಲಿ  6 ಮಂದಿ ಸಾವಿಗೀಡಾಗಿ, 20 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಪೊಲೀಸರ ಪ್ರಕಾರ, ಯಾತ್ರಾರ್ಥಿಗಳು ಜೈಸಲ್ಮೇರ್‌ನ ರಾಮದೇವ್ರಾದಿಂದ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ, ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರೈಲರ್ ಮತ್ತು ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಸುಮೇರ್‌ಪುರ ಪೊಲೀಸ್ ಠಾಣೆ ಪ್ರಭಾರಿ ರಾಮೇಶ್ವರ ಭಾಟಿ ತಿಳಿಸಿದ್ದಾರೆ. ಯಾತ್ರಾರ್ಥಿಗಳು ಜೈಸಲ್ಮೇರ್‌ನ ರಾಮದೇವ್ರಾದಿಂದ ಹಿಂದಿರುಗುತ್ತಿದ್ದರು, ಅಲ್ಲಿ ಜಾನಪದ ದೇವತೆ ಬಾಬಾ ರಾಮ್‌ದೇವ್ ದೇವಾಲಯವಿದೆ.

ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಟ್ವೀಟ್ ಮಾಡಿದೆ.

ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ರಾಮಾಯಣ ಸರಣಿ ತಾಳಮದ್ದಳೆ

.

ಶ್ರೀಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘದ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಶ್ರೀ ರಾಮಾಯಣ ಸರಣಿಯ ಶ್ರೀರಾಮ ಅಯೋಧ್ಯಾಗಮನ ತಾಳಮದ್ದಳೆಯು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಜರಗಿತು.

ಭಾಗವತರಾಗಿ ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಪದ್ಮನಾಭ ಕುಲಾಲ್ ಇಳಂತಿಲ, ಹಿಮ್ಮೆಳದಲ್ಲಿ ಮೋಹನ ಶರವೂರು, ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ನೇರೆಂಕಿ , ಹರೀಶ್ ಬಾರ್ಯ, ಸಂಜೀವ ಪಾರೆಂಕಿ , ತಿಲಕಾಕ್ಷ, ಶ್ರೀಮತಿ ಪುಷ್ಪಲತಾ .ಎಂ ಮತ್ತು ದಿವಾಕರ ಆಚಾರ್ಯ ಗೇರುಕಟ್ಟೆ ಭಾಗವಹಿಸಿದ್ದರು.

ಕಲಾಪೋಷಕರಾದ ಉಮೇಶ್ ಶೆಣೈ, ಗಂಗಾಧರ್ ಟೈಲರ್ ಸರಣಿ ತಾಳಮದ್ದಳೆಯ ಯಶಸ್ಸಿಗೆ ಶುಭ ಹಾರೈಸಿದರು.



ಭಾರೀ ಮಳೆಯಿಂದಾಗಿ ಕುಸಿದ ಚಕ್ಕಿ ನದಿಯ ಮೇಲಿನ ರೈಲ್ವೆ ಸೇತುವೆ – ಸೇತುವೆ ಕುಸಿಯುತ್ತಿರುವ ವೀಡಿಯೊ

ಹಿಮಾಚಲ ಪ್ರದೇಶದ ಕಂಗಾರಾ ಜಿಲ್ಲೆಯಲ್ಲಿ ಚಕ್ಕಿ ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿದೆ.

ಹಿಮಾಚಲದಲ್ಲಿ ಗಂಗಾರಾ, ಚಂಬಾ, ಬಿಲಾಸ್‌ಪುರ, ಸಿರ್ಮುರ್ ಮತ್ತು ಮಂಡಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ.

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಚಕ್ಕಿ ಸೇತುವೆ ಶನಿವಾರ ಕುಸಿದಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಇಂದು ಬೆಳಗ್ಗೆ ರಾಜ್ಯದ ಮಂಡಿ ಜಿಲ್ಲೆಯಲ್ಲಿ ಮುಂಜಾನೆ ಹಠಾತ್ ಪ್ರವಾಹ ಸಂಭವಿಸಿದ್ದು, ಮನೆಗಳು ಮತ್ತು ಅಂಗಡಿಗಳಿಗೆ ನೀರು ನುಗ್ಗಿತು, ನಿವಾಸಿಗಳು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ಯಕ್ಷಗಾನದಲ್ಲಿ ಪ್ರಯೋಗ, ಸುಧಾರಣೆಗಳ ಹೆಸರಿನಲ್ಲಿ ನಡೆಯುವ ‘ಕಲೆಯ ಕುಲಗೆಡಿಸುವಿಕೆ’ – ಯಾರು ಕಾರಣ ಎಂಬ ಚರ್ಚೆಗೆ ಕೊನೆಯೆಲ್ಲಿ?

ಯಕ್ಷಗಾನದಲ್ಲಿ ಪ್ರಯೋಗ, ಸುಧಾರಣೆಗಳ ಹೆಸರಿನಲ್ಲಿ ನಡೆಯುವ ‘ಕಲೆಯ ಕುಲಗೆಡಿಸುವಿಕೆ’ – ಯಾರು ಕಾರಣ ಎಂಬ ಚರ್ಚೆಗೆ ಕೊನೆಯೆಲ್ಲಿ?

ಯಕ್ಷಗಾನದಲ್ಲಿ ಪ್ರಯೋಗ, ಸುಧಾರಣೆಗಳ ಹೆಸರಿನಲ್ಲಿ ನಡೆಯುವ ‘ಕಲೆಯ ಕುಲಗೆಡಿಸುವಿಕೆ’ಗೆ  ಯಾರು ಕಾರಣ ಎಂಬ ಚರ್ಚೆ ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಆಗುತ್ತಾ ಉಂಟು. ಈ ಚರ್ಚೆಗೆ ಕೊನೆಯಿಲ್ಲ.

ಬದಲಾವಣೆ, ಪ್ರಯೋಗ, ಸುಧಾರಣೆ, ಹೊಸತನ ಈ ಶಬ್ದಗಳನ್ನೆಲ್ಲಾ ಕೇಳಿ ಕೇಳಿ ಸಾಕಾಗಿದೆ. ಅದೆಲ್ಲಾ ನಾವು ಮಾಡಿದ್ದನ್ನು ಸಮರ್ಥಿಸಿಕೊಳ್ಳಲು ಇರುವ ಪದಗಳು. ಅವರನ್ನು ಇವರು ಹೇಳುವುದು, ಇವರನ್ನು ಅವರು ಹೇಳುವುದು. ಅವರು ಇವರ ನಡುವೆ ಕೇಳುವುದು ಯಾರನ್ನು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಹಾಗಾದರೆ ಯಕ್ಷಗಾನವನ್ನು ಕಲುಷಿತಗೊಳಿಸುತ್ತಿರುವವರು ಯಾರು? ಇದಕ್ಕೆ ಉತ್ತರ ಹುಡುಕಬೇಕಾದರೆ ವಿಚಾರಗೋಷ್ಠಿಗಳೇ ನಡೆಯಬೇಕಾಗಬಹುದು! ತಿಟ್ಟುಗಳ ಬೇಧವಿಲ್ಲದೆ ಯಕ್ಷಗಾನ  ಮೂಲಸ್ವರೂಪವನ್ನು ಕಳೆದುಕೊಂಡಿದೆ. ಈಗಲೂ ಸ್ವರೂಪವನ್ನು ಕಳೆದುಕೊಳ್ಳುತ್ತಾ ಸಾಗುತ್ತಿದೆ. ಇನ್ನೂ ಕಾಲ ಸರಿದಂತೆ ಮುಂದಕ್ಕೆ ಸ್ವರೂಪ ಬದಲಾವಣೆಯಾಗುತ್ತಾ ಸಾಗಬಹುದು. ಹಾಗಾದರೆ ಈ ಬದಲಾವಣೆ ಎಂಬುದು ನಿರಂತರವಾದ ಪ್ರಕ್ರಿಯೆ.

ನಾವು ಒಂದು ವಿಷಯವನ್ನು ಗಮನಿಸಬೇಕು. ಬದಲಾವಣೆ ಎಂದರೆ ಸುಧಾರಣೆಯಲ್ಲ. ಅಥವಾ ಬದಲಾವಣೆಯೆಲ್ಲವೂ ಸುಧಾರಣೆ ಅಲ್ಲ. ಅದರಲ್ಲಿ ಬಹು ಅಂಶ ಕುಲಗೆಡಿಸುವಿಕೆ ಮತ್ತು ಕಲುಷಿತಗೊಳಿಸುವಿಕೆಯೂ ಆಗಿರಬಹುದು. ಕೆಲವಂಶ ಸುಧಾರಣೆಯೂ ಇರಬಹುದು. ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗೆ ಏನೂ ಇಲ್ಲದ ಕಾಲದಿಂದ ಈಗ ಎಲ್ಲವೂ ಇರುವ ಕಾಲಕ್ಕೆ ಬಂದು ಕೆಲವು ವರ್ಷಗಳಾದುವು. ಅದು ಸುಧಾರಣೆ. ಈಗ ಎಲ್ಲವೂ ಇರುವ ಕಾಲದಿಂದ ಆಗುತ್ತಿರುವುದು ಬದಲಾವಣೆ. ಈ ಬದಲಾವಣೆ ಬೇಕಾದರೂ ಅಥವಾ ಬೇಡದಿದ್ದರೂ ಆಗುತ್ತಲೇ ಇರುತ್ತದೆ. ಕಾಲದ ಪ್ರವಾಹದಂತೆ ನಿರಂತರ. 

ಆಕ್ಷೇಪಿಸುವವರಿಗೆ ಉತ್ತರಿಸಲು ಅವರ ಬತ್ತಳಿಕೆಯಲ್ಲಿ ಬೇಕಾದ ಬಾಣಗಳುಂಟು. “ಕಲೆ ಎಂಬುದು ನಿಂತ ನೀರಲ್ಲ. ಅದು ಪ್ರವಾಹದಂತೆ ಹರಿಯುತ್ತಾ ಇರಬೇಕು” ಎಂದು ಹೇಳುವವರು ಹರಿಯುವ ನೀರಿಗೆ ಕಾರ್ಖಾನೆಯ ಹೊಲಸನ್ನು, ತಮ್ಮ ಮನೆಯ ಗಟಾರವನ್ನು, ತಮಗೆ ಬೇಡದ ವಸ್ತುವನ್ನು ಎಸೆಯುತ್ತಾರೆ. ಆ ಮೂಲಕ ಹರಿಯುವ ನೀರನ್ನು ಕಲುಷಿತಗೊಳಿಸಿದಂತೆ ಕಲೆಯನ್ನೂ ಕುಲಗೆಡಿಸುತ್ತಾರೆ. 

ಹಾಗಾದರೆ ಈಗ ಬದಲಾವಣೆ, ಸುಧಾರಣೆಗಳ ಹೆಸರಿನಲ್ಲಿ ಆಗುತ್ತಿರುವುದಕ್ಕೆಲ್ಲಾ ಯಾರು ಕಾರಣ? ಅದೆಲ್ಲಾ ಬೇಕಾ? ಬೇಕಾದರೆ ಎಷ್ಟು ಬೇಕು? ಯಾವುದು ಬೇಕು? ಎಂಬುದಕ್ಕೆ ಉತ್ತರ ಹುಡುಕಬೇಕಿದೆ. ಇಲ್ಲದಿದ್ದರೆ ಅವುಗಳು ಪ್ರಶ್ನೆಗಳಾಗಿಯೇ ಉಳಿದೀತು.

ಕಾರಣಕರ್ತರ ಹೆಸರುಗಳ ಪಟ್ಟಿಯಲ್ಲಿ ನಮಗೆ ಟಿ.ವಿ ಚಾನೆಲ್ ಗಳ ಶೋಗಳು, ಜಾಹೀರಾತುಗಳು, ಕಲಾವಿದರು, ಸಂಘಟಕರು, ಪ್ರೇಕ್ಷಕರು ಮತ್ತು ಅಭಿಮಾನಿಗಳ ಹೆಸರುಗಳು ಕಾಣಸಿಗುತ್ತವೆ. ಪ್ರೇಕ್ಷಕರೆಲ್ಲಾ ಅಭಿಮಾನಿಗಳಲ್ಲ. ಕೆಲವು ಅಭಿಮಾನಿಗಳು ಪ್ರೇಕ್ಷಕರೇ ಅಲ್ಲ! 

ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಯಕ್ಷಗಾನದಲ್ಲಿ ಏನೆಲ್ಲಾ ವೇಗದ ಬದಲಾವಣೆ ಆಗಿದೆ ಎಂದು ಯೋಚಿಸಿದಾಗ ಆಶ್ಚರ್ಯವಾಗುತ್ತಿದೆ. ಕಾಲಮಿತಿ, ಗಾನವೈಭವ, ನಾಟ್ಯವೈಭವ, ಗಾನನಾಟ್ಯ ವೈಭವ, ಏಕವ್ಯಕ್ತಿ ಪ್ರದರ್ಶನ ಮುಂತಾದ ಅನೇಕ ಬದಲಾವಣೆಗಳನ್ನು ಯಕ್ಷಗಾನ ಕಂಡಿದೆ. ಅದರಲ್ಲಿ ಒಳಿತು ಕೆಡುಕುಗಳ ಸಮ್ಮಿಶ್ರಣದ ದ್ರಾವಣವಿದೆ. ಕೆಲವೊಮ್ಮೆ ಪಾತ್ರಗಳನ್ನು ತಮಗೆ ಬೇಕಾದಂತೆ ಚಿತ್ರಿಸುವುದು. ಏಕವ್ಯಕ್ತಿ ಪ್ರದರ್ಶನಗಳಲ್ಲಿಯೂ ಯಕ್ಷಗಾನ ಪ್ರದರ್ಶನಗಳಲ್ಲಿಯೂ ಕುಂತಿ, ಕರ್ಣ, ಅಂಬೆ, ಗಾಂಧಾರಿ, ದ್ರೌಪದಿ, ಸೀತೆ ಮೊದಲಾದ ಪಾತ್ರಗಳ ಬಾಯಿಯಲ್ಲಿ ಪುರಾಣ ಕಾಲದಿಂದ ಹೊರಬಂದು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರ ವಿಚಿತ್ರ ಮಾತುಗಳನ್ನು ಹೇಳಿಸುವುದು ಹೊಸ ಪ್ರಯೋಗಗಳ ಪಟ್ಟಿಯಲ್ಲಿ ಸೇರುತ್ತದೆ. 

ಹಲವಾರು ಟಿವಿ ಚಾನೆಲ್ ಗಳು ತಮ್ಮ ಡ್ಯಾನ್ಸ್ ಷೋಗಳಲ್ಲಿ ಯಕ್ಷಗಾನವನ್ನು ಬಳಸಿಕೊಂಡಿದ್ದಾರೆ. ಅಲ್ಲಿ ನೃತ್ಯಗಾರರು ಯಕ್ಷಗಾನದ ಧಿರಿಸಿನಲ್ಲಿ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಪ್ರಶ್ನಿಸಿದರೆ ಅವರಲ್ಲಿಯೂ ಉತ್ತರವಿದೆ. ಟಿವಿ ಚಾನೆಲ್ ಗಳಲ್ಲಿ ಕೆಲಸ ಮಾಡುವವರಲ್ಲಿ ಯಕ್ಷಗಾನದ ಬಗ್ಗೆ ಅಲ್ಪಸ್ವಲ್ಪ ಜ್ಞಾನ ಇರುವವರೂ ಇರುತ್ತಾರೆ. “ಯಕ್ಷಗಾನವನ್ನು ವಿರೂಪಗೊಳಿಸುವಲ್ಲಿ ಕಲಾವಿದರಷ್ಟು ನಾವು ಮುಂದೆ ಹೋಗಿಲ್ಲ, ರಂಗಸ್ಥಳದಲ್ಲಿ ಕೆಲವು ಕಲಾವಿದರು ಮಾಡುವ ಅಬದ್ಧಗಳ ಮುಂದೆ ನಮ್ಮದೇನೂ ಅಲ್ಲ” ಎಂದು ಟಿವಿ ಚಾನೆಲ್ ನವರು ಹೇಳಿದರೆ ನಾವು ಅದನ್ನೂ ಕೇಳಿಸಿಕೊಳ್ಳಬೇಕಾದೀತು.

ಈ ಮಾತಿಗೆ ಉತ್ತರ ಕೊಡುವ ನೈತಿಕತೆ ನಮ್ಮಲ್ಲಿ ಉಳಿದಿದೆಯೇ? ಈಗೀಗ ಪ್ರತಿಯೊಂದು ಹೊಸ ಹೊಸ ಯಕ್ಷಗಾನ ಪ್ರಸಂಗದ ಪ್ರದರ್ಶನದಲ್ಲಿಯೂ ಒಂದೊಂದು ಸಿನಿಮಾ ಹಾಡು ಅಥವಾ ಸಿನಿಮಾ ಹಾಡಿನ ದಾಟಿಯ ಹಾಡುಗಳಿರುತ್ತವೆ. ‘ಚೀಸ್ ಬಡೀ ಹೈ ಮಸ್ತ್ ಮಸ್ತ್’ ಹಾಡಿನಿಂದ ತೊಡಗಿ ಈಚೆಗೆ ಬಿಡುಗಡೆಯಾದ ಪುಷ್ಪ ಚಿತ್ರದ ಕಾಲೆಳೆದು ಅಭಿನಯಿಸುವ ಶ್ರೀವಲ್ಲಿ ಹಾಡುಗಳೂ ರಂಗಸ್ಥಳದಲ್ಲಿ ಯಕ್ಷಗಾನದ ಪದ್ಯಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ.

ಕೇಳಿದರೆ ಕಲಾವಿದರು ನೂರೆಂಟು ಕಾರಣ ಹೇಳುತ್ತಾರೆ. ಸಂಘಟಕರ ಒತ್ತಡವೋ, ಮೇಳದ ಯಜಮಾನರ ನಿರ್ದೇಶನವೋ ಎಂಬುದು ಬೇರೆ ವಿಚಾರ. ಸಂಘಟಕರೂ, ಮೇಳದ ಯಜಮಾನರೂ ಈ ತರಹದ ಪ್ರದರ್ಶನ ಬೇಡ ಎಂದು ಕಲಾವಿದರಿಗೆ ಹೇಳಬಹುದಲ್ಲ? ಸಿನಿಮಾದಲ್ಲಿರುವಂತೆ ಜನಪ್ರಿಯತೆ, ಗಲ್ಲಾಪೆಟ್ಟಿಗೆಯ ಯಶಸ್ಸಿನ ಬೆನ್ನುಹತ್ತುವ ಅವಶ್ಯಕತೆ ಅವರಿಗಿದೆಯೇ?

– ಓರ್ವ ನೊಂದ ಪ್ರೇಕ್ಷಕ 

ಖೋಖೋ ಪಂದ್ಯಾಟದಲ್ಲಿ  ವಿವೇಕಾನಂದ ಪದವಿಪೂರ್ವ ಕಾಲೇಜು ರಾಜ್ಯ ಮಟ್ಟಕ್ಕೆ ಆಯ್ಕೆ

ಪುತ್ತೂರು, ಅ 20 : ಪುಣಚದ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ನಡೆೆದ ವಿದ್ಯಾ ಭಾರತಿ ಕರ್ನಾಟಕ ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ  ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದೆ. 

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ನಿತಿನ್ ಕುಮಾರ್, ವಾಣಿಜ್ಯ ವಿಭಾಗದ ಎಚ್ ಅಭಿರಾಮ್, ವಿಜ್ಞಾನ ವಿಭಾಗದ ಮಂಜುನಾಥ್ ಎಸ್, ಸಾತ್ವಿಕ್ ಆರ್, ನಂದನ್ ಗೌಡ, ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವರುಣ್ ಕುಮಾರ್,ಜೀವನ್ ಎಸ್, ದೇಶಿಕ್ ಕೆ, ರಂಜನ್ ಕೆ.ಆರ್, ವಿಜ್ಞಾನ ವಿಭಾಗದ ಎಲ್. ಧನುಷ್. ಅಶ್ವಿತ್ ಭಂಡಾರಿ,ಮನ್ವಿತ್ ಬಿ ಗೌಡ, ಯಶವಂತ್ ಡಿ.ಎಸ್, ಶ್ರೇಯಸ್ ಪಿ, ಸುಹಾಸ್ ಕೆ ಭಾಗವಹಿಸಿದ್ದರು.

ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ದಿವ್ಯ ಎಂ, ಭೂಮಿಕಾ ಬಿ.ಬಿ, ವಾಣಿಜ್ಯ ವಿಭಾಗದ ಜ್ಯೋತಿಕಾ ಪಿ, ಹಿತಶ್ರೀ, ವಿಜ್ಞಾನ ವಿಭಾಗದ ಪೂರ್ವಿಕ ಎ. ಎಸ್, ಪ್ರತೀಕ್ಷಾ ಸಿ ಎಚ್,  ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಸಂಸ್ಕೃತಿ ಜೈನ್, ದಿಶಾ ವಿ, ಪ್ರಕೃತಿ ಬಿ.ಯು,ನಿಶ್ಮಿತಾ, ಕಲಾ ವಿಭಾಗದ ಶಿವಾನಿ ಪಿ.ಕೆ ಭಾಗವಹಿಸಿದ್ದರು.

ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್  ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ತಂಡದ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದ್ದಾರೆ.

ಇಂದು ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನ

ಇಂದು 20.08.2022ರ ಶನಿವಾರ ಸಂಜೆ 6 ಘಂಟೆಗೆ ಶ್ರೀ ಎಡನೀರು ಮಠದಲ್ಲಿ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಪಾವಂಜೆ  ಇವರಿಂದ  ‘ಸುದರ್ಶನ ವಿಜಯ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. 

ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದ್ವಿತೀಯ ಚಾತುರ್ಮಾಸ್ಯದ ಪ್ರಯುಕ್ತ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಈ ಯಕ್ಷಗಾನ ಪ್ರದರ್ಶನ ಜರಗಲಿದೆ.

ವಿವರಗಳಿಗೆ ಕಾರ್ಯಕ್ರಮದ ಕರಪತ್ರದ ಚಿತ್ರವನ್ನು ನೋಡಿ. 

ಪುಂಡುವೇಷಧಾರಿಯು ಹಾಸ್ಯಗಾರನಾದ ಅಚ್ಚರಿಯ ಬಗೆ : ಶ್ರೀ ಮಹೇಶ ಮಣಿಯಾಣಿ ದೊಡ್ಡತೋಟ 

ಶ್ರೀ ಮಹೇಶ ಮಣಿಯಾಣಿ ದೊಡ್ಡತೋಟ ಅವರು ಹಿರಿಯ, ಅನುಭವೀ ಹಾಸ್ಯಗಾರರು. ಇವರು ಶ್ರೀ ಧರ್ಮಸ್ಥಳ ಮೇಳದ ಕಲಾವಿದರು. ಇವರು ತಮ್ಮ ವೃತ್ತಿಯನ್ನು ಪುಂಡುವೇಷಧಾರಿಯಾಗಿ ಆರಂಭಿಸಿದ್ದರು. ಪರಿವರ್ತನಾಶೀಲವಾದ ಈ ಪ್ರಪಂಚದಲ್ಲಿ ಅಚ್ಚರಿಯ ಬೆಳವಣಿಗೆಗಳಾಗುವುದು ಒಂದು ಸಹಜ ಕ್ರಿಯೆ.

ಅಚ್ಚರಿಯ ಬೆಳವಣಿಗೆಯೊಂದರಲ್ಲೇ ಪುಂಡುವೇಷಧಾರಿಯಾಗಿದ್ದ ಇವರು ಹಾಸ್ಯಗಾರರಾಗಿ ಕಲಾಸೇವೆಯನ್ನು ಮಾಡುವಂತಾಗಿತ್ತು. ಇಂತಹಾ ಬೆಳವಣಿಗೆಗಳು ಇದೇ ಮೊದಲಲ್ಲ. ಅನೇಕ ಬಾರಿ ನಡೆದಿದೆ. ರವಿಚಂದ್ರ ಕನ್ನಡಿಕಟ್ಟೆ ಅವರು ವೇಷಧಾರಿಯಾಗಿ ಯಕ್ಷಗಾನವನ್ನು ಪ್ರವೇಶಿಸಿದವರು. ಅವರೀಗ ಯುವ ಭಾಗವತರಾಗಿ ಖ್ಯಾತರಾಗಿದ್ದಾರೆ. ವೇಷಧಾರಿಯಾಗಿ ರಂಗಪ್ರವೇಶ ಮಾಡಿದ ಕೊಂಕಣಾಜೆ ಚಂದ್ರಶೇಖರ ಭಟ್ ಅವರು ಈಗ ಯುವ ಮದ್ದಳೆಗಾರರಾಗಿ ಪ್ರಸಿದ್ಧರಾಗಿದ್ದಾರೆ. 

ಶ್ರೀ ಮಹೇಶ ಮಣಿಯಾಣಿ ಅವರ ಹುಟ್ಟೂರು ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ದೊಡ್ಡತೋಟ ಸಮೀಪದ ಕುದ್ಪಾಜೆ. 1974ನೇ ಇಸವಿ ಜೂನ್ 1ರಂದು ಶ್ರೀ ಅಪ್ಪಯ್ಯ ಮಣಿಯಾಣಿ ಮತ್ತು ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರನಾಗಿ ಜನನ. ಮಹೇಶ ಅವರ ತಮ್ಮ ಶ್ರೀ ಉಮೇಶ್ ಅವರು ಭಾರತೀಯ ಭೂಸೇನೆಯಲ್ಲಿ ಉದ್ಯೋಗಿಯಾಗಿ ಈಗ ಸ್ವಯಂ ನಿವೃತ್ತಿಯನ್ನು ಹೊಂದಿ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಶಾಲಾ ವಿದ್ಯಾರ್ಥಿಯಾಗಿದ್ದಾಗ ಕೋಡ್ಲ ಗಣಪತಿ ಭಟ್ ಅವರಿಂದ ನಾಟ್ಯ ಕಲಿತು ವೇಷ ಮಾಡುತ್ತಿದ್ದರು.

ಶ್ರೀ ಮಹೇಶ್ ಮಣಿಯಾಣಿ ಅವರು ಓದಿದ್ದು ಬೊಳ್ಳಾಜೆ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. 7ನೇ ತರಗತಿ ವರೆಗೆ. 5ನೇ ತರಗತಿಯಲ್ಲಿರುವಾಗಲೇ ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆಯೂ ಹುಟ್ಟಿಕೊಂಡಿತ್ತು. ಇದಕ್ಕೆ ಮನೆಯ ಹಿರಿಯರೇ ಕಾರಣರು. ಆಟ ನೋಡಲು ತೆರಳಿದಾಗ ಇವರನ್ನೂ ಕರೆದೊಯ್ಯುತ್ತಿದ್ದರು. ಬಾಲಗೋಪಾಲರು ಅಂದವಾಗಿ ಕುಣಿಯುವಾಗ ನೋಡು ಅವರೆಷ್ಟು ಅಂದವಾಗಿ ಕುಣಿಯುತ್ತಾರೆ! ನೀನು ಮಣ್ಣಿನಲ್ಲಿ ಆಡುವುದಕ್ಕಾಯಿತು ಎಂದು ಇವರ ಚಿಕ್ಕಮ್ಮ ಹಂಗಿಸುತ್ತಿದ್ದರಂತೆ. ಚಿಕ್ಕಮ್ಮನ ಈ ಮಾತಿನ ತಿವಿತವು ಮಹೇಶ್ ಅವರಿಗೆ ಕಲಾವಿದನಾಗಬೇಕೆಂಬ ಆಸೆ ಹುಟ್ಟಿಕೊಳ್ಳಲು ಕಾರಣ.

ಸುಳ್ಯದ ಜಾತ್ರಾ ಸಂದರ್ಭ, ಧರ್ಮಸ್ಥಳ ಮೇಳದ ಆಟಕ್ಕೆ ಹೋಗಿ ಹಿರಿಯ ಕಲಾವಿದ ಶ್ರೀ ಉಬರಡ್ಕ ಉಮೇಶ ಶೆಟ್ರಲ್ಲಿ ಮೇಳಕ್ಕೆ ಬರುತ್ತೇನೆಂದು ಕೇಳಿಕೊಂಡಿದ್ದರು. 7ನೇ ಕ್ಲಾಸ್ ವರೆಗೆ ಓದು ಮುಗಿದ ಮೇಲೆ ಮೇಳಕ್ಕೆ ಬರಬಹುದು ಎಂದು ಹೇಳಿ ಉಮೇಶ ಶೆಟ್ರು ಇವರನ್ನು ಮನೆಗೆ ಕಳುಹಿದ್ದರು. 6ನೇ ತರಗತಿಯಲ್ಲಿ ಓದುತ್ತಿರುವಾಗ ಮರ್ಕಂಜ ಐತಪ್ಪ ಗೌಡರಿಂದ ಹೆಜ್ಜೆಗಾರಿಕೆಯನ್ನು ಕಲಿತರು. ಐತಪ್ಪ ಗೌಡರು ಕಟೀಲು ಮೇಳದ ಕಲಾವಿದರಾಗಿದ್ದರು. 7ನೇ ಕ್ಲಾಸಿನ ಓದು ಮುಗಿದ ಕೂಡಲೇ ಮಹೇಶ್ ಅವರು ಧರ್ಮಸ್ಥಳದ ಸೇವೆಯಾಟಕ್ಕೆ ತೆರಳಿ ಉಮೇಶ ಶೆಟ್ಟರಲ್ಲಿ ಮೇಳಕ್ಕೆ ಬರುತ್ತೇನೆಂದು ಕೇಳಿಕೊಂಡರು. ಉಬರಡ್ಕ ಉಮೇಶ ಶೆಟ್ಟರ ಸೂಚನೆಯಂತೆ ನಾಟ್ಯ ಕಲಿಯಲು ನಿರ್ಧಾರ. 

1989ನೇ ಇಸವಿ ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಕಲಾ ಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ಟರಿಂದ ಯಕ್ಷಗಾನ ನಾಟ್ಯ ಕಲಿಕೆ. ಆಗ ಗೋಪಾಲಕೃಷ್ಣ ಕುರುಪ್ ಅವರು ಕೇಂದ್ರದಲ್ಲಿ ಹಿಮ್ಮೇಳ ಗುರುಗಳಾಗಿದ್ದರು. ತರಬೇತಿ ಕೇಂದ್ರದಲ್ಲಿ ಶಂಭಯ್ಯ ಭಟ್, ವಾಮನ ಕುಮಾರ್, ಕಿರಣ್ ಕುಮಾರ್ ಪಂಜ, ಲಕ್ಷ್ಮೀನಾರಾಯಣ ನೆಲ್ಯಾಡಿ, ಸೀತಾರಾಮ ಭಟ್, ಬೇಗಾರು ಗೋಪಾಲ ಅವರು ಮಹೇಶ್ ಅವರ ಸಪಾಠಿಗಳಾಗಿದ್ದರು. ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಮೊದಲ ಪ್ರದರ್ಶನ, ಬಬ್ರುವಾಹನ ಕಾಳಗ ಪ್ರಸಂಗದಲ್ಲಿ ಪ್ರದ್ಯುಮ್ನನಾಗಿ ಮಹೇಶ್ ಅವರು ರಂಗಪ್ರವೇಶ ಮಾಡಿದ್ದರು.

ಇವರ ಮೊದಲ ತಿರುಗಾಟ 1989-90ರಲ್ಲಿ. ಕರ್ಗಲ್ಲು ವಿಶ್ವೇಶ್ವರ ಭಟ್ಟರ ಸೂಚನೆಯಂತೆ ಬಪ್ಪನಾಡು ಮೇಳದಲ್ಲಿ. ಮುಂದಿನ ವರ್ಷ ರೆಂಜಾಳ ರಾಮಕೃಷ್ಣ ರಾವ್ ಅವರ ಸೂಚನೆಯಂತೆ ಕಟೀಲು ಮೇಳಕ್ಕೆ. ಕಟೀಲು 2ನೇ ಮೇಳದಲ್ಲಿ. ಒಟ್ಟು 12 ವರ್ಷಗಳು ಕಟೀಲು ಮೇಳದಲ್ಲಿ ವ್ಯವಸಾಯ. ಪ್ರಥಮ ವರ್ಷ ಬಾಲಗೋಪಾಲರಾಗಿ, ಎರಡನೇ ವರ್ಷದಲ್ಲಿ ಮುಖ್ಯ ಸ್ತ್ರೀವೇಷ ಮತ್ತು ಪೀಠಿಕಾ ಸ್ತ್ರೀ ವರ್ಷಗಳ ನಿರ್ವಹಣೆ. ಮೂರನೇ ವೇಷಕ್ಕೆ ಪುಂಡುವೇಷಗಳನ್ನು ಮಾಡಲು ಆರಂಭಿಸಿದ್ದರು. ಕಲಾ ಕ್ಷೇತ್ರದಲ್ಲಿ ಇವರದ್ದು ಕ್ಷಿಪ್ರ ಬೆಳವಣಿಗೆ.

ಬಲಿಪರ ಭಾಗವತಿಕೆ, ಪೆರುವಾಯಿ ನಾರಾಯಣ ಭಟ್  ಮದ್ದಳೆಗಾರರು. ಕೊಡಕ್ಕಲ್ಲು ಗೋಪಾಲಕೃಷ್ಣ ಭಟ್, ಕೊಳ್ಯೂರು ನಾರಾಯಣ ಭಟ್, ಗುರಿಕ್ಕಾರ ನಾರಾಯಣ ಭಟ್, ರೆಂಜಾಳ ರಾಮಕೃಷ್ಣ ರಾವ್, ಪುಂಡರೀಕಾಕ್ಷ ಉಪಾಧ್ಯಾಯ, ಬೆಳ್ಳಾರೆ ಸುಬ್ಬಯ್ಯ ಶೆಟ್ಟಿ, ಅಜೆಕಾರು ರಾಜೀವ ಶೆಟ್ಟಿ, ಗುಂಡಿಮಜಲು ಗೋಪಾಲ ಭಟ್, ಬಣ್ಣದ ಸುಬ್ರಾಯ, ಬಾಯಾರು ರಮೇಶ್ ಭಟ್, ಮೊದಲಾದವರ ಒಡನಾಟವು ದೊರೆತಿತ್ತು. ಮಹೇಶ್ ಅವರು ಅಜೆಕಾರು ರಾಜೀವ ಶೆಟ್ಟರ ಮಾರ್ಗದರ್ಶನದಲ್ಲಿ ಬೆಳೆದವರು. ಚೆನ್ನಾಗಿ ಹೇಳಿಕೊಡುತ್ತಿದ್ದರಂತೆ. ಎಲ್ಲಾ ಹಿರಿಯ ಕಲಾವಿದರಿಂದ ಮಾರ್ಗದರ್ಶನವೂ ದೊರೆತಿತ್ತು. ಇದು ಕಲಿಕೆಗೆ ಅವಕಾಶವಾಗಿತ್ತು.

ಮುಂದಿನ ವರ್ಷಗಳಲ್ಲಿ ಪೆರುವಾಯಿ ನಾರಾಯಣ ಶೆಟ್ಟಿ, ತೊಡಿಕಾನ ವಿಶ್ವನಾಥ ಗೌಡ, ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಬಾಬು ಕುಲಾಲ್, ಶ್ರೀಧರ ಪಂಜಾಜೆ, ಗಣೇಶ್ ಶೆಟ್ಟಿ ಮೂಡುಶೆಡ್ಯೆ ಮೊದಲಾದವರ ಒಡನಾಟವೂ ಸಿಕ್ಕಿತ್ತು. 5ನೇ ತಿರುಗಾಟದಲ್ಲಿ ಮಹೇಶ್ ಮಣಿಯಾಣಿ ಚಂಡಮುಂಡರಾಗಿ ಅಭಿನಯಿಸಿ ಯಶಸ್ವಿಯಾಗಿದ್ದರು. ಅಜೆಕಾರು ರಾಜೀವ ಶೆಟ್ಟಿ ಮತ್ತು ಶ್ರೀಧರ ಪಂಜಾಜೆ ಅವರೊಂದಿಗೆ ಜತೆವೇಷಗಳನ್ನು ಮಾಡಿದ್ದರು. ಭಾರ್ಗವ. ಲಕ್ಷ್ಮಣ, ಷಣ್ಮುಖ, ಮನ್ಮಥ, ಶ್ರೀಕೃಷ್ಣ, ವಿಷ್ಣು ಅಲ್ಲದೆ ಕಸೆ ಸ್ತ್ರೀವೇಷಗಳನ್ನೂ ಮಾಡಿ ಅನುಭವವನ್ನು ಗಳಿಸಿಕೊಂಡಿದ್ದರು. ಆರು ವರ್ಷಗಳ ಬಳಿಕ ಪುಂಡುವೇಷಧಾರಿಯಾಗಿದ್ದ ಇವರು ಹಾಸ್ಯಗಾರನಾದುದು. 

ಅನಿರೀಕ್ಷಿತ ಅಚ್ಚರಿಯ ಬೆಳವಣಿಗೆಯೊಂದು ಪುಂಡುವೇಷಧಾರಿ ಮಹೇಶ್ ಮಣಿಯಾಣಿ ಅವರು ಹಾಸ್ಯಗಾರರಾಗಿ ಕಾಣಿಸಿಕೊಳ್ಳಲು ಕಾರಣವಾಯಿತು. ಕಟೀಲು ಮೇಳ ತಿರುಗಾಟ, ಪಂಜ ಸಮೀಪದ ಕೇನ್ಯ ವಿಷ್ಣುನಗರದಲ್ಲಿ ವರ್ಷಾಂಪ್ರತಿ ನಡೆಯುವ ಆಟ. ಮೇಳದ ಹಾಸ್ಯಗಾರರು ಅಸೌಖ್ಯದ ಕಾರಣ ಬಂದಿರಲಿಲ್ಲ. ತ್ರಿಜನ್ಮ ಮೋಕ್ಷ ಪ್ರಸಂಗ. ಬಲಿಪ ಶ್ರೀ ನಾರಾಯಣ ಭಾಗವತರು ಹಾಸ್ಯಗಾರನು ಆ ಪ್ರಸಂಗದಲ್ಲಿ ಮಾಡಬೇಕಾದ ಪಾತ್ರಗಳನ್ನು ಮಹೇಶ್ ಅವರಿಗೆ ನೀಡಿದ್ದರು. ಎಲ್ಲಾ ಹಿರಿಯ ಕಲಾವಿದರ ಸಹಕಾರ ನಿರ್ದೇಶನವೂ ದೊರೆತಿತ್ತು.

ಎರಡು ದಿನ ಬಳಿಕ ಕಟೀಲಿನಲ್ಲಿ ಶ್ರೀಕೃಷ್ಣ ಲೀಲೆ ಪ್ರಸಂಗ. ಮಹೇಶ ಅವರ ವಿಜಯನ ಪಾತ್ರವನ್ನು ಮೇಳದ ಯಜಮಾನರಾದ ಕಲ್ಲಾಡಿ ವಿಠಲ ಶೆಟ್ಟರು ನೋಡಿ ಇವರಿಗೆ ಹಾಸ್ಯಗಾರನ ಸ್ಥಾನವನ್ನು ಖಾಯಂಗೊಳಿಸಿದ್ದರು. ಕಟೀಲು ಮೇಳದಲ್ಲಿ ಆರು ವರ್ಷಗಳ ಕಾಲ ಮುಖ್ಯ ಹಾಸ್ಯಗಾರನಾಗಿ ವ್ಯವಸಾಯ. ಬಳಿಕ ಶ್ರೀ ಧರ್ಮಸ್ಥಳ ಮೇಳಕ್ಕೆ  ಸೇರ್ಪಡೆ. ಅಲ್ಲಿ ಹಾಸ್ಯ ಪಾತ್ರಗಳನ್ನು ಮಾಡುವ ಕಲಾವಿದನ ಅವಶ್ಯಕತೆಯಿತ್ತು. ಮುಖ್ಯ ಹಾಸ್ಯಗಾರರಾಗಿದ್ದ ಶ್ರೀ ರಸಿಕರತ್ನ ನಯನಕುಮಾರರ ಅಸ್ವಸ್ಥತೆಯ ಕಾರಣದಿಂದ. ನಯನಕುಮಾರರ ಜತೆಯಲ್ಲಿ ಹಾಸ್ಯಪಾತ್ರಗಳನ್ನು ಮಾಡುತ್ತಾ, ಅವರಿಂದ ಕಲಿಯುತ್ತಾ ಮಹೇಶ್ ಅವರು ಬೆಳೆದವರು.

ಪುತ್ತಿಗೆ ರಘುರಾಮ ಹೊಳ್ಳ, ಕೆ. ಗೋವಿಂದ ಭಟ್, ವಸಂತ ಗೌಡ, ಕುಂಬಳೆ ಶ್ರೀಧರ ರಾವ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಅಡೂರು ಗಣೇಶ ರಾವ್, ಮೊದಲಾದವರ ನಿರ್ದೇಶನವೂ ಸಿಕ್ಕಿತ್ತು. ಉಬರಡ್ಕ ಉಮೇಶ್ ಶೆಟ್ಟಿ ಅವರ ನಿರ್ದೇಶನ ಸಹಕಾರವೂ ಇತ್ತು. ಶ್ರೀ ರಾಮಕೃಷ್ಣ ಮಯ್ಯ, ಸದಾಶಿವ ಶೆಟ್ಟಿಗಾರ್, ಬೇಗಾರು ಶಿವಕುಮಾರ್, ನಿಡ್ಲೆ ಗೋವಿಂದ ಭಟ್, ತಾರಾನಾಥ ವರ್ಕಾಡಿ, ಉದ್ಯಾವರ ಜಯಕುಮಾರ್, ಕೆದಿಲ ಜಯರಾಮ ಭಟ್, ಗಂಗಾಧರ ಪುತ್ತೂರು, ಈಶ್ವರ ಪ್ರಸಾದ್, ಚಂದ್ರಶೇಖರ ಧರ್ಮಸ್ಥಳ, ಪದ್ಮನಾಭ ಉಪಾಧ್ಯಾಯ, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿ, ಮುರಾರಿ ಕಡಂಬಳಿತ್ತಾಯ, ಅಡೂರು ಲಕ್ಷ್ಮೀನಾರಾಯಣ ರಾವ್, ಶಶಿಧರ ಕುಲಾಲ್, ಸುಬ್ರಾಯ ಹೊಳ್ಳ, ಶಂಭಯ್ಯ ಕಂಜರ್ಪಣೆ, ಹರೀಶ್ ಮಣ್ಣಾಪು, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಮೊದಲಾದವರ ಒಡನಾಟವೂ ಸಹಕಾರವೂ ತಿರುಗಾಟದುದ್ದಕ್ಕೂ ದೊರಕಿತ್ತು. 

ಶ್ರೀ ಮಹೇಶ್ ಮಣಿಯಾಣಿ ಅವರು ಮಳೆಗಾಲದಲ್ಲಿ 9 ವರ್ಷ ನಿಡ್ಲೆ ಗೋವಿಂದ ಭಟ್ ಸಾರಥ್ಯದ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇದರ ಸದಸ್ಯನಾಗಿ  ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ ರಾಜ್ಯಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದರು. ಶ್ರೀಮತಿ ವಿದ್ಯಾ ಕೊಳ್ಯೂರು ನೇತೃತ್ವದ ‘ಯಕ್ಷಮಂಜೂಷ’ ತಂಡದ ಸದಸ್ಯನಾಗಿ 1 ವರ್ಷ ಉತ್ತರ ಭಾರತ ಮತ್ತು 2 ವರ್ಷ ಅಮೆರಿಕಾ ಪ್ರವಾಸ ಕೈಗೊಂಡಿದ್ದರು. ಶ್ರೀ ದೇವಾನಂದ ಭಟ್ ಬೆಳುವಾಯಿ ನೇತೃತ್ವದ ತಂಡದಲ್ಲಿ 1 ವರ್ಷ ಅಮೆರಿಕಾ ಪ್ರವಾಸ ಮತ್ತು ಯಕ್ಷಧ್ರುವ ಪಟ್ಲ ಸತೀಶ ಶೆಟ್ರ ತಂಡದ ಸದಸ್ಯನಾಗಿಯೂ ಅಮೇರಿಕಾದಲ್ಲಿ ನಡೆದ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು.

ಕಳೆದ ಮೂವತ್ತೆರಡು ವರ್ಷಗಳಿಂದ ಮಹೇಶ್ ಮಣಿಯಾಣಿ ಅವರು ಕಲಾವ್ಯವಸಾಯ ಮಾಡುತ್ತಿದ್ದಾರೆ. ಕಲಾಮಾತೆಯ ಅನುಗ್ರಹ, ಪೂಜ್ಯ ಖಾವಂದರ ಆಶೀರ್ವಾದ, ಮೇಳದ ಯಜಮಾನರಾದ ಶ್ರೀ ಹರ್ಷೇ೦ದ್ರ ಕುಮಾರರ ಪ್ರೋತ್ಸಾಹ, ಹಿಮ್ಮೇಳ ಮುಮ್ಮೇಳದ ಎಲ್ಲಾ ಕಲಾವಿದರ ಸಹಕಾರದಿಂದ ಇದು ಸಾಧ್ಯವಾಯಿತು ಎಂಬ ವಿಚಾರವನ್ನು ಹೇಳಿ ಮಹೇಶ್ ಅವರು ಇವರೆಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತಾರೆ.

ಮಹೇಶ್ ಮಣಿಯಾಣಿ ಅವರ ಪತ್ನಿ ಶ್ರೀಮತಿ ಮೀನಾಕ್ಷಿ. ಇವರು ಗೃಹಣಿ. ಶ್ರೀ ಮಹೇಶ್, ಮೀನಾಕ್ಷಿ ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಮಾ| ಮನೀಶ್ 8ನೇ ತರಗತಿಯ ವಿದ್ಯಾರ್ಥಿ. ಯಕ್ಷಗಾನದಲ್ಲಿ ವೇಷ ಮಾಡುತ್ತಾನೆ. ಕಿರಿಯ ಪುತ್ರ ಮಾ| ಚರಿತ್ 3ನೇ ತರಗತಿ ವಿದ್ಯಾರ್ಥಿ. ಇಬ್ಬರು ಮಕ್ಕಳೂ ಯೋಗ ಮತ್ತು ಭಜನಾ ಕಾರ್ಯಕ್ರಮಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಮಕ್ಕಳಿಗೆ ಉಜ್ವಲವಾದ ಭವಿಷ್ಯವು ಸಿದ್ಧಿಸಲಿ. ಶ್ರೀ ಮಹೇಶ್ ಮಣಿಯಾಣಿ ಅವರಿಂದ ಕಲಾಸೇವೆಯು ನಿರಂತರವಾಗಿ ನಡೆಯಲಿ ಎಂಬ ಹಾರೈಕೆಗಳು. 

ವಿಳಾಸ: ಶ್ರೀ ಮಹೇಶ್ ಮಣಿಯಾಣಿ ದೊಡ್ಡತೋಟ, ಯಕ್ಷಗಾನ ಕಲಾವಿದ, ನೆಲ್ಲೂರು ಕೆಮ್ರಾಜೆ ಗ್ರಾಮ, ಸುಳ್ಯ ತಾಲೂಕು, ಮೊಬೈಲ್: 9448868798

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ

ಲೇಖಕ: ಶ್ರೀ ರವಿಶಂಕರ್ ವಳಕ್ಕುಂಜ