ಇಂದು ಅಪರಾಹ್ನ 1.30 ಘಂಟೆಗೆ ಪುತ್ತೂರಿನ ಕಲ್ಲೇಗದ ಭಾರತ್ ಮಾತಾ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ಹಿರಿಯರ ಪ್ರತಿಷ್ಠಾನದ ಪುತ್ತೂರು ಘಟಕದ ಪದಗ್ರಹಣ ಸಮಾರಂಭದ ಪ್ರಯುಕ್ತ ಕೀರ್ತಿಶೇಷ ಬ್ರಹ್ಮೈಕ್ಯ ಶ್ರೀ ಶ್ರೀ ಎಡನೀರು ಕೇಶವಾನಂದ ಸ್ವಾಮೀಜಿಯವರ ಸಂಸ್ಮರಣೆ ನಡೆಯಲಿದೆ.
ಬಳಿಕ ನುರಿತ ಕಲಾವಿದರ ಕೂಡುವಿಕೆಯಿಂದ ‘ಸುಭದ್ರಾ ಕಲ್ಯಾಣ ” ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಜೀವನದಲ್ಲಿ ನಮಗೆ ಅಳು ತರಿಸುವ ಎಷ್ಟೋ ಘಟನೆಗಳಿರಬಹುದು. ಎಲ್ಲವೂ ಒಂದೊಕ್ಕೊಂದು ಭಿನ್ನವಾಗಿರುತ್ತದೆ. ಅಂತಹುದೇ ಕಣ್ಣೀರು ತರಿಸುವ ಘಟನೆಯೊಂದು ಇಲ್ಲಿ ನಡೆದಿದೆ. ಅಸ್ಸಾಂನಲ್ಲಿ ಮೃತ ಗೆಳತಿಯನ್ನು ಮದುವೆಯಾದ ಆಕೆಯ ಪ್ರಿಯತಮ ಯುವಕ ತನ್ನ ಜೀವನದುದ್ದಕ್ಕೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾನೆ.
ಆ ವ್ಯಕ್ತಿ ತನ್ನ ಮೃತ ಗೆಳತಿಯನ್ನು ಆಕೆಯ ಅಂತ್ಯಕ್ರಿಯೆಯಲ್ಲಿ ಮದುವೆಯಾದನು ಮತ್ತು ತನ್ನ ಜೀವನದುದ್ದಕ್ಕೂ ಒಬ್ಬಂಟಿಯಾಗಿರುತ್ತೇನೆ ಎಂದು ಆಕೆಗೆ ವಾಗ್ದಾನ ಮಾಡಿದನು. ಈ ಮೂಲಕ ಪ್ರೀತಿಗೆ ಯಾವುದೇ ಪರಿಮಿತಿಗಳಿಲ್ಲ ಎಂದು ತೋರಿಸಿಕೊಡುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಯುವಕನ ಹೃದಯ ವಿದ್ರಾವಕ ವಿವಾಹವನ್ನು ಚಿತ್ರಿಸಿದೆ.
ಅಸ್ಸಾಂನ ಗುವಾಹಟಿಯ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಶುಕ್ರವಾರ ನಿಧನರಾದ ತನ್ನ ಬಹುಕಾಲದ ಗೆಳತಿಯನ್ನು ಯುವಕನೊಬ್ಬನು ಮದುವೆಯಾಗಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಮೃತದೇಹದ ಮುಂದೆ ಮತ್ತೆ ಮದುವೆಯಾಗುವುದಿಲ್ಲ ಎಂದು ಭರವಸೆಯನ್ನೂ ನೀಡಿದ್ದರು.
ವೀಡಿಯೋದಲ್ಲಿರುವ ಯುವಕನನ್ನು ಬಿಟುಪನ್ ತಮುಲಿ ಎಂದು ಗುರುತಿಸಲಾಗಿದೆ, ಒಬ್ಬ ವ್ಯಕ್ತಿ ತನ್ನ ನವವಿವಾಹಿತ ವಧುವಿಗೆ ಅದೇ ವಾಟ್ನಲ್ಲಿ ಹುಡುಗಿಯ ಕೆನ್ನೆ ಮತ್ತು ಹಣೆಯ ಮೇಲೆ ಸಿಂಧೂರವನ್ನು ಹಚ್ಚುತ್ತಿರುವುದನ್ನು ಕಾಣಬಹುದು. 27ರ ಹರೆಯದ ಯುವಕ ಕೊರಳಿಗೆ ಬಿಳಿ ಮಾಲೆ ಹಾಕಿದಾಗ ಬಾಲಕಿ ನೆಲದ ಮೇಲೆ ಮಲಗಿದ್ದಳು. ನಂತರ ಯುವಕನು ಮತ್ತೊಂದು ಹಾರವನ್ನು ತೆಗೆದುಕೊಂಡನು. ಅವಳ ಹಲವಾರು ಭಾಗಗಳನ್ನು ಮುಟ್ಟಿದನು ಮತ್ತು ಮದುವೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಆಚರಣೆ ನಂತರ ಅದನ್ನು ಧರಿಸಿದನು.
ಮೋರಿಗಾಂವ್ ನಿವಾಸಿ ಬಿಟುಪನ್ ಮತ್ತು ಚಪರ್ಮುಖ್ ಕೊಸುವಾ ಗ್ರಾಮದ ಪ್ರಾರ್ಥನಾ ಬೋರಾ ಬಹುಕಾಲದಿಂದ ಪ್ರೇಮಿಗಳಾಗಿದ್ದರು ಎಂದು ಕುಟುಂಬ ತಿಳಿಸಿದೆ. ಈ ಸಂಬಂಧ ಮತ್ತು ಮದುವೆಯ ಯೋಜನೆ ಎರಡೂ ಕುಟುಂಬಗಳಿಗೆ ತಿಳಿದಿತ್ತು.
“ಕೆಲವು ದಿನಗಳ ಹಿಂದೆ ಪಾರ್ಥನಾ ಹಠಾತ್ತನೆ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಗುವಾಹಟಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಾವು ಎಷ್ಟೇ ಪ್ರಯತ್ನಿಸಿದರೂ, ನಾವು ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಅವರು ಶುಕ್ರವಾರ ರಾತ್ರಿ ನಿಧನರಾದರು” ಎಂದು ಆಕೆಯ ಸಂಬಂಧಿಕರಲ್ಲಿ ಒಬ್ಬರಾದ ಸುಭೋನ್ ಬೋರಾ ಹೇಳಿದ್ದಾರೆ.
ಆಘಾತಕ್ಕೊಳಗಾಗಿದ್ದರೂ ಆಕೆಯ ಪ್ರೇಮಿ ಬಿಪುಟಾನ್ ಮದುವೆಯ ಸಾಮಗ್ರಿಗಳನ್ನು ಅಂತ್ಯಕ್ರಿಯೆಗೆ ಕೊಂಡೊಯ್ದರು. “ಬಿಪುತಾನ್ ಬಂದಾಗ, ಅವನು ಅವಳನ್ನು ಮದುವೆಯಾಗುವುದಾಗಿ ಹೇಳಿದನು. ಇದು ನಮ್ಮ ಕಲ್ಪನೆಗೂ ಮೀರಿದ್ದರಿಂದ ನಾವು ಮೂಕರಾಗಿದ್ದೇವೆ. ಯಾರಾದರೂ ನನ್ನ ಸಹೋದರಿಯನ್ನು ಇಷ್ಟು ಆಳವಾಗಿ ಪ್ರೀತಿಸುತ್ತಾರೆ ಎಂದು ನಾವು ಕನಸು ಕಾಣಲಿಲ್ಲ. ನಾವು ಅವನನ್ನು ತಡೆಯಲು ಪ್ರಯತ್ನಿಸಲು ಸಹ ಸಾಧ್ಯವಾಗಲಿಲ್ಲ. ” ಎಂದು ಪ್ರಾರ್ಥನಾ ಅವರ ಸೋದರ ಸಂಬಂಧಿ ಸುಭೋನ್ ಹೇಳಿದ್ದಾರೆ.
“ನಾವು ಅವನು ಅಳುತ್ತಾ ಎಲ್ಲಾ ಸಮಾರಂಭಗಳಲ್ಲಿ ತೊಡಗಿರುವುದನ್ನು ನೋಡಿದೆವು. ನನ್ನ ಸಹೋದರಿ ನಿಜವಾಗಿಯೂ ಅದೃಷ್ಟಶಾಲಿ. ಅವಳು ಬಿಪುತಾನನ್ನು ಮದುವೆಯಾಗಲು ಬಯಸಿದ್ದಳು, ಮತ್ತು ಆ ವ್ಯಕ್ತಿ ಅವಳ ಅಂತಿಮ ಆಸೆಯನ್ನು ಪೂರೈಸಿದನು. ಇನ್ನೇನು ಹೇಳಬೇಕು?” ಪ್ರೀತಿಯ ಭಾವವು ಇಡೀ ಕುಟುಂಬದ ಮನಸ್ಸನ್ನು ಆಳವಾಗಿ ತಟ್ಟಿದೆ ಎಂದು ಸುಭೋನ್ ಹೇಳಿದರು.
56 ವರ್ಷದ ಮಹಿಳೆ ಸೀರೆ ಧರಿಸಿ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈನ 56 ವರ್ಷದ ಮಹಿಳೆಯೊಬ್ಬರು ಆರೋಗ್ಯದ ಸವಾಲುಗಳ ನಡುವೆಯೂ ತನ್ನನ್ನು ತಾನು ಹೇಗೆ ಫಿಟ್ ಆಗಿಟ್ಟುಕೊಳ್ಳುತ್ತಾಳೆ ಎಂಬುದರ ಕುರಿತು ತನ್ನ ಸ್ಪೂರ್ತಿದಾಯಕ ಕಥೆಯನ್ನು ಹಂಚಿಕೊಂಡಿದ್ದಾರೆ.
ಹ್ಯೂಮನ್ಸ್ ಆಫ್ ಮದ್ರಾಸ್ ಮತ್ತು ಮದ್ರಾಸ್ ಬಾರ್ಬೆಲ್ ಜಂಟಿಯಾಗಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, 56 ವರ್ಷದ ಮಹಿಳೆ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವುದನ್ನು ಕಾಣಬಹುದು. ಅವಳು ಭಾರವಾದ ತೂಕ ಮತ್ತು ಡಂಬ್ಬೆಲ್ಸ್ ಮತ್ತು ಇತರ ಹಲವಾರು ಜಿಮ್ ಯಂತ್ರಗಳು ಮತ್ತು ಸಲಕರಣೆಗಳನ್ನು ಎತ್ತುವುದನ್ನು ಸಹ ಕಾಣಬಹುದು,
ಇವೆಲ್ಲವನ್ನೂ ಆಕೆ ಮಾಡುತ್ತಿರುವುದು ಸೀರೆಯನ್ನು ಧರಿಸಿದಾಗ ಎಂಬುದು ಇಲ್ಲಿ ಪ್ರಮುಖವಾದ ಅಂಶ. ಮಹಿಳೆ ತನ್ನ ಸೊಸೆಯೊಂದಿಗೆ ವ್ಯಾಯಾಮ ಮಾಡುತ್ತಿದ್ದಾಳೆ. ವೀಡಿಯೊದ ಕೊನೆಯಲ್ಲಿ, ಜಿಮ್ನಲ್ಲಿರುವ ಇತರ ಮಹಿಳೆಯರೊಂದಿಗೆ ಸಿಬ್ಬಂದಿ ಸದಸ್ಯರು ಅವಳನ್ನು ಗೌರವಿಸುತ್ತಾರೆ.
“ನನಗೆ ಈಗ 56 ವರ್ಷ ಮತ್ತು ಇನ್ನೂ ವರ್ಕ್ಔಟ್ ಮಾಡುವುದನ್ನು ಮುಂದುವರಿಸಿದೆ. ನಿಮ್ಮ ಉಡುಗೆಯು ಸಹ ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡುವುದನ್ನು ತಡೆಯಬಾರದು! ನನ್ನ ಸೊಸೆ ಮತ್ತು ನಾನು ನಿಯಮಿತವಾಗಿ ವ್ಯಾಯಾಮ ಮಾಡುತ್ತೇವೆ. ನಾನು ಮೊದಲ ಬಾರಿಗೆ ಜಿಮ್ಗೆ ಬಂದಾಗ ನನಗೆ 52 ವರ್ಷ. ನಾನು ತೀವ್ರವಾದ ಮೊಣಕಾಲು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದೆ,
“ನನ್ನ ಮಗ ಚಿಕಿತ್ಸೆಯ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿದನು ಮತ್ತು ವ್ಯಾಯಾಮವನ್ನು ಪ್ರಾರಂಭಿಸಲು ನನಗೆ ಸೂಚಿಸಿದನು. ಅವನು ಮದ್ರಾಸ್ ಬಾರ್ಬೆಲ್ ಜಿಮ್ ಅನ್ನು ಹೊಂದಿದ್ದಾನೆ. ನಾನು ನನ್ನ ಸೊಸೆಯೊಂದಿಗೆ ಪವರ್ಲಿಫ್ಟಿಂಗ್, ಸ್ಕ್ವಾಟ್ಗಳು ಇತ್ಯಾದಿಗಳನ್ನು ಮಾಡುತ್ತೇನೆ. ಹೌದು, ಅದು ನನ್ನ ನೋವನ್ನು ಗುಣಪಡಿಸಿತು. ನಾವು, ಕುಟುಂಬವಾಗಿ, ನಮ್ಮ ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿ ಇರಿಸಿತು ಎಂದು ಅವರು ಹೇಳಿದ್ದಾರೆ.
ಹಂಚಿಕೊಂಡ ನಂತರ, ವೀಡಿಯೊವನ್ನು 1.1 ಮಿಲಿಯನ್ ವೀಕ್ಷಣೆಗಳು ಮತ್ತು 72,000 ಲೈಕ್ಗಳನ್ನು ಸ್ವೀಕರಿಸಲಾಗಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆಯ ಐದನೇ ವಾರ್ಷಿಕೋತ್ಸವ ಕಾರ್ಯಕ್ರಮದ ಪ್ರಯುಕ್ತ ನಾಳೆ ಪಾವಂಜೆ ಮೇಳದವರಿಂದ ‘ನಾಗ ಸಂಜೀವನ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ನಾಳೆ ದಿನಾಂಕ 20.11.2022 ರ ಆದಿತ್ಯವಾರ ಸಂಜೆ 6 ಘಂಟೆಯಿಂದ ಈ ಪ್ರದರ್ಶನ ನಡೆಯಲಿದೆ. ಅದಕ್ಕೂ ಮೊದಲು ಅಪರಾಹ್ನ ಘಂಟೆ 3ರಿಂದ ಯಕ್ಷಧ್ರುವ ಮಕ್ಕಳ ಕಲಾತಂಡ ಪುಂಜಾಲಕಟ್ಟೆ ಇವರಿಂದ ಶ್ರೀರಾಮಾಶ್ವಮೇಧ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸಂಜೆ ಘಂಟೆ 6.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ವಿವರಗಳಿಗೆ ಆಮಂತ್ರಣ ಪತ್ರಿಕೆಯನ್ನು ನೋಡಿ.
ಜಿಲ್ಲಾಡಳಿತ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಮಂಗಳೂರು, ಸರಕಾರಿ ಪ್ರೌಢಶಾಲೆ ಅತ್ತಾವರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನವಂಬರ್ 15 ಮತ್ತು 16 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ ದಿವಿಜ್ಞಾ (ಕಲ್ಲರ್ಪೆ ಶಿವಪ್ರಸಾದ್ ಮತ್ತು ಪವಿತ್ರಾ ದಂಪತಿ ಪುತ್ರಿ) 100ಮೀ ಪ್ರಥಮ, 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ಕೃತಿ.ಕೆ (ಬನ್ನೂರು ಕೊರಗಪ್ಪ ಗೌಡ ಮತ್ತು ವನಿತಾ.ಎ ದಂಪತಿ ಪುತ್ರಿ) 400 ಮೀ ಪ್ರಥಮ, 600ಮೀ ಪ್ರಥಮ, 200ಮೀ ತೃತೀಯ, 4×100 ಮೀ ರಿಲೇ ಪ್ರಥಮ,
17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ವಂಶಿ.ಬಿ.ಕೆ (ಬಪ್ಪಳಿಗೆ ಕಮಲಾಕ್ಷ ಹಾಗೂ ಜಯಲತಾ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ,100ಮೀ ತೃತೀಯ, 10ನೇ ತರಗತಿಯ ಬಿ.ಲಿಖಿತಾ ರೈ (ಬಿ.ಜಗನ್ನಾಥ ರೈ ಮತ್ತು ಗೀತಾ.ಜೆ.ರೈ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ, 9ನೇ ತರಗತಿಯ ಸಾನ್ವಿ ಎಸ್.ಪಿ (ಸೇನಾ ಯೋಧ ಪಳಂಬೆ ಸುಂದರ ಪೂಜಾರಿ ಹಾಗೂ ಶಿಕ್ಷಕಿ ಭವಿತಾ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ, 9ನೇ ತರಗತಿಯ ರಿದ್ಧಿ ಶೆಟ್ಟಿ (ಚಿದಾನಂದ ಹಾಗೂ ಸತ್ಯವತಿ.ಸಿ.ಶೆಟ್ಟಿ ದಂಪತಿ ಪುತ್ರಿ) 4×100 ಮೀ ರಿಲೇ ಪ್ರಥಮ,
14ರ ವಯೋಮಾನದ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಮನ್ವಿತ್ ನೆಕ್ಕರೆ (ಉಮೇಶ್ ನೆಕ್ಕರೆ ಮತ್ತು ಕವಿತಾ ನೆಕ್ಕರೆ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 80 ಮೀ ಹರ್ಡಲ್ಸ್ ತೃತೀಯ, 8ನೇ ತರಗತಿಯ ಕೃಪಾಲ್.ಪಿ.ಕೆ (ಕೆಮ್ಮಾಯಿ ಪ್ರಕಾಶ್ ಮತ್ತು ಸುನೀತಾ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 8ನೇ ತರಗತಿಯ ಮನ್ವಿತ್ ರೈ (ಮಂಜುನಾಥ್ ರೈ ಹಾಗೂ ಶಿಕ್ಷಕಿ ಪ್ರವೀಣಾ ರೈ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ, 8ನೇ ತರಗತಿಯ ಮನೋಹರ್ (ಪರ್ಲಡ್ಕ ಮಿಶ್ರಾ ರಾಮ್ ಹಾಗೂ ಲಕ್ಷ್ಮೀ ದಂಪತಿ ಪುತ್ರ) 4×100 ಮೀ ರಿಲೇ ಪ್ರಥಮ ಬಹುಮಾನ ಪಡೆದಿರುತ್ತಾರೆ.
ಅದೇ ರೀತಿ 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೃತಿ. ಕೆ ಪುತ್ತೂರು ತಾಲೂಕಿನಲ್ಲಿ ಏಕೈಕ ವೈಯಕ್ತಿಕ ಚಾಂಪಿಯನ್ ಶಿಪ್ ಗೆದ್ದುಕೊಂಡಿದ್ದಾರೆ. ಅಲ್ಲದೇ 14ರ ವಯೋಮಾನದ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಗಳನ್ನೂ ಕೂಡ ಗೆದ್ದುಕೊಂಡ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಟ್ಟು 13 ಮಂದಿ ಕ್ರೀಡಾಪಟುಗಳು 6 ಪ್ರಥಮ ಸ್ಥಾನಗಳೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ದೈಹಿಕ ಶಿಕ್ಷಣ ವಿಭಾಗ ಮುಖ್ಯಸ್ಥರಾದ ಶ್ರೀ ಭಾಸ್ಕರ ಗೌಡ ಮುಂಗ್ಲಿಮನೆಯವರ ಮಾರ್ಗದರ್ಶನದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಆಶಾಲತಾ, ಶ್ರೀಮತಿ ನಮಿತಾ, ಶ್ರೀ ದೀಪಕ್, ಶ್ರೀಮತಿ ರಶ್ಮಿ, ಶ್ರೀ ಪವನ್ ಕುಮಾರ್ ಇವರ ಸಹಕಾರದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಶ್ರೀ ಗಿರೀಶ್ ಕಣಿಯಾರು ಮತ್ತು ಶ್ರೀಮತಿ ವಾಣಿಶ್ರೀ ಇವರುಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ತರಬೇತುಗೊಳಿಸಿರುತ್ತಾರೆ ಎಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಪುತ್ತೂರು: ಬಾಲ್ಯದಲ್ಲಿ ಮಕ್ಕಳ ಮನಸ್ಸು ಹಸಿ ಮಣ್ಣಿನಂತೆ ಮೃದುವಾಗಿದ್ದು, ಉತ್ತಮ ವಿಚಾರ ಧಾರೆಗಳಿಂದ ಅವರನ್ನು ರೂಪಿಸುವ ಕಾರ್ಯವನ್ನು ಪೋಷಕರು ಮಾಡಬೇಕಿದೆ. ಪ್ರಾಥಮಿಕ ಹಂತದ ಶಿಕ್ಷಣ ಹಾಗೂ ಇನ್ನಿತರ ಅನುಭವಗಳು ಮುಂದಿನ ಜೀವನ ರೂಪಿಸಲು ನೆರವಾಗುವುದರಿಂದ ಹೆತ್ತವರು ಮಕ್ಕಳಿಗೆ ಹೆಚ್ಚು ಸಮಯ ನೀಡುವುದು ಅವಶ್ಯ. ಪೋಷಕರು ಹಾಗೂ ಶಿಕ್ಷಕರು ನೀಡುವ ಉತ್ತಮ ವಿಚಾರಗಳು ಮಕ್ಕಳಲ್ಲಿ ಕ್ರಿಯಾಶೀಲತೆ ಮೂಡಿಸಲು ಸಹಕಾರಿಯಾಗುತ್ತದೆ ಎಂದು ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ, ವಿಶ್ರಾಂತ ಪ್ರಾಚಾರ್ಯ ಡಾ. ಎಚ್. ಮಾಧವ ಭಟ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್ಸಿ ವಿದ್ಯಾಲಯದ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಶಾಲಾ ವಾರ್ಷಿಕೋತ್ಸವ ‘ಪ್ರತಿಭಾ ತರಂಗಿಣೀ 2022-23’ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪಡೆದ ಪುರಸ್ಕಾರಗಳನ್ನು ಮಕ್ಕಳು ಜೀವನಪೂರ್ತಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಬಾಲ್ಯದಲ್ಲಿ ಮಕ್ಕಳ ಸಣ್ಣ ಪುಟ್ಟ ಸಂತೋಷಗಳಲ್ಲಿ ಪೋಷಕರು ಭಾಗಿಯಾಗುವುದು ಅತ್ಯಗತ್ಯ. ಇಂದಿನ ದಿನಗಳಲ್ಲಿ ಹೆತ್ತವರಿಗೆ ತಮ್ಮ ದೈನಂದಿನ ಒತ್ತಡಗಳಿಂದಾಗಿ ಮಕ್ಕಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಶಾಲಾ ವಾರ್ಷಿಕೋತ್ಸವ ಹಾಗೂ ಇತರ ವಿಶೇಷ ಸಂದರ್ಭಗಳಲ್ಲಿ ಪೋಷಕರು ಬಿಡುವು ಮಾಡಿಕೊಂಡು ಮಕ್ಕಳ ಬೆಳವಣಿಗೆಯನ್ನು ಗಮನಿಸಬೇಕಿದೆ ಎಂದರು.
ಮಕ್ಕಳು ಒಬ್ಬರಿಗಿಂತ ಒಬ್ಬರು ವೈವಿಧ್ಯಮಯ ಪ್ರತಿಭೆಗಳನ್ನು ಹೊಂದಿದ್ದು ಅವರ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಿದೆ. ವಿವಿಧ ವಯೋಮಾನಗಳಲ್ಲಿ ಪ್ರತಿಯೊಬ್ಬರೂ ವಿಶೇಷ ಸಾಧನೆಯನ್ನು ಮೆರೆಯುತ್ತಾರೆ. ಆದ್ದರಿಂದ ಮಕ್ಕಳು ಪ್ರಶಸ್ತಿ ಗಳಿಸದಿದ್ದರೂ ಒತ್ತಡ ಹೇರುವ ಅಗತ್ಯವಿಲ್ಲ. ಅವರ ಅಭಿರುಚಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ನಡೆಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ ಮಾತನಾಡಿ ಮಕ್ಕಳ ಭವಿಷ್ಯ ರೂಪಿಸುವುದು ಪೋಷಕರು ನಿರ್ವಹಿಸಬೇಕಾದ ಅತೀ ದೊಡ್ಡ ಜವಾಬ್ದಾರಿಯಾಗಿದೆ. ಮಕ್ಕಳು ಸಾಧನೆ ಮಾಡಿದಾಗ ಪ್ರೋತ್ಸಾಹಿಸುವುದು, ದಾರಿ ತಪ್ಪಿ ನಡೆದಾಗ ಬುದ್ಧಿ ಹೇಳಿ ಅವರನ್ನು ಸರಿ ದಾರಿಗೆ ತರುವ ಕಾರ್ಯವನ್ನೂ ಸಮರ್ಥವಾಗಿ ನಿರ್ವಹಿಸುವುದು ಅಗತ್ಯ. ಯುವಜನತೆ ದೇಶದ ಶಕ್ತಿಯಾಗಿದ್ದು, ಅವರು ಸಾಧನೆಯ ಉತ್ತುಂಗ ಶಿಖರಕ್ಕೆ ಏರುವುದನ್ನು ನೋಡಲು ಎಲ್ಲರೂ ಇಷ್ಟಪಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳನ್ನು ಸಮರ್ಥವಾಗಿ ರೂಪಿಸುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವೈಯಕ್ತಿಕ ಹಾಗೂ ಗುಂಪು ವಿಭಾಗದಲ್ಲಿ ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ಗುಂಪು ವಿಭಾಗದಲ್ಲಿ ಐರಾವತ ತಂಡ ಚಾಂಪಿಯನ್ಷಿಪ್ ಪಡೆದರೆ, ಅಮೃತಾ ತಂಡ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
ಶಾಲಾ ಮಕ್ಕಳು ‘ಪಾಂಚಜನ್ಯ’ ಹಾಗೂ ‘ಏಕಾದಶಿ ಮಹಾತ್ಮೆ’ ಪ್ರಸಂಗ ಯಕ್ಷಗಾನ ಪ್ರದರ್ಶನ ನೀಡಿದ್ದು ನೆರೆದಿದ್ದವರ ಮನಸ್ಸನ್ನು ಸೂರೆಗೊಂಡಿತು. ಜತೆಗೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಸತ್ಯ ಪ್ರಸಾದ್ ಕೋಟೆ, ಶಿಕ್ಷಕ-ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ವಿದ್ಯಾರ್ಥಿ ಪ್ರತಿನಿಧಿಗಳಾದ ಸಂಸ್ಕೃತಿ ಎಸ್. ಶೆಟ್ಟಿ, ಮನ್ವಿತ್ ಎಸ್. ಉಪಸ್ಥಿತರಿದ್ದರು.
ಉಪಪ್ರಾಂಶುಪಾಲೆ ಸುಜನಿ ಎಂ. ಬೋರ್ಕರ್ ಸ್ವಾಗತಿಸಿದರು. ಪ್ರಾಂಶುಪಾಲೆ ಮಾಲತಿ ಡಿ. ವಂದಿಸಿದರು.
ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ತೆಂಕುತಿಟ್ಟು ಯಕ್ಷಗಾನದ ಹಿರಿಯ ಮದ್ದಳೆಗಾರರು. ಕಲಾಕ್ಷೇತ್ರದಲ್ಲಿ ಶ್ರೀಯುತರು ಸುಮಾರು ನಾಲ್ಕೂವರೆ ದಶಕಗಳ ಅನುಭವಿ. ವೇಷಧಾರಿಯಾಗಿ ಯಕ್ಷಗಾನ ಕ್ಷೇತ್ರವನ್ನು ಪ್ರವೇಶಿಸಿದ ಇವರು ಬಳಿಕ ಮದ್ದಳೆಗಾರನಾಗಿ ಕಾಣಿಸಿಕೊಂಡು ಪ್ರಸಿದ್ಧರಾದರು. ಉಪ್ಪಳ, ಕಟೀಲು, ಸುಂಕದಕಟ್ಟೆ, ಸುರತ್ಕಲ್, ಮಧೂರು, ಮಲ್ಲ ಮತ್ತು ಧರ್ಮಸ್ಥಳ ಮೇಳಗಳಲ್ಲಿ ವ್ಯವಸಾಯವನ್ನು ಮಾಡಿ ಅನುಭವವನ್ನು ಗಳಿಸಿಕೊಂಡವರು. ತೆಂಕುತಿಟ್ಟಿನ ಹೆಚ್ಚಿನ ಹಿರಿಯ ಭಾಗವತರುಗಳ ಹಾಡುಗಾರಿಕೆಗೆ ಚೆಂಡೆ ಮದ್ದಲೆಗಳನ್ನು ನುಡಿಸುವ ಅವಕಾಶವು ಇವರಿಗೆ ದೊರೆತಿತ್ತು.
ಯಕ್ಷಗಾನ ಕಲೆಯ ವಾದ್ಯೋಪಕರಣಗಳಾದ ಚೆಂಡೆ ಮತ್ತು ಮದ್ದಳೆಗಳ ನುಡಿಸುವಿಕೆಯಲ್ಲಿ ಇವರು ಪರಿಣತರು. ಈ ವಾದ್ಯೋಪಕರಣಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತ. ಹೊಸ ಚೆಂಡೆ ಮತ್ತು ಮದ್ದಲೆಗಳನ್ನು ತಯಾರಿಸಿ ಪ್ರದರ್ಶನಕ್ಕಾಗಿ ಒದಗಿಸಿ ಕೊಡುತ್ತಾರೆ. ಹಳತನ್ನು ದುರಸ್ಥಿಗೊಳಿಸಿ ಕೊಡುತ್ತಾರೆ. ಚೆಂಡೆಯ ಕೋಲುಗಳನ್ನು ಬೇಕಾದಂತೆ ಸಿದ್ಧಗೊಳಿಸಿ ಕೊಡುತ್ತಾರೆ. ಇವರು ಸಿದ್ಧಗೊಳಿಸಿದ ಚೆಂಡೆ, ಮದ್ದಳೆ, ಚೆಂಡೆಯ ಕೋಲುಗಳು ಪ್ರದರ್ಶನಗಳಲ್ಲಿ ಬಳಕೆಯಾಗುವುದನ್ನು ನಾವು ಗಮನಿಸಬಹುದು. ಈ ವಿಭಾಗದಲ್ಲಿ ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಬಿಡುವಿಲ್ಲದ ದುಡಿಮೆಯು ಪ್ರಶಂಸನೀಯವಾದುದು.
1996ರಲ್ಲಿ ಮೇಳದ ವ್ಯವಸಾಯಕ್ಕೆ ವಿದಾಯ ಹೇಳಿದ ಬಳಿಕ ಯಕ್ಷಗಾನ ಹಿಮ್ಮೇಳ ಪರಿಕರಗಳ ತಯಾರಿಕೆಯಲ್ಲಿ ಪರಿಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಕಲಿಕಾಸಕ್ತ ಮತ್ತು ವ್ಯವಸಾಯ ಮಾಡುತ್ತಿರುವ ಭಾಗವತರುಗಳಿಗೆ, ಅವರ ಅಭಿರುಚಿಗೆ ತಕ್ಕಂತೆ ಶ್ರುತಿಬದ್ಧವಾದ ಕಂಚಿನ ಜಾಗಟೆಯನ್ನೂ ಇವರು ತರಿಸಿಕೊಡುತ್ತಾರೆ. ಗುರುವಾಗಿ ಕಲಿಕಾಸಕ್ತರಿಗೆ ಭಾಗವತಿಕೆ ಮತ್ತು ಚೆಂಡೆ ಮದ್ದಳೆ ನುಡಿಸುವಲ್ಲಿ ತರಬೇತಿಯನ್ನೂ ನೀಡುತ್ತಿದ್ದಾರೆ. ಮದ್ದಳೆಗಾರರಾಗಿ, ಯಕ್ಷಗಾನ ವಾದ್ಯೋಪಕರಣಗಳ ತಯಾರಕರಾಗಿ, ಗುರುವಾಗಿ ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಕಲಾಭಿಮಾನಿಗಳಿಗೆಲ್ಲರಿಗೂ ಪರಿಚಿತರು.
ಅನುಭವೀ ಮದ್ದಳೆಗಾರ ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಹುಟ್ಟೂರು ಕಾಸರಗೋಡು ಜಿಲ್ಲೆಯ ಮೈರೆ ಗ್ರಾಮದ ಶೇಣಿ. (ಯಕ್ಷಗಾನ ರಂಗದ ಭೀಷ್ಮ ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರ ಹುಟ್ಟೂರು ಇದೇ ಶೇಣಿ) 1960ನೇ ಇಸವಿ ಶೇಣಿ ಶ್ರೀ ಮಹಾಬಲ ಭಟ್ ಮತ್ತು ಶ್ರೀಮತಿ ಶಾರದಾ ಅಮ್ಮ ದಂಪತಿಗಳ ಪುತ್ರನಾಗಿ ಜನನ. ಶ್ರೀ ಮಹಾಬಲ ಭಟ್ಟರು ಕೃಷಿಕರೂ ಯಕ್ಷಗಾನ ಕಲಾವಿದರೂ ಆಗಿದ್ದರು. ಇವರು ಮದ್ದಳೆಗಾರರಾಗಿ ಕೂಡ್ಲು ಮತ್ತು ಮುಲ್ಕಿ ಮೇಳಗಳಲ್ಲಿ ತಿರುಗಾಟ ನಡೆಸಿದವರು. ಯಕ್ಷಗಾನ ಹಿಮ್ಮೇಳದಲ್ಲಿ ಹೆಸರುವಾಸಿಯಾದ ಕುದ್ರೆಕೋಡ್ಲು ಮನೆಯವರು ಇವರಿಗೆ ಬಂಧುಗಳು. ಶೇಣಿ ಮಹಾಬಲ ಭಟ್ಟರ ಅಕ್ಕ ಕುದ್ರೆಕೋಡ್ಲು ಹಿರಿಯ ರಾಮ ಭಟ್ಟರ ಪತ್ನಿ. ಹೀಗೆ ಕುದ್ರೆಕೋಡ್ಲು ಮನೆಯವರೊಂದಿಗೆ ಶೇಣಿ ಮನೆಯವರಿಗೆ ಬಂಧುತ್ವವು ಬೆಸೆದಿತ್ತು.
ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ವಿದ್ಯಾರ್ಜನೆ ಎಸ್ಸೆಸ್ಸೆಲ್ಸಿ ವರೆಗೆ. ಏಳನೇ ತರಗತಿ ವರೆಗೆ ಶೇಣಿ ಶಾಲೆಯಲ್ಲಿ. ಎಂಟನೇ ತರಗತಿ ಉಪ್ಪಿನಂಗಡಿ ಶಾಲೆಯಲ್ಲಿ. ಬಳಿಕ ಹತ್ತನೇ ತರಗತಿ ವರೆಗೆ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ. ಬಾಲ್ಯದಲ್ಲಿ ಇವರಿಗೆ ಯಕ್ಷಗಾನಾಸಕ್ತಿ ಇತ್ತು. ಪ್ರದರ್ಶನಗಳನ್ನು ನೋಡುವುದರ ಜತೆಗೆ ತಂದೆಯವರಿಂದ ಮದ್ದಳೆವಾದನದ ಪಾಠವೂ ಆಗಿತ್ತು. ಆದರೆ ಇವರಿಗೆ ಮುಮ್ಮೇಳದಲ್ಲಿ ಆಸಕ್ತಿ ಉಂಟಾಗಿತ್ತು. ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ ವೇಷ ಮಾಡುವ ಅವಕಾಶವೂ ಸಿಕ್ಕಿತ್ತು.
ಆಗ ಖ್ಯಾತ ತಾಳಮದ್ದಳೆ ಅರ್ಥಧಾರಿ ಪೆರ್ಲ ಶ್ರೀ ಕೃಷ್ಣ ಭಟ್ಟರು (ಹಿಂದಿ ಪಂಡಿತರು) ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಅವರ ಸೂಚನೆಯಂತೆ ಹಿರಿಯ ಕಲಾವಿದ ಪಡ್ರೆ ಬದಿ ಶ್ರೀ ಕುಂಞಪ್ಪ ನಾಯ್ಕ ಅವರಿಂದ ಯಕ್ಷಗಾನ ಹೆಜ್ಜೆಗಾರಿಕೆಯ ಅಭ್ಯಾಸ. (ಇವರ ಪುತ್ರ ಪಡ್ರೆ ಶ್ರೀಧರ ಪ್ರಸ್ತುತ ಕಟೀಲು ಮೇಳದ ಮದ್ದಳೆಗಾರ) ಪೆರ್ಲ ಕೃಷ್ಣ ಭಟ್ಟರ ನಿರ್ದೇಶನವೂ ಸಿಕ್ಕಿತ್ತು. ಶಾಲಾ ಪ್ರದರ್ಶನ, ಮಾಗದ ವಧೆ ಪ್ರಸಂಗದಲ್ಲಿ ಮಾಗಧನಾಗಿ ರಂಗಪ್ರವೇಶ ಮಾಡಿದ್ದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಜನೆಯ ಬಳಿಕ ಕುಂಬಳೆ ಶ್ರೀ ಸೇಸಪ್ಪ ಸಂಚಾಲಕತ್ವದ ಉಪ್ಪಳ ಶ್ರೀ ಭಗವತೀ ಮೇಳದಲ್ಲಿ ಎರಡು ವರ್ಷ ತಿರುಗಾಟ. ಮೊದಲ ವರ್ಷ ವೇಷಧಾರಿಯಾಗಿ ತಮ್ಮ ಪಾಲಿಗೆ ಸಿಕ್ಕ ಚಿಕ್ಕ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಹಿಮ್ಮೇಳದತ್ತ ಒಲವು ಉಂಟಾಗಿ ಮದ್ದಳೆಗಾರನಾಗಬೇಕೆಂಬ ಆಸೆಯಾಗಿತ್ತು. ತಂದೆಯವರಿಂದ ಈ ಬಗೆಗೆ ತರಬೇತಿಯೂ ಸಿಕ್ಕಿತ್ತು. ಬಂಧುಗಳಾದ ಪೆರುವಾಯಿ ಶ್ರೀ ಕೃಷ್ಣ ಭಟ್ಟರ ನಿರ್ದೇಶನವೂ ಸಿಕ್ಕಿತ್ತು. ಇವರಿಂದಲೇ ಮದ್ದಳೆ ನುಡಿತಗಳ ಬಾಯಿತಾಳವನ್ನು ಅಭ್ಯಸಿಸಿದ್ದರು.
ಎರಡನೇ ವರ್ಷ ಉಪ್ಪಳ ಮೇಳದಲ್ಲಿ ಮದ್ದಳೆಗಾರನಾಗಿ ತಿರುಗಾಟ. ಆಗ ಹಿರಿಯ ಮದ್ದಳೆಗಾರರಾದ ಮಳಿ ಶ್ರೀ ಶ್ಯಾಮ ಭಟ್ಟರ ಒಡನಾಟವೂ, ನಿರ್ದೇಶನವೂ ಸಿಕ್ಕಿತ್ತು. ಉಪ್ಪಳ ಮೇಳದಲ್ಲಿ ಎರಡು ವರ್ಷ ತಿರುಗಾಟದ ಬಳಿಕ ಕಟೀಲು ಮೇಳ ಸೇರಲು ಶ್ರೀ ಶೇಣಿ ಮಹಾಬಲ ಭಟ್ಟರು ಸೂಚನೆ ನೀಡಿದ್ದರು. ತೀರ್ಥರೂಪರ ಸಲಹೆಯಂತೆ ಶೇಣಿ ಸುಬ್ರಹ್ಮಣ್ಯ ಭಟ್ಟರು ಕಟೀಲು ಮೇಳದಲ್ಲಿ ವ್ಯವಸಾಯ ಮಾಡುವ ನಿರ್ಧಾರವನ್ನು ಕೈಗೊಂಡರು. ಕಟೀಲು ಎರಡನೇ ಮೇಳದಲ್ಲಿ ಎರಡು ವರ್ಷ ವ್ಯವಸಾಯ. ಮೊದಲ ವರ್ಷ ಅಡೂರು ಸುಂದರ ರಾಯರ ಒಡನಾಟ, ಸಹಕಾರವು ಸಿಕ್ಕಿತ್ತು. ಎರಡನೇ ವರ್ಷ ಶ್ರೀ ಪೆರುವಾಯಿ ನಾರಾಯಣ ಭಟ್ಟರ ಮತ್ತು ವಳಕ್ಕುಂಜ ಕುಮಾರ ಸುಬ್ರಹ್ಮಣ್ಯ ಭಟ್ಟರ ಒಡನಾಟವು ಸಿಕ್ಕಿತ್ತು.
ಕಟೀಲು ಮೇಳದ ತಿರುಗಾಟದ ಬಳಿಕ ಸುಂಕದಕಟ್ಟೆ ಮೇಳದಲ್ಲಿ ಒಂದು ವರ್ಷ ವ್ಯವಸಾಯ. ಇಲ್ಲಿ ಪುತ್ತಿಗೆ ತಿಮ್ಮಪ್ಪ ರೈಗಳ ಮತ್ತು ತಲೆಂಗಳ ಗೋಪಾಲಕೃಷ್ಣ ಭಟ್ಟರ ಒಡನಾಟವು ಸಿಕ್ಕಿತ್ತು. ಮೂರು ತಿಂಗಳ ತಿರುಗಾಟದ ಬಳಿಕ ಮುಖ್ಯ ಮದ್ದಳೆಗಾರರಾಗಿ ವ್ಯವಸಾಯ ಮಾಡಲು ಅವಕಾಶವಾಗಿತ್ತು. ಬಳಿಕ ಸುರತ್ಕಲ್ ಮೇಳದಲ್ಲಿ ಮೂರು ವರ್ಷ ವ್ಯವಸಾಯ. ಈ ಸಂದರ್ಭದಲ್ಲಿ ರಘುರಾಮ ಭಾಗವತ, ಪದ್ಯಾಣ ಗಣಪತಿ ಭಟ್, ಕಡಬ ನಾರಾಯಣ ಆಚಾರ್ಯ, ಶಿರಂಕಲ್ಲು ನಾರಾಯಣ ಭಟ್ಟರೊಂದಿಗೆ ವ್ಯವಸಾಯ ಮಾಡಲು ಅವಕಾಶವಾಗಿತ್ತು.
ಬಳಿಕ ಮಧೂರು ಮೇಳದಲ್ಲಿ ಒಂದು ಇಲ್ಲಿ ಕಾಸರಗೋಡು ವೆಂಕಟ್ರಮಣ ಅವರೊಂದಿಗೆ ವ್ಯವಸಾಯ. ಬಳಿಕ ಒಂದು ವರ್ಷ ಪಟ್ಲಗುತ್ತು ಮಹಾಬಲ ಶೆಟ್ರ ನಾಯಕತ್ವದ ಮಲ್ಲ ಮೇಳದಲ್ಲಿ ವ್ಯವಸಾಯ. ಬಳಿಕ ಶ್ರೀ ಧರ್ಮಸ್ಥಳ ಮೇಳದಲ್ಲಿ ಐದು ವರ್ಷ ವ್ಯವಸಾಯ. ಇಲ್ಲಿ ಕಡತೋಕಾ ಮಂಜುನಾಥ ಭಾಗವತ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯ, ಸುಬ್ರಹ್ಮಣ್ಯ ಶಾಸ್ತ್ರಿ ಅವರೊಂದಿಗೆ ವ್ಯವಸಾಯ. ಇಲ್ಲಿ ಮುಮ್ಮೇಳದ ಖ್ಯಾತ ಕಲಾವಿದರ ಒಡನಾಟವೂ ದೊರೆತಿತ್ತು. ಧರ್ಮಸ್ಥಳ ಮೇಳದ ನಂತರ ಒಂದು ವರ್ಷ ಕರ್ನಾಟಕ ಮೇಳದಲ್ಲಿ ವ್ಯವಸಾಯ ಮಾಡಿದ್ದರು. ಈ ಸಮಯದಲ್ಲಿ ದಿನೇಶ ಅಮ್ಮಣ್ಣಾಯ, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮೊದಲಾದವರ ಒಡನಾಟ ದೊರಕಿತ್ತು.
ಮನೆಯ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವ ಅನಿವಾರ್ಯತೆಯಿಂದ 1996ರಲ್ಲಿ ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು. ಬಹು ಬೇಡಿಕೆಯ ಕಲಾವಿದನಾಗಿರುವಾಗಲೇ ಇವರು ಮೇಳದ ವ್ಯವಸಾಯವನ್ನು ನಿಲ್ಲಿಸಬೇಕಾಗಿ ಬಂದಿತ್ತು. ಆದರೂ ಯಕ್ಷಗಾನದಿಂದ ನಿವೃತ್ತರಾಗದೆ ವ್ಯವಸಾಯವನ್ನು ಮಾಡುತ್ತಿದ್ದಾರೆ. 1996ರ ಬಳಿಕ ಅತಿಥಿ ಕಲಾವಿದನಾಗಿ ಹವ್ಯಾಸೀ ಪ್ರದರ್ಶನಗಳಲ್ಲಿ ಭಾಗವಹಿಸುತ್ತಾ ಬಂದಿರುತ್ತಾರೆ. ಅಲ್ಲದೆ ತಾನು ಬಹುವಾಗಿ ಪ್ರೀತಿಸುವ ಯಕ್ಷಗಾನದ ವಾದ್ಯೋಪಕರಣಗಳಾದ ಚೆಂಡೆ ಮದ್ದಳೆಯನ್ನು ತಯಾರಿಸುವ ಕೆಲಸದಲ್ಲೂ ತೊಡಗಿಸಿಕೊಂಡು ಬಂದಿರುತ್ತಾರೆ. ಚೆಂಡೆಯ ಕೋಲುಗಳನ್ನು ತಯಾರಿಸುವ ಕಲೆಯೂ ಇವರಿಗೆ ಕರಗತ. ಈ ವಿಭಾಗದಲ್ಲೂ ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಬಹು ಬೇಡಿಕೆಯ ಕಲಾವಿದರು.
ಈ ಪರಿಕರಗಳನ್ನು ತಯಾರಿಸುವಲ್ಲಿ ಬಿಡುವಿಲ್ಲದ ದುಡಿಮೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. 2020-21ರಿಂದ ತೊಡಗಿ ಕಾಯರ್ ಕಟ್ಟೆ ಅಯ್ಯಪ್ಪ ಭಜನಾ ಮಂದಿರ, ಸಜಂಕಿಲ ಶ್ರೀ ದುರ್ಗಾ ಯುವಕ ಮಂಡಲ ಮೊದಲಾದ ಕಡೆ ಹಿಮ್ಮೇಳ ತರಗತಿಗಳನ್ನೂ ನಡೆಸುತ್ತಿದ್ದಾರೆ. ಮಳೆಗಾಲದಲ್ಲಿ ನಿಡ್ಲೆ ಗೋವಿಂದ ಭಟ್ಟರ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಪ್ರದರ್ಶನಗಳಲ್ಲಿ ಮೂರು ವರ್ಷ ಭಾಗವಹಿಸಿರುತ್ತಾರೆ. ಒಂದು ಬಾರಿ ವಿದೇಶಯಾತ್ರೆಯನ್ನೂ ಕೈಗೊಂಡಿದ್ದಾರೆ. ಸಂಘಟಕರಾದ ಶ್ರೀ ಎಸ್.ಎನ್. ಪಂಜಾಜೆ ಅವರ ನೇತೃತ್ವದಲ್ಲಿ ದೆಹಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರದರ್ಶನದಲ್ಲೂ ಭಾಗವಹಿಸಿರುತ್ತಾರೆ. 1997ರಿಂದ ಇವರು ಬಾಯಾರು ಸಮೀಪದ ಉಳುವಾನ ಎಂಬಲ್ಲಿ ವಾಸಿಸುತ್ತಿದ್ದಾರೆ.
ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರು ಮೇಳದ ವ್ಯವಸಾಯದಲ್ಲಿ, ಹಿರಿಯ ಮದ್ದಳೆಗಾರರ ಒಡನಾಟದಲ್ಲಿ ಕಲಿಯುತ್ತಾ ಹಿಮ್ಮೇಳ ವಿದ್ಯೆಗಳನ್ನು ಕಲಿತು ಕರಗತ ಮಾಡಿಕೊಂಡವರು. ಬಾಲ್ಯದಲ್ಲಿ ತೀರ್ಥರೂಪರಿಂದ ಬಾಲಪಾಠ. ಬಳಿಕ ಬಂಧುಗಳಾದ ಕಿರಿಯ ಕುದ್ರೆಕೊಡ್ಲು ರಾಮಭಟ್ಟರಿಂದಲೂ ತರಬೇತಿ ಪಡೆದಿದ್ದರು. ಮೇಳದ ವ್ಯವಸಾಯದುದ್ದಕ್ಕೂ ಸಹ ಕಲಾವಿದರ ಒಡನಾಟವು ಕಲಿಕೆಗೆ ಅನುಕೂಲವಾಗಿತ್ತು.
ಕಲಾ ಬದುಕಿನಲ್ಲೂ ಸಾಂಸಾರಿಕವಾಗಿಯೂ ಶ್ರೀಯುತರು ತೃಪ್ತರು. ಇವರ ಪತ್ನಿ ಶ್ರೀಮತಿ ಶೈಲಜಾ. ಇವರು ಗೃಹಣಿ. ಇವರು ಶ್ರೀ ಸುಬ್ರಾಯ ಭಟ್ ತಾಳ್ತಜೆ ಮತ್ತು ಶ್ರಿಮತಿ ಲಕ್ಷ್ಮೀ ಅಮ್ಮ ದಂಪತಿಗಳ ಪುತ್ರಿ. ಇವರ ತವರುಮನೆ ತಾಳ್ತಜೆ. ಯಕ್ಷಗಾನ ಹಿನ್ನೆಲೆ ಇರುವ ಮನೆ ಇದು. ಇವರ ದೊಡ್ಡಪ್ಪ ತಾಳ್ತಜೆ ಶ್ರೀ ತಿರುಮಲೇಶ್ವರ ಭಟ್ಟರು ಭಾಗವತರಾಗಿ ಶ್ರೀ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡಿದವರು. ಇವರು ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು. ಶ್ರೀಮತಿ ಶೈಲಜಾ ಅವರ ತಂದೆ ಶ್ರೀ ಸುಬ್ರಾಯ ಭಟ್ ತಾಳ್ತಜೆ ಹವ್ಯಾಸಿ ಮದ್ದಳೆಗಾರರು. ಇವರೂ ಮಾಂಬಾಡಿ ನಾರಾಯಣ ಭಾಗವತರ ಶಿಷ್ಯರು.
ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ ಮತ್ತು ಶ್ರೀಮತಿ ಶೈಲಜಾ ದಂಪತಿಗಳಿಗೆ ಮೂವರು ಪುತ್ರರು. ಹಿರಿಯ ಪುತ್ರ ಶ್ರೀ ರವಿಕಿರಣ. ಇವರು ಪುತ್ತೂರಿನ ಅನಘ ಇಂಡಸ್ಟ್ರೀಸ್ ಸಂಸ್ಥೆಯ ಮಾಲೀಕರು. ಇವರು ಯಕ್ಷಗಾನ ಹೆಜ್ಜೆಗಾರಿಕೆ ಕಲಿತಿದ್ದು ವೇಷ ಮಾಡಿ ಅನುಭವ ಉಳ್ಳವರು. ಇವರ ಪತ್ನಿ ಶ್ರೀಮತಿ ಶೃತಿ. ರವಿಕಿರಣ,ಶೃತಿ ದಂಪತಿಗಳ ಪುತ್ರ ಮಾಸ್ಟರ್ ವಿಹಾನ್ ಕೃಷ್ಣ. ದ್ವಿತೀಯ ಪುತ್ರ ಶ್ರೀ ಮುರಳಿಕೃಷ್ಣ. ಇವರು ಮಂಗಳೂರಿನಲ್ಲಿ ಉದ್ಯೋಗಿ. ಇವರು ಯಕ್ಷಗಾನ ಹಿಮ್ಮೇಳ ಕಲಿತು ಚೆಂಡೆ ಬಾರಿಸುವ ಹವ್ಯಾಸವನ್ನು ಹೊಂದಿರುತ್ತಾರೆ. ಇವರ ಪತ್ನಿ ಶ್ರೀಮತಿ ಜಯದುರ್ಗಾ. ಇವರು ಗೃಹಣಿ. ತೃತೀಯ ಪುತ್ರ ಶ್ರೀ ಸತ್ಯನಾರಾಯಣ. ಇವರು ಬೆಂಗಳೂರಿನಲ್ಲಿ ಕಂಪೆನಿ ಸೆಕ್ರೆಟರಿ (CS) ಓದುತ್ತಿದಾರೆ. ನಾಟ್ಯ ಕಲಿತು ವೇಷ ಮಾಡುವ ಹವ್ಯಾಸವು ಇವರಿಗಿದೆ.
ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್ಟರ ಮನೆಯವರಿಗೆಲ್ಲಾ ಶ್ರೀ ದೇವರು ಸಕಲ ಭಾಗ್ಯಗಳನ್ನೂ ಕರುಣಿಸಲಿ. ಅವರ ಮನೋಕಾಮನೆಗಳೆಲ್ಲವೂ ಈಡೇರಲಿ. ಶೇಣಿ ಸುಬ್ರಹ್ಮಣ್ಯ ಭಟ್ಟರಿಂದ ಕಲಾ ವ್ಯವಸಾಯವು ನಿರಂತರವಾಗಿ ನಡೆಯಲಿ. ಕಲಾ ಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಶ್ರೀ ಶೇಣಿ ಸುಬ್ರಹ್ಮಣ್ಯ ಭಟ್, ಉಳುವಾನ, ಅಂಚೆ ಚಿಪ್ಪಾರು, ವಯಾ ಉಪ್ಪಳ, ಮೊಬೈಲ್:8547206905
ಪುತ್ತೂರು: ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿಗಳು ಸಾಧನೆ ಮಾಡಲು ಸಾಧ್ಯ. ಶಾಲೆ ಕೇವಲ ಪಠ್ಯ ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಕೊಂಡಾಗ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಾಧ್ಯ. ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಂಸ್ಕಾರವನ್ನೂ ಪಡೆದಾಗ ಉತ್ಕೃಷ್ಟ ವ್ಯಕ್ತಿತ್ವ ಪಡೆಯಲು ಸಾಧ್ಯವಾಗುತ್ತದೆ ಎಂದು ವಾಗ್ಮಿ, ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಸಿಬಿಎಸ್ಇ ವಿದ್ಯಾಲಯದ ಶ್ರೀ ಶಂಕರ ಸಭಾಭವನದ ಶ್ರೀ ಲಲಿತಾಂಬಿಕಾ ವೇದಿಕೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಾ ತರಂಗಿಣೀ 2022-23 – ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕಲೆಗಳು ಭಾರತೀಯ ಮೌಲ್ಯಗಳಿಗೆ ಆಸರೆಯಾಗಿದ್ದು, ಮಕ್ಕಳಲ್ಲಿ ಅಡಗಿರುವ ವಿಶೇಷ ಪ್ರತಿಭೆಗಳು ಸೂಕ್ತ ವೇದಿಕೆಯಲ್ಲಿ ಪ್ರದರ್ಶನವಾಗಬೇಕು. ವಿದ್ಯಾರ್ಥಿಗಳು ಪೂರ್ಣ ಮನಸ್ಸಿನಿಂದ ಭಾರತೀಯ ಕಲಾ ಪ್ರಕಾರಗಳ ಕುರಿತು ಅರಿತಾಗ ಅವರ ಚಿಂತನೆಯೂ ಬದಲಾಗುತ್ತದೆ ಎಂದರು.
ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಶಾಲೆಯ ವಾರ್ಷಿಕ ವಿಶೇಷ ವರದಿಯ ವಿಡಿಯೋ ಪ್ರದರ್ಶನ ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಅಂಬಿಕಾ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್. ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ನಿವೃತ್ತ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್, ಸುರೇಶ್ ಶೆಟ್ಟಿ, ಪ್ರಸನ್ನ ಭಟ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ಅಂಬಿಕಾ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್, ವಿದ್ಯಾರ್ಥಿ ಪ್ರತಿನಿಧಿಗಳಾದ ಮನ್ವಿತ್ ಎಸ್., ಸಂಸ್ಕೃತಿ ವಿ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಮಾಲತಿ ಡಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಸುಜನಿ ಎಂ. ಬೋರ್ಕರ್ ವಂದಿಸಿದರು.
ಚಲಿಸುತ್ತಿದ್ದ ಕಾರಿನೊಳಗೆ 19 ವರ್ಷದ ಕಾಸರಗೋಡು ಮೂಲದ ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಗುರುವಾರ ತಡರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ 19 ವರ್ಷದ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರ್ನಾಕುಲಂ ಪೊಲೀಸರು ಮೂವರು ಪುರುಷರು ಮತ್ತು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ನಿನ್ನೆ ರಾತ್ರಿ ನಡೆದ ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಮೂವರು ಯುವಕರು ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕಾಸರಗೋಡು ಮೂಲದ ಮಾಡೆಲ್ ಯುವತಿ ಕೆಲ ದಿನಗಳ ಹಿಂದೆ ಇಲ್ಲಿಗೆ ಬಂದಿದ್ದರು ಯುವ ಮಾಡೆಲ್ ನಿನ್ನೆ ರಾತ್ರಿ 8:30 ರ ಸುಮಾರಿಗೆ ತನ್ನ ಸ್ನೇಹಿತೆಯೊಂದಿಗೆ ಕೊಚ್ಚಿಯ ಬಾರ್ಗೆ ಬಂದಿದ್ದಾಳೆ. ರಾತ್ರಿ 10 ಗಂಟೆಗೆ ಬಾರ್ನಲ್ಲಿ ಕುಸಿದು ಬಿದ್ದಿದ್ದಾಳೆ.
ಈ ಹಿನ್ನೆಲೆಯಲ್ಲಿ ಯುವಕರು ಆಕೆಯನ್ನು ಆಕೆಯ ನಿವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಆಕೆಯ ಮಹಿಳಾ ಸ್ನೇಹಿತೆ ಕಾರಿನಲ್ಲಿ ಬರಲಿಲ್ಲ. ಬಳಿಕ ಕಾರಿನಲ್ಲಿ ನಗರದೆಲ್ಲೆಡೆ ಸುತ್ತಾಡಿದ ಯುವಕರು ಕಾರಿನೊಳಗೆ ರೂಪದರ್ಶಿಯ ಮೇಲೆ ಸರದಿಯಂತೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಕಾಕ್ಕನಾಡಿನ ಆಕೆಯ ಮನೆಯ ಮುಂದೆ ಡ್ರಾಪ್ ಮಾಡಿದ್ದಾರೆ.
ಬಳಿಕ ಮಹಿಳೆ ತನ್ನ ಸ್ನೇಹಿತೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಇಂದು ಆಕೆ ತನ್ನ ಸ್ನೇಹಿತೆಗೆ ವಿಷಯ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಯನ್ನು ಸ್ನೇಹಿತೆ ಪೊಲೀಸರಿಗೆ ತಿಳಿಸಿದ್ದಾರೆ. ಇಂದು ಬೆಳಗ್ಗೆ ದೂರು ಸ್ವೀಕರಿಸಿದ ಪೊಲೀಸರು ಯುವತಿ ಹೋದ ಬಾರ್ ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಯುವಕರು ನೀಡಿದ ಗುರುತಿನ ದಾಖಲೆಗಳಲ್ಲಿ ನಕಲಿ ವಿಳಾಸ ಇರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಹಿಳೆಯ ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಆಕೆಯನ್ನು ವಿಚಾರಿಸಿದಾಗ ಮೂವರು ಯುವಕರು ಕೊಡುಂಗಲ್ಲೂರು ಮೂಲದವರು ಎಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ವೇಳೆಗೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಕೊಡುಂಗಲ್ಲೂರಿನ ವಿವೇಕ್, ನಿತಿನ್ ಮತ್ತು ಸುಧೀಪ್ ಮತ್ತು ರಾಜಸ್ಥಾನದ ಡಿಂಪಲ್ ಲವಾ ಎರ್ನಾಕುಲಂ ದಕ್ಷಿಣ ಪೊಲೀಸರ ವಶದಲ್ಲಿದ್ದಾರೆ.
ಗುರುವಾರ ರಾತ್ರಿ ಎರ್ನಾಕುಲಂನ ಅಟ್ಲಾಂಟಿಸ್ ಹೋಟೆಲ್ನಲ್ಲಿ ಘಟನೆ ನಡೆದಿದೆ. ಇಲ್ಲಿ ನಡೆದ ಡಿಜೆ ಪಾರ್ಟಿ ಬಳಿಕ ರಾಜಸ್ಥಾನ ಮಹಿಳೆ ಡಿಂಪಲ್ ಲಾವಾ ಜೊತೆ ಮದ್ಯ ಸೇವಿಸುತ್ತಿದ್ದ ಯುವತಿ ಕುಸಿದು ಬಿದ್ದಿದ್ದಾಳೆ. ಸಹಾಯಕ್ಕೆ ಬಂದ ವ್ಯಕ್ತಿಗಳು ಕಾಕ್ಕನಾಡ್ನಲ್ಲಿರುವ ಆಕೆಯ ನಿವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಯುವತಿಯ ಸ್ನೇಹಿತೆಯಾದ ರಾಜಸ್ಥಾನ ಮಹಿಳೆಯನ್ನು ಅಲ್ಲಿಂದ ಕಳುಹಿಸಿದ್ದಾರೆ.
ಆಮೇಲೆ ವಿವೇಕ್ ಅವರ ಹೊಚ್ಚಹೊಸ ಮಹೀಂದ್ರಾ ಥಾರ್ನಲ್ಲಿ ಆರೋಪಿಗಳು ನಗರದಲ್ಲಿ ಸುತ್ತಾಡಿದ ನಂತರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಾಡೆಲ್ ವಾಸವಿದ್ದ ಕಾಕ್ಕನಾಡು ಇನ್ಫೋಪಾರ್ಕ್ ಬಳಿಯ OYO ಸ್ಟೆ ಎದುರು ಮಹಿಳೆಯನ್ನು ಇಳಿಸಲಾಗಿತ್ತು.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಇಂದು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸರು ಆಕೆಯನ್ನು ಕಲಮಸೇರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳಾ ಸ್ನೇಹಿತೆ ಉದ್ದೇಶಪೂರ್ವಕವಾಗಿ ಕಾರಿನಲ್ಲಿ ಹೋಗದಿರಲು ನಿರ್ಧರಿಸಿದ್ದಾರೆ ಎಂದು ತೀರ್ಮಾನಿಸಿ ಅವಳನ್ನು ಬಂಧಿಸಲಾಗಿದೆ. ಬಾರ್ನಲ್ಲಿ ಯುವಕರು ನೀಡಿದ ವಿಳಾಸಗಳು ನಕಲಿಯಾಗಿತ್ತು. ರಾಜಸ್ಥಾನದ ಮಹಿಳೆಯನ್ನು ವಿಚಾರಣೆ ನಡೆಸಿದಾಗ ಪೊಲೀಸರಿಗೆ ಮೂಲ ಮಾಹಿತಿ ಸಿಕ್ಕಿದೆ. ಪ್ರಕರಣವನ್ನು ದಕ್ಷಿಣ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಮಹೀಂದ್ರ ಥಾರ್ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
ಯಕ್ಷಗಾನಪ್ರಿಯರಿಗೆ ಯಕ್ಷಗಾನ ಆಸ್ವಾದಿಸಲು ಒಂದು ಸುವರ್ಣಾವಕಾಶದ ಸಂದರ್ಭ ಇದೀಗ ಒದಗಿಬಂದಿದೆ.
ಸೂರಂಬೈಲಿನ (ಕುಂಬಳೆ-ಬದಿಯಡ್ಕ ರಸ್ತೆ) ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಸಂಘದ 28ನೇ ವಾರ್ಷಿಕ ದೀಪೋತ್ಸವದ ಅಂಗವಾಗಿ ಶ್ರೀ ಅಯ್ಯಪ್ಪ ಮಂದಿರದ ವಠಾರದಲ್ಲಿರುವ ರಂಗ ಮಂಟಪದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರ ಭಾಗವಹಿಸುವಿಕೆಯಲ್ಲಿ ‘ಸಂಪೂರ್ಣ ಕುರುಕ್ಷೇತ್ರ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಇಂದು ಸೂರಂಬೈಲಿನಲ್ಲಿ “ಸಂಪೂರ್ಣ ಕುರುಕ್ಷೇತ್ರ” ಭರ್ಜರಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಮೊದಲಿಗೆ ಭೀಷ್ಮ ಪರ್ವ ಪ್ರಸಂಗದಲ್ಲಿ ಅನುಭವಿಗಳ ಪ್ರದರ್ಶನ, ದ್ರೋಣಪರ್ವದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರ ಸಂಗಮ, ಕರ್ಣಪರ್ವದಲ್ಲಿ ವಾಗ್ದೇವಿಯ ಸುಪುತ್ರರಿಂದ ಮಾತಿನ ಜಟಾಪಟಿಯ ನಿರೀಕ್ಷೆ, ಗದಾಪರ್ವದಲ್ಲಿ ಅಭಿನಯ,ನಾಟ್ಯಗಳ ಸಂಗಮ ವಿವಿಧ ಪ್ರಸಿದ್ಧ ಕಲಾವಿದರಿಂದ ನಡೆಯಲಿದೆ. ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಹೆಸರಾಂತ ಕಲಾವಿದರು ಪ್ರೇಕ್ಷಕರ ಮನಸೂರೆಗೊಳ್ಳಲಿದ್ದಾರೆ.
ದಿನಾಂಕ 19.11.2022ನೇ ಶನಿವಾರ ರಾತ್ರಿ 10 ಘಂಟೆಗೆ ಆರಂಭವಾಗಲಿರುವ ಪ್ರದರ್ಶನ ಇಡೀ ರಾತ್ರಿ ನಡೆಯಲಿದೆ.