ಹನುಮಗಿರಿ ಮೇಳದವರಿಂದ ನಿರಂತರ ಐದು ದಿನಗಳ ಯಕ್ಷಗಾನ ಕಾರ್ಯಕ್ರಮ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ – ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ (ಹನುಮಗಿರಿ ಮೇಳ) ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ನಿರಂತರ ಐದು ದಿನಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಈ ಕಾರ್ಯಕ್ರಮ ಈ ತಿಂಗಳ ಐದರಿಂದ ಅಂದರೆ ದಿನಾಂಕ 05.12.2022 ಸೋಮವಾರದಿಂದ ಆರಂಭಗೊಂಡು ದಿನಾಂಕ 09.12.2022ರ ಶುಕ್ರವಾರದ ವರೆಗೆ ನಡೆಯಲಿದೆ. ಯಕ್ಷಗಾನ ಪ್ರದರ್ಶನ 6 ಘಂಟೆಗೆ ಆರಂಭವಾಗಲಿದೆ.
ಈ ಐದು ದಿನಗಳಲ್ಲಿ ಶಿವಪಂಚಾಕ್ಷರಿ ಮಹಿಮೆ, ಕುಮಾರ ವಿಜಯ, ವೇದೋದ್ಧರಣ- ಶ್ರೀನಿವಾಸ ಕಲ್ಯಾಣ, ನಮೋ ರಘುವಂಶದೀಪ ಮತ್ತು ಭಾರತ ಜನನಿ ಎಂಬ ಪ್ರಸಂಗಗಳನ್ನು ಆಡಿ ತೋರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಯುವತಿಯನ್ನು ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿ, ಲೈಂಗಿಕ ಶೋಷಣೆಯ ನಂತರ ಮದುವೆಗಾಗಿ ಮತಾಂತರವಾಗುವಂತೆ ಒತ್ತಾಯಿಸಿ ಹಿಂಸೆ ನೀಡಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಕೊಳತ್ತಾರದ ಚೆರುವಣ್ಣೂರಿನ ಕೊಟ್ಟಲದ ನಿವಾಸಿ ಎ.ಕೆ.ನಿಹಾದ್ ಶಾನ್ (24) ಹಾಗೂ ಆತನ ಸ್ನೇಹಿತ ಮಲಪ್ಪುರಂನ ವಜಹೂರಿನ ಮಂಗೊಟ್ಟು ನಿವಾಸಿ ಮೊಹಮ್ಮದ್ ಜುನೈದ್ (26) ಬಂಧಿತರು.
ದೌರ್ಜನ್ಯಕ್ಕೊಳಗಾದ ಮಹಿಳೆ ಕನ್ಯಾಕುಮಾರಿ ಮೂಲದವಳು. ದೂರಿನ ಪ್ರಕಾರ, ಮಹಿಳೆಯನ್ನು ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳ ವಿವಿಧ ಸ್ಥಳಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲಾಯಿತು. ಮಹಿಳೆ ಅಕ್ಟೋಬರ್ 29 ರಂದು ಪೊಲೀಸ್ ದೂರು ದಾಖಲಿಸಿದ್ದಾರೆ.
ಯುವತಿ ಮತ್ತು ನಿಹಾದ್ ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿ ಪ್ರೀತಿಸುತ್ತಿದ್ದರು. ತನ್ನನ್ನು ಮದುವೆಯಾಗುವಂತೆ ಯುವತಿ ಕೇಳಿದಾಗ ಆರೋಪಿ ತನ್ನ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದಾಗ ಆ ವ್ಯಕ್ತಿ ಆಕೆಯನ್ನು ಸಂಬಂಧದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿದ್ದಾನೆ.
ಸಂಬಂಧದಿಂದ ಹಿಂದೆ ಸರಿಯಲು ಮಹಿಳೆ ನಿರಾಕರಿಸಿದ್ದರಿಂದ ನಿಹಾದ್ ತನ್ನ ಸ್ನೇಹಿತರ ಮೂಲಕ ಮಹಿಳೆಗೆ ಅಪಘಾತದಲ್ಲಿ ತಾನು ಸ್ಮರಣಶಕ್ತಿ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ.
ಪೆರಿಂತಲ್ಮನ್ನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಕೆಗೆ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಪೆರಿಂತಲ್ಮನ್ನಾಕ್ಕೆ ಬಂದ ಮಹಿಳೆಯನ್ನು ಬೇರೆ ಬೇರೆ ಕಡೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬುಧವಾರ ರಾತ್ರಿ 11.30 ಘಂಟೆಗೆ ಕುಡಿದ ಅಮಲಿನಲ್ಲಿ ದುಷ್ಕರ್ಮಿಗಳು ಹೋಟೆಲ್ ಸಿಬ್ಬಂದಿಯೊಂದಿಗೆ ಜಗಳವಾಡಿದ್ದಾರೆ.
ಅವರಿಗೆ ಆಹಾರವನ್ನು ನೀಡಬೇಕೆಂದು ಅವರು ಒತ್ತಾಯಿಸಿದರು, ಆದರೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದರು, ತಡವಾಗಿದೆ ಎಂದು ಹೇಳಿದ್ದಾರೆ, ಇದು ಜಗಳಕ್ಕೆ ಕಾರಣವಾಯಿತು. ಐವರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ರೆಸ್ಟೋರೆಂಟ್ಗೆ ನುಗ್ಗಿ ಹೋಟೆಲ್ ಸಿಬ್ಬಂದಿಯೊಂದಿಗೆ ಜಗಳವಾಡಿದ ಐವರು ಪಾನಮತ್ತ ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 30 ರ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಇಡೀ ಜಗಳವನ್ನು ಅಲ್ಲಿದ್ದ ವೀಕ್ಷಕರೊಬ್ಬರು ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ವಿಲೇಜ್ ರೆಸ್ಟೋರೆಂಟ್ ಹೆಸರಿನ ಹೋಟೆಲ್ನಲ್ಲಿ ಬುಧವಾರ ರಾತ್ರಿ 11.30 ರ ಸುಮಾರಿಗೆ ಗಲಾಟೆ ನಡೆದಿದೆ. ರಾತ್ರಿ 11.20ಕ್ಕೆ ಹೋಟೆಲ್ಗೆ ನುಗ್ಗಿದ ಗ್ಯಾಂಗ್, ತಮಗೆ ಊಟ ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಆಹಾರ ನೀಡಲು ನಿರಾಕರಿಸಿದರು ಮತ್ತು ಕೊನೆಯ ಆರ್ಡರ್ ಸಮಯ ರಾತ್ರಿ 11 ಗಂಟೆ ಎಂದು ಹೇಳಿದರು.
ಇದರಿಂದ ಕುಪಿತಗೊಂಡ ದುಷ್ಕರ್ಮಿಗಳು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದಾರೆ. ಈ ಜಗಳವು ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಗಳು ಮತ್ತು ಹೋಟೆಲ್ ಸಿಬ್ಬಂದಿಗಳ ನಡುವೆ ಪೂರ್ಣ ಪ್ರಮಾಣದ ಜಗಳಕ್ಕೆ ಕಾರಣವಾಯಿತು.
ಗಲಾಟೆ ಉಲ್ಬಣಗೊಂಡಿತು ಮತ್ತು ಹತ್ತಿರದ ಇತರ ಜನರು ತಮ್ಮ ಮೊಬೈಲ್ ಫೋನ್ಗಳಲ್ಲಿ ಘಟನೆಯನ್ನು ಚಿತ್ರೀಕರಿಸಲು ಪ್ರಾರಂಭಿಸಿದರು. ಕುಡಿದ ಮತ್ತಿನಲ್ಲಿದ್ದ ಐವರನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ.
“ಕುಡಿತದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಮತ್ತು ವಿಲೇಜ್ ರೆಸ್ಟೋರೆಂಟ್ಗೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ. ತನಿಖೆಯ ಆಧಾರದ ಮೇಲೆ ನಾವು ದುಷ್ಕರ್ಮಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೇವೆ ಮತ್ತು ಅವರಲ್ಲಿ ಐವರನ್ನು ಬಂಧಿಸಿದ್ದೇವೆ. ತನಿಖೆ ಇನ್ನೂ ಮುಂದುವರೆದಿದೆ. ” ಎಂದು ಆಗ್ನೇಯ ಬೆಂಗಳೂರಿನ ಉಪ ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಪುತ್ತೂರು: ನಮ್ಮ ಮನೆಯ ಮಸಾಲೆಯ ಡಬ್ಬವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅನೇಕ ರೋಗಗಳಿಗೆ ಕಡಿವಾಣ ಹಾಕಬಹುದು ಅಂತೆಯೇ ನಮ್ಮ ತಾಂತ್ರಿಕ ಸಂಸ್ಥೆಯಲ್ಲಿರುವ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಸಂಸ್ಥೆಯ ಬಳಕೆಗೆ ಬೇಕಾದ ತಂತ್ರಜ್ಞಾನವನ್ನು ನಾವೇ ಅಭಿವೃದ್ಧಿ ಪಡಿಸಬಹುದು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಸಂಯುಕ್ತ ಆಶ್ರಯದಲ್ಲಿ ಇಂಜಿನಿಯರಿಂಗ್ ಕಾಲೇಜಿನ ಎಂ.ಸಿ.ಎ ವಿಭಾಗದ ಸಭಾಂಗಣದಲ್ಲಿ ನಡೆದ ಮೊಬೈಲ್ ಅಪ್ಲಿಕೇಶನ್ ಅಭಿವೃದ್ದಿಗೆ ಬೇಕಾಗುವ ಮೂಲಭೂತ ಅಂಶಗಳು ಎನ್ನುವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತಾಡಿದರು.
ಪ್ರಸ್ತುತ ಪಠ್ಯಕ್ರಮಕ್ಕೆ ಪೂರಕವಾಗುವ ರೀತಿಯಲ್ಲಿ ಈ ತರಬೇತಿಗಳು ನಡೆಯುತ್ತಿದ್ದು, ಪದವಿ ಮುಗಿಯುವಾಗ ನಿಮಗೆ ಇದೊಂದು ಪೂರಕ ಅಂಶವಾಗಿ ಪರಿಗಣನೆಯಾಗುತ್ತದೆ ಅಲ್ಲದೆ ಸಂಸ್ಥೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಜತೆಗೆ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್.ಪಿ ಮಾತನಾಡಿ ಸಂಶೋಧನೆ ಪ್ರತಿಯೊಬ್ಬ ಮಾನವನ ಜೀವನ ಭಾಗವಾಗಿದೆ. ದಿನದಿಂದ ದಿನಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ದಿಯಾಗುತ್ತಲೇ ಇವೆ. ಅದನ್ನು ಅಳವಡಿಸಿಕೊಂಡು ಹೋಗುವ ಅನಿವಾರ್ಯತೆ ನಮಗಿದೆ ಎಂದರು.
ಮೊಬೈಲ್ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ ಅದರ ಬಳಕೆ ಮತ್ತು ಅಭಿವೃದ್ಧಿಯ ವಿಚಾರದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅವರದ್ದೇ ಆದ ಕಲ್ಪನೆಗಳಿವೆ ಅದರ ಸಾಕಾರಕ್ಕೆ ಅವರಿಗೆ ಪೂರಕ ಮಾಹಿತಿಯನ್ನು ನೀಡುವ ಕಾರ್ಯಗಳು ಇಲ್ಲಿ ನಡೆಯುತ್ತಿವೆ ಎಂದರು.
ಎಲ್ಟಿಐ ಮೈಂಡ್ಟ್ರೀ ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ, ದ ವೆಬ್ ಪೀಪಲ್ ಸಂಸ್ಥೆಯ ಸ್ಥಾಪಕ ನಿರ್ದೇಶಕ ಶರತ್ ಶ್ರೀನಿವಾಸ್ ಹಾಗೂ ಇನ್ಫೋಸಿಸ್ ಸಂಸ್ಥೆಯ ಗ್ರೂಪ್ ಪ್ರಾಜೆಕ್ಟ್ ಮ್ಯಾನೇಜರ್ ಸುಹಾಸ್ ಸಂಪನ್ಮೂಲ ವ್ಯಕ್ತಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಾಗಾರವನ್ನು ನಡೆಸಿಕೊಟ್ಟರು.
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿ, ವಿವೇಕಾನಂದ ಪದವಿ ಕಾಲೇಜು ಮತ್ತು ವಿವೇಕಾನಂದ ಪಾಲಿಟೆಕ್ನಿಕ್ನ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡರು.
ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಮಹೇಶ್ ಪ್ರಸನ್ನ.ಕೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಮೇಖಲಾ ರಾವ್ ವಂದಿಸಿದರು. ಚೈತ್ರಾ ಕಾರ್ಯಕ್ರಮ ನಿರ್ವಹಿಸಿದರು.
ಉಡುಪಿ :ಯಕ್ಷಗಾನ ಆಟ-ಕೂಟಗಳಲ್ಲಿ ಕಳೆದ 6 ದಶಕಗಳಿಂದ ಮೇರುಕಲಾವಿದರಾಗಿ ಮೆರೆದ, ಶಾಸಕರಾಗಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಕಲೆ ಮತ್ತು ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ ಕುಂಬ್ಳೆ ಸುಂದರ ರಾವ್ ಅವರು
ದಿನಾಂಕ 30-11-2022ರಂದು ನಿಧನ ಹೊಂದಿದ್ದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಇವರ ಸದ್ಗತಿಗಾಗಿ ಪ್ರಾರ್ಥಿಸಿ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ನಿಮಿತ್ತ ನಾಳೆ (01-12-2022, ಗುರುವಾರ) ಸಂಜೆ 5.30ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸಂತಾಪ ಸಭೆಯನ್ನು ಆಯೋಜಿಸಲಾಗಿದೆ. ಅವರ ಅಭಿಮಾನಿಗಳು ಪಾಲ್ಗೊಳ್ಳಬೇಕಾಗಿ ಯಕ್ಷಗಾನ ಕಲಾರಂಗ ವಿನಂತಿಸಿಕೊಂಡಿದೆ.
ಅರ್ಥಧಾರಿ, ವೇಷಧಾರಿಯಾಗಿ, ಶಾಸಕರಾಗಿ, ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಸಮಾಜದ ಹಿತ ಚಿಂತನೆಯಲ್ಲಿ ತೊಡಗಿದ್ದ ಕಲಾವಿದ ಕುಂಬ್ಳೆ ಸುಂದರ್ ರಾವ್ ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯ.
ಇವರು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘಕ್ಕೆ ಅಕಾಡೆಮಿ ವತಿಯಿಂದ ಹಿಮ್ಮೇಳ ಪರಿಕರಗಳಿಗಾಗಿ ಆರ್ಥಿಕ ನೆರವನ್ನು ನೀಡಿರುವುದನ್ನು ಇಲ್ಲಿ ಸ್ಮರಿಸುವುದಾಗಿ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಹೊರಮಾವು ಎಂಬಲ್ಲಿ ಯುವತಿ ಕೃಷ್ಣಕುಮಾರಿಯನ್ನು ಆಕೆಯ ಲೈವ್ ಇನ್ ಜೀವನ ಸಂಗಾತಿ ಸಂತೋಷ್ ಧಾಮಿ ಅವರು ತೀವ್ರ ಜಗಳದ ನಂತರ ಗೋಡೆಗೆ ತಲೆ ಬಡಿದು ಹತ್ಯೆ ಮಾಡಿದ್ದಾನೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಎಸ್ ಗುಳೇದ್ ಹೇಳಿದ್ದಾರೆ.
ಜಗಳದ ನಂತರ ನೇಪಾಳಿ ಪ್ರಜೆಯೊಬ್ಬ ತನ್ನ ಸಂಗಾತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ರಾಮಮೂರ್ತಿನಗರದ ಟಿಸಿ ಪಾಳ್ಯದಲ್ಲಿ ಬುಧವಾರ ನಡೆದಿದೆ.
ಮೃತರನ್ನು ಕೃಷ್ಣಕುಮಾರಿ (23) ಮತ್ತು ಆರೋಪಿ ಸಂತೋಷ್ ಧಾಮಿ (27) ಎಂದು ಗುರುತಿಸಲಾಗಿದೆ. ಕೃಷ್ಣಕುಮಾರಿ ಹೊರಮಾವುನಲ್ಲಿರುವ ಯುನಿಸೆಕ್ಸ್ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದರೆ, ಸಂತೋಷ್ ಟಿಸಿ ಪಾಳ್ಯದ ಪುರುಷರ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ.
ಇಬ್ಬರೂ ಪ್ರೀತಿಸುತ್ತಿದ್ದು, ಟಿಸಿ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೂಲತಃ ನೇಪಾಳ ದೇಶದವರಾಗಿದ್ದ ಇಬ್ಬರೂ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು.
ಬುಧವಾರ ಬೆಳಗ್ಗೆ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪದ ಭರದಲ್ಲಿ ಸಂತೋಷ್ ಕೃಷ್ಣಕುಮಾರಿಯನ್ನು ಕೊಂದಿದ್ದಾನೆ. ಪೊಲೀಸರು ಸ್ಥಳದಲ್ಲಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
Bengaluru, Karnataka | A woman Krishna Kumari, was killed by her live-in partner Santosh Dhami as he banged her head against the wall after a heated argument, in Horamavu in Bengaluru: Bheemashankar S Guled, DCP, East division, Bengaluru
ಕನ್ಯಾಕುಮಾರಿ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಕಣ್ಮರೆಯಾಗಿದ್ದು, ಕೋತಿ ಅವುಗಳನ್ನು ಕದಿಯುತ್ತಿರುವ ದೃಶ್ಯಗಳು ಕಂಡುಬಂದಿವೆ.
ವಿಲಕ್ಷಣ ಘಟನೆಯೊಂದರಲ್ಲಿ, ಕನ್ಯಾಕುಮಾರಿಯ ಪ್ಲೈವುಡ್ ಕಂಪನಿಯಿಂದ ಕೋತಿಯೊಂದು ಸಿಸಿಟಿವಿ ಕ್ಯಾಮೆರಾಗಳನ್ನು ಕದಿಯುತ್ತಿರುವಾಗ ಸಿಕ್ಕಿಬಿದ್ದಿದೆ. ಆದರೆ, ಒಂದು ಫೂಟೇಜ್ನಲ್ಲಿ ಕೋತಿಯ ಉಲ್ಲಾಸದ ಮುಖವನ್ನು ಸೆರೆಹಿಡಿಯಲಾಗಿದೆ.
ಕನ್ಯಾಕುಮಾರಿಯ ಪ್ಲೈವುಡ್ ಕಂಪನಿಯೊಂದರ ಮಾಲೀಕನಿಗೆ ಮಂಗವೊಂದು ಸಿಸಿಟಿವಿ ಕ್ಯಾಮೆರಾಗಳನ್ನು ಕದಿಯುತ್ತಿರುವುದನ್ನು ಕಂಡು ಆಶ್ಚರ್ಯಕ್ಕೊಳಗಾಗಿದ್ದಾನೆ.
ಆ ವ್ಯಕ್ತಿ ತನ್ನ ಅಂಗಡಿಯ ಸುತ್ತಮುತ್ತಲಿನ ಪರಿಸರವನ್ನು ವೀಕ್ಷಿಸಲು ಸಿಸಿಟಿವಿ ಅಳವಡಿಸಿದ್ದನು ಆದರೆ ಕಳ್ಳತನ ತಪ್ಪಿಸಲು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಒಂದರ ಹಿಂದೆ ಒಂದರಂತೆ ಕಳ್ಳತನವಾಗುತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾನೆ.
ಗೊಂದಲಕ್ಕೊಳಗಾದ ಮಾಲೀಕರು ಆರೋಪಿಯನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗ, ಕಳ್ಳತನವಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಒಂದನ್ನು ಕೋತಿಯೊಂದು ಕದಿಯುತ್ತಿರುವ ದೃಶ್ಯವು ಆತನ ಕಂಪ್ಯೂಟರ್ ನಲ್ಲಿ ಸೆರೆಯಾಗಿತ್ತು.
ಮಾಲಿಕರು ಇದುವರೆಗೆ 13 ಸಿಸಿಟಿವಿ ಕ್ಯಾಮೆರಾಗಳನ್ನು ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ ಮತ್ತು ಕೋತಿ ಸಿಸಿಟಿವಿ ಕ್ಯಾಮೆರಾಗಳನ್ನು ಕದ್ದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಂಗಳೂರು: ‘ಭಾರತೀಯ ಪುರಾಣ ಹಾಗೂ ಇತಿಹಾಸ ಕಥನಗಳನ್ನು ಜನರ ಮನಸ್ಸಿಗೆ ಮುಟ್ಟುವ ಹಾಗೆ ಪ್ರಸ್ತುತಪಡಿಸುವ ಯಕ್ಷಗಾನ ಕರಾವಳಿ ವೈಭವವನ್ನು ಜಗತ್ತಿಗೆ ಸಾರಿ ಹೇಳಿದೆ. ಬಯಲಾಟ ಮತ್ತು ತಾಳಮದ್ದಳೆ ಕೂಟಗಳ ಮೂಲಕ ನಮ್ಮ ಭಾಷೆ – ಸಂಸ್ಕೃತಿಯನ್ನು ಎತ್ತಿ ಹಿಡಿದಿರುವ ಯಕ್ಷಗಾನ ಕರುನಾಡಿನ ಸಮೃದ್ಧ ಕಲೆ’ ಎಂದು ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಹೇಳಿದ್ದಾರೆ.
ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯಾದ ಯಕ್ಷಾಂಗಣ ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಡಾ.ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಕೇಂದ್ರ, ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ಹತ್ತನೇ ವರ್ಷದ ನುಡಿ ಹಬ್ಬದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಕಿಲ್ಲೆ ಸಂಸ್ಮರಣ:
ಇದೇ ಸಂದರ್ಭದಲ್ಲಿ ಗತಿಸಿ ಹೋದ ಹಿರಿಯ ಅರ್ಥಧಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ದೇಶಭಕ್ತ ನಾರಾಯಣ ಶೆಟ್ಟಿ ಕಿಲ್ಲೆ ಅವರ ಸಂಸ್ಮರಣ ಕಾರ್ಯಕ್ರಮ ಜರಗಿತು.ಪುತ್ತೂರಿನ ದಿ.ಎನ್.ಎಸ್. ಕಿಲ್ಲೆ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಕಡಮಜಲು ಸುಭಾಷ್ ರೈ ನುಡಿ ನಮನ ಸಲ್ಲಿಸಿದರು. ಯಕ್ಷಾಂಗಣ ಮಂಗಳೂರು ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣದ ಮೂಲಕ ಪ್ರಸ್ತಾವನೆಗೈದರು. ಪ್ರತಿಷ್ಠಾನದ ಕಾರ್ಯದರ್ಶಿ ಪ್ರಶಾಂತ ರೈ ಪುತ್ತೂರು, ಪ್ರಮುಖರಾದ ಸುಧಾಕರ ಹೆಗಡೆ ಮತ್ತು ಕಿಲ್ಲೆಯವರ ಕುಟುಂಬಿಕರು ಉಪಸ್ಥಿತರಿದ್ದರು
ಯಕ್ಷಾಂಗಣ ಗೌರವ ಪ್ರಶಸ್ತಿ:
ತೆಂಕು-ಬಡಗು ಉಭಯ ತಿಟ್ಟುಗಳ ಪ್ರಸಿದ್ಧ ಯಕ್ಷಗಾನ ಸ್ತ್ರೀ ವೇಷಧಾರಿ ಎಂ.ಕೆ.ರಮೇಶ ಆಚಾರ್ಯ ಅವರಿಗೆ ಎನ್.ಎಸ್ ಕಿಲ್ಲೆ ಸ್ಮರಣಾರ್ಥ ‘ಯಕ್ಷಾಂಗಣ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯೊಂದಿಗೆ ಯಕ್ಷಾಂಗಣ ವತಿಯಿಂದ ಫಲ,ಸ್ಮರಣಿಕೆ,ಮಾನಪತ್ರ ಮತ್ತು ರೂ.10,000/- ಗೌರವ ನಿಧಿಯನ್ನು ಸಮರ್ಪಿಸಲಾಯಿತು. ನಿವೇದಿತ ಎನ್.ಶೆಟ್ಟಿ ಪ್ರಶಸ್ತಿ ಫಲಕ ವಾಚಿಸಿದರು.
ಸನ್ಮಾನಕ್ಕೆ ಉತ್ತರಿಸಿ ಮಾತನಾಡಿದ ಎಂ.ಕೆ. ರಮೇಶಾಚಾರ್ಯ ‘ಕಲಾವಿದನಾಗಿ ಹಲವಾರು ಹಿರಿಯ ಕಲಾವಿದರ ಒಡನಾಟ ಗಳಿಸಿದ್ದ ತನಗೆ ಮಾನ ಸನ್ಮಾನಗಳು ಹೆಚ್ಚಾಗಿ ಲಭಿಸಿರುವುದು ಕರಾವಳಿ ಭಾಗದಲ್ಲಿ. ಘಟ್ಟದಲ್ಲಿ ಹುಟ್ಟುವುದಕ್ಕಿಂತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟುತ್ತಿದ್ದರೆ ಇನ್ನಷ್ಟು ಸಂತೋಷಪಡುತ್ತಿದ್ದೆ’ ಎಂದು ಭಾವುಕರಾಗಿ ನುಡಿದರು. ಹಿರಿಯ ಲೆಕ್ಕ ಪರಿಶೋಧಕ ಸಿಎ ಎಸ್.ಎಸ್.ನಾಯಕ್, ಉದ್ಯಮಿ ಸೌಂದರ್ಯ ರಮೇಶ್,ವಿ.ವಿ.ಸಂಧ್ಯಾ ಕಾಲೇಜು ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ಮುಖ್ಯ ಅತಿಥಿಗಳಾಗಿದ್ದರು
ಕಾರ್ಯಕ್ರಮ ಸಂಘಟಕ ಮತ್ತು ಅಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಯಕ್ಷಾಂಗಣದ ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥನೆ ಸಲ್ಲಿಸಿ, ನಿರೂಪಿಸಿದರು. ಜೊತೆ ಕಾರ್ಯದರ್ಶಿ ಕೆ.ಲಕ್ಷ್ಮೀನಾರಾಯಣ ರೈ ಹರೇಕಳ ವಂದಿಸಿದರು. ಸಮಿತಿ ಪ್ರಮುಖರಾದ ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ಕೆ.ರವೀಂದ್ರ ರೈ ಕಲ್ಲಿಮಾರು, ಸುಧಾಕರ ರಾವ್ ಪೇಜಾವರ, ಡಾ. ದಿನಕರ ಎಸ್. ಪಚ್ಚನಾಡಿ, ಸಿದ್ದಾರ್ಥ ಅಜ್ರಿ, ಸುಮಾಪ್ರಸಾದ್ ವೇದಿಕೆಯಲ್ಲಿದ್ದರು.
ಯಕ್ಷಗಾನ ತಾಳಮದ್ದಳೆ:
ಸಮಾರೋಪದ ಅಂಗವಾಗಿ ‘ಸಪ್ತ ವಿಜಯ’ ಸರಣಿಯ ಕೊನೆಯಲ್ಲಿ ಭಾಗವತರಾದ ಪ್ರಶಾಂತ ರೈ ಪುತ್ತೂರು ಮತ್ತು ಧೀರಜ್ ರೈ ಸಂಪಾಜೆ ಅವರ ಭಾಗವತಿಕೆಯಲ್ಲಿ ‘ಸಿರಿಕಟ್ಣ ವಿಜಯೊ’ (ತುಳು) ಹಾಗೂ ‘ಯಕ್ಷ ಲೋಕ ವಿಜಯ’ (ಕನ್ನಡ) ಯಕ್ಷಗಾನ ತಾಳಮದ್ದಳೆ ಜರಗಿತು.
ಖ್ಯಾತ ಯಕ್ಷಗಾನ ಕಲಾವಿದ, ತಾಳಮದ್ದಳೆ ಕೂಟದ ವಾಗ್ಮಿ, ಮಾಜಿ ಶಾಸಕ ಕುಂಬಳೆ ಸುಂದರ ರಾವ್ ನಿಧನರಾಗಿದ್ದಾರೆ. ಮಂಗಳೂರಿನ ಪಂಪ್ ವೆಲ್ ಸಮೀಪ ವಾಸವಾಗಿದ್ದ ಕುಂಬಳೆ ಸುಂದರ ರಾವ್ (88) ಅವರು ಇಂದು (ಬುಧವಾರ) ಮುಂಜಾನೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ತಾಳಮದ್ದಳೆ ಮತ್ತು ಬಯಲಾಟ ಎಂಬ ಯಕ್ಷಗಾನದ ಎರಡೂ ವಿಭಾಗಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದ ಅವರು 1994 ರಿಂದ 1999 ರವರೆಗೆ ಸುರತ್ಕಲ್ ಕ್ಷೇತ್ರದಿಂದ ಶಾಸಕರಾಗಿ ಗೆದ್ದು ಕರ್ನಾಟಕ ವಿಧಾನಸಭೆಯ ಸದಸ್ಯರಾಗಿದ್ದರು. ಒಂದು ಅವಧಿಗೆ ಅವರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಕುಂಬಳೆ ಸುಂದರ ರಾವ್ ನಡೆದು ಬಂದ ದಾರಿ:
ಕೂರ್ಮಾವತಾರದಲ್ಲಿ ಇವನಾಗಿದ್ದ ನನ್ನ ಚಿಪ್ಪು. ನೀನು ಇದನ್ನು ಒಪ್ಪು. ನರಸಿಂಹಾವತಾರದಲ್ಲಿ ಅವನು ನನ್ನ ನಖ, ಈಗ ನನ್ನ ಸಖ, ಒಪ್ಪದಿದ್ದರೆ ನಿನಗಿಲ್ಲ ಸುಖ. ಇಂತಹಾ ಪ್ರಾಸಬದ್ಧ ಮಾತುಗಳನ್ನು ಕೇಳಿದ ಯಕ್ಷರಸಿಕರು ಎಲ್ಲರೂ ಅವರು ಯಾರೆಂದು ಖಂಡಿತಾ ಊಹಿಸಬಹುದು.
ಯಾವುದೇ ಒಬ್ಬ ಪಾತ್ರಧಾರಿಯು ಪಾತ್ರವೊಂದರಲ್ಲಿ ಆತನು ಮೂಡಿಸಿದ ಶೈಲಿ ಚಿತ್ರಣಗಳನ್ನು ಆತನ ನಿವೃತ್ತಿಯ ನಂತರವೂ ಇತರ ಪಾತ್ರಧಾರಿಗಳು ಅನುಸರಿಸಿಕೊಂಡು ಹೋಗುತ್ತಾರೆ ಎಂದಾದರೆ ಅದು ಆ ಪಾತ್ರಧಾರಿಯ ದೊಡ್ಡ ಗೆಲುವು ಎಂದೇ ಅರ್ಥ. ಉದಾಹರಣೆಯಾಗಿ ಸುದರ್ಶನ ವಿಜಯ ಪ್ರಸಂಗದ ವಿಷ್ಣುವಿನ ಪಾತ್ರವೇ ಜ್ವಲಂತ ಸಾಕ್ಷಿ. ವಿಷ್ಣುವಾಗಿ ಕುಂಬಳೆ ಸುಂದರ ರಾಯರು ಕಟ್ಟಿದ ಪಾತ್ರಚಿತ್ರಣ ಈಗಲೂ ಹಾಗೆಯೇ ಇದೆ. ಅಲ್ಲಿ ಕುಂಬಳೆ ಸುಂದರ ರಾಯರು ಹೇಳುತ್ತಿದ್ದ ಪ್ರಾಸಬದ್ಧ ಮಾತುಗಳನ್ನು ಬೇರೆ ಕಲಾವಿದರು ಈಗಲೂ ಉಪಯೋಗಿಸುತ್ತಿದ್ದಾರೆ. ಇದು ಕುಂಬಳೆಯವರ ದೊಡ್ಡ ಗೆಲುವು.
ಕುಂಬಳೆ ಸುಂದರ ರಾವ್ ಅವರ ಭರತಾಗಮನದ ಭರತ, ವಿರಾಟ ಪರ್ವದ ಉತ್ತರ ಕುಮಾರ ಮೊದಲಾದುವುಗಳೆಲ್ಲಾ ಅವರಿಗೇ ಹೇಳಿ ಮಾಡಿಸಿದ ಪಾತ್ರಗಳು. ಕೃಷ್ಣ ಸಂಧಾನದ ಕರ್ಣ, ಕರ್ಣಪರ್ವದ ಕರ್ಣ, ಮಹಾಬ್ರಾಹ್ಮಣದಲ್ಲಿ ವಿಶ್ವಾಮಿತ್ರ (ವಿಶ್ವಾಮಿತ್ರ-ಮೇನಕೆ) ಸಮುದ್ರಮಥನದ ವಿಷ್ಣು, ದಕ್ಷಯಜ್ಞದ ಈಶ್ವರ ವಿವಿಧ ಪ್ರಸಂಗಗಳಲ್ಲಿ, ಭೀಷ್ಮ, ಕೃಷ್ಣ, ರಾಮ, ವಿಷ್ಣು, ಚ್ಯವನ, ಪರೀಕ್ಷಿತ, ಧರ್ಮಸ್ಥಳ ಕ್ಷೇತ್ರ ಮಹಾತ್ಮ್ಯೆಯ ಗೋವಿಂದ ದೀಕ್ಷಿತರ ಪಾತ್ರ ಇವರಿಗೆ ಬಹಳಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ತ್ರಿಪುರ ಮಥನದ ‘ಚಾರ್ವಾಕ’ ಪಾತ್ರ ನಿರ್ವಹಣೆಯಂತೂ ಅದ್ಭುತ.
ಕುಂಬಳೆ ಸುಂದರ ರಾವ್ ಅವರ ಕುಟುಂಬದ ವೃತ್ತಿ ಮಗ್ಗ ನೇಯುವುದು ಮತ್ತು ಬಟ್ಟೆಯ ವ್ಯಾಪಾರ. ಮನೆಮಾತು ಮಲೆಯಾಳ. ಎಳವೆಯಲ್ಲೇ ವಿದ್ಯಾಭ್ಯಾಸಕ್ಕೆ ತಿಲಾಂಜಲಿ, ಯಕ್ಷಗಾನದ ಆಸಕ್ತಿ ಸೆಳೆಯಿತು. ಕೆಲಸಕ್ಕೆ ಬಾರದವನೆಂಬ ಭಾವನೆ ಅಪ್ಪನಲ್ಲಿದ್ದರೂ ಅಮ್ಮನ ಪ್ರೀತಿಯಿತ್ತು. ಶಾಲೆಯಲ್ಲಿ ಓದಿದ್ದು ಕಡಿಮೆಯಾದರೂ ಕುಂಬಳೆ ಸುಂದರ ರಾಯರು ಕನ್ನಡ, ಮಲಯಾಳ, ತುಳು, ಸಂಸ್ಕೃತ, ಹವ್ಯಕ, ತಮಿಳು ಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದರು.
ತಂದೆಯ ಬಟ್ಟೆ ಮಿಲ್ ಇರುವ ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ನಡೆಯುತ್ತಿದ್ದ ತಾಳಮದ್ದಲೆಯನ್ನು ನೋಡಿ ಅರ್ಥ ಹೇಳುತ್ತಾ ಆಸಕ್ತಿ ಬೆಳೆಸಿಕೊಂಡ ಕುಂಬಳೆಯವರಿಗೆ ಚಿಕ್ಕಂದಿನಲ್ಲಿಯೇ ಯಕ್ಷಗಾನದ ಆಸಕ್ತಿ ಅತೀವವಾಗಿತ್ತು. ಕುಂಬಳೆ ಸುಂದರ ರಾಯರ ತಂದೆಯ ಮಗ್ಗದ ಕೆಲಸ ಅಲ್ಲಿ ನಡೆಯುತ್ತಿತ್ತು. ಅಲ್ಲಿ ಪ್ರತಿ ವಾರವೂ ತಾಳಮದ್ದಳೆ ನಡೆಯುತ್ತಿತ್ತು. ಅವರು ಶಾಲೆ ಬಿಟ್ಟ ನಂತರ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದರು. ಒಂದು ದಿನ ಅಲ್ಲಿದ್ದ ಬೋನಂತಾಯ ಶಂಭಟ್ಟರು ಎನ್ನುವವರು ‘‘ಒಂದು ಅರ್ಥ ಹೇಳೋ ಸುಂದರಾ’’ ಎಂದು ಕುಂಬಳೆಯವರಲ್ಲಿ ದೂತನ ಅರ್ಥ ಹೇಳಿಸಿದರು.
ಆಮೇಲೆ ಸಂಬಂಧಿಕರೂ ನೆರೆಯವರೂ ಆದ ಬಣ್ಣದ ಕುಟ್ಯಪ್ಪು ಅವರ ಕಾಳಜಿಯಿಂದ ಮೇಳದಲ್ಲಿ ವೇಷ ಮಾಡತೊಡಗಿದರು. ಆಟಕ್ಕಿಂತ ತಾಳಮದ್ದಳೆಗೇ ಹೆಚ್ಚು ಒಗ್ಗುವವನು ಎಂದು ಭಾವಿಸಿದ ಸುಂದರ ರಾಯರು ಮಳೆಗಾಲದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಶೇಣಿಯವರು, ವೆಂಕಪ್ಪ ಶೆಟ್ಟಿಯವರು, ಸಾಮಗರೇ ಮೊದಲಾದವರಿದ್ದ ಕೂಟಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಅರ್ಥ ಹೇಳಲು ಪ್ರಾರಂಭಿಸಿ ತಾಳಮದ್ದಳೆ ಕೂಟಗಳಿಗೆ ಅನಿವಾರ್ಯ ಸದಸ್ಯರಾದರು.
ರಾಜಕೀಯದಲ್ಲಿ ಕುಂಬಳೆಯವರಿಗೆ ಯಾವುದೇ ಆಕಾಂಕ್ಷೆಯಿರಲಿಲ್ಲ. ಕೇವಲ ಭಾಷಣಗಾರನಾಗಿ ರಾಜಕೀಯದಲ್ಲಿದ್ದರು. ಪ್ರಚಾರ ಭಾಷಣಕ್ಕಾಗಿ ಕರೆಯುತ್ತಿದ್ದರು. ಆದರೆ ಒಂದು ಅನಿರೀಕ್ಷಿತ ಸಂದರ್ಭದಲ್ಲಿ ಚುನಾವಣೆಗೆ ಸ್ಪರ್ಧಿಸಲು ಒತ್ತಾಯದ ಕರೆಬಂತು. ಸ್ಪರ್ಧಿಸಿ ಗೆದ್ದು ಶಾಸಕರಾದರು. ಶಾಸಕನಾದ ಮೇಲೆಯೂ ಯಕ್ಷಗಾನದ ವೇಷ ಮಾಡಿದ್ದಾರೆ. ತಾಳಮದ್ದಳೆಯಲ್ಲೂ ಭಾಗವಹಿಸಿದ್ದಾರೆ. ಧರ್ಮಸ್ಥಳ ಮೇಳದಲ್ಲಿ ಚೌಕಿಯಲ್ಲಿ ಅವರ ವೇಷದ ಪೆಟ್ಟಿಗೆ ಶಾಸಕನಾದ ಮೇಲೂ ಹಾಗೆಯೇ ಇತ್ತಂತೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರೇಕ್ಷಕರಿಂದ ಸ್ವಚ್ಛತೆಗೆ ತೊಂದರೆಯಾಗುತ್ತದೆ ಎಂಬ ನೆಪವೊಡ್ಡಿ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿದ್ದರು.ಇದರಿಂದ ಕೆರಳಿದ ಕುಂಬಳೆಯವರು ಸದನದ ಬಾವಿಗಿಳಿದು ಧರಣಿ ನಡೆಸಿ ಅನಂತರ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಮಧ್ಯಸ್ಥಿಕೆಯಲ್ಲಿ ಪುನಃ ರವೀಂದ್ರ ಕಲಾಕ್ಷೇತ್ರದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅನುಮತಿ ದೊರಕಿಸಿಕೊಟ್ಟಿದ್ದರು.
“ಅವರಿಗೆ ಪ್ರಾಸ ಬಿಟ್ಟು ಏನು ಗೊತ್ತಿದೆ” ಎಂಬ ಟೀಕೆಗಳಿಗೆ ಉತ್ತರವಾಗಿಯೋ ಎಂಬಂತೆ ಹಠಕ್ಕೆ ಬಿದ್ದ ಅವರು ಒಂದು ಕೂಡಾ ಪ್ರಾಸವನ್ನು ಹೇಳದೆ ಎರಡು ವರ್ಷ ತಿರುಗಾಟ ಮಾಡಿದ್ದರು.
ಇದು ಕುಂಬಳೆಯವರ ವೈಶಿಷ್ಟ್ಯ. ಹಲವಾರು ಪ್ರಶಸ್ತಿ ಸನ್ಮಾನಗಳನ್ನು ಪಡೆದು ಯಕ್ಷಗಾನದಲ್ಲಿ ತನ್ನದೇ ಆದ ಪ್ರಸಿದ್ಧಿ, ಅಭಿಮಾನಿಗಳನ್ನು ಸಂಪಾದಿಸಿದ ಕುಂಬಳೆ ಸುಂದರ ರಾವ್ ಇಂದು ನಮ್ಮೊಡನಿಲ್ಲ ಎಂಬುದು ದುಃಖಕರ ಮತ್ತು ವಿಷಾದನೀಯ. ಆದರೆ ಯಕ್ಷಗಾನ ಕ್ಷೇತ್ರಕ್ಕೆ ಅವರು ಕೊಟ್ಟ ಕೊಡುಗೆ ಸದಾ ಜೀವಂತವಾಗಿರುತ್ತದೆ. ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.