Saturday, August 1, 2026
Home Blog Page 96

ಪ್ರೀತಿಸಿದ ಹುಡುಗಿಯ ಹುಟ್ಟುಹಬ್ಬ ಆಚರಿಸಿದ ಬಳಿಕ ಚಾಕುವಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ

ಪ್ರೀತಿಸಿದ ಹುಡುಗಿಯ ಹುಟ್ಟುಹಬ್ಬ ಆಚರಿಸಿ, ಕೇಕ್ ಕತ್ತರಿಸಿ ಬಳಿಕ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

ನವ್ಯಾ (24) ಕೊಲೆಯಾದ ಯುವತಿ. ಪೊಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದಲ್ಲಿ ಕ್ಲರ್ಕ್ ಆಗಿದ್ದ ನವ್ಯಾ ಕಳೆದ ಆರು ವರ್ಷಗಳಿಂದ ಪ್ರಶಾಂತ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ನವ್ಯಾ ಮತ್ತು ಪ್ರಶಾಂತ್ ಕನಕಪುರದ ದೂರದ ಸಂಬಂಧಿಗಳು.

ಕಳೆದ ಮಂಗಳವಾರ ನವ್ಯಾ ಅವರ ಹುಟ್ಟುಹಬ್ಬವಿತ್ತು. ಅಂದು ಬ್ಯುಸಿಯಾಗಿದ್ದೆ ಎಂದು ಹೇಳಿದ್ದ ಪ್ರಶಾಂತ್ ನಿನ್ನೆ (ಏ.14) ಬರ್ತ್ ಡೇ ಸೆಲೆಬ್ರೇಷನ್ ಗೆ ಪ್ಲಾನ್ ಮಾಡಿದ್ದು, ಅದರಂತೆ ರಾತ್ರಿಯೇ ಕೇಕ್ ರೆಡಿ ಮಾಡಿ ಕೇಕ್ ತಿನ್ನಿಸಿದ್ದಾರೆ.

ಬಳಿಕ ಹರಿತವಾದ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತ್ತೀಚೆಗೆ ಮೃತ ಯುವತಿ ನವ್ಯಾ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದಾಳೆಂದು ಪ್ರಶಾಂತ್ ಅನುಮಾನ ವ್ಯಕ್ತಪಡಿಸಿದ್ದ. ಇದೇ ಕಾರಣಕ್ಕೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಲೇ ಇತ್ತು ಎಂದು ತಿಳಿದುಬಂದಿದೆ. ಕೊಲೆಗೆ ಇದೆ ಕಾರಣವಿರಬಹುದೆಂದು ಅನುಮಾನಿಸಲಾಗಿದೆ.

ಮೃತ ಯುವತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬಲೆಗೆ ಬಿದ್ದ 1500 ಕೆಜಿ ತೂಕದ ಸ್ಟಿಂಗ್ರೇ ಮೀನು – ಈ ಒಂದು ಮೀನಿನ ಬೆಲೆ ಎಷ್ಟು ಗೊತ್ತಿದೆಯೇ?

ಮೀನುಗಾರರ ಬಲೆಗೆ ಸುಮಾರು 1500 ಕೆಜಿ ತೂಕದ ಸ್ಟಿಂಗ್ರೇ ಮೀನು ಬಿದ್ದಿದೆ.

ಕೊಲ್ಲಂ ನೀಂದಕರ ಕಡಲತೀರದಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯ ಬಲೆಗೆ 1500 ಕೆಜಿ ತೂಕದ ಸ್ಟಿಂಗ್ರೇ ಸಿಲುಕಿದೆ.

ಕೊಡಂಕರ ಬಂದರಿನಲ್ಲಿ ನೆರೆದಿದ್ದ ಜನಸಮೂಹದಿಂದ ಕಿಕ್ಕಿರಿದಿದ್ದ ಧ್ವನಿ ಹರಾಜಿನಲ್ಲಿ ಶಕ್ತಿಕುಲಂಗರ ಮೂಲದ ಬಾಬು ಎಂಬುವರು 27000 ರೂ. ಕೊಟ್ಟು ಈ ಮೀನನ್ನು ತನ್ನದಾಗಿಸಿಕೊಂಡರು.

ಈ ಬೃಹತ್ ಸಮುದ್ರ ದೆವ್ವವನ್ನು ನಂತರ ಟುಟಿಕೋರಿನ್ ಫಿಶ್ ಪ್ಲಾಂಟ್ ಗೆ ವರ್ಗಾಯಿಸಲಾಯಿತು. ಈ ಬಾರಿ ಬಲೆ ಹೆಚ್ಚು ತೂಕವಿತ್ತು ಎಂದು ಮೀನುಗಾರರು ನೆನಪಿಸಿಕೊಳ್ಳುತ್ತಾರೆ.

ಭಾರವಾದದನ್ನು ದೋಣಿಗೆ ಎತ್ತುವ ಎಲ್ಲಾ ಶ್ರಮ ವ್ಯರ್ಥವಾಯಿತು. ಅದನ್ನು ಬಂದರಿಗೆ ಎಳೆದೊಯ್ದು ನಂತರ ಕ್ರೇನ್ ಸಹಾಯದಿಂದ ಮೇಲೆ ತರಲಾಯಿತು.

ವರದಕ್ಷಿಣೆಗಾಗಿ ಮಾವನಿಂದ ಅಮಾನುಷವಾಗಿ ಥಳಿಸಲ್ಪಟ್ಟ ಮಹಿಳೆ – ಮಾವನ ಬಂಧನ

ಕೇಳಿದಷ್ಟು ವರದಕ್ಷಿಣೆ ನೀಡದ ಕಾರಣ ಸೊಸೆಯನ್ನು ಮನೆ ಬಿಟ್ಟು ಹೋಗುವಂತೆ ಹೇಳಿ ವ್ಯಕ್ತಿಯೊಬ್ಬ ದೊಣ್ಣೆಯಿಂದ ಥಳಿಸಿದ ಘಟನೆ ನಡೆದಿದೆ.

ಪರಶುವಕ್ಕಲ್‌ನ ಕಿಳಕ್ಕೆ ಪುತ್ತನ್‌ ವೇದಿಕೆಯ ಸ್ಟೀಫನ್‌ ಎಂಬುವರ ಪತ್ನಿ ಎ.ಎಲ್‌.ಪ್ರೇಮಲತಾ (42) ಅವರಿಗೆ ಮಾವ ರಾಮಚಂದ್ರನ್‌ (68) ಥಳಿಸಿದ್ದಾರೆ.

ಪ್ರೇಮಲತಾ ಅವರ 14 ವರ್ಷದ ಕಿರಿಯ ಮಗ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಾವಳಿಯಿಂದ ಈ ಘಟನೆ ಹೊರಬಿದ್ದಿದೆ. ದೃಶ್ಯಗಳ ಸಮೇತ ಪ್ರೇಮಲತಾ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ರಾಮಚಂದ್ರನನ್ನು ವಶಕ್ಕೆ ಪಡೆದಿದ್ದಾರೆ.

ದೃಶ್ಯಗಳಲ್ಲಿ ಪ್ರೇಮಲತಾ ಅವರ ಮುಖಕ್ಕೆ ಪದೇ ಪದೇ ಕಪಾಳಮೋಕ್ಷ ಮಾಡಿದ್ದು, ರಾಮಚಂದ್ರನ್ ದೊಣ್ಣೆಯಿಂದ ಥಳಿಸಿದ್ದಾರೆ.

‘ಮಾಯಾಪುರಿ ಮಹಾತ್ಮೆ’ ಯಕ್ಷಗಾನ

ಹಾದಿಗಲ್ಲು ಶ್ರೀ ಅಭಯಲಕ್ಷ್ಮಿ ನರಸಿಂಹ ದೇವಾಲಯದ ವರ್ಧಂತ್ಯುತ್ಸವದ ಪ್ರಯುಕ್ತ 11-04-2023ರಂದು ಜರಗಿದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕಲಾ ಕಾರ್ಯಕ್ರಮದಲ್ಲಿ ಶ್ರೀ   ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾಮಂಡಳಿ ಅಂಬಲಪಾಡಿ (ಅಧ್ಯಕ್ಷ ಕೆ. ಅಜಿತ್‌ಕುಮಾರ್)

ಹಾಗೂ ಹಿರಿಯ ಯಕ್ಷಗಾನ ಕಲಾವಿದ ಶಿವಶಂಕರ ಕೆ.ಎಸ್. ಭಟ್‌ ಇವರಿಗೆ ತಲಾ ರೂ.10,000/- ಹಮ್ಮಿಣಿಯೊಂದಿಗೆ ‘ಶ್ರೀವಾದಿರಾಜಾನುಗ್ರಹ’ ಪ್ರಶಸ್ತಿಯನ್ನು ದೇವಳದ ಧರ್ಮದರ್ಶಿ ಹಾದಿಗಲ್ಲು  ಲಕ್ಷ್ಮೀನಾರಾಯಣರು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಪದಾಧಿಕಾರಿಗಳಾದ ಎಸ್. ವಿ.ಭಟ್, ಮುರಲಿ ಕಡೆಕಾರ್ ನಾರಾಯಣ ಎಂ. ಹೆಗಡೆ ಹಾಗೂ ಭಾಗವತರಾದ ಕೆ.ಜೆ. ಗಣೇಶ್‌ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ನರಸಿಂಹ ತುಂಗರ ನಿರ್ದೇಶನದಲ್ಲಿ ಅಂಬಲಪಾಡಿ ಲಕ್ಷ್ಮೀಜನಾರ್ದನ ಯಕ್ಷಗಾನ ಮಂಡಳಿಯ ಬಾಲಕಲಾವಿದರಿಂದ ‘ಮಾಯಾಪುರಿ ಮಹಾತ್ಮೆ’ ಯಕ್ಷಗಾನ ಪ್ರಸ್ತುತಗೊಂಡಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ – ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಠಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ

ಕರಾವಳಿಯ ಗಂಡು ಮೆಟ್ಟಿನಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನ ಇಂದು ಯಾವುದೇ ವಯೋಮಾನದವರು ಕಲಿಯುವ ಕಲೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಆಧ್ಯತೆ ಕೊಡುತ್ತಾ ಬಂದಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಯಕ್ಷಪ್ರದೀಪ” ಎಂಬ ತಂಡವಿದ್ದು,  ಯುಕೆಜಿಯಿಂದ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ಸುಮಾರು 70ಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.

ಕಲಿತ ವಿದ್ಯೆಗೆ ಸೂಕ್ತ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಪೇಟೆ ಸವಾರಿ, ಕಟ್ಟೆಪೂಜೆ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಶಾಲಾ ಆವರಣದಲ್ಲಿ  ಯಕ್ಷಗಾನ ರಂಗಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ ದೀಪ ಬೆಳಗಿಸಿ ಚಾಲನೆ ನೀಡಿದರು. 

ಯಕ್ಷಗುರು ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರ ನಿರ್ದೇಶನದಲ್ಲಿ ಹಾಗೂ ಶಾಲಾ ಸಂಸ್ಕೃತ ಅಧ್ಯಾಪಕ ಶ್ರೀ ವೆಂಕಟೇಶ್ ಪ್ರಸಾದ್ ಇವರ ಮಾರ್ಗದರ್ಶನದಲ್ಲಿ 64 ಪುಟಾಣಿಗಳು ಕಾಲಿಗೆ ಗೆಜ್ಜೆ ಕಟ್ಟಿ ಕುಣಿಯುತ್ತಾ “ರಾಜಾ ದಿಲೀಪ, ಏಕಾದಶೀ ಮಹಾತ್ಮೆ, ರಾಜಾ ವೈಖಾನಸ” ಎಂಬ ಪುಣ್ಯ ಕಥಾಭಾಗಗಳ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನದ ಬಳಿಕ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಂದ ಸುಮಾರು ಎರಡೂವರೆ ಗಂಟೆಗಳ ಭಜನಾ ಕಾರ್ಯಕ್ರಮ ನೆರವೇರಿತು.

ದೇವರ ಕಟ್ಟೆ ಪೂಜೆಯ ಸಂದರ್ಭದಲ್ಲಿ ಮಾತೃ ಸಂಸ್ಥೆ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಇದರ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಹಾಗೂ ಕೋಶಾಧಿಕಾರಿ ಶ್ರೀ ಅಚ್ಯುತ ನಾಯಕ್, ಶಾಲಾ ಆಡಳಿತ ಮಂಡಳಿ ಸಂಚಾಲಕ ಶ್ರೀ ರವಿನಾರಾಯಣ.ಎಂ ಮತ್ತು ಆಡಳಿತ ಮಂಡಳಿಯ ಸದಸ್ಯರು, ಶಾಲಾ ಪೋಷಕ ವೃಂದ, ಶಾಲಾ ಶಿಕ್ಷಕ-ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

ಇಂದು ಪುತ್ತೂರಿನಲ್ಲಿ ಪಾವಂಜೆ ಮೇಳದವರಿಂದ ಆಟ – ಶ್ರೀ ದೇವಿ ಮಹಾತ್ಮೆ

ಇಂದು ( ದಿನಾಂಕ 10-04-2023) ಪುತ್ತೂರಿನಲ್ಲಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಸವಾರಿಯ ಪ್ರಯುಕ್ತ ಪುತ್ತೂರು ಮಂಜಲ್ಪಡ್ಪು ಎಂಬಲ್ಲಿ ಕೊಡಿಪ್ಪಾಡಿ ದೇವಸ್ಥಾನದ ದ್ವಾರದ ಸಮೀಪ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಸಂಜೆ 6. 30 ಘಂಟೆಗೆ ಶ್ರೀ ದೇವಿ ಮಹಾತ್ಮೆ ಪ್ರಸಂಗದ ಪ್ರದರ್ಶನ ಆರಂಭವಾಗಲಿದೆ.

ಕಲಾಭಿಮಾನಿಗಳೆಲ್ಲರನ್ನೂ ಆಯೋಜಕರು ಆಯೋಜಕರು ಆದರದಿಂದ ಆಮಂತ್ರಿಸಿದ್ದಾರೆ. ಕಾರ್ಯಕ್ರಮದ ವಿವರಗಳಿಗೆ ಕರಪತ್ರ ನೋಡಿ.

ಬೆಂಗಳೂರಿನಲ್ಲಿ 35 ವರ್ಷದ ಮಹಿಳೆಯ ಕೊಲೆ

ಬೆಂಗಳೂರು: ರಾಯಚೂರು ಮೂಲದ ಅಂಬಿಕಾ (35) ಕೆಆರ್ ಪುರಂನ ಟಿಸಿ ಪಾಳ್ಯದಲ್ಲಿರುವ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮೃತರು ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ಮನೆಯಲ್ಲಿ ಒಂಟಿಯಾಗಿ ವಾಸವಿದ್ದು, ಇಬ್ಬರು ಮಕ್ಕಳು ಹಾಸ್ಟೆಲ್‌ನಲ್ಲಿದ್ದರು.

“ಹತ್ಯೆ ಮಾಡಿದ ನಂತರ ದುಷ್ಕರ್ಮಿಗಳು ಹೊರಗಿನಿಂದ ಬಾಗಿಲು ಹಾಕಿದ್ದರು. 2-3 ದಿನಗಳ ಹಿಂದೆ ಕೊಲೆ ನಡೆದಿದ್ದು, ಅನೇಕ ಇರಿತದ ಗಾಯಗಳು ಪತ್ತೆಯಾಗಿವೆ.

ಮೇಲ್ನೋಟಕ್ಕೆ ಸಂತ್ರಸ್ತೆಗೆ ತಿಳಿದಿರುವ ಯಾರೋ ಕೊಲೆಯ ಹಿಂದೆ ಇದ್ದಾರೆ. ಆರೋಪಿಯನ್ನು ಬಂಧಿಸಿದ ನಂತರವಷ್ಟೇ ಕೊಲೆಗೆ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಆಕೆಯ ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಕಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿ ಒಳ ನುಗ್ಗಿ ಕೊಳೆತ ಸ್ಥಿತಿಯಲ್ಲಿದ್ದುದನ್ನು ಪತ್ತೆ ಹಚ್ಚಿದ್ದಾರೆ

ಮಾನಿಷಾದ – ಇಂದು ಯಕ್ಷಗಾನ ಬಯಲಾಟ

ಇಂದು ದಿನಾಂಕ 10.04.2023ನೇ ಸೋಮವಾರ ಪುತ್ತೂರು ತಾಲೂಕಿನ ಕುಂಬ್ರ ಶ್ರೀರಾಮ ಭಜನಾ ಮಂದಿರದ ಬಳಿ ಕಟೀಲು ನಾಲ್ಕನೇ ಮೇಳದವರಿಂದ ಯಕ್ಷಗಾನ ಸೇವಾ ಬಯಲಾಟ ನಡೆಯಲಿದೆ.

ಇಂದಿನ ಪ್ರಸಂಗ ಮಾನಿಷಾದ. ( ಬೊಟ್ಟಿಕೆರೆ ಶ್ರೀ ಪುರುಷೋತ್ತಮ ಪೂಂಜ ವಿರಚಿತ )

ಕಲಾಭಿಮಾನಿಗಳೆಲ್ಲರಿಗೂ ಆಯೋಜಕರು ಆದರದ ಸ್ವಾಗತವನ್ನು ಕೋರಿದ್ದಾರೆ.

ಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಗಳಿಗೆ ಬೆಂಬಲ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ

ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಧರ್ಮದ ಪಥದಲ್ಲಿ  ನಡೆಯಲು ಹಿರಿಯರ ಮಾರ್ಗದರ್ಶನ ಅತ್ಯಗತ್ಯ. ಹಿರಿಯರ ಸೇವಾ ಪ್ರತಿಷ್ಠಾನ ಈಗಾಗಲೇ ಕೈಗೊಂಡಿರುವ ಕಾರ್ಯಕ್ರಮಗಳು ಸಾಮಾಜಿಕ ಪರಿವರ್ತನೆಗೆ ಕೊಡುಗೆಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಕಾಸರಗೋಡು ಜಿಲ್ಲಾ ಹಿರಿಯರ ಸಮಾವೇಶವನ್ನು ಏರ್ಪಡಿಸಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸುವುದಾಗಿ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ತಿಳಿಸಿದರು.

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ(ರಿ) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯನ್ನು ಎಡನೀರು ಪ್ರೌಢಶಾಲಾ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಯಾವುದೇ ಉತ್ತಮ ವಿಚಾರ ಮೂಡುವುದು ಒಬ್ಬನ ಮನಸ್ಸಿನಲ್ಲಿ. ಸಜ್ಜನರ ಸಂಘಟನೆಯ ಕೆಲಸವನ್ನು ಹಿರಿಯರ ಸೇವಾ ಪ್ರತಿಷ್ಠಾನ ಮಾಡುತ್ತಿದ್ದು ಶಂಕರಾಚಾರ್ಯ ರಾಮಾನುಜಚಾರ್ಯ ವಿವೇಕಾನಂದ, ಭಗತ್ ಸಿಂಗ್ ಮೊದಲಾದವರು ಅತ್ಯಂತ ಕಿರಿವಯಸ್ಸಿನಲ್ಲಿ ಅಪೂರ್ವ ಸಾಧನೆ ಮಾಡಿದವರಾಗಿದ್ದು ಅವರ ಕಾರ್ಯಗಳಿಂದ ನಾವು ಪ್ರೇರಣೆಯನ್ನು ಪಡೆಯಬೇಕೆಂದು ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಶಾಸಕರಾದ ಕೆ. ಬಾಲಕೃಷ್ಣ ಭಟ್ ಸುರತ್ಕಲ್ ತಿಳಿಸಿದರು .

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವಾಧ್ಯಕ್ಷ  ಪ್ರೊ.ಎ.ವಿ ನಾರಾಯಣ ಮಾತನಾಡಿ ಹಿರಿಯರ ಸಂಘಟನೆಯು ಭಾರತೀಯ ಸಂಸ್ಕೃತಿ ಮತ್ತು ಕೌಟುಂಬಿಕ ಮೌಲ್ಯಗಳ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದರು.

ವಿವಿಧ ತಾಲೂಕು ಘಟಕಗಳ ಪದಾಧಿಕಾರಿಗಳಾದ ಬಾಲಕೃಷ್ಣ ಶೆಟ್ಟಿ, ಮಂಗಳೂರು ,ಭರತ್ ಕೆ ಮಂಗಳೂರು, ಶಿವಕುಮಾರ್, ಕೃಷ್ಣಶರ್ಮ ಅನಾರು, ಲೋಕೇಶ್ ಹೆಗ್ಡೆ ಪುತ್ತೂರು, ಚಂದ್ರಶೇಖರ ಆಳ್ವ ಪಡುಮಲೆ ಪ್ರಗತಿಯ ಮಾಹಿತಿಯನ್ನು ನೀಡಿದರು. 

ಯುವ ಜನತೆಗೆ ಮಾರ್ಗದರ್ಶನ ನೀಡುವ  ಸಂಸ್ಕಾರ ಶಿಬಿರಗಳನ್ನು ನಡೆಸಲು ಉದ್ದೇಶಿಸಲಾಗಿದೆಯೆಂದು ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು. 

ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ನಿ ಯವರಿಗೆ ಮಂಗಳಾದೇವಿ ಘಟಕದ ಉಪಾಧ್ಯಕ್ಷ ಮತ್ತು ಭಜನಕಾರರಾದ ಭರತ್. ಕೆ ಅವರು ಹಸ್ತಾಕ್ಷರದಿಂದ ಬರೆದ 4000 ಕ್ಕಿಂತಲೂ ಹೆಚ್ಚು ಭಜನೆಗಳ ಸಂಗ್ರಹ ಪುಸ್ತಕವನ್ನು  ಶ್ರಿ ಸ್ವಾಮೀಜಿಯವರ ಮೂಲಕ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಗಮಕ ಕಾರ್ಯಕ್ರಮವನ್ನು ನಡೆಸಿಕೊಟ್ಟ ಪ್ರೊ. ಮಧೂರು ಮೋಹನ ಕಲ್ಲೂರಾಯ, ಡಾ. ವಾರಿಜಾ ನೀರ್ಬೈಲು ಮತ್ತು ಪುತ್ತೂರು ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶ್ ಹೆಗ್ಡೆಯವರನ್ನು ಸ್ವಾಮೀಜಿಯವರು ಗೌರವಿಸಿದರು.

ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು  ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ  ಪ್ರತಿಷ್ಠಾನದ ಉದ್ದೇಶಗಳನ್ನು ಸಾಧಿಸಲು ಪದಾಧಿಕಾರಿಗಳು ಬದ್ಧತೆಯಿಂದ  ಶ್ರಮಿಸಬೇಕೆಂದು ತಿಳಿಸಿದರು.

ಪ್ರೊ .ವೇದವ್ಯಾಸ ರಾಮಕುಂಜ  ಪ್ರಾರ್ಥಿಸಿದರು. ಪ್ರತಿಷ್ಠಾನದ ಸಹ ಸಂಚಾಲಕ  ಭಾಸ್ಕರ್ ಬಾರ್ಯ ಸ್ವಾಗತಿಸಿ ಕಲಾವಿದ ಗುಂಡ್ಯಡ್ಕ ಈಶ್ವರ ಭಟ್ ವಂದಿಸಿದರು. ವೆಂಕಟ್ ಭಟ್ ಎಡನೀರು ಕಾರ್ಯಕ್ರಮ ಸಂಯೋಜನೆಗೆ ಸಹಕರಿಸಿದರು . ಡಾ. ಬಿ.ಎನ್. ಮಹಾಲಿಂಗ ಭಟ್ ಮತ್ತು ದಿವಾಕರ ಆಚಾರ್ಯ  ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

‘ಸೀತಾಪಹಾರ – ವಾಲಿಮೋಕ್ಷ’ ತಾಳಮದ್ದಳೆ

ದಿನಾಂಕ 08-04-2023ನೇ ಶನಿವಾರದಂದು ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ತಿಂಗಳ ತಾಳಮದ್ದಳೆ ‘ಸೀತಾಪಹಾರ – ವಾಲಿಮೋಕ್ಷ’  ರಾಮಣ್ಣ ಮಾಸ್ತರ್ ದೇಲಂಪಾಡಿ ಮತ್ತು ಮನೆಯವರಿಂದ ಸೇವಾರೂಪವಾಗಿ ಪ್ರಸ್ತುತಗೊಂಡಿತು.

ಶ್ರೀ ಗೋಪಾಲಕೃಷ್ಣ ದೇವರ ಪೂಜಾರ್ಚನೆಯೊಂದಿಗೆ ಆರಂಭಗೊಂಡ ಈ ಕಲಾಕಾರ್ಯಕ್ರಮವು ಸಂಘದ ಕಾರ್ಯದರ್ಶಿ ಹಿರಿಯ ಭಾಗವತ ಗುರು ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ಮುಂದುವರೆಯಿತು.

ಭಾಗವತರಾಗಿ ಮೋಹನ ಮೆಣಸಿನಕಾನ ಮತ್ತು ಕುಮಾರಿ ರಚನ ಚಿದ್ಗಲ್ ತಮ್ಮ ಅಪೂರ್ವ ಕಂಠಸಿರಿಯಿಂದ ಹಾಡಿ ಜನಮೆಚ್ಚುಗೆ ಗಳಿಸಿದರು. ಚೆಂಡೆ ಮದ್ದಳೆ ವಾದನದಲ್ಲಿ ಅಪ್ಪಯ್ಯ ಮಣಿಯಾಣಿ ಮಂಡೆಕ್ಕೋಲು, ವಿಷ್ಣುಶರಣ ಬನಾರಿ, ಶ್ರೀಹರಿ ಆಲಂಕಾರು, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಭಾಗವಹಿಸಿದ್ದರು.

ಪಾತ್ರಧಾರಿಗಳಾಗಿ ಡಾ| ರಮಾನಂದ ಬನಾರಿ ಮಂಜೇಶ್ವರ, ವೆಂಕಟರಾಮ ಭಟ್ಟ ಸುಳ್ಯ, ಬೆಳ್ಳಿಪ್ಪಾಡಿ ಸದಾಶಿವ ರೈ, ಯಂ.ರಮಾನಂದ ರೈ ದೇಲಂಪಾಡಿ, ರಾಮನಾಯ್ಕ ದೇಲಂಪಾಡಿ, ನಾರಾಯಣ ದೇಲಂಪಾಡಿ, ಪದ್ಮನಾಭ ಗೋಳಿತ್ತಡ್ಕ ಮತ್ತು ಡಿ. ರಾಮಣ್ಣ ಮಾಸ್ತರ್  ತಮ್ಮ ವಾಕ್ಚಾತುರ್ಯದಿಂದ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

ಕಾರ್ಯಕ್ರಮದ ಮೊದಲಿಗೆ ಲತಾ ಆಚಾರ್ಯ ಬನಾರಿ ಪಾತ್ರ ಪರಿಚಯ ಮಾಡಿಕೊಟ್ಟರು. ನಂದಕಿಶೋರ್ ಬನಾರಿ ಸ್ವಾಗತಿಸಿ ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ ಧನ್ಯವಾದ ಸಮರ್ಪಿಸಿದರು.