Friday, July 31, 2026
Home Blog Page 138

ಪುತ್ತೂರಿನ ನವವಿವಾಹಿತೆಯೋರ್ವರು ಪತಿಯ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ – ಕೇಸು ದಾಖಲು 

ಪುತ್ತೂರಿನ ನವವಿವಾಹಿತೆಯೋರ್ವರು ಪುತ್ತೂರಿನಲ್ಲಿರುವ ತನ್ನ ಪತಿಯ ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 26 ವರ್ಷದ ವೈಶಾಲಿ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಯುವತಿ.  

ಪುತ್ತೂರು ತಾಲ್ಲೂಕಿನ ಮಾಡನ್ನೂರು ಗ್ರಾಮದ ಸಾಂತ್ಯ ಎಂಬಲ್ಲಿರುವ ಈಕೆ ಕಳೆದ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. 

ಈಕೆ ತನ್ನ ಪತಿಯ ಮನೆಯಲ್ಲಿರುವಾಗಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡದ್ದಾರೆ ಎಂದು ತಿಳಿದುಬಂದಿದೆ. ಇವರು  ಸಾಂತ್ಯ ನಿವಾಸಿ ಜಯಪ್ರಕಾಶ್ ಅವರ ಪತ್ನಿ.  

ಜಯಪ್ರಕಾಶ್ ಅವರ ಜತೆ 7ತಿಂಗಳ ಹಿಂದೆ ವೈಶಾಲಿ ಅವರ ವಿವಾಹ ನೆರವೇರಿತ್ತು.  ವೈಶಾಲಿ ಅವರು ಶನಿವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಬಗ್ಗೆ ಮೃತಳ ತಾಯಿ ಪೊಲೀಸರಿಗೆ ದೂರುನೀಡಿದ್ದು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದು ಆತ್ಮಹತ್ಯೆಗೆ ಕಾರಣ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. 

ಮತ್ಸ್ಯಕನ್ಯೆಯ ಶಿಲ್ಪ “ಸಾಗರಕನ್ಯಕಾ” – ಗಿನ್ನೆಸ್ ದಾಖಲೆ ಪಡೆದ ಶಿಲ್ಪದ ಮನೋಹರ ದೃಶ್ಯಕ್ಕೆ ಹೆಲಿಕಾಪ್ಟರ್ ಅಡ್ಡಿ, ಅಸಾಮಾಧಾನ ವ್ಯಕ್ತಪಡಿಸಿದ ಶಿಲ್ಪಿ ಕನಾಯಿ ಕುಂಞಿರಾಮನ್  

ಗಿನ್ನೆಸ್ ದಾಖಲೆ ಪಡೆದ ಶಿಲ್ಪವಾದ, ಶಿಲ್ಪಿ ಕನಾಯಿ ಕುಂಞಿರಾಮನ್ ಅವರು ಶಂಕುಮುಖಂನಲ್ಲಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಮತ್ಸ್ಯಕನ್ಯೆಯ ಪ್ರತಿಮೆ ‘ಸಾಗರಕನ್ಯಕಾ’ ಗೆ ಹೆಲಿಕಾಪ್ಟರ್ ಒಂದು ಅಡ್ಡಿಯಾಗಿದೆ.

ಆ ಮತ್ಸ್ಯಕನ್ಯೆಯ ಪ್ರತಿಮೆಯ ಸಮೀಪ ಒಂದು ಹೆಲಿಕಾಪ್ಟರ್ ಬಂದು ನಿಂತಿರುವುದರಿಂದ ಮತ್ಸ್ಯಕನ್ಯೆಯ ಸೌಂದರ್ಯಕ್ಕೆ ಅದು ಅಡ್ಡಿಯಾಗಿದೆ. ವಿಶ್ವದ ಅತಿ ದೊಡ್ಡ ಮತ್ಸ್ಯಕನ್ಯೆಯ ಪ್ರತಿಮೆಯನ್ನು ತಯಾರಿಸಿದ್ದಕ್ಕಾಗಿ ಕುನ್ಹಿರಾಮನ್ ಅವರಿಗೆ ಈ ಗಿನ್ನೆಸ್ ದಾಖಲೆಯ ಗೌರವವನ್ನು ನೀಡಲಾಯಿತು.

ಆದಾಗ್ಯೂ, ಹಳೆಯ ನೌಕಾಪಡೆಯ ಹೆಲಿಕಾಪ್ಟರ್ ಸಾಗರಕನ್ಯಕಾದ ಹಿನ್ನೆಲೆಯ ಸೌಂದರ್ಯವನ್ನು ಹಾಳುಮಾಡಿದೆ. ಹೆಲಿಕಾಪ್ಟರ್ ತೆಗೆಯುವಂತೆ ಕುಂಞಿರಾಮನ್ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರು. ಕನಾಯಿ ಕುಂಞಿರಾಮನ್ ತನ್ನ ಮನವಿಯನ್ನು ಆಲಿಸದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಕೇರಳ ಶ್ರೀ ಪ್ರಶಸ್ತಿಯನ್ನು ನಿರಾಕರಿಸಿದ್ದರು.

1990 ರಲ್ಲಿ, ಅವರು ಶಿಲ್ಪವನ್ನು ನಿರ್ಮಿಸುವಾಗ, ಅಶ್ಲೀಲತೆಯನ್ನು ಉಲ್ಲೇಖಿಸಿ ಅದನ್ನು ನಿಲ್ಲಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಆದೇಶ ನೀಡಿದ್ದರು. 90 ರ ದಶಕದಲ್ಲಿ ಆಗಿನ ಮುಖ್ಯಮಂತ್ರಿ ಕೆ ಕರುಣಾಕರನ್ ಅವರು ಕಲೆಕ್ಟರ್ ಆದೇಶವನ್ನು ಸರಿಪಡಿಸಿದ್ದರು ಮತ್ತು ಕುಂಞಿರಾಮನ್ ಅವರ ಶಿಲ್ಪವನ್ನು ಮುಂದುವರಿಸಲು ಅವಕಾಶ ನೀಡಲಾಯಿತು.

ಹೆಲಿಕಾಪ್ಟರ್ ಅನ್ನು ಮೇ, 2020 ರಲ್ಲಿ ಇರಿಸಲಾಗಿತ್ತು. ಇದು ಕೋವಿಡ್‌ನ ಅವಧಿಯಾದ್ದರಿಂದ ಆ ಸಮಯದಲ್ಲಿ ಹೆಚ್ಚಿನವರು ಅದನ್ನು ಗಮನಿಸಲಿಲ್ಲ. ರಾಜ್ಯದ ಸಾಂಸ್ಕೃತಿಕ ವಲಯಗಳಲ್ಲಿ ಪ್ರತಿಭಟನೆಯ ನಂತರ ಅಂದಿನ ಪ್ರವಾಸೋದ್ಯಮ ಸಚಿವರಾದ ಕಡಕಂಪಲ್ಲಿ ಸುರೇಂದ್ರನ್ ಮತ್ತು ಕುಂಞಿರಾಮನ್ ಶಂಕುಮುಖಕ್ಕೆ ತೆರಳಿದರು.

ಹೆಲಿಕಾಪ್ಟರ್ ಅನ್ನು ಮಕ್ಕಳ ಉದ್ಯಾನವನಕ್ಕೆ ವರ್ಗಾಯಿಸಲು ನಿರ್ಧರಿಸಲಾಯಿತು ಮತ್ತು ಈಗ ಹೆಲಿಕಾಪ್ಟರ್ ಇರಿಸಲಾಗಿರುವ ಸ್ಥಳದಲ್ಲಿ ಸೂಕ್ತವಾದ ಶಿಲ್ಪವನ್ನು ಮಾಡಲಾಗುವುದು ಎಂದು ಭರವಸೆ ನೀಡಲಾಗಿದ್ದರೂ ಯಾವುದೇ ಮುಂದಿನ ಕ್ರಮ ಕೈಗೊಂಡಿಲ್ಲ.

ಕನಾಯಿ ಕುಂಞಿರಾಮನ್ ಅವರ ದೂರುಗಳನ್ನು ಆಲಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಸಾಂಸ್ಕೃತಿಕ ಸಚಿವ ವಿ.ಎನ್.ವಾಸವನ್ ತಿಳಿಸಿದ್ದಾರೆ.

ಆರ್ಯ ರಾಜೇಂದ್ರನ್ ಪತ್ರ: ಪತ್ರ ನಕಲಿ ಎಂದ ಮೇಯರ್ ಮತ್ತು ಸಿಪಿಎಂ ಜಿಲ್ಲಾ ಕಾರ್ಯದರ್ಶಿ – ಮೇಯರ್ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಪಕ್ಷಗಳು ಮತ್ತು ಬಿಜೆಪಿ

ತಿರುವನಂತಪುರಂ: ಕಾರ್ಪೊರೇಷನ್‌ನಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಸಿಪಿಎಂ ಕಾರ್ಯಕರ್ತರ ಪಟ್ಟಿ ನೀಡುವಂತೆ ಕೋರಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅಣವೂರ್ ನಾಗಪ್ಪನ್‌ಗೆ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರ ಪರವಾಗಿ ಬರೆದ ಪತ್ರ ಶನಿವಾರ ಬಹಿರಂಗಗೊಂಡ ನಂತರ ಸಿಪಿಎಂ ತನ್ನನ್ನು ತಾನು ರಕ್ಷಿಸಿಕೊಳ್ಳಲು ತೀವ್ರ ಹೆಣಗಾಡುತ್ತಿದೆ.

ಸರ್ಕಾರದ ವಿರುದ್ಧ ಹೊಸ ಅಸ್ತ್ರವನ್ನು ಪಡೆದ ಯುಡಿಎಫ್ ಮತ್ತು ಬಿಜೆಪಿ ಮೇಯರ್ ರಾಜೀನಾಮೆ ಮತ್ತು ತನಿಖೆಗೆ ಒತ್ತಾಯಿಸಿ ಆಂದೋಲನವನ್ನು ಪ್ರಾರಂಭಿಸಿದವು. ಸ್ವಜನ ಪಕ್ಷಪಾತ ತೋರಿದ ಮೇಯರ್ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ರಾಜ್ಯ ಚುನಾವಣಾ ಆಯೋಗದ ಮೊರೆ ಹೋಗಿತ್ತು.

ಮೇಯರ್ ಆರ್ಯ ರಾಜೇಂದ್ರನ್ ಅವರ ಅಧಿಕೃತ ಲೆಟರ್ ಪ್ಯಾಡ್ ನಲ್ಲಿರುವುದರಿಂದ ಪತ್ರ ನಕಲಿ ಎಂಬ ಪಾಲಿಕೆ ವಾದಕ್ಕೆ ಬಲ ಸಿಗಲಿಲ್ಲ. ಸಿಪಿಎಂ ಜಿಲ್ಲಾ ಕಾರ್ಯದರ್ಶಿಗಳೇ ತಾತ್ಕಾಲಿಕ ನೇಮಕಾತಿಗಳಿಗೆ ಜನರನ್ನು ಶಿಫಾರಸು ಮಾಡುತ್ತಾರೆ ಎಂಬ ರೀತಿಯಲ್ಲಿ ವಿರೋಧ ಪಕ್ಷವು ಪತ್ರವನ್ನು ಅರ್ಥೈಸುತ್ತದೆ.

ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಸಿಪಿಎಂ ನಾಯಕರ ಸಂಬಂಧಿಗಳ ಅಕ್ರಮ ನೇಮಕಾತಿ ಆರೋಪದ ಮೇಲೆ ರಾಜ್ಯಪಾಲರು ಸರ್ಕಾರದೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಪತ್ರ ವಿವಾದವೂ ರಾಜ್ಯಪಾಲರ ನಿಲುವನ್ನು ಬಲಪಡಿಸುತ್ತದೆ.

ನಿರುದ್ಯೋಗಿಗಳ ಭಾವನೆಗಳಿಗೆ ಮನವಿ ಮಾಡುವ ಮೂಲಕ ಪ್ರತಿಪಕ್ಷಗಳು ಈ ವಿಷಯವನ್ನು ಕೈಗೆತ್ತಿಕೊಳ್ಳುವುದರೊಂದಿಗೆ, ವಿವಾದವನ್ನು ಕೊನೆಗೊಳಿಸಲು ಸಿಪಿಎಂ ತನ್ನ ಪ್ರಯತ್ನಗಳನ್ನು ಹೆಚ್ಚಿಸಿದೆ. ಸಿಪಿಎಂ ಮತ್ತು ಮೇಯರ್ ಆರ್ಯ ರಾಜೇಂದ್ರನ್ ಅವರು ಪತ್ರ ನಕಲಿಯಾಗಿದ್ದು, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ನಿಗಮದಲ್ಲಿ ಖಾಲಿ ಇರುವ 295 ತಾತ್ಕಾಲಿಕ ಹುದ್ದೆಗಳಿಗೆ ಉದ್ಯೋಗ ವಿನಿಮಯ ಕೇಂದ್ರದ ಮೂಲಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಅಣವೂರು ನಾಗಪ್ಪನವರು ಆರ್ಯ ಅವರನ್ನು ವಿಚಾರಿಸಿದಾಗ ಅವರು ಅಂತಹ ಪತ್ರವನ್ನು ಸಿದ್ಧಪಡಿಸಿಲ್ಲ ಎಂದು ಉತ್ತರಿಸಿದರು. ಪಕ್ಷದ ನಾಯಕತ್ವಕ್ಕೆ ಅಧಿಕೃತವಾಗಿ ಪತ್ರ ಬಂದಿಲ್ಲ ಎಂದೂ ಅಣವೂರು ಹೇಳಿದ್ದಾರೆ. ಈಗ ನಾಯಕತ್ವಕ್ಕೆ ಸಿಗದ ಪತ್ರ ವಾಟ್ಸಾಪ್ ಗ್ರೂಪ್ ಮೂಲಕ ಹೇಗೆ ಹರಿದಾಡಿತು ಎಂಬ ಪ್ರಶ್ನೆ ಮೂಡಿದೆ.

ಕುಡಿದ ಅಮಲಿನಲ್ಲಿ ವಿಮಾನದ ನೆಲದ ಮೇಲೆ ಮೂತ್ರ ವಿಸರ್ಜಿನೆ ಮಾಡಿದ ಪ್ರಯಾಣಿಕ – ಬಂಧಿಸಿದ ಪೊಲೀಸರು  

ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನು ವಿಮಾನದ ನೆಲದ ಮೇಲೆ ಮೂತ್ರ ವಿಸರ್ಜಿನೆ ಮಾಡಿದ್ದಾನೆ.

ಬಾಲಿಯಿಂದ ಬ್ರಿಸ್ಬೇನ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಹಲವಾರು ಸಣ್ಣ ಬಾಟಲಿ ವೈನ್‌ಗಳನ್ನು ಸೇವಿಸಿದ ನಂತರ ವಿಮಾನದ ನೆಲದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಕ್ಕಾಗಿ ಪ್ರಯಾಣಿಕನ ಮೇಲೆ ಕೇಸು ದಾಖಲಿಸಲಾಗಿದೆ ಎಂದು ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದಾರೆ.

ನ್ಯೂಜಿಲೆಂಡ್‌ನ 72 ವರ್ಷದ ವ್ಯಕ್ತಿಯ ಮೇಲೆ ಆಕ್ರಮಣಕಾರಿ ವರ್ತನೆಯ ಆರೋಪ ಹೊರಿಸಲಾಗಿದೆ. “ನಿನ್ನೆ ಸಂಜೆ ವಿಮಾನವು ಬ್ರಿಸ್ಬೇನ್‌ಗೆ ಇಳಿಯುತ್ತಿದ್ದಂತೆ ಅವನು ತನ್ನ ಸೀಟಿನಲ್ಲಿ ಕುಳಿತುಕೊಂಡು ನೆಲದ ಮೇಲೆ ಮೂತ್ರ ವಿಸರ್ಜಿಸಿದ್ದಾನೆ” ಎಂದು ಪೊಲೀಸರು ನವೆಂಬರ್ 3 ರಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರು ಮನುಷ್ಯನ ನಡವಳಿಕೆಯನ್ನು “ಅವಮಾನಕರ” ಎಂದು ವಿವರಿಸಿದರು, ಅದಕ್ಕೆ ಯಾವುದೇ ಕ್ಷಮೆಯಿಲ್ಲ ಎಂದು ಹೇಳಿದರು.

“ಯಾವುದೇ ಸೆಟ್ಟಿಂಗ್‌ಗಳಲ್ಲಿ ಸಮಾಜವಿರೋಧಿ ಅಥವಾ ಕಾನೂನುಬಾಹಿರ ನಡವಳಿಕೆಯು ಸ್ವೀಕಾರಾರ್ಹವಲ್ಲ ಮತ್ತು AFP (ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್) ಇದನ್ನು ಆಸ್ಟ್ರೇಲಿಯಾದ ವಿಮಾನ ನಿಲ್ದಾಣಗಳಲ್ಲಿ ಸಹಿಸುವುದಿಲ್ಲ” ಎಂದು ಬ್ರಿಸ್ಬೇನ್ ವಿಮಾನ ನಿಲ್ದಾಣದ ಕಮಾಂಡರ್ ಸೂಪರಿಂಟೆಂಡೆಂಟ್ ಮಾರ್ಕ್ ಕೋಲ್ಬ್ರಾನ್ ಹೇಳಿದ್ದಾರೆ.

ಬಾಲಿ-ಬ್ರಿಸ್ಬೇನ್ ವಿಮಾನದಲ್ಲಿದ್ದ ವ್ಯಕ್ತಿ ಬ್ರಿಸ್ಬೇನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಾಗ ಅವರಿಗೆ ನೋಟಿಸ್ ನೀಡಲಾಗಿದೆ. ನಂತರ, ಅವರನ್ನು ಬ್ರಿಸ್ಬೇನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಅಪರಾಧಕ್ಕೆ ತಪ್ಪೊಪ್ಪಿಕೊಂಡ ನಂತರ, ಅವರಿಗೆ 12 ತಿಂಗಳ ಸಾಮಾನ್ಯ ಜೈಲು ಶಿಕ್ಷೆಯನ್ನು ವಿಧಿಸಲಾಯಿತು.

ಉಪ್ಪಿನಂಗಡಿ ಶ್ರೀರಾಮ ಪ್ರೌಢಶಾಲೆಯಲ್ಲಿ ಯಕ್ಷಗಾನ ತಾಳಮದ್ದಳೆ – ತುಳಸಿ ಜಲಂಧರ

ಉತ್ಥಾನ ದ್ವಾದಶಿ ತುಳಸಿ ಪೂಜೆಯ ಮಹತ್ವವನ್ನು ತಿಳಿಸುವ ಪೌರಾಣಿಕ ಕಥಾನಕ ‘ತುಳಸಿ ಜಲಂಧರ’ ಪ್ರಸಂಗದ ತಾಳಮದ್ದಳೆ ಉಪ್ಪಿನಂಗಡಿ ನಟ್ಟಿಬೈಲಿನ ಶ್ರೀರಾಮ ಪ್ರೌಢಶಾಲಾ ಸಭಾಂಗಣದಲ್ಲಿ ಜರಗಿತು.

ಭಾಗವತರಾಗಿ ಡಿ.ಕೆ ಆಚಾರ್ಯ ಅಲಂಕಾರು, ಕು.ಶ್ರೇಯಾ ಆಲಂಕಾರು, ಕುಮಾರಿ ಪ್ರಜ್ಞಾ ಆಚಾರ್ಯ ಉಪ್ಪಿನಂಗಡಿ, ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮೋಹನ ಶರವೂರ್,ಶ್ರೀಪತಿ ಭಟ್ ಉಪ್ಪಿನಂಗಡಿ 

ಅರ್ಥಧಾರಿಗಳಾಗಿ ಸತೀಶ ಆಚಾರ್ಯ ಮಾಣಿ, ಕುಮಾರಿ ಹರ್ಷಿತಾ, ದಿವಾಕರ ಆಚಾರ್ಯ ಗೇರುಕಟ್ಟೆ, ನಾರಾಯಣ ಭಟ್ ಅಲಂಕಾರು, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಕುಮಾರಿ ವರಲಕ್ಷ್ಮಿ, ಬಾಲಕೃಷ್ಣ ಕೇಪುಳು ಮತ್ತು ಹರೀಶ್ ಆಚಾರ್ಯ ಉಪ್ಪಿನಂಗಡಿ ಭಾಗವಹಿಸಿದ್ದರು.

ಅಂಬಿಕಾ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ತೃತೀಯ ಬಿ.ಎ ನಯನಾ, ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ ಭರತ್ ಆಯ್ಕೆ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಮಹಾವಿದ್ಯಾಲಯದ 2022-23ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ತೃತೀಯ ಬಿ.ಎ. ವಿದ್ಯಾರ್ಥಿನಿ ನಯನಾ ಹಾಗೂ ಕಾರ್ಯದರ್ಶಿಯಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿ ಭರತ್ ಆಯ್ಕೆಯಾಗಿದ್ದಾರೆ.

ನಯನಾ ಅವರು ವಾಲ್ತಾಜೆ ನಿವಾಸಿಯಾ ಸತ್ಯನಾರಾಯಣ ಬಿ. ಹಾಗೂ ವಿನಯ ದಂಪತಿ ಪುತ್ರಿ. ಅಂತೆಯೇ ಭರತ್ ಅವರು ಪೆರ್ನೆ ನಿವಾಸಿ ಗಂಗಾಧರ್ ಹಾಗೂ ಸುಜಾತ ದಂಪತಿಯ ಪುತ್ರ.


ಪ್ರಥಮ ಬಿ.ಎ. ಪ್ರತಿನಿಧಿಯಾಗಿ ಮೈಸೂರಿನ ವಿಜೇಂದ್ರ ಎಸ್., ಕುಮುದಾ ವಿಜೇಂದ್ರ ಅವರ ಪುತ್ರ ವಿಕ್ರಮ್, ದ್ವಿತೀಯ ಬಿ.ಎ. ಪ್ರತಿನಿಧಿಯಾಗಿ ಪೆರ್ನೆಯ ಬಾಲಕೃಷ್ಣ, ವನಿತಾ ದಂಪತಿ ಪುತ್ರ ನವನೀತ್, ದ್ವಿತೀಯ ಬಿ.ಕಾಂ. ಪ್ರತಿನಿಧಿಯಾಗಿ ವೀರಮಂಗಲದ ಮನೋಹರ ವಿ., ನಾಗವೇಣಿ ಕೆ. ದಂಪತಿಯ ಪುತ್ರಿ ಲೇಖಾ,

ತೃತೀಯ ಬಿ.ಎ. ಪ್ರತಿನಿಧಿಯಾಗಿ ಕಿರಿಮಂಜೇಶ್ವರದ ದೇವರಾಜ್ ಆರ್, ರಾಜೇಶ್ವರಿ ದಂಪತಿಯ ಪುತ್ರಿ ಮೇಘಾ ಡಿ. ಮತ್ತು ತೃತೀಯ ಬಿ.ಎಸ್ಸಿ. ಪ್ರತಿನಿಧಿಯಾಗಿ ಪೆರ್ಲ ಸ್ವರ್ಗದ ಬಾಲಚಂದ್ರ ಬಿ.ವಿ., ಪ್ರಿಯಾ ದಂಪತಿ ಪುತ್ರಿ ವರಣ್ಯ ಬಿ. ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟದ ಎಕ್ಸೆಲ್ ಶೋಧ ವಿಜ್ಞಾನ ಮೇಳದಲ್ಲಿ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ

ದಿನಾಂಕ 29-10-2022ನೇ ಶನಿವಾರ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಶೋಧ ವಿಜ್ಞಾನ ಮತ್ತು ಕಲಾ ಸ್ಪರ್ಧೆ “ಎಕ್ಸೆಲ್ ಶೋಧ”ದಲ್ಲಿ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ವಿಜ್ಞಾನ ಮಾದರಿಯಲ್ಲಿ 8ನೇ ತರಗತಿಯ ಸಮನ್ವಿತಾ (ಡಾ.ಗುರುರಾಜ್.ಎಂ ಮತ್ತು ಡಾ.ಶ್ರೀದೇವಿ ದಂಪತಿ ಪುತ್ರಿ) ಮತ್ತು ಲಕ್ಷ್ಯ(ಶ್ರೀ ದಿನೇಶ್ ಕುಮಾರ್ ಮತ್ತು ರೇಖಾ ದಂಪತಿ ಪುತ್ರಿ) – ಪ್ರಥಮ ಸ್ಥಾನ , ವಿಜ್ಞಾನ ರಸಪ್ರಶ್ನೆ- 10ನೇ ತರಗತಿಯ ಅನ್ವಿತ್.ಎನ್(ಶ್ರೀ ಶ್ರೀಪತಿ.ಎನ್ ಮತ್ತು ವಿದ್ಯಾಲಕ್ಷ್ಮೀ ದಂಪತಿ ಪುತ್ರಿ) ಮತ್ತು ಅಭಿರಾಮ್ ಭಟ್(ಶ್ರೀ ನಾರಾಯಣ ಪ್ರಸಾದ್.ಪಿ.ಎಸ್ ಮತ್ತು ರಮ್ಯ ಕಾವೇರಿ ದಂಪತಿ ಪುತ್ರಿ) – ಪ್ರಥಮ ಸ್ಥಾನ,

ಇಂಗ್ಲೀಷ್ ಭಾಷಣ- 8ನೇ ತರಗತಿಯ ಜಿ.ವೈಷ್ಣವಿ ಪೈ(ಶ್ರೀ ನಾಗೇಶ್ ಪೈ ಮತ್ತು ಸಹನಾ ಪೈ ದಂಪತಿ ಪುತ್ರಿ) – ಪ್ರಥಮ ಸ್ಥಾನ, ಪೆನ್ಸಿಲ್ ಸ್ಕೆಚ್ – 10ನೇ ತರಗತಿಯ ಕೀರ್ತನ್.ಕೆ(ಶ್ರೀ ಕಿಶನ್ ಭಟ್.ಎನ್.ಎಸ್ ಮತ್ತು ಉಷಾ.ಕೆ ದಂಪತಿ ಪುತ್ರ) – ದ್ವಿತೀಯ ಸ್ಥಾನ,

ಪೈಂಟಿಂಗ್- 8ನೇ ತರಗತಿಯ ಅನುಶ್ರೀ(ಮನಿಕಂಡನ್ ನಾಯರ್ ಮತ್ತು ಅನಿತಾ.ಎನ್ ದಂಪತಿ ಪುತ್ರಿ) – ದ್ವಿತೀಯ ಸ್ಥಾನ, ಚೆಸ್- 10ನೇ ತರಗತಿಯ ಪ್ರಣೀಲ್ ರೈ(ಶ್ರೀ ಪ್ರಕಾಶ್ ರೈ ಮತ್ತು ಸತ್ಯಲತ ದಂಪತಿ ಪುತ್ರ) – ಪ್ರಥಮ ಸ್ಥಾನ ಪಡೆದಿರುತ್ತಾರೆ.

ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ.3000 ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ರೂ.2000/-  ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹಾಗೂ ಸಮಗ್ರ ಪ್ರಶಸ್ತಿಯು ರೂ.15000/- ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಶಾಶ್ವತ ಫಲಕ ಒಳಗೊಂಡಿರುತ್ತದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ವರ್ಷಪೂರ್ತಿ ಕನ್ನಡ ಮಾತನಾಡುವ ಪ್ರವೃತ್ತಿ ಕನ್ನಡಿಗರಲ್ಲಿ ಮೂಡಿದಾಗ ಈ ಉತ್ಸವದ ಉದ್ದೇಶ ಸಾಕಾರಗೊಳ್ಳುತ್ತದೆ. ಕನ್ನಡ ನಿತ್ಯೋತ್ಸವವಾಗುತ್ತದೆ. ಭಾಷೆಯೊಂದರ ಬಳಕೆಯಿಂದ ಆ ಭಾಷೆ ಹೆಚ್ಚು ಜನರನ್ನು ತಲುಪುವ ಜೊತೆಗೆ ದೀರ್ಘಕಾಲ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯಲು ನೆರವಾಗುತ್ತದೆ.

ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಕನ್ನಡ ಮಾತನಾಡುವ ಹಾಗೂ ಭಾಷೆಯ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಉಮಾಮಹೇಶ್ವರ್ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ವಿಶೇಷ ಉಪನ್ಯಾಸ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.


ಕನ್ನಡ ಕನ್ನಡಿಗರಿಗೆ ಮಾತೃಭಾಷೆಯಾಗಿದ್ದು, ಮನೆಯಲ್ಲಿ ಯಾವುದೇ ಭಾಷೆ ಮಾತನಾಡುತ್ತಿದ್ದರೂ ಸಮಾಜದಲ್ಲಿ ಕನ್ನಡವೇ ಮುಖ್ಯವಾಗಿದೆ. ಇದು ನಮ್ಮ ಪರಿಸರ ಭಾಷೆಯಾಗಿದ್ದು ವಿಚಾರಗಳನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದು ಪ್ರತಿಯೊಬ್ಬರಲ್ಲೂ ಆತ್ಮವಿಶ್ವಾಸ ಮೂಡಿಸುವ ಕಾರ್ಯವನ್ನು ಮಾಡುತ್ತದೆ. ಆದ್ದರಿಂದ ಇದನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದೆ ಎಂದರು.


ಭಾಷಾವಾರು ಪ್ರಾಂತ್ಯಗಳ ಹಾಗೂ ರಾಜ್ಯಗಳ ರಚನೆಯ ಸಂದರ್ಭದಲ್ಲಿ ಹಲವಾರು ಮಂದಿ ಯೋಗದಾನ ನೀಡಿದ್ದಾರೆ. ಕನ್ನಡದ ಅಗ್ರಗಣ್ಯ ಸಾಹಿತಿಗಳು ಭಾಷೆ ಶ್ರೀಮಂತವಾಗಲು ಶ್ರಮಿಸಿದ್ದಾರೆ. ಭಾಷಾಭಿಮಾನದಿಂದ ಒಬ್ಬ ವ್ಯಕ್ತಿ ಕಲೆ, ಸಂಸ್ಕೃತಿ ಹಾಗೂ ಸಂಸ್ಕಾರ ಸಹಿತನಾಗಿ ಶ್ರೀಮಂತನಾಗಲು ಸಾಧ್ಯ. ಆದರೆ ಕನ್ನಡಿಗರ ಅಭಿಮಾನ ಶೂನ್ಯತೆ ಭಾಷಾ ಬೆಳವಣಿಗೆಗೆ ಅಡ್ಡಿಯಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಜನತೆಯಲ್ಲಿ ಭಾಷೆಯನ್ನು ಶುದ್ಧವಾಗಿ ಮಾತನಾಡುವ ಪರಿಪಾಠ ಬೆಳೆಯಬೇಕಿದೆ. ಕನ್ನಡಿಗರಲ್ಲಿ ಭಾಷೆಯ ಅಭಿಮಾನ ಮೂಡಿದಲ್ಲಿ ಭಾಷೆಯ ವಿಸ್ತಾರತೆ ಹೆಚ್ಚುತ್ತದೆ. ಯಾವುದೇ ಗ್ರಾಹಕ ಸೇವಾ ಬಳಕೆ ಸಂದರ್ಭ ಕನ್ನಡ ಭಾಷೆಯನ್ನೇ ಕನ್ನಡಿಗರು ಬಳಸಿದರೆ ಕನ್ನಡ ಬಳಕೆ ಹೆಚ್ಚುತ್ತದೆ. ಆದರೆ ಕನ್ನಡದ ಬಳಕೆಗೆ ಕನ್ನಡಿಗರೇ ಆಸಕ್ತಿ ತೋರದಿದ್ದಲ್ಲಿ ಅದರ ಲಭ್ಯತೆಯ ಪ್ರಮಾಣವೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದರು.


ರಾಜ್ಯೋತ್ಸವ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಕಾಲೇಜಿನ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಚಂದ್ರಕಾ0ತ ಗೋರೆ ಉಪಸ್ಥಿತರಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥೆ ಜಯಂತಿ ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ತತ್ವಶಾಸ್ತ್ರ ಉಪನ್ಯಾಸಕ ತೇಜಶಂಕರ ಸೋಮಯಾಜಿ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು.


ವಿದ್ಯಾರ್ಥಿನಿಯರಾದ ಪಂಚಮಿ ಸ್ವಾಗತಿಸಿ, ಚೈತನ್ಯ ವಂದಿಸಿದರು. ವರಣ್ಯ ಕಾರ್ಯಕ್ರಮ ನಿರ್ವಹಿಸಿದರು. ಚೈತನ್ಯ ಮತ್ತು ಶ್ರೀ ಹರ್ಷ ಪ್ರಾರ್ಥಿಸಿದರು.

ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ತಂಡ ಚಾಂಪಿಯನ್‌ಶಿಪ್

ಪುತ್ತೂರು,ನ 5: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಈಶ್ವರಮಂಗಲದ ಪಂಚಲಿಂಗೇಶ್ವರ  ಪದವಿ ಪೂರ್ವ ಕಾಲೇಜು ಇದರ ಸಹಯೋಗದೊಂದಿಗೆ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ  ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರು ಚಾಂಪಿಯನ್‌ಶಿಪ್ ತಂಡ ಪ್ರಶಸ್ತಿ ಪಡೆದುಕೊಂಡರು.

ಬಾಲಕರ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ರಜತ್‌ ಆರ್ ಭಟ್‌ ವೈಯಕ್ತಿಕ ಚಾಂಪಿಯನ್ ಪಡೆದರು. ಅದೇ ರೀತಿ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆಯಿತು.


ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ರಜತ್‌ ಆರ್ ಭಟ್, ನಿತಿನ್‌ ಆರ್ ಎ, ಜಯಶೀಲ್ ರೈ, ಆರ್ಯ ಪಟೇಲ್, ಪವನ್‌ ಕುಮಾರ್, ಲೋಹಿತ್‌ ಎಸ್ ಡಿ, ಬೃಜೇಶ್ ಜಿ ರೈ,ಗಗನ್  ಶೆಣೈ, ಚರಣ್ ಪಿ, ಅನೀಷ್, ವಿಘ್ನೇಶ್ ಅಶ್ವಿತ್, ಧನುಷ್ ಕೆ, ಪ್ರಮಥ್, ಎಲ್. ಧನುಷ್, ನಿಹಾಲ್‌ ರಾಜ್, ಅಜಿತ್ ಭಾಗವಹಿಸಿದ್ದರು.

ಬಾಲಕಿಯರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಪವಿತ್ರ ಭಟ್ ಕೆ, ಹೇಮಲತಾ, ಪೂಜಾಶ್ರೀ ಎ, ಕೀರ್ತಿಲತಾ, ದೀಕ್ಷಾ ಜಿ, ಮಂಜುಶ್ರೀ, ವಿನಿತಾ, ನಿತ್ಯಶ್ರೀ ರೈ, ಭವಿಷ್ಯ, ಭೂಮಿಕಾ, ಕುಸುಮ, ಸೌಮ್ಯ ರೈ ಭಾಗವಹಿಸಿದ್ದರು.


ಈ ತಂಡವು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಮತ್ತು ಯತೀಶ್‌ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಕನ್ನಡ ಭಾಷೆ ಜಗತ್ತನ್ನೇ ಬೆಳಗುವ ಅದ್ಭುತ ಭಾಷೆ : ಗಣರಾಜ ಕುಂಬ್ಳೆ

ಕನ್ನಡ ರಾಜ್ಯ ಸ್ಥಾಪನೆಯಾಗಿರುವುದಕ್ಕೆ ಕೇವಲ ಆಚರಣೆ ಮಾಡಿ ಸಂಭ್ರಮಿಸುವುದಲ್ಲ, ಕನ್ನಡವು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಬೆರೆತು ನಮ್ಮ ಉಸಿರಾಗಬೇಕು. ಕನ್ನಡ ಭಾಷೆಗೆ ಸುದೀರ್ಘವಾದ ಇತಿಹಾಸವಿದ್ದು ಅತ್ಯಂತ ಫ್ರೌಢವಾದ ಬೆಳವಣಿಗೆಯನ್ನು ಹೊಂದಿರುವ ಭಾಷೆ. ಕನ್ನಡದಲ್ಲಿ ರಚನೆಯಾಗಿರುವ ಮಹಾಕಾವ್ಯಗಳನ್ನು ಅವಲೋಕಿಸಿದಾಗ ನಮಗೆ ನಮ್ಮ ಭಾಷೆಯ ಬಗ್ಗೆ ಗರ್ವವೆನಿಸುತ್ತದೆ ಎಂದು ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ್ ಕುಂಬ್ಳೆ ಹೇಳಿದರು.


ಅವರು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.


ಕನ್ನಡ ಸಾಹಿತ್ಯ ಸಾಮ್ರಾಜ್ಯವನ್ನು ಆಳಿದ ಕನ್ನಡದ ಆದಿಕವಿ ಪಂಪ, ರನ್ನ, ಪೊನ್ನ ಕುಮಾರವ್ಯಾಸ, ಲಕ್ಷ್ಮೀಶ ಇವರು ಕನ್ನಡಕ್ಕೆ ನೀಡಿದ ಕೊಡುಗೆ ಅಪಾರ. ವಚನಕಾರ ಅಕ್ಕಮಹಾದೇವಿ, ಅಲ್ಲಮ ಪ್ರಭು, ಜೇಡರ ದಾಸಿಮಯ್ಯ, ಬಸವಣ್ಣ ಅವರು ತಮ್ಮ ವಚನಗಳ ಮೂಲಕ ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸಿದರು. ಹಾಗೆಯೇ ದಾಸರ ಕೀರ್ತನೆಗಳು ಕನ್ನಡ ಭಾಷೆಯನ್ನು ಶ್ರೀಮಂತವಾಗಿಸಿವೆ ಎಂದರು.


ನಮ್ಮ ಕನ್ನಡ ನಾಡಲ್ಲಿ ಹುಟ್ಟಿದ ಕವಿಶ್ರೇಷ್ಠರು, ವಚನಕಾರರು, ಸಂತ ಶರಣರು ಕನ್ನಡ ಭಾಷೆಯ ಮೂಲಕ ಜ್ಞಾನದ ಬೆಳಕನ್ನು ಜಗತ್ತಿಗೆ ಪಸರಿಸಿದ್ದಾರೆ. ಇಂತಹ ಅಮೋಘ ಹಿನ್ನಲೆಯಿರುವ ಭಾಷೆಯನ್ನು ನಾವು ಬಳಸಿ, ಬೆಳೆಸಿ, ಉಳಿಸಬೇಕು ಮತ್ತು ಮುಂದಿನ ಪೀಳಿಗೆಗೆ ಈ ಭಾಷೆಯ ಸೌರಭವನ್ನು ಸ್ವಲ್ಪವು ಕಳೆಗುಂದದ0ತೆ ಹಸ್ತಾಂತರಿಸಬೇಕು ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ ಮಾತನಾಡಿ ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಇರುವ ಸೊಬಗು ಇತರ ಯಾವ ಭಾಷೆಗೂ ಇಲ್ಲ. ಕನ್ನಡ ಭಾಷೆಯು ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ರಚನೆಯಾಗಿದ್ದು ಸಂಸ್ಕೃತದ ಕ್ಲಿಷ್ಟವಾದ ಶ್ಲೋಕಗಳನ್ನು ಓದುವ ಸಾಮರ್ಥ್ಯ ಕನ್ನಡಿಗನಿಗಿದೆ.

ಬನವಾಸಿ ಕನ್ನಡದ ಪ್ರಥಮ ರಾಜಧಾನಿಯಾಗಿದ್ದು ಬನವಾಸಿಯಲ್ಲಿ ಮೈನವಿರೇಳಿಸುವ ಕನ್ನಡದ ಶಿಲ್ಪಕಲೆಗಳು ನಿರ್ಮಾಣವಾಗಿವೆ. ಇಂದಿನ ಆಧುನಿಕ ವಿದ್ಯಾಮಾನಗಳನ್ನು ಬಿತ್ತರಿಸುವ ಕನ್ನಡ ವಾರ್ತವಾಹಿನಿಗಳು ಕನ್ನಡದ ಕಗ್ಗೋಲೆಯನ್ನು ಮಾಡುತ್ತಿವೆ. ಕನ್ನಡವು ತನ್ನ ಭಾಷಾ ಶುದ್ಧತೆಯನ್ನು ಕಳೆದುಕೊಂಡು ಆಂಗ್ಲ ಭಾಷೆಯ ಮೋಹಕ್ಕೆ ಸಿಲುಕಿ ಕಂಗ್ಲೀಷ್ ಆಗಿ ವಿರಾಜಿಸುತ್ತಿದೆ ಎಂದರು.


ಭಾಷಾ ದುರಭಿಮಾನ ಬೆಳೆದರೆ ಮುಂದಿನ ಜನಾಂಗ ಕನ್ನಡ ಪದಗಳನ್ನು ಬೇರೆ ಭಾಷೆಯಿಂದ ಹುಡುಕಿ ತೆಗೆಯುವ ಅಗತ್ಯತೆ ಬರಬಹುದು ಹಾಗೂ ಕನ್ನಡ ಭಾಷೆಯನ್ನು ಬಳಸುವವರೆ ಇಲ್ಲದೆ ಅದು ಕಣ್ಮರೆಯಾಗಬಹುದು. ಆದ್ದರಿಂದ ಇಂದಿನ ಸಮಾಜಕ್ಕೆ ಸ್ವಾಭಿಮಾನಿ ಕನ್ನಡಿಗನ ಅಗತ್ಯವಿದೆ. ನಾವು ದೈನಂದಿನ ವ್ಯವಹಾರಗಳಲ್ಲಿ ಹೆಚ್ಚು ನಮ್ಮ ಕನ್ನಡ ಭಾಷೆಯನ್ನು ಬಳಸಿ ಅದನ್ನು ಸಮೃದ್ಧಗೊಳಿಸಬೇಕು. ನಾವು ಯಾವುದೇ ಭಾಷೆಯನ್ನು ಕಲಿತರೂ ಎಲ್ಲೇ ಉದ್ಯೋಗ ಅರಸಿ ಹೋದರೂ ನಾವು ಎಂದೆ0ದಿಗೂ ಕನ್ನಡಿಗರಾಗಿಯೇ ಇರಬೇಕೆಂದು ಹೇಳಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸುಚಿತ್ರಾ ಪ್ರಭು, ಉಪಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ ಎಸ್. ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶ್ರಾವ್ಯ ಪಾರ್ಥಿಸಿದರು. ಕನ್ನಡ ಪ್ರಾಧ್ಯಪಕ ಸತೀಶ್ ಇರ್ದೆ ಸ್ವಾಗತಿಸಿ, ರಸಾಯನ ಶಾಸ್ತ್ರ ಉಪನ್ಯಾಸಕಿ ಸುಚೇತ ರತ್ನ ವಂದಿಸಿದರು. ವಿದ್ಯಾರ್ಥಿನಿ ಅಂಶಿತಾ ನಿರೂಪಿಸಿದರು.