ಪುತ್ತೂರು: ಮನುಷ್ಯ ಆರೋಗ್ಯವಂತನಾಗಿ ಇರಬೇಕಾದರೆ ದೈಹಿಕ ಸದೃಢತೆ ಮುಖ್ಯ. ದೈಹಿಕ ಸಾಮರ್ಥ್ಯ ಮಾನಸಿಕ ದೃಢತೆ ಇವೆಲ್ಲವೂ ಶಾರೀರಿಕ ಶಿಕ್ಷಣದ ಮೂಲಕ ಸಾಧ್ಯ. ಹಾಗಾಗಿ ಈಗಿನ ಶೈಕ್ಷಣಿಕ ನೀತಿಯಲ್ಲಿ ಯೋಗ ಹಾಗೂ ಶಾರೀರಿಕ ಶಿಕ್ಷಣಕ್ಕೆ ಒತ್ತು ಕೊಡಲಾಗಿದೆ ಎಂದು ಜಿಡೆಕಲ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ಸೇಸಪ್ಪ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಎರಡು ವಿಧ ಇದೆ. ಒಂದು ಆಡಿ ಅನುಭವಿಸುವುದು ಇನ್ನೊಂದು ನೋಡಿ ಅನುಭವಿಸುವುದು. ಆಡಿ ಅನುಭವಿಸುವುದು ಕಷ್ಟದ ಕೆಲಸ. ಆದರೆ ಅದರಿಂದ ನಮ್ಮ ಬುದ್ಧಿ ಶಕ್ತಿ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲದೆ ದೈಹಿಕ ಸಾಮರ್ಥ್ಯವೂ ಕೂಡ ಬೆಳವಣಿಗೆಯಾಗುತ್ತದೆ. ಹೀಗಾಗಿ ಆಡುವ ಮೂಲಕ ಬುದ್ಧಿ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಕ್ರೀಡೆ ಶಿಕ್ಷಣಕ್ಕೆ ಅವಶ್ಯಕ, ಸಣ್ಣ ಮಗು ಯಾವಾಗ ತನ್ನನ್ನು ತಾನು ಆಟಕ್ಕೆ ಅಳವಡಿಸಿಕೊಳ್ಳುತ್ತದೋ ಆಗ ಮನೋವಿಕಾಸವಾಗುತ್ತದೆ. ಆದರೆ ಇಂದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸಿಕ್ಕ ಹಾಗೆ ಆಟಕ್ಕೆ ಪ್ರೋತ್ಸಾಹ ಸಿಗುತ್ತಿಲ್ಲ. ಕ್ರೀಡೆಯಲ್ಲಿ ಒಗ್ಗಟ್ಟಿದೆ. ಆದ್ದರಿಂದ ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿಕೊಂಡು ಮುಂದುವರಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಂಬಿಕ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ, ಶಾಲಾ ನಾಯಕಿ ಸಂಸ್ಕೃತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಜಯಲಕ್ಷ್ಮಿ, ಸೂರ್ಯ, ಮನ್ವಿತ್ ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಅಂಬಿಕ ವಿದ್ಯಾಲಯದ ಐರಾವತ, ಕಲ್ಪವೃಕ್ಷ, ಕಾಮಧೇನು, ಅಮೃತ ತಂಡದ ವಿದ್ಯಾರ್ಥಿಗಳು ಪಥಸಂಚನದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಮೆರುಗು ತಂದರು. ದೈಹಿಕ ಶಿಕ್ಷಕಿ ಸುಚಿತ್ರಾ ಸ್ವಾಗತಿಸಿ, ಪ್ರಾಂಶುಪಾಲೆ ಮಾಲತಿ.ಡಿ ಭಟ್ ವಂದಿಸಿದರು. ವಿದ್ಯಾರ್ಥಿಗಳಾದ ಅರುಂಧತಿ, ಅನಘ ವಿ. ಪಿ ಕಾರ್ಯಕ್ರಮ ನಿರ್ವಹಿಸಿದರು.
ಪುತ್ತೂರು: ಕಾನೂನಿನ ಅಜ್ಞಾನವು ಕ್ಷಮಿಸತಕ್ಕದ್ದಲ್ಲ. ಕಾನೂನು ಜೀವನದಲ್ಲಿ ಅಮ್ಮನ ಗರ್ಭದಲ್ಲಿರುವಾಗಲೇ ಪ್ರಾರಂಭವಾಗುತ್ತದೆ ಮತ್ತು ಮನುಷ್ಯ ಗೋರಿಯನ್ನು ತಲುಪುವವರೆಗೂ ಕಾನೂನು ಮನುಷ್ಯನನ್ನು ಕಾಪಾಡುತ್ತದೆ ಎಂದು ಪುತ್ತೂರಿನ ಪ್ರಧಾನ ವ್ಯಾವಹಾರಿಕ ನ್ಯಾಯಾಧೀಶೆ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅರ್ಚನಾ ಕೆ ಉಣ್ಣಿತಾನ್ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಸಿ.ಬಿ.ಎಸ್.ಇ ಯಲ್ಲಿ ಕಾನೂನು ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಕಾನೂನು ಏಕೆ ಮುಖ್ಯ ಎಂಬ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಪುತ್ತೂರಿನ ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಇವರು ಮಾತನಾಡಿ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಕಾನೂನಿನ ಸುಪರ್ದಿಯಲ್ಲಿ ಇರುತ್ತೇವೆ. ಯಾರು ತೊಂದರೆಗೆ ಒಳಗಾಗುತ್ತಾರೋ ಅವರನ್ನು ರಕ್ಷಿಸುವುದೇ ಕಾನೂನು. ಕಾನೂನಿನ ಹಿಂದೆ ಅನೇಕ ಉದ್ದೇಶಗಳಿರುತ್ತದೆ ಎಂದರು.
ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯದ ಕುರಿತು ಇರುವ ಕಾಯಿದೆಯೇ ಪೋಕ್ಸೋ. ಮಕ್ಕಳ ದೈಹಿಕ ಮಾನಸಿಕ ವಿಕಾಸಕ್ಕೆ ತಡೆ ಆಗದಂತೆ ಜಾರಿಗೆ ಬಂದ ಕಾಯ್ದೆ ಇದಾಗಿದ್ದು, ಸಂತ್ರಸ್ತ ಮಕ್ಕಳಿಗೆ ಪರಿಹಾರವನ್ನು ನೀಡುತ್ತದೆ. ಏನಾದರೂ ಸಮಸ್ಯೆಗಳಾದರೆ ಮಕ್ಕಳು ಸಹಾಯವಾಣಿಯ ಮೊರೆ ಹೋಗಬಹುದು.
ಪೋಕ್ಸೋ ಪ್ರಕರಣವನ್ನು ವಿಚಾರಣೆ ಮಾಡಲೆಂದೇ ವಿಶೇಷವಾಗಿ ಮಕ್ಕಳ ಸ್ನೇಹಿ ನ್ಯಾಯಾಲಯ ಇರುತ್ತದೆ ಹಾಗೂ ಯಾವುದೇ ಕಾರಣಕ್ಕೂ ಪೋಕ್ಸೋ ವಿಷಯಕ್ಕೆ ಸಂಬ0ಧಪಟ್ಟ0ತೆ ಮಾಧ್ಯಮದಲ್ಲಿ ವರದಿ ಮಾಡುವಂತಿಲ್ಲ. ಯಾರಿಗೆ ತೊಂದರೆ ಆಗಿದೆಯೋ ಅಂಥವರಿಗೆ ರಕ್ಷಣೆ ನೀಡುವ ಹೊಣೆ ಸರ್ಕಾರದ್ದಾಗಿದೆ ಎಂದು ಪೋಕ್ಸೋ ಕಾಯ್ದೆಯ ನಿಯಮದ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನೈತಿಕವಾದ ಮೌಲ್ಯಗಳು ನಮ್ಮಲ್ಲಿ ಇರಬೇಕು. ಸಮಾಜ ಸೇವೆಯ ಗುರಿ ನಮ್ಮದಾಗಬೇಕು. ಅಷ್ಟೇ ಅಲ್ಲ ನಮ್ಮ ಸುತ್ತಮುತ್ತಲು ಆಗುವ ಘಟನೆಗಳಿಗೆ ನಾವು ಸ್ಪಂದಿಸಬೇಕು ಎಂದು ತಿಳಿಸಿದರು.
ಶಾಲೆಯ ಪ್ರಾಂಶುಪಾಲೆ ಮಾಲತಿ ಡಿ ಭಟ್ ಸ್ವಾಗತಿಸಿ, ಪುತ್ತೂರಿನ ವಕೀಲರ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಅಂಬಿಕಾ ಸಿ ಬಿ ಎಸ್.ಇ ಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್ ವಂದಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಶ್ರೀಚಿನ್ಮಯಿ ರೈ ಎನ್. ಕಾರ್ಯಕ್ರಮವನ್ನು ನಿರೂಪಿಸಿದರು.
ಉಡುಪಿಯ ಯಕ್ಷಗಾನ ಕಲಾರ೦ಗದ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ಪುರಭವನದಲ್ಲಿ ನವಂಬರ್ 13ರಂದು ಜರಗಿತು. ದಿನಪೂರ್ತಿ ನಡೆದ ಈ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಡಾ.ಎಂ.ಪ್ರಭಾಕರ ಜೋಶಿಯವರು ಕಲಾರಂಗ ತನ್ನ ಕಾರ್ಯಚಟುವಟಿಕೆಗಳಿಂದ ಸಾಂಸ್ಕೃತಿಕ ಸಾಮಾಜಿಕ ಸಂಘಟನೆಗೆ ಮಾದರಿಯಾಗಿದೆ ಎಂದರು.
ಡಾ. ಪದ್ಮನಾಭ ಕಾಮತ್ರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾರಂಭದಲ್ಲಿ ಪ್ರೊ.ಎ೦.ಎಲ್. ಸಾಮಗ, ಶ್ರೀ ಕೃಷ್ಣಪ್ರಸಾದ್ ಅಡ್ಯಂತಾಯ, ಶ್ರೀ ಕದ್ರಿ ನವನೀತ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಿದ್ದರು.
ಪೂರ್ವಾಹ್ನ ಮೊದಲ ಗೋಷ್ಠಿಯಾಗಿ‘ಇತಿಹಾಸಕ್ಕೆ ಸಂದುಹೋದ ತೆ೦ಕುತಿಟ್ಟಿನ ಯಕ್ಷಗಾನ ಮೇಳಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಜರಗಿತು. ಬಳಿಕ ಸಂಘಟನೆಗಳ ಕುರಿತ ಅನುಭವವನ್ನುಆಯ್ದ ಸಂಘಟಕರು ಮಾತುಕತೆಯಲ್ಲಿ ಹಂಚಿಕೊ೦ಡರು.
ಸAಜೆ 4.00ಕ್ಕೆ ಸಂಪನ್ನಗೊ೦ಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ ನೀಡಿದ ಅನುಗ್ರಹ ಸಂದೇಶದಲ್ಲಿ ಸಾಮಾಜಿಕ-ಸಾಂಸ್ಕೃತಿಕ ಕಳಕಳಿಗೆ ಸ್ಪಂದಿಸುವುದೇ ಭಗವಂತನಿಗೆ ಸಲ್ಲಿಸುವ ಪೂಜೆ ಎಂದು ನುಡಿದರು.
ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ ಶ್ಯಾಮ್ ಭಟ್ ಅಧ್ಯಕ್ಷತೆ ವಹಿಸಿದ್ದರು.ಉಡುಪಿಯ ಶಾಸಕರಾದ ಶ್ರೀ ಕೆ.ರಘುಪತಿ ಭಟ್ ಸಂಸ್ಥೆಯ ವೆಬ್ಸೈಟ್ www.yakshaganakalaranga.com ಲೋಕಾರ್ಪಣೆಗೈದರು. ಪ್ರಶಸ್ತಿ ಪುರಸ್ಕೃತ ಕಲಾವಿದರ ಕುರಿತ ಸಾಕ್ಷ್ಯಚಿತ್ರವನ್ನು ಶ್ರೀ ಹರಿಕೃಷ್ಣ ಪುನರೂರು ಅನಾವರಣಗೊಳಿಸಿದರು.
ಮುಖ್ಯ ಅಭ್ಯಾಗತರಾಗಿ ಮಂಗಳೂರಿನ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಪ್ರೊ.ಎಂ. ಬಿ. ಪುರಾಣಿಕ್, ಶ್ರೀ ಪ್ರದೀಪಕುಮಾರ್ ಕಲ್ಕೂರ, ಪ್ರೊ.ಜಿ. ಆರ್. ರೈ, ಶ್ರೀ ಪಿ. ಗೋಕುಲನಾಥ ಪ್ರಭು, ಡಾ.ಜೆ. ಎನ್. ಭಟ್, ಶ್ರೀ ಲೀಲಾಕ್ಷ ಕರ್ಕೆರ, ಶ್ರೀ ಪಣಂಬೂರು ವಾಸುದೇವ ಐತಾಳ್ ಮತ್ತು ಸಿಎ ಶಿವಾನಂದ ಪೈ ಭಾಗವಹಿಸಿದ್ದರು. ನಿವೃತ್ತ ರಾಜ್ಯಪಾಲ ಯು.ಪದ್ಮನಾಭ ಆಚಾರ್ಯ, ಯು.ವಿಶ್ವನಾಥ ಶೆಣೈ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಪಿ.ಕಿಶನ್ ಹೆಗ್ಡೆ ಹಾಗೂ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು.
ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ತ೦ಡಕ್ಕೆ ನೀಡಲಾಯಿತು. ವಿವಿಧ ಗಣ್ಯರ ಸ್ಮರಣಾರ್ಥ-ಗೌರವಾರ್ಥ ನೀಡುವ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗಳನ್ನು ಡಿ. ಮನೋಹರ್ ಕುಮಾರ್, ಕೃಷ್ಣಸ್ವಾಮಿ ಜೋಯಿಸ, ಮಲವಳ್ಳಿ ನಾರಾಯಣ ಭಟ್, ಅಣ್ಣಪ್ಪಕುಲಾಲ್ ನೀರ್ಜಡ್ಡು, ರಾಮಜೋಗಿ ಜೋಡುಕಲ್ಲು, ಮುಂಡ್ಕೂರು ಕೃಷ್ಣ ಶೆಟ್ಟಿ, ಉಮೇಶ್ ಭಟ್ ಬಾಡ, ಐರ್ಬೈಲ್ ಆನಂದ ಶೆಟ್ಟಿ, ಮಹಮ್ಮದ್ ಗೌಸ್, ಜೋಗು ಕುಲಾಲ್, ವೆಂಕಪ್ಪ ಆಚಾರ್, ಸಜಿಪ ಚೆನ್ನಪ್ಪ ಗೌಡ, ಲಕ್ಷ್ಮೀಶ ಅಮ್ಮಣ್ಣಾಯ, ವಿದ್ವಾನ್ ಗಣಪತಿಭಟ್, ಕೂಟೇಲು ಬಾಲಕೃಷ್ಣ ಭಟ್, ಮಾರ್ವಿ ನಿತ್ಯಾನಂದ ಹೆಬ್ಬಾರ್, ಯು. ಆನಂದ್ ಮತ್ತು ಶಿವರಾಮ ಪಣಂಬೂರು ಸ್ವೀಕರಿಸಿದರು.
ಸಂಸ್ಥೆಯ ಕಾರ್ಯಕರ್ತರಿಗೆ ನೀಡುವ ಯಕ್ಷಚೇತನ ಪ್ರಶಸ್ತಿಯನ್ನು ಎಚ್.ಎನ್. ಶೃಂಗೇಶ್ವರ್ರಿಗೆ ಪ್ರದಾನ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ. ಗ೦ಗಾಧರರಾವ್ ಸ್ವಾಗತಿಸಿದರು. ಎ. ನಟರಾಜ ಉಪಾಧ್ಯಾಯ ವಂದಿಸಿದರು. ಪ್ರೊ.ನಾರಾಯಣ ಎಂ.ಹೆಗಡೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕುರಿತ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವದಲ್ಲಿ ಅಪರಾಹ್ನ 2.00 ರಿಂದ ತೆ೦ಕುತಿಟ್ಟಿನ ಯಕ್ಷಗಾನ ರೂಪಕ ‘ಶ್ರೀ ಮನೋಹರ ಸ್ವಾಮಿ ಪರಾಕು’ ಮತ್ತು ಸಂಜೆ 6.00 ರಿಂದ ಬಡಗುತಿಟ್ಟಿನ ಯಕ್ಷಗಾನ ‘ಚಕ್ರಚಂಡಿಕೆ’ ಪ್ರದರ್ಶನಗೊಂಡವು.
ಶ್ರದ್ಧಾ ವಾಕರ್ ಘೋರ ಹತ್ಯೆಯ ನಂತರದ ಅನುಮಾನವನ್ನು ತಪ್ಪಿಸಲು ಶ್ರದ್ಧಾ ಅವರ ಸಾಮಾಜಿಕ ಮಾಧ್ಯಮದಲ್ಲಿ ಆಫ್ತಾಬ್ ಸಕ್ರಿಯನಾಗಿದ್ದ ಎಂದು ತಿಳಿದುಬಂದಿದೆ. ಆರೋಪಿ ಅಫ್ತಾಬ್ ಪೂನವಾಲಾ ಅನುಮಾನವನ್ನು ತಪ್ಪಿಸಲು ಮತ್ತು ತನ್ನ ಲೈವ್-ಇನ್ ಪಾಲುದಾರನ ಭೀಕರ ಹತ್ಯೆಯನ್ನು ಮರೆಮಾಚುವ ಪ್ರಯತ್ನದಲ್ಲಿ ಶ್ರದ್ಧಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಉಪಯೋಗಿಸುತ್ತಿದ್ದ.
ಶ್ರದ್ಧಾಳನ್ನು ಆಕೆಯ ಗೆಳೆಯ ಆಫ್ತಾಬ್ ಕೊಂದು ನಂತರ ಆಕೆಯ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಲಾಯಿತು. ಸದ್ಯ ಅವನು 5 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಅಪಾರ್ಟ್ಮೆಂಟ್ನಲ್ಲಿನ ದುರ್ನಾತವನ್ನು ಎದುರಿಸಲು, ಅಫ್ತಾಬ್ ಅಗರಬತ್ತಿಗಳನ್ನು ಬೆಳಗಿಸುತ್ತಿದ್ದ. ಅಮೆರಿಕದ ಕ್ರೈಂ ಶೋ ‘ಡೆಕ್ಸ್ಟರ್’ ನಿಂದ ಅವನು ಸ್ಫೂರ್ತಿ ಪಡೆದಿದ್ದ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶ್ರದ್ಧಾ ಅವರನ್ನು ಹತ್ಯೆ ಮಾಡಿದ ನಂತರ ಅವನು ರಕ್ತ ಶುದ್ಧೀಕರಣದ ವಿಧಾನಗಳನ್ನು ಗೂಗಲ್ನಲ್ಲಿ ಓದಿದ್ದ ಮತ್ತು ಮಾನವ ಅಂಗರಚನಾಶಾಸ್ತ್ರದ ಬಗ್ಗೆ ಓದಿದ್ದ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಮೂಲಗಳ ಪ್ರಕಾರ, ಇಬ್ಬರೂ ಮೇ 15 ರಂದು ದಕ್ಷಿಣ ದೆಹಲಿಯ ಛತ್ತರ್ಪುರ ಪಹಾಡಿ ಪ್ರದೇಶದ ಫ್ಲಾಟ್ಗೆ ತೆರಳಿದರು, ನಂತರ ಅವರ ಸಂಬಂಧವು ಹದಗೆಟ್ಟಿತು ಮತ್ತು ಅವರು ಯಾವಾಗಲೂ ಜಗಳವಾಡುತ್ತಿದ್ದರು.
ಮೂರು ದಿನಗಳ ನಂತರ, ಶ್ರದ್ಧಾಳನ್ನು ಆಕೆಯ ಗೆಳೆಯ ಕತ್ತು ಹಿಸುಕಿ, ಕೊಲೆ ಮಾಡಿ, 35 ತುಂಡುಗಳಾಗಿ ಕತ್ತರಿಸಿದ್ದಾನೆ. ಆಕೆಯನ್ನು ಕೊಂದ ನಂತರವೂ, ಅಫ್ತಾಬ್ ಆಕೆಯ ಸಾಮಾಜಿಕ ಜಾಲತಾಣದ ಆ್ಯಪ್ಗಳಲ್ಲಿ ಶ್ರದ್ಧಾ ವಾಕರ್ನಂತೆ ಇತರರ ಜೊತೆ ಚಾಟ್ ಮಾಡುತ್ತಿದ್ದ ಮತ್ತು ಜೂನ್ 9 ರವರೆಗೆ ಅವರ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿದ್ದ,
ಇದರಿಂದ ಅವರು ಅನುಮಾನಿಸುವುದಿಲ್ಲ ಎಂದು ಹಾಗೆ ಮಾಡುತ್ತಿದ್ದ, ನಂತರ ಆಕೆಯ ಸ್ಥಿತಿಯು ದೀರ್ಘಕಾಲದವರೆಗೆ ನಿಷ್ಕ್ರಿಯವಾಗಿದ್ದಾಗ, ಆಕೆಯ ಸ್ನೇಹಿತರು ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು, ಅವರು ಪೊಲೀಸರನ್ನು ಸಂಪರ್ಕಿಸಿದರು.
ಶ್ರದ್ಧಾಳನ್ನು ಕೊಂದ ಕೋಣೆಯಲ್ಲಿ ಅದೇ ದಿನ ಆಫ್ತಾಬ್ ಮಲಗಿದ್ದ. ಆಕೆಯನ್ನು ಕತ್ತರಿಸುತ್ತಿರುವ ದಿನವೂ ಅಲ್ಲಿಯೇ ಮಲಗಿದ್ದ. ಕೊಲೆ ಮಾಡಿದ ಮರುದಿನ, ಗರಗಸ ಮತ್ತು 300-ಲೀಟರ್ ರೆಫ್ರಿಜರೇಟರ್ ಅನ್ನು ಖರೀದಿಸಿದ, “ಅವನು ಅವಳ ದೇಹವನ್ನು ಎರಡು ದಿನಗಳವರೆಗೆ ಕತ್ತರಿಸಿದನು” ಮತ್ತು ಅದರೊಳಗೆ ಅವುಗಳನ್ನು ಸಂಗ್ರಹಿಸಿದ ಎಂದು ಅಧಿಕಾರಿಯೊಬ್ಬರು ಹೇಳಿದರು.
Shraddha murder case: Delhi Police to call common friend for questioning
ಮಂಗಳೂರು: ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿ.ವಿ. ಮತ್ತು ಕರ್ನಾಟಕ ಯಕ್ಷ ಭಾರತಿ(ರಿ.) ಪುತ್ತೂರು ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ಹತ್ತನೇ ವರ್ಷದ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದಲ್ಲಿ ನೀಡುವ ಯಕ್ಷಾಂಗಣ ಗೌರವ ಪ್ರಶಸ್ತಿಗೆ 2021-22ನೇ ಸಾಲಿನಲ್ಲಿ ಯಕ್ಷಗಾನ ರಂಗದ ಹಿರಿಯ ಸ್ತ್ರೀ ವೇಷಧಾರಿ ಮತ್ತು ಪ್ರಸಂಗಕರ್ತ ಎಂ.ಕೆ.ರಮೇಶ ಆಚಾರ್ಯ ಆಯ್ಕೆಯಾಗಿದ್ದಾರೆ.
ನವೆಂಬರ 21ರಿಂದ 27ರವರೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಜರಗುವ ಯಕ್ಷಾಂಗಣ ದಶಮಾನ ಸಡಗರದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಎಂ ಕೆ ರಮೇಶ ಆಚಾರ್ಯ:
ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಸ್ತ್ರೀ ಪಾತ್ರಧಾರಿಗಳಲ್ಲಿ ಎಂ.ಕೆ.ರಮೇಶಾಚಾರ್ಯ ಪ್ರಮುಖರು. ತೀರ್ಥಹಳ್ಳಿ ಸಮೀಪ ಮಂಗಳಾಗಾರದಲ್ಲಿ ಕೃಷ್ಣಾಚಾರ್ಯ – ರುಕ್ಮಿಣಿಯಮ್ಮ ದಂಪತಿಗೆ 1949,ಅಕ್ಟೋಬರ್ 31 ರಂದು ಜನಿಸಿದ ರಮೇಶ ಆಚಾರ್ಯ ತಮ್ಮ ತಂದೆಯವರ ಶ್ರೀ ಜಗದಾಂಬ ಕೃಪಾಪೋಷಿತ ಯಕ್ಷಗಾನ ಮಂಡಳಿ ಮಹಿಷಿಯಲ್ಲಿ 13ನೇ ವಯಸ್ಸಿನಲ್ಲೇ ತಿರುಗಾಟ ಆರಂಭಿಸಿದರು.
ಬಳಿಕ ಗುರು ವೀರಭದ್ರ ನಾಯಕರಿಂದ ಬಡಗಿನ ನಾಟ್ಯ ಕಲಿತು ಮಂದಾರ್ತಿ ಮೇಳ ಸೇರಿದರು. ಕುರಿಯ ವಿಠಲ ಶಾಸ್ತ್ರಿಗಳಿಂದ ತೆಂಕಿನ ನಾಟ್ಯಾಭ್ಯಾಸ ಮಾಡಿ ಮೂರು ವರ್ಷ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದರು. 1976ರಲ್ಲಿ ಸುರತ್ಕಲ್ ಮೇಳ ಸೇರಿ ಶೇಣಿ, ತೆಕ್ಕಟ್ಟೆ, ಅಗರಿ, ಪದ್ಯಾಣರ ಒಡನಾಟದಲ್ಲಿ ಸತತ 24 ವರ್ಷ ಅಪ್ರತಿಮ ಸ್ತ್ರೀ ಪಾತ್ರಧಾರಿಯಾಗಿ ಜನಪ್ರಿಯರಾದರು.
ದಾಕ್ಷಾಯಿಣಿ, ಕೈಕೆ, ಮಂಡೋದರಿ, ದಮಯಂತಿ, ಸತ್ಯಭಾಮೆ,ರುಕ್ಮಿಣಿ, ಶಶಿಪ್ರಭೆ, ಮೋಹಿನಿ, ತಾರೆ,ಚಂದ್ರಮತಿ, ಅಂಬೆ, ದೇವಯಾನಿ, ಸೀತೆ, ದ್ರೌಪದಿ, ಸುಭದ್ರೆ,ಪ್ರಭಾವತಿ, ವಾಸವದತ್ತೆ, ಶಾಂತಲೆ, ಮಾತಂಗಿ ಮುಂತಾದ ಪಾತ್ರಗಳಲ್ಲಿ ಅಭಿನಯ ಮಾತುಗಾರಿಕೆಯಲ್ಲಿ ಪ್ರೇಕ್ಷಕರ ಮನಗೆದ್ದರು. ಯಕ್ಷಗಾನ ಪ್ರಸಂಗ ರಚನೆಯಲ್ಲೂ ಅಪಾರ ಪರಿಣತಿ ಸಾಧಿಸಿದ ರಮೇಶಾಚಾರ್ಯರು ಅನಸೂಯೋಪಾಖ್ಯಾನ, ಶ್ರೀಕೃಷ್ಣ ತುಲಾಭಾರ, ಸಮಗ್ರ ವಿಶ್ವಾಮಿತ್ರ,ಮಹಾಮಾತೆ ಕುಂತಿ, ಸುರಥ ಚಿತ್ರಾಂಗದ, ನಾಟ್ಯರಾಣಿ ಶಾಂತಲಾ, ಛತ್ರಪತಿ ಶಿವಾಜಿ, ಸತ್ಯಾಂತರಂಗ ಮೊದಲಾದ ಸ್ವತಂತ್ರ ಪ್ರಸಂಗಗಳಲ್ಲದೆ 20 ಕ್ಕೂ ಮಿಕ್ಕಿ ಕ್ಷೇತ್ರ ಮಹಾತ್ಮೆಗಳು, 50ಕ್ಕೂ ಮಿಕ್ಕಿದ ಕಾಲ್ಪನಿಕ ಕನ್ನಡ-ತುಳು ಪ್ರಸಂಗಗಳನ್ನು ರಚಿಸಿ ಖ್ಯಾತರಾದರು.
ತೆಂಕಿನಲ್ಲಿ 33 ವರ್ಷ ಹಾಗೂ ಬಡಗಿನಲ್ಲಿ 24 ವರ್ಷ ಸೇರಿದಂತೆ ಒಟ್ಟು 57 ವರ್ಷ ತಿರುಗಾಟ ಮಾಡಿರುವ ಎಂ.ಕೆ. ಮಂದಾರ್ತಿ, ಧರ್ಮಸ್ಥಳ, ಸಾಲಿಗ್ರಾಮ, ನೀಲಾವರ, ಮಂಗಳಾದೇವಿ, ತಳಕಲ, ಸುಂಕದಕಟ್ಟೆ, ಹನುಮಗಿರಿ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಯಕ್ಷಗಾನ ತಾಳಮದ್ದಳೆಯಲ್ಲೂ ಸಮರ್ಥ ಅರ್ಥಧಾರಿಯಾಗಿರುವ ಅವರು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ ಬಾನುಲಿ ತಂಡದೊಂದಿಗೆ ಕಳೆದ 30 ವರ್ಷಗಳಿಂದ ಆಕಾಶವಾಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.
ಪಾತಾಳ ಪ್ರಶಸ್ತಿ, ಶೇಣಿ ಜನ್ಮ ಶತಾಬ್ದಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಜಾನಪದ ಶ್ರೀ, ಪಟ್ಟಾಜೆ ಪ್ರಶಸ್ತಿ, ಕಲಾರಂಗ ಪ್ರಶಸ್ತಿ, ಕಡಂದೇಲು ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿಗಳು ಅವರಿಗೆ ಸಂದಿವೆ. 2020ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಮೇಶಾಚಾರ್ಯರಿಗೆ 2021 ಅಕ್ಟೋಬರ 2ರಂದು ಉಡುಪಿಯಲ್ಲಿ ಸಾರ್ವಜನಿಕ ಸನ್ಮಾನ ಮತ್ತು ‘ಯಕ್ಷಾಂಗನೆ’ ಅಭಿನಂದನ ಗ್ರಂಥ ಸಮರ್ಪಣೆಯಾಗಿದೆ. ಪತ್ನಿ ವಿಶಾಲಾಕ್ಷಿ ಮಕ್ಕಳಾದ ಮನೋಜ, ಆಶಾಲತಾ, ತನುಜಾ ಇವರನ್ನೊಳಗೊಂಡ ಸಂತೃಪ್ತ ಸಂಸಾರ ಅವರದು.
ಪ್ರಶಸ್ತಿ ಪ್ರದಾನ:
ನವೆಂಬರ್ 27ರಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರ ಅಧ್ಯಕ್ಷತೆಯಲ್ಲಿ ಜರಗುವ ತಾಳಮದ್ದಳೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ರಾಜ್ಯ ಕನ್ನಡ ಸಂಸ್ಕೃತಿ ಮತ್ತು ಇಂಧನ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಬಳಿಕ ‘ಸಪ್ತ ವಿಜಯ’ ಸರಣಿಯ ಕೊನೆಯ ಪ್ರಸಂಗ ‘ಯಕ್ಷಲೋಕ ವಿಜಯ’ ತಾಳಮದ್ದಲೆ ಜರಗುವುದು ಎಂದು ಯಕ್ಷಾಂಗಣದ ಪ್ರಕಟಣೆ ತಿಳಿಸಿದೆ.
ತನ್ನೊಡನೆ ಲಿವ್ ಇನ್ ರಿಲೇಷನ್ಶಿಪ್ ನಲ್ಲಿದ್ದ ಹಿಂದೂ ಹುಡುಗಿಯು ಮದುವೆಯಾಗುವಂತೆ ಒತ್ತಾಯಿಸಿದಾಗ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಗೆಳತಿಯನ್ನು ಕತ್ತು ಹಿಸುಕಿ, ಅವಳನ್ನು ತುಂಡುಗಳಾಗಿ ಕತ್ತರಿಸಿ ಅವಳ ದೇಹದ ಭಾಗಗಳನ್ನು ದೆಹಲಿಯಾದ್ಯಂತ ಅಲ್ಲಲ್ಲಿ ಬಿಸಾಡಿ ಚದುರಿಸಿದ ಘಟನೆ ನಡೆದಿದೆ.
ಈ ಪ್ರಕರಣದಲ್ಲಿ, ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಕತ್ತು ಹಿಸುಕಿ, ಅವಳನ್ನು ತುಂಡುಗಳಾಗಿ ಕತ್ತರಿಸಿ ಅವಳ ದೇಹದ ಭಾಗಗಳನ್ನು ದೆಹಲಿಯಾದ್ಯಂತ ಅಲ್ಲಲ್ಲಿ ಎಸೆದನು. ಸಂತ್ರಸ್ತೆ, 27 ವರ್ಷದ ಶ್ರದ್ಧಾ ವಾಕರ್, ಅಫ್ತಾಬ್ ಅಮೀನ್ ಪೂನಾವಾಲಾ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಆಕೆಯ ಪೋಷಕರು ಒಟ್ಟಿಗೆ ಇರುವುದನ್ನು ವಿರೋಧಿಸಿದ ನಂತರ ಅವರು ದೆಹಲಿಗೆ ಓಡಿಹೋಗಿದ್ದರು.
ಆದಾಗ್ಯೂ, ಶ್ರದ್ಧಾ ತನ್ನ ಗೆಳೆಯ ಅಫ್ತಾಬ್ನನ್ನು ಮದುವೆಗೆ ಒತ್ತಾಯಿಸಲು ಪ್ರಾರಂಭಿಸಿದಾಗ ಇಬ್ಬರ ನಡುವೆ ವಿಷಯಗಳು ಹದಗೆಟ್ಟವು. ಮದುವೆಯಾಗಲು ಇಷ್ಟವಿಲ್ಲದ ತನ್ನ ಆತ ಇಂತಹ ಭಯಾನಕ ಘೋರ ರೀತಿಯಲ್ಲಿ ತನ್ನನ್ನು ಮುಗಿಸಿ ಕೊನೆಗೊಳಿಸುತ್ತಾನೆ ಎಂದು ಅವಳು ಸ್ವಲ್ಪವೂ ಊಹಿಸಿರಲಿಲ್ಲ.
ಬಹುಶಃ ಈ ಘೋರ ಸಂಬಂಧದ ಅತ್ಯಂತ ನಂಬಲಾಗದ ಅಂಶವೆಂದರೆ ಕೊಲೆ ಸುಮಾರು ಆರು ತಿಂಗಳವರೆಗೆ ಬೆಳಕಿಗೆ ಬರಲಿಲ್ಲ. ಸಂತ್ರಸ್ತೆಯ ತಂದೆ ಕಾಣೆಯಾದವರ ವರದಿಯನ್ನು ದಾಖಲಿಸುವವರೆಗೆ ಮತ್ತು ಪೊಲೀಸರು ಅವನ ಬಾಗಿಲು ಬಡಿಯುವವರೆಗೂ ಆರೋಪಿ ಆರಾಮವಾಗಿ ದೆಹಲಿಯಲ್ಲಿ ತಿರುಗಾಡಿದ.
ಸಂತ್ರಸ್ತೆ ಮುಂಬೈನ ಬಹುರಾಷ್ಟ್ರೀಯ ಕಂಪನಿಯ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಆಕೆ ಅಫ್ತಾಬ್ನನ್ನು ಭೇಟಿಯಾದಳು. ಶೀಘ್ರದಲ್ಲೇ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಆದರೆ ಶ್ರದ್ಧಾ ಕುಟುಂಬ ಇವರಿಬ್ಬರ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ. ಇಬ್ಬರೂ ದೆಹಲಿಗೆ ಓಡಿಹೋದರು, ಅಲ್ಲಿ ಅವರು ಛತ್ತರ್ಪುರ ಪ್ರದೇಶದಲ್ಲಿ ಫ್ಲಾಟ್ ಅನ್ನು ಬಾಡಿಗೆಗೆ ಪಡೆದರು.
ಶ್ರದ್ಧಾ ಅಫ್ತಾಬ್ ಅವರನ್ನು ಮದುವೆಯಾಗಲು ಬಯಸಿದ್ದರು ಆದರೆ ಅವನಿಗೆ ಇಷ್ಟವಿರಲಿಲ್ಲ. ಇದರಿಂದ ಅವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮೇ 18ರಂದು ಇಬ್ಬರ ನಡುವೆ ಮದುವೆ ವಿಷಯವಾಗಿ ತೀವ್ರ ಜಗಳವಾಗಿತ್ತು. ಕ್ಷಣಾರ್ಧದಲ್ಲಿ ಅಫ್ತಾಬ್ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದಾನೆ. ಬಂಧನವನ್ನು ತಪ್ಪಿಸಲು, ಅವನು ಅವಳ ದೇಹವನ್ನು ಅನೇಕ ತುಂಡುಗಳಾಗಿ ಕತ್ತರಿಸಿದನು. ಶ್ರದ್ಧಾ ಅವರ ಅವಶೇಷಗಳನ್ನು ಸಂಗ್ರಹಿಸಲು 300-ಲೀಟರ್ ಫ್ರಿಜ್ ಖರೀದಿಸಿದೆ ಎಂದು ಅಫ್ತಾಬ್ ನಂತರ ಪೊಲೀಸರಿಗೆ ತಿಳಿಸಿದ್ದಾನೆ.
ಪ್ರತಿ ರಾತ್ರಿ, ಮುಂದಿನ 16 ದಿನಗಳವರೆಗೆ, ಅವರು ದೇಹದ ಒಂದೊಂದೇ ಭಾಗಗಳನ್ನು ದೆಹಲಿಯಾದ್ಯಂತ ಅಲ್ಲಲ್ಲಿ ಎಸೆಯುತ್ತಾ ವಿಲೇವಾರಿ ಮಾಡುತ್ತಿದ್ದ. ಕೊಳೆತ ವಾಸನೆ ಬರದಂತೆ ಮನೆಯಲ್ಲಿ ಅಗರಬತ್ತಿ ಹಚ್ಚಿ ಇಡುತ್ತಿದ್ದ. ಮಹಾರಾಷ್ಟ್ರದ ಪಾಲ್ಘರ್ನಲ್ಲಿ ವಾಸಿಸುವ ಶ್ರದ್ಧಾಳ ಕುಟುಂಬವು ಅವಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಕಳವಳಗೊಂಡಿತು. ಆಕೆಯ ತಂದೆ ವಿಕಾಸ್ ಮದನ್ ವಾಕರ್ ಅವರು ಆಗಸ್ಟ್ನಲ್ಲಿ ಮಾಣಿಕ್ಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದವಳ ದೂರನ್ನು ಸಲ್ಲಿಸಿದರು.
ಈ ತಿಂಗಳ ಆರಂಭದಲ್ಲಿ, ವಿಕಾಸ್ ತನ್ನ ಮಗಳನ್ನು ಹುಡುಕಲು ದೆಹಲಿಗೆ ಬಂದನು ಆದರೆ ಛತ್ತರ್ಪುರದ ಬಾಡಿಗೆ ಫ್ಲಾಟ್ನಲ್ಲಿ ಅವಳು ಕಾಣಿಸಲಿಲ್ಲ. ಮಹಾರಾಷ್ಟ್ರ ಪೊಲೀಸರು ಪ್ರಕರಣವನ್ನು ದೆಹಲಿ ಪೊಲೀಸರಿಗೆ ರವಾನಿಸಿದ್ದಾರೆ. ಅಫ್ತಾಬ್ ತನ್ನ ಮಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಮತ್ತು ಆಗಾಗ್ಗೆ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ಶ್ರದ್ಧಾಳ ತಂದೆ ಎಫ್ಐಆರ್ನಲ್ಲಿ ಆರೋಪಿಸಿದ್ದಾರೆ.
ತಾಂತ್ರಿಕ ಕಣ್ಗಾವಲು ಬಳಸಿ, ದೆಹಲಿ ಪೊಲೀಸರು ಅಫ್ತಾಬ್ನನ್ನು ಬಂಧಿಸಿದರು. ಅವರನ್ನು ವಿಚಾರಣೆಗಾಗಿ ಕರೆದೊಯ್ಯಲಾಯಿತು ಅಲ್ಲಿ ಆತನು ತಾನು ಮಾಡಿದ ಎಲ್ಲಾ ಕೃತ್ಯಗಳನ್ನು ಒಪ್ಪಿಕೊಂಡನು. ನಂತರ ಪೊಲೀಸರು ನಗರದ ಅರಣ್ಯ ಪ್ರದೇಶದಲ್ಲಿ ಶ್ರದ್ಧಾಳ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದರು ಮತ್ತು ಕೆಲವು ಮಾನವ ಮೂಳೆಗಳನ್ನು ವಶಪಡಿಸಿಕೊಂಡರು. ನವೆಂಬರ್ 14, ಸೋಮವಾರದಂದು ಅಫ್ತಾಬ್ನನ್ನು ಬಂಧಿಸಲಾಯಿತು.
ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳು, ತನ್ನ ಹೇಳಿಕೆಯನ್ನು ನೀಡಲು ಆರಂಭದಲ್ಲಿ ಕರೆದಾಗ, ಜಗಳದ ನಂತರ ಶ್ರದ್ಧಾ ಮೇ 2022 ರಲ್ಲಿ ತನ್ನನ್ನು ತೊರೆದಿದ್ದಾಳೆ ಮತ್ತು ಅಂದಿನಿಂದ ಅವಳು ಎಲ್ಲಿದ್ದಾಳೆಂದು ನನಗೆ ತಿಳಿದಿಲ್ಲ ಎಂದು ಅಫ್ತಾಬ್ ಹೇಳಿದ್ದ. ತನ್ನ ಗೆಳತಿಯನ್ನು 35 ತುಂಡುಗಳಾಗಿ ಕತ್ತರಿಸಿದ ನಂತರ, ಅಫ್ತಾಬ್ ಅವುಗಳನ್ನು ಸಂಗ್ರಹಿಸಿಡಲು ಫ್ರಿಜ್ ಖರೀದಿಸಿದ್ದ. ಶ್ರದ್ಧಾ ಅವರ ದೇಹದ ಭಾಗಗಳನ್ನು ಫ್ರಿಡ್ಜ್ನಲ್ಲಿಟ್ಟಿದ್ದು, ಆಕೆಯ ದೇಹದ ತುಂಡನ್ನು ವಿಲೇವಾರಿ ಮಾಡಲು ಪ್ರತಿ ರಾತ್ರಿ ತನ್ನ ಅಪಾರ್ಟ್ಮೆಂಟ್ನಿಂದ ಹೊರಬರುತ್ತಿದ್ದೆ ಎಂದು ಆರೋಪಿ ಅಫ್ತಾಬ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
Delhi | Accused Aftab Poonawalla, who allegedly killed his live-in partner, chopped her body into pieces and disposed them off in nearby areas, is being taken out of Mehrauli Police Station. https://t.co/CHf5rLVCG7pic.twitter.com/gF1nacbYSr
ಅಫ್ತಾಬ್ 26 ವರ್ಷದ ಶ್ರದ್ಧಾಳ ದೇಹವನ್ನು ಛಿದ್ರಗೊಳಿಸಿದ್ದಲ್ಲದೆ, ಆಕೆಯ ಮೃತದೇಹವನ್ನು ಅಧಿಕಾರಿಗಳು ಹಿಂಪಡೆಯಲು ಸಾಧ್ಯವಾಗದಂತೆ ಇರಿಸುವ ಯೋಜನೆಯನ್ನು ರೂಪಿಸಿದ್ದ. ಶ್ರದ್ಧಾಳನ್ನು ಕತ್ತು ಹಿಸುಕಿ ಆಕೆಯ ದೇಹವನ್ನು ಕತ್ತರಿಸಿದ ನಂತರ, ಅಫ್ತಾಬ್ ಅವರು 300-ಲೀಟರ್ ರೆಫ್ರಿಜರೇಟರ್ ಅನ್ನು ಖರೀದಿಸಿದ, ನಂತರ ಅವರು 16 ದಿನಗಳ ಕಾಲ ದೆಹಲಿ ಅರಣ್ಯದ ಕೆಲವು ಭಾಗಗಳಲ್ಲಿ ಎಸೆದ. ರಾಷ್ಟ್ರರಾಜಧಾನಿಯಲ್ಲಿ ಹೀಗೆ ಮಾಡಿ ಅರಣ್ಯ ಪ್ರದೇಶಗಳ ಸುತ್ತಮುತ್ತ ಎಸೆದಿದ್ದೇನೆ ಎಂದು ಹೇಳಿದ.
ದೇಹದ ಭಾಗಗಳನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಅವನಿಗೆ 16 ದಿನಗಳು ಬೇಕಾಯಿತು.ಪೊಲೀಸರಿಂದ ಸಿಕ್ಕಿಬಿದ್ದ ನಂತರ, ಅಫ್ತಾಬ್ ತನ್ನ ವಿಚಾರಣೆಯ ಸಮಯದಲ್ಲಿ ಕೊಲೆಯಾದ ಸಂತ್ರಸ್ತೆಯ ಜೊತೆ ಲಿವ್-ಇನ್ ಸಂಬಂಧವನ್ನು ಹೊಂದಿದ್ದಾಗಿ ತಿಳಿಸಿದ್ದಾನೆ. ಆರೋಪಿಯನ್ನು ಐದು ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
Shraddha murder case: Accused Aftab inspired by crime show 'Dexter', bought fridge to store body parts
ಶ್ರೀ ಚಿದಂಬರ ಬಾಬು ಕೋಣಂದೂರು ಅವರು ತೆಂಕುತಿಟ್ಟಿನ ಹಿರಿಯ ಅನುಭವೀ ಕಲಾವಿದರು. ಯಕ್ಷಗಾನ ಕಲಾಕ್ಷೇತ್ರದಲ್ಲಿ ಇವರು ನಾಲ್ಕು ದಶಕಗಳ ಅನುಭವಿ. ಕಳೆದ 42 ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದಾರೆ. ಮೂವತ್ತೈದು ವರ್ಷಗಳ ಕಾಲ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ಯಕ್ಷಗಾನ ಮಂಡಳಿಯಲ್ಲಿ ತಿರುಗಾಟ ನಡೆಸಿದವರು. ಕಳೆದ ಆರು ವರ್ಷಗಳಿಂದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ.
ಬಾಲ್ಯದಲ್ಲಿ ಇವರು ನಾಟಕ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು. ನಾಟಕಗಳಲ್ಲಿ ಅಭಿನಯಿಸುತ್ತಾ ತಬಲಾ ವಾದನವನ್ನು ಕಲಿತು ತೊಡಗಿಸಿಕೊಂಡಿದ್ದರು. ಪುರಾಣ ಪ್ರಸಂಗಗಳ ಜತೆಗೆ ತುಳು ಪ್ರಸಂಗಗಳಲ್ಲೂ ವೇಷಗಳನ್ನು ನಿರ್ವಹಿಸಿದ ಅನುಭವಿ ಇವರು. ಕಿರೀಟ ಮತ್ತು ನಾಟಕೀಯ ವೇಷಗಳಲ್ಲಿ ಪ್ರಸ್ತುತ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ‘ಅಣ್ಣಪ್ಪ’ ಪಾತ್ರವನ್ನು ಕಳೆದ ಆರು ವರ್ಷಗಳಿಂದ ಇವರೇ ನಿರ್ವಹಿಸುತ್ತಿದ್ದಾರೆ.
ಶ್ರೀ ಧರ್ಮಸ್ಥಳ ಮೇಳದ ಕಲಾವಿದ ಶ್ರೀ ಚಿದಂಬರ ಬಾಬು ಕೋಣಂದೂರು ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅತಲಾಪುರ ಗ್ರಾಮದ ಕೋಣಂದೂರು ಸಮೀಪದ ಹಿತ್ತಲಸರ. 1961ನೇ ಇಸವಿ ಏಪ್ರಿಲ್ 23ರಂದು ಶ್ರೀ ನಾಗೇಶ್ ಮತ್ತು ಶ್ರೀಮತಿ ರತ್ನಮ್ಮ ದಂಪತಿಗಳ ಪುತ್ರನಾಗಿ ಜನನ. ಇವರದ್ದು ಕೃಷಿ ಕುಟುಂಬ. ಮನೆಯವರೆಲ್ಲ ಕೃಷಿಯಲ್ಲಿ ಆಸಕ್ತರು. ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಓದಿದ್ದು ನಾಲ್ಕನೇ ತರಗತಿಯವರೆಗೆ. ಅತಲಾಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.
ಬಾಲ್ಯದಲ್ಲಿ ಇವರಿಗೆ ಯಕ್ಷಗಾನ ಪ್ರದರ್ಶನಗಳನ್ನು ನೋಡುವ ಅವಕಾಶಗಳು ಸಿಕ್ಕಿರಲಿಲ್ಲ. ಆದರೂ ನಾಟಕ ಕಲೆಯತ್ತ ಆಕರ್ಷಿತರಾಗಿದ್ದರು. ಅಧ್ಯಾಪಕರೂ ಹೆಸರಾಂತ ಕಲಾವಿದರೂ ಆಗಿದ್ದ ಶ್ರೀ ಹಾಲೇಶಪ್ಪ ಇವರಿಂದ ನಾಟಕ ಕಲೆಯ ತರಬೇತಿಯನ್ನು ಹೊಂದಿ ವೇಷ ಮಾಡಲು ಆರಂಭಿಸಿದ್ದರು. ಪ್ರಪ್ರಥಮ ಬಾರಿಗೆ “ತ್ಯಾಗಿ” ಎಂಬ ನಾಟಕದಲ್ಲಿ ಕಥಾನಾಯಕನಾಗಿ ರಂಗ ಪ್ರವೇಶ ಮಾಡಲು ಅವಕಾಶವಾಗಿತ್ತು. ಖ್ಯಾತ ನಾಟಕ ಕಲಾವಿದರಾದ ಶ್ರೀ ಸತ್ಯನಾರಾಯಣ ಜೋಯಿಸ್, ಶ್ರೀ ಬಸವರಾಜ ಮಾಸ್ತರ್, ಶ್ರೀ ಜಯಪ್ಪ ಮಾಸ್ತರ್ ಅವರ ಒಡನಾಟವು ನಾಟಕ ಕಲಾವಿದನಾಗಿ ಬೆಳೆಯಲು ಅನುಕೂಲವಾಗಿತ್ತು.
ಮೂರೇ ವರ್ಷಗಳಲ್ಲಿ ನಾಟಕ ನಿರ್ದೇಶಕನಾಗಿ ಕಾಣಿಸಿಕೊಂಡಿದ್ದರು. ಇವರ ನಿರ್ದೇಶನದಲ್ಲಿ ಕೆಲವು ನಾಟಕ ಪ್ರದರ್ಶನಗಳು ನಡೆದಿತ್ತು. ಕೋಣಂದೂರಿನ ಶ್ರೀ ಮಲ್ಲಿಕಾರ್ಜುನ ಕಲಾ ಸಂಘದಲ್ಲಿ ಸಕ್ರಿಯರಾಗಿ ಇವರು ನಾಟಕ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದರು. ತ್ಯಾಗಿ, ತಂಗಿಯ ತಾಳಿ, ಗೌಡರ ಗದ್ದಲ, ಮುದುಕನ ಮದುವೆ, ಪಶ್ಚಾತಾಪ ಮೊದಲಾದ ನಾಟಕಗಳಲ್ಲಿ ಇವರು ಅಭಿನಯಿಸಿದ್ದರು. ಸುಮಾರು ನೂರಾ ಐವತ್ತಕ್ಕೂ ಮಿಕ್ಕಿ ಪ್ರದರ್ಶನಗಳಲ್ಲಿ ಅಭಿನಯಿಸಲು ಅವಕಾಶವಾಗಿತ್ತು.
ನಾಟಕ ಕಲಾವಿದನಾಗಿರುವಾಗಲೇ ತಬಲಾ ಕಲಿಯುವ ಆಸಕ್ತಿಯೂ ಆಗಿತ್ತು. ಹೆಸರಾಂತ ಕಲಾವಿದ ಶ್ರೀ ಬಸವರಾಜ್ ಗವಾಯಿ ಅವರಿಂದ ತರಬೇತಿ ಪಡೆದು ತಬಲಾ ನುಡಿಸಲು ಆರಂಭಿಸಿದ್ದರು. ಪ್ರಸ್ತುತ ನ್ಯಾಯವಾದಿಗಳೂ, ಯಕ್ಷಗಾನ ವೇಷಧಾರಿ, ತಾಳಮದ್ದಳೆ ಅರ್ಥಧಾರಿಗಳೂ ಆದ ಶ್ರೀ ರಮಣ ಆಚಾರ್ಯ ಕಾರ್ಕಳ ಇವರು ತಬಲಾ ವಾದನವನ್ನು ಕಲಿಯುವಾಗ ಇವರ ಸಹಪಾಠಿಯಾಗಿದ್ದರು. ಶ್ರೀ ಚಿದಂಬರ ಬಾಬು ಕೋಣಂದೂರು ಎರಡೂವರೆ ವರ್ಷಗಳ ಕಾಲ ತರಬೇತಿಯನ್ನು ಪಡೆದು ತಬಲಾವಾದಕರಾಗಿ ಕಾಣಿಸಿಕೊಂಡರು. ಅನೇಕ ಹರಿಕಥೆಗಳಲ್ಲಿ ತಬಲಾ ನುಡಿಸಲು ಅವಕಾಶವಾಗಿತ್ತು.
ನಾಟಕ ಕಲಾವಿದರಾಗಿದ್ದ ಶ್ರೀ ಚಿದಂಬರ ಬಾಬು ಕೋಣಂದೂರು ಅವರಿಗೆ ಯಕ್ಷಗಾನಾಸಕ್ತಿ ಹುಟ್ಟಿಕೊಂಡದ್ದು ತನ್ನ ಹತ್ತೊಂಭತ್ತನೆಯ ವಯಸ್ಸಿನಲ್ಲಿ. ಆ ವರ್ಷ ಸಾಲಿಗ್ರಾಮ ಮೇಳದ ಕೆಲವು ಪ್ರದರ್ಶನಗಳನ್ನು ನೋಡಿದ್ದರು. ಶ್ರೀ ಜಿ.ಆರ್. ಕಾಳಿಂಗ ನಾವಡರ ಹಾಡುಗಾರಿಕೆ ಮತ್ತು ವೇಷಧಾರಿಗಳ ನಿರ್ವಹಣೆಯನ್ನು ಕಂಡು ತಾನೂ ಯಕ್ಷಗಾನ ಕಲಾವಿದನಾಗಬೇಕು ಎಂಬ ಆಸೆಯಾಗಿತ್ತು. ಯಕ್ಷಗಾನ ನಾಟ್ಯ ಕಲಿಯಲು ಅವಕಾಶವೂ ಸಿಕ್ಕಿತ್ತು. ಶ್ರೀ ಧರ್ಮಸ್ಥಳ ಲಲಿತಕಲಾ ತರಬೇತಿ ಕೇಂದ್ರದ ಸಂದರ್ಶನ ಕರೆಯನ್ನು ಪತ್ರಿಕೆಯಲ್ಲಿ ಓದಿ ಅಲ್ಲಿಗೆ ತೆರಳಿದರು.
ಅಣ್ಣಪ್ಪ ಪಾತ್ರಧಾರಿಯಾಗಿ
1980ರಲ್ಲಿ ಶ್ರೀ ಧರ್ಮಸ್ಥಳ ತರಬೇತಿ ಕೇಂದ್ರದಲ್ಲಿ ಶ್ರೀ ಕೆ. ಗೋವಿಂದ ಭಟ್ಟರಿಂದ ತರಬೇತಿ. ಆಗ ನೆಡ್ಲೆ ನರಸಿಂಹ ಭಟ್ಟರು ಹಿಮ್ಮೇಳ ಗುರುಗಳಾಗಿದ್ದರು. ಕೇಂದ್ರ ಪ್ರದರ್ಶನಗಳಲ್ಲಿ ಕಾರ್ತವೀರ್ಯಾರ್ಜುನ ಪ್ರಸಂಗದಲ್ಲಿ ರಾವಣ ಮತ್ತು ಜಮದಗ್ನಿ, ಕೃಷ್ಣಾರ್ಜುನ ಕಾಳಗ ಪ್ರಸಂಗದಲ್ಲಿ ಭೀಮನಾಗಿ ವೇಷ ಮಾಡುವ ಅವಕಾಶವೂ ದೊರೆತಿತ್ತು. ಇವರಿಗೆ ಬಣ್ಣಗಾರಿಕೆಯನ್ನು ಕಲಿಸಿದವರು ಖ್ಯಾತ ಬಣ್ಣದ ವೇಷಧಾರಿ ಶ್ರೀ ಡಿ. ಗೋಪಾಲ ಭಟ್ ಅವರು. ತರಬೇತಿ ಮುಗಿದ ಬಳಿಕ ಅದೇ ವರ್ಷ ನೆಡ್ಲೆ ಶ್ರೀ ನರಸಿಂಹ ಭಟ್ಟರ ಹೇಳಿಕೆಯಂತೆ ಖ್ಯಾತ ಕಲಾವಿದ ಕಟೀಲು ಶ್ರೀನಿವಾಸ ರಾಯರ ಜತೆ ಸುಂಕದಕಟ್ಟೆ ಮೇಳಕ್ಕೆ.
ಅದು ಪೋರ್ಕೋಡಿ ಶ್ರೀ ಸುಂದರ ಶೆಟ್ರ ಸಂಚಾಲಕತ್ವದ ಮೇಳ. ಇವರು ಮೇಳದಲ್ಲಿ ಮನೆಯಂತೆಯೇ ಇದ್ದು ಕಲಿತು ಕಲಾವಿದನಾಗಿ ಕಾಣಿಸಿಕೊಂಡವರು. ವೇಷ ಮಾಡುವುದರ ಜತೆಗೆ ಲೈಟಿಂಗ್ಸ್, ಅಡುಗೆ ಕೆಲಸಗಳನ್ನೂ ಮಾಡಿದ್ದರು. 24 ವರ್ಷಗಳ ಕಾಲ ಸುಂಕದಕಟ್ಟೆ ಮೇಳದಲ್ಲಿ ಎರಡನೇ ವೇಷಧಾರಿಯಾಗಿ ವ್ಯವಸಾಯ. ಬಳಿಕ 11 ವರ್ಷ ಮುಖ್ಯ ವೇಷಧಾರಿಯಾಗಿ ವ್ಯವಸಾಯ. ಹೀಗೆ ಸುಂಕದಕಟ್ಟೆ ಮೇಳದಲ್ಲಿ ಒಟ್ಟು 35 ವರ್ಷಗಳ ವ್ಯವಸಾಯ. ಯಕ್ಷಗಾನ ಕ್ಷೇತ್ರಕ್ಕೆ ಬಂದ ಮೇಲೂ ಮಳೆಗಾಲದಲ್ಲಿ ಏಳು ವರ್ಷ ನಾಟಕಗಳಲ್ಲೂ ಭಾಗವಹಿಸಿದ್ದರು.
ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಪುರಾಣ ಮತ್ತು ತುಳು ಪ್ರಸಂಗಗಳ ವೇಷಧಾರಿಯಾಗಿ ಸುಂಕದಕಟ್ಟೆ ಮೇಳದಲ್ಲಿ ಕಾಣಿಸಿಕೊಂಡರು. ಕೋಟಿ ಚೆನ್ನಯ ಪ್ರಸಂಗದ ಕೋಟಿ, ಮಲ್ಲಯ್ಯ ಬುದ್ಧಿವಂತ, ಚಂದುಗಿಡಿ ಪಾತ್ರಗಳನ್ನು ಮಾಡಿದ್ದರು. ಕಾಂತಾಬಾರೆ ಬೂದಾಬಾರೆ ಪ್ರಸಂಗದಲ್ಲಿ ಮೊದಲು ಗೌಡರಸು ಪಾತ್ರಮಾಡಿದ್ದರು. ಬಳಿಕ ಕಾಂತಾಬಾರೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತುಳು ಪ್ರಸಂಗದಲ್ಲಿ ಇವೆಲ್ಲಾ ಇವರಿಗೆ ಇಷ್ಟವಾದ ಮತ್ತು ಹೆಸರು ಕೊಟ್ಟ ಪಾತ್ರಗಳು.
ಪುರಾಣ ಪ್ರಸಂಗಗಳಲ್ಲಿ ಕಿರೀಟ ಮತ್ತು ನಾಟಕೀಯ ಪಾತ್ರಗಳನ್ನೂ ನಿರ್ವಹಿಸುತ್ತಿದ್ದರು. ಸುಂಕದಕಟ್ಟೆ ಮೇಳದಲ್ಲಿ ಶ್ರೀ ಪುತ್ತಿಗೆ ತಿಮ್ಮಪ್ಪ ರೈ ಮತ್ತು ಪದ್ಯಾಣ ಶಂಕರನಾರಾಯಣ ಭಟ್ ಅವರ ನಿರ್ದೇಶನವು ದೊರೆತಿತ್ತು. ಕಲಾವಿದನಾಗಿ ಬೆಳೆಯಲು ಇದರಿಂದ ಅನುಕೂಲವಾಗಿತ್ತು. ಸದ್ರಿ ಮೇಳದಲ್ಲಿ ಖ್ಯಾತ ಹಿರಿಯ ಕಿರಿಯ ಕಲಾವಿದರ ಒಡನಾಟವು ದೊರೆತಿತ್ತು. ಭಸ್ಮಾಸುರ, ಹಿರಣ್ಯಕಶ್ಯಪ ಮೊದಲಾದ ನಾಟಕೀಯ ಪಾತ್ರಗಳನ್ನೂ ಅರ್ಜುನ, ದೇವೇಂದ್ರ, ಋತುಪರ್ಣ, ಅತಿಕಾಯ ಮೊದಲಾದ ಪಾತ್ರಗಳನ್ನೂ ಮಾಡುವ ಅವಕಾಶವಾಗಿತ್ತು. ‘ನಳದಮಯಂತಿ’ ಪ್ರಸಂಗದಲ್ಲಿ ನಳ, ಋತುಪರ್ಣ ಮತ್ತು ಬಾಹುಕ ಈ ಮೂರೂ ಪಾತ್ರಗಳನ್ನೂ ನಿರ್ವಹಿಸಿದ ಅನುಭವಿ ಇವರು. ದೇವಿ ಮಹಾತ್ಮೆ ಪ್ರಸಂಗದಲ್ಲಿ ಮಧು, ಕೈಟಭ, ಮಹಿಷಾಸುರ, ರಕ್ತಬೀಜ ಈ ನಾಲ್ಕೂ ಪಾತ್ರಗಳನ್ನೂ ಮಾಡಿದ ಅನುಭವಿ ಇವರು.
ಒಳ್ಳೆಯ ಸ್ವರಭಾರ, ಆಳಂಗ, ಹಿತಮಿತವಾದ ಮಾತು ಮತ್ತು ಕುಣಿತಗಳಿಂದ ಇವರು ಪಾತ್ರಗಳನ್ನು ನಿರ್ವಹಿಸುತ್ತಾರೆ. ಸುಂಕದಕಟ್ಟೆ ಮೇಳದ ತಿರುಗಾಟದ ಬಳಿಕ ಕಳೆದ ಆರು ವರ್ಷಗಳಿಂದ ಶ್ರೀ ಚಿದಂಬರ ಬಾಬು ಕೋಣಂದೂರು ಅವರು ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಶ್ರೀ ಪುತ್ತಿಗೆ ರಘುರಾಮ ಹೊಳ್ಳ ಮತ್ತು ಶ್ರೀ ರಾಮಕೃಷ್ಣ ಮಯ್ಯ ಅವರ ಭಾಗವತಿಕೆಯಡಿ ವೇಷಗಳನ್ನು ಮಾಡುವ ಅವಕಾಶವಾಗಿತ್ತು. ಅವರ ನಿರ್ದೇಶನವೂ ಸಿಕ್ಕಿತ್ತು. ಅಲ್ಲದೆ ಹಿರಿಯ ಕಿರಿಯ ಕಲಾವಿದರ ಒಡನಾಟ ಮತ್ತು ಸಹಕಾರವೂ ಸಿಕ್ಕಿತ್ತು.
ಧರ್ಮಸ್ಥಳ ಮೇಳಕ್ಕೆ ಸೇರಿದ ಮೊದಲ ವರ್ಷ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ಮೊದಲ ಮೂರು ಪ್ರಯೋಗಗಳಲ್ಲಿ ಈಶ್ವರನಾಗಿ ಅಭಿನಯಿಸಿದ್ದರು. ನಾಲ್ಕನೇ ಪ್ರಯೋಗದಲ್ಲಿ ಗೋವಿಂದ ದೀಕ್ಷಿತ ಎಂಬ ಪಾತ್ರ ಮಾಡಿದ್ದರು. ಐದನೇ ಪ್ರಯೋಗದಿಂದ ತೊಡಗಿ ಕಳೆದ ಆರು ವರ್ಷಗಳಿಂದ ಅಣ್ಣಪ್ಪ ಎಂಬ ಪಾತ್ರವನ್ನು ಇವರೇ ಮಾಡುತ್ತಿದ್ದಾರೆ. ಪ್ರಸ್ತುತ ನಾಟಕೀಯ ಮತ್ತು ಕಿರೀಟ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
“ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುವುದು ಎಂದರೆ ಅದು ಒಂದು ಗೌರವದ ವಿಚಾರ. ಈ ಅವಕಾಶವನ್ನು ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಡೆಯವರು ಮತ್ತು ಮೇಳವನ್ನು ಮುನ್ನಡೆಸುತ್ತಿರುವ ಶ್ರೀ ಡಿ. ಹರ್ಷೇ೦ದ್ರಕುಮಾರರು ಒದಗಿಸಿಕೊಟ್ಟಿದ್ದಾರೆ. ಅವರ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ವ್ಯವಸಾಯ ಮಾಡುತ್ತಿದ್ದೇನೆ” ಈ ಮಾತುಗಳಿಂದ ಚಿದಂಬರ ಬಾಬು ಅವರು ಶ್ರೀ ಕ್ಷೇತ್ರವನ್ನು ಮತ್ತು ತಮ್ಮ ಆಶ್ರಯದಾತರನ್ನು ಗೌರವಿಸುತ್ತಾರೆ.
ಮಳೆಗಾಲದಲ್ಲಿ ಶ್ರೀಯುತರು ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ಮುಂಬಯಿ ಮೊದಲಾದ ನಗರಗಳಲ್ಲಿ ನಡೆದ ಪ್ರದರ್ಶನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಳಿಯಾಲ ಶ್ರೀ ಭೀಮ ಭಟ್, ಹಾಸ್ಯರತ್ನ ನಯನಕುಮಾರ್,ಉದ್ಯಾವರ ಜಯಕುಮಾರ್ ಅವರ ನೇತೃತ್ವದ ತಂಡಗಳ ಸದಸ್ಯನಾಗಿ ಪ್ರದರ್ಶನಗಳಲ್ಲಿ ಭಾಗವಹಿಸಿರುತ್ತಾರೆ.
ಶ್ರೀ ಚಿದಂಬರ ಬಾಬು ಕೋಣಂದೂರು ಅವರು ವೃತ್ತಿ ಕಲಾವಿದನಾಗಿಯೂ ಸಾಂಸಾರಿಕವಾಗಿಯೂ ಅತ್ಯಂತ ತೃಪ್ತರು. ಇವರ ಪತ್ನಿ ಶ್ರೀಮತಿ ಪಾರ್ವತಿ. ಇವರು ಗೃಹಣಿ. ದಂಪತಿಗಳಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಶ್ರೀ ಕಾರ್ತಿಕ್. ಇವರು ಕೃಷಿಕರು. ಕಿರಿಯ ಪುತ್ರ ಶ್ರೀ ಕೌಶಿಕ್. ಇವರು ಬೆಂಗಳೂರಿನಲ್ಲಿ ಉದ್ಯೋಗಿ. ಅನುಭವೀ ಕಲಾವಿದ ಶ್ರೀ ಚಿದಂಬರ ಬಾಬು ಕೋಣಂದೂರು ಇವರಿಗೆ ದೇವರು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ. ಅವರಿಂದ ಇನ್ನಷ್ಟು ಕಾಲ ಕಲಾ ವ್ಯವಸಾಯವು ನಡೆಯಲಿ. ಕಲಾಮಾತೆಯ ಅನುಗ್ರಹವು ಸದಾ ಇರಲಿ ಎಂಬ ಹಾರೈಕೆಗಳು.
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಸಭಾಭವನದಲ್ಲಿ ದಿನಾಂಕ 13-11-2022ರಂದು ಶ್ರೀ ವಿಶ್ವವಿನೋದ ಬನಾರಿಯವರಿಗೆ 75ರ ಅಭಿನಂದನಾ ಸಮಾರಂಭ ‘ವಿಶ್ಯವಿನೋದ 75 ಯಕ್ಷಕಲಾರವ’ ನಡೆಯಿತು.
ಯಕ್ಷಗಾನ ಗುರುಕುಲದ ರೂವಾರಿಯೆಂದೇ ಖ್ಯಾತರಾದ ಕೀರ್ತಿಶೇಷ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಸುಪುತ್ರ ಶ್ರೀ ವಿಶ್ವವಿನೋದ ಬನಾರಿಯವರು ಈಗ ತನ್ನ ಬಾಳಿನ ಎಪ್ಪತ್ತೈದರ ಹೊಸ್ತಿಲಲ್ಲಿದ್ದಾರೆ. ಸಾಮಾಜಿಕ, ಧಾರ್ಮಿಕ, ಆರೋಗ್ಯ ಕ್ಷೇತ್ರದ ಜೊತೆಗೆ ಯಕ್ಷಗಾನದ ವಿವಿಧ ಮಜಲುಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಯಕ್ಷಗಾನದ ಓರ್ವ ಸರ್ವಾಂಗ ಸಾಧಕನಾಗಿ ಅಪಾರ ಜನರ ಗೌರವಕ್ಕೆ ಪಾತ್ರರಾದವರು. ಯಕ್ಷಗಾನ ಪ್ರಸಂಗಕರ್ತರಾಗಿ ಭಾಗವತರಾಗಿ ಮತ್ತು ಭಾಗವತ ಗುರುಗಳಾಗಿ ಪ್ರಸಿದ್ಧರಾದ ಶ್ರೀಯುತರನ್ನು ಅವರ ಶಿಷ್ಯವೃಂದದವರು, ಅಭಿಮಾನಿಗಳು ಮತ್ತು ಬಂಧುವರ್ಗದವರು ಸೇರಿ ಔಚಿತ್ಯಪೂರ್ಣವಾಗಿ ಅಭಿನಂದಿಸಲಾಯಿತು.
ಮೊದಲಿಗೆ ಅಭಿನಂದನಾರ್ಹ ವಿ.ವಿ.ಬನಾರಿಯವರನ್ನು ‘ಹರಿಹರ ಸುತ ಸಿಂಗಾರಿ ಮೇಳ ದೇಲಂಪಾಡಿ’ ಇದರ ಚೆಂಡೆ ನಾದದೊಂದಿಗೆ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ಬಳಿಕ ಬಿಡುಗಡೆಯಾಗಲಿರುವ ‘ವಿಶ್ವಯಾನ’ ಅಭಿನಂದನಾ ಗ್ರಂಥವನ್ನು ವಿಶಿಷ್ಟ ರೀತಿಯಲ್ಲಿ ವೇದಿಕೆಗೆ ತರಲಾಯಿತು.
ಕರ್ನಾಟಕ ಸರಕಾರದ ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಎಸ್ ಅಂಗಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ‘ಯಕ್ಷಗಾನ ಒಂದು ಮಹತ್ತರವಾದ ಕಲೆ. ಈ ಕಲೆಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವ ದೇಲಂಪಾಡಿ ಅಭಿವೃದ್ಧಿ ಹೊಂದಬೇಕಾದ ಅಗತ್ಯ ಇದೆ. ಇಲ್ಲಿನ ರಸ್ತೆಗೆ ಮರುಡಾಮರೀಕರಣಕ್ಕೆ, ಕಾಂಕ್ರಿಟೀಕರಣಕ್ಕೆ ಸರಕಾರದಿಂದ ಅನುದಾನ ಕೊಡಿಸುತ್ತೇವೆ’ ಎಂಬುದಾಗಿ ಭರವಸೆಯನ್ನು ಇತ್ತರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಡಾ. ಜಿ. ಎಲ್ ಹೆಗಡೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಸಿ.ಹೆಚ್.ಕುಞಂಬು ಶಾಸಕರು, ಉದುಮ ಇವರು ಭಾಗವಹಿಸಿದರು. ‘ಯಕ್ಷಗಾನ ಕಲೆ ಬಹಳ ರಮ್ಯಾದ್ಭುತ ಕಲೆ. ನೃತ್ಯ, ಮಾತು, ವೇಷಭೂಷಣ, ಅಭಿನಯ ಎಲ್ಲವೂ ಒಳಗೊಂಡ ಈ ಕಲೆ ಸಮಗ್ರವಾಗಿದೆ. ಕೇರಳದಲ್ಲಿ ಈ ಕಲೆಗೆ ಪೂರ್ಣ ಮಾನ್ಯತೆ ಸಿಗುವಂತೆ ತಾನು ಪ್ರಯತ್ನಿಸುತ್ತೇನೆ. ವಿ.ವಿ.ಬನಾರಿಯವರು ಬಹುಮುಖಿ ಸಾಧಕರು. ಈ ಕಾರ್ಯಕ್ರಮ ಯಶಸ್ವಿಯಾಗಲಿ” ಎಂದು ಶ್ರೀಯುತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಶ್ವವಿನೋದ ಬನಾರಿಯವರ ಆತ್ಮವೃತ್ತಾಂತವೂ ಸೇರಿದಂತೆ ಅಭಿನಂದನಾ ಗ್ರಂಥ ‘ವಿಶ್ವಯಾನ’ವನ್ನು ಲೋಕಾರ್ಪಣೆಗೊಳಿಸಲಾಯಿತು. ನಾರಾಯಣ ನಾಯ್ಕ್ ಊಜಂಪಾಡಿ ಅವರು ಕೃತಿಯನ್ನು ಬಿಡುಗಡೆಗೊಳಿಸಿದರು. ಚಂದ್ರಶೇಖರ ಏತಡ್ಕ ಅವರು ಸಂಪಾದಕರ ನುಡಿಯನ್ನಾಡಿದರು. ‘ಬನಾರಿಯವರ ಜೀವನದ ಸಮಗ್ರ ಚಿತ್ರಣವನ್ನು ನೀಡುವಲ್ಲಿ ಈ ಕೃತಿಯು ಸಾಫಲ್ಯವನ್ನು ಕಂಡಿದೆ. ಅವರ ನಿಕಟವರ್ತಿಗಳು, ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಾರೆ. ಕೃತಿಯಲ್ಲಿ ಕೆಲವು ವಿಚಾರಗಳು ಪುನರಾವರ್ತನೆಯಾದರೂ ಅದು ಅಭಾಸ ಎಂದೆನಿಸುವುದಿಲ್ಲ’ವೆಂದು ಅವರು ಹೇಳಿದರು.
ಜಾನಪದ ಸಂಶೋಧಕರಾದ ಡಾ.ಸುಂದರ ಕೇನಾಜೆಯವರು ಗ್ರಂಥಾವಲೋಕನ ಮಾಡುತ್ತಾ “ವಿ.ವಿ.ಬನಾರಿಯವರು ತಮ್ಮ ಜೀವಿತಾವಧಿಯಲ್ಲಿ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರ ಕುರಿತು ಈ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಇದು ಈ ಊರಿನ ಸಮಗ್ರ ಚಿತ್ರಣವಾಗಿದೆ. ಅವರ ಸ್ಮರಣಶಕ್ತಿ ಅಗಾಧವಾದುದು. ಕೃತಿಯು ಸಾಹಿತ್ಯ ಕ್ಷೇತ್ರಕ್ಕೊಂದು ಕೊಡುಗೆ” ಎಂದರು.
ತದನಂತರ ವಿಶ್ವವಿನೋದ ಬನಾರಿ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಉಮಾಪರಮೇಶ್ವರಿಯವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ “ರಮಾನಂದ ಬನಾರಿ ವಿರಚಿತ ಶುಭಾಶಯ ಗೀತೆ’ಯನ್ನು ಅನ್ನಪೂರ್ಣ ಏತಡ್ಕ ಹಾಗೂ ಬಳಗದವರು ಬಹಳ ಸುಶ್ರಾವ್ಯವಾಗಿ ಹಾಡಿದರು. ಹಿರಿಯ ಕಲಾವಿದರಾದ ಜಬ್ಬಾರ್ ಸಮೊ ಸಂಪಾಜೆ ಅವರು ಅಭಿನಂದನಾ ಭಾಷಣ ಗೈದರು. ಬನಾರಿಯವರ ಸಹೃದಯತೆ, ಕಲಾ ಸಹಜ ಒಲವುಗಳು ಅನುಕರಣೀಯ. ಅವರ ಒಂದು ಕುಟುಂಬವೇ ಕಲಾಮಾಧ್ಯಮಕ್ಕೆ ತೆರೆದುಕೊಂಡ ರೀತಿ ಅನ್ಯಾದೃಶವಾದುದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಭಾಕರ ಶಿಶಿಲ, ಅಡ್ವಕೇಟ್ ಎ.ಪಿ.ಉಷಾ, ಗಣರಾಜ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದರು.
ನಾರಾಯಣ ತೋರಣಗಂಡಿ ಅವರು ಶಿಷ್ಯನುಡಿ ವಂದನೆ ಸಲ್ಲಿಸಿ ಗುರುಗಳ ವಿಶಿಷ್ಟ ರೀತಿಯ ಯಕ್ಷಪಾಠ ಅನನ್ಯ ಮತ್ತು ಅಸಂಖ್ಯ ಶಿಷ್ಯಂದಿರಿಗೆ ದಾರಿದೀವಿಗೆ ಎಂದರು.
ಶ್ರೀಮತಿ ಅಪರ್ಣಾ ರಾವ್ ಕುತ್ಯಾಡಿಯವರಿಂದ ಪ್ರಾಥನೆ ಮೊದಲ್ಗೊಂಡು ಆರಂಭವಾದ ಈ ಕಾರ್ಯಕ್ರಮದಲ್ಲಿ ನಾರಾಯಣ ದೇಲಂಪಾಡಿ ಅವರು ಎಲ್ಲರನ್ನೂ ಸ್ವಾಗತಿಸಿದರು. ರಾಮಣ್ಣ ಮಾಸ್ತರ್ ದೇಲಂಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಚಂದ್ರಶೇಖರ ಏತಡ್ಕ ಧನ್ಯವಾದ ಸಮರ್ಪಿಸಿದರು.
ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸಿದ ವಿಡಿಯೋ ವೈರಲ್ ಆಗಿದೆ, ಅವರಿಗೆಲ್ಲರಿಗೂ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಗಾಜಿಯಾಬಾದಿನಲ್ಲಿ ಮೂವರು ವ್ಯಕ್ತಿಗಳು ನಾಯಿಯನ್ನು ನೇಣು ಬಿಗಿದು ಸಾಯಿಸುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಪೊಲೀಸರು ನೋಟಿಸ್ ನೀಡಲು ವ್ಯಕ್ತಿಗಳನ್ನು ಕರೆಸಿ ಕೇಸು ದಾಖಲಿಸಿದ್ದಾರೆ.
ವೀಡಿಯೊದಲ್ಲಿ, ಕಟ್ಟಡ ನಿರ್ಮಾಣ ಸ್ಥಳದಲ್ಲಿ ಪುರುಷರು ಅದರ ಕುತ್ತಿಗೆಯನ್ನು ಲೋಹದ ಸರಪಳಿಯಿಂದ ಕಟ್ಟಿ ಗೋಡೆಗೆ ನೇತುಹಾಕುತ್ತಿರುವುದನ್ನು ಕಾಣಬಹುದು.
ನಂತರ ವೀಡಿಯೊದಲ್ಲಿ, ಅವರಲ್ಲಿ ಒಬ್ಬರು ಸರಪಳಿಯನ್ನು ಎಳೆಯುತ್ತಾರೆ, ಇದರಿಂದಾಗಿ ನಾಯಿ ನೋವಿನಿಂದ ಅಳುತ್ತದೆ ಮತ್ತು ಇತರರು ಅವನನ್ನು ಪ್ರೋತ್ಸಾಹಿಸುತ್ತಾರೆ. ನಾಯಿ ಕೊನೆಗೆ ಚಿತ್ರಹಿಂಸೆಗೆ ಬಲಿಯಾಗುತ್ತದೆ.
ವೀಡಿಯೋ ಮೂರು ತಿಂಗಳ ಹಳೆಯದಾಗಿದ್ದು, ವಿಡಿಯೋದಲ್ಲಿರುವವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಶ್ರಯ ಮನೆಯಿಂದ ಪೋಕ್ಸೋ ಪ್ರಕರಣದ ಸಂತ್ರಸ್ತರು ಸೇರಿದಂತೆ ಒಂಭತ್ತು ಹುಡುಗಿಯರು ನಾಪತ್ತೆಯಾಗಿದ್ದಾರೆ, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೊಟ್ಟಾಯಂ: ಪೋಕ್ಸೋ ಪ್ರಕರಣದ ಸಂತ್ರಸ್ತ ಮಹಿಳೆ ಸೇರಿದಂತೆ ಒಂಬತ್ತು ಬಾಲಕಿಯರು ಮಂಗನಂನ ಆಶ್ರಯ ಮನೆಯಿಂದ ನಾಪತ್ತೆಯಾಗಿದ್ದಾರೆ. ಮಹಿಳಾ ಸಮಾಖ್ಯ ಎನ್ಜಿಒ ನಡೆಸುತ್ತಿದ್ದ ಖಾಸಗಿ ಆಶ್ರಯ ಮನೆಯಿಂದ ಬಾಲಕಿಯರು ಪರಾರಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ 5.30ಕ್ಕೆ ಸಿಬ್ಬಂದಿ ಎಬ್ಬಿಸಲು ಹೋದಾಗ ನಾಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಶ್ರಯ ಮನೆಯಲ್ಲಿ ಸುಮಾರು 12 ಬಾಲಕಿಯರಿದ್ದಾರೆ.
ಪೋಕ್ಸೊ ಪ್ರಕರಣಗಳು ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಒಳಗಾದ ಹುಡುಗಿಯರನ್ನು ಇಲ್ಲಿ ದಾಖಲಿಸಲಾಗಿದೆ. ಈ ಆಶ್ರಯ ಮನೆ ಮಕ್ಕಳ ಕಲ್ಯಾಣ ಸಂಘದ ಮಾನ್ಯತೆಯನ್ನು ಹೊಂದಿದೆ.
ಕಳೆದ ಕೆಲವು ದಿನಗಳಿಂದ ಇಲ್ಲಿ ಹುಡುಗಿಯರು ಪ್ರತಿಭಟನೆ ನಡೆಸುತ್ತಿದ್ದರು. ಅವರಿಗಾಗಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ