ಇತ್ತೀಚೆಗೆ ವಿಮಾನದಲ್ಲಿ ಅಸಹಜ ಮತ್ತು ಅನಪೇಕ್ಷಿತ ಘಟನೆಗಳು ಹೆಚ್ಚಾಗಿ ನಡೆಯುತ್ತಿರುವುದು ಕಂಡುಬರುತ್ತಿವೆ. ಅಂತಹ ಮತ್ತೊಂದು ಘಟನೆಯಲ್ಲಿ, ಬಾಂಗ್ಲಾದೇಶದ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ದೈಹಿಕ ಬಲಪ್ರಯೋಗದ ಜೊತೆ ವಾಗ್ವಾದದಲ್ಲಿ ತೊಡಗಿರುವುದು ಕಂಡುಬಂದಿದೆ.
ಬಾಂಗ್ಲಾದೇಶದ ರಾಷ್ಟ್ರೀಯ ವಾಹಕವಾದ ಬಿಮನ್ ಬಾಂಗ್ಲಾದೇಶ ನಿರ್ವಹಿಸುವ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಅಸಮಾಧಾನ ತೋರುವ ಶರ್ಟ್ ಕಳಚಿದ ಪ್ರಯಾಣಿಕರೊಬ್ಬರು ವಿಮಾನದ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತದೆ.
ಕ್ಲಿಪ್ನಲ್ಲಿ, ಅಸಮಾಧಾನ ತೋರುವ ಶರ್ಟ್ರಹಿತ ಪ್ರಯಾಣಿಕರೊಬ್ಬರು ವಿಮಾನದ ಮುಂಭಾಗದ ಸಾಲಿನಲ್ಲಿ ಕುಳಿತಿದ್ದ ಇನ್ನೊಬ್ಬ ಪ್ರಯಾಣಿಕರೊಂದಿಗೆ ತೀವ್ರ ವಾಗ್ವಾದ ನಡೆಸುತ್ತಿರುವುದು ಕಂಡುಬರುತ್ತದೆ. ಅಂಗಿ ಧರಿಸದ ಪ್ರಯಾಣಿಕನೂ ಅಳುತ್ತಿರುವಂತೆ ಕಂಡುಬರುತ್ತಿದೆ.
ವಾದದ ಸಮಯದಲ್ಲಿ, ವ್ಯಕ್ತಿ ಸಹ-ಪ್ರಯಾಣಿಕನ ಕಾಲರ್ ಅನ್ನು ಹಿಡಿದಿರುವುದನ್ನು ಸಹ ಕಾಣಬಹುದು, ಅವರ ಮುಖವು ವೀಡಿಯೊದಲ್ಲಿ ಗೋಚರಿಸುವುದಿಲ್ಲ. ಕುಳಿತಿರುವ ಪ್ರಯಾಣಿಕನು ಅವನನ್ನು ಕಪಾಳಮೋಕ್ಷ ಮಾಡುತ್ತಾನೆ ಮತ್ತು ಆ ವ್ಯಕ್ತಿ ಕೋಪಗೊಳ್ಳುತ್ತಾನೆ.
ಪ್ರತಿಯಾಗಿ, ಅಂಗಿ ಹಾಕದ ವ್ಯಕ್ತಿ ಅವನಿಗೆ ಹೊಡೆಯುತ್ತಾನೆ. ಇತರರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಾರೆ ಮತ್ತು ಅವನನ್ನು ದೂರ ಎಳೆಯಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ದಿನಾಂಕ ಮತ್ತು ವಿಮಾನದ ಮಾರ್ಗವು ಇನ್ನೂ ತಿಳಿದುಬಂದಿಲ್ಲ.
Another "Unruly Passenger" 👊 This time on a Biman Bangladesh Boeing 777 flight!🤦♂️ pic.twitter.com/vnpfe0t2pz
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ತೇಜ ಚಿನ್ಮಯ ಹೊಳ್ಳ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ
ಶಾಲಾ ಶಿಕ್ಷಣ ಸಚಿವಾಲಯ ಭಾರತ ಸರಕಾರ ಹಾಗೂ National Council of Educational Research and Training (NCERT) ನವದೆಹಲಿಯವರು 9 ರಿಂದ 12ನೇ ತರಗತಿ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ಒಡಿಶಾದ ಭುವನೇಶ್ವರದ Regional Institute of Education ಇಲ್ಲಿ ನಡೆಸಿದ ರಾಷ್ಟ್ರಮಟ್ಟದ “ಕಲೋತ್ಸವ-2022″ರಲ್ಲಿ ಕುಮಾರ ತೇಜ ಚಿನ್ಮಯ ಹೊಳ್ಳ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ.
ಇವರನ್ನು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ರಾಜ್ಯ ಸಚಿವರುಗಳಾದ ಡಾ. ಸುಭಾಷ್ ಸರ್ಕಾರ್ ಮತ್ತು ಶ್ರೀಮತಿ ಅನ್ನಪೂರ್ಣಾ ದೇವಿ ಹಾಗೂ ಶಿಕ್ಷಣ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ರಾಜಕುಮಾರ್ ರಂಜನ್ ಸಿಂಘ್ ಇವರುಗಳು ಪುರಸ್ಕಾರ ನೀಡಿ ಗೌರವಿಸಿರುತ್ತಾರೆ.
ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿರುವ ಇವರು ಪುತ್ತೂರು ಕೊಂಬೆಟ್ಟು ನಿವಾಸಿ ಶ್ರೀ ಹರೀಶ್ ಹೊಳ್ಳ ಮತ್ತು ಸಂಗೀತ ವಿದುಷಿ ಶ್ರೀಮತಿ ಡಾ. ಸುಚಿತ್ರಾ ಹೊಳ್ಳ ದಂಪತಿಗಳ ಸುಪುತ್ರ ಹಾಗೂ ವಿದ್ವಾನ್ ಟಿ.ಜಿ. ಗೋಪಾಲಕೃಷ್ಣನ್ ಇವರ ಶಿಷ್ಯ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಶಸ್ತಿ ವಿಜೇತರಾಗಿ ತೇಜ ಚಿನ್ಮಯ ಹೊಳ್ಳ ತನ್ನ ಪೋಷಕರು, ಕಲಿಯುತ್ತಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ಕರ್ನಾಟಕ ರಾಜ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಉಲ್ಲೇಖಾರ್ಹ ಗೌರವ ತರುವ ಸಾಧನೆ ಮಾಡಿರುತ್ತಾರೆ. ಮುಂದಕ್ಕೂ ಅತ್ಯುತ್ತಮ ಪ್ರತಿಭೆ ಪ್ರದರ್ಶನ ಇವರಿಂದ ಮೂಡಿ ಬರಲಿ.
ಕಾಸರಗೋಡು ನಿವಾಸಿ ಅಂಜುಶ್ರೀ ಪಾರ್ವತಿ (19) ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮರಣೋತ್ತರ ಪರೀಕ್ಷೆ ವರದಿ ಸುಳಿವು ನೀಡಿದೆ. ಮರಣೋತ್ತರ ಪರೀಕ್ಷೆಯ ವರದಿಯು ಆಹಾರದ ವಿಷದಿಂದ ಸಾವು ಸಂಭವಿಸಿಲ್ಲ ಮತ್ತು ಆಕೆಯ ದೇಹದಲ್ಲಿ ವಿಷದ ಕುರುಹುಗಳು ಕಂಡುಬಂದಿವೆ ಮತ್ತು ಇದು ಆಕೆಯ ಯಕೃತ್ತಿನ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.
ಪೇಸ್ಟ್ ರೂಪದ ಇಲಿ ವಿಷವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ನಡೆಸಿದ ತನಿಖೆಯ ವರದಿಯಲ್ಲಿ ಅಂಜುಶ್ರೀ ಅವರ ಮೊಬೈಲ್ನಲ್ಲಿ ಇಲಿ ವಿಷದ ಶೋಧದ ಮಾಹಿತಿ ಮತ್ತು ಟಿಪ್ಪಣಿ ಪತ್ತೆಯಾಗಿದೆ ಎಂದು ಸೂಚಿಸಲಾಗಿದೆ. ಆದರೆ, ರಾಸಾಯನಿಕ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಅಧಿಕೃತವಾಗಿ ದೃಢೀಕರಿಸಬಹುದು.
ಈ ನಡುವೆ ಅಂಜುಶ್ರೀ ಸಾವಿನ ನಿಗೂಢತೆ ಹೋಗಲಾಡಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಆಹಾರ ಸೇವಿಸಿದ ಬಳಿಕ ಅಂಜುಶ್ರೀ ಸೇರಿದಂತೆ ಮೂವರಿಗೆ ದೈಹಿಕ ಅಸ್ವಸ್ಥತೆ ಉಂಟಾಗಿದೆ ಎಂದು ಬಾಲಕಿಯ ಚಿಕ್ಕಪ್ಪ ಕರುಣಾಕರನ್ ತಿಳಿಸಿದ್ದಾರೆ.
ಫುಡ್ ಪಾಯ್ಸನಿಂಗ್ ಆಗದಿದ್ದರೆ ಸಾವಿಗೆ ಬೇರೆ ಕಾರಣಗಳನ್ನು ಪತ್ತೆ ಮಾಡಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ. ಪೆರುಂಬಳದ ಬೇನೂರಿನ ಶ್ರೀ ನಿಲಯದ ದಿವಂಗತ ಎ ಕುಮಾರನ್ ನಾಯರ್ ಮತ್ತು ಕೆ ಅಂಬಿಕಾ ದಂಪತಿಯ ಪುತ್ರಿ ಅಂಜುಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶನಿವಾರ ಮೃತಪಟ್ಟಿದ್ದಾರೆ.
ಹೋಟೆಲ್ನಿಂದ ಆನ್ಲೈನ್ನಲ್ಲಿ ಆಹಾರ ಆರ್ಡರ್ ಮಾಡಿದ ನಂತರ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಸಂಬಂಧಿಕರು ದೂರಿದ್ದರು. ದೂರಿನ ಮೇರೆಗೆ ಹೋಟೆಲ್ ಮಾಲೀಕರು ಹಾಗೂ ಇಬ್ಬರು ಉದ್ಯೋಗಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಲಕಿಯ ಸಾವಿಗೆ ವಿಷಾಹಾರ ಸೇವನೆಯಿಂದಲ್ಲ ಎಂದು ತಿಳಿದು ಅವರನ್ನು ಬಿಡುಗಡೆ ಮಾಡಲಾಗಿದೆ.
ಮಂಜೇಶ್ವರಂನಲ್ಲಿರುವ ಗೋವಿಂದ ಪೈ ಸರಕಾರಿ ಕಾಲೇಜಿನಲ್ಲಿ ಅಂಜುಶ್ರೀ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದರು.
ಬೆಳಗಾವಿಯ ಅಧಿವೇಶನ ಮುಗಿದಿದೆ. ಹಾವೇರಿಯ ನೆಲ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿ ನಿಂತಿದೆ. ಗಡಿ ಸಮಸ್ಯೆಗಳ ಗುಡುಗಿನ ನಡುವೆ ಕಾಸರಗೋಡಿನ ಬಗ್ಗೆ ಮಂದ್ರಸ್ವರದಲ್ಲಾದರೂ ಶಬ್ದಗಳೇ ಕೇಳಿ ಬರುತ್ತಿಲ್ಲ. ಕಾಸರಗೋಡಿನ ಕನ್ನಡಿಗರು ಮೌನವಾಗುತ್ತಿರುವ ಆಕ್ರಂದನದಲ್ಲಿ ನರಳುತ್ತಿರುವಂತೆ ಕಾಣುತ್ತದೆ.
ಕಳೆದ ಸುಮಾರು 65 ವರ್ಷಗಳಿಂದ ಈ ಪ್ರದೇಶದಲ್ಲಿ ಬಾಳಿ ಬದುಕುತ್ತಿರುವ ಕನ್ನಡಿಗರ ಒಡಲಾಳದ ಅಳಲು ಅರಣ್ಯರೋದನವಾಗಿ ಪರಿಣಮಿಸಿತೇ? ಸುದೀರ್ಘ ಕಾಲಾವಧಿಯಲ್ಲಿ ಪ್ರತಿಕೂಲ ಸನ್ನಿವೇಶಗಳಲ್ಲೂ ಮಾತೃಭೂಮಿಯನ್ನೂ ಮಾತೃಭಾಷೆಯನ್ನೂ ಮಾತೃ ಸಂಸ್ಕೃತಿಯನ್ನೂ ಪ್ರೀತಿಸುತ್ತಾ ಬಂದಿರುವುದೇ ಒಂದು ಅಪರಾಧವಾಯಿತೇ? ಹೀಗೆ ಕಣ್ಣೀರು ಸುರಿಸುವ ವಾತಾವರಣ ನಿರ್ಮಾಣವಾಗಿದೆ.
ಮಹಾಜನ ಆಯೋಗದ ವರದಿಯೇ ಅಂತಿಮವೆಂದಾದರೆ ಆ ವರದಿ ಕಾಸರಗೋಡಿನ ಪರವಾಗಿ ನೀಡಿದ ತೀರ್ಪನ್ನು ಯಾಕೆ ಕರ್ನಾಟಕ ಎತ್ತಿ ಹಿಡಿಯುವುದಿಲ್ಲ? ಕೇಂದ್ರ ಸರಕಾರದ ಸಾರಥ್ಯವನ್ನು ವಹಿಸಿರುವವರು ಇದನ್ನು ಯಾಕೆ ಗಮನಿಸುತ್ತಿಲ್ಲ?
ಕಾಸರಗೋಡಿನ ಇಬ್ಬರು ಮಹಾ ಕವಿಗಳು ತಾಯ್ನಾಡಿನ ವಿಮೋಚನೆಯನ್ನು ಕನವರಿಸುತ್ತಲೇ ನಮ್ಮನ್ನು ಅಗಲಿ ಹೋಗಿದ್ದಾರೆ. ಒಬ್ಬರು ಕನ್ನಡದ ಪ್ರಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಯವರು ಮತ್ತೊಬ್ಬರು ಕನ್ನಡವನ್ನೇ ಉಸಿರಾಡುತ್ತಿದ್ದ ಮಹಾಕವಿ ಕಯ್ಯಾರ ಕಿಞ್ಞಣ್ಣ ರೈಯವರು. ಈ ಎರಡು ಹೆಸರುಗಳನ್ನು ಕೇವಲ ಸಾಂಕೇತಿಕವಾಗಿ ಮಾತ್ರ ಮುಂದಿಟ್ಟುಕೊಂಡರೂ ಅಂದಿನಿಂದ ಇಂದಿನ ತನಕ ಇಲ್ಲಿ ಕನ್ನಡ ಸಂಸ್ಕೃತಿ ಸಾಹಿತ್ಯ ಕಲೆ ಇತ್ಯಾದಿಗಳಿಗೆ ನಿಜಾರ್ಥದಲ್ಲಿ ಅಪೂರ್ವವಾದ ಕೊಡುಗೆಗಳನ್ನು ಕೊಟ್ಟ ಇನ್ನೂ ಅನೇಕ ಮಂದಿ ಸಾಧಕರಿದ್ದಾರೆ.
ಕರ್ನಾಟಕದ ರಾಜಕಲೆಯೆಂಬ ಗೌರವಕ್ಕೆ ಪಾತ್ರವಾಗಿರುವ ಯಕ್ಷಗಾನಕ್ಕಂತೂ ಅಂದೂ ಇಂದೂ ಇದೊಂದು ಆಡುಂಬೊಲವೇ ಆಗಿದೆ. ಜಾನಪದ ಮಹಾ ಕವಿ ಯಕ್ಷಗಾನದ ಆಚಾರ್ಯ ಪುರುಷ ಪಾರ್ತಿಸುಬ್ಬ ನಡೆದಾಡಿದ್ದು ಕನ್ನಡದ ಕಾಸರಗೋಡಿನ ಪುಣ್ಯಭೂಮಿ ಕಣಿಪುರದಲ್ಲಿ ಎಂಬುದನ್ನಷ್ಟೇ ಸ್ಮರಿಸಿಕೊಂಡರೆ ಸಾಕು. ಪ್ರಾಯಃ ಒಂದು ಭೌಗೋಳಿಕ ಚೌಕಟ್ಟಿನಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಕಲಾವಿದರನ್ನೂ ಕಲಾಭಿಮಾನಿಗಳನ್ನೂ ಪ್ರಸಂಗ ರಚನಾ ಸಾಹಿತಿಗಳನ್ನೂ ಕನ್ನಡಕ್ಕೆ ಕೊಟ್ಟಂತಹ ಇನ್ನೊಂದು ಪ್ರದೇಶ ಕರ್ನಾಟಕದಲ್ಲೂ ಕಾಣಸಿಗಲಾರದು.
ಗಮನಿಸಬೇಕಾದ ಮುಖ್ಯವಾದ ಮಾತೆಂದರೆ ಕಾಸರಗೋಡಿನಲ್ಲಿ ಇರುವ ಪ್ರಶ್ನೆ ಸಂಸ್ಕೃತಿಗೆ ಸಂಬಂಧಿಸಿದ್ದು. ರಾಜ್ಯ ಪುನಾರಚನೆ ನಡೆದುದು ಭಾಷೆಗಳ ಆಧಾರದ ಮೇಲೆ ಎಂಬುದರಿಂದ ಮೇಲ್ನೋಟಕ್ಕೆ ಇದು ಭಾಷೆಗಳ ಸಮಸ್ಯೆಯಂತೆ ಕಾಣಿಸಿಕೊಂಡಿದೆ. ಎಂದರೆ ಸಂಸ್ಕೃತಿಯ ಸಮಸ್ಯೆಯೇ ಆದರೂ ಅದನ್ನು ಇತ್ಯರ್ಥಗೊಳಿಸುವಲ್ಲಿ ಪರಿಗಣಿಸಬೇಕಾದದ್ದು ರಾಷ್ಟ್ರಮಟ್ಟದಲ್ಲಿ ಅಂಗೀಕೃತವಾದ ಮಲೆಯಾಳ ಮತ್ತು ಕನ್ನಡ ಭಾಷೆಗಳನ್ನು ಮಾತ್ರ. ಕಾಸರಗೋಡಿನಲ್ಲಿ ಅಸ್ತಿತ್ವದಲ್ಲಿರುವ ಇತರ ಉಪಭಾಷೆಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಅಂತರ್ಗತವಾಗಿವೆ ಎನ್ನುವ ಸತ್ಯದ ಆಧಾರದ ಮೇಲೆ ಈ ಪ್ರಶ್ನೆಯ ತೀರ್ಮಾನವಾಗಬೇಕು.
ಆಗಾಗ ಉಲ್ಬಣಾವಸ್ಥೆಗೆ ಬರುತ್ತಿರುವ ಭಾಷಾ ಸಂಬಂಧವಾದ (ಸಂಸ್ಕೃತಿ) ಈ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆ ಎನ್ನುವುದೇ ನಿಜವಾದ ಪ್ರಶ್ನೆ.
ಪರಿಹಾರ
ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಬೀದಿ ಕಾಳಗಕ್ಕೆ ಮುಂದಾಗುವುದರಿಂದ ಪ್ರಯೋಜನವೇನೂ ಆಗಲಾರದು. ಭಾಷೆಯ ಅಥವಾ ಸಂಸ್ಕೃತಿಯ ಕುರಿತಾದ ಅಂಧಾಭಿಮಾನ ದುರಭಿಮಾನ ಉದ್ವೇಗ ಆವೇಶಗಳು ಕಷ್ಟವನ್ನು ಬೆಟ್ಟವಾಗಿಸಬಹುದೇ ಹೊರತು ಪರಿಹಾರ ಕಾಣುವುದಕ್ಕೆ ನೆರವಾಗಲಾರವು. ಪ್ರೀತಿ ವಿವೇಕ ಸೌಹಾರ್ದ ಸಮನ್ವಯ ಇತ್ಯಾದಿಗಳ ನೆಲೆಯಲ್ಲಿ ಮಾತ್ರವೇ ನೆಮ್ಮದಿಯ ಪರಿಹಾರ ದೊರಕಬಹುದು.
ಪರಿಹಾರವನ್ನು ಎರಡು ದೃಷ್ಟಿಯಿಂದ ಲಕ್ಷಿಸಬೇಕು.
1. ಶಾಶ್ವತವಾದ ಪರಿಹಾರವೆಂದರೆ ಮಹಾಜನ ಆಯೋಗದ ಆಧಾರದಲ್ಲಿ ಕಾಸರಗೋಡನ್ನು ಭೌಗೋಳಿಕವಾಗಿ ಕರ್ನಾಟಕದೊಂದಿಗೆ ವಿಲೀನಗೊಳಿಸಬೇಕು. ವೋಟ್ ಬೇಂಕ್ ರಾಜಕೀಯವನ್ನು ಬದಿಗಿರಿಸಿ ಪರಸ್ಪರ ಮಾತುಕತೆಯ ಮೂಲಕ ಸರ್ವಪಕ್ಷಗಳ ಸರ್ವಸಮ್ಮತ ಸಿದ್ಧಾಂತಕ್ಕೆ ಬದ್ಧರಾಗುವುದಕ್ಕೆ ಸಾಧ್ಯವಾದರೆ ಮಾತ್ರ ಇದು ಯಶಸ್ವಿಯಾಗಬಹುದು. ಗುಣಕಾರಕ ಚಿಕಿತ್ಸೆ (Curative treatment) ಸಾಧ್ಯವಾಗದಿದ್ದರೆ ನಾವು ಸಾಂತ್ವನ ಚಿಕಿತ್ಸೆ (palliative treatment) ಗೆ ಮೊರೆ ಹೋಗಬೇಕು.
2.ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲೀನೀಕರಣಸದ್ಯದ ಪರಿಸ್ಥಿತಿಯಲ್ಲಿ ಅತ್ಯಂತ ಉತ್ತಮವಾದ ಸೂತ್ರ. ಶಾಸನಾತ್ಮಕವಾಗಿ ಮೂಡಿ ಬಂದರೆ ಅದೊಂದು ಶಾಶ್ವತವಾದ ಪರಿಹಾರವಾಗಬಹುದು. ಕಾಸರಗೋಡಿನ ಸಂಸ್ಕೃತಿ ಪರವಾದ ಎಲ್ಲ ಚಟುವಟಿಕೆಗಳನ್ನೂ ಅದು ಕರ್ನಾಟಕದ ಅವಿಭಾಜ್ಯ ಅಂಗವೆಂಬಂತೆ ಕರ್ನಾಟಕ ಸರಕಾರ ನಿರ್ವಹಿಸಬೇಕು. ಅಥವಾ ಪೋಷಿಸಬೇಕು. ಅದರೊಂದಿಗೆ ಹೆಚ್ಚುವರಿ ಸೌಲಭ್ಯಗಳನ್ನೂ ನೀಡಬೇಕು. ಕೇರಳ ಸರಕಾರದಿಂದ ಸಿಗಲೇಬೇಕಾದ ಸವಲತ್ತುಗಳು ಸಿಗುವಂತೆಯೂ ಸಂಸ್ಕೃತಿಯ ಮೇಲೆ ಆಕ್ರಮಣ ನಡೆಯದಂತೆಯೂ ಎಚ್ಚರಿಕೆ ವಹಿಸಬೇಕು.ಈಗಾಗಲೇ ಡಾ.ಸಿ. ಸೋಮಶೇಖರ್ ಅವರು ಈ ಕುರಿತು ಕೆಲವು ದೃಢವಾದ ಹೆಜ್ಜೆಗಳನ್ನು ಮುಂದಿರಿಸಿದ್ದಾರೆ. ಇದಕ್ಕೇ ಶಾಸನಾತ್ಮಕವಾದ ಶಾಶ್ವತವಾದ ಸ್ವರೂಪವನ್ನು ಕೊಟ್ಟರೆ ಸಮಗ್ರವಾದ ಸೂತ್ರವೊಂದನ್ನು ಅನುಷ್ಠಾನಕ್ಕೆ ತರಬಹುದು.
ಕೇಂದ್ರಾಡಳಿತ ಪ್ರದೇಶವಾಗಿ ಪರಿಗಣಿಸಬೇಕೆಂಬ ಬೇಡಿಕೆ ಅಷ್ಟು ಪರಿಣಾಮಕಾರಿಯಾಗುವುದು ಕಷ್ಟ.ಆದರೆ ಕಾಸರಗೋಡನ್ನು ರಾಷ್ಟ್ರಮಟ್ಟದಲ್ಲಿ ಸಂಸ್ಕೃತಿಯ ಸಾಮರಸ್ಯದ ನಾಡೆಂದು ಗುರುತಿಸಿ ಎಲ್ಲ ಭಾಷೆಗಳ ಮತ್ತು ಸಂಸ್ಕೃತಿಗಳ ಸರ್ವತೋಮುಖವಾದ ಅಭಿವೃದ್ಧಿಯನ್ನು ಸಾಧಿಸಬಹುದಾದದ್ದು ಇನ್ನೊಂದು ಉಚಿತವಾದ ಮಾರ್ಗ. ಯಾವುದು ಹೆಚ್ಚು ಪ್ರಾಯೋಗಿಕವೂ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.
ಕಾಸರಗೋಡು ಕೇರಳಕ್ಕೆ ಸೇರಿ ಹೋದ ನೋವು ಮತ್ತು ಆವೇಶದ ಭರದಲ್ಲಿ ಕಯ್ಯಾರ ಕಿಞ್ಞಣ್ಣ ರೈಯವರು ‘ಬೆಂಕಿ ಬಿದ್ದಿದೆ ಮನೆಗೆ’ ಎಂದು ಹಾಡಿದ್ದರು. ಅಂದು ಹೊತ್ತಿದ ಬೆಂಕಿ ಇಂದೂ ಉರಿಯುತ್ತಲೇ ಇದೆ. ಹಾಗಾಗಿ ಈಗ ನಾವು ಹಾಡಬೇಕಾಗಿದೆ
‘ಬೆಂಕಿ ಆರಿಸುವವರೆ ಬನ್ನಿ ಬನ್ನಿ. ಕನ್ನಡದ ಸಂಸ್ಕೃತಿಯ ಬೆಳಗೆ ಬನ್ನಿ’
ಬರಹ: ಡಾ. ರಮಾನಂದ ಬನಾರಿ ಮಂಜೇಶ್ವರ
ಡಾ. ರಮಾನಂದಬನಾರಿಮಂಜೇಶ್ವರ
ಅಧ್ಯಕ್ಷರು,
ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ) ದೇಲಂಪಾಡಿ
ಲಖನೌ: ಉತ್ತರ ಪ್ರದೇಶದ ಕನ್ನೌಜ್ನ ಸರ್ಕಾರಿ ಶಾಲೆಯೊಂದರ 47 ವರ್ಷದ ಶಿಕ್ಷಕರಿಂದ 13 ವರ್ಷದ 8 ನೇ ತರಗತಿ ವಿದ್ಯಾರ್ಥಿನಿಗೆ ಪ್ರೇಮ ಪತ್ರ ಬಂದಿದೆ. 8 ನೇ ತರಗತಿಯ ವಿದ್ಯಾರ್ಥಿನಿಗೆ ‘ಪ್ರೇಮ ಪತ್ರ’ ಬರೆದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ತಿಳಿದುಬಂದಿದೆ.
ಶಿಕ್ಷಕನನ್ನು ಹರಿಓಂ ಸಿಂಗ್ ಎಂದು ಗುರುತಿಸಲಾಗಿದ್ದು, ಒಂದು ಪುಟದ ಪ್ರೇಮ ಪತ್ರದಲ್ಲಿ ವಿದ್ಯಾರ್ಥಿನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಡಿಸೆಂಬರ್ 30ರಂದು ನೀಡಿದ್ದ ಹೊಸ ವರ್ಷದ ಗ್ರೀಟಿಂಗ್ ಕಾರ್ಡ್ ನ ನಡುವಿನಲ್ಲಿ ಪ್ರೇಮ ಪತ್ರವನ್ನು ಇರಿಸಿ ಬಾಲಕಿಗೆ ಶಿಕ್ಷಕ ನೀಡಿದ್ದ ಎಂದು ಹೇಳಲಾಗುತ್ತಿದೆ.
ಶಿಕ್ಷಕನು ವಿದ್ಯಾರ್ಥಿನಿಯ ಹೆಸರಿನೊಂದಿಗೆ ಪತ್ರವನ್ನು ಪ್ರಾರಂಭಿಸಿದನು, ಅವನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದ. ಶಾಲಾ ರಜೆಯಲ್ಲಿ ಆಕೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದೂ ಪ್ರೇಮ ಪತ್ರದಲ್ಲಿ ಬರೆದಿದ್ದ. ಆಕೆಗೆ ಅವಕಾಶ ಸಿಕ್ಕರೆ, ಅವಳು ತನಗೆ ಫೋನ್ ಮಾಡಬೇಕು ಮತ್ತು ರಜೆಯ ಮೊದಲು ಬಂದು ನನ್ನನ್ನು ಭೇಟಿಯಾಗು ಎಂದು ಅವರು ಬರೆದಿದ್ದಾರೆ.
ಶಿಕ್ಷಕನು ತಾನು ಅವಳನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಹೇಳಿದನು ಮತ್ತು ಪತ್ರವನ್ನು ಬೇರೆಯವರಿಗೆ ತೋರಿಸಬೇಡ ಮತ್ತು ಅದನ್ನು ಓದಿದ ನಂತರ ಅದನ್ನು ಹರಿದು ಹಾಕಲು ಹೇಳಿದನು. ಆದರೆ ಬಾಲಕಿ ತನ್ನ ಪೋಷಕರಿಗೆ ಪತ್ರದ ಬಗ್ಗೆ ತಿಳಿಸಿದ್ದಾಳೆ ಮತ್ತು ನಂತರ ಪೋಷಕರು ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿನಿಯ ಪೋಷಕರ ದೂರಿನ ಮೇರೆಗೆ ಶಿಕ್ಷಕಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿಚಾರಿಸಿ, ಕ್ಷಮೆಯಾಚಿಸುವಂತೆ ಶಿಕ್ಷಕರನ್ನು ಕೇಳಿದಾಗ ಅವರು ಕಿವಿಗೊಡಲಿಲ್ಲ, ಬದಲಾಗಿ ಗಂಭೀರ ಪರಿಣಾಮ ಬೀರುವುದಾಗಿ ಬೆದರಿಕೆ ಹಾಕಿದರು ಎಂದು ಪೋಷಕರು ಹೇಳುತ್ತಾರೆ. ಬಾಲಕಿಯನ್ನು ಅಪಹರಿಸುವುದಾಗಿ ಶಿಕ್ಷಕನು ಹೇಳಿದ್ದಾನೆ ಎಂದು ಪೋಷಕರು ದೂರಿದ್ದಾರೆ.
ಬಾಲಕಿಯ ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ವಿಷಯ ಬೆಳಕಿಗೆ ಬಂದ ನಂತರ, ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ (ಬಿಎಸ್ಎ) ಕೌಸ್ತುಭ್ ಸಿಂಗ್ ಹರಿಯೋಮ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ ಮತ್ತು ಬ್ಲಾಕ್ ಶಿಕ್ಷಣ ಅಧಿಕಾರಿ ವಿಪಿನ್ ಕುಮಾರ್ ಅವರಿಗೆ ವಿಷಯದ ತನಿಖೆಯನ್ನು ವಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕುನ್ವರ್ ಅನುಪಮ್ ಸಿಂಗ್ ತಿಳಿಸಿದ್ದಾರೆ.
ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಶುಕ್ರವಾರ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ. ಶಿಕ್ಷಕ ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಕರ ಸಂಘವೂ ಹೇಳಿದೆ.
ಮೊಬೈಲ್ ಚಾರ್ಜ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ಪ್ಲಸ್ ಟು ವಿದ್ಯಾರ್ಥಿ ಮೃತಪಟ್ಟಿದ್ದಾನೆ.
ಅವರನ್ನು ಪಯ್ಯನಕ್ಕಲ್ ಕುಟ್ಟಿಕಟ್ಟುತ್ತೋಡಿ ನೀಲಂಪರಂನ ಅಭಿಷೇಕ್ ನಾಯರ್ ಎಂದು ಗುರುತಿಸಲಾಗಿದೆ. ಅವನಿಗೆ ಪ್ಲಗ್ನಿಂದ ಶಾಕ್ ತಗುಲಿದೆ.
ಫೋನ್ ಸರಿಯಾಗಿ ಚಾರ್ಜ್ ಆಗದ ಕಾರಣ ಅದನ್ನು ಅನ್ ಪ್ಲಗ್ ಮಾಡಲು ಯತ್ನಿಸಿದಾಗ ಅಭಿಷೇಕ್ ಗೆ ವಿದ್ಯುತ್ ಸ್ಪರ್ಶವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಸಲಾಗಲಿಲ್ಲ.
ಅವರ ತಂದೆ ಜಾರ್ಖಂಡ್ ಮೂಲದವರು. ಅಲ್ಲಿ ಅಭಿಷೇಕ್ ಓದುತ್ತಿದ್ದ. ಅಭಿಷೇಕ್ ಒಂದು ತಿಂಗಳ ಹಿಂದೆ ಪಯ್ಯನಕ್ಕಲ್ನಲ್ಲಿರುವ ತನ್ನ ತಾಯಿಯ ಮನೆಗೆ ಬಂದಿದ್ದ.
ಉಡುಪಿ : ಅಂಬಲಪಾಡಿ ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ 65ನೇ ವಾರ್ಷಿಕೋತ್ಸವವು ಜನವರಿ 15, 2023 ಭಾನುವಾರ ಸಂಜೆ 6.00 ಗಂಟೆಗೆ ಅಂಬಲಪಾಡಿಯ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಜರಗಲಿದೆ.
ಪ್ರತೀ ವರ್ಷದಂತೆ ಈ ಸಂದರ್ಭದಲ್ಲಿ ಮೂವರು ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕಿದಿಯೂರು ಜನಾರ್ದನ ಆಚಾರ್ಯ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ನಿಟ್ಟೂರು ಶೀನಪ್ಪ ಸುವರ್ಣರಿಗೆ, ಕಪ್ಪೆಟ್ಟು ಬಾಬು ಶೆಟ್ಟಿಗಾರ್ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ರಾಜಶೇಖರ್ ಹಂದೆಯವರಿಗೆ ಹಾಗೂ ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿಯನ್ನು ಶ್ರೀ ಆರ್ಗೋಡು ಮೋಹನ್ದಾಸ್ ಶೆಣೈಯವರಿಗೆ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಧ್ಯಕ್ಷ ಕೆ. ಅಜಿತ್ಕುಮಾರ್ ಮತ್ತು ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿರುತ್ತಾರೆ.