Saturday, August 1, 2026
Home Blog Page 102

ಯುವ ವೈದ್ಯೆ ಫ್ಲಾಟ್‌ನಿಂದ ಬಿದ್ದು ಸಾವು

ಯುವ ವೈದ್ಯೆಯೊಬ್ಬರು ಅಪಾರ್ಟ್‌ಮೆಂಟ್‌ನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಕೋಝಿಕೋಡ್ ಮೇಯರ್ ಭವನದ ಬಳಿ ನಡೆದಿದೆ. ಕೋಝಿಕೋಡಿನ ಲಿಯೋ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಡಾ.ಸದಾ ರೆಹಮತ್ ಸಾವನ್ನಪ್ಪಿದ್ದಾರೆ.

ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಈ ಘಟನೆ ನಡೆದಿದೆ. ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಸದಾ ಇಲ್ಲಿಗೆ ಬಂದಿದ್ದರು. ಇಂದು ಬೆಳಗ್ಗೆ ಶಬ್ಧ ಕೇಳಿದ ಭದ್ರತಾ ಸಿಬ್ಬಂದಿ ಓಡಿ ಬಂದಾಗ ಆಕೆ ಮಲಗಿದ ಸ್ಥಿತಿಯಲ್ಲಿ ಇರುವುದು ಕಂಡು ಬಂದಿದೆ.

ಕೂಡಲೇ ಫ್ಲಾಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಆಕೆಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರೂ ಆಕೆಯ ಪ್ರಾಣ ಉಳಿಸಲಾಗಲಿಲ್ಲ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ

ಬೈಪಾಡಿತ್ತಾಯ ದಂಪತಿಗೆ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ’ ಪ್ರಶಸ್ತಿ

ಉಡುಪಿ : ಯತಿಶ್ರೇಷ್ಠರಾದ ಶ್ರೀ ವಿದ್ಯಾಮಾನ್ಯತೀರ್ಥ ಶ್ರೀಪಾದರ ಹೆಸರಿನಲ್ಲಿ ಅವರ ಕರಕಮಲ ಸಂಜಾತ ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಅನುಗ್ರಹ ಪೂರ್ವಕವಾಗಿ ಕೊಡಮಾಡುವ ‘ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪುರಸ್ಕಾರ’ಕ್ಕೆ ತೆಂಕುತಿಟ್ಟಿನ ಕಲಾವಿದ ದಂಪತಿಗಳಾದ ಶ್ರೀ ಹರಿನಾರಾಯಣ ಬೈಪಾಡಿತ್ತಾಯ-ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 6, 2023 ಗುರುವಾರ ಪಲಿಮಾರಿನಲ್ಲಿರುವ ಮೂಲ ಮಠದಲ್ಲಿ ಜರಗಲಿದೆ.

ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆಮಾಡುವಲ್ಲಿ ಯಕ್ಷಗಾನ ಕಲಾರಂಗವು ಸಹಕರಿಸಿದೆ.

ಪ್ರಶಸ್ತಿಯು ರೂ. 50,000/- ನಗದು ಪುರಸ್ಕಾರ ಸಹಿತ ಪ್ರಶಸ್ತಿ ಪರಿಕರಗಳನ್ನೊಳಗೊಂಡಿರುತ್ತದೆ ಎಂಬುದಾಗಿ ಪಲಿಮಾರು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶಿವಭಕ್ತ ವೀರಮಣಿ ತಾಳಮದ್ದಳೆ, ಕಲಾವಿದರ ಸಂಸ್ಮರಣೆ,  ಸನ್ಮಾನ

ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ಕಲಾವಿದರಾಗಿ, ಅರ್ಥಧಾರಿಗಳಾಗಿ ಕಲಾ ಸೇವೆ ಮಾಡಿದ ಸಹೋದರತ್ರಯದರಾದ ದಿವಂಗತ ಗಣಪತಿ ಆಚಾರ್ಯ ನೇರೆಂಕಿ, ವಿಠಲಾಚಾರ್ಯ ನೆಲ್ಯಾಡಿ, ಭಾಸ್ಕರ್ ಆಚಾರ್ಯ ಉಪ್ಪಿನಂಗಡಿ ಇವರ ಎರಡನೇ ವರ್ಷದ ಸಂಸ್ಮರಣ ಕಾರ್ಯಕ್ರಮವು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜರಗಿತು.

 ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ ಬಾರ್ಯ ವಹಿಸಿದ್ದರು.

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಕಲಾವಿದರ ಸಂಸ್ಮರಣೆಯನ್ನು ಮಾಡಿ ಕಲಾಕ್ಷೇತ್ರದಲ್ಲಿ ಅವರ ಕೊಡುಗೆಗಳನ್ನು ಸ್ಮರಿಸಿದರು.

ಸಂಸ್ಮರಣೆ ಅಂಗವಾಗಿ ಯುವ ಭಾಗವತ ಪದ್ಮನಾಭ ಕುಲಾಲ್  ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಮಕುಂಜ ಪದವಿ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬಳೆ, ಮಹಾಲಿಂಗೇಶ್ವರ ಭಟ್ ಪೆರಿಯಡ್ಕ, ಸತೀಶ್ ಆಚಾರ್ಯ  ಮಾಣಿ, ಸಂಜೀವ ಪಾರೆಂಕಿ,  ಗೋಪಾಲ್ ಶೆಟ್ಟಿ ಕಳೆಂಜ, ಹರೀಶ್ ಆಚಾರ್ಯ ಸುರತ್ಕಲ್, ಶ್ರೀಪತಿ ಭಟ್ ಉಪ್ಪಿನಂಗಡಿ ಮೊದಲಾದವರು ಉಪಸ್ಥಿತರಿದ್ದರು. 

ಗಂಗಾಧರ ಆಚಾರ್ಯ ನೇರೆಂಕಿ ಸ್ವಾಗತಿಸಿ, ಮುರಳಿಧರ ಆಚಾರ್ಯ ಬಂಟ್ವಾಳ ವಂದಿಸಿದರು . ಹರೀಶ್ ಆಚಾರ್ಯ ಬಾರ್ಯ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶಿವಭಕ್ತ ವೀರಮಣಿ ತಾಳಮದ್ದಳೆ ಜರಗಿತು. ಭಾಗವತರಾಗಿ ಡಿ.ಕೆ ಆಚಾರ್ಯ ನೇರೆಂಕಿ, ಬಿ.ವೆಂಕಟರಮಣ ರಾವ್ ಉಜಿರೆ, ಪದ್ಮನಾಭ ಕುಲಾಲ್ ಇಲಂತಿಲ ಹಿಮ್ಮೇಳದಲ್ಲಿ ಮೋಹನ ಅಲಂಕಾರ್, ಶ್ರೀಪತಿ ಭಟ್ ಉಪಿನಂಗಡಿ, ಮುರಳೀಧರ ಆಚಾರ್ಯ ಅರ್ಥದಾರಿಗಳಾಗಿ ಗಣರಾಜ ಕುಂಬ್ಳೆ(ಈಶ್ವರ) ದಿವಾಕರ್ ಆಚಾರ್ಯ ಗೇರುಕಟ್ಟೆ,(ವೀರಮಣಿ) ಗುಡ್ಡಪ್ಪ ಬಲ್ಯ, ಗೋಪಾಲ ಶೆಟ್ಟಿ ಕಲೆಂಜ(ಹನುಮಂತ) ಹರೀಶ ಬಾರ್ಯ(ಶ್ರೀ ರಾಮ), ದಿವಾಕರ ಆಚಾರ್ಯ ನೇರೆಂಕಿ (ಶತ್ರುಘ್ನ) ಭಾಗವಹಿಸಿದ್ದರು.

‘ಭೃಗು ಶಾಪ’ ತಾಳಮದ್ದಳೆ ಮತ್ತು ‘ಮಾತಿನ ಕಲೆ ತಾಳಮದ್ದಳೆ’ ಪುಸ್ತಕ ಬಿಡುಗಡೆ 

ದಿನಾಂಕ 12.03.2023ರ ಆದಿತ್ಯವಾರ ಪೂರ್ವಾಹ್ನ 10 ಘಂಟೆಗೆ ಸರಿಯಾಗಿ ಲೇಖಕ ಶ್ರೀಧರ ಡಿ.ಎಸ್ ಅವರು ಬರೆದ ‘ಮಾತಿನ ಕಲೆ ತಾಳಮದ್ದಳೆ’ ಎಂಬ ಪುಸ್ತಕದ ಬಿಡುಗಡೆ ಸಮಾರಂಭವು ಬಸವನಗುಡಿಯ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ.

ಆಮೇಲೆ  ‘ಭೃಗು ಶಾಪ’ ಎಂಬ ಪ್ರಸಂಗದ ತಾಳಮದ್ದಳೆ ಕೂಟ ನಡೆಯಲಿದೆ. ಪ್ರಸಿದ್ಧ ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.

ವಿವರಗಳಿಗೆ ಚಿತ್ರ ನೋಡಿ. 

ಸುಂದೋಪಸುಂದ ಕಾಳಗ, ರತಿ ಕಲ್ಯಾಣ – ಅಮೋಘ ಯಕ್ಷಗಾನ ಪ್ರದರ್ಶನ 

ದಿನಾಂಕ 07.03.2023ರ ಮಂಗಳವಾರ ಮೇಲೆಕ್ಕಾರು ‘ಶ್ರೀ ಭ್ರಾಮರಿ’ ಹೊಸಮನೆಯ ಮುಂಭಾಗದಲ್ಲಿ “ಸುಂದೋಪಸುಂದ ಕಾಳಗ, ರತಿ ಕಲ್ಯಾಣ” ಎಂಬ ಅಮೋಘ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಪ್ರದರ್ಶಿಸಲ್ಪಡುವ ಈ ಯಕ್ಷಗಾನ ಪ್ರದರ್ಶನ ಸಂಜೆ ಘಂಟೆ 5.45ಕ್ಕೆ ಸರಿಯಾಗಿ ಆರಂಭವಾಗಲಿದೆ. 

ಮೇಲೆಕ್ಕಾರು ‘ಶ್ರೀ ಭ್ರಾಮರಿ’ ಹೊಸಮನೆಯ ಶ್ರೀಮತಿ ಮತ್ತು ಶ್ರೀ ಶ್ಯಾಮ್ ಶೆಟ್ಟಿಯವರು ಈ ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.

ವಿವರಗಳಿಗೆ ಕರಪತ್ರದ ಚಿತ್ರವನ್ನು ನೋಡಿ. 

ಮಹಿಳೆಯನ್ನು ವಿವಿಧ ಹೋಟೆಲ್‌ಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿ, ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಹಣ ಮತ್ತು ಚಿನ್ನ ಸುಲಿಗೆ – ಯುವಕನ ಬಂಧನ

ವಿವಿಧ ಹೋಟೆಲ್‌ಗಳಿಗೆ ಮಹಿಳೆಯನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ತಿರುವನಂತಪುರ ನಗರದ ಅನ್ಸಾರ್ ಎಂದು ಗುರುತಿಸಲಾಗಿದ್ದು, ಟೆಕ್ನೋಪಾರ್ಕ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.

ಅನ್ಸಾರ್ ಮಹಿಳೆಯ ನಗ್ನ ಚಿತ್ರಗಳನ್ನು ಹಾಕಿ ಬೆದರಿಸಿ ಹಣ ಮತ್ತು ಚಿನ್ನವನ್ನು ಸುಲಿಗೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 45 ವರ್ಷದ ಮಹಿಳೆ ತನ್ನ ದೂರಿನಲ್ಲಿ ಆರೋಪಿ 12 ಲಕ್ಷ ರೂಪಾಯಿ, 19 ಪವನ್ ಚಿನ್ನ ಮತ್ತು ಕಾರನ್ನು ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

45 ವರ್ಷದ ಮಹಿಳೆ ತಿರುವನಂತಪುರಂ ನಗರದಲ್ಲಿ ಖಾಸಗಿ ಕಂಪನಿ ನಡೆಸುತ್ತಿದ್ದಾರೆ. ಕನ್ಯಾಕುಲಂಗರದಲ್ಲಿ ಬಾಡಿಗೆಗೆ ವಾಸವಾಗಿರುವ ಅನ್ಸಾರ್ ಮೂರು ವರ್ಷಗಳ ಹಿಂದೆ ಮಹಿಳೆಯನ್ನು ಭೇಟಿಯಾಗಿದ್ದ. ಇವರಿಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಸ್ನೇಹಿತರಾದರು.

ನಂತರ ಕ್ರಮೇಣ ಆಕೆಗೆ ಹತ್ತಿರವಾದ. ಆರೋಪಿಯು ಆಕೆಯ ಸಂಸ್ಥೆಗೆ ಆಗಾಗ ಭೇಟಿ ನೀಡಲಾರಂಭಿಸಿದ. ಸ್ನೇಹ ಬೆಳೆಸಿದ ಬಳಿಕ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಬೆದರಿಸಲು ಆರಂಭಿಸಿದ್ದರು. ದೂರಿನ ಪ್ರಕಾರ, ಅನ್ಸಾರ್ ಮಹಿಳೆಯನ್ನು ನಗರದ ವಿವಿಧ ಹೋಟೆಲ್‌ಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ.

ಅನ್ಸಾರ್ ತನ್ನ ನಗ್ನ ಫೋಟೋಗಳನ್ನು ಪ್ರಸಾರ ಮಾಡುವುದಾಗಿ ಮತ್ತು ಪತಿಗೆ ತಿಳಿಸುವುದಾಗಿ ಬೆದರಿಸಿ ಹಣ, ಚಿನ್ನ ಮತ್ತು ಕಾರು ಸುಲಿಗೆ ಮಾಡಿದ್ದಾನೆ. ವಟ್ಟಪ್ಪರ ಪೊಲೀಸರು ಕನ್ಯಾಕುಲಂಗರದ ಅನ್ಸಾರ್‌ನನ್ನು ಬಂಧಿಸಿದ್ದಾರೆ

ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ

ಹಿರಿಯ ಸಾಹಿತಿ, ಶಿಕ್ಷಕ, ಹರಿದಾಸ, ಜಿನದಾಸ, ಅರ್ಥಧಾರಿ, ಕಲಾವಿದ, ನಾಟಕಕಾರ ಅಂಬಾತನಯ ಮುದ್ರಾಡಿಯವರಿಗೆ ನುಡಿನಮನ ಕಾರ್ಯಕ್ರಮ ಎಲ್ಲ ಸಂಘಟನೆಗಳ ಸಹಯೋಗದೊಂದಿಗೆ ದಿನಾ0ಕ 27-02-2023ರಂದು ಎ0.ಜಿ.ಎ0.ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿತು.


ಹಿರಿಯ ವಿದ್ವಾಂಸ ಡಾ. ಎಂ.ಪ್ರಭಾಕರ ಜೋಷಿಯವರು ತಾನು ಅ0ಬಾತನ ಮುದ್ರಾಡಿಯವರೊಂದಿಗೆ ಕಳೆದ ದಿನಗಳು ಸ್ಮರಣೀಯವಾದುದು. ಧರ್ಮರಾಯ, ವಿದುರ, ಅಕ್ರೂರ ಮುಂತಾದ ಸಾತ್ವಿಕ ಪಾತ್ರಗಳನ್ನು ಅಂಬಾತನಯರು ಅತ್ಯ0ತ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದರು.

ಅಂಬಾತನಯರ0ತಹ ಸರಳ,ಸಜ್ಜನಿಕೆಯ ಸಾತ್ವಿಕ ವ್ಯಕ್ತಿಗಳನ್ನು ತಾನು ಕಂಡದ್ದು ವಿರಳ. ತೀವ್ರ ಅನಾರೋಗ್ಯದ ನಡುವೆಯೂ ಯಕ್ಷಗಾನ ಸಮ್ಮೇಳನದಲ್ಲಿ ಭಾಗವಹಿಸಿದ್ದುದು ಕಲೆ ಮತ್ತು ಸಮಾಜದ ಬಗ್ಗೆ ಅವರಿಗಿರುವ ಗಾಢವಾದ ಪ್ರೀತಿಯ ದ್ಯೋತಕವಾಗಿದೆ. ವೈಯಕ್ತಿಕವಾಗಿ ಅವರ ಅಗಲಿಕೆ ನನಗೆ ದೊಡ್ಡ ನಷ್ಟ ಎಂದು ನುಡಿದರು.

ನೀಲಾವರ ಸುರೇ0ದ್ರ ಅಡಿಗ, ಬೆಳಗೋಡು ರಮೇಶ್‌ಭಟ್, ಶ್ರೀಮತಿ ಪೂರ್ಣಿಮಾ, ಎಸ್. ವಿ.ಭಟ್, ಪ್ರೊ.ಹಿರಿಯಡ್ಕ ಮುರಲೀಧರ ಉಪಾಧ್ಯ, ಡಾ.ಪಾದೆಕಲ್ಲು ವಿಷ್ಣುಭಟ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಬಿ.ಭುವನಪ್ರಸಾದ್‌ ಹೆಗ್ಡೆ, ಡಾ.ಬಿ. ಜಗದೀಶ್ ಶೆಟ್ಟಿ, ಉದ್ಯಾವರ ನಾಗೇಶ್‌ಕುಮಾರ್, ಗಿರೀಶ್ ಶೆಟ್ಟಿಗಾರ್, ಎ. ನರಸಿಂಹ ರವಿರಾಜ್, ಎಂ. ಗಂಗಾಧರ ರಾವ್, ಪ್ರದೀಪಚಂದ್ರ ಕುತ್ಪಾಡಿ, ಪ್ರೊ.ಎಂ.ಎಲ್. ಸಾಮಗ, ವಿಶ್ವನಾಥ ಶೆಣೈ, ಪೂರ್ಣಿಮಾ ಸುರೇಶ್, ಶ್ರೀಮತಿ ಶ್ರೀ ಮುದ್ರಾಡಿ ಅಂಬಾತನಯ ಮುದ್ರಾಡಿಯವರ ಒಡನಾಟದ ನೆನಪುಗಳನ್ನು ಸ್ಮರಿಸಿಕೊಂಡರು. ವಿಜಯಕುಮಾರ್ ಮುದ್ರಾಡಿಯವರು ಧನ್ಯವಾದ ಸಲ್ಲಿಸಿದರು.

ಮುರಲಿ ಕಡೆಕಾರ್ ಮುದ್ರಾಡಿಯವರ ಕುರಿತು ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಶ್ರಾವ್ಯ ಬಾಸ್ರೀ ಮತ್ತು ಎ.ಪಿ ಪಾಠಕ್‌ ಗಾಯನ ನಮನ ಸಲ್ಲಿಸಿದರು.

ಧೀಮಂತ ಲೇಖಕ, ಶಿಕ್ಷಕ, ಹರಿದಾಸ, ತಾಳಮದ್ದಲೆ ಅರ್ಥಧಾರಿ, ವೇಷಧಾರಿ ಅಂಬಾತನಯ ಮುದ್ರಾಡಿ ನಿಧನ 

ಸಾಹಿತಿ, ಕಲಾವಿದ, ಶಿಕ್ಷಕ ಸಾತ್ವಿಕ ಮನೋಭಾವದ ಸಹೃದಯಿ ಅಂಬಾತನಯ ಮುದ್ರಾಡಿ (88)  ಇಂದು ಮುಂಜಾನೆ ನಮ್ಮನ್ನಗಲಿದ್ದಾರೆ.

ತಾಳಮದ್ದಲೆ ಅರ್ಥಧಾರಿ, ವೇಷಧಾರಿ, ಶಿಕ್ಷಕ, ಹರಿದಾಸ,ಸಾಹಿತಿ ಮೊದಲಾದ  ವಿಭಾಗಗಳಲ್ಲಿ ಜನಪ್ರಿಯರಾದ ಅಂಬಾತನಯ ಮುದ್ರಾಡಿ (ಶ್ರೀ ಕೇಶವ ಶೆಟ್ಟಿಗಾರ್) ಬಹುಮುಖೀ ಸಾಧನೆ ಮತ್ತು ಸಾತ್ವಿಕ ಮನೋಭಾವಕ್ಕೆ ಹೆಸರಾಗಿದ್ದರು. 

ಅಂಬಾತನಯ ಮುದ್ರಾಡಿ ಎಂಬುದು ಲೇಖಕ ಶ್ರೀ ಕೇಶವ ಶೆಟ್ಟಿಗಾರರ ಕಾವ್ಯನಾಮ. ಊರ ಪರಿಸರದಲ್ಲಿ ಶ್ರೀಯುತರು ಕೇಶವ ಶೆಟ್ಟಿಗಾರರೆಂದೂ ಕೇಶವ ಮಾಸ್ಟರರೆಂದೂ ಗುರುತಿಸಲ್ಪಟ್ಟರೂ ಕನ್ನಡ ಸಾಹಿತ್ಯ ಲೋಕದಲ್ಲಿ ಅಂಬಾತನಯ ಮುದ್ರಾಡಿ ಎಂಬ ಕಾವ್ಯನಾಮದಿಂದಲೇ ಪ್ರಸಿದ್ಧರು.  

ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಮುಂತಾದ ಶ್ರೇಷ್ಠ ಗೌರವಗಳು ಅವರಿಗೆ ಅರ್ಹವಾಗಿ ಸಂದಿವೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದಾರೆ.

ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಾಗಿ “ಸ್ವಪ್ರಯತ್ನದ ಧೀಮಂತ ಲೇಖಕ – ಅಂಬಾತನಯ ಮುದ್ರಾಡಿ” ಎಂಬ ಪುಸ್ತಕವು 2017ರಲ್ಲಿ ಪ್ರಕಟವಾಗಿತ್ತು.

ಅಂಬಾತನಯ  ಮುದ್ರಾಡಿಯವರು ಪತ್ನಿ, ಮೂವರು ಪುತ್ರರು, ಐವರು ಪುತ್ರಿಯರನ್ನು ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ. 

ಬೊಂಡಾಲ ಜನಾರ್ದನ ಶೆಟ್ಟಿ – ರಾಮಣ್ಣ ಶೆಟ್ಟಿ ಪ್ರಶಸ್ತಿ ಪ್ರದಾನ; “ಕಲಾಪೋಷಕರಿಂದ ಯಕ್ಷಗಾನ ಉಳಿವು”: ಅನಂತ ಆಸ್ರಣ್ಣ

ಮಂಗಳೂರು: ‘ಯಕ್ಷಗಾನವನ್ನು ನಿರಂತರವಾಗಿ ಉಳಿಸಿ, ಬೆಳೆಸಲು ಕಲಾಪೋಷಕರ ಪಾತ್ರ ಹಿರಿದು, ಬೊಂಡಾಲದಲ್ಲಿ ದೀರ್ಘಕಾಲ ಯಕ್ಷಗಾನವನ್ನು ಸೇವಾರೂಪದಲ್ಲಿ ಆಡಿಸುವುದಲ್ಲದೆ, ಕಲಾವಿದರನ್ನು ಸನ್ಮಾನಿಸುವ ಮೂಲಕ ಕಲಾಮಾತೆಯ ಸೇವೆಯನ್ನೂ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯರ್ಹ’ ಎಂದು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಹೇಳಿದ್ದಾರೆ.

ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ.ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ.ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡಲಾಗುವ ಬೊಂಡಾಲ ಪ್ರಶಸ್ತಿಯನ್ನು ಕಟೀಲು ಮೇಳದ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರಿಗೆ ಶುಕ್ರವಾರ ರಾತ್ರಿ ಬೊಂಡಾಲದಲ್ಲಿ ನಡೆದ ಯಕ್ಷಗಾನ ಬಯಲಾಟ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿ ಅವರು ಮಾತನಾಡಿದರು. ‘ಯಕ್ಷಗಾನ ಬೆಳೆಯಬೇಕು ಎಂದಿದ್ದರೆ, ಕಲಾವಿದರು ಬೇಕು, ಉತ್ತಮ ಕಲಾವಿದರನ್ನು ಗುರುತಿಸುವುದು ಕಲಾಮಾತೆಯಾದ ಶ್ರೀ ದುರ್ಗಾಪರಮೇಶ್ವರಿಯ ಸೇವೆ’ ಎಂದವರು ಹೇಳಿದರು.

           ಕಟೀಲು 6 ಮೇಳಗಳ ಯಜಮಾನ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪತ್ರಕರ್ತ ಹರೀಶ ಮಾಂಬಾಡಿ ಮುಖ್ಯ ಅತಿಥಿಗಳಾಗಿ  ಶುಭ ಹಾರೈಸಿದರು. ಪ್ರಶಸ್ತಿ ಸ್ವೀಕರಿಸಿದ ಭಾಗವತ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಮಾತನಾಡಿ, ‘ಸಾಂಪ್ರದಾಯಿಕ ಚೌಕಟ್ಟಿನಲ್ಲಿ ಬಲಿಪ ಪರಂಪರೆಯನ್ನು ಮುಂದುವರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇನೆ’ ಎಂದರು.

ಬಲಿಪರಿಗೆ ಶ್ರದ್ಧಾಂಜಲಿ:

       ಕಾರ್ಯಕ್ರಮದಲ್ಲಿ ದಿವಂಗತ ಬಲಿಪ ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ, ಯಕ್ಷಗಾನ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅವರು ಬಲಿಪ ನಾರಾಯಣ ಭಾಗವತರ ಸಂಸ್ಮರಣೆ ಮಾಡಿದರು.

   ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ನಿವೃತ್ತ ಶಿಕ್ಷಕ ನಾರಾಯಣ ಗೌಡ ಸನ್ಮಾನ ಪತ್ರ ವಾಚಿಸಿದರು. ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ ಬೊಂಡಾಲ ವಂದಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಶ್ರೀದೇವಿ ಮಹಾತ್ಮೆ’ ಬಯಲಾಟ ಜರಗಿತು.

ಎಸ್.ಡಿ.ಎಂ. ಯಕ್ಷೋತ್ಸವ ಸಮಿತಿ: ಬಲಿಪರಿಗೆ ನುಡಿನಮನ
ಯಕ್ಷರಂಗದಲ್ಲಿ ಬಲಿಪ ಪ್ರಜ್ಞೆ ಜೀವಂತ: ಡಾ.ಜೋಶಿ

ಎಸ್.ಡಿ.ಎಂ. ಯಕ್ಷೋತ್ಸವ ಸಮಿತಿ: ಬಲಿಪರಿಗೆ ನುಡಿನಮನ
ಯಕ್ಷರಂಗದಲ್ಲಿ ಬಲಿಪ ಪ್ರಜ್ಞೆ ಜೀವಂತ: ಡಾ.ಜೋಶಿ
——————————–


ಮಂಗಳೂರು: ‘ಬಲಿಪ ನಾರಾಯಣ ಭಾಗವತರದು ಮೇರು ವ್ಯಕ್ತಿತ್ವ.ಅಪಾರ ಅನುಭವ ಹೊಂದಿದ್ದರೂ ಗರ್ವವರ್ಜಿತರಾದ ನಿಜಾರ್ಥದ ಭಾಗವತ ಬಲಿಪರು. ಅವರ ಅಗಲುವಿಕೆಯ ಬಳಿಕವೂ ಯಕ್ಷರಂಗದಲ್ಲಿ ಬಲಿಪ ಪ್ರಜ್ಞೆ ಜೀವಂತವಾಗಿರುತ್ತದೆ’ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.


ಗುರುವಾರ ನಿಧನರಾದ ಪ್ರಸಿದ್ಧ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ಯಕ್ಷೋತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬಲಿಪ ಪರಂಪರೆ:
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿ ಮಾತನಾಡಿ ‘ತೆಂಕುತಿಟ್ಟು ಯಕ್ಷಗಾನದ ಪ್ರಮುಖ ಘರಾನವೆನಿಸಿದ ಬಲಿಪ ಪರಂಪರೆಯಲ್ಲಿ ಹಿರಿಯ ಅಜ್ಜ ಬಲಿಪರ ನಂತರ ಅಷ್ಟೇ ಸಮರ್ಥವಾಗಿ ಅದನ್ನು ಜನಪ್ರಿಯ ಗೊಳಿಸಿದ ಕೀರ್ತಿ ಬಲಿಪ ನಾರಾಯಣ ಭಾಗವತರಿಗೆ ಸಲ್ಲುತ್ತದೆ.

ಮಗು ಮನಸ್ಸಿನ ಅವರ ಸಾಧನೆ ಅಪಾರ. ಅಮೋಘ ಕಂಠಸಿರಿಯಿಂದ ಸಮುದಾಯವನ್ನು ಕ್ಷಣಮಾತ್ರದಲ್ಲಿ ಆವರಿಸುವ ಬಲಿಪತನ ಎಂದೆಂದಿಗೂ ಪ್ರಸ್ತುತ’ ಎಂದರು .


ಶ್ರೀ ಕೃಷ್ಣ ಯಕ್ಷಸಭಾದ ಸುಧಾಕರರಾವ್ ವೇಜಾವರ, ದೇರಳಕಟ್ಟೆ ರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅನಿವಾಸಿ ಭಾರತೀಯ ರಮೇಶ್ ಮಂಜೇಶ್ವರ, ಕಲಾಪೋಷಕ ಹರೀಶ್ ಶೆಟ್ಟಿ ಕೊಡೆತ್ತೂರು ಗುತ್ತು ಮೃತರ ಗುಣಗಾನ ಮಾಡಿದರು.

ಯಕ್ಷೋತ್ಸವ ಸಮಿತಿ ಸಂಚಾಲಕ ಪ್ರೊ. ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿ, ಪ್ರೊ.ನರೇಶ್ ಮಲ್ಲಿಗೆ ಮಾಡು ವಂದಿಸಿದರು. ಮೌನ ಪ್ರಾರ್ಥನೆಯ ಬಳಿಕ ಬಲಿಪರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.