ಶ್ರೀ ಅಳಿಕೆ ರಾಮಯ್ಯ ರೈಗಳು 1915ನೇ ಇಸವಿ ಮಾರ್ಚ್ 17ರಂದು ಅಳಿಕೆ ಮೋನಪ್ಪ ರೈ ಮತ್ತು ಮಂಜಕ್ಕೆ ದಂಪತಿಗಳ ಹಿರಿಯ ಮಗನಾಗಿ ಈ ಲೋಕದ ಬೆಳಕನ್ನು ಕಂಡರು. ಅಳಿಕೆ ರಾಮಯ್ಯ ರೈಗಳ ಅಜ್ಜ ಅಟ್ಟೆಪ್ಪಿಲ ರಾಮಣ್ಣ ರೈಗಳು ಆ ಕಾಲದ ಉತ್ತಮ ಭಾಗವತರಾಗಿದ್ದರು. ಮೋನಪ್ಪ ರೈಗಳೂ ಯಕ್ಷಗಾನ ಕಲಾವಿದರಾಗಿದ್ದರು. ಚಿಕ್ಕಪ್ಪ ದೂಮಣ್ಣ ರೈಗಳೂ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ಹೀಗೆ ಯಕ್ಷಗಾನ ಕಲೆಯು ಅಳಿಕೆ ರಾಮಯ್ಯ ರೈಗಳಿಗೆ ರಕ್ತಗತವಾಗಿ ಹರಿದು ಬಂದಿತ್ತು.
ಮನೆಯೇ ಮೊದಲ ಪಾಠಶಾಲೆಯಾಯಿತು. ಮನೆಯ ಹಿರಿಯರೇ ಗುರುಗಳಾಗಿ ಕಲಿಸಿದರು. ಅಳಿಕೆ ರಾಮಯ್ಯ ರೈಗಳು ಶಾಲೆಯಲ್ಲಿ 4ನೇ ತರಗತಿ ವರೇಗೆ ಓದಿದ್ದರು. 1927ನೇ ಇಸವಿ ಜನವರಿಯಲ್ಲಿ ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಮಾಂಬಾಡಿ ನಾರಾಯಣ ಭಾಗವತರಿಂದ ಗೆಜ್ಜೆ ಪಡೆದು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವರ ಸಾನ್ನಿಧ್ಯದಲ್ಲಿ ಅತಿಕಾಯ, ಇಂದ್ರಜಿತು, ಮೈರಾವಣ ಕಾಳಗದ ಮರಿವಾನರನಾಗಿ ರಂಗಪ್ರವೇಶ ಮಾಡಿದರು. ಶ್ರೀ ಕೋಟ್ಯಣ್ಣ ಆಳ್ವರ ಇಚ್ಲಂಪಾಡಿ ಮೇಳದಲ್ಲಿ ತಿರುಗಾಟ ಆರಂಭ.
ತಂದೆಯವರೇ ನಾಟ್ಯ, ಮಾತುಗಾರಿಕೆಗೆ ಮೊದಲ ಗುರುಗಳು. ಪುತ್ರನಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಅವರು ಗುರುತಿಸಿದ್ದರು. 1895ರಿಂದ ತೊಡಗಿ 1952ರ ವರೇಗೆ ಇಚ್ಲಂಪಾಡಿ, ಕದ್ರಿ ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿ ಹೆಸರನ್ನು ಗಳಿಸಿದ್ದರು. ಮಳೆಗಾಲದಲ್ಲಿ ನಾಟ್ಯ ಮತ್ತು ಮಾತುಗಾರಿಕೆಯನ್ನು ಅಭ್ಯಾಸಿಗಳಿಗೆ ಹೇಳಿಕೊಡುತ್ತಿದ್ದರು. ಶಿಸ್ತಿನ ಸಿಪಾಯಿಯಾಗಿದ್ದ ತಂದೆಯ ಗರಡಿಯಲ್ಲೇ ಅಳಿಕೆ ರಾಮಯ್ಯ ರೈಗಳು ಪಳಗಿದರು. ಅಲ್ಲದೆ ಹಿರಿಯ ಬಲಿಪರು, ಖ್ಯಾತ ಸ್ತ್ರೀವೇಷಧಾರಿ ಐತಪ್ಪ ಶೆಟ್ಟರು, ಅಪ್ಪು ಹಾಸ್ಯಗಾರ, ಕೋಲುಳಿ ಸುಬ್ಬ (ಬಣ್ಣದ ವೇಷಧಾರಿ) ಶ್ರೇಷ್ಠ ಕಲಾವಿದ ಕುಂಬಳೆ ಗುಂಡಣ್ಣ ಮೊದಲಾದವರ ಒಡನಾಟವೂ ಸಿಕ್ಕಿತ್ತು.
ತೀರ್ಥರೂಪರ ಜತೆ ಮುಂದೆ ಕೊಡಿಯಾಲಗುತ್ತು ಶಂಭು ಹೆಗ್ಗಡೆ ಸಂಚಾಲಕತ್ವದ ಕದ್ರಿ ಮೇಳದಲ್ಲಿ ತಿರುಗಾಟ. ಪೂರ್ವರಂಗ ಅಲ್ಲದೆ ಪ್ರಹ್ಲಾದ, ಧ್ರುವ, ಶ್ರೀಕೃಷ್ಣ, ಷಣ್ಮುಖ ಮೊದಲಾದ ವೇಷಗಳನ್ನು ಮಾಡುತ್ತಾ ಬೆಳೆಯತೊಡಗಿದರು. ಅಳಿಕೆ ಮೋನಪ್ಪ ಶೆಟ್ರಿಗೆ ಮಗನು ಯಕ್ಷಗಾನ ಕಲೆಯ ಸರ್ವಾಂಗಗಳನ್ನೂ ಅಭ್ಯಸಿಸಿ ಪರಿಪೂರ್ಣನಾಗಬೇಕೆಂಬ ಬಯಕೆ. ಭಾಗವತಿಕೆ ಕಲಿಯಲು ಮವ್ವಾರು ಕಿಟ್ಟಣ್ಣ ಭಾಗವತರ ಬಳಿಗೆ ಕರೆದೊಯ್ದರು. ಅವರು ಕಟೀಲು ಸಮೀಪದ ಕೈಯ್ಯೂರು ಶ್ಯಾಮರಾಯರೆಂಬವರ ಮನೆಯಲ್ಲಿ ವಾಸ್ತವ್ಯವಿದ್ದು ಹಾಡುಗಾರಿಕೆ, ಚೆಂಡೆಮದ್ದಳೆ ಕಲಿಸಿ ಕೊಡುತ್ತಿದ್ದರು. ರಾಮಯ್ಯ ರೈಗಳು ಅಲ್ಲೇ ಉಳಿದು ಹಿಮ್ಮೇಳ ಅಭ್ಯಸಿಸಿದರು.
ಕಲಾಪ್ರೇಮಿಗಳಾಗಿದ್ದರು ಶ್ಯಾಮರಾಯ ದಂಪತಿಗಳು. ಶ್ಯಾಮರಾಯರ ಪತ್ನಿಯಂತೂ, ತುಂಬು ಸಂಸಾರ, ಮಕ್ಕಳು, ಮರಿಗಳಿಂದ ಕೂಡಿದ ಮನೆಯಲ್ಲಿ ಪ್ರತ್ಯಕ್ಷ ಅನ್ನಪೂರ್ಣೆಯೇ ಆಗಿದ್ದರು. ಅಳಿಕೆ ರಾಮಯ್ಯ ರೈಗಳು ಮನೆಯ ಮಗನಂತೆಯೇ ಅಲ್ಲಿದ್ದು ಕಲಿತರು. ‘‘ಶ್ಯಾಮರಾಯರ ಪತ್ನಿ ರಾಜಮ್ಮನವರು ಮಗನೆಂದೇ ನನ್ನನ್ನು ಕಂಡರು. ನರಕ ಚತುರ್ದಶಿಯ ದಿನದಂದು ನನ್ನ ಮೈಗೆ ಎಣ್ಣೆ ಪೂಸಿ ಸ್ನಾನ ಮಾಡಿಸಿದರು. ಅನ್ನವಿಕ್ಕಿ ಸಲಹಿದರು. ಮನೆಯ ಸದಸ್ಯರಲ್ಲಿ ನಾನೂ ಒಬ್ಬನಾಗಿ ಹಿಮ್ಮೇಳ ಕಲಿತೆ’’- ಅಳಿಕೆ ರಾಮಯ್ಯ ರೈಗಳು ತನ್ನ ಆತ್ಮಕಥನದಲ್ಲಿ ಈ ಘಟನೆಯನ್ನು ವಿವರವಾಗಿ ಹೇಳಿರುತ್ತಾರೆ.
ಮುಂದಿನ ದಿನಗಳಲ್ಲಿ ಎಲ್ಲರೂ ಮೂಗಿನ ಮೇಲೆ ಬೆರಳಿರಿಸುವ ಘಟನೆಯೊಂದು ನಡೆದಿತ್ತು. ಜೋಕಟ್ಟೆಯಲ್ಲಿ ದ್ರೌಪದಿ ಪ್ರತಾಪ ಆಟ. ಭಾಗವತರ ಅನುಪಸ್ಥಿತಿಯಲ್ಲಿ ಅಳಿಕೆ ರಾಮಯ್ಯ ರೈಗಳು. ಭಾಗವತಿಕೆ ಮಾಡಿ ಪ್ರಸಂಗವನ್ನು ಪ್ರೇಕ್ಷಕರು ಮೆಚ್ಚುವಂತೆ ಮುನ್ನಡೆಸಿದ್ದರು! ಮವ್ವಾರು ಕಿಟ್ಟಣ್ಣ ಭಾಗವತರಿಂದ ಕಲಿತುದು ಸಾರ್ಥಕವಾಗಿತ್ತು. ಕದ್ರಿ ಮೇಳದ ನಂತರ ರಾಮಯ್ಯ ರೈಗಳ ತಿರುಗಾಟ ಕಟೀಲು ಮೇಳದಲ್ಲಿ. ಕಲ್ಲಾಡಿ ಕೊರಗ ಶೆಟ್ರ ಯಜಮಾನಿಕೆಯಲ್ಲಿ. ನಂತರ ಕರ್ನಾಟಕ ಮೇಳದಲ್ಲಂತೂ ಅಳಿಕೆ ರಾಮಯ್ಯ ರೈಗಳು ವಿಜೃಂಭಿಸಿದರು.
ಶ್ರೀ ಅಳಿಕೆ ರಾಮಯ್ಯ ರೈಗಳ ಹೆಚ್ಚಿನ ತಿರುಗಾಟಗಳೂ ಕಲ್ಲಾಡಿ ಕೊರಗ ಶೆಟ್ಟರು ಮತ್ತು ಕಲ್ಲಾಡಿ ವಿಠಲ ಶೆಟ್ಟರ ಯಜಮಾನಿಕೆಯಡಿಯಲ್ಲೇ ನಡೆದಿತ್ತು. ‘‘ಬಣ್ಣಗಾರಿಕೆಯ ಯಕ್ಷಗಾನ ಕ್ಷೇತ್ರದಲ್ಲಿ ಸರ್ವಾಂಗ ಸುಂದರ, ಪರಿಪೂರ್ಣತೆ ಪಡೆದ ವೇಷ’’ ಎಂದು ಕವಿಭೂಷಣ ವೆಂಕಪ್ಪ ಶೆಟ್ಟರು ಅಳಿಕೆ ಮೋನಪ್ಪ ಶೆಟ್ಟರಿಗೆ ಆ ಕಾಲದಲ್ಲಿ ನೀಡಿದ ಮಾತಿನ ಪ್ರಶಸ್ತಿ. ತಂದೆಯ ಜತೆಗೇ ಸಹಕಲಾವಿದನಾಗಿ ತಿರುಗಾಟ. ತೀರ್ಥರೂಪರ ಪುರುಷಪಾತ್ರಗಳಿಗೆ ಅಳಿಕೆ ರಾಮಯ್ಯ ರೈಗಳು ಸ್ತ್ರೀಪಾತ್ರಧಾರಿಯಾಗಿ ಜೀವ ತುಂಬುತ್ತಿದ್ದರು. ನಳ-ದಮಯಂತಿ, ಹರಿಶ್ಚಂದ್ರ-ಚಂದ್ರಮತಿ, ದುಶ್ಯಂತ-ಶಕುಂತಲಾ, ದಶರಥ-ಕೈಕೇಯಿ ಪಾತ್ರಗಳಲ್ಲಿ ತಂದೆ ಮಗನ ಜೋಡಿಯು ರಂಜಿಸಿತ್ತು.
ಕುಮಾರವಿಜಯ ಪ್ರಸಂಗದ ಮಾಯಾ ಅಜಮುಖಿ ಪಾತ್ರವನ್ನು ನೋಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆಯವರು- ‘‘ನಿನಗೆ ಯಕ್ಷಗಾನದಲ್ಲಿ ಉಜ್ವಲ ಭವಿಷ್ಯವಿದೆ. ಮುಂದುವರಿಸು’’- ಎಂದು ಆಶೀರ್ವದಿಸಿದ್ದರು. ಅಳಿಕೆಯವರು ಯಾವ ವೇಷಗಳನ್ನೂ ಮಾಡ ಬಲ್ಲರು. ಮಾತ್ರವಲ್ಲ, ಮಾಡಿ ಮಿಂಚಿದವರು. ಪಾತ್ರದ ಸ್ವಭಾವವನ್ನರಿತು ಕೊರತೆಯಾಗದಂತೆ ಅಭಿನಯಿಸಬಲ್ಲ ಕಲೆ ಇವರಿಗೆ ಸಿದ್ಧಿಯಾಗಿತ್ತು. ಕಲಿಕೆಯ ಆಸಕ್ತಿ ಮತ್ತು ಎಳವೆಯಿಂದಲೇ ಯಕ್ಷಗಾನದ ಆವರಣದೊಳಗೇ ಬೆಳೆದುದು ಇದಕ್ಕೆ ಕಾರಣವಿರಬಹುದು.
ಹಿರಿಯ ಬಲಿಪ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಶ್ರೀ ದಾಮೋದರ ಮಂಡೆಚ್ಚ ಇವರುಗಳ ಭಾಗವತಿಕೆಯಲ್ಲಿ ಅಳಿಕೆಯವರ ವೇಷಗಳು ರಂಜಿಸಿದವು. ಮಂಡೆಚ್ಚರ ಭಾಗವತಿಕೆಯಲ್ಲಿ ಇವರ ಋತುಪರ್ಣ, ಹರಿಶ್ಚಂದ್ರ, ಕರ್ಣ, ಸುಧನ್ವ ಮೊದಲಾದ ಪಾತ್ರಗಳು ಮೆರೆದವು. ಕರ್ನಾಟಕ ಮೇಳದಲ್ಲಿ ಮಂಡೆಚ್ಚರು, ಹರಿದಾಸ ರಾಮದಾಸ ಸಾಮಗರು, ಬೋಳಾರ ನಾರಾಯಣ ಶೆಟ್ಟಿ, ಮಾಧವ ಶೆಟ್ಟಿ, ಮೂಡುಬಿದಿರೆ ಕಿಟ್ಟಣ್ಣ, ಕ್ರಿಶ್ಚನ್ ಬಾಬು, ಮಿಜಾರು ಅಣ್ಣಪ್ಪ, ನಾರಂಪಾಡಿ ಸುಬ್ಬಯ್ಯ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾಯರು, ಮಂಕುಡೆ ಸಂಜೀವ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ ಮೊದಲಾದವರು ಸಹಕಲಾವಿದರಾಗಿದ್ದವರು.
ಕರ್ನಾಟಕ ಮೇಳವು ತಿರುಗಾಟವನ್ನು ನಿಲ್ಲಿಸಿದಾಗ ಮತ್ತೆ ಕಟೀಲು ಮೇಳದಲ್ಲಿ ವ್ಯವಸಾಯ ಮಾಡಿ ಅಳಿಕೆ ರಾಮಯ್ಯ ರೈಗಳು ಸ್ವಯಂ ನಿವೃತ್ತಿಯನ್ನು ಹೊಂದಿದವರು. ಪುಂಡುವೇಷ, ಸ್ತ್ರೀವೇಷ, ಕಿರೀಟ ವೇಷ- ಹೀಗೆ ಎಲ್ಲಾ ವಿಭಾಗಗಳಲ್ಲೂ ಹೊಳೆದು ಕಾಣಿಸಿಕೊಂಡರು. ಎಲ್ಲಾ ಪಾತ್ರಗಳಲ್ಲೂ ಸಲೀಸಾಗಿ ಅಭಿನಯಿಸುತ್ತಿದ್ದ ಕಾರಣವೇ ಯಕ್ಷಗಾನದ ನವರಸ ನಾಯಕನೆಂದು ಪ್ರಸಿದ್ಧರಾದರು. ದುಷ್ಯಂತ, ನಳ, ಅತಿಕಾಯ, ಹಿರಣ್ಯಾಕ್ಷ, ಇಂದ್ರಜಿತು, ಋತುಪರ್ಣ, ಕರ್ಣ, ಹನೂಮಂತ, ಕೌರವ, ರಕ್ತಬೀಜ, ಅರ್ಜುನ, ಕೀಚಕ, ಅಭಿಮನ್ಯು, ಬಭ್ರುವಾಹನ, ಶ್ವೇತಕುಮಾರ, ಚಂದ್ರಮತಿ, ದಮಯಂತಿ, ಶಕುಂತಲೆ, ಅಂಬೆ, ಮಂಡೋದರಿ ಅಲ್ಲದೆ ಇನ್ನೂ ಅನೇಕ ಪಾತ್ರಗಳು ಅಳಕೆಯವರಿಗೆ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದವು.
ರಾಜ್ಯಪ್ರಶಸ್ತಿ ಪಡೆದ ಮೊದಲ ತೆಂಕಿನ ಕಲಾವಿದನೆಂಬ ಗೌರವಕ್ಕೂ ಪಾತ್ರರಾದರು. ಅಳಿಕೆಯವರ ಸಾಧನೆಗೆ ಅನೇಕ ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿವೆ. 1926ರಿಂದ ತೊಡಗಿ 1984ರ ವರೇಗೆ ಕಲಾಸೇವೆಯನ್ನು ಮಾಡಿ ಪುರಾಣ ಅಲ್ಲದೆ ಅನೇಕ ತುಳು ಪ್ರಸಂಗಗಳಲ್ಲಿ ಕಾಣಿಸಿಕೊಂಡರು. ಜೋಡಾಟಗಳಲ್ಲಿ ರಂಜಿಸಿದವರು. ಸ್ಪರ್ಧಾತ್ಮಕವಾದ ಜೋಡಾಟಗಳಲ್ಲಿ ಇವರನ್ನು ಸೋಲಿಸಲೆಂದೇ ವ್ಯೂಹವನ್ನು ಬಲಿದರೂ ಅಳಿಕೆ ರಾಮಯ್ಯ ರೈಗಳು ಗೆಲುವಿನ ನಗೆಯನ್ನು ಬೀರಿದ ಸಾಧಕ. ದೊಡ್ಡ ಸಾಮಗರು, ಶೇಣಿ, ರಾಮದಾಸ ಸಾಮಗರೊಂದಿಗೆ ಇವರು ಹಲವಾರು ವೇಷಗಳನ್ನು ಮಾಡಿ ಸೈ ಎನಿಸಿಕೊಂಡರು. ದೊಡ್ಡ ಸಾಮಗರ ಭೀಷ್ಮನಿಗೆ ಅಂಬೆಯಾಗಿ, ಶೇಣಿಯವರ ವೀರಮಣಿಗೆ ಹನೂಮಂತನಾಗಿ ಅವರ ಅಭಿನಯವನ್ನು ಹಿರಿಯರು ಇಂದಿಗೂ ನೆನಪಿಸುತ್ತಾರೆ.
2012ರಲ್ಲಿ ಡಾ. ನಿತ್ಯಾನಂದ ಬಿ. ಶೆಟ್ಟಿಯವರ ಸಂಪಾದಕತ್ವದಲ್ಲಿ ‘ಅಳಿಕೆ’- ಯಕ್ಷಗಾನದ ಮೇರುಕಲಾವಿದ ಅಳಿಕೆ ರಾಮಯ್ಯ ರೈ, ಸ್ಮೃತಿ-ಕೃತಿ ಎಂಬ ಪುಸ್ತಕವು ಹೊರಬಂದಿತ್ತು. ಇದರ ಪ್ರಕಾಶಕರು ‘ದೆಹಲಿ ಮಿತ್ರ’ ಸಂಸ್ಥೆ. ಇವರಲ್ಲಿ ಅಳಿಕೆಯವರ ಆತ್ಮಕಥನವು ಮನೋಜ್ಞವಾಗಿ ಅಕ್ಷರ ರೂಪದಲ್ಲಿದೆ. ಆ ಕಾಲದ ಯಕ್ಷಗಾನದ ಸ್ವರೂಪ, ಬೆಳೆದು ಬಂದ ದಾರಿ, ಯಕ್ಷಗಾನಕ್ಕೆ ಪೂರಕ ಮಾರಕವಾಗಬಲ್ಲ ವಿಚಾರಗಳು, ನಿಜವಾದ ಭಾಗವತನು ಹೇಗಿರಬೇಕು? ಕಲಾವಿದರು ಹೇಗಿರಬೇಕು? ಕಲಿಕಾಸಕ್ತ ಕಲಾವಿದರು ಹೇಗಿರಬೇಕು? ಎಂಬ ಬಗೆಗೆ ಅಳಿಕೆಯವರು ತನ್ನ ಆತ್ಮಕಥನದಲ್ಲಿ ತಿಳಿಸಿದ್ದಾರೆ. ತನ್ನ ಬದುಕನ್ನು ಯಕ್ಷಗಾನಕ್ಕಾಗಿಯೇ ಸವೆಸಿ 1989ರಲ್ಲಿ ಅಳಿಕೆ ರಾಮಯ್ಯ ರೈಗಳು ಅವ್ಯಕ್ತ ಪ್ರಪಂಚವನ್ನು ಸೇರಿಕೊಂಡರು. ಬಹಳಷ್ಟನ್ನು ಯಕ್ಷಗಾನಕ್ಕಾಗಿ ನೀಡಿ ಕಣ್ಮರೆಯಾದ ಅವರಿಗೆ ಕಲಾಭಿಮಾನಿ ಗಳೆಲ್ಲರ ಪರವಾಗಿ ನಮನಗಳು.
ಕೋವಿಡ್ ಲಸಿಕೆಯ 22 ಲಕ್ಷ ಡೋಸೇಜ್ ಬಂಗಾಳದಲ್ಲಿ ಬಳಕೆಯಾಗದೆ ಉಳಿದಿದೆ ಎಂದು ಕೇಂದ್ರ ಮಮತಾ ಬ್ಯಾನರ್ಜಿಗೆ ತಿರುಗೇಟು ನೀಡಿದೆ. ಪಶ್ಚಿಮ ಬಂಗಾಳದ ಇನಾಕ್ಯುಲೇಷನ್ ಡ್ರೈವ್ಗಾಗಿ ಇದುವರೆಗೆ 52.90 ಲಕ್ಷ ಲಸಿಕೆಗಳನ್ನು ಕಳುಹಿಸಲಾಗಿದೆ ಎಂದು ಬಹಿರಂಗಪಡಿಸಿದ ಕೇಂದ್ರ ಇದರಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ರಮಾಣದ ಲಸಿಕೆಗಳನ್ನು ಇನ್ನೂ ಬಳಸದೆ ಇರುವುದನ್ನು ಉಲ್ಲೇಖಿಸಿದೆ.
ಇಷ್ಟೆಲ್ಲಾ ಮಾಡಿಯೂ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿಯವರು ಕರೆದ ಮುಖ್ಯಮಂತ್ರಿಗಳ ಸಭೆಗೆ ಹಾಜರಾಗದೆ ಇರುವ ತನ್ನ ಚಾಳಿಯನ್ನು ಮುಂದುವರಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಕ್ಕೆ ಲಸಿಕೆ ಪ್ರಮಾಣವನ್ನು ಕೇಂದ್ರವು ತಡೆಹಿಡಿದಿದ್ದಾರೆ ಎಂದು ಆರೋಪಿಸಿ COVID-19 ವ್ಯಾಕ್ಸಿನೇಷನ್ ಡ್ರೈವ್ ಅನ್ನು ರಾಜಕೀಯಗೊಳಿಸಲು ಪ್ರಯತ್ನಿಸಿದ ನಂತರ, ಕೇಂದ್ರವು ಪಶ್ಚಿಮ ಬಂಗಾಳದ ಲಸಿಕೆ ಡೇಟಾವನ್ನು ಬಿಡುಗಡೆ ಮಾಡುವ ಮೂಲಕ ಅವರಿಗೆ ಸೂಕ್ತ ತಿರುಗೇಟು ನೀಡಿದೆ.
ಯಾವುದೇ ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಇಲ್ಲ. ಪ್ರತಿದಿನ, ನಾವು ರಾಜ್ಯಗಳಿಗೆ ನೀಡಲಾಗುವ ಲಸಿಕೆಗಳ ಡೇಟಾವನ್ನು ಬಿಡುಗಡೆ ಮಾಡಿದ್ದೇವೆ. ಯಾವುದೇ ರಾಜ್ಯದ ಇಂತಹ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ”ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಅವರು COVID-19 ಲಸಿಕೆಗಳನ್ನು ನ್ಯಾಯಯುತವಾಗಿ ನೀಡುವ ಬಗ್ಗೆ ಪ್ರತಿಪಾದಿಸಿದರು, ಹೆಚ್ಚಿನ ಪ್ರಮಾಣದಲ್ಲಿ ಬೇಡಿಕೆ ನೀಡುವ ಮೊದಲು ರಾಜ್ಯಗಳು ತಮ್ಮಲ್ಲಿ ಮೊದಲೇ ಇರುವ ಲಸಿಕೆ ದಾಸ್ತಾನುಗಳನ್ನು ಮೊದಲು ಬಳಸಬೇಕೆಂದು ಒತ್ತಾಯಿಸಿದರು. ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಾಸ್ತವಿಕವಾಗಿ ನಿರ್ಣಾಯಕ ಸಭೆ ನಡೆಸುವಾಗ, ವ್ಯರ್ಥವಾಗುವುದನ್ನು ತಡೆಯಲು ಲಸಿಕೆಗಳ ಬಳಕೆಯನ್ನು ಮೇಲ್ವಿಚಾರಣೆ ಮಾಡುವ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಚೀನಾಕ್ಕೆ ಪ್ರಯಾಣಿಸುವ ಭಾರತೀಯರು ಮತ್ತು ವಿದೇಶಿಯರು ‘ಮೇಡ್ ಇನ್ ಚೀನಾ’ ಲಸಿಕೆ ಪಡೆಯಬೇಕು ಎಂದು ಭಾರತದ ಚೀನೀ ರಾಯಭಾರ ಕಚೇರಿ ಹೇಳಿದ ಒಂದು ದಿನದ ನಂತರ, ಕರ್ನಾಟಕದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಚೀನಾ ಜಾರಿಗೆ ತಂದಿರುವ ಕ್ರಮಗಳ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರಿಗಾಗಿ. ‘ಚೀನಾ ತಮ್ಮ ದೇಶಕ್ಕೆ ಪ್ರಯಾಣಿಸುವ ಭಾರತೀಯರಿಗೆ ತಮ್ಮದೇ ದೇಶದ ಲಸಿಕೆಗಳನ್ನು ಕಡ್ಡಾಯಗೊಳಿಸಿರುವುದು ದುರದೃಷ್ಟಕರ’ ಎಂದು ಅವರು ಹೇಳಿದರು. ಕರ್ನಾಟಕ ಆರೋಗ್ಯ ಸಚಿವರು, “ಚೀನಾದ ಲಸಿಕೆಗಳನ್ನು ಪಡೆಯುವವರಿಗೆ ಮಾತ್ರ ಚೀನಾದೊಳಗೆ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದು ಚೀನಾ ಹೇಳುತ್ತಿರುವುದು ತುಂಬಾ ದುರದೃಷ್ಟಕರ” ಎಂದು ಹೇಳಿದರು.
ಚೀನಾ ಆದೇಶದ ಕುರಿತು ಹೆಚ್ಚಿನ ವಿವರಗಳನ್ನು ಕೇಳಿದಾಗ, “ಈ ಕುರಿತು ಹೆಚ್ಚಿನ ವಿವರಗಳ ಬಗ್ಗೆ ನನಗೆ ತಿಳಿದಿಲ್ಲ. ವಿದೇಶಾಂಗ ಸಚಿವಾಲಯವು ಇದನ್ನು ಪರಿಶೀಲಿಸುತ್ತದೆ” ಎಂದು ಹೇಳಿದರು.
ಕೋವಿಡ್ -19 ವಿರುದ್ಧ ಭಾರತದಲ್ಲಿ ಇಲ್ಲಿಯವರೆಗೆ ಯಾವುದೇ ಚೀನೀ ಲಸಿಕೆಗಳು ಬಳಕೆಯಲ್ಲಿಲ್ಲ ಎಂದು ಗಮನಿಸಬೇಕು, ಆದರೆ ಭಾರತ ದೇಶವು ಆಗಮಿಸುವ ವಿದೇಶಿ ಪ್ರಜೆಗಳಿಗೆ ಅಂತಹ ಯಾವುದೇ ಆದೇಶಗಳನ್ನು ನೀಡಿಲ್ಲ. ಚೀನಾದ ಲಸಿಕೆ ಹಾಕಿದವರಿಗೆ ಮಾತ್ರ ದೇಶದೊಳಗೆ ಅವಕಾಶ ನೀಡಲಾಗುವುದು ಎಂಬ ಷರತ್ತಿನ ಮೇರೆಗೆ ಭಾರತೀಯ ಪ್ರಯಾಣಿಕರಿಗೆ ವೀಸಾ ಅರ್ಜಿಗಳನ್ನು ಸರಳೀಕರಿಸುವುದಾಗಿ ಚೀನಾ ರಾಯಭಾರ ಕಚೇರಿ ಮಂಗಳವಾರ ಪ್ರಕಟಿಸಿತ್ತು.
ಬೆಂಗಳೂರು-ಜೈಪುರ ಇಂಡಿಗೊ ವಿಮಾನದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಯವರು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಡಾ. ಸುಬಹಾನಾ ನಜೀರ್ ಅವರ ನೆರವು ಲಭಿಸಿತು.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆ ಡಾ ಸುಬಹಾನಾ ನಜೀರ್ ಅವರು ಇಂಡಿಗೊ ಸಿಬ್ಬಂದಿಯ ಸಹಾಯದಿಂದ ಅದೇ ವಿಮಾನದಲ್ಲಿ ಮಹಿಳೆಯನ್ನು ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು.
“ವಿಮಾನದಲ್ಲಿದ್ದ ವೈದ್ಯರು ಸಿಬ್ಬಂದಿಯ ಸಹಾಯದಿಂದ ಮಗುವನ್ನು ಹೆರಿಗೆ ಮಾಡಿಸಿದರು. ಹೆಣ್ಣು ಮಗು ಜನಿಸಿದ ನಂತರ ಜೈಪುರ ವಿಮಾನ ನಿಲ್ದಾಣಕ್ಕೆ ವೈದ್ಯರು ಮತ್ತು ಆಂಬುಲೆನ್ಸ್ ಆಗಮಿಸಲು ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ” ಎಂದು ಇಂಡಿಗೊ ಸಂಸ್ಥೆ ತಿಳಿಸಿದೆ.
ಬಿಜೆಪಿ ಮಂಡಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರು ತನ್ನ ದೆಹಲಿ ಮನೆಯಲ್ಲಿ ಮೃತಪಟ್ಟಿದ್ದಾರೆ. ದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ.
ಹಿಮಾಚಲ ಪ್ರದೇಶದ ಮಂಡಿಯ ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ಅವರು ದೆಹಲಿಯ ಗೋಮತಿ ಅಪಾರ್ಟ್ ಮೆಂಟ್ ನಲ್ಲಿ ಬುಧವಾರ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಮೂಲಗಳ ಪ್ರಕಾರ, ಶವವನ್ನು ಮರಣೋತ್ತರ ಪರೀಕ್ಷೆಗೆ ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.
Delhi: The body of BJP MP Ram Swaroop Sharma being brought out of his residence. MoS Finance and Corporate Affairs Anurag Thakur reaches the spot. pic.twitter.com/Dsek4KrbVi
ಬಿಜೆಪಿ ಸಂಸದರ ನಿವಾಸದಲ್ಲಿದ್ದ ಪೊಲೀಸರು ಪ್ರಸ್ತುತ ಇದು ಆತ್ಮಹತ್ಯೆಯಿಂದ ಸಾವನ್ನಪ್ಪಿದ ಪ್ರಕರಣವೇ ಎಂದು ತನಿಖೆ ನಡೆಸುತ್ತಿದ್ದೇವೆ, ಏಕೆಂದರೆ ಅವರ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಅವರು ಒಬ್ಬ ಸಿಬ್ಬಂದಿಯಿಂದ ಕರೆ ಸ್ವೀಕರಿಸಿದ್ದಾರೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದರು, ಮತ್ತು ಆತನು ರಾಮ್ ಸ್ವರೂಪ್ ಶರ್ಮಾ ಅವರ ನಿವಾಸವನ್ನು ತಲುಪಿದಾಗ, ಅವರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದರು ಮತ್ತು ಒಳಗಿನಿಂದ ಬಾಗಿಲು ಮುಚ್ಚಿತ್ತು ಎಂದು ತಿಳಿದುಬಂದಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಿಜೆಪಿ ತನ್ನ ಸಂಸದೀಯ ಸಭೆಯನ್ನು ರದ್ದುಪಡಿಸಿದೆ ಪಶ್ಚಿಮ ಬಂಗಾಳ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಬುಧವಾರ ನಡೆಯಬೇಕಿದ್ದ ಬಿಜೆಪಿ ಸಂಸದೀಯ ಸಭೆ ಬಿಜೆಪಿ ಸಂಸದರ ನಿಧನದ ನಂತರ ಈಗ ರದ್ದುಗೊಂಡಿದೆ.
1958 ರಲ್ಲಿ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಜನಿಸಿದ ಶರ್ಮಾ ಮೊದಲ ಬಾರಿಗೆ ಲೋಕಸಭೆಗೆ 2014 ರಲ್ಲಿ ಆಯ್ಕೆಯಾದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರನ್ನು ಮತ್ತೆ ಮಂಡಿಯಿಂದ ಮರು ಆಯ್ಕೆ ಮಾಡಲಾಯಿತು. ಅವರು ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದರು. ರಾಮ್ ಸ್ವರೂಪ್ ಶರ್ಮಾ ಅವರಿಗೆ ಪತ್ನಿ ಮತ್ತು ಮೂವರು ಗಂಡು ಮಕ್ಕಳಿದ್ದಾರೆ. ಸಂಸದರ ನಿಧನಕ್ಕೆ ಪ್ರಧಾನಿ, ಗೃಹ ಸಚಿವರು ಮತ್ತು ಇತರ ಹಿರಿಯ ಕ್ಯಾಬಿನೆಟ್ ಮಂತ್ರಿಗಳು ಮತ್ತು ಬಿಜೆಪಿಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
‘ಆ ಲೋಚನ’ ಒಂದು ವಿಭಿನ್ನ ವಿಶಿಷ್ಟ ಕೃತಿ. ಲೋಚನ ಎಂದರೆ ಕಣ್ಣು. ಆ ಲೋಚನ ಎಂದರೆ ಒಳಗಣ್ಣು ಎಂದು ಭಾವಿಸಿದರೆ ತಪ್ಪಲ್ಲ. ಲೇಖಕ ಕಲಾವಿದ ಶ್ರೀ ರಾಧಾಕೃಷ್ಣ ಕಲ್ಚಾರರು ತನ್ನ ಒಳಗಣ್ಣ ನೋಟಕ್ಕೆ ಆಹಾರವಾದ ಉತ್ಕೃಷ್ಟ ವಿಚಾರಗಳಿಗೆ ಇಲ್ಲಿ ಬರಹ ರೂಪ ನೀಡಿದ್ದಾರೆ.
ಹೊಸದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾದ ‘ಆ ಲೋಚನ’ ಎಂಬ ಅಂಕಣದಲ್ಲಿ ಪ್ರಕಟವಾದ ಲೇಖನಗಳನ್ನು ಒಟ್ಟುಗೂಡಿಸಿ ಅದೇ ಹೆಸರಿನಲ್ಲಿ ಪುಸ್ತಕವನ್ನು ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಕೆಲವು ಲೇಖನಗಳನ್ನು ನಾನು ಈ ಮೊದಲೇ ಪತ್ರಿಕೆಯಲ್ಲಿ ಓದಿದ್ದೆನಾದರೂ ಎಲ್ಲವನ್ನೂ ಓದಲಾಗಿರಲಿಲ್ಲ.
ಆದರೆ ಲೇಖಕ ರಾಧಾಕೃಷ್ಣ ಕಲ್ಚಾರರೇ ಹೇಳುವಂತೆ ಒಟ್ಟಾಗಿ ಪುಸ್ತಕ ರೂಪದಲ್ಲಿ ಓದುವ ಅನುಭವವೇ ಬೇರೆ. ಈ ಪುಸ್ತಕದಲ್ಲಿರುವ ಪ್ರತಿಯೊಂದು ಲೇಖನವೂ ನಮ್ಮನ್ನು ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ಮಾತ್ರವಲ್ಲ, ಎಲ್ಲ ಲೇಖನಗಳಲ್ಲಿಯೂ ಉತ್ಕೃಷ್ಟ ಜೀವನ ಸಂದೇಶಗಳಿವೆ. ಮಾನವ ಬದುಕಿನ ಪಾಠಗಳಿವೆ. ಈ ದೃಷ್ಟಿಯಲ್ಲಿ ‘ಆ ಲೋಚನ’ ಪುಸ್ತಕ ಪ್ರಪಂಚದಲ್ಲಿ ಮಹತ್ವವನ್ನು ಪಡೆಯುತ್ತದೆ.
ಜೀವನವೆಂಬುದು ಒಂದು ಪಾಠಶಾಲೆಯಿದ್ದಂತೆ. ಇಲ್ಲಿ ಅನವರತವೂ ನಾವು ಬದುಕಲು ಕಲಿಯಬೇಕಾಗುತ್ತದೆ. ಕಲ್ಚಾರರ ಎಲ್ಲಾ ಲೇಖನಗಳೂ ಈ ದಿಸೆಯಲ್ಲಿ ದಿಕ್ಸೂಚಿಯ ಹಾಗೆ ಕೆಲಸ ಮಾಡುತ್ತದೆ. ನಮ್ಮನ್ನು ಪದೇ ಪದೇ ಆಲೋಚಿಸುವಂತೆ ಮಾಡುತ್ತದೆ ಎಂಬುದು ಈ ಪುಸ್ತಕವನ್ನು ಓದಿದ ಯಾರಿಗಾದರೂ ಅರ್ಥವಾಗುವ ವಿಚಾರ.
ಲೇಖಕರು ಇಲ್ಲಿ ಸರಳ, ಸುಂದರ ಭಾಷೆಯಿಂದಲೂ ಸುಲಲಿತ ಜೀವನಕ್ಕೆ ಹಿತವೆನಿಸುವ ಸಲಹೆಗಾರನಾಗಿಯೂ ಓದುಗರ ಮನಸ್ಸಿಗೆ ಹತ್ತಿರವಾಗುತ್ತಾರೆ. ಇಷ್ಟವಾಗುತ್ತಾರೆ. ಲೇಖಕ ಕಲ್ಚಾರರು ಈ ಬರಹಗಳ ಗುಚ್ಛದಲ್ಲಿ ಹಲವಾರು ವಿಭಿನ್ನ ವಿಚಾರ, ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಸಮಸ್ಯೆಗಳನ್ನು ಎತ್ತಿ ತೋರಿಸುವುದರ ಜೊತೆಗೆ ಪರಿಹಾರಗಳನ್ನೂ ಸೂಚಿಸಿದ್ದಾರೆ. ಕೆಲವೊಮ್ಮೆ ಲೇಖಕರು ಒಬ್ಬ ಮಾನಸಿಕ ಸಲಹೆಗಾರನ ರೂಪದಲ್ಲಿ ಮನಸ್ಸಿಗೆ ಹತ್ತಿರವಾಗುತ್ತಾರೆ. ಪುಸ್ತಕದ ಓದು ನಮ್ಮನ್ನು ಮತ್ತೆ ಮತ್ತೆ ಚಿಂತಿಸುವಂತೆ ಮಾಡುತ್ತದೆ. ನಮ್ಮದೇ ತಪ್ಪು ಒಪ್ಪುಗಳ ಬಗ್ಗೆ ಮನಸ್ಸು ಆತ್ಮಾವಲೋಕನ ಮಾಡುವಂತೆ ಪ್ರೇರೇಪಿಸುತ್ತದೆ.
ಸ್ವತಃ ತಾಳಮದ್ದಳೆಯ ಅರ್ಥಧಾರಿಯಾಗಿರುವ ಲೇಖಕರು ಈ ಲೇಖನಗಳಲ್ಲಿ ಹಲವಾರು ಸಂದರ್ಭಗಳಲ್ಲಿ ಪ್ರಸ್ತುತ ಜೀವನದ ಆಗುಹೋಗುಗಳನ್ನು ಪೌರಾಣಿಕ ಘಟನೆಗಳೊಂದಿಗೆ ಹೋಲಿಸಿ ಸಮೀಕರಿಸುತ್ತಾರೆ. ಇದು ಓದುಗರ ಮೇಲೆ ಅದ್ಭುತ ಪರಿಣಾಮವನ್ನು ಬೀರಲು ಸಾಧ್ಯವಿದೆ. ಬಂಟ್ವಾಳದ ಸೇವಂತಿ ಪ್ರಕಾಶನದವರು ಪ್ರಕಟಿಸಿದ ಈ ಕೃತಿ ‘ಆ ಲೋಚನ’ ಶ್ರೇಷ್ಠ ಬರಹಗಳ ಗುಚ್ಛ ಎಂದು ನಿಸ್ಸಂಶಯವಾಗಿ ಹೇಳಬಹುದು.
‘ಆ ಲೋಚನ’ ಪುಸ್ತಕದ ಲೇಖಕರು: ಶ್ರೀ ರಾಧಾಕೃಷ್ಣ ಕಲ್ಚಾರ್, ವಿಟ್ಲ. ದೂರವಾಣಿ: 9449086653, email: [email protected]
ಪ್ರತಿದಿನವೂ ಸಂಜೆ ಹೊತ್ತು ಮನೆಯಲ್ಲಿ ಪಾಠ. ಶಿಷ್ಯರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಗಿತ್ತು. ಉರವರೆಲ್ಲರಿಗೂ ಮಾಸ್ತರರು ಅತಿ ಪ್ರಿಯರಾಗಿದ್ದರು. ಗುರುಗಳೆಂದೇ ಸಂಭೋದಿಸಿ ಗೌರವಿಸುತ್ತಿದ್ದರು. ಪಾಠದ ಜೊತೆ ಕೂಟಗಳನ್ನೂ ನಡೆಸಲಾರಂಭಿಸಿದರು. ಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕಲಿಸುವ ಕಲೆಯು ಮಾಸ್ತರರಿಗೆ ಕೀರಿಕ್ಕಾಡಿನಲ್ಲಿರುವಾಗಲೇ ಕರಗತವಾಗಿತ್ತು.
ಕಲಿಕಾಸಕ್ತರಾಗಿ ಬರುವವರ ಸಂಖ್ಯೆ ಹೆಚ್ಚಾದುದು ಇದೇ ಕಾರಣದಿಂದ. ನಾಯಕತ್ವ, ಸಂಘಟನಾ ಕೌಶಲವೂ ರಕ್ತಗತವಾಗಿಯೇ ಬಂದಿತ್ತು. 1944ನೇ ಇಸವಿಯಲ್ಲಿ (ಕೀರಿಕ್ಕಾಡಿನಿಂದ ಬನಾರಿಗೆ ಬಂದ ಮಾರನೇ ವರ್ಷ) ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಕೀರಿಕ್ಕಾಡು ಸಮೀಪದ ಮುನಿಯೂರು ಶ್ರೀ ಗೋಪಾಲಕೃಷ್ಣ ದೇವರ ಪರಮ ಭಕ್ತರಾಗಿದ್ದರು ಮಾಸ್ತರರು. ತಮ್ಮ ಇಷ್ಟ ದೇವರ ಹೆಸರಿನಲ್ಲಿಯೇ ಸಂಸ್ಥೆಯನ್ನು ಆರಂಭಿಸಿ ಯಕ್ಷಗಾನ ಸಂಬಂಧೀ ಚಟುವಟಿಕೆಗಳಲ್ಲಿ ತೊಡಗಿದರು.
ಯಕ್ಷಗಾನ ತರಗತಿಗಳನ್ನು ನಡೆಸಲು ಮನೆಯ ಹತ್ತಿರವೇ ಸೋಗೆ ಮಾಡಿನ ಕಟ್ಟಡವನ್ನು ನಿರ್ಮಿಸಿದ್ದರು. ಅದನ್ನು ನಾಟಕ ಶಾಲೆ ಎಂದು ಎಲ್ಲರೂ ಕರೆಯುತ್ತಿದ್ದರು. ಆಗ ಬಯಲಾಟಗಳು ನಡೆಯುತ್ತಿರಲಿಲ್ಲ. ಯಕ್ಷಗಾನ ನಾಟಕ ನಡೆಯುತ್ತಿತ್ತು. ಹಾಗಾಗಿ ನಾಟಕ ಶಾಲೆ ಎಂಬ ಹೆಸರಾಯಿತು. 1944ರಲ್ಲಿ ಶಿಷ್ಯಂದಿರನ್ನು ಸಿದ್ದಗೊಳಿಸಿ ಪ್ರಥಮ ವಾರ್ಷಿಕೋತ್ಸವವನ್ನೂ ನಡೆಸಿದ್ದರು. ದೇಲಂಪಾಡಿ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವದಲ್ಲಿ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು , ದೊಡ್ಡ ಸಾಮಗರು, ನಾರಾಯಣ ಕಿಲ್ಲೆಯವರು, ಫಕೀರ ಶೆಟ್ಟಿಯವರು, ಮೊದಲಾದವರು ಭಾಗವಹಿಸಿದ್ದರು.
ಮಳೆಗಾಲದ ತಾಳಮದ್ದಲೆಗಳನ್ನೂ ದೇಲಂಪಾಡಿ ಶಾಲೆಯಲ್ಲಿ ನಡೆಸುತ್ತಿದ್ದರು. ವಾರಕ್ಕೊಂದು ತಾಳಮದ್ದಳೆ ನಿರಂತರ. ಬನಾರಿ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕಾರ್ಯಕ್ರಮಗಳಲ್ಲಿ ಅಡೂರು ಶಿವ ಮದ್ದಳೆಗಾರರು, ಅಣ್ಣಿ ಭಾಗವತರು, ನಡುಮನೆ ಜತ್ತಪ್ಪ ರೈಗಳು, ಈಶ್ವರಯ್ಯ ಭಾಗವತರು, ಪೊಳಲಿ ಶಾಸ್ತ್ರಿಗಳು, ಪುಂಡೂರು ಗೋಪಾಲಕೃಷ್ಣ ಪುಣಿಚಿತ್ತಾಯರು, ಕೋಟೆಕುಂಜ ನಾರಾಯಣ ಶೆಟ್ಟರು, ಮಹಾಬಲ ನೋಂಡರು, ಮೈಂದಪ್ಪ ರೈಗಳು ಹೆಚ್ಚಾಗಿ ಭಾಗವಹಿಸುತ್ತಿದ್ದರು. ಕೀರಿಕ್ಕಾಡು ಮಾಸ್ತರರಿಂದ ಸ್ಥಾಪಿಸಲ್ಪಟ್ಟ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದಡಿ ಹಿಮ್ಮೇಳ ಮುಮ್ಮೇಳಗಳ ತರಗತಿಗಳೂ ಆರಂಭವಾಗಿತ್ತು.
ಅರ್ಥಗಾರಿಕೆಯನ್ನು ಮಾಸ್ತರ್ ವಿಷ್ಣು ಭಟ್ಟರೇ ಹೇಳಿಕೊಡುತ್ತಿದ್ದರು. ನಡುಮನೆ ಜತ್ತಪ್ಪ ರೈಗಳು ಭಾಗವತಿಕೆಯನ್ನೂ ಕಡಾರು ನಾರಾಯಣ ಭಟ್ಟರು ನಾಟ್ಯವನ್ನೂ ಹೇಳಿಕೊಡುತ್ತಿದ್ದರು. ಪ್ರತಿಫಲಾಪೇಕ್ಷೆಯಿಲ್ಲದ ಕಲಾಸೇವೆ ಅದಾಗಿತ್ತು. ಹೀಗೆ ಗುರುಕುಲ ಮಾದರಿಯ ತರಬೇತಿ ಕೇಂದ್ರವನ್ನು ಮೊತ್ತ ಮೊದಲು ತೆರೆದು ಮುನ್ನಡೆಸಿದ ಕೀರ್ತಿ ವಿಷ್ಣು ಭಟ್ಟರದ್ದು. ಕಲಿಕಾಸಕ್ತರು ದುಶ್ಚಟಗಳನ್ನು ಮಾಡದೆಯೇ ತರಬೇತಿಗೆ ಬರುತ್ತೇವೆ ಎಂದು ದೇವರೆದುರು ಪ್ರಮಾಣ ಮಾಡಬೇಕೆಂಬ ನಿಯಮವನ್ನು ಇರಿಸಿದ್ದರು. ಹೀಗೆ ವಿದ್ಯಾದಾನದ ಜೊತೆ ಸಮಾಜದ ಕೆಡುಕುಗಳನ್ನು ತಿದ್ದುವ ಕೆಲಸವನ್ನು ಮಾಡಿದ್ದರು.
ಯಕ್ಷಗಾನ ಶಾಲೆಯಲ್ಲಿ ಅಕ್ಷರಾಭ್ಯಾಸವನ್ನೂ ಮಾಡಿಸುತ್ತಿದ್ದರು. ಉಚ್ಚಾರದೋಷಗಳಿದ್ದರೆ ತಿದ್ದಿ, ಭಾವನಾತ್ಮಕವಾಗಿ ಅಭಿನಯಿಸುವ ರೀತಿಯನ್ನು ಹೇಳಿಕೊಡುತ್ತಿದ್ದರು. ಅರ್ಥಗಾರಿಕೆ ಕಲಿಯುವವರು ಮೊದಲು ಪದ್ಯ ಬಾಯಿಪಾಠ ಮಾಡಬೇಕಿತ್ತು. ಬಳಿಕ ಮರುದಿನ ಬಾಯಿಪಾಠ ಮಾಡಿ ಒಪ್ಪಿಸಬೇಕೆಂಬ ನಿರ್ಣಯದೊಂದಿಗೆ ಅರ್ಥ ಬರೆದು ಕೊಡುತ್ತಿದ್ದರು. 1946ರಲ್ಲಿ ಮಾಸ್ತರರು ತನ್ನ ಖರ್ಚಿನಲ್ಲೇ ತಾತ್ಕಾಲಿಕ ಕಲಾಮಂದಿರವನ್ನು ನಿರ್ಮಿಸಿದ್ದರು. ಜೊತೆಗೆ ಚೆಂಡೆ,ಮದ್ದಳೆ,ಜಾಗಟೆ, ಶ್ರುತಿ ಪೆಟ್ಟಿಗೆ, ಎಲ್ಲವನ್ನೂ ಕೊಡಿಸಿದ್ದರು. 1947ರಲ್ಲಿ ಮೂರನೇ ವರ್ಷ ‘ಯಕ್ಷಗಾನ ನಾಟಕ’ದ ತರಬೇತಿಯೂ ನಡೆದು ಅಗತ್ಯವಿರುವ ಪೆರೇಡ್, ವೇಷಭೂಷಣಗಳನ್ನೂ ಸಿದ್ಧಪಡಿಸಿದ್ದರು.
ನಾಟ್ಯವಿಲ್ಲದ ಈ ಪ್ರದರ್ಶನಗಳಲ್ಲಿ ಅಭಿನಯಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಕುರಿಯ, ಕೊಳ್ಯೂರು, ಚೊಕ್ಕಾಡಿಗಳಲ್ಲಿ ಇಂತಹಾ ತಂಡಗಳೂ ಕಾರ್ಯಾಚರಿಸುತ್ತಿತ್ತೆಂಬ ಹೇಳಿಕೆಯಿದೆ. ಮಾಸ್ತರರ ನೇತೃತ್ವದ ಯಕ್ಷಗಾನ ನಾಟಕ ಸಂಘದ ಪ್ರದರ್ಶನಗಳು ದೂರದ ಮಡಿಕೇರಿಯಲ್ಲಿಯೂ ನಡೆದು ಪ್ರೇಕ್ಷಕರ ಪ್ರಶಂಸೆಗೊಳಗಾಯಿತು. ಮತ್ತೆ ಯಕ್ಷಗಾನದ ಮೂಲ ಸ್ವರೂಪದತ್ತ ಒಲವು ಮೂಡಿ ಆ ನಿಟ್ಟಿನಲ್ಲಿಯೇ ತೊಡಗಿಸಿಕೊಂಡಿದ್ದರು. ಈ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ದೊಡ್ಡ ದೊಡ್ಡ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. “ತನ್ನ ಸರಳ ಸುಂದರ ಅರ್ಥಗರ್ಭಿತ ಸಂಭಾಷಣೆಗಳಿಂದ ‘ಕೀರಿಕ್ಕಾಡು ಶೈಲಿ’ಯನ್ನು ಹುಟ್ಟುಹಾಕಿದರು.
ಕೀರಿಕ್ಕಾಡು ಮಾಸ್ತರರ ಅರ್ಥಗಾರಿಕೆಯಲ್ಲಿ ಎಲ್ಲವೂ ಹೈಲೈಟ್ಸ್ ಆಗಿತ್ತು. ಪ್ರತಿಯೊಂದು ಪಾತ್ರವನ್ನೂ ಅತ್ಯುತ್ತಮವಾಗಿ ಚಿತ್ರಿಸುತ್ತಿದ್ದ ಮಹಾನ್ ಪ್ರತಿಭೆ ಅವರು” ಎಂದು ಹಳೆಯ ಪ್ರೇಕ್ಷಕರು ಹೇಳುವುದನ್ನು ನಾವು ಕೇಳಿದ್ದೇವೆ. ಶ್ರೀಕೃಷ್ಣ, ಶ್ರೀರಾಮ, ಭರತ, ಸಂಜಯ, ಧರ್ಮರಾಯ, ವಿಭೀಷಣ, ಸುಧನ್ವ,ಮೊದಲಾದ ಸಾತ್ವಿಕ ಪಾತ್ರಗಳಲ್ಲೂ ಕರ್ಣ, ವಾಲಿ, ಕೌರವ, ಬಲರಾಮ,ಅರ್ಜುನ, ಶೂರ್ಪನಖಾ, ಅಜಮುಖಿ ಮೊದಲಾದ ವೀರರಸದ ಪಾತ್ರಗಳಲ್ಲೂ ಸಮಾನವಾಗಿ ಇವರು ಮಿಂಚಿದವರಂತೆ.
ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ಕಾರ್ಯಕ್ರಮಗಳಲ್ಲಿ ತೆಂಕಿನ ಹೆಚ್ಚಿನ ಎಲ್ಲಾ ಕಲಾವಿದರೂ ಪ್ರೀತಿಯಿಂದ ಭಾಗವಹಿಸುತ್ತಿದ್ದರು. ಪ್ರಕೃತಿ ಚಿಕಿತ್ಸಾ ನಿಪುಣರಾಗಿ, ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅನೇಕರಿಗೆ ಚಿಕಿತ್ಸೆ ನೀಡಿ ನೆರವಾಗಿದ್ದರು. ಖ್ಯಾತ ಭಾಗವತ ದಾಮೋದರ ಮಂಡೆಚ್ಚರಿಗೆ ಕೀರಿಕ್ಕಾಡು ಮಾಸ್ತರರಲ್ಲಿ ಅಪಾರ ಗೌರವ. ಪೆರ್ಲಂಪಾಡಿಯಲ್ಲಿ ಬನಾರಿ ಯಕ್ಷಗಾನ ನಾಟಕ ಸಂಘದ ಪ್ರದರ್ಶನದಲ್ಲಿ ಮಂಡೆಚ್ಚರು ಮೊತ್ತಮೊದಲು ಭಾಗವತರಾಗಿ ರಂಗವೇರಿದ್ದರು. ಆಗಾಗ ಪತ್ರ ಬರೆಯುತ್ತಿದ್ದು ದಾಮೋದರ ಮಂಡೆಚ್ಚರ ಬರಹ (ಅಕ್ಷರ ) ಅತ್ಯಂತ ಸುಂದರ ಎಂದು ಮಾಸ್ತರರು ಹೇಳುತ್ತಿದ್ದರಂತೆ.
ಭಾಗವತರು ಸುಖವಾಗಿ ಹಾಡುವ ಹಾಗೆ ಪ್ರಸಂಗ ರಚಿಸಿದ ಕವಿಗಳಲ್ಲಿ ಕೀರಿಕ್ಕಾಡು ಮಾಸ್ತರರು ಪ್ರಮುಖರು ಎಂಬ ಅಭಿಪ್ರಾಯವನ್ನು ಮಂಡೆಚ್ಚರು ಪ್ರಕಟಿಸಿದ್ದರು. ಪ್ರಸಂಗ ಬರೆಯುವುದೆಂದರೆ ಮಾಸ್ತರರಿಗೆ ನೀರು ಕುಡಿದಷ್ಟು ಸುಲಭ ಎಂಬ ಅಭಿಪ್ರಾಯವನ್ನು ಖ್ಯಾತ ಪ್ರಸಂಗಕರ್ತ ಅಮೃತ ಸೋಮೇಶ್ವರರು ವ್ಯಕ್ತಪಡಿಸಿದ್ದರು.
ಹಲವಾರು ದೇಶಗಳು ಗಂಭೀರ ಅಡ್ಡಪರಿಣಾಮಗಳನ್ನು ವರದಿ ಮಾಡಿದ ನಂತರ ಜರ್ಮನಿ, ಫ್ರಾನ್ಸ್ ಮತ್ತು ಇಟಲಿ ಅಸ್ಟ್ರಾಜೆನೆಕಾ COVID-19 ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಿವೆ. ಆದರೆ ಅಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತ ಎಂದು WHO ಹೇಳಿದೆ.
ಗಂಭೀರವಾದ ರಕ್ತ ಹೆಪ್ಪುಗಟ್ಟುವಿಕೆಯ ವರದಿಗಳ ನಂತರ, ಈ ಯುರೋಪಿಯನ್ ರಾಷ್ಟ್ರಗಳು ಸೋಮವಾರ ಅಸ್ಟ್ರಾಜೆನೆಕಾ ಲಸಿಕೆ ನೀಡುವುದನ್ನು ನಿಲ್ಲಿಸಿದರು. ಸೋಮವಾರ, ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ಅಸ್ಟ್ರಾಜೆನೆಕಾದ ಕೋವಿಡ್ -19 ಲಸಿಕೆಯನ್ನು ನಿಲ್ಲಿಸಿದ ನಂತರ ಅವರನ್ನು ಸ್ಪೇನ್, ಪೋರ್ಚುಗಲ್, ಸ್ಲೊವೇನಿಯಾ ಮತ್ತು ಲಾಟ್ವಿಯಾ ಅನುಸರಿಸಿದುವು.
ಆದರೂ ಅಸ್ಟ್ರಾಜೆನೆಕಾ ತನ್ನ ಕರೋನವೈರಸ್ ಲಸಿಕೆಯನ್ನು ಸಮರ್ಥಿಸಿಕೊಂಡಿದೆ, ಇದರ ವಿಶ್ಲೇಷಣೆಯು ಲಸಿಕೆ ಸ್ವೀಕರಿಸುವವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ “ಹೆಚ್ಚಿದ ಅಪಾಯದ ಪುರಾವೆಗಳಿಲ್ಲ” ಎಂದು ಹೇಳಿದೆ.